M’Cheyne Bible Reading Plan
ಈಜಿಪ್ಟಿನಲ್ಲಿ ಯಾಕೋಬನ ಕುಟುಂಬ
1 ಯಾಕೋಬನು (ಇಸ್ರೇಲನು) ತನ್ನ ಗಂಡುಮಕ್ಕಳೊಂದಿಗೆ ಈಜಿಪ್ಟಿಗೆ ಪ್ರಯಾಣ ಮಾಡಿದನು; ತಮ್ಮ ಕುಟುಂಬಗಳೊಡನೆ ಹೋದ ಅವನ ಗಂಡುಮಕ್ಕಳು ಯಾರೆಂದರೆ: 2 ರೂಬೇನ್, ಸಿಮೆಯೋನ್, ಲೇವಿ, ಯೆಹೂದ, 3 ಇಸ್ಸಾಕಾರ್, ಜೆಬುಲೂನ್, ಬೆನ್ಯಾಮೀನ್, 4 ದಾನ್, ನಫ್ತಾಲಿ, ಗಾದ್ ಮತ್ತು ಆಶೇರ್. 5 ಯಾಕೋಬನ ಸಂತತಿಯವರಲ್ಲಿ ಒಟ್ಟು ಎಪ್ಪತ್ತು ಮಂದಿ ಇದ್ದರು. (ಯಾಕೋಬನ ಹನ್ನೆರಡು ಮಂದಿ ಗಂಡುಮಕ್ಕಳಲ್ಲಿ ಒಬ್ಬನಾದ ಯೋಸೇಫನು ಮೊದಲೇ ಈಜಿಪ್ಟಿನಲ್ಲಿದ್ದನು.)
6 ಬಳಿಕ ಯೋಸೇಫನೂ ಅವನ ಸಹೋದರರೂ ಮತ್ತು ಆ ತಲೆಮಾರಿನ ಜನರೆಲ್ಲರೂ ಸತ್ತುಹೋದರು. 7 ಆದರೆ ಇಸ್ರೇಲರಿಗೆ ಅನೇಕ ಮಕ್ಕಳಿದ್ದರು; ಅವರ ಸಂಖ್ಯೆಯು ಹೆಚ್ಚಾಗತೊಡಗಿತು. ಇಸ್ರೇಲರು ಬಲಗೊಂಡರು; ಈಜಿಪ್ಟಿನಲ್ಲೆಲ್ಲಾ ತುಂಬಿಕೊಂಡರು.
ಇಸ್ರೇಲರಿಗೆ ಹಿಂಸೆ
8 ಬಳಿಕ ಒಬ್ಬ ಹೊಸ ರಾಜನು ಈಜಿಪ್ಟನ್ನು ಆಳತೊಡಗಿದನು. ಈ ರಾಜನಿಗೆ ಯೋಸೇಫನ ವಿಷಯವಾಗಿ ತಿಳಿದಿರಲಿಲ್ಲ. 9 ಈ ರಾಜನು ತನ್ನ ಜನರಿಗೆ, “ಇಸ್ರೇಲರ ಸಂಖ್ಯೆಯು ಹೆಚ್ಚಾಯಿತು; ಅವರು ನಮಗಿಂತಲೂ ಬಲಿಷ್ಠರಾದರು. 10 ಯುದ್ಧವೇನಾದರೂ ಸಂಭವಿಸಿದರೆ, ಇಸ್ರೇಲರು ನಮ್ಮ ವೈರಿಗಳೊಡನೆ ಸೇರಿಕೊಂಡು ನಮ್ಮನ್ನು ಸೋಲಿಸಿ ನಮ್ಮಿಂದ ತಪ್ಪಿಸಿಕೊಳ್ಳಬಹುದು. ಆದ್ದರಿಂದ ಅವರು ಅಭಿವೃದ್ಧಿಯಾಗದಂತೆ ನಾವು ಉಪಾಯವನ್ನು ಮಾಡೋಣ” ಎಂದು ಹೇಳಿದನು.
11 ಆದ್ದರಿಂದ ಅವರು ಇಸ್ರೇಲರನ್ನು ಹಿಂಸಿಸಲು ತೀರ್ಮಾನಿಸಿದರು. ಇಸ್ರೇಲರಿಂದ ಬಿಟ್ಟೀಕೆಲಸ ಮಾಡಿಸುವುದಕ್ಕಾಗಿ ಅಧಿಕಾರಿಗಳನ್ನು ನೇಮಿಸಿದರು. ಈ ಅಧಿಕಾರಿಗಳು ರಾಜನಿಗಾಗಿ ಪಿತೋಮ್ ಮತ್ತು ರಾಮ್ಸೇಸ್ ಪಟ್ಟಣಗಳನ್ನು ಇಸ್ರೇಲರಿಂದ ಬಲವಂತವಾಗಿ ಕಟ್ಟಿಸಿದರು; ಧಾನ್ಯಗಳನ್ನು ಮತ್ತು ಇನ್ನಿತರ ವಸ್ತುಗಳನ್ನು ಶೇಖರಿಸುವುದಕ್ಕೆ ರಾಜನು ಈ ಪಟ್ಟಣಗಳನ್ನು ಉಪಯೋಗಿಸಿದನು.
12 ಈಜಿಪ್ಟಿನವರು ಇಸ್ರೇಲರಿಂದ ಪ್ರಯಾಸಕರವಾದ ಕೆಲಸಗಳನ್ನು ಬಲವಂತವಾಗಿ ಮಾಡಿಸಿದಷ್ಟೂ ಇಸ್ರೇಲರು ಹೆಚ್ಚು ಹರಡಿಕೊಂಡದ್ದರಿಂದ ಈಜಿಪ್ಟಿನ ಜನರು ಇಸ್ರೇಲರಿಗೆ ಹೆಚ್ಚೆಚ್ಚಾಗಿ ಭಯಪಟ್ಚರು. 13 ಅಲ್ಲದೆ ಇನ್ನೂ ಪ್ರಯಾಸಕರವಾದ ಕೆಲಸವನ್ನು ಬಲವಂತದಿಂದ ಮಾಡಿಸಿಕೊಂಡರು.
