Print Page Options
Previous Prev Day Next DayNext

Chronological

Read the Bible in the chronological order in which its stories and events occurred.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 3

ಸ್ನಾನಿಕ ಯೋಹಾನನ ಉಪದೇಶ

(ಮಾರ್ಕ 1:1-8; ಲೂಕ 3:1-9,15-17; ಯೋಹಾನ 1:19-28)

ಆ ಕಾಲದಲ್ಲಿ ಸ್ನಾನಿಕ ಯೋಹಾನನು ಜುದೇಯದ ಅಡವಿಯಲ್ಲಿ ಬೋಧಿಸುವುದಕ್ಕೆ ಪ್ರಾರಂಭಿಸಿದನು. “ಪರಲೋಕರಾಜ್ಯವು ಸಮೀಪಿಸಿತು. ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ” ಎಂದು ಅವನು ಬೋಧಿಸಿದನು.

“‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಮಾಡಿರಿ;
ಆತನ ಹಾದಿಗಳನ್ನು ನೆಟ್ಟಗೆಮಾಡಿರಿ’
    ಎಂದು ಅಡವಿಯಲ್ಲಿ ಒಬ್ಬನು ಕೂಗುತ್ತಿದ್ದಾನೆ”(A)

ಎಂದು ಸ್ನಾನಿಕ ಯೋಹಾನನನ್ನೇ ಕುರಿತು ಪ್ರವಾದಿಯಾದ ಯೆಶಾಯ ಹೇಳಿದ್ದನು.

ಯೋಹಾನನ ಉಡುಪುಗಳು ಒಂಟೆಯ ಕೂದಲಿನಿಂದ ಮಾಡಲ್ಪಟ್ಟಿದ್ದವು. ಅವನಿಗೆ ಸೊಂಟದಲ್ಲಿ ತೊಗಲಿನ ನಡುಪಟ್ಟಿ ಇತ್ತು. ಅವನು ಮಿಡತೆ ಮತ್ತು ಕಾಡುಜೇನನ್ನು ಆಹಾರವಾಗಿ ತಿನ್ನುತ್ತಿದ್ದನು. ಜನರು ಯೋಹಾನನ ಉಪದೇಶವನ್ನು ಕೇಳಲು ಜೆರುಸಲೇಮಿನಿಂದಲೂ, ಜುದೇಯ ಮತ್ತು ಜೋರ್ಡನ್ ನದಿಯ ಸುತ್ತಲಿದ್ದ ಎಲ್ಲಾ ಸ್ಥಳಗಳಿಂದಲೂ ಬರುತ್ತಿದ್ದರು. ಜನರು ತಾವು ಮಾಡಿದ ಪಾಪಗಳನ್ನು ಒಪ್ಪಿಕೊಂಡ ಮೇಲೆ ಯೋಹಾನನು ಅವರಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಕೊಡುತ್ತಿದ್ದನು.

ಅನೇಕ ಫರಿಸಾಯರು ಮತ್ತು ಸದ್ದುಕಾಯರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದರು. ಯೋಹಾನನು ಅವರನ್ನು ನೋಡಿ, “ನೀವೆಲ್ಲರು ಸರ್ಪಗಳು! ಬರಲಿರುವ ದೇವರ ಕೋಪದಿಂದ ತಪ್ಪಿಸಿಕೊಳ್ಳಲು ನಿಮಗೆ ಎಚ್ಚರಿಸಿದವರು ಯಾರು? ನಿಮ್ಮ ಮನಸ್ಸು ನಿಜವಾಗಿಯೂ ದೇವರ ಕಡೆಗೆ ತಿರುಗಿಕೊಂಡಿದೆ ಎಂಬುದನ್ನು ನೀವು ತಕ್ಕ ಕಾರ್ಯಗಳ ಮೂಲಕ ತೋರಿಸಿ. ‘ಅಬ್ರಹಾಮನು ನಮ್ಮ ತಂದೆ’ ಎಂದು ನೀವು ಜಂಬಪಡುವುದೇಕೆ? ದೇವರು ಅಬ್ರಹಾಮನಿಗಾಗಿ ಇಲ್ಲಿರುವ ಬಂಡೆಗಳಿಂದಲೂ ಮಕ್ಕಳನ್ನು ಸೃಷ್ಟಿಸಬಲ್ಲನು ಎಂದು ನಾನು ನಿಮಗೆ ಹೇಳುತ್ತೇನೆ. 10 ಮರಗಳನ್ನು ಕಡಿದುಹಾಕಲು ಕೊಡಲಿ ಈಗಲೇ ಸಿದ್ಧವಾಗಿದೆ. ಒಳ್ಳೆಯ ಫಲಬಿಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಹಾಕಲಾಗುವುದು.

11 “ನಿಮ್ಮ ಮನಸ್ಸು ದೇವರ ಕಡೆಗೆ ತಿರುಗಿಕೊಂಡಿದೆ ಎಂಬುದಕ್ಕೆ ಗುರುತಾಗಿ ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುವೆನು. ಆದರೆ ನನ್ನ ಹಿಂದೆ ಬರುವವನು ನನಗಿಂತ ಹೆಚ್ಚಿನವನು. ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಆತನು ನಿಮಗೆ ಪವಿತ್ರಾತ್ಮನಲ್ಲಿಯೂ ಬೆಂಕಿಯಲ್ಲಿಯೂ ದೀಕ್ಷಾಸ್ನಾನ ಮಾಡಿಸುವನು. 12 ಆತನು ಕಾಳನ್ನು ಸ್ವಚ್ಛಗೊಳಿಸಲು ಸಿದ್ಧನಾಗಿದ್ದಾನೆ. ಆತನು ಕಾಳನ್ನು ಹೊಟ್ಟಿನಿಂದ ಬೇರ್ಪಡಿಸಿ ಒಳ್ಳೆಯ ಕಾಳುಗಳನ್ನು ಕಣಜದಲ್ಲಿ ತುಂಬಿಸಿ ಹೊಟ್ಟನ್ನು ನಂದಿಸಲಾಗದ ಬೆಂಕಿಯಲ್ಲಿ ಸುಟ್ಟುಹಾಕುವನು” ಎಂದು ಹೇಳಿದನು.

