M’Cheyne Bible Reading Plan
ಯೆಹೂದದ ಅರಸನಾದ ಮನಸ್ಸೆ
33 ಮನಸ್ಸೆಯು ಪಟ್ಟಕ್ಕೆ ಬಂದಾಗ ಹನ್ನೆರಡು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ರಾಜನಾಗಿ ಐವತ್ತೈದು ವರ್ಷ ರಾಜ್ಯಭಾರ ಮಾಡಿದನು. 2 ಯೆಹೋವನು ದುಷ್ಟತನವೆಂದು ಪರಿಗಣಿಸಿದ್ದನ್ನೇ ಮನಸ್ಸೆ ಮಾಡಿದನು. ಇಸ್ರೇಲರು ಆ ದೇಶವನ್ನು ವಶಪಡಿಸುವದಕ್ಕಿಂತ ಮುಂಚೆ ಅಲ್ಲಿ ವಾಸಿಸುತ್ತಿದ್ದ ಜನರ ಪಾಪಕೃತ್ಯಗಳನ್ನು ಅನುಸರಿಸಿದನು. 3 ಮನಸ್ಸೆಯ ತಂದೆಯಾದ ಹಿಜ್ಕೀಯನು ಕೆಡವಿದ ಉನ್ನತಸ್ಥಳಗಳನ್ನು ಅವನು ಮತ್ತೆ ಕಟ್ಟಿಸಿದನು. ಬಾಳ್ ದೇವರ ವೇದಿಕೆಯನ್ನು ಕಟ್ಟಿಸಿ ಅಶೇರಸ್ತಂಭಗಳನ್ನು ನಿಲ್ಲಿಸಿದನು. ಆಕಾಶದ ನಕ್ಷತ್ರಸಮೂಹಗಳನ್ನು ಪೂಜಿಸಿದನು. 4 ದೇವಾಲಯದೊಳಗೆ ಮನಸ್ಸೆಯು ವಿಗ್ರಹಗಳಿಗೆ ವೇದಿಕೆಯನ್ನು ಕಟ್ಟಿಸಿದನು. ಯೆಹೋವನು ದೇವಾಲಯದ ವಿಷಯವಾಗಿ, “ನನ್ನ ಹೆಸರು ಜೆರುಸಲೇಮಿನಲ್ಲಿ ನಿರಂತರಕ್ಕೂ ಸ್ಥಾಪಿತವಾಗುವದು” ಎಂದು ಹೇಳಿದ್ದನು. 5 ಮನಸ್ಸೆಯು ದೇವಾಲಯದ ಎರಡು ಅಂಗಳಗಳಲ್ಲಿ ಎಲ್ಲಾ ನಕ್ಷತ್ರಸಮೂಹಗಳಿಗೆ ವೇದಿಕೆಗಳನ್ನು ಕಟ್ಟಿಸಿದನು. 6 ಬೆನ್ಹಿನ್ನೋಮ್ ಕಣಿವೆಯಲ್ಲಿ ಮನಸ್ಸೆಯು ತನ್ನ ಸ್ವಂತ ಮಕ್ಕಳನ್ನು ಅನ್ಯದೇವತೆಗಳಿಗೆ ಯಜ್ಞವಾಗಿ ಅರ್ಪಿಸಿದನು; ಮಾಟಮಂತ್ರಗಳನ್ನು ಮಾಡಿದನು; ಪಿಶಾಚಿಗಳೊಂದಿಗೂ ದುರಾತ್ಮಗಳೊಂದಿಗೂ ಸಂಪರ್ಕವನ್ನಿಟ್ಟುಕೊಂಡಿದ್ದನು. ಯೆಹೋವನು ಕೆಟ್ಟದ್ದು ಎಂದು ಹೇಳಿದ್ದನ್ನೆಲ್ಲಾ ಅವನು ಮಾಡಿದ್ದರಿಂದ ಆತನು ಅವನ ಮೇಲೆ ಬಹಳವಾಗಿ ಕೋಪಗೊಂಡನು. 7 ಮನಸ್ಸೆಯು ಒಂದು ವಿಗ್ರಹವನ್ನು ಯೆಹೋವನ ಮಂದಿರದೊಳಗೆ ಪ್ರತಿಷ್ಠಾಪಿಸಿದನು. ಆ ಮಂದಿರದ ಬಗ್ಗೆ ಯೆಹೋವನು ದಾವೀದನೊಂದಿಗೂ ಸೊಲೊಮೋನನೊಂದಿಗೂ ಮಾತನಾಡಿ, “ನನ್ನ ಹೆಸರನ್ನು ಈ ಆಲಯದಲ್ಲಿಯೂ ಜೆರುಸಲೇಮಿನಲ್ಲಿಯೂ ಸ್ಥಾಪಿಸುವೆನು. ಈ ಪಟ್ಟಣವನ್ನು ಎಲ್ಲಾ ಕುಲಗಳ ಎಲ್ಲಾ ಪಟ್ಟಣಗಳಿಂದ ಆರಿಸಿಕೊಂಡಿರುತ್ತೇನೆ. ಇಲ್ಲಿ ನನ್ನ ನಾಮಸ್ಮರಣೆಯು ಸದಾಕಾಲ ನಡಿಯುವುದು. 8 ನಾನು ಮೋಶೆಯ ಮೂಲಕ ಕೊಟ್ಟಿರುವ ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ಇಸ್ರೇಲರು ವಿಧೇಯರಾಗಿರುವುದಾದರೆ, ಅವರ ಪೂರ್ವಿಕರಿಗೆ ಕೊಡಲು ನಾನು ಆರಿಸಿಕೊಂಡ ದೇಶದಿಂದ ಅವರನ್ನು ತೆಗೆದುಬಿಡುವುದೇ ಇಲ್ಲ” ಎಂದು ಹೇಳಿದನು.
9 ಮನಸ್ಸೆಯು ಯೆಹೂದದ ಜನರನ್ನೂ ಜೆರುಸಲೇಮಿನಲ್ಲಿದ್ದ ಜನರನ್ನೂ ಕೆಟ್ಟಕಾರ್ಯಗಳನ್ನು ಮಾಡಲು ಪ್ರೋತ್ಸಾಹಿಸಿದನು. ಇಸ್ರೇಲರು ಬರುವದಕ್ಕಿಂತ ಮೊದಲು ಆ ದೇಶದಲ್ಲಿದ್ದ ಜನರಿಗಿಂತಲೂ ಅತ್ಯಂತ ಕೆಟ್ಟವನಾಗಿ ವರ್ತಿಸಿದನು. ಆ ದೇಶದಲ್ಲಿದ್ದ ಜನರನ್ನು ಯೆಹೋವನು ನಾಶಮಾಡಿದ್ದನು.
10 ಯೆಹೋವನು ಮನಸ್ಸೆಯ ಮತ್ತು ಅವನ ಜನರ ಸಂಗಡ ಮಾತಾಡಿದರೂ ಅವರು ಆತನ ಮಾತನ್ನು ಕೇಳಲಿಲ್ಲ. 11 ಆದ್ದರಿಂದ ಅಶ್ಶೂರ್ ದೇಶದ ಅರಸನ ಸೇನಾಪತಿಗಳು ಬಂದು ಯೆಹೂದದ ಮೇಲೆ ಯುದ್ಧ ಮಾಡುವಂತೆ ಯೆಹೋವನು ಮಾಡಿದನು. ಆ ಸೇನಾಪತಿಗಳು ಮನಸ್ಸೆಯನ್ನು ಬಂಧಿಸಿ ಸೆರೆಯಲ್ಲಿಟ್ಟರು. ಅವನಿಗೆ ಕೊಂಡಿಗಳನ್ನು ಸಿಕ್ಕಿಸಿ ಬೇಡಿಹಾಕಿ ಬಾಬಿಲೋನಿಗೆ ಒಯ್ದರು.
12 ಈ ಸಂಕಷ್ಟಗಳು ಅವನಿಗೆ ಒದಗಿದಾಗ ಅವನು ದೇವರಾದ ಯೆಹೋವನನ್ನು ತನಗೆ ಸಹಾಯ ಮಾಡಲು ಬೇಡಿದನು. ತನ್ನ ಪೂರ್ವಿಕರ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡನು. 13 ಯೆಹೋವನು ಮನಸ್ಸೆಯ ಬೇಡಿಕೆಗಳನ್ನು ಕೇಳಿ ಅವನಿಗೆ ಕರುಣೆ ತೋರಿದನು. ಅವನು ಜೆರುಸಲೇಮಿಗೂ ತನ್ನ ಸಿಂಹಾಸನಕ್ಕೂ ಹಿಂತಿರುಗಿ ಬರುವಂತೆ ಮಾಡಿದನು. ಆಗ ಮನಸ್ಸೆಯು ಯೆಹೋವನೇ ನಿಜ ದೇವರೆಂದು ಅರಿತನು.
