Chronological
ಅಮಚ್ಯನು ಯೆಹೂದದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸುವನು
14 ಯೆಹೋವಾಹಾಜನ ಮಗನಾದ ಯೋವಾಷನು ಇಸ್ರೇಲಿನ ರಾಜನಾಗಿದ್ದ ಎರಡನೆಯ ವರ್ಷದಲ್ಲಿ ಯೆಹೋವಾಷನ ಮಗ ಅಮಚ್ಯನು ಯೆಹೂದದ ರಾಜನಾದನು. 2 ಅಮಚ್ಯನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೈದು ವರ್ಷ ವಯಸ್ಸಾಗಿತ್ತು. ಅಮಚ್ಯನು ಜೆರುಸಲೇಮಿನಲ್ಲಿ ಇಪ್ಪತ್ತೊಂಭತ್ತು ವರ್ಷ ಆಳಿದನು. ಜೆರುಸಲೇಮಿನ ಯೆಹೋವದ್ದೀನಳು ಅಮಚ್ಯನ ತಾಯಿ. 3 ಯೆಹೋವನು ಸರಿಯೆಂದು ಹೇಳಿದ ಕಾರ್ಯಗಳನ್ನು ಅಮಚ್ಯನು ಮಾಡಿದನು. ಆದರೆ ಅವನು ತನ್ನ ಪೂರ್ವಿಕನಾದ ದಾವೀದನು ಅನುಸರಿಸಿದಂತೆ ಸಂಪೂರ್ಣವಾಗಿ ಯೆಹೋವನನ್ನು ಅನುಸರಿಸಲಿಲ್ಲ. ಅಮಚ್ಯನು ತನ್ನ ತಂದೆಯಾದ ಯೆಹೋವಾಷನು ಮಾಡಿದ ಕಾರ್ಯಗಳನ್ನೆಲ್ಲ ಮಾಡಿದನು. 4 ಆದರೆ ಅವನು ಉನ್ನತ ಪೂಜಾಸ್ಥಳಗಳನ್ನು ನಾಶಗೊಳಿಸಲಿಲ್ಲ. ಜನರು ಪೂಜಾಸ್ಥಳಗಳಲ್ಲಿ ಇನ್ನೂ ಯಜ್ಞಗಳನ್ನು ಅರ್ಪಿಸುತ್ತಿದ್ದರು ಮತ್ತು ಧೂಪ ಹಾಕುತ್ತಿದ್ದರು.
5 ಅಮಚ್ಯನು ರಾಜ್ಯಾಧಿಕಾರವನ್ನು ಬಿಗಿಗೊಳಿಸಿಕೊಂಡ ಮೇಲೆ, ತನ್ನ ತಂದೆಯನ್ನು ಕೊಂದ ಅಧಿಕಾರಿಗಳನ್ನು ಕೊಂದುಹಾಕಿದನು. 6 ಆದರೆ ಮೋಶೆಯ ಧರ್ಮಶಾಸ್ತ್ರದಲ್ಲಿನ ನಿಯಮಗಳಿಗನುಸಾರವಾಗಿ ಅವನು ಕೊಲೆಗಾರರ ಮಕ್ಕಳನ್ನು ಕೊಂದುಹಾಕಲಿಲ್ಲ. ಮೋಶೆಯ ಧರ್ಮಶಾಸ್ತ್ರದಲ್ಲಿ ಯೆಹೋವನು, “ಮಕ್ಕಳು ಮಾಡಿದ ತಪ್ಪಿಗೆ ತಂದೆತಾಯಿಗಳನ್ನು ಸಾವಿಗೆ ಗುರಿಪಡಿಸಬಾರದು. ತಂದೆತಾಯಿಗಳು ಮಾಡಿದ ತಪ್ಪಿಗೆ ಅವರ ಮಕ್ಕಳನ್ನು ಸಾವಿಗೆ ಗುರಿಪಡಿಸಬಾರದು. ಒಬ್ಬ ವ್ಯಕ್ತಿಯನ್ನು ಅವನು ಮಾಡಿದ ಕೆಟ್ಟಕಾರ್ಯಕ್ಕಾಗಿ ಮಾತ್ರ ಸಾವಿಗೆ ಗುರಿಪಡಿಸಬೇಕು” ಎಂದು ಆಜ್ಞಾಪಿಸಿದ್ದಾನೆ.
7 ಅಮಚ್ಯನು ಉಪ್ಪಿನ ಕಣಿವೆಯಲ್ಲಿ ಹತ್ತುಸಾವಿರ ಎದೋಮ್ಯರನ್ನು ಕೊಂದುಹಾಕಿ ಅವರಿಂದ ಸೆಲ ದುರ್ಗವನ್ನು ವಶಪಡಿಸಿಕೊಂಡು ಅದನ್ನು “ಯೊಕ್ತೆಯೇಲ್” ಎಂದು ಕರೆದನು. ಆ ಸ್ಥಳಕ್ಕೆ ಇಂದಿಗೂ ಅದೇ ಹೆಸರಿದೆ.