ಯೋಹಾನನಿಂದ ಯೇಸುವಿಗೆ ದೀಕ್ಷಾಸ್ನಾನ

(ಮಾರ್ಕ 1:9-11; ಲೂಕ 3:21-22)

13 ಆ ಸಮಯದಲ್ಲಿ ಯೋಹಾನನಿಂದ ಯೇಸು ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಗಲಿಲಾಯದಿಂದ ಜೋರ್ಡನ್ ನದಿಗೆ ಬಂದನು. 14 ಆದರೆ ಯೋಹಾನನು, “ನಾನೇ ನಿನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕಾಗಿದೆ. ಹೀಗಿರಲು ನನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ನೀನು ಬರುವುದೇಕೆ?” ಎಂದು ಹೇಳಿ ಆತನನ್ನು ತಡೆಯಲೆತ್ನಿಸಿದನು.

15 ಯೇಸು, “ಸದ್ಯಕ್ಕೆ ಒಪ್ಪಿಕೊ. ನಾವು ಯೋಗ್ಯವಾದ ಕಾರ್ಯಗಳನ್ನೆಲ್ಲ ಮಾಡಬೇಕು” ಎಂದು ಉತ್ತರಕೊಟ್ಟನು. ಆಗ ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ಮಾಡಿಸಲು ಒಪ್ಪಿಕೊಂಡನು.

16 ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡು ನೀರಿನಿಂದ ಮೇಲಕ್ಕೆ ಬಂದನು. ಕೂಡಲೇ ಆಕಾಶವು ತೆರೆಯಿತು. ದೇವರಾತ್ಮನು ಪಾರಿವಾಳದ ರೂಪದಲ್ಲಿ ಕೆಳಗಿಳಿದು ತನ್ನ ಮೇಲೆ ಬರುತ್ತಿರುವುದನ್ನು ಯೇಸು ಕಂಡನು. 17 ಆಗ ಪರಲೋಕದಿಂದ ಧ್ವನಿಯೊಂದು ಹೊರಟು, “ಈತನೇ (ಯೇಸು) ನನ್ನ ಪ್ರಿಯ ಮಗನು. ಈತನನ್ನು ನಾನು ಬಹಳ ಮೆಚ್ಚಿದ್ದೇನೆ” ಎಂದು ಹೇಳಿತು.

ಮಾರ್ಕ 1

ಯೇಸುವಿನ ಆಗಮನ

(ಮತ್ತಾಯ 3:1-12; ಲೂಕ 3:1-9,15-17; ಯೋಹಾನ 1:19-28)

ದೇವಕುಮಾರನಾದ ಯೇಸು ಕ್ರಿಸ್ತನನ್ನು ಕುರಿತ ಸುವಾರ್ತೆಯ ಆರಂಭವಿದು. ಪ್ರವಾದಿಯಾದ ಯೆಶಾಯನು ತನ್ನ ಪ್ರವಾದನೆಯ ಗ್ರಂಥದಲ್ಲಿ ಹೀಗೆ ಬರೆದಿದ್ದಾನೆ.

“ಇಗೋ! ನಾನು ನನ್ನ ಸಂದೇಶಕನನ್ನು ನಿನ್ನ ಮುಂದೆ ಕಳುಹಿಸುತ್ತೇನೆ.
    ಅವನು ನಿನಗಾಗಿ ಮಾರ್ಗವನ್ನು ಸಿದ್ಧಪಡಿಸುತ್ತಾನೆ.”(A)

“‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಗೊಳಿಸಿರಿ,
ಆತನ ದಾರಿಯನ್ನು ಸುಗಮಗೊಳಿಸಿರಿ’
    ಎಂದು ಒಬ್ಬ ವ್ಯಕ್ತಿಯು ಅಡವಿಯಲ್ಲಿ ಕೂಗುತ್ತಿದ್ದಾನೆ.”(B)

ಅಂತೆಯೇ ಸ್ನಾನಿಕ ಯೋಹಾನನು ಬಂದು, ಅಡವಿಯಲ್ಲಿ ಜನರಿಗೆ, “ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ನಿಮಗೆ ಪಾಪಕ್ಷಮೆ ಆಗುವುದು” ಎಂದು ಉಪದೇಶಿಸುತ್ತಿದ್ದನು ಮತ್ತು ದೀಕ್ಷಾಸ್ನಾನ ಕೊಡುತ್ತಾ ಇದ್ದನು. ಜುದೇಯ ಮತ್ತು ಜೆರುಸಲೇಮಿನ ಜನರೆಲ್ಲರೂ ಯೋಹಾನನ ಬಳಿಗೆ ಬಂದು ತಮ್ಮ ಪಾಪಗಳನ್ನು ಅರಿಕೆಮಾಡಿಕೊಂಡರು. ಆಗ ಯೋಹಾನನು ಅವರಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಕೊಟ್ಟನು.

ಯೋಹಾನನು ಒಂಟೆಯ ತುಪ್ಪಟದಿಂದ ಮಾಡಿದ ಹೊದಿಕೆಯನ್ನು ಹೊದ್ದುಕೊಂಡು ಸೊಂಟಕ್ಕೆ ತೊಗಲಿನ ನಡುಪಟ್ಟಿಯನ್ನು ಕಟ್ಟಿಕೊಳ್ಳುತ್ತಿದ್ದನು. ಅವನು ಮಿಡತೆಗಳನ್ನು ಮತ್ತು ಕಾಡುಜೇನನ್ನು ತಿನ್ನುತ್ತಿದ್ದನು.

ಯೋಹಾನನು ಜನರಿಗೆ, “ನನ್ನ ತರುವಾಯ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ. ನಾನು ಮೊಣಕಾಲೂರಿ, ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ಯೋಗ್ಯನಲ್ಲ. ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ, ಆದರೆ ಆತನು ನಿಮಗೆ ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾನೆ” ಎಂದು ಬೋಧಿಸಿದನು.

