Print Page Options
Previous Prev Day Next DayNext

Chronological

Read the Bible in the chronological order in which its stories and events occurred.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 19-23

19 ಯೆಹೂದದ ರಾಜನಾದ ಯೆಹೋಷಾಫಾಟನು ಜೆರುಸಲೇಮಿನಲ್ಲಿದ್ದ ತನ್ನ ಮನೆಗೆ ಸುರಕ್ಷಿತವಾಗಿ ಹಿಂದಿರುಗಿದನು. ದೇವದರ್ಶಿಯಾದ ಯೇಹೂ ಅವನನ್ನು ಎದುರುಗೊಂಡನು. ಅವನು ಹನಾನೀಯನ ಮಗ. ರಾಜನಿಗೆ ಯೇಹುವು ಹೇಳಿದ್ದೇನೆಂದರೆ, “ನೀನು ದುಷ್ಟಜನರಿಗೆ ಸಹಾಯಮಾಡಿದ್ದೇಕೆ? ಯೆಹೋವನನ್ನು ದ್ವೇಷಿಸುವ ಜನರನ್ನು ನೀನು ಪ್ರೀತಿಸಿದ್ದೇಕೆ? ಆ ಕಾರಣಕ್ಕಾಗಿ ಯೆಹೋವನು ನಿನ್ನ ಮೇಲೆ ಕೋಪಗೊಂಡಿದ್ದಾನೆ. ಆದರೆ ನಿನ್ನಲ್ಲಿ ಕೆಲವಾರು ಒಳ್ಳೆಯ ವಿಷಯಗಳಿವೆ. ನೀನು ಈ ದೇಶದೊಳಗಿದ್ದ ಅಶೇರಕಂಬಗಳನ್ನು ತೆಗೆದುಹಾಕಿಸಿದೆ; ಯೆಹೋವನನ್ನು ಹಿಂಬಾಲಿಸಲು ನಿನ್ನ ಹೃದಯದಲ್ಲಿ ತೀರ್ಮಾನಿಸಿದೆ” ಅಂದನು.

ಯೆಹೋಷಾಫಾಟನು ನ್ಯಾಯಾಧಿಪತಿಗಳನ್ನು ಆರಿಸಿದ್ದು

ಯೆಹೋಷಾಫಾಟನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಅವನು ಬೇರ್ಷೆಬ ನಗರದಿಂದ ಹಿಡಿದು ಎಫ್ರಾಯೀಮ್ ಬೆಟ್ಟದ ಪ್ರದೇಶದ ಜನರನ್ನೆಲ್ಲಾ ಸಂದರ್ಶಿಸಿದನು. ಯೆಹೋಷಾಫಾಟನು ಈ ಜನರನ್ನೆಲ್ಲ ಅವರ ಪೂರ್ವಿಕರ ದೇವರಾದ ಯೆಹೋವನ ಬಳಿಗೆ ಮತ್ತೆ ಕರೆದುಕೊಂಡು ಬಂದನು. ಯೆಹೋಷಾಫಾಟನು ಯೆಹೂದ ಪ್ರಾಂತ್ಯದಲ್ಲಿ ನ್ಯಾಯಾಧಿಪತಿಗಳನ್ನು ಆರಿಸಿದನು. ಯೆಹೂದದ ಪ್ರತಿಯೊಂದು ಕೋಟೆಯ ಪಟ್ಟಣಗಳಿಗೆ ನ್ಯಾಯಾಧಿಪತಿಗಳನ್ನು ನೇಮಕ ಮಾಡಿದನು. ಅವನು ಅವರಿಗೆ, “ನೀವು ಮಾಡುವ ಕಾರ್ಯದಲ್ಲಿ ಜಾಗರೂಕರಾಗಿರಿ. ನೀವು ಯೆಹೋವನ ಪರವಾಗಿ ಜನರ ನ್ಯಾಯವನ್ನು ತೀರಿಸುವವರಾಗಿದ್ದೀರಿ. ನೀವು ನ್ಯಾಯತೀರಿಸುವಾಗ ಯೆಹೋವನು ನಿಮ್ಮ ಸಂಗಡ ಇರುವನು. ನಿಮ್ಮಲ್ಲಿ ಪ್ರತಿಯೊಬ್ಬರೂ ಯೆಹೋವನಿಗೆ ಭಯಪಡುವವರಾಗಿರಬೇಕು. ಆತನು ನ್ಯಾಯವಂತನಾಗಿದ್ದಾನೆ. ಆತನಿಗೆ ಎಲ್ಲಾ ಜನರು ಸಮಾನರೇ. ಆತನು ಲಂಚ ಸ್ವೀಕರಿಸಿ ನ್ಯಾಯವನ್ನು ಬದಲಾಯಿಸುವದಿಲ್ಲ” ಎಂದು ಹೇಳಿದನು.

ಜೆರುಸಲೇಮಿನೊಳಗೆ ಯೆಹೋಷಾಫಾಟನು ಲೇವಿಯರಲ್ಲಿ, ಯಾಜಕರಲ್ಲಿ ಮತ್ತು ಇಸ್ರೇಲರ ನಾಯಕರಲ್ಲಿ ಕೆಲವರನ್ನು ನ್ಯಾಯಾಧಿಪತಿಗಳನ್ನಾಗಿ ಆರಿಸಿದನು. ಇವರು ಜನರ ಜಗಳಗಳನ್ನು ಮತ್ತು ಸಮಸ್ಯೆಗಳನ್ನು ಯೆಹೋವನ ಕಟ್ಟಳೆಗಳ ಪ್ರಕಾರ ತೀರಿಸಬೇಕಾಗಿತ್ತು. ಯೆಹೋಷಾಫಾಟನು ಅವರಿಗೆ, “ನೀವು ಹೃದಯಪೂರ್ವಕವಾಗಿ ನಿಮ್ಮ ಕೆಲಸ ನಡಿಸಬೇಕು. ನೀವು ಯೆಹೋವನಿಗೆ ಭಯಪಡುವವರಾಗಿರಬೇಕು. 10 ನಿಮ್ಮ ಬಳಿಗೆ ಕೊಲೆಯ ಪ್ರಕರಣಗಳ ಬಗ್ಗೆ, ಕಟ್ಟಳೆಯ ಬಗ್ಗೆ, ಆಜ್ಞೆಯ ಬಗ್ಗೆ, ನಿಯಮದ ಬಗ್ಗೆ ಮತ್ತು ಬೇರೆ ಯಾವುದಾದರೂ ಕಟ್ಟಳೆಯ ಬಗ್ಗೆ ಬಗೆಹರಿಸಲು ಬರಬಹುದು. ಅವೆಲ್ಲಾ ನಿಮ್ಮ ಸಹೋದರರಿಂದಲೇ ಬರುವವು. ದೇವರಿಗೆ ವಿರುದ್ಧವಾಗಿ ಪಾಪಮಾಡಬಾರದೆಂಬುದಾಗಿ ಅವರಿಗೆಲ್ಲಾ ಎಚ್ಚರಿಸಬೇಕು. ನೀವು ನಂಬಿಗಸ್ತಿಕೆಯಿಂದ ಸೇವೆಮಾಡದಿದ್ದಲ್ಲಿ ನಿಮ್ಮ ಮೇಲೆಯೂ ನಿಮ್ಮ ಸಹೋದರರ ಮೇಲೆಯೂ ದೇವರ ಕೋಪ ಉರಿಯುವಂತೆ ಮಾಡಿಕೊಳ್ಳುವಿರಿ. ನೀವು ತಪ್ಪಿತಸ್ಥರಾಗದೆ ನಂಬಿಗಸ್ತಿಕೆಯಿಂದ ಸೇವೆಮಾಡಿರಿ.

11 “ಅಮರ್ಯನು ನಿಮ್ಮ ಪ್ರಧಾನಯಾಜಕನು. ಯೆಹೋವನ ಕಾರ್ಯಗಳಿಗೆಲ್ಲಾ ಅವನೇ ನಿಮಗೆ ಪ್ರಮುಖನು. ಯೆಹೋವನ ಕುರಿತಾದ ಸಂಗತಿಗಳ ಬಗ್ಗೆ ಜೆಬದ್ಯನು ಪ್ರಮುಖನಾಗಿರುವನು. ಅವನು ಯೆಹೂದ ಕುಲದ ಇಷ್ಮಾಯೇಲನ ಮಗ. ಲೇವಿಯರು ನಿಮಗಾಗಿ ಬರವಣಿಗೆಯ ಕೆಲಸವನ್ನು ಮಾಡುವರು. ನೀವು ಮಾಡುವ ಕಾರ್ಯಗಳಲ್ಲಿ ಧೈರ್ಯಶಾಲಿಗಳಾಗಿರಿ. ಯೆಹೋವನು ನೀತಿವಂತರೊಂದಿಗಿರುವನು” ಎಂದು ಹೇಳಿದನು.

