Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 22

ಯೋಷೀಯನು ಯೆಹೂದದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸುವನು

22 ಯೋಷೀಯನು ಆಳಲಾರಂಭಿಸಿದಾಗ ಅವನಿಗೆ ಎಂಟು ವರ್ಷ ವಯಸ್ಸಾಗಿತ್ತು. ಅವನು ಮೂವತ್ತೊಂದು ವರ್ಷ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಯದೀದಾ. ಇವಳು ಬೊಚ್ಕತ್ ಎಂಬ ಸ್ಥಳದ ಅದಾಯ ಎಂಬವನ ಮಗಳು. ಯೆಹೋವನು ಯೋಗ್ಯವೆಂದು ಹೇಳಿದ ಕಾರ್ಯಗಳನ್ನು ಯೋಷೀಯನು ಮಾಡಿದನು. ಯೋಷೀಯನು ತನ್ನ ಪೂರ್ವಿಕನಾದ ದಾವೀದನಂತೆ ದೇವರನ್ನು ಅನುಸರಿಸಿದನು. ಯೋಷೀಯನು ದೇವರ ಬೋಧನೆಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಅವುಗಳನ್ನು ಅನುಸರಿಸಿದನು.

ಯೋಷೀಯನು ದೇವಾಲಯದ ದುರಸ್ತಿಗೆ ಆಜ್ಞಾಪಿಸುವನು

ಯೋಷೀಯನು ರಾಜನಾಗಿದ್ದ ಹದಿನೆಂಟನೆಯ ವರ್ಷದಲ್ಲಿ ಅಚೆಲ್ಯನ ಮಗನೂ ಮೆಷುಲ್ಲಾಮನ ಮೊಮ್ಮಗನೂ ಕಾರ್ಯದರ್ಶಿಯೂ ಆದ ಶಾಫಾನನನ್ನು ದೇವಾಲಯಕ್ಕೆ ಕಳುಹಿಸಿದನು. ಯೋಷೀಯನು, “ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗು. ದ್ವಾರಪಾಲಕರು ಜನರಿಂದ ಒಟ್ಟುಗೂಡಿಸಿರುವ ಹಣವನ್ನು ಅವನು ಲೆಕ್ಕಿಸಲಿ. ಜನರು ದೇವಾಲಯಕ್ಕೆ ತೆಗೆದುಕೊಂಡು ಬಂದು ಕೊಟ್ಟ ಹಣವೇ ಇದು. ನಂತರ ಯಾಜಕರು ದೇವಾಲಯದಲ್ಲಿ ಕೆಲಸದ ಉಸ್ತುವಾರಿಯನ್ನು ನೋಡಿಕೊಳ್ಳುವ ಮುಖ್ಯಸ್ಥರಿಗೆ ಕೊಡಲಿ. ಯಾಜಕರು ದೇವಾಲಯವನ್ನು ದುರಸ್ತಿ ಮಾಡುವ ಕೆಲಸಗಾರರಿಗೆ ಈ ಹಣವನ್ನು ವಿನಿಯೋಗಿಸಲಿ. ಅಲ್ಲಿ ಬಡಗಿಗಳು, ಶಿಲ್ಪಿಗಳು ಮತ್ತು ಕಲ್ಲುಕುಟಿಕರಿದ್ದಾರೆ. ಮರವನ್ನು ಕೊಳ್ಳಲು ಮತ್ತು ಕಲ್ಲುಗಳನ್ನು ಕೆತ್ತಿಸಲು ಈ ಹಣವನ್ನು ಬಳಸಿ. ನೀವು ಕೆಲಸಗಾರರಿಗೆ ಕೊಡುವ ಹಣವನ್ನು ಲೆಕ್ಕಹಾಕಬೇಡಿ. ಯಾಕೆಂದರೆ ಆ ಕೆಲಸಗಾರರು ನಂಬಿಗಸ್ತರಾಗಿದ್ದಾರೆ” ಎಂದು ಹೇಳಿದನು.

ದೇವಾಲಯದಲ್ಲಿ ಧರ್ಮಶಾಸ್ತ್ರವು ಸಿಕ್ಕಿತು

ಪ್ರಧಾನಯಾಜಕನಾದ ಹಿಲ್ಕೀಯನು ಕಾರ್ಯದರ್ಶಿಯಾದ ಶಾಫಾನನಿಗೆ, “ದೇವಾಲಯದಲ್ಲಿ ನನಗೆ ಧರ್ಮಶಾಸ್ತ್ರವು ಸಿಕ್ಕಿತು” ಎಂದು ಹೇಳಿದನು. ಹಿಲ್ಕೀಯನು ಅದನ್ನು ಶಾಫಾನನಿಗೆ ನೀಡಿದನು. ಶಾಫಾನನು ಅದನ್ನು ಓದಿದನು.

ಕಾರ್ಯದರ್ಶಿಯಾದ ಶಾಫಾನನು ರಾಜನಾದ ಯೋಷಿಯನ ಬಳಿಗೆ ಬಂದು ಅವನಿಗೆ, “ನಿನ್ನ ಸೇವಕರು ದೇವಾಲಯದಲ್ಲಿದ್ದ ಹಣವನ್ನು ವ್ಯಯಮಾಡಿದರು. ಅವರು ಆ ಹಣವನ್ನು ದೇವಾಲಯದಲ್ಲಿ ಕೆಲಸ ಮಾಡಿಸುವ ಮೇಲ್ವಿಚಾರಕರಿಗೆ ಒಪ್ಪಿಸಿದರು” ಎಂದು ಹೇಳಿದನು. 10 ನಂತರ ಕಾರ್ಯದರ್ಶಿಯಾದ ಶಾಫಾನನು ರಾಜನಿಗೆ, “ಯಾಜಕನಾದ ಹಿಲ್ಕೀಯನು ನನಗೆ ಒಂದು ಗ್ರಂಥವನ್ನು ಕೊಟ್ಟನು” ಎಂದು ಹೇಳಿದನು. ಶಾಫಾನನು ರಾಜನಿಗೆ ಆ ಗ್ರಂಥವನ್ನು ಓದಿದನು.

