Print Page Options
Previous Prev Day Next DayNext

Chronological

Read the Bible in the chronological order in which its stories and events occurred.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 15

ಯೆಹೂದದಲ್ಲಿ ಅಜರ್ಯನ ಆಳ್ವಿಕೆ

15 ಯಾರೊಬ್ಬಾಮನು ಇಸ್ರೇಲಿನ ರಾಜನಾಗಿದ್ದ ಇಪ್ಪತ್ತೇಳನೆಯ ವರ್ಷದಲ್ಲಿ ಅಮಚ್ಯನ ಮಗನಾದ ಅಜರ್ಯನು ಯೆಹೂದದ ರಾಜನಾದನು. ಅಜರ್ಯನು ಆಳಲಾರಂಭಿಸಿದಾಗ ಅವನಿಗೆ ಹದಿನಾರು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಐವತ್ತೆರಡು ವರ್ಷ ಆಳಿದನು. ಜೆರುಸಲೇಮಿನ ಯೆಕೊಲ್ಯ ಎಂಬ ಹೆಸರಿನವಳು ಅಜರ್ಯನ ತಾಯಿ. ಅಜರ್ಯನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವನ ದೃಷ್ಟಿಗೆ ಯೋಗ್ಯವಾದ ಕಾರ್ಯಗಳನ್ನು ಮಾಡಿದನು. ಅಜರ್ಯನು ತನ್ನ ತಂದೆಯಾದ ಅಮಚ್ಯನು ಮಾಡಿದ ಕಾರ್ಯಗಳನ್ನೇ ಅನುಸರಿಸಿದನು. ಆದರೆ ಅವನು ಉನ್ನತಸ್ಥಳಗಳನ್ನು ನಾಶಗೊಳಿಸಲಿಲ್ಲ. ಈ ಪೂಜಾಸ್ಥಳಗಳಲ್ಲಿ ಜನರು ಇನ್ನೂ ಯಜ್ಞಗಳನ್ನು ಅರ್ಪಿಸುತ್ತಿದ್ದರು ಮತ್ತು ಧೂಪವನ್ನು ಸುಡುತ್ತಿದ್ದರು.

ರಾಜನಾದ ಅಜರ್ಯನು ಕುಷ್ಠರೋಗ ಪೀಡಿತನಾಗುವಂತೆ ಯೆಹೋವನು ಮಾಡಿದನು. ಅವನು ಸಾಯುವವರೆಗೂ ಕುಷ್ಠರೋಗಿಯಾಗಿಯೇ ಇದ್ದನು. ಅಜರ್ಯನು ಪ್ರತ್ಯೇಕವಾದ ಮನೆಯಲ್ಲಿ ವಾಸಿಸುತ್ತಿದ್ದನು. ರಾಜನ ಮಗನಾದ ಯೋತಾಮನು ರಾಜನ ಅರಮನೆಯನ್ನು ನೋಡಿಕೊಳ್ಳುತ್ತಿದ್ದನು ಮತ್ತು ಜನರನ್ನು ಪಾಲಿಸುತ್ತಿದ್ದನು.

“ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಅಜರ್ಯನು ಮಾಡಿದ ಇತರ ಮಹಾಕಾರ್ಯಗಳನ್ನು ಕುರಿತು ಬರೆಯಲಾಗಿದೆ. ಅಜರ್ಯನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿ, ದಾವೀದ ನಗರದಲ್ಲಿ ಸಮಾಧಿಮಾಡಲಾಯಿತು. ಅಜರ್ಯನ ನಂತರ ಅವನ ಮಗನಾದ ಯೋತಾಮನು ಹೊಸ ರಾಜನಾದನು.

ಜೆಕರ್ಯನು ಇಸ್ರೇಲನ್ನು ಸ್ವಲ್ಪ ಕಾಲ ಆಳುವನು

ಯಾರೊಬ್ಬಾಮನ ಮಗನಾದ ಜೆಕರ್ಯನು ಇಸ್ರೇಲಿನ ಸಮಾರ್ಯದಲ್ಲಿ ಆರು ತಿಂಗಳ ಕಾಲ ಆಳಿದನು. ಅದು ಯೆಹೂದದ ರಾಜನಾಗಿದ್ದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೆಯ ವರ್ಷವಾಗಿತ್ತು. ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಜೆಕರ್ಯನು ಮಾಡಿದನು. ಅವನ ಪೂರ್ವಿಕರು ಮಾಡಿದಂತೆಯೇ ಅವನೂ ಮಾಡಿದನು. ಇಸ್ರೇಲರನ್ನು ಪಾಪಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದಂತಹ ಪಾಪಕೃತ್ಯಗಳನ್ನು ಅವನು ನಿಲ್ಲಿಸಲಿಲ್ಲ.

