M’Cheyne Bible Reading Plan
9 ಇಸ್ರೇಲ್ ಜನರ ಎಲ್ಲಾ ಹೆಸರುಗಳು ಅವರವರ ವಂಶಾವಳಿ ಪಟ್ಟಿಯಲ್ಲಿ ಬರೆಯಲ್ಪಟ್ಟಿದೆ. ಈ ವಂಶಾವಳಿಗಳು ಇಸ್ರೇಲ್ ರಾಜರ ಇತಿಹಾಸದಲ್ಲಿ ಸೇರಿಸಲ್ಪಟ್ಟಿದೆ.
ಜೆರುಸಲೇಮಿನ ಜನರು
ಯೆಹೂದ ಪ್ರಾಂತ್ಯದ ಜನರನ್ನು ಸೆರೆಹಿಡಿದು ಬಾಬಿಲೋನಿಗೆ ಒಯ್ಯಲಾಯಿತು. ಅವರು ದೇವರಿಗೆ ಅವಿಧೇಯರಾದ್ದರಿಂದ ಅವರಿಗೆ ಇಂಥ ಸ್ಥಿತಿ ಬಂದೊದಗಿತು. 2 ಅಲ್ಲಿಂದ ಹಿಂತಿರುಗಿಬಂದು ತಮ್ಮ ಸ್ವನಾಡಿನಲ್ಲಿ ನೆಲೆಸಿದವರಲ್ಲಿ ಮೊದಲನೆಯವರು ಯಾರೆಂದರೆ: ಕೆಲವು ಇಸ್ರೇಲರು, ಯಾಜಕರು, ಲೇವಿಯರು ಮತ್ತು ದೇವಾಲಯದ ಸೇವಕರು.
3 ಯೆಹೂದ, ಬೆನ್ಯಾಮೀನ್, ಎಫ್ರಾಯೀಮ್ ಮತ್ತು ಮನಸ್ಸೆ ಗೋತ್ರದವರಾದ ಇವರು ಜೆರುಸಲೇಮಿನಲ್ಲಿ ವಾಸವಾಗಿದ್ದರು. ಇವರು ಯಾರೆಂದರೆ:
4 ಊತ್ಯೆ ಅಮ್ಮೀಹೂದನ ಮಗ, ಅಮ್ಮೀಹೂದನು ಒಮ್ರಿಯ ಮಗ, ಒಮ್ರಿಯು ಇಮ್ರಿಯ ಮಗ, ಇಮ್ರಿಯು ಬಾನೀಯ ಮಗ, ಬಾನೀಯು ಪೆರೆಚನ ಸಂತತಿಯವನು, ಪೆರೆಚನು ಯೆಹೂದನ ಮಗ.
5 ಜೆರುಸಲೇಮಿನಲ್ಲಿ ವಾಸಿಸಿದ ಶೇಲಾಹದವರು ಯಾರೆಂದರೆ: ಚೊಚ್ಚಲಮಗನಾದ ಅಸಾಯನು. ಅಸಾಯನಿಗೂ ಗಂಡುಮಕ್ಕಳಿದ್ದರು.
6 ಜೆರಹಳ ಸಂತತಿಯ ಯೆಯೂವೇಲ್ ಮತ್ತು ಅವನ ಆರುನೂರ ತೊಂಭತ್ತು ಮಂದಿ ಸಂಬಂಧಿಕರು ಜೆರುಸಲೇಮಿನಲ್ಲಿ ವಾಸಿಸಿದರು.
7 ಜೆರುಸಲೇಮಿನಲ್ಲಿ ವಾಸಿಸಿದ ಬೆನ್ಯಾಮೀನನ ಗೋತ್ರದವರು ಯಾರೆಂದರೆ: ಮೆಷುಲ್ಲಾಮನ ಮಗನಾದ ಸಲ್ಲೂ. ಮೆಷುಲ್ಲಾಮನು ಹೋದವ್ಯನ ಮಗ. ಹೋದವ್ಯನು ಹಸ್ಸೆನುವಾಹನ ಮಗ. 8 ಇಬ್ನೆಯಾಹನು ಯೆರೋಹಾಮನ ಮಗ. ಏಲಾನು ಉಜ್ಜೀಯ ಮಗ. ಉಜ್ಜೀಯನು ಮಿಕ್ರೀಯ ಮಗ ಮತ್ತು ಮೆಷುಲ್ಲಾಮನು ಶೆಫಟ್ಯನ ಮಗ. ಶೆಫಟ್ಯನು ರೆಯೂವೇಲನ ಮಗ. ರೆಯೂವೇಲನು ಇಬ್ನಿಯಾಹನ ಮಗ. 9 ಬೆನ್ಯಾಮೀನನ ಕುಲಚರಿತ್ರೆಯ ಪ್ರಕಾರ ಒಂಭೈನೂರ ಐವತ್ತಾರು ಮಂದಿ ಜೆರುಸಲೇಮಿನಲ್ಲಿ ವಾಸವಾಗಿದ್ದರು. ಇವರೆಲ್ಲರೂ ತಮ್ಮ ಕುಟುಂಬಗಳ ನಾಯಕರಾಗಿದ್ದರು.
10 ಜೆರುಸಲೇಮಿನಲ್ಲಿ ವಾಸಿಸಿದ ಯಾಜಕರು ಯಾರೆಂದರೆ: ಯೆದಾಯ, ಯೆಹೋಯಾರೀಬ್, ಯಾಕೀನ್ ಮತ್ತು 11 ಅಜರ್ಯ. ಅಜರ್ಯನು ಹಿಲ್ಕೀಯನ ಮಗ; ಹಿಲ್ಕೀಯನು ಮೆಷುಲ್ಲಾಮನ ಮಗ; ಮೆಷುಲ್ಲಾಮನು ಚಾದೋಕನ ಮಗ; ಚಾದೋಕನು ಮೆರಾಯೋತನ ಮಗ; ಮೆರಾಯೋತನು ಅಹೀಟೂಬನ ಮಗ. ಅಹೀಟೂಬನು ದೇವಾಲಯದ ಒಬ್ಬ ವಿಶೇಷ ಅಧಿಕಾರಿಯಾಗಿದ್ದನು. 12 ಇವರಲ್ಲದೆ, ಯೆರೋಹಾಮನ ಮಗನಾದ ಅದಾಯನು ಸಹ ಇದ್ದನು. ಯೆರೋಹಾಮನು ಪಶ್ಹೂರನ ಮಗ; ಪಶ್ಹೂರನು ಮಲ್ಕೀಯನ ಮಗ; ಇವರಲ್ಲದೆ, ಅದೀಯೇಲನ ಮಗನಾದ ಮಾಸೈ ಸಹ ಇದ್ದನು. ಅದೀಯೇಲನು ಯಹ್ಜೇರನ ಮಗ. ಯಹ್ಜೇರನು ಮೆಷುಲ್ಲಾಮನ ಮಗ. ಮೆಷುಲ್ಲಾಮನು ಮೆಷಿಲ್ಲೇಮೋತನ ಮಗ. ಮೆಷಿಲ್ಲೇಮೋತನು ಇಮ್ಮೇರನ ಮಗ.
13 ಒಟ್ಟು ಒಂದು ಸಾವಿರದ ಏಳುನೂರ ಅರವತ್ತು ಮಂದಿ ಯಾಜಕರಿದ್ದರು. ಇವರೆಲ್ಲರೂ ತಮ್ಮ ಕುಟುಂಬಗಳಿಗೆ ಪ್ರಧಾನರಾಗಿದ್ದರು. ದೇವಾಲಯದ ಕೆಲಸಕಾರ್ಯಗಳ ಜವಾಬ್ದಾರಿಕೆಯನ್ನು ಇವರು ಹೊತ್ತು ಕೊಂಡಿದ್ದರು.
14 ಜೆರುಸಲೇಮಿನಲ್ಲಿ ವಾಸಿಸಿದ ಲೇವಿ ಕುಲದ ಜನರು ಯಾರೆಂದರೆ: ಹಷ್ಷೂಬನ ಮಗನಾದ ಶೆಮಾಯ. ಹಷ್ಷೂಬನು ಅಜ್ರೀಕಾಮನ ಮಗ. ಅಜ್ರೀಕಾಮನು ಹಷಬ್ಯನ ಮಗ. ಹಷಬ್ಯನು ಮೆರಾರೀಯ ಸಂತತಿಯವನು. 15 ಜೆರುಸಲೇಮಿನಲ್ಲಿ ವಾಸಿಸಿದ ಇತರರು ಯಾರೆಂದರೆ: ಬಕ್ಬಕ್ಕರ್, ಹೆರೆಷ್, ಗಾಲಾಲ್ ಮತ್ತು ಮತ್ತನ್ಯ. ಮತ್ತನ್ಯನು ಮೀಕನ ಮಗ. ಮೀಕನು ಜಿಕ್ರೀಯ ಮಗ. ಜಿಕ್ರೀಯು ಆಸಾಫನ ಮಗ. 16 ಓಬದ್ಯನು ಶೆಮಾಯನ ಮಗ. ಶೆಮಾಯನು ಗಾಲಾಲನ ಮಗ. ಗಾಲಾಲನು ಯೆದೂತೂನನ ಮಗ. ಆಸನ ಮಗನಾದ ಬೆರೆಕ್ಯನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಆಸನು ಎಲ್ಕಾನನ ಮಗ. ಎಲ್ಕಾನನು ನೆಟೋಫ ಜನರ ಸಮೀಪದ ಗ್ರಾಮದಲ್ಲಿ ವಾಸಿಸುತ್ತಿದ್ದನು.