14 ಈಜಿಪ್ಟಿನವರು ಇಸ್ರೇಲರ ಜೀವಿತವನ್ನು ಕಷ್ಟಕರವನ್ನಾಗಿ ಮಾಡಿದರು. ಇಸ್ರೇಲರಿಂದ ಇಟ್ಟಿಗೆ, ಗಾರೆ, ಬೇಸಾಯ ಮತ್ತು ಪ್ರತಿಯೊಂದು ಕೆಲಸವನ್ನು ಬಲವಂತವಾಗಿ ಮಾಡಿಸಿಕೊಂಡರು.
ದೇವರನ್ನು ಹಿಂಬಾಲಿಸಿದ ದಾದಿಯರು
15 ಇಸ್ರೇಲಿನ ಸ್ತ್ರೀಯರಿಗೆ ಹೆರಿಗೆ ಮಾಡಿಸಲು ಇಬ್ರಿಯರಾದ ಇಬ್ಬರು ದಾದಿಯರಿದ್ದರು. ಇವರ ಹೆಸರು: ಶಿಫ್ರಾ ಮತ್ತು ಪೂಗಾ. ಈಜಿಪ್ಟಿನ ರಾಜನು ಈ ದಾದಿಯರೊಡನೆ ಮಾತಾಡಿ ಅವರಿಗೆ, 16 “ಇಬ್ರಿಯ ಸ್ತ್ರೀಯರಿಗೆ ನೀವು ಹೆರಿಗೆ ಮಾಡುವಾಗ ಹೆಣ್ಣುಮಗು ಹುಟ್ಟಿದರೆ, ಅದನ್ನು ಉಳಿಸಿರಿ; ಗಂಡುಮಗು ಹುಟ್ಟಿದರೆ ಸಾಯಿಸಿರಿ!” ಎಂದು ಹೇಳಿದನು.
17 ಆದರೆ ಆ ದಾದಿಯರಿಗೆ ದೇವರಲ್ಲಿ ಭಯಭಕ್ತಿ ಇದ್ದಕಾರಣ ಅವರು ರಾಜನ ಆಜ್ಞೆಗೆ ವಿಧೇಯರಾಗದೆ ಗಂಡುಮಕ್ಕಳನ್ನೂ ಉಳಿಸಿದರು.
18 ಈಜಿಪ್ಟಿನ ರಾಜನು ದಾದಿಯರನ್ನು ಕರೆದು, “ನೀವು ಹೀಗೇಕೆ ಮಾಡುತ್ತಿದ್ದೀರಿ? ಗಂಡುಮಕ್ಕಳನ್ನು ನೀವು ಉಳಿಸುತ್ತಿರುವುದೇಕೆ?” ಎಂದು ಕೇಳಿದನು.
19 ದಾದಿಯರು, “ಇಬ್ರಿಯ ಸ್ತ್ರೀಯರು ಈಜಿಪ್ಟಿನ ಸ್ತ್ರೀಯರಿಗಿಂತ ಚುರುಕಾಗಿದ್ದಾರೆ. ನಾವು ಅವರಿಗೆ ಸಹಾಯ ಮಾಡುವುದಕ್ಕಿಂತ ಮೊದಲೇ ಅವರು ಹೆರುತ್ತಾರೆ” ಎಂದು ಹೇಳಿದರು. 20-21 ಈ ದಾದಿಯರು ದೇವರಲ್ಲಿ ಭಯಭಕ್ತಿಯುಳ್ಳವರಾಗಿದ್ದ ಕಾರಣ ಆತನು ಅವರನ್ನೂ ಅವರ ಕುಟುಂಬಗಳನ್ನೂ ಅಭಿವೃದ್ಧಿಪಡಿಸಿದನು.
ಇದಲ್ಲದೆ ಇಸ್ರೇಲರ ಸಂಖ್ಯೆಯು ಅಧಿಕವಾಗಿ ಬೆಳೆಯತೊಡಗಿತು. 22 ಆದ್ದರಿಂದ ಫರೋಹನು ತನ್ನ ಜನರಿಗೆಲ್ಲಾ, “ಇಬ್ರಿಯರಿಗೆ ಹುಟ್ಟುವ ಗಂಡುಕೂಸುಗಳನ್ನೆಲ್ಲಾ ನೈಲ್ ನದಿಗೆ ಎಸೆದುಬಿಡಬೇಕು. ಆದರೆ ಎಲ್ಲಾ ಹೆಣ್ಣುಮಕ್ಕಳು ಬದುಕಲಿ” ಎಂದು ಆಜ್ಞಾಪಿಸಿದನು.
ಯೇಸುವಿಗೆ ಸೈತಾನನಿಂದಾದ ಶೋಧನೆ
(ಮತ್ತಾಯ 4:1-11; ಮಾರ್ಕ 1:12-13)
4 ಯೇಸುವು ಜೋರ್ಡನ್ ನದಿಯಿಂದ ಹಿಂತಿರುಗಿದನು. ಆತನು ಪವಿತ್ರಾತ್ಮಭರಿತನಾಗಿದ್ದನು. ಪವಿತ್ರಾತ್ಮನು ಯೇಸುವನ್ನು ಅಡವಿಗೆ ನಡಿಸಿದನು. 2 ಅಲ್ಲಿ ಸೈತಾನನು ಆತನನ್ನು ನಲವತ್ತು ದಿನಗಳವರೆಗೆ ಶೋಧಿಸಿದನು. ಆ ದಿನಗಳಲ್ಲಿ ಯೇಸು ಏನನ್ನೂ ತಿನ್ನಲಿಲ್ಲ. ತರುವಾಯ, ಯೇಸುವಿಗೆ ಬಹಳ ಹಸಿವೆಯಾಯಿತು.
3 ಆಗ ಸೈತಾನನು ಯೇಸುವಿಗೆ, “ನೀನು ದೇವರ ಮಗನಾಗಿದ್ದರೆ, ಈ ಕಲ್ಲಿಗೆ ರೊಟ್ಟಿಯಾಗು ಎಂದು ಆಜ್ಞಾಪಿಸು” ಎಂದನು.
4 ಅದಕ್ಕೆ ಯೇಸು,
“‘ಮನುಷ್ಯನು ರೊಟ್ಟಿ ತಿಂದ ಮಾತ್ರಕ್ಕೆ ಬದುಕುವುದಿಲ್ಲ.’(A)
ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಉತ್ತರಕೊಟ್ಟನು.
