Print Page Options
Previous Prev Day Next DayNext

Chronological

Read the Bible in the chronological order in which its stories and events occurred.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 1-4

ಅಹಜ್ಯನಿಗೆ ಒಂದು ಸಂದೇಶ

ಅಹಾಬನು ಸತ್ತನಂತರ, ಮೋವಾಬ್ಯರು ಇಸ್ರೇಲಿನ ಆಳ್ವಿಕೆಗೆ ವಿರೋಧವಾಗಿ ದಂಗೆ ಎದ್ದರು.

ಒಂದು ದಿನ, ಅಹಜ್ಯನು ಸಮಾರ್ಯದ ತನ್ನ ಮನೆಯ ಮಾಳಿಗೆಯ ಮೇಲಿದ್ದನು. ಅಹಜ್ಯನು ಮನೆಯ ಮೇಲಿನ ಮರದ ಕಂಬಗಳ ಮೂಲಕ ಕೆಳಕ್ಕೆ ಬಿದ್ದನು. ಅವನಿಗೆ ಬಹಳ ಗಾಯಗಳಾದವು. ಅಹಜ್ಯನು ಸಂದೇಶಕರನ್ನು ಕರೆದು ಅವರಿಗೆ, “ಎಕ್ರೋನಿನ ದೇವರಾದ ಬಾಳ್ಜೆಬೂಬನ ಅರ್ಚಕರ ಬಳಿಗೆ ಹೋಗಿ, ನನ್ನ ಗಾಯಗಳು ಗುಣವಾಗುತ್ತವೆಯೇ ಎಂಬುದನ್ನು ಅವರಿಂದ ತಿಳಿದುಕೊಳ್ಳಿ” ಎಂದು ಹೇಳಿದನು.

ಆದರೆ ಯೆಹೋವನ ದೂತನೊಬ್ಬನು ತಿಷ್ಬೀಯನಾದ ಎಲೀಯನಿಗೆ, “ರಾಜನಾದ ಅಹಜ್ಯನು ಸಮಾರ್ಯದಿಂದ ಕೆಲವು ಸಂದೇಶಕರನ್ನು ಕಳುಹಿಸಿದ್ದಾನೆ. ನೀನು ಹೋಗಿ ಅವರನ್ನು ಭೇಟಿಯಾಗಿ ಅವರಿಗೆ, ‘ಇಸ್ರೇಲಿನಲ್ಲಿಯೂ ಒಬ್ಬ ದೇವರಿದ್ದಾನೆ! ಹೀಗಿರುವಾಗ ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನ ಬಳಿಗೆ ಹೋಗಿ ಪ್ರಶ್ನೆಗಳನ್ನು ಕೇಳುವುದೇಕೆ? ರಾಜನಾದ ಅಹಜ್ಯನಿಗೆ ಈ ಸಂಗತಿಗಳನ್ನು ತಿಳಿಸಿ: ಬಾಳ್ಜೆಬೂಬನಿಂದ ಪ್ರಶ್ನೆಗಳನ್ನು ಕೇಳುವುದಕ್ಕೆ ನೀನು ಸಂದೇಶಕರನ್ನು ಕಳುಹಿಸಿದೆ. ನೀನು ಈ ಕಾರ್ಯವನ್ನು ಮಾಡಿದುದರಿಂದ, ಯೆಹೋವನು ಹೀಗೆನ್ನುವನು: ನೀನು ನಿನ್ನ ಹಾಸಿಗೆಯಿಂದ ಮೇಲಕ್ಕೇಳುವುದಿಲ್ಲ. ನೀನು ಅಲ್ಲೇ ಸಾಯುವೆ’ ಎಂದು ತಿಳಿಸು” ಎಂಬುದಾಗಿ ಹೇಳಿದನು. ಎಲೀಯನು ಅಹಜ್ಯನ ಸೇವಕರಿಗೆ ಈ ಮಾತುಗಳನ್ನು ಹೇಳಿ ಅಲ್ಲಿಂದ ಹೊರಟುಹೋದನು.

ಸಂದೇಶಕರು ಅಹಜ್ಯನ ಬಳಿಗೆ ಹಿಂದಿರುಗಿ ಬಂದರು. ಅಹಜ್ಯನು ಸಂದೇಶಕರನ್ನು, “ನೀವು ಇಷ್ಟು ಬೇಗ ಹಿಂದಕ್ಕೆ ಬಂದುದೇಕೆ?” ಎಂದು ಕೇಳಿದನು.

ಸಂದೇಶಕರು ಅಹಜ್ಯನಿಗೆ, “ಒಬ್ಬನು ನಮ್ಮನ್ನು ಭೇಟಿಯಾಗಿ ನಿಮ್ಮನ್ನು ಕಳುಹಿಸಿದ ರಾಜನ ಬಳಿಗೆ ಹಿಂದಿರುಗಿ ಹೋಗಿ ಯೆಹೋವನು ಹೇಳುವುದನ್ನು ಅವನಿಗೆ ತಿಳಿಸಿ. ಯೆಹೋವನು ಹೇಳುವುದೇನೆಂದರೆ: ‘ಇಸ್ರೇಲಿನಲ್ಲಿ ಒಬ್ಬ ದೇವರಿದ್ದಾನೆ! ಹೀಗಿರುವಾಗ ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ಸಂದೇಶಕರನ್ನು ಕಳುಹಿಸಿದುದೇಕೆ? ನೀನು ಈ ಕಾರ್ಯವನ್ನು ಮಾಡಿದ್ದರಿಂದ ನಿನ್ನ ಹಾಸಿಗೆಯಿಂದ ಮೇಲಕ್ಕೇಳುವುದಿಲ್ಲ. ನೀನು ಅಲ್ಲೇ ಸಾಯುವೆ!’” ಎಂಬುದಾಗಿ ಹೇಳಿದರು.

ಅಹಜ್ಯನು ಸಂದೇಶಕರನ್ನು, “ನಿಮ್ಮನ್ನು ಭೇಟಿಮಾಡಿ ಈ ಮಾತುಗಳನ್ನು ತಿಳಿಸಿದ ಮನುಷ್ಯನು ಹೇಗಿದ್ದನು?” ಎಂದು ಕೇಳಿದನು.

ಸಂದೇಶಕರು ಅಹಜ್ಯನಿಗೆ, “ಅವನು ಉಣ್ಣೆಯ ಮೇಲಂಗಿಯನ್ನು ಧರಿಸಿದ್ದನು ಮತ್ತು ಸೊಂಟಕ್ಕೆ ಚರ್ಮದ ಪಟ್ಟಿಯನ್ನು ಕಟ್ಟಿಕೊಂಡಿದ್ದನು” ಎಂದರು.

ಆಗ ಅಹಜ್ಯನು, “ಅವನು ತಿಷ್ಬೀಯನಾದ ಎಲೀಯನು” ಎಂದು ಹೇಳಿದನು.

ಅಹಜ್ಯನು ಕಳುಹಿಸಿದ ಸೇನಾಧಿಪತಿಗಳ ನಾಶನ

ಅಹಜ್ಯನು ಎಲೀಯನ ಬಳಿಗೆ ಒಬ್ಬ ಸೇನಾಧಿಪತಿಯನ್ನು ಮತ್ತು ಐವತ್ತು ಮಂದಿ ಜನರನ್ನು ಕಳುಹಿಸಿದನು. ಸೇನಾಧಿಪತಿಯು ಎಲೀಯನ ಬಳಿಗೆ ಹೋದನು. ಆ ಸಮಯದಲ್ಲಿ ಎಲೀಯನು ಬೆಟ್ಟದ ತುದಿಯಲ್ಲಿ ಕುಳಿತಿದ್ದನು. ಆ ಸೇನಾಧಿಪತಿಯು ಎಲೀಯನಿಗೆ, “ದೇವಮನುಷ್ಯನೇ, ರಾಜನು ಹೇಳುತ್ತಾನೆ, ‘ಕೆಳಗಿಳಿದು ಬಾ’” ಎಂದು ಹೇಳಿದನು.

10 ಎಲೀಯನು ಐವತ್ತು ಮಂದಿಯ ಸೇನಾಧಿಪತಿಗೆ, “ನಾನು ಒಬ್ಬ ದೇವಮನುಷ್ಯನಾಗಿರುವದಾದರೆ ಪರಲೋಕದಿಂದ ಬೆಂಕಿಯು ಕೆಳಗಿಳಿದು ಬಂದು ನಿನ್ನನ್ನೂ ನಿನ್ನ ಐವತ್ತು ಸೈನಿಕರನ್ನೂ ನಾಶಗೊಳಿಸಲಿ!” ಎಂದು ಉತ್ತರಿಸಿದನು.

ಆಗ ಬೆಂಕಿಯು ಪರಲೋಕದಿಂದ ಬಂದು ಆ ಸೇನಾಧಿಪತಿಯನ್ನು ಮತ್ತು ಅವನ ಐವತ್ತು ಮಂದಿ ಸೈನಿಕರನ್ನು ನಾಶಗೊಳಿಸಿತು.

11 ಅಹಜ್ಯನು ಬೇರೊಬ್ಬ ಸೇನಾಧಿಪತಿಯನ್ನು ಮತ್ತು ಐವತ್ತು ಜನರನ್ನು ಎಲೀಯನ ಬಳಿಗೆ ಕಳುಹಿಸಿದನು. ಸೇನಾಧಿಪತಿಯು ಎಲೀಯನಿಗೆ, “ದೇವಮನುಷ್ಯನೇ, ರಾಜನು ಹೇಳುತ್ತಾನೆ, ‘ತ್ವರಿತವಾಗಿ ಕೆಳಗಿಳಿದು ಬಾ!’” ಎಂದು ಹೇಳಿದನು.

12 ಎಲೀಯನು ಸೇನಾಧಿಪತಿಗೆ ಮತ್ತು ಅವನ ಐವತ್ತು ಮಂದಿ ಜನರಿಗೆ, “ನಾನು ದೇವಮನುಷ್ಯನಾಗಿದ್ದರೆ ಪರಲೋಕದಿಂದ ಬೆಂಕಿಯು ಕೆಳಗಿಳಿದು ಬಂದು ನಿನ್ನನ್ನೂ ನಿನ್ನ ಐವತ್ತು ಜನರನ್ನೂ ನಾಶಗೊಳಿಸಲಿ!” ಎಂದು ಹೇಳಿದನು.

ಆಗ ಪರಲೋಕದಿಂದ ದೇವರ ಬೆಂಕಿಯು ಇಳಿದು ಬಂದು ಸೇನಾಧಿಪತಿಯನ್ನೂ ಅವನ ಐವತ್ತು ಜನರನ್ನೂ ನಾಶಗೊಳಿಸಿತು.

