Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಸಮುವೇಲನು 11

ದಾವೀದನು ಬತ್ಷೆಬೆಳೊಂದಿಗೆ ಪಾಪ ಮಾಡಿದ್ದು

11 ವಸಂತಕಾಲದಲ್ಲಿ, ಎಲ್ಲಾ ರಾಜರೂ ಯುದ್ಧಕ್ಕೆ ಹೊರಡುವ ಸಮಯ ಬಂದಾಗ, ದಾವೀದನು ಯೋವಾಬನನ್ನೂ ಅವನ ಸೇವಕರನ್ನೂ ಮತ್ತು ಇಸ್ರೇಲರೆಲ್ಲರನ್ನೂ ಅಮ್ಮೋನಿಯರೊಂದಿಗೆ ಯುದ್ಧಮಾಡಲು ಕಳುಹಿಸಿದನು. ಯೋವಾಬನ ಸೈನ್ಯವು ರಬ್ಬಕ್ಕೆ ಮುತ್ತಿಗೆ ಹಾಕಿತು.

ಆದರೆ ದಾವೀದನು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು. ಅವನು ಸಾಯಂಕಾಲ ತನ್ನ ಹಾಸಿಗೆಯಿಂದ ಮೇಲೆದ್ದು ಅರಮನೆಯ ಮಾಳಿಗೆಯ ಮೇಲಕ್ಕೆ ಹೋಗಿ ತಿರುಗಾಡುತ್ತಿದ್ದನು. ದಾವೀದನು ಮಾಳಿಗೆಯ ಮೇಲಿರುವಾಗ, ಒಬ್ಬ ಹೆಂಗಸು ಸ್ನಾನ ಮಾಡುತ್ತಿರುವುದನ್ನು ನೋಡಿದನು. ಅವಳು ಅತ್ಯಂತ ಸುಂದರಳಾಗಿದ್ದಳು. ದಾವೀದನು ತನ್ನ ಸೇವಕರನ್ನು ಕರೆದು ಅವಳು ಯಾರೆಂದು ಕೇಳಿದನು. ಒಬ್ಬ ಸೇವಕನು, “ಅವಳು ಎಲೀಯಾಮನ ಮಗಳಾದ ಬತ್ಷೆಬೆಳು. ಹಿತ್ತಿಯನಾದ ಊರೀಯನ ಹೆಂಡತಿ” ಎಂದು ಉತ್ತರಿಸಿದನು.

ದಾವೀದನು ತನಗಾಗಿ ಬತ್ಷೆಬೆಳನ್ನು ಕರೆತರಲು ಸಂದೇಶಕರನ್ನು ಕಳುಹಿಸಿದನು. ಅವಳು ದಾವೀದನ ಬಳಿಗೆ ಬಂದಾಗ ಅವನು ಅವಳೊಡನೆ ಲೈಂಗಿಕ ಸಂಬಂಧವನ್ನು ಹೊಂದಿದನು. ತನ್ನ ಮಾಸಿಕ ಮುಟ್ಟು ನಿಂತಮೇಲೆ ತನ್ನನ್ನು ಶುದ್ಧಪಡಿಸಿಕೊಳ್ಳಲು ಆಕೆ ಸ್ನಾನಮಾಡಿಕೊಂಡ ಮೇಲೆ ಇದು ಸಂಭವಿಸಿತು.[a] ಬಳಿಕ ಬತ್ಷೆಬೆ ಗರ್ಭಿಣಿಯಾದಳು. ಅವಳು ದಾವೀದನಿಗೆ, “ನಾನು ಗರ್ಭಿಣಿಯಾಗಿದ್ದೇನೆ” ಎಂದು ಹೇಳಿ ಕಳುಹಿಸಿದಳು.

ದಾವೀದನು ತನ್ನ ಪಾಪವನ್ನು ಮುಚ್ಚಿಡಲು ಪ್ರಯತ್ನಿಸುವನು

ದಾವೀದನು ಯೋವಾಬನಿಗೆ, “ಹಿತ್ತಿಯನಾದ ಊರೀಯನನ್ನು ನನ್ನ ಬಳಿಗೆ ಕಳುಹಿಸು” ಎಂಬ ಸಂದೇಶವನ್ನು ಕಳುಹಿಸಿದನು.

ಯೋವಾಬನು ಊರೀಯನನ್ನು ದಾವೀದನ ಬಳಿಗೆ ಕಳುಹಿಸಿದನು. ಊರೀಯನು ದಾವೀದನ ಬಳಿಗೆ ಬಂದನು. ದಾವೀದನು ಊರೀಯನ ಜೊತೆಯಲ್ಲಿ ಮಾತನಾಡಿ, ಯೋವಾಬನು ಹೇಗಿದ್ದಾನೆ? ಸೈನಿಕರು ಹೇಗಿದ್ದಾರೆ? ಯುದ್ಧವು ಹೇಗೆ ನಡೆಯುತ್ತಿದೆ? ಎಂದು ಕೇಳಿದನು. ನಂತರ ದಾವೀದನು ಊರೀಯನಿಗೆ, “ಮನೆಗೆ ಹೋಗಿ ವಿಶ್ರಾಂತಿಯನ್ನು ಪಡೆ” ಎಂದನು.

ಊರೀಯನು ರಾಜನ ಮನೆಯನ್ನು ಬಿಟ್ಟುಹೋದನು. ಊರೀಯನಿಗೆ ರಾಜನು ಕೊಡುಗೆಗಳನ್ನು ಸಹ ಕಳುಹಿಸಿದನು. ಆದರೆ ಊರೀಯನು ಮನೆಗೆ ಹೋಗದೆ ಅರಮನೆಯ ಹೊರಬಾಗಿಲಿನಲ್ಲಿ ರಾಜನ ಸೇವಕರೊಂದಿಗೆ ಮಲಗಿದನು. 10 ಸೇವಕರು ದಾವೀದನಿಗೆ, “ಊರಿಯನು ಮನೆಗೆ ಹೋಗಲೇ ಇಲ್ಲ” ಎಂದು ಹೇಳಿದರು.

ಆಗ ದಾವೀದನು, “ನೀನು ದೀರ್ಘ ಪ್ರಯಾಣದಿಂದ ಬಂದಿರುವೆ. ನೀನು ಏಕೆ ಮನೆಗೆ ಹೋಗಲಿಲ್ಲ?” ಎಂದು ಊರೀಯನನ್ನು ಕೇಳಿದನು.

11 ಊರೀಯನು ದಾವೀದನಿಗೆ, “ಪವಿತ್ರ ಪೆಟ್ಟಿಗೆಯೂ ಇಸ್ರೇಲಿನ ಮತ್ತು ಯೆಹೂದದ ಸೈನಿಕರೂ ಗುಡಾರಗಳಲ್ಲಿ ನೆಲೆಸಿದ್ದಾರೆ. ನನ್ನ ಒಡೆಯನಾದ ಯೋವಾಬನು ಮತ್ತು ನನ್ನ ರಾಜನ ಸೇವಕರು ಹೊಲದಲ್ಲಿ ಪಾಳೆಯ ಮಾಡಿಕೊಂಡಿದ್ದಾರೆ. ಆದ್ದರಿಂದ ಅನ್ನಪಾನಗಳನ್ನು ತೆಗೆದುಕೊಳ್ಳುವುದಕ್ಕೂ ಪತ್ನಿಯ ಜೊತೆಯಲ್ಲಿ ಮಲಗುವುದಕ್ಕೂ ನಾನು ಮನೆಗೆ ಹೋಗುವುದು ಸರಿಯಲ್ಲ. ನಿನ್ನಾಣೆ, ನಿನ್ನ ಜೀವದಾಣೆ, ನಾನು ಇಂಥದನ್ನು ಮಾಡುವುದೇ ಇಲ್ಲ.” ಎಂದು ಹೇಳಿದನು.

