M’Cheyne Bible Reading Plan
ರೂಬೇನನ ಸಂತತಿಯವರು
5 1-3 ರೂಬೇನನು ಇಸ್ರೇಲನ ಚೊಚ್ಚಲಮಗ. ಅವನು ಚೊಚ್ಚಲಮಗನಿಗೆ ಸಿಗಬೇಕಾಗಿದ್ದ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿತ್ತು. ಆದರೆ ಅವನು ತನ್ನ ತಂದೆಯ ಉಪಪತ್ನಿಯೊಡನೆ ಸಂಭೋಗಿಸಿದ್ದರಿಂದ ಅವನ ಹಕ್ಕುಗಳು ಯೋಸೇಫನ ಮಕ್ಕಳಿಗೆ ದೊರೆತವು. ಆದ್ದರಿಂದ ವಂಶಾವಳಿಯಲ್ಲಿ ಚೊಚ್ಚಲ ಮಗನ ಸ್ಥಾನ ಅವನಿಗೆ ದೊರೆಯಲಿಲ್ಲ. ಯೆಹೂದನು ತನ್ನ ಎಲ್ಲಾ ಸಹೋದರರಿಗಿಂತ ಬಲಾಢ್ಯನಾದನು. ಆದ್ದರಿಂದ ಅವನ ಕುಲದಿಂದಲೇ ನಾಯಕರುಗಳು ಬಂದರು. ಆದರೆ ಚೊಚ್ಚಲ ಮಗನಿಗೆ ಸಿಗಬೇಕಾಗಿದ್ದ ಇತರ ಹಕ್ಕುಗಳು ಯೋಸೇಫನ ಮಕ್ಕಳಿಗೆ ದೊರೆತವು.
ರೂಬೇನನ ಮಕ್ಕಳು ಯಾರೆಂದರೆ: ಹನೋಕ್, ಫಲ್ಲೂ, ಹೆಚ್ರೋನ್ ಮತ್ತು ಕರ್ಮೀ.
4 ಇವರು ಯೋವೇಲನ ಸಂತತಿಯವರು: ಶೆಮಾಯನು ಯೋವೇಲನ ಮಗ. ಗೋಗನು ಶೆಮಾಯನ ಮಗ. ಶಿಮ್ಮಿಯು ಗೋಗನ ಮಗ. 5 ಶಿಮ್ಮಿಯ ಮಗನು ಮೀಕ. ಮೀಕನ ಮಗ ರೆವಾಯ. ರೆವಾಯನ ಮಗನು ಬಾಳ್ಮಯೊನ್. 6 ಬಾಳ್ಮಯೊನನ ಮಗನು ಬೇರ. ಅಶ್ಯೂರದ ಅರಸನಾದ ತಿಗ್ಲತ್ಪಿಲೆಸರನು ಬೇರನನ್ನು ಅವನ ಮನೆಯಿಂದ ಹೊರಡಿಸಿದನು; ಬೇರನು ಅವನ ಸೆರೆಯಾಳಾದನು. ಬೇರನು ರೂಬೇನ್ ಕುಲದ ಪ್ರಧಾನನಾಗಿದ್ದನು.
7 ಯೋವೇಲನ ಮತ್ತು ಅವನ ಸಂತತಿಯವರೆಲ್ಲರ ವಿಷಯವಾಗಿ ಸಂತಾನಚರಿತ್ರೆಯಲ್ಲಿ ಬರೆಯಲ್ಪಟ್ಟಿರುತ್ತದೆ. ಅವನ ಚೊಚ್ಚಲಮಗನು ಯೆಗೀಯೇಲ್, ಅನಂತರ ಹುಟ್ಟಿದವರು ಜೆಕರ್ಯ ಮತ್ತು ಬೆಳ. 8 ಬೆಳನು ಆಜಾಜನ ಮಗ, ಆಜಾಜನು ಶೆಮಯನ ಮಗ, ಶೆಮಯನು ಯೋವೇಲನ ಮಗನು. ಇವರೆಲ್ಲರೂ ನೆಬೋ ಮತ್ತು ಬಾಳ್ಮೆಯೋನ್ ಪ್ರಾಂತ್ಯದ ಅರೋಯೇರ್ ಸುತ್ತಮುತ್ತ ವಾಸಿಸಿದರು. 9 ಬೆಳನ ಜನರು ಯೂಫ್ರೇಟೀಸ್ ನದಿಯ ಸಮೀಪದಲ್ಲಿರುವ ಮರುಭೂಮಿಯವರೆಗೂ ನೆಲೆಸಿದರು. ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದನಕರುಗಳು ಇದ್ದುದರಿಂದ ಗಿಲ್ಯಾದ್ ಪ್ರಾಂತ್ಯದಲ್ಲಿಯೇ ನೆಲೆಸಿದರು. 10 ಸೌಲನು ಅರಸನಾಗಿದ್ದ ಸಮಯದಲ್ಲಿ ಬೆಳನ ಜನರು ಹಗ್ರೀಯರೊಂದಿಗೆ ಯುದ್ಧಮಾಡಿ ಅವರ ಗುಡಾರಗಳಲ್ಲಿ ವಾಸಮಾಡಿದರು. ಆ ಗುಡಾರಗಳಲ್ಲಿ ವಾಸಮಾಡುತ್ತಾ ಗಿಲ್ಯಾದಿನ ಪೂರ್ವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿದರು.
ಗಾದನ ಸಂತತಿಯವರು
11 ರೂಬೇನ್ಯರು ವಾಸಿಸಿದ್ದ ಪ್ರಾಂತ್ಯದ ಪಕ್ಕದಲ್ಲಿಯೇ ಗಾದನ ಕುಲದವರು ವಾಸಿಸಿದರು. ಇವರು ಬಾಷಾನಿನ ಪ್ರದೇಶದಲ್ಲಿ ಸಾಲೆಖ ಪಟ್ಟಣದವರೆಗೂ ನೆಲೆಸಿದರು. 12 ಯೋವೇಲನೇ ಬಾಷಾನಿನ ಮೊದಲನೇ ಪ್ರಧಾನನು. ಇವನ ನಂತರ ಶಾಫಾಮ ಪ್ರಧಾನನಾದನು. ಆಮೇಲೆ ಯನ್ನೈ ಪ್ರಧಾನನಾದನು. 13 ಅವರ ಕುಟುಂಬದ ಏಳು ಮಂದಿ ಸಹೋದರರು ಯಾರೆಂದರೆ: ಮೀಕಾಯೇಲ್, ಮೆಷುಲ್ಲಾಮ್, ಶೆಬ, ಯೋರೈ, ಯಕ್ಕಾನ್, ಜೀಯ ಮತ್ತು ಏಬೆರ್. 14 ಇವರು ಅಬೀಹೈಲನ ಸಂತತಿಯವರು: ಅಬೀಹೈಲನು ಹೂರೀಯ ಮಗ. ಹೂರೀಯು ಯಾರೋಹನ ಮಗ. ಯಾರೋಹನು ಗಿಲ್ಯಾದನ ಮಗ. ಗಿಲ್ಯಾದನು ಮೀಕಾಯೇಲನ ಮಗನು. ಮೀಕಾಯೇಲನು ಯೆಷೀಷೈಯನ ಮಗನು. ಯೆಷೀಷೈ ಯೆಹ್ದೋವಿನ ಮಗನು. ಯೆಹ್ದೋವಿಯು ಅಹೀಬೂಜನ ಮಗನು. 15 ಅಬ್ದೀಯೇಲನ ಮಗನು ಅಹೀಬೂಜನು. ಅಬ್ದೀಯೇಲನು ಗೂನೀಯ ಮಗನು. ಅಹೀಬೂಜನು ಕುಟುಂಬ ಪ್ರಧಾನನಾಗಿದ್ದನು.
16 ಗಿಲ್ಯಾದ್ ಪ್ರಾಂತ್ಯದಲ್ಲಿ ಗಾದ್ ಕುಟುಂಬದ ಜನರು ವಾಸಿಸಿದರು. ಅವರು ಬಾಷಾನ್ ಪ್ರಾಂತ್ಯದಲ್ಲಿಯೂ ಅದರ ಸುತ್ತಮುತ್ತಲಿದ್ದ ಊರುಗಳಲ್ಲಿಯೂ ಶಾರೋನ್ ಪ್ರಾಂತ್ಯದ ಹುಲ್ಲುಗಾವಲುಗಳ ಗಡಿಗಳವರೆಗೂ ನೆಲೆಸಿದರು.
17 ಯೋತಾಮ ಮತ್ತು ಯಾರೊಬ್ಬಾಮನ ಕಾಲದಲ್ಲಿ ಇವರ ಹೆಸರುಗಳನ್ನೆಲ್ಲಾ ಗಾದ್ಯರ ಸಂತಾನ ಚರಿತ್ರೆಯಲ್ಲಿ ಬರೆಯಲ್ಪಟ್ಟಿರುತ್ತದೆ. ಯೋತಾಮನು ಯೆಹೂದದ ಅರಸನಾಗಿದ್ದನು ಮತ್ತು ಯಾರೊಬ್ಬಾಮನು ಇಸ್ರೇಲರ ಅರಸನಾಗಿದ್ದನು.
ಶೂರರಾದ ಯುದ್ಧವೀರರು
18 ರೂಬೇನ್ ಮತ್ತು ಗಾದ್ ಕುಲಗಳಲ್ಲಿ ಮತ್ತು ಮನಸ್ಸೆಯ ಅರ್ಧಕುಲದವರಲ್ಲಿ ನಲವತ್ತನಾಲ್ಕು ಸಾವಿರದ ಏಳುನೂರ ಅರವತ್ತು ಮಂದಿ ಯುದ್ಧವೀರರಿದ್ದರು. ಇವರೆಲ್ಲಾ ಖಡ್ಗ ಗುರಾಣಿಗಳನ್ನೂ ಬಿಲ್ಲುಬಾಣಗಳನ್ನೂ ಉಪಯೋಗಿಸುವದರಲ್ಲಿ ನಿಪುಣರಾಗಿದ್ದರು. 19 ಅವರು ಹಗ್ರೀಯರೊಂದಿಗೂ ಯೆಟೂರ್, ನಾಫೀಷ್ ಮತ್ತು ನೋದಾಬ್ ಊರಿನವರೊಂದಿಗೂ ಯುದ್ಧ ಮಾಡಿದರು. 20 ರೂಬೇನ್, ಮನಸ್ಸೆ, ಗಾದ್ ಕುಲಗಳ ಯೋಧರು ಯುದ್ಧಮಾಡುವಾಗ ದೇವರಲ್ಲಿ ಪ್ರಾರ್ಥಿಸಿದರು. ಅವರು ದೇವರ ಮೇಲೆ ಭರವಸೆಯಿಟ್ಟು ಸಹಾಯಕ್ಕಾಗಿ ಬೇಡಿಕೊಂಡದ್ದರಿಂದ ದೇವರು ಅವರಿಗೆ ಜಯವನ್ನು ಕೊಟ್ಟನು. 21 ವೈರಿಗಳಲ್ಲಿದ್ದ ಎಲ್ಲಾ ಪಶುಗಳನ್ನು ಅವರು ತಮ್ಮ ವಶಕ್ಕೆ ತೆಗೆದುಕೊಂಡರು. ಅವರು ಐವತ್ತು ಸಾವಿರ ಒಂಟೆಗಳು, ಎರಡು ಲಕ್ಷದ ಐವತ್ತು ಸಾವಿರ ಕುರಿಗಳು, ಎರಡು ಸಾವಿರ ಕತ್ತೆಗಳು ಅಲ್ಲದೆ ಒಂದು ಲಕ್ಷ ಸೆರೆಯಾಳುಗಳನ್ನು ತೆಗೆದುಕೊಂಡರು. 22 ದೇವರು ಅವರಿಗೆ ಜಯವನ್ನು ಕೊಟ್ಟಿದ್ದರಿಂದ ಹಗ್ರೀಯರಲ್ಲಿ ಬಹಳ ಮಂದಿಯನ್ನು ಕೊಂದರು. ಆ ಹಗ್ರೀಯರ ಪ್ರದೇಶದಲ್ಲಿ ರೂಬೇನ್, ಗಾದ್, ಮನಸ್ಸೆ ಕುಲಗಳವರು ಸಹ ವಾಸಿಸಿದರು. ಬಾಬಿಲೋನಿನ ಅರಸನು ಇಸ್ರೇಲರನ್ನು ಸೆರೆಹಿಡಿದು ಕೊಂಡೊಯ್ಯುವ ತನಕ ಅವರು ಅಲ್ಲಿಯೇ ವಾಸಮಾಡಿದರು.
