Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ಪೂರ್ವಕಾಲವೃತ್ತಾಂತ 28

ದೇವಾಲಯದ ನಕ್ಷೆ

28 ದಾವೀದನು ತನ್ನ ರಾಜ್ಯದಲ್ಲಿದ್ದ ಎಲ್ಲಾ ನಾಯಕರನ್ನು ಅಂದರೆ ಕುಲಪ್ರಧಾನರನ್ನು, ಪ್ರಧಾನಸೇನಾಧಿಪತಿಗಳನ್ನು, ಮಹಾಸೇನಾಧಿಪತಿಗಳನ್ನು ಮತ್ತು ಸೇನಾಧಿಪತಿಗಳನ್ನು, ರಾಜನಿಗೂ ಅವನ ಗಂಡುಮಕ್ಕಳಿಗೂ ಸೇರಿದ ಆಸ್ತಿಯನ್ನು ಮತ್ತು ಪಶುಗಳನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿಗಳನ್ನು; ರಾಜನ ಪ್ರಮುಖ ಅಧಿಕಾರಿಗಳನ್ನು; ಬಲಿಷ್ಠ ಯುದ್ಧವೀರರನ್ನು ಮತ್ತು ಧೈರ್ಯವಂತರಾದ ಸೈನಿಕರನ್ನು ಜೆರುಸಲೇಮಿಗೆ ಕರೆಸಿ ಸಭೆಸೇರಿಸಿದನು.

ಎಲ್ಲರೂ ಸೇರಿಬಂದಾಗ ದಾವೀದನು ನಿಂತು ಹೇಳಿದ್ದೇನೆಂದರೆ, “ನನ್ನ ಜನರೇ, ನನ್ನ ಸಹೋದರರೇ, ನನ್ನ ಮಾತುಗಳನ್ನು ಕೇಳಿರಿ. ನಮ್ಮ ದೇವರ ಒಡಂಬಡಿಕೆಯ ಪೆಟ್ಟಿಗೆಗೋಸ್ಕರ ಒಂದು ಯೋಗ್ಯಸ್ಥಳವನ್ನು ನಿರ್ಮಿಸಬೇಕೆಂದು ನನ್ನ ಮನಸ್ಸಿನಲ್ಲಿತ್ತು. ಆ ಸ್ಥಳವು ದೇವರ ಪಾದಪೀಠವಾಗಬೇಕು. ಅದಕ್ಕಾಗಿ ನಾನು ದೇವರಿಗೆ ಆಲಯವನ್ನು ಕಟ್ಟಿಸಲು ಯೋಜನೆಯನ್ನು ಹಾಕಿದೆನು. ಆದರೆ ದೇವರು ನನಗೆ, ‘ದಾವೀದನೇ, ನೀನು ನನ್ನ ಹೆಸರಿಗಾಗಿ ಆಲಯವನ್ನು ಕಟ್ಟಬಾರದು. ಯಾಕೆಂದರೆ ನೀನೊಬ್ಬ ರಣವೀರನಾಗಿದ್ದುದರಿಂದ ಎಷ್ಟೋ ಮಂದಿಯನ್ನು ಕೊಂದು ಅವರ ರಕ್ತಸುರಿಸಿರುವೆ’ ಎಂದು ಹೇಳಿದನು.

“ಇಸ್ರೇಲರ ದೇವರಾದ ಯೆಹೋವನು ಇಸ್ರೇಲರ ಹನ್ನೆರಡು ಕುಲಗಳನ್ನು ಮುನ್ನಡೆಸಲು ಯೆಹೂದ ಕುಲವನ್ನು ಆರಿಸಿಕೊಂಡಿದ್ದಾನೆ. ಆ ಕುಲದಿಂದ ದೇವರು ನನ್ನ ತಂದೆಯ ಕುಟುಂಬವನ್ನು ಆರಿಸಿದ್ದಾನೆ; ಆ ಕುಟುಂಬದಿಂದ ದೇವರು ಇಸ್ರೇಲರ ಅರಸನನ್ನಾಗಿ ನನ್ನನ್ನು ಆರಿಸಿಕೊಂಡಿದ್ದಾನೆ. ಯೆಹೋವನು ನನಗೆ ಅನೇಕ ಮಕ್ಕಳನ್ನು ಕೊಟ್ಟನು. ಆ ಮಕ್ಕಳಲ್ಲಿ ಯೆಹೋವನು ಸೊಲೊಮೋನನನ್ನು ನನ್ನ ನಂತರ ಇಸ್ರೇಲರ ಅರಸನನ್ನಾಗಿ ಆರಿಸಿಕೊಂಡಿದ್ದಾನೆ. ಆದರೆ ನಿಜವಾಗಿಯೂ, ಇಸ್ರೇಲ್, ದೇವರಾದ ಯೆಹೋವನ ರಾಜ್ಯವಾಗಿದೆ. ಯೆಹೋವನು ನನಗೆ, ‘ದಾವೀದನೇ, ನಿನ್ನ ಮಗನಾದ ಸೊಲೊಮೋನನು ದೇವಾಲಯವನ್ನು ಮತ್ತು ಅದರ ಸುತ್ತಮುತ್ತಲಿನ ಕಟ್ಟಡಗಳನ್ನು ಕಟ್ಟುವನು. ಯಾಕೆಂದರೆ ಸೊಲೊಮೋನನನ್ನು ನಾನು ಆರಿಸಿಕೊಂಡಿದ್ದೇನೆ. ಅವನು ನನಗೆ ಮಗನಾಗಿರುವನು; ನಾನು ಅವನಿಗೆ ತಂದೆಯಾಗಿರುವೆನು. ಸೊಲೊಮೋನನು ನನ್ನ ಕಟ್ಟಳೆಗಳಿಗೆ ಮತ್ತು ಆಜ್ಞೆಗಳಿಗೆ ವಿಧೇಯನಾಗಿದ್ದಾನೆ. ಅವನು ಹೀಗೆಯೇ ಮುಂದುವರಿದರೆ ನಾನು ಅವನ ರಾಜ್ಯವನ್ನು ಶಾಶ್ವತವಾಗಿ ಬಲಗೊಳಿಸುವೆನು’” ಎಂದು ಹೇಳಿದನು.

“ನಾನು ದೇವರ ಸನ್ನಿಧಾನದಲ್ಲಿಯೂ ಎಲ್ಲಾ ಇಸ್ರೇಲರ ಮುಂದೆಯೂ ನಿಮಗಿದನ್ನು ಹೇಳುತ್ತಿದ್ದೇನೆ. ನಿಮ್ಮ ದೇವರಾದ ಯೆಹೋವನ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗಿರಿ. ಆಗ ನೀವು ಉತ್ತಮವಾದ ಈ ದೇಶವನ್ನು ಅನುಭವಿಸುವಿರಿ; ನಿಮ್ಮ ಸಂತತಿಯವರೂ ಇದರ ಸುಖವನ್ನು ಅನುಭವಿಸುವಂತೆ ಮಾಡುವಿರಿ.