11 ರಾಜನು ಧರ್ಮಶಾಸ್ತ್ರದ ವಾಕ್ಯಗಳನ್ನು ಕೇಳಿದಾಗ, ಗಲಿಬಿಲಿಗೊಂಡು ತನ್ನ ಬಟ್ಟೆಗಳನ್ನು ಹರಿದುಕೊಂಡನು. 12 ಅನಂತರ ರಾಜನು ಯಾಜಕನಾದ ಹಿಲ್ಕೀಯನಿಗೆ, ಶಾಫಾನನ ಮಗನಾದ ಅಹೀಕಾಮನಿಗೆ, ಮೀಕಾಯನ ಮಗನಾದ ಅಕ್ಬೋರನಿಗೆ, ಕಾರ್ಯದರ್ಶಿಯಾದ ಶಾಫಾನನಿಗೆ ಮತ್ತು ರಾಜಸೇವಕನಾದ ಅಸಾಯನಿಗೆ ಒಂದು ಆಜ್ಞೆಯನ್ನು ನೀಡಿದನು. 13 ರಾಜನಾದ ಯೋಷೀಯನು, “ಈಗ ನಾವು ಏನು ಮಾಡಬೇಕೆಂದು ಯೆಹೋವನನ್ನು ಕೇಳಿ. ನನಗಾಗಿ, ಜನರಿಗಾಗಿ ಮತ್ತು ಎಲ್ಲಾ ಯೆಹೂದಕ್ಕಾಗಿ ಯೆಹೋವನನ್ನು ಕೇಳಿ. ಈಗ ಸಿಕ್ಕಿರುವ ಈ ಗ್ರಂಥದ ವಾಕ್ಯಗಳನ್ನು ಕುರಿತಾಗಿಯೂ ಕೇಳಿ. ಯೆಹೋವನು ನಮ್ಮ ಮೇಲೆ ಕೋಪಗೊಂಡಿದ್ದಾನೆ. ಏಕೆಂದರೆ ನಮ್ಮ ಪೂರ್ವಿಕರು ಈ ಗ್ರಂಥದ ವಾಕ್ಯಗಳಿಗೆ ಕಿವಿಗೊಡಲಿಲ್ಲ; ಅವುಗಳನ್ನು ಕೈಕೊಂಡು ನಡೆಯಲಿಲ್ಲ” ಎಂದು ಹೇಳಿದನು.

ಯೋಷೀಯನು ತನ್ನ ಜನರನ್ನು ಪ್ರವಾದಿಯಾದ ಹುಲ್ದಳ ಬಳಿಗೆ ಕಳುಹಿಸಿದನು

14 ಆದ್ದರಿಂದ ಯಾಜಕನಾದ ಹಿಲ್ಕೀಯ, ಅಹೀಕಾಮ್, ಅಕ್ಬೋರ್, ಶಾಫಾನ್ ಮತ್ತು ಅಸಾಯ ಎಂಬವರು ಪ್ರವಾದಿನಿಯಾದ ಹುಲ್ದಳ ಬಳಿಗೆ ಹೋದರು. ಹುಲ್ದಳು ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ಆದ ಶಲ್ಲೂಮನ ಹೆಂಡತಿ. ಅವನು ಯಾಜಕರ ವಸ್ತ್ರಗಳಿಗೆ ಮೇಲ್ವಿಚಾರಕನಾಗಿದ್ದನು. ಹುಲ್ದಳು ಜೆರುಸಲೇಮಿನ ಎರಡನೆಯ ಭಾಗದಲ್ಲಿ[a] ವಾಸಿಸುತ್ತಿದ್ದಳು. ಅವರು ಹೋಗಿ ಹುಲ್ದಳ ಜೊತೆಯಲ್ಲಿ ಮಾತನಾಡಿದರು.

15 ಆಗ ಹುಲ್ದಳು ಅವರಿಗೆ, “ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನ ಬಳಿಗೆ ಹೋಗಿ 16 ಇಸ್ರೇಲಿನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ಈ ದೇಶದ ಮೇಲೆ ಮತ್ತು ಇಲ್ಲಿ ವಾಸಮಾಡುತ್ತಿರುವ ಜನರ ಮೇಲೆ ನಾನು ಕೇಡುಗಳನ್ನು ಬರಮಾಡುವೆನು. ಯೆಹೂದದ ರಾಜನು ಓದಿದ ಗ್ರಂಥದಲ್ಲಿ ಈ ಕೇಡುಗಳನ್ನು ತಿಳಿಸಲಾಗಿದೆ. 17 ಯೆಹೂದದ ರಾಜರು ನನ್ನನ್ನು ತ್ಯಜಿಸಿದರು ಮತ್ತು ಇತರ ದೇವರುಗಳಿಗೆ ಧೂಪವನ್ನು ಸುಟ್ಟರು. ಅವರು ನನ್ನಲ್ಲಿ ಹೆಚ್ಚು ಕೋಪವನ್ನು ಉಂಟುಮಾಡಿದರು. ಅವರು ಅನೇಕ ವಿಗ್ರಹಗಳನ್ನು ನಿರ್ಮಿಸಿದರು. ಆದಕಾರಣವೇ ನಾನು ನನ್ನ ಕೋಪವನ್ನು ಈ ಸ್ಥಳದ ವಿರುದ್ಧ ತೋರ್ಪಡಿಸುತ್ತೇನೆ. ನನ್ನ ಕೋಪವು ಆರಿಹೋಗದ ಬೆಂಕಿಯಂತಿರುತ್ತದೆ!’