23 ಮನಸ್ಸೆಯ ಅರ್ಧಕುಲದ ಜನರು ಬಾಷಾನ್ ಪ್ರದೇಶದಿಂದಿಡಿದು ಬಾಳ್ಹೆರ್ಮೋನ್, ಸೆನೀರ್ ಮತ್ತು ಹೆರ್ಮೋನ್ ಪರ್ವತ ಪ್ರಾಂತ್ಯದವರೆಗೂ ನೆಲೆಸಿದರು. ಅವರ ಕುಲದ ಜನರು ಬಹುಸಂಖ್ಯಾತರಾದರು.
24 ಮನಸ್ಸೆಯ ಅರ್ಧಕುಲದ ಅಧಿಪತಿಗಳು ಯಾರೆಂದರೆ: ಏಫೆರ್, ಇಷ್ಷೀ, ಎಲೀಯೇಲ್, ಅಜ್ರೀಯೇಲ್, ಯೆರೆಮೀಯ, ಹೋದವ್ಯ ಮತ್ತು ಯೆಹ್ತೀಯೇಲ್, ಇವರೆಲ್ಲಾ ಬಲಾಢ್ಯರೂ ಧೈರ್ಯಶಾಲಿಗಳೂ ಆದ ವೀರರಾಗಿದ್ದರು. 25 ಆದರೆ ಆ ಅಧಿಪತಿಗಳು ತಮ್ಮ ಪೂರ್ವಿಕರು ಆರಾಧಿಸುತ್ತಿದ್ದ ದೇವರನ್ನು ಬಿಟ್ಟು ಬೇರೆ ದೇವರುಗಳನ್ನು ಪೂಜಿಸತೊಡಗಿ ತಮ್ಮ ದೇವರ ವಿರುದ್ಧವಾಗಿ ಪಾಪಮಾಡಿದರು. ತಾವು ಸೋಲಿಸಿದ ಅನ್ಯಜನಾಂಗದವರ ದೇವರುಗಳನ್ನು ಇವರು ಆರಾಧಿಸಿದರು.
26 ಇಸ್ರೇಲರ ದೇವರು ಅಶ್ಯೂರದ ರಾಜನಾದ ಪೂಲ್ (ತಿಗ್ಲತ್ಪಿಲೆಸರ್) ಅವರ ಮೇಲೆ ಯುದ್ಧಕ್ಕೆ ಹೋಗುವಂತೆ ಮಾಡಿದನು. ಅವರು ಬಂದು ರೂಬೇನ್, ಗಾದ್ ಮತ್ತು ಮನಸ್ಸೆಯ ಅರ್ಧ ಕುಲದವರೊಂದಿಗೆ ಯುದ್ಧ ಮಾಡಿದರು. ಯುದ್ಧದಲ್ಲಿ ಅವರನ್ನು ಸೋಲಿಸಿ, ಸೆರೆಹಿಡಿದು ಹಲಹ, ಹಾಬೋರ್, ಹಾರ ಮತ್ತು ಗೋಜಾನ್ ನದಿಯ ಸಮೀಪದ ಸ್ಥಳಕ್ಕೆ ಕೈದಿಗಳನ್ನಾಗಿ ಕೊಂಡೊಯ್ದರು. ಅಂದಿನಿಂದ ಇಂದಿನ ತನಕವೂ ಇಸ್ರೇಲರು ಆ ಸ್ಥಳಗಳಲ್ಲಿ ವಾಸಮಾಡುತ್ತಿರುವರು.
ಲೇವಿಯ ಸಂತತಿಯವರು
6 ಲೇವಿಯ ಗಂಡುಮಕ್ಕಳು: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ.
2 ಕೆಹಾತನ ಗಂಡುಮಕ್ಕಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
3 ಅಮ್ರಾಮನ ಮಕ್ಕಳು: ಆರೋನ, ಮೋಶೆ ಮತ್ತು ಮಿರ್ಯಾಮಳು.
ಆರೋನನ ಮಕ್ಕಳು: ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್. 4 ಎಲ್ಲಾಜಾರನ ಮಗನು ಫೀನೆಹಾಸ. ಫೀನೆಹಾಸನ ಮಗನು ಅಬೀಷೂವ. 5 ಅಬೀಷೂವನ ಮಗನು ಬುಕ್ಕೀ. ಬುಕ್ಕೀಯ ಮಗನು ಉಜ್ಜೀ. 6 ಉಜ್ಜೀಯ ಮಗನು ಜೆರಹ್ಯ. ಜೆರಹ್ಯನ ಮಗನು ಮೆರಾಯೋತ್. 7 ಮೆರಾಯೋತನ ಮಗನು ಅಮರ್ಯ. ಅಮರ್ಯನ ಮಗನು ಅಹೀಟೂಬ. 8 ಅಹೀಟೂಬನ ಮಗ ಚಾದೋಕ. ಚಾದೋಕನ ಮಗ ಅಹೀಮಾಚ. 9 ಅಹೀಮಾಚನು ಅಜರ್ಯನ ತಂದೆ. ಅಜರ್ಯನ ಮಗನು ಯೋಹಾನಾನ. 10 ಯೋಹಾನಾನನ ಮಗನು ಅಜರ್ಯ. (ಸೊಲೊಮೋನನು ಜೆರುಸಲೇಮಿನಲ್ಲಿ ಕಟ್ಟಿದ ದೇವಾಲಯದಲ್ಲಿ ಅಜರ್ಯನು ಮಹಾಯಾಜಕನಾಗಿದ್ದನು.) 11 ಅಜರ್ಯನ ಮಗನು ಅಮರ್ಯ. ಅಮರ್ಯನು ಅಹೀಟೂಬನ ತಂದೆ. 12 ಅಹೀಟೂಬನು ಚಾದೋಕನ ತಂದೆ. ಚಾದೋಕನು ಶಲ್ಲೂಮನ ತಂದೆ. 13 ಶಲ್ಲೂಮನು ಹಿಲ್ಕೀಯನ ತಂದೆ. ಹಿಲ್ಕೀಯನು ಅಜರ್ಯನ ತಂದೆ. 14 ಅಜರ್ಯನು ಸೆರಾಯನ ತಂದೆ. ಸೆರಾಯನು ಯೆಹೋಚಾದಾಕನ ತಂದೆ.
15 ಯೆಹೂದ ಮತ್ತು ಜೆರುಸಲೇಮಿನ ಜನರು ಸೆರೆ ಒಯ್ಯಲ್ಪಟ್ಟಾಗ ಯೆಹೋಚಾದಾಕನೂ ಅವರೊಂದಿಗೆ ಪರದೇಶಕ್ಕೆ ಹೋಗಬೇಕಾಯಿತು. ಯೆಹೋವನು ಯೆಹೂದ್ಯರನ್ನು ಮತ್ತು ಜೆರುಸಲೇಮಿನವರನ್ನು ಪರದೇಶಕ್ಕೆ ಸೆರೆಯಾಳುಗಳಾಗಿ ಒಯ್ಯಲು ನೆಬೂಕದ್ನೆಚ್ಚರನನ್ನು ಉಪಯೋಗಿಸಿದನು.
ಲೇವಿಯ ಇತರ ಸಂತತಿಯವರು
16 ಲೇವಿಯ ಗಂಡುಮಕ್ಕಳು: ಗೇರ್ಷೋಮ್, ಕೆಹಾತ್ ಮತ್ತು ಮೆರಾರೀ.
17 ಗೇರ್ಷೋಮನ ಗಂಡುಮಕ್ಕಳು: ಲಿಬ್ನೀ ಮತ್ತು ಶಿಮ್ಮೀ.
18 ಕೆಹಾತನ ಗಂಡುಮಕ್ಕಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
19 ಮೆರಾರಿಯ ಗಂಡುಮಕ್ಕಳು: ಮಹ್ಲೀ ಮತ್ತು ಮುಷೀ.
ಇತರ ಲೇವಿ ಕುಲದ ಕುಟುಂಬಗಳ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ತಂದೆಗಳ ಹೆಸರನ್ನು ಮೊದಲು ತಿಳಿಸಿ, ಅವರ ಗಂಡುಮಕ್ಕಳ ಹೆಸರನ್ನು ನಂತರ ತಿಳಿಸಲಾಗಿದೆ.
20 ಗೇರ್ಷೋಮನ ಸಂತತಿಯವರು: ಲಿಬ್ನೀಯು ಗೇರ್ಷೋಮನ ಮಗನು. ಲಿಬ್ನೀಯ ಮಗ ಯಹತ್. ಯಹತನ ಮಗ ಜಿಮ್ಮ. 21 ಜಿಮ್ಮನ ಮಗನು ಯೋವಾಹ. ಯೋವಾಹನ ಮಗ ಇದ್ದೋ. ಜೆರಹನು ಇದ್ದೋವಿನ ಮಗನು. ಜೆರಹನ ಮಗನು ಯೆವತ್ರೈ.
22 ಕೆಹಾತನ ಸಂತತಿಯವರು: ಕೆಹಾತನ ಮಗ ಅಮ್ಮೀನಾದಾಬ್. ಅಮ್ಮೀನಾದಾಬನ ಮಗ ಕೋರಹ. ಕೋರಹನ ಮಗನು ಅಸ್ಸೀರ್. 23 ಅಸ್ಸೀರನ ಮಗನು ಎಲ್ಕಾನ. ಎಲ್ಕಾನನ ಮಗನು ಎಬ್ಯಾಸಾಫ್. ಎಬ್ಯಾಸಾಫನ ಮಗನು ಅಸ್ಸೀರ್. 24 ಅಸ್ಸೀರನ ಮಗನು ತಹತ. ಊರೀಯೇಲ್ ತಹತನ ಮಗನು. ಉಜ್ಜೀಯನು ಊರೀಯೇಲನ ಮಗನು. ಸೌಲನು ಉಜ್ಜೀಯನ ಮಗನು.
25 ಎಲ್ಕಾನನ ಗಂಡುಮಕ್ಕಳು: ಅಮಾಸೈ ಮತ್ತು ಅಹೀಮೋತ್. 26 ಚೋಫೈ ಎಲ್ಕಾನನ ಮಗನು. ನಹತನು ಚೋಫೈಯ ಮಗನು. 27 ನಹತನ ಮಗ ಎಲೀಯಾಬ್. ಯೆರೋಹಾಮನು ಎಲೀಯಾಬನ ಮಗನು. ಯೆರೋಹಾಮನ ಮಗನು ಎಲ್ಕಾನ. ಸಮುವೇಲನು ಎಲ್ಕಾನನ ಮಗನು. 28 ಸಮುವೇಲನ ಗಂಡುಮಕ್ಕಳು: ಯೋವೇಲ್ ಮತ್ತು ಅಬೀಯ.