5 ಆಗ ಸೈತಾನನು ಯೇಸುವನ್ನು ಕರೆದುಕೊಂಡು ಹೋಗಿ, ಒಂದೇ ಕ್ಷಣದಲ್ಲಿ ಭೂಲೋಕದ ಎಲ್ಲಾ ರಾಜ್ಯಗಳನ್ನು ತೋರಿಸಿ, 6 “ಈ ರಾಜ್ಯಗಳೆಲ್ಲವನ್ನೂ ಇವುಗಳ ಸರ್ವಾಧಿಕಾರವನ್ನೂ ವೈಭವವನ್ನೂ ನಿನಗೆ ಕೊಡುತ್ತೇನೆ. ಇವುಗಳೆಲ್ಲಾ ನನ್ನ ಅಧೀನದಲ್ಲಿವೆ. ನಾನು ಯಾರಿಗೆ ಬೇಕಾದರೂ ಇವುಗಳನ್ನು ಕೊಡಬಲ್ಲೆ. 7 ನೀನು ನನ್ನನ್ನು ಆರಾಧಿಸುವುದಾದರೆ ಇವೆಲ್ಲವನ್ನು ನಾನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.
8 ಅದಕ್ಕೆ ಯೇಸು,
“‘ನಿನ್ನ ಪ್ರಭುವಾದ ದೇವರೊಬ್ಬನನ್ನೇ ಆರಾಧಿಸಬೇಕು,
ಆತನೊಬ್ಬನಿಗೇ ಸೇವೆಮಾಡಬೇಕು’(B)
ಎಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದಿದೆ!” ಎಂದನು.
9 ಬಳಿಕ ಸೈತಾನನು ಯೇಸುವನ್ನು ಜೆರುಸಲೇಮಿಗೆ ಕರೆದೊಯ್ದು, ದೇವಾಲಯದ ಬಹು ಎತ್ತರವಾದ ಸ್ಥಳದಲ್ಲಿ ನಿಲ್ಲಿಸಿ, “ನೀನು ದೇವರ ಮಗನಾಗಿದ್ದರೆ, ಕೆಳಕ್ಕೆ ಧುಮುಕು!
10 ‘ದೇವರು ನಿನ್ನನ್ನು ಕಾಪಾಡುವುದಕ್ಕೆ ತನ್ನ ದೂತರಿಗೆ ಅಪ್ಪಣೆಕೊಡುವನು.’(C)
11 ‘ನಿನ್ನ ಪಾದವು ಕಲ್ಲಿಗೆ ತಗಲೀತೆಂದು
ಅವರು ತಮ್ಮ ಕೈಗಳಿಂದ ನಿನ್ನನ್ನು ಎತ್ತಿಕೊಳ್ಳುವರು’(D)
ಎಂಬುದಾಗಿ ಶಾಸ್ತ್ರದಲ್ಲಿ ಬರೆದಿದೆ” ಎಂದನು.
12 ಅದಕ್ಕೆ ಯೇಸು,
“‘ನಿನ್ನ ಪ್ರಭುವಾದ ದೇವರನ್ನು ಪರೀಕ್ಷಿಸಬಾರದು’(E)
ಎಂಬುದಾಗಿಯೂ ಬರೆದಿದೆ” ಎಂದು ಉತ್ತರಿಸಿದನು.
13 ಸೈತಾನನು ಯೇಸುವನ್ನು ನಾನಾ ವಿಧದಲ್ಲಿ ಶೋಧಿಸಿದ ನಂತರ, ತಕ್ಕಕಾಲ ಬರುವ ತನಕ ಆತನನ್ನು ಬಿಟ್ಟುಹೋದನು.
ಜನರಿಗೆ ಯೇಸುವಿನ ಉಪದೇಶ
(ಮತ್ತಾಯ 4:12-17; ಮಾರ್ಕ 1:14-15)
14 ಯೇಸು ಪವಿತ್ರಾತ್ಮನ ಶಕ್ತಿಯಿಂದ ಕೂಡಿದವನಾಗಿ ಗಲಿಲಾಯಕ್ಕೆ ಹಿಂತಿರುಗಿ ಹೋದನು. ಯೇಸುವಿನ ಸುದ್ದಿಯು ಗಲಿಲಾಯದ ಸುತ್ತಮುತ್ತಲಿರುವ ಪ್ರದೇಶದಲ್ಲೆಲ್ಲಾ ಹಬ್ಬಿತು. 15 ಯೇಸು ಸಭಾಮಂದಿರಗಳಲ್ಲಿ ಉಪದೇಶಿಸಲು ಪ್ರಾರಂಭಿಸಿದನು. ಜನರೆಲ್ಲರೂ ಆತನನ್ನು ಹೊಗಳಿದರು.
ಯೇಸು ಸ್ವಂತ ನಾಡಿಗೆ ಬಂದದ್ದು
(ಮತ್ತಾಯ 13:53-58; ಮಾರ್ಕ 6:1-6)
16 ಯೇಸು ತಾನು ಬೆಳೆದ ನಜರೇತ್ ಎಂಬ ಊರಿಗೆ ಪ್ರಯಾಣ ಮಾಡಿದನು. ವಾಡಿಕೆಯ ಪ್ರಕಾರ, ಆತನು ಸಬ್ಬತ್ದಿನದಲ್ಲಿ ಸಭಾಮಂದಿರಕ್ಕೆ ಹೋದನು. ಯೇಸು ಓದುವುದಕ್ಕಾಗಿ ಎದ್ದುನಿಂತನು. 17 ಪ್ರವಾದಿಯಾದ ಯೆಶಾಯನ ಗ್ರಂಥವನ್ನು ಆತನಿಗೆ ಓದಲು ಕೊಡಲಾಗಿತ್ತು. ಯೇಸು ಆ ಪುಸ್ತಕವನ್ನು ತೆರೆದು ಈ ಭಾಗವನ್ನು ಓದಿದನು:
18 “ಪ್ರಭುವಿನ (ದೇವರ) ಆತ್ಮವು ನನ್ನಲ್ಲಿ ಇದೆ.