ಯೆಹೋಷಾಫಾಟನು ಯುದ್ಧವನ್ನು ಎದುರಿಸಿದನು

20 ಕೆಲಕಾಲದನಂತರ ಮೋವಾಬ್ಯರೂ ಅಮ್ಮೋನಿಯರೂ ಮೆಗೂನ್ಯರಲ್ಲಿ ಕೆಲವರೂ ಯೆಹೋಷಾಫಾಟನೊಂದಿಗೆ ಯುದ್ಧಮಾಡಲು ಬಂದರು. ಕೆಲವು ಜನರು ಯೆಹೋಷಾಫಾಟನ ಬಳಿಗೆ ಬಂದು, “ಎದೋಮ್ಯರ ದೊಡ್ಡ ಸೈನ್ಯವು ಲವಣಸಮುದ್ರದ ಆಚೆಕಡೆಯಿಂದ ನಿನಗೆ ವಿರುದ್ಧವಾಗಿ ಬರುತ್ತಿದೆ. ಈಗಾಗಲೇ ಅವರು ಹಚೆಚೋನ್ ತಾಮಾರಿನಲ್ಲಿದ್ದಾರೆ” (ಇದನ್ನು ಏಂಗೆದಿ ಎಂತಲೂ ಕರೆಯುತ್ತಾರೆ.) ಎಂದು ಹೇಳಿದರು. ಯೆಹೋಷಾಫಾಟನು ಭಯಭೀತನಾಗಿ ಯೆಹೋವನನ್ನು ವಿಚಾರಿಸಲು ನಿರ್ಧರಿಸಿದನು. ಯೆಹೂದದ ಎಲ್ಲಾ ಜನರು ಉಪವಾಸ ಮಾಡಬೇಕೆಂದು ಆಜ್ಞೆ ಹೊರಡಿಸಿದನು. ಯೆಹೂದದ ಜನರೆಲ್ಲಾ ಯೆಹೋವನನ್ನು ವಿಚಾರಿಸಲು ಒಟ್ಟಾಗಿ ಸೇರಿದರು. ಯೆಹೋಷಾಫಾಟನು ದೇವಾಲಯದ ಹೊಸ ಅಂಗಳದಲ್ಲಿ ಕೂಡಿಬಂದ ಜನರೆದುರು ಎದ್ದುನಿಂತು,

“ನಮ್ಮ ಪಿತೃಗಳ ದೇವರಾದ ಯೆಹೋವನೇ, ನೀನು ಪರಲೋಕದಲ್ಲಿರುವ ದೇವರು. ಲೋಕದ ಎಲ್ಲಾ ದೇಶಗಳನ್ನಾಳುವವನು ನೀನೇ. ಬಲಸಾಮರ್ಥ್ಯವುಳ್ಳವನು ನೀನೇ, ಯಾರೂ ನಿನಗೆದುರಾಗಿ ನಿಲ್ಲಲಾರರು. ನೀನೇ ನಮ್ಮ ದೇವರಾಗಿರುವೆ. ನೀನು ಈ ದೇಶದಲ್ಲಿ ವಾಸವಾಗಿದ್ದ ಜನರನ್ನು ಹೊರಡಿಸಿ ಈ ದೇಶವನ್ನು ಅಬ್ರಹಾಮನ ಸಂತತಿಯವರಾದ ಇಸ್ರೇಲರಿಗೆ ಕೊಟ್ಟೆ. ಅಬ್ರಹಾಮನು ನಿನ್ನ ಸ್ನೇಹಿತನಾಗಿದ್ದನು. ಅಬ್ರಹಾಮನ ಸಂತತಿಯವರು ಈ ದೇಶದಲ್ಲಿ ವಾಸವಾಗಿ ನಿನ್ನ ಹೆಸರನ್ನು ಸ್ಥಾಪಿಸಲು ನಿನಗೊಂದು ದೇವಾಲಯವನ್ನು ಕಟ್ಟಿದರು. ಅವರು, ‘ನಮಗೆ ಖಡ್ಗ, ಕಾಯಿಲೆ, ಬರ, ಶಿಕ್ಷೆಗಳಿಂದ ಸಂಕಷ್ಟ ಉಂಟಾದರೆ ನಾವು ನಿನ್ನ ಮತ್ತು ನಿನ್ನ ಆಲಯದೆದುರು ನಿಂತು ನಿನಗೆ ಮೊರೆಯಿಡುವಾಗ ನೀನು ನಮ್ಮ ಮೊರೆಯನ್ನು ಕೇಳಿ ನಮಗೆ ಸಹಾಯ ಮಾಡುವೆ. ನಿನ್ನ ಹೆಸರು ಈ ಆಲಯದ ಮೇಲಿದೆ’ ಎಂದು ಹೇಳಿದರು.

10 “ಈಗ ಅಮ್ಮೋನಿಯರೂ ಮೋವಾಬಿನವರೂ ಸೇಯೀರ್ ಬೆಟ್ಟಪ್ರದೇಶದವರೂ ನಮಗೆ ವಿರೋಧವಾಗಿ ಬಂದಿದ್ದಾರೆ. ಈಜಿಪ್ಟಿನಿಂದ ಇಸ್ರೇಲರು ಹೊರಬಂದಾಗ ಅವರ ದೇಶದೊಳಗಿಂದ ಪ್ರಯಾಣ ಮಾಡಲು ನೀನು ಬಿಡಲಿಲ್ಲ. ಆದ್ದರಿಂದ ಇಸ್ರೇಲರು ಅವರನ್ನು ನಾಶಮಾಡದೆ ಬೇರೆ ಕಡೆಗೆ ತಿರುಗಿದರು.[a] 11 ಅವರನ್ನು ನಾಶಮಾಡದೆ ಹೋದದ್ದಕ್ಕೆ ಈಗ ಅವರು ಮಾಡುತ್ತಿರುವುದನ್ನು ನೀನೇ ನೋಡು. ನೀನು ನಮಗೆ ಕೊಟ್ಟ ದೇಶದಿಂದ ನಮ್ಮನ್ನು ಹೊರಡಿಸಲು ಬಂದಿದ್ದಾರೆ. 12 ನಮ್ಮ ದೇವರೇ, ನೀನೇ ಅವರನ್ನು ಶಿಕ್ಷಿಸು. ನಮಗೆ ವಿರುದ್ಧವಾಗಿ ಬರುತ್ತಿರುವ ಅವರ ದೊಡ್ಡಸೈನ್ಯವನ್ನು ಎದುರಿಸಲು ನಮ್ಮಿಂದಾಗದು. ಏನು ಮಾಡಬೇಕೋ ನಮಗೆ ತಿಳಿಯುತ್ತಿಲ್ಲ. ನಾವು ನಿನ್ನ ಸಹಾಯವನ್ನೇ ಎದುರುನೋಡುತ್ತಿದ್ದೇವೆ” ಎಂದು ಪ್ರಾರ್ಥಿಸಿದನು.

