Print Page Options
Previous Prev Day Next DayNext

Chronological

Read the Bible in the chronological order in which its stories and events occurred.
Duration: 365 days
Kannada Holy Bible: Easy-to-Read Version (KERV)
Version
ಯೆಶಾಯ 37-39

ಹಿಜ್ಕೀಯನು ದೇವರ ಸಹಾಯಕ್ಕಾಗಿ ಪ್ರಾರ್ಥಿಸಿದ್ದು

37 ಅರಸನಾದ ಹಿಜ್ಕೀಯನು ಎಲ್ಲಾ ವಿಷಯಗಳನ್ನು ಕೇಳಿ ಮನಸ್ಸಿನಲ್ಲಿ ಬಹಳ ದುಃಖಪಟ್ಟು ತನ್ನ ಬಟ್ಟೆಗಳನ್ನು ಹರಿದುಕೊಂಡನು. ತರುವಾಯ ಶೋಕವಸ್ತ್ರವನ್ನು ಧರಿಸಿ ದೇವಾಲಯದೊಳಕ್ಕೆ ಹೋದನು.

ಹಿಜ್ಕೀಯನು ಅರಮನೆಯ ಅಡಳಿತಗಾರನಾದ ಎಲ್ಯಾಕೀಮನನ್ನು, ಕಾರ್ಯದರ್ಶಿಯಾದ ಶೆಬ್ನನನ್ನು ಯಾಜಕರ ಹಿರಿಯರೊಂದಿಗೆ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನ ಬಳಿಗೆ ಕಳುಹಿಸಿದನು. ಇವರು ತಮ್ಮ ಮನಸ್ಸಿನ ದುಗುಡವನ್ನು ಪ್ರದರ್ಶಿಸುವಂತೆ ಶೋಕವಸ್ತ್ರಗಳನ್ನು ಧರಿಸಿದ್ದರು. ಇವರು ಯೆಶಾಯನಿಗೆ, “ಅರಸನಾದ ಹಿಜ್ಕೀಯನು ಈ ದಿವಸವನ್ನು ಶೋಕದ ದಿವಸವನ್ನಾಗಿ ಘೋಷಿಸಿದ್ದಾನೆ. ಇದು ದುಃಖದ ಸಮಯವಾಗಿದೆ. ಇದು ದಿನತುಂಬಿ ತಾಯಿಯ ಹೊಟ್ಟೆಯೊಳಗಿಂದ ಹೊರಬರಲು ಶಕ್ತವಾಗಿಲ್ಲದ ಕೂಸಿನಂತಿದೆ. ಅಶ್ಶೂರದ ಅರಸನು ತನ್ನ ಸೇನಾದಂಡನಾಯಕನು ನಮ್ಮ ಜೀವಸ್ವರೂಪನಾದ ದೇವರ ಬಗ್ಗೆ ಕೆಟ್ಟಮಾತುಗಳನ್ನು ಹೇಳಲು ಕಳುಹಿಸಿರುತ್ತಾನೆ. ನಿನ್ನ ದೇವರಾದ ಯೆಹೋವನು ಇದನ್ನೆಲ್ಲಾ ಕೇಳಿರುವನು. ವೈರಿಗಳು ನುಡಿದ ಆ ಮಾತುಗಳು ಸತ್ಯವಾದವುಗಳಲ್ಲ ಎಂಬುದನ್ನು ಆತನು ತೋರಿಸುವನು. ಆದ್ದರಿಂದ ಇನ್ನೂ ಜೀವದಿಂದ ಉಳಿದಿರುವವರಿಗಾಗಿ ಪ್ರಾರ್ಥಿಸು” ಎಂದು ಹಿಜ್ಕೀಯನು ಹೇಳಿದ್ದಾನೆ ಅಂದರು.

5-6 ಆಗ ಯೆಶಾಯನು ಅರಸನಾದ ಹಿಜ್ಕೀಯನ ಕಡೆಯಿಂದ ಬಂದ ಅಧಿಪತಿಗಳಿಗೆ, “ನಿಮ್ಮ ಅರಸನಾದ ಹಿಜ್ಕೀಯನಿಗೆ ಈ ಸಂದೇಶವನ್ನು ಕೊಡಿರಿ: ಯೆಹೋವನು ಹೇಳುವುದೇನೆಂದರೆ, ‘ಸೇನಾದಂಡನಾಯಕನು ಹೇಳಿದ ಮಾತುಗಳಿಗೆ ನೀವು ಭಯಪಡಬೇಡಿರಿ. ಅಶ್ಶೂರದ ಅರಸನಿಂದ ಬಂದ “ಹುಡುಗರು” ನಿನ್ನ ವಿಷಯವಾಗಿ ಹೇಳಿದ ಮಾತುಗಳನ್ನು ನಂಬಬೇಡಿರಿ. ಇಗೋ, ನಾನು ಒಂದು ಆತ್ಮವನ್ನು ಅಶ್ಶೂರದ ವಿರುದ್ಧವಾಗಿ ಕಳುಹಿಸುತ್ತೇನೆ. ದೇಶಕ್ಕೆ ಬರಲಿರುವ ಅಪಾಯದ ಬಗ್ಗ ಎಚ್ಚರಿಕೆಯ ವರದಿಯು ರಾಜನಿಗೆ ಬರುತ್ತದೆ. ಅದನ್ನು ಕೇಳಿ ಅವನು ತನ್ನ ದೇಶಕ್ಕೆ ಹಿಂದಿರುಗುವನು. ಆಗ ಅವನ ದೇಶದಲ್ಲಿಯೇ ನಾನು ಅವನನ್ನು ಖಡ್ಗದಿಂದ ಸಂಹರಿಸುವೆನು.’” ಎಂದು ಹೇಳಿದನು.

ಅಶ್ಶೂರದ ಸೈನ್ಯವು ಜೆರುಸಲೇಮಿನಿಂದ ಹಿಂತಿರುಗಿತು

8-9 ಅಶ್ಶೂರದ ಅರಸನಿಗೆ ಒಂದು ಸಂದೇಶವು ಬಂದು ತಲುಪಿತು. ಅದರಲ್ಲಿ, “ಇಥಿಯೋಪ್ಯದ ಅರಸನಾದ ತಿರ್ಹಾಕನು ನಿನ್ನೊಂದಿಗೆ ಯುದ್ಧಮಾಡಲು ಬರುತ್ತಿದ್ದಾನೆ” ಎಂದು ಬರೆದಿತ್ತು. ಅದನ್ನು ಕೇಳಿ ಅಶ್ಶೂರದ ಅರಸನು ಲಾಕೀಷನ್ನು ಬಿಟ್ಟು ಲಿಬ್ನಕ್ಕೆ ಹೋದನು. ಸೇನಾದಂಡನಾಯಕನಿಗೆ ಈ ಸಮಾಚಾರ ಮುಟ್ಟಿದ ಕೂಡಲೇ ಅವನು ತನ್ನ ಅರಸನು ಯುದ್ಧಮಾಡುತ್ತಿದ್ದ ಲಿಬ್ನ ಪಟ್ಟಣಕ್ಕೆ ಹೋದನು.

