Print Page Options
Previous Prev Day Next DayNext

Chronological

Read the Bible in the chronological order in which its stories and events occurred.
Duration: 365 days
Kannada Holy Bible: Easy-to-Read Version (KERV)
Version
ಪ್ರಸಂಗಿ 1-6

ದಾವೀದನ ಮಗನೂ ಜೆರುಸಲೇಮಿನಲ್ಲಿ ಆಳುತ್ತಿದ್ದ ರಾಜನೂ ಆಗಿದ್ದ ಪ್ರಸಂಗಿಯ ಮಾತುಗಳು. ಪ್ರಸಂಗಿಯು ಹೇಳುವುದೇನೆಂದರೆ, ವ್ಯರ್ಥವೇ ವ್ಯರ್ಥ, ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ! ಈ ಲೋಕದಲ್ಲಿ ಮನುಷ್ಯರು ಪಡುವ ಪ್ರಯಾಸದಿಂದ ಅವರಿಗೇನು ಲಾಭ?

ಪ್ರಕೃತಿಯಲ್ಲಿ ಬದಲೇನೂ ಇಲ್ಲ

ಒಂದು ತಲೆಮಾರು ಹೋಗಿ ಮತ್ತೊಂದು ತಲೆಮಾರು ಬರುವುದು. ಆದರೆ ಭೂಮಿ ಎಂದೆಂದಿಗೂ ಮುಂದುವರಿಯುವುದು. ಸೂರ್ಯನು ಏರುವನು ಮತ್ತು ಇಳಿಯುವನು; ಬಳಿಕ ಅದೇ ಸ್ಥಳದಲ್ಲಿ ಮತ್ತೆ ಏರಲು ಅವಸರಪಡುವನು.

ಗಾಳಿಯು ದಕ್ಷಿಣಕ್ಕೆ ಬೀಸುವುದು; ನಂತರ ಉತ್ತರಕ್ಕೆ ತಿರುಗಿಕೊಳ್ಳುವುದು; ಅದು ತಿರುತಿರುಗುತ್ತಾ ಹೋಗಿ ತಿರುತಿರುಗುತ್ತಾ ಬರುವುದು.

ನದಿಗಳು ಎಲ್ಲಿಗೆ ಹರಿದುಹೋಗುತ್ತವೋ ಅಲ್ಲಿಗೇ ತಿರಿಗಿ ಹೋಗುವವು. ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುತ್ತಲೇ ಇರುತ್ತವೆ; ಆದರೂ ಸಮುದ್ರವು ತುಂಬುವುದಿಲ್ಲ.

ಮಾತುಗಳಿಂದ ಯಾವುದನ್ನೂ ಸಂಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ; ಆದರೂ ಜನರು ಮಾತಾಡುತ್ತಲೇ ಇರುವರು. ನಮ್ಮ ಕಿವಿಗಳು ಮಾತುಗಳನ್ನು ಕೇಳುತ್ತಲೇ ಇರುತ್ತವೆ; ಆದರೂ ನಮ್ಮ ಕಿವಿಗಳು ತುಂಬುವುದಿಲ್ಲ. ನಮ್ಮ ಕಣ್ಣುಗಳು ನೋಡುತ್ತಲೇ ಇರುತ್ತವೆ; ಆದರೂ ಅವು ತುಂಬುವುದಿಲ್ಲ.

ಲೋಕದಲ್ಲಿ ಹೊಸದೇನೂ ಇಲ್ಲ

ಇದ್ದದ್ದೇ ಇರುವುದು; ನಡೆದದ್ದೇ ನಡೆಯುವುದು. ಲೋಕದಲ್ಲಿ ಹೊಸದೇನೂ ಇಲ್ಲ.

10 “ಇಗೋ, ಇದು ಹೊಸದು!” ಎಂದು ಒಬ್ಬನು ಹೇಳಬಹುದು. ಆದರೆ ಅದು ಸಹ ಮೊದಲಿಂದ ಇಲ್ಲಿ ಇದ್ದದ್ದೇ. ನಮಗಿಂತ ಮೊದಲೇ ಅದು ಇಲ್ಲಿತ್ತು.

11 ಬಹುಕಾಲದ ಹಿಂದಿನ ಘಟನೆಗಳನ್ನು ಜನರು ಜ್ಞಾಪಿಸಿಕೊಳ್ಳುವುದಿಲ್ಲ. ಈಗ ನಡೆಯುತ್ತಿರುವ ಸಂಗತಿಗಳನ್ನು ಮುಂದಿನ ಕಾಲದ ಜನರು ಜ್ಞಾಪಿಸಿಕೊಳ್ಳುವುದಿಲ್ಲ. ಹೀಗೆ, ತಮಗಿಂತ ಮುಂಚೆ ಇದ್ದವರು ಮಾಡಿದ್ದನ್ನು ಜನರು ಜ್ಞಾಪಿಸಿಕೊಳ್ಳುವುದಿಲ್ಲ.

ಜ್ಞಾನದಿಂದ ಸಂತೋಷವಾಗುವುದೇ?

12 ಪ್ರಸಂಗಿಯಾದ ನಾನು ಜೆರುಸಲೇಮಿನಲ್ಲಿ ಇಸ್ರೇಲರಿಗೆ ರಾಜನಾಗಿದ್ದೆನು. 13 ಈ ಜೀವಿತದ ಎಲ್ಲಾ ವಿಷಯಗಳನ್ನು ಜ್ಞಾನದಿಂದ ವಿಮರ್ಶಿಸಿ ಕಲಿತುಕೊಳ್ಳಲು ನಿರ್ಧರಿಸಿದೆನು. ದೇವರು ಮನುಷ್ಯರಿಗೆ ಕೊಟ್ಟಿರುವ ಕೆಲಸವೆಲ್ಲ ಬಹು ಪ್ರಯಾಸವೇ. 14 ಈ ಲೋಕದ ಕೆಲಸಗಳನ್ನೆಲ್ಲ ನೋಡಿದಾಗ ಅವೆಲ್ಲ ಕೇವಲ ವ್ಯರ್ಥವೆಂದು ಕಂಡುಕೊಂಡೆನು. ಅವು ಗಾಳಿಯನ್ನು ಹಿಡಿಯಲು ಪ್ರಯತ್ನಿಸಿದಷ್ಟೇ ವ್ಯರ್ಥವಾಗಿವೆ. 15 ವಕ್ರವಾದದ್ದನ್ನು ನೆಟ್ಟಗೆ ಮಾಡಲು ಸಾಧ್ಯವಿಲ್ಲ. ಇಲ್ಲದ್ದನ್ನು ಲೆಕ್ಕಿಸುವುದಕ್ಕೂ ಸಾಧ್ಯವಿಲ್ಲ.

16 ನಾನು ಮನಸ್ಸಿನಲ್ಲಿ, “ನಾನು ಬಹು ಜ್ಞಾನಿ. ನನಗಿಂತ ಮೊದಲು ಜೆರುಸಲೇಮನ್ನು ಆಳಿದ ಎಲ್ಲಾ ರಾಜರುಗಳಿಗಿಂತ ನಾನು ಜ್ಞಾನಿ. ನಾನು ಜ್ಞಾನವನ್ನೂ ವಿವೇಕವನ್ನೂ ಚೆನ್ನಾಗಿ ತಿಳಿದುಕೊಂಡಿರುವೆ” ಎಂದುಕೊಂಡೆನು.