13 ಯೆಹೂದದ ಎಲ್ಲಾ ಜನರು ತಮ್ಮ ಹೆಂಡತಿಮಕ್ಕಳೊಂದಿಗೆ ಯೆಹೋವನೆದುರು ನಿಂತಿದ್ದರು. 14 ಆಗ ಜೆಕರ್ಯನ ಮಗನಾದ ಯೆಹಜೀಯೇಲನ ಮೇಲೆ ಯೆಹೋವನ ಆತ್ಮನು ಬಂದನು. ಜೆಕರ್ಯನು ಬೆನಾಯನ ಮಗ. ಬೆನಾಯನು ಯೆಗೀಯೇಲನ ಮಗ. ಯೆಗೀಯೇಲನು ಮತ್ತನ್ಯನ ಮಗ. ಯೆಹಜೀಯೇಲನು ಲೇವಿಯನಾಗಿದ್ದನು ಮತ್ತು ಆಸಾಫನ ಸಂತತಿಯವನಾಗಿದ್ದನು. 15 ಸಭೆಯ ಮಧ್ಯದಲ್ಲಿ ನಿಂತುಕೊಂಡು ಯೆಹಜೀಯೇಲನು ಅವರಿಗೆ, “ರಾಜನಾದ ಯೆಹೋಷಾಫಾಟನೇ, ನನ್ನ ಮಾತನ್ನು ಕೇಳು. ಜೆರುಸಲೇಮಿನಲ್ಲಿಯೂ ಯೆಹೂದದ ರಾಜ್ಯದಲ್ಲಿಯೂ ವಾಸಿಸುವ ಸರ್ವಜನರೇ, ನನ್ನ ಮಾತನ್ನು ಕೇಳಿರಿ. ಯೆಹೋವನು ನಿಮಗೆ ಹೀಗೆನ್ನುತ್ತಾನೆ: ‘ಆ ದೊಡ್ಡ ಸೈನ್ಯಕ್ಕೆ ಹೆದರಿ ಚಿಂತೆಗೊಳಗಾಗಬೇಡಿ. ಯಾಕೆಂದರೆ ಯುದ್ಧವು ನಿಮ್ಮದಲ್ಲ, ಅದು ದೇವರದೇ! 16 ನಾಳೆ ಅವರ ವಿರುದ್ಧವಾಗಿ ಹೊರಟು ಅವರೊಂದಿಗೆ ಹೋರಾಡಿ. ಅವರು ಹಜ್ಜೀಜ್ ಕಣಿವೆಯಿಂದ ಬರುವರು. ನೀವು ಅವರನ್ನು ಯೆರೂವೇಲ್ ಅರಣ್ಯದ ಮುಂದಿರುವ ಕಣಿವೆಯ ತುದಿಯಲ್ಲಿ ಅವರನ್ನು ಸಂಧಿಸುವಿರಿ. 17 ನೀವು ಈ ಯುದ್ಧದಲ್ಲಿ ಹೋರಾಡುವ ಅವಶ್ಯವಿಲ್ಲ. ನಿಮ್ಮ ಸ್ಥಳಗಳಲ್ಲಿ ಸ್ಥಿರವಾಗಿ ನಿಂತುಕೊಂಡಿರಿ. ಯೆಹೋವನ ರಕ್ಷಣಾಕಾರ್ಯವನ್ನು ನೀವು ನೋಡುವಿರಿ. ಭಯಪಡಬೇಡಿರಿ; ಚಿಂತೆಗೊಳಗಾಗಬೇಡಿರಿ; ಯೆಹೋವನು ನಿಮ್ಮೊಂದಿಗಿದ್ದಾನೆ. ಆದ್ದರಿಂದ ನೀವು ನಾಳೆ ಹೋಗಿ ಆ ಸೈನ್ಯವನ್ನು ಎದುರಿಸಿರಿ’” ಎಂದು ಹೇಳಿದನು.

18 ಯೆಹೋಷಾಫಾಟನು ನೆಲದ ಮೇಲೆ ಸಾಷ್ಟಾಂಗನಮಸ್ಕಾರ ಮಾಡಿದನು. ಹಾಗೆಯೇ, ನೆರೆದಿದ್ದ ಜನರೆಲ್ಲರೂ ಯೆಹೋವನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು. 19 ಕೆಹಾತ್ಯನ ಕುಲದವರಾದ ಲೇವಿಯರೂ ಕೋರಹನ ವಂಶದವರೂ ಎದ್ದುನಿಂತು ಇಸ್ರೇಲ್ ದೇವರಾದ ಯೆಹೋವನಿಗೆ ಗಟ್ಟಿಯಾದ ಸ್ವರದಿಂದ ಸ್ತುತಿಗೀತೆ ಹಾಡಿದರು.

20 ಮರುದಿನ ಮುಂಜಾನೆ ಯೆಹೋಷಾಫಾಟನ ಸೈನ್ಯವು ತೆಕೋವದ ಅರಣ್ಯಕ್ಕೆ ಹೊರಟಿತು. ಅವರು ಹೊರಡುವ ಮುಂಚೆ ಯೆಹೋಷಾಫಾಟನು ಎದ್ದುನಿಂತು, “ಜೆರುಸಲೇಮಿನವರೇ, ಯೆಹೂದ ಪ್ರಾಂತ್ಯದವರೇ, ನನ್ನ ಮಾತನ್ನು ಕೇಳಿರಿ. ನಮ್ಮ ದೇವರಾದ ಯೆಹೋವನ ಮೇಲೆ ಭರವಸವಿಡಿರಿ. ಆಗ ನೀವು ಸ್ಥಿರಗೊಳ್ಳುವಿರಿ. ಯೆಹೋವನ ಪ್ರವಾದಿಗಳ ಮೇಲೆ ಭರವಸವಿಡಿರಿ; ಆಗ ನೀವು ಜಯಗಳಿಸುವಿರಿ” ಎಂದು ಹೇಳಿದನು.

21 ಯೆಹೋಷಾಫಾಟನು ಜನರ ಸಲಹೆಗಳನ್ನು ಕೇಳಿದನು; ಯೆಹೋವನನ್ನು ಸ್ತುತಿಸಲು ಗಾಯಕರನ್ನು ಆರಿಸಿದನು; ಯಾಕೆಂದರೆ ಆತನು ಪರಿಶುದ್ಧನು ಮತ್ತು ಅದ್ಭುತಸ್ವರೂಪನು. ಅವರು ಸೈನ್ಯದ ಮುಂದುಗಡೆಯಲ್ಲಿ ಹೋಗುತ್ತಾ ಆತನಿಗೆ ಸ್ತುತಿಗೀತೆಯನ್ನು ಹಾಡಿದರು. ಆ ಗಾಯಕರು,

“ಯೆಹೋವನಿಗೆ ಸ್ತೋತ್ರಮಾಡಿರಿ.
    ಆತನ ಕರುಣೆಯು ನಿರಂತರವಾದದ್ದು”

ಎಂದು ಹಾಡಿದರು. 22 ಅವರು ಹೀಗೆ ಸ್ತೋತ್ರ ಮಾಡುತ್ತಿರುವಾಗ ಅಮ್ಮೋನಿಯರ ಮೇಲೆಯೂ ಮೋವಾಬ್ಯರ ಮೇಲೆಯೂ ಸೇಯೀರ್ ಬೆಟ್ಟಪ್ರದೇಶದವರ ಮೇಲೆಯೂ ಇತರ ವೈರಿಗಳು ಹಠಾತ್ತನೆ ದಾಳಿ ಮಾಡುವಂತೆ ಯೆಹೋವನು ಮಾಡಿದನು. ಯೆಹೂದವನ್ನು ಆಕ್ರಮಣಮಾಡಲು ಬಂದಿದ್ದ ಅವರೆಲ್ಲರೂ ಸೋತುಹೋದರು. 23 ಅಮ್ಮೋನಿಯರೂ ಮೋವಾಬ್ಯರೂ ಸೇಯೀರ್ ಬೆಟ್ಟಪ್ರದೇಶದವರೊಂದಿಗೆ ಹೋರಾಡಲಾರಂಭಿಸಿ ಅವರನ್ನು ಕೊಂದು ನಾಶಪಡಿಸಿದರು. ಅವರು ಸೇಯೀರ್ ಬೆಟ್ಟಪ್ರದೇಶದವರನ್ನು ಕೊಂದ ಬಳಿಕ ತಮ್ಮಲ್ಲಿ ತಾವೇ ಒಬ್ಬರನ್ನೊಬ್ಬರು ಕೊಂದರು.

24 ಯೆಹೂದದ ಸೈನ್ಯದವರು ಅರಣ್ಯದಲ್ಲಿ ಶತ್ರು ಸೈನ್ಯವನ್ನು ವೀಕ್ಷಿಸುವ ಸ್ಥಳಕ್ಕೆ ಬಂದಾಗ ಸೈನ್ಯವನ್ನು ಕಾಣದೆ ರಾಶಿಯಾಗಿ ಬಿದ್ದಿದ್ದ ಹೆಣಗಳನ್ನೇ ಕಂಡರು; ಯಾರೂ ಜೀವದಿಂದುಳಿದಿರಲಿಲ್ಲ. 25 ಯೆಹೋಷಾಫಾಟನೂ ಅವನ ಸೈನಿಕರೂ ಬಂದು ಸತ್ತವರ ದೇಹದಿಂದ ಬೆಲೆಬಾಳುವ ವಸ್ತುಗಳನ್ನು ಸೂರೆ ಮಾಡಿದರು. ಅವರು ಅನೇಕ ಪಶುಗಳನ್ನು, ಐಶ್ವರ್ಯವನ್ನು, ಬಟ್ಟೆಬರೆಗಳನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡರು. ಯೆಹೋಷಾಫಾಟನು ಮತ್ತು ಅವನ ಜನರು ಹೊತ್ತುಕೊಂಡು ಹೋಗಲಾರದಷ್ಟು ವಸ್ತುಗಳಿದ್ದವು; ಅವುಗಳನ್ನು ಶೇಖರಿಸಲು ಮೂರು ದಿವಸಗಳು ಬೇಕಾಯಿತು. 26 ನಾಲ್ಕನೆಯ ದಿವಸದಲ್ಲಿ ಯೆಹೋಷಾಫಾಟನೂ ಅವನ ಸೈನ್ಯವೂ ಬೆರಾಕ ತಗ್ಗಿನಲ್ಲಿ ಬಂದು ಸೇರಿದರು. ಅಲ್ಲಿ ಯೆಹೋವನಿಗೆ ಸ್ತೋತ್ರ ಮಾಡಿದರು. ಆದ್ದರಿಂದ ಈ ದಿನದವರೆಗೂ ಅದಕ್ಕೆ ಬೆರಾಕ[b] ತಗ್ಗು ಎಂಬ ಹೆಸರಿದೆ.