12 ದಾವೀದನು ಊರೀಯನಿಗೆ, “ಈ ದಿನ ಇಲ್ಲಿಯೇ ಇರು. ನಾಳೆ ನಿನ್ನನ್ನು ಯುದ್ಧಕ್ಕೆ ಕಳುಹಿಸುತ್ತೇನೆ” ಎಂದು ಹೇಳಿದನು.

ಊರೀಯನು ಅಂದು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು. ಅಂದರೆ ಮಾರನೆಯ ದಿನದ ಬೆಳಗಿನವರೆಗೆ ಅಲ್ಲೇ ಇದ್ದನು. 13 ಆಗ ದಾವೀದನು ತನ್ನನ್ನು ಬಂದು ಕಾಣುವಂತೆ ಊರೀಯನಿಗೆ ಹೇಳಿ ಕಳುಹಿಸಿದನು; ಊರೀಯನು ದಾವೀದನೊಂದಿಗೆ ಕುಡಿದು ಊಟ ಮಾಡಿದನು. ದಾವೀದನು ಊರೀಯನನ್ನು ಮತ್ತನನ್ನಾಗಿ ಮಾಡಿದನು. ಆದರೂ ಊರೀಯನು ಮನೆಗೆ ಹೋಗಲಿಲ್ಲ. ಅಂದು ಸಂಜೆ ರಾಜನ ಮನೆಯ ಹೊರಬಾಗಿಲಿನಲ್ಲಿ ಸೇವಕರೊಂದಿಗೆ ಮಲಗಲು ಹೋದನು.

ಊರೀಯನನ್ನು ಕೊಲ್ಲಲು ದಾವೀದನ ಉಪಾಯ

14 ಮಾರನೆಯ ದಿನ ಬೆಳಿಗ್ಗೆ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದನು. ದಾವೀದನು ಆ ಪತ್ರವನ್ನು ಊರೀಯನ ಕೈಯಿಂದ ಕಳುಹಿಸಿಕೊಟ್ಟನು. 15 ದಾವೀದನು ಆ ಪತ್ರದಲ್ಲಿ, “ಯುದ್ಧವು ಹೆಚ್ಚು ಭೀಕರವಾಗಿ ನಡೆಯುವ ಕಡೆ ಊರೀಯನನ್ನು ಮುಂದಿನ ಸಾಲಿನಲ್ಲಿ ನಿಲ್ಲಿಸು. ಅವನನ್ನು ಒಬ್ಬಂಟಿಗನನ್ನಾಗಿ ಬಿಟ್ಟುಬಿಡಿ. ಅವನು ಯುದ್ಧದಲ್ಲಿ ಕೊಲ್ಲಲ್ಪಡಲಿ” ಎಂದು ಬರೆದಿದ್ದನು.

16 ಅಮ್ಮೋನಿಯರಲ್ಲಿ ಅತ್ಯಂತ ಧೈರ್ಯಶಾಲಿಗಳು ಆ ನಗರದಲ್ಲಿ ಎಲ್ಲಿರುವರೆಂಬುದನ್ನು ಯೋವಾಬನು ಗುರುತಿಸಿದನು. ಆ ಸ್ಥಳಕ್ಕೆ ಕಳುಹಿಸಲು ಊರೀಯನನ್ನು ಆರಿಸಿಕೊಂಡನು. 17 ಯೋವಾಬನ ವಿರುದ್ಧ ಹೋರಾಡಲು ಆ ನಗರದ[b] ಜನರು ಹೊರಗೆ ಬಂದು ದಾವೀದನ ಕೆಲವು ಜನರನ್ನು ಕೊಂದರು. ಹಿತ್ತಿಯನಾದ ಊರೀಯನೂ ಅವರಲ್ಲೊಬ್ಬನಾಗಿದ್ದನು.

18 ಅನಂತರ ಯೋವಾಬನು ತನ್ನ ಸಂದೇಶಕರಲ್ಲಿ ಒಬ್ಬನನ್ನು ಕರೆದು, “ಯುದ್ಧದಲ್ಲಿ ಸಂಭವಿಸಿದ ಎಲ್ಲಾ ವಿವರಗಳನ್ನು ದಾವೀದನಿಗೆ ತಿಳಿಸು. 19 ನೀನು ಹೇಳಿ ಮುಗಿಸಿದ ಮೇಲೆ 20 ರಾಜನು ತಳಮಳಗೊಂಡು, ‘ಯೋವಾಬನ ಸೈನ್ಯವು ಯುದ್ಧಮಾಡುವುದಕ್ಕಾಗಿ ನಗರದ ಹತ್ತಿರಕ್ಕೆ ಏಕೆ ಹೋಯಿತು? ನಗರದ ಗೋಡೆಗಳ ಮೇಲಿರುವ ಜನರು, ಕೆಳಗಿರುವ ಜನರ ಮೇಲೆ ಬಾಣಗಳನ್ನು ಪ್ರಯೋಗಿಸಬಲ್ಲರೆಂಬುದು ಅವನಿಗೆ ಖಂಡಿತವಾಗಿಯೂ ತಿಳಿದಿದೆ. 21 ಯೆರುಬ್ಬೆಷೆತನ ಮಗನಾದ ಅಬೀಮೆಲೆಕನನ್ನು ಯಾರು ಕೊಂದರೆಂಬುದು ನಿಮಗೆ ಗೊತ್ತಿಲ್ಲವೇ? ಅಬೀಮೆಲೆಕನ ಮೇಲೆ ಬೀಸುವ ಕಲ್ಲನ್ನು ನಗರದ ಗೋಡೆಯ ಮೇಲಿನಿಂದ ಎಸೆದವಳು ತೇಬೇಚಿನ ಒಬ್ಬ ಹೆಂಗಸಲ್ಲವೇ? ನೀವು ಗೋಡೆಯ ಹತ್ತಿರಕ್ಕೆ ಏಕೆ ಹೋದಿರಿ?’ ಎಂದು ಹೇಳಬಹುದು. ಆಗ ನೀನು, ‘ಹಿತ್ತಿಯನಾದ ನಿನ್ನ ಸೇವಕ ಊರೀಯನು ಸಹ ಸತ್ತುಹೋದನು’ ಎಂದು ಉತ್ತರಿಸಬೇಕು” ಎಂದು ಹೇಳಿ ಕಳುಹಿಸಿದನು.