ಯೇಸುವಿಗೆ ದೀಕ್ಷಾಸ್ನಾನ

(ಮತ್ತಾಯ 3:13-17; ಲೂಕ 3:21-22)

ಆ ದಿನಗಳಲ್ಲಿ ಯೇಸು ಗಲಿಲಾಯದ ನಜರೇತಿನಿಂದ ಯೋಹಾನನಿದ್ದ ಸ್ಥಳಕ್ಕೆ ಬಂದನು. ಯೋಹಾನನು ಯೇಸುವಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿದನು. 10 ಯೇಸು ನೀರಿನಿಂದ ಮೇಲಕ್ಕೆ ಬರುತ್ತಿದ್ದಾಗ, ಆಕಾಶವು ತೆರೆಯಂತೆ ಹರಿದುಹೋಯಿತು; ಮತ್ತು ಪವಿತ್ರಾತ್ಮನು ತನ್ನ ಮೇಲೆ ಪಾರಿವಾಳದ ರೂಪದಲ್ಲಿ ಇಳಿದುಬರುತ್ತಿರುವುದನ್ನು ಕಂಡನು. 11 ಆಗ ಪರಲೋಕದಿಂದ ಧ್ವನಿಯೊಂದು ಹೊರಟು, “ನೀನೇ ನನ್ನ ಪ್ರಿಯ ಮಗನು. ನಾನು ನಿನ್ನನ್ನು ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು.

ಯೇಸುವಿಗಾದ ಪರಿಶೋಧನೆ

(ಮತ್ತಾಯ 4:1-11; ಲೂಕ 4:1-13)

12 ಆಗ ದೇವರಾತ್ಮನು ಯೇಸುವನ್ನು ಅಡವಿಗೆ ನಡೆಸಿದನು. 13 ಯೇಸು ಅಲ್ಲಿ ನಲವತ್ತು ದಿನಗಳ ಕಾಲ ಕಾಡುಮೃಗಗಳೊಂದಿಗಿದ್ದು ಸೈತಾನನಿಂದ ಪರಿಶೋಧಿಸಲ್ಪಟ್ಟನು. ಬಳಿಕ ದೇವದೂತರು ಬಂದು ಯೇಸುವಿಗೆ ಉಪಚಾರ ಮಾಡಿದರು.

ಗಲಿಲಾಯದಲ್ಲಿ ಯೇಸುವಿನ ಸೇವೆಯ ಆರಂಭ

(ಮತ್ತಾಯ 4:12-17; ಲೂಕ 4:14-15)

14 ಯೋಹಾನನನ್ನು ಸೆರೆಮನೆಗೆ ಹಾಕಿದ ಮೇಲೆ, ಯೇಸು ಗಲಿಲಾಯಕ್ಕೆ ಹೋಗಿ ಜನರಿಗೆ, 15 “ಕಾಲ ಪರಿಪೂರ್ಣವಾಯಿತು. ದೇವರ ರಾಜ್ಯ ಸಮೀಪಿಸಿತು. ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ” ಎಂಬ ದೇವರ ಸುವಾರ್ತೆಯನ್ನು ಉಪದೇಶಿಸಿದನು.

ಯೇಸುವಿನ ಪ್ರಥಮ ಶಿಷ್ಯರು

(ಮತ್ತಾಯ 4:18-22; ಲೂಕ 5:1-11)

16 ಯೇಸು ಗಲಿಲಾಯ ಸರೋವರದ ಬಳಿ ನಡೆದುಹೋಗುತ್ತಿದ್ದಾಗ ಸೀಮೋನನನ್ನು ಮತ್ತು ಸೀಮೋನನ ಸಹೋದರನಾದ ಅಂದ್ರೆಯನನ್ನು ಕಂಡನು. ಇವರಿಬ್ಬರೂ ಬೆಸ್ತರಾಗಿದ್ದರು. ಇವರು ಮೀನುಗಳನ್ನು ಹಿಡಿಯಲು ಸರೋವರದೊಳಕ್ಕೆ ಬಲೆಯನ್ನು ಬೀಸುತ್ತಿದ್ದರು. 17 ಯೇಸು, “ಬನ್ನಿರಿ, ನನ್ನನ್ನು ಹಿಂಬಾಲಿಸಿರಿ, ನಾನು ನಿಮ್ಮನ್ನು ಬೇರೆ ವಿಧದ ಬೆಸ್ತರನ್ನಾಗಿ ಮಾಡುವೆನು. ಇನ್ನು ಮೇಲೆ ನೀವು ಒಂದುಗೂಡಿಸುವುದು ಜನರನ್ನೇ, ಮೀನುಗಳನ್ನಲ್ಲ” ಎಂದು ಅವರಿಗೆ ಹೇಳಿದನು. 18 ಆಗ ಅವರು ತಮ್ಮ ಬಲೆಗಳನ್ನು ಅಲ್ಲಿಯೇ ಬಿಟ್ಟು ಆತನನ್ನು ಹಿಂಬಾಲಿಸಿದರು.

19 ಯೇಸು ಗಲಿಲಾಯ ಸರೋವರದ ಬಳಿಯಲ್ಲಿ ಇನ್ನೂ ತಿರುಗಾಡುತ್ತಲೇ ಇದ್ದಾಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೆಂಬ ಇಬ್ಬರು ಸಹೋದರರನ್ನು ಕಂಡನು. ಅವರು ಮೀನುಗಳನ್ನು ಹಿಡಿಯಲು ಬಲೆಯನ್ನು ಸಿದ್ಧಪಡಿಸುತ್ತಾ ತಮ್ಮ ದೋಣಿಯಲ್ಲಿದ್ದರು. 20 ಅವರ ತಂದೆಯಾದ ಜೆಬೆದಾಯನೂ ಅವನ ಕೆಲಸಗಾರರೂ ಸಹೋದರರೊಂದಿಗೆ ದೋಣಿಯಲ್ಲಿದ್ದರು. ಯೇಸು ಅವರನ್ನು ಕರೆದನು. ಕೂಡಲೇ ಅವರು ತಮ್ಮ ತಂದೆಯನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

ದೆವ್ವದಿಂದ ಪೀಡಿತನಾಗಿದ್ದವನಿಗೆ ವಿಮೋಚನೆ

(ಲೂಕ 4:31-37)