17 ಜೆರುಸಲೇಮಿನಲ್ಲಿ ವಾಸಿಸುತ್ತಿದ್ದ ದ್ವಾರಪಾಲಕರು ಯಾರೆಂದರೆ: ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್ ಮತ್ತು ಅವರ ಕುಟುಂಬದವರು. ಶಲ್ಲೂಮನು ಅವರ ನಾಯಕನಾಗಿದ್ದನು. 18 ಇವರೆಲ್ಲರೂ ಪೂರ್ವದಿಕ್ಕಿನಲ್ಲಿರುವ ರಾಜನ ಹೆಬ್ಬಾಗಿಲನ್ನು ಕಾಯುತ್ತಿರುತ್ತಾರೆ. ಇವರೆಲ್ಲಾ ಲೇವಿ ಕುಲಕ್ಕೆ ಸೇರಿದವರು. 19 ಶಲ್ಲೂಮನು ಕೋರೇಯ ಮಗನು. ಕೋರೇಯ ಎಬ್ಯಾಸಾಫನ ಮಗನು. ಎಬ್ಯಾಸಾಫನು ಕೋರಹನ ಮಗನು. ಶಲ್ಲೂಮನೂ ಅವನ ಸಹೋದರರೂ ದ್ವಾರಪಾಲಕರಾಗಿದ್ದರು. ಅವರೆಲ್ಲರೂ ಕೋರಹನ ಸಂತತಿಯವರು. ಪವಿತ್ರಗುಡಾರದ ಬಾಗಿಲುಗಳನ್ನು ಕಾಯುವ ಜವಾಬ್ದಾರಿಕೆ ಇವರದಾಗಿತ್ತು. ತಮ್ಮ ಪೂರ್ವಿಕರು ಮಾಡಿದ್ದಂತೆಯೇ ಅವರು ಈ ಕೆಲಸವನ್ನು ಮಾಡಿದರು. ಯೆಹೋವನ ಪಾಳೆಯದ ಪ್ರವೇಶದ್ವಾರವನ್ನು ಕಾಯುವುದು ಅವರ ಪೂರ್ವಿಕರ ಉದ್ಯೋಗವಾಗಿತ್ತು. 20 ಹಿಂದೆ ಫೀನೆಹಾಸನು ದ್ವಾರಪಾಲಕರ ನಾಯಕನಾಗಿದ್ದನು. ಫೀನೆಹಾಸನು ಎಲ್ಲಾಜಾರನ ಮಗ. ದೇವರು ಫೀನೆಹಾಸನೊಂದಿಗಿದ್ದನು. 21 ಮೆಷಲೆಮ್ಯೆನ ಮಗನಾದ ಜೆಕರ್ಯನು ಪವಿತ್ರಗುಡಾರದ ಪ್ರವೇಶದ್ವಾರಕ್ಕೆ ಪಾಲಕನಾಗಿದ್ದನು.
22 ಒಟ್ಟು ಇನ್ನೂರ ಹನ್ನೆರಡು ಮಂದಿ ಪವಿತ್ರಗುಡಾರದ ಬಾಗಿಲನ್ನು ಕಾಯುವುದಕ್ಕೆ ಆರಿಸಲ್ಪಟ್ಟಿದ್ದರು. ಅವರ ಹೆಸರುಗಳು ವಂಶದ ಚರಿತ್ರೆಯಲ್ಲಿ ಬರೆಯಲ್ಪಟ್ಟಿರುತ್ತವೆ. ದಾವೀದನೂ ದೇವರ ಮನುಷ್ಯನಾದ ಸಮುವೇಲನೂ ಇವರನ್ನು ಆರಿಸಿಕೊಂಡರು. ಯಾಕೆಂದರೆ ಇವರೆಲ್ಲರೂ ನಂಬಿಗಸ್ತರಾಗಿದ್ದರು. 23 ಅವರೂ ಅವರ ಸಂತತಿಯವರೂ ದೇವದರ್ಶನಗುಡಾರದ ದ್ವಾರಪಾಲರಾಗಿದ್ದರು. 24 ಅದಕ್ಕೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳಿದ್ದವು. 25 ಗ್ರಾಮಗಳಲ್ಲಿ ನೆಲೆಸಿದ ದ್ವಾರಪಾಲಕರ ಕುಟುಂಬದವರು ತಮ್ಮ ಸರದಿಗನುಗುಣವಾಗಿ ಏಳು ದಿವಸದ ಕರ್ತವ್ಯ ಮುಗಿಸಿಹೋಗುತ್ತಿದ್ದರು.
26 ಲೇವಿಕುಲದ ನಾಲ್ಕು ಮಂದಿ ಎಲ್ಲಾ ದ್ವಾರಪಾಲಕರಿಗೆ ನಾಯಕರಾಗಿದ್ದರು. ದೇವಾಲಯದ ಕೋಣೆಗಳನ್ನೂ ಅಲ್ಲಿಟ್ಟಿರುವ ಹಣದ ಪೆಟ್ಟಿಗೆಗಳನ್ನೂ ಅವರು ಕಾಯುತ್ತಿದ್ದರು. 27 ಅವರು ರಾತ್ರಿಯಲ್ಲಿ ಕಾವಲು ಕಾಯುತ್ತಿದ್ದರು ಮತ್ತು ಪ್ರತಿಮುಂಜಾನೆ ದೇವಾಲಯದ ಬಾಗಿಲನ್ನು ತೆರೆಯುತ್ತಿದ್ದರು.
28 ಅವರಲ್ಲಿ ಕೆಲವರು ದೇವಾಲಯದ ಪಾತ್ರೆಗಳಿಗೆ ಮೇಲ್ವಿಚಾರಕರಾಗಿದ್ದು ಅವುಗಳನ್ನು ಒಳಗೆ ತರುವಾಗಲೂ ಹೊರಗೆ ತೆಗೆದುಕೊಂಡು ಹೋಗುವಾಗಲೂ ಲೆಕ್ಕಮಾಡುತ್ತಿದ್ದರು. 29 ಇನ್ನು ಕೆಲವರು ಮರದ ಸಾಮಾನುಗಳಿಗೂ ವಿಶೇಷವಾದ ಪಾತ್ರೆಗಳಿಗೂ ಮೇಲ್ವಿಚಾರಕರಾಗಿದ್ದು ಗೋಧಿಹಿಟ್ಟು, ದ್ರಾಕ್ಷಾರಸ, ಎಣ್ಣೆ, ಧೂಪ ಮತ್ತು ಪರಿಮಳದ್ರವ್ಯ ಇವುಗಳ ಪಾರುಪತ್ಯಗಾರರಾಗಿದ್ದರು. 30 ಯಾಜಕರ ಸಂತಾನದವರಲ್ಲಿ ಕೆಲವರು ಪರಿಮಳದ್ರವ್ಯಗಳಿಂದ ತೈಲಮಾಡುತ್ತಿದ್ದರು.
31 ಮತ್ತಿತ್ಯ ಎಂಬ ಲೇವಿಯು ದೇವರಿಗೆ ಸಮರ್ಪಿಸುವ ರೊಟ್ಟಿಯನ್ನು ತಯಾರು ಮಾಡುತ್ತಿದ್ದನು. ಇವನು ಶಲ್ಲೂಮನ ಚೊಚ್ಚಲಮಗ. ಶಲ್ಲೂಮನು ಕೋರಹನ ಕುಲದವನಾಗಿದ್ದನು. 32 ಕೋರಹನ ಕುಲದ ಕೆಲವರಿಗೆ, ಪ್ರತಿ ಸಬ್ಬತ್ದಿವಸ ದೇವರ ಸನ್ನಿಧಾನದಲ್ಲಿ ಇಡುವ ನೈವೇದ್ಯದ ರೊಟ್ಟಿಯನ್ನು ತಯಾರಿಸುವ ಕೆಲಸವಿತ್ತು.
33 ಗಾಯಕರು ಮತ್ತು ತಮ್ಮ ಕುಟುಂಬಗಳಿಗೆ ನಾಯಕರಾಗಿದ್ದ ಲೇವಿಯರು ದೇವಾಲಯದ ಕೋಣೆಗಳಲ್ಲಿ ಇರುತ್ತಿದ್ದರು. ಅವರು ಇತರ ಕೆಲಸಗಳನ್ನು ಮಾಡಬೇಕಾಗಿರಲಿಲ್ಲ; ಯಾಕೆಂದರೆ ದೇವಾಲಯದ ಹಗಲಿರುಳಿನ ಕೆಲಸಕಾರ್ಯಗಳ ಜವಾಬ್ದಾರಿಕೆ ಇವರದಾಗಿತ್ತು.