22 ಯೋವಾಬನು ತಿಳಿಸಲು ಹೇಳಿದ್ದನ್ನೆಲ್ಲವನ್ನೂ ಸಂದೇಶಕನು ದಾವೀದನಿಗೆ ತಿಳಿಸಿದನು. 23 ಸಂದೇಶಕನು ದಾವೀದನಿಗೆ, “ಅಮ್ಮೋನಿಯರು ಮೈದಾನದಲ್ಲಿ ನಮ್ಮ ಮೇಲೆ ಆಕ್ರಮಣ ಮಾಡಿದರು. ಆದರೆ ನಾವು ಅವರೊಡನೆ ಹೋರಾಡಿ ನಗರದ ಬಾಗಿಲಿನವರೆಗೂ ಅಟ್ಟಿಸಿಕೊಂಡು ಹೋದೆವು. 24 ನಗರದ ಗೋಡೆಯ ಮೇಲಿದ್ದ ಜನರು ನಿಮ್ಮ ಸೈನಿಕರ ಮೇಲೆ ಬಾಣಗಳನ್ನು ಎಸೆದರು. ನಿಮ್ಮ ಸೈನಿಕರಲ್ಲಿ ಕೆಲವರನ್ನು ಕೊಂದರು. ಹಿತ್ತಿಯನಾದ ನಿನ್ನ ಸೈನಿಕ ಊರೀಯನೂ ಸಹ ಸತ್ತುಹೋದನು” ಎಂದು ಹೇಳಿದನು.

25 ದಾವೀದನು ಸಂದೇಶಕನಿಗೆ, “ನೀನು ಹೋಗಿ ಯೋವಾಬನಿಗೆ: ‘ಇದರಿಂದ ನೀನು ತಳಮಳಗೊಳ್ಳಬೇಡ. ಒಂದೇ ಖಡ್ಗವು ಈ ಹೊತ್ತು ಒಬ್ಬನನ್ನು ಕೊಂದರೆ, ಇನ್ನೊಂದು ದಿನ ಇನ್ನೊಬ್ಬನನ್ನು ಕೊಲ್ಲುವುದು. ರಬ್ಬ ನಗರದ ಮೇಲೆ ಧೈರ್ಯವಾಗಿ ಆಕ್ರಮಣಮಾಡು. ಆಗ ನೀನು ನಗರವನ್ನು ಗೆಲ್ಲುವೆ!’ ಈ ಮಾತುಗಳಿಂದ ಯೋವಾಬನನ್ನು ಹುರಿದುಂಬಿಸು” ಎಂಬುದಾಗಿ ಹೇಳಿದನು.

ದಾವೀದನು ಬತ್ಷೆಬೆಳನ್ನು ಮದುವೆಯಾದನು

26 ತನ್ನ ಗಂಡನಾದ ಊರೀಯನು ಸತ್ತನೆಂಬ ಸುದ್ದಿಯು ಬತ್ಷೆಬೆಳಿಗೆ ತಿಳಿಯಿತು. ಆಗ ಅವಳು ತನ್ನ ಗಂಡನಿಗಾಗಿ ಗೋಳಾಡಿದಳು. 27 ಅವಳು ತನ್ನ ಶೋಕಕಾಲವನ್ನು ಮುಗಿಸಿದ ನಂತರ, ಅವಳನ್ನು ತನ್ನ ಮನೆಗೆ ಕರೆತರಲು ದಾವೀದನು ಸೇವಕರನ್ನು ಕಳುಹಿಸಿದನು. ಅವಳು ದಾವೀದನ ಪತ್ನಿಯಾದಳು. ಅವಳು ದಾವೀದನಿಂದ ಒಂದು ಗಂಡುಮಗುವಿಗೆ ಜನ್ಮನೀಡಿದಳು. ದಾವೀದನು ಮಾಡಿದ ಈ ಕೆಟ್ಟಕಾರ್ಯವು ಯೆಹೋವನಿಗೆ ದುಃಖವನ್ನುಂಟುಮಾಡಿತು.

2 ಕೊರಿಂಥದವರಿಗೆ 4

ಮಡಕೆಗಳಲ್ಲಿರುವ ಆತ್ಮಿಕ ಭಂಡಾರ

ದೇವರು ತನ್ನ ಕೃಪೆಯಿಂದ ಈ ಸೇವೆಯನ್ನು ನಮಗೆ ಒಪ್ಪಿಸಿದ್ದಾನೆ. ಆದ್ದರಿಂದ ನಾವು ಧೈರ್ಯಗೆಡುವುದಿಲ್ಲ. ರಹಸ್ಯವಾದ ಮತ್ತು ನಾಚಿಕೆಕರವಾದ ಮಾರ್ಗಗಳಿಗೆ ನಾವು ವಿಮುಖರಾಗಿದ್ದೇವೆ. ನಾವು ಕುತಂತ್ರವನ್ನು ಉಪಯೋಗಿಸುವುದೂ ಇಲ್ಲ, ದೇವರ ಉಪದೇಶವನ್ನು ಬದಲಾಯಿಸುವುದೂ ಇಲ್ಲ. ನಾವು ಸತ್ಯವನ್ನು ಸ್ಪಷ್ಟವಾಗಿ ಬೋಧಿಸುತ್ತೇವೆ. ನಾವು ಯಾರೆಂಬುದನ್ನು ಜನರಿಗೆ ಈ ರೀತಿ ತೋರಿಸಿಕೊಡುತ್ತೇವೆ. ಹೀಗೆ ನಾವು ದೇವರ ಸಮ್ಮುಖದಲ್ಲಿ ಎಂಥಾ ಜನರಾಗಿದ್ದೇವೆ ಎಂಬುದನ್ನು ಅವರು ತಮ್ಮ ಹೃದಯಗಳಲ್ಲಿ ತಿಳಿದುಕೊಳ್ಳಬಲ್ಲರು. ನಾವು ಬೋಧಿಸುವ ಸುವಾರ್ತೆಯು ಮರೆಯಾಗಿರಬಹುದು. ಆದರೆ ನಾಶನದ ಮಾರ್ಗದಲ್ಲಿರುವವರಿಗೆ ಮಾತ್ರ ಅದು ಮರೆಯಾಗಿದೆ. ಈ ಲೋಕದ ಅಧಿಪತಿಯು (ಸೈತಾನನು) ನಂಬದವರ ಮನಸ್ಸುಗಳನ್ನು ಕುರುಡುಗೊಳಿಸಿದ್ದಾನೆ. ಕ್ರಿಸ್ತನ ಮಹಿಮೆಯ ವಿಷಯವಾದ ಸುವಾರ್ತೆಯ ಬೆಳಕನ್ನು (ಸತ್ಯವನ್ನು) ಅವರು ಕಾಣಲಾರರು. ಕ್ರಿಸ್ತನೊಬ್ಬನೇ ದೇವರಿಗೆ ಪ್ರತಿರೂಪವಾಗಿದ್ದಾನೆ. ನಾವು ನಮ್ಮ ಬಗ್ಗೆ ಬೋಧಿಸುವುದಿಲ್ಲ. ಆದರೆ ಯೇಸು ಕ್ರಿಸ್ತನೇ ಪ್ರಭುವೆಂದು ಮತ್ತು ಯೇಸುವಿಗೋಸ್ಕರ ನಿಮ್ಮ ಸೇವಕರಾಗಿದ್ದೇವೆಂದು ಬೋಧಿಸುತ್ತೇವೆ. “ಬೆಳಕು ಕತ್ತಲೆಯೊಳಗಿಂದ ಪ್ರಕಾಶಿಸಲಿ!” ಎಂದು ದೇವರು ಒಮ್ಮೆ ಹೇಳಿದ್ದಾನೆ. ಈ ದೇವರೇ ನಮ್ಮ ಹೃದಯಗಳಲ್ಲಿ ತನ್ನ ಬೆಳಕನ್ನು ಬೆಳಗಿಸಿದ್ದಾನೆ. ಕ್ರಿಸ್ತನ ಮುಖದಲ್ಲಿರುವ ದೇವರ ಮಹಿಮೆಯನ್ನು ನಮಗೆ ತಿಳಿಯಪಡಿಸುವುದರ ಮೂಲಕ ಆತನು ನಮಗೆ ಬೆಳಕನ್ನು ಕೊಟ್ಟಿದ್ದಾನೆ.