21 ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ಸಬ್ಬತ್‌ದಿನದಂದು ಯೇಸು ಸಭಾಮಂದಿರಕ್ಕೆ ಹೋಗಿ ಜನರಿಗೆ ಉಪದೇಶಮಾಡಿದನು. 22 ಯೇಸುವಿನ ಉಪದೇಶವನ್ನು ಕೇಳಿ ಅಲ್ಲಿದ್ದ ಜನರು ಆಶ್ಚರ್ಯಗೊಂಡರು. ಆತನು ಅವರ ಧರ್ಮೋಪದೇಶಕರಂತೆ ಉಪದೇಶಮಾಡದೆ, ಅಧಿಕಾರವುಳ್ಳವನಂತೆ ಉಪದೇಶ ಮಾಡಿದನು. 23 ಯೇಸು ಸಭಾಮಂದಿರದಲ್ಲಿದ್ದಾಗ, ದೆವ್ವದಿಂದ ಪೀಡಿತನಾಗಿದ್ದ ಒಬ್ಬ ಮನುಷ್ಯನು ಅಲ್ಲಿದ್ದನು. ಅವನು, 24 “ನಜರೇತಿನ ಯೇಸುವೇ! ನಮ್ಮಿಂದ ನಿನಗೆ ಏನಾಗಬೇಕಾಗಿದೆ? ನಮ್ಮನ್ನು ನಾಶಗೊಳಿಸಲು ಬಂದಿರುವೆಯಾ? ನೀನು ದೇವರಿಂದ ಬಂದ ಪರಿಶುದ್ಧನೆಂದು ನನಗೆ ಗೊತ್ತಿದೆ!” ಎಂದು ಕೂಗಿಕೊಂಡನು.

25 ಯೇಸು, “ಸುಮ್ಮನಿರು! ಅವನೊಳಗಿಂದ ಹೊರಗೆ ಬಾ!” ಎಂದು ಆಜ್ಞಾಪಿಸಿದನು. 26 ದೆವ್ವವು ಅವನನ್ನು ಒದ್ದಾಡಿಸಿ ಗಟ್ಟಿಯಾಗಿ ಅರಚುತ್ತಾ ಅವನೊಳಗಿಂದ ಹೊರಬಂದಿತು.

27 ಜನರೆಲ್ಲರೂ ದಿಗ್ಭ್ರಮೆಗೊಂಡು, “ಇದೇನು? ಹೊಸದೊಂದನ್ನು ಈತನು ಅಧಿಕಾರದಿಂದ ಉಪದೇಶಿಸುತ್ತಿದ್ದಾನೆ! ಈತನ ಆಜ್ಞೆಗೆ ದೆವ್ವಗಳೂ ವಿಧೇಯವಾಗುತ್ತಿವೆ” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 28 ಯೇಸುವಿನ ಸುದ್ದಿಯು ಗಲಿಲಾಯ ಪ್ರದೇಶದ ಎಲ್ಲೆಡೆಯಲ್ಲಿಯೂ ಹರಡಿತು.

ಅನೇಕರಿಗೆ ಸ್ವಸ್ಥತೆ

(ಮತ್ತಾಯ 8:14-17; ಲೂಕ 4:38-41)

29 ಯೇಸು ಮತ್ತು ಆತನ ಶಿಷ್ಯರು ಸಭಾಮಂದಿರದಿಂದ ಹೊರಟು ಯಾಕೋಬ ಮತ್ತು ಯೋಹಾನರ ಸಂಗಡ ಸೀಮೋನ ಮತ್ತು ಅಂದ್ರೆಯರ ಮನೆಗೆ ಹೋದರು. 30 ಸೀಮೋನನ ಅತ್ತೆ ಜ್ವರದಿಂದ ಹಾಸಿಗೆಯಲ್ಲಿ ಮಲಗಿದ್ದಳು. ಅಲ್ಲಿನ ಜನರು ಅವಳ ಬಗ್ಗೆ ಯೇಸುವಿಗೆ ಹೇಳಿದರು. 31 ಆದ್ದರಿಂದ ಯೇಸು ಅವಳ ಹಾಸಿಗೆಯ ಬಳಿ ಹೋಗಿ ಆಕೆಯ ಕೈಗಳನ್ನು ಹಿಡಿದುಕೊಂಡು, ಮೇಲೇಳಲು ಸಹಾಯ ಮಾಡಿದನು. ಕೂಡಲೇ ಅವಳಿಗೆ ಗುಣವಾಯಿತು. ಆಕೆ ಎದ್ದು ಅವರಿಗೆ ಉಪಚಾರ ಮಾಡಿದಳು.

32 ಅಂದು ಸೂರ್ಯನು ಮುಳುಗಿದ ಮೇಲೆ, ಜನರು ಕಾಯಿಲೆಯವರನ್ನೂ ದೆವ್ವಗಳಿಂದ ಪೀಡಿತರಾಗಿದ್ದವರನ್ನೂ ಆತನ ಬಳಿಗೆ ಕರೆತಂದರು. 33 ಊರಿನ ಜನರೆಲ್ಲರೂ ಆ ಮನೆಯ ಮುಂದೆ ಒಟ್ಟುಗೂಡಿದರು. 34 ಯೇಸು ನಾನಾ ಬಗೆಯ ರೋಗಗಳಿಂದ ನರಳುತ್ತಿದ್ದ ಅನೇಕ ಜನರನ್ನು ಗುಣಪಡಿಸಿದನು; ದೆವ್ವಗಳಿಂದ ಪೀಡಿತರಾಗಿದ್ದ ಅನೇಕರನ್ನು ಬಿಡಿಸಿದನು. ಆದರೆ ಆ ದೆವ್ವಗಳಿಗೆ ಮಾತನಾಡಲು ಆತನು ಅವಕಾಶ ಕೊಡಲಿಲ್ಲ; ಏಕೆಂದರೆ ಯೇಸು ಯಾರೆಂಬುದು ದೆವ್ವಗಳಿಗೆ ಗೊತ್ತಿತ್ತು.