ಯೋವಾಷನ ವಿರುದ್ಧ ಯುದ್ಧಮಾಡಲು ಅಮಚ್ಯನ ಅಪೇಕ್ಷೆ
8 ಇಸ್ರೇಲರ ರಾಜನೂ ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಆದ ಯೋವಾಷನ ಬಳಿಗೆ ಅಮಚ್ಯನು ಸಂದೇಶಕರನ್ನು ಕಳುಹಿಸಿದನು. ಅಮಚ್ಯನು ಸಂದೇಶದಲ್ಲಿ, “ಬಾ, ನಾವು ಪರಸ್ಪರ ಯುದ್ಧ ಮಾಡೋಣ!” ಎಂದು ಹೇಳಿದ್ದನು.
9 ಇಸ್ರೇಲಿನ ರಾಜನಾದ ಯೋವಾಷನು ಯೆಹೂದದ ರಾಜನಾದ ಅಮಚ್ಯನಿಗೆ, “ಲೆಬನೋನಿನ ಒಂದು ಮುಳ್ಳುಗಿಡವು ಲೆಬನೋನಿನ ದೇವದಾರುಮರಕ್ಕೆ ಒಂದು ಸಂದೇಶವನ್ನು ಕಳುಹಿಸಿತು. ಅದು, ‘ನನ್ನ ಮಗನಿಗೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡು’ ಎಂದಿತು. ಆದರೆ ಲೆಬನೋನಿನ ಒಂದು ಕಾಡುಮೃಗವು ಆ ದಾರಿಯಲ್ಲಿ ಹೋಗುವಾಗ, ಮುಳ್ಳುಗಿಡದ ಮೇಲೆ ಹಾದುಹೋಯಿತು. 10 ನೀನು ಎದೋಮ್ಯರನ್ನು ಸೋಲಿಸಿದೆಯೆಂಬುದು ನಿಜ. ಆದರೆ ನೀನು ಎದೋಮ್ಯರ ಮೇಲೆ ಜಯಗಳಿಸಿದ್ದರಿಂದ ಗರ್ವಿತನಾಗಿರುವೆ. ನೀನು ನಿನ್ನ ಮನೆಯಲ್ಲೇ ಕುಳಿತು ಬಡಾಯಿಕೊಚ್ಚಿಕೋ. ನಿನಗೆ ತೊಂದರೆಯನ್ನು ತಂದುಕೊಳ್ಳಬೇಡ. ಇಲ್ಲವಾದರೆ ನೀನೂ ಬೀಳುವುದಲ್ಲದೆ, ಯೆಹೂದವೂ ನಿನ್ನೊಂದಿಗೆ ಬಿದ್ದುಹೋಗುವುದು!” ಎಂದು ಹೇಳಿದನು.
11 ಆದರೆ ಯೋವಾಷನ ಎಚ್ಚರಿಕೆಯನ್ನು ಅಮಚ್ಯನು ಆಲಿಸಲೇ ಇಲ್ಲ. ಆದ್ದರಿಂದ ಇಸ್ರೇಲಿನ ರಾಜನಾದ ಯೋವಾಷನು ಯೆಹೂದದ ರಾಜನಾದ ಅಮಚ್ಯನ ವಿರುದ್ಧ ಹೋರಾಟ ಮಾಡಲು ಯೆಹೂದದ ಬೇತ್ಷೆಮೆಷಿಗೆ ಹೋದನು. 12 ಯೆಹೂದ್ಯರನ್ನು ಇಸ್ರೇಲರು ಸೋಲಿಸಿದರು. ಯೆಹೂದದ ಪ್ರತಿಯೊಬ್ಬರೂ ಮನೆಗೆ ಓಡಿಹೋದರು. 13 ಇಸ್ರೇಲಿನ ರಾಜನಾದ ಯೋವಾಷನು ಬೇತ್ಷೆಮೆಷಿನಲ್ಲಿ ಯೆಹೂದದ ರಾಜನಾದ ಅಮಚ್ಯನನ್ನು ಸೆರೆಹಿಡಿದನು. ಅಮಚ್ಯನು ಯೆಹೋವಾಷನ ಮಗನೂ ಅಹಜ್ಯನ ಮೊಮ್ಮಗನೂ ಆಗಿದ್ದನು. ಯೋವಾಷನು ಜೆರುಸಲೇಮಿಗೆ ಬಂದು ಎಫ್ರಾಯೀಮ್ ಬಾಗಿಲಿನಿಂದ ಮೂಲೆಯ ಬಾಗಿಲಿನವರೆಗೆ ಆರುನೂರು ಅಡಿ ಉದ್ದದ ಗೋಡೆಯನ್ನು ಒಡೆದುಹಾಕಿದನು. 14 ನಂತರ ಯೋವಾಷನು ದೇವಾಲಯದಲ್ಲಿದ್ದ ಮತ್ತು ಅರಮನೆಯ ಭಂಡಾರದಲ್ಲಿದ್ದ ಬೆಳ್ಳಿಬಂಗಾರಗಳನ್ನು ಮತ್ತು ಪಾತ್ರೆಗಳನ್ನೆಲ್ಲ ತೆಗೆದುಕೊಂಡನು. ಇದಲ್ಲದೆ ಯೋವಾಷನು ಜನರನ್ನು ಸಹ ತನ್ನ ಸೆರೆಯಾಳುಗಳನ್ನಾಗಿ ತೆಗೆದುಕೊಂಡು ಸಮಾರ್ಯಕ್ಕೆ ಹಿಂದಿರುಗಿದನು.