14 ಇದಾದ ನಂತರ ಮನಸ್ಸೆಯು ದಾವೀದನಗರಕ್ಕೆ ಹೊರಗಿನ ಗೋಡೆಯನ್ನು ಕಟ್ಟಿಸಿದನು. ಈ ಗೋಡೆಯು ಕಿದ್ರೋನಿನಲ್ಲಿದ್ದ ಗೀಹೋನ್ ಬುಗ್ಗೆಯ ಪಶ್ಚಿಮ ದಿಕ್ಕಿನಿಂದ ಮೀನು ಬಾಗಿಲಿನ ಮುಂದೆ ಹೋಗಿ, ಅಲ್ಲಿಂದ ಓಫೆಲ್ ಗುಡ್ಡಕ್ಕೆ ಸುತ್ತುಹಾಕಿತು. ಅವನು ಗೋಡೆಯನ್ನು ಬಹು ಎತ್ತರವಾಗಿ ಕಟ್ಟಿದನು. ಆಮೇಲೆ ಯೆಹೂದದಲ್ಲಿದ್ದ ಎಲ್ಲಾ ಕೋಟೆಗಳಲ್ಲಿ ಸೇನಾಪತಿಗಳನ್ನು ನೇಮಿಸಿದನು; 15 ಅನ್ಯದೇವತೆಗಳ ವಿಗ್ರಹವನ್ನು ತೆಗಿಸಿದನು; ದೇವಾಲಯದೊಳಗಿದ್ದ ವಿಗ್ರಹವನ್ನು ತೆಗೆದುಹಾಕಿಸಿದನು. ಜೆರುಸಲೇಮಿನಲ್ಲಿಯೂ ದೇವಾಲಯದ ಗುಡ್ಡದಲ್ಲಿಯೂ ಪ್ರತಿಷ್ಠಾಪಿಸಿದ್ದ ಎಲ್ಲಾ ವಿಗ್ರಹಗಳನ್ನು ತೆಗೆದುಹಾಕಿಸಿದನು. ಕಟ್ಟಿಸಿದ ಎಲ್ಲಾ ವೇದಿಕೆಗಳನ್ನು ಜೆರುಸಲೇಮಿನಿಂದ ಹೊರಗೆ ಬಿಸಾಡಿಸಿದನು. 16 ಯೆಹೋವನ ಯಜ್ಞವೇದಿಕೆಯನ್ನು ಕಟ್ಟಿಸಿ ಅದರಲ್ಲಿ ಸಮಾಧಾನಯಜ್ಞಗಳನ್ನೂ ಕೃತಜ್ಞತಾಯಜ್ಞಗಳನ್ನೂ ಸಮರ್ಪಿಸಿದನು. ಯೆಹೂದದಲ್ಲಿದ್ದ ಎಲ್ಲಾ ಜನರೂ ದೇವರಾದ ಯೆಹೋವನ ಸೇವೆಮಾಡುವಂತೆ ಆಜ್ಞೆ ವಿಧಿಸಿದನು. 17 ಜನರು ಉನ್ನತಸ್ಥಳಗಳಲ್ಲಿ ಯಜ್ಞವನ್ನು ಮಾಡುತ್ತಿದ್ದರೂ ಅದನ್ನು ಯೆಹೋವನಿಗೋಸ್ಕರವೇ ಮಾಡುತ್ತಿದ್ದರು.
18 ಮನಸ್ಸೆ ಮಾಡಿದ ಇತರ ಕಾರ್ಯಗಳು ಮತ್ತು ಅವನು ಯೆಹೋವನಿಗೆ ಮಾಡಿದ ಪ್ರಾರ್ಥನೆ, ದೇವದರ್ಶಿಗಳು ಅವನಿಗೆ ಇಸ್ರೇಲರ ದೇವರಾದ ಯೆಹೋವನ ಸಂದೇಶವನ್ನು ಕೊಟ್ಟ ವಿಷಯವೆಲ್ಲಾ ಇಸ್ರೇಲ್ ರಾಜರ ಚರಿತ್ರೆ ಎಂಬ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. 19 ಮನಸ್ಸೆಯ ಪ್ರಾರ್ಥನೆಯ ವಿಷಯವಾಗಿಯೂ ದೇವರ ಪ್ರತಿಕ್ರಿಯೆಯ ವಿಷಯವಾಗಿಯೂ ದೇವದರ್ಶಿಗಳ ಚರಿತ್ರೆಯಲ್ಲಿ ಬರೆಯಲ್ಪಟ್ಟಿದೆ. ಮಾತ್ರವಲ್ಲದೆ ಮನಸ್ಸೆಯು ದೇವರಿಗೆ ವಿರುದ್ಧವಾಗಿ ಮಾಡಿದ ಘೋರಕೃತ್ಯಗಳೂ ಪಶ್ಚಾತ್ತಾಪಪಡುವ ಮೊದಲು ಎಲ್ಲೆಲ್ಲಿ ಅನ್ಯದೇವತೆಗಳಿಗೆ ಪೂಜಾಸ್ಥಳಗಳನ್ನು ಮಾಡಿದ್ದನೆಂದೂ ಎಲ್ಲೆಲ್ಲಿ ಅಶೇರಸ್ತಂಭಗಳನ್ನು ನೆಡಿಸಿದ್ದನೆಂದೂ ದೇವದರ್ಶಿಗಳ ಚರಿತ್ರೆಯಲ್ಲಿ ಬರೆಯಲಾಗಿದೆ. 20 ಮನಸ್ಸೆಯು ಸತ್ತು ತನ್ನ ಪೂರ್ವಿಕರ ಬಳಿಗೆ ಸೇರಿದಾಗ ಅವನ ಶವವನ್ನು ಅವನ ಸ್ವಂತ ಅರಮನೆಯಲ್ಲಿ ಸಮಾಧಿಮಾಡಿದರು. ಮನಸ್ಸೆಯ ಮಗನಾದ ಅಮೋನನು ಅವನ ಬದಲಿಗೆ ಅರಸನಾದನು.
ಯೆಹೂದದ ಅರಸನಾದ ಅಮೋನ
21 ಅಮೋನನು ಪಟ್ಟಕ್ಕೆ ಬರುವಾಗ ಇಪ್ಪತ್ತೆರಡು ವರ್ಷ ಪ್ರಾಯದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಎರಡು ವರ್ಷ ರಾಜ್ಯವನ್ನಾಳಿದನು. 22 ಅವನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದನು. ಮನಸ್ಸೆಯು ಯೆಹೋವನಿಗೆ ಇಷ್ಟವಾದುದ್ದನ್ನು ಮಾಡಿದಂತೆ ಅವನು ಮಾಡಲಿಲ್ಲ. ಅವನ ತಂದೆಯಾದ ಮನಸ್ಸೆಯು ಮಾಡಿದ ಎರಕದ ಬೊಂಬೆಗಳಿಗೂ ಕೆತ್ತನೆ ಕೆಲಸದ ವಿಗ್ರಹಗಳಿಗೂ ಅಡ್ಡಬಿದ್ದನು. 23 ಮನಸ್ಸೆಯು ಯೆಹೋವನ ಮುಂದೆ ತನ್ನನ್ನು ತಗ್ಗಿಸಿಕೊಂಡಂತೆ ಅಮೋನನು ತಗ್ಗಿಸಿಕೊಳ್ಳಲಿಲ್ಲ. ಅಮೋನನು ಹೆಚ್ಚೆಚ್ಚಾಗಿ ಪಾಪಗಳನ್ನು ಮಾಡಿದನು. 24 ಅಮೋನನ ಸೇವಕರು ಸಂಚುಮಾಡಿ ಅವನ ಅರಮನೆಯಲ್ಲಿಯೇ ಅವನನ್ನು ಕೊಂದುಹಾಕಿದರು. 25 ಆದರೆ ಅರಸನಾದ ಅಮೋನನಿಗೆ ವಿರೋಧವಾಗಿ ಎದ್ದ ಸೇವಕರನ್ನೆಲ್ಲಾ ಯೆಹೂದದ ಜನರು ಸಂಹರಿಸಿದರು. ಅನಂತರ ಅಮೋನನ ಮಗನಾದ ಯೋಷೀಯನನ್ನು ತಮ್ಮ ಅರಸನನ್ನಾಗಿ ಆರಿಸಿದರು.