ಬಡಜನರಿಗೆ ಶುಭಸಂದೇಶವನ್ನು ತಿಳಿಸಲು ದೇವರು ನನ್ನನ್ನು ಅಭಿಷೇಕಿಸಿದ್ದಾನೆ.
ಪಾಪಕ್ಕೆ ಸೆರೆಯಾಳುಗಳಾಗಿರುವ ಜನರಿಗೆ ‘ನೀವು ಬಿಡುಗಡೆಯಾಗಿದ್ದೀರಿ’ ಎಂತಲೂ
ಕುರುಡರಿಗೆ, ‘ನಿಮಗೆ ಮತ್ತೆ ಕಣ್ಣು ಕಾಣಿಸುವುದು’ ಎಂತಲೂ
ತಿಳಿಸುವುದಕ್ಕೆ ದೇವರು ನನ್ನನ್ನು ಕಳುಹಿಸಿದ್ದಾನೆ.
ದಬ್ಬಾಳಿಕೆಗೆ ಗುರಿಯಾದವರನ್ನು ಬಿಡಿಸುವುದಕ್ಕೂ
19 ಪ್ರಭುವಿನ ಶುಭವರ್ಷವನ್ನು ಪ್ರಕಟಿಸುವುದಕ್ಕೂ ದೇವರು ನನ್ನನ್ನು ಕಳುಹಿಸಿದ್ದಾನೆ.”(F)
20 ಈ ಭಾಗವನ್ನು ಓದಿದ ನಂತರ ಯೇಸು ಆ ಪುಸ್ತಕವನ್ನು ಮುಚ್ಚಿ ಸಭಾಮಂದಿರದ ಸೇವಕನ ಕೈಗೆ ಕೊಟ್ಟು ಕುಳಿತುಕೊಂಡನು. ಸಭಾಮಂದಿರದಲ್ಲಿದ್ದ ಪ್ರತಿಯೊಬ್ಬರು ಯೇಸುವನ್ನೇ ದೃಷ್ಟಿಸಿ ನೋಡುತ್ತಿದ್ದರು. 21 ಆಗ ಯೇಸು, ಅವರಿಗೆ, “ನಾನು ಇದೀಗ ಓದಿದ ಮಾತುಗಳನ್ನು ನೀವು ಕೇಳುತ್ತಿದ್ದಾಗಲೇ ಅವು ನಿಜವಾಗಿ ನೆರವೇರಿದವು!” ಎಂದು ಹೇಳಿದನು.
22 ಜನರೆಲ್ಲರೂ ಯೇಸುವನ್ನು ಹೊಗಳತೊಡಗಿದರು. ಅವರು ಆತನ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು, “ಇವನು ಈ ರೀತಿ ಮಾತಾಡಲು ಹೇಗೆ ಸಾಧ್ಯ? ಇವನು ಯೋಸೇಫನ ಮಗನಲ್ಲವೇ?” ಎಂದು ಮಾತಾಡಿಕೊಂಡರು.
23 ಯೇಸು ಅವರಿಗೆ, “ನೀವಂತೂ ‘ವೈದ್ಯನೇ, ನಿನ್ನನ್ನೇ ವಾಸಿಮಾಡಿಕೊ’ ಎಂಬ ಗಾದೆಯನ್ನು ನನಗೆ ಹೇಳುತ್ತೀರಿ ಎಂಬುದು ನನಗೆ ಗೊತ್ತು. ‘ನೀನು ಕಪೆರ್ನೌಮಿನಲ್ಲಿ ಮಾಡಿದ ಕೆಲವು ಕಾರ್ಯಗಳ ಬಗ್ಗೆ ನಾವು ಕೇಳಿದ್ದೇವೆ. ಅದೇ ಕಾರ್ಯಗಳನ್ನು ನಿನ್ನ ಸ್ವಂತ ಊರಿನಲ್ಲಿ ಮಾಡು!’” ಎಂದು ಹೇಳಬೇಕೆಂದಿದ್ದೀರಿ. 24 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರವಾದಿ ತನ್ನ ಸ್ವಂತ ಊರಿನಲ್ಲಿ ಸ್ವೀಕೃತನಾಗುವುದಿಲ್ಲ.
25 “ನಾನು ಹೇಳುವುದು ಸತ್ಯ. ಎಲೀಯನ ಕಾಲದಲ್ಲಿ ಮೂರುವರೆ ವರ್ಷಗಳವರೆಗೆ ಇಸ್ರೇಲ್ ದೇಶದಲ್ಲಿ ಮಳೆ ಬೀಳಲಿಲ್ಲ. ದೇಶದ ಯಾವ ಕಡೆಯಲ್ಲಿಯೂ ಆಹಾರವಿರಲಿಲ್ಲ. ಆ ಸಮಯದಲ್ಲಿ ಇಸ್ರೇಲಿನಲ್ಲಿ ಅನೇಕ ವಿಧವೆಯರು ಇದ್ದರು. 26 ಆದರೆ ಎಲೀಯನನ್ನು ಬೇರೆ ಯಾವ ವಿಧವೆಯರ ಬಳಿಗೂ ಕಳುಹಿಸದೆ ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಲಾಯಿತು.
27 “ಪ್ರವಾದಿಯಾದ ಎಲೀಷನ ಕಾಲದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರೇಲಿನಲ್ಲಿ ವಾಸಿಸುತ್ತಿದ್ದರು. ಆದರೆ ಅವರಲ್ಲಿ ಯಾರಿಗೂ ವಾಸಿಯಾಗದೆ ಸಿರಿಯ ದೇಶದ ನಾಮಾನನೊಬ್ಬನಿಗೇ ವಾಸಿಯಾಯಿತು” ಎಂದು ಹೇಳಿದನು.