18-19 “ಯೆಹೂದದ ರಾಜನಾದ ಯೋಷೀಯನು ಯೆಹೋವನ ಸಲಹೆಯನ್ನು ಕೇಳಲು ನಿಮ್ಮನ್ನು ಕಳುಹಿಸಿದನು. ಯೋಷೀಯನಿಗೆ ಈ ಸಂಗತಿಗಳನ್ನು ಹೇಳಿ: ‘ನೀನು ಕೇಳುವ ಈ ಮಾತುಗಳನ್ನು ಇಸ್ರೇಲರ ದೇವರಾದ ಯೆಹೋವನು ಹೇಳಿದನು. ಈ ದೇಶವನ್ನು ಮತ್ತು ಇಲ್ಲಿ ವಾಸಿಸುವ ಜನರನ್ನು ಕುರಿತು ನಾನು ಹೇಳಿದ ಸಂಗತಿಗಳನ್ನು ನೀನು ಕೇಳಿರುವೆ. ನಿನ್ನ ಹೃದಯವು ಮೃದುವಾಗಿರುವುದರಿಂದ, ನೀನು ಅವುಗಳನ್ನು ಕೇಳಿದಾಗ ದೈನ್ಯತೆಯುಳ್ಳವನಾದೆ. ಈ ಸ್ಥಳಕ್ಕೆ (ಜೆರುಸಲೇಮಿಗೆ) ಆ ಭೀಕರ ಸಂಗತಿಗಳಾಗುತ್ತವೆಯೆಂದು ನಾನು ಹೇಳಿದೆ. ಆಗ ನೀನು ದುಃಖದಿಂದ ನಿನ್ನ ಬಟ್ಟೆಗಳನ್ನು ಹರಿದುಕೊಂಡು ಅಳಲಾರಂಭಿಸಿದೆ. ಆದಕಾರಣವೇ ನಾನು ನಿನಗೆ ಕಿವಿಗೊಟ್ಟೆನು.’ ಯೆಹೋವನು ಹೇಳುವುದೇನೆಂದರೆ: 20 ‘ನೀನು ನಿನ್ನ ಪೂರ್ವಿಕರ ಜೊತೆ ಸೇರುವಂತೆ ನಾನು ಮಾಡುತ್ತೇನೆ. ನೀನು ಶಾಂತಿಯಿಂದ ಸತ್ತು ನಿನ್ನ ಸಮಾಧಿಯನ್ನು ಸೇರುವೆ. ಈ ದೇಶದ (ಜೆರುಸಲೇಮಿನ) ಮೇಲೆ ನಾನು ತರಲಿರುವ ಕೇಡುಗಳನ್ನು ನಿನ್ನ ಕಣ್ಣುಗಳು ನೋಡುವುದಿಲ್ಲ’ ಎಂಬುದೇ” ಎಂದು ಹೇಳಿದಳು.

ನಂತರ ಯಾಜಕನಾದ ಹಿಲ್ಕೀಯ, ಅಹೀಕಾಮ್, ಅಕ್ಬೋರ್, ಶಾಫಾನ್ ಮತ್ತು ಅಸಾಯ ಹಿಂತಿರುಗಿ ಬಂದು ರಾಜನಿಗೆ ತಿಳಿಸಿದರು.

ಇಬ್ರಿಯರಿಗೆ 4

ದೇವರು ಆ ಜನರಿಗೆ ನೀಡಿದ ವಾಗ್ದಾನವು ನಮ್ಮಲ್ಲಿ ಇನ್ನೂ ಇದೆ. ನಾವು ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಬಹುದೆಂಬುದೇ ಆ ವಾಗ್ದಾನ. ಆದ್ದರಿಂದ ನಮ್ಮಲ್ಲಿ ಯಾರೂ ಆ ವಾಗ್ದಾನದ ಫಲವನ್ನು ಪಡೆಯುವದರಲ್ಲಿ ವಿಫಲರಾಗದಂತೆ ಬಹು ಎಚ್ಚರಿಕೆಯಿಂದಿರೋಣ. ರಕ್ಷಣಾಮಾರ್ಗದ ಕುರಿತು ಅವರಿಗೆ ತಿಳಿಸಲ್ಪಟ್ಟಂತೆಯೇ ನಮಗೂ ತಿಳಿಸಲಾಯಿತು. ಅವರು ಆ ಬೋಧನೆಯನ್ನು ಕೇಳಿದರೂ ಅವರಿಗೆ ಪ್ರಯೋಜನವಾಗಲಿಲ್ಲ. ಏಕೆಂದರೆ ಅವರು ಅದನ್ನು ನಂಬಿಕೆಯಿಂದ ಸ್ವೀಕರಿಸಿಕೊಳ್ಳಲಿಲ್ಲ. ನಂಬುವವರಾದ ನಾವು ದೇವರ ವಿಶ್ರಾಂತಿಯಲ್ಲಿ ಸೇರಲು ಸಮರ್ಥರಾಗಿದ್ದೇವೆ. ದೇವರು ಹೇಳಿದಂತೆ:

“ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲವೆಂದು
    ನಾನು ಕೋಪಗೊಂಡು ಪ್ರಮಾಣ ಮಾಡಿದೆನು.”(A)

ಈ ಲೋಕವನ್ನು ಸೃಷ್ಟಿಸಿದ ನಂತರ ತನ್ನ ಕಾರ್ಯಗಳು ಮುಗಿದುಹೋಗಿದ್ದರೂ ದೇವರು ಹೀಗೆ ಹೇಳಿದನು. ಪವಿತ್ರ ಗ್ರಂಥದ ಒಂದು ಭಾಗದಲ್ಲಿ ಆತನು ವಾರದ ಏಳನೆಯ ದಿನದ ಬಗ್ಗೆ ಹೀಗೆ ಮಾತಾಡಿದ್ದಾನೆ: “ಆದ್ದರಿಂದ ದೇವರು ತನ್ನ ಕಾರ್ಯಗಳನ್ನೆಲ್ಲ ಮುಗಿಸಿ ಏಳನೆಯ ದಿನ ವಿಶ್ರಾಂತಿ ಹೊಂದಿದನು.”(B) ಪವಿತ್ರ ಗ್ರಂಥದ ಇನ್ನೊಂದು ಭಾಗದಲ್ಲಿ ಆತನು, “ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲ”(C) ವೆಂದೂ ಹೇಳಿದ್ದಾನೆ.