13 ಅಹಜ್ಯನು ಮೂರನೆಯ ಸೇನಾಧಿಪತಿಯನ್ನು ಐವತ್ತು ಜನರೊಂದಿಗೆ ಕಳುಹಿಸಿದನು. ಐವತ್ತು ಮಂದಿಯ ಮೂರನೆಯ ಸೇನಾಧಿಪತಿಯು ಎಲೀಯನ ಬಳಿಗೆ ಬಂದನು. ಸೇನಾಧಿಪತಿಯು ತನ್ನ ಮೊಣಕಾಲುಗಳ ಮೇಲೆ ಬಿದ್ದು ನಮಸ್ಕರಿಸಿದನು. ಸೇನಾಧಿಪತಿಯು ಎಲೀಯನನ್ನು ಬೇಡಿಕೊಳ್ಳುತ್ತಾ ಅವನಿಗೆ, “ದೇವ ಮನುಷ್ಯನೇ, ನನ್ನ ಮತ್ತು ಈ ಐವತ್ತು ಜನರ ಪ್ರಾಣವು ನಿನ್ನ ದೃಷ್ಟಿಯಲ್ಲಿ ಬೆಲೆಯುಳ್ಳದ್ದಾಗಿರಲಿ! 14 ಪರಲೋಕದಿಂದ ಕೆಳಗಿಳಿದು ಬಂದ ಬೆಂಕಿಯು ಮೊದಲ ಇಬ್ಬರು ಸೇನಾಧಿಪತಿಗಳನ್ನೂ ಅವರ ಐವತ್ತು ಜನರನ್ನೂ ನಾಶಗೊಳಿಸಿತು. ಆದರೆ ಈಗ ನಮ್ಮ ಮೇಲೆ ಕನಿಕರ ತೋರಿ ಜೀವಿಸಲು ಅವಕಾಶ ಮಾಡಿಕೊಡು” ಎಂದು ಹೇಳಿದನು.

15 ಯೆಹೋವನ ದೂತನು ಎಲೀಯನಿಗೆ, “ಸೇನಾಧಿಪತಿಯೊಡನೆ ಹೋಗು, ಅವನಿಗೆ ಹೆದರಬೇಡ” ಎಂದು ಹೇಳಿದನು.

ಎಲೀಯನು ರಾಜನಾದ ಅಹಜ್ಯನನ್ನು ನೋಡಲು ಆ ಸೇನಾಧಿಪತಿಯೊಡನೆ ಹೋದನು.

16 ಎಲೀಯನು ಅಹಜ್ಯನಿಗೆ, “ಇಸ್ರೇಲಿನಲ್ಲಿ ದೇವರಿದ್ದಾನೆ. ಹೀಗಿರುವಾಗ ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ಪ್ರಶ್ನೆಗಳನ್ನು ಕೇಳಲು ಸಂದೇಶಕರನ್ನು ಏಕೆ ಕಳುಹಿಸಿದೆ? ನೀನು ಈ ಕಾರ್ಯವನ್ನು ಮಾಡಿದ್ದರಿಂದ ನಿನ್ನ ಹಾಸಿಗೆಯಿಂದ ನೀನು ಮೇಲಕ್ಕೇಳುವುದಿಲ್ಲ. ನೀನು ಅಲ್ಲೇ ಸಾಯುವೆ! ಎಂಬುದಾಗಿ ಯೆಹೋವನು ಅನ್ನುತ್ತಾನೆ.” ಎಂದು ಹೇಳಿದನು.

17 ಎಲೀಯನ ಮೂಲಕ ಯೆಹೋವನು ಹೇಳಿದಂತೆಯೇ ಅಹಜ್ಯನು ಸತ್ತುಹೋದನು. ಅಹಜ್ಯನಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅಹಜ್ಯನ ನಂತರ ಯೆಹೋರಾಮನು ಹೊಸ ರಾಜನಾದನು. ಯೆಹೋಷಾಫಾಟನ ಮಗನಾದ ಯೆಹೋರಾಮನು ಯೆಹೂದದ ರಾಜನಾಗಿದ್ದ ಎರಡನೆಯ ವರ್ಷದಲ್ಲಿ ಯೊಹೋರಾಮನು ಆಳುವುದಕ್ಕೆ ಆರಂಭಿಸಿದನು.

18 ಅಹಜ್ಯನು ಮಾಡಿದ ಇತರ ಕಾರ್ಯಗಳ ಬಗ್ಗೆ “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆಯಲಾಗಿದೆ.

ಎಲೀಯನ ಪರಲೋಕಾರೋಹಣ

ಯೆಹೋವನು ಎಲೀಯನನ್ನು ಸುಂಟರಗಾಳಿಯ ಮೂಲಕ ಪರಲೋಕಕ್ಕೆ ಕರೆದುಕೊಳ್ಳುವ ಕಾಲ ಹತ್ತಿರ ಬಂದಿತು. ಎಲೀಯನು ಎಲೀಷನೊಡನೆ ಗಿಲ್ಗಾಲಿನಿಂದ ಹೋದನು.

ಎಲೀಯನು ಎಲೀಷನಿಗೆ, “ದಯವಿಟ್ಟು ಇಲ್ಲಿಯೇ ಇರು; ಏಕೆಂದರೆ ಬೇತೇಲಿಗೆ ಹೋಗುವಂತೆ ಯೆಹೋವನು ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.

ಆದರೆ ಎಲೀಷನು, “ಯೆಹೋವನಾಣೆ, ನಿನ್ನಾಣೆ, ನಾನು ನಿನ್ನನ್ನು ಬಿಟ್ಟಿರುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು. ಇಬ್ಬರೂ ಬೇತೇಲಿಗೆ ಹೋದರು.

ಬೇತೇಲಿನಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನ ಬಳಿಗೆ ಬಂದು, ಅವನಿಗೆ, “ಯೆಹೋವನು ಈ ದಿನ ನಿನ್ನ ಒಡೆಯನನ್ನು ನಿನ್ನಿಂದ ತೆಗೆದುಕೊಳ್ಳುತ್ತಾನೆಂಬುದು ನಿನಗೆ ತಿಳಿದಿದೆಯೇ?” ಎಂದು ಕೇಳಿದರು.

ಎಲೀಷನು, “ಹೌದು, ನನಗೆ ಅದು ತಿಳಿದಿದೆ. ಅದರ ಬಗ್ಗೆ ಮಾತನಾಡಬೇಡಿ” ಎಂದನು.

ಎಲೀಯನು ಎಲೀಷನಿಗೆ, “ದಯವಿಟ್ಟು ಇಲ್ಲಿಯೇ ಇರು, ಏಕೆಂದರೆ ಯೆಹೋವನು ಜೆರಿಕೊವಿಗೆ ಹೋಗುವಂತೆ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.

ಆದರೆ ಎಲೀಷನು, “ಯೆಹೋವನಾಣೆ, ನಿನ್ನಾಣೆ, ನಾನು ನಿನ್ನನ್ನು ಬಿಟ್ಟಿರುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ!” ಎಂದು ಹೇಳಿದನು. ಇಬ್ಬರೂ ಜೆರಿಕೊವಿಗೆ ಹೋದರು.

ಜೆರಿಕೊದಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನ ಬಳಿಗೆ ಬಂದು ಅವನಿಗೆ, “ಯೆಹೋವನು ಈ ದಿನ ನಿನ್ನ ಒಡೆಯನನ್ನು ನಿನ್ನಿಂದ ತೆಗೆದುಕೊಳ್ಳುತ್ತಾನೆಂಬುದು ನಿನಗೆ ತಿಳಿದಿದೆಯೇ?” ಎಂದು ಕೇಳಿದರು.

ಎಲೀಷನು, “ಹೌದು, ನನಗೆ ಅದು ತಿಳಿದಿದೆ. ಅದರ ಬಗ್ಗೆ ಮಾತನಾಡಬೇಡಿ” ಎಂದನು.

ಎಲೀಯನು ಎಲೀಷನಿಗೆ, “ದಯವಿಟ್ಟು ಇಲ್ಲಿಯೇ ಇರು, ಏಕೆಂದರೆ ಯೆಹೋವನು ಜೋರ್ಡನ್ ನದಿಗೆ ಹೋಗುವಂತೆ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.

ಎಲೀಷನು, “ಯೆಹೋವನಾಣೆ, ನಿನ್ನಾಣೆ, ನಾನು ನಿನ್ನನ್ನು ಬಿಟ್ಟಿರುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು. ಅವರಿಬ್ಬರೂ ಮುಂದೆ ಸಾಗಿದರು.

ಅವರನ್ನು ಹಿಂಬಾಲಿಸಿಕೊಂಡು ಬಂದ ಪ್ರವಾದಿಗಳ ಗುಂಪಿನಲ್ಲಿ ಐವತ್ತು ಮಂದಿ ಅಲ್ಲಿದ್ದರು. ಎಲೀಯ ಮತ್ತು ಎಲೀಷರು ಜೋರ್ಡನ್ ನದಿಯ ಹತ್ತಿರ ನಿಂತುಕೊಂಡರು. ಆ ಐವತ್ತು ಮಂದಿ ಜನರು ಎಲೀಯ ಮತ್ತು ಎಲೀಷರಿಗಿಂತ ಬಹುದೂರದಲ್ಲಿ ನಿಂತುಕೊಂಡರು. ಎಲೀಯನು ತನ್ನ ಮೇಲಂಗಿಯನ್ನು ತೆಗೆದು ಅದರಿಂದ ನೀರನ್ನು ಹೊಡೆದನು. ಆಗ ನೀರು ಎರಡು ಭಾಗವಾಗಿ ಬಲಗಡೆಯಲ್ಲಿಯೂ ಎಡಗಡೆಯಲ್ಲಿಯೂ ನಿಂತುಕೊಂಡಿತು. ನಂತರ ಎಲೀಯ ಮತ್ತು ಎಲೀಷರು ಒಣನೆಲದ ಮೇಲೆ ನದಿಯನ್ನು ದಾಟಿದರು.

ಅವರು ನದಿಯನ್ನು ದಾಟಿದ ಮೇಲೆ ಎಲೀಯನು ಎಲೀಷನಿಗೆ, “ದೇವರು ನನ್ನನ್ನು ನಿನ್ನಿಂದ ತೆಗೆದುಕೊಳ್ಳುವುದಕ್ಕೆ ಮುಂಚೆ, ನಾನು ನಿನಗೆ ಏನು ಮಾಡಬೇಕೆಂದು ನೀನು ಅಪೇಕ್ಷಿಸುವೆ?” ಎಂದು ಕೇಳಿದನು.

ಎಲೀಷನು, “ನಿನ್ನ ಆತ್ಮವು ನನ್ನ ಮೇಲೆ ಎರಡರಷ್ಟಿರಬೇಕೆಂದು ನಾನು ನಿನ್ನಲ್ಲಿ ಬೇಡುತ್ತೇನೆ” ಎಂದು ಹೇಳಿದನು.

