M’Cheyne Bible Reading Plan
ಇಸ್ಸಾಕಾರನ ಸಂತತಿಯವರು
7 ಇಸ್ಸಾಕಾರನಿಗೆ ನಾಲ್ಕು ಮಂದಿ ಗಂಡುಮಕ್ಕಳು: ತೋಲ, ಪೂವ, ಯಾಶೂಬ್ ಮತ್ತು ಶಿಮ್ರೋನ್.
2 ತೋಲನ ಗಂಡುಮಕ್ಕಳು: ಉಜ್ಜೀ, ರೆಫಾಯ, ಯೆರೀಯೇಲ್, ಯಹ್ಮೈ, ಇಬ್ಸಾಮ್ ಮತ್ತು ಸಮುವೇಲ್. ಇವರೆಲ್ಲಾ ಕುಲಪ್ರಧಾನರಾಗಿದ್ದರು. ಇವರೂ ಇವರ ಸಂತತಿಯವರೂ ರಣವೀರರಾಗಿದ್ದರು. ಅವರ ಸಂತತಿಯು ವೃದ್ಧಿಯಾದ ಕಾರಣ ಅರಸನಾದ ದಾವೀದನ ಸಮಯದಲ್ಲಿ ಅವರಲ್ಲಿ ಇಪ್ಪತ್ತೆರಡು ಸಾವಿರದ ಆರುನೂರು ಮಂದಿ ಕಾಲಾಳುಗಳು ಯುದ್ಧಕ್ಕೆ ತಯಾರಾಗಿದ್ದರು.
3 ಉಜ್ಜೀಯ ಮಗನು ಇಜ್ಯಹ್ಯಾಹ. ಇಜ್ಯಹ್ಯಾಹನ ಮಕ್ಕಳು: ಮೀಕಾಯೇಲ್, ಓಬದ್ಯ, ಯೋವೇಲ್ ಮತ್ತು ಇಷ್ಷೀಯ. ಈ ಐದು ಮಂದಿಯೂ ತಮ್ಮ ಗೋತ್ರಗಳ ನಾಯಕರುಗಳಾಗಿದ್ದರು. 4 ಇವರ ಚರಿತ್ರೆಯ ಪ್ರಕಾರ ಇವರಲ್ಲಿ ಮೂವತ್ತಾರು ಸಾವಿರ ಮಂದಿ ಯುದ್ಧಕ್ಕೆ ಹೋಗಲು ಸಮರ್ಥರಾಗಿದ್ದರು. ಇವರಿಗೆಲ್ಲಾ ಅನೇಕ ಹೆಂಡತಿಯರು ಮತ್ತು ಮಕ್ಕಳು ಇದ್ದದ್ದರಿಂದ ಇವರ ಕುಲವು ದೊಡ್ಡದಾಗಿತ್ತು.
5 ಸಂತಾನದ ಚರಿತ್ರೆಯ ಪ್ರಕಾರ ಇಸ್ಸಾಕಾರ್ ಕುಲದವರಲ್ಲಿದ್ದ ಯುದ್ಧವೀರರು ಎಂಭತ್ತೇಳು ಸಾವಿರ ಮಂದಿ.
ಬೆನ್ಯಾಮೀನನ ಸಂತತಿಯವರು
6 ಬೆನ್ಯಾಮೀನನಿಗೆ ಮೂರು ಮಂದಿ ಗಂಡುಮಕ್ಕಳು: ಬೆಳ, ಬೆಕೆರ್ ಮತ್ತು ಯೆದೀಯಯೇಲ್.
7 ಬೆಳನಿಗೆ ಐದು ಮಂದಿ ಗಂಡುಮಕ್ಕಳು. ಅವರು ಯಾರೆಂದರೆ: ಎಚ್ಬೋನ್, ಉಜ್ಜೀ, ಉಜ್ಜೀಯೇಲ್, ಯೆರೀಮೋತ್ ಮತ್ತು ಈರೀ. ಇವರೆಲ್ಲಾ ತಮ್ಮ ಗೋತ್ರಗಳಿಗೆ ನಾಯಕರಾಗಿದ್ದರು. ಇವರಲ್ಲಿ ಸಿದ್ಧರಾಗಿದ್ದ ಯುದ್ಧವೀರರು ಇಪ್ಪತ್ತೆರಡು ಸಾವಿರದ ಮೂವತ್ನಾಲ್ಕು ಮಂದಿ.
8 ಬೆಕೆರನ ಮಕ್ಕಳು ಯಾರೆಂದರೆ: ಜೆಮೀರ, ಯೋವಾಷ್, ಎಲೀಯೆಜೆರ್, ಎಲ್ಯೋವೇನೈ, ಒಮ್ರಿ, ಯೆರೀಮೋತ್, ಅಬೀಯ, ಅನಾತೋತ್ ಮತ್ತು ಅಲೆಮೆತ್. ಇವರೆಲ್ಲಾ ಬೆಕೆರನ ಮಕ್ಕಳು. 9 ಅವರ ಕುಲಚರಿತ್ರೆಯಲ್ಲಿ ಅವರ ನಾಯಕರುಗಳು ಯಾರೆಂಬುದನ್ನು ಬರೆಯಲಾಗಿದೆ. ಅವರಲ್ಲಿ ಯುದ್ಧಕ್ಕೆ ಸಿದ್ಧರಾಗಿದ್ದ ಇಪ್ಪತ್ತು ಸಾವಿರದ ಇನ್ನೂರು ಮಂದಿ ಸೈನಿಕರಿದ್ದರು.
10 ಯೆದೀಯಯೇಲನ ಮಗನು ಬಿಲ್ಹಾನ್. ಇವನ ಮಕ್ಕಳು ಯಾರೆಂದರೆ: ಯೆಯೂಷ್, ಬೆನ್ಯಾಮೀನ್, ಏಹೂದ್, ಕೆನಾನ್, ಜೇತಾನ್, ತಾರ್ಷೀಷ್ ಮತ್ತು ಅಹೀಷೆಹರ್. 11 ಯೆದೀಯಯೇಲನ ಎಲ್ಲಾ ಗಂಡುಮಕ್ಕಳು ತಮ್ಮ ಗೋತ್ರಗಳಿಗೆ ಪ್ರಧಾನರಾಗಿದ್ದರು. ಅವರಲ್ಲಿ ಯುದ್ಧಕ್ಕೆ ಸಿದ್ಧರಾಗಿದ್ದ ಹದಿನೇಳು ಸಾವಿರದ ಇನ್ನೂರು ಮಂದಿ ಸೈನಿಕರಿದ್ದರು.
12 ಶುಪ್ಪೀಮರು ಮತ್ತು ಹುಪ್ಪೀಮರು ಈರನ ಸಂತತಿಯವರಾಗಿದ್ದರು. ಹುಶೀಮನು ಅಹೇರನ ಮಗ.
ನಫ್ತಾಲಿಯ ಸಂತತಿಯವರು
13 ನಫ್ತಾಲಿಯ ಗಂಡುಮಕ್ಕಳು: ಯಹಚಿಯೇಲ್, ಗೂನೀ, ಯೇಚೆರ್ ಮತ್ತು ಶಲ್ಲೂಮ್. ಇವರೆಲ್ಲಾ ಬಿಲ್ಹಳ ಸಂತತಿಯವರು.
ಮನಸ್ಸೆ ಸಂತತಿಯವರು
14 ಮನಸ್ಸೆಯ ಸಂತತಿಯವರು ಯಾರೆಂದರೆ: ಮನಸ್ಸೆ ಮತ್ತು ಅವನ ಅರಾಮ್ಯದ ದಾಸಿಯಲ್ಲಿ ಹುಟ್ಟಿದ ಮಗ ಅಷ್ರೀಯೇಲ್; ಅವರಿಗೆ ಮಾಕೀರ್ ಎಂಬ ಇನ್ನೊಬ್ಬ ಮಗನಿದ್ದನು. ಇವನು ಗಿಲ್ಯಾದನ ತಂದೆ. 15 ಮಾಕೀರನು ಹುಪ್ಪೀಮನ ಮತ್ತು ಶುಪ್ಪೀಮನ ಸಹೋದರಿಯನ್ನು ಮದುವೆಯಾದನು. ಆಕೆಯ ಹೆಸರು ಮಾಕ. ಗಿಲ್ಯಾದನ ಮೊಮ್ಮಗನ ಹೆಸರು ಚೆಲೋಫಾದ್. ಇವನಿಗೆ ಹೆಣ್ಣುಮಕ್ಕಳೇ ಹುಟ್ಟಿದವು. 16 ಮಾಕೀರನ ಹೆಂಡತಿಯಾದ ಮಾಕಳು ಒಂದು ಗಂಡುಮಗುವನ್ನು ಹೆತ್ತು ಅವನಿಗೆ ಪೆರೆಷ್ ಎಂದು ಹೆಸರಿಟ್ಟಳು. ಇವನ ತಮ್ಮನ ಹೆಸರು ಶೆರೆಷ್. ಇವನ ಗಂಡುಮಕ್ಕಳು ಯಾರೆಂದರೆ: ಊಲಾಮ್ ಮತ್ತು ರೆಕೆಮ್.
17 ಊಲಾಮನ ಮಗನು ಬೆದಾನ್.
ಇವರೆಲ್ಲಾ ಗಿಲ್ಯಾದನ ಸಂತತಿಯವರು: ಗಿಲ್ಯಾದನು ಮಾಕೀರನ ಮಗ. ಮಾಕೀರನು ಮನಸ್ಸೆಯ ಮಗ. 18 ಮಾಕೀರನ ತಂಗಿ ಹಮ್ಮೋಲೆಕೆತಳಿಗೆ ಈಜ್ಡೋದ್, ಅಬೀಯೆಜೆರ್ ಮತ್ತು ಮಹ್ಲ ಎಂಬ ಗಂಡುಮಕ್ಕಳಿದ್ದರು.
19 ಶೆಮೀದನ ಮಕ್ಕಳು ಯಾರೆಂದರೆ: ಅಹ್ಯಾನ್, ಶೆಕೆಮ್, ಲಕ್ಹೀ ಮತ್ತು ಅನೀಯಾಮ್.
ಎಫ್ರಾಯೀಮನ ಸಂತತಿಯವರು
20 ಎಫ್ರಾಯೀಮನ ಸಂತತಿಯವರು: ಎಫ್ರಾಯೀಮನ ಮಗನು ಶೂತೆಲಹ. ಶೂತೆಲಹನ ಮಗನು ಬೆರೆದ್; ಬೆರೆದನ ಮಗನು ತಹತ್. ತಹತನ ಮಗನು ಎಲ್ಲಾದ. ಎಲ್ಲಾದನ ಮಗನು ತಹತ್. 21 ತಹತನ ಮಗನು ಜಾಬಾದ್ ಮತ್ತು ಜಾಬಾದನ ಮಕ್ಕಳು ಶೂತೆಲಹ, ಎಜೆರ್, ಎಲ್ಲಾದ್ ಎಂಬುವರು.