“ನನ್ನ ಮಗನಾದ ಸೊಲೊಮೋನನೇ, ನಿನ್ನ ತಂದೆಯ ದೇವರನ್ನು ನೀನು ಚೆನ್ನಾಗಿ ಅರಿತುಕೋ. ನೀನು ಪೂರ್ಣಹೃದಯದಿಂದಲೂ ಪೂರ್ಣಮನಸ್ಸಿನಿಂದಲೂ ನಿನ್ನ ದೇವರನ್ನು ಸೇವಿಸು. ದೇವರು ಪ್ರತಿಯೊಬ್ಬನ ಹೃದಯ ಮನಸ್ಸುಗಳನ್ನು ನೋಡುತ್ತಾನೆ. ನೀನು ದೇವರ ಸಹಾಯವನ್ನು ಕೇಳಿದರೆ ಆತನು ನಿನ್ನ ಪ್ರಾರ್ಥನೆಯನ್ನು ಲಾಲಿಸುವನು. ಆದರೆ ನೀನು ದೇವರನ್ನು ಬಿಟ್ಟರೆ ಆತನು ನಿನ್ನನ್ನು ಬಿಟ್ಟುಹೋಗುವನು. 10 ಸೊಲೊಮೋನನೇ, ಆತನ ಪವಿತ್ರ ದೇವಾಲಯವನ್ನು ಕಟ್ಟಲು ದೇವರು ನಿನ್ನನ್ನು ಆರಿಸಿಕೊಂಡಿರುತ್ತಾನೆಂಬುದನ್ನು ನೀನು ತಿಳಿಯಬೇಕು. ಆದ್ದರಿಂದ ನೀನು ಬಲಗೊಂಡು ಕಾರ್ಯವನ್ನು ಸಂಪೂರ್ಣಗೊಳಿಸು.”

11 ಆ ಬಳಿಕ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ದೇವಾಲಯದ ನಕ್ಷೆಯನ್ನು ಕೊಟ್ಟನು. ದೇವಾಲಯ ಮತ್ತು ಅದರ ಮಂಟಪ, ಉಗ್ರಾಣದ ಕೋಣೆಗಳು, ಮೇಲುಪ್ಪರಿಗೆ, ಒಳಗಿನ ಕೋಣೆಗಳು ಮತ್ತು ಕೃಪಾಸನದ ಮಂದಿರದ ನಕ್ಷೆಗಳನ್ನು ಕೊಟ್ಟನು. 12 ದೇವಾಲಯದ ಪ್ರತಿಯೊಂದು ಭಾಗದ ನಕ್ಷೆಯನ್ನು ದಾವೀದನು ತಯಾರಿಸಿದ್ದನು. ದೇವಾಲಯದ ಸುತ್ತಣ ಅಂಗಳಗಳ ನಕ್ಷೆ ಮತ್ತು ಸುತ್ತಲೂ ಇರುವ ಕೋಣೆಗಳ ನಕ್ಷೆಯನ್ನು ದೇವಾಲಯದ ಪವಿತ್ರ ವಸ್ತುಗಳನ್ನು ಇಡುವ ಕೋಣೆಗಳ ಯೋಜನೆಯನ್ನು ಮತ್ತು ನಕ್ಷೆಗಳನ್ನು ಸೊಲೊಮೋನನಿಗೆ ಕೊಟ್ಟನು. 13 ದಾವೀದನು ಸೊಲೊಮೋನನಿಗೆ ಲೇವಿಯರ ಮತ್ತು ಯಾಜಕರ ತಂಡದ ವಿಷಯವಾಗಿ ತಿಳಿಸಿದನು. ದೇವಾಲಯದ ಆರಾಧನಾ ಕ್ರಮಗಳನ್ನು ಅದಕ್ಕೆ ಸಂಬಂಧಪಟ್ಟ ವಿವಿಧ ವಿಷಯಗಳನ್ನು ಸೊಲೊಮೋನನಿಗೆ ದಾವೀದನು ವಿವರಿಸಿದನು. 14 ದೇವಾಲಯದಲ್ಲಿ ಎಲ್ಲಾ ಸಲಕರಣೆಗಳಿಗೆ ಎಷ್ಟು ಬೆಳ್ಳಿಬಂಗಾರಗಳು ಬೇಕಾಗುತ್ತವೆ ಎಂಬುದನ್ನು ದಾವೀದನು ಸೊಲೊಮೋನನಿಗೆ ತಿಳಿಸಿದನು. 15 ಬಂಗಾರದ ದೀಪಗಳಿಗೆ ಮತ್ತು ದೀಪಸ್ತಂಭಗಳಿಗೆ, ಬೆಳ್ಳಿಯ ದೀಪಗಳಿಗೆ ಮತ್ತು ದೀಪಸ್ತಂಭಗಳಿಗೆ ನಕ್ಷೆಗಳಿದ್ದವು. ಪ್ರತಿಯೊಂದು ದೀಪ ಮತ್ತು ದೀಪಸ್ತಂಭಗಳಿಗೆ ಬೇಕಾಗುವ ಬೆಳ್ಳಿಬಂಗಾರಗಳನ್ನು ಸಹ ದಾವೀದನು ಸೊಲೊಮೋನನಿಗೆ ತಿಳಿಸಿದನು. ಅವಶ್ಯಕತೆಗೆ ತಕ್ಕಂತೆ ಈ ದೀಪಸ್ತಂಭಗಳನ್ನು ಉಪಯೋಗಿಸಲಾಗುತ್ತಿತ್ತು. 16 ಪವಿತ್ರವಾದ ರೊಟ್ಟಿಯನ್ನು ಇಡುವ ಮೇಜನ್ನು ತಯಾರಿಸಲು ಎಷ್ಟು ಬಂಗಾರ ಬೇಕಾಗುತ್ತದೆ ಮತ್ತು ಬೆಳ್ಳಿಯಿಂದ ಮಾಡುವ ಮೇಜಿಗೆ ಎಷ್ಟು ಬೆಳ್ಳಿ ಬೇಕಾಗುತ್ತದೆ ಎಂಬುದನ್ನು ಸಹ ದಾವೀದನು ತಿಳಿಸಿದನು. 17 ಮುಳ್ಳುಚಮಚ, ಚಿಮಿಕಿಸುವ ಬೋಗುಣಿ ಮತ್ತು ಹೂಜೆಗಳಿಗೆ ಬೇಕಾಗುವ ಚೊಕ್ಕ ಬಂಗಾರವನ್ನು ದಾವೀದನು ತಿಳಿಸಿದನು; ಅಲ್ಲದೆ ಬೆಳ್ಳಿಬಂಗಾರಗಳಿಂದ ಮಾಡಬೇಕಾದ ಬೋಗುಣಿಗಳಿಗೆ ಎಷ್ಟು ಬೆಳ್ಳಿಬಂಗಾರಗಳು ಬೇಕಾಗುತ್ತದೆ ಎಂಬುದನ್ನು ತಿಳಿಸಿದನು. 18 ಧೂಪವೇದಿಗೆ ಎಷ್ಟು ಅಪ್ಪಟ ಬಂಗಾರ ಬೇಕೆಂಬುದನ್ನು ದಾವೀದನು ತಿಳಿಸಿದನು. ಇದಲ್ಲದೆ ದೇವರ ಕೃಪಾಸನವನ್ನು ಮತ್ತು ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯ ಮೇಲೆ ರೆಕ್ಕೆಗಳನ್ನು ಚಾಚಿಕೊಂಡಿರುವ ಕೆರೂಬಿದೂತರನ್ನು ತಯಾರಿಸಲು ನಕ್ಷೆಗಳನ್ನು ದಾವೀದನು ಸೊಲೊಮೋನನಿಗೆ ಕೊಟ್ಟನು. ಕೆರೂಬಿದೂತರನ್ನು ಚಿನ್ನದಿಂದ ಮಾಡಲಾಗಿತ್ತು.

19 ಆಮೇಲೆ ದಾವೀದನು, “ನಕ್ಷೆಗಳನ್ನೆಲ್ಲ ಮಾಡಲು ಯೆಹೋವನೇ ನನ್ನನ್ನು ನಡಿಸಿ ಮಾರ್ಗದರ್ಶನ ಕೊಟ್ಟನು. ಈ ನಕ್ಷೆಗಳಲ್ಲಿರುವ ಸಕಲ ವಿಷಯಗಳನ್ನು ನಾನು ಅರಿತುಕೊಳ್ಳುವಂತೆ ಸಹಾಯ ಮಾಡಿದನು” ಎಂದು ಹೇಳಿದನು.