ಪರಲೋಕದಲ್ಲಿ ದೇವರಿಗೆ ಸ್ತೋತ್ರ
19 ಇದಾದ ಬಳಿಕ, ಪರಲೋಕದಲ್ಲಿ ಅನೇಕಾನೇಕ ಜನರ ಮಹಾಶಬ್ದವೋ ಎಂಬಂತೆ ಇದ್ದ ಧ್ವನಿಯನ್ನು ಕೇಳಿದೆನು. ಆ ಜನರು ಹೀಗೆ ಹೇಳುತ್ತಿದ್ದರು:
“ಹಲ್ಲೆಲೂಯಾ, (ದೇವರಿಗೆ ಸ್ತೋತ್ರ ಮಾಡಿರಿ)
ಜಯವೂ ಪ್ರಭಾವವೂ ಅಧಿಕಾರವೂ ನಮ್ಮ ದೇವರಿಗೆ ಸೇರಿದ್ದಾಗಿವೆ.
2 ಆತನ ತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ.
ನಮ್ಮ ದೇವರು ವೇಶ್ಯೆಯನ್ನು ದಂಡಿಸಿದನು.
ಅವಳ ಲೈಂಗಿಕ ಪಾಪದಿಂದಲೇ ಲೋಕವು ಕೆಟ್ಟುಹೋಯಿತು.
ಆತನು ತನ್ನ ಸೇವಕರ ರಕ್ತಕ್ಕೆ ಪ್ರತಿಯಾಗಿ ಆ ವೇಶ್ಯೆಯನ್ನು ದಂಡಿಸಿದನು.”
3 ಇದಲ್ಲದೆ ಪರಲೋಕದಲ್ಲಿದ್ದ ಆ ಜನರು ಹೇಳಿದ್ದೇನೆಂದರೆ:
“ಹಲ್ಲೆಲೂಯಾ!
ಅವಳು ಸುಟ್ಟುಹೋಗುತ್ತಿದ್ದಾಳೆ. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಮೇಲೇಳುತ್ತಿರುವುದು.”
4 ನಂತರ ಇಪ್ಪತ್ತನಾಲ್ಕು ಮಂದಿ ಹಿರಿಯರು ಮತ್ತು ನಾಲ್ಕು ಜೀವಿಗಳು ಮೊಣಕಾಲೂರಿ ನಮಸ್ಕರಿಸಿದರು. ಸಿಂಹಾಸನದ ಮೇಲೆ ಕುಳಿತಿರುವ ದೇವರನ್ನು ಆರಾಧಿಸಿದರು. ಅವರು,
“ಆಮೆನ್! ಹಲ್ಲೆಲೂಯಾ!” ಎಂದು ಹೇಳಿದರು.
5 ಆಗ ಸಿಂಹಾಸನದಿಂದ ಒಂದು ಧ್ವನಿಯು ಬಂದಿತು. ಆ ಧ್ವನಿಯು,
“ನಮ್ಮ ದೇವರ ಸೇವೆ ಮಾಡುವ ಜನರೆಲ್ಲರೇ, ಆತನಿಗೆ ಸ್ತೋತ್ರ ಮಾಡಿರಿ!
ನಮ್ಮ ದೇವರಿಗೆ ಗೌರವ ನೀಡುವ ಚಿಕ್ಕವರೇ, ದೊಡ್ಡವರೇ, ಆತನಿಗೆ ಸ್ತೋತ್ರ ಮಾಡಿರಿ!” ಎಂದು ಹೇಳಿತು.
6 ನಂತರ ಅನೇಕಾನೇಕ ಜನರ ಮಹಾಶಬ್ದದಂತಿದ್ದ ಧ್ವನಿಯೊಂದು ನನಗೆ ಕೇಳಿಸಿತು. ಅದು ಪ್ರವಾಹದ ನೀರಿನ ಘೋಷದಂತೆಯೂ ಗಟ್ಟಿಯಾದ ಗುಡುಗಿನ ಶಬ್ದದಂತೆಯೂ ಇತ್ತು. ಆ ಜನರು ಹೀಗೆ ಹೇಳುತ್ತಿದ್ದರು:
“ಹಲ್ಲೆಲೂಯಾ!
ನಮ್ಮ ದೇವರಾದ ಪ್ರಭುವು ಆಳಲಾರಂಭಿಸಿದ್ದಾನೆ.
ಆತನು ಸರ್ವಶಕ್ತನಾಗಿದ್ದಾನೆ.
7 ನಾವೆಲ್ಲರೂ ಆನಂದಿಸೋಣ ಮತ್ತು ಸಂತಸಪಡೋಣ!
ದೇವರನ್ನು ಮಹಿಮೆಪಡಿಸೋಣ! ಕುರಿಮರಿಯಾದಾತನ (ಯೇಸು) ವಿವಾಹಕಾಲ ಬಂದಿರುವುದರಿಂದ ದೇವರನ್ನು ಘನಪಡಿಸೋಣ.
ಕುರಿಮರಿಯಾದಾತನ ವಧು (ಸಭೆ) ತನ್ನನ್ನು ಸಿದ್ಧಪಡಿಸಿಕೊಂಡಿದ್ದಾಳೆ.
8 ನಯವಾದ ನಾರುಮಡಿಯನ್ನು ವಧುವಿಗೆ ಧರಿಸಲು ನೀಡಲಾಗಿತ್ತು.
ಆ ನಾರುಮಡಿಯು ಪ್ರಕಾಶಮಾನವಾಗಿತ್ತು ಹಾಗೂ ಶುಭ್ರವಾಗಿತ್ತು.”
(ನಯವಾದ ನಾರುಮಡಿಯೆಂದರೆ ದೇವರ ಪರಿಶುದ್ಧ ಜನರು ಮಾಡಿದ ಒಳ್ಳೆಯ ಕಾರ್ಯಗಳು ಎಂದರ್ಥ.)
9 ಆಗ ದೇವದೂತನು ನನಗೆ ಹೀಗೆ ಹೇಳಿದನು: “ಈ ರೀತಿ ಬರೆ: ಯಜ್ಞದ ಕುರಿಮರಿಯಾದಾತನ ವಿವಾಹದ ಔತಣಕ್ಕೆ ಆಹ್ವಾನಿಸಲ್ಪಟ್ಟ ಜನರು ಧನ್ಯರು!” ನಂತರ ದೇವದೂತನು, “ಇವು ದೇವರ ಸತ್ಯವಾದ ನುಡಿಗಳು” ಎಂದು ಹೇಳಿದನು.
10 ಆಗ ನಾನು ದೇವದೂತನನ್ನು ಆರಾಧಿಸಲು ಅವನ ಪಾದದ ಮುಂದೆ ಅಡ್ಡಬಿದ್ದೆನು. ಆದರೆ ದೇವದೂತನು ನನಗೆ, “ನನ್ನನ್ನು ಆರಾಧಿಸಬೇಡ! ಯೇಸುವಿನ ಸತ್ಯವನ್ನು ಹೊಂದಿರುವ ನಿನ್ನಂತೆಯೂ ನಿನ್ನ ಸಹೋದರರಂತೆಯೂ ನಾನು ಒಬ್ಬ ಸೇವಕನಾಗಿದ್ದೇನೆ. ಆದ್ದರಿಂದ ದೇವರನ್ನು ಆರಾಧಿಸು! ಏಕೆಂದರೆ ಯೇಸುವಿನ ಸತ್ಯವೇ ಪ್ರವಾದನೆಯ ಸಾಕ್ಷಿಯಾಗಿದೆ” ಎಂದು ಹೇಳಿದನು.
