Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 46

ದೇವರು ಇಸ್ರೇಲನಿಗೆ ಕೊಟ್ಟ ಭರವಸೆ

46 ಆದ್ದರಿಂದ ಇಸ್ರೇಲನು ಈಜಿಪ್ಟಿಗೆ ಪ್ರಯಾಣ ಬೆಳೆಸಿದನು. ಅವನು ಬೇರ್ಷೆಬಕ್ಕೆ ಹೋಗಿ ತನ್ನ ತಂದೆಯಾದ ಇಸಾಕನ ದೇವರನ್ನು ಆರಾಧಿಸಿ ಯಜ್ಞಗಳನ್ನು ಅರ್ಪಿಸಿದನು. ಆ ರಾತ್ರಿ ದೇವರು ಕನಸಿನಲ್ಲಿ ಅವನೊಂದಿಗೆ ಮಾತನಾಡಿದನು. ದೇವರು ಅವನನ್ನು, “ಯಾಕೋಬನೇ, ಯಾಕೋಬನೇ” ಎಂದು ಕರೆದನು.

ಅದಕ್ಕೆ ಇಸ್ರೇಲನು, “ಇಗೋ, ಇದ್ದೇನೆ” ಎಂದು ಉತ್ತರಕೊಟ್ಟನು.

ದೇವರು ಅವನಿಗೆ, “ನಾನೇ ದೇವರು, ನಾನೇ ನಿನ್ನ ತಂದೆಯ ದೇವರು. ನೀನು ಈಜಿಪ್ಟಿಗೆ ಹೋಗಲು ಹೆದರಬೇಡ. ಈಜಿಪ್ಟಿನಲ್ಲಿ ನಿನ್ನನ್ನು ದೊಡ್ಡ ಜನಾಂಗವನ್ನಾಗಿ ಮಾಡುವೆ. ನಾನು ನಿನ್ನೊಂದಿಗೆ ಈಜಿಪ್ಟಿಗೆ ಬರುವೆನು. ಬಳಿಕ ನಾನೇ ನಿನ್ನನ್ನು ಮತ್ತೆ ಈಜಿಪ್ಟಿನಿಂದ ಕರೆದುಕೊಂಡು ಬರುವೆನು. ನೀನು ಈಜಿಪ್ಟಿನಲ್ಲಿ ಮರಣ ಹೊಂದಿದರೂ ಯೋಸೇಫನು ನಿನ್ನ ಸಂಗಡವಿರುವನು. ನೀನು ಸತ್ತಾಗ ಅವನು ತನ್ನ ಕೈಗಳಿಂದ ನಿನ್ನ ಕಣ್ಣುಗಳನ್ನು ಮುಚ್ಚುವನು” ಎಂದು ಹೇಳಿದನು.

ಈಜಿಪ್ಟಿಗೆ ಇಸ್ರೇಲನ ಪ್ರಯಾಣ

ಆಮೇಲೆ ಯಾಕೋಬನು ಬೇರ್ಷೆಬವನ್ನು ಬಿಟ್ಟು ಈಜಿಪ್ಟಿಗೆ ಪ್ರಯಾಣ ಮಾಡಿದನು. ಇಸ್ರೇಲನ ಗಂಡುಮಕ್ಕಳು ತಮ್ಮ ತಂದೆಯನ್ನೂ ತಮ್ಮ ಹೆಂಡತಿಯರನ್ನೂ ತಮ್ಮ ಎಲ್ಲಾ ಮಕ್ಕಳನ್ನೂ ಕರೆದುಕೊಂಡು ಹೋದರು. ಫರೋಹನು ಕಳುಹಿಸಿದ್ದ ರಥಗಳಲ್ಲಿ ಅವರು ಪ್ರಯಾಣ ಮಾಡಿದರು. ಇದಲ್ಲದೆ ಅವರು ತಮ್ಮ ದನಕರುಗಳನ್ನೂ ಕಾನಾನ್ ದೇಶದಲ್ಲಿ ತಾವು ಹೊಂದಿದ್ದ ಪ್ರತಿಯೊಂದನ್ನೂ ತೆಗೆದುಕೊಂಡು ಹೋದರು. ಹೀಗೆ ಇಸ್ರೇಲನು ತನ್ನ ಎಲ್ಲಾ ಮಕ್ಕಳೊಂದಿಗೆ ಮತ್ತು ತನ್ನ ಕುಟುಂಬದೊಂದಿಗೆ ಈಜಿಪ್ಟಿಗೆ ಹೋದನು. ಅವನ ಜೊತೆಯಲ್ಲಿ ಅವನ ಗಂಡುಮಕ್ಕಳು, ಹೆಣ್ಣುಮಕ್ಕಳು ಮತ್ತು ಮೊಮ್ಮಕ್ಕಳು ಇದ್ದರು. ಅವನ ಸಂಸಾರದವರೆಲ್ಲ ಅವನ ಜೊತೆ ಈಜಿಪ್ಟಿಗೆ ಹೋದರು.

ಯಾಕೋಬನ ಕುಟುಂಬ

ಇಸ್ರೇಲನ ಸಂಗಡ ಈಜಿಪ್ಟಿಗೆ ಹೋದ ಅವನ ಮಕ್ಕಳ ಮತ್ತು ಕುಟುಂಬದವರ ಹೆಸರುಗಳು ಇಂತಿವೆ:

ಯಾಕೋಬನ ಮೊದಲನೆಯ ಮಗ ರೂಬೇನನು. ರೂಬೇನನ ಮಕ್ಕಳು: ಹನೋಕ್, ಫಲ್ಲೂ, ಹೆಚ್ರೋನ್ ಮತ್ತು ಕರ್ಮೀ.

10 ಸಿಮೆಯೋನನ ಮಕ್ಕಳು: ಯೆಮೂವೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯ ಸ್ತ್ರೀಯಲ್ಲಿ ಹುಟ್ಟಿದ ಸೌಲ.

11 ಲೇವಿಯ ಮಕ್ಕಳು: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ.

12 ಯೆಹೂದನ ಮಕ್ಕಳು: ಏರ್, ಓನಾನ್, ಶೇಲಾಹ, ಪೆರೆಚ್ ಮತ್ತು ಜೆರಹ. (ಏರ್ ಮತ್ತು ಓನಾನ್ ಕಾನಾನಿನಲ್ಲಿ ಇರುವಾಗಲೇ ಸತ್ತುಹೋದರು.) ಪೆರೆಚನ ಮಕ್ಕಳು: ಹೆಚ್ರೋನ್ ಮತ್ತು ಹಾಮೂಲ್.

13 ಇಸ್ಸಾಕಾರನ ಮಕ್ಕಳು: ತೋಲಾ, ಪುವ್ವಾ, ಯೋಬ್ ಮತ್ತು ಶಿಮ್ರೋನ್.

14 ಜೆಬೂಲೂನನ ಮಕ್ಕಳು: ಸೆರೆದ್, ಏಲೋನ್, ಯಹ್ಲೇಲ್.