15 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೋವಾಷನು ಮಾಡಿದ ಇತರ ಮಹಾಕಾರ್ಯಗಳನ್ನೂ ಯೆಹೂದದ ರಾಜನಾದ ಅಮಚ್ಯನ ವಿರುದ್ಧ ಅವನು ಹೇಗೆ ಹೋರಾಡಿದನೆಂಬುದನ್ನೂ ಬರೆಯಲಾಗಿದೆ. 16 ಯೋವಾಷನು ತೀರಿಕೊಂಡಾಗ ಅವನನ್ನು ಅವನ ಪೂರ್ವಿಕರಾದ ಇಸ್ರೇಲಿನ ರಾಜರೊಡನೆ ಸಮಾರ್ಯದಲ್ಲಿ ಸಮಾಧಿಮಾಡಿದರು. ಯೋವಾಷನ ನಂತರ ಅವನ ಮಗನಾದ ಯಾರೊಬ್ಬಾಮನು ನೂತನ ರಾಜನಾದನು.
ಅಮಚ್ಯನ ಸಾವು
17 ಇಸ್ರೇಲರ ರಾಜನೂ ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತನಂತರ ಹದಿನೈದು ವರ್ಷ ಯೆಹೂದದ ರಾಜನೂ ಯೆಹೋವಾಷನ ಮಗನೂ ಆದ ಅಮಚ್ಯನು ಬದುಕಿದ್ದನು. 18 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಅಮಚ್ಯನು ಮಾಡಿದ ಇತರ ಮಹಾಕಾರ್ಯಗಳನ್ನೆಲ್ಲ ಬರೆಯಲಾಗಿದೆ. 19 ಜನರು ಜೆರುಸಲೇಮಿನಲ್ಲಿ ಅಮಚ್ಯನ ವಿರುದ್ಧವಾಗಿ ಒಳಸಂಚು ಮಾಡಿದರು. ಅಮಚ್ಯನು ಲಾಕೀಷಿಗೆ ಓಡಿಹೋದನು. ಆದರೆ ಜನರು ಅಮಚ್ಯನ ಹಿಂದೆ ಲಾಕೀಷಿಗೆ ಆಳುಗಳನ್ನು ಕಳುಹಿಸಿದರು. ಅವರು ಲಾಕೀಷಿನಲ್ಲಿ ಅಮಚ್ಯನನ್ನು ಕೊಂದುಹಾಕಿದರು. 20 ಅಮಚ್ಯನ ದೇಹವನ್ನು ಜನರು ಕುದುರೆಗಳ ಮೇಲೆ ತೆಗೆದುಕೊಂಡು ಬಂದರು. ಅಮಚ್ಯನನ್ನು ಜೆರುಸಲೇಮಿನಲ್ಲಿರುವ ದಾವೀದನಗರದಲ್ಲಿ ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು.
ಅಜರ್ಯನು ಯೆಹೂದದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಿದನು
21 ನಂತರ ಯೆಹೂದದ ಜನರೆಲ್ಲರೂ ಅಜರ್ಯನನ್ನು ನೂತನ ರಾಜನನ್ನಾಗಿ ಮಾಡಿದರು. ಅಜರ್ಯನಿಗೆ ಹದಿನಾರು ವರ್ಷ ವಯಸ್ಸಾಗಿತ್ತು. 22 ರಾಜನಾದ ಅಮಚ್ಯನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಸ್ಮಶಾನದಲ್ಲಿ ಸಮಾಧಿ ಮಾಡಿದರು. ನಂತರ ಅಜರ್ಯನು ಏಲತ್ ಪಟ್ಟಣವನ್ನು ಮತ್ತೆ ನಿರ್ಮಿಸಿ ಅದನ್ನು ಯೆಹೂದ ರಾಜ್ಯಕ್ಕೆ ಸೇರಿಸಿಕೊಂಡನು.