ಆದ್ದರಿಂದ ಕೆಲವರು ದೇವರ ವಿಶ್ರಾಂತಿಯಲ್ಲಿ ಸೇರುತ್ತಾರೆಂಬುದು ಇನ್ನೂ ಖಚಿತವಾಗಿದೆ. ಆದರೆ ರಕ್ಷಣಾಮಾರ್ಗವನ್ನು ಮೊದಲು ಕೇಳಿದ ಜನರು ಪ್ರವೇಶಿಸಲಿಲ್ಲ. ಅವರು ವಿಧೇಯರಾಗದೆ ಇದ್ದುದರಿಂದ ಅವರು ಸೇರಲಿಲ್ಲ. ಆದ್ದರಿಂದ ಆತನು ಮತ್ತೊಂದು ವಿಶೇಷ ದಿನವನ್ನು ಯೋಜಿಸಿದನು. ಅದನ್ನು “ಈ ಹೊತ್ತು” ಎಂದು ಕರೆಯಲಾಗಿದೆ. ಆತನು ಆ ದಿನವನ್ನು ಕುರಿತು ಬಹುಕಾಲದ ನಂತರ ದಾವೀದನ ಮೂಲಕ ತಿಳಿಸಿದನು. ಪವಿತ್ರ ಗ್ರಂಥದ ಈ ಭಾಗವನ್ನು ನಾವು ಮೊದಲೊಮ್ಮೆ ನೋಡಿದೆವು:

“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
    ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.”(D)

ದೇವರು ವಾಗ್ದಾನ ಮಾಡಿದ್ದ ವಿಶ್ರಾಂತಿಗೆ ಯೆಹೋಶುವನು ಜನರನ್ನು ಕರೆದೊಯ್ದಿದ್ದರೆ ವಿಶ್ರಾಂತಿಯ ಮತ್ತೊಂದು ದಿನದ ಕುರಿತು ಹೇಳುತ್ತಿರಲಿಲ್ಲ. ದೇವಜನರಿಗೋಸ್ಕರವಿರುವ ಸಬ್ಬತ್ ಎಂಬ ವಿಶ್ರಾಂತಿಯು ಇನ್ನೂ ಬರಲಿದೆ ಎಂಬುದನ್ನು ಇದು ತೋರ್ಪಡಿಸುತ್ತದೆ. 10 ಆತನು ತನ್ನ ಕಾರ್ಯವನ್ನು ಮುಗಿಸಿದ ನಂತರ ವಿಶ್ರಾಂತಿ ಹೊಂದಿದನು. ಆದ್ದರಿಂದ ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸುವವನು ಆತನು ಮಾಡಿದಂತೆ ತನ್ನ ಕಾರ್ಯವನ್ನು ಮುಗಿಸಿದವನಾಗಿರಬೇಕು. 11 ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಲು ನಮ್ಮಿಂದಾದಷ್ಟು ಪ್ರಯತ್ನಿಸೋಣ. ಆತನಿಗೆ ಅವಿಧೇಯರಾದ ಆ ಜನರನ್ನು ಅನುಸರಿಸಿ ನಮ್ಮಲ್ಲಿ ಯಾರೂ ವಿಫಲರಾಗದಂತೆ ನೋಡಿಕೊಳ್ಳೋಣ.

12 ದೇವರ ವಾಕ್ಯವು ಸಜೀವವಾದದ್ದು, ಕಾರ್ಯ ಸಾಧಕವಾದದ್ದು. ಅದು ಅತ್ಯಂತ ಹರಿತವಾದ ಖಡ್ಗಕ್ಕಿಂತಲೂ ಹರಿತವಾಗಿದ್ದು ನಾಟಿಕೊಳ್ಳುತ್ತದೆ. ಆತ್ಮಪ್ರಾಣಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುತ್ತದೆ; ನಮ್ಮ ಹೃದಯದ ಉದ್ದೇಶಗಳನ್ನು ಮತ್ತು ಆಲೋಚನೆಗಳನ್ನು ವಿವೇಚಿಸುತ್ತದೆ. 13 ದೇವರ ದೃಷ್ಟಿಗೆ ಯಾವುದೂ ಮುಚ್ಚುಮರೆಯಾಗಿಲ್ಲ. ಆತನ ಕಣ್ಣೆದುರಿನಲ್ಲಿ ಪ್ರತಿಯೊಂದೂ ತೆರೆಯಲ್ಪಟ್ಟು ಬಟ್ಟಬಯಲಾಗಿವೆ. ನಾವು ನಮ್ಮ ಜೀವಿತದ ಬಗ್ಗೆ ಲೆಕ್ಕ ಒಪ್ಪಿಸಬೇಕಾಗಿರುವುದು ಆತನಿಗೇ.

