M’Cheyne Bible Reading Plan
ಯಾಕೋಬನು ತನ್ನ ಗಂಡುಮಕ್ಕಳನ್ನು ಆಶೀರ್ವದಿಸಿದ್ದು
49 ಬಳಿಕ ಯಾಕೋಬನು ತನ್ನ ಗಂಡುಮಕ್ಕಳನ್ನು ತನ್ನ ಬಳಿಗೆ ಕರೆಯಿಸಿ, “ನನ್ನ ಎಲ್ಲಾ ಗಂಡುಮಕ್ಕಳೇ, ನನ್ನ ಬಳಿಗೆ ಬನ್ನಿರಿ. ನಿಮಗೆ ಮುಂದೆ ಏನು ಸಂಭವಿಸುವುದೆಂದು ತಿಳಿಸುತ್ತೇನೆ.
2 “ಯಾಕೋಬನ ಗಂಡುಮಕ್ಕಳೇ, ಒಟ್ಟಾಗಿ ಬಂದು ಕೇಳಿರಿ.
ನಿಮ್ಮ ತಂದೆಯಾದ ಇಸ್ರೇಲನು ಹೇಳುವುದನ್ನು ಕೇಳಿರಿ” ಎಂದು ಹೇಳಿದನು.
ರೂಬೇನ
3 “ರೂಬೇನನೇ, ನೀನು ನನ್ನ ಚೊಚ್ಚಲು ಮಗ.
ನೀನೇ ನನ್ನ ಮೊದಲನೆಯ ಮಗ.
ನೀನು ನನ್ನ ಇತರ ಎಲ್ಲಾ ಗಂಡುಮಕ್ಕಳಿಗಿಂತ
ಶಕ್ತಿಶಾಲಿಯೂ ಗೌರವಯುತನೂ ಆಗಿರುವೆ.
4 ಆದರೆ ನೀನು ಪ್ರಳಯದ ಭಯಂಕರವಾದ ಅಲೆಗಳಂತಿರುವೆ.
ನೀನು ನನ್ನ ಮಕ್ಕಳಿಗಿಂತ ಅತ್ಯಂತ ಪ್ರಮುಖನಾಗಿರುವುದಿಲ್ಲ.
ನಿನ್ನ ತಂದೆಗೆ ಸೇರಿದ ಸ್ತ್ರೀಯೊಂದಿಗೆ ನೀನು ಮಲಗಿಕೊಂಡೆ.
ನೀನು ನಿನ್ನ ತಂದೆಯ ಹಾಸಿಗೆಗೆ ಗೌರವವನ್ನು ತೋರಿಸಲಿಲ್ಲ.”
ಸಿಮೆಯೋನ ಮತ್ತು ಲೇವಿ
5 “ಸಿಮೆಯೋನನೂ ಲೇವಿಯೂ ಸಹೋದರರಾಗಿದ್ದಾರೆ.
ಅವರು ತಮ್ಮ ಖಡ್ಗಗಳಿಂದ ಹೋರಾಡಲು ಇಷ್ಟಪಡುವರು.
6 ಅವರು ಗುಟ್ಟಾಗಿ ಕೆಟ್ಟಕಾರ್ಯಗಳನ್ನು ಯೋಚಿಸಿದರು.
ಅವರ ರಹಸ್ಯಕೂಟಗಳನ್ನು ನನ್ನ ಆತ್ಮವು ಸ್ವೀಕರಿಸುವುದಿಲ್ಲ.
ಅವರು ಕೋಪಗೊಂಡಾಗ ಗಂಡಸರನ್ನು ಕೊಂದುಹಾಕಿದರು.
ಅವರು ಮೋಜಿಗೆಂದೇ ಪ್ರಾಣಿಗಳನ್ನು ಹಿಂಸಿಸಿದರು.
7 ಅವರ ಕೋಪವೇ ಅವರಿಗೆ ಶಾಪ. ಅದು ತುಂಬಾ ಶಕ್ತಿಶಾಲಿಯಾದದ್ದು.
ಅವರು ಹುಚ್ಚರಾದಾಗ ತುಂಬಾ ಕ್ರೂರಿಗಳು.
ಅವರು ಯಾಕೋಬನ ನಾಡಿನಲ್ಲಿ ತಮ್ಮದೇ ಆದ ನಾಡನ್ನು ಹೊಂದಿಕೊಳ್ಳುವುದಿಲ್ಲ.
ಅವರು ಇಸ್ರೇಲಿನಲ್ಲೆಲ್ಲಾ ಹರಡಿಕೊಳ್ಳುವರು.”
ಯೆಹೂದ
8 “ಯೆಹೂದನೇ, ನಿನ್ನ ಸಹೋದರರು ನಿನ್ನನ್ನೇ ಹೊಗಳುವರು.
ನೀನು ನಿನ್ನ ವೈರಿಗಳನ್ನು ಸೋಲಿಸುವೆ.
ನಿನ್ನ ಸಹೋದರರು ನಿನಗೇ ಅಡ್ಡಬೀಳುವರು.
9 ಯೆಹೂದನು ಪ್ರಾಣಿಯನ್ನು ಕೊಂದ ಪ್ರಾಯದ ಸಿಂಹದಂತಿದ್ದಾನೆ.
ಮಗನೇ, ನೀನು ಸಿಂಹದಂತೆ ಬೇಟೆಗಾಗಿ ಹೊಂಚುಹಾಕಿ ನಿಂತಿರುವೆ.
ಯೆಹೂದನು ಸಿಂಹದಂತಿರುವನು. ಅವನು ಮಲಗಿ ವಿಶ್ರಮಿಸಿಕೊಳ್ಳುವನು;
ಅವನನ್ನು ಕೆಣಕಲು ಯಾರಿಗೂ ಧೈರ್ಯವಿಲ್ಲ.
10 ರಾಜದಂಡವನ್ನು ಹಿಡಿಯತಕ್ಕವನು ಬರುವ ತನಕ
ಯೆಹೂದನು ರಾಜದಂಡವನ್ನು ಹಿಡಿದುಕೊಳ್ಳುವನು.
ಅವನ ಸಂತತಿಯವರು ಶಾಶ್ವತವಾಗಿ ಆಳುವರು;
ಅನ್ಯಜನಾಂಗಗಳು ಅವನಿಗೆ ಕಪ್ಪಕಾಣಿಕೆಗಳನ್ನು ತಂದು ಅವನಿಗೆ ವಿಧೇಯರಾಗಿರುವರು.
11 ಅವನು ತನ್ನ ಕತ್ತೆಯನ್ನು ದ್ರಾಕ್ಷೆಬಳ್ಳಿಗೆ ಕಟ್ಟುವನು;
ತನ್ನ ಪ್ರಾಯದ ಕತ್ತೆಯನ್ನು ಉತ್ತಮವಾದ ದ್ರಾಕ್ಷೆಬಳ್ಳಿಗೆ ಕಟ್ಟುವನು.
ಅವನು ಉತ್ತಮವಾದ ದ್ರಾಕ್ಷಾರಸದಿಂದ
ತನ್ನ ಬಟ್ಟೆಗಳನ್ನು ತೊಳೆಯುವನು.
12 ಅವನು ದ್ರಾಕ್ಷಾರಸವನ್ನು ಕುಡಿಯುವುದರಿಂದ ಅವನ ಕಣ್ಣುಗಳು ಕೆಂಪಾಗಿರುತ್ತವೆ.
ಅವನು ಹಾಲು ಕುಡಿಯುವುದರಿಂದ ಅವನ ಹಲ್ಲುಗಳು ಬಿಳುಪಾಗಿರುತ್ತವೆ.”
ಜೆಬುಲೂನ
13 “ಜೆಬುಲೂನನು ಸಮುದ್ರದ ಕರಾವಳಿಯಲ್ಲಿ ವಾಸಿಸುವನು;
ಸಮುದ್ರ ತೀರವು ಅವನ ಹಡಗುಗಳಿಗೆ ಸುರಕ್ಷಿತವಾದ ಸ್ಥಳವಾಗಿದೆ.
ಅವನ ನಾಡು ಚೀದೋನ್ ಪಟ್ಟಣದವರೆಗೂ ವಿಸ್ತರಿಸುವುದು.”
ಇಸ್ಸಾಕಾರ
14 “ಇಸ್ಸಾಕಾರನು ಬಹಳ ಕಷ್ಟಪಟ್ಟು ದುಡಿಯುವ ಕತ್ತೆಯಂತಿದ್ದಾನೆ.
ಅವನು ಭಾರವಾದ ಹೊರೆಯನ್ನು ಹೊರುವುದರಿಂದ ಮಲಗಿ ವಿಶ್ರಮಿಸಿಕೊಳ್ಳುವನು.
15 ಅವನು ತನ್ನ ವಿಶ್ರಾಂತಿಗೆ ಅನುಕೂಲವಾಗಿರುವ
ಮತ್ತು ಪ್ರಶಾಂತವಾಗಿರುವ ನಾಡನ್ನು ನೋಡುವನು.