34 ಈ ಲೇವಿಯರೆಲ್ಲಾ ತಮ್ಮತಮ್ಮ ಕುಟುಂಬಗಳಿಗೆ ಪ್ರಧಾನರಾಗಿದ್ದರು. ಇವರ ಹೆಸರುಗಳು ಅವರ ಕುಟುಂಬ ಚರಿತ್ರೆಯಲ್ಲಿ ಬರೆಯಲ್ಪಟ್ಟಿರುತ್ತದೆ. ಅವರು ಜೆರುಸಲೇಮಿನಲ್ಲಿ ವಾಸಿಸಿದರು.
ಅರಸನಾದ ಸೌಲನ ವಂಶಾವಳಿ
35 ಯೆಯೂವೇಲನು ಗಿಬ್ಯೋನನ ತಂದೆ. ಯೆಯೂವೇಲನು ಗಿಬ್ಯೋನ್ ಪಟ್ಟಣದಲ್ಲಿ ವಾಸಮಾಡುತ್ತಿದ್ದನು. ಯೆಯೂವೇಲನ ಹೆಂಡತಿಯ ಹೆಸರು ಮಾಕ. 36 ಯೆಯೂವೇಲನ ಚೊಚ್ಚಲ ಮಗನು ಅಬ್ದೋನ. ಅವನ ಇತರ ಗಂಡುಮಕ್ಕಳು ಯಾರೆಂದರೆ: 37 ಚೂರ್, ಕೀಷ್, ಬಾಳ್, ನೇರ್, ನಾದಾಬ್, ಗೆದೋರ್, ಅಹ್ಯೊ, ಜಕರ್ಯ ಮತ್ತು ಮಿಕ್ಲೋತ್. 38 ಮಿಕ್ಲೋತನು ಶಿಮಾಮನ ತಂದೆ. ಯೆಯೂವೇಲನ ಕುಟುಂಬದವರೆಲ್ಲಾ ತಮ್ಮ ಸಂಬಂಧಿಕರೊಂದಿಗೆ ಜೆರುಸಲೇಮಿನಲ್ಲಿ ವಾಸಿಸುತ್ತಿದ್ದರು.
39 ನೇರನು ಕೀಷನ ತಂದೆ. ಕೀಷನು ಸೌಲನ ತಂದೆ. ಸೌಲನ ಗಂಡುಮಕ್ಕಳು ಯಾರೆಂದರೆ: ಯೋನಾತಾನ್, ಮಲ್ಕೀಷೂವ, ಅಬೀನಾದಾಬ್ ಮತ್ತು ಎಷ್ಬಾಳ್.
40 ಯೋನಾತಾನನ ಮಗನಾದ ಮೆರೀಬ್ಬಾಳನು ಮೀಕನ ತಂದೆ.
41 ಮೀಕನ ಗಂಡುಮಕ್ಕಳು ಯಾರೆಂದರೆ: ಪೀತೋನ್, ಮೆಲೆಕ್, ತಹ್ರೇಯ ಮತ್ತು ಆಹಾಜ್. 42 ಆಹಾಜನು ಯಗ್ರಾಹನ ತಂದೆ. ಯಗ್ರಾಹನು ಜಾರಹನ ತಂದೆ. ಜಾರಹನು ಆಲೆಮೆತ್, ಅಜ್ಮಾವೆತ್ ಮತ್ತು ಜಿಮ್ರೀ ಇವರ ತಂದೆ. ಜಿಮ್ರೀಯು ಮೋಚನ ತಂದೆ. 43 ಮೋಚನು ಬಿನ್ನನ ತಂದೆ. ರೆಫಾಯನು ಬಿನ್ನನ ಮಗ. ಎಲ್ಲಾಸನು ರೆಫಾಯನ ಮಗ. ಆಚೇಲನು ಎಲ್ಲಾಸನ ಮಗ.
44 ಆಚೇಲನಿಗೆ ಆರು ಮಂದಿ ಗಂಡುಮಕ್ಕಳಿದ್ದರು. ಅವರು ಯಾರೆಂದರೆ: ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ ಮತ್ತು ಹಾನಾನ್.
ಅರಸನಾದ ಸೌಲನ ಮರಣ
10 ಫಿಲಿಷ್ಟಿಯರು ಇಸ್ರೇಲರ ವಿರೋಧವಾಗಿ ಕಾದಾಡಿದರು. ಆದರೆ ಇಸ್ರೇಲರು ಫಿಲಿಷ್ಟಿಯರ ಎದುರಿನಿಂದ ಓಡಿಹೋಗಬೇಕಾಯಿತು. ಇಸ್ರೇಲರಲ್ಲಿ ಬಹಳ ಮಂದಿ ಗಿಲ್ಬೋವ ಬೆಟ್ಟದ ಮೇಲೆ ಹತರಾದರು. 2 ಫಿಲಿಷ್ಟಿಯರು ಸೌಲನನ್ನು ಬೆನ್ನಟ್ಟುತ್ತಾ ಹೋಗಿ ಕೊನೆಗೆ ಸೌಲನನ್ನೂ ಅವನ ಮಕ್ಕಳಾದ ಯೋನಾತಾನನನ್ನೂ ಅಬೀನಾದಾಬನನ್ನೂ ಮಲ್ಕೀಷೂವನನ್ನೂ ಕೊಂದರು. 3 ಸೌಲನ ಸುತ್ತಲೂ ಯುದ್ಧವು ಬಹು ಘೋರವಾಗಿ ನಡೆಯಿತು. ಬಿಲ್ಲುಗಾರರು ತಮ್ಮ ಬಿಲ್ಲುಗಳಿಂದ ಸೌಲನ ಕಡೆಗೆ ಗುರಿಯಿಟ್ಟು ಹೊಡೆದು ಅವನನ್ನು ಗಾಯಪಡಿಸಿದರು.
4 ಆಗ ಸೌಲನು ತನ್ನ ಆಯುಧ ಹೊರುವವನಿಗೆ, “ನಿನ್ನ ಖಡ್ಗದಿಂದ ನನ್ನನ್ನು ಇರಿದು ಕೊಂದುಹಾಕು. ಆಗ ಪರದೇಶಿಯರು ಬಂದು ನನ್ನನ್ನು ಗಾಯಪಡಿಸಿ ಹಾಸ್ಯಮಾಡಲು ಸಾಧ್ಯವಾಗುವುದಿಲ್ಲ” ಎಂದನು.
ಆದರೆ ಅವನ ಆಯುಧಹೊರುವವನು ಅದಕ್ಕೆ ಒಪ್ಪಲಿಲ್ಲ; ಸೌಲನನ್ನು ಕೊಲ್ಲಲು ಅವನು ಹೆದರಿದನು. ಆಗ ಸೌಲನು ತನ್ನ ಖಡ್ಗದ ಮೇಲೆ ತಾನೇ ಬಿದ್ದು ಸತ್ತನು. 5 ಅವನ ಆಯುಧ ಹೊರುವವನು ಸೌಲನು ಸತ್ತದ್ದನ್ನು ನೋಡಿ ತಾನೂ ಆತ್ಮಹತ್ಯೆ ಮಾಡಿಕೊಂಡನು. 6 ಹೀಗೆ ಸೌಲನೂ ಅವನ ಮೂರು ಮಂದಿ ಮಕ್ಕಳೂ ಒಟ್ಟಿಗೆ ಸತ್ತರು.
7 ತಗ್ಗಿನಲ್ಲಿ ವಾಸಿಸುತ್ತಿದ್ದ ಇಸ್ರೇಲರು ತಮ್ಮ ಸೈನ್ಯವು ವೈರಿಗಳಿಂದ ಓಡಿಸಲ್ಪಡುವದನ್ನು ನೋಡಿದರು. ಅರಸನಾದ ಸೌಲನು ಮತ್ತು ಅವನ ಗಂಡುಮಕ್ಕಳು ಸತ್ತುಹೋಗಿರುವುದು ಅವರಿಗೆ ತಿಳಿಯಿತು. ಆಗ ಅವರೂ ತಮ್ಮತಮ್ಮ ಮನೆಗಳನ್ನು ಬಿಟ್ಟು ಓಡಿದರು. ಫಿಲಿಷ್ಟಿಯರು ಅವರ ಮನೆಗಳಿಗೆ ಬಂದಾಗ ಯಾರೂ ಇಲ್ಲದ್ದನ್ನು ನೋಡಿ ಅಲ್ಲಿಯೇ ವಾಸಿಸಿದರು.