ಅಲ್ಲಿಂದ ಅವನು ಹಿಜ್ಕೀಯನ ಬಳಿಗೆ ತನ್ನ ದೂತರನ್ನು ಕಳುಹಿಸಿ, 10 “ಯೆಹೂದದ ಅರಸನಾದ ಹಿಜ್ಕೀಯನಿಗೆ ನೀವು ಹೀಗೆ ಹೇಳಬೇಕು:

‘ನೀನು ನಂಬುವ ದೇವರಿಂದ ನೀನು ಮೋಸ ಹೋಗಬೇಡ. “ಜೆರುಸಲೇಮ್ ಅಶ್ಶೂರದ ಅರಸನ ಕೈಯಿಂದ ಸೋಲಿಸಲ್ಪಡಲು ದೇವರು ಅವಕಾಶ ಕೊಡುವುದಿಲ್ಲ” ಎಂದು ಹೇಳಬೇಡ. 11 ಅಶ್ಶೂರದ ಅರಸರು ಬೇರೆ ಎಲ್ಲಾ ದೇಶಗಳವರಿಗೆ ಏನು ಮಾಡಿದ್ದಾರೆಂದು ನೀವು ಕೇಳಿದ್ದೀರಿ. ಅವರು ಸಂಪೂರ್ಣವಾಗಿ ತಮ್ಮ ವೈರಿಗಳನ್ನು ನಾಶಮಾಡಿದರು. ನೀವು ರಕ್ಷಿಸಲ್ಪಡುವಿರಾ? ಇಲ್ಲ! 12 ಅವರ ದೇವರುಗಳು ಅವರನ್ನು ರಕ್ಷಿಸಿದರೋ? ಇಲ್ಲ! ನನ್ನ ಪೂರ್ವಿಕರು ಅವರನ್ನು ಸಂಪೂರ್ಣವಾಗಿ ನಾಶಮಾಡಿದರು. ಅವರು ಗೋಜಾನ್, ಖಾರಾನ್, ರೆಚೆಫ್ ಎಂಬ ಪಟ್ಟಣಗಳ ಜನರನ್ನೂ ತೆಲಸ್ಸಾರ್‌ನಲ್ಲಿ ವಾಸವಾಗಿದ್ದ ಎದೆನಿನ ಜನರನ್ನೂ ನಾಶಮಾಡಿದರು. 13 ಹಮಾತಿನ ಅರಸನೆಲ್ಲಿ? ಅರ್ಪಾದಿನ ಅರಸನೆಲ್ಲಿ? ಸೆಫರ್ವಯಿಮ್ ನಗರದ ಅರಸನೆಲ್ಲಿ? ಹೇನ, ಇವ್ವಾ ಎಂಬ ಪಟ್ಟಣಗಳ ಅರಸರೆಲ್ಲಿ? ಅವರೆಲ್ಲರೂ ಹತರಾಗಿದ್ದಾರೆ. ಎಲ್ಲಾ ನಾಶವಾಗಿ ಹೋದರು.’”

ದೇವರಿಗೆ ಹಿಜ್ಕೀಯನ ಪ್ರಾರ್ಥನೆ

14 ಹಿಜ್ಕೀಯನು ಆ ದೂತರ ಕೈಗಳಿಂದ ಪತ್ರಗಳನ್ನು ತೆಗೆದುಕೊಂಡು ಓದಿದನು. ಅನಂತರ ನೇರವಾಗಿ ಯೆಹೋವನ ಆಲಯಕ್ಕೆ ಹೋಗಿ ಆ ಪತ್ರವನ್ನು ಯೆಹೋವನ ಮುಂದಿಟ್ಟನು. 15 ಹಿಜ್ಕೀಯನು ಯೆಹೋವನಿಗೆ ಪ್ರಾರ್ಥಿಸುತ್ತಾ ಹೇಳಿದ್ದೇನೆಂದರೆ: 16 “ಇಸ್ರೇಲರ ದೇವರೇ, ಸರ್ವಶಕ್ತನಾದ ಯೆಹೋವನೇ, ನೀನು ಕೆರೂಬಿಯರ ರೆಕ್ಕೆಯ ಮೇಲೆ ಆಸೀನನಾಗಿರುವೆ. ಇಡೀ ಭೂಮಂಡಲದಲ್ಲಿರುವ ರಾಜ್ಯಗಳನ್ನೆಲ್ಲಾ ನೀನೇ ಆಳುವವನಾಗಿರುವೆ; ಹೌದು, ನೀನೊಬ್ಬನೇ ಆಳುವವನಾಗಿರುವೆ. ನೀನು ಆಕಾಶವನ್ನೂ ಭೂಮಿಯನ್ನೂ ನಿರ್ಮಿಸಿರುವೆ. 17 ಯೆಹೋವನೇ, ನನ್ನ ಮಾತುಗಳಿಗೆ ಕಿವಿಗೊಡು. ಯೆಹೋವನೇ, ನಿನ್ನ ಕಣ್ಣುಗಳನ್ನು ತೆರೆದು ಈ ಪತ್ರವನ್ನು ನೋಡು. ಸನ್ಹೇರೀಬನು ಜೀವಸ್ವರೂಪ ದೇವರಾದ ನಿನ್ನನ್ನು ಅವಮಾನಮಾಡಿ ಬರೆದ ಪತ್ರವನ್ನು ಕೇಳಿಸಿಕೊ! 18 ಅಶ್ಶೂರದ ಅರಸರು ಆ ಎಲ್ಲಾ ಜನಾಂಗಗಳನ್ನು ನಾಶಮಾಡಿದ್ದು ನಿಜ. 19 ಅಶ್ಶೂರದ ಅರಸರು ಆ ಜನಾಂಗಗಳ ದೇವರುಗಳನ್ನು ಸುಟ್ಟುಹಾಕಿದರು. ಆದರೆ ಆ ದೇವರುಗಳು ಸತ್ಯವಾದುವುಗಳಲ್ಲ. ಅವುಗಳು ಮನುಷ್ಯರು ಕಲ್ಲಿನಿಂದ ಮತ್ತು ಮರದಿಂದ ಕೆತ್ತಿದ ವಿಗ್ರಹಗಳಾಗಿದ್ದವು. ಆದ್ದರಿಂದ ಅಶ್ಶೂರದ ಅರಸರು ಅವುಗಳನ್ನು ನಾಶಮಾಡಲು ಸಾಧ್ಯವಾಯಿತು. 20 ಆದರೆ ನೀನು ನಮ್ಮ ದೇವರಾದ ಯೆಹೋವನು. ಆದ್ದರಿಂದ ದಯಮಾಡಿ ನಮ್ಮನ್ನು ಅಶ್ಶೂರದ ಅರಸನ ಕೈಯಿಂದ ರಕ್ಷಿಸು. ಆಗ ಭೂಮಿಯ ಎಲ್ಲಾ ರಾಜ್ಯಗಳೂ ಯೆಹೋವನಾದ ನೀನೇ ದೇವರೆಂದು ತಿಳಿದುಕೊಳ್ಳುವವು.”