27 ತರುವಾಯ ಯೆಹೋಷಾಫಾಟನು ತನ್ನ ಸೈನ್ಯವನ್ನು ಜೆರುಸಲೇಮಿಗೆ ನಡಿಸಿದನು. ಶತ್ರುಗಳ ಮೇಲೆ ಯೆಹೋವನು ನೀಡಿದ ಜಯಕ್ಕಾಗಿ ಅವರು ಹರ್ಷಿಸಿದರು. 28 ಅವರು ವಾದ್ಯಗಳನ್ನು ಬಾರಿಸುತ್ತಾ ದೇವಾಲಯವನ್ನು ಪ್ರವೇಶಿಸಿದರು.

29 ಯೆಹೋವನು ಇಸ್ರೇಲರ ವೈರಿಗಳಿಗೆ ವಿರುದ್ಧವಾಗಿ ಯುದ್ಧ ಮಾಡಿದನೆಂದು ಕೇಳಿ ಎಲ್ಲಾ ದೇಶಗಳವರು ಆತನಿಗೆ ಭಯಪಟ್ಟರು. 30 ಆದ್ದರಿಂದ ಯೆಹೋಷಾಫಾಟನ ರಾಜ್ಯದಲ್ಲಿ ಸಮಾಧಾನ ನೆಲೆಸಿತ್ತು. ಅವನ ಸುತ್ತಮುತ್ತಲೂ ಯೆಹೋವನು ಶಾಂತಿಯನ್ನು ಅನುಗ್ರಹಿಸಿದನು.

ಯೆಹೋಷಾಫಾಟನ ಆಳ್ವಿಕೆಯ ಅಂತ್ಯ

31 ಯೆಹೂದ ದೇಶವನ್ನು ಯೆಹೋಷಾಫಾಟನು ಆಳಿದನು. ಅವನು ಪಟ್ಟವನ್ನೇರಿದಾಗ ಮೂವತ್ತೈದು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಅವನ ತಾಯಿಯ ಹೆಸರು ಅಜೂಬ. ಆಕೆ ಶಿಲ್ಹಿ ಎಂಬಾತನ ಮಗಳು. 32 ಯೆಹೋಷಾಫಾಟನು ತನ್ನ ತಂದೆ ಆಸನ ಹಾಗೆ ದೇವರ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದುಕೊಂಡನು. 33 ಆದರೆ ಅವನು ಉನ್ನತಸ್ಥಳಗಳನ್ನು ನಿರ್ಮೂಲಗೊಳಿಸಲಿಲ್ಲ. ಯೆಹೂದದ ಜನರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಮೇಲೆ ಪೂರ್ಣ ಮನಸ್ಸಿಟ್ಟಿರಲಿಲ್ಲ.

34 ಯೆಹೋಷಾಫಾಟನು ಆರಂಭದಿಂದ ಕೊನೆಯವರೆಗೂ ಮಾಡಿದ ಬೇರೆ ಕಾರ್ಯಗಳು, ಹನಾನೀಯನ ಮಗನಾದ ಯೇಹು ಬರೆದ ಇಸ್ರೇಲ್ ರಾಜರ ಗ್ರಂಥದಲ್ಲಿ ದಾಖಲಾಗಿವೆ.

35 ಕೆಲಕಾಲದ ನಂತರ ಯೆಹೋಷಾಫಾಟನು ಇಸ್ರೇಲರ ರಾಜನಾಗಿದ್ದ ಅಹಜ್ಯನೊಂದಿಗೆ ಒಪ್ಪಂದವನ್ನು ಮಾಡಿಕೊಂಡನು. ಅಹಜ್ಯನು ದೇವರ ದೃಷ್ಟಿಯಲ್ಲಿ ಬಹು ದುಷ್ಟನಾಗಿದ್ದನು. 36 ಯೆಹೋಷಾಫಾಟನು ಅಹಜ್ಯನೊಂದಿಗೆ ಸೇರಿ ಹಡಗುಗಳನ್ನು ತಯಾರಿಸಿ ತಾರ್ಷೀಷಿಗೆ ಕಳುಹಿಸಿದನು. ಅವರು ಎಚ್ಯೋನ್ ಗೆಬೆರಿನಲ್ಲಿ ಹಡಗುಗಳನ್ನು ಕಟ್ಟಿದರು. 37 ಆಗ ಎಲಿಯೇಜರನು ಯೆಹೋಷಾಫಾಟನ ವಿರುದ್ಧವಾಗಿ ಪ್ರವಾದಿಸಿದನು. ಅವನು ದೋದಾವಾಹುವಿನ ಮಗನು. ಅವನು ಮಾರೇಷ ಎಂಬ ಪಟ್ಟಣದವನಾಗಿದ್ದನು. ಅವನು, “ಯೆಹೋಷಾಫಾಟನೇ, ನೀನು ಅಹಜ್ಯನೊಂದಿಗೆ ಸೇರಿಕೊಂಡಿರುವೆ. ಇದಕ್ಕಾಗಿ ಯೆಹೋವನು ನಿನ್ನ ಕೆಲಸಗಳನ್ನು ನಾಶಮಾಡುವನು” ಎಂದು ಹೇಳಿದನು. ಅವನ ಹಡಗುಗಳು ಸಮುದ್ರದಲ್ಲಿ ಒಡೆದುಹೋದದ್ದರಿಂದ ಅವುಗಳು ತಾರ್ಷೀಷಿಗೆ ಹೋಗಲಾಗಲಿಲ್ಲ.

21 ಯೆಹೋಷಾಫಾಟನು ಸತ್ತನು. ಅವನನ್ನು ಅವನ ಪೂರ್ವಿಕರೊಂದಿಗೆ ದಾವೀದನಗರದಲ್ಲಿ ಸಮಾಧಿಮಾಡಿದರು. ಅವನ ಮಗನಾದ ಯೆಹೋರಾಮನು ಪಟ್ಟಕ್ಕೆ ಬಂದನು. ಯೆಹೋರಾಮನ ತಮ್ಮಂದಿರು ಯಾರೆಂದರೆ: ಅಜರ್ಯ, ಯೆಹೀಯೇಲ್, ಜೆಕರ್ಯ, ಅಜರ್ಯ, ಮೀಕಾಯೇಲ್ ಮತ್ತು ಶೆಫಟ್ಯ. ಇವರೆಲ್ಲಾ ಯೆಹೂದದ ರಾಜನಾಗಿದ್ದ ಯೆಹೋಷಾಫಾಟನ ಮಕ್ಕಳು. ಯೆಹೋಷಾಫಾಟನು ತನ್ನ ಮಕ್ಕಳಿಗೆ ಅನೇಕ ಬೆಳ್ಳಿಬಂಗಾರದ ಮತ್ತು ಬೆಲೆಬಾಳುವ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟನು. ಮಾತ್ರವಲ್ಲದೆ ಕೋಟೆಯಿಂದ ಭದ್ರಪಡಿಸಲ್ಪಟ್ಟ ಪಟ್ಟಣಗಳನ್ನು ಕೊಟ್ಟನು. ಆದರೆ ಯೆಹೂದ ರಾಜ್ಯವನ್ನು ತನ್ನ ಚೊಚ್ಚಲ ಮಗನಾದ ಯೆಹೋರಾಮನಿಗೆ ಕೊಟ್ಟನು.