8 ಮರುದಿವಸ ಫಿಲಿಷ್ಟಿಯರು ಹೆಣಗಳ ಮೇಲಿರುವ ಬೆಲೆಬಾಳುವ ವಸ್ತುಗಳನ್ನು ದೋಚಲು ಬಂದರು. ಆಗ ಅವರಿಗೆ ಗಿಲ್ಬೋವ ಬೆಟ್ಟದ ಮೇಲೆ ಸೌಲ ಮತ್ತು ಅವನ ಗಂಡುಮಕ್ಕಳ ಶರೀರಗಳು ದೊರಕಿದವು. 9 ಸೌಲನ ಶರೀರದ ಮೇಲಿದ್ದ ಬೆಲೆಬಾಳುವ ವಸ್ತುಗಳನ್ನು ಅವರು ದೋಚಿಕೊಂಡರು; ಅವನ ತಲೆಯನ್ನೂ ಆಯುಧಗಳನ್ನೂ ತೆಗೆದುಕೊಂಡು ತಮ್ಮ ಊರಿನಲ್ಲಿದ್ದ ಜನರಿಗೂ ಅವರ ಸುಳ್ಳುದೇವರುಗಳಿಗೂ ತಿಳಿಸಲು ಸಂದೇಶಕರನ್ನು ಕಳುಹಿಸಿದರು. 10 ಫಿಲಿಷ್ಟಿಯರು ಸೌಲನ ಆಯುಧಗಳನ್ನು ತಮ್ಮ ದೇವರ ಆಲಯದಲ್ಲಿಟ್ಟರು. ಸೌಲನ ತಲೆಯನ್ನು ದಾಗೋನನ ದೇವಸ್ಥಾನದಲ್ಲಿ ತೂಗುಹಾಕಿದರು.
11 ಫಿಲಿಷ್ಟಿಯರು ಸೌಲನಿಗೆ ಮಾಡಿದ್ದು ಯಾಬೇಷ್ ಗಿಲ್ಯಾದಿನ ಜನರಿಗೆ ತಿಳಿಯಿತು. 12 ಆಗ ಯಾಬೇಷ್ ಗಿಲ್ಯಾದಿನ ರಣವೀರರು ಹೊರಟು ಸೌಲನ ಮತ್ತು ಅವನ ಗಂಡುಮಕ್ಕಳ ಶವಗಳನ್ನು ಯಾಬೇಷ್ ಗಿಲ್ಯಾದಿಗೆ ತಂದರು. ಆ ರಣವೀರರು ಸೌಲನ ಮತ್ತು ಅವನ ಗಂಡುಮಕ್ಕಳ ಎಲುಬುಗಳನ್ನು ಯಾಬೇಷಿನಲ್ಲಿದ್ದ ಒಂದು ದೊಡ್ಡ ಮರದ ಬುಡದಲ್ಲಿ ಹೂಳಿಟ್ಟರು. ಅನಂತರ ಏಳು ದಿವಸಗಳ ತನಕ ಅವರು ಶೋಕಿಸಿದರು.
13 ಸೌಲನು ಯೆಹೋವನಿಗೆ ಅವಿಧೇಯನಾಗಿದ್ದರಿಂದ ಸತ್ತನು. ಅವನು ಯೆಹೋವನ ಮಾತನ್ನು ಕೇಳದೆ ಹೋದನು. 14 ಅಲ್ಲದೆ ಅವನು ಯೆಹೋವನ ಸಲಹೆಯನ್ನು ಪಡೆದುಕೊಳ್ಳುವ ಬದಲಾಗಿ ಮಾಟಮಂತ್ರ ಮಾಡುವ ಹೆಂಗಸಿನ ಬಳಿಗೆ ಹೋದನು. ಆದ್ದರಿಂದಲೇ ಯೆಹೋವನು ರಾಜ್ಯವನ್ನು ಸೌಲನಿಂದ ತೆಗೆದು ಇಷಯನ ಮಗನಾದ ದಾವೀದನಿಗೆ ಕೊಟ್ಟನು.
ಯೇಸುವನ್ನೇ ಅನುಸರಿಸಿರಿ
12 ನಮ್ಮ ಸುತ್ತಲೂ ನಂಬಿಕೆಯುಳ್ಳ ಅನೇಕ ಜನರಿದ್ದಾರೆ. ನಂಬಿಕೆ ಎಂದರೇನೆಂದು ಅವರ ಜೀವಿತಗಳೇ ಸಾಕ್ಷಿ ಹೇಳುತ್ತವೆ. ಆದ್ದರಿಂದ ನಾವು ಅವರಂತಿರಬೇಕು. ನಮ್ಮ ಮುಂದಿರುವ ಗುರಿಯನ್ನು ಮುಟ್ಟಲು ಓಡಬೇಕು ಮತ್ತು ನಮ್ಮ ಪ್ರಯತ್ನವನ್ನು ನಿಲ್ಲಿಸಬಾರದು. ನಮ್ಮನ್ನು ತಡೆಯುವ ಎಲ್ಲಾ ವಿಷಯಗಳನ್ನೂ ನಮ್ಮ ಜೀವಿತದಿಂದ ತೆಗೆದುಹಾಕಬೇಕು. ನಮ್ಮನ್ನು ಸುಲಭವಾಗಿ ಹಿಡಿದುಕೊಳ್ಳುವ ಪಾಪದಿಂದ ಬಿಡಿಸಿಕೊಳ್ಳಬೇಕು. 2 ನಾವು ಯಾವಗಲೂ ಯೇಸುವನ್ನು ಮಾದರಿಯಾಗಿ ಇಟ್ಟುಕೊಂಡಿರಬೇಕು. ನಮ್ಮ ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆತನೇ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡನು. ಈಗ ಆತನು ದೇವರ ಸಿಂಹಾಸನದ ಬಲಭಾಗದಲ್ಲಿ ಕುಳಿತಿರುವನು. 3 ಯೇಸುವನ್ನು ಕುರಿತು ಯೋಚಿಸಿರಿ. ಪಾಪಪೂರಿತವಾದ ಜನರು ಆತನ ವಿರುದ್ಧವಾಗಿ ಕೆಟ್ಟದ್ದನ್ನು ಮಾಡುವಾಗ ಆತನು ತಾಳ್ಮೆಯಿಂದ ಇದ್ದನು. ಅದೇ ರೀತಿ ನೀವೂ ತಾಳ್ಮೆಯಿಂದಿರಬೇಕು ಮತ್ತು ಧೈರ್ಯಗೆಡಬಾರದು.
ದೇವರು ತಂದೆಯಂತಿದ್ದಾನೆ
4 ನೀವು ಪಾಪದ ವಿರುದ್ಧ ಹೋರಾಡುತ್ತಿದ್ದರೂ ನಿಮ್ಮ ಹೋರಾಟಗಳು ನಿಮ್ಮನ್ನು ಸಾವಿನ ಸಮೀಪಕ್ಕೆ ಇನ್ನೂ ತಂದಿಲ್ಲ. 5 ನೀವು ದೇವರ ಮಕ್ಕಳಾಗಿದ್ದೀರಿ. ಆತನು ನಿಮಗೆ ನೆಮ್ಮದಿಯ ಮಾತುಗಳನ್ನು ನುಡಿಯುತ್ತಾನೆ. ನೀವು ಆ ಮಾತುಗಳನ್ನು ಮರೆತಿರುವಿರಿ:
“ಮಗನೇ, ಪ್ರಭುವಿನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ.
ಪ್ರಭುವು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.
6 ಪ್ರಭುವು ತಾನು ಪ್ರೀತಿಸುವವನನ್ನೇ ದಂಡಿಸುತ್ತಾನೆ;
ಯಾರನ್ನು ಮಗನೆಂದು ಒಪ್ಪಿಕೊಳ್ಳುವನೋ ಅವನನ್ನು ದಂಡಿಸುತ್ತಾನೆ.”(A)
7 ಆದ್ದರಿಂದ ತಂದೆಯು ನೀಡುವ ದಂಡನೆ ಎಂಬುದಾಗಿ ಅವುಗಳನ್ನು ಸಹಿಸಿಕೊಳ್ಳಿ. ತಂದೆಯು ತನ್ನ ಮಕ್ಕಳನ್ನು ದಂಡಿಸುವಂತೆ ದೇವರು ನಿಮ್ಮನ್ನು ಈ ರೀತಿ ಶಿಕ್ಷಿಸುತ್ತಾನೆ. ಎಲ್ಲಾ ಮಕ್ಕಳು ತಮ್ಮ ತಂದೆಗಳಿಂದ ಶಿಕ್ಷಿಸಲ್ಪಡುತ್ತಾರೆ. 8 ನೀವು ಎಂದೂ ಶಿಕ್ಷಿಸಲ್ಪಡದಿದ್ದರೆ ನಿಮ್ಮ ತಂದೆಗೆ ನೀವು ನಿಜವಾದ ಮಕ್ಕಳಲ್ಲ. 9 ಈ ಲೋಕದಲ್ಲಿ ನಮ್ಮೆಲ್ಲರನ್ನೂ ಶಿಕ್ಷಿಸಿದಂಥ ತಂದೆಗಳು ನಮಗಿದ್ದರು. ನಾವು ಅವರನ್ನು ಗೌರವಿಸಿದೆವು. ಆದ್ದರಿಂದ ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಂದ ದಂಡನೆಗಳನ್ನು ಸ್ವೀಕರಿಸಿಕೊಳ್ಳುವುದು ಬಹಳ ಮುಖ್ಯವಾದದ್ದು. ನಾವು ಹೀಗೆ ಮಾಡಿದರೆ ಜೀವವನ್ನು ಹೊಂದಿಕೊಳ್ಳುವೆವು. 10 ಈ ಲೋಕದ ನಮ್ಮ ತಂದೆಗಳು ನಮ್ಮನ್ನು ಸ್ವಲ್ಪಕಾಲ ದಂಡಿಸಿದರು. ಅವರು ತಮಗೆ ಉತ್ತಮವೆಂದು ತೋರಿದ ರೀತಿಯಲ್ಲಿ ನಮ್ಮನ್ನು ಶಿಕ್ಷಿಸಿದರು. ಆದರೆ ದೇವರು ನಮಗೆ ಸಹಾಯ ಮಾಡಲು ನಮ್ಮನ್ನು ಶಿಕ್ಷಿಸುತ್ತಾನೆ. ಏಕೆಂದರೆ ನಾವೂ ಆತನಂತೆ ಪರಿಶುದ್ಧರಾಗಬೇಕೆಂಬುದೇ ಆತನ ಉದ್ದೇಶ. 11 ಯಾವುದೇ ದಂಡನೆಯಾಗಲಿ ತತ್ಕಾಲಕ್ಕೆ ಸಂತೋಷಕರವಾಗಿರದೆ ದುಃಖಕರವಾಗಿರುತ್ತದೆ. ಆದರೆ ಆ ತರುವಾಯ ದಂಡನೆಯಿಂದ ನಾವು ಕಲಿತುಕೊಂಡು ಯೋಗ್ಯವಾದ ಜೀವಿತವನ್ನು ಆರಂಭಿಸುವುದರ ಮೂಲಕ ನಮಗೆ ಸಮಾಧಾನ ಉಂಟಾಗುತ್ತದೆ.