ಅವನು ಭಾರವಾದ ಹೊರೆಗಳನ್ನು ಹೊರುವುದಕ್ಕೂ
ಗುಲಾಮನಂತೆ ದುಡಿಯುವುದಕ್ಕೂ ಒಪ್ಪಿಕೊಳ್ಳುವನು.”
ದಾನ
16 “ಇತರ ಇಸ್ರೇಲರ ಕುಟುಂಬಗಳಿಗೆ ತೀರ್ಪುಮಾಡುವಂತೆ,
ದಾನನು ತನ್ನ ಸ್ವಂತ ಜನರಿಗೆ ತೀರ್ಪು ಮಾಡುತ್ತಾನೆ.
17 ದಾನನು ರಸ್ತೆಯ ಬಳಿಯಲ್ಲಿರುವ ಹಾವಿನಂತಿರುವನು.”
ದಾರಿಯ ಸಮೀಪದಲ್ಲಿ ಮಲಗಿದ್ದು
ಕುದುರೆಯ ಹಿಮ್ಮಡಿಯನ್ನು ಕಚ್ಚಿ
ಸವಾರನನ್ನು ಬೀಳಿಸುವ ವಿಷಸರ್ಪದಂತಿರುವನು.
18 “ಯೆಹೋವನೇ, ನಿನ್ನಿಂದುಂಟಾಗುವ ರಕ್ಷಣೆಗಾಗಿ ನಾನು ಕಾಯುತ್ತಿದ್ದೇನೆ.”
ಗಾದ
19 “ಒಂದು ಕಳ್ಳರ ಗುಂಪು ಗಾದನ ಮೇಲೆ ಆಕ್ರಮಣ ಮಾಡುವುದು.
ಆದರೆ ಗಾದನು ಅವರನ್ನು ಓಡಿಸಿ ಬಿಡುವನು.”
ಆಶೇರ
20 “ಆಶೇರನ ನಾಡು ಒಳ್ಳೆಯ ಆಹಾರವನ್ನು ಯಥೇಚ್ಛವಾಗಿ ಫಲಿಸುತ್ತದೆ;
ರಾಜನಿಗೆ ಸಾಕಾಗುವಷ್ಟು ಒಳ್ಳೆಯ ಆಹಾರವು ಅವನಲ್ಲಿರುವುದು.”
ನಫ್ತಾಲಿ
21 “ನಫ್ತಾಲಿಯು ಸ್ವತಂತ್ರವಾಗಿ ಓಡುವ ಜಿಂಕೆಯಂತಿದ್ದಾನೆ.
ಅವನ ಮಾತುಗಳು ಅದರ ಸುಂದರವಾದ ಮರಿಗಳಂತಿವೆ.”
ಯೋಸೇಫ
22 “ಯೋಸೇಫನು ಬಹು ಯಶಸ್ವಿಯಾಗಿದ್ದಾನೆ.
ಯೋಸೇಫನು ಹಣ್ಣನ್ನು ಅಧಿಕವಾಗಿ ಫಲಿಸುವ ದ್ರಾಕ್ಷೆ ಬಳ್ಳಿಯಂತಿರುವನು.
ಅವನು ವಸಂತಕಾಲದಲ್ಲಿ ಬೆಳೆಯುವ ದ್ರಾಕ್ಷೆಬಳ್ಳಿಯಂತಿರುವನು.
ಅವನು ಗೋಡೆಯ ಆಚೆಗೆ ಚಾಚಿಕೊಂಡಿರುವ ದ್ರಾಕ್ಷೆಬಳ್ಳಿಯಂತಿರುವನು.
23 ಅನೇಕ ಜನರು ಅವನ ವಿರುದ್ಧವಾಗಿ ಹೋರಾಡಿದರು.
ಬಿಲ್ಲುಗಳನ್ನು ಹೊಂದಿದ್ದ ಜನರು ಅವನನ್ನು ಇಷ್ಟಪಡಲಿಲ್ಲ.
24 ಆದರೆ ಅವನು ತನ್ನ ಹೋರಾಟದಲ್ಲಿ ಬಲಿಷ್ಠವಾದ ಬಿಲ್ಲಿನಿಂದಲೂ
ತನ್ನ ನಿಪುಣವಾದ ತೋಳುಗಳಿಂದಲೂ ಗೆದ್ದನು.
ಅವನು ಶಕ್ತಿಯನ್ನು ಯಾಕೋಬನ ಪರಾಕ್ರಮಿಯಿಂದಲೂ
ಇಸ್ರೇಲನ ಬಂಡೆಯಾದಾತನಿಂದಲೂ ಕುರುಬನಿಂದಲೂ
25 ನಿಮ್ಮ ತಂದೆಯ ದೇವರಿಂದಲೂ ಪಡೆದುಕೊಳ್ಳುವನು.
ದೇವರು ನಿನ್ನನ್ನು ಆಶೀರ್ವದಿಸುವನು.
ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಲಿ.
ಆತನು ಮೇಲಿರುವ ಆಕಾಶದಿಂದ ನಿನಗೆ ಆಶೀರ್ವಾದಗಳನ್ನು ಕೊಡಲಿ.
ಆತನು ಕೆಳಗಿನ ಆಳವಾದ ಸಾಗರದ ಸೆಲೆಗಳಿಂದಲೂ ನಿನಗೆ ಆಶೀರ್ವಾದಗಳನ್ನು ಕೊಡಲಿ.
ಆತನು ನಿನಗೆ ಸ್ತನ್ಯಗಳಿಂದಲೂ ಗರ್ಭದಿಂದಲೂ ಆಶೀರ್ವಾದಗಳನ್ನು ಕೊಡಲಿ.
26 ನನ್ನ ತಂದೆತಾಯಿಗಳಿಗೆ ಅನೇಕಾನೇಕ ಒಳ್ಳೆಯ ಸಂಗತಿಗಳು ಸಂಭವಿಸಿದವು.
ನಿನ್ನ ತಂದೆಯಾದ ನಾನು ಅದಕ್ಕಿಂತಲೂ ಹೆಚ್ಚು ಆಶೀರ್ವಾದ ಹೊಂದಿಕೊಂಡೆನು.
ನಿನ್ನ ಸಹೋದರರು ನಿನ್ನನ್ನು ದೂರಮಾಡಲು ಪ್ರಯತ್ನಿಸಿದರು.
ಆದರೆ ಈಗ ನನ್ನ ಎಲ್ಲಾ ಆಶೀರ್ವಾದಗಳು ನಿನ್ನ ಮೇಲೆ
ಎತ್ತರವಾದ ಬೆಟ್ಟದೋಪಾದಿಯಲ್ಲಿ ರಾಶಿಯಂತಿವೆ.”
ಬೆನ್ಯಾಮೀನ
27 “ಬೆನ್ಯಾಮೀನನು ಹಸಿದಿರುವ ತೋಳದಂತಿದ್ದಾನೆ.
ಅವನು ಮುಂಜಾನೆಯಲ್ಲಿ ಕೊಂದು ತಿನ್ನುವನು.
ಅವನು ಸಾಯಂಕಾಲ ಮಿಕ್ಕುಳಿದುದ್ದನ್ನು ಹಂಚಿಕೊಳ್ಳುವನು.”