ಯೆಹೂದ ರಾಜ್ಯದ ಅರಸನಾದ ಯೆಹೋರಾಮ

ಯೆಹೋರಾಮನು ತನ್ನ ತಂದೆಯ ರಾಜ್ಯವನ್ನು ಪಡೆದುಕೊಂಡು ತನ್ನನ್ನು ಬಲಪಡಿಸಿಕೊಂಡನು. ನಂತರ ತನ್ನ ತಮ್ಮಂದಿರನ್ನೆಲ್ಲಾ ಖಡ್ಗದಿಂದ ಹತಿಸಿದನು. ಮಾತ್ರವಲ್ಲದೆ ಇಸ್ರೇಲಿನ ಕೆಲವು ಪ್ರಧಾನರನ್ನು ಕೊಲ್ಲಿಸಿದನು. ಅವನು ಮೂವತ್ತೆರಡು ವರ್ಷದವನಾಗಿದ್ದಾಗ ಆಳಲು ಪ್ರಾರಂಭಿಸಿದನು. ಅವನು ಜೆರುಸಲೇಮಿನಲ್ಲಿ ಒಟ್ಟು ಎಂಟು ವರ್ಷ ಆಳಿದನು. ಅವನು ಇಸ್ರೇಲಿನ ರಾಜರುಗಳು ವರ್ತಿಸಿದ ರೀತಿಯಲ್ಲಿ ಜೀವಿಸಿದನು. ಅಹಾಬನ ಕುಟುಂಬದವರು ಹೇಗೆ ಜೀವಿಸಿದರೋ ಹಾಗೆಯೇ ಜೀವಿಸಿದನು. ಯಾಕೆಂದರೆ ಅವನು ಅಹಾಬನ ಮಗಳನ್ನು ಮದುವೆಯಾಗಿದ್ದನು. ಯೆಹೋರಾಮನು ಯೆಹೋವನ ದೃಷ್ಟಿಯಲ್ಲಿ ಕೆಟ್ಟವನಾಗಿ ಜೀವಿಸಿದನು. ಆದರೆ ಯೆಹೋವನು ದಾವೀದನೊಂದಿಗೆ ಮಾಡಿದ ಒಡಂಬಡಿಕೆಯ ನಿಮಿತ್ತ ಅವನನ್ನು ನಾಶಮಾಡಲಿಲ್ಲ. ಯೆಹೋವನು, “ದಾವೀದನ ಸಂತತಿಯವರ ಬೆಳಕು ಉರಿಯುತ್ತಲೇ ಇರುವದು” ಎಂದು ವಾಗ್ದಾನ ಮಾಡಿದ್ದನು.

ಯೆಹೋರಾಮನ ಆಳ್ವಿಕೆಯ ಸಮಯದಲ್ಲಿ ಎದೋಮ್ ಯೆಹೂದದ ಹಿಡಿತದಿಂದ ಬಿಡಿಸಿಕೊಂಡಿತು. ಎದೋಮಿನ ಪ್ರಜೆಗಳು ತಮ್ಮ ರಾಜನನ್ನು ತಾವೇ ಆರಿಸಿಕೊಂಡರು. ಇದನ್ನರಿತ ಯೆಹೋರಾಮನು ತನ್ನ ರಥಬಲದೊಡನೆ ಎದೋಮಿಗೆ ಹೋದನು. ಅಲ್ಲಿ ಎದೋಮ್ಯರ ಸೈನ್ಯ ಇವರಿಗೆ ಮುತ್ತಿಗೆ ಹಾಕಿತು. ಆದರೆ ರಾತ್ರಿ ಸಮಯದಲ್ಲಿಯೇ ಯೆಹೋರಾಮನು ಅವರನ್ನು ಸೋಲಿಸಿದನು. 10 ಅಂದಿನಿಂದ ಇಂದಿನ ತನಕವೂ ಎದೋಮ್ ರಾಜ್ಯವು ಯೆಹೂದರಾಜ್ಯಕ್ಕೆ ಒಳಗಾಗಲೇ ಇಲ್ಲ. ಲಿಬ್ನ ಪಟ್ಟಣದ ಜನರೂ ಯೆಹೋರಾಮನಿಗೆ ಎದುರುನಿಂತರು. ತನ್ನ ಪೂರ್ವಿಕರು ಆರಾಧಿಸುತ್ತಿದ್ದ ದೇವರಾದ ಯೆಹೋವನನ್ನು ಯೆಹೋರಾಮನು ತೊರೆದುಬಿಟ್ಟಿದ್ದರಿಂದ ಇವೆಲ್ಲಾ ಅವನಿಗೆ ಸಂಭವಿಸಿದವು. 11 ಯೆಹೋರಾಮನು ಯೆಹೂದ ರಾಜ್ಯದ ಬೆಟ್ಟಗಳ ಮೇಲೆ ಪೂಜಾಸ್ಥಳಗಳನ್ನು ಕಟ್ಟಿಸಿದನು. ಪ್ರಜೆಗಳು ದೇವರ ಚಿತ್ತಕ್ಕನುಸಾರವಾಗಿ ನಡೆಯದಂತೆ ಅವರನ್ನು ಯೆಹೋವನಿಂದ ದೂರಕ್ಕೆ ನಡೆಸಿದನು.

12 ಪ್ರವಾದಿಯಾದ ಎಲೀಯನು ಯೆಹೋರಾಮನಿಗೆ ಈ ಸಂದೇಶವನ್ನು ಕಳುಹಿಸಿದನು:

“ನಿನ್ನ ಪೂರ್ವಿಕನಾದ ದಾವೀದನ ದೇವರಾದ ಯೆಹೋವನ ಮಾತಿದು. ಆತನು ಹೇಳುವುದೇನೆಂದರೆ, ‘ಯೆಹೋರಾಮನೇ, ನೀನು ನಿನ್ನ ತಂದೆಯಾದ ಯೆಹೋಷಾಫಾಟನು ಜೀವಿಸಿದ್ದ ರೀತಿಯಲ್ಲಿ ಜೀವಿಸುತ್ತಿಲ್ಲ. ಯೆಹೂದದೇಶದ ಅರಸನಾದ ಆಸನು ಜೀವಿಸಿದ್ದ ರೀತಿಯಲ್ಲಿಯೂ ನೀನು ಜೀವಿಸುತ್ತಿಲ್ಲ. 13 ಇಸ್ರೇಲರ ರಾಜರುಗಳು ಜೀವಿಸಿದ್ದ ರೀತಿಯಲ್ಲಿ ನೀನು ಜೀವಿಸುತ್ತಿರುವೆ. ಯೆಹೂದ ದೇಶದಲ್ಲಿಯೂ ಜೆರುಸಲೇಮಿನಲ್ಲಿಯೂ ವಾಸಿಸುವ ಜನರು ನನ್ನ ಚಿತ್ತಕ್ಕನುಸಾರವಾಗಿ ಜೀವಿಸದಂತೆ ನೀನು ಮಾಡುತ್ತಿರುವೆ. ಅಹಾಬನೂ ಅವನ ಕುಟುಂಬದವರೂ ಹೀಗೆಯೇ ಮಾಡಿದರು. ಅವರು ದೇವರಿಗೆ ಅಪನಂಬಿಗಸ್ತರಾಗಿದ್ದರು. ನೀನು ನಿನ್ನ ತಮ್ಮಂದಿರನ್ನು ಕೊಂದುಹಾಕಿದೆ. ಅವರು ನಿನಗಿಂತಲೂ ಉತ್ತಮರಾಗಿದ್ದರು. 14 ಆದ್ದರಿಂದ ಯೆಹೋವನು ನಿನ್ನ ಜನರನ್ನು ಭಯಂಕರವಾದ ರೋಗದಿಂದ ದಂಡಿಸುವನು. ಆತನು ನಿನ್ನನ್ನೂ ನಿನ್ನ ಹೆಂಡತಿಮಕ್ಕಳನ್ನೂ ಆಸ್ತಿಪಾಸ್ತಿಯನ್ನೂ ಶಿಕ್ಷಿಸುವನು. 15 ನಿನ್ನ ಹೊಟ್ಟೆಯೊಳಗೆ ಭಯಂಕರವಾದ ಕಾಯಿಲೆ ಬರುವದು. ಅದು ದಿನದಿಂದ ದಿನಕ್ಕೆ ಹೆಚ್ಚುವುದು. ಆ ರೋಗದ ನಿಮಿತ್ತ ನಿನ್ನ ಕರುಳು ನಿನ್ನ ಹೊಟ್ಟೆಯಿಂದ ಹೊರಬೀಳುವದು.’”

16 ಫಿಲಿಷ್ಟಿಯರೂ ಇಥಿಯೋಪಿಯದವರ ಬಳಿಯಲ್ಲಿ ವಾಸವಾಗಿದ್ದ ಅರಬಿಯರೂ ಯೆಹೋರಾಮನ ಮೇಲೆ ಕೋಪಗೊಳ್ಳುವಂತೆ ಯೆಹೋವನು ಮಾಡಿದನು. 17 ಅವರು ಬಂದು ಯೆಹೂದದೇಶದ ಮೇಲೆ ಆಕ್ರಮಣ ಮಾಡಿದರು; ರಾಜನಿವಾಸದಲ್ಲಿದ್ದ ನಿಕ್ಷೇಪವನ್ನೆಲ್ಲಾ ಸೂರೆಮಾಡಿದರು. ಅಲ್ಲದೆ ಯೆಹೋರಾಮನ ಪತ್ನಿ, ಮಕ್ಕಳನ್ನೂ ಕೊಂಡೊಯ್ದರು. ಯೆಹೋರಾಮನ ಕೊನೆಯ ಮಗನು ಮಾತ್ರ ಉಳಿದನು. ಅವನ ಹೆಸರು ಯೆಹೋವಾಹಾಜ.