ಯೋಗ್ಯ ಮಾರ್ಗದಲ್ಲಿ ಜೀವಿಸಿರಿ
12 ನೀವು ದುರ್ಬಲರಾಗಿದ್ದೀರಿ. ಆದ್ದರಿಂದ ನಿಮ್ಮನ್ನು ಮತ್ತೆ ಬಲಪಡಿಸಿಕೊಳ್ಳಿರಿ. 13 ನೀವು ಯೋಗ್ಯವಾದ ಮಾರ್ಗದಲ್ಲಿ ಜೀವಿಸಿದರೆ ರಕ್ಷಣೆ ಹೊಂದುವಿರಿ ಮತ್ತು ನಿಮ್ಮನ್ನು ನಾಶಗೊಳಿಸಲು ನಿಮ್ಮ ಬಲಹೀನತೆಗಳಿಗೆ ಸಾಧ್ಯವಾಗುವುದಿಲ್ಲ.
14 ಎಲ್ಲಾ ಜನರೊಂದಿಗೆ ಸಮಾಧಾನದಿಂದಲೂ ಪರಿಶುದ್ಧರಾಗಿಯೂ ಜೀವಿಸಲು ಪ್ರಯತ್ನಿಸಿರಿ. ಯಾವನ ಜೀವಿತವು ಪರಿಶುದ್ಧವಾಗಿರುವುದಿಲ್ಲವೋ ಅವನೆಂದಿಗೂ ಪ್ರಭುವನ್ನು ನೋಡುವುದಿಲ್ಲ. 15 ನಿಮ್ಮಲ್ಲಿ ಯಾರೂ ದೇವರ ಕೃಪೆಯನ್ನು ಕಳೆದುಕೊಳ್ಳದಂತೆ ಎಚ್ಚರದಿಂದಿರಿ. ನಿಮ್ಮಲ್ಲಿ ಯಾವನೂ ಚಿಗುರಿ ಬೆಳೆಯುವ ವಿಷದ ಬೇರಿನಂತಾಗದಂತೆ ಎಚ್ಚರಿಕೆಯಿಂದಿರಿ. ಅಂಥವನಿಂದ ನಿಮ್ಮ ಇಡೀ ಗುಂಪೇ ಹಾಳಾಗುವುದು. 16 ನಿಮ್ಮಲ್ಲಿ ಯಾರೂ ಮಾಡದಂತೆ ಜಾಗ್ರತೆಯಿಂದಿರಿ; ಪ್ರಾಪಂಚಿಕನಾದ ಏಸಾವನಂತೆ ಆಗದಿರಲು ಎಚ್ಚರದಿಂದಿರಿ. ಹಿರಿಯ ಮಗನಾದ ಏಸಾವನು ತನ್ನ ತಂದೆಯ ಸಮಸ್ತಕ್ಕೂ ವಾರಸುದಾರನಾಗುತ್ತಿದ್ದನು. ಆದರೆ ಅವನು ಒಂದು ಹೊತ್ತಿನ ಊಟಕ್ಕಾಗಿ ಎಲ್ಲವನ್ನೂ ಮಾರಿದನು. 17 ನಿಮಗೇ ತಿಳಿದಿರುವಂತೆ, ಆ ಬಳಿಕ ಅವನು ತನ್ನ ತಂದೆಯ ಆಶೀರ್ವಾದವನ್ನು ಪಡೆದುಕೊಳ್ಳಲು ಬಹಳವಾಗಿ ಗೋಳಾಡಿದನು. ಏಸಾವನು ತಾನು ಮಾಡಿದ್ದನ್ನು ಬದಲಾಯಿಸಲಾಗದ್ದರಿಂದ ತಂದೆಯ ಆಶೀರ್ವಾದವು ಅವನಿಗೆ ದೊರೆಯಲಿಲ್ಲ.
18 ನೀವು ಒಂದು ಹೊಸ ಸ್ಥಳಕ್ಕೆ ಬಂದಿರುವಿರಿ. ಅದು ಇಸ್ರೇಲಿನ ಜನರು ಬಂದ ಬೆಟ್ಟದ ಸ್ಥಳವಲ್ಲ. ಮುಟ್ಟುವುದಕ್ಕೆ ಸಾಧ್ಯವಾಗುವಂತಹ ಮತ್ತು ಬೆಂಕಿ ಹತ್ತಿಕೊಂಡಿರುವಂತಹ ಬೆಟ್ಟದ ಬಳಿಗೆ ನೀವು ಬಂದಿಲ್ಲ. ನೀವು ಕಗ್ಗತ್ತಲೆ, ದುಃಖ ಮತ್ತು ಬಿರಗಾಳಿಯ ಬಳಿಗೆ ಬಂದಿಲ್ಲ. 19 ನೀವು ತುತೂರಿಯ ಧ್ವನಿಯ ಬಳಿಗಾಗಲಿ ಅಥವಾ ನಿಮ್ಮೊಂದಿಗೆ ಮಾತನಾಡುವ ಸ್ವರದ ಬಳಿಗಾಗಲಿ ಬಂದಿಲ್ಲ. ಜನರು ಆ ಧ್ವನಿಯನ್ನು ಕೇಳಿದಾಗ, ಮತ್ತೊಂದು ಮಾತನ್ನು ತಮಗೆ ಹೇಳಬಾರದೆಂದು ಬೇಡಿಕೊಂಡರು. 20 “ಆ ಬೆಟ್ಟವನ್ನು ಮುಟ್ಟುವ ಏನನ್ನಾದರೂ ಸರಿ, ಅದು ಒಂದು ಪ್ರಾಣಿಯಾಗಿದ್ದರೂ ಅದನ್ನು ಕಲ್ಲೆಸೆದು ಕೊಂದುಹಾಕಿರಿ”(B) ಎಂಬ ಆಜ್ಞೆಯನ್ನು ಕೇಳಲು ಅವರು ಇಷ್ಟಪಡಲಿಲ್ಲ. 21 ಆ ಜನರು ಅಂದು ಕಂಡದ್ದು ಭಯಂಕರವಾಗಿದ್ದುದರಿಂದ ಮೋಶೆಯು, “ನಾನು ಭಯದಿಂದ ನಡುಗುತ್ತಿದ್ದೇನೆ”(C) ಎಂದು ಹೇಳಿದನು.
22 ಆದರೆ ನೀವು ಅಂಥ ಸ್ಥಳಕ್ಕೆ ಬಂದಿಲ್ಲ. ನೀವು ಬಂದಿರುವ ಹೊಸ ಸ್ಥಳ ಚೀಯೋನ್ ಬೆಟ್ಟ, ಜೀವಸ್ವರೂಪನಾದ ದೇವರು ವಾಸವಾಗಿರುವ ಪರಲೋಕದ ಜೆರುಸಲೇಮಿಗೂ ಸಹಸ್ರಾರು ದೇವದೂತರು ಸಂತೋಷದಿಂದ ಒಟ್ಟುಗೂಡಿರುವ ಸ್ಥಳಕ್ಕೂ ಬಂದಿರುವಿರಿ. 23 ದೇವರ ಚೊಚ್ಚಲು ಮಕ್ಕಳ ಸಭೆಗೆ ನೀವು ಬಂದಿರುವಿರಿ. ಅವರ ಹೆಸರುಗಳನ್ನು ಪರಲೋಕದಲ್ಲಿ ಬರೆಯಲಾಗಿದೆ. ನೀವು ಜನರಿಗೆಲ್ಲ ತೀರ್ಪು ನೀಡುವ ದೇವರ ಬಳಿಗೂ ಪರಿಪೂರ್ಣರನ್ನಾಗಿ ಮಾಡಲ್ಪಟ್ಟ ಒಳ್ಳೆಯ ಜನರ ಆತ್ಮಗಳ ಬಳಿಗೂ ಬಂದಿರುವಿರಿ. 24 ದೇವರಿಂದ ಹೊಸ ಒಡಂಬಡಿಕೆಯನ್ನು ತಂದಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಉತ್ತಮ ಸಂಗತಿಗಳನ್ನು ನಮಗೆ ತಿಳಿಸುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.