17 ಜ್ಞಾನವನ್ನಲ್ಲದೆ ಮೂಢತನವನ್ನೂ ಬುದ್ಧಿಹೀನತೆಯನ್ನೂ ಗ್ರಹಿಸಿಕೊಳ್ಳಲು ನಿರ್ಧರಿಸಿದೆನು. ಆದರೆ ಇದು ಸಹ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೆಂದು ಕಲಿತುಕೊಂಡೆನು. 18 ಬಹು ಜ್ಞಾನದಿಂದ ಬಹು ಸಂಕಟ; ಹೆಚ್ಚು ತಿಳುವಳಿಕೆಯಿಂದ ಹೆಚ್ಚು ದುಃಖ.

“ಸುಖವು” ನೀತಿಮಾರ್ಗಕ್ಕೆ ನಡೆಸುವುದೇ?

ನಾನು ನನ್ನ ಹೃದಯದಲ್ಲಿ, “ಬಾ, ನಿನ್ನನ್ನು ಸುಖದ ಮೂಲಕ ಪರೀಕ್ಷಿಸುವೆನು; ಆಗ ನೀನು ನೀತಿಮಾರ್ಗವನ್ನು ಕಲಿತುಕೊಳ್ಳುವೆ” ಎಂದುಕೊಂಡೆನು. ಆದರೆ ಇದು ಸಹ ವ್ಯರ್ಥವೆಂದು ಕಂಡುಕೊಂಡೆನು. ನಗೆಯು ಹುಚ್ಚುತನ. ಸುಖದಿಂದ ಪ್ರಯೋಜನವೇನು? ಅಂದುಕೊಂಡೆನು.

ಮನುಷ್ಯರು ತಮ್ಮ ಕ್ಷಣಿಕ ಜೀವಮಾನದಲ್ಲಿ ಮಾಡತಕ್ಕ ಒಳ್ಳೆಯದನ್ನು ತಿಳಿದುಕೊಳ್ಳಬೇಕೆಂದು ನನ್ನ ಮನಸ್ಸನ್ನು ಜ್ಞಾನದಿಂದ ತುಂಬಿಸಿದೆ; ದೇಹವನ್ನು ದ್ರಾಕ್ಷಾರಸದಿಂದ ತುಂಬಿಸಿದೆ; ಮೂಢತನವನ್ನು ಅವಲಂಭಿಸಿಕೊಂಡೆ.

ದುಡಿಮೆಯಿಂದ ಸಂತೋಷವಾಗುವುದೇ?

ದೊಡ್ಡಕಾರ್ಯಗಳನ್ನು ಮಾಡಲಾರಂಭಿಸಿದೆ; ನನಗೋಸ್ಕರ ಮನೆಗಳನ್ನು ಕಟ್ಟಿಸಿದೆ; ದ್ರಾಕ್ಷಿತೋಟಗಳನ್ನು ಮಾಡಿಸಿದೆ; ತೋಟಗಳನ್ನೂ ಉದ್ಯಾನವನಗಳನ್ನೂ ಮಾಡಿಸಿದೆ; ಎಲ್ಲಾ ಬಗೆಯ ಹಣ್ಣಿನ ಮರಗಳನ್ನು ನೆಡಿಸಿದೆ. ನೀರಿನ ಕೊಳಗಳನ್ನು ಮಾಡಿಸಿ ಮರಗಳಿಗೆ ನೀರನ್ನು ಹಾಯಿಸಿದೆ. ಪುರುಷರನ್ನೂ ಸ್ತ್ರೀಯರನ್ನೂ ಗುಲಾಮರನ್ನಾಗಿ ಕೊಂಡುಕೊಂಡೆ. ನನ್ನ ಮನೆಯಲ್ಲೇ ಹುಟ್ಟಿದ ಗುಲಾಮರೂ ನನಗಿದ್ದರು. ನನಗೆ ದನದ ಹಿಂಡುಗಳೂ ಕುರಿಮಂದೆಗಳೂ ಇದ್ದವು. ಜೆರುಸಲೇಮಿನಲ್ಲಿ ಇದ್ದವರೆಲ್ಲರಿಗಿಂತಲೂ ಹೆಚ್ಚು ವಸ್ತುಗಳನ್ನು ನಾನು ಪಡೆದಿದ್ದೆ.

ಇದಲ್ಲದೆ ಬೆಳ್ಳಿಬಂಗಾರಗಳನ್ನು ನನಗೋಸ್ಕರ ಸಂಗ್ರಹಿಸಿದೆ; ರಾಜರುಗಳಿಂದಲೂ ಅವರ ದೇಶಗಳಿಂದಲೂ ಭಂಡಾರಗಳನ್ನು ತೆಗೆದುಕೊಂಡೆ. ನನಗೋಸ್ಕರ ಹಾಡಲು ಗಾಯಕಗಾಯಕಿಯರಿದ್ದರು. ನನ್ನನ್ನು ಸಂತೋಷಪಡಿಸಲು ಅನೇಕ ಉಪಪತ್ನಿಯರಿದ್ದರು. ಮನುಷ್ಯನು ಬಯಸಬಹುದಾದ ಪ್ರತಿಯೊಂದನ್ನೂ ನಾನು ಪಡೆದಿದ್ದೆ.

ನಾನು ಬಹು ಐಶ್ವರ್ಯವಂತನಾದೆ; ಪ್ರಸಿದ್ಧನಾದೆ. ನನಗಿಂತ ಮೊದಲು ಜೆರುಸಲೇಮಿನಲ್ಲಿದ್ದ ಎಲ್ಲರಿಗಿಂತಲೂ ನಾನು ದೊಡ್ಡವನಾದೆ. ನನಗೆ ಸಹಾಯಕ್ಕಾಗಿ ಯಾವಾಗಲೂ ನನ್ನಲ್ಲಿ ಜ್ಞಾನವಿತ್ತು. 10 ನನ್ನ ಕಣ್ಣುಗಳು ಬಯಸಿದ್ದನ್ನೆಲ್ಲ ನನಗೋಸ್ಕರ ಪಡೆದುಕೊಂಡೆನು. ಯಾವುದೇ ಸುಖದಿಂದಾಗಲಿ ನನ್ನ ಹೃದಯವನ್ನು ನಾನು ತಡೆಹಿಡಿಯಲಿಲ್ಲ; ಯಾಕೆಂದರೆ ನನ್ನ ಕಾರ್ಯಗಳಲ್ಲಿ ನನ್ನ ಹೃದಯವು ಸಂತೋಷಗೊಂಡಿತ್ತು. ನನ್ನ ಪ್ರಯಾಸದ ಫಲವು ಅದೊಂದೇ.