ದೇವರ ಸನ್ನಿಧಿಗೆ ಬರಲು ಯೇಸುವಿನ ಸಹಾಯ

14 ಪರಲೋಕಕ್ಕೆ ಏರಿಹೋದ ಪ್ರಧಾನ ಯಾಜಕನೊಬ್ಬನು ನಮಗಿದ್ದಾನೆ. ಆತನೇ ದೇವರ ಮಗನಾದ ಯೇಸು. ಆದ್ದರಿಂದ ನಮಗಿರುವ ನಂಬಿಕೆಯಲ್ಲೇ ದೃಢವಾಗಿ ಸಾಗೋಣ. 15 ನಮ್ಮ ಪ್ರಧಾನ ಯಾಜಕನಾಗಿರುವ ಯೇಸು ನಮ್ಮ ದೌರ್ಬಲ್ಯವನ್ನು ಅರ್ಥಮಾಡಿಕೊಳ್ಳಲು ಸಮರ್ಥನಾಗಿದ್ದಾನೆ. ಆತನು ಈ ಲೋಕದಲ್ಲಿ ಜೀವಿಸಿದ್ದಾಗ, ಸರ್ವವಿಷಯಗಳಲ್ಲಿ ನಮ್ಮಂತೆಯೇ ಶೋಧನೆಗೆ ಗುರಿಯಾದರೂ ಪಾಪಮಾಡಲಿಲ್ಲ. 16 ಆದ್ದರಿಂದ ದೇವರ ಕೃಪಾಸಿಂಹಾಸನದ ಬಳಿಗೆ ಸಂಕೋಚಪಡದೆ ಬರೋಣ. ಕೊರತೆಯಲ್ಲಿರುವಾಗ ನಮಗೆ ಬೇಕಾದ ಸಹಾಯಕ್ಕಾಗಿ ಕೃಪೆಯನ್ನೂ ಕರುಣೆಯನ್ನೂ ಅಲ್ಲಿ ಹೊಂದಿಕೊಳ್ಳುವೆವು.

ಯೋವೇಲ 1

ಮಿಡತೆಗಳು ಬೆಳೆಯನ್ನು ನಾಶಮಾಡುವವು

ಪೆತೂವೇಲನ ಮಗನಾದ ಯೋವೇಲನು ಯೆಹೋವನಿಂದ ಈ ಸಂದೇಶವನ್ನು ಪಡೆದನು.

ನಾಯಕರೇ, ಈ ಸಂದೇಶಕ್ಕೆ ಕಿವಿಗೊಡಿರಿ.
    ದೇಶದಲ್ಲಿ ವಾಸಿಸುವ ಎಲ್ಲಾ ಜನರೇ, ನನ್ನ ಮಾತುಗಳನ್ನು ಆಲೈಸಿರಿ.
ನಿಮ್ಮ ಜೀವಮಾನಕಾಲದಲ್ಲಿ ಇಂಥಾ ಸಂಗತಿ ಎಂದಾದರೂ ಸಂಭವಿಸಿದೆಯೋ? ಇಲ್ಲ!
    ನಿಮ್ಮ ತಂದೆಗಳ ಕಾಲದಲ್ಲಿಯಾದರೂ ಇಂಥಾ ಸಂಗತಿಗಳು ಸಂಭವಿಸಿದೆಯೋ? ಇಲ್ಲ!
ಇವುಗಳನ್ನು ನೀವು ನಿಮ್ಮ ಮಕ್ಕಳಿಗೆ ತಿಳಿಸುವಿರಿ.
    ಮತ್ತು ನಿಮ್ಮ ಮಕ್ಕಳು ಅವರ ಮಕ್ಕಳಿಗೆ ತಿಳಿಸುವರು.
    ಮತ್ತು ನಿಮ್ಮ ಮೊಮ್ಮಕ್ಕಳು ಅವರ ನಂತರದ ಪೀಳಿಗೆಗೆ ತಿಳಿಸುವರು.
ಚೂರಿ ಮಿಡತೆ ತಿಂದುಬಿಟ್ಟಿದ್ದನ್ನು
    ಗುಂಪು ಮಿಡತೆ ತಿಂದಿತು.
ಗುಂಪು ಮಿಡತೆ ತಿಂದುಬಿಟ್ಟದ್ದನ್ನು
    ಹಾರುವ ಮಿಡತೆ ತಿಂದಿತು.
ಹಾರುವ ಮಿಡತೆ ತಿಂದು ಉಳಿದದ್ದನ್ನು
    ನಾಶಮಾಡುವ ಮಿಡತೆ ತಿಂದುಬಿಟ್ಟಿತು.

ಮಿಡತೆಗಳು ಆಗಮಿಸಿದವು

ಅಮಲೇರಿದವರೇ, ಎಚ್ಚರಗೊಂಡು ಅಳಿರಿ.
    ದ್ರಾಕ್ಷಾರಸವನ್ನು ಕುಡಿಯುವವರೇ, ಅಳಿರಿ.
ಯಾಕೆಂದರೆ ನಿಮ್ಮ ಸಿಹಿಯಾದ ದ್ರಾಕ್ಷಾರಸವು ಮುಗಿದುಹೋಯಿತು.
    ಆ ದ್ರಾಕ್ಷಾರಸದ ಸವಿಯು ನಿಮಗೆ ಇನ್ನು ಸಿಗದು.
ನನ್ನ ಜನಾಂಗಕ್ಕೆ ವಿರುದ್ಧವಾಗಿ ಬಲಶಾಲಿಯಾದ ದೊಡ್ಡ ರಾಜ್ಯವು ಯುದ್ಧಕ್ಕೆ ಬರುವದು.
    ಅವರು ಸೈನಿಕರನ್ನು ಲೆಕ್ಕಿಸಲು ಸಾಧ್ಯವಿಲ್ಲ.
ಆ ಮಿಡತೆಗಳಂತಿರುವ ಸೈನಿಕರು ನಿಮ್ಮನ್ನು ಸೀಳಿಬಿಡುವರು.
    ಅವರ ಹಲ್ಲುಗಳು ಸಿಂಹದ ಹಲ್ಲಿನಂತಿವೆ.