ಗತ್ ನಗರದ ಮೂಲನಿವಾಸಿಗಳು ಎಜೆರನನ್ನು ಮತ್ತು ಎಲ್ಲಾದನನ್ನು ಕೊಂದುಹಾಕಿದರು. ಯಾಕೆಂದರೆ ಎಜೆರನು ಮತ್ತು ಎಲ್ಲಾದನು ಗತ್ ಊರಿನವರ ದನಕುರಿಗಳನ್ನು ಕದ್ದುಕೊಳ್ಳಲು ಹೋಗಿದ್ದರು. 22 ಎಜೆರನು ಮತ್ತು ಎಲ್ಲಾದನ ತಂದೆ ಎಫ್ರಾಯೀಮನು. ತನ್ನ ಮಕ್ಕಳು ಸತ್ತದ್ದಕ್ಕಾಗಿ ಬಹಳ ದಿನಗಳ ತನಕ ಅವನು ಗೋಳಾಡಿದನು. ಅವನ ಕುಟುಂಬದವರೆಲ್ಲಾ ಬಂದು ಅವನನ್ನು ಸಂತೈಸಿದರು. 23 ಅನಂತರ ಎಫ್ರಾಯೀಮನ ಹೆಂಡತಿಯು ಇನ್ನೊಂದು ಗಂಡುಮಗುವನ್ನು ಹೆತ್ತಳು. ತಮ್ಮ ಕುಟುಂಬದಲ್ಲಿ ನಡೆದ ದುರ್ಘಟನೆಯ ನೆನಪಿಗಾಗಿ ಇವನಿಗೆ “ಬೆರೀಯ” ಎಂದು ಹೆಸರಿಟ್ಟರು. 24 ಎಫ್ರಾಯೀಮನ ಮಗಳ ಹೆಸರು ಶೇರ. ಅವಳು ಕೆಳಗಿನ ಬೇತ್ಹೋರೋನ್ ಮತ್ತು ಮೇಲಿನ ಬೇತ್ಹೋರೋನ್ ಮತ್ತು ಕೆಳಗಿನ ಉಜ್ಜೇನ್ಶೇರ ಮತ್ತು ಮೇಲಿನ ಉಜ್ಜೇನ್ಶೇರ ಪಟ್ಟಣಗಳನ್ನು ಕಟ್ಟಿಸಿದಳು.
25 ರೆಫಹನು ಬೆರೀಯನ ಮಗನು. ರೆಫಹನ ಮಗನು ರೆಷೆಫ್. ರೆಷೆಫನ ಮಗನು ತೆಲಹ. ತೆಲಹನ ಮಗನು ತಹನ್. 26 ಲದ್ದಾನನು ತಹನನ ಮಗ. ಅಮ್ಮೀಹೂದನು ಲದ್ದಾನನ ಮಗ. ಎಲೀಷಾಮನು ಅಮ್ಮೀಹೂದನ ಮಗ. 27 ನೋನನು ಎಲೀಷಾಮನ ಮಗ. ಯೆಹೋಶುವನು ನೋನನ ಮಗ.
28 ಎಫ್ರಾಯೀಮನ ಸಂತತಿಯವರು ವಾಸಿಸಿದ ಪಟ್ಟಣಗಳು ಯಾವುವೆಂದರೆ: ಬೇತೇಲ್ ಮತ್ತು ಅದರ ಪಕ್ಕದಲ್ಲಿದ್ದ ಹಳ್ಳಿಗಳು; ಪೂರ್ವದಲ್ಲಿ ನಾರಾನ್; ಪಶ್ಚಿಮದಲ್ಲಿ ಗೆಜೆರ್ ಪಟ್ಟಣ ಮತ್ತು ಅದರ ಪಕ್ಕದಲ್ಲಿದ್ದ ಹಳ್ಳಿಗಳು; ಶೆಕೆಮ್ ಪಟ್ಟಣ ಮತ್ತು ಅದರ ಸಮೀಪದಲ್ಲಿದ್ದ ಹಳ್ಳಿಗಳು, ಅಯ್ಯಾ ಪಟ್ಟಣ ಮತ್ತು ಅದರ ಸಮೀಪದಲ್ಲಿದ್ದ ಹಳ್ಳಿಗಳು; 29 ಮನಸ್ಸೆಯ ಗಡಿಗೆ ಸಮೀಪದಲ್ಲಿದ್ದ ಊರುಗಳಾದ ಬೇತ್ಷಾನ್, ತಾನಾಕ್, ಮೆಗಿದ್ದೋ, ದೋರ್ ಮತ್ತು ಅದರ ಹತ್ತಿರದಲ್ಲಿದ್ದ ಸಣ್ಣ ಊರುಗಳು. ಯೋಸೇಫನ ಸಂತತಿಯವರು ಈ ಊರುಗಳಲ್ಲಿ ವಾಸವಾಗಿದ್ದರು. ಯೋಸೇಫನು ಇಸ್ರೇಲನ ಮಗನಾಗಿದ್ದನು.
ಆಶೇರನ ಸಂತತಿಯವರು
30 ಆಶೇರನ ಗಂಡುಮಕ್ಕಳು ಯಾರೆಂದರೆ: ಇಮ್ನ, ಇಷ್ವ, ಇಷ್ವೀ ಮತ್ತು ಬೆರೀಯ. ಅವರ ತಂಗಿ ಸೆರಹ.
31 ಬೆರೀಯನ ಗಂಡುಮಕ್ಕಳು: ಹೆಬೆರ್ ಮತ್ತು ಮಲ್ಕೀಯೇಲ್. ಮಲ್ಕೀಯೇಲನು ಬಿರ್ಜೈತನ ತಂದೆ.
32 ಹೆಬೆರನ ಗಂಡುಮಕ್ಕಳು ಯಾರೆಂದರೆ: ಯಫ್ಲೇಟ್, ಶೋಮೇರ್, ಹೋತಾಮ್ ಮತ್ತು ಅವರ ತಂಗಿ ಶೂವ.
33 ಯಫ್ಲೇಟನ ಗಂಡುಮಕ್ಕಳು ಯಾರೆಂದರೆ: ಪಾಸಾಕ್, ಬಿಮ್ಹಾಲ್ ಮತ್ತು ಅಶ್ವಾತ್.
34 ಶೆಮೆರನ ಗಂಡುಮಕ್ಕಳು ಯಾರೆಂದರೆ: ಅಹೀ, ರೊಹ್ಗ, ಹುಬ್ಬ ಮತ್ತು ಅರಾಮ್.
35 ಶೆಮೆರನ ತಮ್ಮನ ಹೆಸರು ಹೆಲೆಮ್. ಇವನ ಗಂಡುಮಕ್ಕಳು ಯಾರೆಂದರೆ: ಚೋಫಹ, ಇಮ್ನ, ಶೇಲೆಷ್ ಮತ್ತು ಆಮಾಲ್.
36 ಚೋಫಹನ ಗಂಡುಮಕ್ಕಳು ಯಾರೆಂದರೆ: ಸೂಹ, ಹರ್ನೆಫೆರ್, ಶೂಗಾಲ್, ಬೇರೀ, ಇಮ್ರ, 37 ಬೆಚೆರ್, ಹೋದ್, ಶಮ್ಮ, ಶಿಲ್ಷ, ಇತ್ರಾನ್ ಮತ್ತು ಬೇರ.
38 ಯೆತೆರನ ಗಂಡುಮಕ್ಕಳು ಯಾರೆಂದರೆ: ಯೆಫುನ್ನೆ, ಪಿಸ್ಪ ಮತ್ತು ಅರಾ.
39 ಉಲ್ಲನ ಗಂಡುಮಕ್ಕಳು ಯಾರೆಂದರೆ: ಆರಹ, ಹನ್ನೀಯೇಲ್ ಮತ್ತು ರಿಚ್ಯ.
40 ಇವರೆಲ್ಲರೂ ಆಶೇರನ ಸಂತತಿಯವರು. ಇವರೆಲ್ಲರೂ ಕುಲಪ್ರಧಾನರಾಗಿದ್ದರು. ಅವರು ಸೈನಿಕರೂ ನಾಯಕರುಗಳೂ ಆಗಿದ್ದರು. ಅವರ ಕುಲದ ಇತಿಹಾಸದ ಪ್ರಕಾರ, ಒಟ್ಟು ಇಪ್ಪತ್ತಾರು ಸಾವಿರ ಮಂದಿ ಯುದ್ಧಕ್ಕೆ ಸಿದ್ಧರಾಗಿದ್ದ ಸೈನಿಕರಿದ್ದರು.
ಬೆನ್ಯಾಮೀನನ ಸಂತತಿಯವರು
8 ಬೆನ್ಯಾಮೀನನ ಮೊದಲನೆ ಮಗನು ಬೆಳ; ಎರಡನೆಯ ಮಗನು ಅಷ್ಬೇಲ್; ಮೂರನೆಯ ಮಗನು ಅಹ್ರಹ; 2 ನಾಲ್ಕನೆಯ ಮಗನು ನೋಹ; ಮತ್ತು ಐದನೆಯ ಮಗನು ರಾಫ.
3 ಬೆಳನ ಮಕ್ಕಳು ಯಾರೆಂದರೆ: ಅದ್ದಾರ್, ಗೇರ, ಅಬೀಹೂದ್, 4-5 ಅಬೀಷೂವ, ನಾಮಾನ್, ಅಹೋಹ, ಗೇರ ಶೆಫೂಫಾನ್ ಮತ್ತು ಹೂರಾಮ್.
6-7 ಇವರು ಏಹೂದನ ಸಂತತಿಯವರು. ಇವರು ಗೆಬ ಗೋತ್ರಗಳ ನಾಯಕರುಗಳಾಗಿದ್ದರು. ಇವರನ್ನು ಇವರ ಮನೆಗಳಿಂದ ಬಲವಂತದಿಂದ ಹೊರಡಿಸಿ ಮಾನಹತಿಗೆ ಕಳುಹಿಸಲಾಯಿತು. ಏಹೂದನ ಸಂತತಿಯವರು ಯಾರೆಂದರೆ: ನಾಮಾನ್, ಅಹೀಯ ಮತ್ತು ಗೇರ. ಗೇರನು ಉಚ್ಚನ ಮತ್ತು ಅಹೀಹುದನ ತಂದೆ.
8 ಶಹರಯಿಮನು ಮೋವಾಬಿನಲ್ಲಿ ತನ್ನ ಹೆಂಡತಿಯರಾದ ಹೂಷೀಮ್ ಮತ್ತು ಬಾರ ಎಂಬವರನ್ನು ತ್ಯಜಿಸಿ ಬೇರೊಬ್ಬ ಹೆಂಡತಿಯಿಂದ ಇತರ ಮಕ್ಕಳನ್ನು ಪಡೆದನು. 9-10 ಶಹರಯಿಮನಿಗೆ ಯೋವಾಬ್, ಚೆಬ್ಯ, ಮೇಷ, ಮಲ್ಕಾಮ್, ಯೆಯೂಚ್, ಸಾಕ್ಯ ಮತ್ತು ವಿರ್ಮ ಎಂಬ ಗಂಡುಮಕ್ಕಳನ್ನು ತನ್ನ ಹೆಂಡತಿಯಾದ ಹೋದೆಷಳಿಂದ ಪಡೆದುಕೊಂಡನು. ಇವರೆಲ್ಲರೂ ತಮ್ಮ ಕುಲ ಪ್ರಧಾನರಾಗಿದ್ದರು. 11 ಶಹರಯಿಮ್ ಮತ್ತು ಹೂಷೀಮಳಿಗೆ ಅಬೀಟೂಬ್ ಮತ್ತು ಎಲ್ಛಾಲ ಎಂಬ ಇಬ್ಬರು ಮಕ್ಕಳಿದ್ದರು.