10 ಎಲೀಯನು, “ನೀನು ಕಷ್ಟಕರವಾದುದನ್ನು ಬೇಡಿಕೊಂಡೆ. ನಿನ್ನಿಂದ ನನ್ನನ್ನು ತೆಗೆದುಕೊಳ್ಳುವಾಗ ನೀನು ನನ್ನನ್ನು ಕಂಡರೆ, ಅದು ನಿನಗೆ ದೊರೆಯುವುದು. ಆದರೆ ನಿನ್ನಿಂದ ನನ್ನನ್ನು ತೆಗೆದುಕೊಳ್ಳುವಾಗ ನೀನು ನನ್ನನ್ನು ಕಾಣದಿದ್ದರೆ, ಅದು ನಿನಗೆ ದೊರೆಯುವುದಿಲ್ಲ” ಎಂದು ಹೇಳಿದನು.

11 ಎಲೀಯ ಮತ್ತು ಎಲೀಷ ಒಟ್ಟಿಗೆ ನಡೆಯುತ್ತಾ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ, ಕೆಲವು ಕುದುರೆಗಳು ಮತ್ತು ರಥಗಳು ಬಂದು ಎಲೀಯನನ್ನು ಎಲೀಷನಿಂದ ಬೇರ್ಪಡಿಸಿದವು. ಆ ಕುದುರೆಗಳು ಮತ್ತು ರಥಗಳು ಬೆಂಕಿಯಂತಿದ್ದವು! ನಂತರ ಎಲೀಯನು ಸುಂಟರ ಗಾಳಿಯಲ್ಲಿ ಪರಲೋಕಕ್ಕೆ ಏರಿಹೋದನು.

12 ಎಲೀಷನು ಅದನ್ನು ನೋಡಿ, “ನನ್ನ ತಂದೆಯೇ! ನನ್ನ ತಂದೆಯೇ! ಇಸ್ರೇಲಿಗೆ ರಥರಥಾಶ್ವಗಳೂ ಮತ್ತು ಅಶ್ವದಳವೂ ಆಗಿದ್ದವನೇ!” ಎಂದು ಕೂಗಿಕೊಂಡನು.

ಎಲೀಷನು ಎಲೀಯನನ್ನು ಮತ್ತೆ ನೋಡಲಿಲ್ಲ. ಎಲೀಷನು ತನ್ನ ಬಟ್ಟೆಗಳನ್ನು ಹಿಡಿದುಕೊಂಡು, ತನ್ನ ದುಃಖವನ್ನು ತೋರ್ಪಡಿಸಲು ಅವುಗಳನ್ನು ಹರಿದು ತುಂಡುತುಂಡು ಮಾಡಿದನು. 13 ಎಲೀಯನ ಮೇಲಂಗಿಯು ನೆಲದ ಮೇಲೆ ಬಿತ್ತು. ಎಲೀಷನು ಅದನ್ನು ಎತ್ತಿಕೊಂಡು ಜೋರ್ಡನ್ ನದಿ ತೀರಕ್ಕೆ ಬಂದನು. ಆ ಕಂಬಳಿಯಿಂದ ನೀರನ್ನು ಹೊಡೆದು, “ಎಲೀಯನ ದೇವರಾದ ಯೆಹೋವನು ಎಲ್ಲಿದ್ದಾನೆ?” ಎಂದು ಕೇಳಿದನು. 14 ಎಲೀಷನು ನೀರನ್ನು ಹೊಡೆದಾಗ, ನೀರು ಎರಡು ಭಾಗವಾಗಿ ಬಲಗಡೆಯಲ್ಲೂ ಎಡಗಡೆಯಲ್ಲೂ ನಿಂತುಕೊಂಡಿತು! ಎಲೀಷನು ನದಿಯನ್ನು ದಾಟಿದನು.

ಎಲೀಯನ ಬಗ್ಗೆ ಪ್ರವಾದಿಗಳ ವಿಚಾರ

15 ಜೆರಿಕೊದಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನನ್ನು ಕಂಡು, “ಎಲೀಯನ ಆತ್ಮವು ಈಗ ಎಲೀಷನ ಮೇಲಿದೆ!” ಎಂದು ಹೇಳಿ ಎಲೀಷನನ್ನು ಭೇಟಿಮಾಡಲು ಬಂದರು. ಅವರು ಎಲೀಷನಿಗೆ ಸಾಷ್ಟಾಂಗನಮಸ್ಕಾರ ಮಾಡಿದರು. 16 ಅವರು ಅವನಿಗೆ, “ನೋಡು, ನಮ್ಮಲ್ಲಿ ಐವತ್ತು ಮಂದಿ ಬಲಿಷ್ಠ ಜನರಿದ್ದಾರೆ. ನಿನ್ನ ಒಡೆಯನನ್ನು ಹುಡುಕಲು ದಯವಿಟ್ಟು ಅವರಿಗೆ ಅವಕಾಶಕೊಡು. ಯೆಹೋವನ ಆತ್ಮವು ಎಲೀಯನನ್ನು ಮೇಲಕ್ಕೆ ಎತ್ತಿಕೊಂಡು ಹೋಗಿ ಯಾವುದಾದರೂ ಬೆಟ್ಟದ ಮೇಲಾಗಲಿ ಅಥವಾ ಕಣಿವೆಯಲ್ಲಾಗಲಿ ಬೀಳಿಸಿರಬೇಕು” ಎಂದು ಹೇಳಿದರು.

ಆದರೆ ಎಲೀಷನು, “ಇಲ್ಲ, ಎಲೀಯನನ್ನು ಹುಡುಕಲು ಜನರನ್ನು ಕಳುಹಿಸಬೇಡಿ!” ಎಂದು ಉತ್ತರಿಸಿದನು.

17 ಎಲೀಷನು ಕಿರಿಕಿರಿಗೊಂಡು ಒಪ್ಪಿಕೊಳ್ಳುವವರೆಗೆ ಆ ಪ್ರವಾದಿಗಳ ಗುಂಪು ಅವನನ್ನು ಬೇಡಿಕೊಂಡರು. ನಂತರ ಎಲೀಷನು, “ಸರಿ, ಎಲೀಯನನ್ನು ಹುಡುಕಲು ಜನರನ್ನು ಕಳುಹಿಸಿ” ಎಂದು ಹೇಳಿದನು.

ಪ್ರವಾದಿಗಳ ಗುಂಪು ಎಲೀಯನನ್ನು ಹುಡುಕಲು ಐವತ್ತು ಮಂದಿ ಜನರನ್ನು ಕಳುಹಿಸಿದರು. ಅವರು ಮೂರು ದಿನ ಹುಡುಕಿದರೂ ಎಲೀಯನನ್ನು ಕಂಡು ಹಿಡಿಯಲಾಗಲಿಲ್ಲ. 18 ಅವರು ಎಲೀಷನು ನೆಲೆಸಿದ್ದ ಜೆರಿಕೊವಿಗೆ ಹೋದರು. ಅವರು ಎಲೀಯನನ್ನು ಕಂಡುಹಿಡಿಯಲಾಗಲಿಲ್ಲವೆಂದು ಎಲೀಷನಿಗೆ ಹೇಳಿದರು. ಎಲೀಷನು ಅವರಿಗೆ, “ನಾನು ನಿಮಗೆ ಹೋಗಬೇಡವೆಂದು ಹೇಳಿದೆನಲ್ಲ” ಎಂದನು.

ಎಲೀಷನು ನೀರನ್ನು ಶುಚಿಗೊಳಿಸಿದನು

19 ನಗರದ ಜನರು ಎಲೀಷನಿಗೆ, “ಸ್ವಾಮೀ, ಈ ನಗರವು ಒಳ್ಳೆಯ ಸ್ಥಳದಲ್ಲಿದೆಯೆಂಬುದನ್ನು ನೀನು ನೋಡುತ್ತಿರುವೆ. ಆದರೆ ನೀರು ತುಂಬಾ ಕೆಟ್ಟಿದೆ. ಆ ಕಾರಣದಿಂದಲೇ ಈ ಭೂಮಿಯಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ” ಎಂದು ಹೇಳಿದರು.

20 ಎಲೀಷನು, “ಒಂದು ಹೊಸ ಬೋಗುಣಿಯನ್ನು ತಂದು ಅದರಲ್ಲಿ ಉಪ್ಪನ್ನು ಹಾಕಿ” ಎಂದನು.

ಜನರು ಎಲೀಷನ ಬಳಿಗೆ ಒಂದು ಬೋಗುಣಿಯನ್ನು ತಂದರು. 21 ನಂತರ ಎಲೀಷನು ನೆಲದಿಂದ ನೀರು ಹರಿಯುತ್ತಿದ್ದ ಸ್ಥಳಕ್ಕೆ ಹೋದನು. ಎಲೀಷನು ಉಪ್ಪನ್ನು ನೀರಿನಲ್ಲಿ ಎಸೆದು, “‘ನಾನು ಈ ನೀರನ್ನು ಶುಚಿಗೊಳಿಸಿದ್ದೇನೆ! ಇಲ್ಲಿಂದಾಚೆಗೆ ಈ ನೀರು ಯಾರಿಗೂ ಸಾವನ್ನು ಮತ್ತು ಬಂಜೆತನವನ್ನು ಉಂಟುಮಾಡುವುದಿಲ್ಲ ಮತ್ತು ಈ ಭೂಮಿಯಲ್ಲಿ ಬೆಳೆಗಳು ಬೆಳೆಯುತ್ತವೆ’ ಎಂದು ಯೆಹೋವನು ಹೇಳುತ್ತಾನೆ” ಎಂದನು.

22 ಆ ನೀರು ಶುದ್ಧವಾಯಿತು. ಇಂದು ಆ ನೀರು ಇನ್ನೂ ಶುದ್ಧವಾಗಿದೆ. ಎಲೀಷನು ಹೇಳಿದಂತೆಯೇ ಅದು ಸಂಭವಿಸಿತು.

ಕೆಲವು ಬಾಲಕರು ಎಲೀಷನನ್ನು ಅಪಹಾಸ್ಯ ಮಾಡಿದರು

23 ಎಲೀಷನು ಆ ನಗರದಿಂದ ಬೇತೇಲಿಗೆ ಹೋದನು. ಎಲೀಷನು ನಗರದಿಂದ ಬೆಟ್ಟದ ಮೇಲಕ್ಕೆ ಹೋಗುತ್ತಿದ್ದಾಗ, ಕೆಲವು ಬಾಲಕರು ನಗರದ ಕಡೆಯಿಂದ ಇಳಿಯುತ್ತಿದ್ದರು. ಅವರು ಎಲೀಷನನ್ನು ಹಾಸ್ಯಮಾಡಿ, “ಮೇಲಕ್ಕೆ ಹೋಗು, ಬೋಳುತಲೆಯವನೇ, ಮೇಲಕ್ಕೆ ಹೋಗು, ಬೋಳುತಲೆಯವನೇ” ಎಂದರು.