11 ನನ್ನ ಕಾರ್ಯಗಳನ್ನೂ ನನ್ನ ಪ್ರಯಾಸವನ್ನೂ ಆಲೋಚಿಸಿದೆ. ಗಾಳಿಯನ್ನು ಹಿಂದಟ್ಟಿದ ಹಾಗೆ ಅದೆಲ್ಲಾ ವ್ಯರ್ಥವೆಂದು ಕಂಡುಕೊಂಡೆ. ನಮ್ಮ ಈ ಜೀವಮಾನದ ಯಾವ ಕೆಲಸಗಳಿಂದಲೂ ಲಾಭವಿಲ್ಲ.

ಜ್ಞಾನಿಗೂ ಅಜ್ಞಾನಿಗೂ ವ್ಯತ್ಯಾಸವೇನು?

12 ರಾಜನಿಗಿಂತ ಹೆಚ್ಚಾಗಿ ಮಾಡಲು ಬೇರೆ ಯಾರಿಗೂ ಸಾಧ್ಯವಿಲ್ಲ. ನೀನು ಮಾಡಬೇಕೆನ್ನುವುದನ್ನು ನಿನಗಿಂತ ಮೊದಲೇ ಬೇರೊಬ್ಬ ರಾಜನು ಮಾಡಿರುತ್ತಾನೆ; ಆದ್ದರಿಂದ ರಾಜನ ಕಾರ್ಯಗಳು ಸಹ ವ್ಯರ್ಥವೆಂದು ಕಂಡುಕೊಂಡೆನು. ಆದ್ದರಿಂದ ನಾನು ಜ್ಞಾನವನ್ನೂ ಮೂಢತನವನ್ನೂ ಬುದ್ಧಿಹೀನತೆಯನ್ನೂ ಮತ್ತೆ ಮತ್ತೆ ಆಲೋಚಿಸಿದೆನು. 13 ಆಗ ಬೆಳಕು ಕತ್ತಲೆಗಿಂತ ಉತ್ತಮವಾಗಿರುವಂತೆ ಜ್ಞಾನವು ಮೂಢತನಕ್ಕಿಂತ ಉತ್ತಮವಾಗಿದೆ ಎಂಬುದನ್ನು ಅರಿತುಕೊಂಡೆನು. 14 ಅದು ಈ ರೀತಿಯಿದೆ: ಜ್ಞಾನಿಯು ತನ್ನ ಮಾರ್ಗವನ್ನು ತಿಳಿದುಕೊಳ್ಳಲು ತನ್ನ ಮನಸ್ಸನ್ನು ಕಣ್ಣುಗಳಂತೆ ಉಪಯೋಗಿಸುವನು. ಮೂಢನಾದರೋ ಕತ್ತಲೆಯಲ್ಲಿ ನಡೆದುಹೋಗುವನು.

ಆದರೆ ಜ್ಞಾನಿಗೂ ಮೂಢನಿಗೂ ಒಂದೇ ಗತಿಯೆಂದು ಕಂಡುಕೊಂಡೆನು; ಅವರಿಬ್ಬರೂ ಸಾಯುವರು. 15 ನಾನು ನನ್ನೊಳಗೆ, “ಮೂಢನಿಗೆ ಸಂಭವಿಸುವ ಗತಿಯು ನನಗೂ ಸಂಭವಿಸುವುದು. ಹೀಗಿರಲು ಜ್ಞಾನಿಯಾಗಲು ನಾನೇಕೆ ಪ್ರಯಾಸಪಡಬೇಕು? ಇದೂ ವ್ಯರ್ಥವಲ್ಲವೇ?” ಅಂದುಕೊಂಡೆನು. 16 ಯಾಕೆಂದರೆ ಮೂಢನು ಸಾಯುವಂತೆ ಜ್ಞಾನಿಯೂ ಸಾಯುವುದರಿಂದ ಜನರು ಜ್ಞಾನಿಯನ್ನಾಗಲಿ ಮೂಢನನ್ನಾಗಲಿ ಸದಾಕಾಲ ಜ್ಞಾಪಿಸಿಕೊಳ್ಳುವುದಿಲ್ಲ. ಅವರ ಕಾರ್ಯಗಳನ್ನು ಮುಂದಿನ ಕಾಲದ ಜನರು ಮರೆತುಬಿಡುವರು. ಆದ್ದರಿಂದ ಜ್ಞಾನಿಗೂ ಮೂಢನಿಗೂ ಯಾವ ವ್ಯತ್ಯಾಸವೂ ಇಲ್ಲ.

ಜೀವನದಲ್ಲಿ ನಿಜ ಸಂತೋಷವಿದೆಯೇ?

17 ಈ ಲೋಕದ ಕಾರ್ಯಗಳೆಲ್ಲಾ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೆಂದು ನನಗೆ ಕಂಡುಬಂದದ್ದರಿಂದ ಜೀವನವೇ ನನಗೆ ಅಸಹ್ಯವಾಯಿತು.

18 ನನ್ನ ಪ್ರಯಾಸದ ಫಲವನ್ನು ನನ್ನ ತರುವಾಯ ಬೇರೆಯವರು ಪಡೆದುಕೊಳ್ಳುವುದರಿಂದ ನಾನು ಲೋಕದಲ್ಲಿ ಪಟ್ಟ ಪ್ರಯಾಸಕ್ಕೆ ಬೇಸರಗೊಂಡೆನು. 19 ನಾನು ಜ್ಞಾನವನ್ನೂ ಪ್ರಯಾಸವನ್ನೂ ಯಾವುದರಲ್ಲಿ ವಿನಿಯೋಗಿಸಿದ್ದೇನೋ ಅದರ ಮೇಲೆ ಬೇರೊಬ್ಬನು ದೊರೆತನ ಮಾಡುವನು. ಅವನು ಜ್ಞಾನಿಯೋ ಮೂಢನೋ ನನಗೆ ಗೊತ್ತಿಲ್ಲ. ಇದೂ ವ್ಯರ್ಥವೇ.

20 ಆದ್ದರಿಂದ, ನಾನು ಈ ಲೋಕದಲ್ಲಿ ಪ್ರಯಾಸಪಟ್ಟ ಕೆಲಸಗಳ ಬಗ್ಗೆ ವ್ಯಸನಗೊಂಡೆನು. 21 ಒಬ್ಬನು ತನ್ನ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ಕಾರ್ಯವನ್ನು ಸಫಲಗೊಳಿಸಿದ ಮೇಲೆ ಅದರ ಫಲವನ್ನು ಪ್ರಯಾಸಪಡದ ಬೇರೊಬ್ಬನಿಗೆ ಬಿಟ್ಟು ಹೋಗಬೇಕಾಗುವುದು. ಇದೂ ವ್ಯರ್ಥವೂ ಅನ್ಯಾಯವೂ ಆಗಿದೆ.

22 ಈ ಲೋಕದಲ್ಲಿ ಮನುಷ್ಯನು ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ಪ್ರಯೋಜನವೇನು? 23 ಅವನ ಜೀವಮಾನವೆಲ್ಲಾ ಅವನಿಗೆ ವ್ಯಸನವಿರುವುದು; ಕೆಲಸದಲ್ಲೆಲ್ಲಾ ಕಷ್ಟವಿರುವುದು; ರಾತ್ರಿಯಲ್ಲಿಯೂ ಮನಸ್ಸಿಗೆ ವಿಶ್ರಾಂತಿಯಿರದು. ಇದೂ ವ್ಯರ್ಥವೇ.