ಬಿಳಿ ಕುದುರೆಯ ಮೇಲಿನ ಸವಾರನು
11 ನಂತರ ಪರಲೋಕವು ತೆರೆದಿರುವುದನ್ನು ನಾನು ನೋಡಿದೆನು. ನನ್ನ ಎದುರಿನಲ್ಲಿ ಒಂದು ಬಿಳಿ ಕುದುರೆಯಿತ್ತು. ಕುದುರೆಯ ಮೇಲೆ ಕುಳಿತಿದ್ದ ಸವಾರನ ಹೆಸರು ನಂಬಿಗಸ್ತ ಮತ್ತು ಸತ್ಯವಂತ. ಆತನು ತನ್ನ ತೀರ್ಪುಗಳಲ್ಲಿಯೂ ಯುದ್ಧಗಳಲ್ಲಿಯೂ ನ್ಯಾಯವಂತನಾಗಿದ್ದನು. 12 ಆತನ ಕಣ್ಣುಗಳು ಉರಿಯುವ ಕೆಂಡಗಳಂತಿದ್ದವು. ಆತನ ತಲೆಯ ಮೇಲೆ ಅನೇಕ ಕಿರೀಟಗಳಿದ್ದವು. ಆತನ ಮೇಲೆ ಒಂದು ಹೆಸರನ್ನು ಬರೆಯಲಾಗಿತ್ತು, ಆದರೆ ಆ ಹೆಸರಿನ ಅರ್ಥ ಆತನೊಬ್ಬನಿಗೆ ಮಾತ್ರ ತಿಳಿದಿತ್ತೇ ಹೊರತು ಬೇರೆ ಯಾರಿಗೂ ತಿಳಿದಿರಲಿಲ್ಲ. 13 ಆತನು ರಕ್ತದಲ್ಲಿ ನೆನೆಸಿದ ನಿಲುವಂಗಿಯನ್ನು ಧರಿಸಿದ್ದನು. ಆತನ ಹೆಸರು ದೇವರವಾಕ್ಯ. 14 ಪರಲೋಕದ ಸೈನ್ಯಗಳು ಬಿಳಿ ಕುದುರೆಗಳ ಮೇಲೆ ಆತನನ್ನು ಹಿಂಬಾಲಿಸುತ್ತಿದ್ದವು. ಅವರು ಬಿಳುಪಾಗಿಯೂ ಶುಭ್ರವಾಗಿಯೂ ಇದ್ದ ನಯವಾದ ನಾರಮಡಿಯನ್ನು ಧರಿಸಿದ್ದರು. 15 ಕುದುರೆಯ ಮೇಲೆ ಕುಳಿತಿದ್ದಾತನ ಬಾಯಿಂದ ಹರಿತವಾದ ಕತ್ತಿಯೊಂದು ಹೊರಗೆ ಬರುತ್ತಿತ್ತು. ಆತನು ಜನಾಂಗಗಳನ್ನು ಸೋಲಿಸಲು ಈ ಕತ್ತಿಯನ್ನು ಬಳಸುತ್ತಾನೆ. ಆತನು ಕಬ್ಬಿಣದ ಕೋಲಿನಿಂದ ಜನಾಂಗಗಳನ್ನು ಆಳುತ್ತಾನೆ. ಆತನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ಆಲೆಯಲ್ಲಿ ದ್ರಾಕ್ಷಿಯನ್ನು ಕಿವುಚಿ ಹಾಕುತ್ತಾನೆ. 16 ಆತನ ನಿಲುವಂಗಿಯ ಮೇಲೆಯೂ ಆತನ ಕಾಲಿನ ಮೇಲೆಯೂ,
ರಾಜಾಧಿರಾಜ ಮತ್ತು ಪ್ರಭುಗಳ ಪ್ರಭು
ಎಂಬ ಹೆಸರನ್ನು ಬರೆಯಲಾಗಿತ್ತು.
17 ನಂತರ ಒಬ್ಬ ದೇವದೂತನು ಸೂರ್ಯನ ಮೇಲೆ ನಿಂತಿರುವುದನ್ನು ನಾನು ನೋಡಿದೆನು. ಆ ದೇವದೂತನು ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳಿಗೆಲ್ಲ ಹೀಗೆ ಹೇಳುತ್ತಿದ್ದನು: “ದೇವರ ಮಹಾಭೋಜನಕ್ಕೆ ಒಟ್ಟುಗೂಡಿ ಬನ್ನಿರಿ. 18 ನೀವು ರಾಜರುಗಳ ಮತ್ತು ಸಹಸ್ರಾಧಿಪತಿಗಳ ಮತ್ತು ಸುಪ್ರಸಿದ್ಧ ಜನರ ದೇಹಗಳನ್ನು ತಿನ್ನಲು ಒಟ್ಟಾಗಿ ಬನ್ನಿರಿ. ಕುದುರೆಗಳ, ಕುದುರೆ ಸವಾರರ, ಸ್ವತಂತ್ರರಾದವರ, ಗುಲಾಮರ, ಚಿಕ್ಕವರ ಮತ್ತು ದೊಡ್ಡವರ ದೇಹಗಳನ್ನು ತಿನ್ನಲು ಬನ್ನಿರಿ.”
19 ನಂತರ ನಾನು ಲೋಕದ ರಾಜರನ್ನು ಮತ್ತು ಮೃಗವನ್ನು ನೋಡಿದೆನು. ಅವರು ಕುದುರೆಯ ಮೇಲೆ ಕುಳಿತಿದ್ದವನ ಮೇಲೆ ಮತ್ತು ಅವನ ಸೈನ್ಯದ ಮೇಲೆ ಯುದ್ಧ ಮಾಡುವುದಕ್ಕಾಗಿ ತಮ್ಮ ಸೈನ್ಯವನ್ನೆಲ್ಲ ಒಟ್ಟುಗೂಡಿಸಿದ್ದರು. 20 ಆದರೆ ಆ ಮೃಗವನ್ನೂ ಸುಳ್ಳುಪ್ರವಾದಿಯನ್ನೂ ಸೆರೆಹಿಡಿಯಲಾಯಿತು. ಈ ಸುಳ್ಳುಪ್ರವಾದಿಯೇ ಮೃಗಕ್ಕಾಗಿ ಅದ್ಭುತಗಳನ್ನು ಮಾಡಿದವನು. ಈ ಸುಳ್ಳುಪ್ರವಾದಿಯು ಮೃಗದ ಗುರುತು ಹಾಕಿಸಿಕೊಂಡಿರುವ ಮತ್ತು ಅದರ ವಿಗ್ರಹವನ್ನು ಆರಾಧಿಸಿದ ಜನರನ್ನು ಮರುಳು ಮಾಡಲು ಈ ಅದ್ಭುತಗಳನ್ನು ಬಳಸಿದ್ದನು. ಈ ಸುಳ್ಳುಪ್ರವಾದಿಯನ್ನೂ ಮೃಗವನ್ನೂ, ಬೆಂಕಿ ಮತ್ತು ಗಂಧಕಗಳಿಂದ ಉರಿಯುವ ಕೆರೆಯಲ್ಲಿ ಜೀವಂತವಾಗಿ ಎಸೆಯಲಾಯಿತು. 21 ಅವರ ಸೈನ್ಯಗಳನ್ನು ಕುದುರೆಯ ಮೇಲೆ ಕುಳಿತಿದ್ದವನ ಬಾಯಿಂದ ಹೊರಬಂದ ಕತ್ತಿಯಿಂದ ಕೊಲ್ಲಲಾಯಿತು. ಈ ದೇಹಗಳನ್ನು ಪಕ್ಷಿಗಳೆಲ್ಲ ಹೊಟ್ಟೆ ತುಂಬುವವರೆಗೆ ತಿಂದವು.
1 ದೇವರಿಂದ ಬಂದ ಸಂದೇಶ. ಯೆಹೋವ ದೇವರು ಮಲಾಕಿಯ ಮೂಲಕ ಇಸ್ರೇಲರಿಗೆ ಕೊಟ್ಟ ಸಂದೇಶ.
ದೇವರು ಇಸ್ರೇಲರನ್ನು ಪ್ರೀತಿಸುತ್ತಾನೆ
2 ಯೆಹೋವನು, “ನಾನು ನಿಮ್ನನ್ನೆಲ್ಲಾ ಪ್ರೀತಿಸುತ್ತೇನೆ” ಎಂದು ಹೇಳುತ್ತಾನೆ.
ಆದರೆ ನೀವು, “ನೀನು ಪ್ರೀತಿಸುವದಕ್ಕೆ ಗುರುತು ಏನು?” ಎಂದು ಕೇಳುತ್ತೀರಿ.