29 ಮೆರಾರೀಯ ಗಂಡುಮಕ್ಕಳು: ಮೆರಾರೀಯ ಮಗ ಮಹ್ಲೀ; ಮಹ್ಲೀಯ ಮಗನು ಲಿಬ್ನೀ. ಲಬ್ನೀಯ ಮಗ ಶಿಮ್ಮೀ; ಶಿಮ್ಮೀಯನ ಮಗ ಉಜ್ಜ; 30 ಉಜ್ಜನ ಮಗ ಶಿಮ್ಮಾ; ಶಿಮ್ಮಾನ ಮಗ ಹಗ್ಗೀಯ. ಹಗ್ಗೀಯನ ಮಗ ಅಸಾಯ.
ದೇವಾಲಯದ ಗಾಯಕರು
31 ದೇವದರ್ಶನಗುಡಾರದ ಮಹಾಪವಿತ್ರಸ್ಥಳದಲ್ಲಿ ಒಡಂಬಡಿಕೆಯ ಪೆಟ್ಟಿಗೆಯನ್ನು ಇಟ್ಟ ಬಳಿಕ ಅರಸನಾದ ದಾವೀದನು ಗಾಯಕರನ್ನು ಆರಿಸಿದನು. 32 ಪವಿತ್ರ ಗುಡಾರದಲ್ಲಿ ಹಾಡುವುದೇ ಇವರ ದೇವರ ಸೇವೆಯಾಗಿತ್ತು. ಸೊಲೊಮೋನನು ಜೆರುಸಲೇಮಿನಲ್ಲಿ ದೇವಾಲಯವನ್ನು ಕಟ್ಟುವ ತನಕ ಇವರು ಗುಡಾರದಲ್ಲಿ ತಮಗೆ ಹೇಳಿರುವ ಪ್ರಕಾರವೇ ಸೇವೆಮಾಡಿದರು.
33 ಗಾಯನದ ಮೂಲಕ ಸೇವೆಮಾಡಿದ ತಂದೆಗಳ ಮತ್ತು ಅವರ ಗಂಡುಮಕ್ಕಳ ಪಟ್ಟಿ:
ಕೆಹಾತ್ಯನ ಸಂತತಿಯವರಿಂದ ಗಾಯಕನಾದ ಹೇಮಾನ. ಇವನು ಯೋವೇಲನ ಮಗ. ಯೋವೇಲನು ಸಮುವೇಲನ ಮಗ. 34 ಸಮುವೇಲನು ಎಲ್ಕಾನನ ಮಗ. ಎಲ್ಕಾನನು ಯೆರೋಹಾಮನ ಮಗ. ಯೆರೋಹಾಮನು ಎಲೀಯೇಲನ ಮಗ. ಎಲೀಯೇಲನು ತೋಹನ ಮಗ. 35 ತೋಹನು ಚೂಫನ ಮಗ. ಚೂಫನು ಎಲ್ಕಾನನ ಮಗ. ಎಲ್ಕಾನನು ಮಹತನ ಮಗ. ಮಹತನು ಅಮಾಸೈಯ ಮಗ. 36 ಅಮಾಸೈಯು ಎಲ್ಕಾನನ ಮಗ. ಎಲ್ಕಾನನು ಯೋವೇಲನ ಮಗ. ಯೋವೇಲನು ಅಜರ್ಯನ ಮಗ. ಅಜರ್ಯನು ಚೆಫನ್ಯನ ಮಗ. 37 ಚೆಫನ್ಯನು ತಹತನ ಮಗ. ತಹತನು ಅಸೀರನ ಮಗ. ಅಸೀರನು ಎಬ್ಯಾಸಾಫನ ಮಗ. ಎಬ್ಯಾಸಾಫನು ಕೋರಹನ ಮಗ. 38 ಕೋರಹನು ಇಚ್ಹಾರನ ಮಗ. ಇಚ್ಹಾರನು ಕೆಹಾತನ ಮಗ. ಕೆಹಾತನು ಲೇವಿಯ ಮಗ. ಲೇವಿಯು ಇಸ್ರೇಲನ ಮಗ.
39 ಹೇಮಾನನ ಸಂಬಂಧಿಯ ಹೆಸರು ಆಸಾಫ್. ಇವನು ಹೇಮಾನನ ಬಲಗಡೆಯಲ್ಲಿದ್ದುಕೊಂಡು ಸೇವೆಮಾಡಿದನು. ಆಸಾಫನು ಬೆರೆಕ್ಯನ ಮಗನು. ಬೆರೆಕ್ಯನು ಶಿಮ್ಮನ ಮಗ. 40 ಶಿಮ್ಮನು ಮೀಕಾಯೇಲನ ಮಗ. ಮೀಕಾಯೇಲನು ಬಾಸೇಯನ ಮಗ. ಬಾಸೇಯನು ಮಲ್ಕೀಯನ ಮಗ. 41 ಮಲ್ಕೀಯನು ಎತ್ನಿಯ ಮಗ. ಎತ್ನಿಯು ಜೆರಹನ ಮಗ. ಜೆರಹನು ಆದಾಯನ ಮಗ. 42 ಆದಾಯನು ಏತಾನನ ಮಗ. ಏತಾನನು ಜಿಮ್ಮನ ಮಗ. ಜಿಮ್ಮನು ಶಿಮ್ಮಿಯ ಮಗ. 43 ಶಿಮ್ಮಿಯು ಯಹತನ ಮಗ. ಯಹತನು ಗೇರ್ಷೋಮನ ಮಗ. ಗೇರ್ಷೋಮನು ಲೇವಿಯ ಮಗ.
44 ಮೆರಾರೀಯ ಸಂತತಿಯವರು ಹೇಮಾನ ಮತ್ತು ಅಸಾಫನ ಸಂಬಂಧಿಕರು. ಇವರು ಹೇಮಾನನ ಎಡಗಡೆಯಲ್ಲಿ ನಿಂತು ಹಾಡುವ ಗಾಯಕರು. ಏತಾನನು ಕೀಷೀಯ ಮಗ. ಕೀಷೀಯು ಅಬ್ದೀಯ ಮಗ. ಅಬ್ದೀಯ ಮಲ್ಲೂಕನ ಮಗ. 45 ಮಲ್ಲೂಕನು ಹಷಬ್ಯನ ಮಗ. ಹಷಬ್ಯನು ಅಮಚ್ಯನ ಮಗ. ಅಮಚ್ಯನು ಹಿಲ್ಕೀಯನ ಮಗ. 46 ಹಿಲ್ಕೀಯನು ಅಮ್ಚೀಯನ ಮಗ. ಅಮ್ಚೀಯನು ಬಾನೀಯನ ಮಗ. ಬಾನೀಯನು ಶೆಮೆರನ ಮಗ. 47 ಶೆಮೆರನು ಮಹ್ಲೀಯನ ಮಗ. ಮಹ್ಲೀಯನು ಮೂಷೀಯ ಮಗ. ಮೂಷೀಯು ಮೆರಾರಿಯ ಮಗ. ಮೆರಾರಿಯು ಲೇವಿಯ ಮಗ.
48 ಹೇಮಾನ್ ಮತ್ತು ಆಸಾಫನ ಸಹೋದರರು ಲೇವಿಕುಲದವರು. ಲೇವಿಕುಲದವರನ್ನು ಲೇವಿಯರೆಂದು ಕರೆಯುತ್ತಾರೆ. ಲೇವಿಯರು ಪವಿತ್ರಗುಡಾರದ ಸೇವೆಯನ್ನು ಮಾಡಲು ಆರಿಸಲ್ಪಟ್ಟವರು. ಪವಿತ್ರ ಗುಡಾರವು ದೇವರ ನಿವಾಸವಾಗಿತ್ತು. 49 ಆದರೆ ಸರ್ವಾಂಗಹೋಮ ಅರ್ಪಿಸುವ ಯಜ್ಞವೇದಿಕೆಯ ಮೇಲೆ ಮತ್ತು ಧೂಪಾರ್ಪಣೆಯ ಯಜ್ಞವೇದಿಕೆಯ ಮೇಲೆ ಧೂಪವರ್ಪಿಸಲು ಆರೋನನ ಸಂತತಿಯವರನ್ನು ಮಾತ್ರ ಆರಿಸಿಕೊಳ್ಳಲಾಗಿತ್ತು. ದೇವರ ನಿವಾಸದ ಮಹಾಪವಿತ್ರ ಸ್ಥಳದಲ್ಲಿ ಆರೋನನ ಸಂತತಿಯವರೇ ಎಲ್ಲಾ ಕೆಲಸಕಾರ್ಯಗಳನ್ನು ಮಾಡುತ್ತಿದ್ದರು. ಅಲ್ಲದೆ ಇಸ್ರೇಲ್ ಜನರನ್ನು ಶುದ್ಧೀಕರಿಸಲು ಶುದ್ಧೀಕರಣ ಆಚಾರವನ್ನು ಅವರೇ ಮಾಡುತ್ತಿದ್ದರು. ದೇವರ ಸೇವಕನಾದ ಮೋಶೆಯು ಆಜ್ಞಾಪಿಸಿದ ಎಲ್ಲಾ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಅವರು ಅನುಸರಿಸುತ್ತಿದ್ದರು.
ಆರೋನನ ಸಂತತಿಯವರು
50 ಇವರು ಆರೋನನ ಗಂಡುಮಕ್ಕಳು: ಎಲ್ಲಾಜಾರನು ಆರೋನನ ಮಗ. ಫೀನೆಹಾಸನು ಎಲ್ಲಾಜಾರನ ಮಗ. ಅಬೀಷೂವನು ಫೀನೆಹಾಸನ ಮಗ. 51 ಬುಕ್ಕೀಯು ಅಬೀಷೂವನ ಮಗ. ಉಜ್ಜೀಯು ಬುಕ್ಕೀಯ ಮಗ. ಉಜ್ಜೀಯ ಮಗನು ಜೆರಹ್ಯಾಹ. 52 ಮೆರಾಯೋತನು ಜೆರಹ್ಯಾಹನ ಮಗ. ಅಮರ್ಯನು ಮೆರಾಯೋತನ ಮಗ. ಅಹೀಟೂಬನು ಅಮರ್ಯನ ಮಗ. 53 ಚಾದೋಕ್ ಅಹೀಟೂಬನ ಮಗ, ಅಹಿಮಾಚನು ಚಾದೋಕನ ಮಗ.