ಎರಡನೆಯ ಯಾರೊಬ್ಬಾಮನು ಇಸ್ರೇಲಿನಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಿದನು
23 ಯೆಹೂದದ ರಾಜನೂ ಯೆಹೋವಾಷನ ಮಗನೂ ಆದ ಅಮಚ್ಯನ ಆಳ್ವಿಕೆಯ ಹದಿನೈದನೆಯ ವರ್ಷದಲ್ಲಿ ಇಸ್ರೇಲರ ರಾಜನೂ ಯೋವಾಷನ ಮಗನೂ ಆದ ಯಾರೊಬ್ಬಾಮನು ಸಮಾರ್ಯದಲ್ಲಿ ಆಳಲಾರಂಭಿಸಿದನು. ಯಾರೊಬ್ಬಾಮನು ನಲವತ್ತೊಂದು ವರ್ಷ ಆಳಿದನು. 24 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಯಾರೊಬ್ಬಾಮನು ಮಾಡಿದನು. ಇಸ್ರೇಲರನ್ನು ಪಾಪಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನು ಮಾಡುವುದನ್ನು ಯಾರೊಬ್ಬಾಮನು ನಿಲ್ಲಿಸಲಿಲ್ಲ. 25 ಲೆಬೊಹಮಾತಿನಿಂದ ಅರಾಬ ಸಮುದ್ರದವರೆಗೆ ಹಬ್ಬಿದ ಇಸ್ರೇಲರ ದೇಶವನ್ನು ಯಾರೊಬ್ಬಾಮನು ಮತ್ತೆ ವಶಪಡಿಸಿಕೊಂಡನು. ಇಸ್ರೇಲರ ಯೆಹೋವನು ತನ್ನ ಸೇವಕನೂ ಅಮಿತ್ತೈನ ಮಗನೂ ಗತ್ಹೇಫೆರಿನ ಪ್ರವಾದಿಯೂ ಆದ ಯೋನಾ ಎಂಬವನ ಮೂಲಕ ಮೊದಲೇ ತಿಳಿಸಿದ್ದಂತೆ ಇದು ಸಂಭವಿಸಿತು. 26 ಇಸ್ರೇಲಿನ ಸ್ವತಂತ್ರರಾದ ಜನರೂ ಗುಲಾಮರೂ ಬಾಧೆಪಡುತ್ತಿರುವುದನ್ನು ಯೆಹೋವನು ನೋಡಿದನು. ಇಸ್ರೇಲರಿಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ. 27 ಈ ಲೋಕದಿಂದ ಇಸ್ರೇಲರ ಹೆಸರನ್ನೇ ತಾನು ಅಳಿಸಿಹಾಕುತ್ತೇನೆಂದು ಯೆಹೋವನು ಹೇಳಿರಲಿಲ್ಲ. ಆದ್ದರಿಂದ ಇಸ್ರೇಲಿನ ಜನರನ್ನು ರಕ್ಷಿಸಲು ಯೆಹೋವನು ಯೋವಾಷನ ಮಗನಾದ ಯಾರೊಬ್ಬಾಮನನ್ನು ಉಪಯೋಗಿಸಿಕೊಂಡನು.
28 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯಾರೊಬ್ಬಾಮನು ಮಾಡಿದ ಇತರ ಮಹಾಕಾರ್ಯಗಳ ಬಗ್ಗೆ ಬರೆಯಲಾಗಿದೆ. ಯಾರೊಬ್ಬಾಮನು ಇಸ್ರೇಲಿಗಾಗಿ ದಮಸ್ಕವನ್ನು ಮತ್ತು ಹಮಾತನ್ನು ವಶಪಡಿಸಿಕೊಂಡದ್ದನ್ನು ಇದು ಒಳಗೊಂಡಿದೆ. (ಈ ನಗರಗಳು ಯೆಹೂದಕ್ಕೆ ಸೇರಿದ್ದವು.) 29 ಯಾರೊಬ್ಬಾಮನು ಸತ್ತಮೇಲೆ ಅವನನ್ನು ಅವನ ಪೂರ್ವಿಕರಾದ ಇಸ್ರೇಲಿನ ರಾಜರುಗಳ ಸ್ಮಶಾನದಲ್ಲಿ ಸಮಾಧಿಮಾಡಿದರು. ಯಾರೊಬ್ಬಾಮನ ಮಗನಾದ ಜೆಕರ್ಯನು ಅವನ ನಂತರ ಹೊಸ ರಾಜನಾದನು.