10 ಯಾಬೇಷನ ಮಗನಾದ ಶಲ್ಲೂಮನು ಜೆಕರ್ಯನ ವಿರುದ್ಧವಾಗಿ ಸಂಚುಗಳನ್ನು ಮಾಡಿದನು. ಶಲ್ಲೂಮನು ಜೆಕರ್ಯನನ್ನು ಜನರ ಮುಂದೆ ಕೊಂದುಹಾಕಿ ಹೊಸ ರಾಜನಾದನು. 11 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಜೆಕರ್ಯನು ಮಾಡಿದ ಇತರ ಕಾರ್ಯಗಳನ್ನೆಲ್ಲ ಬರೆಯಲಾಗಿದೆ. 12 ಹೀಗೆ ಯೆಹೋವನ ವಾಕ್ಯವು ನೆರವೇರಿತು. ಯೇಹುವಿನ ಸಂತತಿಯವರು ನಾಲ್ಕನೆಯ ತಲೆಮಾರಿನವರೆಗೆ ಇಸ್ರೇಲಿನ ರಾಜರಾಗಿರುತ್ತಾರೆ ಎಂದು ಯೆಹೋವನು ಅವನಿಗೆ ಮೊದಲೇ ತಿಳಿಸಿದ್ದನು.

ಶಲ್ಲೂಮನು ಇಸ್ರೇಲನ್ನು ಸ್ವಲ್ಪ ಕಾಲ ಆಳುವನು

13 ಯೆಹೂದದ ರಾಜನಾದ ಉಜ್ಜೀಯನ ಮೂವತ್ತೊಂಭತ್ತನೆಯ ವರ್ಷದ ಆಳ್ವಿಕೆಯಲ್ಲಿ ಯಾಬೇಷನ ಮಗನಾದ ಶಲ್ಲೂಮನು ಇಸ್ರೇಲಿನ ರಾಜನಾದನು. ಶಲ್ಲೂಮನು ಸಮಾರ್ಯದಲ್ಲಿ ಒಂದು ತಿಂಗಳು ಆಳಿದನು.

14 ಗಾದಿಯ ಮಗನಾದ ಮೆನಹೇಮನು ತಿರ್ಚದಿಂದ ಸಮಾರ್ಯಕ್ಕೆ ಬಂದನು. ಮೆನಹೇಮನು ಯಾಬೇಷನ ಮಗನಾದ ಶಲ್ಲೂಮನನ್ನು ಕೊಂದುಹಾಕಿದನು. ನಂತರ ಮೆನಹೇಮನು ಅವನ ನಂತರ ಹೊಸ ರಾಜನಾದನು.

15 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಶಲ್ಲೂಮನು ಮಾಡಿದ ಕಾರ್ಯಗಳನ್ನೂ ಜೆಕರ್ಯನ ವಿರುದ್ಧವಾಗಿ ಅವನು ಯೋಜಿಸಿದ ಉಪಾಯಗಳನ್ನೂ ಬರೆಯಲಾಗಿದೆ.

ಇಸ್ರೇಲಿನಲ್ಲಿ ಮೆನಹೇಮನ ಆಳ್ವಿಕೆ

16 ಶಲ್ಲೂಮನು ಸತ್ತನಂತರ, ಮೆನಹೇಮನು ತಿಪ್ಸಹುವನ್ನು ಮತ್ತು ಅದರ ಸುತ್ತಲಿನ ಪ್ರದೇಶವನ್ನು ಸೋಲಿಸಿದನು. ಜನರು ನಗರದ ಬಾಗಿಲನ್ನು ಅವನಿಗೆ ತೆರೆಯಲು ನಿರಾಕರಿಸಿದರು. ಆದ್ದರಿಂದ ಮೆನಹೇಮನು ಅವರನ್ನು ಸೋಲಿಸಿ ಆ ನಗರದಲ್ಲಿದ್ದ ಗರ್ಭಿಣಿ ಸ್ತ್ರೀಯರ ಹೊಟ್ಟೆಗಳನ್ನು ಸೀಳಿಸಿದನು.