20 ದಾವೀದನು ತನ್ನ ಮಗನಾದ ಸೊಲೊಮೋನನಿಗೆ, “ಧೈರ್ಯವಾಗಿದ್ದು ಬಲಗೊಳ್ಳು ಮತ್ತು ಈ ಕಾರ್ಯವನ್ನು ಮಾಡಿ ಮುಗಿಸು. ನನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುವದರಿಂದ ನೀನು ಭಯಪಡುವ ಕಾರಣವೇ ಇಲ್ಲ. ಆತನು ನಿನ್ನೊಂದಿಗಿದ್ದು ಆಲಯವನ್ನು ಸಂಪೂರ್ಣ ಮಾಡುವಂತೆ ನಿನ್ನನ್ನು ನಡೆಸುತ್ತಾನೆ. ನೀನು ಯೆಹೋವನ ಆಲಯವನ್ನು ಕಟ್ಟುವೆ. 21 ನೇಮಿಸಲ್ಪಟ್ಟ ಯಾಜಕರ ಮತ್ತು ಲೇವಿಯರ ತಂಡಗಳು ದೇವಾಲಯದ ಸೇವೆಗಾಗಿ ಸಿದ್ಧರಾಗಿದ್ದಾರೆ; ಅನುಭವಸ್ಥರಾದ ಕಾರ್ಮಿಕರು ದೇವಾಲಯದ ಕೆಲಸಕ್ಕಾಗಿ ಸಿದ್ಧರಾಗಿದ್ದಾರೆ. ಕೆಲಸದ ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು ನಿನ್ನ ಆಜ್ಞೆಯನ್ನು ಪರಿಪಾಲಿಸಲು ಸಿದ್ಧರಾಗಿದ್ದಾರೆ” ಎಂದು ದಾವೀದನು ಸೊಲೊಮೋನನಿಗೆ ಹೇಳಿದನು.

2 ಪೇತ್ರನು 2

ಸುಳ್ಳುಬೋಧಕರು

ಹಿಂದಿನ ಕಾಲದಲ್ಲಿ, ದೇವಜನರಲ್ಲಿ ಸುಳ್ಳುಪ್ರವಾದಿಗಳಿದ್ದರು. ಈಗಲೂ ಇದ್ದಾರೆ. ನಿಮ್ಮಲ್ಲಿಯೂ ಸಹ ಕೆಲವು ಸುಳ್ಳುಪ್ರವಾದಿಗಳಿರುತ್ತಾರೆ. ಜನರನ್ನು ನಾಶನಕ್ಕೆ ನಡೆಸುವ ಸುಳ್ಳುಬೋಧನೆಗಳನ್ನು ಅವರು ಬೋಧಿಸುತ್ತಾರೆ. ತಾವು ಸುಳ್ಳುಬೋಧಕರೆಂಬುದು ನಿಮಗೆ ಸುಲಭವಾಗಿ ತಿಳಿಯದ ರೀತಿಯಲ್ಲಿ ಅವರು ಬೋಧಿಸುತ್ತಾರೆ. ಅವರು ತಮಗೆ ಬಿಡುಗಡೆ ತಂದುಕೊಟ್ಟ ಒಡೆಯನನ್ನೇ (ಯೇಸು) ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ಅವರು ಬಹುಬೇಗನೆ ತಮ್ಮನ್ನು ತಾವೇ ನಾಶಪಡಿಸಿಕೊಳ್ಳುತ್ತಾರೆ. ಅವರು ಮಾಡುವ ಕೆಟ್ಟಕಾರ್ಯಗಳನ್ನು ಅನೇಕ ಜನರು ಅನುಸರಿಸುತ್ತಾರೆ. ಆ ಜನರ ದೆಸೆಯಿಂದ ಸತ್ಯಮಾರ್ಗದ ಕುರಿತಾಗಿ ಇತರರು ಕೆಟ್ಟಮಾತುಗಳನ್ನು ಆಡುತ್ತಾರೆ. ಆ ಸುಳ್ಳುಬೋಧಕರಿಗೆ ಬೇಕಾಗಿರುವುದು ಕೇವಲ ನಿಮ್ಮ ಹಣವಷ್ಟೆ. ಆದ್ದರಿಂದ ಅವರು ನಿಜವಲ್ಲದ ಸಂಗತಿಗಳನ್ನು ನಿಮಗೆ ಹೇಳಿ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ಆದರೆ ಬಹಳ ಹಿಂದಿನಿಂದಲೇ ಆ ಸುಳ್ಳುಬೋಧಕರ ವಿರುದ್ಧವಾದ ತೀರ್ಪು ಸಿದ್ಧವಾಗಿದೆ. ಅವರನ್ನು ನಾಶಪಡಿಸುವಾತನಿಂದ (ದೇವರಿಂದ) ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ದೇವದೂತರು ಪಾಪಗಳನ್ನು ಮಾಡಿದಾಗ, ದೇವರು ಅವರನ್ನು ದಂಡಿಸದೆ ಬಿಡಲಿಲ್ಲ. ಆತನು ಅವರನ್ನು ನರಕಕ್ಕೆ ದಬ್ಬಿದನು. ಕತ್ತಲೆಯ ಗುಂಡಿಗಳಿಗೆ ಹಾಕಿದನು. ಅವರಿಗೆ ನ್ಯಾಯತೀರ್ಪಾಗುವವರೆಗೂ ಅವರು ಅಲ್ಲಿಯೇ ಇರುವರು.

ಬಹಳ ಹಿಂದೆ ಬದುಕಿದ್ದ ಕೆಟ್ಟ ಜನರನ್ನು ದೇವರು ದಂಡಿಸಿದನು. ಈ ಲೋಕದಲ್ಲಿ ತನಗೆ ವಿರುದ್ಧವಾದ ಜನರು ತುಂಬಿಕೊಂಡಿದ್ದಾಗ ಆತನು ಜಲಪ್ರಳಯವನ್ನು ಬರಮಾಡಿ ದನು. ಆದರೆ ನೋಹನನ್ನೂ ಅವನೊಂದಿಗಿದ್ದ ಏಳು ಮಂದಿಯನ್ನೂ ರಕ್ಷಿಸಿದನು. ಯೋಗ್ಯರಾಗಿ ಜೀವಿಸಬೇಕೆಂದು ಆ ಜನರಿಗೆ ತಿಳಿಸಿದವನೇ ನೋಹ.

ದೇವರು ಸೊದೋಮ್, ಗೊಮೋರ ಎಂಬ ಕೆಟ್ಟ ಪಟ್ಟಣಗಳನ್ನು ದಂಡಿಸಿದನು. ಆತನು ಆ ಪಟ್ಟಣಗಳಲ್ಲಿ ಏನೂ ಉಳಿಯದಂತೆ, ಸುಟ್ಟು ಬೂದಿಮಾಡಿದನು. ತನಗೆ ವಿರುದ್ಧವಾಗಿರುವ ಜನರಿಗೆ ಏನಾಗುತ್ತದೆ ಎಂಬುದಕ್ಕೆ ಆತನು ಆ ಪಟ್ಟಣಗಳನ್ನು ನಿದರ್ಶನಗಳನ್ನಾಗಿ ಇಟ್ಟಿದ್ದಾನೆ. ಆದರೆ ದೇವರು ಆ ಪಟ್ಟಣಗಳಿಂದ ಲೋಟನನ್ನು ರಕ್ಷಿಸಿದನು. ಲೋಟನು ನೀತಿವಂತನಾಗಿದ್ದನು. ದುಷ್ಟ ಜನರ ಕೆಟ್ಟ ನಡತೆಯಿಂದ ಅವನು ದುಃಖಗೊಂಡಿದ್ದನು. (ಲೋಟನು ನೀತಿವಂತನಾಗಿದ್ದನು. ಆದರೆ ಅವನು ಪ್ರತಿದಿನವೂ ಆ ದುಷ್ಟಜನರ ಮಧ್ಯೆ ಜೀವಿಸುತ್ತಿದ್ದನು. ಕೆಟ್ಟಕಾರ್ಯಗಳನ್ನು ನೋಡಿ ಮತ್ತು ಕೇಳಿ ಅವನ ಒಳ್ಳೆಯ ಹೃದಯವು ವೇದನೆಗೆ ಒಳಗಾಗಿತ್ತು.)