ಆ ಮಿಡತೆಗಳು ನನ್ನ ದ್ರಾಕ್ಷಿತೋಟದ
    ಹಣ್ಣುಗಳನ್ನೆಲ್ಲಾ ತಿಂದುಬಿಡುವವು.
ನನ್ನ ಅಂಜೂರದ ಮರಗಳನ್ನು ನಾಶಮಾಡುವವು.
    ನನ್ನ ಮರಗಳ ತೊಗಟೆಗಳನ್ನು ಮಿಡತೆಗಳು ತಿಂದುಬಿಡುವವು.
ಅದರ ಕೊಂಬೆಗಳು ಬಿಳುಪಾಗುವವು.
    ಮರಗಳು ನಾಶವಾಗುವವು.

ಜನರು ಬೊಬ್ಬಿಡುತ್ತಾರೆ

ಮದುಮಗನು ಸತ್ತುಹೋದಾಗ
    ಮದುಮಗಳು ಗೋಳಾಡುವಂತೆ ನೀವು ಗೋಳಾಡಿರಿ.
ಯಾಜಕರೇ, ಯೆಹೋವನ ಸೇವಕರೇ, ಗೋಳಾಡಿರಿ.
    ಯಾಕೆಂದರೆ ಇನ್ನು ಮುಂದೆ ಯೆಹೋವನ ಆಲಯದಲ್ಲಿ ಪಾನ ಮತ್ತು ಧಾನ್ಯಾರ್ಪಣೆ ಇರದು.
10 ಹೊಲಗದ್ದೆಗಳೆಲ್ಲಾ ನಾಶವಾದವು.
    ಭೂಮಿಯೂ ಗೋಳಾಡುತ್ತಿರುವುದು.
    ಯಾಕೆಂದರೆ ಧಾನ್ಯವು ನಾಶವಾದವು.
ಹೊಸ ದ್ರಾಕ್ಷಾರಸವು ಬತ್ತಿಹೋಯಿತು.
    ಎಣ್ಣೆಯು ಇಲ್ಲದೆಹೋಯಿತು.
11 ರೈತರೇ, ದುಃಖಿಸಿರಿ,
    ದ್ರಾಕ್ಷಿತೋಟ ಮಾಡಿದವರೇ, ಗಟ್ಟಿಯಾಗಿ ಬೊಬ್ಬಿಡಿರಿ.
ಗೋದಿಗಾಗಿಯೂ, ಜವೆಗೋದಿಗಾಗಿಯೂ ಅಳಿರಿ.
    ಯಾಕೆಂದರೆ ಬೆಳೆಯು ನಾಶವಾಯಿತು.
12 ದ್ರಾಕ್ಷಿಬಳ್ಳಿಗಳು ಒಣಗಿಹೋಗಿವೆ
    ಮತ್ತು ಅಂಜೂರದ ಮರವು ಸಾಯುತ್ತಲಿದೆ.
    ದಾಳಿಂಬದ ಮರ, ಖರ್ಜೂರದ ಮರ, ಸೇಬಿನ ಮರ,
ತೋಟದಲ್ಲಿರುವ ಎಲ್ಲಾ ಮರಗಳು ಒಣಗಿಹೋಗಿವೆ.
    ಜನರಲ್ಲಿರುವ ಸಂತೋಷವೂ ಬತ್ತಿಹೋಗಿದೆ.
13 ಯಾಜಕರೇ, ನೀವು ನಿಮ್ಮ ಶೋಕವಸ್ತ್ರವನ್ನು ಧರಿಸಿ ಗಟ್ಟಿಯಾಗಿ ರೋಧಿಸಿರಿ.
    ವೇದಿಕೆಯಲ್ಲಿ ಸೇವೆಮಾಡುವವರೇ, ಗಟ್ಟಿಯಾಗಿ ರೋಧಿಸಿರಿ.
ನನ್ನ ದೇವರ ಸೇವಕರೇ, ನೀವು ನಿಮ್ಮ ಶೋಕವಸ್ತ್ರಗಳಲ್ಲಿಯೇ ನಿದ್ರೆಮಾಡಿರಿ.
    ಯಾಕೆಂದರೆ ಇನ್ನು ದೇವಾಲಯದಲ್ಲಿ ಧಾನ್ಯ ಮತ್ತು ಪಾನಸಮರ್ಪಣೆ ಇಲ್ಲ.

ಮಿಡತೆಗಳ ಭಯಂಕರ ನಾಶನ

14 ಉಪವಾಸ ದಿನವನ್ನು ಗೊತ್ತುಪಡಿಸಿರಿ. ಆ ದಿನಕ್ಕಾಗಿ ಜನರನ್ನು ಒಟ್ಟುಗೂಡಿಸಿರಿ. ದೇಶದಲ್ಲಿ ವಾಸವಾಗಿರುವ ನಾಯಕರುಗಳೆಲ್ಲರನ್ನೂ ಜನರನ್ನೂ ಒಟ್ಟುಗೂಡಿಸಿರಿ; ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ಅವರನ್ನೆಲ್ಲ ಪ್ರಾರ್ಥನೆಗಾಗಿ ಕರೆದುಕೊಂಡು ಬನ್ನಿರಿ.