ಹಿಜ್ಕೀಯನಿಗೆ ದೇವರ ಉತ್ತರ

21 ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಈ ಸಂದೇಶವನ್ನು ಕಳುಹಿಸಿದನು: “ಇಸ್ರೇಲರ ದೇವರಾದ ಯೆಹೋವನು ಹೇಳುವುದೇನೆಂದರೆ: ‘ಅಶ್ಶೂರದ ಅರಸನಾದ ಸನ್ಹೇರೀಬನ ಪತ್ರದ ವಿಷಯವಾಗಿ ನೀನು ಪ್ರಾರ್ಥಿಸುವದನ್ನು ನಾನು ಕೇಳಿದೆನು.’

22 “ಸನ್ಹೇರೀಬನ ಕುರಿತು ಯೆಹೋವನ ಸಂದೇಶವಿದು:

‘ಅಶ್ಶೂರದ ಅರಸನೇ, ಚೀಯೋನಿನ ಕುಮಾರಿಯು ನಿನ್ನನ್ನು ಪ್ರಾಮುಖ್ಯವಾದವನೆಂದು ಎಣಿಸುವದಿಲ್ಲ.
    ಆಕೆ ನಿನ್ನನ್ನು ನೋಡಿ ಪರಿಹಾಸ್ಯ ಮಾಡುವಳು.
ಜೆರುಸಲೇಮಿನ ಕುಮಾರಿಯು ನಿನ್ನ ಹಿಂದೆ ತಲೆಯಾಡಿಸುತ್ತಾ
    ನಿನ್ನನ್ನು ಹಾಸ್ಯ ಮಾಡುವಳು.
23 ನೀನು ಅವಮಾನಪಡಿಸಿ ಪರಿಹಾಸ್ಯ ಮಾಡಿ ವಿರೋಧವಾಗಿ ಮಾತಾಡಿದ್ದು ಯಾರಿಗೆ?
    ನೀನು ಇಸ್ರೇಲಿನ ಪರಿಶುದ್ಧನಿಗೆ ವಿರುದ್ಧವಾಗಿರುವೆ.
ಆತನಿಗಿಂತ ನೀನೇ ಉತ್ತಮನೆಂಬ
    ರೀತಿಯಲ್ಲಿ ನೀನು ವರ್ತಿಸಿರುವೆ.
24 ನನ್ನ ಒಡೆಯನಾದ ಯೆಹೋವನನ್ನು ತುಚ್ಛೀಕರಿಸಲಿಕ್ಕೆ ನೀನು ನಿನ್ನ ಅಧಿಕಾರಿಯನ್ನು ಕಳುಹಿಸಿದೆ.
“ನನ್ನಲ್ಲಿ ಬಲ ಸಾಮರ್ಥ್ಯಗಳಿವೆ; ನನ್ನಲ್ಲಿ ಅನೇಕಾನೇಕ ರಥಗಳಿವೆ. ನನ್ನ ಬಲದಿಂದ ನಾನು ಲೆಬನೋನನ್ನು ಸೋಲಿಸಿದೆ.
ಲೆಬನೋನಿನ ಉನ್ನತ ಶಿಖರಗಳನ್ನು ನಾನು ಏರಿದೆನು.
    ಲೆಬನೋನಿನ ಎತ್ತರವಾದ ದೇವದಾರು ಮರಗಳನ್ನೂ
ಶ್ರೇಷ್ಠವಾದ ತುರಾಯಿ ಮರಗಳನ್ನೂ (ಸೈನ್ಯ) ನಾನು ಕಡಿದುಹಾಕಿದೆನು.
    ನಾನು ಅತ್ಯುನ್ನತ ಶಿಖರಕ್ಕೂ ದಟ್ಟವಾದ ಕಾಡಿನೊಳಗೂ ಹೋಗಿದ್ದೇನೆ.
25 ನಾನು ಬಾವಿಗಳನ್ನು ತೋಡಿ ಹೊಸಹೊಸ ಸ್ಥಳದ ನೀರು ಕುಡಿದಿರುವೆನು.
ಈಜಿಪ್ಟಿನ ನದಿಗಳನ್ನು ಬತ್ತಿಸಿ
    ದೇಶದಲ್ಲೆಲ್ಲಾ ಸಂಚರಿಸಿದೆನು” ಎಂದು ನೀನು ಹೇಳಿದೆ.’