ಹೌದು, ಪ್ರಭುವಾದ ದೇವರು ತನ್ನ ಭಕ್ತರನ್ನು ತೊಂದರೆಗಳಿಂದ ಯಾವಾಗಲೂ ರಕ್ಷಿಸುತ್ತಾನೆ. ಆತನು ದುಷ್ಟಜನರನ್ನು ನ್ಯಾಯತೀರ್ಪಿನ ದಿನ ಬರುವತನಕ ದಂಡಿಸುತ್ತಾನೆ. 10 ಪ್ರಭುವಿನ ಅಧಿಕಾರವನ್ನು ದ್ವೇಷಿಸುವ ಜನರನ್ನು ಮತ್ತು ತಮ್ಮ ಪಾಪಸ್ವಭಾವದ ಇಚ್ಚೆಗನುಸಾರವಾಗಿ ಕೆಟ್ಟಕಾರ್ಯಗಳನ್ನು ಮಾಡುವ ಜನರನ್ನು ದೇವರು ಹೀಗೆ ದಂಡಿಸುತ್ತಾನೆ.

ಈ ಸುಳ್ಳುಬೋಧಕರು ತಮಗೆ ಬೇಕಾದದ್ದನ್ನೆಲ್ಲಾ ಮಾಡುತ್ತಾರೆ ಮತ್ತು ತಮ್ಮ ಬಗ್ಗೆ ಹೊಗಳಿಕೊಳ್ಳುತ್ತಾರೆ. ಪ್ರಭಾವದಿಂದ ಕೂಡಿರುವ ದೇವದೂತರ ಬಗ್ಗೆ ಕೆಟ್ಟದ್ದನ್ನು ಹೇಳಲು ಅವರು ಹೆದರುವುದಿಲ್ಲ. 11 ದೇವದೂತರು ಈ ಸುಳ್ಳುಬೋಧಕರಿಗಿಂತ ಹೆಚ್ಚು ಬಲಿಷ್ಠರಾಗಿದ್ದಾರೆ ಮತ್ತು ಹೆಚ್ಚು ಶಕ್ತಿಯುಳ್ಳವರಾಗಿದ್ದಾರೆ. ಆದರೂ ದೇವದೂತರು ಸುಳ್ಳುಬೋಧಕರನ್ನು ಪ್ರಭುವಿನ ಸನ್ನಿಧಿಯಲ್ಲಿ ದೂಷಿಸುವುದಿಲ್ಲ.

12 ಆದರೆ ಈ ಸುಳ್ಳುಬೋಧಕರು ತಮಗೆ ಅರ್ಥವಾಗದ ಸಂಗತಿಗಳ ವಿರುದ್ಧ ಕೆಟ್ಟದ್ದನ್ನು ಮಾತಾಡುತ್ತಾರೆ. ಅವರು ವಿವೇಚಿಸದೆ ಕಾರ್ಯ ಮಾಡುವ ಪ್ರಾಣಿಗಳಂತಿದ್ದಾರೆ. ಹಿಡಿಯಲ್ಪಟ್ಟು ಕೊಲ್ಲಲ್ಪಡುವುದಕ್ಕಾಗಿಯೇ ಹುಟ್ಟಿರುವ ಕ್ರೂರಪ್ರಾಣಿಗಳಂತೆ ಅವರು ನಾಶವಾಗುವರು. 13 ಅವರಿಂದ ಅನೇಕ ಜನರು ಸಂಕಟಕ್ಕೆ ಒಳಗಾಗುವರು. ಅವರು ಮಾಡಿದ್ದಕ್ಕೆ ಅದೇ ಪ್ರತಿಫಲವಾಗಿರುವುದು. ಈ ಸುಳ್ಳುಬೋಧಕರು ಜನರೆಲ್ಲರ ಎದುರಿನಲ್ಲಿ ಕೆಟ್ಟದ್ದನ್ನು ಮಾಡಲು ಸಂತೋಷಿಸುತ್ತಾರೆ.

ತಮ್ಮನ್ನು ಸಂತಸಗೊಳಿಸುವ ಕೆಟ್ಟಕಾರ್ಯಗಳಿಂದ ಅವರು ಆನಂದಿಸುತ್ತಾರೆ. ಅವರು ನಿಮ್ಮ ಮಧ್ಯದಲ್ಲಿ ಕೊಳಕಾದ ಕಲೆಗಳಂತಿದ್ದಾರೆ. ನೀವು ಒಟ್ಟಾಗಿ ಊಟ ಮಾಡುವಾಗ ಅವರು ನಿಮಗೆ ಅಪಮಾನಕರವಾಗಿದ್ದಾರೆ. 14 ಅವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರಾಗಿದ್ದಾರೆ. ಅವರು ದುರ್ಬಲರನ್ನು ಪಾಪವೆಂಬ ಉರುಲಿನಲ್ಲಿ ಬೀಳಿಸುತ್ತಾರೆ. ಅವರು ತಮ್ಮ ಹೃದಯಗಳಿಗೆ ಸ್ವಾರ್ಥವನ್ನೇ ಕಲಿಸಿದ್ದಾರೆ. ಅವರು ಶಾಪಗ್ರಸ್ತರಾಗಿದ್ದಾರೆ.

15 ಈ ಸುಳ್ಳುಬೋಧಕರು ಸರಿಯಾದ ಮಾರ್ಗವನ್ನು ತೊರೆದು, ಕೆಟ್ಟಮಾರ್ಗವನ್ನು ಅನುಸರಿಸಿದ್ದಾರೆ. ಬಿಳಾಮನು ಬೆಯೋರನ ಮಗ. ಅವನು ಅಧರ್ಮದಿಂದ ದೊರೆಯುವ ಲಾಭವನ್ನು ಪ್ರೀತಿಸಿದನು. 16 ಆದರೆ ಅವನು ಮಾಡುತ್ತಿರುವುದು ತಪ್ಪೆಂದು ಒಂದು ಹೇಸರಕತ್ತೆಯು ಅವನಿಗೆ ತಿಳಿಸಿತು. ಅದು ಒಂದು ಮೂಕಪ್ರಾಣಿ. ಆದರೆ ಅದು ಮಾನವನಂತೆ ಮಾತಾಡಿ ಆ ಪ್ರವಾದಿಯ ಹುಚ್ಚುತನಕ್ಕೆ ಅಡ್ಡಿ ಮಾಡಿತು.