24-25 ಜೀವನದಲ್ಲಿ ಸುಖಪಡಲು ನನಗಿಂತಲೂ ಹೆಚ್ಚಾಗಿ ಯಾರಾದರೂ ಪ್ರಯತ್ನಿಸಿರುವರೇ? ಇಲ್ಲ! ಅನುಭವದಿಂದ ಹೇಳುವುದೇನೆಂದರೆ, ಅನ್ನಪಾನಗಳನ್ನು ತೆಗೆದುಕೊಂಡು ಪ್ರಯಾಸದಲ್ಲಿಯೂ ಸುಖಪಡುವುದಕ್ಕಿಂತ ಬೇರೆ ಯಾವ ಮೇಲೂ ಮನುಷ್ಯನಿಗಿಲ್ಲ. ಇದು ಸಹ ದೇವರಿಂದ ಬಂದ ಭಾಗ್ಯವೆಂದು ಕಂಡುಕೊಂಡೆನು. 26 ದೇವರು ತಾನು ಮೆಚ್ಚಿಕೊಂಡವನಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಆನಂದವನ್ನೂ ಕೊಡುವನು. ಪಾಪಿಗಾದರೋ ಪ್ರಯಾಸದಿಂದ ಸಂಪಾದಿಸುವ ಮತ್ತು ಕೂಡಿಸಿಡುವ ಕೆಲಸವನ್ನು ಕೊಡುವನು. ಅವನು ಕೂಡಿಸಿಟ್ಟವುಗಳನ್ನು ದೇವರು ತನ್ನ ಮೆಚ್ಚಿಕೆಗೆ ಪಾತ್ರನಾದವನಿಗೆ ಕೊಡುವನು. ಇದು ಸಹ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ.

ಪ್ರತಿಯೊಂದಕ್ಕೂ ಸೂಕ್ತ ಸಮಯವಿದೆ

ಪ್ರತಿಯೊಂದಕ್ಕೂ ಸೂಕ್ತವಾದ ಸಮಯವಿದೆ. ಭೂಮಿಯ ಮೇಲೆ ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಸೂಕ್ತ ಸಮಯವಿದೆ.

ಹುಟ್ಟುವ ಸಮಯ,
    ಸಾಯುವ ಸಮಯ.
ನೆಡುವ ಸಮಯ,
    ಸಸಿಗಳನ್ನು ಕೀಳುವ ಸಮಯ.
ಕೊಲ್ಲುವ ಸಮಯ,
    ವಾಸಿಮಾಡುವ ಸಮಯ.
ನಾಶಮಾಡುವ ಸಮಯ,
    ಕಟ್ಟುವ ಸಮಯ.
ಅಳುವ ಸಮಯ,
    ನಗುವ ಸಮಯ.
ಗೋಳಾಡುವ ಸಮಯ,
    ಕುಣಿದಾಡುವ ಸಮಯ.
ಆಯುಧಗಳನ್ನು ಬಿಸಾಡುವ ಸಮಯ,
    ಆಯುಧಗಳನ್ನು ಎತ್ತಿಕೊಳ್ಳುವ ಸಮಯ.
ಅಪ್ಪಿಕೊಳ್ಳುವ ಸಮಯ,
    ಅಪ್ಪಿಕೊಳ್ಳದಿರುವ ಸಮಯ.
ಹುಡುಕುವ ಸಮಯ,
    ಹುಡುಕದಿರುವ ಸಮಯ.
ವಸ್ತುಗಳನ್ನು ಇಟ್ಟುಕೊಳ್ಳುವ ಸಮಯ,
    ವಸ್ತುಗಳನ್ನು ಬಿಸಾಡುವ ಸಮಯ.
ಬಟ್ಟೆಯನ್ನು ಹರಿಯುವ ಸಮಯ,
    ಬಟ್ಟೆಯನ್ನು ಹೊಲಿಯುವ ಸಮಯ.
ಮೌನವಾಗಿರುವ ಸಮಯ,
    ಮಾತಾಡುವ ಸಮಯ.
ಪ್ರೀತಿ ಮಾಡುವ ಸಮಯ,
    ದ್ವೇಷಿಸುವ ಸಮಯ.
ಯುದ್ಧಮಾಡುವ ಸಮಯ,
    ಶಾಂತಿಯಿಂದಿರುವ ಸಮಯ.

ಲೋಕವು ದೇವರ ಹತೋಟಿಯಲ್ಲಿದೆ

ದುಡಿಯುವವನಿಗೆ ಅವನ ಪ್ರಯಾಸದಿಂದ ಲಾಭವೇನು? 10 ದೇವರು ಮನುಷ್ಯರಿಗೆ ಕೊಟ್ಟಿರುವ ಪ್ರಯಾಸದ ಕೆಲಸವನ್ನೆಲ್ಲಾ ನೋಡಿದ್ದೇನೆ. 11 ಈ ಲೋಕವನ್ನು ಕುರಿತು ಆಲೋಚಿಸುವುದಕ್ಕೆ ದೇವರು ನನಗೆ ಜ್ಞಾನವನ್ನು ಕೊಟ್ಟಿದ್ದರೂ ದೇವರ ಕಾರ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವೇ ಇಲ್ಲ. ದೇವರು ಪ್ರತಿಯೊಂದನ್ನೂ ತಕ್ಕ ಸಮಯದಲ್ಲಿ ಮಾಡುವನು.

12 ಬದುಕಿರುವಷ್ಟು ಕಾಲ ಸಂತೋಷವಾಗಿದ್ದು ಸುಖಪಡುವುದಕ್ಕಿಂತ ಬೇರೆ ಯಾವ ಮೇಲೂ ಮನುಷ್ಯರಿಗೆ ಇಲ್ಲವೆಂದು ಕಲಿತುಕೊಂಡೆನು. 13 ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಕೆಲಸವನ್ನು ಸಂತೋಷದಿಂದ ಮಾಡುವುದು ದೇವರಿಗೆ ಇಷ್ಟವಾಗಿದೆ. ಅವು ದೇವರ ವರವಾಗಿವೆ.

14 ದೇವರ ಕಾರ್ಯಗಳೆಲ್ಲಾ ಶಾಶ್ವತವಾದದ್ದು. ಆತನ ಕಾರ್ಯಗಳಿಗೆ ಮನುಷ್ಯರು ಏನನ್ನೂ ಸೇರಿಸಲಾರರು; ಅವುಗಳಿಂದ ಏನನ್ನೂ ತೆಗೆಯಲಾರರು. ಮನುಷ್ಯರು ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕೆಂಬುದೇ ಇದಕ್ಕೆ ಕಾರಣ. 15 ಈಗ ಸಂಭವಿಸುವಂಥವುಗಳೂ ಮುಂದೆ ಸಂಭವಿಸುವಂಥವುಗಳೂ ಹಿಂದಿನ ಕಾಲದಲ್ಲಿ ಸಂಭವಿಸಲ್ಪಟ್ಟಿವೆ. ದೇವರು ಅದೇ ಕಾರ್ಯಗಳನ್ನು ಮತ್ತೆಮತ್ತೆ ಬರಮಾಡುವನು.