24 ಎಲೀಷನು ಹಿಂದಕ್ಕೆ ತಿರುಗಿ ಅವರನ್ನು ನೋಡಿ ಅವರಿಗೆ ಕೇಡಾಗುವಂತೆ ಯೆಹೋವನನ್ನು ಕೇಳಿಕೊಂಡನು. ಆಗ ಕಾಡಿನಿಂದ ಎರಡು ಕರಡಿಗಳು ಹೊರಗೆ ಬಂದು ಅವರ ಮೇಲೆರಗಿ ನಲವತ್ತೆರಡು ಮಂದಿ ಬಾಲಕರನ್ನು ಸೀಳಿಹಾಕಿದವು.

25 ಎಲೀಷನು ಬೇತೇಲನ್ನು ಬಿಟ್ಟು ಕಾರ್ಮೆಲ್ ಬೆಟ್ಟಕ್ಕೆ ಹೋದನು. ಅಲ್ಲಿಂದ ಎಲೀಷನು ಸಮಾರ್ಯಕ್ಕೆ ಹಿಂದಿರುಗಿ ಹೋದನು.

ಯೋರಾಮನು ಇಸ್ರೇಲಿನ ರಾಜನಾದನು

ಅಹಾಬನ ಮಗನಾದ ಯೋರಾಮನು ಸಮಾರ್ಯದಲ್ಲಿ ಇಸ್ರೇಲಿನ ರಾಜನಾದನು. ಯೆಹೋಷಾಫಾಟನ ಹದಿನೆಂಟನೆಯ ವರ್ಷದ ಆಳ್ವಿಕೆಯಲ್ಲಿ ಯೋರಾಮನು ಯೆಹೂದದ ರಾಜನಾಗಿ ಆಳಲಾರಂಭಿಸಿದನು. ಯೋರಾಮನು ಹನ್ನೆರಡು ವರ್ಷ ಆಳಿದನು. ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಯೋರಾಮನು ಮಾಡಿದನು. ಆದರೆ ಯೋರಾಮನು ಅವನ ತಂದೆತಾಯಿಗಳಂತೆ ಇರಲಿಲ್ಲ. ಸುಳ್ಳುದೇವರಾದ ಬಾಳನನ್ನು ಪೂಜಿಸಲು ತನ್ನ ತಂದೆಯು ನಿರ್ಮಿಸಿದ್ದ ಸ್ತಂಭವನ್ನು ಅವನು ಕಿತ್ತುಹಾಕಿಸಿದನು. ಆದರೆ ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದ ಪಾಪಗಳನ್ನೇ ಅವನು ಮುಂದುವರಿಸಿದನು. ಇಸ್ರೇಲರು ಪಾಪಗಳನ್ನು ಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಯೋರಾಮನು ಯಾರೊಬ್ಬಾಮನ ಪಾಪಗಳನ್ನು ನಿಲ್ಲಿಸಲಿಲ್ಲ.

ಮೋವಾಬ್ ದೇಶವು ಇಸ್ರೇಲಿನಿಂದ ಬೇರ್ಪಟ್ಟಿತು

ಮೇಷನು ಮೋವಾಬಿನ ರಾಜನಾಗಿದ್ದನು. ಮೇಷನು ಅನೇಕ ಕುರಿಗಳ ಒಡೆಯನಾಗಿದ್ದನು. ಮೇಷನು ಒಂದು ಲಕ್ಷ ಕುರಿಗಳ ಮತ್ತು ಒಂದು ಲಕ್ಷ ಟಗರುಗಳ ಉಣ್ಣೆಯನ್ನು ಇಸ್ರೇಲಿನ ರಾಜನಿಗೆ ಕೊಡುತ್ತಿದ್ದನು. ಆದರೆ ಅಹಾಬನು ಸತ್ತಾಗ ಮೋವಾಬಿನ ರಾಜನು ಇಸ್ರೇಲಿನ ರಾಜನ ವಿರುದ್ಧವಾಗಿ ದಂಗೆಯೆದ್ದು ಅವನ ಆಳ್ವಿಕೆಯಿಂದ ಬೇರೆಯಾದನು.

ಆಗ ರಾಜನಾದ ಯೋರಾಮನು ಸಮಾರ್ಯದಿಂದ ಹೊರಗೆ ಹೋಗಿ, ಇಸ್ರೇಲಿನ ಜನರನ್ನೆಲ್ಲ ಒಟ್ಟುಗೂಡಿಸಿದನು. ಯೋರಾಮನು ಯೆಹೂದದ ರಾಜನಾದ ಯೆಹೋಷಾಫಾಟನ ಬಳಿಗೆ ಸಂದೇಶಕರನ್ನು ಕಳುಹಿಸಿ, “ನನ್ನ ಆಳ್ವಿಕೆಯಿಂದ ಮೋವಾಬಿನ ರಾಜನು ಬೇರ್ಪಟ್ಟಿದ್ದಾನೆ. ಮೋವಾಬಿನ ವಿರುದ್ಧ ಹೋರಾಡಲು ನನ್ನ ಜೊತೆ ಬರುವೆಯಾ?” ಎಂದು ಕೇಳಿದನು.

ಯೆಹೋಷಾಫಾಟನು, “ಆಗಲಿ, ನಿನ್ನ ಜೊತೆ ನಾನೂ ಬರುತ್ತೇನೆ. ನಾನೂ ನೀನೂ ಒಂದೇ. ನನ್ನ ಜನರೂ ನಿನ್ನ ಜನರೂ ಒಂದೇ. ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ” ಎಂದು ಹೇಳಿದನು.

ಮೂವರು ರಾಜರು ಎಲೀಷನ ಸಲಹೆ ಕೇಳುವರು

ಯೆಹೋಷಾಫಾಟನು ಯೋರಾಮನನ್ನು, “ನಾವು ಯಾವ ಮಾರ್ಗದಲ್ಲಿ ಹೋಗೋಣ?” ಎಂದು ಕೇಳಿದನು.

“ನಾವು ಎದೋಮಿನ ಮರಳುಗಾಡಿನ ಮೂಲಕ ಹೋಗೋಣ” ಎಂದು ಯೋರಾಮನು ಉತ್ತರಿಸಿದನು.

ಆದ್ದರಿಂದ ಇಸ್ರೇಲಿನ ರಾಜನು ಯೆಹೂದದ ಮತ್ತು ಎದೋಮಿನ ರಾಜರೊಂದಿಗೆ ಹೋದನು. ಅವರು ಏಳು ದಿನಗಳ ಕಾಲ ಪ್ರಯಾಣ ಮಾಡಿದರು. ಅವರ ಸೇನೆಗೆ ಮತ್ತು ಪ್ರಾಣಿಗಳಿಗೆ ಸಾಕಾಗುವಷ್ಟು ನೀರು ಅಲ್ಲಿ ಇರಲಿಲ್ಲ. 10 ಆಗ ಇಸ್ರೇಲಿನ ರಾಜನಾದ ಯೋರಾಮನು, “ಅಯ್ಯೋ, ಮೂವರು ರಾಜರಾದ ನಮ್ಮನ್ನು ನಿಜವಾಗಿಯೂ ಒಟ್ಟಿಗೆ ಬರಮಾಡಿದ ಯೆಹೋವನು ನಮ್ಮನ್ನು ಮೋವಾಬ್ಯರು ಸೋಲಿಸುವಂತೆ ಮಾಡಿದನಲ್ಲಾ!” ಎಂದು ಹೇಳಿದನು.

11 ಆದರೆ ಯೆಹೋಷಾಫಾಟನು, “ಯೆಹೋವನ ಪ್ರವಾದಿಗಳಲ್ಲಿ ನಿಜವಾಗಿಯೂ ಯಾರಾದರೊಬ್ಬರು ಇಲ್ಲಿರಬೇಕು. ನಾವೇನು ಮಾಡಬೇಕೆಂದು ಯೆಹೋವನು ಹೇಳುತ್ತಾನೆ. ಅದಕ್ಕಾಗಿ ನಾವು ಆ ಪ್ರವಾದಿಯನ್ನು ಕೇಳೋಣ” ಎಂದು ಹೇಳಿದನು.

ಇಸ್ರೇಲಿನ ರಾಜನ ಸೇವಕರಲ್ಲಿ ಒಬ್ಬನು, “ಶಾಫಾಟನ ಮಗನಾದ ಎಲೀಷನು ಇಲ್ಲಿಯೇ ಇದ್ದಾನೆ. ಎಲೀಷನು ಎಲೀಯನ ಸೇವಕನಾಗಿದ್ದನು”[a] ಎಂದು ಹೇಳಿದನು.

12 ಯೆಹೋಷಾಫಾಟನು, “ಯೆಹೋವನ ನುಡಿಗಳು ಎಲೀಷನಲ್ಲಿವೆ!” ಎಂದು ಹೇಳಿದನು.

ಇಸ್ರೇಲಿನ ರಾಜನಾದ ಯೋರಾಮನು, ಯೆಹೋಷಾಫಾಟನು ಮತ್ತು ಎದೋಮಿನ ರಾಜನು ಎಲೀಷನನ್ನು ನೋಡಲು ಹೋದರು.

13 ಎಲೀಷನು ಇಸ್ರೇಲಿನ ರಾಜನಿಗೆ, “ನನ್ನಿಂದ ನಿನಗೆ ಏನು ಬೇಕಾಗಿದೆ? ನಿನ್ನ ತಂದೆತಾಯಿಯರ ಪ್ರವಾದಿಗಳ ಬಳಿಗೆ ಹೋಗು!” ಎಂದು ಹೇಳಿದನು.

ಇಸ್ರೇಲಿನ ರಾಜನು ಎಲೀಷನಿಗೆ, “ಇಲ್ಲ, ನಾವು ನಿನ್ನನ್ನು ನೋಡಲೆಂದು ಇಲ್ಲಿಗೆ ಬಂದಿದ್ದೇವೆ, ಏಕೆಂದರೆ ಯೆಹೋವನು ಮೂವರು ರಾಜರನ್ನು ಒಟ್ಟಿಗೆ ಬರಮಾಡಿ, ನಮ್ಮನ್ನು ಮೋವಾಬ್ಯರು ಸೋಲಿಸುವಂತೆ ಮಾಡಿದ್ದಾನೆ. ನಾವು ನಿನ್ನ ಸಹಾಯವನ್ನು ಬಯಸಿದ್ದೇವೆ” ಎಂದನು.

14 ಎಲೀಷನು, “ಸರ್ವಶಕ್ತನಾದ ಯೆಹೋವನ ಸೇವೆಯನ್ನು ಮಾಡುವವನು ನಾನು. ಯೆಹೋವನಾಣೆ, ನಾನು ನಿಜವನ್ನು ಹೇಳುತ್ತೇನೆ. ಯೆಹೂದದ ರಾಜನಾದ ಯೆಹೋಷಾಫಾಟನು ಇಲ್ಲಿ ಇಲ್ಲದಿದ್ದರೆ, ನಾನು ನಿನ್ನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ; ನಿನ್ನನ್ನು ಗಮನಿಸುತ್ತಲೂ ಇರಲಿಲ್ಲ. 15 ಆದರೆ ಈಗ ಕಿನ್ನರಿ ಬಾರಿಸುವ ಒಬ್ಬನನ್ನು ನನ್ನ ಬಳಿಗೆ ಕರೆತನ್ನಿ” ಎಂದು ಹೇಳಿದನು.