17 ಅಜರ್ಯನು ಯೆಹೂದದ ರಾಜನಾಗಿದ್ದ ಮೂವತ್ತೊಂಭತ್ತನೆಯ ವರ್ಷದಲ್ಲಿ ಗಾದಿಯ ಮಗನಾದ ಮೆನಹೇಮನು ಇಸ್ರೇಲಿನ ರಾಜನಾದನು. ಮೆನಹೇಮನು ಸಮಾರ್ಯದಲ್ಲಿ ಹತ್ತು ವರ್ಷಗಳ ಕಾಲ ಆಳಿದನು. 18 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಮೆನಹೇಮನು ಮಾಡಿದನು. ಇಸ್ರೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನು ಮೆನಹೇಮನು ಮುಂದುವರಿಸಿದನು.

19 ಅಶ್ಶೂರ್ ದೇಶದ ರಾಜನಾದ ಪೂಲನು ಇಸ್ರೇಲಿನ ವಿರುದ್ಧ ಯುದ್ಧಕ್ಕೆ ಬಂದನು. ಮೆನಹೇಮನು ಪೂಲನಿಗೆ ಮೂವತ್ನಾಲ್ಕು ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟನು. ಪೂಲನು ಮೆನಹೇಮನಿಗೆ ಬೆಂಬಲವನ್ನು ನೀಡಲು ಮತ್ತು ಮೆನಹೇಮನ ರಾಜ್ಯವನ್ನು ಬಲಪಡಿಸಲು ಹೀಗೆ ಮಾಡಿದನು: 20 ಶ್ರೀಮಂತರು ಮತ್ತು ಅಧಿಕಾರವುಳ್ಳ ಜನರು ತೆರಿಗೆಯನ್ನು ನೀಡುವಂತೆ ಮಾಡಿ, ಮೆನಹೇಮನು ಈ ಹಣವನ್ನು ಸಂಗ್ರಹಿಸಿದನು. ಮೆನಹೇಮನು ಪ್ರತಿಯೊಬ್ಬ ಮನುಷ್ಯನಿಗೂ ಆರುನೂರು ಗ್ರಾಂ ಬೆಳ್ಳಿಯ ತೆರಿಗೆಯನ್ನು ವಿಧಿಸಿದನು. ನಂತರ ಮೆನಹೇಮನು ಅಶ್ಶೂರದ ರಾಜನಿಗೆ ಹಣವನ್ನು ಕೊಟ್ಟನು. ಆದ್ದರಿಂದ ಅಶ್ಶೂರದ ರಾಜನು ಬಿಟ್ಟುಹೋದನು; ಅವನು ಇಸ್ರೇಲಿನಲ್ಲೇ ನೆಲೆಸಲಿಲ್ಲ.

21 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಮೆನಹೇಮನು ಮಾಡಿದ ಉಳಿದ ಮಹಾಕಾರ್ಯಗಳನ್ನು ಬರೆಯಲಾಗಿದೆ. 22 ಮೆನಹೇಮನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು. ಮೆನಹೇಮನ ನಂತರ ಅವನ ಮಗನಾದ ಪೆಕಹ್ಯನು ಹೊಸ ರಾಜನಾದನು.

ಇಸ್ರೇಲನ್ನು ಪೆಕಹ್ಯನು ಆಳಿದನು

23 ಅಜರ್ಯನು ಯೆಹೂದದ ರಾಜನಾಗಿದ್ದ ಐವತ್ತನೆಯ ವರ್ಷದಲ್ಲಿ ಮೆನಹೇಮನ ಮಗನಾದ ಪೆಕಹ್ಯನು ಸಮಾರ್ಯದಲ್ಲಿ ಇಸ್ರೇಲಿನ ರಾಜನಾದನು. ಪೆಕಹ್ಯನು ಎರಡು ವರ್ಷ ಆಳಿದನು. 24 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಪೆಕಹ್ಯನು ಮಾಡಿದನು. ಇಸ್ರೇಲರನ್ನು ಪಾಪಕೃತ್ಯಗಳಿಗೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನೇ ಪೆಕಹ್ಯನು ಮುಂದುವರಿಸಿದನು.

25 ಪೆಕಹ್ಯನ ಸೇನೆಗೆ ರೆಮಲ್ಯನ ಮಗನಾದ ಪೆಕಹನು ಸೇನಾಧಿಪತಿಯಾಗಿದ್ದನು. ಅವನು ಪೆಕಹ್ಯನನ್ನು ಕೊಂದುಹಾಕಿದನು. ಅವನು ಸಮಾರ್ಯದಲ್ಲಿರುವ ರಾಜನ ಅರಮನೆಯಲ್ಲಿ ಪೆಕಹ್ಯನು ಅರ್ಗೋಬ್ ಮತ್ತು ಅರ್ಯೇ ಎಂಬವರನ್ನು ಸಹ ಕೊಂದುಹಾಕಿದನು. ಪೆಕಹ್ಯನನ್ನು ಪೆಕಹನು ಕೊಂದುಹಾಕಿದಾಗ ಅವನ ಸಂಗಡ ಗಿಲ್ಯಾದಿನ ಐವತ್ತು ಜನರಿದ್ದರು. ಪೆಕಹ್ಯನ ನಂತರ ಪೆಕಹನು ಹೊಸ ರಾಜನಾದನು.