ಸುವಾರ್ತೆ ಸಾರಲು ಯೇಸುವಿನ ಸಿದ್ಧತೆ

(ಲೂಕ 4:42-44)

35 ಮರುದಿನ ಮುಂಜಾನೆ, ಇನ್ನೂ ಕತ್ತಲೆ ಇರುವಾಗಲೇ ಯೇಸು ಎದ್ದು ಪ್ರಾರ್ಥಿಸುವುದಕ್ಕಾಗಿ ಏಕಾಂತವಾದ ಸ್ಥಳಕ್ಕೆ ಹೋದನು. 36 ತರುವಾಯ, ಸೀಮೋನ ಮತ್ತು ಅವನ ಗೆಳೆಯರು ಯೇಸುವನ್ನು ಹುಡುಕುತ್ತಾ ಹೋದರು. 37 ಅವರು ಯೇಸುವನ್ನು ಕಂಡುಕೊಂಡು, “ಜನರೆಲ್ಲರೂ ನಿನ್ನನ್ನೇ ಎದುರು ನೋಡುತ್ತಿದ್ದಾರೆ!” ಎಂದು ಹೇಳಿದರು.

38 ಯೇಸು, “ಇಲ್ಲಿಗೆ ಸಮೀಪದಲ್ಲಿರುವ ಊರುಗಳಿಗೆ ನಾವು ಹೋಗೋಣ. ಆ ಸ್ಥಳಗಳಲ್ಲಿಯೂ ನಾನು ಉಪದೇಶಿಸಬೇಕು. ಅದಕ್ಕಾಗಿಯೇ ನಾನು ಇಲ್ಲಿಗೆ ಬಂದೆನು” ಎಂದು ಹೇಳಿದನು. 39 ಹೀಗೆ ಯೇಸು ಗಲಿಲಾಯದ ಎಲ್ಲಾ ಕಡೆಗೆ ಪ್ರವಾಸಮಾಡಿ ಸಭಾಮಂದಿರಗಳಲ್ಲಿ ಉಪದೇಶಿಸಿದನು; ದೆವ್ವಗಳಿಂದ ಪೀಡಿತರಾಗಿದ್ದವರನ್ನು ಬಿಡಿಸಿದನು.

ಕುಷ್ಠರೋಗಿಗೆ ಸ್ವಸ್ಥತೆ

(ಮತ್ತಾಯ 8:1-4; ಲೂಕ 5:12-16)

40 ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಮೊಣಕಾಲೂರಿ ಆತನಿಗೆ, “ನೀನು ಇಷ್ಟಪಟ್ಟರೆ, ನನ್ನನ್ನು ಗುಣಪಡಿಸಬಲ್ಲೆ” ಎಂದು ಬೇಡಿಕೊಂಡನು.

41 ಯೇಸು ಅವನಿಗಾಗಿ ದುಃಖಪಟ್ಟು ಅವನನ್ನು ಮುಟ್ಟಿ, “ನಿನ್ನನ್ನು ಗುಣಪಡಿಸಲು ನನಗೆ ಇಷ್ಟವಿದೆ. ನಿನಗೆ ಗುಣವಾಗಲಿ” ಎಂದು ಹೇಳಿದನು. 42 ಆ ಕೂಡಲೇ ಅವನಿಗೆ ಗುಣವಾಯಿತು.

43-44 ಯೇಸು ಅವನಿಗೆ, “ನಾನು ನಿನ್ನನ್ನು ಗುಣಪಡಿಸಿದೆನೆಂದು ಯಾರಿಗೂ ಹೇಳದೆ, ನೇರವಾಗಿ ಯಾಜಕನ ಬಳಿಗೆ ಹೋಗಿ ಮೈ ತೋರಿಸು. ನೀನು ಗುಣಹೊಂದಿರುವುದರಿಂದ ಮೋಶೆಯ ಆಜ್ಞಾನುಸಾರವಾಗಿ ದೇವರಿಗೆ ಕಾಣಿಕೆಯನ್ನು ಅರ್ಪಿಸು. ನಿನಗೆ ಗುಣವಾಯಿತು ಎಂಬುದಕ್ಕೆ ಇದು ಜನರಿಗೆ ಸಾಕ್ಷಿಯಾಗಿರುವುದು” ಎಂದು ಎಚ್ಚರಿಕೆ ನೀಡಿ ಕಳುಹಿಸಿಬಿಟ್ಟನು.[a] 45 ಅವನು ಅಲ್ಲಿಂದ ಹೋಗಿ ಯೇಸುವೇ ತನ್ನನ್ನು ಗುಣಪಡಿಸಿದನೆಂದು ಜನರೆಲ್ಲರಿಗೆ ತಿಳಿಸಿದನು. ಈ ಸುದ್ದಿಯು ಎಲ್ಲೆಡೆ ಹರಡಿದ್ದರಿಂದ ಆತನು ಬಹಿರಂಗವಾಗಿ ಊರೊಳಗೆ ಹೋಗಲು ಸಾಧ್ಯವಾಗದೆ ಏಕಾಂತವಾದ ಸ್ಥಳಗಳಲ್ಲಿ ವಾಸಿಸಬೇಕಾಯಿತು. ಆದರೂ ಎಲ್ಲಾ ಕಡೆಗಳಿಂದ ಜನರು ಯೇಸುವಿದ್ದಲ್ಲಿಗೆ ಬರುತ್ತಿದ್ದರು.

ಲೂಕ 3

ಯೋಹಾನನ ಬೋಧನೆ

(ಮತ್ತಾಯ 3:1-12; ಮಾರ್ಕ 1:1-8; ಯೋಹಾನ 1:19-28)

ಚಕ್ರವರ್ತಿಯಾದ ತಿಬೇರಿಯಸ್ ಸೀಸರನ ಆಳ್ವಿಕೆಯ ಹದಿನೈದನೇ ವರ್ಷ ಅದಾಗಿತ್ತು.