12-13 ಎಲ್ಪಾಲನ ಮಕ್ಕಳು ಯಾರೆಂದರೆ: ಏಬೆರ್, ಮಿಷ್ಬಾಮ್, ಶೆಮೆದ್, ಬೆರೀಯ ಮತ್ತು ಶಮ. ಶೆಮೆದನು ಓನೋ ಮತ್ತು ಲೋದ್ ಎಂಬ ಪಟ್ಟಣಗಳನ್ನೂ ಅವುಗಳ ಸುತ್ತಮುತ್ತಲಿನ ಊರುಗಳನ್ನೂ ಕಟ್ಟಿಸಿದನು. ಅಯ್ಯಾಲೋನಿನಲ್ಲಿ ವಾಸಿಸುತ್ತಿದ್ದ ಕುಲದವರಿಗೆ ಬೆರೀಯ ಮತ್ತು ಶಮ ಕುಲ ಪ್ರಧಾನರಾಗಿದ್ದರು. ಇವರು ಗತ್ನಲ್ಲಿ ವಾಸಿಸುತ್ತಿದ್ದ ಜನರನ್ನು ಓಡಿಸಿದರು.
14 ಬೆರೀಯನ ಗಂಡುಮಕ್ಕಳು ಯಾರೆಂದರೆ: ಅಹ್ಯೋ, ಶಾಷಕ್, ಯೆರೇಮೋತ್, ಜೆಬದ್ಯ, 15 ಅರಾದ್, ಎದೆರ್, 16 ಮಿಕಾಯೇಲ್, ಇಷ್ಪ ಮತ್ತು ಯೋಹ. 17 ಎಲ್ಪಾಲನ ಗಂಡುಮಕ್ಕಳು ಯಾರೆಂದರೆ: ಜೆಬದ್ಯ, ಮೆಷುಲ್ಲಾಮ್, ಹಿಜ್ಕೀ, ಹೆಬೆರ್, 18 ಇಷ್ಮೆರೈ, ಇಜ್ಲೀಯ ಮತ್ತು ಯೋಬಾಬ್.
19 ಶಿಮ್ಮಿಯ ಗಂಡುಮಕ್ಕಳು ಯಾರೆಂದರೆ: ಯಾಕೀಮ್, ಜಿಕ್ರೀ, ಜಬ್ದೀ. 20 ಎಲೀಗೇನೈ, ಚಿಲ್ಲೆತೈ, ಎಲೀಯೇಲ್, 21 ಅದಾಯ, ಬೆರಾಯ ಮತ್ತು ಶಿಮ್ರಾತ್.
22 ಶಾಷಕನ ಮಕ್ಕಳು ಯಾರೆಂದರೆ: ಇಷ್ಪಾನ್, ಏಬೆರ್, ಎಲೀಯೇಲ್. 23 ಅಬ್ದೋನ್, ಜಿಕ್ರೀ, ಹಾನಾನ್, 24 ಹನನ್ಯ, ಏಲಾಮ್, ಅನೆತೋತೀಯ, 25 ಇಪ್ದೆಯಾಹ ಮತ್ತು ಪೆನೂವೇಲ್.
26 ಯೆರೋಹಾಮನ ಗಂಡುಮಕ್ಕಳು ಯಾರೆಂದರೆ: ಶಂಷೆರೈ, ಶೆಹರ್ಯ, ಅತಲ್ಯ, 27 ಯಾರೆಷ್ಯ, ಏಲೀಯ ಮತ್ತು ಜಿಕ್ರೀ.
28 ಈ ಜನರೆಲ್ಲರು ತಮ್ಮ ಗೋತ್ರಗಳಿಗೆ ನಾಯಕರಾಗಿದ್ದರು. ಇವರ ಗೋತ್ರ ಚರಿತ್ರೆಯಲ್ಲಿ ಇವರನ್ನು ನಾಯಕರ ಪಟ್ಟಿಯಲ್ಲಿ ಸೇರಿಸಲಾಗಿದೆ. ಇವರೆಲ್ಲಾ ಜೆರುಸಲೇಮಿನಲ್ಲಿ ವಾಸವಾಗಿದ್ದರು.
29 ಯೆಗೂವೇಲನು ಗಿಬ್ಯೋನನ ತಂದೆ. ಇವನು ಗಿಬ್ಯೋನಿನಲ್ಲಿ ವಾಸಿಸುತ್ತಿದ್ದನು. ಯೆಗೂವೇಲನ ಹೆಂಡತಿಯ ಹೆಸರು ಮಾಕ. 30 ಯೆಗೂವೇಲನ ಚೊಚ್ಚಲ ಮಗನು ಅಬ್ದೋನ. ಅವನ ಇತರ ಗಂಡುಮಕ್ಕಳು ಯಾರೆಂದರೆ: ಚೂರ್, ಕೀಷ್, ಬಾಳ್, ನಾದಾಬ್, 31 ಗೇದೋರ್, ಅಹ್ಯೋ, ಜೆಕೆರ್ ಮತ್ತು ಮಿಕ್ಲೋತ್. 32 ಮಿಕ್ಲೋತನು ಶಿಮಾಹನ ತಂದೆ. ಇವರೂ ತಮ್ಮ ಸಂಬಂಧಿಕರೊಂದಿಗೆ ಜೆರುಸಲೇಮಿನಲ್ಲಿ ವಾಸವಾಗಿದ್ದರು.
33 ನೇರನು ಕೀಷನ ತಂದೆ. ಕೀಷನು ಸೌಲನ ತಂದೆ. ಸೌಲನು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್ ಮತ್ತು ಎಷ್ಬಾಳರ ತಂದೆ.
34 ಯೋನಾತಾನನ ಮಗ ಮೆರೀಬ್ಬಾಳ್. ಮೆರೀಬ್ಬಾಳನು ಮೀಕನ ತಂದೆ.
35 ಮೀಕನ ಗಂಡುಮಕ್ಕಳು ಯಾರೆಂದರೆ: ಪೀತೋನ್, ಮೆಲೆಕ್, ತರೇಯ ಮತ್ತು ಅಹಾಜ್.
36 ಅಹಾಜನು ಯೆಹೋವದ್ದಾಹನ ತಂದೆ. ಯೆಹೋವದ್ದಾಹನು ಅಲೆಮೆತನ, ಅಜ್ಮಾವೆತನ ಮತ್ತು ಜಿಮ್ರೀಯ ತಂದೆ. ಜಿಮ್ರೀಯು ಮೋಚನ ತಂದೆ. 37 ಮೋಚನು ಬಿನ್ನನ ತಂದೆ. ರಾಫನು ಬಿನ್ನನ ಮಗ. ಎಲ್ಲಾಸನು ರಾಫನ ಮಗ. ಆಚೇಲನು ಎಲ್ಲಾಸನ ಮಗ.
38 ಆಚೇಲನಿಗೆ ಆರು ಮಂದಿ ಗಂಡುಮಕ್ಕಳು. ಅವರು ಯಾರೆಂದರೆ: ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ ಮತ್ತು ಹಾನಾನ್. ಇವರೆಲ್ಲರೂ ಆಚೇಲನ ಗಂಡುಮಕ್ಕಳು.
39 ಆಚೇಲನ ತಮ್ಮನಾದ ಏಷೆಕನ ಗಂಡುಮಕ್ಕಳು ಯಾರೆಂದರೆ: ಊಲಾಮನು ಏಷೆಕನ ಚೊಚ್ಚಲಮಗ; ಯೆಯೂಷನು ಏಷೆಕನ ಎರಡನೆಯ ಮಗನು; ಮೂರನೆಯವನು ಎಲೀಫೆಲೆಟ್. 40 ಊಲಾಮನ ಗಂಡುಮಕ್ಕಳೆಲ್ಲರೂ ರಣವೀರರು; ಬಿಲ್ಲುಬಾಣಗಳನ್ನು ಉಪಯೋಗಿಸುವುದರಲ್ಲಿ ನಿಪುಣರು. ಅವರಿಗೆ ಅನೇಕ ಗಂಡುಮಕ್ಕಳು ಮತ್ತು ಗಂಡುಮೊಮ್ಮಕ್ಕಳಿದ್ದರು. ಅವರಿಗೆ ಒಟ್ಟು ನೂರೈವತ್ತು ಮಂದಿ ಗಂಡುಮಕ್ಕಳು ಮತ್ತು ಗಂಡುಮೊಮ್ಮಕ್ಕಳು ಇದ್ದರು.
ಇವರೆಲ್ಲಾ ಬೆನ್ಯಾಮೀನನ ಸಂತತಿಯವರು.
ನಂಬಿಕೆ
11 ನಂಬಿಕೆ ಎಂದರೆ ನಾವು ನಿರೀಕ್ಷೆಯಿಂದಿರುವ ಸಂಗತಿಗಳಲ್ಲಿ ಭರವಸದಿಂದಿರುವುದೂ ನಮ್ಮ ಕಣ್ಣಿಗೆ ಕಾಣದಿರುವುದನ್ನು ನಿಜವೆಂದು ತಿಳಿದುಕೊಳ್ಳುವುದೂ ಆಗಿದೆ. 2 ಬಹಳ ಹಿಂದಿನ ಕಾಲದಲ್ಲಿ ಜೀವಿಸಿದ್ದ ಜನರಲ್ಲಿ ಈ ರೀತಿಯ ನಂಬಿಕೆಯಿದ್ದುದರಿಂದ ದೇವರು ಅವರ ವಿಷಯದಲ್ಲಿ ಸಂತೋಷಪಟ್ಟನು.
3 ದೇವರು ತನ್ನ ಆಜ್ಞೆಯಿಂದ ಈ ಲೋಕವನ್ನು ಸೃಷ್ಟಿಸಿದನೆಂಬುದನ್ನು ಅರ್ಥಮಾಡಿಕೊಳ್ಳಲು ನಂಬಿಕೆ ನಮಗೆ ಸಹಾಯ ಮಾಡುತ್ತದೆ. ಹೇಗೆಂದರೆ ನಮ್ಮ ಕಣ್ಣಿಗೆ ಕಾಣುವಂಥ ವಸ್ತುಗಳಿಂದ ಈ ಜಗತ್ತು ಸೃಷ್ಟಿಯಾಗಲಿಲ್ಲ.
4 ಕಾಯಿನ ಮತ್ತು ಹೇಬೆಲರಿಬ್ಬರೂ ದೇವರಿಗೆ ಯಜ್ಞಗಳನ್ನು ಅರ್ಪಿಸಿದರು. ಆದರೆ ಹೇಬೆಲನಲ್ಲಿ ನಂಬಿಕೆಯಿದ್ದುದರಿಂದ ಅವನು ದೇವರಿಗೆ ಉತ್ತಮವಾದ ಯಜ್ಞವನ್ನು ಅರ್ಪಿಸಿದನು. ಅವನು ಅರ್ಪಿಸಿದ ವಸ್ತುಗಳಿಂದ ತನಗೆ ಸಂತೋಷವಾಯಿತೆಂದು ದೇವರೇ ಹೇಳಿದನು. ಅವನಲ್ಲಿ ನಂಬಿಕೆಯಿದ್ದುದರಿಂದ ದೇವರು ಅವನನ್ನು ಒಳ್ಳೆಯ ಮನುಷ್ಯನೆಂದು ಕರೆದನು. ಹೇಬೆಲನು ಸತ್ತುಹೋದನು, ಆದರೂ ತನ್ನ ನಂಬಿಕೆಯ ಮೂಲಕ ಇನ್ನೂ ಮಾತನಾಡುತ್ತಿದ್ದಾನೆ.