26 “ಆದರೆ ದೇವರು ಏನು ಹೇಳುತ್ತಾನೆಂದು ಕೇಳಿದೆಯಾ?
    ಬಹುಕಾಲದ ಹಿಂದೆ ನಾನು ಯೋಜನೆಯನ್ನು ಮಾಡಿದ್ದೆನು.
    ಪ್ರಾಚೀನ ಕಾಲದಿಂದ ಅದರ ವಿಷಯವಾಗಿ ಆಲೋಚನೆ ಮಾಡಿದ್ದೆನು.
ಈಗ ಅದು ನೆರವೇರುವಂತೆ ಮಾಡಿದ್ದೇನೆ.
    ಬಲಿಷ್ಠವಾದ ನಗರಗಳನ್ನು ನಾಶಮಾಡಿ ಅವುಗಳನ್ನು ಕಲ್ಲಿನ ರಾಶಿಗಳನ್ನಾಗಿ ಮಾಡಲು ನಿನ್ನನ್ನು ಬಿಟ್ಟಿರುತ್ತೇನೆ.
27 ಆ ಪಟ್ಟಣಗಳಲ್ಲಿದ್ದ ಜನರು ನಿಸ್ಸಹಾಯಕರಾದರು ಮತ್ತು ಬಲಹೀನರಾದರು.
    ಅವರು ಹೆದರಿ ಗಲಿಬಿಲಿಗೊಂಡಿದ್ದರು.
ಅವರು ಹೊಲದ ಹುಲ್ಲಿನಂತೆಯೂ
    ಸಸಿಗಳಂತೆಯೂ ಕಡಿದುಹಾಕಲ್ಪಡಲಿದ್ದಾರೆ.
ಅವರು ಮನೆಯ ಮೇಲೆ ಬೆಳೆಯುವ ಹುಲ್ಲಿನಂತಿದ್ದಾರೆ.
    ಅವು ಉದ್ದವಾಗಿ ಬೆಳೆಯುವ ಮೊದಲೇ ಸಾಯುವವು.
28 ನಿನ್ನ ಸೈನ್ಯದ ಬಗ್ಗೆಯೂ ನಿನ್ನ ಯುದ್ಧಗಳ ಬಗ್ಗೆಯೂ ನನಗೆ ಗೊತ್ತಿದೆ.
    ನೀನು ವಿಶ್ರಾಂತಿ ತೆಗೆದುಕೊಂಡದ್ದೂ ನನಗೆ ಗೊತ್ತಿದೆ.
    ನೀನು ಯುದ್ಧಕ್ಕೆ ಹೋದದ್ದೂ ನನಗೆ ಗೊತ್ತಿದೆ.
    ನೀನು ಯುದ್ಧದಿಂದ ಹಿಂತಿರುಗಿ ಮನೆಗೆ ಬಂದದ್ದೂ ನನಗೆ ಗೊತ್ತಿದೆ.
ನೀನು ನನ್ನ ಮೇಲೆ ಕೋಪಗೊಂಡಿರುವುದೂ ನನಗೆ ಗೊತ್ತಿದೆ.
29 ಹೌದು, ನೀನು ನನ್ನ ವಿಷಯದಲ್ಲಿ ಕೋಪಗೊಂಡಿರುವೆ.
    ಗರ್ವದಿಂದ ತುಂಬಿದ ನಿನ್ನ ಪರಿಹಾಸ್ಯದ ಮಾತುಗಳನ್ನು ನಾನು ಕೇಳಿದ್ದೇನೆ.
ನಾನು ನಿನ್ನ ಮೂಗಿಗೆ ಕೊಕ್ಕೆ ಸಿಕ್ಕಿಸಿ,
    ನಿನ್ನ ಬಾಯಿಗೆ ಕಡಿವಾಣವನ್ನು ಹಾಕಿ,
ನೀನು ಎಲ್ಲಿಂದ ಬಂದಿದ್ದೆಯೋ
    ಅಲ್ಲಿಗೆ ನಿನ್ನನ್ನು ಹಿಂತಿರುಗಿಸುತ್ತೇನೆ.”

ಹಿಜ್ಕೀಯನಿಗೆ ಯೆಹೋವನ ಸಂದೇಶ

30 ಆಗ ಯೆಹೋವನು ಹಿಜ್ಕೀಯನಿಗೆ, “ಈ ಮಾತುಗಳೆಲ್ಲಾ ಸತ್ಯವೆಂಬುದಕ್ಕೆ ನಿನಗೊಂದು ಗುರುತನ್ನು ಕೊಡುತ್ತೇನೆ. ಬೀಜ ಬಿತ್ತಲು ನಿನಗೆ ಸಾಧ್ಯವಿರಲಿಲ್ಲ. ಆದ್ದರಿಂದ ಈ ವರ್ಷದಲ್ಲಿ ಕೂಳೆಬೆಳೆಯನ್ನೂ ಮುಂದಿನ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ ನೀನು ಊಟಮಾಡುವೆ. ಆದರೆ ಮೂರನೆಯ ವರ್ಷದಲ್ಲಿ ನೀನೇ ಬಿತ್ತಿದ ಬೀಜದಲ್ಲಿ ಬೆಳೆದ ಬೆಳೆಯನ್ನು ಊಟಮಾಡುವೆ. ಆ ಬೆಳೆಯಿಂದ ನಿನಗೆ ಬೇಕಾದಷ್ಟು ಆಹಾರ ಸಂಗ್ರಹವಾಗುವದು. ನೀನು ದ್ರಾಕ್ಷಾಲತೆಗಳನ್ನು ನೆಟ್ಟು ಅದರ ಫಲಗಳನ್ನು ತಿನ್ನುವೆ.

31 “ಯೆಹೂದ ಕುಲದವರಲ್ಲಿ ತಪ್ಪಿಸಿಕೊಂಡು ಜೀವಂತವಾಗಿ ಉಳಿದವರು ಮತ್ತೆ ಅಭಿವೃದ್ಧಿಯಾಗುವರು. ತಮ್ಮ ಬೇರುಗಳನ್ನು ಆಳವಾಗಿ ಇಳಿಯಬಿಟ್ಟು ಹಣ್ಣುಗಳನ್ನು ಬಿಡುವ ಗಿಡಗಳಂತೆ ಅವರಿರುವರು. 32 ಯಾಕೆಂದರೆ ಸ್ವಲ್ಪಮಂದಿ ಮಾತ್ರವೇ ಜೀವಂತವಾಗಿ ಉಳಿಯುವರು. ಅವರು ಜೆರುಸಲೇಮಿನಿಂದ ಹೊರಟುಹೋಗುವರು. ಉಳಿದವರು ಚೀಯೋನ್ ಪರ್ವತದಿಂದ ಬರುವರು.” ಯೆಹೋವನ ಗಾಢವಾದ ಪ್ರೀತಿಯೇ ಇದನ್ನು ಮಾಡುವದು.

33 ಆದ್ದರಿಂದ ಯೆಹೋವನು ಅಶ್ಶೂರದ ಅರಸನ ಬಗ್ಗೆ ಹೇಳುವನು:

“ಅವನು ಈ ಪಟ್ಟಣದೊಳಗೆ ಬರುವದಿಲ್ಲ.
    ಅವನು ಒಂದು ಬಾಣವನ್ನೂ ಈ ಪಟ್ಟಣದ ಮೇಲೆ ಹಾರಿಸುವದಿಲ್ಲ.
ಅವನು ತನ್ನ ಗುರಾಣಿಗಳನ್ನು ಈ ಪಟ್ಟಣಕ್ಕೆ ತರುವದಿಲ್ಲ.
    ಈ ಪಟ್ಟಣದ ಗೋಡೆಗಳ ಮೇಲೆ ಆಕ್ರಮಣಮಾಡಲು ಅವನು ದಿಬ್ಬ ಹಾಕುವದಿಲ್ಲ.
34 ಅವನು ಬಂದ ದಾರಿಯಿಂದಲೇ ಹಿಂದಕ್ಕೆ ಹೋಗುವನು.
    ಅವನು ಈ ಪಟ್ಟಣದೊಳಗೆ ಬರುವದಿಲ್ಲ.
    ಇದು ಯೆಹೋವನ ನುಡಿ.
35 ನಾನು ಈ ಪಟ್ಟಣವನ್ನು ರಕ್ಷಿಸಿ ಕಾಪಾಡುವೆನು.
    ನನಗೋಸ್ಕರವಾಗಿಯೇ ಇದನ್ನು ಮಾಡುವೆನು.
    ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ಇದನ್ನು ಮಾಡುವೆನು.”