ಅವನು ಕಿನ್ನರಿಯನ್ನು ಬಾರಿಸಿದಾಗ ಯೆಹೋವನ ಶಕ್ತಿಯು ಎಲೀಷನ ಮೇಲೆ ಬಂದಿತು. 16 ಆಗ ಎಲೀಷನು, “ಯೆಹೋವನು ಹೀಗೆನ್ನುತ್ತಾನೆ: ಕಣಿವೆಯಲ್ಲಿ ಗುಂಡಿಗಳನ್ನು ತೋಡಿರಿ. 17 ನೀವು ಗಾಳಿಯನ್ನು ನೋಡುವುದಿಲ್ಲ, ಮಳೆಯನ್ನೂ ನೋಡುವುದಿಲ್ಲ; ಆದರೆ ಆ ಕಣಿವೆಯು ನೀರಿನಿಂದ ತುಂಬಿಕೊಳ್ಳುತ್ತದೆ. ಆಗ ನಿಮಗೆ, ನಿಮ್ಮ ಹಸುಗಳಿಗೆ ಮತ್ತು ಇತರ ಪಶುಗಳಿಗೆ ಕುಡಿಯಲು ನೀರು ಸಿಗುತ್ತದೆ. 18 ಯೆಹೋವನಿಗೆ ಇದು ಸುಲಭ ಸಾಧ್ಯ. ಮೋವಾಬ್ಯರನ್ನು ನೀವು ಸೋಲಿಸುವಂತೆ ಆತನೇ ಅವಕಾಶ ಮಾಡುತ್ತಾನೆ. 19 ಪ್ರತಿಯೊಂದು ಬಲಾಢ್ಯವಾದ ನಗರವನ್ನು ಮತ್ತು ಉತ್ತಮ ನಗರವನ್ನು ನೀವು ಮುತ್ತಿಗೆ ಹಾಕುವಿರಿ. ಪ್ರತಿಯೊಂದು ಒಳ್ಳೆಯ ಮರವನ್ನೂ ನೀವು ಕಡಿದು ಉರುಳಿಸುತ್ತೀರಿ. ಎಲ್ಲಾ ನೀರಿನ ಬುಗ್ಗೆಗಳನ್ನೂ ನೀವು ನಿಲ್ಲಿಸುವಿರಿ. ನೀವು ಕಲ್ಲುಗಳನ್ನೆಸೆದು ಪ್ರತಿಯೊಂದು ಒಳ್ಳೆಯ ತೋಟವನ್ನು ನಾಶಗೊಳಿಸುತ್ತೀರಿ.”

20 ಮುಂಜಾನೆ, ಯಜ್ಞಗಳನ್ನು ಅರ್ಪಿಸುವ ಕಾಲದಲ್ಲಿ ಎದೋಮಿನ ಕಡೆಯಿಂದ ನೀರು ಹರಿಯಲಾರಂಭಿಸಿತು ಮತ್ತು ಕಣಿವೆಯು ತುಂಬಿಕೊಂಡಿತು.

21 ರಾಜರುಗಳು ತಮ್ಮ ವಿರುದ್ಧ ಹೋರಾಡಲು ಬಂದಿದ್ದಾರೆಂಬುದು ಮೋವಾಬ್ಯರ ಜನರಿಗೆ ತಿಳಿಯಿತು. ಮೋವಾಬಿನ ಗಂಡಸರು ಅಂದರೆ ಯುದ್ಧಕವಚಗಳನ್ನು ಧರಿಸಿಕೊಳ್ಳಲು ಶಕ್ತರಾಗಿದ್ದ ಎಲ್ಲರು ಒಟ್ಟಾಗಿ ಸೇರಿಬಂದು (ಯುದ್ಧಕ್ಕೆ ಸಿದ್ಧರಾಗಿ) ಗಡಿಯಲ್ಲಿ ಕಾಯತೊಡಗಿದರು. 22 ಮೋವಾಬಿನ ಜನರು ಅಂದು ಮುಂಜಾನೆ ನಸುಕಿನಲ್ಲೇ ಮೇಲೆದ್ದರು. ಸೂರ್ಯನ ಕಿರಣಗಳು ಕಣಿವೆಯ ನೀರಿನ ಮೇಲೆ ಹೊಳೆಯುತ್ತಿದ್ದವು. ಮೋವಾಬಿನ ಜನರಿಗೆ ಅವು ರಕ್ತದಂತೆ ಕಂಡವು. 23 ಮೋವಾಬಿನ ಜನರು, “ರಕ್ತದತ್ತ ನೋಡಿ! ರಾಜರುಗಳು ಪರಸ್ಪರ ಹೋರಾಡಿರಲೇಬೇಕು. ಅವರು ಒಬ್ಬರನ್ನೊಬ್ಬರು ನಾಶಗೊಳಿಸಿರಲೇಬೇಕು. ಸತ್ತಿರುವ ದೇಹಗಳಿಂದ ಬೆಲೆಬಾಳುವ ವಸ್ತುಗಳನ್ನು ದೋಚಿಕೊಳ್ಳೋಣ!” ಎಂದು ಹೇಳಿದರು.

24 ಮೋವಾಬಿನ ಜನರು ಇಸ್ರೇಲರ ಪಾಳೆಯಕ್ಕೆ ಬಂದರು. ಆದರೆ ಇಸ್ರೇಲರು ಹೊರಗೆ ಬಂದು ಮೋವಾಬಿನ ಸೈನ್ಯದ ಮೇಲೆ ಆಕ್ರಮಣ ಮಾಡಿದರು. ಮೋವಾಬಿನ ಜನರು ಇಸ್ರೇಲಿಯರಿಂದ ತಪ್ಪಿಸಿಕೊಂಡು ಓಡಿಹೋದರು. ಇಸ್ರೇಲರು ಮುನ್ನುಗ್ಗಿ ಮೋವಾಬಿನವರನ್ನು ಕೊಂದುಹಾಕಿದರು. 25 ಇಸ್ರೇಲರು ನಗರಗಳನ್ನು ಕೆಡವಿಹಾಕಿದರು. ಅವರು ಮೋವಾಬಿನ ಪ್ರತಿಯೊಂದು ಉತ್ತಮ ತೋಟದ ಕಡೆಗೆ ಕಲ್ಲುಗಳನ್ನೆಸೆದರು. ಅವರು ನೀರಿನ ಬುಗ್ಗೆಗಳನ್ನೆಲ್ಲ ನಿಲ್ಲಿಸಿದರು. ಅವರು ಉತ್ತಮವಾದ ಮರಗಳನ್ನು ಕಡಿದು ಉರುಳಿಸಿದರು. ಇಸ್ರೇಲರು ಕೀರ್ಹರೆಷೆತ್‌ನ ಮಾರ್ಗದುದ್ದಕ್ಕೂ ಹೋರಾಟ ಮಾಡಿದರು. ಸೈನಿಕರು ಕೀರ್ಹರೆಷೆತನ್ನು ಸುತ್ತುವರಿದು ಅದಕ್ಕೂ ಮುತ್ತಿಗೆ ಹಾಕಿದರು.

26 ಆ ಯುದ್ಧವು ತನ್ನ ಶಕ್ತಿಯನ್ನು ಮೀರಿ ಹೋಯಿತೆಂದು ಮೋವಾಬಿನ ರಾಜನು ಗ್ರಹಿಸಿಕೊಂಡನು. ಆದ್ದರಿಂದ ಅವನು ಎದೋಮಿನ ರಾಜನನ್ನು ಕೊಂದುಹಾಕಲು ಖಡ್ಗಗಳನ್ನು ಹಿಡಿದ ತನ್ನ ಏಳುನೂರು ಜನರೊಂದಿಗೆ ನುಗ್ಗಿಹೋಗಲು ಪ್ರಯತ್ನಿಸಿದನು. ಆದರೆ ಅವರು ಎದೋಮಿನ ರಾಜನ ಬಳಿಗೆ ನುಗ್ಗಿ ಹೋಗಲಾಗಲಿಲ್ಲ. 27 ಆಗ ಮೋವಾಬಿನ ರಾಜನು, ತನ್ನ ನಂತರ ರಾಜನಾಗುವ ಹಿರಿಯ ಮಗನನ್ನು ಕರೆದೊಯ್ದನು. ಮೋವಾಬಿನ ರಾಜನು ನಗರವನ್ನು ಸುತ್ತುವರಿದಿರುವ ಗೋಡೆಯ ಮೇಲೆ ತನ್ನ ಮಗನನ್ನು ವಧಿಸಿ ಸರ್ವಾಂಗಹೋಮವನ್ನಾಗಿ ಅರ್ಪಿಸಿದನು. ಈ ಕಾರ್ಯವು ಇಸ್ರೇಲಿನ ಜನರನ್ನು ತಳಮಳಗೊಳಿಸಿತು. ಇಸ್ರೇಲಿನ ಜನರು ಮೋವಾಬಿನ ರಾಜನನ್ನು ಬಿಟ್ಟು ತಮ್ಮ ಸ್ವಂತ ದೇಶಕ್ಕೆ ಹಿಂದಿರುಗಿ ಹೋದರು.

ವಿಧವೆಯ ಬೇಡಿಕೆ

ಒಂದು ದಿನ ಪ್ರವಾದಿಮಂಡಲಿಯವರಲ್ಲೊಬ್ಬನ ಪತ್ನಿಯು ಗೋಳಾಡುತ್ತಾ ಎಲೀಷನಲ್ಲಿಗೆ ಹೋಗಿ, “ನನ್ನ ಗಂಡನು ನಿನಗೆ ಸೇವಕನಂತಿದ್ದನು. ಈಗ ನನ್ನ ಗಂಡ ಸತ್ತಿದ್ದಾನೆ! ಅವನು ಯೆಹೋವನಲ್ಲಿ ಭಯಭಕ್ತಿ ಉಳ್ಳವನಾಗಿದ್ದದು ನಿನಗೆ ತಿಳಿದಿದೆ. ಆದರೆ ಅವನು ಒಬ್ಬ ಮನುಷ್ಯನಿಗೆ ಹಣವನ್ನು ಕೊಡಬೇಕಾಗಿದೆ. ಈಗ ಆ ಮನುಷ್ಯನು ನನ್ನ ಎರಡು ಗಂಡುಮಕ್ಕಳನ್ನು ತೆಗೆದುಕೊಂಡು ತನ್ನ ಗುಲಾಮರನ್ನಾಗಿ ಮಾಡಿಕೊಳ್ಳಲು ಬರುತ್ತಿದ್ದಾನೆ!” ಎಂದು ಹೇಳಿದಳು.