ನಮಗೆ ಈ ನಿಕ್ಷೇಪವು ದೇವರಿಂದ ದೊರೆತಿದೆ. ನಾವಾದರೋ ನಿಕ್ಷೇಪವನ್ನು ತುಂಬಿ ಕೊಂಡಿರುವ ಕೇವಲ ಮಡಕೆಗಳಂತಿದ್ದೇವೆ. ಈ ಮಹಾಶಕ್ತಿಯು ಬಂದದ್ದು ದೇವರಿಂದಲೇ ಹೊರತು ನಮ್ಮಿಂದಲ್ಲವೆಂಬುದನ್ನು ಇದು ತೋರಿಸುತ್ತದೆ. ನಮ್ಮ ಸುತ್ತಮುತ್ತಲೆಲ್ಲಾ ಇಕ್ಕಟ್ಟುಗಳಿವೆ, ಆದರೆ ಸೋತುಹೋಗಿಲ್ಲ. ಅನೇಕಸಲ, ಏನು ಮಾಡಬೇಕೋ ನಮಗೆ ತಿಳಿಯದು, ಆದರೂ ನಾವು ಧೈರ್ಯಗೆಡುವುದಿಲ್ಲ. ನಾವು ಹಿಂಸೆಗೆ ಗುರಿಯಾದೆವು, ಆದರೆ ದೇವರು ನಮ್ಮನ್ನು ತೊರೆದುಬಿಡಲಿಲ್ಲ. ಕೆಲವು ಸಲ ನಮಗೆ ನೋವಾಯಿತು, ಆದರೂ ನಾಶವಾಗಲಿಲ್ಲ. 10 ನಮ್ಮ ದೇಹಗಳಲ್ಲಿ ಯೇಸುವಿನ ಜೀವವು ತೋರಿಬರಲೆಂದು ಆತನ ಮರಣಾವಸ್ಥೆಯನ್ನು ಅನುಭವಿಸುತ್ತಿದ್ದೇವೆ. 11 ನಾವು ಜೀವಂತವಾಗಿದ್ದರೂ ಯೇಸುವಿಗೋಸ್ಕರ ಯಾವಾಗಲೂ ಮರಣದ ಅಪಾಯದಲ್ಲಿದ್ದೇವೆ. ಸತ್ತುಹೋಗುವ ನಮ್ಮ ದೇಹಗಳಲ್ಲಿ ಆತನ ಜೀವವು ಕಾಣಬರಲೆಂದು ಇದು ನಮಗೆ ಸಂಭವಿಸುತ್ತದೆ. 12 ಆದ್ದರಿಂದ ಮರಣವು ನಮ್ಮಲ್ಲಿ ಕಾರ್ಯಮಾಡುತ್ತಿದೆ, ಆದರೆ ನಿಮ್ಮಲ್ಲಿ ಜೀವವು ಕಾರ್ಯಮಾಡುತ್ತಿದೆ.

13 “ನಾನು ನಂಬಿದ್ದರಿಂದಲೇ ಮಾತಾಡಿದೆನು.” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ನಮ್ಮ ನಂಬಿಕೆಯು ಸಹ ಅದೇ ರೀತಿಯಲ್ಲಿದೆ. ನಾವು ನಂಬುವುದರಿಂದಲೇ ಮಾತಾಡುತ್ತೇವೆ. 14 ಪ್ರಭುವಾದ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರು ನಮ್ಮನ್ನು ಸಹ ಕ್ರಿಸ್ತನೊಂದಿಗೆ ಎಬ್ಬಿಸುತ್ತಾನೆ ಎಂಬುದು ನಮಗೆ ಗೊತ್ತಿದೆ. ದೇವರು ನಮ್ಮನ್ನು ನಿಮ್ಮ ಜೊತೆಯಲ್ಲಿ ತನ್ನ ಮುಂದೆ ನಿಲ್ಲಿಸುವನು. 15 ಇವುಗಳೆಲ್ಲ ನಿಮಗೋಸ್ಕರವಾಗಿಯೇ. ಹೀಗೆ ದೇವರ ಕೃಪೆಯು ಹೆಚ್ಚುಹೆಚ್ಚು ಜನರಿಗೆ ಕೊಡಲ್ಪಡುವುದು. ಇದರಿಂದಾಗಿ, ಹೆಚ್ಚುಹೆಚ್ಚು ಜನರು ದೇವರ ಮಹಿಮೆಗಾಗಿ ಕೃತಜ್ಞತಾಸುತ್ತಿ ಸಲ್ಲಿಸುವರು.

ನಂಬಿಕೆಯ ಜೀವನ

16 ಆದಕಾರಣವೇ, ನಾವೆಂದಿಗೂ ಬಲಹೀನರಾಗುವುದಿಲ್ಲ. ನಮ್ಮ ಭೌತಿಕ ದೇಹಕ್ಕೆ ವಯಸ್ಸಾಗುತ್ತಿದೆ ಮತ್ತು ಅದು ಬಲಹೀನವಾಗುತ್ತಿದೆ. ಆದರೆ ನಮ್ಮ ಆಂತರ್ಯವು ಪ್ರತಿದಿನ ಹೊಸದಾಗುತ್ತಿದೆ. 17 ಸ್ವಲ್ಪಕಾಲದವರೆಗೆ ನಮಗೆ ಚಿಕ್ಕಪುಟ್ಟ ಇಕ್ಕಟ್ಟುಗಳಿರುತ್ತವೆ. ಆದರೆ ನಿತ್ಯವಾದ ಮಹಿಮೆಯನ್ನು ಹೊಂದಿಕೊಳ್ಳಲು ಅವು ನಮಗೆ ಸಹಾಯಕವಾಗಿವೆ. ಆ ಮಹಿಮೆಯು ಇಂದಿನ ಇಕ್ಕಟ್ಟುಗಳಿಗಿಂತಲೂ ಮಹತ್ವವುಳ್ಳದ್ದಾಗಿದೆ. 18 ಆದ್ದರಿಂದ ನಮಗೆ ಕಾಣುವಂಥವುಗಳ ಬಗ್ಗೆ ಯೋಚಿಸದೆ ನಮಗೆ ಕಾಣದಿರುವಂಥವುಗಳ ಬಗ್ಗೆ ಯೋಚಿಸುತ್ತೇವೆ. ನಮಗೆ ಕಾಣುವಂಥವುಗಳು ಕೇವಲ ಸ್ವಲ್ಪಕಾಲ ಮಾತ್ರ ಇರುತ್ತವೆ. ಆದರೆ ನಮಗೆ ಕಾಣದಂಥವುಗಳು ಎಂದೆಂದಿಗೂ ಇರುತ್ತವೆ.