5 ಹನೋಕನು ಸಾವನ್ನು ಅನುಭವಿಸದೆ ಈ ಲೋಕದಿಂದ ಮೇಲೋಕಕ್ಕೆ ಒಯ್ಯಲ್ಪಟ್ಟನು. ಪವಿತ್ರ ಗ್ರಂಥವು ಹೇಳುವಂತೆ, ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರಿಗೆ ನಿಜವಾಗಿಯೂ ಮೆಚ್ಚಿಕೆಯಾಗಿದ್ದನು. ತರುವಾಯ ಜನರಿಗೆ ಅವನು ಸಿಕ್ಕಲೇ ಇಲ್ಲ. ಅವನ ನಂಬಿಕೆಯ ದೆಸೆಯಿಂದ ದೇವರು ಅವನನ್ನು ತನ್ನೊಡನಿರಲು ಕೊಂಡೊಯ್ದನು. 6 ನಂಬಿಕೆಯಿಲ್ಲದೆ ದೇವರನ್ನು ಯಾರೂ ಮೆಚ್ಚಿಸಲಾಗುವುದಿಲ್ಲ. ದೇವರ ಬಳಿಗೆ ಬರುವ ಯಾರೇ ಆಗಲಿ, ದೇವರು ಇದ್ದಾನೆಂತಲೂ ಆತನನ್ನು ಮನಃಪೂರ್ವಕವಾಗಿ ಹುಡುಕುವ ಜನರಿಗೆ ಆತನು ಪ್ರತಿಫಲವನ್ನು ಕೊಡುತ್ತಾನೆಂತಲೂ ನಂಬಬೇಕು.
7 ಕಣ್ಣಿಗೆ ಇನ್ನೂ ಕಾಣದಿದ್ದ ಸಂಗತಿಗಳ ಬಗ್ಗೆ ದೇವರು ನೋಹನನ್ನು ಎಚ್ಚರಿಸಿದನು. ನೋಹನು ದೇವರಲ್ಲಿ ನಂಬಿಕೆಯಿಟ್ಟಿದ್ದನು ಮತ್ತು ಭಕ್ತಿಯುಳ್ಳವನಾಗಿದ್ದನು. ಆದ್ದರಿಂದ ಅವನು ತನ್ನ ಕುಟುಂಬ ರಕ್ಷಣೆಗಾಗಿ ದೊಡ್ಡ ನಾವೆಯನ್ನು ಕಟ್ಟಿ, ಈ ಲೋಕದ ತಪ್ಪನ್ನು ತೋರ್ಪಡಿಸಿದನು. ಹೀಗೆ, ನಂಬಿಕೆಯ ಮೂಲಕ ನೀತಿವಂತರಾದ ಜನರಲ್ಲಿ ಅವನೂ ಒಬ್ಬನಾದನು.
8 ದೇವರು ತಾನು ಕೊಡುತ್ತೇನೆಂದು ವಾಗ್ದಾನ ಮಾಡಿದ್ದ ಸ್ಥಳಕ್ಕೆ ಪ್ರಯಾಣ ಮಾಡಬೇಕೆಂದು ಅಬ್ರಹಾಮನನ್ನು ಕರೆದನು. ಆ ಸ್ಥಳವು ಎಲ್ಲಿದೆಯೆಂಬುದು ಅವನಿಗೆ ತಿಳಿದಿರಲಿಲ್ಲ. ಅಬ್ರಹಾಮನಲ್ಲಿ ನಂಬಿಕೆಯಿದ್ದುದರಿಂದ, ದೇವರಿಗೆ ವಿಧೇಯನಾಗಿ ಪ್ರಯಾಣ ಮಾಡಲಾರಂಭಿಸಿದನು. 9 ದೇವರು ಕೊಡುವುದಾಗಿ ವಾಗ್ದಾನ ಮಾಡಿದ್ದ ದೇಶದಲ್ಲಿ ಅವನು ಪ್ರವಾಸಿಗನಂತೆ ವಾಸಮಾಡಿದ್ದು ನಂಬಿಕೆಯಿಂದಲೇ. ಅದೇ ವಾಗ್ದಾನಕ್ಕೆ ಸಹ ಭಾದ್ಯರಾಗಿದ್ದ ಇಸಾಕನೂ ಯಾಕೋಬನೂ ಅವನಂತೆಯೇ ಡೇರೆಗಳಲ್ಲಿ ವಾಸಿಸಿದರು. 10 ಅಬ್ರಹಾಮನು ಶಾಶ್ವತವಾದ ಅಡಿಪಾಯಗಳುಳ್ಳ ನಗರಕ್ಕಾಗಿ ಕಾದಿದ್ದನು. ದೇವರೇ ಸಂಕಲ್ಪಿಸಿ, ನಿರ್ಮಿಸಿದ ನಗರಕ್ಕಾಗಿ ಅವನು ಕಾದಿದ್ದನು.
11 ಅಬ್ರಹಾಮನು ಮಕ್ಕಳನ್ನು ಪಡೆಯಲಾಗದಷ್ಟು ವೃದ್ಧನಾಗಿದ್ದನು. ಸಾರಳು ಮಕ್ಕಳನ್ನು ಪಡೆಯಲು ಸಮರ್ಥಳಾಗಿರಲಿಲ್ಲ. ಆದರೆ ಅಬ್ರಹಾಮನಿಗೆ ದೇವರಲ್ಲಿ ನಂಬಿಕೆಯಿದ್ದುದರಿಂದ, ಅವರು ಮಕ್ಕಳನ್ನು ಪಡೆಯಲು ಸಮರ್ಥರಾಗುವಂತೆ ದೇವರು ಮಾಡಿದನು. 12 ಅವನು ಮೃತಪ್ರಾಯನಾಗಿದ್ದವನಂತೆ ವೃದ್ಧನಾಗಿದ್ದರೂ ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದ ಉಸುಬಿನಂತೆಯೂ ಅಸಂಖ್ಯಾತವಾಗಿ ಮಕ್ಕಳು ಹುಟ್ಟಿದರು.
13 ಈ ಮಹಾಪುರಷರೆಲ್ಲರೂ ತಾವು ಸಾಯುವವರೆಗೂ ನಂಬಿಕೆಯುಳ್ಳವರಾಗಿದ್ದರು. ದೇವರು ತನ್ನ ಜನರಿಗೆ ವಾಗ್ದಾನ ಮಾಡಿದ್ದವುಗಳನ್ನು ಆ ಜನರು ಪಡೆಯಲಿಲ್ಲ. ಮುಂದೆ ಬಹುಕಾಲದ ನಂತರ ಬರಲಿದ್ದ ಅವುಗಳನ್ನು ನೋಡಿ ಅವರು ಸಂತೋಷಗೊಂಡರು. ಅವರು ತಾವು ಈ ಲೋಕದಲ್ಲಿ ಪ್ರವಾಸಿಗಳಂತೆ ಮತ್ತು ಅಪರಿಚಿತರಂತೆ ಇದ್ದೇವೆ ಎಂಬುದನ್ನು ಒಪ್ಪಿಕೊಂಡರು. 14 ಅವರು ಹಾಗೆ ಒಪ್ಪಿಕೊಂಡಿದ್ದರಿಂದ ತಾವು ಸ್ವದೇಶಕ್ಕಾಗಿ ಕಾದಿರುವುದಾಗಿ ತೋರ್ಪಡಿಸಿಕೊಂಡಂತಾಯಿತು. 15 ಆ ಜನರು ತಾವು ಬಿಟ್ಟುಬಂದ ದೇಶದ ಮೇಲೇನಾದರೂ ಮನಸ್ಸಿಟ್ಟಿದ್ದರೆ, ಅವರು ಮರಳಿಹೋಗುತ್ತಿದ್ದರು. 16 ಆದರೆ ಆ ಜನರು ಉತ್ತಮ ದೇಶವಾದ ಪರಲೋಕಕ್ಕಾಗಿ ಕಾದಿದ್ದರು. ಆದ್ದರಿಂದ ದೇವರು ತನ್ನನ್ನು ಅವರ ದೇವರೆಂದು ಹೇಳಿಕೊಳ್ಳಲು ನಾಚಿಕೆಪಡದೆ ಅವರಿಗಾಗಿ ಒಂದು ನಗರವನ್ನು ಸಿದ್ಧಪಡಿಸಿದನು.
17-18 ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಿದನು. ಇಸಾಕನನ್ನು ಯಜ್ಞವಾಗಿ ಸಮರ್ಪಿಸೆಂದು ದೇವರು ಅವನಿಗೆ ಹೇಳಿದನು. ಅಬ್ರಹಾಮನಲ್ಲಿ ನಂಬಿಕೆಯಿದ್ದುದರಿಂದ ವಿಧೇಯನಾದನು. ದೇವರು ಅವನಿಗೆ, “ನಿನ್ನ ಸಂತತಿಗಳವರು ಇಸಾಕನ ಮೂಲಕ ಬರುವರು”(A) ಎಂದು ಮೊದಲೇ ವಾಗ್ದಾನ ಮಾಡಿದ್ದನು. ಆದರೂ ತನ್ನ ಒಬ್ಬನೇ ಮಗನನ್ನು ಅರ್ಪಿಸಲು ಅವನು ಸಿದ್ಧನಾಗಿದ್ದನು. 19 ದೇವರು ಸತ್ತವರನ್ನು ಜೀವಂತವಾಗಿ ಎಬ್ಬಿಸಬಲ್ಲನೆಂದು ಅವನು ನಂಬಿದ್ದನು. ಇಸಾಕನನ್ನು ಕೊಲ್ಲದಂತೆ ದೇವರು ಅವನನ್ನು ತಡೆದಾಗ, ಅವನಿಗೆ ನಿಜವಾಗಿಯೂ ಇಸಾಕನನ್ನು ಸಾವಿನಿಂದ ಮರಳಿ ಪಡೆದಂತಾಯಿತು.
20 ಇಸಾಕನು ಯಾಕೋಬನ ಮತ್ತು ಏಸಾವನ ಭವಿಷ್ಯತ್ತನ್ನು ಆಶೀರ್ವದಿಸಿದನು. ಇಸಾಕನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ. 21 ಯಾಕೋಬನು ಯೋಸೇಫನ ಮಕ್ಕಳಿಬ್ಬರನ್ನೂ ತಾನು ಸಾಯುವ ಗಳಿಗೆಯಲ್ಲಿ ಆಶೀರ್ವದಿಸಿದನು. ಅವನು ಊರುಗೋಲಿನ ಮೇಲೆ ಬಾಗಿಕೊಂಡು ದೇವರನ್ನು ಆರಾಧಿಸುತ್ತಿದ್ದನು. ಅವನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ.