ಎಲೀಷನು, “ನಾನು ನಿನಗೆ ಹೇಗೆ ಸಹಾಯ ಮಾಡಲಿ? ನಿನ್ನ ಮನೆಯಲ್ಲಿ ಏನಿದೆ? ನನಗೆ ಅದನ್ನು ತಿಳಿಸು” ಎಂದು ಕೇಳಿದನು.

ಆ ಸ್ತ್ರೀಯು, “ನನ್ನ ಮನೆಯಲ್ಲಿ ನನ್ನ ಹತ್ತಿರ ಏನೂ ಇಲ್ಲ. ನನ್ನ ಹತ್ತಿರ ಒಂದು ಪಾತ್ರೆ ಆಲೀವ್ ಎಣ್ಣೆ ಮಾತ್ರ ಇದೆ” ಎಂದು ಹೇಳಿದಳು.

ಆಗ ಎಲೀಷನು, “ಹೋಗಿ ನಿನ್ನ ನೆರೆಯವರೆಲ್ಲರಿಂದ ಪಾತ್ರೆಗಳನ್ನು ತೆಗೆದುಕೊ. ಅವು ಬರಿದಾಗಿರಬೇಕು. ಆದಷ್ಟು ಪಾತ್ರೆಗಳನ್ನು ತೆಗೆದುಕೊ. ನಂತರ ನಿನ್ನ ಮನೆಗೆ ಹೋಗಿ ಬಾಗಿಲುಗಳನ್ನು ಮುಚ್ಚು. ನೀನು ಮತ್ತು ನಿನ್ನ ಮಕ್ಕಳು ಮಾತ್ರ ಮನೆಯಲ್ಲಿರಬೇಕು. ಈ ಪಾತ್ರೆಗಳಿಗೆಲ್ಲಾ ಎಣ್ಣೆಯನ್ನು ತುಂಬಿಸಿ ಪ್ರತ್ಯೇಕವಾದ ಸ್ಥಳದಲ್ಲಿಡು” ಎಂದು ಹೇಳಿದನು.

ಆ ಸ್ತ್ರೀಯು ಎಲೀಷನ ಬಳಿಯಿಂದ ತನ್ನ ಮನೆಯೊಳಕ್ಕೆ ಹೋಗಿ ಬಾಗಿಲನ್ನು ಮುಚ್ಚಿದಳು. ಅವಳು ಮತ್ತು ಅವಳ ಮಕ್ಕಳು ಮಾತ್ರ ಮನೆಯಲ್ಲಿದ್ದರು. ಅವಳ ಮಕ್ಕಳು ಪಾತ್ರೆಗಳನ್ನು ಅವಳ ಬಳಿಗೆ ತಂದರು; ಅವಳು ಆ ಪಾತ್ರೆಗಳಿಗೆ ಎಣ್ಣೆಯನ್ನು ಸುರಿದಳು. ಅವಳು ಅನೇಕ ಪಾತ್ರೆಗಳನ್ನು ತುಂಬಿಸಿಟ್ಟು ತನ್ನ ಮಗನಿಗೆ, “ಇನ್ನೊಂದು ಪಾತ್ರೆಯನ್ನು ನನ್ನ ಬಳಿಗೆ ತೆಗೆದುಕೊಂಡು ಬಾ” ಎಂದಳು.

ಆದರೆ ಎಲ್ಲಾ ಪಾತ್ರೆಗಳು ತುಂಬಿಹೋಗಿದ್ದವು. ಅವಳ ಮಕ್ಕಳಲ್ಲಿ ಒಬ್ಬನು, “ಇಲ್ಲಿ ಯಾವ ಪಾತ್ರೆಗಳೂ ಇಲ್ಲ” ಎಂದು ಹೇಳಿದನು. ಆ ಸಮಯಕ್ಕೆ ಸರಿಯಾಗಿ ಪಾತ್ರೆಯಲ್ಲಿದ್ದ ಎಣ್ಣೆಯು ಮುಗಿದಿತ್ತು.

ಆಗ ಆ ಸ್ತ್ರೀಯು ದೇವರ ಮನುಷ್ಯನ (ಎಲೀಷನ) ಬಳಿಗೆ ಬಂದು ನಡೆದದ್ದನ್ನೆಲ್ಲಾ ತಿಳಿಸಿದಳು. ಎಲೀಷನು ಅವಳಿಗೆ, “ಹೋಗು, ಎಣ್ಣೆಯನ್ನು ಮಾರಾಟಮಾಡಿ, ನಿನ್ನ ಸಾಲವನ್ನು ತೀರಿಸು. ಉಳಿದ ಹಣದಲ್ಲಿ ನೀನು ಮತ್ತು ನಿನ್ನ ಮಕ್ಕಳು ಜೀವನಮಾಡಿ” ಎಂದು ಹೇಳಿದನು.

ಎಲೀಷ ಮತ್ತು ಶೂನೇಮಿನ ಸ್ತ್ರೀ

ಒಂದು ದಿನ ಎಲೀಷನು ಶೂನೇಮಿಗೆ ಹೋದನು. ಪ್ರಮುಖಳಾದ ಸ್ತ್ರೀಯೊಬ್ಬಳು ಶೂನೇಮಿನಲ್ಲಿ ವಾಸಿಸುತ್ತಿದ್ದಳು. ಆ ಸ್ತ್ರೀಯು ತನ್ನ ಮನೆಯಲ್ಲಿ ಊಟಮಾಡಿಕೊಂಡು ಹೋಗುವಂತೆ ಎಲೀಷನನ್ನು ಕೇಳಿಕೊಂಡಳು. ಅಂದಿನಿಂದ ಎಲೀಷನು ಆ ಸ್ಥಳದ ಮೂಲಕ ಹೋಗುವಾಗಲೆಲ್ಲಾ ಅವಳ ಮನೆಯಲ್ಲಿ ಊಟಮಾಡುತ್ತಿದ್ದನು.

ಆ ಸ್ತ್ರೀಯು ತನ್ನ ಗಂಡನಿಗೆ, “ನೋಡಿ, ನಮ್ಮ ಮನೆಯ ದಾರಿಯಲ್ಲಿ ಹಾದುಹೋಗುವ ಎಲೀಷನು ಪರಿಶುದ್ಧನೂ ದೇವಮನುಷ್ಯನೂ ಎಂದು ನನಗೆ ತೋರುತ್ತದೆ. 10 ದಯವಿಟ್ಟು ಎಲೀಷನಿಗಾಗಿ ಮಾಳಿಗೆಯ ಮೇಲೆ ಚಿಕ್ಕದೊಂದು ಕೊಠಡಿಯನ್ನು ಕಟ್ಟೋಣ. ಆ ಕೊಠಡಿಯಲ್ಲಿ ಹಾಸಿಗೆಯೊಂದನ್ನು ಹಾಕೋಣ. ಅಲ್ಲಿ ಒಂದು ಮೇಜು, ಕುರ್ಚಿ ಮತ್ತು ದೀಪಸ್ತಂಭವನ್ನು ಇಡೋಣ. ಅವನು ನಮ್ಮ ಮನೆಗೆ ಬಂದಾಗ, ಈ ಕೊಠಡಿಯನ್ನು ತನಗಾಗಿ ಉಪಯೋಗಿಸಲಿ” ಎಂದು ಹೇಳಿದನು.

11 ಒಂದು ದಿನ ಎಲೀಷನು ಆ ಸ್ತ್ರೀಯ ಮನೆಗೆ ಬಂದನು. ಅವನು ಆ ಕೊಠಡಿಗೆ ಹೋಗಿ ವಿಶ್ರಾಂತಿಯನ್ನು ಪಡೆದನು. 12 ಎಲೀಷನು ತನ್ನ ಸೇವಕನಾದ ಗೇಹಜಿಗೆ, “ಶೂನೇಮ್ಯಳಾದ ಆ ಸ್ತ್ರೀಯನ್ನು ಕರೆದುಕೊಂಡು ಬಾ” ಎಂದು ಹೇಳಿದನು.

ಸೇವಕನು ಶೂನೇಮ್ಯಳಾದ ಆ ಸ್ತ್ರೀಯನ್ನು ಕರೆದುಕೊಂಡು ಬಂದಾಗ ಆಕೆಯು ಎಲೀಷನ ಎದುರಿನಲ್ಲಿ ನಿಂತುಕೊಂಡಳು. 13 ಎಲೀಷನು ಗೇಹಜಿಗೆ (ಸೇವಕನಿಗೆ), “ನೀನು ಆ ಸ್ತ್ರೀಯ ಬಳಿಗೆ ಹೋಗಿ, ‘ನೋಡು, ನೀನು ನಮ್ಮನ್ನು ಉಪಚರಿಸುವುದಕ್ಕಾಗಿ ನಿನ್ನಿಂದ ಸಾಧ್ಯವಾದಷ್ಟು ಮಾಡಿರುವೆ. ನಮ್ಮಿಂದ ನಿನಗೇನಾದರೂ ಉಪಕಾರವಾಗಬೇಕೇ? ನಿನ್ನ ಬಗ್ಗೆ ರಾಜನ ಬಳಿಯಲ್ಲಾದರೂ ಅಥವಾ ಸೈನ್ಯಾಧಿಕಾರಿಯ ಬಳಿಯಲ್ಲಾದರೂ ನಾವು ಮಾತನಾಡಬೇಕೇ?’ ಎಂದು ಕೇಳು” ಎಂಬುದಾಗಿ ಹೇಳಿದನು.

ಆ ಸ್ತ್ರೀಯು, “ಇಲ್ಲಿ ನಾನು ನನ್ನ ಜನರೊಡನೆ ಸುಖವಾಗಿ ಜೀವಿಸುತ್ತಿದ್ದೇನೆ” ಎಂದು ಉತ್ತರಿಸಿದಳು.

14 ಎಲೀಷನು ಗೇಹಜಿಗೆ, “ನಾನು ಅವಳಿಗೆ ಏನು ಮಾಡಲಿ?” ಎಂದು ಕೇಳಿದನು.

ಗೇಹಜಿಯು, “ನನಗೆ ತಿಳಿದಿದೆ! ಅವಳಿಗೆ ಮಕ್ಕಳಿಲ್ಲ, ಅವಳ ಗಂಡ ಮುದುಕನಾಗಿದ್ದಾನೆ” ಎಂದು ಉತ್ತರಿಸಿದನು.

15 ಆಗ ಎಲೀಷನು, “ಅವಳನ್ನು ಕರೆದುಕೊಂಡು ಬಾ” ಎಂದು ಹೇಳಿದನು.

ಗೇಹಜಿಯು ಆ ಸ್ತ್ರೀಯನ್ನು ಕರೆದನು. ಆಕೆಯು ಬಂದು ಅವನ ಬಾಗಿಲಿನ ಹತ್ತಿರ ನಿಂತಳು. 16 ಎಲೀಷನು ಆ ಸ್ತ್ರೀಗೆ, “ಮುಂದಿನ ವಸಂತಮಾಸದ ಈ ಕಾಲಕ್ಕೆ ನೀನು ನಿನ್ನ ಗಂಡುಮಗುವನ್ನು ಅಪ್ಪಿಕೊಂಡಿರುವೆ” ಎಂದು ಹೇಳಿದನು.