25 ದೇವರು ಮಾತನಾಡುವಾಗ ಆಲಿಸದೆ ಇರಬೇಡಿ. ಆತನು ಇಸ್ರೇಲರಿಗೆ ಈ ಲೋಕದಲ್ಲಿ ಎಚ್ಚರಿಕೆ ನೀಡಿದಾಗ, ಅವರು ಆತನ ಮಾತನ್ನು ಕೇಳಲಿಲ್ಲ. ಆದರೆ ಅವರು ತಪ್ಪಿಸಿಕೊಳ್ಳಲಾಗಲಿಲ್ಲ. ಈಗ ದೇವರು ಪರಲೋಕದಿಂದ ಮಾತಾಡುತ್ತಿದ್ದಾನೆ. ಆತನ ಮಾತನ್ನು ಆಲಿಸದ ಜನರು ಹೇಗೆ ತಪ್ಪಿಸಿಕೊಳ್ಳಲಾದೀತು? 26 ಆತನು ಮುಂಚೆ ಮಾತನಾಡಿದಾಗ, ಆತನ ಧ್ವನಿಯು ಭೂಮಿಯನ್ನು ನಡುಗಿಸಿತು. ಆದರೆ ಈಗ ಆತನು, “ಮತ್ತೊಂದು ಸಾರಿ ನಾನು ಭೂಮಿಯನ್ನು ನಡುಗಿಸುತ್ತೇನೆ, ಪರಲೋಕವನ್ನೂ ನಡುಗಿಸುತ್ತೇನೆ”(D) ಎಂದು ವಾಗ್ದಾನ ಮಾಡಿದ್ದಾನೆ. 27 “ಮತ್ತೊಂದು ಸಾರಿ” ಎಂಬ ಮಾತುಗಳು ಸೃಷ್ಟಿಗೊಂಡ ಎಲ್ಲವೂ ನಾಶವಾಗುತ್ತವೆ ಎಂಬುದನ್ನು ನಮಗೆ ಸ್ಪಷ್ಟಪಡಿಸುತ್ತವೆ. ಅವುಗಳನ್ನು ನಡುಗಿಸಲು ಸಾಧ್ಯ. ನಡುಗಿಸಲಾಗದಂಥವುಗಳು ಮಾತ್ರ ಸ್ಥಿರವಾಗಿರುತ್ತವೆ.
28 ಆದ್ದರಿಂದ, ನಡುಗಿಸಲಾಗದಿರುವ ರಾಜ್ಯವನ್ನು ನಾವು ಹೊಂದಿರುವುದರಿಂದ ದೇವರಿಗೆ ಕೃತಜ್ಞತೆಯಿಂದಿರಬೇಕು. ಆತನಿಗೆ ಮೆಚ್ಚಿಕೆಕರವಾದ ಆರಾಧನೆಯನ್ನು ಭಯಭಕ್ತಿಯಿಂದ ಮಾಡಬೇಕು. 29 ಏಕೆಂದರೆ ನಮ್ಮ “ದೇವರು ನಾಶಮಾಡುವ ಬೆಂಕಿಯಂತಿದ್ದಾನೆ.”(E)
ಇಸ್ರೇಲರ ಸುಭಿಕ್ಷೆ ತೆಗೆಯಲ್ಪಡುವದು
6 ಚೀಯೋನಿನಲ್ಲಿ ಸುಖದಿಂದಿರುವ ಜನರಿಗೂ
ಸಮಾರ್ಯದ ಪರ್ವತಗಳ ಮೇಲೆ ಸುರಕ್ಷಿತರಾಗಿರುವ ಜನರಿಗೂ ಕೇಡು ಸಂಭವಿಸುವದು.
ನೀವು ವಿಶೇಷವಾದ ದೇಶದ ವಿಶೇಷ ನಾಯಕರು.
ಇಸ್ರೇಲಿನ ಮನೆತನವು ಸಲಹೆಗಾಗಿ ನಿಮ್ಮ ಹತ್ತಿರ ಬರುತ್ತದೆ.
2 ಹೋಗಿ ಕಲ್ನೆಯ ಕಡೆಗೆ ದಿಟ್ಟಿಸಿರಿ.
ಅಲ್ಲಿಂದ ದೊಡ್ಡ ಪಟ್ಟಣವಾದ ಹಾಮಾತಿಗೆ ಹೋಗಿರಿ.
ಫಿಲಿಷ್ಟಿಯರ ಗತ್ ಪಟ್ಟಣಕ್ಕೆ ಹೋಗಿರಿ.
ಆ ಜನಾಂಗಗಳಿಗಿಂತ ನೀವು ಉತ್ತಮರೋ? ಇಲ್ಲ.
ಅವರ ರಾಜ್ಯವು ನಿಮಗಿಂತ ವಿಸ್ತಾರವಾಗಿದೆ.
3 ಶಿಕ್ಷಿಸಲ್ಪಡುವ ದಿವಸದ ಕಡೆಗೆ ನೀವು ಧಾವಿಸುತ್ತಿದ್ದೀರಿ.
ಅಕ್ರಮ ಆಳ್ವಿಕೆಯನ್ನು ನೀವು ಹತ್ತಿರಕ್ಕೆ ಬರಮಾಡಿಕೊಳ್ಳುತ್ತಾ ಇದ್ದೀರಿ.
4 ಆದರೆ ಈಗ ನೀವು ಸುಖದ ಜೀವಿತದಲ್ಲಿ ಆನಂದಿಸುತ್ತಿದ್ದೀರಿ,
ದಂತದ ಮಂಚದಲ್ಲಿ ಮಲಗುವಿರಿ;
ಸುಖಾಸನಗಳ ಮೇಲೆ ಬಿದ್ದುಕೊಳ್ಳುವಿರಿ.
ಹಿಂಡಿನಿಂದ ಎಳೇ ಕುರಿಮರಿಯನ್ನೂ ಹಟ್ಟಿಯಿಂದ ಎಳೇ ಕರುವನ್ನೂ ಭಕ್ಷಿಸುತ್ತೀರಿ.
5 ನಿಮ್ಮ ತಂತಿವಾದ್ಯಗಳಿಂದ ಹಾಡನ್ನು ಬಾರಿಸುವಿರಿ;
ದಾವೀದನಂತೆ ನಿಮ್ಮ ವಾದ್ಯಗಳನ್ನು ಅಭ್ಯಾಸಿಸುವಿರಿ.
6 ಅಂದವಾದ ಪಾತ್ರೆಗಳಲ್ಲಿ ದ್ರಾಕ್ಷಾರಸ ಕುಡಿಯುವಿರಿ.
ಉತ್ತಮವಾದ ಸುಗಂಧತೈಲವನ್ನು ಉಪಯೋಗಿಸುವಿರಿ.
ಯೋಸೇಫನ ಕುಟುಂಬದ
ನಾಶನದ ಬಗ್ಗೆಯೂ ನೀವು ಬೇಸರಗೊಳ್ಳಲಿಲ್ಲ.
7 ಈಗ ಆ ಜನರು ತಮ್ಮ ಸುಖಾಸನಗಳಲ್ಲಿ ಕಾಲನ್ನು ನೇರವಾಗಿ ಚಾಚಿಕೊಂಡು ಮಲಗಿದ್ದಾರೆ. ಆದರೆ ಅವರ ಸುಖದ ಸಮಯಗಳು ಅಂತ್ಯವಾಗುವವು. ಅವರು ಕೈದಿಗಳಂತೆ ಸೆರೆಹಿಡಿಯಲ್ಪಟ್ಟು ಪರದೇಶಕ್ಕೆ ಒಯ್ಯಲ್ಪಡುವರು. ಅವರಲ್ಲಿ ಕೆಲವರು ಸೆರೆ ಒಯ್ಯಲ್ಪಡುವವರಲ್ಲಿ ಮೊದಲಿಗರಾಗುವರು. 8 ನನ್ನ ಒಡೆಯನಾದ ಯೆಹೋವನು ತನ್ನ ಹೆಸರಿನ ಮೇಲೆ ಆಣೆಯಿಟ್ಟು ಈ ಮಾತುಗಳನ್ನು ನುಡಿದಿದ್ದಾನೆ. ಸರ್ವಶಕ್ತನಾದ ಯೆಹೋವನ ನುಡಿಗಳಿವು:
“ಯಾಕೋಬನು ಹೆಚ್ಚಳಪಡುವಂಥವುಗಳನ್ನು ನಾನು ದ್ವೇಷಿಸುತ್ತೇನೆ.
ಅವನ ಬಲವಾದ ಬುರುಜುಗಳನ್ನು ದ್ವೇಷಿಸುತ್ತೇನೆ.