ಯೆಹೂದದ ಅರಸನಾದ ಅಮಚ್ಯ
25 ಅಮಚ್ಯನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಇಪ್ಪತ್ತೊಂಭತ್ತು ವರ್ಷಗಳ ಕಾಲ ರಾಜ್ಯಭಾರ ಮಾಡಿದನು. ಅವನ ತಾಯಿಯ ಹೆಸರು ಯೆಹೋವದ್ದಾನ್. ಆಕೆ ಜೆರುಸಲೇಮಿನವಳು. 2 ದೇವರ ದೃಷ್ಟಿಯಲ್ಲಿ ಯೋಗ್ಯವಾದದ್ದನ್ನು ಅಮಚ್ಯನು ಮಾಡಿದರೂ ಹೃದಯ ಪೂರ್ವಕವಾಗಿ ಮಾಡಲಿಲ್ಲ. 3 ಅಮಚ್ಯನು ತನ್ನ ರಾಜ್ಯವನ್ನು ಸ್ಥಿರಪಡಿಸಿಕೊಂಡ ನಂತರ ತನ್ನ ತಂದೆಯನ್ನು ಕೊಂದ ಸೇವಕರನ್ನು ಕೊಲ್ಲಿಸಿದನು. 4 ಆದರೆ ಆ ಸೇವಕರ ಮಕ್ಕಳನ್ನು ಕೊಲ್ಲಿಸಲಿಲ್ಲ. ಯಾಕೆಂದರೆ ಮೋಶೆಯ ಧರ್ಮಶಾಸ್ತ್ರದ ಪ್ರಕಾರ, ಮಕ್ಕಳು ಮಾಡಿದ ಪಾಪಕ್ಕಾಗಿ ಅವರ ತಂದೆತಾಯಿಗಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು; ತಂದೆತಾಯಿಗಳು ಮಾಡಿದ ಪಾಪಕ್ಕಾಗಿ ಅವರ ಮಕ್ಕಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು. ಪಾಪ ಮಾಡಿದವರಿಗೇ ಮರಣಶಿಕ್ಷೆಯಾಗಬೇಕು.
5 ಅಮಚ್ಯನು ಯೆಹೂದ ಪ್ರಾಂತ್ಯದ ಜನರನ್ನು ಒಟ್ಟುಗೂಡಿಸಿ ಅವರನ್ನು ಕುಟುಂಬಗಳಿಗನುಸಾರವಾಗಿ ವಿಭಾಗ ಮಾಡಿದನು. ಈ ಗುಂಪುಗಳಿಗೆ ಸಹಸ್ರಾಧಿಪತಿಗಳನ್ನು ಮತ್ತು ಶತಾಧಿಪತಿಗಳನ್ನು ನೇಮಿಸಿದನು. ಇವರು ಯೆಹೂದ ಮತ್ತು ಬೆನ್ಯಾಮೀನ್ ಗೋತ್ರಗಳಲ್ಲಿ ಇಪ್ಪತ್ತು ವರ್ಷಕ್ಕಿಂತ ಮೇಲ್ಪಟ್ಟವರನ್ನು ಸೈನಿಕರನ್ನಾಗಿ ಆರಿಸಿದರು. ಒಟ್ಟು ಮೂರು ಲಕ್ಷ ಸೈನಿಕರು ಬರ್ಜಿ ಗುರಾಣಿಗಳೊಂದಿಗೆ ಯುದ್ಧ ಮಾಡಲು ನುರಿತರಾಗಿದ್ದರು. 6 ಅಮಚ್ಯನು ಒಂದು ಲಕ್ಷ ಸೈನಿಕರನ್ನು ಇಸ್ರೇಲಿನಿಂದ ತರಿಸಿಕೊಂಡನು. ಅವರಿಗೆ ಮೂರು ಮುಕ್ಕಾಲು ಟನ್ ಬೆಳ್ಳಿಯನ್ನು ಸಂಬಳ ರೂಪದಲ್ಲಿ ಕೊಟ್ಟನು. 7 ಆದರೆ ಒಬ್ಬ ದೇವರ ಮನುಷ್ಯನು ಅಮಚ್ಯನ ಬಳಿಗೆ ಬಂದು, “ಅರಸನೇ, ಇಸ್ರೇಲಿನ ಸೈನಿಕರು ನಿನ್ನೊಂದಿಗೆ ಯುದ್ಧಕ್ಕೆ ಹೋಗಲು ಬಿಡಬೇಡ. ಯೆಹೋವನು ಇಸ್ರೇಲರೊಂದಿಗೂ ಎಫ್ರಾಯೀಮಿನ ಜನರೊಂದಿಗೂ ಇರಲಿಲ್ಲ. 8 ನೀನು ನಿನ್ನನ್ನು ಬಲಿಷ್ಠನನ್ನಾಗಿ ಮಾಡಿಕೊಂಡಿದ್ದರೂ ನಿನ್ನ ಸೋಲು ಮತ್ತು ನಿನ್ನ ಜಯ ದೇವರ ಕೈಯಲ್ಲಿವೆ” ಎಂದು ಹೇಳಿದನು. 9 ಅಮಚ್ಯನು ಆ ದೇವರ ಮನುಷ್ಯನಿಗೆ, “ಹಾಗಾದರೆ, ನಾನು ಈಗಾಗಲೇ ಅವರಿಗೆ ಕೊಟ್ಟಿರುವ ಹಣಕ್ಕೇನು ಮಾಡಲಿ?” ಎಂದು ಕೇಳಿದನು. ದೇವರ ಮನುಷ್ಯನು ಉತ್ತರಿಸಿದ್ದೇನೆಂದರೆ, “ಯೆಹೋವನ ಬಳಿಯಲ್ಲಿ ಯಾವ ಕೊರತೆಯೂ ಇಲ್ಲ. ನಿನಗೆ ಅದಕ್ಕಿಂತ ಅಧಿಕವಾಗಿ ಕೊಡಲು ಆತನು ಶಕ್ತನಾಗಿದ್ದಾನೆ” ಎಂದು ಹೇಳಿದನು.