15 ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್ ಮತ್ತು ಜೆಬುಲೂನ್. ಇವರು ಯಾಕೋಬನ ಹೆಂಡತಿಯಾದ ಲೇಯಳ ಮಕ್ಕಳು. ಲೇಯಳು ಆ ಮಕ್ಕಳಿಗೆ ಪದ್ದನ್‌ಅರಾಮಿನಲ್ಲಿ ಜನ್ಮಕೊಟ್ಟಳು. ಅಲ್ಲಿ ಅವಳ ಮಗಳಾದ ದೀನ ಸಹ ಜನಿಸಿದಳು. ಈ ಕುಟುಂಬದಲ್ಲಿ ಮೂವತ್ಮೂರು ಮಂದಿ ಇದ್ದರು.

16 ಗಾದನ ಮಕ್ಕಳು: ಚಿಪ್ಯೋನ್, ಹಗ್ಗೀ, ಶೂನೀ, ಎಚ್ಬೋನ್, ಏರೀ, ಅರೋದೀ ಮತ್ತು ಅರೇಲೀ.

17 ಆಶೇರನ ಮಕ್ಕಳು: ಇಮ್ನಾ, ಇಷ್ವಾ, ಇಷ್ವೀ, ಬೆರೀಗಾ ಮತ್ತು ಇವರ ತಂಗಿಯಾದ ಸೆರಹ. ಬೆರೀಗನ ಗಂಡುಮಕ್ಕಳು: ಹೆಬೆರ್ ಮತ್ತು ಮಲ್ಕೀಯೇಲ್.

18 ಲಾಬಾನನು ತನ್ನ ಮಗಳಾದ ಲೇಯಳಿಗೆ ಜಿಲ್ಪ ಎಂಬ ದಾಸಿಯನ್ನು ಕೊಟ್ಟಿದ್ದನು. ಲೇಯಾಳು ಜಿಲ್ಪಳನ್ನು ಯಾಕೋಬನಿಗೆ ಕೊಟ್ಟಿದ್ದಳು. ಜಿಲ್ಪಳ ಕುಟುಂಬದಲ್ಲಿ ಒಟ್ಟು ಹದಿನಾರು ಮಂದಿಯಿದ್ದರು.

19 ಬೆನ್ಯಾಮೀನನು ಸಹ ಯಾಕೋಬನೊಂದಿಗಿದ್ದನು. ಬೆನ್ಯಾಮೀನನು ಯಾಕೋಬ ಮತ್ತು ರಾಹೇಲಳ ಮಗನು. (ಯೋಸೇಫನು ಸಹ ರಾಹೇಲಳ ಮಗ. ಆದರೆ ಯೋಸೇಫನು ಈಗಾಗಲೇ ಈಜಿಪ್ಟಿನಲ್ಲಿದ್ದನು.)

20 ಈಜಿಪ್ಟಿನಲ್ಲಿ ಯೋಸೇಫನಿಗೆ ಇಬ್ಬರು ಗಂಡುಮಕ್ಕಳಿದ್ದರು. ಅವರು ಯಾರೆಂದರೆ: ಮನಸ್ಸೆ ಮತ್ತು ಎಫ್ರಾಯೀಮ್. (ಯೋಸೇಫನ ಹೆಂಡತಿ “ಆಸನತ್” ಈಕೆ ಓನ್ ಪಟ್ಟಣದ ಆಚಾರ್ಯನಾಗಿದ್ದ ಫೋಟೀಫರನ ಮಗಳು.)

21 ಬೆನ್ಯಾಮೀನನ ಗಂಡುಮಕ್ಕಳು: ಬಿಳಾ, ಬೆಕೆರ್, ಅಶ್ಬೇಲ್, ಗೇರಾ, ನಾಮಾನ್, ಎಹೀರೋಷ್, ಮುಪ್ಪೀಮ್, ಹುಪ್ಪೀಮ್ ಮತ್ತು ಆರ್ದ್.

22 ಇವರೆಲ್ಲರು ಯಾಕೋಬನ ಹೆಂಡತಿಯಾದ ರಾಹೇಲಳ ಕುಟುಂಬದವರು. ಈ ಕುಟುಂಬದಲ್ಲಿ ಒಟ್ಟು ಹದಿನಾಲ್ಕು ಮಂದಿಯಿದ್ದರು.

23 ದಾನನ ಗಂಡುಮಕ್ಕಳು: ಹುಶೀಮ್.

24 ನಫ್ತಾಲಿಯನ ಗಂಡುಮಕ್ಕಳು: ಯಹೇಲ್, ಗೂನೀ, ಯೇಚೆರ್ ಮತ್ತು ಶಿಲ್ಲೇಮ್.

25 ಇವರೆಲ್ಲರು ಬಿಲ್ಹಳ ಕುಟುಂಬದವರು. (ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟ ದಾಸಿಯೇ ಬಿಲ್ಹ. ರಾಹೇಲಳು ಈ ದಾಸಿಯನ್ನು ಯಾಕೋಬನಿಗೆ ಕೊಟ್ಟಿದ್ದಳು.) ಈ ಕುಟುಂಬದಲ್ಲಿ ಒಟ್ಟು ಏಳು ಮಂದಿಯಿದ್ದರು.

26 ಯಾಕೋಬನಿಂದಲೇ ಹುಟ್ಟಿದ ಅರವತ್ತಾರು ಮಂದಿ ಈಜಿಪ್ಟಿಗೆ ಹೋದರು. (ಯಾಕೋಬನ ಸೊಸೆಯರನ್ನು ಇಲ್ಲಿ ಸೇರಿಸಿಲ್ಲ.) 27 ಅಲ್ಲಿ ಯೋಸೇಫನ ಇಬ್ಬರು ಗಂಡುಮಕ್ಕಳು ಸಹ ಇದ್ದರು. ಅವರು ಈಜಿಪ್ಟಿನಲ್ಲಿ ಹುಟ್ಟಿದವರು. ಆದ್ದರಿಂದ ಈಜಿಪ್ಟಿಗೆ ಬಂದ ಯಾಕೋಬನ ಕುಟುಂಬದವರು ಒಟ್ಟು ಎಪ್ಪತ್ತು ಮಂದಿ.