ಯೆಹೋವನು ಅದಕ್ಕುತ್ತರವಾಗಿ, “ಏಸಾವನು ಯಾಕೊಬನ ಅಣ್ಣನಲ್ಲವೋ? ಆದರೆ ನಾನು ಯಾಕೋಬನನ್ನು ಆರಿಸಿಕೊಂಡೆನು. 3 ಏಸಾವನನ್ನು ನಾನು ಸ್ವೀಕರಿಸಲಿಲ್ಲ. ಏಸಾವನಿರುವ ಬೆಟ್ಟಪ್ರದೇಶವನ್ನು ನಾನು ಹಾಳುಮಾಡಿದೆನು. ಈಗ ಕಾಡುನಾಯಿಗಳು ಮಾತ್ರ ಅಲ್ಲಿ ವಾಸಿಸುತ್ತವೆ.” ಎಂದು ಹೇಳಿದನು.
4 ಎದೋಮ್ಯರು ಒಂದುವೇಳೆ ಹೀಗೆ ಹೇಳಿಯಾರು: “ನಾವು ನಾಶವಾಗಿದ್ದೇವೆ. ಹೌದು, ಆದರೆ ನಾವು ಹಿಂದೆ ಹೋಗಿ ತಿರುಗಿ ನಮ್ಮ ಪಟ್ಟಣಗಳನ್ನು ಕಟ್ಟುವೆವು.”
ಸರ್ವಶಕ್ತನಾದ ಯೆಹೋವನು, “ಅವರು ಪಟ್ಟಣಗಳನ್ನು ತಿರುಗಿ ಕಟ್ಟಿದರೆ ನಾನು ತಿರುಗಿ ನಾಶಮಾಡುವೆನು” ಎಂದು ಹೇಳುತ್ತಾನೆ. ಇದಕ್ಕಾಗಿಯೇ ಜನರು, “ಎದೋಮ್ ದುಷ್ಟ ಪ್ರಾಂತ್ಯವಾಗಿದೆ, ಯೆಹೋವನು ನಿರಂತರವಾಗಿ ಅದನ್ನು ದ್ವೇಷಿಸುತ್ತಾನೆ” ಎಂದು ಅನ್ನುವರು.
5 ಇದನ್ನು ನೋಡಿದವರಾದ ನೀವು ಹೇಳುತ್ತೀರಿ, “ಯೆಹೋವನು ಮಹಾದೇವರು. ಇಸ್ರೇಲಿನ ಹೊರಗೂ ತನ್ನ ಪ್ರತಾಪವನ್ನು ತೋರಿಸುವನು.”
ಜನರು ಯೆಹೋವನನ್ನು ಗೌರವಿಸುವುದಿಲ್ಲ
6 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ, “ಮಕ್ಕಳು ಹೆತ್ತವರನ್ನು ಗೌರವಿಸುವರು. ಸೇವಕರು ಯಜಮಾನನನ್ನು ಗೌರವಿಸುತ್ತಾರೆ. ನಾನು ನಿಮ್ಮ ತಂದೆಯಾಗಿದ್ದೇನೆ, ಆದರೆ ನನ್ನನ್ನು ಯಾಕೆ ಗೌರವಿಸುವದಿಲ್ಲ? ನಾನು ನಿಮ್ಮ ಯಜಮಾನನಾಗಿದ್ದೇನೆ, ಆದರೆ ನನ್ನನ್ಯಾಕೆ ಗೌರವಿಸುವದಿಲ್ಲ? ಯಾಜಕರೇ, ನೀವು ನನ್ನ ಹೆಸರನ್ನು ಗೌರವಿಸುವದಿಲ್ಲ.”
ಆದರೆ ನೀವು, “ನಾವು ನಿನಗೆ ಯಾವ ವಿಷಯದಲ್ಲಿ ಗೌರವ ಕೊಟ್ಟಿಲ್ಲ” ಎಂದು ಕೇಳುತ್ತೀರಿ.
7 “ನನ್ನ ಯಜ್ಞವೇದಿಕೆಗೆ ನೀವು ಅಶುದ್ಧ ರೊಟ್ಟಿಗಳನ್ನು ಅರ್ಪಿಸುತ್ತೀರಿ” ಎಂದು ಯೆಹೋವನು ಹೇಳುತ್ತಾನೆ.
“ಯಾವ ವಿಷಯದಲ್ಲಿ ಅದು ಅಶುದ್ಧವಾಯಿತು?” ಎಂದು ನೀವು ಕೇಳುತ್ತೀರಿ.
ಅದಕ್ಕೆ ಯೆಹೋವನು, “ನನ್ನ ಯಜ್ಞವೇದಿಕೆಯನ್ನು ನೀವು ಗೌರವಿಸುವದಿಲ್ಲ. 8 ನೀವು ಕುರುಡು ಪ್ರಾಣಿಗಳನ್ನು ಯಜ್ಞಕ್ಕಾಗಿ ತರುತ್ತೀರಿ. ಅದು ತಪ್ಪಲ್ಲವೇ? ಕುಂಟು, ರೋಗಪೀಡಿತ ಪಶುಗಳನ್ನು ಯಜ್ಞಾರ್ಪಣೆಗಾಗಿ ತರುತ್ತೀರಿ. ಅದು ತಪ್ಪಲ್ಲವೇ? ನಿಮ್ಮ ರಾಜ್ಯಪಾಲನಿಗೆ ನೀವು ಅಂಥಾ ಪ್ರಾಣಿಗಳನ್ನು ಕಾಣಿಕೆಯಾಗಿ ಕೊಟ್ಟರೆ ಅವನು ಅದನ್ನು ಸ್ವೀಕರಿಸುವನೋ? ಇಲ್ಲ, ಅಂಥಾ ಕಾಣಿಕೆಯನ್ನು ಅವನು ಸ್ವೀಕರಿಸುವದೇ ಇಲ್ಲ” ಸರ್ವಶಕ್ತನಾದ ಯೆಹೋವನು ಇದನ್ನು ಹೇಳುತ್ತಿದ್ದಾನೆ.
9 “ಯಾಜಕರೇ, ಯೆಹೋವನು ನಮಗೆ ಶುಭವನ್ನು ಉಂಟುಮಾಡುವಂತೆ ಆತನನ್ನು ಕೇಳಿಕೊಳ್ಳಿರಿ. ಆದರೆ ಆತನು ನಿಮಗೆ ಕಿವಿಗೊಡುವುದಿಲ್ಲ. ನಿಮ್ಮ ತಪ್ಪು ದೋಷಗಳೇ ಅದಕ್ಕೆ ಕಾರಣ.” ಇದು ಸರ್ವಶಕ್ತನಾದ ಯೆಹೋವನ ನುಡಿ.
10 “ನಿಮ್ಮಲ್ಲಿ ಕೆಲವು ಯಾಜಕರು ಆಲಯದ ಬಾಗಿಲುಗಳನ್ನು ಮುಚ್ಚಿ ಬೆಂಕಿಯನ್ನು ಸರಿಯಾದ ರೀತಿಯಲ್ಲಿ ಹಚ್ಚುವರು. ಆದರೆ ನಾನು ನಿಮ್ಮನ್ನು ಮೆಚ್ಚುವದಿಲ್ಲ. ನಿಮ್ಮ ಕಾಣಿಕೆಗಳನ್ನು ಸ್ವೀಕರಿಸುವದಿಲ್ಲ” ಇದು ಸರ್ವಶಕ್ತನಾದ ಯೆಹೋವನ ನುಡಿ.
11 “ಭೂಲೋಕದ ಜನರೆಲ್ಲಾ ನನ್ನ ಹೆಸರನ್ನು ಗೌರವಿಸುತ್ತಾರೆ; ಒಳ್ಳೆಯ ಕಾಣಿಕೆಗಳನ್ನು ತಂದೊಪ್ಪಿಸುತ್ತಾರೆ, ಒಳ್ಳೆಯ ಧೂಪವನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ಯಾಕೆಂದರೆ ಅವರಿಗೆಲ್ಲಾ ನನ್ನ ನಾಮ ಮಹತ್ತರವಾದದ್ದು, ವಿಶೇಷವಾದದ್ದು.” ಇದು ಸರ್ವಶಕ್ತನಾದ ಯೆಹೋವನ ನುಡಿ.