28 ಇವು ಇಸ್ರೇಲನ ಹನ್ನೆರಡು ಕುಲಗಳು. ಈ ವಿಷಯಗಳನ್ನೆಲ್ಲ ಅವರ ತಂದೆಯಾದ ಇಸ್ರೇಲನು ಅವರಿಗೆ ಹೇಳಿದನು. ಅವನು ತನ್ನ ಪ್ರತಿಯೊಬ್ಬ ಗಂಡುಮಗನಿಗೆ ಸರಿತಕ್ಕ ಆಶೀರ್ವಾದ ಕೊಟ್ಟನು. 29 ಬಳಿಕ ಇಸ್ರೇಲನು ಅವರಿಗೆ ಈ ಆಜ್ಞೆಯನ್ನು ಕೊಟ್ಟನು: “ನಾನು ಸತ್ತಾಗ, ನನ್ನ ಪೂರ್ವಿಕರ ಸಂಗಡವಿರಲು ಇಷ್ಟಪಡುತ್ತೇನೆ. ನನ್ನ ಪೂರ್ವಿಕರಿಗೆ ಸಮಾಧಿ ಮಾಡಿರುವ ಹಿತ್ತಿಯನಾದ ಎಫ್ರೋನನ ಗವಿಯಲ್ಲಿ ನನಗೆ ಸಮಾಧಿಮಾಡಬೇಕು. 30 ಆ ಗವಿಯು ಕಾನಾನ್ ದೇಶದ ಮಮ್ರೆಗೆ ಎದುರಾಗಿರುವ ಮಕ್ಪೇಲ ಎಂಬ ಬಯಲಿನಲ್ಲಿದೆ. ಅಬ್ರಹಾಮನು ತನ್ನ ಸಮಾಧಿಗಾಗಿ ಈ ಸ್ಥಳವನ್ನು ಎಫ್ರೋನನಿಂದ ಕೊಂಡುಕೊಂಡನು. 31 ಅಬ್ರಹಾಮನನ್ನು ಮತ್ತು ಅವನ ಹೆಂಡತಿಯಾದ ಸಾರಳನ್ನು ಆ ಗವಿಯಲ್ಲಿ ಸಮಾಧಿ ಮಾಡಲಾಗಿದೆ. ಇಸಾಕನನ್ನು ಮತ್ತು ರೆಬೆಕ್ಕಳನ್ನು ಅಲ್ಲಿ ಸಮಾಧಿ ಮಾಡಲಾಗಿದೆ. ನನ್ನ ಹೆಂಡತಿಯಾದ ಲೇಯಳನ್ನು ನಾನು ಅಲ್ಲಿ ಸಮಾಧಿ ಮಾಡಿದ್ದೇನೆ. ಬೆನ್ಯಾಮೀನ 32 ಆ ಗುಹೆಯನ್ನು ಮತ್ತು ಆ ಗುಹೆಯಿರುವ ಹೊಲವನ್ನು ಹಿತ್ತಿಯರಿಂದ ಕೊಂಡುಕೊಳ್ಳಲಾಗಿದೆ” ಎಂದು ಹೇಳಿದನು. 33 ಯಾಕೋಬನು ತನ್ನ ಗಂಡುಮಕ್ಕಳೊಂದಿಗೆ ಮಾತನಾಡಿದ ಮೇಲೆ ತನ್ನ ಹಾಸಿಗೆಯ ಮೇಲೆ ಕಾಲುಗಳನ್ನು ಮುದುರಿಕೊಂಡು ಪ್ರಾಣಬಿಟ್ಟನು.
ಯೇಸುವಿನ ಜನನ
(ಮತ್ತಾಯ 1:18-25)
2 ಆ ಕಾಲದಲ್ಲಿ ಚಕ್ರವರ್ತಿ ಅಗಸ್ಟಸ್ ಸೀಸರನು ರೋಮನ್ನರ ಆಳ್ವಿಕೆಗೆ ಒಳಪಟ್ಟಿದ್ದ ಎಲ್ಲಾ ದೇಶಗಳಲ್ಲಿ ಜನಗಣತಿ ಆಗಬೇಕೆಂದು ಆಜ್ಞಾಪಿಸಿದನು. 2 ಇದು ಮೊಟ್ಟಮೊದಲನೆಯ ಜನಗಣತಿಯಾಗಿತ್ತು. ಕುರೇನ್ಯನು ಸಿರಿಯ ದೇಶದ ರಾಜ್ಯಪಾಲನಾಗಿದ್ದಾಗ ಇದು ಸಂಭವಿಸಿತು. 3 ಜನರೆಲ್ಲರೂ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ತಮ್ಮತಮ್ಮ ಊರುಗಳಿಗೆ ಪ್ರಯಾಣ ಮಾಡಿದರು.
4 ಆದ್ದರಿಂದ ಯೋಸೇಫನು ಗಲಿಲಾಯದಲ್ಲಿನ ನಜರೇತ್ ಎಂಬ ಊರಿನಿಂದ ಹೊರಟು ಜುದೇಯದಲ್ಲಿನ ಬೆತ್ಲೆಹೇಮ್ ಎಂಬ ಊರಿಗೆ ಹೋದನು. ಯೋಸೇಫನು ದಾವೀದನ ಮನೆತನದವನಾಗಿದ್ದುದರಿಂದ ದಾವೀದನ ಊರಾದ ಬೆತ್ಲೆಹೇಮಿಗೆ ಹೋದನು. 5 ಅವನು ತನ್ನೊಂದಿಗೆ ಮರಿಯಳನ್ನೂ ಕರೆದುಕೊಂಡು ಹೋದನು. ಆಕೆಗೆ ಅವನೊಂದಿಗೆ ನಿಶ್ಚಿತಾರ್ಥವಾಗಿತ್ತು. (ಮರಿಯಳು ಆಗ ಗರ್ಭಿಣಿಯಾಗಿದ್ದಳು.) 6 ಅವರು ಬೆತ್ಲೆಹೇಮಿನಲ್ಲಿದ್ದಾಗ ಮರಿಯಳಿಗೆ ಹೆರಿಗೆಕಾಲ ಬಂತು. 7 ಆಕೆ ತನ್ನ ಚೊಚ್ಚಲಮಗುವನ್ನು (ಯೇಸು) ಹೆತ್ತಳು. ಅವರಿಗೆ ಇಳಿದುಕೊಳ್ಳಲು ಛತ್ರದಲ್ಲಿ ಸ್ಥಳ ದೊರೆಯಲಿಲ್ಲ. ಆದ್ದರಿಂದ ಮರಿಯಳು ಮಗುವನ್ನು ಬಟ್ಟೆಯಿಂದ ಸುತ್ತಿ ದನದ ಕೊಟ್ಟಿಗೆಯಲ್ಲಿ ಮೇವು ಹಾಕುತ್ತಿದ್ದ ತೊಟ್ಟಿಯಲ್ಲಿ ಮಲಗಿಸಿದಳು.
ಕುರುಬರಿಗೆ ದೊರೆತ ಸಂದೇಶ
8 ಆ ರಾತ್ರಿ, ಕೆಲವು ಕುರುಬರು ಹೊಲಗಳ ಸಮೀಪದಲ್ಲಿ ತಮ್ಮ ಕುರಿಗಳನ್ನು ಕಾಯುತ್ತಿದ್ದರು. 9 ಪ್ರಭುವಿನ ದೂತನೊಬ್ಬನು ಕುರುಬರ ಮುಂದೆ ನಿಂತನು. ಅವರ ಸುತ್ತಲೂ ಪ್ರಭುವಿನ ಪ್ರಭೆಯು ಪ್ರಕಾಶಿಸಿತು. ಕುರುಬರು ಬಹಳವಾಗಿ ಹೆದರಿದರು. 10 ದೇವದೂತನು ಅವರಿಗೆ, “ಹೆದರಬೇಡಿರಿ, ಜನರೆಲ್ಲರಿಗೆ ಮಹಾಸಂತೋಷವನ್ನು ಉಂಟುಮಾಡುವ ಶುಭಸಂದೇಶವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ: 11 ಈ ದಿನ ನಿಮಗೋಸ್ಕರ ದಾವೀದನ ಊರಿನಲ್ಲಿ ರಕ್ಷಕನು ಜನಿಸಿದ್ದಾನೆ. ಆತನೇ ಪ್ರಭುವಾದ ಕ್ರಿಸ್ತನು. 12 ಬಟ್ಟೆಯಲ್ಲಿ ಸುತ್ತಿರುವ ಒಂದು ಮಗು ದನದ ಕೊಟ್ಟಿಗೆಯಲ್ಲಿ ಮಲಗಿರುವುದನ್ನು ನೀವು ಕಾಣುವಿರಿ. ನೀವು ಆತನನ್ನು ಗೊತ್ತುಪಡಿಸಿಕೊಳ್ಳಲು ಅದೇ ಗುರುತಾಗಿದೆ” ಎಂದು ಹೇಳಿದನು.
13 ತಕ್ಷಣವೇ ಪರಲೋಕದಿಂದ ದೇವದೂತರು ಬಹು ದೊಡ್ಡ ಗುಂಪಾಗಿ ಬಂದು ಮೊದಲನೆಯ ದೇವದೂತನೊಡನೆ ಸೇರಿಕೊಂಡರು. ಅವರೆಲ್ಲರೂ,
14 “ಮೇಲಿನಲೋಕಗಳಲ್ಲಿ ದೇವರಿಗೆ ಮಹಿಮೆ;
ಭೂಲೋಕದಲ್ಲಿ ದೇವರೊಲಿದವರಿಗೆ ಸಮಾಧಾನ”
ಎಂದು ಹೇಳುತ್ತಾ ದೇವರನ್ನು ಸ್ತುತಿಸಿದರು.
15 ದೇವದೂತರು ಕುರುಬರ ಬಳಿಯಿಂದ ಪರಲೋಕಕ್ಕೆ ಹಿಂತಿರುಗಿದ ಮೇಲೆ ಕುರುಬರು, “ನಾವು ಈಗಲೇ ಬೆತ್ಲೆಹೇಮಿಗೆ ಹೋಗಿ, ಪ್ರಭುವು ನಮಗೆ ತಿಳಿಸಿದ ಈ ಘಟನೆಯನ್ನು ನೋಡೋಣ” ಎಂದು ಮಾತಾಡಿಕೊಂಡರು.