ಈಜಿಪ್ಟಿಗೆ ಇಸ್ರೇಲನ ಆಗಮನ

28 ಯಾಕೋಬನು ಮೊದಲು ಯೆಹೂದನನ್ನು ಯೋಸೇಫನ ಬಳಿಗೆ ಕಳುಹಿಸಿದನು. ಗೋಷೆನ್ ಪ್ರಾಂತ್ಯದಲ್ಲಿ ಯೆಹೂದನು ಯೋಸೇಫನ ಬಳಿಗೆ ಹೋದನು. ಆಮೇಲೆ ಯಾಕೋಬ ಮತ್ತು ಅವನ ಮಕ್ಕಳು ಆ ಪ್ರಾಂತ್ಯಕ್ಕೆ ಬಂದರು. 29 ತನ್ನ ತಂದೆಯು ಸಮೀಪಿಸುತ್ತಿರುವುದು ಯೋಸೇಫನಿಗೆ ತಿಳಿಯಿತು. ಆದ್ದರಿಂದ ಅವನು ತನ್ನ ತಂದೆಯಾದ ಇಸ್ರೇಲನನ್ನು ಗೋಷೆನಿನಲ್ಲಿ ಭೇಟಿಯಾಗಲು ತನ್ನ ರಥವನ್ನು ಸಿದ್ಧಪಡಿಸಿಕೊಂಡು ಹೋದನು. ಯೋಸೇಫನು ತನ್ನ ತಂದೆಯನ್ನು ಕಂಡಾಗ ಅವನನ್ನು ಅಪ್ಪಿಕೊಂಡು ಬಹಳ ಹೊತ್ತಿನ ತನಕ ಅತ್ತನು.

30 ಆಗ ಇಸ್ರೇಲನು ಯೋಸೇಫನಿಗೆ, “ನಾನು ನಿನ್ನ ಮುಖವನ್ನು ಕಣ್ಣಾರೆ ಕಂಡದ್ದರಿಂದ ನೀನು ಬದುಕಿರುವುದು ನನಗೆ ನಿಶ್ಚಯವಾಯಿತು. ನಾನು ಈಗ ಸಮಾಧಾನದಿಂದ ಸಾಯವೆನು” ಎಂದು ಹೇಳಿದನು.

31 ಯೋಸೇಫನು ತನ್ನ ಸಹೋದರರಿಗೂ ತನ್ನ ತಂದೆಯ ಕುಟುಂಬದವರಿಗೂ, “ನಾನು ಫರೋಹನ ಬಳಿಗೆ ಹೋಗಿ, ‘ನನ್ನ ಸಹೋದರರು ಮತ್ತು ನನ್ನ ತಂದೆಯ ಕುಟುಂಬದವರು ಕಾನಾನ್ ದೇಶವನ್ನು ಬಿಟ್ಟು ನನ್ನ ಬಳಿಗೆ ಬಂದಿದ್ದಾರೆ. 32 ಈ ಕುಟುಂಬವು ಕುರುಬರ ಕುಟುಂಬ. ಇವರು ಯಾವಾಗಲೂ ದನಕರುಗಳ ಮತ್ತು ಆಡುಕುರಿಗಳ ಮಂದೆಗಳನ್ನು ಸಾಕುವವರು. ಇವರು ತಮ್ಮ ಎಲ್ಲಾ ಪಶುಗಳನ್ನು ಮತ್ತು ತಾವು ಹೊಂದಿರುವ ಪ್ರತಿಯೊಂದನ್ನು ತಮ್ಮೊಂದಿಗೆ ತಂದಿದ್ದಾರೆ’ ಎಂದು ತಿಳಿಸುತ್ತೇನೆ. 33 ಫರೋಹನು ನಿಮ್ಮನ್ನು ಕರೆಯಿಸಿ, ‘ನಿಮ್ಮ ಉದ್ಯೋಗವೇನು?’ ಎಂದು ಕೇಳುತ್ತಾನೆ. 34 ನೀವು ಅವನಿಗೆ, ‘ನಾವು ಕುರುಬರು. ನಮ್ಮ ಜೀವಮಾನವೆಲ್ಲಾ ನಾವು ಪಶುಗಳನ್ನು ಸಾಕುವುದರ ಮೂಲಕ ಜೀವನ ಮಾಡಿದೆವು. ನಮಗಿಂತ ಮೊದಲು ನಮ್ಮ ಪೂರ್ವಿಕರು ಸಹ ಇದೇ ರೀತಿ ಜೀವಿಸಿದರು’ ಎಂದು ಹೇಳಿರಿ. ಆಗ ಅವನು ಗೋಷೆನ್ ಪ್ರಾಂತ್ಯದಲ್ಲಿ ವಾಸಿಸಲು ನಿಮಗೆ ಅವಕಾಶ ಮಾಡಿಕೊಡುತ್ತಾನೆ. ಈಜಿಪ್ಟಿನ ಜನರು ಕುರುಬರನ್ನು ಇಷ್ಟಪಡುವುದಿಲ್ಲ. ಆದ್ದರಿಂದ ನೀವು ಗೋಷೆನಿನಲ್ಲಿ ವಾಸಿಸುವುದು ಒಳ್ಳೆಯದು” ಎಂದು ಹೇಳಿದನು.

ಮಾರ್ಕ 16

ಯೇಸುವಿನ ಪುನರುತ್ಥಾನ

(ಮತ್ತಾಯ 28:1-8; ಲೂಕ 24:1-12; ಯೋಹಾನ 20:1-10)

16 ಸಬ್ಬತ್ ದಿನದ ಮರುದಿನ, ಮಗ್ದಲದ ಮರಿಯಳು, ಸಲೋಮೆ ಮತ್ತು ಯಾಕೋಬನ ತಾಯಿಯಾದ ಮರಿಯಳು ಕೆಲವು ಸುಗಂಧದ್ರವ್ಯಗಳನ್ನು ಯೇಸುವಿನ ದೇಹಕ್ಕೆ ಹಚ್ಚಬೇಕೆಂದಿದ್ದರು. ವಾರದ ಮೊದಲನೆಯ ದಿನ, ಮುಂಜಾನೆಯಲ್ಲಿಯೇ, ಅವರು ಸಮಾಧಿಗೆ ಹೊರಟರು. ಆಗ ಸೂರ್ಯೋದಯವಾಗಿದ್ದರೂ ಇನ್ನೂ ನಸುಕಾಗಿತ್ತು. ಆ ಸ್ತ್ರೀಯರು ಒಬ್ಬರಿಗೊಬ್ಬರು, “ದೊಡ್ಡ ಬಂಡೆಯಿಂದ ಸಮಾಧಿಯ ಬಾಗಿಲನ್ನು ಮುಚ್ಚಲಾಗಿದೆ. ಈ ಬಂಡೆಯನ್ನು ನಮಗಾಗಿ ಯಾರು ಉರುಳಿಸುತ್ತಾರೆ?” ಎಂದುಕೊಂಡರು.

ಆ ಸ್ತ್ರೀಯರು ಸಮಾಧಿಯನ್ನು ತಲುಪಿದಾಗ ಆ ಬಂಡೆ ಉರುಳಿರುವುದನ್ನು ಕಂಡರು. ಆ ಬಂಡೆಯು ಬಹಳ ದೊಡ್ಡದಾಗಿತ್ತು ಆದರೆ ಅದನ್ನು ಬಾಗಿಲಿನಿಂದ ದೂರಕ್ಕೆ ಉರುಳಿಸಲಾಗಿತ್ತು. ಆ ಸ್ತ್ರೀಯರು ಸಮಾಧಿಯೊಳಗೆ ಹೋದಾಗ ಬಿಳುಪಾದ ನಿಲುವಂಗಿ ಧರಿಸಿದ್ದ ಒಬ್ಬ ಯುವಕನು ಸಮಾಧಿಯ ಬಲಗಡೆ ಕುಳಿತಿರುವುದನ್ನು ಕಂಡು ಭಯಗೊಂಡರು.