ಅಶ್ಶೂರರ ಸೈನ್ಯವು ನಾಶಗೊಂಡದ್ದು

36 ಆ ರಾತ್ರಿ, ಯೆಹೋವನ ದೂತನು ಹೊರಟುಹೋಗಿ ಅಶ್ಶೂರದ ಪಾಳೆಯದಲ್ಲಿ ಒಂದು ಲಕ್ಷದ ಎಂಭತ್ತೈದು ಸಾವಿರ ಮಂದಿಯನ್ನು ಸಂಹರಿಸಿದನು. ಜನರು ಬೆಳಿಗ್ಗೆ ಎದ್ದಾಗ ಸುತ್ತಲೂ ಹೆಣಗಳು ಬಿದ್ದಿದ್ದವು. 37 ಅಶ್ಶೂರದ ಅರಸನಾದ ಸನ್ಹೇರೀಬನು ನಿನೆವೆಗೆ ಹಿಂದಿರುಗಿ ಅಲ್ಲಿಯೇ ಉಳಿದನು.

38 ಒಂದು ದಿವಸ ಸನ್ಹೇರೀಬನು ತನ್ನ ದೇವರಾದ ನಿಸ್ರೋಕನ ಮಂದಿರದಲ್ಲಿ ಪೂಜಿಸುತ್ತಿರುವಾಗ ಅವನ ಇಬ್ಬರು ಮಕ್ಕಳಾದ ಅದ್ರಮ್ಮೆಲೆಕ್ ಮತ್ತು ಸರೆಚರ್ ಎಂಬವರು ಅವನನ್ನು ಕತ್ತಿಯಿಂದ ಸಂಹರಿಸಿ ಅರರಾಟ್‌ಗೆ ಪಲಾಯನಗೈದರು. ಅನಂತರ ಸನ್ಹೇರೀಬನ ಮಗ ಏಸರ್‌ಹದ್ದೋನನು ಅಶ್ಶೂರದ ಹೊಸ ಅರಸನಾದನು.

ಹಿಜ್ಕೀಯನ ಅಸ್ವಸ್ಥತೆ

38 ಆ ಸಮಯದಲ್ಲಿ ಹಿಜ್ಕೀಯನು ರೋಗಗ್ರಸ್ತನಾಗಿ ಸಾಯುವ ಸ್ಥಿತಿಯಲ್ಲಿದ್ದನು. ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನನ್ನು ನೋಡಲು ಹೋದನು. ಯೆಶಾಯನು ಅರಸನಿಗೆ, “ಯೆಹೋವನು ಈ ವಿಷಯಗಳನ್ನು ನಿನಗೆ ತಿಳಿಸಲು ಹೇಳಿದ್ದಾನೆ: ‘ನೀನು ಬೇಗನೇ ಸಾಯುವೆ. ಆದ್ದರಿಂದ ನೀನು ಸಾಯುವಾಗ ನಿನ್ನ ಕುಟುಂಬದವರು ಮಾಡಬೇಕಾದದ್ದನ್ನು ಅವರಿಗೆ ತಿಳಿಸು. ನಿನಗೆ ಗುಣವಾಗುವುದಿಲ್ಲ’” ಎಂದು ಹೇಳಿದನು.

ಹಿಜ್ಕೀಯನು ದೇವಾಲಯದ ಕಡೆಗಿರುವ ಗೋಡೆಯ ಕಡೆಗೆ ಮುಖ ಮಾಡಿ ದೇವರಿಗೆ, “ಯೆಹೋವನೇ, ನಾನು ನಿನಗೆ ಪೂರ್ಣಹೃದಯದಿಂದ ನಂಬಿಗಸ್ತನಾಗಿ ಸೇವೆಮಾಡಿದ್ದನ್ನು ಜ್ಞಾಪಿಸಿಕೋ. ನಿನಗೆ ಇಷ್ಟವಾದದ್ದನ್ನೆಲ್ಲ ನಾನು ಮಾಡಿದ್ದೇನೆ” ಎಂದು ಪ್ರಾರ್ಥಿಸಿ ಬಹಳವಾಗಿ ಅತ್ತನು.

ಆಗ ಯೆಶಾಯನಿಗೆ ಈ ಸಂದೇಶವು ಯೆಹೋವನಿಂದ ಬಂದಿತು: “ಹಿಜ್ಕೀಯನ ಬಳಿಗೆ ಹೋಗಿ ಹೇಳು, ನಿನ್ನ ಪೂರ್ವಿಕನಾದ ದಾವೀದನ ದೇವರಾದ ಯೆಹೋವನು ಹೇಳುವುದೇನೆಂದರೆ: ‘ನಿನ್ನ ಪ್ರಾರ್ಥನೆಯನ್ನು ನಾನು ಕೇಳಿದೆನು; ನಿನ್ನ ಕಣ್ಣೀರನ್ನು ನೋಡಿದೆನು. ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಸೇರಿಸಿದ್ದೇನೆ. ನಾನು ನಿನ್ನನ್ನೂ ಈ ಪಟ್ಟಣವನ್ನೂ ಕಾಪಾಡುವೆನು. ಅಶ್ಶೂರದ ಅರಸನಿಂದ ರಕ್ಷಿಸುವೆನು.’”

“ದೇವರು ತಾನು ಹೇಳಿದ್ದನ್ನು ನೆರವೇರಿಸುತ್ತಾನೆ ಎಂಬುದಕ್ಕೆ ಗುರುತೇನೆಂದರೆ: ಇಗೋ, ಆಹಾಜನ ಮೆಟ್ಟಿಲಲ್ಲಿರುವ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಹೋಗುವಂತೆ ಮಾಡುವೆನು ಎಂದು ನಿನ್ನ ದೇವರಾಗಿರುವ ಯೆಹೋವನು ಹೇಳುತ್ತಾನೆಂಬದಾಗಿ ತಿಳಿಸು” ಎಂದು ಹೇಳಿದನು. ಅದರಂತೆ ಮೆಟ್ಟಿಲಲ್ಲಿರುವ ಸೂರ್ಯನ ನೆರಳು ಹತ್ತು ಮೆಟ್ಟಿಲು ಹಿಂದಕ್ಕೆ ಹೋಯಿತು.