18 ಇದಾದ ಬಳಿಕ ಯೆಹೋವನು ಅವನ ಕರುಳಿನಲ್ಲಿ ಗುಣವಾಗದ ರೋಗ ಬರಮಾಡಿದನು. 19 ಎರಡು ವರ್ಷಗಳ ನಂತರ ಆ ರೋಗದ ನಿಮಿತ್ತ ಅವನ ಕರುಳುಗಳು ಹೊರಬಿದ್ದವು. ಅವನು ಬಹಳ ನೋವನ್ನು ಅನುಭವಿಸಿ ಸತ್ತನು. ಅವನು ಸತ್ತಾಗ ಅವನ ತಂದೆಗೆ ಧೂಪಹಾಕಿ ಗೌರವಿಸಿದಂತೆ ಯೆಹೋರಾಮನಿಗೆ ಮಾಡಲಿಲ್ಲ. 20 ಯೆಹೋರಾಮನು ಪಟ್ಟಕ್ಕೆ ಬಂದಾಗ ಮೂವತ್ತೆರಡು ವರ್ಷದವನಾಗಿದ್ದನು. ಅವನು ಎಂಟು ವರ್ಷ ಕಾಲ ಜೆರುಸಲೇಮಿನಲ್ಲಿ ಆಳಿದನು. ಅವನು ಸತ್ತಾಗ ಅವನಿಗೋಸ್ಕರ ಯಾರೂ ದುಃಖಪಡಲಿಲ್ಲ. ಜನರು ಅವನನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಆದರೆ ರಾಜರ ಸಮಾಧಿ ಸ್ಥಳದಲ್ಲಿ ಅವನನ್ನು ಹೂಳಿಡಲಿಲ್ಲ.

ಯೆಹೂದ ದೇಶದ ಅರಸನಾದ ಅಹಜ್ಯ

22 ಜೆರುಸಲೇಮಿನ ಜನರು ಯೆಹೋರಾಮನ ಕೊನೆಯ ಮಗನಾದ ಅಹಜ್ಯನನ್ನು ತಮ್ಮ ರಾಜನನ್ನಾಗಿ ಆರಿಸಿಕೊಂಡರು. ಯೆಹೋರಾಮನೊಂದಿಗೆ ಯುದ್ಧಕ್ಕೆ ಬಂದಿದ್ದ ಅರಬ್ಬಿಯರು ಅವನ ಮಕ್ಕಳನ್ನೆಲ್ಲಾ ಕೊಂದಿದ್ದರು. ಹೀಗಾಗಿ ಉಳಿದುಕೊಂಡಿದ್ದ ಅಹಜ್ಯನು ಜೆರುಸಲೇಮಿನಲ್ಲಿ ಯೆಹೂದ ರಾಜ್ಯವನ್ನು ಆಳತೊಡಗಿದನು. ಆಗ ಅವನಿಗೆ ಇಪ್ಪತ್ತೆರಡು ವರ್ಷ ಪ್ರಾಯ. ಅವನು ಜೆರುಸಲೇಮಿನಲ್ಲಿ ಒಂದು ವರ್ಷ ಆಳಿದನು. ಅವನ ತಾಯಿ ಒಮ್ರಿಯ ಮಗಳಾದ ಅತಲ್ಯಳು. ಅಹಾಬನು ಮತ್ತು ಅವನ ಕುಟುಂಬದವರು ಜೀವಿಸಿದ ಪ್ರಕಾರವೇ ಅಹಜ್ಯನೂ ಜೀವಿಸಿದನು. ದುಷ್ಕೃತ್ಯಗಳನ್ನು ಮಾಡಲು ಅವನ ತಾಯಿಯೇ ಅವನನ್ನು ಪ್ರೋತ್ಸಾಹಿಸಿದಳು. ಯೆಹೋವನ ದೃಷ್ಟಿಯಲ್ಲಿ ಅಹಜ್ಯನು ದುಷ್ಕೃತ್ಯಗಳನ್ನು ಮಾಡಿದನು. ಅಹಜ್ಯನ ತಂದೆಯು ಸತ್ತುಹೋದ ಬಳಿಕ ಅಹಾಬನ ಕುಟುಂಬದವರು ಅಹಜ್ಯನಿಗೆ ಕೆಟ್ಟ ಸಲಹೆಗಳನ್ನು ಕೊಟ್ಟರು. ಆ ಕೆಟ್ಟ ಸಲಹೆಗಳು ಅವನನ್ನು ಮರಣಕ್ಕೆ ನಡೆಸಿದವು. ಅಹಾಬನ ಕುಟುಂಬದವರ ಸಲಹೆಯ ಮೇರೆಗೆ ಅಹಜ್ಯನು ರಾಜನಾದ ಯೋರಾಮನ ಜೊತೆಯಲ್ಲಿ ಅರಾಮ್ಯರ ಅರಸನಾದ ಹಜಾಯೇಲನೊಂದಿಗೆ ಯುದ್ಧಮಾಡಲು ರಾಮೋತ್‌ಗಿಲ್ಯಾದ್ ಎಂಬ ಪಟ್ಟಣಕ್ಕೆ ಹೋದನು. ಯೋರಾಮನು ಇಸ್ರೇಲರ ಅರಸನಾದ ಅಹಾಬನ ಮಗನು. ಅರಾಮ್ಯರು ಯುದ್ಧದಲ್ಲಿ ಯೋರಾಮನನ್ನು ಗಾಯಗೊಳಿಸಿದರು. ಗಾಯವನ್ನು ವಾಸಿಮಾಡಿಸಿಕೊಳ್ಳಲು ಯೋರಾಮನು ಇಜ್ರೇಲಿಗೆ ಹೋದನು. ಅರಾಮ್ಯರ ರಾಜನಾದ ಹಜಾಯೇಲನೊಡನೆ ಯುದ್ಧಮಾಡುತ್ತಿರುವಾಗ ಯೋರಾಮನು ಗಾಯಗೊಂಡಿದ್ದನು. ಇಜ್ರೇಲಿನಲ್ಲಿ ಅಸ್ವಸ್ಥನಾಗಿದ್ದ ಯೋರಾಮನನ್ನು ಸಂಧಿಸಲು ಯೆಹೂದ್ಯರ ಅರಸನೂ ಯೆಹೋರಾಮನ ಮಗನೂ ಆಗಿರುವ ಅಹಜ್ಯನು ಹೋದನು.

ಯೋರಾಮನನ್ನು ಸಂಧಿಸಲು ಹೋದಾಗ ಅಹಜ್ಯನು ಕೊಲ್ಲಲ್ಪಡುವಂತೆ ಯೆಹೋವನು ಮಾಡಿದನು. ಅಹಜ್ಯನು ಯೇಹುವನ್ನು ಭೇಟಿಯಾಗಲು ಯೋರಾಮನೊಂದಿಗೆ ಹೋದನು. ಯೇಹುವಿನ ತಂದೆ ನಿಂಷಿ. ಅಹಾಬನ ಕುಟುಂಬವನ್ನು ನಾಶಗೊಳಿಸಲು ಯೆಹೋವನು ಯೇಹುವನ್ನು ಆರಿಸಿಕೊಂಡನು. ಯೇಹುವು ಅಹಾಬನ ವಂಶದವರನ್ನು ಹತಿಸುತ್ತಿದ್ದಾಗ ಯೆಹೂದದ ರಾಜನಾದ ಅಹಜ್ಯನ ಕುಟುಂಬದವರನ್ನೂ ಯೆಹೂದದ ಮುಖಂಡರನ್ನೂ ಅಲ್ಲಿ ಕಂಡನು. ಯೇಹು ಆ ಮುಖಂಡರನ್ನೂ ಅಹಜ್ಯನ ಕುಟುಂಬದವರನ್ನೂ ಕೊಂದನು. ಆ ಬಳಿಕ ಯೇಹು ಅಹಜ್ಯನಿಗಾಗಿ ಹುಡುಕಿದನು. ಅಹಜ್ಯನು ಸಮಾರ್ಯದಲ್ಲಿ ಅವಿತುಕೊಂಡಿರುವದನ್ನು ಕಂಡ ಯೇಹುವಿನ ಸಂಗಡಿಗರು ಅವನನ್ನು ಹಿಡಿದು ಯೇಹುವಿನ ಬಳಿಗೆ ತಂದರು. ಅಲ್ಲಿ ಅಹಜ್ಯನನ್ನು ಕೊಂದು ಅವನ ದೇಹವನ್ನು ಹೂಳಿಟ್ಟರು. ಅವರು, “ಅಹಜ್ಯನು ಯೆಹೋಷಾಫಾಟನ ಸಂತತಿಯವನಾಗಿದ್ದನು. ಯೆಹೋಷಾಫಾಟನು ತನ್ನ ಪೂರ್ಣಹೃದಯದಿಂದ ಯೆಹೋವನನ್ನು ಹಿಂಬಾಲಿಸಿದನಲ್ಲವೇ?” ಎಂದು ಹೇಳಿದರು. ಯೆಹೂದ ಸಾಮ್ರಾಜ್ಯವನ್ನು ಒಂದಾಗಿಡಲು ಅಹಜ್ಯನ ಕುಟುಂಬಕ್ಕೆ ಶಕ್ತಿಯಿರಲಿಲ್ಲ.