17 ಈ ಸುಳ್ಳುಬೋಧಕರು ನೀರಿಲ್ಲದ ಒರತೆಗಳಂತಿದ್ದಾರೆ. ಅವರು ಬಿರುಗಾಳಿಯಿಂದ ಬಡಿದುಕೊಂಡು ಹೋಗುವ ಮೋಡಗಳಂತಿದ್ದಾರೆ. ಅವರಿಗಾಗಿ ಒಂದು ಕಗ್ಗತ್ತಲಾದ ಸ್ಥಳವನ್ನು ಕಾದಿರಿಸಲಾಗಿದೆ. 18 ಅವರು ಅರ್ಥವಿಲ್ಲದ ಮಾತು ಗಳಿಂದ ಬಡಾಯಿಕೊಚ್ಚಿಕೊಳ್ಳುತ್ತಾರೆ; ಜನರನ್ನು ಪಾಪಗಳ ಬಲೆಗೆ ನಡೆಸುತ್ತಿದ್ದಾರೆ. ತಪ್ಪುಮಾರ್ಗದಲ್ಲಿ ನಡೆಯುವ ಜನರ ಸಹವಾಸದಿಂದ ಹೊಸದಾಗಿ ತಪ್ಪಿಸಿಕೊಂಡು ಬಂದ ಜನರನ್ನು ದಾರಿತಪ್ಪಿಸುತ್ತಾರೆ. ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಮಾಡಲು ಇಚ್ಛಿಸುವ ಕೆಟ್ಟಕಾರ್ಯಗಳನ್ನು ಬಳಸಿಕೊಂಡು ಈ ಸುಳ್ಳುಬೋಧಕರು ಅವರನ್ನು ದಾರಿ ತಪ್ಪಿಸುತ್ತಾರೆ. 19 ಈ ಸುಳ್ಳುಬೋಧಕರು ಆ ಜನರಿಗೆ ಸ್ವಾತಂತ್ರ್ಯವನ್ನು ಕೊಡುವುದಾಗಿ ವಾಗ್ದಾನ ಮಾಡುತ್ತಾರೆ. ಆದರೆ ಈ ಸುಳ್ಳುಬೋಧಕರೇ ಸ್ವತಂತ್ರರಾಗದೆ ನಾಶವಾಗುವಂಥ ಸಂಗತಿಗಳಿಗೆ ಗುಲಾಮರಾಗಿದ್ದಾರೆ. ಒಬ್ಬನು ಯಾವುದಕ್ಕೆ ಸೋತುಹೋಗಿದ್ದಾನೋ ಅದಕ್ಕೆ ಗುಲಾಮನಾಗಿದ್ದಾನೆ.

20 ಈ ಲೋಕದಲ್ಲಿನ ಕೆಟ್ಟಕಾರ್ಯಗಳಿಂದ ಆ ಜನರನ್ನು ಪಾರುಮಾಡಲಾಯಿತು. ನಮ್ಮ ಪ್ರಭುವಾದ ಮತ್ತು ರಕ್ಷಕನಾದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದರ ಮೂಲಕ ಅವರಿಗೆ ಬಿಡುಗಡೆಯಾಯಿತು. ಆದರೆ ಆ ಜನರು ತಮ್ಮ ಹಿಂದಿನ ಸಂಗತಿಗಳ ಕಡೆಗೆ ಹಿಂದಿರುಗಿಹೋದರೆ ಮತ್ತು ಅವುಗಳು ಅವರನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದರೆ ಅವರು ಮೊದಲಿಗಿಂತಲೂ ಹೆಚ್ಚು ಕೆಟ್ಟುಹೋಗುತ್ತಾರೆ. 21 ಹೌದು, ಆ ಜನರು ಸರಿಯಾದ ಮಾರ್ಗವನ್ನು ತಿಳಿಯದೆ ಹೋಗಿದ್ದರೇ ಒಳ್ಳೆಯದಾಗುತ್ತಿತ್ತು. ಸರಿಯಾದ ಮಾರ್ಗವನ್ನು ಅರಿತುಕೊಂಡು, ಪವಿತ್ರ ಬೋಧನೆಗಳಿಗೆ ವಿಮುಖರಾಗುವುದಕ್ಕಿಂತ ಅದನ್ನು ತಿಳಿದುಕೊಳ್ಳದಿದ್ದರೇ ಚೆನ್ನಾಗಿರುತ್ತಿತ್ತು. 22 ನಿಜವಾಗಿ ಈ ಗಾದೆಗಳಂತೆಯೇ ಅವರು ಮಾಡಿದರು: “ನಾಯಿಯು ತಾನು ಕಕ್ಕಿದ್ದನ್ನೇ ನೆಕ್ಕಲು ತಿರುಗಿಕೊಂಡಿತು”(A) ಮತ್ತು “ತೊಳೆದ ಹಂದಿಯು ಕೆಸರಿನಲ್ಲಿ ಹೊರಳಾಡಲು ಹೋಯಿತು.”

ಮೀಕ 5

ಬಲಶಾಲಿಯಾದ ನಗರಿಯೇ, ನಿನ್ನ ಸೈನಿಕರನ್ನು ಕೂಡಿಸು.
    ಅವರು ನಮ್ಮ ಮೇಲೆ ದಾಳಿಮಾಡಲು ಸುತ್ತುವರಿದಿದ್ದಾರೆ.
ಇಸ್ರೇಲಿನ ನ್ಯಾಯಾಧೀಶನ ಕೆನ್ನೆಯ ಮೇಲೆ
    ಕೋಲಿನಿಂದ ಹೊಡೆಯುವರು.

ಬೆತ್ಲೆಹೇಮಿನಲ್ಲಿ ಮೆಸ್ಸೀಯನು ಜನಿಸುವನು

ಎಫ್ರಾತದ ಬೆತ್ಲೆಹೇಮೇ,
    ನೀನು ಯೆಹೂದದ ಪ್ರಾಂತ್ಯದಲ್ಲಿ ಅತಿ ಚಿಕ್ಕ ಊರು ಆಗಿರುವೆ.
ನಿನ್ನಲ್ಲಿರುವ ಕುಟುಂಬಗಳು ಸ್ವಲ್ಪ ಮಾತ್ರವೇ.
    ಆದರೆ ಇಸ್ರೇಲನ್ನು ಆಳುವವನು ನನಗೋಸ್ಕರವಾಗಿ ನಿನ್ನಿಂದ ಹೊರಡುವನು.
ಆತನ ಪ್ರಾರಂಭವು ಅನಾದಿ ಕಾಲದಿಂದಲೇ ಆಗಿದೆ.
ಸ್ತ್ರೀಯು ತನ್ನ ಮಗನನ್ನು ಹೆರುವ ತನಕ
    ಯೆಹೋವನು ತನ್ನ ಜನರನ್ನು ತೊರೆದುಬಿಡುವನು.
ಅನಂತರ ಉಳಿದ ಅವನ ಸಹೋದರರು
    ಇಸ್ರೇಲ್ ಜನರ ಬಳಿಗೆ ತಿರುಗಿ ಬರುವರು.
ಆಗ ಇಸ್ರೇಲರನ್ನು ಆಳುವಾತನು ಯೆಹೋವನ ಶಕ್ತಿಯಲ್ಲಿಯೂ
    ತನ್ನ ದೇವರಾದ ಯೆಹೋವನ ಹೆಸರಿನಲ್ಲಿಯೂ ನಿಂತು ತನ್ನ ಮಂದೆಗೆ ಆಹಾರವನ್ನೀಯುವನು.
ಆತನ ಮಹತ್ತು ಭೂಮಿಯ ಕಟ್ಟಕಡೆಗೆ ಪ್ರಸರಿಸುವದರಿಂದ
    ಅವರು ಸಮಾಧಾನದಿಂದ ವಾಸಿಸುವರು.
    ಆಗ ಶಾಂತಿ ನೆಲೆಸುವದು.