ಆಗ, ಪೊಂತ್ಯ ಪಿಲಾತನು ಜುದೇಯ ಪ್ರಾಂತ್ಯಕ್ಕೂ

ಹೆರೋದನು ಗಲಿಲಾಯಕ್ಕೂ

ಹೆರೋದನ ಸಹೋದರನಾದ ಫಿಲಿಪ್ಪನು ಇತುರೆಯ ಮತ್ತು ತ್ರಕೋನಿತಿ ಪ್ರಾಂತ್ಯಗಳಿಗೂ

ಲೂಸನ್ಯನು ಅಬಿಲೇನೆ ಪ್ರಾಂತ್ಯಕ್ಕೂ ಅಧಿಪತಿಯಾಗಿದ್ದರು.

ಅನ್ನನು ಮತ್ತು ಕಾಯಫನು ಮಹಾಯಾಜಕರಾಗಿದ್ದರು.[a] ಆ ಸಮಯದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ದೇವರಿಂದ ಆಜ್ಞೆಯೊಂದು ಬಂತು. ಯೋಹಾನನು ಗುಡ್ಡಗಾಡಿನಲ್ಲಿ ವಾಸವಾಗಿದ್ದನು. ಯೋಹಾನನು ಜೋರ್ಡನ್ ನದಿಯ ಸುತ್ತಲಿರುವ ಪ್ರದೇಶದಲ್ಲೆಲ್ಲಾ ಸಂಚರಿಸಿ, ತಮ್ಮ ಪಾಪಪರಿಹಾರಕ್ಕಾಗಿ ಅವರು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಜನರಿಗೆ ತಿಳಿಸಿದನು. ಯೆಶಾಯ ಪ್ರವಾದಿಯು ತನ್ನ ಗ್ರಂಥದಲ್ಲಿ ಬರೆದಿರುವಂತೆಯೇ ಇದು ನಡೆಯಿತು. ಅದೇನೆಂದರೆ:

“‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಮಾಡಿರಿ.
    ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ.
ಪ್ರತಿಯೊಂದು ಕಣಿವೆಯು ಮುಚ್ಚಲ್ಪಡುವವು.
    ಪ್ರತಿಯೊಂದು ಬೆಟ್ಟಗುಡ್ಡಗಳು ಸಮನಾಗಿ ಮಾಡಲ್ಪಡುವವು.
ಡೊಂಕಾದ ದಾರಿಗಳು ನೀಟಾಗುವವು.
    ಕೊರಕಲಾದ ದಾರಿಗಳು ಸಮವಾಗುವವು.
ಪ್ರತಿಯೊಬ್ಬನೂ ದೇವರ ರಕ್ಷಣೆಯನ್ನು ಕಾಣುವನು!’
ಎಂಬುದಾಗಿ ಅಡವಿಯಲ್ಲಿ ಒಬ್ಬನು ಕೂಗುತ್ತಿದ್ದಾನೆ.”(A)

ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದರು. ಯೋಹಾನನು ಅವರಿಗೆ. “ನೀವು ವಿಷಕರವಾದ ಹಾವುಗಳಂತಿದ್ದೀರಿ! ಬರಲಿರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು? ನಿಮ್ಮ ಮನಸ್ಸು ನಿಜವಾಗಿಯೂ ದೇವರ ಕಡೆಗೆ ತಿರುಗಿಕೊಂಡಿರುವುದಾದರೆ ಅದನ್ನು ನಿಮ್ಮ ತಕ್ಕಕಾರ್ಯಗಳಿಂದ ತೋರಿಸಿರಿ. ‘ಅಬ್ರಹಾಮನು ನಮ್ಮ ತಂದೆ’ ಎಂದು ಜಂಬ ಕೊಚ್ಚಿಕೊಳ್ಳಬೇಡಿರಿ. ದೇವರು ಅಬ್ರಹಾಮನಿಗೆ ಇಲ್ಲಿರುವ ಕಲ್ಲುಗಳಿಂದ ಮಕ್ಕಳನ್ನು ಕೊಡಬಲ್ಲನೆಂದು ನಾನು ನಿಮಗೆ ಹೇಳುತ್ತೇನೆ. ಮರಗಳನ್ನು ಕಡಿಯುವುದಕ್ಕೆ ಕೊಡಲಿಯು ಸಿದ್ಧವಾಗಿದೆ. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನು ಕತ್ತರಿಸಿ ಬೆಂಕಿಯಲ್ಲಿ ಹಾಕಲಾಗುವುದು” ಎಂದು ಹೇಳಿದನು.

10 ಆದ್ದರಿಂದ ಜನರು, “ಈಗ ನಾವೇನು ಮಾಡಬೇಕು?” ಎಂದು ಕೇಳಿದರು.

11 ಯೋಹಾನನು, “ನಿಮ್ಮಲ್ಲಿ ಎರಡು ಅಂಗಿಗಳಿದ್ದರೆ, ಏನೂ ಇಲ್ಲದವನಿಗೆ ಒಂದು ಕೊಡಿರಿ. ನಿಮ್ಮಲ್ಲಿ ಆಹಾರವಿದ್ದರೆ, ಅದನ್ನೂ ಹಂಚಿಕೊಡಿರಿ” ಎಂದು ಹೇಳಿದನು.

12 ಸುಂಕವಸೂಲಿಗಾರರು[b] ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಯೋಹಾನನ ಬಳಿಗೆ ಬಂದರು. ಅವರು ಯೋಹಾನನಿಗೆ, “ಉಪದೇಶಕನೇ, ನಾವೇನು ಮಾಡಬೇಕು?” ಎಂದು ಕೇಳಿದರು.

13 ಯೋಹಾನನು ಅವರಿಗೆ, “ನೇಮಕವಾದ ತೆರಿಗೆಗಿಂತ ಹೆಚ್ಚಾಗಿ ಜನರಿಂದ ತೆಗೆದುಕೊಳ್ಳಬೇಡಿರಿ” ಎಂದು ಹೇಳಿದನು.

14 ಸೈನಿಕರು ಯೋಹಾನನಿಗೆ, “ನಾವೇನು ಮಾಡಬೇಕು?” ಎಂದು ಕೇಳಿದರು.