10 ಅಮಚ್ಯನು ಇಸ್ರೇಲಿನ ಸೈನಿಕರನ್ನು ಎಫ್ರಾಯೀಮ್ ಪ್ರಾಂತ್ಯಕ್ಕೆ ಕಳುಹಿಸಿದನು. ಅವರು ಯೆಹೂದದ ಅರಸನ ಮೇಲೆಯೂ ಜನರ ಮೇಲೆಯೂ ಸಿಟ್ಟುಗೊಂಡು ಕೋಪದಿಂದಲೇ ತಮ್ಮ ಮನೆಗಳಿಗೆ ಹಿಂತೆರಳಿದರು.
11 ಅಮಚ್ಯನು ಧೈರ್ಯಗೊಂಡು ತನ್ನ ಸೈನ್ಯವನ್ನು ಎದೋಮ್ ರಾಜ್ಯದ ಉಪ್ಪಿನ ಕಣಿವೆಗೆ ನಡಿಸಿದನು. ಆ ಸ್ಥಳದಲ್ಲಿ ಅವನ ಸೈನಿಕರು ಸೇಯೀರಿನ ಹತ್ತು ಸಾವಿರ ಮಂದಿಯನ್ನು ಕೊಂದರು. 12 ಯೆಹೂದದ ಸೈನಿಕರು ಸೇಯೀರಿನ ಹತ್ತುಸಾವಿರ ಮಂದಿಯನ್ನು ಸೆರೆಹಿಡಿದರು. ಅವರನ್ನು ಒಂದು ಕಡಿದಾದ ಬೆಟ್ಟದ ಬದಿಗೊಯ್ದು ಅಲ್ಲಿಂದ ಅವರನ್ನು ಕೆಳಕ್ಕೆ ದೂಡಿದರು. ಅವರು ಕೆಳಗೆ ಬಂಡೆಗೆ ಅಪ್ಪಳಿಸಿದಾಗ ಅವರ ದೇಹಗಳು ಚೂರುಚೂರಾದವು.
13 ಅದೇ ಸಮಯದಲ್ಲಿ, ಇಸ್ರೇಲರ ಸೈನ್ಯವು ಯೆಹೂದದ ಕೆಲವು ಪಟ್ಟಣಗಳ ಮೇಲೆ ಧಾಳಿಮಾಡಿತು. ಅವರು ಬೇತ್ಹೋರೋನಿನಿಂದ ಹಿಡಿದು ಸಮಾರ್ಯದವರೆಗೆ ಇರುವ ಪಟ್ಟಣಗಳ ಮೇಲೆ ಧಾಳಿ ಮಾಡಿದರು. ಅವರು ಮೂರು ಸಾವಿರ ಜನರನ್ನು ಕೊಂದು ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡರು. ಅಮಚ್ಯನು ತನ್ನೊಂದಿಗೆ ಯುದ್ಧಕ್ಕೆ ಸೇರಿಸಿಕೊಳ್ಳದೆ ಇದ್ದದರಿಂದ ಆ ಸೈನಿಕರು ಕೋಪಗೊಂಡಿದ್ದರು.
14 ಎದೋಮ್ಯರನ್ನು ಸೋಲಿಸಿ ಅಮಚ್ಯನು ಮನೆಗೆ ಹಿಂದಿರುಗಿ ಬಂದನು. ಸೇಯೀರಿನ ಜನರು ಪೂಜಿಸುತ್ತಿದ್ದ ವಿಗ್ರಹಗಳನ್ನು ತನ್ನೊಂದಿಗೆ ತಂದನು. ಅವನು ಅವುಗಳನ್ನು ಪೂಜಿಸತೊಡಗಿ ಅಡ್ಡಬಿದ್ದು ಧೂಪ ಹಾಕಿದನು. 15 ಯೆಹೋವನು ಅಮಚ್ಯನ ಮೇಲೆ ಸಿಟ್ಟುಗೊಂಡನು. ಅವನ ಬಳಿಗೆ ಒಬ್ಬ ಪ್ರವಾದಿಯನ್ನು ಕಳುಹಿಸಿ ಅವನಿಗೆ, “ಅಮಚ್ಯನೇ, ಆ ಜನರು ಪೂಜಿಸುವ ವಿಗ್ರಹಗಳಿಗೇಕೆ ನೀನು ಪೂಜೆ ಮಾಡುವೆ? ತಮ್ಮನ್ನು ಪೂಜಿಸುವವರನ್ನು ಆ ದೇವರುಗಳು ನಿನ್ನಿಂದ ಕಾಪಾಡಲಾರದೆ ಹೋದವು” ಎಂದು ಹೇಳಿದನು.