16 ಆದ್ದರಿಂದ ಕುರುಬರು ಬೇಗನೆ ಹೋಗಿ ಮರಿಯಳನ್ನೂ ಯೋಸೇಫನನ್ನೂ ದನದ ಕೊಟ್ಟಿಗೆಯಲ್ಲಿ ಮಲಗಿದ್ದ ಮಗುವನ್ನೂ ಕಂಡುಕೊಂಡರು. 17 ಕುರುಬರು ಮಗುವನ್ನು ನೋಡಿದಾಗ ಅದರ ವಿಷಯವಾಗಿ ತಮಗೆ ದೇವದೂತರು ತಿಳಿಸಿದ್ದನ್ನು ಅವರಿಗೆ ತಿಳಿಯಪಡಿಸಿದರು. 18 ಕುರುಬರು ತಿಳಿಸಿದ್ದನ್ನು ಕೇಳಿದ ಅವರೆಲ್ಲರೂ ಆಶ್ಚರ್ಯಪಟ್ಟರು. 19 ಮರಿಯಳು ಈ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟುಕೊಂಡು, ಅವುಗಳ ಬಗ್ಗೆ ಯೋಚಿಸತೊಡಗಿದಳು. 20 ಕುರುಬರು ತಾವು ಕಂಡು ಕೇಳಿದ ಪ್ರತಿಯೊಂದು ಸಂಗತಿಗಾಗಿ ದೇವರನ್ನು ಕೊಂಡಾಡುತ್ತಾ ಆತನನ್ನು ಸ್ತುತಿಸುತ್ತಾ ತಮ್ಮ ಕುರಿಗಳಿದ್ದಲ್ಲಿಗೆ ಮರಳಿಹೋದರು. ದೇವದೂತರು ಅವರಿಗೆ ತಿಳಿಸಿದಂತೆಯೇ ಪ್ರತಿಯೊಂದು ಸಂಗತಿಯೂ ನಡೆದಿತ್ತು.
21 ಮಗುವಿಗೆ ಎಂಟು ದಿನವಾದಾಗ ಸುನ್ನತಿ[a] ಆಯಿತು ಮತ್ತು ಆತನಿಗೆ “ಯೇಸು” ಎಂದು ಹೆಸರಿಡಲಾಯಿತು. ಮರಿಯಳ ಗರ್ಭದಲ್ಲಿ ಮಗುವು ಬೆಳೆಯುವುದಕ್ಕೆ ಪ್ರಾರಂಭಿಸುವ ಮೊದಲೇ ದೇವದೂತನು ಈ ಹೆಸರನ್ನೇ ಕೊಡಬೇಕೆಂದು ಸೂಚಿಸಿದ್ದನು.
ದೇವಾಲಯದಲ್ಲಿ ಯೇಸುವಿನ ಪ್ರತಿಷ್ಠೆ
22 ಶುದ್ಧೀಕರಣದ[b] ಬಗ್ಗೆ ಮೋಶೆಯ ಧರ್ಮಶಾಸ್ತ್ರವು ಬೋಧಿಸಿದ್ದ ಕಾರ್ಯಗಳನ್ನು ಮರಿಯಳು ಮತ್ತು ಯೋಸೇಫನು ಮಾಡುವ ಸಮಯ ಬಂತು. ಯೇಸುವನ್ನು ಪ್ರಭುವಿಗೆ (ದೇವರಿಗೆ) ಪ್ರತಿಷ್ಠಿಸಲು ಯೋಸೇಫನು ಮತ್ತು ಮರಿಯಳು ಆತನನ್ನು ಜೆರುಸಲೇಮಿಗೆ ಕರೆದುಕೊಂಡು ಬಂದರು. 23 ಏಕೆಂದರೆ “ಪ್ರತಿ ಕುಟುಂಬದಲ್ಲಿ, ‘ಚೊಚ್ಚಲು ಗಂಡುಮಗುವನ್ನು ಪ್ರಭುವಿಗೆ ಪ್ರತಿಷ್ಠಿಸಬೇಕು’”[c] ಎಂದು ಪ್ರಭುವಿನ ಧರ್ಮಶಾಸ್ತ್ರದಲ್ಲಿ ಬರೆದಿದೆ. 24 “ಎರಡು ಪಾರಿವಾಳಗಳನ್ನು ಅಥವಾ ಎರಡು ಬೆಳವಕ್ಕಿಗಳನ್ನು ಯಜ್ಞವಾಗಿ ಸಮರ್ಪಿಸಬೇಕು”(A) ಎಂದು ಸಹ ಪ್ರಭುವಿನ ಧರ್ಮಶಾಸ್ತ್ರವು ಹೇಳುತ್ತದೆ. ಆದ್ದರಿಂದ ಯೋಸೇಫನು ಮತ್ತು ಮರಿಯಳು ಜೆರುಸಲೇಮಿಗೆ ಹೋದರು.
ಸಿಮೆಯೋನನು ಯೇಸುವನ್ನು ನೋಡಿದನು
25 ಸಿಮೆಯೋನನೆಂಬ ಒಬ್ಬ ಮನುಷ್ಯನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಅವನು ಒಳ್ಳೆಯವನಾಗಿದ್ದನು ಮತ್ತು ಬಹಳ ಧಾರ್ಮಿಕನಾಗಿದ್ದನು. ದೇವರು ಇಸ್ರೇಲರಿಗೆ ಸಹಾಯ ಮಾಡುವ ಕಾಲವನ್ನೇ ಸಿಮೆಯೋನನು ಎದುರು ನೋಡುತ್ತಿದ್ದನು. ಅವನು ಪವಿತ್ರಾತ್ಮಭರಿತನಾಗಿದ್ದನು. 26 ಪ್ರಭುವು ಕಳುಹಿಸುವ ಕ್ರಿಸ್ತನನ್ನು ನೋಡುವ ತನಕ ನೀನು ಸಾಯುವುದಿಲ್ಲ ಎಂದು ಪವಿತ್ರಾತ್ಮನು ಸಿಮೆಯೋನನಿಗೆ ತಿಳಿಸಿದ್ದನು. 27 ಸಿಮೆಯೋನನು ಪವಿತ್ರಾತ್ಮನ ಪ್ರೇರಣೆಯಿಂದ ದೇವಾಲಯಕ್ಕೆ ಬಂದನು. ಯೆಹೂದ್ಯರ ಧರ್ಮಶಾಸ್ತ್ರದ ವಿಧಿಗಳನ್ನು ಪೂರೈಸಲು ಮರಿಯಳು ಮತ್ತು ಯೋಸೇಫನು ದೇವಾಲಯಕ್ಕೆ ಹೋದರು. ಅವರು ಮಗು ಯೇಸುವನ್ನು ದೇವಾಲಯಕ್ಕೆ ತಂದರು. 28 ಸಿಮೆಯೋನನು ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರಿಗೆ ಹೀಗೆಂದು ಸ್ತೋತ್ರ ಸಲ್ಲಿಸಿದನು:
29 “ಪ್ರಭುವೇ, ನಿನ್ನ ವಾಗ್ದಾನದಂತೆ ಸಮಾಧಾನದಿಂದ ಸಾಯಲು ನಿನ್ನ ದಾಸನಿಗೆ ಅಪ್ಪಣೆಯಾಗಲಿ.
30 ನೀನು ದಯಪಾಲಿಸಿದ ರಕ್ಷಕನನ್ನು[d] ಕಣ್ಣಾರೆಕಂಡೆನು.
31 ನೀನು ಆತನನ್ನು ಜನರೆಲ್ಲರಿಗೆ ಪ್ರತ್ಯಕ್ಷ ಮಾಡಿರುವೆ.
32 ಆತನು ಯೆಹೂದ್ಯರಲ್ಲದ ಜನರಿಗೆ ನಿನ್ನ ಮಾರ್ಗವನ್ನು ತೋರಿಸುವ ಬೆಳಕಾಗಿದ್ದಾನೆ.
ಆತನಿಂದ ನಿನ್ನ ಜನರಾದ ಇಸ್ರೇಲರಿಗೆ ಕೀರ್ತಿಯಾಗುವುದು.”
33 ಸಿಮೆಯೋನನು ಮಗುವಿನ ಕುರಿತಾಗಿ ಹೇಳಿದ ಮಾತುಗಳನ್ನು ಕೇಳಿ ತಂದೆತಾಯಿಗಳಿಗೆ ಆಶ್ಚರ್ಯವಾಯಿತು. 34 ಬಳಿಕ ಸಿಮೆಯೋನನು ಅವರನ್ನು ಆಶೀರ್ವದಿಸಿ ಮರಿಯಳಿಗೆ, “ಈ ಮಗುವಿನ ನಿಮಿತ್ತ ಯೆಹೂದ್ಯರಲ್ಲಿ ಅನೇಕರು ಬೀಳುವರು. ಅನೇಕರು ಏಳುವರು. ಕೆಲವರು ಅಂಗೀಕರಿಸರು ಎಂಬುದಕ್ಕೆ ಈತನು ದೇವರಿಂದ ಬಂದ ಗುರುತಾಗಿರುವನು. 35 ಜನರು ಗುಟ್ಟಾಗಿ ಯೋಚಿಸುವ ಸಂಗತಿಗಳು ಬಯಲಾಗುವವು. ಮುಂದೆ ಸಂಭವಿಸುವ ಸಂಗತಿಗಳಿಂದ ನಿನ್ನ ಹೃದಯಕ್ಕೆ ಅಲಗು ನಾಟಿದಂತಾಗುವುದು” ಎಂದು ಹೇಳಿದನು.