12 “ಆದರೆ ನೀವು ನನ್ನ ನಾಮವನ್ನು ಘನಪಡಿಸುವದಿಲ್ಲ. ನನ್ನ ಮೇಜು ಅಶುದ್ಧವಾದದ್ದೆಂದು ನೀವು ಹೇಳುತ್ತೀರಿ. 13 ನೀವು ಆ ಮೇಜಿನಿಂದ ಆಹಾರವನ್ನು ತೆಗೆದುಕೊಳ್ಳುವದಿಲ್ಲ. ನೀವು ಆಹಾರವನ್ನು ಮೂಸಿನೋಡಿ ಅದನ್ನು ತಿನ್ನಲು ನಿರಾಕರಿಸುತ್ತೀರಿ. ಅದು ಚೆನ್ನಾಗಿಲ್ಲ ಎಂದು ಹೇಳುತ್ತೀರಿ. ಆದರೆ ಅದು ನಿಜವಲ್ಲ. ಆ ಮೇಲೆ, ನೀವು ರೋಗಪೀಡಿತವಾದ ಕುಂಟಾದ ಮತ್ತು ಕಳುವು ಮಾಡಿದ ಪಶುಗಳನ್ನು ನನಗರ್ಪಿಸುತ್ತೀರಿ. ಆದರೆ ಅಂಥಾ ಪಶುಗಳನ್ನು ನಿಮ್ಮಿಂದ ನಾನು ಸ್ವೀಕರಿಸುವದಿಲ್ಲ. 14 ನಿಮ್ಮಲ್ಲಿ ಕೆಲವರಲ್ಲಿ ಯಜ್ಞಕ್ಕೆ ಬೇಕಾಗಿರುವ ಒಳ್ಳೆಯ ಗಂಡು ಪಶುಗಳು ಇದ್ದಾಗ್ಯೂ ಅವರು ನನಗೆ ಅವುಗಳನ್ನು ಸಮರ್ಪಿಸುವದಿಲ್ಲ. ಕೆಲವರು ಕಳಂಕವಿಲ್ಲದ ಪಶುಗಳನ್ನು ನನಗೆ ತರುತ್ತಾರೆ. ಅವರು ಅಂಥಾ ಆರೋಗ್ಯಕರ ಪಶುಗಳನ್ನು ನನಗೆ ಸಮರ್ಪಿಸಲು ವಾಗ್ದಾನ ಮಾಡುವರು. ಆದರೆ ಗುಪ್ತವಾಗಿ ಅವರು ಆ ಪಶುವನ್ನು ಬದಲಿಸಿ ನನಗೆ ರೋಗಿಯಾದ ಪಶುಗಳನ್ನು ಕೊಡುತ್ತಾರೆ. ಅವರಿಗೆ ದುರ್ದೆಶೆ ಸಂಭವಿಸಲಿರುವದು. ನಾನು ದೊಡ್ಡ ಅರಸನು. ನೀವು ನನ್ನನ್ನು ಗೌರವಿಸಬೇಕು. ಭೂಲೋಕದ ಸರ್ವಜನರು ನನ್ನನ್ನು ಸನ್ಮಾನಿಸುವರು.” ಇವು ಸರ್ವಶಕ್ತನಾದ ಯೆಹೋವನ ನುಡಿಗಳು.
ಯೇಸುವಿನ ಬಂಧನ
(ಮತ್ತಾಯ 26:47-56; ಮಾರ್ಕ 14:43-50; ಲೂಕ 22:47-53)
18 ಯೇಸು ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರೊಂದಿಗೆ ಹೊರಟನು. ಅವರು ಕಿದ್ರೋನ್ ಕಣಿವೆಯನ್ನು ದಾಟಿಹೋದರು. ಅದರ ಮತ್ತೊಂದು ಕಡೆಯಲ್ಲಿ ಆಲಿವ್ ಮರಗಳ ತೋಟವಿತ್ತು. ಯೇಸು ಮತ್ತು ಆತನ ಶಿಷ್ಯರು ಅಲ್ಲಿಗೆ ಹೋದರು.
2 ಯೇಸುವಿಗೆ ದ್ರೋಹ ಬಗೆದ ಯೂದನಿಗೂ ಈ ಸ್ಥಳವು ತಿಳಿದಿತ್ತು. ಏಕೆಂದರೆ ಯೇಸು ತನ್ನ ಶಿಷ್ಯರೊಂದಿಗೆ ಆಗಾಗ್ಗೆ ಅಲ್ಲಿಗೆ ಬರುತ್ತಿದ್ದನು. 3 ಯೂದನು ಸೈನಿಕರ ಗುಂಪೊಂದನ್ನೂ ಮಹಾಯಾಜಕರ ಮತ್ತು ಫರಿಸಾಯರ ಕಾವಲುಗಾರರಲ್ಲಿ ಕೆಲವರನ್ನೂ ಕರೆದುಕೊಂಡು ತೋಟಕ್ಕೆ ಬಂದನು. ಅವರು ದೀವಟಿಗೆ, ಪಂಜು ಮತ್ತು ಆಯುಧಗಳಿಂದ ಸುಸಜ್ಜಿತರಾಗಿದ್ದರು.
4 ತನಗೆ ಸಂಭವಿಸಲಿದ್ದ ಪ್ರತಿಯೊಂದೂ ಯೇಸುವಿಗೆ ತಿಳಿದಿತ್ತು. ಆತನು ಹೊರಗೆ ಹೋಗಿ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದನು.
5 ಅವರು, “ನಜರೇತಿನ ಯೇಸುವನ್ನು” ಎಂದು ಉತ್ತರಕೊಟ್ಟರು.
ಆತನು, “ನಾನೇ ಯೇಸು” ಎಂದನು. (ಯೇಸುವಿಗೆ ದ್ರೋಹ ಬಗೆದ ಯೂದನು ಅವರೊಂದಿಗೆ ಅಲ್ಲೇ ನಿಂತಿದ್ದನು.) 6 ಆತನು, “ನಾನೇ ಯೇಸು” ಎಂದಾಗ ಅವರು ಹಿಂದೆ ಸರಿದು ನೆಲದ ಮೇಲೆ ಬಿದ್ದರು.
7 ಯೇಸು ಅವರಿಗೆ ಮತ್ತೆ “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದನು.
ಅವರು, “ನಜರೇತಿನ ಯೇಸುವನ್ನು” ಎಂದು ಹೇಳಿದರು.
8 ಆತನು, “ನಾನೇ ಯೇಸು ಎಂದು ನಿಮಗೆ ಹೇಳಿದೆನಲ್ಲಾ. ನೀವು ನನ್ನನ್ನು ಹುಡುಕುತ್ತಿದ್ದರೆ, ಉಳಿದ ಇವರನ್ನು ಹೋಗಬಿಡಿರಿ” ಎಂದು ಹೇಳಿದನು. 9 “ನೀನು ನನಗೆ ಕೊಟ್ಟ ಜನರಲ್ಲಿ ಯಾರನ್ನೂ ನಾನು ಕಳೆದುಕೊಳ್ಳಲಿಲ್ಲ” ಎಂದು ಯೇಸು ಮೊದಲು ಹೇಳಿದ್ದ ಮಾತು ಹೀಗೆ ನಿಜವಾಯಿತು.
10 ಸೀಮೋನ್ ಪೇತ್ರನ ಬಳಿ ಒಂದು ಖಡ್ಗವಿತ್ತು. ಅವನು ಆ ಖಡ್ಗವನ್ನು ಹೊರತೆಗೆದು ಪ್ರಧಾನ ಯಾಜಕನ ಸೇವಕನೊಬ್ಬನಿಗೆ ಹೊಡೆದು, ಅವನ ಬಲಗಿವಿಯನ್ನು ಕತ್ತರಿಸಿದನು. (ಆ ಸೇವಕನ ಹೆಸರು ಮಾಲ್ಕ.) 11 ಯೇಸು ಪೇತ್ರನಿಗೆ, “ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು! ತಂದೆಯು ನನಗೆ ಕೊಟ್ಟಿರುವ ಸಂಕಟದ ಪಾತ್ರೆಯನ್ನು ನಾನು ಸ್ವೀಕರಿಸಿಕೊಳ್ಳಬೇಕು” ಎಂದು ಹೇಳಿದನು.