ಯೆಹೆಜ್ಕೇಲ 18

ನೀತಿಯ ನ್ಯಾಯತೀರ್ಪು

18 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, “ಇಸ್ರೇಲ್ ದೇಶದ ಕುರಿತಾದ ಈ ಗಾದೆಯನ್ನು ನೀವೆಲ್ಲರೂ ಮರುನುಡಿಯುವುದೇಕೆ?

‘ಹೆತ್ತವರು ಹುಳಿ ದ್ರಾಕ್ಷಿಹಣ್ಣನ್ನು ತಿಂದಾಗ
    ಮಕ್ಕಳ ಬಾಯಿ ಹುಳಿಯಾಗುವುದು.’[a]

ಆದರೆ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿನ ಜನರು ಇನ್ನು ಮುಂದಕ್ಕೆ ಈ ಗಾದೆಯು ಸತ್ಯವೆಂದು ನೆನಸುವದಿಲ್ಲ. ಎಲ್ಲಾ ಪ್ರಾಣಗಳು ನನ್ನವೇ. ತಂದೆಯ ಪ್ರಾಣವೂ ಮಗನ ಪ್ರಾಣವೂ ನನ್ನವೇ. ಪಾಪಮಾಡುವವನು ಮಾತ್ರ ಸಾಯುವನು.

“ಒಬ್ಬ ವ್ಯಕ್ತಿ ನೀತಿವಂತನಾಗಿದ್ದರೆ ಅವನು ಬಾಳುವನು. ಆ ಮನುಷ್ಯನು ಜನರನ್ನು ಸರಿಯಾದ ರೀತಿಯಲ್ಲಿ ನೋಡುವನು. ಆ ನೀತಿವಂತ ಮನುಷ್ಯನು ಬೆಟ್ಟಗಳಿಗೆ ಹೋಗಿ ಅಲ್ಲಿ ಸುಳ್ಳು ದೇವರಿಗೆ ಅರ್ಪಿಸಿದ ಆಹಾರದಲ್ಲಿ ಪಾಲು ತೆಗೆದುಕೊಳ್ಳುವದಿಲ್ಲ. ಇಸ್ರೇಲಿನಲ್ಲಿರುವ ಆ ಹೊಲಸು ವಿಗ್ರಹಗಳಿಗೆ ಅವನು ಪ್ರಾರ್ಥಿಸುವುದಿಲ್ಲ. ಅವನು ತನ್ನ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದಿಲ್ಲ. ತನ್ನ ಹೆಂಡತಿಯು ಮುಟ್ಟಾದಾಗ ಆಕೆಯನ್ನು ಕೂಡುವುದಿಲ್ಲ. ಆ ಒಳ್ಳೆಯ ಮನುಷ್ಯನು ಜನರ ಬಲಹೀನತೆಯನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ; ಸಾಲ ಮಾಡಿದವನ ಒತ್ತೆಯನ್ನು ಬಿಗಿಹಿಡಿಯುವುದಿಲ್ಲ; ಯಾರ ಸೊತ್ತನ್ನೂ ದರೋಡೆ ಮಾಡುವುದಿಲ್ಲ; ಹಸಿದವನಿಗೆ ಅನ್ನ ಕೊಡುವನು; ಬಟ್ಟೆಯಿಲ್ಲದವನಿಗೆ ಬಟ್ಟೆ ಕೊಡುವನು; ಅವನು ಸಾಲ ಕೊಡುವಾಗ ಬಡ್ಡಿಹಾಕುವುದಿಲ್ಲ. ಅವನು ಕೆಡುಕುಗಳನ್ನು ಮಾಡುವುದಿಲ್ಲ. ಅವನು ತನ್ನ ವ್ಯವಹಾರಗಳಲ್ಲಿ ಪ್ರತಿಯೊಬ್ಬನೊಂದಿಗೂ ಯಥಾರ್ಥವಾಗಿಯೂ ನ್ಯಾಯವಾಗಿಯೂ ಇರುವನು. ಅವನು ನನ್ನ ನಿಯಮಗಳಿಗನುಸಾರವಾಗಿ ಜೀವಿಸುವನು ಮತ್ತು ನನ್ನ ಕಟ್ಟಳೆಗಳಿಗೆ ನಂಬಿಗಸ್ತಿಕೆಯಿಂದ ವಿಧೇಯನಾಗುವನು. ಅಂಥಾ ಮನುಷ್ಯನು ನೀತಿವಂತನಾಗಿದ್ದಾನೆ ಮತ್ತು ಅವನು ಖಂಡಿತವಾಗಿಯೂ ಬದುಕುವನು.

10 “ಆದರೆ ಒಂದುವೇಳೆ ಆ ನೀತಿವಂತನ ಮಗನು ಒಳ್ಳೆಯ ಕಾರ್ಯಗಳನ್ನು ಮಾಡದೆ ದರೋಡೆ ಮಾಡುವವನೂ ಕೊಲೆಮಾಡುವವನೂ ಆಗಿರಬಹುದು. 11 ಅವನ ತಂದೆಯು ಈ ಪಾಪಗಳಿಂದ ದೂರವಿದ್ದಾಗ್ಯೂ, ಮಗನು ಈ ಪಾಪಗಳಲ್ಲಿ ಪ್ರತಿಯೊಂದನ್ನೂ ಮಾಡಿದ್ದಿರಬಹುದು. ಅವನು ಬೆಟ್ಟದ ಮೇಲೆ ಹೋಗಿ ಅಲ್ಲಿ ವಿಗ್ರಹಗಳಿಗರ್ಪಿಸಿದ ನೈವೇದ್ಯದಲ್ಲಿ ಪಾಲು ತೆಗೆದುಕೊಳ್ಳಬಹುದು. ಆ ಕೆಟ್ಟ ಮಗನು ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ನಡೆಸಿದ್ದಿರಬಹುದು. 12 ಬಡ, ನಿಸ್ಸಹಾಯಕರಾದ ಜನರಿಗೆ ಕಿರುಕುಳ ಕೊಟ್ಟಿರಬಹುದು. ಜನರ ನಿಸ್ಸಹಾಯಕತೆಯ ಪ್ರಯೋಜನ ಪಡೆಯುತ್ತಿರಬಹುದು. ಒತ್ತೆಗೆ ತೆಗೆದುಕೊಂಡ ವಸ್ತುವನ್ನು ಹಿಂದಕ್ಕೆ ಕೊಡದೆ ಇದ್ದಿರಬಹುದು. ಆ ಮಗನು ವಿಗ್ರಹಗಳಿಗೆ ಪ್ರಾರ್ಥಿಸಿ ಇನ್ನೂ ಅನೇಕ ಭಯಂಕರ ಕೃತ್ಯಗಳನ್ನೂ ಮಾಡಿದ್ದಿರಬಹುದು. 13 ಆ ಕೆಟ್ಟ ಮಗನಿಂದ ಯಾರಾದರೂ ಸಾಲ ತೆಗೆದುಕೊಂಡಿದ್ದರೆ ಅವನು ಅವರಿಂದ ಬಡ್ಡಿಯನ್ನು ಕಡ್ಡಾಯವಾಗಿ ವಸೂಲು ಮಾಡಿದ್ದಿರಬಹುದು. ಹೀಗಿರುವದರಿಂದ ಆ ಕೆಟ್ಟ ಮಗನು ಹೆಚ್ಚುಕಾಲ ಬದುಕುವುದಿಲ್ಲ. ಅವನು ಭಯಂಕರ ಕೃತ್ಯಗಳನ್ನು ಮಾಡಿರುವದರಿಂದ ಕೊಲ್ಲಲ್ಪಡುವನು. ಅವನ ಮರಣಕ್ಕೆ ಅವನೇ ಜವಾಬ್ದಾರನು.