ಹಿಜ್ಕೀಯನ ಹಾಡು

ಹಿಜ್ಕೀಯನು ತನ್ನ ಕಾಯಿಲೆಯಿಂದ ಗುಣಹೊಂದಿದ ಬಳಿಕ ಬರೆದ ಪತ್ರ:

10 ನಾನು ವೃದ್ಧನಾಗುವ ತನಕ ಬದುಕುವೆನೆಂದು ನಾನು ನನ್ನೊಳಗೆ ಅಂದುಕೊಂಡಿದ್ದೆನು.
    ಆದರೆ ನಾನು ಮರಣದ್ವಾರದ ಮೂಲಕ ಹೋಗುವ ಸಮಯ ಬಂತು.
    ನನ್ನ ಜೀವಮಾನವೆಲ್ಲ ಅಲ್ಲಿ ಕಳೆಯುವೆನು.
11 ಅದಕ್ಕೆ ನಾನೆಂದೆ: “ಇನ್ನು ಮೇಲೆ ಜೀವಿತರ ಲೋಕದಲ್ಲಿ ಇನ್ನು ದೇವರಾದ ಯೆಹೋವನನ್ನು ನೋಡುವದಿಲ್ಲ.
    ಇನ್ನು ಮೇಲೆ ಜನರು ಲೋಕದಲ್ಲಿ ಜೀವಿಸುವದನ್ನು ನಾನು ನೋಡುವದಿಲ್ಲ.
12 ನನ್ನ ಮನೆಯು ಅಂದರೆ ನನ್ನ ಕುರುಬನ ಗುಡಾರವು ಕೀಳಲ್ಪಟ್ಟು ನನ್ನಿಂದ ತೆಗೆಯಲ್ಪಡುತ್ತಿದೆ.
    ಒಬ್ಬನು ಮಗ್ಗದಲ್ಲಿ ಬಟ್ಟೆಯನ್ನು ಸುತ್ತಿ ಕತ್ತರಿಸಿಬಿಡುವಂತೆ ನಾನು ಕತ್ತರಿಸಲ್ಪಟ್ಟಿದ್ದೇನೆ.
    ನನ್ನ ಆಯುಷ್ಯವನ್ನು ಚಿಕ್ಕ ವಯಸ್ಸಿನಲ್ಲಿಯೇ ಮುಗಿಸಿಬಿಟ್ಟಿರುವೆ.
13 ಇಡೀರಾತ್ರಿ ನಾನು ಸಿಂಹದಂತೆ ಗರ್ಜಿಸಿದೆನು.
    ಆದರೆ ಸಿಂಹವು ಎಲುಬುಗಳನ್ನು ಜಗಿದು ಪುಡಿಮಾಡುವಂತೆ ನನ್ನ ನಿರೀಕ್ಷೆಯೆಲ್ಲಾ ಜಜ್ಜಿಹೋಯಿತು.
ನೀನು ನನ್ನ ಜೀವಿತವನ್ನು ಅಷ್ಟು ಅಲ್ಪಕಾಲಕ್ಕೇ ಕೊನೆಗೊಳಿಸಿದೆ!
14 ನಾನು ಪಾರಿವಾಳದಂತೆ ಕೂಗಿಕೊಂಡೆನು.
    ಪಕ್ಷಿಯಂತೆ ಅರಚಿಕೊಂಡೆನು.
ನನ್ನ ಕಣ್ಣುಗಳು ಸ್ವರ್ಗದ ಕಡೆಗೆ
    ನೋಡುತ್ತಾ ಆಯಾಸಗೊಂಡವು.
ನನ್ನ ಒಡೆಯನೇ, ನಾನು ತುಂಬಾ ಚಿಂತಾಕ್ರಾಂತನಾಗಿದ್ದೇನೆ.
    ನೀನು ನನಗೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡು.”
15 ನಾನೇನು ಹೇಳಲಿ?
    ನನಗೆ ಸಂಭವಿಸಲಿರುವುದನ್ನು ನನ್ನ ಒಡೆಯನು ತಿಳಿಸಿದ್ದಾನೆ.
    ನನ್ನ ಒಡೆಯನು ಅದನ್ನು ನೆರವೇರಿಸುತ್ತಾನೆ.
ನನ್ನ ಆತ್ಮದಲ್ಲಿ ಸಂಕಟಗಳೆಲ್ಲಾ ತುಂಬಿವೆ.
    ನಾನು ನನ್ನ ಜೀವಮಾನವೆಲ್ಲಾ ದೀನನಾಗುವೆನು.
16 ನನ್ನ ಒಡೆಯನೇ, ನನ್ನ ಆತ್ಮವು ಪುನರುಜ್ಜೀವಿಸುವಂತೆ ಮಾಡು.
    ನನ್ನ ಆತ್ಮವು ಬಲಗೊಂಡು ಆರೋಗ್ಯದಾಯಕವಾಗುವಂತೆ ಸಹಾಯಮಾಡು.
    ನಾನು ತಿರುಗಿ ಸ್ವಸ್ಥತೆ ಹೊಂದುವಂತೆ ಮಾಡು.
    ನಾನು ಮತ್ತೆ ಜೀವಿಸುವಂತೆ ಮಾಡು.