ಅನ್ನನ ಮುಂದೆ ಯೇಸು
(ಮತ್ತಾಯ 26:57-58; ಮಾರ್ಕ 14:53-54; ಲೂಕ 22:54)
12 ಬಳಿಕ ಆ ಸೈನಿಕರು, ಅವರ ಸೇನಾಧಿಪತಿ ಹಾಗೂ ಯೆಹೂದ್ಯ ಕಾವಲುಗಾರರು ಯೇಸುವನ್ನು ಹಿಡಿದು ಕಟ್ಟಿ, ಅನ್ನನ ಬಳಿಗೆ ತಂದರು. 13 ಅನ್ನನು ಕಾಯಫನ ಮಾವ. ಆ ವರ್ಷ ಕಾಯಫನು ಪ್ರಧಾನಯಾಜಕನಾಗಿದ್ದನು. 14 ಎಲ್ಲಾ ಜನರಿಗಾಗಿ ಒಬ್ಬನು ಸಾಯುವುದೇ ಮೇಲು ಎಂಬ ಸಲಹೆಯನ್ನು ಕೊಟ್ಟಿದ್ದವನು ಇವನೇ.
ಪೇತ್ರನ ವಿಶ್ವಾಸದ್ರೋಹ
(ಮತ್ತಾಯ 26:69-70; ಮಾರ್ಕ 14:66-68; ಲೂಕ 22:55-57)
15 ಸೀಮೋನ್ ಪೇತ್ರ ಮತ್ತು ಯೇಸುವಿನ ಶಿಷ್ಯರಲ್ಲಿ ಮತ್ತೊಬ್ಬನು ಯೇಸುವಿನೊಂದಿಗೆ ಹೋದರು. ಆ ಮತ್ತೊಬ್ಬ ಶಿಷ್ಯನಿಗೆ ಪ್ರಧಾನಯಾಜಕನ ಪರಿಚಯವಿತ್ತು. ಆದ್ದರಿಂದ ಅವನು ಪ್ರಧಾನ ಯಾಜಕನ ಮನೆಯ ಅಂಗಳದೊಳಗೆ ಹೋದನು. 16 ಆದರೆ ಪೇತ್ರನು ಹೊರಗೆ ಬಾಗಿಲಿನ ಸಮೀಪದಲ್ಲಿ ಕಾದುಕೊಂಡಿದ್ದನು. ಪ್ರಧಾನಯಾಜಕನ ಪರಿಚಯವಿದ್ದ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಯೊಂದಿಗೆ ಮಾತಾಡಿ ಪೇತ್ರನನ್ನು ಒಳಗೆ ಕರೆದುಕೊಂಡು ಹೋದನು. 17 ದ್ವಾರಪಾಲಕಿಯು ಪೇತ್ರನಿಗೆ, “ಆ ಮನುಷ್ಯನ ಶಿಷ್ಯರಲ್ಲಿ ನೀನೂ ಒಬ್ಬನಲ್ಲವೇ?” ಎಂದು ಕೇಳಿದಳು.
ಪೇತ್ರನು, “ಇಲ್ಲ, ನಾನಲ್ಲ!” ಎಂದು ಉತ್ತರಕೊಟ್ಟನು.
18 ಆಗ ಚಳಿಯಿದ್ದುದರಿಂದ ಕಾವಲುಗಾರರು ಬೆಂಕಿ ಹಾಕಿ ಅದರ ಸುತ್ತಲೂ ನಿಂತುಕೊಂಡು ತಮ್ಮನ್ನು ಬೆಚ್ಚಗೆ ಮಾಡಿಕೊಳ್ಳುತ್ತಿದ್ದರು. ಪೇತ್ರನು ಅವರೊಂದಿಗೆ ನಿಂತುಕೊಂಡಿದ್ದನು.
ಪ್ರಧಾನಯಾಜಕನು ಮಾಡಿದ ವಿಚಾರಣೆ
(ಮತ್ತಾಯ 26:59-66; ಮಾರ್ಕ 14:55-64; ಲೂಕ 22:66-71)
19 ಪ್ರಧಾನಯಾಜಕನು ಯೇಸುವಿಗೆ ಆತನ ಶಿಷ್ಯರ ಬಗ್ಗೆಯೂ ಆತನು ಉಪದೇಶಿಸಿದ ಸಂಗತಿಗಳ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿದನು. 20 ಅದಕ್ಕೆ ಯೇಸು, “ನಾನು ಬಹಿರಂಗವಾಗಿ ಜನರೊಂದಿಗೆ ಮಾತಾಡಿದ್ದೇನೆ; ಯಾವಾಗಲೂ ಸಭಾಮಂದಿರಗಳಲ್ಲಿ ಮತ್ತು ದೇವಾಲಯದಲ್ಲಿ ಬೋಧಿಸಿದ್ದೇನೆ. ಯೆಹೂದ್ಯರೆಲ್ಲರೂ ಅಲ್ಲಿಗೆ ಒಟ್ಟಾಗಿ ಸೇರಿಬರುತ್ತಿದ್ದರು. ನಾನು ಯಾವುದನ್ನೂ ರಹಸ್ಯವಾಗಿ ಎಂದೂ ಹೇಳಿಲ್ಲ. 21 ಹೀಗಿರಲು, ನೀನು ನನ್ನನ್ನು ಪ್ರಶ್ನಿಸುವುದೇಕೆ? ನನ್ನ ಉಪದೇಶವನ್ನು ಕೇಳಿದ ಜನರನ್ನು ಕೇಳು. ನಾನು ಹೇಳಿದ್ದನ್ನು ಅವರು ಬಲ್ಲರು” ಎಂದು ಉತ್ತರಕೊಟ್ಟನು.
22 ಯೇಸು ಹೀಗೆ ಹೇಳಿದ ಕೂಡಲೇ, ಅಲ್ಲಿ ನಿಂತಿದ್ದ ಕಾವಲುಗಾರರಲ್ಲಿ ಒಬ್ಬನು ಯೇಸುವಿಗೆ ಹೊಡೆದು, “ನೀನು ಪ್ರಧಾನಯಾಜಕನೊಂದಿಗೆ ಆ ರೀತಿ ಮಾತಾಡಕೂಡದು” ಎಂದನು.
23 ಯೇಸು, “ನಾನು ತಪ್ಪಾಗಿ ಮಾತಾಡಿದ್ದರೆ, ನಾನು ಹೇಳಿದ್ದು ತಪ್ಪೆಂದು ಎಲ್ಲರಿಗೂ ತೋರಿಸಿಕೊಡು. ಆದರೆ ನಾನು ಹೇಳಿದ್ದು ಸರಿಯಾಗಿದ್ದರೆ ನೀನು ನನ್ನನ್ನು ಹೊಡೆಯುವುದೇಕೆ?” ಎಂದು ಉತ್ತರಕೊಟ್ಟನು.
24 ಆಗ ಅನ್ನನು ಯೇಸುವನ್ನು ಮತ್ತೆ ಕಟ್ಟಿಸಿ, ಪ್ರಧಾನಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.
ಮತ್ತೊಮ್ಮೆ ಪೇತ್ರನ ವಿಶ್ವಾಸದ್ರೋಹ
(ಮತ್ತಾಯ 26:71-75; ಮಾರ್ಕ 14:69-72; ಲೂಕ 22:58-62)
25 ಸೀಮೋನ್ ಪೇತ್ರನು ತನ್ನನ್ನು ಬೆಚ್ಚಗೆ ಮಾಡಿಕೊಳ್ಳುತ್ತಾ ಬೆಂಕಿಯ ಸಮೀಪದಲ್ಲಿ ನಿಂತುಕೊಂಡಿದ್ದನು. ಅಲ್ಲಿದ್ದವರು ಪೇತ್ರನಿಗೆ, “ಆ ಮನುಷ್ಯನ ಶಿಷ್ಯರಲ್ಲಿ ನೀನೂ ಒಬ್ಬನಲ್ಲವೇ?” ಎಂದು ಕೇಳಿದರು.
ಆದರೆ ಪೇತ್ರನು, “ಇಲ್ಲ, ನಾನಲ್ಲ!” ಎಂದು ಹೇಳಿದನು.
26 ಪ್ರಧಾನಯಾಜಕನ ಸೇವಕರಲ್ಲಿ ಒಬ್ಬನು ಪೇತ್ರನಿಂದ ಕಿವಿ ಕತ್ತರಿಸಿಹಾಕಲ್ಪಟ್ಟ ಸೇವಕನ ಸಂಬಂಧಿಕನಾಗಿದ್ದನು. ಆ ಸೇವಕನು, “ನೀನು ತೋಟದಲ್ಲಿ ಅವನೊಂದಿಗೆ (ಯೇಸುವಿನೊಂದಿಗೆ) ಇದ್ದುದನ್ನು ನಾನು ನೋಡಿದಂತಿದೆ!” ಎಂದು ಹೇಳಿದನು.