22 ಯೋಸೇಫನು ಸಾಯುವ ಗಳಿಗೆಯಲ್ಲಿದ್ದಾಗ, ಇಸ್ರೇಲರು ಈಜಿಪ್ಟನ್ನು ಬಿಟ್ಟುಹೋಗುವುದರ ಕುರಿತು ಮಾತನಾಡಿದನು; ತನ್ನ ದೇಹವನ್ನು ಏನು ಮಾಡಬೇಕೆಂಬುದರ ಬಗ್ಗೆಯೂ ತಿಳಿಸಿದನು. ಅದಕ್ಕೆ ಅವನ ನಂಬಿಕೆಯೇ ಕಾರಣ.
23 ಮೋಶೆಯು ಹುಟ್ಟಿದಾಗ ಅವನ ತಂದೆತಾಯಿಗಳು ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳವರೆಗೆ ಅಡಗಿಸಿಟ್ಟರು. ಮಗುವಾಗಿದ್ದ ಮೋಶೆಯ ಸೌಂದರ್ಯವನ್ನು ಅವರು ಕಂಡದ್ದರಿಂದ ರಾಜನಾದ ಫರೋಹನ ಆಜ್ಞೆಗೂ ಅವಿಧೇಯರಾಗಲು ಹಿಂಜರಿಯಲಿಲ್ಲ.
24 ಮೋಶೆಯು ಬೆಳೆದು ದೊಡ್ಡವನಾದನು. ಅವನು ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ಒಪ್ಪಲಿಲ್ಲ. 25 ಅವನು ಪಾಪಗಳಿಂದ ಸಿಗುವ ಸುಖವನ್ನು ಆರಿಸಿಕೊಳ್ಳಲಿಲ್ಲ. ಆ ಸುಖಗಳು ಬೇಗನೆ ಕೊನೆಗೊಳ್ಳುತ್ತವೆ. ಆದ್ದರಿಂದ ಅವನು ದೇವಜನರೊಂದಿಗೆ ಕಷ್ಟಪಡುವುದನ್ನೇ ಆರಿಸಿಕೊಂಡನು. ಅವನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ. 26 ಈಜಿಪ್ಟಿನ ಭಂಡಾರವನ್ನೆಲ್ಲ ಪಡೆಯುವುದಕ್ಕಿಂತ ಕ್ರಿಸ್ತನಿಗಾಗಿ ಸಂಕಟವನ್ನು ಅನುಭವಿಸುವುದು ಶ್ರೇಯಸ್ಕರವೆಂದು ಅವನು ಭಾವಿಸಿದನು. ದೇವರು ತನಗೆ ನೀಡುವ ಪ್ರತಿಫಲಕ್ಕಾಗಿ ಅವನು ಕಾಯುತ್ತಿದ್ದನು.
27 ಅವನು ಈಜಿಪ್ಟನ್ನು ಬಿಟ್ಟುಹೋದದ್ದು ನಂಬಿಕೆಯಿಂದಲೇ. ಫರೋಹನ ಸಿಟ್ಟಿಗೆ ಅವನು ಭಯಪಡಲಿಲ್ಲ. ಯಾರಿಗೂ ಕಾಣದ ದೇವರು ತನಗೆ ಕಾಣುತ್ತಿರುವನೋ ಎಂಬಂತೆ ಅವನು ದೃಢಚಿತ್ತನಾಗಿದ್ದನು; 28 ಪಸ್ಕಹಬ್ಬವನ್ನು ಆಚರಿಸಿ, ಬಾಗಿಲುಗಳ ಮೇಲೆ ರಕ್ತವನ್ನು ಹಚ್ಚಿದನು. ಯೆಹೂದ್ಯ ಜನರ ಚೊಚ್ಚಲು ಮಕ್ಕಳನ್ನು ಮರಣದೂತನು ಸಂಹರಿಸಿದಂತೆ ರಕ್ತವನ್ನು ಬಾಗಿಲುಗಳ ಮೇಲೆ ಹಚ್ಚಲಾಯಿತು. ಅವನು ತನ್ನಲ್ಲಿದ್ದ ನಂಬಿಕೆಯಿಂದಲೇ ಹೀಗೆ ಮಾಡಿದನು.
29 ಮೋಶೆಯಿಂದ ಮುನ್ನಡೆಸಲ್ಪಟ್ಟ ಜನರು ಕೆಂಪುಸಮುದ್ರವನ್ನು ಒಣಭೂಮಿಯೋ ಎಂಬಂತೆ ದಾಟಿದ್ದು ನಂಬಿಕೆಯಿಂದಲೇ. ಆದರೆ ಈಜಿಪ್ಟ್ ದೇಶದವರು ಕೆಂಪುಸಮುದ್ರವನ್ನು ದಾಟಲು ಪ್ರಯತ್ನಿಸಿ, ಮುಳುಗಿಹೋದರು.
30 ದೇವಜನರ ನಂಬಿಕೆಯಿಂದಲೇ ಜೆರಿಕೊ ಪಟ್ಟಣದ ಗೋಡೆಗಳ ಸುತ್ತಲೂ ಏಳು ದಿನಗಳವರೆಗೆ ಸುತ್ತಿದಾಗ ಅವು ಬಿದ್ದುಹೋದವು.
31 ರಹಾಬಳೆಂಬ ವೇಶ್ಯೆಯು ಇಸ್ರೇಲಿನ ಗೂಢಚಾರರನ್ನು ಬರಮಾಡಿಕೊಂಡು, ಅವರನ್ನು ಸ್ನೇಹಿತರಂತೆ ನೋಡಿಕೊಂಡಳು. ನಂಬಲೊಲ್ಲದ ಜನರನ್ನು ಕೊಂದಾಗ ಅವಳನ್ನು ಕೊಲ್ಲದೆ ಹೋದದ್ದು ಅವಳಲ್ಲಿದ್ದ ಆ ನಂಬಿಕೆಯಿಂದಲೇ.
32 ನಾನು ನಿಮಗೆ ಮತ್ತಷ್ಟು ದೃಷ್ಟಾಂತಗಳನ್ನು ಹೇಳುವ ಅಗತ್ಯವಿದೆಯೋ? ನಾನು ಗಿದ್ಯೋನನ, ಬಾರಾಕನ, ಸಂಸೋನನ, ಯೆಫ್ತಾಹನ, ದಾವೀದನ, ಸಮುವೇಲನ ಮತ್ತು ಪ್ರವಾದಿಗಳ ಕುರಿತು ನಿಮಗೆ ಹೇಳುವಷ್ಟು ಸಮಯ ನನಗಿಲ್ಲ. 33 ಆ ಜನರೆಲ್ಲರೂ ಬಲವಾದ ನಂಬಿಕೆಯುಳ್ಳವರಾಗಿದ್ದರು. ಆ ನಂಬಿಕೆಯಿಂದಲೇ ರಾಜ್ಯಗಳನ್ನು ಸೋಲಿಸಿದರು. ಅವರು ಯೋಗ್ಯವಾದ ಕಾರ್ಯಗಳನ್ನು ಮಾಡಿದರು ಮತ್ತು ದೇವರು ವಾಗ್ದಾನ ಮಾಡಿದ್ದವುಗಳನ್ನು ಪಡೆದುಕೊಂಡರು. ಅವರಲ್ಲಿ ಕೆಲವರು ತಮ್ಮ ನಂಬಿಕೆಯಿಂದ ಸಿಂಹಗಳ ಬಾಯಿಗಳನ್ನು ಮುಚ್ಚಿದರು; 34 ಕೆಲವರು ಉರಿಯುವ ಬೆಂಕಿಯನ್ನು ನಂದಿಸಿದರು; ಇನ್ನು ಕೆಲವರು ಕತ್ತಿಗಳ ಬಾಯಿಂದ ಪಾರಾದರು; ದುರ್ಬಲರಾಗಿದ್ದವರು ತಮ್ಮ ನಂಬಿಕೆಯಿಂದ ಪ್ರಬಲರಾದರು; ಯುದ್ಧದಲ್ಲಿ ಶಕ್ತಿಶಾಲಿಗಳಾಗಿ ಶತ್ರುಗಳನ್ನು ಸೋಲಿಸಿದರು. 35 ಸತ್ತುಹೋಗಿದ್ದವರು ಸಾವಿನಿಂದ ಮೇಲೆದ್ದರು ಮತ್ತು ಅವರನ್ನು ಅವರವರ ಕುಟುಂಬಗಳ ಸ್ತ್ರೀಯರಿಗೆ ಒಪ್ಪಿಸಲಾಯಿತು. ಇತರ ಕೆಲವರು ಯಾತನೆಯನ್ನು ಅನುಭವಿಸುತ್ತಿದ್ದಾಗಲೂ ಪುನರುತ್ಥಾನದ ನಂತರವಿರುವ ಶ್ರೇಷ್ಠ ಜೀವಿತಕ್ಕಾಗಿ ಬಿಡುಗಡೆ ಹೊಂದಲು ಒಪ್ಪಲಿಲ್ಲ. 36 ಕೆಲವರು ಇತರರಿಂದ ಅಪಹಾಸ್ಯಕ್ಕೆ ಗುರಿಯಾದರು, ಪೆಟ್ಟುಗಳನ್ನು ಅನುಭವಿಸಿದರು, ಸೆರೆವಾಸದಲ್ಲಿದ್ದರು. 37 ಕೆಲವರನ್ನು ಕಲ್ಲೆಸೆದು ಕೊಂದರು, ಕೆಲವರನ್ನು ಅರ್ಧಕತ್ತರಿಸಿ ಎರಡು ಭಾಗ ಮಾಡಿದರು. ಕೆಲವರನ್ನು ಕತ್ತಿಗಳಿಂದ ಇರಿದುಕೊಂದರು. ಇವರಲ್ಲಿ ಕೆಲವರು ಕುರಿ ಮತ್ತು ಹೋತಗಳ ಚರ್ಮಗಳನ್ನು ತೊಟ್ಟುಕೊಂಡಿದ್ದರು; ಕೆಲವರು ಬಡವರಾಗಿದ್ದರು; ಹಿಂಸೆಗೆ ಒಳಗಾಗಿದ್ದರು ಮತ್ತು ಜನರ ಕ್ರೂರ ವರ್ತನೆಗೆ ಗುರಿಯಾಗಿದ್ದರು. 38 ಇವರಿಗೆ ಈ ಲೋಕವು ಯೋಗ್ಯವಾಗಿರಲಿಲ್ಲ. ಇವರು ಮರುಭೂಮಿಗಳಲ್ಲಿ, ಬೆಟ್ಟಗಳಲ್ಲಿ ಅಲೆಯುತ್ತಾ ಗುಹೆಗಳಲ್ಲಿಯೂ ನೆಲದ ಕುಣಿಗಳಲ್ಲಿಯೂ ವಾಸಿಸುತ್ತಿದ್ದರು.
39 ಇವರೆಲ್ಲರೂ ತಮ್ಮ ನಂಬಿಕೆಯ ವಿಷಯದಲ್ಲಿ ಪ್ರಸಿದ್ಧರಾಗಿದ್ದರು. ಆದರೆ ದೇವರ ದೊಡ್ಡ ವಾಗ್ದಾನವನ್ನು ಇವರಲ್ಲಿ ಯಾರೂ ಹೊಂದಿಕೊಳ್ಳಲಿಲ್ಲ. 40 ದೇವರು ನಮಗೆ ಶ್ರೇಷ್ಠವಾದದ್ದನ್ನು ಕೊಡಲು ಯೋಜನೆ ಮಾಡಿದನು. ನಮ್ಮೊಡನೆ ಮಾತ್ರ ಅವರು ಪರಿಪೂರ್ಣರಾಗಬೇಕೆಂಬುದೇ ಆ ಯೋಜನೆ.