ಆದರೆ ಅವನು, “ಭಯಪಡಬೇಡಿ! ಶಿಲುಬೆಗೇರಿಸಲ್ಪಟ್ಟ ನಜರೇತಿನ ಯೇಸುವನ್ನು ನೀವು ಹುಡುಕುತ್ತಿದ್ದೀರಲ್ಲವೇ? ಆತನು ಜೀವಂತನಾಗಿ ಎದ್ದಿದ್ದಾನೆ. ಆತನು ಇಲ್ಲಿಲ್ಲ. ನೋಡಿರಿ, ಆತನ ದೇಹವನ್ನು ಇಟ್ಟಿದ್ದ ಸ್ಥಳ ಇದೇ. ಈಗ ಹೋಗಿ ಆತನ ಶಿಷ್ಯರಿಗೆ ತಿಳಿಸಿರಿ. ಪೇತ್ರನಿಗಂತೂ ಖಂಡಿತವಾಗಿ ತಿಳಿಸಿರಿ. ನೀವು ಅವರಿಗೆ, ‘ಯೇಸು ಗಲಿಲಾಯಕ್ಕೆ ಹೋಗುತ್ತಿದ್ದಾನೆ. ಆತನು ನಿಮಗಿಂತ ಮುಂಚೆ ಅಲ್ಲಿರುತ್ತಾನೆ. ಆತನು ನಿಮಗೆ ಮೊದಲೇ ಹೇಳಿದಂತೆ ನೀವು ಆತನನ್ನು ಅಲ್ಲಿ ನೋಡುವಿರಿ’ ಎಂದು ಹೇಳಿರಿ” ಎಂದನು.

ಆ ಸ್ತ್ರೀಯರು ಬಹಳ ಭಯದಿಂದ ಗಲಿಬಿಲಿಗೊಂಡು, ಸಮಾಧಿಯನ್ನು ಬಿಟ್ಟು ಓಡಿಹೋದರು. ಅವರು ಬಹಳ ಭಯಗೊಂಡಿದ್ದರಿಂದ ಈ ವಿಷಯವನ್ನು ಯಾರಿಗೂ ಹೇಳಲಿಲ್ಲ.[a]

ಶಿಷ್ಯರಿಗೆ ಯೇಸುವಿನ ದರ್ಶನ

(ಮತ್ತಾಯ 28:9-10; ಯೋಹಾನ 20:11-18; ಲೂಕ 24:13-35)

ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಜೀವಂತನಾಗಿ ಎದ್ದನು. ಯೇಸು ಮೊಟ್ಟಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು. ಹಿಂದೊಮ್ಮೆ ಯೇಸು ಮರಿಯಳಿಂದ ಏಳು ದೆವ್ವಗಳನ್ನು ಬಿಡಿಸಿದ್ದನು. 10 ಮರಿಯಳು ಹೋಗಿ ಆತನ ಶಿಷ್ಯರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಿದ್ದರು. 11 ಯೇಸು ಬದುಕಿರುವುದಾಗಿಯೂ ತಾನು ಆತನನ್ನು ನೋಡಿದ್ದಾಗಿಯೂ ಮರಿಯಳು ತಿಳಿಸಿದಾಗ ಶಿಷ್ಯರು ಅವಳನ್ನು ನಂಬಲಿಲ್ಲ.

12 ನಂತರ, ಇಬ್ಬರು ಶಿಷ್ಯರು ಹಳ್ಳಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಯೇಸು ಅವರಿಗೆ ಬೇರೊಂದು ರೂಪದಲ್ಲಿ ಕಾಣಿಸಿಕೊಂಡನು. 13 ಈ ಶಿಷ್ಯರು ಇತರ ಶಿಷ್ಯರ ಬಳಿಗೆ ಹಿಂತಿರುಗಿ, ಈ ವಿಷಯವನ್ನು ತಿಳಿಸಿದರು. ಆದರೆ ಆ ಶಿಷ್ಯರು ಅವರನ್ನು ನಂಬಲಿಲ್ಲ.

ಯೇಸು ಮತ್ತು ಅಪೊಸ್ತಲರ ಸಂಭಾಷಣೆ

(ಮತ್ತಾಯ 28:16-20; ಲೂಕ 24:36-49; ಯೋಹಾನ 20:19-23; ಅ.ಕಾ. 1:6-8)

14 ನಂತರ ಹನ್ನೊಂದು ಜನ ಶಿಷ್ಯರು ಊಟ ಮಾಡುತ್ತಿರುವಾಗ, ಯೇಸು ಅವರಿಗೆ ಕಾಣಿಸಿಕೊಂಡನು. ಶಿಷ್ಯರಲ್ಲಿ ಕೊಂಚ ನಂಬಿಕೆ ಇದ್ದುದರಿಂದ ಯೇಸು ಅವರನ್ನು ಖಂಡಿಸಿದನು. ಏಕೆಂದರೆ, ಯೇಸು ಸಾವಿನಿಂದ ಎದ್ದುಬಂದಿದ್ದಾನೆಂದು ದೃಢವಾಗಿ ಹೇಳಿದ ಮಾತನ್ನು ಅವರು ನಂಬಲಿಲ್ಲ.

15 ಯೇಸು ಶಿಷ್ಯರಿಗೆ, “ಪ್ರಪಂಚದ ಎಲ್ಲಾ ಕಡೆಗೆ ಹೋಗಿರಿ. ಪ್ರತಿಯೊಬ್ಬನಿಗೂ ಸುವಾರ್ತೆಯನ್ನು ಹೇಳಿರಿ. 16 ನಂಬಿಕೆಯಿಟ್ಟು, ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು. ಆದರೆ ನಂಬದವನು ಅಪರಾಧಿ ಎಂಬ ನಿರ್ಣಯ ಹೊಂದುವನು. 17 ನಂಬುವವರಾದರೋ ಅದ್ಭುತಕಾರ್ಯಗಳನ್ನು ಮಾಡುವರು. ಅವರು ನನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸುವರು. ತಾವೆಂದೂ ಕಲಿತಿಲ್ಲದ ಭಾಷೆಗಳಲ್ಲಿ ಮಾತನಾಡುವರು. 18 ಅವರು ಹಾವುಗಳನ್ನು ಹಿಡಿದುಕೊಂಡರೂ ಅವು ಅವರನ್ನು ಕಚ್ಚುವುದಿಲ್ಲ. ವಿಷಕುಡಿದರೂ ಅವರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಅವರು ಮುಟ್ಟಿದರೆ ರೋಗಿಗಳು ಗುಣಹೊಂದುವರು” ಎಂದು ಹೇಳಿದನು.