ಅನ್ನಳು ಯೇಸುವನ್ನು ನೋಡಿದಳು
36 ದೇವಾಲಯದಲ್ಲಿ ಅನ್ನಳೆಂಬ ಒಬ್ಬ ಪ್ರವಾದಿನಿ[e] ಇದ್ದಳು. ಆಕೆಯು ಅಸೇರನ ವಂಶದ ಫನುವೇಲನ ಕುಟುಂಬದವಳಾಗಿದ್ದಳು. ಅನ್ನಳು ಬಹಳ ಮುಪ್ಪಿನವಳಾಗಿದ್ದಳು. ಆಕೆಯು ಮದುವೆಯಾದ ಏಳು ವರ್ಷಕ್ಕೆ ಗಂಡನನ್ನು ಕಳೆದುಕೊಂಡಳು. 37 ತನ್ನ ಉಳಿದ ಜೀವಮಾನವೆಲ್ಲಾ ವಿಧವೆಯಾಗಿದ್ದ ಆಕೆಗೆ ಈಗ ಎಂಭತ್ತನಾಲ್ಕು ವರ್ಷ ವಯಸ್ಸಾಗಿತ್ತು. ಅನ್ನಳು ಯಾವಾಗಲೂ ದೇವಾಲಯದಲ್ಲಿಯೇ ಇದ್ದಳು. ಆಕೆ ಬೇರೆಲ್ಲಿಗೂ ಹೋಗುತ್ತಿರಲಿಲ್ಲ. ಆಕೆ ಉಪವಾಸ ಮಾಡುತ್ತಾ ಮತ್ತು ಹಗಲಿರುಳು ಪ್ರಾರ್ಥಿಸುತ್ತಾ ದೇವರನ್ನು ಆರಾಧಿಸುತ್ತಿದ್ದಳು.
38 ಅವಳು ಅದೇ ಸಮಯದಲ್ಲಿ ಅಲ್ಲಿಗೆ ಬಂದು, ದೇವರಿಗೆ ಸ್ತೋತ್ರ ಸಲ್ಲಿಸಿ ದೇವರು ಜೆರುಸಲೇಮಿಗೆ ದಯಪಾಲಿಸುವ ಬಿಡುಗಡೆಯನ್ನು ಎದುರುನೋಡುತ್ತಿದ್ದ ಜನರಿಗೆ ಯೇಸುವಿನ ವಿಷಯವಾಗಿ ತಿಳಿಸಿದಳು.
ಯೋಸೇಫನು ಮತ್ತು ಮರಿಯಳು ಮನೆಗೆ ಮರಳಿದರು
39 ಪ್ರಭುವಿನ ಧರ್ಮಶಾಸ್ತ್ರದ ಎಲ್ಲ ವಿಧಿಗಳನ್ನು ನೆರವೇರಿಸಿದ ಮೇಲೆ ಯೋಸೇಫ ಮತ್ತು ಮರಿಯಳು ಗಲಿಲಾಯ ಪ್ರಾಂತ್ಯದಲ್ಲಿದ್ದ ತಮ್ಮ ಸ್ವಂತ ಊರಾದ ನಜರೇತಿಗೆ ಹಿಂತಿರುಗಿದರು. 40 ಬಾಲಕ ಯೇಸು ಬೆಳೆದು ಬಲಗೊಂಡು ಸಂಪೂರ್ಣ ಜ್ಞಾನಿಯಾದನು. ದೇವರ ಆಶೀರ್ವಾದವು ಆತನೊಡನೆ ಇತ್ತು.
ಬಾಲಕ ಯೇಸು
41 ಪ್ರತಿವರ್ಷ ಯೇಸುವಿನ ತಂದೆತಾಯಿಗಳು ಪಸ್ಕಹಬ್ಬಕ್ಕಾಗಿ[f] ಜೆರುಸಲೇಮಿಗೆ ಹೋಗುತ್ತಿದ್ದರು. 42 ಯೇಸುವಿಗೆ ಹನ್ನೆರಡು ವರ್ಷವಾಗಿದ್ದಾಗ ಎಂದಿನಂತೆ ಅವರು ಪಸ್ಕ ಹಬ್ಬಕ್ಕಾಗಿ ಜೆರುಸಲೇಮಿಗೆ ಹೋದರು. 43 ಹಬ್ಬದ ದಿನಗಳು ಮುಗಿದ ನಂತರ ಅವರು ಮನೆಗೆ ಹೋದರು. ಆದರೆ ಬಾಲಕನಾದ ಯೇಸು ಜೆರುಸಲೇಮಿನಲ್ಲಿ ಉಳಿದುಕೊಂಡನು. ಆತನ ತಂದೆತಾಯಿಗಳಿಗೆ ಇದು ತಿಳಿದಿರಲಿಲ್ಲ. ಯೇಸುವು ಯಾತ್ರಿಕರ ಗುಂಪಿನಲ್ಲಿರಬಹುದೆಂದು ಭಾವಿಸಿಕೊಂಡ 44 ಯೋಸೇಫನು ಮತ್ತು ಮರಿಯಳು ಒಂದು ದಿನವೆಲ್ಲ ಪ್ರಯಾಣ ಮಾಡಿದರು. ನಂತರ ಮಗನನ್ನು ಕಾಣದೆ ತಮ್ಮ ಕುಟುಂಬದವರ ಮತ್ತು ಆಪ್ತಸ್ನೇಹಿತರ ಮಧ್ಯದಲ್ಲಿ ಆತನಿಗಾಗಿ ಹುಡುಕತೊಡಗಿದರು. 45 ಆದರೆ ಅಲ್ಲೆಲ್ಲೂ ಕಾಣದೆ ಯೇಸುವನ್ನು ಹುಡುಕಲು ಜೆರುಸಲೇಮಿಗೆ ಮರಳಿಹೋದರು.
46 ಮೂರು ದಿನಗಳಾದ ಮೇಲೆ ಆತನನ್ನು ಕಂಡುಕೊಂಡರು. ಯೇಸುವು ದೇವಾಲಯದಲ್ಲಿ ಧಾರ್ಮಿಕ ಉಪದೇಶಕರೊಡನೆ ಕುಳಿತುಕೊಂಡು ಅವರ ಉಪದೇಶವನ್ನು ಆಲಿಸುತ್ತಾ ಮತ್ತು ಅವರಿಗೆ ಪ್ರಶೆಗಳನ್ನು ಕೇಳುತ್ತಾ ಇದ್ದನು. 47 ಆತನ ಮಾತುಗಳನ್ನು ಕೇಳಿ ಆತನ ತಿಳುವಳಿಕೆಗೂ ಆತನ ಬುದ್ಧಿವಂತಿಕೆಯ ಉತ್ತರಗಳಿಗೂ ಅವರೆಲ್ಲರೂ ಆಶ್ಚರ್ಯಪಟ್ಟರು. 48 ಯೇಸುವಿನ ತಂದೆತಾಯಿಗಳು ಆತನನ್ನು ಅಲ್ಲಿ ಕಂಡು ಆಶ್ಚರ್ಯಪಟ್ಟರು. ಮರಿಯಳು ಆತನಿಗೆ, “ಮಗನೇ, ನೀನು ನಮಗೆ ಏಕೆ ಹೀಗೆ ಮಾಡಿದೆ? ನಿನ್ನ ತಂದೆ ಮತ್ತು ನಾನು ನಿನಗಾಗಿ ಬಹಳ ಚಿಂತಿಸುತ್ತಿದ್ದೆವು. ನಿನಗೋಸ್ಕರ ನಾವು ಹುಡುಕುತ್ತಿದ್ದೆವು” ಎಂದು ಹೇಳಿದಳು.
49 ಯೇಸು ಅವರಿಗೆ, “ನೀವು ನನಗೋಸ್ಕರ ಏಕೆ ಹುಡುಕಬೇಕಿತ್ತು? ನನ್ನ ತಂದೆಯ (ದೇವರ) ಕೆಲಸ ಎಲ್ಲಿರುತ್ತದೋ ಅಲ್ಲಿ ನಾನು ಇರಬೇಕು ಎಂಬುದನ್ನು ನೀವು ತಿಳಿದಿರಬೇಕಾಗಿತ್ತು!” ಎಂದು ಹೇಳಿದನು. 50 ಆದರೆ ಆತನ ಮಾತು ಅವರಿಗೆ ಅರ್ಥವಾಗಲಿಲ್ಲ.
51 ಯೇಸು ಅವರೊಡನೆ ನಜರೇತಿಗೆ ಬಂದು ಅವರಿಗೆ ವಿಧೇಯನಾಗಿದ್ದನು. ಆತನ ತಾಯಿ ಈ ವಿಷಯಗಳನ್ನೆಲ್ಲಾ ಇನ್ನೂ ಆಲೋಚಿಸುತ್ತಿದ್ದಳು. 52 ಯೇಸುವು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು. ದೇವರಿಗೂ ಜನರಿಗೂ ಅಚ್ಚುಮೆಚ್ಚಾದನು.