ಆದ್ದರಿಂದ ಶತ್ರುಗಳು ಬಂದು ಪಟ್ಟಣವನ್ನೂ
ಪಟ್ಟಣದಲ್ಲಿರುವದೆಲ್ಲವನ್ನೂ ಸೂರೆಮಾಡುವಂತೆ ಮಾಡುವೆನು.”
ಸ್ವಲ್ಪ ಮಂದಿ ಇಸ್ರೇಲರು ಬದುಕಿಕೊಳ್ಳುವರು
9 ಆ ಸಮಯದಲ್ಲಿ ಒಂದು ಮನೆಯಲ್ಲಿ ಹತ್ತು ಮಂದಿ ಇದ್ದರೂ ಅವರು ಸಾಯುವರು. 10 ಒಬ್ಬ ವ್ಯಕ್ತಿಯು ಸತ್ತಾಗ ಅವನ ಸಂಬಂಧಿಕರಲ್ಲಿ ಒಬ್ಬನು ಬಂದು ಶವವನ್ನು ಸುಡಲು ತೆಗೆದುಕೊಂಡು ಹೋಗುವನು. ಸಂಬಂಧಿಕನು ಬಂದು ಎಲುಬುಗಳನ್ನು ಕೊಂಡೊಯ್ಯುವನು. ಮನೆಯೊಳಗೆ ಅವಿತುಕೊಂಡಿರುವವರನ್ನು ಕರೆಯುವನು. “ಇನ್ನೂ ಸತ್ತ ಹೆಣಗಳು ಒಳಗಿವೆಯೋ?” ಎಂದು ವಿಚಾರಿಸುವನು.
ಒಳಗಿದ್ದವರು “ಇಲ್ಲ” ಎಂದು ಉತ್ತರಿಸುವರು.
ಆಗ ಆ ಸಂಬಂಧಿಕನು ಅವರನ್ನು ತಡೆದು, “ಯೆಹೋವನ ನಾಮವನ್ನು ನಾವು ಉಚ್ಚರಿಸಬಾರದು” ಎಂದು ಹೇಳುವನು.
11 ನೋಡು, ಯೆಹೋವನು ಆಜ್ಞೆಯನ್ನು ಕೊಡುವನು.
ಆಗ ಭವ್ಯಭವನಗಳು ಒಡೆದು ಚೂರುಚೂರಾಗಿ ಬೀಳುವವು.
ಮತ್ತು ಸಣ್ಣ ಮನೆಗಳು ಚಿಂದಿಚಿಂದಿಯಾಗಿ ಚೂರಾಗುವವು.
12 ಕುದುರೆಗಳು ಬಂಡೆಗಳ ಮೇಲೆ ಓಡುವವೋ? ಇಲ್ಲ!
ಬಂಡೆಗಳನ್ನು ಊಳಲು ನಿಮ್ಮ ಹಸುಗಳನ್ನು ಉಪಯೋಗಿಸುವಿರೋ? ಇಲ್ಲ!
ಆದರೆ ನೀವು ಎಲ್ಲವನ್ನು ತಿರುವುಮುರುವು ಮಾಡುತ್ತೀರಿ.
ಒಳ್ಳೆಯತನವನ್ನು ನೀವು ವಿಷವಾಗಿ ಮಾಡಿದ್ದೀರಿ.
ನ್ಯಾಯವನ್ನು ಕಹಿಯಾದ ವಿಷವನ್ನಾಗಿ ಮಾಡಿದ್ದೀರಿ.
13 ಲೊ ಡೆಬಾರಿನಲ್ಲಿ ನೀವು ಸಂತೋಷವಾಗಿದ್ದೀರಿ.
“ಕರ್ನಯಿಮನ್ನು ನಾವು ನಮ್ಮ ಬಲದಿಂದಲೇ ಗೆದ್ದಿದ್ದೇವೆ” ಎಂದು ನೀವು ಹೇಳುತ್ತೀರಿ.
14 “ಆದರೆ ಇಸ್ರೇಲೇ, ನಿನಗೆ ವಿರುದ್ಧವಾಗಿ ಒಂದು ಜನಾಂಗವನ್ನು ಎಬ್ಬಿಸುವೆನು. ಆ ಜನಾಂಗವು ನಿನ್ನ ದೇಶದಲ್ಲಿ ಪೂರ್ತಿ ಸಂಕಟವನ್ನುಂಟು ಮಾಡುವದು; ಅದು ಲೆಬೋಹಮಾತಿನಿಂದ ಹಿಡಿದು ಅರಾಬಾ ಹಳ್ಳದ ತನಕ ಸಂಕಟವನ್ನುಂಟು ಮಾಡುವದು.” ಸರ್ವಶಕ್ತನಾದ ಯೆಹೋವನು ಇದನ್ನು ಹೇಳಿದ್ದಾನೆ.
ಮರಿಯಳು ನೀಡಿದ ಸಂದರ್ಶನ
39 ಆಗ ಮರಿಯಳು ಎದ್ದು ಜುದೇಯದ ಗುಡ್ಡಪ್ರದೇಶದಲ್ಲಿರುವ ಒಂದು ಊರಿಗೆ ಬೇಗಬೇಗನೆ ಹೋದಳು. 40 ಅಲ್ಲಿ ಜಕರೀಯನ ಮನೆಯೊಳಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು. 41 ಎಲಿಜಬೇತಳು ಮರಿಯಳ ವಂದನೆಯನ್ನು ಕೇಳಿದಾಗ, ಆಕೆಯ ಗರ್ಭದಲ್ಲಿದ್ದ ಮಗು ನಲಿದಾಡಿತು. ಆಗ ಎಲಿಜಬೇತಳು ಪವಿತ್ರಾತ್ಮಭರಿತಳಾಗಿ
42 ಹರ್ಷೋದ್ಗಾರದಿಂದ ಹೀಗೆಂದಳು: “ದೇವರು ನಿನ್ನನ್ನು (ಮರಿಯ) ಬೇರೆಲ್ಲಾ ಸ್ತ್ರೀಯರಿಗಿಂತ ಹೆಚ್ಚಾಗಿ ಆಶೀರ್ವದಿಸಿದ್ದಾನೆ. ನಿನ್ನಲ್ಲಿ ಜನಿಸಲಿರುವ ಮಗುವನ್ನು ದೇವರು ಆಶೀರ್ವದಿಸಿದ್ದಾನೆ. 43 ನನ್ನ ಪ್ರಭುವಿನ ತಾಯಿಯಾದ ನೀನೇ ನನ್ನ ಬಳಿಗೆ ಬಂದದ್ದು ನನಗೆಷ್ಟೋ ಭಾಗ್ಯ! 44 ನಿನ್ನ ಧ್ವನಿಯನ್ನು ಕೇಳಿದಾಗ, ನನ್ನೊಳಗಿರುವ ಕೂಸು ಸಂತೋಷದಿಂದ ನಲಿದಾಡಿತು. 45 ಪ್ರಭುವು ನಿನಗೆ ಹೇಳಿದ್ದು ಸಂಭವಿಸೇ ತೀರುವುದೆಂದು ನೀನು ನಂಬಿ ಧನ್ಯಳಾದೆ” ಎಂದಳು.
ಮರಿಯಳು ದೇವರನ್ನು ಸ್ತುತಿಸಿದಳು
46 ಆಗ ಮರಿಯಳು,
47 “ನನ್ನ ಪ್ರಾಣವು ಪ್ರಭುವನ್ನು ಸ್ತುತಿಸುತ್ತದೆ.
ದೇವರೇ ನನ್ನ ರಕ್ಷಕನಾಗಿರುವುದರಿಂದ ನನ್ನ ಹೃದಯವು ಸಂತೋಷಗೊಂಡಿದೆ.
48 ದೇವರು ತನ್ನ ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದಾನೆ.
ಇಂದಿನಿಂದ, ಎಲ್ಲಾ ಜನರು ನನ್ನನ್ನು ಧನ್ಯಳೆಂದು ಹೇಳುವರು.
49 ಏಕೆಂದರೆ ಸರ್ವಶಕ್ತನು (ದೇವರು) ನನಗೆ ಮಹಾಕಾರ್ಯಗಳನ್ನು ಮಾಡಿದ್ದಾನೆ.
ಆತನ ಹೆಸರು ಅತಿ ಪರಿಶುದ್ಧವಾದದ್ದು.
50 ದೇವರು ತನ್ನಲ್ಲಿ ಭಯಭಕ್ತಿಯುಳ್ಳ ಜನರಿಗೆ ಎಂದೆಂದಿಗೂ ಕರುಣೆ ತೋರುವನು.
51 ಆತನು ತನ್ನ ಭುಜಬಲವನ್ನು ತೋರಿ
ಗರ್ವಿಷ್ಠರನ್ನು ಚದರಿಸುತ್ತಾನೆ.
52 ದೇವರು ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗಿಳಿಸಿ
ದೀನರನ್ನು ಉನ್ನತಿಗೇರಿಸುತ್ತಾನೆ.
53 ಆತನು ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸಿ
ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾನೆ.