26 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಪೆಕಹ್ಯನು ಮಾಡಿದ ಇತರ ಮಹಾಕಾರ್ಯಗಳನ್ನು ಕುರಿತು ಬರೆಯಲಾಗಿದೆ.

ಇಸ್ರೇಲನ್ನು ಪೆಕಹನು ಆಳುವನು

27 ಅಜರ್ಯನು ಯೆಹೂದದ ರಾಜನಾಗಿದ್ದ ಐವತ್ತೆರಡನೆಯ ವರ್ಷದಲ್ಲಿ ರೆಮಲ್ಯನ ಮಗನಾದ ಪೆಕಹನು ಸಮಾರ್ಯದಲ್ಲಿ ಇಸ್ರೇಲನ್ನು ಆಳಲಾರಂಭಿಸಿದನು. ಪೆಕಹನು ಇಪ್ಪತ್ತು ವರ್ಷ ಆಳಿದನು. 28 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನೇ ಪೆಕಹನು ಮಾಡಿದನು. ಇಸ್ರೇಲರನ್ನು ಪಾಪಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನು ಪೆಕಹನು ಮುಂದುವರಿಸಿದನು.

29 ಅಶ್ಶೂರದ ರಾಜನಾದ ತಿಗ್ಲತ್ಪಿಲೆಸರನೆಂಬವನು ಇಸ್ರೇಲಿನ ವಿರುದ್ಧ ಯುದ್ಧಕ್ಕೆ ಬಂದನು. ಪೆಕಹನು ಇಸ್ರೇಲಿನ ರಾಜನಾಗಿದ್ದ ಸಂದರ್ಭದಲ್ಲಿ ಇದು ಸಂಭವಿಸಿತು. ತಿಗ್ಲತ್ಪಿಲೆಸರನು ಇಯ್ಯೋನ್, ಅಬೇಲ್ಬೇತ್ಮಾಕಾ, ಯಾನೋಹ, ಕದೆಷ್, ಹಾಚೋರ್, ಗಿಲ್ಯಾದ್, ಗಲಿಲಾಯ ಮತ್ತು ನಫ್ತಾಲಿಯ ಪ್ರಾಂತ್ಯಗಳನ್ನೆಲ್ಲ ಸ್ವಾಧೀನಪಡಿಸಿಕೊಂಡನು. ತಿಗ್ಲತ್ಪಿಲೆಸರನು ಈ ಸ್ಥಳಗಳಲ್ಲಿದ್ದ ಜನರನ್ನು ಸೆರೆಯಾಳುಗಳನ್ನಾಗಿಸಿ ಅಶ್ಶೂರಿಗೆ ಕೊಂಡೊಯ್ದನು.

30 ಏಲನ ಮಗನಾದ ಹೋಶೇಯನು ರೆಮಲ್ಯನ ಮಗನಾದ ಪೆಕಹನ ವಿರುದ್ಧ ಸಂಚುಗಳನ್ನು ಮಾಡಿ ಪೆಕಹನನ್ನು ಕೊಂದುಹಾಕಿದನು. ಪೆಕಹನ ನಂತರ ಹೋಶೇಯನು ಹೊಸ ರಾಜನಾದನು. ಉಜ್ಜೀಯನ ಮಗನಾದ ಯೋತಾಮನು ಯೆಹೂದದ ರಾಜನಾಗಿದ್ದ ಇಪ್ಪತ್ತನೆಯ ವರ್ಷದಲ್ಲಿ ಹೀಗಾಯಿತು.

31 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಪೆಕಹನು ಮಾಡಿದ ಇತರ ಮಹಾಕಾರ್ಯಗಳನ್ನು ಬರೆಯಲಾಗಿದೆ.