ಹೌದು, ಅಶ್ಶೂರದ ಸೈನ್ಯವು ನಮ್ಮ ದೇಶಕ್ಕೆ ಬಂದು
    ನಮ್ಮ ಮಹಾ ಕಟ್ಟಡಗಳನ್ನು ತುಳಿದುಹಾಕುವರು.
ಆದರೆ ಇಸ್ರೇಲನ್ನು ಆಳುವಾತನು ಏಳು ಕುರುಬರನ್ನೂ
    ಎಂಟು ನಾಯಕರನ್ನೂ ಆರಿಸುವನು.
ಅವರು ತಮ್ಮ ಖಡ್ಗಗಳನ್ನು ಉಪಯೋಗಿಸಿ ಅಶ್ಶೂರದವರನ್ನು ಆಳುವರು.
    ಅವರು ನಿಮ್ರೋದನ ದೇಶವನ್ನು ಆಳುವರು.
    ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಆ ಜನರನ್ನು ಆಳುವರು.
ಆದರೆ ಇಸ್ರೇಲಿನ ರಾಜನು ಅಶ್ಶೂರದವರಿಂದ ನಮ್ಮನ್ನು ರಕ್ಷಿಸುವನು.
    ಅವರು ನಮ್ಮ ದೇಶದೊಳಕ್ಕೆ ಬಂದು ನಮ್ಮ ಪ್ರದೇಶವನ್ನು ತುಳಿದು ಹಾಳುಮಾಡುವಾಗ ನಾವು ರಕ್ಷಿಸಲ್ಪಡುವೆವು.
ಆದರೆ ಜನಾಂಗಗಳಲ್ಲಿ ಚದರಿರುವ ಇಸ್ರೇಲಿನ ಅಳಿದುಳಿದವರು
    ಯೆಹೋವನಿಂದ ಹೊರಡುವ ಮಂಜಿನಂತಿರುವರು.
    ಅದು ಯಾರನ್ನೂ ಕಾಯುವದಿಲ್ಲ.
ಅವರು ಹುಲ್ಲಿನ ಮೇಲೆ ಬಿದ್ದಿರುವ ಮಳೆಯಂತಿರುವರು.
    ಆ ಮಳೆಯು ಯಾರನ್ನೂ ಕಾಯುವದಿಲ್ಲ.
ಆದರೆ ಜನಾಂಗಗಳಲ್ಲಿ ಚದರಿರುವ
    ಯಾಕೋಬನ ವಂಶದ ಅಳಿದುಳಿದವರು,
ಕಾಡಿನಲ್ಲಿರುವ ಪ್ರಾಣಿಗಳಲ್ಲಿ ಸಿಂಹವು ಹೇಗೆ ಇರುವದೋ, ಹಾಗೆಯೇ ಇರುವರು.
    ಕುರಿಗಳ ಹಿಂಡಿನ ಮಧ್ಯೆಯಿರುವ ಪ್ರಾಯದ ಸಿಂಹದಂತಿರುವರು.
ಅದು ತನಗೆ
    ಇಷ್ಟ ಬಂದಂತೆ ತಿರುಗಾಡುವದು.
ಅದು ಒಂದು ಪ್ರಾಣಿಯನ್ನು ಹಿಡಿದರೆ
    ಅದನ್ನು ಬಿಡಿಸಲು ಯಾರಿಂದಲೂ ಸಾಧ್ಯವಿಲ್ಲ.
    ಜನಶೇಷವು ಅದರಂತಿರುವದು.
ನೀನು ನಿನ್ನ ವೈರಿಗಳ ಮೇಲೆ ಕೈ ಎತ್ತಿ
    ಅವರನ್ನು ನಾಶಮಾಡುವೆ.

ಜನರು ಯೆಹೋವನನ್ನು ಅವಲಂಬಿಸುವರು

10 ಯೆಹೋವನು ಹೇಳುವುದೇನೆಂದರೆ,
“ಆ ಸಮಯದಲ್ಲಿ ನಿನ್ನ ಕುದುರೆಗಳನ್ನು ನಾನು ತೆಗೆದುಬಿಡುವೆನು.
    ನಿನ್ನ ರಥಗಳನ್ನು ನಾಶಮಾಡುವೆನು.
11 ನಿನ್ನ ದೇಶದಲ್ಲಿರುವ ಪಟ್ಟಣಗಳನ್ನು ಹಾಳುಮಾಡುವೆನು.
    ನಿನ್ನ ಕೋಟೆಗಳನ್ನೆಲ್ಲಾ ನಾಶಮಾಡುವೆನು.
12 ನೀನು ಮಾಟಮಂತ್ರಗಳನ್ನು ಇನ್ನು ಮುಂದೆ ಮಾಡದಿರುವೆ.
    ಭವಿಷ್ಯ ಮತ್ತು ಕಣಿ ಹೇಳುವ ಜನರು ಇನ್ನು ಮುಂದೆ ನಿನ್ನಲ್ಲಿ ಇರುವುದಿಲ್ಲ.
13 ನಿನ್ನ ವಿಗ್ರಹಗಳನ್ನೂ ಕಲ್ಲುಕಂಬಗಳನ್ನೂ ಒಡೆದು ನಾಶಮಾಡುವೆನು.
    ನಿನ್ನ ಕೈಗಳು ಮಾಡಿದ ವಸ್ತುಗಳನ್ನು ನೀನು ಪೂಜಿಸುವುದಿಲ್ಲ.
14 ನಾನು ನಿನ್ನ ಅಶೇರ ಸ್ತಂಭಗಳನ್ನೂ
    ಸುಳ್ಳು ದೇವರುಗಳನ್ನೂ ನಾಶಮಾಡುವೆನು.
15 ಕೆಲವು ಜನಾಂಗಗಳು ನನ್ನ ಮಾತಿಗೆ ಕಿವಿಗೊಡುವುದಿಲ್ಲ.
    ಆಗ ನಾನು ನನ್ನ ಕೋಪವನ್ನು ಪ್ರದರ್ಶಿಸಿ ಮುಯ್ಯಿತೀರಿಸುವೆನು.”

ಲೂಕ 14

ಸಬ್ಬತ್‌ದಿನದಲ್ಲಿ ವಾಸಿಮಾಡುವುದು ಸರಿಯೋ?

14 ಒಂದು ಸಬ್ಬತ್ ದಿನದಲ್ಲಿ ಯೇಸು ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದನು. ಅಲ್ಲಿದ್ದ ಜನರೆಲ್ಲರೂ ಯೇಸುವನ್ನೇ ದೃಷ್ಟಿಸಿ ನೋಡುತ್ತಿದ್ದರು. ಯೇಸುವಿನ ಎದುರಿನಲ್ಲಿಯೇ ಜಲೋದರ[a] ರೋಗವುಳ್ಳ ಒಬ್ಬನನ್ನು ಇರಿಸಿದ್ದರು. ಯೇಸು ಫರಿಸಾಯರಿಗೂ ಧರ್ಮೋಪದೇಶಕರಿಗೂ, “ಸಬ್ಬತ್‌ದಿನದಲ್ಲಿ ವಾಸಿಮಾಡುವುದು ಸರಿಯೋ? ತಪ್ಪೋ?” ಎಂದು ಕೇಳಿದನು. ಅವರು ಉತ್ತರಕೊಡಲಿಲ್ಲ. ಆಗ ಯೇಸು ಆ ಮನುಷ್ಯನ ಕೈಮುಟ್ಟಿ ವಾಸಿಮಾಡಿ ಅವನನ್ನು ಕಳುಹಿಸಿಬಿಟ್ಟನು. ಯೇಸು ಫರಿಸಾಯರಿಗೂ ಧರ್ಮೋಪದೇಶಕರಿಗೂ, “ಸಬ್ಬತ್ ದಿನದಲ್ಲಿ ನಿಮ್ಮ ಮಗನಾಗಲಿ ನಿಮ್ಮ ದುಡಿಯುವ ಪಶುವಾಗಲಿ ಬಾವಿಗೆ ಬಿದ್ದರೆ, ಆ ಕೂಡಲೇ ನೀವು ಬಾವಿಯಿಂದ ಮೇಲಕ್ಕೆ ಎತ್ತಿ ಬದುಕಿಸುತ್ತೀರಿ ಎಂಬುದು ನಿಮಗೆ ಗೊತ್ತೇ ಇದೆ” ಎಂದು ಹೇಳಿದನು. ಫರಿಸಾಯರಾಗಲಿ ಧರ್ಮೋಪದೇಶಕರಾಗಲಿ ಯೇಸುವಿನ ಈ ಮಾತಿಗೆ ಉತ್ತರ ಕೊಡಲಾಗಲಿಲ್ಲ.