17 ಇಗೋ, ನನ್ನ ಸಂಕಟವೆಲ್ಲಾ ಹೊರಟುಹೋಯಿತು.
    ನನಗೀಗ ಸಮಾಧಾನವಿದೆ.
ನೀನು ನನ್ನನ್ನು ಬಹಳವಾಗಿ ಪ್ರೀತಿಸುವದರಿಂದ
    ನನ್ನ ಶರೀರವು ಸಮಾಧಿಯಲ್ಲಿ ಕೊಳೆಯುವಂತೆ ಮಾಡಲಿಲ್ಲ.
ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
    ನನ್ನ ಪಾಪಗಳನ್ನು ಬಹುದೂರ ಬಿಸಾಡಿದೆ.
18 ಸತ್ತವರು ನಿನ್ನನ್ನು ಸ್ತುತಿಸುವದಿಲ್ಲ.
    ಪಾತಾಳದಲ್ಲಿರುವ ಜನರು ನಿನ್ನನ್ನು ಸ್ತುತಿಸುವದಿಲ್ಲ.
ಸತ್ತುಹೋದವರು ಸಹಾಯಕ್ಕಾಗಿ ನಿನ್ನ ಮೇಲೆ ಭರವಸವಿಡರು.
    ಅವರು ಭೂಮಿಯಲ್ಲಿರುವ ಆಳವಾದ ಕುಣಿಗೆ ಸೇರುವರು.
    ಅವರು ತಿರುಗಿ ಮಾತನಾಡುವದೇ ಇಲ್ಲ.
19 ನನ್ನ ಹಾಗೆ ಈ ದಿನ ಜೀವಿಸುವವರೆಲ್ಲಾ ನಿನ್ನನ್ನು ಕೊಂಡಾಡುವರು.
    ತಂದೆಯು ತನ್ನ ಮಕ್ಕಳಿಗೆ ನಿನ್ನ ಮೇಲೆ ಭರವಸವಿಡಲು ಕಲಿಸುವರು.
20 ನಾನು ಹೇಳುವುದೇನೆಂದರೆ: “ಯೆಹೋವನು ನನ್ನನ್ನು ರಕ್ಷಿಸಿದನು.
    ನಮ್ಮ ಜೀವಮಾನದ ಕಾಲವೆಲ್ಲಾ ಯೆಹೋವನ ಆಲಯದಲ್ಲಿ ನಾವು ಹಾಡುತ್ತಾ ವಾದ್ಯಬಾರಿಸುತ್ತಾ ಆತನನ್ನು ಸ್ತುತಿಸುವೆವು.”

21 ಆಗ ಯೆಶಾಯನು ಹಿಜ್ಕೀಯನಿಗೆ, “ನೀನು ಅಂಜೂರದ ಉಂಡೆ ಮಾಡಿ ಅದನ್ನು ನಿನ್ನ ಗಾಯದ ಮೇಲಿಡು. ಆಗ ನೀನು ಗುಣಹೊಂದುವೆ” ಎಂದು ಹೇಳಿದನು.

22 ಆಗ ಹಿಜ್ಕೀಯನು ಯೆಶಾಯನಿಗೆ, “ನಾನು ಸ್ವಸ್ಥ ಹೊಂದುವೆನೆಂಬುದಕ್ಕೆ ಗುರುತೇನು? ನಾನು ದೇವರ ಆಲಯಕ್ಕೆ ಮತ್ತೆ ಹೋಗುವೆನೆಂಬುದಕ್ಕೆ ಗುರುತೇನು?” ಎಂದು ಕೇಳಿದನು.

ಜೆರುಸಲೇಮಿಗೆ ಎಚ್ಚರಿಕೆ

39 ಆ ಸಮಯದಲ್ಲಿ ಬಲದಾನ್ ಎಂಬವನ ಮಗನಾದ ಮೆರೋದಕಬಲದಾನ್ ಎಂಬವನು ಬಾಬಿಲೋನಿನ ಅರಸನಾಗಿದ್ದನು. ಅವನಿಗೆ ಹಿಜ್ಕೀಯನು ಅಸ್ವಸ್ಥನಾಗಿದ್ದಾನೆಂಬ ವರ್ತಮಾನ ತಲುಪಿದ್ದರಿಂದ ಅವನು ಹಿಜ್ಕೀಯನಿಗೆ ಒಂದು ಪತ್ರವನ್ನೂ ಜೊತೆಗೆ ಬಹುಮಾನಗಳನ್ನೂ ತನ್ನ ದೂತರ ಸಂಗಡ ಕಳುಹಿಸಿದನು. ಅವುಗಳನ್ನು ನೋಡಿ ಹಿಜ್ಕೀಯನಿಗೆ ಬಹು ಸಂತೋಷವಾಯಿತು. ಅವನು ಬಾಬಿಲೋನಿನ ದೂತರಿಗೆ ತನ್ನ ಅರಮನೆಯ ಉಗ್ರಾಣದಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನೂ ತಾನು ಕೊಡಿಸಿಟ್ಟಿದ್ದ ಬೆಳ್ಳಿಬಂಗಾರಗಳನ್ನೂ ಸಾಂಬಾರ ಪದಾರ್ಥಗಳನ್ನೂ ಮತ್ತು ಸುಗಂಧದ್ರವ್ಯಗಳನ್ನೂ ತೋರಿಸಿದನು. ಅಲ್ಲದೆ ಯುದ್ಧದಲ್ಲಿ ಉಪಯೋಗಿಸುವ ಖಡ್ಗಗಳನ್ನು, ಗುರಾಣಿಗಳನ್ನು ತೋರಿಸಿದನು; ಅಲ್ಲದೆ ತನ್ನ ರಾಜ್ಯದಲ್ಲಿರುವ ಪ್ರತಿಯೊಂದು ವಿಷಯಗಳನ್ನು ಅವರಿಗೆ ಪ್ರದರ್ಶಿಸಿದನು.

ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಹೋಗಿ, “ನಿನ್ನ ಬಳಿಗೆ ಬಂದವರು ಎಲ್ಲಿಯವರು? ಅವರು ಏನನ್ನು ಹೇಳಿದರು?” ಎಂದು ವಿಚಾರಿಸಿದನು.

ಅದಕ್ಕೆ ಹಿಜ್ಕೀಯನು, “ಇವರು ಬಹುದೂರ ದೇಶದಿಂದ ನನ್ನನ್ನು ಸಂಧಿಸಲು ಬಂದಿದ್ದಾರೆ. ಅವರ ದೇಶ ಬಾಬಿಲೋನ್” ಎಂದನು.

“ನಿನ್ನ ಮನೆಯಲ್ಲಿ ಅವರು ಏನು ನೋಡಿದರು?” ಎಂದು ತಿರುಗಿ ಯೆಶಾಯನು ಪ್ರಶ್ನಿಸಿದನು.

“ಅವರು ನನ್ನ ಅರಮನೆಯಲ್ಲಿರುವದನ್ನೆಲ್ಲಾ ನೋಡಿದರು. ನಾನು ನನ್ನ ಐಶ್ವರ್ಯವನ್ನೆಲ್ಲಾ ಅವರಿಗೆ ತೋರಿಸಿದೆನು” ಎಂದು ಹಿಜ್ಕೀಯನು ಉತ್ತರಿಸಿದನು.