ಲೇವಿಯ ಕುಟುಂಬದವರಿಗೆ ಮನೆಗಳು
54 ಈ ಸ್ಥಳಗಳಲ್ಲಿ ಆರೋನನ ಸಂತತಿಯವರು ವಾಸಿಸಿದರು. ಅವರು ತಮಗೆ ಕೊಟ್ಟಿದ್ದ ಪ್ರದೇಶದಲ್ಲಿ ಪಾಳೆಯಗಳಲ್ಲಿ ವಾಸಮಾಡಿದರು. ಲೇವಿಯರಿಗೆ ಕೊಟ್ಟಿರುವ ಪ್ರಾಂತ್ಯದ ಮೊದಲನೆಯ ಪಾಲು ಕೆಹಾತ್ಯರಿಗೆ ಕೊಡಲ್ಪಟ್ಟಿತು. 55 ಅವರಿಗೆ ಹೆಬ್ರೋನ್ ಪಟ್ಟಣವೂ ಅದರ ಸುತ್ತಮುತ್ತಲೂ ಇದ್ದ ಹುಲ್ಲುಗಾವಲುಗಳು ಕೊಡಲ್ಪಟ್ಟವು. ಇದು ಯೆಹೂದ ಪ್ರಾಂತ್ಯದ ಸ್ಥಳವಾಗಿದೆ. 56 ಹೆಬ್ರೋನ್ ಪಟ್ಟಣದ ಸುತ್ತಮುತ್ತಲಿದ್ದ ಊರುಗಳನ್ನು ಮತ್ತು ಹೊಲಗಳನ್ನು ಯೆಫುನ್ನೆಯ ಮಗನಾದ ಕಾಲೇಬನಿಗೆ ಕೊಡಲಾಯಿತು. 57 ಆರೋನನ ಸಂತತಿಯವರಿಗೆ ಹೆಬ್ರೋನ್ ಪಟ್ಟಣವನ್ನೇ ಕೊಟ್ಟರು. ಹೆಬ್ರೋನು ಆಶ್ರಯಪಟ್ಟಣಗಳಲ್ಲಿ ಒಂದಾಗಿತ್ತು. ಅವರಿಗೆ ಬೇರೆ ನಗರಗಳೂ ಕೊಡಲ್ಪಟ್ಟವು: ಲಿಬ್ನ, ಯತ್ತೀರ್, ಎಷ್ಟೆಮೋವ, ಹೀಲ್ಲೇನ್, ದೆಬೀರ್, 58-59 ಆಷಾನ್, ಜುತ್ತ ಮತ್ತು ಬೇತ್ಷೆಮೆಷ್. ಅವರಿಗೆ ಈ ಎಲ್ಲಾ ಪಟ್ಟಣಗಳೂ ಅವುಗಳ ಸುತ್ತಮುತ್ತಲಿದ್ದ ಹೊಲಗಳೂ ಕೊಡಲ್ಪಟ್ಟವು. 60 ಬೆನ್ಯಾಮೀನ್ ಕುಲದ ಪ್ರಾಂತ್ಯದಿಂದ ಗಿಬೆಯೋನ್, ಗೆಬಾ, ಅಲೆಮೆತ್ ಮತ್ತು ಅನಾತೋತ್ ಪಟ್ಟಣಗಳೂ ಅದರ ಸುತ್ತಮುತ್ತಲಿದ್ದ ಹೊಲಗಳೂ ಅವರಿಗೆ ದೊರೆತವು.
ಒಟ್ಟು ಹದಿಮೂರು ಪಟ್ಟಣಗಳನ್ನು ಕೆಹಾತ್ಯನ ಕುಲದವರಿಗೆ ಕೊಡಲ್ಪಟ್ಟಿತು.
61 ಉಳಿದ ಕೆಹಾತ್ಯನ ಸಂತತಿಯವರಿಗೆ ಮನಸ್ಸೆಯ ಅರ್ಧಕುಲದಿಂದ ಹತ್ತು ಪಟ್ಟಣಗಳು ದೊರಕಿದವು.
62 ಗೇರ್ಷೋಮ್ಯನ ಸಂತತಿಯವರಿಗೆ ಹದಿಮೂರು ಪಟ್ಟಣಗಳು ದೊರಕಿದವು. ಇವು ಇಸ್ಸಾಕಾರ್, ಆಶೇರ್, ನಫ್ತಾಲಿ ಮತ್ತು ಬಾಷಾನ್ ಪ್ರದೇಶದಲ್ಲಿ ವಾಸವಾಗಿದ್ದ ಅರ್ಧ ಮನಸ್ಸೆ ಕುಲದವರಿಂದ ಆ ಪಟ್ಟಣಗಳು ದೊರೆತವು.
63 ಮೆರಾರೀ ಸಂತತಿಯವರಿಗೆ ಹನ್ನೆರಡು ಪಟ್ಟಣಗಳು ದೊರೆತವು. ಇವು ರೂಬೇನ್, ಗಾದ್, ಜೆಬುಲೂನ್ ಕುಲದವರ ಸ್ವಾಸ್ತ್ಯದಿಂದ ದೊರೆತವು. ಅವರು ಇದಕ್ಕಾಗಿ ಚೀಟುಹಾಕಿದರು.
64 ಹೀಗೆ ಇಸ್ರೇಲರು ತಮಗೆ ದೊರಕಿದ ಪ್ರದೇಶದಲ್ಲಿ ಲೇವಿಯರಿಗೆ ಪಟ್ಟಣಗಳನ್ನೂ ಹೊಲಗಳನ್ನೂ ಕೊಟ್ಟರು. 65 ಅವೆಲ್ಲಾ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನ್ ಕುಲದವರಿಂದ ದೊರಕಿತು. ಯೆಹೂದ ಪಟ್ಟಣಗಳು ಲೇವಿಕುಲದ ಯಾವ ಕುಟುಂಬಗಳಿಗೆ ಸಿಗಬೇಕು ಎಂಬುದನ್ನು ಚೀಟುಹಾಕುವುದರ ಮೂಲಕ ಗೊತ್ತುಪಡಿಸಿಕೊಂಡರು.
66 ಎಫ್ರಾಯೀಮ್ ಕುಲದವರು ಕೆಹಾತ್ಯನ ಕುಲದವರಿಗೆ ತಮ್ಮ ಪಾಲಿಗೆ ಬಂದಿದ್ದ ಕೆಲವು ಪಟ್ಟಣಗಳನ್ನು ಬಿಟ್ಟುಕೊಟ್ಟರು. ಈ ಪಟ್ಟಣಗಳನ್ನು ಚೀಟುಹಾಕುವುದರ ಮೂಲಕ ನಿರ್ಧರಿಸಲಾಯಿತು. 67 ಅವರಿಗೆ ಶೆಕೆಮನ್ನು ಕೊಡಲಾಯಿತು. ಶೆಕೆಮ್ ಆಶ್ರಯನಗರವಾಗಿತ್ತು. ಇದಲ್ಲದೆ ಗೆಜೆರ್, 68 ಯೊಕ್ಮೆಯಾಮ್, ಬೇತ್ ಹೋರೋನ್, 69 ಅಯ್ಯಾಲೋನ್ ಮತ್ತು ಗತ್ರಿಮ್ಮೋನ್ ಪಟ್ಟಣಗಳೂ ಅವುಗಳ ಸುತ್ತಮುತ್ತಲಿದ್ದ ಹೊಲಗಳೂ ಅವರಿಗೆ ದೊರಕಿದವು. ಇವು ಎಫ್ರಾಯೀಮ್ಯರ ಬೆಟ್ಟಪ್ರದೇಶದಲ್ಲಿ ಇವೆ. 70 ಮನಸ್ಸೆಯ ಅರ್ಧಕುಲದವರು ಆನೇರ್ ಮತ್ತು ಬಿಳ್ಳಾಮ್ ಎಂಬ ನಗರಗಳನ್ನು ಕೆಹಾತ್ ಸಂತಾನದ ಉಳಿದವರಿಗೂ ಕೊಟ್ಟರು. ಅವುಗಳೊಡನೆ ಹೊಲಗಳೂ ಅವರಿಗೆ ದೊರಕಿದವು.
ಇನ್ನಿತರ ಲೇವಿಯರಿಗೆ ಮನೆಗಳು ದೊರಕಿದ್ದು
71 ಗೇರ್ಷೋಮ್ ಕುಟುಂಬದವರಿಗೆ ಮನಸ್ಸೆಯ ಅರ್ಧಕುಲದವರಿಂದ ಬಾಷಾನಿನಲ್ಲಿರುವ ಗೋಲಾನ್ ಮತ್ತು ಅಷ್ಟಾರೋಟ್ ಎಂಬ ಪಟ್ಟಣಗಳೂ ಅದಕ್ಕೆ ಸೇರಿದ ಹೊಲಗಳೂ ದೊರೆತವು.
72-73 ಗೇರ್ಷೋಮ್ ಕುಟುಂಬದವರಿಗೆ ಇಸ್ಸಾಕಾರ್ ಕುಲದವರಿಂದ ಕೆದೆಷ್, ಬೆರತ್, ರಾಮೋತ್ ಮತ್ತು ಆನೇಮ್ ಪಟ್ಟಣಗಳೂ ಅವುಗಳ ಸಮೀಪದಲ್ಲಿದ್ದ ಹೊಲಗಳೂ ದೊರಕಿದವು.
74-75 ಇದಲ್ಲದೆ ಗೇರ್ಷೋಮ್ ಕುಟುಂಬದವರಿಗೆ ಅಶೇರ್ ಕುಲದವರಿಂದ ಮಾಷಾಲ್, ಅಬ್ದೋನ್, ಹೂಕೋಕ್ ಮತ್ತು ರೆಹೋಬ್ ಪಟ್ಟಣಗಳೂ ಅವುಗಳ ಸಮೀಪದಲ್ಲಿದ್ದ ಹೊಲಗಳೂ ದೊರಕಿದವು.
76 ಗೇರ್ಷೋಮ್ ಕುಟುಂಬದವರಿಗೆ ಗಲಿಲಾಯ ಪ್ರಾಂತ್ಯದ ಕಾದೇಶಿನಲ್ಲಿದ್ದ ಪಟ್ಟಣಗಳೂ ಹಮ್ಮೋನ್ ಮತ್ತು ಕಿರ್ಯಾತಯಿಮ್ ಎಂಬ ಪಟ್ಟಣಗಳೂ ಮತ್ತು ಅವುಗಳ ಸಮೀಪದಲ್ಲಿದ್ದ ಹೊಲಗಳೂ ನಫ್ತಾಲಿ ಕುಲದವರಿಂದ ದೊರಕಿದವು.
77 ಉಳಿದ ಲೇವಿಯರೆಂದರೆ, ಮೆರಾರೀಕುಲಕ್ಕೆ ಸೇರಿದವರು. ಅವರಿಗೆ ಜೆಬುಲೂನ್ ಕುಲದವರಿಂದ ರಿಮ್ಮೋನೋ ಮತ್ತು ತಾಬೋರ್ ಪಟ್ಟಣಗಳೂ ಅವುಗಳ ಸಮೀಪದಲ್ಲಿದ್ದ ಹೊಲಗಳೂ ದೊರೆತವು.
78-79 ಮೆರಾರೀ ಸಂತತಿಯವರು ಮರುಭೂಮಿಯಲ್ಲಿದ್ದ ಬೆಚೆರ್, ಯಹಚ, ಕೆದೇಮೋತ್ ಮತ್ತು ಮೇಫಾತ್ ಎಂಬ ಊರುಗಳನ್ನೂ ಅವುಗಳ ಸಮೀಪದಲ್ಲಿದ್ದ ಹೊಲಗಳನ್ನೂ ರೂಬೇನ್ ಕುಲದವರಿಂದ ಪಡೆದುಕೊಂಡರು. ರೂಬೇನ್ ಕುಲದವರು ಜೆರಿಕೊ ಪಟ್ಟಣಕ್ಕೆ ಎದುರಾಗಿದ್ದ ಜೋರ್ಡನ್ ನದಿಯ ಪೂರ್ವ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರು.