ಇಸ್ರೇಲಿಗಾಗಿ ದುಃಖದ ಗೀತೆ
5 ಇಸ್ರೇಲಿನ ಜನರೇ, ಈ ಹಾಡನ್ನು ಕೇಳಿರಿ. ಇದು ನಿಮ್ಮ ಮರಣದ ಗೀತೆ.
2 ಇಸ್ರೇಲ್ ಕುಮಾರಿಯು ಬಿದ್ದಳು.
ಇನ್ನೆಂದಿಗೂ ಆಕೆ ಏಳುವದಿಲ್ಲ.
ಆಕೆ ಒಬ್ಬಂಟಿಗಳಾಗಿ ಧೂಳಿನ ಮೇಲೆ ಬಿದ್ದಿದ್ದಾಳೆ.
ಆಕೆಯನ್ನು ಎಬ್ಬಿಸಲು ಯಾರೂ ಇಲ್ಲ.
3 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳುತ್ತಾನೆ.
“ಸೈನ್ಯಾಧಿಕಾರಿಗಳು ಸಾವಿರ ಮಂದಿಯೊಂದಿಗೆ ಪಟ್ಟಣದ ಹೊರಗೆ ಹೋದರೆ
ನೂರು ಮಂದಿಯೊಂದಿಗೆ ಹಿಂದಿರುಗುವರು.
ಸೈನ್ಯಾಧಿಕಾರಿಗಳು ನೂರು ಮಂದಿಯೊಂದಿಗೆ ಹೋದರೆ
ಕೇವಲ ಹತ್ತು ಮಂದಿಯೊಂದಿಗೆ ಹಿಂದಿರುಗುವರು.”
ಇಸ್ರೇಲರು ಮರಳಿ ಬರುವಂತೆ ಯೆಹೋವನ ಆಗ್ರಹ
4 ಇಸ್ರೇಲ್ ಜನಾಂಗಕ್ಕೆ ಯೆಹೋವನು ಹೀಗೆನ್ನುತ್ತಾನೆ:
“ನನ್ನನ್ನು ಹುಡುಕುತ್ತಾ ಬಂದು ಬದುಕುವವನಾಗು.
5 ಆದರೆ ಬೇತೇಲಿನಲ್ಲಿ ಹುಡುಕಬೇಡ,
ಗಿಲ್ಗಾಲಿನಲ್ಲಿ ಕಾಲಿಡಬೇಡ.
ಗಡಿಯನ್ನು ದಾಟಿ ಬೇರ್ಷೆಬಕ್ಕೆ ಹೋಗಬೇಡ.
ಗಿಲ್ಗಾಲಿನ ಜನರು ಕೈದಿಗಳಂತೆ ತೆಗೆಯಲ್ಪಡುವರು.
ಮತ್ತು ಬೇತೇಲ್ ನಾಶಮಾಡಲ್ಪಡುವದು.
6 ಯೆಹೋವನ ಬಳಿಗೆ ಹೋಗು. ಆಗ ಜೀವಿಸುವೆ.
ಯೆಹೋವನ ಬಳಿಗೆ ನೀನು ಹೋಗದಿದ್ದಲ್ಲಿ ಯೋಸೇಫನ ಮನೆತನಕ್ಕೆ ಬೆಂಕಿಯು ಹಿಡಿಯುವುದು.
ಆ ಬೆಂಕಿಯು ಯೋಸೇಫನ ಮನೆಯನ್ನು ದಹಿಸುವದು.
ಬೇತೇಲಿನಲ್ಲಿ ಅದನ್ನು ಯಾರೂ ನಂದಿಸಲಾರರು.
7-9 ನೀನು ಯೆಹೋವನ ಬಳಿಗೆ ಸಹಾಯಕ್ಕಾಗಿ ಹೋಗಬೇಕು.
ದೇವರು ನಕ್ಷತ್ರಪುಂಜಗಳನ್ನು ನಿರ್ಮಿಸಿದ್ದಾನೆ.
ಆತನು ಕತ್ತಲೆಯನ್ನು ಮುಂಜಾನೆಯ ಬೆಳಕನ್ನಾಗಿ ಮಾಡುತ್ತಾನೆ.
ಹಗಲನ್ನು ಕಾರ್ಗತ್ತಲೆಯನ್ನಾಗಿ ಮಾರ್ಪಡಿಸುತ್ತಾನೆ.
ಆತನು ಸಮುದ್ರದ ನೀರನ್ನು ಕರೆದು ಭೂಮಿಯ ಮೇಲೆ ಹೊಯ್ಯುತ್ತಾನೆ.
ಆತನ ಹೆಸರು ಯೆಹೋವನು.
ಆತನು ಒಂದು ಬಲವಾದ ನಗರವನ್ನು ರಕ್ಷಿಸಿ
ಇನ್ನೊಂದನ್ನು ನಾಶನಕ್ಕೆ ಒಪ್ಪಿಸುತ್ತಾನೆ.”
ಇಸ್ರೇಲರು ನಡಿಸಿದ ದುಷ್ಕೃತ್ಯ
ನೀನು ಒಳ್ಳೆಯತನವನ್ನು ವಿಷಕಾರಿಯನ್ನಾಗಿ ಮಾಡಿದಿ.
ನ್ಯಾಯವನ್ನು ಕೊಲೆಮಾಡಿದಿ. ಅದು ನೆಲದ ಮೇಲೆ ಬೀಳುವಂತೆ ಮಾಡಿದಿ.
10 ಪ್ರವಾದಿಗಳು ಸಾರ್ವಜನಿಕ ಸ್ಥಳಗಳಿಗೆ ಹೋಗಿ ಜನರು ಮಾಡುವ ದುಷ್ಕೃತ್ಯಗಳನ್ನು ಖಂಡಿಸುವರು.
ಜನರು ಪ್ರವಾದಿಗಳನ್ನು ಹಗೆಮಾಡುವರು.
ಪ್ರವಾದಿಗಳು ಒಳ್ಳೆಯದನ್ನು ಸರಳವಾದ ಸತ್ಯಗಳನ್ನು ಉಪದೇಶಿಸುವರು.
ಆದರೆ ಜನರು ಅವರನ್ನು ದ್ವೇಷಿಸುವರು.
11 ನೀವು ಅನ್ಯಾಯವಾಗಿ ಜನರಿಂದ ಸುಂಕ ವಸೂಲಿ ಮಾಡುವಿರಿ.
ಗೋದಿಯ ಮೂಟೆಗಳನ್ನು ಅವರಿಂದ ಸುಲುಕೊಳ್ಳುತ್ತೀರಿ.
ಕಲ್ಲುಗಳನ್ನು ಕೊರೆದು ನಿಮಗಾಗಿ ಅಂದವಾದ ಮನೆಗಳನ್ನು ಕಟ್ಟಿಸಿಕೊಳ್ಳುವಿರಿ.
ಆದರೆ ಆ ಮನೆಗಳಲ್ಲಿ ನೀವು ವಾಸಿಸುವುದಿಲ್ಲ.
ಸುಂದರವಾದ ದ್ರಾಕ್ಷಿತೋಟಗಳನ್ನು ನೆಡುವಿರಿ.
ಆದರೆ ಅದರ ದ್ರಾಕ್ಷಾರಸವನ್ನು ನೀವು ಕುಡಿಯುವುದಿಲ್ಲ.
12 ಯಾಕೆ ಹೀಗೆ? ಯಾಕೆಂದರೆ ನಿಮ್ಮ ಅನೇಕ ಪಾಪಕೃತ್ಯಗಳನ್ನು ನಾನು ಬಲ್ಲೆನು.
ನೀವು ಭಯಂಕರ ಪಾಪಗಳನ್ನು ಮಾಡಿದ್ದೀರಿ.
ನ್ಯಾಯವಂತರನ್ನು ಗಾಯಗೊಳಿಸಿದ್ದೀರಿ.
ಅನ್ಯಾಯ ಮಾಡಲು ಹಣವನ್ನು ತೆಗೆದುಕೊಂಡಿದ್ದೀರಿ.
ಬಡಜನರಿಗೆ ನ್ಯಾಯವನ್ನು ದೊರಕಿಸುವುದಿಲ್ಲ.
13 ಆ ಸಮಯದಲ್ಲಿ ಜ್ಞಾನಿಗಳಾದ ಬೋಧಕರು ಸುಮ್ಮನಿರುವರು.
ಯಾಕೆಂದರೆ ಅದು ಕೆಟ್ಟ ಸಮಯವಾಗಿರುತ್ತದೆ.
14 ದೇವರು ನಿಮ್ಮೊಂದಿಗಿದ್ದಾನೆಂದು ನೀವು ಹೇಳುತ್ತೀರಿ.
ಆದ್ದರಿಂದ ನೀವು ಕೆಟ್ಟಕಾರ್ಯವನ್ನು ಮಾಡದೆ ಒಳ್ಳೆಯ ಕಾರ್ಯಗಳನ್ನು ಮಾಡಬೇಕು.
ಆಗ ನೀವು ಬದುಕುವಿರಿ.
ಸರ್ವಶಕ್ತನಾದ ಯೆಹೋವನು ನಿಮ್ಮ ಬಳಿಯಲ್ಲಿ ಖಂಡಿತವಾಗಿಯೂ ಇರುವನು.
15 ದುಷ್ಟತನವನ್ನು ದ್ವೇಷಿಸಿ ಒಳ್ಳೆಯತನವನ್ನು ಪ್ರೀತಿಸಿರಿ,
ನಿಮ್ಮ ನ್ಯಾಯಾಲಯಗಳಲ್ಲಿ ನ್ಯಾಯವನ್ನು ಸ್ಧಾಪಿಸಿರಿ.
ಆಗ ಒಂದುವೇಳೆ ಸರ್ವಶಕ್ತನಾದ ಯೆಹೋವನು
ಯೋಸೇಫನ ವಂಶದಲ್ಲಿ ಉಳಿದವರಿಗೆ ದಯೆತೋರಿಸಬಹುದು.
ಮಹಾ ಶೋಕದ ದಿನಗಳು ಬರುವವು
16 ನನ್ನ ಒಡೆಯನಾದ ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ,
“ಸಾರ್ವಜನಿಕ ಸ್ಥಳಗಳಲ್ಲಿ ಜನರು ಗೋಳಾಡುವರು.
ರಸ್ತೆ ಬದಿಗಳಲ್ಲಿ ಜನರು ಗೋಳಾಡುವರು.
ಪಟ್ಟಣದ ನಿವಾಸಿಗಳು ತಮ್ಮೊಂದಿಗೆ ಗೋಳಾಡಲು ರೈತರನ್ನು ಆಹ್ವಾನಿಸುವರು.
ಅಳುವವರನ್ನು ಬಾಡಿಗೆಗೆ ಕರೆದುಕೊಂಡು ಬರುವರು.
17 ದ್ರಾಕ್ಷಿತೋಟಗಳಲ್ಲಿ ಜನರು ಯಾಕೆ ಅಳುವರು?