ಯೋಬನಿಗೆ ಎಲೀಫಜನ ಉತ್ತರ
15 ಬಳಿಕ ತೇಮಾನಿನ ಎಲೀಫಜನು ಯೋಬನಿಗೆ ಉತ್ತರಿಸಿದನು:
2 “ಯೋಬನೇ, ನೀನು ನಿಜವಾಗಿಯೂ ಜ್ಞಾನಿಯಾಗಿದ್ದರೆ,
ಬರಿದಾದ ನಿನ್ನ ವೈಯಕ್ತಿಕ ಮಾತುಗಳಿಂದ ಉತ್ತರಿಸುವುದಿಲ್ಲ.
ಜ್ಞಾನಿಯು ಬಿಸಿಗಾಳಿಯಂತೆ ಉತ್ತರಿಸುವನೇ?
3 ಜ್ಞಾನಿಯು ನಿಷ್ಪ್ರಯೋಜಕವಾದ ಮಾತುಗಳಿಂದ ವಾದಿಸುತ್ತಾನೆಂದು
ಭಾವಿಸಿಕೊಂಡಿರುವೆಯಾ?
4 ನೀನು ನಿನ್ನ ಮಾರ್ಗದಲ್ಲಿ ಹೋಗುವುದಾದರೆ,
ದೇವರಲ್ಲಿ ಯಾರೂ ಭಯಭಕ್ತಿಯಿಡುವುದಿಲ್ಲ; ಆತನಿಗೆ ಯಾರೂ ಪ್ರಾರ್ಥಿಸುವುದಿಲ್ಲ.
5 ನಿನ್ನ ಪಾಪವೇ ನಿನ್ನ ಮಾತುಗಳಿಗೆ ಪ್ರೇರಕವಾಗಿವೆ.
ನೀನು ಮೋಸಕರವಾದ ಮಾತುಗಳನ್ನು ಬಳಸುತ್ತಿರುವೆ.
6 ನೀನು ತಪ್ಪಿತಸ್ಥನೆಂದು ನಾನು ನಿರೂಪಿಸುವ ಅಗತ್ಯವಿಲ್ಲ.
ಯಾಕೆಂದರೆ ನಿನ್ನ ಬಾಯ ಮಾತುಗಳೇ ನಿನ್ನನ್ನು ತಪ್ಪಿತಸ್ಥನೆಂದು ತೋರಿಸುತ್ತವೆ.
ನಿನ್ನ ಸ್ವಂತ ತುಟಿಗಳೇ ನಿನ್ನ ವಿರುದ್ಧವಾಗಿ ಸಾಕ್ಷಿ ಕೊಡುತ್ತವೆ.
7 “ಯೋಬನೇ, ಎಲ್ಲರಿಗಿಂತ ಮೊದಲು ನೀನೇ ಹುಟ್ಟಿರುವುದಾಗಿ ಭಾವಿಸಿಕೊಂಡಿರುವಿಯಾ?
ಬೆಟ್ಟಗಳಿಗಿಂತ ಮೊದಲೇ ನೀನು ಹುಟ್ಟಿದಿಯಾ?
8 ದೇವರ ರಹಸ್ಯ ಯೋಜನೆಗಳನ್ನು ಆಲಿಸಿರುವೆಯಾ?
ನೀನೊಬ್ಬನೇ ಜ್ಞಾನಿಯೆಂದು ಭಾವಿಸಿಕೊಂಡಿರುವಿಯಾ?
9 ಯೋಬನೇ, ನಿನಗೆ ಗೊತ್ತಿರುವುದೆಲ್ಲಾ ನಮಗೂ ಗೊತ್ತಿದೆ.
ನಿನಗೆ ಅರ್ಥವಾಗುವುದೆಲ್ಲಾ ನಮಗೂ ಅರ್ಥವಾಗುತ್ತದೆ.
10 ನಿನ್ನ ತಂದೆಗಿಂತಲೂ ವಯಸ್ಸಾಗಿರುವ,
ಕೂದಲು ಬೆಳ್ಳಗಾಗಿರುವ ವೃದ್ಧನು ನಮ್ಮಲ್ಲಿದ್ದಾನೆ.
11 ದೇವರ ಆಧರಣೆಯ ಮಾತುಗಳೂ ನಮ್ಮ ನಯವಾದ ಮಾತುಗಳೂ
ನಿನಗೆ ಸಾಲುವುದಿಲ್ಲವೇ?
12 ಯೋಬನೇ, ನಿನ್ನ ಆಲೋಚನೆಗಳು ನಿನ್ನನ್ನು ಸೆಳೆದುಕೊಂಡು ಹೋಗುವುದೇಕೆ?
ನಿನ್ನ ಕಣ್ಣುಗಳು ನಮ್ಮ ಮೇಲೆ ಕಿಡಿಕಿಡಿಯಾಗುವುದೇಕೆ?
13 ನೀನು ದೇವರ ಮೇಲೆ ಕೋಪಗೊಂಡು
ನಿನ್ನ ಬಾಯಿಂದ ಅಂತಹ ಮಾತುಗಳನ್ನು ಸುರಿಸುತ್ತಿರುವೆ!
14 “ಮನುಷ್ಯನು ಎಷ್ಟರವನು?
ಅವನು ಪರಿಶುದ್ಧನಾಗಿರಲು ಸಾಧ್ಯವೇ?
ಸ್ತ್ರೀಯಲ್ಲಿ ಹುಟ್ಟಿದವನು ನೀತಿವಂತನಾಗಿರಲು ಸಾಧ್ಯವೇ?
15 ದೇವರು ತನ್ನ ದೂತರುಗಳನ್ನು[a] ಸಹ ನಂಬುವುದಿಲ್ಲ.
ಆತನ ದೃಷ್ಟಿಯಲ್ಲಿ ಆಕಾಶಗಳು ಸಹ ಅಶುದ್ಧವಾಗಿವೆ.
16 ಹೀಗಿರಲು ದುಷ್ಟತನವನ್ನು ನೀರಿನಂತೆ ಕುಡಿಯುತ್ತಾ
ಅಸಹ್ಯನೂ ಕೆಟ್ಟವನೂ ಆಗಿರುವ ಮನುಷ್ಯನು
ಎಷ್ಟೋ ಅಶುದ್ಧನಲ್ಲವೇ?
17 “ಯೋಬನೇ, ನನಗೆ ಕಿವಿಗೊಡು, ಆಗ ನಾನು ನಿನಗೆ ಅದನ್ನು ವಿವರಿಸುವೆನು.
ನಾನು ನೋಡಿರುವುದನ್ನೇ ನಿನಗೆ ತಿಳಿಸುವೆನು.
18 ಜ್ಞಾನಿಗಳು ನನಗೆ ತಿಳಿಸಿದ ಸಂಗತಿಗಳನ್ನು ನಾನು ನಿನಗೆ ಹೇಳುವೆನು.
ಆ ಜ್ಞಾನಿಗಳಿಗೆ ಅವರ ಪೂರ್ವಿಕರೇ ಈ ಸಂಗತಿಗಳನ್ನು ತಿಳಿಸಿದ್ದಾರೆ.
ಅವರು ಯಾವ ರಹಸ್ಯಗಳನ್ನೂ ನನಗೆ ಮರೆಮಾಡಲಿಲ್ಲ.
19 ಅವರು ಮಾತ್ರ ತಮ್ಮ ದೇಶದಲ್ಲಿ ವಾಸಿಸಿದರು.
ಅವರ ಮಧ್ಯದಲ್ಲಿ ಯಾವ ವಿದೇಶಿಯನೂ ಹಾದುಹೋಗುತ್ತಿರಲಿಲ್ಲ.
20 ದುಷ್ಟನು ತನ್ನ ಜೀವಮಾನವೆಲ್ಲಾ ಯಾತನೆಯನ್ನು ಅನುಭವಿಸುವನು.
ಕ್ರೂರಿಯು ತನಗೆ ನೇಮಕಗೊಂಡಿರುವ ವರ್ಷಗಳಲ್ಲೆಲ್ಲಾ ಕಷ್ಟಪಡುವನು.
21 ಭೀಕರವಾದ ಶಬ್ದಗಳು ಅವನ ಕಿವಿಗಳಲ್ಲೇ ಇರುತ್ತವೆ.
ತಾನು ಸುರಕ್ಷಿತನಾಗಿರುವುದಾಗಿ ಅವನು ಯೋಚಿಸುವಾಗಲೇ ವೈರಿಯು ಅವನ ಮೇಲೆ ಆಕ್ರಮಣ ಮಾಡುವನು.