ರಾಣಿ ಅತಲ್ಯ

10 ಅತಲ್ಯಳು ಅಹಜ್ಯನ ತಾಯಿ. ತನ್ನ ಮಗನು ಸತ್ತನೆಂಬ ವರ್ತಮಾನ ಸಿಕ್ಕದ ಕೂಡಲೇ ಆಕೆ ಯೆಹೂದದಲ್ಲಿದ್ದ ಎಲ್ಲಾ ರಾಜಕುಮಾರರನ್ನು ಕೊಲ್ಲಿಸಿದಳು. 11 ಆದರೆ ಅರಸನಾದ ಯೋರಾಮನ ಮಗಳಾದ ಯೆಹೋಷಬತಳು ಅಹಜ್ಯನ ಮಗನಾದ ಯೆಹೋವಾಷನನ್ನು ಅಡಗಿಸಿಟ್ಟಳು. ಆಕೆಯು ಅವನನ್ನೂ ಅವನ ದಾದಿಯನ್ನೂ ಒಳಗಿನ ಕೋಣೆಯಲ್ಲಿ ಅಡಗಿಸಿಟ್ಟಳು. ಆಕೆಯು ಯಾಜಕನಾದ ಯೆಹೋಯಾದನ ಹೆಂಡತಿಯಾಗಿದ್ದಳು. ಆಕೆಯು ಸಹ ಅಹಜ್ಯನ ಸೋದರಿ. ಯೆಹೋವಾಷನು ಅತಲ್ಯಳಿಗೆ ಸಿಗದೆಹೋದುದರಿಂದ ಬದುಕಿಕೊಂಡನು. 12 ಯೆಹೋವಾಷನು ಆರು ವರ್ಷಗಳ ಕಾಲ ಯಾಜಕರೊಂದಿಗೆ ದೇವಾಲಯದೊಳಗೆ ಯಾರಿಗೂ ತಿಳಿಯದಂತೆ ಇದ್ದನು. ಆ ದಿನಗಳಲ್ಲಿ ಅತಲ್ಯಳು ರಾಣಿಯಾಗಿ ದೇಶವನ್ನು ಆಳಿದಳು.

ಯಾಜಕನಾದ ಯೆಹೋಯಾದ ಮತ್ತು ಅರಸನಾದ ಯೆಹೋವಾಷ

23 ಆರು ವರ್ಷದ ನಂತರ ಯೆಹೋಯಾದನು ತನ್ನ ಬಲವನ್ನು ಪ್ರದರ್ಶಿಸಿದನು. ಅವನು ಸೇನಾಪತಿಗಳೊಂದಿಗೆ ಒಪ್ಪಂದ ಮಾಡಿಕೊಂಡನು. ಅವರು ಯಾರೆಂದರೆ: ಯೆರೋಹಾಮನ ಮಗನಾದ ಅಜರ್ಯ, ಯೆಹೋಹಾನಾನನ ಮಗನಾದ ಇಷ್ಮಾಯೇಲ್, ಓಬೇದನ ಮಗನಾದ ಅಜರ್ಯ, ಅದಾಯನ ಮಗನಾದ ಮಾಸೇಯ ಮತ್ತು ಜಿಕ್ರಿಯ ಮಗನಾದ ಎಲೀಷಾಫಾಟ್. ಅವರು ಯೆಹೂದ ರಾಜ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿದ್ದ ಲೇವಿಯರನ್ನು ಒಟ್ಟಾಗಿ ಸೇರಿಸಿದರು. ಅಲ್ಲದೆ ಗೋತ್ರಪ್ರಧಾನರನ್ನೂ ಒಟ್ಟಾಗಿ ಸೇರಿಸಿ, ಅವರನ್ನು ಜೆರುಸಲೇಮಿಗೆ ಕರೆದುಕೊಂಡು ಬಂದರು. ಇವರೆಲ್ಲಾ ದೇವಾಲಯದಲ್ಲಿ ರಾಜನೊಂದಿಗೆ ಒಪ್ಪಂದವನ್ನು ಮಾಡಿಕೊಂಡರು.

ಯೆಹೋಯಾದನು ಅವರಿಗೆ, “ಇಗೋ, ರಾಜಪುತ್ರನು! ಯೆಹೋವನು ದಾವೀದನ ಸಂತತಿಯವರಿಗೆ ಮಾಡಿದ ವಾಗ್ದಾನದ ಪ್ರಕಾರ ಅರಸನಾಗತಕ್ಕವನು ಇವನೇ. ಈಗ ನೀವು ಮಾಡಬೇಕಾದದ್ದೇನೆಂದರೆ: ಸಬ್ಬತ್ ದಿವಸದಲ್ಲಿ ದೇವಾಲಯಕ್ಕೆ ಬರತಕ್ಕ ಯಾಜಕರಲ್ಲೂ ಲೇವಿಯರಲ್ಲೂ ಮೂರರಲ್ಲೊಂದು ಭಾಗವು ದೇವಾಲಯದ ದ್ವಾರಗಳನ್ನು ಕಾಯಬೇಕು. ಇನ್ನೊಂದು ಭಾಗವು ಅರಮನೆಯನ್ನು ಕಾಯಬೇಕು; ಇತರ ಜನರೆಲ್ಲರೂ ಯೆಹೋವನ ಆಲಯದ ಪ್ರಾಕಾರದಲ್ಲಿರಬೇಕು; ಯಾರನ್ನೂ ದೇವಾಲಯದೊಳಕ್ಕೆ ಬಿಡಬಾರದು. ಶುದ್ಧಮಾಡಲ್ಪಟ್ಟ ಯಾಜಕರು ಮತ್ತು ಲೇವಿಯರು ಮಾತ್ರ ದೇವರ ಸೇವೆಮಾಡುವದಕ್ಕಾಗಿ ಆಲಯದೊಳಗೆ ಬರುವರು. ಉಳಿದವರು ಯೆಹೋವನು ತಮಗೆ ಕೊಟ್ಟ ಕೆಲಸಗಳನ್ನು ಮಾಡಬೇಕು. ಲೇವಿಯರು ಅರಸನ ಸುತ್ತಲೂ ನಿಂತಿರಬೇಕು. ಪ್ರತಿಯೊಬ್ಬರು ತಮ್ಮ ಖಡ್ಗವನ್ನು ಹಿಡಿದವರಾಗಿರಬೇಕು. ಯಾರಾದರೂ ಆಲಯದೊಳಕ್ಕೆ ಪ್ರವೇಶಿಸಿದರೆ ಅವನನ್ನು ಸಾಯಿಸಿರಿ. ರಾಜನು ಹೋಗುವ ಸ್ಥಳಗಳಲ್ಲಿ ನೀವು ಅವನೊಂದಿಗೆಯೇ ಇರಬೇಕು.”

ಯಾಜಕನಾದ ಯೆಹೋಯಾದನು ಆಜ್ಞಾಪಿಸಿದಂತೆ ಲೇವಿಯರೂ ಯೆಹೂದದ ಜನರೂ ಮಾಡಿದರು. ಆದ್ದರಿಂದ ಪ್ರತಿಯೊಬ್ಬ ಸೇನಾಧಿಪತಿಯು ತನ್ನ ಕೈ ಕೆಳಗೆ ಸಬ್ಬತ್‌ದಿನದಲ್ಲಿ ಕೆಲಸಮಾಡಲು ಹೋಗುತ್ತಿದ್ದವರನ್ನು ಮತ್ತು ಸಬ್ಬತ್ ದಿನದ ಕೆಲಸ ಮುಗಿಸಿಕೊಂಡು ಬರುತ್ತಿದ್ದವರನ್ನು ಕೂಡಿಸಿಕೊಂಡನು. ಯಾಜಕನಾದ ಯೆಹೋಯಾದನು ಅವರಿಗೆ ಬರ್ಜಿಯನ್ನೂ ದೊಡ್ಡ ಮತ್ತು ಚಿಕ್ಕ ಗುರಾಣಿಗಳನ್ನೂ ಕೊಟ್ಟನು. ಅವು ರಾಜನಾದ ದಾವೀದನಿಗೆ ಸೇರಿದವುಗಳಾಗಿದ್ದವು. ಅವು ದೇವಾಲಯದೊಳಗೆ ಇಡಲ್ಪಟ್ಟಿದ್ದವು. 10 ಸೇರಿಬಂದವರು ಎಲ್ಲೆಲ್ಲಿ ನಿಲ್ಲಬೇಕೆಂದು ಯೆಹೋಯಾದನು ಸೂಚಿಸಿದನು. ಪ್ರತಿಯೊಬ್ಬರ ಕೈಯಲ್ಲಿ ಆಯುಧಗಳಿದ್ದವು. ದೇವಾಲಯದ ಎಡಬಲಗಳಲ್ಲಿ ಜನರು ನಿಂತಿದ್ದರು. ಯಜ್ಞವೇದಿಕೆಯ ಬಳಿ, ದೇವಾಲಯದ ಬಳಿ ಮತ್ತು ಅರಸನ ಬಳಿಯಲ್ಲಿ ಅವರು ನಿಂತರು. 11 ಅವರು ರಾಜಕುಮಾರನನ್ನು ಹೊರತಂದು ಅವನ ತಲೆಯ ಮೇಲೆ ಕಿರೀಟವನ್ನಿಟ್ಟರು. ಅವನ ಕೈಗೆ ಧರ್ಮಶಾಸ್ತ್ರದ ಪ್ರತಿಯನ್ನು ಕೊಟ್ಟು ಅವನನ್ನು ತಮ್ಮ ರಾಜನನ್ನಾಗಿ ಮಾಡಿದರು. ಯೆಹೋಯಾದನೂ ಅವನ ಗಂಡುಮಕ್ಕಳೂ ಯೆಹೋವಾಷನನ್ನು ಅಭಿಷೇಕಿಸಿದರು. “ಅರಸನು ಚಿರಂಜೀವಿಯಾಗಿರಲಿ” ಎಂದು ಹರಸಿದರು.