ಯಾಕೆಂದರೆ ನಾನು ಹಾದುಹೋಗುತ್ತಾ ನಿಮ್ಮನ್ನು ಶಿಕ್ಷಿಸುವೆನು.”
ಇದು ಯೆಹೋವನ ನುಡಿ.
18 ನಿಮ್ಮಲ್ಲಿ ಕೆಲವರಿಗೆ ಯೆಹೋವನ
ನ್ಯಾಯತೀರ್ಪಿನ ದಿನವನ್ನು ನೋಡುವ ಮನಸ್ಸಿದೆ.
ಆ ದಿವಸವನ್ನು ಯಾಕೆ ನೀವು ನೋಡಬೇಕು?
ಯೆಹೋವನ ನ್ಯಾಯಾತೀರ್ಪಿನ ದಿನವು ಬೆಳಕನ್ನಲ್ಲ, ಕತ್ತಲನ್ನು ತರುವುದು.
19 ಆಗ ನೀವು ಸಿಂಹದ ಬಾಯಿಂದ ತಪ್ಪಿಸಿಕೊಂಡು
ಕರಡಿಯ ಬಾಯಿಗೆ ಬೀಳುವ ಮನುಷ್ಯನಂತಿರುವಿರಿ.
ಆಗ ನೀವು ನಿಮ್ಮ ಮನೆಯ ಆಶ್ರಯಕ್ಕೆ ಓಡಿಹೋಗಿ
ಗೋಡೆಗೆ ಒರಗಿ ನಿಂತಾಗ
ಒಂದು ಹಾವಿನಿಂದ ಕಚ್ಚಿಸಿಕೊಂಡವರಂತೆ ಇರುವಿರಿ.
20 ಯೆಹೋವನ ನ್ಯಾಯತೀರ್ಪಿನ ದಿವಸವು
ಬೆಳಕಿನ ದಿವಸವಾಗಿರದೆ ಕತ್ತಲೆಯ ದಿವಸವಾಗಿರುವುದು;
ಬೆಳಕಿನ ಮಿಣಕೂ ಇಲ್ಲದ ಅಂಧಕಾರದ ದಿನವಾಗಿರುವುದು.
ಇಸ್ರೇಲಿನ ಆರಾಧನೆಯು ಯೆಹೋವನಿಗೆ ಬೇಕಿಲ್ಲ
21 “ನಿಮ್ಮ ಆರಾಧನಾ ದಿವಸಗಳನ್ನು ನಾನು ದ್ವೇಷಿಸುತ್ತೇನೆ.
ನಾನು ಅವುಗಳನ್ನು ಸ್ವೀಕರಿಸುವುದಿಲ್ಲ.
ನಿಮ್ಮ ಧಾರ್ಮಿಕ ಕೂಟಗಳಲ್ಲಿ ನಾನು ಸಂತೋಷಿಸುವದಿಲ್ಲ.
22 ನೀವು ಸರ್ವಾಂಗಹೋಮವನ್ನಾಗಲಿ ಧಾನ್ಯದ ಹೋಮವನ್ನಾಗಲಿ ಅರ್ಪಿಸಿದರೆ
ನಾನು ಅದನ್ನು ಸ್ವೀಕರಿಸುವುದಿಲ್ಲ.
ಸಮಾಧಾನಯಜ್ಞದಲ್ಲಿ ಕೊಬ್ಬಿದ ಪ್ರಾಣಿಗಳನ್ನು ಬಲಿಯರ್ಪಿಸಿದರೂ
ನಾನು ಅದನ್ನು ಕಣ್ಣೆತ್ತಿ ನೋಡುವದಿಲ್ಲ.
23 ನಿಮ್ಮ ಗಟ್ಟಿಯಾದ ಹಾಡುಗಳನ್ನು ನನ್ನಿಂದ ದೂರ ಮಾಡಿರಿ.
ನಿಮ್ಮ ಹಾರ್ಪ್ ವಾದ್ಯಗಳ ಹಾಡುಗಳನ್ನು ನಾನು ಕೇಳುವುದಿಲ್ಲ.
24 ನಿಮ್ಮ ದೇಶದಿಂದ ನ್ಯಾಯವು ಹರಿಯುವಂತೆ ಮಾಡಿರಿ.
ಎಂದಿಗೂ ಬತ್ತದ ಒರತೆಯಂತೆ ನಿಮ್ಮ ಒಳ್ಳೆತನವು ಹರಿಯಲಿ.
25 ಇಸ್ರೇಲೇ, ನೀನು ನಲವತ್ತು ವರ್ಷ ಮರುಭೂಮಿಯಲ್ಲಿ
ನನಗೆ ಯಜ್ಞಹೋಮಗಳನ್ನು ಅರ್ಪಿಸಿದೆ.
26 ಆದರೂ ನೀನು ನಿನ್ನ ರಾಜನಾದ ಸಕ್ಕೂತನ ಮತ್ತು ಕೈವಾನನ ವಿಗ್ರಹಗಳನ್ನು ತೆಗೆದುಕೊಂಡು ಹೋದೆ.
ಆ ನಕ್ಷತ್ರಗಳನ್ನು ದೇವರುಗಳನ್ನಾಗಿ ನೀನೇ ಮಾಡಿಕೊಂಡೆ.
27 ಆದ್ದರಿಂದ ನಾನು ನಿನ್ನನ್ನು ದಮಸ್ಕದ ಆಚೆಗೆ ಸೆರೆಯಾಳಾಗಿ ಕಳುಹಿಸುವೆನು.”
ಇದು ಯೆಹೋವನ ನುಡಿ.
ಯೇಸುವಿನ ಜೀವನದ ಬಗ್ಗೆ ಲೂಕನ ಬರಹ
1 ಸನ್ಮಾನ್ಯ ಥೆಯೊಫಿಲನೇ,
ನಮ್ಮ ಮಧ್ಯದಲ್ಲಿ ಸಂಭವಿಸಿದ ಸಂಗತಿಗಳ ಚರಿತ್ರೆಯನ್ನು ತಿಳಿಸುವುದಕ್ಕೆ ಅನೇಕರು ಪ್ರಯತ್ನಿಸಿದ್ದಾರೆ. 2 ಪ್ರಾರಂಭದಿಂದಲೂ ಆ ಸಂಗತಿಗಳನ್ನು ಕಣ್ಣಾರೆ ಕಂಡು ದೇವರ ಸಂದೇಶವನ್ನು ಸಾರಿದವರಿಂದ ನಾವು ಕೇಳಿದ ಸಂಗತಿಗಳನ್ನೇ ಅವರು ಬರೆದಿದ್ದಾರೆ. 3 ಪ್ರತಿಯೊಂದು ಸಂಗತಿಯನ್ನು ಪ್ರಾರಂಭದಿಂದ ನಾನೇ ಶ್ರದ್ಧೆವಹಿಸಿ ಅಧ್ಯಯನ ಮಾಡಿರುವುದರಿಂದ ಅವೆಲ್ಲವನ್ನೂ ನಿನಗೆ ಕ್ರಮಬದ್ಧವಾಗಿ ತಿಳಿಸಲು ಪುಸ್ತಕ ರೂಪದಲ್ಲಿ ಬರೆದಿದ್ದೇನೆ. 4 ನಿನಗೆ ಉಪದೇಶಿಸಿರುವ ವಿಷಯಗಳು ಸತ್ಯವಾದವುಗಳೆಂದು ಇದರಿಂದ ನಿನಗೆ ಸ್ಪಷ್ಟವಾಗಿರುವುದು.
ಜಕರೀಯ ಮತ್ತು ಎಲಿಜಬೇತ್
5 ಹೆರೋದನು[a] ಜುದೇಯವನ್ನು ಆಳುತ್ತಿದ್ದ ಕಾಲದಲ್ಲಿ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಜಕರೀಯನು ಅಬೀಯನ ವರ್ಗಕ್ಕೆ[b] ಸೇರಿದವನು. ಜಕರೀಯನ ಹೆಂಡತಿ ಆರೋನನ ಕುಟುಂಬದವಳು. ಆಕೆಯ ಹೆಸರು ಎಲಿಜಬೇತ್. 6 ಜಕರೀಯನು ಮತ್ತು ಎಲಿಜಬೇತಳು ನಿಜವಾಗಿಯೂ ದೇವರ ದೃಷ್ಟಿಯಲ್ಲಿ ಒಳ್ಳೆಯವರಾಗಿದ್ದರು. ಪ್ರಭುವಿನ (ದೇವರ) ಆಜ್ಞೆಗಳನ್ನೆಲ್ಲಾ ಕೈಕೊಂಡು ನಡೆಯುತ್ತಿದ್ದ ಅವರು, ಅದೇರೀತಿ ಬಾಳಲು ಇತರರಿಗೂ ಉಪದೇಶಿಸುತ್ತಿದ್ದರು. ಅವರು ತಪ್ಪಿಲ್ಲದವರಾಗಿದ್ದರು. 7 ಅವರಿಗೆ ಮಕ್ಕಳಿರಲಿಲ್ಲ. ಎಲಿಜಬೇತಳು ಬಂಜೆಯಾಗಿದ್ದಳು; ಮತ್ತು ಅವರಿಬ್ಬರೂ ಬಹಳ ಮುಪ್ಪಿನವರಾಗಿದ್ದರು.
8 ಒಮ್ಮೆ ತನ್ನ ವರ್ಗದ ಸರದಿ ಬಂದಾಗ, ಜಕರೀಯನು ದೇವರ ಸನ್ನಿಧಿಯಲ್ಲಿ ಯಾಜಕಸೇವೆ ಸಲ್ಲಿಸುತ್ತಿದ್ದನು. 9 ಯಾಜಕರು ಧೂಪವನು ಅರ್ಪಿಸುವುದಕ್ಕಾಗಿ ತಮ್ಮ ಸಂಪ್ರದಾಯದ ಪ್ರಕಾರ ಚೀಟಿಹಾಕಿ ಒಬ್ಬ ಯಾಜಕನನ್ನು ಆರಿಸುತ್ತಿದ್ದರು. ಈ ಸಲ ಅದು ಜಕರೀಯನ ಪಾಲಿಗೆ ಬಂದಿತು. ಆದ್ದರಿಂದ ಜಕರೀಯನು ಧೂಪ ಅರ್ಪಿಸುವುದಕ್ಕಾಗಿ ಪ್ರಭುವಿನ ಆಲಯದೊಳಗೆ ಹೋದನು. 10 ಹೊರಗಡೆ ಬಹು ಜನರಿದ್ದರು. ಧೂಪವನ್ನರ್ಪಿಸುತ್ತಿದ್ದ ಸಮಯದಲ್ಲಿ ಅವರು ಪ್ರಾರ್ಥಿಸುತ್ತಿದ್ದರು.