22 ದುಷ್ಟನಿಗೆ ಕತ್ತಲೆಯಿಂದ ಪಾರಾಗುತ್ತೇನೆ ಎಂಬ ನಿರೀಕ್ಷೆಯೇ ಇಲ್ಲ.
ಅವನನ್ನು ಕೊಲ್ಲಲು ಕತ್ತಿಯು ಎಲ್ಲೋ ಕಾದುಕೊಂಡಿದೆ.
23 ಅವನು ಅತ್ತಿತ್ತ ಅಲೆದಾಡುವನು; ಅವನ ದೇಹವು ರಣಹದ್ದುಗಳಿಗೆ ಆಹಾರವಾಗುವುದು.
ಮರಣವು[b] ತನಗೆ ಬಹು ಸಮೀಪವಾಗಿರುವುದು ಅವನಿಗೆ ಗೊತ್ತೇ ಇದೆ.
24 ಚಿಂತೆಸಂಕಟಗಳು ಅವನನ್ನು ಭಯಗೊಳಿಸುತ್ತವೆ.
ಅವನನ್ನು ನಾಶಮಾಡಲು ಸಿದ್ಧನಾಗಿರುವ ರಾಜನಂತೆ ಅವು ಅವನ ಮೇಲೆ ಆಕ್ರಮಣ ಮಾಡುತ್ತವೆ.
25 ಯಾಕೆಂದರೆ ದುಷ್ಟನು ದೇವರಿಗೆ ವಿರುದ್ಧವಾಗಿ ತನ್ನ ಕೈಯನ್ನು ಝಳಪಿಸುತ್ತಾನೆ.
ದುಷ್ಟನು ಸರ್ವಶಕ್ತನಾದ ದೇವರ ವಿರುದ್ಧವಾಗಿ ಮಹಾಶೂರನಂತೆ ಆಕ್ರಮಣ ಮಾಡುವನು.
26 ಅವನು ಬಹು ಮೊಂಡನಾಗಿದ್ದಾನೆ.
ದುಷ್ಟನು ಮಹಾಗುರಾಣಿಯನ್ನು ಹಿಡಿದು ದೇವರನ್ನು ಎದುರಿಸಲು ಪ್ರಯತ್ನಿಸುವನು.
27 ದುಷ್ಟನ ಮುಖದಲ್ಲಿ ಕೊಬ್ಬೇರಿದೆ, ಅವನ ಸೊಂಟದಲ್ಲಿ ಬೊಜ್ಜು ಬೆಳೆದುಕೊಂಡಿದೆ.
28 ಪಾಳುಬಿದ್ದಿರುವ ಮನೆಗಳಲ್ಲಿ ದುಷ್ಟನು ವಾಸಿಸುವನು.
ಹಾಳುದಿಬ್ಬಗಳಾಗಬೇಕೆಂಬುದೇ
ಆ ಮನೆಗಳ ಗತಿಯಾಗಿದೆ.
29 ದುಷ್ಟನು ಬಹುಕಾಲದವರೆಗೆ ಐಶ್ವರ್ಯವಂತನಾಗಿರಲು ಸಾಧ್ಯವಿಲ್ಲ.
ಅವನ ಐಶ್ವರ್ಯವು ಶಾಶ್ವತವಲ್ಲ;
ಅವನ ಆಸ್ತಿಗಳು ದೇಶದಲ್ಲಿ ವೃದ್ಧಿಯಾಗುವುದಿಲ್ಲ.
30 ದುಷ್ಟನು ಕತ್ತಲೆಯೊಳಗಿಂದ ತಪ್ಪಿಸಿಕೊಳ್ಳುವುದಿಲ್ಲ.
ಬೆಂಕಿಯಿಂದ ಸುಟ್ಟುಹೋದ ಕೊಂಬೆಗಳನ್ನು ಹೊಂದಿರುವ ಮರದಂತೆ ಅವನಿರುವನು.
ದೇವರ ಉಸಿರು ದುಷ್ಟನನ್ನು ಬಡಿದುಕೊಂಡು ಹೋಗುವುದು.
31 ದುಷ್ಟನು ಅಯೋಗ್ಯವಾದವುಗಳ ಮೇಲೆ ನಂಬಿಕೆಯಿಟ್ಟು, ತನ್ನನ್ನು ತಾನೇ ಮೋಸಮಾಡಿಕೊಳ್ಳದಿರಲಿ.
ಯಾಕೆಂದರೆ ಅದಕ್ಕೆ ಪ್ರತಿಫಲವಾಗಿ ಅವನಿಗೇನೂ ದೊರೆಯುವುದಿಲ್ಲ.
32 ದುಷ್ಟನು ತನ್ನ ಜೀವಿತ ಮುಗಿಯುವುದಕ್ಕಿಂತ ಮೊದಲೇ ಮುದುಕನಾಗುವನು;
ಒಣಗಿಹೋಗಿ ಇನ್ನೆಂದಿಗೂ ಹಸುರಾಗದ ಬಳ್ಳಿಯಂತಾಗುವನು;
33 ಮಾಗುವುದಕ್ಕಿಂತ ಮೊದಲೇ ತನ್ನ ದ್ರಾಕ್ಷಿಯನ್ನು ಕಳೆದುಕೊಳ್ಳುವ ದ್ರಾಕ್ಷಿಬಳ್ಳಿಯಂತಿರುವನು;
ಹೂವುಗಳು ಉದುರಿಹೋದ ಆಲಿವ್ ಮರದಂತಿರುವನು.
34 ಯಾಕೆಂದರೆ ದೇವರಿಲ್ಲದ ಜನರು ಫಲ ಕೊಡಲಾರರು.
ಲಂಚಕೋರರ ಗುಡಾರಗಳು ಬೆಂಕಿಯಿಂದ ಸುಟ್ಟುಹೋಗುತ್ತವೆ.
35 ಅವರು ಗರ್ಭಧರಿಸಿ ಕೆಡುಕನ್ನೇ ಹೆರುವರು.
ಅವರ ಗರ್ಭದಲ್ಲಿರುವ ಮಗುವು ಮೋಸಕರವಾದದ್ದು.”
ಮನುಷ್ಯರನ್ನು ಅನುಸರಿಸುವುದು ತಪ್ಪು
3 ಸಹೋದರ ಸಹೋದರಿಯರೇ, ನಾನು ಆತ್ಮಿಕ ಜನರೊಂದಿಗೆ ಮಾತಾಡುವಂತೆ ಮೊದಲು ನಿಮ್ಮೊಂದಿಗೆ ಮಾತಾಡಲಾಗಲಿಲ್ಲ. ಪ್ರಾಪಂಚಿಕರೂ ಕ್ರಿಸ್ತನಲ್ಲಿ ಎಳೆಕೂಸುಗಳೂ ಆಗಿರುವಂಥವರೊಂದಿಗೆ ಮಾತಾಡುವಂತೆ ನಾನು ನಿಮ್ಮೊಂದಿಗೆ ಮಾತಾಡಬೇಕಾಯಿತು. 2 ನಾನು ನಿಮಗೆ ಮಾಡಿದ ಉಪದೇಶವು ಗಟ್ಟಿಯಾದ ಆಹಾರದಂತಿರದೆ ಹಾಲಿನಂತಿತ್ತು; ಏಕೆಂದರೆ ಗಟ್ಟಿಯಾದ ಆಹಾರವನ್ನು ತೆಗೆದುಕೊಳ್ಳಲು ನೀವಿನ್ನೂ ಸಿದ್ಧರಾಗಿರಲಿಲ್ಲ. ಈಗಲೂ ಸಹ ಗಟ್ಟಿಯಾದ ಆಹಾರವನ್ನು ತೆಗೆದುಕೊಳ್ಳಲು ನೀವು ಸಿದ್ಧರಾಗಿಲ್ಲ. 3 ನೀವಿನ್ನೂ ಆತ್ಮಿಕರಾಗಿಲ್ಲ. ನಿಮ್ಮ ನಡುವೆ ಹೊಟ್ಟೆಕಿಚ್ಚಿದೆ; ವಾಗ್ವಾದಗಳಿವೆ; ಜಗಳಗಳಿವೆ. ನೀವು ಆತ್ಮಿಕರಲ್ಲವೆಂಬುದನ್ನು ಇವು ಸೂಚಿಸುತ್ತವೆ. ನೀವು ಲೋಕದ ಜನರಂತೆಯೇ ವರ್ತಿಸುತ್ತಿದ್ದೀರಿ. 4 ನಿಮ್ಮಲ್ಲಿ ಒಬ್ಬನು, “ನಾನು ಪೌಲನನ್ನು ಹಿಂಬಾಲಿಸುತ್ತೇನೆ” ಎನ್ನುತ್ತಾನೆ. ಮತ್ತೊಬ್ಬನು “ನಾನು ಅಪೊಲ್ಲೋಸನನ್ನು ಹಿಂಬಾಲಿಸುತ್ತೇನೆ” ಎನ್ನುತ್ತಾನೆ. ನೀವು ಹೀಗೆ ವಾಗ್ವಾದ ಮಾಡುವಾಗ ಲೋಕದ ಜನರಂತೆಯೇ ವರ್ತಿಸುವವರಾಗಿದ್ದೀರಿ.