ಯೆಹೂದವನ್ನು ಯೋತಾಮನು ಆಳುವನು

32 ಉಜ್ಜೀಯನ ಮಗನಾದ ಯೋತಾಮನು ಯೆಹೂದದ ರಾಜನಾದನು. ರೆಮಲ್ಯನ ಮಗನಾದ ಪೆಕಹನು ಇಸ್ರೇಲಿನ ರಾಜನಾದ ಎರಡನೆಯ ವರ್ಷದಲ್ಲಿ ಹೀಗಾಯಿತು. 33 ಯೋತಾಮನು ರಾಜನಾದಾಗ ಅವನಿಗೆ ಇಪ್ಪತ್ತೈದು ವರ್ಷ ವಯಸ್ಸಾಗಿತ್ತು. ಯೋತಾಮನು ಜೆರುಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಯೋತಾಮನ ತಾಯಿಯು ಚಾದೋಕನ ಮಗಳಾದ ಯೆರೂಷಾ ಎಂಬ ಹೆಸರಿನವಳು. 34 ಯೋತಾಮನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವನು ಯೋಗ್ಯವೆಂದು ಹೇಳಿದ ಕಾರ್ಯಗಳನ್ನು ಮಾಡಿದನು. 35 ಆದರೆ ಅವನು ಉನ್ನತಸ್ಥಳಗಳನ್ನು ನಾಶಗೊಳಿಸಲಿಲ್ಲ. ಈ ಪೂಜಾಸ್ಥಳಗಳಲ್ಲಿ ಜನರು ಯಜ್ಞಗಳನ್ನು ಅರ್ಪಿಸುತ್ತಿದ್ದರು ಮತ್ತು ಧೂಪವನ್ನು ಸುಡುತ್ತಿದ್ದರು. ಯೋತಾಮನು ಯೆಹೋವನ ಆಲಯಕ್ಕೆ ಮೇಲ್ಬಾಗಿಲನ್ನು ನಿರ್ಮಿಸಿದನು. 36 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೋತಾಮನು ಮಾಡಿದ ಇತರ ಮಹಾಕಾರ್ಯಗಳನ್ನು ಬರೆಯಲಾಗಿದೆ.

37 ಆ ಕಾಲದಲ್ಲಿ, ಅರಾಮ್ಯರ ರಾಜನಾದ ರೆಚೀನನನ್ನು ಮತ್ತು ರೆಮಲ್ಯನ ಮಗನಾದ ಪೆಕಹನನ್ನು ಯೆಹೂದದ ವಿರುದ್ಧ ಹೋರಾಡಲು ಯೆಹೋವನು ಕಳುಹಿಸಲಾರಂಭಿಸಿದನು.

38 ಯೋತಾಮನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದರು. ಯೋತಾಮನನ್ನು ಅವನ ಪೂರ್ವಿಕನಾದ ದಾವೀದನ ನಗರದಲ್ಲಿ ಸಮಾಧಿಮಾಡಿದರು. ಯೋತಾಮನ ನಂತರ ಅವನ ಮಗನಾದ ಅಹಾಜನು ಹೊಸ ರಾಜನಾದನು.

2 ಪೂರ್ವಕಾಲವೃತ್ತಾಂತ 26

ಯೆಹೂದದ ಅರಸನಾದ ಉಜ್ಜೀಯ

26 ಆ ಬಳಿಕ ಯೆಹೂದದ ಜನರು ಅಮಚ್ಯನ ಮಗನಾದ ಉಜ್ಜೀಯನನ್ನು ತಮ್ಮ ಅರಸನನ್ನಾಗಿ ಆರಿಸಿಕೊಂಡರು. ಆಗ ಅವನಿಗೆ ಹದಿನಾರು ವರ್ಷ. ಉಜ್ಜೀಯನು ಏಲೋತ್ ಪಟ್ಟಣವನ್ನು ಮತ್ತೆ ಕಟ್ಟಿಸಿ ಯೆಹೂದ ರಾಜ್ಯಕ್ಕೆ ಸೇರಿಸಿದನು. ಅಮಚ್ಯನು ಸತ್ತಾಗ ಉಜ್ಜೀಯನು ಅವನನ್ನು ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದನು.

ಉಜ್ಜೀಯನು ಪಟ್ಟಕ್ಕೆ ಬಂದಾಗ ಹದಿನಾರು ವರ್ಷದವನಾಗಿದ್ದನು. ಅವನು ಐವತ್ತೆರಡು ವರ್ಷ ಕಾಲ ಜೆರುಸಲೇಮಿನಲ್ಲಿ ರಾಜ್ಯಭಾರ ಮಾಡಿದನು. ಅವನ ತಾಯಿಯ ಹೆಸರು ಯೆಕೊಲ್ಯ. ಆಕೆ ಜೆರುಸಲೇಮಿನವಳು. ಉಜ್ಜೀಯನು ತನ್ನ ತಂದೆಯಾದ ಅಮಚ್ಯನಂತೆ ದೇವರ ಮುಂದೆ ಯೋಗ್ಯನಾಗಿ ನಡೆದುಕೊಂಡನು. ಜೆಕರ್ಯನು ಜೀವಿಸುತ್ತಿದ್ದಾಗ ಉಜ್ಜೀಯನು ದೇವರನ್ನು ಅನುಸರಿಸಿದನು. ಅವನು ಉಜ್ಜೀಯನಿಗೆ ದೇವರಿಗೆ ಹೇಗೆ ಭಯಪಡಬೇಕು, ದೇವರನ್ನು ಹೇಗೆ ಗೌರವಿಸಬೇಕೆಂದು ಕಲಿಸಿಕೊಟ್ಟನು. ಉಜ್ಜೀಯನು ದೇವರಿಗೆ ವಿಧೇಯನಾಗಿ ಬಾಳಿದಾಗ ಯೆಹೋವ ದೇವರು ಅವನಿಗೆ ಯಶಸ್ಸನ್ನು ದಯಪಾಲಿಸಿದನು.