28 ಸಭಾಮಂದಿರದಲ್ಲಿದ್ದ ಜನರೆಲ್ಲರೂ ಈ ಮಾತುಗಳನ್ನು ಕೇಳಿ ಬಹಳವಾಗಿ ಕೋಪಗೊಂಡು 29 ಯೇಸುವನ್ನು ಪಟ್ಟಣದಿಂದ ಹೊರಗಟ್ಟಿದರು. ಆ ಪಟ್ಟಣವು ಒಂದು ಗುಡ್ಡದ ಮೇಲಿತ್ತು. ಅವರು ಯೇಸುವನ್ನು ಗುಡ್ಡದ ಅಂಚಿಗೆ ಕರೆದುಕೊಂಡು ಬಂದು ಕೆಳಕ್ಕೆ ತಳ್ಳಿಬಿಡಬೇಕೆಂದಿದ್ದರು. 30 ಆದರೆ ಯೇಸು ಅವರ ಮಧ್ಯದಲ್ಲಿ ಹಾದು ಹೊರಟುಹೋದನು.
ದೆವ್ವದಿಂದ ಪೀಡಿತನಾಗಿದ್ದವನಿಗೆ ಬಿಡುಗಡೆ
(ಮಾರ್ಕ 1:21-28)
31 ಯೇಸು ಗಲಿಲಾಯದ ಕಪೆರ್ನೌಮ್ ಎಂಬ ಊರಿಗೆ ಹೋದನು. ಸಬ್ಬತ್ದಿನದಂದು ಯೇಸು ಜನರಿಗೆ ಉಪದೇಶಿಸಿದನು. 32 ಯೇಸುವಿನ ಉಪದೇಶಕ್ಕೆ ಅವರು ಅತ್ಯಾಶ್ಚರ್ಯಪಟ್ಟರು. ಏಕೆಂದರೆ ಆತನು ಅಧಿಕಾರದಿಂದ ಮಾತಾಡಿದನು.
33 ಸಭಾಮಂದಿರದಲ್ಲಿ ದೆವ್ವದಿಂದ ಪೀಡಿತನಾದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾದ ಧ್ವನಿಯಿಂದ, 34 “ನಜರೇತಿನ ಯೇಸುವೇ! ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡಲು ಇಲ್ಲಿಗೆ ಬಂದಿರುವೆಯಾ? ನೀನು ಯಾರೆಂದು ನಾನು ಬಲ್ಲೆನು. ನೀನು ದೇವರಿಂದ ಕಳುಹಿಸಲ್ಪಟ್ಟ ಪರಿಶುದ್ಧನು!” ಎಂದು ಕೂಗಿದನು. 35 ಆದರೆ ಯೇಸು ಆ ದೆವ್ವಕ್ಕೆ, “ಸುಮ್ಮನಿರು! ಇವನನ್ನು ಬಿಟ್ಟು ಹೊರಗೆ ಬಾ!” ಎಂದು ಆಜ್ಞಾಪಿಸಿದನು. ದೆವ್ವವು ಅವನನ್ನು ಜನರೆಲ್ಲರ ಎದುರಿನಲ್ಲಿಯೇ ಕೆಡವಿ ಯಾವ ಕೇಡೂ ಮಾಡದೆ ಬಿಟ್ಟು ಹೋಯಿತು.
36 ಜನರೆಲ್ಲರೂ ಬೆರಗಾಗಿ, “ಎಂಥಾ ಮಾತುಗಳಿವು! ಆತನು ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಆಜ್ಞಾಪಿಸಲು, ಅವು ಬಿಟ್ಟುಹೋಗುತ್ತವೆಯಲ್ಲಾ” ಎಂದು ಮಾತಾಡಿಕೊಂಡರು. 37 ಹೀಗಾಗಿ ಯೇಸುವಿನ ಸುದ್ದಿಯು ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿಕೊಂಡಿತು.
ಯೇಸುವಿನಿಂದ ಗುಣಹೊಂದಿದ ಸ್ತ್ರೀ
(ಮತ್ತಾಯ 8:14-17; ಮಾರ್ಕ 1:29-34)
38 ಯೇಸು ಸಭಾಮಂದಿರದಿಂದ ಹೊರಟು ಸೀಮೋನನ[a] ಮನೆಗೆ ಹೋದನು. ಸೀಮೋನನ ಅತ್ತೆ ಬಹಳ ಜ್ವರದಿಂದ ನರಳುತ್ತಿದ್ದಳು. ಆಕೆಗೆ ಸಹಾಯ ಮಾಡಬೇಕೆಂದು ಅಲ್ಲಿದ್ದವರು ಆತನನ್ನು ಬೇಡಿಕೊಂಡರು. 39 ಯೇಸು ಆಕೆಯ ಬಳಿ ನಿಂತು, ಆಕೆಯನ್ನು ಬಿಟ್ಟುಹೋಗುವಂತೆ ಜ್ವರಕ್ಕೆ ಆಜ್ಞಾಪಿಸಿದನು. ಆ ಕೂಡಲೇ ಆಕೆಗೆ ಗುಣವಾಯಿತು. ಆಕೆ ಎದ್ದು ಅವರನ್ನು ಉಪಚರಿಸಿದಳು.
ಅನೇಕರಿಗೆ ಆರೋಗ್ಯದಾನ
40 ಸೂರ್ಯನು ಮುಳುಗಿದ ಮೇಲೆ, ಅಸ್ವಸ್ಥರಾದ ತಮ್ಮ ಸ್ನೇಹಿತರನ್ನು ಜನರು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಅವರಿಗೆ ಅನೇಕ ತರಹದ ಕಾಯಿಲೆಗಳಿದ್ದವು. ಪ್ರತಿಯೊಬ್ಬ ರೋಗಿಯ ಮೇಲೂ ಯೇಸು ತನ್ನ ಕೈಯನ್ನಿಟ್ಟು ಗುಣಪಡಿಸಿದನು. 41 ಅನೇಕ ಜನರೊಳಗಿಂದ ದೆವ್ವಗಳು, “ನೀನು ದೇವಕುಮಾರ” ಎಂದು ಆರ್ಭಟಿಸುತ್ತಾ ಬಿಟ್ಟುಹೋದವು. ಆದರೆ ಯೇಸು ಆ ದೆವ್ವಗಳಿಗೆ, “ಮಾತಾಡಕೂಡದೆಂದು” ಬಲವಾಗಿ ಆಜ್ಞಾಪಿಸಿದನು. ಯೇಸುವೇ “ಕ್ರಿಸ್ತ”ನೆಂದು ದೆವ್ವಗಳಿಗೆ ತಿಳಿದಿತ್ತು.