ಯೇಸುವಿನ ಪರಲೋಕಾರೋಹಣ

(ಲೂಕ 24:50-53; ಅ.ಕಾ. 1:9-11)

19 ಪ್ರಭುವಾದ ಯೇಸು ಈ ಸಂಗತಿಗಳನ್ನು ಶಿಷ್ಯರಿಗೆ ಹೇಳಿದ ಮೇಲೆ, ಸ್ವರ್ಗದೊಳಗೆ ಒಯ್ಯಲ್ಪಟ್ಟು ದೇವರ ಬಲಗಡೆಯಲ್ಲಿ ಕುಳಿತುಕೊಂಡನು. 20 ಶಿಷ್ಯರು ಪ್ರಪಂಚದ ಎಲ್ಲಾ ಕಡೆಗೆ ಹೋಗಿ, ಜನರಿಗೆ ಸುವಾರ್ತೆಯನ್ನು ಸಾರಿದರು. ಪ್ರಭುವು ಅವರೊಂದಿಗೆ ಕಾರ್ಯಸಾಧಿಸುತ್ತಾ, ಸೂಚಕಕಾರ್ಯಗಳಿಂದ ಸುವಾರ್ತೆಯ ವಾಕ್ಯವನ್ನು ಬಲಪಡಿಸಿದನು.

ಯೋಬನು 12

ಯೋಬನ ವಾದ

12 ಆಮೇಲೆ ಯೋಬನು ಚೋಫರನಿಗೆ ಹೀಗೆ ಉತ್ತರಿಸಿದನು:

“ನೀವು ನಿಮ್ಮನ್ನೇ ಜ್ಞಾನಿಗಳೆಂದು ಆಲೋಚಿಸಿಕೊಂಡಿದ್ದೀರಿ.
    ನೀವು ಸಾಯುವಾಗ ಜ್ಞಾನವು ನಿಮ್ಮೊಡನೆಯೇ ಸಾಯುವುದು.
ಆದರೆ ನನ್ನ ಮನಸ್ಸು ನಿಮ್ಮ ಮನಸ್ಸಿನಂತೆಯೇ ಒಳ್ಳೆಯದಾಗಿದೆ.
    ನಾನು ನಿಮ್ಮಂತೆಯೇ ಬುದ್ಧಿವಂತನಾಗಿರುವೆ.
ಇದು ಸತ್ಯವೆಂದು
    ಯಾರು ಬೇಕಾದರೂ ತಿಳಿದುಕೊಳ್ಳಬಲ್ಲರು.

“ಈಗ ನನ್ನ ಸ್ನೇಹಿತರು ನನ್ನನ್ನು ನೋಡಿ ನಗುವರು.
    ಹೌದು, ನಾನು ದೇವರಿಗೆ ಪ್ರಾರ್ಥಿಸುವೆನು; ಆತನು ನನಗೆ ಉತ್ತರಿಸುವನು.
ನಾನು ನೀತಿವಂತನಾಗಿದ್ದರೂ ನಿರ್ದೋಷಿಯಾಗಿದ್ದರೂ
    ಪರಿಹಾಸ್ಯಕ್ಕೆ ಗುರಿಯಾಗಿದ್ದೇನೆ.
ಆಪತ್ತಿಗೆ ಗುರಿಯಾಗಿಲ್ಲದವರು ಆಪತ್ತಿನಿಂದ ಕಷ್ಟಪಡುತ್ತಿರುವ ಜನರನ್ನು ಗೇಲಿ ಮಾಡುವರು;
    ಜಾರಿಬಿದ್ದವನಿಗೆ ಹೊಡೆಯುವರು.
ಕಳ್ಳರ ಗುಡಾರಗಳಿಗೆ ತೊಂದರೆಯಿಲ್ಲ;
    ತಮ್ಮ ದೇವರುಗಳನ್ನು ಕೈಗಳಲ್ಲಿ ಎತ್ತಿಕೊಂಡು ಹೋಗುತ್ತಾ
    ದೇವರನ್ನು ರೇಗಿಸುವವರು ಸಮಾಧಾನದಿಂದಿದ್ದಾರೆ.