15 ಶೋಕಿಸಿರಿ. ಯಾಕೆಂದರೆ ಯೆಹೋವನ ಮಹಾದಿನವು ಹತ್ತಿರ ಬಂತು. ಆ ಸಮಯದಲ್ಲಿ ಸರ್ವಶಕ್ತನಾದ ದೇವರ ಸನ್ನಿಧಾನದಿಂದ ದಂಡನೆಯು ಬರುವುದು. 16 ನಮಗೆ ಆಹಾರವು ಇಲ್ಲದೆ ಹೋಯಿತು. ಆನಂದವೂ ಸಂತೋಷವೂ ನಮ್ಮ ದೇವಾಲಯದಿಂದ ಹೊರಟುಹೋದವು. 17 ನಾವು ಬೀಜ ಬಿತ್ತಿದೆವು. ಆದರೆ ಅವು ಒಣಗಿ, ಸತ್ತು ಈಗ ನೆಲದ ಮೇಲೆ ಬಿದ್ದಿವೆ. ನಮ್ಮ ಗಿಡಗಳೆಲ್ಲಾ ಒಣಗಿ ಸತ್ತಿವೆ. ನಮ್ಮ ಉಗ್ರಾಣವು ಬರಿದಾಗಿದ್ದು ಬೀಳುತ್ತಲಿದೆ.

18 ಪ್ರಾಣಿಗಳು ಹಸಿವಿನಿಂದ ನರಳಾಡುತ್ತಿವೆ. ಪ್ರಾಣಿಗಳ ಹಿಂಡು ಗಲಿಬಿಲಿಗೊಂಡು ಅಡ್ಡಾಡುತ್ತವೆ. ಅವುಗಳಿಗೆ ತಿನ್ನಲು ಹುಲ್ಲು ಇಲ್ಲ. ಕುರಿಗಳು ಸಾಯುತ್ತಿವೆ. 19 ಯೆಹೋವನೇ, ಸಹಾಯಕ್ಕಾಗಿ ನಾನು ನಿನಗೆ ಮೊರೆಯಿಡುತ್ತಿದ್ದೇನೆ. ನಮ್ಮ ಹಸಿರು ಹೊಲಗದ್ದೆಗಳು ಬೆಂಕಿಯಿಂದ ಮರುಭೂಮಿಯಾದವು. ಹೊಲದಲ್ಲಿದ್ದ ಮರಗಳನ್ನೆಲ್ಲಾ ಬೆಂಕಿಯು ದಹಿಸಿತು. 20 ಕಾಡುಪ್ರಾಣಿಗಳೂ ಬಾಯಾರಿ ನಿನ್ನ ಕಡೆಗೆ ನೋಡುತ್ತಿವೆ. ನೀರಿನ ತೊರೆಗಳು ಬತ್ತಿಹೋಗಿವೆ. ನೀರೇ ಇಲ್ಲ. ನಮ್ಮ ಹಸಿರು ಹುಲ್ಲುಗಾವಲು ಬೆಂಕಿಯ ದೆಸೆಯಿಂದ ಮರುಭೂಮಿಯಾಗಿರುತ್ತದೆ.

ಕೀರ್ತನೆಗಳು 140-141

ಸ್ತುತಿಗೀತೆ. ರಚನೆಗಾರ: ದಾವೀದ.

140 ಯೆಹೋವನೇ, ಕೆಡುಕರಿಂದ ನನ್ನನ್ನು ರಕ್ಷಿಸು.
    ಕ್ರೂರಿಗಳಿಂದ ನನ್ನನ್ನು ಕಾಪಾಡು.
    ಅವರು ಕೇಡುಮಾಡಬೇಕೆಂದಿದ್ದಾರೆ. ಅವರು ಯಾವಾಗಲೂ ಜಗಳವೆಬ್ಬಿಸುತ್ತಾರೆ.
ಅವರ ನಾಲಿಗೆಗಳು ಸರ್ಪಗಳಂತಿವೆ.
    ಅವರ ನಾಲಿಗೆಯ ಕೆಳಗೆ ಹಾವಿನ ವಿಷವಿದೆ.

ಯೆಹೋವನೇ, ದುಷ್ಟರಿಂದ ನನ್ನನ್ನು ರಕ್ಷಿಸು.
    ಕ್ರೂರಿಗಳಿಂದ ನನ್ನನ್ನು ಕಾಪಾಡು.
    ಅವರು ನನ್ನನ್ನು ಹಿಂದಟ್ಟಿ ನನಗೆ ಕೇಡುಮಾಡಬೇಕೆಂದಿದ್ದಾರೆ.
ಆ ಗರ್ವಿಷ್ಠರು ನನಗೆ ಉರುಲನ್ನು ಒಡ್ಡಿದ್ದಾರೆ;
    ನನ್ನನ್ನು ಹಿಡಿಯಲು ಬಲೆಯನ್ನು ಹಾಸಿದ್ದಾರೆ;
    ನನ್ನ ದಾರಿಯಲ್ಲಿ ಬೋನನ್ನು ಇಟ್ಟಿದ್ದಾರೆ.

ಯೆಹೋವನೇ, ನನ್ನ ದೇವರು ನೀನೇ.
    ನನ್ನ ಪ್ರಾರ್ಥನೆಗೆ ಕಿವಿಗೊಡು.
ಯೆಹೋವನೇ, ನನ್ನ ಬಲಿಷ್ಠನಾದ ಒಡೆಯನು ನೀನೇ.
    ನನ್ನ ರಕ್ಷಕನೂ ನೀನೇ, ನನ್ನ ಶಿರಸ್ತ್ರಾಣವೂ ನೀನೇ.
ಯೆಹೋವನೇ, ಆ ದುಷ್ಟರ ದುರಾಶೆಯೂ
    ದುರಾಲೋಚನೆಯೂ ನೆರವೇರಲು ಬಿಡಬೇಡ.