12 ಜನರು ದೇವಾಲಯದಲ್ಲಿ ಅತ್ತಿತ್ತಾ ಓಡಾಡುತ್ತಾ ರಾಜನನ್ನು ಕೊಂಡಾಡುತ್ತಾ ಇರುವ ಶಬ್ದವನ್ನು ಅತಲ್ಯಳು ಕೇಳಿ ದೇವಾಲಯದೊಳಕ್ಕೆ ಬಂದಳು. ಅಲ್ಲಿ ಅರಸನು ನಿಂತದ್ದನ್ನು ಕಂಡಳು. 13 ಅವನು ಮುಂಭಾಗದ ಪ್ರವೇಶ ದ್ವಾರದಲ್ಲಿದ್ದ ರಾಜಸ್ತಂಭದ ಬಳಿ ನಿಂತಿದ್ದನು. ಸೇನಾಧಿಪತಿಗಳೂ ಅವರ ಜನರೂ ತುತ್ತೂರಿಯನ್ನು ಊದಿ ರಾಜನ ಬಳಿಯಲ್ಲಿಯೇ ನಿಂತಿದ್ದರು. ದೇಶದ ಪ್ರಜೆಗಳು ಸಂತೋಷದಿಂದ ತುತ್ತೂರಿಯನ್ನೂದಿದರು. ಗಾಯಕರು ವಾದ್ಯಗಳನ್ನು ಬಾರಿಸುತ್ತಿದ್ದರು. ಅವರು ಜನರನ್ನು ಸ್ತೋತ್ರಗೀತೆಯಲ್ಲಿ ನಡಿಸುತ್ತಿದ್ದರು. ಇದೆಲ್ಲವನ್ನು ಅತಲ್ಯಳು ನೋಡಿ ತನ್ನ ಬಟ್ಟೆಯನ್ನು ಹರಿದು, “ದ್ರೋಹ, ದ್ರೋಹ” ಎಂದು ಕಿರುಚಿದಳು.

14 ಯಾಜಕನಾದ ಯೆಹೋಯಾದನು ಸೈನ್ಯಾಧಿಕಾರಿಗಳನ್ನು ಹೊರತಂದು, “ಅತಲ್ಯಳನ್ನು ಹೊರಗೆ ಎಳೆದುಕೊಂಡು ಹೋಗಿ, ಯಾರಾದರೂ ಆಕೆಯನ್ನು ಹಿಂಬಾಲಿಸಿದರೆ ಖಡ್ಗದಿಂದ ಅವರನ್ನು ಸಂಹರಿಸಿರಿ” ಎಂದು ಹೇಳಿದನು. ಆಗ ಯಾಜಕರು ಸಿಪಾಯಿಗಳಿಗೆ, “ಅತಲ್ಯಳನ್ನು ದೇವಾಲಯದೊಳಗೆ ಕೊಲ್ಲಬೇಡಿ” ಎಂದು ಎಚ್ಚರಿಸಿದರು. 15 ಅರಮನೆಗೆ ಹೋಗುವ ದಾರಿಯಲ್ಲಿ ಕುದುರೆ ಬಾಗಿಲಿನ ಹತ್ತಿರ ಸಿಪಾಯಿಗಳು ಆಕೆಯನ್ನು ಸಂಹರಿಸಿದರು.

16 ಅನಂತರ ಯೆಹೋಯಾದನು ಅರಸನೊಂದಿಗೂ ನೆರೆದು ಬಂದಿದ್ದ ಎಲ್ಲಾ ಜನರೊಂದಿಗೂ ಒಪ್ಪಂದವನ್ನು ಮಾಡಿಕೊಂಡನು. ಅವರೆಲ್ಲರೂ ಯೆಹೋವನ ಜನರಾಗಿ ಜೀವಿಸುವದಕ್ಕೆ ಒಪ್ಪಿಕೊಂಡರು. 17 ಆಗ ಜನರೆಲ್ಲರು ಬಾಳನ ಗುಡಿಯೊಳಗೆ ನುಗ್ಗಿ ಅದನ್ನು ಹಾಳು ಮಾಡಿದರು. ಅದರ ಯಜ್ಞವೇದಿಕೆಗಳನ್ನೂ ವಿಗ್ರಹಗಳನ್ನೂ ಪುಡಿಪುಡಿ ಮಾಡಿದರು. ಬಾಳನ ಅರ್ಚಕನಾದ ಮತ್ತಾನನನ್ನು ಬಾಳನ ವೇದಿಕೆಯ ಮುಂದೆಯೇ ಕೊಂದುಹಾಕಿದರು.

18 ಆ ಬಳಿಕ ಯೆಹೋಯಾದನು ದೇವಾಲಯದೊಳಗೆ ಸೇವೆಮಾಡುವ ಜವಾಬ್ದಾರಿಕೆಯನ್ನು ಕೆಲವು ಯಾಜಕರಿಗೆ ವಹಿಸಿದನು. ಅವರೆಲ್ಲಾ ಲೇವಿಯರಾಗಿದ್ದರು. ದಾವೀದನು ಅವರಿಗೆ ದೇವಾಲಯದ ಜವಾಬ್ದಾರಿಕೆಯನ್ನು ಕೊಟ್ಟಿದ್ದನು. ಮೋಶೆಯು ಕೊಟ್ಟಿದ್ದ ನಿಯಮಕ್ಕನುಸಾರವಾಗಿ ಅವರು ಸರ್ವಾಂಗಹೋಮವನ್ನು ಅರ್ಪಿಸಿದರು. ದಾವೀದನು ಆಜ್ಞಾಪಿಸಿದಂತೆ ಅವರು ಹೋಮಗಳನ್ನೂ ಯಜ್ಞಗಳನ್ನೂ ಅರ್ಪಿಸುವಾಗ ಹಾಡುತ್ತಾ ಸಂತೋಷದಿಂದ ತಮ್ಮ ಕೆಲಸವನ್ನು ಮಾಡಿದರು. 19 ಅಶುದ್ಧರಾದವರು ದೇವಾಲಯದೊಳಗೆ ಪ್ರವೇಶಿಸದಂತೆ ಯೆಹೋಯಾದನು ಆಯಾ ಬಾಗಿಲುಗಳಲ್ಲಿ ದ್ವಾರಪಾಲಕರನ್ನು ನೇಮಿಸಿದನು.

20 ಯೆಹೋಯಾದನು ಸೇನಾಧಿಪತಿಗಳಿಗೂ ಅಧಿಪತಿಗಳಿಗೂ ಎಲ್ಲಾ ಜನರಿಗೂ ತನ್ನನ್ನು ಹಿಂಬಾಲಿಸುವಂತೆ ಹೇಳಿ, ಅರಸನನ್ನು ದೇವಾಲಯದೊಳಗಿಂದ ಹೊರತಂದನು. ಅವರೆಲ್ಲಾ ಮೇಲಿನ ಬಾಗಿಲಿನ ಮೂಲಕ ರಾಜನಿವಾಸಕ್ಕೆ ಹೋದರು. ಅಲ್ಲಿ ರಾಜನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದರು. 21 ದೇಶದ ಎಲ್ಲಾ ಜನರು ಸಂತೋಷಭರಿತರಾದರು. ಅತಲ್ಯಳನ್ನು ಸಾಯಿಸಿದ್ದರಿಂದ ದೇಶದಲ್ಲಿ ಶಾಂತಿ ನೆಲೆಸಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International