ಇತರ ಊರುಗಳಿಗೆ ಯೇಸುವಿನ ಸಂದರ್ಶನ
(ಮಾರ್ಕ 1:35-39)
42 ಮರುದಿನ ಯೇಸು ನಿರ್ಜನ ಸ್ಥಳಕ್ಕೆ ಹೋದನು. ಜನರು ಯೇಸುವಿಗಾಗಿ ಹುಡುಕುತ್ತಾ ಅಲ್ಲಿಗೆ ಬಂದು, ತಮ್ಮನ್ನು ಬಿಟ್ಟುಹೋಗದಂತೆ ಆತನನ್ನು ತಡೆಯಲು ಪ್ರಯತ್ನಿಸಿದರು. 43 ಆದರೆ ಯೇಸು ಅವರಿಗೆ, “ನಾನು ಬೇರೆ ಊರುಗಳವರಿಗೂ ಸಹ ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸಬೇಕು. ಇದಕ್ಕಾಗಿಯೇ ನನ್ನನ್ನು ಕಳುಹಿಸಲಾಗಿದೆ” ಎಂದು ಹೇಳಿದನು.
44 ಬಳಿಕ ಯೇಸು ಜುದೇಯದ ಸಭಾಮಂದಿರಗಳಲ್ಲಿ ಬೋಧಿಸಿದನು.
ಬಿಲ್ದದನಿಗೆ ಯೋಬನ ಉತ್ತರ
18 ಬಳಿಕ ಶೂಹ ದೇಶದ ಬಿಲ್ದದನು ಹೀಗೆ ಉತ್ತರಕೊಟ್ಟನು:
2 “ಈ ಮಾತುಗಳನ್ನೆಲ್ಲಾ ಯಾವಾಗ ನಿಲ್ಲಿಸುವೆ?
ಪ್ರಜ್ಞೆವುಳ್ಳವನಾಗು, ಆಗ ನಾವು ಮಾತಾಡಲು ಸಾಧ್ಯ.
3 ನಮ್ಮನ್ನು ದಡ್ಡ ಪ್ರಾಣಿಗಳಂತೆ
ಯೋಚಿಸಿಕೊಂಡಿರುವುದೇಕೆ?
4 ಯೋಬನೇ, ನಿನ್ನ ಕೋಪದಿಂದ ನಿನ್ನನ್ನೇ ಗಾಯಮಾಡಿಕೊಳ್ಳುತ್ತಿರುವೆ.
ಕೇವಲ ನಿನಗೋಸ್ಕರ ಜನರು ಲೋಕವನ್ನು ಬಿಟ್ಟುಹೋಗಬೇಕೇ?
ಕೇವಲ ನಿನ್ನನ್ನು ತೃಪ್ತಿಪಡಿಸುವುದಕ್ಕಾಗಿ ದೇವರು ಬೆಟ್ಟಗಳನ್ನು ಜರುಗಿಸುತ್ತಾನೆಂದು ಭಾವಿಸಿಕೊಂಡಿರುವಿಯಾ?
5 “ಹೌದು, ದುಷ್ಟನ ದೀಪವು ಆರಿಹೋಗುವುದು;
ಅವನ ಬೆಂಕಿಯು ಉರಿಯುವುದಿಲ್ಲ.
6 ಅವನ ಗುಡಾರದಲ್ಲಿರುವ ಬೆಳಕು ಕತ್ತಲಾಗುವುದು;
ಅವನ ಪಕ್ಕದಲ್ಲಿರುವ ದೀಪವು ಆರಿಹೋಗುವುದು.
7 ಅವನ ಹೆಜ್ಜೆಗಳಲ್ಲಿ ಬಲವಿರುವುದಿಲ್ಲ;
ಅವನ ದುಷ್ಟ ಯೋಜನೆಗಳೇ ಅವನನ್ನು ಬೀಳಿಸುತ್ತವೆ.
8 ಅವನ ಸ್ವಂತ ಕಾಲುಗಳೇ ಅವನನ್ನು ಬಲೆಗೆ ನಡೆಸುತ್ತದೆ.
ಅವನು ಬಲೆಯೊಳಗೆ ನಡೆದುಹೋಗಿ ಸಿಕ್ಕಿಕೊಳ್ಳುವನು.
9 ಬೋನು ಅವನ ಹಿಮ್ಮಡಿಯನ್ನು ಹಿಡಿದುಕೊಳ್ಳುವುದು.
ಉರುಲು ಅವನನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು.
10 ಅವನಿಗಾಗಿ ಹಗ್ಗವು ನೆಲದ ಮೇಲೆ ಅಡಗಿಕೊಂಡಿರುತ್ತದೆ.
ಅವನ ದಾರಿಯಲ್ಲಿ ಉರುಲು ಕಾದುಕೊಂಡಿರುತ್ತದೆ.
11 ಎಲ್ಲಾ ಕಡೆಗಳಿಂದಲೂ ಅಪಾಯವು ಅವನನ್ನು ಭಯಪಡಿಸುತ್ತದೆ.
ಅವನಿಡುವ ಪ್ರತಿಯೊಂದು ಹೆಜ್ಜೆಯನ್ನೂ ಭಯವು ಹಿಂಬಾಲಿಸುತ್ತದೆ.
12 ವಿಪತ್ತುಗಳು ಅವನಿಗಾಗಿ ಹಸಿವೆಯಿಂದ ಕಾದುಕೊಂಡಿವೆ.
ಅವನು ಬೀಳುವಾಗ ನಾಶನವು ಅವನಿಗಾಗಿ ಸಿದ್ಧವಾಗಿರುತ್ತದೆ.
13 ಭಯಂಕರವಾದ ಕಾಯಿಲೆಯು ಅವನ ಚರ್ಮದ ಭಾಗಗಳನ್ನು ತಿಂದುಬಿಡುತ್ತದೆ.
ಅದು ಅವನ ತೋಳುಗಳನ್ನೂ ಕಾಲುಗಳನ್ನೂ ಕೊಳೆಸಿಬಿಡುತ್ತದೆ.
14 ದುಷ್ಟನನ್ನು ಅವನ ಸುರಕ್ಷಿತವಾದ ಮನೆಯಿಂದ ಹೊರಗೆ ಹಾಕಲಾಗುವುದು.