ಆಗ ಯೆಶಾಯನು ಹಿಜ್ಕೀಯನಿಗೆ, “ಸರ್ವಶಕ್ತನಾದ ಯೆಹೋವನ ಮಾತುಗಳನ್ನು ಕೇಳು: ‘ನಿನ್ನ ಮನೆಯಲ್ಲಿರುವ ಎಲ್ಲಾ ವಸ್ತುಗಳೂ ನಿನ್ನ ಪೂರ್ವಿಕರು ಕೂಡಿಟ್ಟಿದ್ದ ಎಲ್ಲಾ ವಸ್ತುಗಳೂ ಇಲ್ಲಿಂದ ಬಾಬಿಲೋನಿಗೆ ಒಯ್ಯುವ ಕಾಲವು ಬರುವದು. ಇಲ್ಲಿ ಏನೂ ಉಳಿಯುವದಿಲ್ಲ.’ ಇದು ಸರ್ವಶಕ್ತನಾದ ಯೆಹೋವನ ನುಡಿ. ಬಾಬಿಲೋನಿನವರು ನಿನ್ನ ಗಂಡುಮಕ್ಕಳನ್ನು ತೆಗೆದುಕೊಂಡು ಹೋಗುವರು. ಅವರು ಬಾಬಿಲೋನಿನ ಅರಮನೆಗಳಲ್ಲಿ ಕಂಚುಕಿಯರಾಗಿ ಸೇವೆ ಮಾಡುವರು” ಎಂದು ಹೇಳಿದನು.

ಅದಕ್ಕೆ ಹಿಜ್ಕೀಯನು ಯೆಶಾಯನಿಗೆ, “ಯೆಹೋವನ ಮಾತುಗಳು ಒಳ್ಳೆಯವೇ ಸರಿ” ಎಂದು ಹೇಳಿದನು. (ಯಾಕೆಂದರೆ ತಾನು ಅರಸನಾಗಿರುವಷ್ಟು ಕಾಲ ದೇಶದಲ್ಲಿ ಸಮಾಧಾನವಿರುವುದೆಂದು ಅವನು ಯೋಚಿಸಿಕೊಂಡನು.)

ಕೀರ್ತನೆಗಳು 76

ಸ್ತುತಿಗೀತೆ. ರಚನೆಗಾರ: ಆಸಾಪ.

76 ಯೆಹೂದದ ಜನರು ದೇವರನ್ನು ಬಲ್ಲವರೇ ಸರಿ!
    ಇಸ್ರೇಲಿನ ಜನರು ಆತನ ನಾಮವನ್ನು ಗೌರವಿಸುವರು.
ಆತನ ಗುಡಾರವು ಸಾಲೇಮಿನಲ್ಲಿದೆ.
    ಆತನ ಆಲಯವು ಸಿಯೋನ್ ಬೆಟ್ಟದ ಮೇಲಿದೆ.
ಆ ಸ್ಥಳದಲ್ಲಿ ದೇವರು ಬಿಲ್ಲುಬಾಣಗಳನ್ನೂ ಗುರಾಣಿಗಳನ್ನೂ
    ಖಡ್ಗಗಳನ್ನೂ ಇತರ ಯುದ್ಧಾಯುಧಗಳನ್ನೂ ನುಚ್ಚುನೂರು ಮಾಡಿದ್ದಾನೆ.

ದೇವರೇ, ಶತ್ರುಗಳನ್ನು ಸೋಲಿಸಿ
    ಬೆಟ್ಟಗಳಿಂದ ಇಳಿದುಬರುವಾಗ ನೀನು ತೇಜೋಮಯನಾಗಿರುವೆ.
ಆ ಸೈನಿಕರು ತಾವೇ ಶಕ್ತಿವಂತರೆಂದುಕೊಂಡಿದ್ದರು.
    ಆದರೆ ಈಗ ಅವರು ಬಯಲುಗಳಲ್ಲಿ ಸತ್ತುಬಿದ್ದಿದ್ದಾರೆ.
ಅವರು ಧರಿಸಿಕೊಂಡಿದ್ದವುಗಳನ್ನೆಲ್ಲ ಸುಲಿಗೆ ಮಾಡಲಾಗಿದೆ.
    ಆ ಸೈನಿಕರಲ್ಲಿ ಯಾರೂ ತಮ್ಮನ್ನು ಸಂರಕ್ಷಿಸಿಕೊಳ್ಳಲಾಗಲಿಲ್ಲ.
ಯಾಕೋಬನ ದೇವರು ಆ ಸೈನಿಕರನ್ನು ಗದರಿಸಲು
    ರಥಾಶ್ವಗಳ ಸೇನೆಯು ಮೂರ್ಛೆಗೊಂಡಿತು.
ದೇವರೇ, ನೀನು ಭಯಂಕರನೇ ಸರಿ!
    ನೀನು ಕೋಪಗೊಂಡಿರುವಾಗ ನಿನಗೆ ವಿರೋಧವಾಗಿ ಯಾರು ನಿಂತುಕೊಳ್ಳಬಲ್ಲರು?
ಯೆಹೋವನು ಎದ್ದುನಿಂತು
    ತನ್ನ ನ್ಯಾಯತೀರ್ಪನ್ನು ಪ್ರಕಟಿಸಿದನು.
ದೇವರು ಲೋಕದ ದೀನರನ್ನು ರಕ್ಷಿಸಿದನು.
    ಆತನು ಪರಲೋಕದಿಂದ ತೀರ್ಮಾನ ನೀಡುತ್ತಿರಲು ಭೂಲೋಕವೆಲ್ಲಾ ಭಯದಿಂದ ಸ್ತಬ್ಧವಾಯಿತು.
10 ದೇವರೇ, ನೀನು ದುಷ್ಟರನ್ನು ದಂಡಿಸುವಾಗ ಜನರು ನಿನ್ನನ್ನು ಕೊಂಡಾಡುವರು;
    ನಿನ್ನ ಕೋಪವನ್ನು ತೋರಿಸುವಾಗ ಅಳಿದುಳಿದವರು ಬಲಿಷ್ಠರಾಗುವರು.

11 ದೇವರಾದ ಯೆಹೋವನಿಗೆ ಹರಕೆಗಳನ್ನು ಮಾಡಿದವರೇ,
    ನಿಮ್ಮ ಹರಕೆಗಳನ್ನು ಸಲ್ಲಿಸಿರಿ.
ಸರ್ವಭೂನಿವಾಸಿಗಳೇ, ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ.
12 ಆತನು ಮಹಾನಾಯಕರುಗಳನ್ನು ಸೋಲಿಸುವನು.
    ಭೂರಾಜರುಗಳೆಲ್ಲಾ ಆತನಿಗೆ ಭಯಪಡುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International