ಯೋಹಾನನು ಅವರಿಗೆ, “ಲಂಚ ತೆಗೆದುಕೊಳ್ಳಬೇಡಿ, ಸುಳ್ಳುದೂರು ಹೇಳಬೇಡಿರಿ. ನಿಮಗೆ ಸಿಕ್ಕುವ ಸಂಬಳದಲ್ಲಿ ಸಂತೋಷವಾಗಿರಿ” ಎಂದು ಹೇಳಿದನು.

15 ಜನರೆಲ್ಲರೂ ಕ್ರಿಸ್ತನ ಆಗಮನವನ್ನು ನಿರೀಕ್ಷಿಸುತ್ತಿದ್ದುದರಿಂದ ಅವರು ಯೋಹಾನನ ಬಗ್ಗೆ ಆಶ್ಚರ್ಯಪಟ್ಟು, “ಒಂದುವೇಳೆ ಈತನೇ ಕ್ರಿಸ್ತನಾಗಿರಬಹುದು” ಎಂದು ಭಾವಿಸಿಕೊಂಡರು.

16 ಅದಕ್ಕೆ ಯೋಹಾನನು, “ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನನಗಿಂತಲೂ ಶಕ್ತನಾಗಿರುವಾತನು ಬರುತ್ತಾನೆ. ಆತನ ಪಾದರಕ್ಷೆಗಳನ್ನು ಬಿಚ್ಚುವದಕ್ಕೂ ನನಗೆ ಯೋಗ್ಯತೆ ಇಲ್ಲ. ಆತನು ನಿಮಗೆ ಪವಿತ್ರಾತ್ಮನಲ್ಲಿಯೂ, ಬೆಂಕಿಯಲ್ಲಿಯೂ ದೀಕ್ಷಾಸ್ನಾನ ಮಾಡಿಸುವನು. 17 ಆತನು ರಾಶಿಯನ್ನು ಶುದ್ಧಮಾಡುವುದಕ್ಕೆ[c] ಸಿದ್ಧನಾಗಿ ಬರುವನು. ಆತನು ಒಳ್ಳೆಯ ಕಾಳನ್ನು ಹೊಟ್ಟಿನಿಂದ ಬೇರ್ಪಡಿಸಿ ತನ್ನ ಕಣಜದಲ್ಲಿ ಹಾಕುವನು. ನಂತರ ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು” ಎಂದು ಉತ್ತರಕೊಟ್ಟನು. 18 ಯೋಹಾನನು ಜನರಿಗೆ ಇನ್ನೂ ಅನೇಕ ವಿಷಯಗಳನ್ನು ಹೇಳಿ ಪ್ರೋತ್ಸಾಹಿಸುತ್ತಾ ಸುವಾರ್ತೆಯನ್ನು ಬೋಧಿಸುತ್ತಿದ್ದನು.

ಯೋಹಾನನ ಸೇವೆಯ ಅಂತ್ಯ

19 ರಾಜ್ಯಪಾಲ ಹೆರೋದನು ತನ್ನ ಸಹೋದರನ ಹೆಂಡತಿಯಾದ ಹೆರೋದ್ಯಳೊಂದಿಗೆ ಹೊಂದಿದ್ದ ಅನೈತಿಕ ಸಂಬಂಧವನ್ನು ಮತ್ತು ಹೆರೋದನು ಮಾಡಿದ್ದ ಅನೇಕ ದುಷ್ಕೃತ್ಯಗಳನ್ನು ಯೋಹಾನನು ಖಂಡಿಸಿದನು. 20 ಆದ್ದರಿಂದ ಹೆರೋದನು ಯೋಹಾನನನ್ನು ಸೆರೆಮನೆಗೆ ಹಾಕಿಸಿ ತನ್ನ ದುಷ್ಕೃತ್ಯಗಳೊಂದಿಗೆ ಮತ್ತೊಂದು ದುಷ್ಕೃತ್ಯವನ್ನು ಸೇರಿಸಿಕೊಂಡನು.

ಯೋಹಾನನಿಂದ ಯೇಸುವಿನ ದೀಕ್ಷಾಸ್ನಾನ

(ಮತ್ತಾಯ 3:13-17; ಮಾರ್ಕ 1:9-11)

21 ಯೋಹಾನನನ್ನು ಸೆರೆಮನೆಗೆ ಹಾಕುವುದಕ್ಕಿಂತ ಮೊದಲು, ಜನರೆಲ್ಲರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು. ಆಗ ಯೇಸು ಸಹ ಬಂದು ದೀಕ್ಷಾಸ್ನಾನ ಮಾಡಿಸಿಕೊಂಡನು. ಯೇಸು ಪ್ರಾರ್ಥಿಸುತ್ತಿದ್ದಾಗ ಆಕಾಶವು ತೆರೆಯಿತು. 22 ಪವಿತ್ರಾತ್ಮನು ಆತನ ಮೇಲೆ ಪಾರಿವಾಳದ ರೂಪದಲ್ಲಿ ಇಳಿದು ಬಂದನು. ಆ ಕೂಡಲೇ, ಪರಲೋಕದಿಂದ ಧ್ವನಿಯೊಂದು ಹೊರಟು, “ನೀನು ನನ್ನ ಪ್ರಿಯ ಮಗನು, ನಾನು ನಿನನ್ನು ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು.

ಯೋಸೇಫನ ಕುಟುಂಬ ಚರಿತ್ರೆ

(ಮತ್ತಾಯ 1:1-17)

23 ಯೇಸು ಬೋಧಿಸುವುದಕ್ಕೆ ಪ್ರಾರಂಭಿಸಿದಾಗ ಸುಮಾರು ಮೂವತ್ತು ವರ್ಷದವನಾಗಿದ್ದನು. ಯೇಸು ಯೋಸೇಫನ ಮಗನೆಂದು ಜನರು ಭಾವಿಸಿದ್ದರು.

ಯೋಸೇಫನು ಹೇಲಿಯ ಮಗನು.

24 ಹೇಲಿಯು ಮತ್ತಾತನ ಮಗನು.

ಮತ್ತಾತನು ಲೇವಿಯ ಮಗನು.

ಲೇವಿಯು ಮೆಲ್ಕಿಯ ಮಗನು.

ಮೆಲ್ಕಿಯು ಯನ್ನಾಯನ ಮಗನು.