16 ಆ ಪ್ರವಾದಿಯು ಈ ಮಾತುಗಳನ್ನು ಹೇಳಿದಾಗ ಅಮಚ್ಯನು, “ನಾವು ನಿನ್ನನ್ನು ಅರಸನ ಸಲಹೆಗಾರನನ್ನಾಗಿ ಮಾಡಲಿಲ್ಲವಲ್ಲಾ. ಆದ್ದರಿಂದ ಬಾಯಿಮುಚ್ಚಿಕೊಂಡು ಸುಮ್ಮನಿರು. ಇಲ್ಲದಿದ್ದರೆ ನೀನು ಸಾಯುವೆ” ಅಂದನು. ಆದರೆ ಅವನು, “ದೇವರು ನಿನ್ನನ್ನು ನಾಶಮಾಡಲು ನಿರ್ಧರಿಸಿದ್ದಾನೆ; ಯಾಕೆಂದರೆ ನೀನು ನನ್ನ ಸಲಹೆಯನ್ನು ಕೇಳದೆ ದುಷ್ಟತನ ಮಾಡುತ್ತಿರುವೆ?” ಎಂದು ಹೇಳಿದನು.
17 ಅಮಚ್ಯನು ತನ್ನ ಸಲಹೆಗಾರರೊಂದಿಗೆ ಆಲೋಚನೆ ನಡಿಸಿದನು. ಬಳಿಕ ಇಸ್ರೇಲರ ಅರಸನಾದ ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಆದ ಯೋವಾಷನಿಗೆ, “ನಾವು ಮುಖಾಮುಖಿಯಾಗಿ ಸಂಧಿಸೋಣ” ಎಂಬ ಸಂದೇಶವನ್ನು ಕಳುಹಿಸಿದನು.
18 ಯೋವಾಷನು ಇಸ್ರೇಲಿನ ಅರಸನಾಗಿದ್ದನು. ಅವನು, “ಲೆಬನೋನಿನ ಒಂದು ಚಿಕ್ಕ ಮುಳ್ಳುಗಿಡವು ಲೆಬನೋನಿನ ದೇವದಾರು ಮರಕ್ಕೆ ಸಂದೇಶವನ್ನು ಕಳುಹಿಸಿತು. ಮುಳ್ಳುಗಿಡವು ಹೀಗೆ ಹೇಳಿತು: ‘ನಿನ್ನ ಮಗಳು ನನ್ನ ಮಗನನ್ನು ಮದುವೆ ಮಾಡಿಕೊಳ್ಳಲಿ.’ ಆದರೆ ಒಂದು ಕಾಡುಮೃಗ ಬಂದು ಮುಳ್ಳುಗಿಡವನ್ನು ತುಳಿದು ನಾಶಮಾಡಿತು. 19 ನೀನು ನಿನ್ನ ಮನಸ್ಸಿನಲ್ಲಿ, ‘ನಾನು ಎದೋಮನನ್ನು ಸೋಲಿಸಿದ್ದೇನೆ’ ಎಂದು ನೆನಸಿಕೊಂಡಿರಬಹುದು. ನೀನು ತುಂಬಾ ಹೆಮ್ಮೆಯುಳ್ಳವನಾಗಿ ಜಂಬ ಕೊಚ್ಚಿಕೊಳ್ಳುತ್ತಿರುವೆ. ಆದರೆ ನೀನು ಮನೆಯಲ್ಲಿಯೇ ಕುಳಿತುಕೊಳ್ಳುವುದು ಒಳ್ಳೆದು. ಸುಮ್ಮನೆ ತೊಂದರೆಗೆ ಸಿಕ್ಕಿಕೊಳ್ಳಬೇಡ. ನನ್ನೊಂದಿಗೆ ಯುದ್ಧ ಮಾಡಿದರೆ ಇಡೀ ಯೆಹೂದ ದೇಶವೇ ನಾಶವಾಗುವದು.” ಎಂದು ಬರೆದು ಕಳುಹಿಸಿದನು.