11 ಆಗ, ಧೂಪಪೀಠದ ಬಲಗಡೆಯಲ್ಲಿ, ಪ್ರಭುವಿನ ದೂತನೊಬ್ಬನು ಬಂದು ಜಕರೀಯನ ಮುಂದೆ ನಿಂತನು. 12 ಅವನು ದೇವದೂತನನ್ನು ನೋಡಿ ಗಲಿಬಿಲಿಗೊಂಡು ಬಹು ಭಯಪಟ್ಟನು. 13 ಆದರೆ ದೇವದೂತನು ಅವನಿಗೆ, “ಜಕರೀಯನೇ, ಹೆದರಬೇಡ. ನಿನ್ನ ಪ್ರಾರ್ಥನೆ ದೇವರಿಗೆ ಕೇಳಿಸಿತು. ನಿನ್ನ ಹೆಂಡತಿಯಾದ ಎಲಿಜಬೇತಳು ಒಂದು ಗಂಡುಮಗುವನ್ನು ಹೆರುವಳು. ನೀನು ಅವನಿಗೆ ಯೋಹಾನ ಎಂದು ಹೆಸರಿಡಬೇಕು. 14 ಅವನ ಜನನದಿಂದ ನಿಮಗೆ ಹರ್ಷಾನಂದವಾಗುವುದು. ಬಹುಜನರು ಸಂತೋಷಪಡುವರು. 15 ಪ್ರಭುವಿನ ದೃಷ್ಟಿಯಲ್ಲಿ ಯೋಹಾನನು ಮಹಾಪುರುಷನಾಗಿರುವನು. ಅವನು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿಯುವುದಿಲ್ಲ. ಯೋಹಾನನು ಹುಟ್ಟಿದಂದಿನಿಂದಲೇ ಪವಿತ್ರಾತ್ಮಭರಿತನಾಗಿರುವನು.[c]
16 “ಅನೇಕ ಯೆಹೂದ್ಯರು ತಮ್ಮ ದೇವರಾದ ಪ್ರಭುವಿನ ಕಡೆಗೆ ತಿರುಗಿಕೊಳ್ಳಲು ಅವನು ಸಹಾಯ ಮಾಡುವನು. 17 ಅವನು ಪ್ರಭುವಿಗೆ ಮುಂದೂತನಾಗಿ ಹೋಗುವನು. ಅವನು ಎಲೀಯನ[d] ಗುಣಶಕ್ತಿಗಳಿಂದ ಕೂಡಿದವನಾಗಿರುವನು; ತಂದೆ ಮತ್ತು ಮಕ್ಕಳ ನಡುವೆ ಸಮಾಧಾನವನ್ನು ಉಂಟುಮಾಡುವನು; ಅವಿಧೇಯರಾದ ಅನೇಕರನ್ನು ನೀತಿವಂತರ ಜ್ಞಾನದ ಕಡೆಗೆ ನಡೆಸುವನು; ಜನರನ್ನು ಪ್ರಭುವಿನ ಆಗಮನಕ್ಕೆ ಸಿದ್ಧಪಡಿಸುವನು” ಎಂದು ಹೇಳಿದನು.
18 ಜಕರೀಯನು ದೇವದೂತನಿಗೆ, “ನೀನು ಹೇಳುತ್ತಿರುವುದು ಸತ್ಯವೆಂಬುದಕ್ಕೆ ಆಧಾರವೇನು? ನಾನು ಮುದುಕನಾಗಿದ್ದೇನೆ ಮತ್ತು ನನ್ನ ಹೆಂಡತಿ ಸಹ ಮುಪ್ಪಿನವಳಾಗಿದ್ದಾಳೆ” ಎಂದು ಹೇಳಿದನು.
19 ದೇವದೂತನು, “ನನ್ನ ಹೆಸರು ಗಬ್ರಿಯೇಲ. ನಾನು ದೇವರ ಸನ್ನಿಧಿಯಲ್ಲಿ ನಿಂತುಕೊಂಡಿರುವವನು. ನಿನಗೆ ಈ ಶುಭಸಮಾಚಾರವನ್ನು ತಿಳಿಸಲು ದೇವರು ನನ್ನನ್ನು ಕಳುಹಿಸಿದ್ದಾನೆ. 20 ಈಗ ಕೇಳು! ಈ ಸಂಗತಿಗಳು ನೆರವೇರುವ ತನಕ ನೀನು ಮೂಕನಾಗಿರುವೆ. ಏಕೆಂದರೆ ನೀನು ನನ್ನ ಮಾತನ್ನು ನಂಬಲಿಲ್ಲ. ಆದರೆ ನಾನು ಹೇಳಿದ ಈ ಸಂಗತಿಗಳು ಖಂಡಿತವಾಗಿ ನೆರವೇರುತ್ತವೆ” ಎಂದು ಹೇಳಿದನು.
21 ಜನರು ಜಕರೀಯನಿಗಾಗಿ ಎದುರುನೋಡುತ್ತಾ ದೇವಾಲಯದೊಳಗೆ ಅವನು ಇಷ್ಟುಹೊತ್ತು ಇರಲು ಕಾರಣವೇನಿರಬಹುದೆಂದು ಆಶ್ಚರ್ಯಚಕಿತರಾದರು. 22 ಬಳಿಕ ಜಕರೀಯನು ಹೊರಗೆ ಬಂದಾಗ, ಅವನಿಗೆ ಅವರೊಡನೆ ಮಾತಾಡಲಾಗಲಿಲ್ಲ. ಆದ್ದರಿಂದ ಅವನಿಗೆ ದೇವಾಲಯದಲ್ಲಿ ದರ್ಶನವಾಗಿರಬೇಕೆಂದು ಅವರು ತಿಳಿದುಕೊಂಡರು. ಅಂದಿನಿಂದ ಅವನು ಮಾತಾಡಲಾಗದೆ ಕೇವಲ ಸನ್ನೆಗಳ ಮೂಲಕ ತಿಳಿಸುತ್ತಿದ್ದನು. 23 ತನ್ನ ಯಾಜಕಸೇವೆಯ ಸರದಿಯು ಮುಗಿದ ಮೇಲೆ ಜಕರೀಯನು ಮನೆಗೆ ಹಿಂತಿರುಗಿ ಹೋದನು.
24 ಆ ಬಳಿಕ, ಜಕರೀಯನ ಹೆಂಡತಿಯಾದ ಎಲಿಜಬೇತಳು ಗರ್ಭಿಣಿಯಾದಳು. ಆದ್ದರಿಂದ ಆಕೆ ಐದು ತಿಂಗಳವರೆಗೆ ತನ್ನ ಮನೆಯಿಂದ ಹೊರಗೆ ಹೋಗಲಿಲ್ಲ. 25 ಎಲಿಜಬೇತಳು, “ನೋಡಿ, ಪ್ರಭುವು ನನಗೋಸ್ಕರ ಎಂಥಾ ಕಾರ್ಯಮಾಡಿದ್ದಾನೆ! ನನ್ನ ಜನರ ನಡುವೆ ನನಗಿದ್ದ ಅವಮಾನವನ್ನು ಪ್ರಭುವು ತೊಲಗಿಸಿದ್ದಾನೆ” ಎಂದು ಹೇಳಿದಳು.
ಕನ್ಯೆ ಮರಿಯಳು
26-27 ಎಲಿಜಬೇತಳು ಆರು ತಿಂಗಳ ಗರ್ಭಿಣಿಯಾಗಿದ್ದಾಗ, ದೇವರು ತನ್ನ ದೂತನಾದ ಗಬ್ರಿಯೇಲನನ್ನು ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಲ್ಲಿ ವಾಸಿಸುತ್ತಿದ್ದ ಒಬ್ಬ ಕನ್ಯೆಯ ಬಳಿಗೆ ಕಳುಹಿಸಿದನು. ಆಕೆಗೆ ದಾವೀದನ ಮನೆತನದ ಯೋಸೇಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯಳು. 28 ದೇವದೂತನು ಆಕೆಯ ಬಳಿಗೆ ಬಂದು, “ದೇವರಾಶೀರ್ವಾದ ಹೊಂದಿದವಳೇ, ನಿನಗೆ ಶುಭವಾಗಲಿ! ಪ್ರಭುವು ನಿನ್ನೊಡನೆ ಇದ್ದಾನೆ” ಎಂದು ಹೇಳಿದನು.
29 ದೇವದೂತನ ಮಾತನ್ನು ಕೇಳಿ ಬಹು ಗಲಿಬಿಲಿಗೊಂಡ ಮರಿಯಳು, “ಇದರ ಅರ್ಥವೇನಿರಬಹುದು?” ಎಂದು ಆಶ್ಚರ್ಯಪಟ್ಟಳು.
30 ದೇವದೂತನು ಆಕೆಗೆ, “ಮರಿಯಳೇ, ಭಯಪಡಬೇಡ. ದೇವರು ನಿನ್ನನ್ನು ಬಹಳವಾಗಿ ಆಶೀರ್ವದಿಸಿದ್ದಾನೆ. 31 ಕೇಳು! ನೀನು ಗರ್ಭಿಣಿಯಾಗಿ ಒಂದು ಗಂಡುಮಗುವನ್ನು ಹೆರುವೆ. ಆತನಿಗೆ, ‘ಯೇಸು’ ಎಂದು ಹೆಸರಿಡಬೇಕು. 32 ಆತನು ಮಹಾಪುರುಷನಾಗುವನು. ಜನರು ಆತನನ್ನು ಮಹೋನ್ನತನ (ದೇವರ) ಮಗನೆಂದು ಕರೆಯುವರು. ಪ್ರಭುವಾದ ದೇವರು ಆತನಿಗೆ ಆತನ ಪೂರ್ವಿಕನಾದ ದಾವೀದನ ಅಧಿಕಾರವನ್ನು ಕೊಡುವನು. 33 ಯೇಸುವು ಯಾಕೋಬನ ಜನರನ್ನು ಸದಾಕಾಲ ಆಳುವನು. ಆತನ ರಾಜ್ಯ ಎಂದಿಗೂ ಅಂತ್ಯವಾಗುವುದಿಲ್ಲ” ಎಂದು ಹೇಳಿದನು.
34 ಮರಿಯಳು ದೇವದೂತನಿಗೆ, “ಇದು ಹೇಗೆ ಸಂಭವಿಸುವುದು? ನಾನು ಮದುವೆಯಾಗಿಲ್ಲವಲ್ಲಾ!” ಎಂದು ಹೇಳಿದಳು.
35 ದೇವದೂತನು ಮರಿಯಳಿಗೆ, “ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸುವುದು. ಈ ಕಾರಣದಿಂದ ನಿನ್ನಲ್ಲಿ ಹುಟ್ಟುವ ಈ ಪವಿತ್ರಮಗುವು ‘ದೇವರ ಮಗ’ ಎನಿಸಿಕೊಳ್ಳುವನು. 36 ಇದಲ್ಲದೆ, ನಿನ್ನ ಬಂಧುವಾದ ಎಲಿಜಬೇತಳು ಗರ್ಭಿಣಿಯಾಗಿದ್ದಾಳೆ. ಆಕೆಯು ಬಹಳ ಮುಪ್ಪಿನವಳಾಗಿದ್ದರೂ ಆಕೆಗೊಬ್ಬ ಮಗ ಹುಟ್ಟುವನು. ಜನರಿಂದ ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ. 37 ದೇವರಿಗೆ ಯಾವುದೂ ಅಸಾಧ್ಯವಲ್ಲ,” ಎಂದು ಹೇಳಿದನು.
38 ಮರಿಯಳು, “ನಾನು ಪ್ರಭುವಿನ ದಾಸಿ. ನೀನು ಹೇಳಿದಂತೆಯೇ ನನಗಾಗಲಿ!” ಅಂದಳು. ಬಳಿಕ ದೇವದೂತನು ಹೊರಟುಹೋದನು.
Kannada Holy Bible: Easy-to-Read Version. All rights reserved. © 1997 Bible League International