80-81 ಮೆರಾರೀ ಸಂತಾನದವರಿಗೆ ಗಾದ್ ಸಂತತಿಯವರ ಪ್ರದೇಶದಿಂದ ಗಿಲ್ಯಾದಿನ ರಾಮೋತ್, ಮಹನಯಿಮ್, ಹೆಷ್ಬೋನ್ ಮತ್ತು ಯಗ್ಜೇರ್ ಪಟ್ಟಣಗಳೂ ಅದರ ಸಮೀಪದಲ್ಲಿದ್ದ ಹೊಲಗಳೂ ದೊರಕಿದವು.
ಕ್ರಿಸ್ತನ ಯಜ್ಞವು ನಮ್ಮನ್ನು ನಿಷ್ಕಳಂಕರನ್ನಾಗಿ ಮಾಡುವುದು
10 ಧರ್ಮಶಾಸ್ತ್ರವು ಮುಂದೆ ಬರುವ ಉತ್ತಮ ಸಂಗತಿಗಳ ಅಸ್ಪಷ್ಟ ಚಿತ್ರಣವಾಗಿದೆ. ಅದು ನಿಜವಾದ ಸಂಗತಿಗಳ ಸ್ಪಷ್ಟ ಚಿತ್ರಣವಲ್ಲ. ಪ್ರತಿ ವರ್ಷವೂ ಒಂದೇ ರೀತಿಯ ಯಜ್ಞಗಳನ್ನು ಅರ್ಪಿಸಬೇಕೆಂದು ಅದು ಜನರಿಗೆ ತಿಳಿಸಿತು. ದೇವರನ್ನು ಆರಾಧಿಸಲು ಬರುವ ಜನರು ಅದೇ ರೀತಿಯ ಯಜ್ಞಗಳನ್ನು ಅರ್ಪಿಸುತ್ತಿದ್ದರು. ಆದರೆ ಆ ಜನರನ್ನು ಧರ್ಮಶಾಸ್ತ್ರವು ಎಂದಿಗೂ ನಿಷ್ಕಳಂಕರನ್ನಾಗಿ ಮಾಡಲಿಲ್ಲ. 2 ಅದು ಜನರನ್ನು ನಿಷ್ಕಳಂಕರನ್ನಾಗಿ ಮಾಡಿದ್ದರೆ, ಆ ಯಜ್ಞಗಳು ಈಗಾಗಲೇ ನಿಂತುಹೋಗುತ್ತಿದ್ದವು. ಆ ಜನರು ಆಗಲೇ ತಮ್ಮ ಪಾಪಗಳಿಂದ ಬಿಡುಗಡೆ ಹೊಂದಿ ಪರಿಶುದ್ಧರಾಗುತ್ತಿದ್ದರು. ತಾವು ಪಾಪಿಗಳೆಂಬ ಅರಿವು ಅವರಿಗಿರುತ್ತಿರಲಿಲ್ಲ. 3 ಆ ಜನರು ಪ್ರತಿವರ್ಷ ಅರ್ಪಿಸುತ್ತಿದ್ದ ಯಜ್ಞಗಳು ಅವರ ಪಾಪಗಳನ್ನು ನೆನಪಿಗೆ ತರುತ್ತಿದ್ದವು. 4 ಏಕೆಂದರೆ ಅವರ ಪಾಪಗಳನ್ನು ತೆಗೆದುಹಾಕಲು ಹೋರಿಗಳ ಮತ್ತು ಹೋತಗಳ ರಕ್ತಕ್ಕೆ ಸಾಧ್ಯವಿರಲಿಲ್ಲ.
5 ಕ್ರಿಸ್ತನು ಈ ಲೋಕದಲ್ಲಿ ಪ್ರತ್ಯಕ್ಷನಾದಾಗ ಹೇಳಿದ್ದೇನೆಂದರೆ:
“ದೇವರೇ, ನಿನಗೆ ಯಜ್ಞನೈವೇದ್ಯಗಳು ಬೇಕಾಗಿಲ್ಲ.
ಆದರೆ ನೀನು ನನಗಾಗಿ ಒಂದು ದೇಹವನ್ನು ಸಿದ್ಧಮಾಡಿಕೊಟ್ಟಿರುವೆ.
6 ನೀನು ಸರ್ವಾಂಗಹೋಮಗಳಲ್ಲಿಯೂ
ಪಾಪಪರಿಹಾರಕ ಯಜ್ಞಗಳಲ್ಲಿಯೂ ಸಂತೋಷಪಡಲಿಲ್ಲ.
7 ಆಗ ನಾನು, ‘ದೇವರೇ, ನಾನು ಇಲ್ಲಿದ್ದೇನೆ.
ಧರ್ಮಶಾಸ್ತ್ರದಲ್ಲಿ ನನ್ನ ಬಗ್ಗೆ ಬರೆದಿರುವಂತೆಯೇ
ನಿನ್ನ ಚಿತ್ತಕ್ಕನುಸಾರವಾಗಿ ಮಾಡಲು ನಾನು ಬಂದಿದ್ದೇನೆ’ ಎಂದು ಹೇಳಿದೆ.”(A)
8 ಈ ಪವಿತ್ರ ಗ್ರಂಥದಲ್ಲಿ ಕ್ರಿಸ್ತನು ಮೊದಲನೆಯದಾಗಿ ಹೇಳಿದ್ದೇನೆಂದರೆ: “ನಿನಗೆ ಯಜ್ಞನೈವೇದ್ಯಗಳು ಬೇಕಾಗಿಲ್ಲ. ನೀನು ಸರ್ವಾಂಗಹೋಮಗಳಲ್ಲಿಯೂ ಪಾಪಪರಿಹಾರಕ ಯಜ್ಞಗಳಲ್ಲಿಯೂ ಸಂತೋಷಪಡಲಿಲ್ಲ.” (ಇವುಗಳೆಲ್ಲ ಧರ್ಮಶಾಸ್ತ್ರವು ಆಜ್ಞಾಪಿಸುವ ಯಜ್ಞಗಳು.) 9 ನಂತರ ಕ್ರಿಸ್ತನು ಹೇಳಿದ್ದೇನೆಂದರೆ, “ದೇವರೇ, ನಾನು ಇಲ್ಲಿದ್ದೇನೆ. ನಿನ್ನ ಚಿತ್ತಕ್ಕನುಸಾರವಾಗಿ ಮಾಡಲು ನಾನು ಬಂದಿದ್ದೇನೆ.”(B) ಆದ್ದರಿಂದ ದೇವರು ಯಜ್ಞಗಳ ಮೊದಲನೆ ವ್ಯವಸ್ಥೆಯನ್ನು ಕೊನೆಗೊಳಿಸಿ, ತನ್ನ ಹೊಸ ಮಾರ್ಗವನ್ನು ಆರಂಭಿಸಿದ್ದಾನೆ. 10 ದೇವರ ಇಷ್ಟಕ್ಕನುಸಾರವಾದ ಕಾರ್ಯಗಳನ್ನು ಯೇಸು ಕ್ರಿಸ್ತನು ಮಾಡಿದನು. ಆ ಕಾರಣದಿಂದಲೇ, ಯಜ್ಞವಾಗಿ ಅರ್ಪಿತವಾದ ಆತನ ದೇಹದ ಮೂಲಕ ನಾವು ಪರಿಶುದ್ಧರಾದೆವು. ಆತನು ಶಾಶ್ವತವಾದ ಯಜ್ಞವನ್ನು ಒಂದೇ ಸಲ ಅರ್ಪಿಸಿದನು.
11 ಪ್ರತಿದಿನವೂ ಯಾಜಕರು ನಿಂತುಕೊಂಡು ತಮ್ಮ ಧಾರ್ಮಿಕ ಸೇವೆಯನ್ನು ಮಾಡುತ್ತಾರೆ. ಅವರು ಮತ್ತೆಮತ್ತೆ ಅದೇ ಯಜ್ಞಗಳನ್ನು ಅರ್ಪಿಸುತ್ತಾರೆ. ಆದರೆ ಅವರ ಪಾಪಗಳನ್ನು ತೆಗೆದುಹಾಕಲು ಯಜ್ಞಗಳಿಗೆ ಎಂದಿಗೂ ಸಾಧ್ಯವಿಲ್ಲ. 12 ಆದರೆ ಕ್ರಿಸ್ತನು ಪಾಪಗಳಿಗಾಗಿ ಶಾಶ್ವತವಾದ ಒಂದೇ ಯಜ್ಞವನ್ನು ಅರ್ಪಿಸಿದನು. ನಂತರ ಆತನು ದೇವರ ಬಲಗಡೆಯಲ್ಲಿ ಕುಳಿತುಕೊಂಡನು. 13 ಶತ್ರುಗಳನ್ನು ತನ್ನ ಪಾದಪೀಠವನ್ನಾಗಿ ಮಾಡುವ ತನಕ ಕ್ರಿಸ್ತನು ಕಾಯುತ್ತಿದ್ದಾನೆ. 14 ಒಂದೇ ಯಜ್ಞದ ಮೂಲಕ ಆತನು ತನ್ನ ಜನರನ್ನು ಎಂದೆಂದಿಗೂ ನಿಷ್ಕಳಂಕರನ್ನಾಗಿ ಮಾಡಿದನು. ಪರಿಶುದ್ಧರಾಗಿ ಮಾಡಲ್ಪಡುತ್ತಿರುವ ಜನರೇ ಇವರು.
15 ಪವಿತ್ರಾತ್ಮನು ನಮಗೆ ಇದರ ಬಗ್ಗೆ ತಿಳಿಸಿದ್ದಾನೆ. ಮೊದಲನೆಯದಾಗಿ ಆತನು ಹೇಳುವುದೇನೆಂದರೆ:
16 “ಮುಂದಿನ ಕಾಲದಲ್ಲಿ ನಾನು ನನ್ನ ಜನರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿದೆ ಎಂದು ಪ್ರಭುವು ಹೇಳುತ್ತಾನೆ:
ನಾನು ನನ್ನ ಆಜ್ಞೆಗಳನ್ನು ಅವರ ಹೃದಯದಲ್ಲಿ ಇಡುವೆನು;
ಅವರ ಮನಸ್ಸಿನ ಮೇಲೆ ಬರೆಯುವೆನು.”(C)
17 ನಂತರ ಆತನು ಹೇಳುವುದೇನೆಂದರೆ:
“ನಾನು ಅವರ ಪಾಪಗಳನ್ನು ಮತ್ತು ಅವರ ಕೆಟ್ಟಕಾರ್ಯಗಳನ್ನು ಕ್ಷಮಿಸುತ್ತೇನೆ.
ಅವುಗಳನ್ನು ಮತ್ತೆಂದಿಗೂ ನೆನಪು ಮಾಡಿಕೊಳ್ಳುವುದಿಲ್ಲ.”(D)
18 ಈ ಪಾಪಗಳೆಲ್ಲಾ ಕ್ಷಮಿಸಲ್ಪಟ್ಟ ಮೇಲೆ, ಅವುಗಳಿಗಾಗಿ ಮತ್ತೆ ಯಜ್ಞಗಳನ್ನು ಅರ್ಪಿಸುವುದು ಅಗತ್ಯವಿಲ್ಲ.