ಅವನು ಮರಣವೆಂಬ ಅಪಾಯಗಳ ರಾಜನ ಕಡೆಗೆ ಮುನ್ನಡೆಯುತ್ತಾ ಹೋಗುವನು.
15 ಅವನ ಮನೆಯಲ್ಲಿ ಅವನದೇನೂ ಉಳಿದಿರುವುದಿಲ್ಲ.
ಉರಿಯುವ ಗಂಧಕವು ಅವನ ಆಸ್ತಿಯಲ್ಲೆಲ್ಲಾ ಹರಡಿಕೊಂಡಿರುತ್ತದೆ.
16 ಅವನ ಬೇರುಗಳು ಕೆಳಗೆ ಒಣಗಿಹೋಗುತ್ತವೆ.
ಅವನ ಕೊಂಬೆಗಳು ಮೇಲೆ ಸತ್ತುಹೋಗುತ್ತವೆ.
17 ಭೂಮಿಯ ಮೇಲಿರುವ ಜನರು ಅವನನ್ನು ಜ್ಞಾಪಿಸಿಕೊಳ್ಳುವುದಿಲ್ಲ;
ಇನ್ನು ಮೇಲೆ ಅವನನ್ನು ಯಾರೂ ಜ್ಞಾಪಿಸಿಕೊಳ್ಳುವುದಿಲ್ಲ.
18 ಜನರು ಅವನನ್ನು ಬೆಳಕಿನಿಂದ ತಳ್ಳಿಬಿಡುವರು; ಅವನನ್ನು ಕತ್ತಲೆಯೊಳಗೆ ನೂಕಿಬಿಡುವರು.
ಅವರು ಅವನನ್ನು ಲೋಕದಿಂದಲೇ ಅಟ್ಟಿಬಿಡುವರು.
19 ಅವನಿಗೆ ಸ್ವಜನರ ಮಧ್ಯದಲ್ಲಿ ಮಕ್ಕಳಾಗಲಿ ಸಂತತಿಯವರಾಗಲಿ ಇರುವುದಿಲ್ಲ.
ಅವನ ಮನೆಯಲ್ಲಿ ಯಾರೂ ಉಳಿದಿರುವುದಿಲ್ಲ.
20 ಪಶ್ಚಿಮದಲ್ಲಿ ವಾಸವಾಗಿರುವ ಜನರು ದುಷ್ಟನಿಗೆ ಸಂಭವಿಸಿದ್ದನ್ನು ಕೇಳಿ ಬೆರಗಾಗುವರು;
ಪೂರ್ವದಲ್ಲಿ ವಾಸವಾಗಿರುವ ಜನರು ಭೀತಿಯಿಂದ ನಡುಗುವರು.
21 ಇದು ಸತ್ಯ, ದುಷ್ಟನ ಮನೆಗೆ ಇದೇ ಸಂಭವಿಸುವುದು.
ದೇವರ ಬಗ್ಗೆ ಗಮನಕೊಡದ ವ್ಯಕ್ತಿಗೆ ಇದೇ ಸಂಭವಿಸುವುದು.”
ಸಭೆಯಲ್ಲಿ ನೈತಿಕ ಸಮಸ್ಯೆ
5 ನಿಮ್ಮ ಮಧ್ಯದಲ್ಲಿ ಲೈಂಗಿಕ ಪಾಪವಿದೆಯೆಂದು ಜನರು ನಿಜವಾಗಿಯೂ ಹೇಳುತ್ತಿದ್ದಾರೆ. ದೇವರನ್ನು ತಿಳಿದಿಲ್ಲದ ಜನರ ನಡುವೆಯೂ ಇಲ್ಲದಂಥ ಕೆಟ್ಟ ಬಗೆಯ ಲೈಂಗಿಕ ಪಾಪ ಅದಾಗಿದೆ. ನಿಮ್ಮಲ್ಲಿ ಒಬ್ಬನು ತನ್ನ ತಂದೆಯ ಪತ್ನಿಯನ್ನೇ ಇಟ್ಟುಕೊಂಡಿದ್ದಾನೆಂದು ಜನರು ಹೇಳುತ್ತಿದ್ದಾರೆ. 2 ಆದರೆ ನೀವು ನಿಮ್ಮ ವಿಷಯದಲ್ಲಿ ಇನ್ನೂ ಹೆಚ್ಚಳಪಡುತ್ತಿದ್ದೀರಿ. ನೀವು ದುಃಖಭರಿತರಾಗಿರಬೇಕಿತ್ತು. ಆ ಪಾಪ ಮಾಡಿದ ವ್ಯಕ್ತಿಯನ್ನು ನಿಮ್ಮ ಸಭೆಯಿಂದ ಹೊರಗೆ ಹಾಕಬೇಕಿತ್ತು. 3 ನನ್ನ ದೇಹ ನಿಮ್ಮೊಂದಿಗೆ ಇಲ್ಲದಿದ್ದರೂ ನಾನು ಆತ್ಮದಲ್ಲಿ ನಿಮ್ಮೊಂದಿಗಿದ್ದೇನೆ. ಆ ಪಾಪ ಮಾಡಿದ ವ್ಯಕ್ತಿಗೆ ನಾನು ಆಗಲೇ ತೀರ್ಪು ಮಾಡಿದ್ದೇನೆ. ನಾನು ಅಲ್ಲಿದ್ದಿದ್ದರೆ ಯಾವ ತೀರ್ಪನ್ನು ಕೊಡುತ್ತಿದ್ದೆನೋ ಅದೇ ತೀರ್ಪನ್ನು ಕೊಟ್ಟಿದ್ದೇನೆ. 4 ನಮ್ಮ ಪ್ರಭುವಾದ ಯೇಸುವಿನ ಹೆಸರಿನಲ್ಲಿ ಒಟ್ಟಾಗಿ ಸೇರಿಬನ್ನಿ. ನಾನು ಆತ್ಮದಲ್ಲಿ ನಿಮ್ಮೊಂದಿಗಿರುವೆನು. ನಮ್ಮ ಪ್ರಭುವಾದ ಯೇಸುವಿನ ಶಕ್ತಿಯೂ ನಿಮ್ಮೊಂದಿಗೆ ಇರುವುದು. 5 ಆ ಮನುಷ್ಯನ ಪಾಪಸ್ವಭಾವವು ನಾಶವಾಗುವುದಕ್ಕಾಗಿ ಅವನನ್ನು ಸೈತಾನನಿಗೆ ಒಪ್ಪಿಸಿಕೊಡಿರಿ. ಆಗ ಪ್ರಭುವಿನ ದಿನದಂದು ಅವನ ಜೀವಾತ್ಮವು ರಕ್ಷಣೆಹೊಂದಲು ಸಾಧ್ಯವಾಗುವುದು.