16 ನಾನು ಈ ಲೋಕವನ್ನು ದೃಷ್ಟಿಸಿ ನೋಡಿದಾಗ, ನ್ಯಾಯಾಲಯಗಳಲ್ಲಿ ನೀತಿನ್ಯಾಯಗಳ ಬದಲಾಗಿ ದುಷ್ಟತನ ತುಂಬಿರುವುದನ್ನು ಕಂಡುಕೊಂಡೆನು. 17 ಆಗ ನಾನು ಮನಸ್ಸಿನಲ್ಲಿ, “ದೇವರು ಪ್ರತಿಯೊಂದಕ್ಕೂ ಸಮಯವನ್ನು ಗೊತ್ತುಪಡಿಸಿದ್ದಾನೆ. ಜನರು ಮಾಡುವ ಪ್ರತಿಯೊಂದಕ್ಕೂ ನ್ಯಾಯತೀರಿಸಲು ಆತನು ಸಮಯವನ್ನು ಗೊತ್ತುಪಡಿಸಿದ್ದಾನೆ. ದೇವರು ನೀತಿವಂತರಿಗೂ ದುಷ್ಟರಿಗೂ ನ್ಯಾಯತೀರಿಸುವನು” ಎಂದುಕೊಂಡೆನು.

ಮನುಷ್ಯರು ಪ್ರಾಣಿಗಳಂತಿರುವರೇ?

18 ಅಲ್ಲದೆ ಮನಸ್ಸಿನಲ್ಲಿ ಹೀಗೆಂದುಕೊಂಡೆನು: “ಮನುಷ್ಯರು ಪ್ರಾಣಿಗಳಿಗಿಂತ ಮೇಲಾದವರಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕೆಂಬುದು ದೇವರ ಇಷ್ಟವಾಗಿದೆ. 19 ಮನುಷ್ಯನು ಪ್ರಾಣಿಗಿಂತಲೂ ಉತ್ತಮನಾಗಿರುವನೇ? ಇಲ್ಲ! ಏಕೆಂದರೆ ಪ್ರತಿಯೊಂದು ಉಪಯೋಗವಿಲ್ಲದ್ದು. ಪ್ರಾಣಿಗಳಿಗೂ ಮನುಷ್ಯರಿಗೂ ಒಂದೇ ಗತಿಯಾಗುವುದು; ಪ್ರಾಣಿಗಳೂ ಸಾಯುವವು, ಮನುಷ್ಯರೂ ಸಾಯುವರು. ಮನುಷ್ಯರಿಗೂ ಪ್ರಾಣಿಗಳಿಗೂ ಇರುವುದು ಒಂದೇ ‘ಉಸಿರು.’ ಸತ್ತ ಪ್ರಾಣಿಗೂ ಸತ್ತ ಮನುಷ್ಯನಿಗೂ ವ್ಯತ್ಯಾಸವಿಲ್ಲ. 20 ಮನುಷ್ಯರ ಮತ್ತು ಪ್ರಾಣಿಗಳ ದೇಹಗಳೆಲ್ಲ ಒಂದೇ ಸ್ಥಳಕ್ಕೆ ಹೋಗುತ್ತವೆ. ಮನುಷ್ಯರು ಮಣ್ಣಿನಿಂದ ಬಂದರು. ಕೊನೆಗೆ ಅವರು ಮಣ್ಣಿಗೇ ಹೋಗುವರು. ಪ್ರಾಣಿಗಳು ಮಣ್ಣಿನಿಂದ ಬಂದವು; ಕೊನೆಗೆ ಅವು ಮಣ್ಣಿಗೆ ಹೋಗುತ್ತವೆ. 21 ಮನುಷ್ಯನ ಆತ್ಮಕ್ಕೆ ಏನು ಸಂಭವಿಸುವುದೋ ಯಾರಿಗೆ ಗೊತ್ತು? ಮನುಷ್ಯನ ಆತ್ಮವು ದೇವರ ಬಳಿಗೆ ಮೇಲಕ್ಕೆ ಹೋಗುವುದೋ ಪ್ರಾಣಿಯ ಆತ್ಮವು ಭೂಮಿಯೊಳಗೆ ಇಳಿಯುವುದೋ ಯಾರಿಗೆ ಗೊತ್ತು?”

22 ಆದ್ದರಿಂದ ಮನುಷ್ಯನಿಗೆ ತನ್ನ ಕಾರ್ಯದಲ್ಲಿ ಸಂತೋಷಪಡುವುದಕ್ಕಿಂತ ಬೇರೆ ಯಾವ ಮೇಲೂ ಇಲ್ಲ. ಇದೇ ಅವನ ಪಾಲು ಎಂದು ಗ್ರಹಿಸಿಕೊಂಡೆನು. ಅಲ್ಲದೆ ಮುಂದಿನ ಕಾಲವನ್ನು ಕುರಿತು ಮನುಷ್ಯನು ಚಿಂತಿಸಬಾರದು. ಯಾಕೆಂದರೆ ಅವನ ಜೀವಮಾನದ ನಂತರ ಸಂಭವಿಸುವಂಥವುಗಳನ್ನು ನೋಡಲು ಈ ಲೋಕಕ್ಕೆ ಅವನನ್ನು ಯಾರು ಬರಮಾಡುವರು?

ಯಾರು ಮೇಲು? ಸತ್ತವರೋ? ಬದುಕಿರುವವರೋ?

ನಾನು ದೃಷ್ಟಿಸಿ ನೋಡಿದಾಗ, ಅನೇಕ ಜನರು ಹಿಂಸೆಗೆ ಒಳಗಾಗಿರುವುದನ್ನು ಕಂಡೆನು. ಅವರ ಕಣ್ಣೀರನ್ನೂ ನೋಡಿದೆನು. ದುಃಖದಲ್ಲಿದ್ದ ಅವರನ್ನು ಸಂತೈಸಲು ಒಬ್ಬರೂ ಇರಲಿಲ್ಲ. ಹಿಂಸಕರು ಎಲ್ಲಾ ಅಧಿಕಾರವನ್ನು ಹೊಂದಿದ್ದರು; ಅವರಿಂದ ಹಿಂಸೆಗೆ ಒಳಗಾದವರನ್ನು ಸಂತೈಸಲು ಯಾರೂ ಇರಲಿಲ್ಲ. ಇನ್ನೂ ಜೀವದಿಂದಿರುವವರಿಗಿಂತ ಸತ್ತವರೇ ಮೇಲೆಂದು ನಿರ್ಧರಿಸಿದೆನು. ಹುಟ್ಟುವಾಗಲೇ ಸತ್ತು ಹೋದವರಿಗೆ ಒಳ್ಳೆಯದೇ ಆಯಿತು! ಯಾಕೆಂದರೆ ಈ ಲೋಕದಲ್ಲಿ ನಡೆಯುವ ಕೆಟ್ಟದ್ದನ್ನು ಅವರು ನೋಡಲೇ ಇಲ್ಲ.

ಕಷ್ಟಪಟ್ಟು ದುಡಿಯುವುದೇಕೆ?