14 “ಇಗೋ, ಆ ಕೆಟ್ಟ ಮಗನಿಗೆ ಒಬ್ಬ ಮಗನಿರಬಹುದು. ತಂದೆ ಮಾಡುವ ದುಷ್ಕೃತ್ಯಗಳನ್ನು ನೋಡಿದ ಅವನು ತಂದೆಯಂತೆ ಜೀವಿಸದಿರಬಹುದು. 15 ಈ ಒಳ್ಳೆಯ ಮಗನು ಬೆಟ್ಟಕ್ಕೆ ಹೋಗಿ ಅಲ್ಲಿ ವಿಗ್ರಹಗಳಿಗೆ ಅರ್ಪಿಸಿದ ನೈವೇದ್ಯವನ್ನು ತಿನ್ನುವುದಿಲ್ಲ. ಅವನು ಇಸ್ರೇಲಿನ ಹೊಲಸು ವಿಗ್ರಹಗಳಿಗೆ ಪ್ರಾರ್ಥಿಸುವುದಿಲ್ಲ. ಅವನು ತನ್ನ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದಿಲ್ಲ. 16 ಆ ಒಳ್ಳೆಯ ಮಗನು ಯಾರ ಮೇಲೂ ದಬ್ಬಾಳಿಕೆ ನಡೆಸುವುದಿಲ್ಲ. ಅವನು ಒತ್ತೆಯಿಲ್ಲದೆ ಸಾಲಕೊಡುವನು. ಅವನು ಯಾರನ್ನೂ ದರೋಡೆ ಮಾಡುವುದಿಲ್ಲ. ಅವನು ಹಸಿದವರಿಗೆ ಊಟ ಕೊಡುವನು; ಬಟ್ಟೆಯಿಲ್ಲದವರಿಗೆ ಬಟ್ಟೆಯನ್ನು ಕೊಡುವನು. 17 ಅವನು ಬಡವರಿಗೆ ನೋವು ಮಾಡುವುದಿಲ್ಲ. ಅವನು ಹಣವನ್ನು ಸಾಲಕೊಡುವಾಗ ಬಡ್ಡಿಹಾಕುವುದಿಲ್ಲ. ಅವನು ನನ್ನ ಕಟ್ಟಳೆಗಳಿಗೆ ವಿಧೇಯನಾಗುವನು. ಮತ್ತು ನನ್ನ ನಿಯಮಗಳನ್ನು ಅನುಸರಿಸುವನು. ಈ ಒಳ್ಳೆಯ ಮಗನು ತಂದೆಯ ದುಷ್ಟತನದ ಕಾರಣಕ್ಕಾಗಿ ಮರಣಶಿಕ್ಷೆಯನ್ನು ಅನುಭವಿಸುವದಿಲ್ಲ. ಆ ಒಳ್ಳೆಯ ಮಗನು ಬಾಳುವನು. 18 ತಂದೆಯು ಜನರನ್ನು ಹೆದರಿಸಿಯಾಗಲಿ ದರೋಡೆ ಮಾಡಿಯಾಗಲಿ ವಸ್ತುಗಳನ್ನು ತೆಗೆದುಕೊಂಡಿರಬಹುದು. ತನ್ನ ಜನರ ಮಧ್ಯದಲ್ಲಿ ಕೆಟ್ಟದಾಗಿರುವುದನ್ನು ಅವನು ಮಾಡಿರಬಹುದು. ಆ ತಂದೆಯು ತನ್ನ ಪಾಪಗಳ ಸಲುವಾಗಿ ಸಾಯುವನು. ಆದರೆ ತಂದೆಯ ಪಾಪಗಳಿಗಾಗಿ ಮಗನು ಶಿಕ್ಷಿಸಲ್ಪಡುವುದಿಲ್ಲ.

19 “‘ತಂದೆಯ ಪಾಪಗಳಿಗಿರುವ ಪ್ರತಿಫಲಗಳಲ್ಲಿ ಯಾವುದನ್ನೂ ಮಗನು ಹೊತ್ತುಕೊಳ್ಳದಿರುವದೇಕೆ?’ ಎಂದು ನೀವು ಕೇಳಬಹುದು. ಮಗನು ನ್ಯಾಯವಾದುದ್ದನ್ನು ಮತ್ತು ಸರಿಯಾದುದ್ದನ್ನು ಮಾಡಿದ್ದಾನೆ. ಅವನು ಎಚ್ಚರಿಕೆಯಿಂದ ನನ್ನ ಎಲ್ಲಾ ನಿಯಮಗಳಿಗೆ ವಿಧೇಯನಾಗಿದ್ದನು. ಆದ್ದರಿಂದ ಅವನು ಬಾಳುವನು. 20 ಯಾರು ಪಾಪ ಮಾಡುತ್ತಾರೋ ಅವರೇ ಮರಣಶಿಕ್ಷೆ ಹೊಂದುವರು. ತಂದೆಯ ಪಾಪಗಳ ಪ್ರತಿಫಲಗಳಲ್ಲಿ ಯಾವುದನ್ನೂ ಮಗನು ಹೊತ್ತುಕೊಳ್ಳುವುದಿಲ್ಲ. ಮತ್ತು ಮಗನ ಪಾಪಗಳ ಪ್ರತಿಫಲಗಳಲ್ಲಿ ಯಾವುದನ್ನೂ ತಂದೆಯು ಹೊತ್ತುಕೊಳ್ಳುವದಿಲ್ಲ. ಒಬ್ಬ ಒಳ್ಳೆ ಮನುಷ್ಯನ ನೀತಿಯು ಅವನಿಗೇ ಸೇರಿದ್ದು. ಕೆಟ್ಟ ಮನುಷ್ಯನ ದುಷ್ಟತ್ವವೂ ಆ ಕೆಟ್ಟ ಮನುಷ್ಯನಿಗೆ ಸೇರಿದ್ದಾಗಿದೆ.

21 “ಒಂದುವೇಳೆ ದುಷ್ಟನೊಬ್ಬನು ತಾನು ಮಾಡಿದ ಎಲ್ಲಾ ಪಾಪಗಳಿಗೆ ವಿಮುಖನಾದರೆ, ನನ್ನ ಎಲ್ಲಾ ನಿಯಮಗಳಿಗೆ ವಿಧೇಯನಾದರೆ, ನ್ಯಾಯವಾದುದ್ದನ್ನೂ ಸರಿಯಾದುದ್ದನ್ನೂ ಮಾಡಿದರೆ, ಅವನು ಸಾಯದೆ ಬದುಕುವನು. 22 ದೇವರು ಅವನ ಹಿಂದಿನ ಪಾಪಗಳನ್ನು ನೆನಪಿಗೆ ತರುವದಿಲ್ಲ. ಅವನು ತಾನು ಮಾಡಿದ ಒಳ್ಳೆಯ ಕಾರ್ಯಗಳ ನಿಮಿತ್ತ ಬದುಕುವನು.”