27 ಆದರೆ ಪೇತ್ರನು ಮತ್ತೆ, “ಇಲ್ಲ, ನಾನು ಆತನೊಂದಿಗೆ ಇರಲಿಲ್ಲ!” ಎಂದನು. ಆ ಕೂಡಲೇ ಕೋಳಿ ಕೂಗಿತು.
ಪಿಲಾತನ ಮುಂದೆ ಯೇಸು
(ಮತ್ತಾಯ 27:1-2,11-31; ಮಾರ್ಕ 15:1-20; ಲೂಕ 23:1-25)
28 ಬಳಿಕ ಯೆಹೂದ್ಯರು ಯೇಸುವನ್ನು ಕಾಯಫನ ಮನೆಯಿಂದ ರೋಮ್ ರಾಜ್ಯಪಾಲನ ಭವನಕ್ಕೆ ಕರೆದುಕೊಂಡು ಬಂದರು. ಆಗ ಮುಂಜಾನೆಯಾಗಿತ್ತು. ಯೆಹೂದ್ಯರು ಭವನದೊಳಗೆ ಹೋಗಲಿಲ್ಲ. ಅವರು ಪಸ್ಕಹಬ್ಬದ ಊಟಮಾಡ ಬೇಕೆಂದಿದ್ದ ಕಾರಣ ತಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಳ್ಳಲು ಇಷ್ಟಪಡಲಿಲ್ಲ. 29 ಆದ್ದರಿಂದ ಪಿಲಾತನು ಆ ಯೆಹೂದ್ಯರ ಬಳಿಗೆ ಬಂದು, “ಈ ಮನುಷ್ಯನ ಮೇಲೆ ನೀವು ಹೊರಿಸುತ್ತಿರುವ ಅಪರಾಧಗಳೇನು?” ಎಂದು ಕೇಳಿದನು.
30 ಯೆಹೂದ್ಯರು, “ಇವನು ಒಬ್ಬ ಕೆಟ್ಟ ಮನುಷ್ಯ. ಆದಕಾರಣ, ನಾವು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬಂದೆವು” ಎಂದು ಉತ್ತರಕೊಟ್ಟರು.
31 ಪಿಲಾತನು ಯೆಹೂದ್ಯರಿಗೆ, “ಯೆಹೂದ್ಯರಾದ ನೀವೇ ಇವನನ್ನು ಕರೆದುಕೊಂಡು ಹೋಗಿ ನಿಮ್ಮ ಧರ್ಮಶಾಸ್ತ್ರದ ಪ್ರಕಾರ ತೀರ್ಪುಮಾಡಿ” ಎಂದು ಹೇಳಿದನು.
ಯೆಹೂದ್ಯರು, “ಆದರೆ ಒಬ್ಬನಿಗೆ ಮರಣದಂಡನೆ ವಿಧಿಸಲು ನಿನ್ನ ಕಾನೂನು ನಮಗೆ ಅವಕಾಶ ಕೊಡುವುದಿಲ್ಲ” ಎಂದು ಉತ್ತರಕೊಟ್ಟರು. 32 (ತಾನು ಸಾಯುವ ರೀತಿಯ ಬಗ್ಗೆ ಯೇಸು ಹೇಳಿದ್ದ ಮಾತು ಹೀಗೆ ನಿಜವಾಯಿತು.)
33 ಬಳಿಕ ಪಿಲಾತನು, ಭವನದೊಳಗೆ ಹಿಂತಿರುಗಿ ಹೋಗಿ, ಯೇಸುವನ್ನು ಕರೆದು, “ನೀನು ಯೆಹೂದ್ಯರ ರಾಜನೋ?” ಎಂದು ಕೇಳಿದನು.
34 ಯೇಸು, “ಇದು ನಿನ್ನ ಪ್ರಶ್ನೆಯೋ? ಅಥವಾ ನನ್ನ ಬಗ್ಗೆ ಬೇರೆ ಜನರು ನಿನಗೆ ತಿಳಿಸಿದರೋ?” ಎಂದನು.
35 ಪಿಲಾತನು, “ನಾನು ಯೆಹೂದ್ಯನಲ್ಲ! ನಿನ್ನ ಸ್ವಂತ ಜನರು ಮತ್ತು ಅವರ ಮಹಾಯಾಜಕರು ನಿನ್ನನ್ನು ಕರೆದುಕೊಂಡು ಬಂದು ನನ್ನ ಮುಂದೆ ನಿಲ್ಲಿಸಿದ್ದಾರೆ. ನೀನು ಏನು ಮಾಡಿದೆ?” ಎಂದು ಕೇಳಿದನು.
36 ಯೇಸು, “ನನ್ನ ರಾಜ್ಯವು ಈ ಲೋಕಕ್ಕೆ ಸೇರಿದ್ದಲ್ಲ. ಅದು ಈ ಲೋಕಕ್ಕೆ ಸೇರಿದ್ದಾಗಿದ್ದರೆ, ಯೆಹೂದ್ಯರ ಕೈಗೆ ನಾನು ಸಿಗದಂತೆ ನನ್ನ ಸೇವಕರು ಹೋರಾಡುತ್ತಿದ್ದರು. ಆದರೆ ನನ್ನ ರಾಜ್ಯವು ಮತ್ತೊಂದು ಸ್ಥಳದ್ದು” ಎಂದನು.
37 ಪಿಲಾತನು, “ಹಾಗಾದರೆ ನೀನು ರಾಜ!” ಎಂದನು.
ಯೇಸು, “ನೀನೇ ನನ್ನನ್ನು ರಾಜನೆಂದು ಹೇಳುತ್ತಿರುವೆ. ಅದು ಸತ್ಯ. ನಾನು ಜನರಿಗೆ ಸತ್ಯದ ಬಗ್ಗೆ ಹೇಳುವುದಕ್ಕಾಗಿಯೇ ಹುಟ್ಟಿದೆನು. ಆದಕಾರಣವೇ ನಾನು ಈ ಲೋಕಕ್ಕೆ ಬಂದೆನು. ಸತ್ಯಕ್ಕೆ ಸೇರಿದ ಪ್ರತಿಯೊಬ್ಬನೂ ನನಗೆ ಕಿವಿಗೊಡುತ್ತಾನೆ” ಎಂದು ಉತ್ತರಕೊಟ್ಟನು.
38 ಪಿಲಾತನು, “ಸತ್ಯವೆಂದರೇನು?” ಎಂದು ಕೇಳಿ, ಮತ್ತೆ ಯೆಹೂದ್ಯರ ಬಳಿಗೆ ಹೊರಕ್ಕೆ ಬಂದನು. ಅವನು ಯೆಹೂದ್ಯರಿಗೆ, “ಈ ಮನುಷ್ಯನ ಮೇಲೆ ಅಪವಾದ ಹೊರಿಸಲು ನನಗೆ ಏನೂ ಕಾಣುತ್ತಿಲ್ಲ. 39 ಆದರೆ ಪಸ್ಕಹಬ್ಬದ ಕಾಲದಲ್ಲಿ ನಾನು ನಿಮಗೋಸ್ಕರ ಕೈದಿಗಳಲ್ಲಿ ಒಬ್ಬನನ್ನು ಬಿಡುಗಡೆ ಮಾಡುವುದು ನಿಮ್ಮ ಪದ್ಧತಿಯಾಗಿದೆ. ನಾನು ಯೆಹೂದ್ಯರ ರಾಜನನ್ನು ಬಿಡುಗಡೆ ಮಾಡಬೇಕೆಂದು ನೀವು ಬಯಸುತ್ತೀರಾ?” ಎಂದು ಕೇಳಿದನು.
40 ಯೆಹೂದ್ಯರು, “ಇಲ್ಲ, ಅವನನ್ನಲ್ಲ! ಬರಬ್ಬನಿಗೆ ಬಿಡುಗಡೆಯಾಗಲಿ!” ಎಂದು ಕೂಗಿದರು. (ಬರಬ್ಬನು ಒಬ್ಬ ದರೋಡೆಕೋರ.)
Kannada Holy Bible: Easy-to-Read Version. All rights reserved. © 1997 Bible League International