ಆಮೇಲೆ ನಾನು, “ಜನರು ಪ್ರಯಾಸಪಟ್ಟು ಕೆಲಸ ಮಾಡುವುದೇಕೆ?” ಎಂದು ಆಲೋಚಿಸಿದೆ. ಜನರು ಏಳಿಗೆ ಹೊಂದಲು ಮತ್ತು ಬೇರೆಯವರಿಗಿಂತ ಹೆಚ್ಚು ಅಭಿವೃದ್ಧಿಯಾಗಲು ಪ್ರಯತ್ನಿಸುವರು; ಅದಕ್ಕೆ ಅವರ ಮತ್ಸರವೇ ಕಾರಣ. ಇದೂ ಗಾಳಿಯನ್ನು ಹಿಂದಟ್ಟಿದ್ದ ಹಾಗೆ ವ್ಯರ್ಥ.

ಕೆಲವರು ಹೇಳುವಂತೆ, “ಏನೂ ಮಾಡದೆ ಕೈಕಟ್ಟಿಕೊಂಡು ಕುಳಿತುಕೊಳ್ಳುವುದು ಮೂಢತನ. ದುಡಿಯದವನು ಹಸಿವೆಯಿಂದ ಸಾಯುವನು.” ಇದೇನೊ ನಿಜವಿರಬಹುದು. ಆದರೆ ದುರಾಶೆಪಡುವುದಕ್ಕಿಂತ ಇರುವುದರಲ್ಲಿ ತೃಪ್ತರಾಗಿರುವುದೇ ಮೇಲು.

ಲೋಕದಲ್ಲಿ ಮತ್ತೊಂದು ವ್ಯರ್ಥವನ್ನು ಕಂಡೆನು. ಸ್ವಂತ ಕುಟುಂಬವನ್ನು ಹೊಂದಿಲ್ಲದವನು ಅಂದರೆ ಅಣ್ಣತಮ್ಮಂದಿರಾಗಲಿ ಮಕ್ಕಳಾಗಲಿ ಇಲ್ಲದವನು ಸಹ ಪ್ರಯಾಸಪಟ್ಟು ದುಡಿಯುವನು. ಅವನಿಗೂ ತನ್ನ ಆಸ್ತಿಯಲ್ಲಿ ತೃಪ್ತಿಯಿಲ್ಲ. ಅವನು ಬಿಡುವಿಲ್ಲದೆ ಪ್ರಯಾಸಪಟ್ಟು ದುಡಿಯುವನು. “ನಾನೇಕೆ ಪ್ರಯಾಸಪಟ್ಟು ದುಡಿಯುತ್ತಿರುವೆ? ನಾನೇಕೆ ಜೀವನದ ಸುಖವನ್ನು ಅನುಭವಿಸುತ್ತಿಲ್ಲ?” ಎಂದು ಅವನು ಆಲೋಚಿಸುವುದೇ ಇಲ್ಲ. ಇದು ಸಹ ಕೆಟ್ಟದ್ದೂ ವ್ಯರ್ಥವಾದದ್ದೂ ಆಗಿದೆ.

ಒಗಟ್ಟಿನಲ್ಲಿ ಬಲವಿದೆ

ಇಬ್ಬರು ಒಬ್ಬನಿಗಿಂತಲೂ ಉತ್ತಮ. ಇಬ್ಬರು ಒಟ್ಟಾಗಿ ದುಡಿದರೆ ಹೆಚ್ಚು ಗಳಿಸುವರು.

10 ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು. ಬಿದ್ದಾಗ ಒಬ್ಬಂಟಿಗನಾಗಿದ್ದರೆ ಎತ್ತಲು ಯಾರೂ ಇಲ್ಲದಿರುವುದರಿಂದ ಅವನಿಗೆ ದುರ್ಗತಿಯಾಗುವುದು.

11 ಇಬ್ಬರು ಒಟ್ಟಿಗೆ ಮಲಗಿಕೊಂಡರೆ ಅವರಿಬ್ಬರಿಗೂ ಬೆಚ್ಚಗಾಗುವುದು; ಆದರೆ ಒಬ್ಬಂಟಿಗನಿಗೆ ಬೆಚ್ಚಗಾಗುವುದಿಲ್ಲ.

12 ವೈರಿಯೊಬ್ಬನು ಒಬ್ಬನನ್ನು ಸೋಲಿಸಬಹುದು; ಆದರೆ ಇಬ್ಬರನ್ನು ಸೋಲಿಸಲು ಅವನಿಗೆ ಕಷ್ಟವಾಗುವುದು; ಒಂದುವೇಳೆ ಮೂವರಿದ್ದರೆ ಅವರು ಮೂರೆಳೆಯ ಹಗ್ಗದಂತೆ ಇರುವುದರಿಂದ ಅವನಿಗೆ ಮತ್ತಷ್ಟು ಕಷ್ಟವಾಗುವುದು.

ಜನರು, ರಾಜಕೀಯ ಮತ್ತು ಪ್ರಖ್ಯಾತಿ

13 ಜ್ಞಾನಿಯಾದ ಬಡಯುವಕನು ಎಚ್ಚರದ ಮಾತಿಗೆ ಕಿವಿಗೊಡದ ಮೂಢ ವೃದ್ಧರಾಜನಿಗಿಂತ ಉತ್ತಮ. 14 ಆ ಬಡಯುವಕನು ದೇಶದ ಒಂದು ಬಡಕುಟುಂಬದಲ್ಲಿ ಹುಟ್ಟಿದ್ದಿರಬಹುದು ಅಥವಾ ದೇಶವನ್ನು ಆಳುವುದಕ್ಕಾಗಿ ಸೆರೆಮನೆಯಿಂದ ಬಿಡುಗಡೆ ಮಾಡಲ್ಪಟ್ಟಿರಬಹುದು. 15 ಆದರೆ ನಾನು ಗಮನಿಸಿದ ಪ್ರಕಾರ ಜನರು ಆ ಯೌವನಸ್ಥನ ಪಕ್ಷವಹಿಸುವರು. ಅವನು ಹೊಸರಾಜನಾಗುವನು. 16 ಅನೇಕಾನೇಕ ಜನರು ಆ ಯೌವನಸ್ಥನಿಗೆ ಬೆಂಬಲನೀಡುವರು. ಆದರೆ ಕೊನೆಗಾಲದಲ್ಲಿ ಅವರೇ ಅವನನ್ನು ಇಷ್ಟಪಡುವುದಿಲ್ಲ. ಇದು ಸಹ ಗಾಳಿಯನ್ನು ಹಿಂದಟ್ಟಿದಂತೆ ವ್ಯರ್ಥ.