ಸಮೀಪಕ್ಕೆ ಬನ್ನಿರಿ
19-20 ಸಹೋದರ ಸಹೋದರಿಯರೇ, ನಾವು ಮಹಾ ಪವಿತ್ರಸ್ಥಳವನ್ನು ಪ್ರವೇಶಿಸಲು ಸಂಪೂರ್ಣವಾಗಿ ಸ್ವತಂತ್ರರಾಗಿದ್ದೇವೆ. ಯೇಸು ನಮಗಾಗಿ ತೆರೆದಿರುವ ಹೊಸ ಮಾರ್ಗದ ಮೂಲಕ ನಾವು ಭಯವಿಲ್ಲದೆ ಪ್ರವೇಶಿಸಬಹುದು. ಅದು ಜೀವವುಳ್ಳ ಮಾರ್ಗ. ಕ್ರಿಸ್ತನ ದೇಹವೆಂಬ ತೆರೆಯ ಮೂಲಕ ಈ ಹೊಸ ಮಾರ್ಗವು ನಮ್ಮನ್ನು ಮುಂದಕ್ಕೆ ಕೊಂಡೊಯ್ಯವುದು. 21 ದೇವರ ಮನೆಯನ್ನು ಆಳಲು ನಮಗೊಬ್ಬ ಶ್ರೇಷ್ಠ ಯಾಜಕನಿರುವನು. 22 ನಾವು ತೊಳೆಯಲ್ಪಟ್ಟವರಾಗಿದ್ದು ಕೆಟ್ಟ ಮನಸ್ಸಾಕ್ಷಿಯಿಂದ ಬಿಡುಗಡೆ ಹೊಂದಿದ್ದೇವೆ. ನಮ್ಮ ದೇಹಗಳನ್ನು ಶುದ್ಧವಾದ ನೀರಿನಿಂದ ತೊಳೆಯಲಾಗಿದೆ. ಆದ್ದರಿಂದ ಪೂರ್ಣನಂಬಿಕೆಯಿಂದಲೂ ಶುದ್ಧವಾದ ಹೃದಯದಿಂದಲೂ ದೇವರ ಬಳಿಗೆ ಬರೋಣ. 23 ನಮ್ಮಲ್ಲಿರುವ ನಿರೀಕ್ಷೆಯನ್ನು ದೃಢವಾಗಿ ಕಾಯ್ದುಕೊಂಡು ಅದರ ಬಗ್ಗೆ ಜನರಿಗೆ ತಿಳಿಸುವುದರಲ್ಲಿ ದೃಢವಾಗಿರೋಣ. ದೇವರು ತನ್ನ ವಾಗ್ದಾನವನ್ನು ಈಡೇರಿಸುತ್ತಾನೆ ಎಂಬ ಭರವಸೆ ನಮ್ಮಲ್ಲಿರಬೇಕು.
ಒಬ್ಬರಿಗೊಬ್ಬರು ಸಹಾಯಮಾಡಿ ಶಕ್ತಿಯುಳ್ಳವರಾಗಿರಿ
24 ಒಬ್ಬರಿಗೊಬ್ಬರು ಹಿತಚಿಂತಕರಾಗಿರೋಣ. ಆಗ ಒಬ್ಬರಿಗೊಬ್ಬರು ಪ್ರೀತಿಯನ್ನು ತೋರ್ಪಡಿಸುವುದಕ್ಕೂ ಒಳ್ಳೆಯಕಾರ್ಯಗಳನ್ನು ಮಾಡುವುದಕ್ಕೂ ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ. 25 ನಾವು ಸಭೆಯಾಗಿ ಸೇರಿಬರುವುದನ್ನು ಬಿಡಬಾರದು. ಕೆಲವರು ಸಭೆಗೆ ಬರುತ್ತಿಲ್ಲ. ನಾವು ಒಟ್ಟಾಗಿ ಸೇರಿಬಂದು ಒಬ್ಬರನ್ನೊಬ್ಬರು ಬಲಪಡಿಸಬೇಕು. ಯೇಸುವು ಪ್ರತ್ಯಕ್ಷನಾಗುವ ದಿನ[a] ಸಮೀಪವಾಗುತ್ತಿರುವುದರಿಂದ ನೀವು ಇದನ್ನು ಮತ್ತಷ್ಟು ಹೆಚ್ಚಾಗಿ ಮಾಡಬೇಕು.
ಕ್ರಿಸ್ತನಿಂದ ದೂರ ಸರಿಯದಿರಿ
26 ನಾವು ಸತ್ಯವನ್ನು ತಿಳಿದುಕೊಂಡ ಮೇಲೆಯೂ ಪಾಪಗಳನ್ನು ಮಾಡುತ್ತಲೇ ಇದ್ದರೆ, ನಮ್ಮ ಪಾಪಗಳನ್ನು ಯಾವ ಯಜ್ಞವೂ ಪರಿಹರಿಸುವುದಿಲ್ಲ. 27 ನಾವು ಪಾಪಗಳಲ್ಲಿಯೇ ಮುಂದುವರಿದರೆ, ನ್ಯಾಯತೀರ್ಪಿನ ಭಯದಲ್ಲಿ ಮತ್ತು ದೇವರ ವಿರುದ್ಧವಾಗಿ ಜೀವಿಸುವವರನ್ನು ದಹಿಸುವ ಭಯಂಕರ ಬೆಂಕಿಯ ಭಯದಲ್ಲಿ ಜೀವಿಸಬೇಕಾಗುತ್ತದೆ. 28 ಮೋಶೆಯ ನಿಯಮಗಳಿಗೆ ಅವಿಧೇಯನಾದ ವ್ಯಕ್ತಿಯು ಇಬ್ಬರು ಅಥವಾ ಮೂವರು ಸಾಕ್ಷಿಗಳಿಂದ ತಪ್ಪಿತಸ್ಥನೆಂದು ನಿರ್ಧರಿಸಲ್ಪಟ್ಟರೆ, ಅವನಿಗೆ ಕ್ಷಮೆ ದೊರೆಯುತ್ತಿರಲಿಲ್ಲ. ಅವನನ್ನು ಕೊಂದುಹಾಕುತ್ತಿದ್ದರು. 29 ಹೀಗಿರಲು ದೇವರ ಮಗನನ್ನು ದ್ವೇಷಿಸುವ ಒಬ್ಬ ವ್ಯಕ್ತಿಯನ್ನು ಏನು ಮಾಡಬೇಕೆಂದು ನೀವು ಆಲೋಚಿಸುವಿರಿ? ನಿಜವಾಗಿಯೂ ಆ ವ್ಯಕ್ತಿಗೆ ಇದಕ್ಕಿಂತಲೂ ತೀವ್ರವಾದ ದಂಡನೆಯನ್ನು ವಿಧಿಸಬೇಕಲ್ಲವೇ? ಹೌದು, ಹೊಸ ಒಡಂಬಡಿಕೆಯ ರಕ್ತಕ್ಕೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ಕ್ರೂರವಾದ ದಂಡನೆಯಾಗಬೇಕು. ಆ ರಕ್ತವು ಅವನನ್ನು ಪವಿತ್ರನನ್ನಾಗಿಸಿತು. ದೇವರಾತ್ಮನ ಕೃಪೆಗೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ತೀವ್ರವಾದ ದಂಡನೆಯಾಗಬೇಕು. 30 “ಜನರು ಮಾಡುವ ತಪ್ಪು ಕಾರ್ಯಗಳಿಗಾಗಿ ನಾನು ಅವರನ್ನು ದಂಡಿಸುತ್ತೇನೆ. ನಾನು ಮುಯ್ಯಿಗೆ ಮುಯ್ಯಿ ತೀರಿಸುತ್ತೇನೆ.”(E) ಎಂದು ದೇವರು ಹೇಳಿದ್ದು ನಮಗೆ ತಿಳಿದೇ ಇದೆ. 31 “ಪ್ರಭುವು ತನ್ನ ಜನರಿಗೆ ನ್ಯಾಯತೀರ್ಪು ನೀಡುತ್ತಾನೆ” ಎಂದು ಸಹ ದೇವರು ಹೇಳಿದ್ದಾನೆ. ಜೀವಸ್ವರೂಪನಾದ ದೇವರ ಹಿಡಿತಕ್ಕೆ ಸಿಕ್ಕಿ ಬೀಳುವುದು ಪಾಪಿಗೆ ಭಯಂಕರವಾಗಿದೆ.
ನಿಮ್ಮಲ್ಲಿರುವ ಸಂತೋಷ ಮತ್ತು ಧೈರ್ಯಗಳನ್ನು ಬಿಡಬೇಡಿ
32 ನೀವು ಸತ್ಯವನ್ನು ತಿಳಿದುಕೊಂಡ ಆ ದಿನಗಳನ್ನು ನೆನಪು ಮಾಡಿಕೊಳ್ಳಿ. ನೀವು ಅನೇಕ ಸಂಕಟಗಳಲ್ಲಿ ಹೋರಾಟ ಮಾಡಿದರೂ, ಧೃತಿಗೆಡದೆ ಮುಂದುವರಿದಿರಿ. 33 ಕೆಲವು ಸಂದರ್ಭಗಳಲ್ಲಿ ಜನರು ನಿಮಗೆ ದ್ವೇಷಮಯ ಸಂಗತಿಗಳನ್ನು ಹೇಳಿದರು ಹಾಗೂ ಅನೇಕ ಜನರ ಮುಂದೆ ನಿಮ್ಮನ್ನು ಹಿಂಸಿಸಿದರು. ಅದೇ ರೀತಿಯ ಹಿಂಸೆಗೆ ಗುರಿಯಾಗಿದ್ದ ಜನರಿಗೆ ಕೆಲವು ಸಂದರ್ಭಗಳಲ್ಲಿ ಸಹಾಯ ಮಾಡಿದಿರಿ. 34 ಹೌದು, ಸೆರೆಯಲ್ಲಿರುವ ಜನರಿಗೆ ಸಹಾಯ ಮಾಡಿದಿರಿ ಮತ್ತು ಅವರ ಸಂಕಟಗಳಲ್ಲಿ ಪಾಲ್ಗೊಂಡಿರಿ. ನಿಮ್ಮ ಸ್ವತ್ತುಗಳನ್ನೆಲ್ಲ ನಿಮ್ಮಿಂದ ಕಿತ್ತುಕೊಂಡು ಹೋದಾಗಲೂ ಸಂತೋಷದಿಂದಲೇ ಇದ್ದಿರಿ. ಅದಕ್ಕಿಂತಲೂ ಉತ್ತಮವಾದದ್ದೂ ಶಾಶ್ವತವಾದದ್ದೂ ನಿಮಗೆ ದೊರೆತಿದೆ ಎಂದು ನಿಮಗೆ ತಿಳಿದಿದ್ದ ಕಾರಣ ನೀವು ಸಂತೋಷವಾಗಿದ್ದಿರಿ.
35 ಹಿಂದೆ ಹೊಂದಿದ್ದ ಧೈರ್ಯವನ್ನು ಬಿಟ್ಟುಬಿಡಬೇಡಿ. ನಿಮ್ಮ ಧೈರ್ಯಕ್ಕೆ ತಕ್ಕ ಪ್ರತಿಫಲವು ಸಿಗುತ್ತದೆ. 36 ನೀವು ತಾಳ್ಮೆಯಿಂದಿರಬೇಕು, ನೀವು ದೇವರ ಚಿತ್ತಾನುಸಾರವಾಗಿ ಮಾಡಿದ ನಂತರ ಆತನ ವಾಗ್ದಾನದಂತೆ ನಿಮಗೆ ಪ್ರತಿಫಲವು ಸಿಕ್ಕೇ ಸಿಗುತ್ತದೆ. 37 ಆತನು ಹೀಗೆ ಹೇಳುತ್ತಾನೆ:
“ಸ್ವಲ್ಪಕಾಲದಲ್ಲಿಯೇ, ಬರುವಾತನು ಬರುತ್ತಾನೆ.
ಆತನು ತಡಮಾಡುವುದಿಲ್ಲ.