6 ನೀವು ಅಹಂಕಾರಪಡುವುದು ಒಳ್ಳೆಯದಲ್ಲ. “ಒಂದಿಷ್ಟು ಹುಳಿಯು ಹಿಟ್ಟನ್ನೆಲ್ಲಾ ಉಬ್ಬಿಸುತ್ತದೆ” ಎಂಬ ನುಡಿಯು ನಿಮಗೆ ಗೊತ್ತೇ ಇದೆ. 7 ಹಳೆಯ ಹುಳಿಯನ್ನೆಲ್ಲಾ (ಪಾಪ) ತೆಗೆದುಹಾಕಿರಿ. ಆಗ ನೀವು ಹೊಸ ಹಿಟ್ಟಾಗುವಿರಿ. ನೀವು ನಿಜವಾಗಿಯೂ ಹುಳಿರಹಿತವಾದ ಪಸ್ಕದ ರೊಟ್ಟಿಯಾಗಿದ್ದೀರಿ. ಹೌದು, ನಮ್ಮ ಪಸ್ಕದ ಕುರಿಮರಿಯಾದ ಕ್ರಿಸ್ತನು ಆಗಲೇ ಕೊಲ್ಲಲ್ಪಟ್ಟಿದ್ದಾನೆ. 8 ಆದ್ದರಿಂದ ನಾವು ಪಸ್ಕದ ಊಟ ಮಾಡೋಣ. ದುಷ್ಟತನ ಮತ್ತು ಕೆಡುಕತನ ಎಂಬ ಹಳೆಯ ಹುಳಿಯಿಂದ ಕೂಡಿರುವ ರೊಟ್ಟಿಯನ್ನು ನಾವು ತಿನ್ನದೆ ಹುಳಿರಹಿತವಾದ ರೊಟ್ಟಿಯನ್ನು ತಿನ್ನೋಣ. ಸರಳತೆ ಮತ್ತು ಸತ್ಯತೆ ಇವುಗಳೇ ಆ ಹುಳಿರಹಿತ ರೊಟ್ಟಿ.
9 ಲೈಂಗಿಕ ಪಾಪ ಮಾಡುವ ಜನರ ಸಹವಾಸ ಮಾಡಕೂಡದೆಂದು ನಾನು ನನ್ನ ಪತ್ರದಲ್ಲಿ ನಿಮಗೆ ಬರೆದಿದ್ದೆ. 10 ಆದರೆ ಈ ಲೋಕದ ಪಾಪಿಷ್ಠ ಜನರ ಸಹವಾಸವನ್ನು ನೀವು ಮಾಡಕೂಡದೆಂಬ ಅರ್ಥದಲ್ಲಿ ನಾನು ಅದನ್ನು ಬರೆದಿರಲಿಲ್ಲ. ಈ ಲೋಕದ ಜನರು ಲೈಂಗಿಕ ಪಾಪ ಮಾಡುತ್ತಾರೆ; ಅವರು ಸ್ವಾರ್ಥಿಗಳಾಗಿದ್ದಾರೆ; ಒಬ್ಬರಿಗೊಬ್ಬರು ಮೋಸ ಮಾಡುತ್ತಾರೆ; ವಿಗ್ರಹಗಳನ್ನು ಪೂಜಿಸುತ್ತಾರೆ. ಆ ಜನರಿಂದ ದೂರವಿರಬೇಕಾದರೆ, ನೀವು ಈ ಲೋಕವನ್ನೇ ಬಿಟ್ಟು ಹೋಗಬೇಕಾಗುತ್ತದೆ. 11 ಆದರೆ ಕ್ರಿಸ್ತನಲ್ಲಿ ತನ್ನನ್ನು ಸಹೋದರನೆಂದು ಹೇಳಿಕೊಳ್ಳುವವನು ಲೈಂಗಿಕ ಪಾಪ ಮಾಡುವವನಾಗಿದ್ದರೆ, ಸ್ವಾರ್ಥಿಯಾಗಿದ್ದರೆ, ವಿಗ್ರಹಗಳನ್ನು ಪೂಜಿಸುವವನಾಗಿದ್ದರೆ, ಜನರಿಗೆ ಕೆಟ್ಟ ಮಾತುಗಳನ್ನಾಡುವವನಾಗಿದ್ದರೆ, ಮದ್ಯಪಾನ ಮಾಡಿ ಮತ್ತನಾಗುವವನಾಗಿದ್ದರೆ, ಜನರಿಗೆ ಮೋಸ ಮಾಡುವವನಾಗಿದ್ದರೆ, ಅವನ ಸಹವಾಸ ಮಾಡಬಾರದು; ಅವನೊಂದಿಗೆ ಊಟವನ್ನು ಸಹ ಮಾಡಬಾರದು.
12-13 ಸಭೆಗೆ ಸೇರಿಲ್ಲದ ಜನರಿಗೆ ತೀರ್ಪು ಮಾಡುವುದು ನನ್ನ ಕೆಲಸವಲ್ಲ. ಅವರಿಗೆ ದೇವರೇ ತೀರ್ಪು ಮಾಡುವನು. ಆದರೆ ಸಭೆಗೆ ಸೇರಿರುವ ಜನರಿಗೆ ನೀವು ತೀರ್ಪು ಮಾಡಬೇಕು. “ದುಷ್ಟನನ್ನು ಸಭೆಯಿಂದ ಹೊರಗೆ ಹಾಕಿ”(A) ಎಂದು ಪವಿತ್ರ ಗ್ರಂಥ ಹೇಳುತ್ತದೆ.
Kannada Holy Bible: Easy-to-Read Version. All rights reserved. © 1997 Bible League International