“ಆದರೆ ಪ್ರಾಣಿಗಳನ್ನು ಕೇಳು, ಅವು ನಿನಗೆ ಉಪದೇಶಿಸುತ್ತವೆ.
    ಆಕಾಶದ ಪಕ್ಷಿಗಳನ್ನು ಕೇಳು, ಅವು ನಿನಗೆ ತಿಳಿಸುತ್ತವೆ.
ಭೂಮಿಯೊಂದಿಗೆ ಮಾತಾಡು, ಅದು ನಿನಗೆ ಉಪದೇಶಿಸುತ್ತದೆ.
    ಸಮುದ್ರದ ಮೀನುಗಳು ತಮ್ಮ ಜ್ಞಾನವನ್ನು ನಿನಗೆ ತಿಳಿಸಲಿ.
ಇದನ್ನು ಮಾಡಿದಾತನು ಯೆಹೋವನೇ ಎಂಬುದು
    ಈ ಸೃಷ್ಟಿಗಳಲ್ಲಿ ಪ್ರತಿಯೊಂದಕ್ಕೂ ಗೊತ್ತು.
10 ಪ್ರತಿಯೊಂದು ಪ್ರಾಣಿಯ ಜೀವವೂ ಪ್ರತಿಯೊಬ್ಬ ವ್ಯಕ್ತಿಯ ಆತ್ಮವೂ
    ದೇವರ ಕೈಯಲ್ಲಿವೆ.
11 ಆದರೆ ನಾಲಿಗೆಯು ಊಟದ ರುಚಿಯನ್ನು ಆನಂದಿಸುವಂತೆ
    ಕಿವಿಗಳು ಮಾತುಗಳನ್ನು ವಿವೇಚಿಸುವುದಿಲ್ಲವೇ?
12 ‘ಜ್ಞಾನವು ವೃದ್ಧರಲ್ಲಿಲ್ಲವೇ?
    ದೀರ್ಘಾಯುಷ್ಯವು ತಿಳಿವಳಿಕೆಯನ್ನು ಉಂಟುಮಾಡುವುದಿಲ್ಲವೇ?’
13 ಜ್ಞಾನವೂ ಶಕ್ತಿಯೂ ಆತನವೇ.
    ಆಲೋಚನೆಯೂ ವಿವೇಕವೂ ಆತನವೇ.
14 ದೇವರು ಕೆಡವಿದ್ದನ್ನು ಮತ್ತೆ ಕಟ್ಟುವುದಕ್ಕಾಗಲಿ
    ಸೆರೆಗೆ ಹಾಕಿದವನನ್ನು ಬಿಡಿಸುವುದಕ್ಕಾಗಲಿ ಯಾರಿಗೂ ಸಾಧ್ಯವಿಲ್ಲ.
15 ಆತನು ಮಳೆಯನ್ನು ತಡೆಹಿಡಿದರೆ ಭೂಮಿಗೆ ಬರಗಾಲವಾಗುವುದು.
    ಮಳೆಯನ್ನು ಸುರಿಸಿದರೆ ಭೂಮಿಯ ಮೇಲೆ ಪ್ರವಾಹವಾಗುವುದು.
16 ದೇವರು ಬಲಿಷ್ಠನಾಗಿರುವುದರಿಂದ ಯಾವಾಗಲೂ ಜಯಗಳಿಸುತ್ತಾನೆ.
    ಗೆಲ್ಲುವವರೂ ಸೋಲುವವರೂ ಆತನವರೇ!
17 ದೇವರು ಮಂತ್ರಿಗಳ ಜ್ಞಾನವನ್ನು ತೆಗೆದುಹಾಕುವನು.
    ನ್ಯಾಯಾಧಿಪತಿಗಳನ್ನು ಮೂರ್ಖರನ್ನಾಗಿ ಮಾಡುವನು.
18 ರಾಜರುಗಳು ಜನರಿಗೆ ಬೇಡಿಗಳನ್ನು ಹಾಕಿಸಿದರೆ ದೇವರು ಅವುಗಳನ್ನು ಕಿತ್ತೊಗೆದು
    ರಾಜರುಗಳ ಸೊಂಟಕ್ಕೆ ಚಿಂದಿಬಟ್ಟೆಯನ್ನು ಕಟ್ಟಿಸುವನು.
19 ದೇವರು ಯಾಜಕರುಗಳ ಅಧಿಕಾರವನ್ನು ಕಿತ್ತೊಗೆಯುವನು;
    ಪ್ರಧಾನರನ್ನು ದಬ್ಬಿಬಿಡುವನು.
20 ದೇವರು ವಿಶ್ವಾಸನೀಯವಾದ ಆಲೋಚನಾಗಾರರನ್ನು ಮೌನಗೊಳಿಸುವನು;
    ಹಿರಿಯರ ವಿವೇಕವನ್ನು ತೆಗೆದುಹಾಕುವನು.
21 ದೇವರು ಪ್ರಮುಖರಿಗೆ ಅವಮಾನ ಮಾಡುವನು;
    ಅಧಿಪತಿಗಳ ಶಕ್ತಿಯನ್ನು ತೆಗೆದುಹಾಕುವನು.[a]
22 ಕಾರ್ಗತ್ತಲೆಯೊಳಗಿರುವ ನಿಗೂಢ ರಹಸ್ಯಗಳನ್ನು ಆತನು ಪ್ರಕಟಿಸುವನು;
    ಮರಣಾಂಧಕಾರದ ಸ್ಥಳಗಳನ್ನು ಬೆಳಕಿನಿಂದ ಪ್ರಕಾಶಗೊಳಿಸುವನು.
23 ದೇವರು ಜನಾಂಗಗಳನ್ನು ವೃದ್ಧಿಮಾಡಿ ಬಲಗೊಳಿಸುವನು;
    ಬಳಿಕ ಅವುಗಳನ್ನು ನಾಶಮಾಡುವನು.
ಆತನು ಜನಾಂಗಗಳನ್ನು ವಿಸ್ತಾರವಾಗಿ ಬೆಳೆಯ ಮಾಡುವನು;
    ನಂತರ ಅವುಗಳನ್ನು ಚದರಿಸಿಬಿಡುವನು.
24 ದೇವರು ಭೂಲೋಕದ ನಾಯಕರುಗಳನ್ನು ಮೂಢರನ್ನಾಗಿ ಮಾಡುವನು;
    ರಸ್ತೆಯಿಲ್ಲದ ಮರಳುಗಾಡಿನಲ್ಲಿ ಅವರನ್ನು ಅಲೆದಾಡಿಸುವನು.
25 ಅವರು ಬೆಳಕಿಲ್ಲದೆ ಕತ್ತಲೆಯಲ್ಲಿ ತಡವಾಡುವರು.
    ಆತನು ಅವರನ್ನು ಅಮಲೇರಿದವರಂತೆ ಅಲೆದಾಡಿಸುವನು.”

ರೋಮ್ನಗರದವರಿಗೆ 16

ಪೌಲನ ಕೊನೆ ಮಾತುಗಳು

16 ಕ್ರಿಸ್ತನಲ್ಲಿ ನಮ್ಮ ಸಹೋದರಿಯಾದ ಪೊಯಿಬೆಯನ್ನು ನಾನು ನಿಮಗೆ ಶಿಫಾರಸು ಮಾಡಲಿಚ್ಛಿಸುತ್ತೇನೆ. ಈಕೆಯು ಕೆಂಕ್ರೆಯ ಪಟ್ಟಣದ ಸಭೆಯಲ್ಲಿ ವಿಶೇಷ ಸಹಾಯಕಳಾಗಿದ್ದಾಳೆ. ನೀವು ಆಕೆಯನ್ನು ಪ್ರಭುವಿನ ಹೆಸರಿನಲ್ಲಿ ಸ್ವೀಕರಿಸಿಕೊಳ್ಳಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ದೇವಜನರಿಗೆ ತಕ್ಕಂತೆ ಈಕೆಯನ್ನು ಸ್ವೀಕರಿಸಿಕೊಳ್ಳಿರಿ. ಆಕೆಗೆ ಬೇಕಾದ ಸಹಾಯಗಳನ್ನೆಲ್ಲಾ ಮಾಡಿರಿ. ಆಕೆಯು ನನಗೆ ಬಹಳವಾಗಿ ಸಹಾಯ ಮಾಡಿದ್ದಾಳೆ. ಅಲ್ಲದೆ ಇತರ ಅನೇಕ ಜನರಿಗೂ ಆಕೆ ಸಹಾಯ ಮಾಡಿದ್ದಾಳೆ.

ಪ್ರಿಸ್ಕಿಲ್ಲಳಿಗೂ ಅಕ್ವಿಲನಿಗೂ ನನ್ನ ವಂದನೆ ತಿಳಿಸಿರಿ. ಅವರು ಕ್ರಿಸ್ತ ಯೇಸುವಿನಲ್ಲಿ ನನ್ನೊಂದಿಗೆ ಸೇವೆ ಮಾಡುತ್ತಿದ್ದಾರೆ. ಅವರು ನನ್ನ ಪ್ರಾಣವನ್ನು ಉಳಿಸುವುದಕ್ಕಾಗಿ ತಮ್ಮ ಪ್ರಾಣಗಳನ್ನೇ ಅಪಾಯಕ್ಕೆ ಈಡುಮಾಡಿದರು. ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಯೆಹೂದ್ಯರಲ್ಲದ ಸಭೆಗಳವರೆಲ್ಲರೂ ಅವರಿಗೆ ಕೃತಜ್ಞರಾಗಿದ್ದಾರೆ.

ಅಲ್ಲದೆ ಅವರ ಮನೆಯಲ್ಲಿ ಸೇರಿಬರುವ ಸಭೆಯವರಿಗೂ ನನ್ನ ವಂದನೆಗಳನ್ನು ತಿಳಿಸಿರಿ. ನನ್ನ ಪ್ರಿಯ ಸ್ನೇಹಿತನಾದ ಎಪೈನೆತನಿಗೆ ನನ್ನ ವಂದನೆ ತಿಳಿಸಿರಿ.