ನಿನ್ನನ್ನು ಪ್ರಮುಖನನ್ನಾಗಿ ಮಾಡಿಕೊಳ್ಳಬೇಡ

ಅತಿಥಿಗಳಾಗಿ ಬಂದಿದ್ದ ಕೆಲವರು ಊಟಕ್ಕೆ ಕುಳಿತುಕೊಳ್ಳಲು ಉತ್ತಮವಾದ ಸ್ಥಳಗಳನ್ನು ಆರಿಸಿಕೊಳ್ಳುತ್ತಿರುವುದನ್ನು ಕಂಡ ಯೇಸು ಈ ಸಾಮ್ಯವನ್ನು ಹೇಳಿದನು: “ಒಬ್ಬನು ನಿನ್ನನ್ನು ಮದುವೆಗೆ ಆಮಂತ್ರಿಸಿದರೆ, ಉನ್ನತವಾದ ಆಸನದಲ್ಲಿ ಕುಳಿತುಕೊಳ್ಳಬೇಡ. ಅವನು ನಿನಗಿಂತಲೂ ಪ್ರಮುಖನಾದವನನ್ನು ಆಮಂತ್ರಿಸಿದ್ದಿರಬಹುದು. ನೀನು ಉನ್ನತವಾದ ಸ್ಥಳದಲ್ಲಿ ಕುಳಿತುಕೊಂಡಿದ್ದರೆ, ನಿನಗೆ ಆಮಂತ್ರಣ ನೀಡಿರುವವನು ಬಂದು, ‘ಈ ಸ್ಥಳವನ್ನು ಇವನಿಗೆ ಬಿಟ್ಟುಕೊಡು’ ಎಂದು ನಿನಗೆ ಹೇಳಬಹುದು. ಆಗ ನೀನು ನಾಚಿಕೆಯಿಂದ ಕೊನೆಯ ಸ್ಥಳದಲ್ಲಿ ಕುಳಿತುಕೊಳ್ಳಬೇಕಾಗುವುದು.

10 “ಆದ್ದರಿಂದ ಒಬ್ಬನು ನಿನ್ನನ್ನು ಆಮಂತ್ರಿಸುವಾಗ, ಕೊನೆಯ ಸ್ಥಳದಲ್ಲಿ ಹೋಗಿ ಕುಳಿತುಕೊ. ಆಗ ನಿನ್ನನ್ನು ಆಮಂತ್ರಿಸಿದ ವ್ಯಕ್ತಿಯು ಬಂದು, ‘ಸ್ನೇಹಿತನೇ, ಉನ್ನತವಾದ ಈ ಸ್ಥಳದಲ್ಲಿ ಕುಳಿತುಕೊ!’ ಎಂದು ನಿನಗೆ ಹೇಳುವನು. ಆಗ ನೆರೆದು ಬಂದ ಅತಿಥಿಗಳೆಲ್ಲಾ ನಿನ್ನನ್ನು ಗೌರವಿಸುವರು. 11 ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನೂ ತಗ್ಗಿಸಲ್ಪಡುವನು. ತನ್ನನ್ನು ತಗ್ಗಿಸಿಕೊಳ್ಳುವ ಪ್ರತಿಯೊಬ್ಬನೂ ಹೆಚ್ಚಿಸಲ್ಪಡುವನು.”

ನಿಮಗೆ ಪ್ರತಿಫಲ ದೊರೆಯುವುದು

12 ಬಳಿಕ ಯೇಸು ತನ್ನನ್ನು ಆಮಂತ್ರಿಸಿದ ಫರಿಸಾಯನಿಗೆ, “ನೀನು ಮಧ್ಯಾಹ್ನದ ಊಟಕ್ಕೆ ಅಥವಾ ರಾತ್ರಿಯ ಊಟಕ್ಕೆ ನಿನ್ನ ಸ್ನೇಹಿತರನ್ನು, ಸಹೋದರರನ್ನು, ಸಂಬಂಧಿಕರನ್ನು ಮತ್ತು ಶ್ರೀಮಂತರಾದ ನೆರೆಯವರನ್ನು ಆಮಂತ್ರಿಸಿದರೆ, ಅವರೂ ನಿನ್ನನ್ನು ಮತ್ತೊಮ್ಮೆ ಊಟಕ್ಕೆ ಆಮಂತ್ರಿಸುವರು. ಆಗ ಅದೇ ನಿನಗೆ ಪ್ರತಿಫಲವಾಗುವುದು. 13 ಅದರ ಬದಲು, ನೀನು ಔತಣ ಮಾಡಿಸುವಾಗ ಬಡಜನರನ್ನು, ಕುಂಟರನ್ನು ಮತ್ತು ಕುರುಡರನ್ನು ಆಮಂತ್ರಿಸು. 14 ಆಗ ನಿನಗೆ ಆಶೀರ್ವಾದ ದೊರೆಯುವುದು. ಏಕೆಂದರೆ, ಈ ಜನರು ನಿನ್ನನ್ನು ಔತಣಕ್ಕೆ ಆಮಂತ್ರಿಸಲಾರರು. ಅವರಲ್ಲಿ ಏನೂ ಇಲ್ಲ. ಆದರೆ ನೀತಿವಂತರು ಜೀವಂತವಾಗಿ ಎದ್ದುಬರುವಾಗ, ನಿನಗೆ ಪ್ರತಿಫಲ ದೊರೆಯುವುದು” ಎಂದು ಹೇಳಿದನು.

ಔತಣಕೂಟದ ಸಾಮ್ಯ

(ಮತ್ತಾಯ 22:1-10)

15 ಯೇಸುವಿನೊಡನೆ ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನು ಈ ವಿಷಯಗಳನ್ನು ಕೇಳಿ ಯೇಸುವಿಗೆ, “ದೇವರ ರಾಜ್ಯದಲ್ಲಿ ಊಟಮಾಡುವವರೇ ಧನ್ಯರು!” ಎಂದನು.

16 ಯೇಸು ಅವನಿಗೆ ಹೇಳಿದ್ದೇನೆಂದರೆ: “ಒಬ್ಬನು ಒಂದು ದೊಡ್ಡ ಔತಣವನ್ನು ಮಾಡಿಸಿ ಅನೇಕ ಜನರನ್ನು ಆಮಂತ್ರಿಸಿದನು. 17 ಊಟದ ಸಮಯ ಬಂದಾಗ, ಅವನು ತನ್ನ ಸೇವಕನನ್ನು ಕಳುಹಿಸಿ, ‘ಬನ್ನಿರಿ! ಊಟ ಸಿದ್ಧವಾಗಿದೆ’ ಎಂದು ಅತಿಥಿಗಳಿಗೆ ತಿಳಿಸಿದನು. 18 ಆದರೆ ಎಲ್ಲಾ ಅತಿಥಿಗಳು ತಾವು ಬರಲಾಗುವುದಿಲ್ಲವೆಂದು ಹೇಳಿದರು. ಪ್ರತಿಯೊಬ್ಬನೂ ಒಂದೊಂದು ನೆವ ಹೇಳಿದನು. ಮೊದಲನೆಯವನು, ‘ನಾನು ಇದೀಗ ಒಂದು ಹೊಲವನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ. ಆದ್ದರಿಂದ ನಾನು ಹೋಗಿ ಅದನ್ನು ನೋಡಬೇಕು. ದಯಮಾಡಿ ಕ್ಷಮಿಸು’ ಎಂದು ಹೇಳಿದನು. 19 ಎರಡನೆಯವನು, ‘ನಾನು ಇದೀಗ ಐದು ಜೊತೆ ಎತ್ತುಗಳನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ. ನಾನು ಹೋಗಿ ಅವುಗಳನ್ನು ಪರೀಕ್ಷಿಸಬೇಕು. ದಯಮಾಡಿ ಕ್ಷಮಿಸು’ ಎಂದು ಹೇಳಿದನು. 20 ಮೂರನೆಯವನು, ‘ನಾನು ಇದೀಗ ಮದುವೆಯಾಗಿದ್ದೇನೆ, ನಾನು ಬರಲಾರೆ’ ಎಂದನು.