38 ನೀತಿವಂತನು ನಂಬಿಕೆಯಿಂದಲೇ
ಜೀವವನ್ನು ಹೊಂದಿಕೊಳ್ಳುವನು.
ಆದರೆ ಅವನು ಭಯದಿಂದ ಹಿಂಜರಿದರೆ
ನಾನು ಅವನಲ್ಲಿ ಸಂತೋಷಪಡುವುದಿಲ್ಲ.”(F)
39 ಆದರೆ ನಾವು ಹಿಂಜರಿಯುವ ಜನರಲ್ಲ, ನಾಶವಾಗುವ ಜನರೂ ಅಲ್ಲ. ನಾವು ನಂಬಿಕೆಯುಳ್ಳವರಾಗಿದ್ದೇವೆ ಮತ್ತು ರಕ್ಷಣೆ ಹೊಂದಿದವರಾಗಿದ್ದೇವೆ.
ಸುಖವನ್ನು ಆಶಿಸುವ ಹೆಂಗಸರು
4 ಸಮಾರ್ಯದ ಪರ್ವತಗಳಲ್ಲಿರುವ ಬಾಷಾನಿನ ದನಗಳೇ, ನನ್ನ ಮಾತಿಗೆ ಕಿವಿಗೊಡಿರಿ. ನೀವು ಬಡ ಜನರನ್ನು ಹಿಂಸಿಸಿ ಜಜ್ಜುತ್ತೀರಿ. ನಿಮ್ಮ ಗಂಡಂದಿರ ಹತ್ತಿರ, “ನಮಗೆ ಕುಡಿಯಲಿಕ್ಕೆ ತಂದುಕೊಡು” ಎಂದು ಹೇಳುತ್ತೀರಿ.
2 ನನ್ನ ಒಡೆಯನಾದ ಯೆಹೋವನು ಒಂದು ವಾಗ್ದಾನ ಮಾಡಿರುತ್ತಾನೆ. ಆತನ ಪರಿಶುದ್ಧತೆಯ ಮೇಲೆ ಆಣೆಹಾಕಿ ವಾಗ್ದಾನ ಮಾಡಿರುತ್ತಾನೆ. ಏನೆಂದರೆ ನಿಮ್ಮ ಮೇಲೆ ಸಂಕಟಗಳು ಬರುವವು. ಜನರು ನಿಮಗೆ ಕೊಕ್ಕೆ ಸಿಕ್ಕಿಸಿ ಕೈದಿಗಳನ್ನಾಗಿ ಮಾಡಿ ಎಳೆದುಕೊಂಡು ಹೋಗುವರು. ನಿಮ್ಮ ಮಕ್ಕಳನ್ನು ಮೀನಿನ ಗಾಳಗಳಿಗೆ ಸಿಕ್ಕಿಸಿ ಎಳೆದುಕೊಂಡು ಹೋಗುವರು. 3 ನಿಮ್ಮ ಪಟ್ಟಣಗಳು ನಾಶವಾಗುವವು. ಗೋಡೆಯಲ್ಲಿರುವ ಬಿರುಕುಗಳ ಮೂಲಕ ಹೆಂಗಸರು ತಪ್ಪಿಸಿಕೊಂಡು ಹೋಗಿ ಹೆಣಗಳ ರಾಶಿಯ[a] ಮೇಲೆ ಬೀಳುವರು.
4 ಯೆಹೋವನು ಹೀಗೆ ಹೇಳುತ್ತಾನೆ, “ಬೇತೇಲಿನಲ್ಲಿ ಪಾಪ ಮಾಡಿರಿ. ಗಿಲ್ಗಾಲಿಗೆ ಹೋಗಿ ಇನ್ನೂ ಹೆಚ್ಚಾಗಿ ಪಾಪ ಮಾಡಿರಿ. ನಿಮ್ಮ ಯಜ್ಞವನ್ನು ಮುಂಜಾನೆ ಸಮರ್ಪಿಸಿರಿ. ಮೂರು ದಿವಸಗಳ ಹಬ್ಬಕ್ಕೆ ನಿಮ್ಮ ಬೆಳೆಯ ಹತ್ತನೆಯ ಒಂದು ಭಾಗವನ್ನು ತೆಗೆದುಕೊಂಡು ಬನ್ನಿ. 5 ಹುಳಿಹಾಕಿದ ರೊಟ್ಟಿಗಳನ್ನು ಕೃತಜ್ಞತಾ ಹೋಮಮಾಡಿರಿ. ಸ್ವೇಚ್ಚೆಯಿಂದ ಕೊಡುವ ಕಾಣಿಕೆ ಬಗ್ಗೆ ಎಲ್ಲರಿಗೂ ತಿಳಿಸಿರಿ. ಇಸ್ರೇಲರೇ ಅಂಥಾ ಕಾರ್ಯಗಳನ್ನು ಮಾಡಲು ನಿಮಗೆ ಇಷ್ಟ. ಆದ್ದರಿಂದ ಹೋಗಿ ಅದನ್ನು ಮಾಡಿರಿ.” ಇದು ಯೆಹೋವನ ನುಡಿ.
6 “ನೀವು ನನ್ನ ಬಳಿಗೆ ಬರುವಂತೆ ಅನೇಕ ಕಾರ್ಯಗಳನ್ನು ಮಾಡಿದೆನು. ನಿಮಗೆ ನಾನು ಊಟಕ್ಕೆ ಕೊಡಲಿಲ್ಲ. ನಿಮ್ಮ ಯಾವ ಪಟ್ಟಣದಲ್ಲಿಯೂ ಆಹಾರವಿಲ್ಲ. ಆದರೂ ನೀವು ನನ್ನ ಬಳಿಗೆ ಹಿಂದಿರುಗಿ ಬರಲಿಲ್ಲ.” ಇದು ಯೆಹೋವನ ನುಡಿ.
7 “ನಾನು ಮಳೆಯನ್ನು ನಿಲ್ಲಿಸಿದೆನು. ಸುಗ್ಗಿಗೆ ಮೂರು ತಿಂಗಳು ಇರುವಾಗಲೇ ಮಳೆಗರೆಯುವುದನ್ನು ನಿಲ್ಲಿಸಿದೆನು. ಆದ್ದರಿಂದ ಪೈರು ಬೆಳೆಯಲಿಲ್ಲ. ಆಮೇಲೆ ನಾನು ಒಂದು ಪಟ್ಟಣದ ಮೇಲೆ ಮಳೆ ಬೀಳುವಂತೆ ಮಾಡಿದೆನು. ಬೇರೆ ಪಟ್ಟಣಗಳ ಮೇಲೆ ಬೀಳದಂತೆ ಮಾಡಿದೆನು. ದೇಶದ ಒಂದು ಭಾಗದಲ್ಲಿ ಮಳೆ ಸುರಿಯಿತು. ಇನ್ನೊಂದು ಭಾಗವು ಒಣಗಿ ಬೆಂಗಾಡಾಗಿತ್ತು. 8 ಹೀಗೆ ಎರಡು ಮೂರು ಪಟ್ಟಣಗಳ ನಿವಾಸಿಗಳು ನೀರಿಗಾಗಿ ಇನ್ನೊಂದು ಪಟ್ಟಣಕ್ಕೆ ಕಷ್ಟಪಟ್ಟು ಕೊಂಡುಹೋದರು. ಆದರೆ ಅಲ್ಲಿ ಎಲ್ಲರಿಗೂ ನೀರು ದೊರಕಲಿಲ್ಲ. ಹೀಗಾದರೂ ನೀವು ಸಹಾಯಕ್ಕಾಗಿ ನನ್ನ ಬಳಿಗೆ ಬರಲಿಲ್ಲ.” ಇವು ಯೆಹೋವನ ನುಡಿಗಳು.
9 “ನಿಮ್ಮ ಬೆಳೆಗಳು ಸೂರ್ಯನ ಶಾಖದಿಂದಲೂ ರೋಗದಿಂದಲೂ ಸಾಯುವಂತೆ ಮಾಡಿದೆನು. ನಿಮ್ಮ ತೋಟಗಳನ್ನೂ ದ್ರಾಕ್ಷಿತೋಟಗಳನ್ನೂ ನಾನು ನಾಶಮಾಡಿದೆನು. ಮಿಡತೆಗಳು ನಿಮ್ಮ ಅಂಜೂರದ ಮತ್ತು ಆಲೀವ್ ಮರಗಳನ್ನು ತಿಂದುಬಿಟ್ಟವು. ಆದಾಗ್ಯೂ ಸಹಾಯಕ್ಕಾಗಿ ನೀವು ನನ್ನ ಬಳಿಗೆ ಬರಲಿಲ್ಲ.” ಇದು ಯೆಹೋವನ ನುಡಿ.
10 “ನಾನು ಈಜಿಪ್ಟಿಗೆ ವ್ಯಾಧಿಗಳನ್ನು ಹೇಗೆ ಬರಮಾಡಿದೆನೋ ಹಾಗೆಯೇ ನಿಮಗೂ ಮಾಡಿದೆನು. ನಿಮ್ಮ ಯೌವನಸ್ಥರನ್ನು ಕತ್ತಿಯಿಂದ ಕೊಂದೆನು. ನಿಮ್ಮ ಕುದುರೆಗಳನ್ನು ತೆಗೆದುಕೊಂಡೆನು. ಹೆಣಗಳ ರಾಶಿಯಿಂದ ನಿಮ್ಮ ಸ್ಥಳವು ದುರ್ವಾಸನೆಯಿಂದ ತುಂಬುವಂತೆ ಮಾಡಿದೆನು. ಆದಾಗ್ಯೂ ನೀವು ಸಹಾಯಕ್ಕಾಗಿ ನನ್ನ ಬಳಿಗೆ ಬರಲಿಲ್ಲ.” ಇದು ಯೆಹೋವನ ನುಡಿ.
11 “ಸೊದೋಮ್ ಗೊಮೋರವನ್ನು ನಾಶಮಾಡಿದಂತೆ ನಾನು ನಿಮ್ಮನ್ನು ನಾಶಮಾಡಿದೆನು. ಆ ನಗರಗಳು ಸಂಪೂರ್ಣವಾಗಿ ನಾಶವಾದವು. ನೀವು ಬೆಂಕಿಯಿಂದ ಎಳೆದ ಕೊಳ್ಳಿಯಂತಿದ್ದೀರಿ. ಆದರೂ ನೀವು ಸಹಾಯಕ್ಕಾಗಿ ನನ್ನ ಬಳಿಗೆ ಬರಲಿಲ್ಲ.” ಇದು ಯೆಹೋವನ ನುಡಿ.
12 “ಆದ್ದರಿಂದ ಇಸ್ರೇಲೇ, ನಿನಗೆ ವಿರುದ್ಧವಾಗಿ ಈ ಸಂಗತಿಗಳನ್ನು ಮಾಡುತ್ತೇನೆ. ಇಸ್ರೇಲೇ, ನಿನ್ನ ದೇವರನ್ನು ಸಂಧಿಸಲು ನಿನ್ನನ್ನು ತಯಾರು ಮಾಡಿಕೊ.”
13 ನಾನು ಯಾರು? ನಾನೇ ಪರ್ವತಗಳನ್ನು ನಿರ್ಮಿಸಿದಾತನು.
ನಿಮ್ಮಲ್ಲಿ ಮನಸ್ಸನ್ನು ಉಂಟುಮಾಡಿದಾತನು ನಾನೇ.
ನಾನು ಜನರಿಗೆ ಮಾತನಾಡಲು ಕಲಿಸಿದೆನು.