ಆ ಸ್ತ್ರೀಯು, “ದೇವಮನುಷ್ಯನೇ, ಹೀಗೆ ಹೇಳಿ ನಿನ್ನ ಸೇವಕಿಯನ್ನು ವಂಚಿಸಬೇಡ” ಎಂದು ಹೇಳಿದಳು.

17 ಆ ಸ್ತ್ರೀಯು ಗರ್ಭಿಣಿಯಾದಳು. ಎಲೀಷನು ಹೇಳಿದಂತೆ, ಮುಂದಿನ ವಂಸತದಲ್ಲಿ ಅವಳು ಒಬ್ಬ ಮಗನಿಗೆ ಜನ್ಮನೀಡಿದಳು.

18 ಬಾಲಕನು ಬೆಳೆದನು. ಒಂದು ದಿನ, ಹೊಲದಲ್ಲಿ ಬೆಳೆಕೊಯ್ಯುತ್ತಿದ್ದ ಜನರೊಂದಿಗಿದ್ದ ತನ್ನ ತಂದೆಯನ್ನು ನೋಡಲು ಆ ಬಾಲಕನು ಹೊಲಕ್ಕೆ ಹೋಗಿದ್ದನು. 19 ಈ ಬಾಲಕನು ತನ್ನ ತಂದೆಗೆ, “ಅಯ್ಯೋ, ನನ್ನ ತಲೆ ನೋಯುತ್ತಿದೆ! ನನ್ನ ತಲೆ ನೋಯುತ್ತಿದೆ!” ಎಂದು ಹೇಳಿದನು.

ತಂದೆಯು ತನ್ನ ಸೇವಕನಿಗೆ, “ಅವನ ತಾಯಿಯ ಬಳಿಗೆ ಅವನನ್ನು ಕೊಂಡೊಯ್ಯಿ” ಎಂದು ಹೇಳಿದನು.

20 ಆ ಸೇವಕನು ಬಾಲಕನನ್ನು ಅವನ ತಾಯಿಯ ಬಳಿಗೆ ಕರೆದೊಯ್ದನು. ಬಾಲಕನು ಮಧ್ಯಾಹ್ನದವರೆಗೆ ತಾಯಿಯ ತೊಡೆಯ ಮೇಲೆ ಕುಳಿತಿದ್ದನು. ನಂತರ ಅವನು ಸತ್ತುಹೋದನು.

ಶೂನೇಮಿನ ಸ್ತ್ರೀಯು ಎಲೀಷನನ್ನು ನೋಡಲು ಹೋಗುವಳು

21 ಆ ಸ್ತ್ರೀಯು ಬಾಲಕನನ್ನು ದೇವಮನುಷ್ಯನ (ಎಲೀಷನ) ಹಾಸಿಗೆಯ ಮೇಲೆ ಮಲಗಿಸಿದಳು. ನಂತರ ಅವಳು ಬಾಗಿಲನ್ನು ಮುಚ್ಚಿಕೊಂಡು, ಹೊರಗೆ ಹೋದಳು. 22 ಅವಳು ತನ್ನ ಗಂಡನನ್ನು ಕರೆದು, “ದಯವಿಟ್ಟು ಒಬ್ಬ ಸೇವಕನನ್ನೂ ಒಂದು ಹೇಸರಕತ್ತೆಯನ್ನೂ ನನಗೆ ಕಳುಹಿಸಿಕೊಡಿ. ನಾನು ದೇವಮನುಷ್ಯನನ್ನು ಕರೆತರಲು ಬೇಗ ಹೋಗಿ ಹಿಂದಿರುಗಿ ಬರುತ್ತೇನೆ” ಎಂದು ಹೇಳಿದಳು.

23 ಆ ಸ್ತ್ರೀಯ ಗಂಡನು, “ಈ ದಿನ ದೇವಮನುಷ್ಯನ ಬಳಿಹೋಗಲು ನೀನೇಕೆ ಅಪೇಕ್ಷೆಪಡುವೆ? ಇಂದು ಅಮಾವಾಸ್ಯೆಯೂ ಅಲ್ಲ, ಸಬ್ಬತ್ ದಿನವೂ ಅಲ್ಲ” ಎಂದು ಹೇಳಿದನು.

ಅವಳು, “ಚಿಂತಿಸಬೇಡ, ಎಲ್ಲವೂ ಸರಿಹೋಗುತ್ತದೆ” ಎಂದು ಹೇಳಿದಳು.

24 ನಂತರ ಅವಳು ಒಂದು ತಡಿಯನ್ನು ಕತ್ತೆಯ ಮೇಲೆ ಹಾಕಿ ತನ್ನ ಸೇವಕನಿಗೆ, “ಬೇಗ ಬಾ! ನಾವು ವೇಗವಾಗಿ ಸವಾರಿ ಮಾಡಿಕೊಂಡು ಹೋಗೋಣ. ನಾನು ನಿನಗೆ ಹೇಳಿದಾಗ ನಿಧಾನಿಸು!” ಎಂದು ಹೇಳಿದಳು.

25 ಆ ಸ್ತ್ರೀಯು ದೇವಮನುಷ್ಯನನ್ನು ಕಾಣಲು ಕರ್ಮೆಲ್ ಪರ್ವತಕ್ಕೆ ಹೋದಳು.

ಶೂನೇಮಿನ ಸ್ತ್ರೀಯು ದೂರದಿಂದ ಬರುತ್ತಿರುವುದನ್ನು ಕಂಡ ಎಲೀಷನು ತನ್ನ ಸೇವಕನಾದ ಗೇಹಜಿಗೆ, “ನೋಡು, ಶೂನೇಮ್ಯಳಾದ ಸ್ತ್ರೀಯು ಬರುತ್ತಿದ್ದಾಳೆ! 26 ಅವಳನ್ನು ಭೇಟಿ ಮಾಡುವುದಕ್ಕೆ ಓಡಿಹೋಗಿ ಅವಳಿಗೆ, ‘ನೀನು ಕ್ಷೇಮವಾಗಿರುವೆಯಾ? ನಿನ್ನ ಗಂಡ ಕ್ಷೇಮವಾಗಿರುವನೇ? ನಿನ್ನ ಮಗು ಕ್ಷೇಮವಾಗಿರುವುದೇ?’ ಎಂದು ಕೇಳು” ಎಂಬುದಾಗಿ ಹೇಳಿ ಕಳುಹಿಸಿದನು.

ಅಂತೆಯೇ ಗೇಹಜಿಯು ಆಕೆಯನ್ನು ಕೇಳಿದನು. ಅವಳು “ಹೌದು, ಕ್ಷೇಮವಾಗಿದ್ದೇವೆ” ಎಂದು ಉತ್ತರಿಸಿದಳು.

27 ಆದರೆ ಶೂನೇಮಿನ ಈ ಸ್ತ್ರೀಯು ದೇವಮನುಷ್ಯನಿದ್ದ ಬೆಟ್ಟದವರೆಗೆ ಹೋದಳು. ಅವಳು ನೆಲಕ್ಕೆ ಬಾಗಿ, ಎಲೀಷನ ಪಾದಗಳನ್ನು ಹಿಡಿದುಕೊಂಡಳು. ಶೂನೇಮಿನ ಆ ಸ್ತ್ರೀಯನ್ನು ತಳ್ಳಿಬಿಡಲು ಗೇಹಜಿಯು ಹತ್ತಿರಕ್ಕೆ ಬಂದನು. ಆದರೆ ದೇವಮನುಷ್ಯನು ಗೇಹಜಿಗೆ, “ಅವಳನ್ನು ತಡೆಯಬೇಡ! ಅವಳು ಬಹಳ ತಳಮಳಗೊಂಡಿದ್ದಾಳೆ. ಯೆಹೋವನು ನನಗೆ ಆಕೆಯ ದುಃಖವನ್ನು ಪ್ರಕಟಿಸಲಿಲ್ಲ; ನನಗೆ ಮರೆಮಾಡಿದ್ದಾನೆ” ಎಂದು ಹೇಳಿದನು.

28 ಆಗ ಶೂನೇಮಿನ ಆ ಸ್ತ್ರೀಯು, “ಸ್ವಾಮೀ, ನಾನು ಮಗನನ್ನು ಕೇಳಲೇ ಇಲ್ಲ. ‘ನನ್ನನ್ನು ವಂಚಿಸಬೇಡ’ ಎಂದು ನಾನು ನಿನಗೆ ಹೇಳಿದೆ!” ಎಂದಳು.

29 ಎಲೀಷನು ಗೇಹಜಿಗೆ, “ಹೊರಡಲು ಸಿದ್ಧನಾಗು. ನನ್ನ ಕೋಲನ್ನು ತೆಗೆದುಕೊಂಡು ಹೋಗು. ಯಾರ ಹತ್ತಿರವಾಗಲಿ ಮಾತನಾಡಲು ನಿಲ್ಲದಿರು! ನೀನು ಯಾರನ್ನಾದರೂ ಸಂಧಿಸಿದರೆ ಅವನಿಗೆ, ‘ಕ್ಷೇಮವಾಗಿರುವೆಯಾ?’ ಎಂದು ಕೇಳದಿರು. ಯಾರಾದರೂ ನಿನ್ನನ್ನು ‘ಕ್ಷೇಮವಾಗಿರುವೆಯಾ?’ ಎಂದು ಕೇಳಿದರೆ, ಅವನಿಗೆ ಉತ್ತರಿಸದಿರು. ಹೀಗೆ ನೀನು ಹೋಗಿ, ನನ್ನ ಕೋಲನ್ನು ಮಗುವಿನ ಮುಖದ ಮೇಲೆ ಇಡು” ಎಂದು ಹೇಳಿದನು.

30 ಆದರೆ ಮಗುವಿನ ತಾಯಿಯು, “ಯೆಹೋವನಾಣೆ, ನಿನ್ನಾಣೆ, ನಿನ್ನನ್ನು ಬಿಟ್ಟು ನಾನು ಹೋಗುವುದಿಲ್ಲ” ಎಂದು ಹೇಳಿದಳು.

ಎಲೀಷನು ಮೇಲೆದ್ದು ಶೂನೇಮಿನ ಆ ಸ್ತ್ರೀಯನ್ನು ಹಿಂಬಾಲಿಸಿದನು.