21 “ಆದ್ದರಿಂದ ಆ ಸೇವಕನು ಹಿಂತಿರುಗಿ ಹೋಗಿ ಅವರು ಹೇಳಿದ್ದನ್ನೆಲ್ಲ ತನ್ನ ಯಜಮಾನನಿಗೆ ತಿಳಿಸಿದನು. ಆಗ ಯಜಮಾನನು ಬಹಳ ಕೋಪಗೊಂಡು ಆ ಸೇವಕನಿಗೆ, ‘ಈ ಊರಿನ ಬೀದಿಗಳಿಗೂ ಸಂದಿಗಳಿಗೂ ಬೇಗನೆ ಹೋಗಿ ಬಡವರನ್ನೂ ಅಂಗವಿಕಲರನ್ನೂ ಕುರುಡರನ್ನೂ ಕುಂಟರನ್ನೂ ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳಿದನು.

22 “ತರುವಾಯ ಆ ಸೇವಕನು ಬಂದು, ‘ಸ್ವಾಮೀ, ನೀನು ಹೇಳಿದಂತೆಯೇ ಮಾಡಿದೆನು. ಆದರೆ ನಮ್ಮಲ್ಲಿ ಇನ್ನೂ ಹೆಚ್ಚು ಜನರಿಗೆ ಸ್ಥಳವಿದೆ.’ ಎಂದು ಹೇಳಿದನು. 23 ಆಗ ಯಜಮಾನನು ಆ ಸೇವಕನಿಗೆ, ‘ಹೆದ್ದಾರಿಗಳಿಗೂ ರಸ್ತೆಗಳಿಗೂ ಹೋಗಿ, ಅಲ್ಲಿರುವ ಜನರನ್ನೆಲ್ಲಾ ಆಮಂತ್ರಿಸು. ನನ್ನ ಮನೆಯು ಜನರಿಂದ ತುಂಬಿಹೋಗಬೇಕೆಂಬುದೇ ನನ್ನ ಅಪೇಕ್ಷೆ. 24 ನಾನು ಮೊದಲನೆ ಸಲ ಆಮಂತ್ರಿಸಿದ ಆ ಜನರಲ್ಲಿ ಒಬ್ಬರಾದರೂ ನನ್ನೊಂದಿಗೆ ಊಟಮಾಡಕೂಡದು!’ ಎಂದು ಹೇಳಿದನು.”

ಯೋಜನೆಯ ಅಗತ್ಯತೆ

(ಮತ್ತಾಯ 10:37-38)

25 ಅನೇಕ ಜನರು ಯೇಸುವಿನೊಂದಿಗೆ ಗುಂಪುಗುಂಪಾಗಿ ಹೋಗುತ್ತಿದ್ದಾಗ ಆತನು ಅವರಿಗೆ ಹೀಗೆಂದನು: 26 “ನನ್ನ ಬಳಿಗೆ ಬರುವವನು ನನ್ನನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ತನ್ನ ತಂದೆತಾಯಿಗಳನ್ನು, ಹೆಂಡತಿಯನ್ನು, ಮಕ್ಕಳನ್ನು, ಸಹೋದರ ಸಹೋದರಿಯರನ್ನು ಮತ್ತು ತನ್ನನ್ನು ಪ್ರೀತಿಸುವುದಾದರೆ, ಅವನು ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ. 27 ನನ್ನನ್ನು ಹಿಂಬಾಲಿಸುವವನು ತನಗೆ ಕೊಡಲ್ಪಟ್ಟಿರುವ ಶಿಲುಬೆಯನ್ನು (ಶ್ರಮೆ) ಹೊತ್ತುಕೊಂಡು ಹೋಗದಿದ್ದರೆ, ಅವನು ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ.

28 “ನೀನು ಒಂದು ಕಟ್ಟಡವನ್ನು ಕಟ್ಟಬೇಕೆಂದಿದ್ದರೆ ಮೊದಲು ನೀನು ಕುಳಿತುಕೊಂಡು ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದನ್ನು ಆಲೋಚಿಸು. ಆ ಕಟ್ಟಡವನ್ನು ಪೂರೈಸಲು ನಿನ್ನಲ್ಲಿ ಸಾಕಷ್ಟು ಹಣವಿದೆಯೋ ಎಂದು ಲೆಕ್ಕಹಾಕಿ ನೋಡು. 29 ಇಲ್ಲವಾದರೆ, ನೀನು ಕಟ್ಟಡದ ಕೆಲಸವನ್ನು ಪ್ರಾರಂಭಿಸಿದರೂ ಅದನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಜನರು ನಿನ್ನನ್ನು ನೋಡಿ, 30 ‘ಇವನು ಈ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದನು. ಆದರೆ ಪೂರೈಸಲು ಅವನಿಂದಾಗಲಿಲ್ಲ’ ಎಂದು ಗೇಲಿ ಮಾಡುವರು.

31 “ಒಬ್ಬ ಅರಸನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವಾಗ, ಮೊದಲು ಅವನು ಕುಳಿತುಕೊಂಡು ಯೋಜನೆ ಮಾಡುವನು. ಅರಸನ ಬಳಿಯಲ್ಲಿ ಕೇವಲ ಹತ್ತುಸಾವಿರ ಮಂದಿ ಸೈನಿಕರಿದ್ದರೆ, ಇಪ್ಪತ್ತುಸಾವಿರ ಮಂದಿ ಸೈನಿಕರಿರುವ ಇನ್ನೊಬ್ಬ ಅರಸನನ್ನು ಸೋಲಿಸಲು ತನಗೆ ಸಾಧ್ಯವೇ ಎಂದು ಆಲೋಚಿಸುವನು. 32 ಅವನು ಇನ್ನೊಬ್ಬ ಅರಸನನ್ನು ಸೋಲಿಸಲಾಗದಿದ್ದರೆ, ತನ್ನ ರಾಯಭಾರಿಗಳನ್ನು ಕಳುಹಿಸಿ, ಶಾಂತಿಒಪ್ಪಂದಕ್ಕಾಗಿ ಕೇಳಿಕೊಳ್ಳುವನು.

33 “ಅದೇರೀತಿಯಲ್ಲಿ ನೀವೆಲ್ಲರೂ ಮೊದಲು ಯೋಜನೆ ಮಾಡಬೇಕು. ನೀವು ನನ್ನನ್ನು ಹಿಂಬಾಲಿಸಬೇಕೆಂದಿದ್ದರೆ ನಿಮ್ಮಲ್ಲಿರುವ ಪ್ರತಿಯೊಂದನ್ನೂ ತ್ಯಜಿಸಿಬಿಡಬೇಕು. ಇಲ್ಲವಾದರೆ, ನನ್ನ ಶಿಷ್ಯರಾಗಲು ಸಾಧ್ಯವಿಲ್ಲ!

ನಿಮ್ಮ ಪ್ರಭಾವವನ್ನು ಕಳೆದುಕೊಳ್ಳಬೇಡಿರಿ

(ಮತ್ತಾಯ 5:13; ಮಾರ್ಕ 9:50)

34 “ಉಪ್ಪು ಒಳ್ಳೆಯ ಪದಾರ್ಥ. ಆದರೆ ಉಪ್ಪು ತನ್ನ ರುಚಿ ಕಳೆದುಕೊಂಡರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ನೀವು ಅದಕ್ಕೆ ಮತ್ತೆ ಉಪ್ಪಿನ ರುಚಿಯನ್ನು ಕೊಡಲು ಸಾಧ್ಯವಿಲ್ಲ. 35 ಅದರಿಂದ ಮಣ್ಣಿಗಾಗಲಿ ಗೊಬ್ಬರಕ್ಕಾಗಲಿ ಪ್ರಯೋಜನವಿಲ್ಲ. ಜನರು ಅದನ್ನು ಹೊರಗೆ ಬಿಸಾಡುತ್ತಾರೆ.

“ನನ್ನ ಮಾತನ್ನು ಕೇಳುವ ಜನರೇ, ಆಲಿಸಿರಿ!”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International