ಏಷ್ಯಾದಲ್ಲಿ ಕ್ರಿಸ್ತನನ್ನು ಹಿಂಬಾಲಿಸಿದವರಲ್ಲಿ ಅವನೇ ಮೊಟ್ಟಮೊದಲನೆಯವನಾಗಿದ್ದಾನೆ.

ಮರಿಯಳಿಗೆ ನನ್ನ ವಂದನೆ ತಿಳಿಸಿರಿ. ಆಕೆ ನಿಮಗೋಸ್ಕರ ಬಹು ಕಷ್ಟಪಟ್ಟು ಕೆಲಸ ಮಾಡಿದಳು.

ಆಂದ್ರೋನಿಕನಿಗೆ ಮತ್ತು ಯೂನ್ಯನಿಗೆ ನನ್ನ ವಂದನೆ ತಿಳಿಸಿರಿ. ಅವರು ನನ್ನ ಸಂಬಂಧಿಕರಾಗಿದ್ದಾರೆ. ಅಲ್ಲದೆ ಅವರು ನನ್ನೊಂದಿಗೆ ಸೆರೆಮನೆಯಲ್ಲಿದ್ದರು. ದೇವರ ಅತ್ಯಂತ ಮುಖ್ಯಸೇವಕರುಗಳಲ್ಲಿ[a] ಅವರೂ ಸೇರಿದ್ದಾರೆ. ಅವರು ನನಗಿಂತ ಮೊದಲೇ ಕ್ರಿಸ್ತನ ವಿಶ್ವಾಸಿಗಳಾಗಿದ್ದಾರೆ.

ಪ್ರಭುವಿನಲ್ಲಿ ನನ್ನ ಪ್ರಿಯ ಸ್ನೇಹಿತನಾದ ಅಂಪ್ಲಿಯಾತನಿಗೆ ನನ್ನ ವಂದನೆ ತಿಳಿಸಿರಿ. ಉರ್ಬಾನನಿಗೆ ನನ್ನ ವಂದನೆ ತಿಳಿಸಿರಿ.

ಅವನು ಕ್ರಿಸ್ತನಿಗೋಸ್ಕರ ನನ್ನ ಸಹೋದ್ಯೋಗಿಯಾಗಿದ್ದಾನೆ.

ನನ್ನ ಪ್ರಿಯ ಗೆಳೆಯನಾದ ಸ್ತಾಖುನಿಗೆ ನನ್ನ ವಂದನೆ ತಿಳಿಸಿರಿ. 10 ಅಪೆಲ್ಲನಿಗೆ ನನ್ನ ವಂದನೆ ತಿಳಿಸಿರಿ. ಅವನು ಕ್ರಿಸ್ತನನ್ನು ನಿಜವಾಗಿಯೂ ಪ್ರೀತಿಸುತ್ತಾನೆಂಬುದನ್ನು ಪರೀಕ್ಷಿಸಿ ನಿರೂಪಿಸಲಾಗಿದೆ.

ಅರಿಸ್ತೊಬೂಲನ ಕುಟುಂಬದಲ್ಲಿ ಇರುವವರಿಗೆಲ್ಲ ನನ್ನ ವಂದನೆ ತಿಳಿಸಿರಿ.

11 ನನ್ನ ಸಂಬಂಧಿಕರಾದ ಹೆರೋಡಿಯೊನನಿಗೂ ಪ್ರಭುವಿಗೆ ಸೇರಿದವನಾದ ನಾರ್ಕಿಸ್ಸನ ಕುಟುಂಬದಲ್ಲಿರುವವರೆಲ್ಲರಿಗೂ ನನ್ನ ವಂದನೆ ತಿಳಿಸಿರಿ. 12 ತ್ರುಫೈನಳಿಗೂ ತ್ರುಫೋಸಳಿಗೂ ನನ್ನ ವಂದನೆ ತಿಳಿಸಿರಿ.

ಅವರು ಪ್ರಭುವಿಗಾಗಿ ಬಹು ಕಷ್ಟಪಟ್ಟು ಸೇವೆ ಮಾಡುತ್ತಿದ್ದಾರೆ. ನನ್ನ ಪ್ರಿಯ ಸಹೋದರಿಯಾದ ಪೆರ್ಸೀಸಳಿಗೂ ನನ್ನ ವಂದನೆ ತಿಳಿಸಿರಿ. ಆಕೆಯು ಸಹ ಪ್ರಭುವಿಗೋಸ್ಕರ ಬಹು ಕಷ್ಟಪಟ್ಟು ಸೇವೆ ಮಾಡಿದಳು.

13 ರೂಫನಿಗೆ ನನ್ನ ವಂದನೆ ತಿಳಿಸಿರಿ. ಅವನು ಪ್ರಭುವಿನಲ್ಲಿ ವಿಶೇಷವಾದ ವ್ಯಕ್ತಿ. ಅವನ ತಾಯಿಗೂ ನನ್ನ ವಂದನೆ ತಿಳಿಸಿರಿ. ಆಕೆ ನನ್ನನ್ನು ಸ್ವಂತ ಮಗನಂತೆ ನೋಡಿಕೊಂಡಳು.

14 ಅಸುಂಕ್ರಿತನಿಗೂ ಪ್ಲೆಗೋನನಿಗೂ ಹೆರ್ಮೇಯನಿಗೂ ಪತ್ರೋಬನಿಗೂ ಹೆರ್ಮಾನನಿಗೂ ಮತ್ತು ಅವರೊಂದಿಗಿರುವ ಎಲ್ಲಾ ಕ್ರೈಸ್ತ ಸಹೋದರರಿಗೂ

15 ಫಿಲೊಲೋಗನಿಗೂ ಯೂಲ್ಯಳಿಗೂ ನೇರ್ಯನಿಗೂ ಅವನ ಸಹೋದರಿಗೂ ಮತ್ತು ಒಲುಂಪನಿಗೂ ಮತ್ತು ಅವರೊಂದಿಗಿರುವ ಎಲ್ಲಾ ಭಕ್ತರಿಗೆ ನನ್ನ ವಂದನೆ ತಿಳಿಸಿರಿ.

16 ನೀವು ಪರಸ್ಪರ ಸಂಧಿಸುವಾಗ ಪವಿತ್ರವಾದ ಮುದ್ದನ್ನಿಟ್ಟು ವಂದಿಸಿರಿ.

ಕ್ರಿಸ್ತನ ಸಭೆಗಳವರೆಲ್ಲಾ ನಿಮಗೆ ವಂದನೆ ತಿಳಿಸುತ್ತಾರೆ.