ಹರಕೆ ಮಾಡುವಾಗ ಎಚ್ಚರಿಕೆಯಿಂದಿರಿ

ದೇವರನ್ನು ಆರಾಧಿಸಲು ಹೋಗುವಾಗ ಎಚ್ಚರಿಕೆಯಿಂದಿರಿ. ಮೂಢರಂತೆ ಯಜ್ಞಗಳನ್ನು ಅರ್ಪಿಸುವುದಕ್ಕಿಂತ ದೇವರಿಗೆ ಕಿವಿಗೊಡುವುದೇ ಉತ್ತಮ. ಮೂಢರು ದುಷ್ಕೃತ್ಯಗಳನ್ನು ಮಾಡುತ್ತಲೇ ಇರುವರು; ಆದರೆ ಅವರಿಗೆ ಅದು ಗೊತ್ತೇ ಇಲ್ಲ. ದೇವರಿಗೆ ಹರಕೆ ಮಾಡುವಾಗ ಎಚ್ಚರಿಕೆಯಿಂದಿರಿ. ನೀವು ದೇವರೊಂದಿಗೆ ಮಾತಾಡುವಾಗ ಎಚ್ಚರಿಕೆಯಿಂದಿರಿ. ನಿಮ್ಮ ಮನೋದ್ವೇಗಗಳು ನಿಮ್ಮನ್ನು ಮಾತಿನಲ್ಲಿ ದುಡುಕಿಸದಂತೆ ನೋಡಿಕೊಳ್ಳಿ. ದೇವರು ಪರಲೋಕದಲ್ಲಿರುವುದರಿಂದ ಮತ್ತು ನೀವು ಈ ಲೋಕದಲ್ಲಿರುವುದರಿಂದ ನಿಮ್ಮ ಮಾತುಗಳು ಮಿತವಾಗಿರಲಿ. ಈ ನುಡಿ ಸತ್ಯವಾದದ್ದೇ:

“ಅನೇಕ ಚಿಂತೆಗಳಿಂದ ದುಸ್ವಪ್ನಗಳಾಗುವಂತೆ
    ಮೂಢನು ಅನೇಕ ಮಾತುಗಳನ್ನಾಡುವನು.”

ನೀವು ಹರಕೆ ಮಾಡಿಕೊಂಡರೆ ತಡಮಾಡದೆ ಅದನ್ನು ನೆರವೇರಿಸಿ. ಮೂಢರ ವಿಷಯದಲ್ಲಿ ದೇವರಿಗೆ ಸಂತೋಷವಿಲ್ಲ. ನೀವು ದೇವರಿಗೆ ಹರಕೆ ಮಾಡಿಕೊಂಡದ್ದನ್ನು ಸಲ್ಲಿಸಿರಿ. ಹರಕೆ ಮಾಡಿ ಸಲ್ಲಿಸದಿರುವುದಕ್ಕಿಂತ ಹರಕೆ ಮಾಡದಿರುವುದೇ ಉತ್ತಮ. ಆದ್ದರಿಂದ ನಿಮ್ಮ ಮಾತುಗಳು ನಿಮ್ಮನ್ನು ಪಾಪಕ್ಕೆ ನಡೆಸದಂತೆ ನೋಡಿಕೊಳ್ಳಿ. “ನಾನು ಅಜಾಗ್ರತೆಯಿಂದ ಹೇಳಿದೆ” ಎಂದು ಯಾಜಕನಿಗೆ ತಿಳಿಸಬೇಡಿ. ಇಲ್ಲವಾದರೆ, ದೇವರು ನಿಮ್ಮ ಮಾತುಗಳಿಗೆ ಕೋಪಗೊಂಡು ನೀವು ದುಡಿದಿರುವುದನ್ನೆಲ್ಲಾ ನಾಶಮಾಡಬಹುದು. ಉಪಯೋಗವಿಲ್ಲದ ನಿಮ್ಮ ಕನಸುಗಳಾಗಲಿ ಜಂಬದ ಮಾತುಗಳಾಗಲಿ ನಿಮ್ಮನ್ನು ಕೇಡಿಗೆ ನಡೆಸದಂತೆ ನೋಡಿಕೊಳ್ಳಿರಿ; ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ.

ಯಾವನೂ ಸರ್ವಾಧಿಪತಿಯಲ್ಲ

ದೇಶದಲ್ಲಿ ಬಡವರಿಂದ ಬಲವಂತ ಸೇವೆಮಾಡಿಸುವುದನ್ನು ಕಂಡು ಅವರಿಗೆ ಅನ್ಯಾಯವಾಗಿದೆಯೆಂದೂ ಹಕ್ಕಿಗೆ ಚ್ಯುತಿಯಾಗಿದೆಯೆಂದೂ ಆಶ್ಚರ್ಯಪಡಬೇಡಿ. ಅವರಿಂದ ಬಲವಂತವಾಗಿ ದುಡಿಸುವ ಅಧಿಪತಿಗೆ ಬಲವಂತದಿಂದ ದುಡಿಸುವ ಮತ್ತೊಬ್ಬ ಅಧಿಪತಿಯಿರುವನು. ಈ ಇಬ್ಬರು ಅಧಿಪತಿಗಳಿಗೂ ಮತ್ತೊಬ್ಬ ಅಧಿಪತಿಯಿರುವನು. ರಾಜನು ಸಹ ಸೇವಕನಾಗಿದ್ದಾನೆ; ಅವನ ದೇಶವು ಅವನನ್ನು ಗಳಿಸಿಕೊಂಡಿದೆ.

ಐಶ್ವರ್ಯವು ಸಂತೋಷವನ್ನು ಖರೀದಿ ಮಾಡಲಾರದು

10 ಹಣದಾಸೆಯುಳ್ಳವನು ತನ್ನಲ್ಲಿ ಎಷ್ಟೇ ಹಣವಿದ್ದರೂ ತೃಪ್ತನಾಗಲಾರನು. ಐಶ್ವರ್ಯದಾಸೆಯುಳ್ಳವನು ಎಷ್ಟೇ ಸಂಪಾದಿಸಿದರೂ ತೃಪ್ತನಾಗುವುದಿಲ್ಲ. ಇದು ಸಹ ವ್ಯರ್ಥ.

11 ಐಶ್ವರ್ಯ ಹೆಚ್ಚಿದಂತೆಲ್ಲಾ “ಅನುಭವಿಸುವವರ” ಸಂಖ್ಯೆಯೂ ಹೆಚ್ಚುವುದು. ಐಶ್ವರ್ಯವಂತನು ಅದನ್ನು ಕಣ್ಣಿಂದ ನೋಡಬಹುದಷ್ಟೇ ಹೊರತು ಬೇರೆ ಯಾವ ಲಾಭವೂ ಅವನಿಗಿಲ್ಲ.

12 ದಿನವೆಲ್ಲಾ ಪ್ರಯಾಸಪಟ್ಟು ದುಡಿಯುವವನು ಸಮಾಧಾನದಿಂದ ಮಲಗಿಕೊಳ್ಳುವನು. ಅವನಿಗೆ ತಿನ್ನಲು ಸ್ವಲ್ಪವೇ ಇರಲಿ ಅಥವಾ ಹೆಚ್ಚೇ ಇರಲಿ, ಅದು ಮುಖ್ಯವಲ್ಲ. ಐಶ್ವರ್ಯವಂತನಿಗಾದರೋ ತನ್ನ ಸಂಪತ್ತಿನ ಕುರಿತು ಚಿಂತಿಸುತ್ತಾ ನಿದ್ರಿಸಲಾರನು.