ಯನ್ನಾಯನು ಯೋಸೇಫನ ಮಗನು.

25 ಯೋಸೇಫನು ಮತ್ತಥೀಯನ ಮಗನು.

ಮತ್ತಥೀಯನು ಆಮೋಸನ ಮಗನು.

ಆಮೋಸನು ನಹೂಮನ ಮಗನು.

ನಹೂಮನು ಎಸ್ಲಿಯ ಮಗನು.

ಎಸ್ಲಿಯು ನಗ್ಗಾಯನ ಮಗನು.

26 ನಗ್ಗಾಯನು ಮಹಾಥತನ ಮಗನು.

ಮಹಾಥತನು ಮತ್ತಥೀಯನ ಮಗನು.

ಮತ್ತಥೀಯನು ಶಿಮೀಯನ ಮಗನು.

ಶಿಮೀಯನು ಯೋಸೇಖನ ಮಗನು.

ಯೋಸೇಖನು ಯೂದನ ಮಗನು.

27 ಯೂದನು ಯೋಹಾನನ ಮಗನು.

ಯೋಹಾನನು ರೇಸನ ಮಗನು.

ರೇಸನು ಜೆರುಬಾಬೆಲನ ಮಗನು.

ಜೆರುಬಾಬೆಲನು ಸಲಥಿಯೇಲನ ಮಗನು.

ಸಲಥಿಯೇಲನು ಸೇರಿಯ ಮಗನು.

28 ಸೇರಿಯು ಮೆಲ್ಕಿಯ ಮಗನು.

ಮೆಲ್ಕಿಯು ಅದ್ದಿಯ ಮಗನು.

ಅದ್ದಿಯು ಕೋಸಾಮನ ಮಗನು.

ಕೋಸಾಮನು ಎಲ್ಮದಾಮನ ಮಗನು.

ಎಲ್ಮದಾಮನು ಏರನ ಮಗನು.

29 ಏರನು ಯೆಹೋಷುವನ ಮಗನು.

ಯೆಹೋಷುವನು ಎಲಿಯೇಜರನ ಮಗನು.

ಎಲಿಯೇಜರನು ಯೋರೈವುನ ಮಗನು.

ಯೋರೈವುನು ಮತ್ತಾತನ ಮಗನು.

ಮತ್ತಾತನು ಲೇವಿಯ ಮಗನು.

30 ಲೇವಿಯು ಸಿಮೆಯೋನನ ಮಗನು.

ಸಿಮೆಯೋನನು ಯೂದನ ಮಗನು.

ಯೂದನು ಯೋಸೇಫನ ಮಗನು.

ಯೋಸೇಫನು ಯೊನಾವುನ ಮಗನು.

ಯೊನಾವುನು ಎಲಿಯಕೀಮನ ಮಗನು.

31 ಎಲಿಯಕೀಮನು ಮೆಲೆಯನ ಮಗನು.

ಮೆಲೆಯನು ಮೆನ್ನನ ಮಗನು.

ಮೆನ್ನನು ಮತ್ತಾಥನ ಮಗನು.

ಮತ್ತಾಥನು ನಾತಾನನ ಮಗನು.

ನಾತಾನನು ದಾವೀದನ ಮಗನು.

32 ದಾವೀದನು ಇಷಯನ ಮಗನು.

ಇಷಯನು ಓಬೇದನ ಮಗನು.

ಓಬೇದನು ಬೋವಜನ ಮಗನು.

ಬೋವಜನು ಸಲ್ಮೋನನ ಮಗನು.

ಸಲ್ಮೋನನು ನಹಸ್ಸೋನನ ಮಗನು.

33 ನಹಸ್ಸೋನನು ಅಮ್ಮಿನಾದ್ವಾನ ಮಗನು.

ಅಮ್ಮಿನಾದ್ವಾನು ಅದ್ಮಿನನ ಮಗನು.

ಅದ್ಮಿನನು ಅರ್ನೈಯನ ಮಗನು.

ಅರ್ನೈಯನು ಹೆಸ್ರೋನನ ಮಗನು.

ಹೆಸ್ರೋನನು ಪೆರೆಸನ ಮಗನು.

ಪೆರೆಸನು ಯೂದನ ಮಗನು.

34 ಯೂದನು ಯಾಕೋಬನ ಮಗನು.

ಯಾಕೋಬನು ಇಸಾಕನ ಮಗನು.

ಇಸಾಕನು ಅಬ್ರಹಾಮನ ಮಗನು.

ಅಬ್ರಹಾಮನು ತೇರಹನ ಮಗನು.

ತೇರಹನು ನಹೋರನ ಮಗನು.

35 ನಹೋರನು ಸೆರೂಗನ ಮಗನು.

ಸೆರೂಗನು ರೆಗೂವನ ಮಗನು.

ರೆಗೂವನು ಪೆಲೆಗನ ಮಗನು.

ಪೆಲೆಗನು ಎಬರನ ಮಗನು.

ಎಬರನು ಸಾಲನ ಮಗನು.

36 ಸಾಲನು ಕಯಿನನ ಮಗನು.

ಕಯಿನನು ಅರ್ಪಕ್ಷದನ ಮಗನು.

ಅರ್ಪಕ್ಷದನು ಶೇಮನ ಮಗನು.

ಶೇಮನು ನೋಹನ ಮಗನು.

ನೋಹನು ಲಾಮೆಕನ ಮಗನು.

37 ಲಾಮೆಕನು ಮೆತೂಷಲನ ಮಗನು.

ಮೆತೂಷಲನು ಹನೋಕನ ಮಗನು.

ಹನೋಕನು ಯೆರೆದನ ಮಗನು.

ಯೆರೆದನು ಮಹಲಲೇಲನ ಮಗನು.

ಮಹಲಲೇಲನು ಕಯಿನಾನನ ಮಗನು.

38 ಕಯಿನಾನನು ಎನೋಷನ ಮಗನು.

ಎನೋಷನು ಸೇಥನ ಮಗನು.

ಸೇಥನು ಆದಾಮನ ಮಗನು.

ಆದಾಮನು ದೇವರ ಮಗನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International