ನನ್ನ ವೈರಿಗಳಿಗೆ ಜಯವಾಗಲು ಬಿಡಬೇಡ.
    ಅವರು ಕುಯುಕ್ತಿಗಳನ್ನು ಮಾಡುತ್ತಿದ್ದಾರೆ; ಅವುಗಳನ್ನು ವಿಫಲಗೊಳಿಸು.
10 ಅವರ ತಲೆಗಳ ಮೇಲೆ ಉರಿಯುವ ಕೆಂಡಗಳನ್ನು ಸುರಿದು
    ಬೆಂಕಿಯೊಳಗೆ ಎಸೆದುಬಿಡು;
    ಎಂದಿಗೂ ಹತ್ತಿ ಬರಲಾಗದ ಗುಂಡಿಯೊಳಗೆ ಅವರನ್ನು ಎಸೆದುಬಿಡು.
11 ಆ ಸುಳ್ಳುಗಾರರನ್ನು ಜೀವಂತವಾಗಿ ಉಳಿಸಬೇಡ.
    ಆ ಕೆಡುಕರಿಗೆ ಕೇಡುಗಳಾಗುವಂತೆ ಮಾಡು.
12 ಯೆಹೋವನು ದೀನರಿಗೆ ನ್ಯಾಯವಾದ ತೀರ್ಪನ್ನು ಪಾಲಿಸುತ್ತಾನೆಂದು ನನಗೆ ಗೊತ್ತಿದೆ.
    ದೇವರು ಅಸಹಾಯಕರಿಗೆ ಸಹಾಯಮಾಡುವನು.
13 ನೀತಿವಂತರು ನಿನ್ನ ಹೆಸರನ್ನು ಕೊಂಡಾಡುವರು;
    ಯಥಾರ್ಥವಂತರು ನಿನ್ನ ಸನ್ನಿಧಿಯಲ್ಲಿ ಜೀವಿಸುವರು.

ಸ್ತುತಿಗೀತೆ. ರಚನೆಗಾರ: ದಾವೀದ.

141 ಯೆಹೋವನೇ, ಸಹಾಯಕ್ಕಾಗಿ ನಿನಗೆ ಮೊರೆಯಿಡುತ್ತಿದ್ದೇನೆ.
    ನನ್ನ ಪ್ರಾರ್ಥನೆಗೆ ಕಿವಿಗೊಡು.
    ಬೇಗನೆ ಬಂದು ನನಗೆ ಸಹಾಯಮಾಡು!
ನನ್ನ ಪ್ರಾರ್ಥನೆಯು ನಿನಗೆ ಧೂಪದಂತೆಯೂ
    ಸಾಯಂಕಾಲದ ಯಜ್ಞದಂತೆಯೂ ಸಮರ್ಪಕವಾಗಲಿ.

ಯೆಹೋವನೇ, ನನ್ನ ಮಾತುಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದಕ್ಕೂ
    ವಿವೇಚಿಸಿ ನುಡಿಯುವುದಕ್ಕೂ ನನಗೆ ಸಹಾಯ ಮಾಡು.
ಕೆಟ್ಟದ್ದನ್ನು ಮಾಡಲು ನನಗೆ ಅವಕಾಶಕೊಡಬೇಡ.
    ಕೆಟ್ಟವರೊಂದಿಗೆ ಸೇರಿ ಕೆಟ್ಟದ್ದನ್ನು ಮಾಡದಂತೆ ನನ್ನನ್ನು ಕಾಪಾಡು.
    ಅವರು ಹರ್ಷಿಸುವಂಥವುಗಳಲ್ಲಿ ನಾನು ಪಾಲುಗಾರನಾಗದಂತೆ ನೋಡಿಕೋ.
ನೀತಿವಂತನು ನನ್ನನ್ನು ಸರಿಪಡಿಸಿದರೆ
    ಅದು ನನಗೇ ಒಳ್ಳೆಯದು.
ನಿನ್ನ ಭಕ್ತರು ನನ್ನನ್ನು ಗದರಿಸಿದರೆ
    ಅದು ನನಗೇ ಒಳ್ಳೆಯದು.
ಆದರೆ ಕೆಟ್ಟವರ ಕೆಟ್ಟಕೃತ್ಯಗಳ ವಿರೋಧವಾಗಿ ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ.
ಅವರ ಅಧಿಪತಿಗಳು ದೊಬ್ಬಲ್ಪಡಲಿ.
    ನಾನು ಹೇಳಿದ್ದು ಸತ್ಯವೆಂದು ಆಗ ಜನರು ತಿಳಿದುಕೊಳ್ಳುವರು.

ಜನರು ಹೊಲವನ್ನು ಉತ್ತು ಹೆಂಟೆಗಳನ್ನು ಪುಡಿಮಾಡಿ ಚದರಿಸುವಂತೆಯೇ
    ಕೆಟ್ಟವರ ಎಲುಬುಗಳು ಅವರ ಸಮಾಧಿಗಳಲ್ಲಿ ಹರಡಿಕೊಂಡಿರುತ್ತವೆ.
ನನ್ನ ಒಡೆಯನಾದ ಯೆಹೋವನೇ, ಸಹಾಯಕ್ಕಾಗಿ ನಿನ್ನನ್ನೇ ಎದುರುನೋಡುವೆನು.
    ನಾನು ನಿನ್ನಲ್ಲಿ ಭರವಸವಿಟ್ಟಿದ್ದೇನೆ.
    ದಯವಿಟ್ಟು ನನ್ನನ್ನು ಮರಣಕ್ಕೀಡು ಮಾಡಬೇಡ.
ಕೆಟ್ಟವರು ನನಗೆ ಬಲೆಗಳನ್ನು ಒಡ್ಡಿದ್ದಾರೆ.
    ಅವರ ಬೋನುಗಳಿಂದ ನನ್ನನ್ನು ತಪ್ಪಿಸು.
10 ಅವರು ತಮ್ಮ ಬಲೆಗಳಿಗೆ ತಾವೇ ಸಿಕ್ಕಿಬೀಳಲಿ.
    ಆಗ ನಾನು ತಪ್ಪಿಸಿಕೊಳ್ಳುವೆನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International