23 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನನಗೆ ಪಾಪಿಗಳು ಸಾಯುವದರಲ್ಲಿ ಇಷ್ಟವಿಲ್ಲ. ಅವರು ತಮ್ಮ ಜೀವಿತವನ್ನು ಬದಲಾಯಿಸಿ ಜೀವವನ್ನು ಹೊಂದಬೇಕೆಂಬುದೇ ನನ್ನ ಅಪೇಕ್ಷೆಯಾಗಿದೆ.

24 “ಒಂದುವೇಳೆ ಒಳ್ಳೆಯವನೊಬ್ಬನು ತನ್ನ ಒಳ್ಳೆಯತನವನ್ನು ಬಿಟ್ಟು ಪಾಪ ಮಾಡಬಹುದು; ದುಷ್ಟರು ಮಾಡುವ ಅಸಹ್ಯಕೃತ್ಯಗಳನ್ನೆಲ್ಲ ಮಾಡಬಹುದು. ಅವನು ಹೀಗೆ ಮಾಡುತ್ತಾ ಬದುಕಲು ಸಾಧ್ಯವೇ ಇಲ್ಲ! ಅವನು ಅಪನಂಬಿಗಸ್ತನಾದ್ದರಿಂದ ಮತ್ತು ಪಾಪ ಮಾಡಿದ್ದರಿಂದ ದೇವರು ಅವನ ಎಲ್ಲಾ ಒಳ್ಳೆಯ ಕಾರ್ಯಗಳನ್ನೂ ಮರೆತುಬಿಡುವನು. ಅವನು ತನ್ನ ಪಾಪಗಳ ದೆಸೆಯಿಂದ ಸಾಯುವನು.”

25 ದೇವರು ಹೇಳಿದ್ದೇನೆಂದರೆ: “ಒಂದುವೇಳೆ ನೀವು ಹೇಳಬಹುದು: ‘ನನ್ನ ಒಡೆಯನಾದ ದೇವರ ಕ್ರಮವು ದೃಢವಾಗಿಲ್ಲ.’ ಆದರೆ, ಇಸ್ರೇಲಿನ ಜನರೇ, ಕೇಳಿರಿ. ನಿಮ್ಮ ನಡತೆಯೇ ದೃಢವಾಗಿಲ್ಲ. 26 ಒಬ್ಬ ಒಳ್ಳೆಯವನು ಬದಲಾವಣೆ ಹೊಂದಿ ಕೆಟ್ಟಕಾರ್ಯಗಳನ್ನು ಮಾಡಿದರೆ, ಅವನ ದುಷ್ಟತ್ವಕ್ಕಾಗಿ ಅವನು ಸಾಯಲೇಬೇಕು. 27 ಆದರೆ ಒಬ್ಬ ಪಾಪಿ ಬದಲಾವಣೆ ಹೊಂದಿ ನೀತಿವಂತನಾಗಿ ಬಾಳಿದರೆ ಅವನು ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು. 28 ತಾನು ಎಷ್ಟು ಕೆಟ್ಟವನಾಗಿ ಜೀವಿಸಿದನೆಂದು ತಿಳಿದು ನನ್ನ ಕಡೆಗೆ ತಿರುಗಿ ದುಷ್ಟತನ ಮಾಡುವದನ್ನು ನಿಲ್ಲಿಸಿದರೆ. ಅಂಥವನು ಸಾಯದೆ, ಬಾಳುವನು.”

29 ಆದರೆ ಇಸ್ರೇಲ್ ಜನರು, “ಅದು ಸರಿಯಲ್ಲ. ನನ್ನ ಒಡೆಯನಾದ ಯೆಹೋವನ ಕ್ರಮವು ದೃಢವಲ್ಲ” ಎಂದರು.

ಆಗ ದೇವರು, “ನಾನು ದೃಢವಾಗಿದ್ದೇನೆ. ನಿಮ್ಮ ನಡತೆಯೇ ದೃಢವಾಗಿಲ್ಲ. 30 ಇಸ್ರೇಲರೇ, ನಾನು ಪ್ರತಿಯೊಬ್ಬನನ್ನು ಅವನವನ ಕಾರ್ಯಗಳ ಪ್ರಕಾರ ನ್ಯಾಯತೀರಿಸುವೆನು” ಎಂದು ಹೇಳಿದನು. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಆದ್ದರಿಂದ ನನ್ನ ಬಳಿಗೆ ಬನ್ನಿರಿ, ದುಷ್ಟತನ ಮಾಡುವದನ್ನು ನಿಲ್ಲಿಸಿರಿ, ಪಾಪವು ನಿಮ್ಮ ನಾಶನಕ್ಕೆ ಕಾರಣವಾಗದಂತೆ ಎಚ್ಚರಿಕೆಯಾಗಿರಿ. 31 ನಿಮ್ಮ ದಂಗೆಕೋರತನದ ಮಾರ್ಗಗಳನ್ನೆಲ್ಲ ತೊರೆದುಬಿಟ್ಟು ನಿಮ್ಮ ಹೃದಯವನ್ನೂ ಸ್ವಭಾವವನ್ನೂ ನೂತನ ಮಾಡಿಕೊಳ್ಳಿರಿ. ಇಸ್ರೇಲ್ ಜನರೇ, ನೀವು ಮರಣವನ್ನು ಬರಮಾಡಿಕೊಳ್ಳುವುದೇಕೆ? 32 ನಿಮ್ಮನ್ನು ಸಾಯಿಸಲು ನನಗೆ ಇಷ್ಟವಿಲ್ಲ. ನೀವು ನನ್ನ ಕಡೆಗೆ ಹಿಂದಿರುಗಿ ಜೀವಿಸಿರಿ.” ಇದು ನನ್ನ ಒಡೆಯನಾದ ಯೆಹೋವನ ನುಡಿ.

ಕೀರ್ತನೆಗಳು 62-63

ರಚನೆಗಾರ: ದಾವೀದ.

62 ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವುದು.
    ಆತನಿಂದಲೇ ನನಗೆ ರಕ್ಷಣೆಯಾಗುವುದು.
ಆತನು ನನಗೆ ಬಂಡೆಯೂ ರಕ್ಷಣೆಯೂ ಕೋಟೆಯೂ ಆಗಿದ್ದಾನೆ.
    ನಾನೆಂದಿಗೂ ಕದಲೆನು.