17 ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಡಕುಗಳನ್ನು ಉಂಟುಮಾಡುವ ಜನರ ವಿಷಯದಲ್ಲಿ ನೀವು ಬಹು ಜಾಗ್ರತೆಯಿಂದ ಇರಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಇತರರ ನಂಬಿಕೆಯನ್ನು ಕೆಡಿಸುವಂಥವರ ಬಗ್ಗೆ ಬಹು ಎಚ್ಚರದಿಂದಿರಿ. ನೀವು ಕಲಿತಿರುವ ಉಪದೇಶಕ್ಕೆ ಅವರು ವಿರುದ್ಧವಾಗಿದ್ದಾರೆ. ನೀವು ಅವರಿಂದ ದೂರವಿರಿ. 18 ಅಂಥ ಜನರು ನಮ್ಮ ಪ್ರಭುವಾದ ಕ್ರಿಸ್ತನ ಸೇವೆ ಮಾಡುತ್ತಿಲ್ಲ. ಅವರು ಕೇವಲ ತಮ್ಮ ಸುಖಕ್ಕಾಗಿ ಈ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೆಟ್ಟದರ ಬಗ್ಗೆ ತಿಳಿದಿಲ್ಲದ ಜನರ ಮನಸ್ಸುಗಳನ್ನು ಮೋಸಗೊಳಿಸುವುದಕ್ಕಾಗಿ ಅವರು ನಯನಾಜುಕಿನ ನುಡಿಗಳನ್ನಾಡುತ್ತಾರೆ ಮತ್ತು ಮುಖಸ್ತುತಿಯ ಮಾತುಗಳನ್ನಾಡುತ್ತಾರೆ. 19 ನಿಮ್ಮ ವಿಧೇಯತ್ವವು ಎಲ್ಲಾ ವಿಶ್ವಾಸಿಗಳಿಗೆ ತಿಳಿದಿದೆ. ಆದ್ದರಿಂದ ನಿಮ್ಮ ವಿಷಯದಲ್ಲಿ ನಾನು ಬಹು ಸಂತೋಷಪಡುತ್ತೇನೆ. ಆದರೆ ಒಳ್ಳೆಯ ಸಂಗತಿಗಳ ಬಗ್ಗೆ ನೀವು ವಿವೇಕಿಗಳಾಗಿರಬೇಕೆಂದು ಮತ್ತು ಕೆಟ್ಟಸಂಗತಿಗಳ ಬಗ್ಗೆ ಏನೂ ತಿಳಿದಿಲ್ಲದವರಾಗಿರಬೇಕೆಂದು ನಾನು ಅಪೇಕ್ಷಿಸುತ್ತೇನೆ.

20 ಶಾಂತಿಯನ್ನು ಕೊಡುವ ದೇವರು ಬೇಗನೆ ಸೈತಾನನನ್ನು ಸೋಲಿಸಿ, ಅವನ ಮೇಲೆ ನಿಮಗೆ ಅಧಿಕಾರವನ್ನು ಕೊಡುವನು.

ನಮ್ಮ ಪ್ರಭುವಾದ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.

21 ನನ್ನ ಸಹೋದ್ಯೋಗಿಯಾದ ತಿಮೊಥೆಯನು ಮತ್ತು ನನ್ನ ಸಂಬಂಧಿಕರಾದ ಲೂಕ್ಯ, ಯಾಸೋನ ಮತ್ತು ಸೋಸಿಪತ್ರ ನಿಮಗೆ ವಂದನೆ ತಿಳಿಸಿದ್ದಾರೆ.

22 ಪೌಲನು ಹೇಳುತ್ತಿರುವ ಸಂಗತಿಗಳನ್ನು ಬರೆಯುತ್ತಿರುವ ತೆರ್ತ್ಯೆನೆಂಬ ನಾನು ನಿಮ್ಮನ್ನು ಪ್ರಭುವಿನಲ್ಲಿ ವಂದಿಸುತ್ತೇನೆ.

23 ಗಾಯನು ನನಗೆ ಅತಿಥಿಸತ್ಕಾರ ಮಾಡುತ್ತಿದ್ದಾನೆ. ಅಲ್ಲದೆ ಸಭಾಕೂಟಕ್ಕಾಗಿ ಅವನ ಮನೆಯನ್ನೇ ಉಪಯೋಗಿಸಲಾಗುತ್ತಿದೆ. ಅವನು ಸಹ ನಿಮಗೆ ವಂದನೆ ತಿಳಿಸುತ್ತಾನೆ. ಈ ಪಟ್ಟಣದ ಖಜಾಂಚಿಯಾದ ಎರಸ್ತನು ಮತ್ತು ಸಹೋದರನಾದ ಕ್ವರ್ತನು ನಿಮಗೆ ವಂದನೆಯನ್ನು ತಿಳಿಸುತ್ತಾರೆ. 24 [b]

25 ದೇವರಿಗೆ ಮಹಿಮೆಯಾಗಲಿ. ನಿಮ್ಮನ್ನು ನಂಬಿಕೆಯಲ್ಲಿ ಬಲಗೊಳಿಸಬಲ್ಲಾತನು ದೇವರೊಬ್ಬನೇ. ನಾನು ಉಪದೇಶಿಸುವ ಸುವಾರ್ತೆಯ ಮೂಲಕ ದೇವರು ನಿಮ್ಮನ್ನು ಬಲಗೊಳಿಸಬಲ್ಲನು. ನಾನು ಯೇಸು ಕ್ರಿಸ್ತನ ಬಗ್ಗೆ ಜನರಿಗೆ ತಿಳಿಸುತ್ತಿರುವುದೇ ಆ ಸುವಾರ್ತೆ. ದೇವರು ತಿಳಿಯಪಡಿಸಿದ ಆ ಸುವಾರ್ತೆಯು ರಹಸ್ಯವಾದ ಸತ್ಯವಾಗಿತ್ತು ಮತ್ತು ಆರಂಭದಿಂದಲೂ ಮರೆಯಾಗಿತ್ತು. 26 ಆದರೆ ರಹಸ್ಯವಾದ ಆ ಸತ್ಯವನ್ನು ಈಗ ನಮಗೆ ತೋರಿಸಲಾಗಿದೆ. ಮತ್ತು ಆ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲಾಗಿದೆ. ದೇವರು ಆಜ್ಞಾಪಿಸಿರುವುದು ಇದನ್ನೇ. ಎಲ್ಲಾ ಜನರು ನಂಬಿಕೊಂಡು ದೇವರಿಗೆ ವಿಧೇಯರಾಗಲೆಂದು ರಹಸ್ಯವಾದ ಈ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲಾಗಿದೆ. ದೇವರು ಸದಾಕಾಲ ಜೀವಿಸುತ್ತಾನೆ. 27 ಒಬ್ಬನೇ ಜ್ಞಾನಿಯಾದ ದೇವರಿಗೆ ಯೇಸು ಕ್ರಿಸ್ತನ ಮೂಲಕ ಎಂದೆಂದಿಗೂ ಮಹಿಮೆ ಉಂಟಾಗಲಿ. ಆಮೆನ್.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International