ಉಜ್ಜೀಯನು ಫಿಲಿಷ್ಟಿಯರೊಂದಿಗೆ ಯುದ್ಧಮಾಡಿ ಅವರ ಪಟ್ಟಣಗಳಾದ ಗತ್, ಯೆಬ್ನೆ ಮತ್ತು ಅಷ್ಡೋದ್‌ಗಳ ಪೌಳಿಗೋಡೆಗಳನ್ನು ಕೆಡವಿಹಾಕಿದನು. ಅವನು ಅಷ್ಡೋದಿನ ಮತ್ತು ಇತರ ಫಿಲಿಷ್ಟಿಯರ ಪ್ರಾಂತ್ಯಗಳಲ್ಲಿ ಪಟ್ಟಣಗಳನ್ನು ಕಟ್ಟಿಸಿದನು. ಫಿಲಿಷ್ಟಿಯರೊಂದಿಗೂ ಗೂರ್‌ಬಾಳಿನಲ್ಲಿ ವಾಸಿಸುತ್ತಿದ್ದ ಅರಬಿಯರೊಂದಿಗೂ ಹಾಗೂ ಮೆಗೂನ್ಯರೊಡನೆಯೂ ಯುದ್ಧಮಾಡಲು ದೇವರು ಅವನಿಗೆ ಸಹಾಯ ಮಾಡಿದನು. ಅಮ್ಮೋನಿಯರೂ ಉಜ್ಜೀಯನಿಗೆ ಕಪ್ಪಕಾಣಿಕೆಯನ್ನು ತಂದುಕೊಟ್ಟರು. ಉಜ್ಜೀಯನು ಬಲಿಷ್ಠನಾಗಿದ್ದುದರಿಂದ ಅವನ ಹೆಸರು ಎಲ್ಲಾ ಕಡೆಗಳಲ್ಲಿ ಈಜಿಪ್ಟಿನ ಮೇರೆಯ ತನಕ ಪ್ರಸಿದ್ಧಿ ಹೊಂದಿತು.

ಉಜ್ಜೀಯನು ಜೆರುಸಲೇಮಿನಲ್ಲಿ ಮೂಲೆಬಾಗಿಲು, ತಗ್ಗಿನಬಾಗಿಲು ಮತ್ತು ಪೌಳಿಗೋಡೆ ತಿರುಗುವ ಭಾಗ ಇವುಗಳ ಮೇಲೆ ಬುರುಜುಗಳನ್ನು ಕಟ್ಟಿಸಿದನು. 10 ಮರುಭೂಮಿಯಲ್ಲಿಯೂ ಬುರುಜುಗಳನ್ನು ಕಟ್ಟಿಸಿದನು; ಅನೇಕ ಬಾವಿಗಳನ್ನು ತೋಡಿಸಿದನು. ಅವನಿಗೆ ಬಯಲಿನಲ್ಲಿಯೂ ಬೆಟ್ಟಪ್ರದೇಶಗಳಲ್ಲಿಯೂ ಅಸಂಖ್ಯಾತ ಪಶುಗಳಿದ್ದವು. ಪರ್ವತ ಪ್ರಾಂತ್ಯಗಳಲ್ಲಿ ಮತ್ತು ಬೇರೆ ಸ್ಥಳಗಳಲ್ಲಿ ಹುಲುಸಾದ ಬೆಳೆಯನ್ನು ಬೆಳೆಯಿಸಿದನು. ಬಯಲುಗಳಲ್ಲಿ ಕೆಲಸಮಾಡಲು ಅವನು ರೈತರನ್ನು ಕೂಲಿಗೆ ನೇಮಿಸಿಕೊಂಡನು; ಬೆಟ್ಟಗಳಲ್ಲಿಯೂ ಕಾರ್ಮೆಲಿನಲ್ಲಿಯೂ ಇದ್ದ ತನ್ನ ದ್ರಾಕ್ಷಿತೋಟಗಳನ್ನು ನೋಡಿಕೊಳ್ಳಲು ಕೆಲಸಗಾರರನ್ನು ಕೂಲಿಗೆ ತೆಗೆದುಕೊಂಡನು.