54 ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನಕ್ಕನುಸಾರವಾಗಿ
ಅಬ್ರಹಾಮನಿಗೂ ಅವನ ಸಂತತಿಯವರಿಗೂ ಯಾವಾಗಲೂ
55 ಕರುಣೆ ತೋರಬೇಕೆಂದುಕೊಂಡು ತನ್ನ ಸೇವಕನಾದ ಇಸ್ರೇಲನನ್ನು ಕೈ ಹಿಡಿದಿದ್ದಾನೆ” ಎಂದಳು.
56 ಮರಿಯಳು ಸುಮಾರು ಮೂರು ತಿಂಗಳ ಕಾಲ ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂತಿರುಗಿದಳು.
ಯೋಹಾನನ ಜನನ
57 ಎಲಿಜಬೇತಳಿಗೆ ಹೆರಿಗೆ ಕಾಲ ಬಂದಿತು. ಆಕೆಯಲ್ಲಿ ಒಬ್ಬ ಮಗನು ಹುಟ್ಟಿದನು. 58 ಪ್ರಭುವು ಆಕೆಗೆ ತೋರಿದ ಮಹಾಕರುಣೆಯು ಆಕೆಯ ನೆರೆಹೊರೆಯವರಿಗೆ ಮತ್ತು ಬಂಧುಗಳಿಗೆ ತಿಳಿಯಿತು. ಅವರು ಆಕೆಯ ವಿಷಯದಲ್ಲಿ ಸಂತೋಷಪಟ್ಟರು.
59 ಮಗುವಿಗೆ ಎಂಟು ದಿನವಾದಾಗ ಅವರು ಸುನ್ನತಿ ಮಾಡಿಸುವುದಕ್ಕಾಗಿ ಬಂದರು. ಅವರು ಆ ಮಗುವಿಗೆ “ಜಕರೀಯ” ಎಂಬ ಹೆಸರು ಇಡಬೇಕೆಂದಿದ್ದರು. ಏಕೆಂದರೆ ಅದು ಮಗುವಿನ ತಂದೆಯ ಹೆಸರಾಗಿತ್ತು. 60 ಆದರೆ ಮಗುವಿನ ತಾಯಿ, “ಇಲ್ಲ! ಆತನಿಗೆ ‘ಯೋಹಾನ’ ಎಂಬ ಹೆಸರಿಡಬೇಕು” ಎಂದು ಹೇಳಿದಳು.
61 ಜನರು ಎಲಿಜಬೇತಳಿಗೆ, “ನಿನ್ನ ಕುಟುಂಬದಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ!” ಎಂದು ಹೇಳಿದರು. 62 ಬಳಿಕ ಅವರು ಅವನ ತಂದೆಗೆ ಸನ್ನೆಮಾಡಿ, “ಆತನಿಗೆ ಯಾವ ಹೆಸರಿಡಬೇಕು?” ಎಂದು ಕೇಳಿದರು.
63 ಆಗ ಜಕರೀಯನು ಸನ್ನೆಮಾಡಿ, ಒಂದು ಹಲಗೆಯನ್ನು ತರಿಸಿಕೊಂಡು, “ಈತನ ಹೆಸರು ಯೋಹಾನ” ಎಂದು ಬರೆದನು. ಜನರೆಲ್ಲರಿಗೂ ಆಶ್ಚರ್ಯವಾಯಿತು. 64 ಆ ಕೂಡಲೇ ಜಕರೀಯನು ಮತ್ತೆ ಮಾತಾಡಬಲ್ಲವನಾಗಿ ದೇವರನ್ನು ಸ್ತುತಿಸತೊಡಗಿದನು. 65 ಇದನ್ನು ಕೇಳಿ ನೆರೆಹೊರೆಯವರಿಗೆಲ್ಲಾ ಭಯವಾಯಿತು. ಜುದೇಯದ ಗುಡ್ಡಪ್ರದೇಶದಲ್ಲೆಲ್ಲಾ ಈ ಸಂಗತಿಗಳ ಬಗ್ಗೆ ಜನರು ಮಾತನಾಡತೊಡಗಿದರು. 66 ಈ ಸಂಗತಿಗಳನ್ನು ಕೇಳಿದ ಜನರೆಲ್ಲರು ಆಶ್ಚರ್ಯಪಟ್ಟು “ಈ ಮಗು (ಯೋಹಾನ) ಬೆಳೆದು ದೊಡ್ಡವನಾದ ಮೇಲೆ ಎಂಥ ವ್ಯಕ್ತಿಯಾಗುವನೋ?” ಎಂದು ಯೋಚಿಸತೊಡಗಿದರು. ಏಕೆಂದರೆ ಪ್ರಭುವು ಈ ಮಗುವಿನ ಸಂಗಡವಿದ್ದನು.
ಜಕರೀಯನ ಪ್ರವಾದನೆ
67 ಬಳಿಕ ಯೋಹಾನನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು:
68 “ಇಸ್ರೇಲರ ಪ್ರಭುವಾದ ದೇವರಿಗೆ ಸ್ತೋತ್ರವಾಗಲಿ.
ಆತನು ಬಂದು ತನ್ನ ಜನರನ್ನು ಬಿಡುಗಡೆ ಮಾಡಿದ್ದಾನೆ.
69 ತನ್ನ ಸೇವಕನಾದ ದಾವೀದನ ಮನೆತನದಿಂದ
ದೇವರು ವೀರರಕ್ಷಕನನ್ನು ನಮಗೆ ಕೊಟ್ಟಿದ್ದಾನೆ.
70 ಇದನ್ನು ಆತನು ಪೂರ್ವಕಾಲದ
ತನ್ನ ಪವಿತ್ರ ಪ್ರವಾದಿಗಳ ಮೂಲಕ ತಿಳಿಸಿದ್ದಾನೆ.
71 ದೇವರು ನಮ್ಮನ್ನು ನಮ್ಮ ವೈರಿಗಳಿಂದಲೂ
ದ್ವೇಷಿಗಳ ಹಿಡಿತದಿಂದಲೂ ರಕ್ಷಿಸಿದ್ದಾನೆ.
72 ಕರುಣೆ ತೋರುವುದಾಗಿ ನಮ್ಮ ಪಿತೃಗಳಿಗೆ ನೀಡಿದ
ತನ್ನ ಪವಿತ್ರ ವಾಗ್ದಾನವನ್ನು ಆತನು ಜ್ಞಾಪಿಸಿಕೊಂಡಿದ್ದಾನೆ.
73 ನಮ್ಮ ವೈರಿಗಳ ಹಿಡಿತದಿಂದ ನಮ್ಮನ್ನು ಬಿಡಿಸುವುದಾಗಿ ದೇವರು ನಮ್ಮ ಪಿತೃವಾದ ಅಬ್ರಹಾಮನಿಗೆ ವಾಗ್ದಾನ ಮಾಡಿದ್ದಾನೆ.
74-75 ಏಕೆಂದರೆ ನಮ್ಮ ಜೀವಮಾನವೆಲ್ಲಾ ನಾವು ಆತನ ಸನ್ನಿಧಿಯಲ್ಲಿ ನೀತಿವಂತರೂ ಪರಿಶುದ್ಧರೂ ಆಗಿದ್ದು
ಭಯವಿಲ್ಲದೆ ಆತನ ಸೇವೆ ಮಾಡಬೇಕೆಂಬುದೇ ಆತನ ಉದ್ದೇಶವಾಗಿತ್ತು.
76 “ಮಗುವೇ, ನೀನು ಮಹೋನ್ನತನ ಪ್ರವಾದಿ ಎನಿಸಿಕೊಳ್ಳುವೆ.
ಪ್ರಭುವಿನ ಮುಂದೆ ಹೋಗಿ ಆತನ ಬರುವಿಕೆಗಾಗಿ ಜನರನ್ನು ಸಿದ್ಧಮಾಡುವೆ.
77 ಪಾಪಕ್ಷಮೆಯ ಮೂಲಕವಾಗಿ ರಕ್ಷಣೆಯಾಗುವುದೆಂಬ ತಿಳುವಳಿಕೆಯನ್ನು ನೀನು ಜನರಿಗೆ ಕೊಡುವೆ.
78 “ನಮ್ಮ ದೇವರ ಮಹಾಕರುಣೆಯಿಂದ
ಪರಲೋಕದಿಂದ ಹೊಸ ದಿನವೊಂದು ನಮಗಾಗಿ ಉದಯಿಸುವುದು.
79 ಅಂಧಕಾರದಲ್ಲಿ ಜೀವಿಸುತ್ತಾ ಮರಣಭಯದಲ್ಲಿರುವ ಜನರಿಗೆ ದೇವರು ಸಹಾಯ ಮಾಡುವನು.
ಆತನು ನಮ್ಮನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವನು.”
80 ಆ ಮಗುವು (ಯೋಹಾನನು) ಬೆಳೆದು ದೊಡ್ಡವನಾಗಿ ಆತ್ಮದಲ್ಲಿ ಬಲವುಳ್ಳವನಾದನು. ಇಸ್ರೇಲರಿಗೆ ತನ್ನ ಉಪದೇಶವನ್ನು ಆರಂಭಿಸುವ ತನಕ ಯೋಹಾನನು ಅಡವಿಯಲ್ಲಿ ವಾಸವಾಗಿದ್ದನು.
Kannada Holy Bible: Easy-to-Read Version. All rights reserved. © 1997 Bible League International