ಕತ್ತಲೆಯನ್ನು ಬೆಳಕು ಮಾಡಿದೆನು.
ಭೂಮಿಯ ಮೇಲಿರುವ ಪರ್ವತಗಳ ಮೇಲೆ ನಾನು ನಡಿಯುತ್ತೇನೆ.
ನಾನು ಯಾರು? ನನ್ನ ಹೆಸರು ಸೈನ್ಯಗಳ ದೇವರಾದ ಯೆಹೋವನು.
148 ಯೆಹೋವನಿಗೆ ಸ್ತೋತ್ರವಾಗಲಿ!
ಮೇಲೋಕದಲ್ಲಿರುವ ದೇವದೂತರೇ, ಆಕಾಶಮಂಡಲದಿಂದ ಯೆಹೋವನನ್ನು ಸ್ತುತಿಸಿರಿ!
2 ಎಲ್ಲಾ ದೂತರುಗಳೇ, ಆತನಿಗೆ ಸ್ತೋತ್ರಮಾಡಿರಿ!
ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ!
3 ಸೂರ್ಯಚಂದ್ರರೇ, ಆತನನ್ನು ಸ್ತುತಿಸಿರಿ!
ಆಕಾಶದಲ್ಲಿರುವ ನಕ್ಷತ್ರಗಳೇ, ಬೆಳಕುಗಳೇ, ಆತನನ್ನು ಸ್ತುತಿಸಿರಿ!
ಆತನಿಗೆ ಸ್ತೋತ್ರಮಾಡಿರಿ!
ಆತನ ಸರ್ವಸೈನ್ಯಗಳೇ ಆತನನ್ನು ಸ್ತುತಿಸಿರಿ!
4 ಉನ್ನತೋನ್ನತವಾದ ಆಕಾಶವೇ, ಆತನನ್ನು ಸ್ತುತಿಸು!
ಆಕಾಶದ ಮೇಲಿರುವ ನೀರುಗಳೇ ಆತನನ್ನು ಸ್ತುತಿಸಿರಿ!
5 ಅವು ಯೆಹೋವನ ಹೆಸರನ್ನು ಸ್ತುತಿಸಲಿ.
ಆತನು ಆಜ್ಞಾಪಿಸಲು ಅವುಗಳೆಲ್ಲಾ ಸೃಷ್ಟಿಯಾದವು!
6 ಇವುಗಳೆಲ್ಲಾ ಶಾಶ್ವತವಾಗಿರುವಂತೆ ಆತನು ಮಾಡಿದನು.
ಎಂದಿಗೂ ಕೊನೆಗೊಳ್ಳದ ನಿಯಮಗಳನ್ನು ಆತನು ಮಾಡಿದನು.
7 ಭೂಮಿಯ ಮೇಲಿರುವ ಸಮಸ್ತವೇ, ಯೆಹೋವನಿಗೆ ಸ್ತೋತ್ರಮಾಡಿರಿ!
ಮಹಾಸಮುದ್ರ ಪ್ರಾಣಿಗಳೇ, ಆತನನ್ನು ಸ್ತುತಿಸಿರಿ!
8 ಆತನು ಬೆಂಕಿಯನ್ನೂ ಆಲಿಕಲ್ಲನ್ನೂ ಮಂಜನ್ನೂ
ಹೊಗೆಯನ್ನೂ ಬಿರುಗಾಳಿಯನ್ನೂ ಉಂಟುಮಾಡಿದನು.
9 ಆತನು ಬೆಟ್ಟಗಳನ್ನೂ ಗುಡ್ಡಗಳನ್ನೂ
ಹಣ್ಣಿನ ಮರಗಳನ್ನೂ ದೇವದಾರು ಮರಗಳನ್ನೂ ಸೃಷ್ಟಿಮಾಡಿದನು.
10 ಆತನು ಎಲ್ಲಾ ಕಾಡುಪ್ರಾಣಿಗಳನ್ನೂ ಪಶುಗಳನ್ನೂ ಕ್ರಿಮಿಕೀಟಗಳನ್ನೂ ಪಕ್ಷಿಗಳನ್ನೂ ಸೃಷ್ಟಿಮಾಡಿದನು.
11 ಆತನು ಭೂಮಿಯ ಮೇಲೆ ರಾಜರುಗಳನ್ನೂ ಜನಾಂಗಗಳನ್ನೂ
ನಾಯಕರುಗಳನ್ನೂ ನ್ಯಾಯಾಧಿಪತಿಗಳನ್ನೂ ಸೃಷ್ಟಿಮಾಡಿದನು.
12 ಆತನು ಪ್ರಾಯಸ್ಥರಾದ ಸ್ತ್ರೀಪುರುಷರನ್ನೂ
ವೃದ್ಧರನ್ನೂ ಯೌವನಸ್ಥರನ್ನೂ ಸೃಷ್ಟಿಸಿದನು.
13 ಯೆಹೋವನ ಹೆಸರನ್ನು ಕೊಂಡಾಡಿರಿ!
ಆತನ ಹೆಸರನ್ನು ಶಾಶ್ವತವಾಗಿ ಸನ್ಮಾನಿಸಿರಿ!
ಭೂಮ್ಯಾಕಾಶಗಳಲ್ಲಿರುವ ಸಮಸ್ತವೇ, ಆತನನ್ನು ಸ್ತುತಿಸು!
14 ಆತನು ತನ್ನ ಜನರನ್ನು ಬಲಿಷ್ಠರನ್ನಾಗಿ ಮಾಡುತ್ತಾನೆ.
ಆತನ ಭಕ್ತರನ್ನು ಜನರು ಹೊಗಳುವರು.
ಜನರು ಇಸ್ರೇಲರನ್ನು ಹೊಗಳುವರು.
ಆತನು ಹೋರಾಡುತ್ತಿರುವುದು ಅವರಿಗಾಗಿಯೇ.
ಯೆಹೋವನಿಗೆ ಸ್ತೋತ್ರವಾಗಲಿ!
149 ಯೆಹೋವನಿಗೆ ಸ್ತೋತ್ರವಾಗಲಿ.
ಯೆಹೋವನ ಹೊಸ ಕಾರ್ಯಗಳಿಗಾಗಿ ಆತನಿಗೆ ಹೊಸ ಹಾಡನ್ನು ಹಾಡಿರಿ!
ಆತನ ಭಕ್ತರ ಸಭೆಯಲ್ಲಿ ಆತನನ್ನು ಸಂಕೀರ್ತಿಸಿರಿ.
2 ಇಸ್ರೇಲರು ತಮ್ಮ ಸೃಷ್ಟಿಕರ್ತನಲ್ಲಿ ಉಲ್ಲಾಸಿಸಲಿ!
ಚೀಯೋನಿನ ಜನರು ತಮ್ಮ ರಾಜನಲ್ಲಿ ಹರ್ಷಿಸಲಿ.
3 ಅವರು ನೃತ್ಯಮಾಡುತ್ತಾ ಝಲ್ಲರಿಗಳನ್ನು ಬಡಿಯುತ್ತಾ
ಹಾರ್ಪ್ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸ್ತುತಿಸಲಿ.
4 ಯೆಹೋವನು ತನ್ನ ಜನರಲ್ಲಿ ಸಂತೋಷಿಸುವನು.
ಆತನು ತನ್ನ ದೀನಜನರಿಗಾಗಿ ಅದ್ಭುತಕಾರ್ಯವನ್ನು ಮಾಡಿ ಅವರನ್ನು ರಕ್ಷಿಸಿದನು!
5 ಆತನ ಭಕ್ತರೇ, ನಿಮ್ಮ ವಿಜಯದಲ್ಲಿ ಉಲ್ಲಾಸಿಸಿರಿ!
ಹಾಸಿಗೆಯ ಮೇಲಿರುವಾಗಲೂ ಸಂತೋಷದಿಂದಿರಿ.
6 ಜನರು ಆತನಿಗೆ ಗಟ್ಟಿಯಾಗಿ ಸ್ತೋತ್ರಮಾಡುತ್ತಾ
ತಮ್ಮ ಇಬ್ಭಾಯಿ ಕತ್ತಿಗಳನ್ನು ಕೈಗಳಲ್ಲಿ ತೆಗೆದುಕೊಳ್ಳಲಿ.
7 ಅವರು ಹೋಗಿ ತಮ್ಮ ಶತ್ರುಗಳನ್ನು ದಂಡಿಸಲಿ;
ಅನ್ಯ ಜನರನ್ನು ದಂಡಿಸಲಿ.
8 ದೇವಜನರು ಆ ರಾಜರುಗಳನ್ನು ಮತ್ತು ಪ್ರಮುಖರನ್ನು
ಸರಪಣಿಗಳಿಂದಲೂ ಕಬ್ಬಿಣದ ಬೇಡಿಗಳಿಂದಲೂ ಬಂಧಿಸುವರು.
9 ಆತನ ಆಜ್ಞೆಗನುಸಾರವಾಗಿ ಆತನ ಭಕ್ತರು ತಮ್ಮ ಶತ್ರಗಳನ್ನು ದಂಡಿಸುವರು.
ಆತನು ತನ್ನ ಭಕ್ತರಿಗೆ ಒಳ್ಳೆಯವನಾಗಿದ್ದಾನೆ.
ಯೆಹೋವನಿಗೆ ಸ್ತೋತ್ರವಾಗಲಿ.
150 ಯೆಹೋವನಿಗೆ ಸ್ತೋತ್ರವಾಗಲಿ!
ದೇವರನ್ನು ಆತನ ಆಲಯದಲ್ಲಿ ಸ್ತುತಿಸಿರಿ!
ಆತನ ಶಕ್ತಿಯನ್ನು ಪರಲೋಕದಲ್ಲಿ ಸ್ತುತಿಸಿರಿ!
2 ಆತನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ!
ಆತನ ಮಹತ್ವಕ್ಕೆ ತಕ್ಕಂತೆ ಆತನನ್ನು ಸ್ತುತಿಸಿರಿ!
3 ತುತ್ತೂರಿಗಳನ್ನೂ ಕೊಂಬುಗಳನ್ನೂ ಊದುತ್ತಾ ಆತನನ್ನು ಸ್ತುತಿಸಿರಿ!
ಹಾರ್ಪ್ವಾದ್ಯಗಳನ್ನೂ ಲೈರ್ವಾದ್ಯಗಳನ್ನೂ ನುಡಿಸುತ್ತಾ ಆತನನ್ನು ಸ್ತುತಿಸಿರಿ.
4 ದಮ್ಮಡಿಗಳನ್ನು ಬಡಿಯುತ್ತಾ ಕುಣಿಯುತ್ತಾ ಆತನನ್ನು ಸ್ತುತಿಸಿರಿ.
ತಂತಿವಾದ್ಯಗಳಿಂದಲೂ ಕೊಳಲುಗಳಿಂದಲೂ ಆತನನ್ನು ಸ್ತುತಿಸಿರಿ.
5 ತಾಳಗಳಿಂದ ಆತನನ್ನು ಸ್ತುತಿಸಿರಿ!
ಝಲ್ಲರಿಗಳಿಂದ ಆತನನ್ನು ಸ್ತುತಿಸಿರಿ!
6 ಸಮಸ್ತ ಜೀವಿಗಳೇ, ಯೆಹೋವನಿಗೆ ಸ್ತೋತ್ರಮಾಡಿರಿ!
ಯೆಹೋವನಿಗೆ ಸ್ತೋತ್ರವಾಗಲಿ!
Kannada Holy Bible: Easy-to-Read Version. All rights reserved. © 1997 Bible League International