11 ಉಜ್ಜೀಯನ ಬಳಿ ಒಳ್ಳೆಯ ತರಬೇತಿ ಹೊಂದಿದ ಸೈನ್ಯವಿತ್ತು. ಕಾರ್ಯದರ್ಶಿಯಾದ ಯೆಗೀಯೇಲ್ ಮತ್ತು ಅಧಿಕಾರಿಯಾದ ಮಾಸೇಯರು ಅವರನ್ನು ಗುಂಪುಗುಂಪಾಗಿ ವಿಂಗಡಿಸಿದರು. ಹನನ್ಯನು ರಾಜನ ಅಧಿಕಾರಿಗಳಲ್ಲಿ ಒಬ್ಬನಾಗಿದ್ದನು. 12 ಸೈನ್ಯಕ್ಕೆ ಒಟ್ಟು ಎರಡು ಸಾವಿರದ ಆರುನೂರು ಮಂದಿ ಸೇನಾಪತಿಗಳಿದ್ದರು. 13 ಅವರು ಕುಟುಂಬದ ನಾಯಕರಾಗಿದ್ದು ಅವರ ಅಧೀನದಲ್ಲಿ ಯುದ್ಧವೀರರಾದ ಮೂರು ಲಕ್ಷದ ಏಳು ಸಾವಿರದ ಐನೂರು ಸೈನಿಕರಿದ್ದರು. ಇವರು ವೈರಿಯೊಂದಿಗೆ ಕಾದಾಡಿ ಅರಸನಿಗೆ ಜಯಗಳಿಸಿದರು. 14 ಉಜ್ಜೀಯನು ಸೈನಿಕರಿಗೆ ಗುರಾಣಿ, ಬರ್ಜಿ, ಶಿರಸ್ತ್ರಾಣ, ಕವಚ, ಬಿಲ್ಲು ಮತ್ತು ಕವಣೆಗೆ ಕಲ್ಲುಗಳನ್ನು ಒದಗಿಸಿದನು. 15 ಜೆರುಸಲೇಮಿನಲ್ಲಿ ವಿಜ್ಞಾನಿಗಳು ರೂಪಿಸಿದ ಯಂತ್ರಗಳನ್ನು ಉಜ್ಜೀಯನು ತಯಾರಿಸಿದನು. ಇವುಗಳನ್ನು ಪೌಳಿಗೋಡೆಯ ಮೇಲೆ ಇರಿಸಿದನು. ಇವು ಬಾಣಗಳನ್ನೂ ದೊಡ್ಡ ಕಲ್ಲುಗಳನ್ನೂ ವೈರಿಗಳ ಮೇಲೆ ಹಾರಿಸಬಲ್ಲವಾಗಿದ್ದವು. ಉಜ್ಜೀಯನು ತುಂಬಾ ಪ್ರಸಿದ್ಧಿ ಹೊಂದಿದ್ದನು. ಬಹುದೂರದ ತನಕ ಅವನ ಹೆಸರು ಹಬ್ಬಿತು. ಅವನು ದೇವರ ವಿಶೇಷ ಸಹಾಯ ಪಡೆದುಕೊಂಡು ಬಲಿಷ್ಠನಾದನು.