31 ಶೂನೇಮಿನ ಆ ಸ್ತ್ರೀಯ ಮನೆಗೆ, ಎಲೀಷನು ಮತ್ತು ಶೂನೇಮಿನ ಸ್ತ್ರೀಯು ಬರುವುದಕ್ಕೆ ಮುಂಚೆಯೇ ಗೇಹಜಿಯು ಬಂದನು. ಗೇಹಜಿಯು ಮಗುವಿನ ಮುಖದ ಮೇಲೆ ಆ ಕೋಲನ್ನಿಟ್ಟನು. ಆದರೆ ಆ ಮಗು ಮಾತನಾಡಲಿಲ್ಲ; ಅಲುಗಾಡಲಿಲ್ಲ. ಆಗ ಗೇಹಜಿಯು ಎಲೀಷನನ್ನು ಸಂಧಿಸಲು ಹಿಂದಿರುಗಿ ಬಂದು ಎಲೀಷನಿಗೆ, “ಮಗು ಎಚ್ಚರಗೊಳ್ಳಲಿಲ್ಲ” ಎಂದು ಹೇಳಿದನು.

32 ಎಲೀಷನು ಮನೆಯೊಳಕ್ಕೆ ಬಂದನು. ಆ ಮಗು ಅವನ ಹಾಸಿಗೆಯ ಮೇಲೆ ಸತ್ತುಬಿದ್ದಿತ್ತು. 33 ಎಲೀಷನು ಕೊಠಡಿಯಲ್ಲಿ ಪ್ರವೇಶಿಸಿ ಬಾಗಿಲನ್ನು ಮುಚ್ಚಿದನು. ಈಗ ಎಲೀಷ ಮತ್ತು ಮಗು ಮಾತ್ರ ಕೊಠಡಿಯಲ್ಲಿದ್ದರು. ನಂತರ ಎಲೀಷನು ಯೆಹೋವನಲ್ಲಿ ಪ್ರಾರ್ಥಿಸಿದನು. 34 ಎಲೀಷನು ಹಾಸಿಗೆಗೆ ಹೋಗಿ ಮಗುವಿನ ಮೇಲೆ ಮಲಗಿದನು. ಎಲೀಷನು ತನ್ನ ಬಾಯಿಯನ್ನು ಮಗುವಿನ ಬಾಯಿಯ ಮೇಲಿಟ್ಟನು. ಎಲೀಷನು ತನ್ನ ಕೈಗಳನ್ನು ಮಗುವಿನ ಕೈಗಳ ಮೇಲಿಟ್ಟನು. ಎಲೀಷನು ಕೈಚಾಚಿ ಮಗುವನ್ನು ಅಪ್ಪಿಕೊಂಡನು. ಆಗ ಮಗುವಿನ ದೇಹವು ಬೆಚ್ಚಗಾಯಿತು.

35 ಎಲೀಷನು ಕೊಠಡಿಯಿಂದ ಹೊರಗೆ ಬಂದು ಮನೆಯಲ್ಲಿ ಸುತ್ತಲೂ ನಡೆದಾಡಿದನು. ನಂತರ ಅವನು ಕೊಠಡಿಯೊಳಕ್ಕೆ ಹಿಂದಿರುಗಿ ಹೋಗಿ ಕೈಚಾಚಿ ಮಗುವನ್ನು ಅಪ್ಪಿಕೊಂಡನು. ಆಗ ಮಗು ಏಳು ಸಾರಿ ಸೀನಿ ತನ್ನ ಕಣ್ಣುಗಳನ್ನು ತೆರೆಯಿತು.

36 ಎಲೀಷನು ಗೇಹಜಿಯನ್ನು ಕರೆದು, “ಶೂನೇಮಿನ ಸ್ತ್ರೀಯನ್ನು ಕರೆ” ಎಂದು ಹೇಳಿದನು.

ಗೇಹಜಿಯು ಶೂನೇಮಿನ ಸ್ತ್ರೀಯನ್ನು ಕರೆದನು. ಅವಳು ಎಲೀಷನ ಹತ್ತಿರಕ್ಕೆ ಬಂದಳು. ಎಲೀಷನು, “ನಿನ್ನ ಮಗನನ್ನು ಎತ್ತಿಕೊ” ಎಂದು ಹೇಳಿದನು.

37 ಆಗ ಶೂನೇಮಿನ ಆ ಸ್ತ್ರೀಯು ಕೊಠಡಿಯೊಳಕ್ಕೆ ಹೋಗಿ, ಎಲೀಷನ ಪಾದಗಳಿಗೆ ಬಾಗಿ ನಮಸ್ಕರಿಸಿದಳು. ನಂತರ ಅವಳು ತನ್ನ ಮಗನನ್ನು ಎತ್ತಿಕೊಂಡು ಹೊರಗೆ ಹೋದಳು.

ಎಲೀಷ ಮತ್ತು ವಿಷದ ಸಾರು

38 ಎಲೀಷನು ಗಿಲ್ಗಾಲಿಗೆ ಮತ್ತೆ ಬಂದನು. ಆಗ ಆ ದೇಶದಲ್ಲಿ ಬರಗಾಲವಿತ್ತು. ಪ್ರವಾದಿಗಳ ಗುಂಪು ಎಲೀಷನ ಎದುರಿನಲ್ಲಿ ಕುಳಿತಿದ್ದರು. ಎಲೀಷನು ತನ್ನ ಸೇವಕನಿಗೆ, “ಒಂದು ದೊಡ್ಡ ಪಾತ್ರೆಯನ್ನು ಒಲೆಯ ಮೇಲಿಟ್ಟು ಪ್ರವಾದಿಗಳ ಗುಂಪಿಗೆಲ್ಲ ಸಾರನ್ನು ಮಾಡು” ಎಂದು ಹೇಳಿದನು.

39 ಒಬ್ಬನು ಅಡಿಗೆಯ ಸೊಪ್ಪಿಗಾಗಿ ತೋಟಕ್ಕೆ ಹೋದನು. ಅಲ್ಲಿ ಅವನು ಒಂದು ಕಾಡುಬಳ್ಳಿಯಿಂದ ಕಾಡುಸೋರೆ ಕಾಯಿಗಳನ್ನು ಕಿತ್ತುಕೊಂಡು, ಅವುಗಳನ್ನು ತನ್ನ ಮೇಲಂಗಿಯ ಜೇಬಿನಲ್ಲಿ ತುಂಬಿಸಿಕೊಂಡನು. ನಂತರ ಅವನು ಬಂದು, ಆ ಕಾಡುಸೋರೆ ಕಾಯಿಗಳನ್ನು ಪಾತ್ರೆಯಲ್ಲಿ ಹಾಕಿದನು. ಆದರೆ ಪ್ರವಾದಿಗಳ ಗುಂಪಿಗೆ ಅವು ಯಾವ ಜಾತಿಯ ಸೋರೆಕಾಯಿಗಳೆಂಬುದು ತಿಳಿದಿರಲಿಲ್ಲ.

40 ನಂತರ ಅವರು ಸ್ವಲ್ಪ ಸಾರನ್ನು ಜನರಿಗೆ ತಿನ್ನಲು ಬಡಿಸಿದರು. ಆದರೆ ಅವರು ಆ ಸಾರನ್ನು ಊಟಮಾಡಲಾರಂಭಿಸಿದಾಗ, ಅವರು, “ದೇವಮನುಷ್ಯನೇ! ಪಾತ್ರೆಯಲ್ಲಿ ವಿಷವಿದೆ!” ಎಂದು ಎಲೀಷನನ್ನು ಕೂಗಿಕೊಂಡರು. ಆ ಆಹಾರವು ತಿನ್ನಲು ಯೋಗ್ಯವಾಗಿರಲಿಲ್ಲವಾದುದರಿಂದ ಅವರು ಆ ಪಾತ್ರೆಯಿಂದ ಏನನ್ನೂ ತಿನ್ನಲಿಲ್ಲ.

41 ಆದರೆ ಎಲೀಷನು, “ಸ್ವಲ್ಪ ಹಿಟ್ಟನ್ನು ತನ್ನಿ” ಎಂದು ಹೇಳಿದನು. ಅವರು ಎಲೀಷನ ಬಳಿಗೆ ಹಿಟ್ಟನ್ನು ತಂದರು. ಅವನು ಅದನ್ನು ಪಾತ್ರೆಯೊಳಗೆ ಹಾಕಿದನು. ನಂತರ ಎಲೀಷನು, “ಜನರಿಗೆ ಸಾರನ್ನು ಬಡಿಸಿ, ಅವರು ಊಟಮಾಡಲಿ” ಎಂದು ಹೇಳಿದನು.

ಆಗ ಆ ಸಾರಿನಲ್ಲಿ ಯಾವ ದೋಷವೂ ಇರಲಿಲ್ಲ.

ಎಲೀಷನು ಪ್ರವಾದಿಗಳ ಗುಂಪಿಗೆ ಊಟ ಒದಗಿಸಿದನು

42 ಬಾಳ್‌ಷಾಲಿಷಾದಿಂದ ಒಬ್ಬ ಮನುಷ್ಯನು ಪ್ರಥಮ ಸುಗ್ಗಿಯ ರೊಟ್ಟಿಗಳನ್ನು ದೇವಮನುಷ್ಯನಿಗೆ (ಎಲೀಷನಿಗೆ) ತೆಗೆದುಕೊಂಡು ಬಂದನು. ಇವನು ಇಪ್ಪತ್ತು ಜವೆಗೋಧಿ ರೊಟ್ಟಿಗಳನ್ನೂ ಒಂದು ಚೀಲದಲ್ಲಿ ಹಸೀ ತೆನೆಗಳನ್ನೂ ತಂದನು. ಆಗ ಎಲೀಷನು, “ಜನರಿಗೆ ಈ ಆಹಾರವನ್ನು ಕೊಡು, ಅವರು ತಿನ್ನಲಿ” ಎಂದು ಹೇಳಿದನು.

43 ಎಲೀಷನ ಸೇವಕನು, “ಏನು? ಇಲ್ಲಿ ನೂರು ಮಂದಿ ಜನರಿದ್ದಾರೆ. ಈ ಆಹಾರವನ್ನು ಇಲ್ಲಿರುವ ಜನರಿಗೆಲ್ಲ ಹೇಗೆ ಕೊಡಲಿ?” ಎಂದನು.

ಆದರೆ ಎಲೀಷನು, “ಜನರಿಗೆ ತಿನ್ನಲು ಆಹಾರವನ್ನು ಕೊಡು, ಯೆಹೋವನು ಹೀಗೆನ್ನುವನು: ‘ಅವರು ತಿಂದರೂ ಆಹಾರವು ಉಳಿಯುತ್ತದೆ’” ಎಂದು ಹೇಳಿದನು.

44 ಆಗ ಎಲೀಷನ ಸೇವಕನು ಪ್ರವಾದಿಗಳ ಗುಂಪಿನ ಮುಂದೆ ಆಹಾರವನ್ನು ಇಟ್ಟನು. ಆ ಗುಂಪಿನ ಪ್ರವಾದಿಗಳು ಸಾಕಾಗುವಷ್ಟು ತಿಂದರೂ ಆಹಾರವು ಉಳಿದುಹೋಯಿತು. ಯೆಹೋವನು ಹೇಳಿದಂತೆಯೇ ಇದು ಸಂಭವಿಸಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International