20 ಅಮಚ್ಯನು ಅವನ ಮಾತಿಗೆ ಲಕ್ಷ್ಯಕೊಡಲಿಲ್ಲ. ಇದು ದೇವರಿಂದಲೇ ಆಯಿತು. ಇಸ್ರೇಲ್ ಯೆಹೂದವನ್ನು ಸೋಲಿಸಬೇಕೆಂದು ದೇವರ ಇಚ್ಛೆಯಾಗಿತ್ತು. ಯಾಕೆಂದರೆ ಯೆಹೂದದ ಜನರು ಎದೋಮ್ಯರ ದೇವರುಗಳನ್ನು ಆರಾಧಿಸುತ್ತಿದ್ದರು. 21 ಹೀಗೆ ಯೆಹೂದದ ಅರಸನಾದ ಅಮಚ್ಯನು ಇಸ್ರೇಲರ ಅರಸನನ್ನು ಮುಖಾಮುಖಿಯಾಗಿ ಬೇತ್ಷೆಮೆಷಿನಲ್ಲಿ ಸಂಧಿಸಿದನು. ಬೇತ್ಷೆಮೆಷ್ ಯೆಹೂದ ರಾಜ್ಯದ ಪಟ್ಟಣ. 22 ಇಸ್ರೇಲ್ ಯೆಹೂದವನ್ನು ಸೋಲಿಸಿಬಿಟ್ಟಿತು. ಯೆಹೂದದ ಸೈನಿಕರೆಲ್ಲಾ ತಮ್ಮತಮ್ಮ ಮನೆಗಳಿಗೆ ಓಡಿಹೋದರು. 23 ಯೋವಾಷನು ಬೇತ್ಷೆಮೆಷಿನಲ್ಲಿ ಅಮಚ್ಯನನ್ನು ಹಿಡಿದು ಜೆರುಸಲೇಮಿಗೆ ಕೊಂಡೊಯ್ದನು. ಅಮಚ್ಯನ ತಂದೆ ಯೆಹೋವಾಷನು. ಇವನು ಯೆಹೋವಹಾಜನ ಮಗ. ಯೋವಾಷನು ಜೆರುಸಲೇಮಿನ ಪೌಳಿಗೋಡೆಯಲ್ಲಿ ಆರುನೂರು ಅಡಿ ಗೋಡೆಯನ್ನು ಅಂದರೆ ಎಫ್ರಾಯೀಮ್ ಬಾಗಿಲಿನಿಂದ ಹಿಡಿದು ಮೂಲೆಬಾಗಿಲಿನವರೆಗೆ ಗೋಡೆಯನ್ನು ಕೆಡವಿಹಾಕಿದನು. 24 ದೇವಾಲಯದೊಳಗೆ ಬೆಳ್ಳಿಬಂಗಾರಗಳು ಮತ್ತು ಬೆಲೆಯುಳ್ಳ ವಸ್ತುಗಳಿದ್ದವು. ಓಬೇದೆದೋಮನು ಅವುಗಳ ಮೇಲ್ವಿಚಾರಕನಾಗಿದ್ದನು. ಯೋವಾಷಾನು ಅವೆಲ್ಲವನ್ನೂ ಅರಮನೆಯಲ್ಲಿದ್ದ ನಿಕ್ಷೇಪವನ್ನೂ ಸೂರೆಮಾಡಿ ಕೆಲಜನರನ್ನು ಸೆರೆಹಿಡಿದು ಎಲ್ಲವನ್ನು ಸಮಾರ್ಯಕ್ಕೊಯ್ದನು.
25 ಇಸ್ರೇಲಿನ ಅರಸನೂ ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತಮೇಲೆ ಅಮಚ್ಯನು ಹದಿನೈದು ವರ್ಷ ಜೀವಿಸಿದನು. ಅಮಚ್ಯನ ತಂದೆಯ ಹೆಸರು ಯೆಹೋವಾಷ; ಅವನು ಯೆಹೂದದ ಅರಸನಾಗಿದ್ದನು. 26 ಅಮಚ್ಯನ ಬೇರೆ ಕಾರ್ಯಗಳು ಅಂದರೆ ಆರಂಭದಿಂದ ಕೊನೆಯವರೆಗಿನ ಕಾರ್ಯಗಳನ್ನು ಯೆಹೂದದ ಮತ್ತು ಇಸ್ರೇಲಿನ ರಾಜರ ಗ್ರಂಥದಲ್ಲಿ ಬರೆಯಲಾಗಿದೆ. 27 ಅಮಚ್ಯನು ದೇವರಾದ ಯೆಹೋವನನ್ನು ಆರಾಧಿಸುವದನ್ನು ಬಿಟ್ಟದ್ದಕ್ಕಾಗಿ ಜೆರುಸಲೇಮಿನ ಜನರು ಅವನನ್ನು ಕೊಲ್ಲಲು ಸಂಚುಮಾಡಿದರು. ಆಗ ಅವನು ಲಾಕೀಷಿಗೆ ಓಡಿಹೋದನು. ಆದರೆ ಜನರು ಕೆಲವರನ್ನು ಕಳುಹಿಸಿ ಅಲ್ಲಿಯೇ ಅವನನ್ನು ಕೊಲ್ಲಿಸಿದರು. 28 ಅವನ ಜನರು ಆ ಶವವನ್ನು ಕುದುರೆಯ ಬೆನ್ನಿನ ಮೇಲೆ ಹೊರಿಸಿ ತಂದು ಯೆಹೂದದ ನಗರದಲ್ಲಿ ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದರು.
Kannada Holy Bible: Easy-to-Read Version. All rights reserved. © 1997 Bible League International