16 ಬಲಶಾಲಿಯಾದ ಉಜ್ಜೀಯನಲ್ಲಿ ನಾಶಕರವಾದ ಗರ್ವವು ಸೇರಿತು. ಅವನು ತನ್ನ ದೇವರಾದ ಯೆಹೋವನಿಗೆ ದ್ರೋಹ ಮಾಡಿದನು. ಅವನು ದೇವಾಲಯದೊಳಗೆ ಧೂಪವೇದಿಕೆಯಲ್ಲಿ ತಾನೇ ಧೂಪವನ್ನು ಹಾಕಲು ಹೋದನು. 17 ಆಗ ಮಹಾಯಾಜಕನಾದ ಅಜರ್ಯನೂ ಧೈರ್ಯಶಾಲಿಗಳಾದ ಎಂಭತ್ತು ಮಂದಿ ಸೇವೆಮಾಡುವ ಯಾಜಕರೂ ಉಜ್ಜೀಯನಿಗೆ, 18 “ಉಜ್ಜೀಯನೇ, ಯೆಹೋವನಿಗೆ ಧೂಪ ಹಾಕುವದು ನಿನ್ನ ಕೆಲಸವಲ್ಲ. ನೀನು ಹೀಗೆ ಮಾಡುವದು ಸರಿಯಲ್ಲ. ಆರೋನನ ಸಂತತಿಯವರಾದ ಯಾಜಕರೇ ಧೂಪ ಹಾಕಬೇಕಾದದ್ದು. ಅವರು ಪವಿತ್ರ ಸೇವೆಗೆ ನೇಮಿಸಲ್ಪಟ್ಟಿದ್ದಾರೆ. ನೀನು ಈ ಮಹಾ ಪವಿತ್ರಸ್ಥಾನದಿಂದ ಹೊರಗೆ ಹೋಗು. ನೀನು ದೇವರಾದ ಯೆಹೋವನಿಗೆ ವಿಧೇಯನಾಗಿಲ್ಲ. ಈ ಕಾರ್ಯವನ್ನು ಮಾಡಿದ್ದರಿಂದ ದೇವರು ನಿನ್ನನ್ನು ಮೆಚ್ಚುವದಿಲ್ಲ” ಎಂದು ಹೇಳಿದರು.

19 ಇದನ್ನು ಕೇಳಿ ಉಜ್ಜೀಯನು ಕೋಪಗೊಂಡನು. ಅವನು ಧೂಪ ಹಾಕಲು ಧೂಪಾರತಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದನು. ಅವನು ಯಾಜಕರ ಮೇಲೆ ಕೋಪಿಸಿಕೊಂಡಾಗ ಕುಷ್ಠರೋಗವು ಅವನ ಹಣೆಯಲ್ಲಿ ಕಾಣಿಸಿಕೊಂಡಿತು. ಇದು ಯಾಜಕರ ಮುಂದೆ ದೇವಾಲಯದೊಳಗೆ ಧೂಪವೇದಿಕೆಯ ಬಳಿಯಲ್ಲೇ ಆಯಿತು. 20 ಮಹಾಯಾಜಕನಾದ ಅಜರ್ಯನೂ ಇತರ ಯಾಜಕರೂ ಉಜ್ಜೀಯನನ್ನು ನೋಡಿದಾಗ ಅವನ ಹಣೆಯಲ್ಲಿ ಕುಷ್ಠವು ಕಾಣಿಸಿದ್ದರಿಂದ ಅವನನ್ನು ಕೂಡಲೇ ದೇವಾಲಯದಿಂದ ಹೊರಕ್ಕೆ ಹಾಕಿದರು. ಯೆಹೋವನು ಅವನನ್ನು ಶಿಕ್ಷಿಸಿದುದರಿಂದ ಉಜ್ಜೀಯನು ತಾನಾಗಿಯೇ ದೇವಾಲಯದೊಳಗಿಂದ ಅವಸರದಿಂದ ಹೊರಬಂದನು. 21 ಅರಸನಾದ ಉಜ್ಜೀಯನು ಕುಷ್ಠರೋಗಿಯಾದುದರಿಂದ ಅವನು ಯೆಹೋವನ ಆಲಯವನ್ನು ಪ್ರವೇಶಿಸಲಾಗಲಿಲ್ಲ. ಅವನು ದೂರದಲ್ಲಿದ್ದ ಪ್ರತ್ಯೇಕವಾದ ಮನೆಯಲ್ಲಿ ವಾಸಿಸಿದನು. ಅವನ ಮಗನಾದ ಯೋತಾಮನು ಪ್ರಜಾಪಾಲನೆ ಮಾಡಿದನು.

22 ಪ್ರಾರಂಭದಿಂದ ಕೊನೆಯವರೆಗೆ ಉಜ್ಜೀಯನು ಮಾಡಿದ ಕಾರ್ಯಗಳನ್ನೆಲ್ಲಾ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ತನ್ನ ಪುಸ್ತಕದಲ್ಲಿ ಬರೆದಿರುವನು. 23 ಉಜ್ಜೀಯನು ಸತ್ತು ತನ್ನ ಪೂರ್ವಿಕರನ್ನು ಸೇರಿದಾಗ, ಅವನ ಕುಷ್ಠದ ನಿಮಿತ್ತ ಅವನ ಶವವನ್ನು ರಾಜಕುಟುಂಬ ಸ್ಮಶಾನವಿದ್ದ ಹೊಲದಲ್ಲಿ ಹೂಳಿಟ್ಟರು. ಉಜ್ಜೀಯನ ಬದಲಾಗಿ ಅವನ ಮಗನಾದ ಯೋತಾಮನು ಅರಸನಾದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International