5 ಅಪೊಲ್ಲೋಸನು ಮುಖ್ಯವಾದವನೇ? ಇಲ್ಲ! ಪೌಲನು ಮುಖ್ಯವಾದವನೇ? ಇಲ್ಲ! ನೀವು ನಂಬಿಕೊಳ್ಳಲು ಸಹಾಯ ಮಾಡುವ ನಾವು ಕೇವಲ ದೇವರ ಸೇವಕರಾಗಿದ್ದೇವೆ. ದೇವರು ನಮಗೆ ಕೊಟ್ಟ ಕೆಲಸವನ್ನು ನಮ್ಮಲ್ಲಿ ಪ್ರತಿಯೊಬ್ಬರೂ ಮಾಡಿದೆವು. 6 ನಾನು ಬೀಜವನ್ನು ಬಿತ್ತಿದೆನು; ಅಪೊಲ್ಲೋಸನು ನೀರನ್ನು ಹಾಕಿದನು. ಆದರೆ ಬೀಜವನ್ನು ಬೆಳೆಯಿಸಿದವನು ದೇವರೇ. 7 ಆದ್ದರಿಂದ ಬೀಜ ಬಿತ್ತುವವನಾಗಲಿ ನೀರು ಹಾಕುವವನಾಗಲಿ ಮುಖ್ಯನಲ್ಲ. ದೇವರೊಬ್ಬನು ಮಾತ್ರ ಮುಖ್ಯವಾದವನು, ಏಕೆಂದರೆ ಬೀಜಗಳನ್ನು ಬೆಳೆಯಿಸುವವನು ಆತನೊಬ್ಬನೇ. 8 ಬೀಜ ಬಿತ್ತುವವನ ಮತ್ತು ನೀರನ್ನು ಹಾಕುವವನ ಉದ್ದೇಶವು ಒಂದೇ ಆಗಿದೆ. ಮತ್ತು ಪ್ರತಿಯೊಬ್ಬನಿಗೂ ಅವನವನ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುವುದು. 9 ನಾವು ದೇವರ ಜೊತೆಕೆಲಸದವರಾಗಿದ್ದೇವೆ. ನೀವು ದೇವರ ಹೊಲವಾಗಿದ್ದೀರಿ.
ಇದಲ್ಲದೆ ನೀವು ದೇವರ ಕಟ್ಟಡವಾಗಿದ್ದೀರಿ. 10 ದೇವರು ನನಗೆ ಕೊಟ್ಟ ವರದಾನಗಳನ್ನು ಉಪಯೋಗಿಸಿ ಚತುರ ಶಿಲ್ಪಿಯಂತೆ ನಾನು ಆ ಮನೆಗೆ ಅಸ್ತಿವಾರವನ್ನು ಹಾಕಿದೆನು. ಇತರ ಜನರು ಆ ಅಸ್ತಿವಾರದ ಮೇಲೆ ಕಟ್ಟುತ್ತಿದ್ದಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ತಾನು ಹೇಗೆ ಕಟ್ಟುತ್ತಿದ್ದಾನೆ ಎಂಬುದರ ಬಗ್ಗೆ ಎಚ್ಚರದಿಂದಿರಬೇಕು. 11 ಅಸ್ತಿವಾರವನ್ನು ಆಗಲೇ ಹಾಕಲಾಗಿದೆ. ಆ ಅಸ್ತಿವಾರವು ಯೇಸು ಕ್ರಿಸ್ತನೇ. ಆ ಅಸ್ತಿವಾರವನ್ನಲ್ಲದೆ ಬೇರೊಂದು ಅಸ್ತಿವಾರವನ್ನು ಬೇರೆ ಯಾರೂ ಹಾಕಲಾರರು. 12 ಒಬ್ಬ ವ್ಯಕ್ತಿಯು ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನ, ಮರ, ಹುಲ್ಲು ಮತ್ತು ಜೊಂಡುಗಳಿಂದ ಕಟ್ಟಬಹುದು. 13 ಆದರೆ ಪ್ರತಿಯೊಬ್ಬನ ಕೆಲಸವು ಸ್ಪಷ್ಟವಾಗಿ ಕಾಣುವುದು; ಏಕೆಂದರೆ, ಕ್ರಿಸ್ತನು ಬರುವ ದಿನವು ಅದನ್ನು ಸ್ಪಷ್ಟಪಡಿಸುವುದು. ಆ ದಿನವು ಬೆಂಕಿಯೊಂದಿಗೆ ಉದಯಿಸುವುದು. ಆ ಬೆಂಕಿಯು ಪ್ರತಿಯೊಬ್ಬ ವ್ಯಕ್ತಿಯ ಕೆಲಸವನ್ನು ಪರೀಕ್ಷಿಸುವುದು. 14 ಅಸ್ತಿವಾರದ ಮೇಲೆ ಕಟ್ಟಿದ ಕಟ್ಟಡವು ಸ್ಥಿರವಾಗಿದ್ದರೆ, ಕಟ್ಟಿದವನು ಪ್ರತಿಫಲವನ್ನು ಹೊಂದಿಕೊಳ್ಳುವನು. 15 ಆದರೆ ಕಟ್ಟಡವು ಸುಟ್ಟುಹೋದರೆ, ಕಟ್ಟಿದವನಿಗೆ ನಷ್ಟವಾಗುವುದು. ಅವನು ರಕ್ಷಣೆ ಹೊಂದುವನು, ಆದರೆ ಅವನು ಬೆಂಕಿಯಿಂದ ತಪ್ಪಿಸಿಕೊಂಡವನಂತಿರುವನು.
16 ನೀವೇ ದೇವರ ಆಲಯವಾಗಿದ್ದೀರಿ. ಇದು ನಿಮಗೆ ಚೆನ್ನಾಗಿ ತಿಳಿದಿದೆ. ದೇವರಾತ್ಮನು ನಿಮ್ಮೊಳಗೆ ವಾಸವಾಗಿದ್ದಾನೆ. 17 ಯಾವನಾದರೂ ದೇವರ ಆಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುವನು. ಏಕೆಂದರೆ ದೇವರ ಆಲಯವು ಪರಿಶುದ್ಧವಾದದ್ದು. ನೀವೇ ದೇವರ ಆಲಯವಾಗಿದ್ದೀರಿ.
18 ನಿಮಗೆ ನೀವೇ ಮೋಸಮಾಡಿಕೊಳ್ಳಬೇಡಿ. ನಿಮ್ಮಲ್ಲಿರುವ ಯಾವನಾದರೂ ತಾನು ಈ ಲೋಕದಲ್ಲಿ ಜ್ಞಾನಿಯೆಂದು ಆಲೋಚಿಸಿಕೊಂಡರೆ ಅವನು ಮೂಢನಾಗಲೇಬೇಕು. ಆಗ ಆ ವ್ಯಕ್ತಿಯು ನಿಜವಾಗಿಯೂ ಜ್ಞಾನಿಯಾಗಬಲ್ಲನು. 19 ಏಕೆಂದರೆ ಈ ಲೋಕದ ಜ್ಞಾನವು ದೇವರಿಗೆ ಮೂರ್ಖತನವಾಗಿದೆ. “ದೇವರು ಜಾಣರನ್ನು ಅವರ ಕುತಂತ್ರದ ಮಾರ್ಗಗಳಲ್ಲೇ ಹಿಡಿದುಕೊಳ್ಳುವನು”(A) ಎಂದು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ. 20 “ಪ್ರಭುವು ಜ್ಞಾನಿಗಳ ಆಲೋಚನೆಗಳನ್ನು ತಿಳಿದಿದ್ದಾನೆ. ಅವರ ಆಲೋಚನೆಗಳು ನಿಷ್ಪ್ರಯೋಜಕವೆಂದು ಆತನಿಗೆ ಗೊತ್ತಿದೆ”(B) ಎಂದು ಸಹ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. 21 ಆದ್ದರಿಂದ ನೀವು ಜನರ ಬಗ್ಗೆ ಹೆಚ್ಚಳಪಡಬಾರದು. ಸಮಸ್ತವೂ ನಿಮ್ಮದೇ. 22 ಪೌಲ, ಅಪೊಲ್ಲೋಸ್ ಮತ್ತು ಕೇಫ ನಿಮ್ಮವರಾಗಿದ್ದಾರೆ. ಜಗತ್ತು, ಜೀವ, ಮರಣ ಮತ್ತು ವರ್ತಮಾನ ಹಾಗೂ ಭವಿಷ್ಯತ್ ಕಾಲಗಳ ಸಂಗತಿಗಳು ನಿಮ್ಮವೇ. 23 ನೀವು ಕ್ರಿಸ್ತನಿಗೆ ಸೇರಿದವರಾಗಿದ್ದೀರಿ. ಕ್ರಿಸ್ತನು ದೇವರಿಗೆ ಸೇರಿದವನಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International