ಇನ್ನೆಷ್ಟರವರೆಗೆ ನೀವು ನನ್ನ ಮೇಲೆ ಆಕ್ರಮಣ ಮಾಡುವಿರಿ?
ನಾನು ಬಾಗಿದ ಗೋಡೆಯಂತೆಯೂ
    ಬೀಳಲಿರುವ ಪ್ರಾಕಾರದಂತೆಯೂ ಇದ್ದೇನೆ.
ನನ್ನನ್ನು ಉನ್ನತಸ್ಥಾನದಿಂದ ಕೆಳಗಿಳಿಸಬೇಕೆಂದು
    ಅವರು ಕುತಂತ್ರ ಮಾಡುತ್ತಿದ್ದಾರೆ.
ನನ್ನ ಕುರಿತು ಸುಳ್ಳಾಡುವುದು ಅವರಿಗೆ ಸಂತೋಷ.
    ಬಾಯಿಂದ ಆಶೀರ್ವದಿಸಿ, ಹೃದಯದಲ್ಲಿ ಶಪಿಸುವರು.

ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು.
    ನನ್ನ ನಿರೀಕ್ಷೆ ದೇವರಲ್ಲಿಯೇ.
ಆತನೇ ನನಗೆ ಬಂಡೆಯೂ
    ರಕ್ಷಣೆಯೂ ಆಶ್ರಯದುರ್ಗವೂ ಆಗಿದ್ದಾನೆ.
ನನ್ನ ರಕ್ಷಣೆಯೂ ಮಾನವೂ ದೇವರೇ.
    ಆತನೇ ನನಗೆ ಭದ್ರವಾದ ದುರ್ಗವೂ ಆಶ್ರಯಸ್ಥಾನವೂ ಆಗಿದ್ದಾನೆ.
ಜನರೇ, ಯಾವಾಗಲೂ ದೇವರನ್ನೇ ನಂಬಿಕೊಂಡಿರಿ.
    ನಿಮ್ಮ ಕಷ್ಟಗಳನ್ನೆಲ್ಲಾ ಆತನಿಗೆ ಹೇಳಿಕೊಳ್ಳಿರಿ.
    ಆತನೇ ನಮ್ಮ ಆಶ್ರಯಸ್ಥಾನ.

ಸಾಮಾನ್ಯ ಜನರು ಕೇವಲ ಉಸಿರಷ್ಟೇ.
    ಶ್ರೇಷ್ಠರು ಕೇವಲ ಕ್ಷಣಕಾಲವಷ್ಟೇ.
ತೂಗಿನೋಡಿದರೆ ಅವರು ಕೇವಲ ಶೂನ್ಯ;
    ಉಸಿರಿಗಿಂತಲೂ ಹಗುರ.
10 ಅನ್ಯಾಯದಿಂದ ಸಂಪಾದಿಸಿದ್ದರಲ್ಲಿ ನಂಬಿಕೆ ಇಡಬೇಡಿ.
    ಕದ್ದವಸ್ತುಗಳಲ್ಲಿ ಜಂಬಪಡಬೇಡಿ.
ಐಶ್ವರ್ಯವು ಅಧಿಕವಾಗುತ್ತಿದ್ದರೂ
    ಅದರಲ್ಲಿ ಮನಸ್ಸಿಡಬೇಡಿ.
11 “ಶಕ್ತಿಯೂ ದೇವರಿಂದಲೇ”
    ಎಂದು ದೇವರು ನುಡಿದಿದ್ದಾನೆ.

12 ನನ್ನ ಒಡೆಯನೇ, ನೀನು ಪ್ರೀತಿಸ್ವರೂಪನಾಗಿರುವೆ.
    ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವವನು ನೀನೇ.

ದಾವೀದನು ಯೆಹೂದದ ಅರಣ್ಯದಲ್ಲಿದ್ದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

63 ದೇವರೇ, ನೀನೇ ನನ್ನ ದೇವರು.
    ನಿನಗಾಗಿ ಕುತೂಹಲದಿಂದ ಎದುರು ನೋಡುತ್ತೇನೆ.
ನೀರಿಲ್ಲದೆ ಒಣಗಿದ ಭೂಮಿಯಂತೆ ನನ್ನ ಆತ್ಮವು ನಿನಗಾಗಿ ಬಾಯಾರಿದೆ;
    ನನ್ನ ದೇಹವು ನಿನಗಾಗಿ ಬಯಸಿದೆ.
ಹೌದು, ನಿನ್ನನ್ನು ನಿನ್ನ ಆಲಯದಲ್ಲಿ ನೋಡಿದ್ದೇನೆ,
    ನಿನ್ನ ಶಕ್ತಿಯನ್ನೂ ಮಹಿಮೆಯನ್ನೂ ಕಂಡಿದ್ದೇನೆ.
ನಿನ್ನ ಪ್ರೀತಿಯು ಜೀವಕ್ಕಿಂತಲೂ ಶ್ರೇಷ್ಠ.
    ನನ್ನ ತುಟಿಗಳು ನಿನ್ನನ್ನು ಕೊಂಡಾಡುತ್ತವೆ.
ಹೌದು, ನನ್ನ ಜೀವಮಾನವೆಲ್ಲಾ ನಿನ್ನನ್ನು ಕೊಂಡಾಡುವೆನು.
    ನಿನ್ನ ಹೆಸರಿನಲ್ಲಿ ಕೈಮುಗಿದು ಪ್ರಾರ್ಥಿಸುವೆನು.
ಮೃಷ್ಟಾನ್ನವನ್ನು ತಿಂದಿರುವವನಂತೆ ತೃಪ್ತನಾಗಿರುವೆನು.
    ನನ್ನ ಬಾಯಿ ನಿನ್ನನ್ನು ಕೊಂಡಾಡುವುದು.
ಹಾಸಿಗೆಯು ಮೇಲೆ ಮಲಗಿರುವಾಗಲೂ ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
    ಮಧ್ಯರಾತ್ರಿಯಲ್ಲಿಯೂ ನಿನ್ನನ್ನು ನೆನಸಿಕೊಳ್ಳುವೆನು.
ನಿಜವಾಗಿಯೂ ನೀನೇ ನನಗೆ ಸಹಾಯಕ.
    ನಿನ್ನ ರೆಕ್ಕೆಗಳ ಮರೆಯಲ್ಲಿ ಆನಂದಘೋಷ ಮಾಡುವೆನು.
ನನ್ನ ಆತ್ಮವು ನಿನ್ನನ್ನು ಅಂಟಿಕೊಂಡಿರುವುದು.
    ನಿನ್ನ ಬಲಗೈ ನನ್ನ ಕೈಹಿಡಿದು ನಡೆಸುವುದು.

ನನ್ನನ್ನು ಕೊಲ್ಲಬೇಕೆಂದಿರುವವರು
    ಪಾತಾಳಕ್ಕೆ ಇಳಿದುಹೋಗುವರು.
10 ಅವರು ಖಡ್ಗಗಳಿಂದ ಕೊಲ್ಲಲ್ಪಡುವರು.
    ಅವರ ಶವಗಳು ನರಿಗಳ ಪಾಲಾಗುವವು.
11 ರಾಜನಾದರೋ ತನ್ನ ದೇವರಲ್ಲಿಯೇ ಸಂತೋಷಿಸುವನು.
    ಹರಕೆಹೊತ್ತು ಅವನಿಗೆ ವಿಧೇಯರಾಗಿರುವವರು ದೇವರನ್ನು ಕೊಂಡಾಡುವರು,
    ಯಾಕೆಂದರೆ ಆ ಸುಳ್ಳುಗಾರರನ್ನೆಲ್ಲಾ ಆತನು ಸೋಲಿಸಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International