13 ಈ ಲೋಕದಲ್ಲಿ ದುರ್ಗತಿಯೊಂದನ್ನು ನೋಡಿದ್ದೇನೆ. ಒಬ್ಬನು ತನ್ನ ಭವಿಷ್ಯತ್ತಿಗಾಗಿ ಹಣವನ್ನು ಕೂಡಿಡುತ್ತಾನೆ. 14 ಬಳಿಕ ಅವನು ಯಾವುದೋ ಕೇಡಿಗೆ ಗುರಿಯಾಗಿ ತನ್ನ ಹಣವನ್ನೆಲ್ಲಾ ಕಳೆದುಕೊಳ್ಳುವನು; ಕೊನೆಯಲ್ಲಿ ತನ್ನ ಮಗನಿಗೆ ಕೊಡಲು ಅವನಲ್ಲಿ ಏನೂ ಉಳಿದಿರುವುದಿಲ್ಲ.

15 ಮನುಷ್ಯನು ತಾಯಿಯ ಗರ್ಭದಿಂದ ಬರಿದಾಗಿ ಈ ಲೋಕಕ್ಕೆ ಬರುವನು; ಸಾಯುವಾಗ ಅದೇ ರೀತಿ ಬರಿದಾಗಿ ಹೋಗುವನು; ತಾನು ಪ್ರಯಾಸಪಟ್ಟು ಸಂಪಾದಿಸಿದವುಗಳಲ್ಲಿ ಒಂದನ್ನೂ ಅವನು ತನ್ನೊಡನೆ ತೆಗೆದುಕೊಂಡು ಹೋಗಲಾರನು. 16 ಅದು ಸಹ ತುಂಬ ದುಃಖಕರ. ಅವನು ಬಂದ ರೀತಿಯಲ್ಲಿಯೇ ಈ ಲೋಕವನ್ನು ಬಿಟ್ಟುಹೋಗುವನು. “ಗಾಳಿಯನ್ನು ಹಿಂದಟ್ಟುವುದರಿಂದ” ಅವನಿಗಾಗುವ ಪ್ರಯೋಜನವೇನು? 17 ಅವನ ಜೀವಮಾನವೆಲ್ಲಾ ವ್ಯಸನದಿಂದಲೂ ದುಃಖದಿಂದಲೂ ಕೂಡಿದೆ. ನಿರಾಶೆಯೂ ಕಾಯಿಲೆಯೂ ಕೋಪವೂ ಅವನನ್ನು ಕಾಡುತ್ತಲೇ ಇರುತ್ತವೆ.

ನಿನ್ನ ಜೀವನದ ಕೆಲಸದಲ್ಲಿ ಆನಂದಿಸು

18 ನಾನು ಕಂಡುಕೊಂಡದ್ದೇನೆಂದರೆ, ಒಬ್ಬನು ತನ್ನ ಅಲ್ಪಕಾಲದ ಜೀವಮಾನದಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವುದೇ ಅವನಿಗೆ ಮೇಲು. ಇದೇ ಅವನ ಪಾಲು.

19 ದೇವರು ಒಬ್ಬನಿಗೆ ಐಶ್ವರ್ಯವನ್ನೂ ಆಸ್ತಿಯನ್ನೂ ಮತ್ತು ಅವುಗಳನ್ನು ಅನುಭವಿಸುವ ಭಾಗ್ಯವನ್ನೂ ಕೊಟ್ಟಿದ್ದರೆ ಅವನು ಅವುಗಳನ್ನು ಅನುಭವಿಸಲಿ. ಅವನು ತನಗಿರುವಂಥವುಗಳನ್ನು ಹೊಂದಿಕೊಂಡು ತನ್ನ ದುಡಿಮೆಯಲ್ಲಿ ಸಂತೋಷಿಸಲಿ. ಅದು ದೇವರ ಅನುಗ್ರಹವಷ್ಟೇ. 20 ತನ್ನ ಜೀವಿತವು ಅಲ್ಪಕಾಲದ್ದೆಂದು ಅವನು ನೆನಪುಮಾಡಿಕೊಳ್ಳಬೇಕು. ಯಾಕೆಂದರೆ ಅವನನ್ನು ಅವನಿಗೆ ಇಷ್ಟವಾದ ಕೆಲಸದಲ್ಲಿ ನಿರತನನ್ನಾಗಿ ಮಾಡಿರುವಾತನು ದೇವರೇ.

ಐಶ್ವರ್ಯವು ಸಂತೋಷವನ್ನು ಕೊಡಲಾರದು

ಈ ಲೋಕದಲ್ಲಿ ಮತ್ತೊಂದು ಅನ್ಯಾಯವನ್ನು ಕಂಡಿದ್ದೇನೆ. ಅದನ್ನು ಗ್ರಹಿಸಿಕೊಳ್ಳುವುದಕ್ಕೂ ಕಷ್ಟ. ದೇವರು ಒಬ್ಬನಿಗೆ ಐಶ್ವರ್ಯವನ್ನು, ಆಸ್ತಿಪಾಸ್ತಿಯನ್ನು ಮತ್ತು ಘನತೆಯನ್ನು ಕೊಡುವನು. ಅವನು ತನಗೆ ಈಗ ಬೇಕಾಗಿರುವ ಮತ್ತು ಮುಂದೆ ಬೇಕಾಗುವ ಎಲ್ಲವನ್ನೂ ಹೊಂದಿರುವನು. ಆದರೆ ಅವುಗಳನ್ನು ಅನುಭವಿಸಲು ದೇವರು ಅವನಿಗೆ ಅವಕಾಶಕೊಡುವುದಿಲ್ಲ. ಮತ್ತೊಬ್ಬನು ಬಂದು ಎಲ್ಲವನ್ನೂ ತೆಗೆದುಕೊಳ್ಳುವನು. ಇದು ಸಹ ತುಂಬ ಕೆಟ್ಟದ್ದೂ ಅರ್ಥವಿಲ್ಲದ್ದೂ ಆಗಿದೆ.

ಒಬ್ಬನು ಬಹುಕಾಲ ಬದುಕಬಹುದು. ಅವನಿಗೆ ನೂರು ಮಂದಿ ಮಕ್ಕಳಿರಬಹುದು. ಆದರೆ ಅವನಿಗೆ ಸುಖತೃಪ್ತಿಯೂ ಸತ್ತ ಮೇಲೆ ಉತ್ತರಕ್ರಿಯೆಯೂ ಇಲ್ಲದಿದ್ದರೆ ಹುಟ್ಟುವಾಗಲೇ ಸಾಯುವ ಮಗು ಅವನಿಗಿಂತಲೂ ಉತ್ತಮ. ಮಗುವು ಹುಟ್ಟುವಾಗಲೇ ಸತ್ತುಹೋದರೆ ಅದಕ್ಕೆ ನಿಜವಾಗಿಯೂ ಅರ್ಥವಿಲ್ಲ. ಅದು ಹೆಸರನ್ನೂ ಹೊಂದಿಲ್ಲದೆ ಕತ್ತಲೆಯ ಗುಂಡಿಯಲ್ಲಿ ಹೂಳಲ್ಪಡುವುದು. ಅದು ಸೂರ್ಯನನ್ನು ನೋಡಲೇ ಇಲ್ಲ. ಅದಕ್ಕೆ ತಿಳಿವಳಿಕೆಯೂ ಇಲ್ಲ. ಆದರೆ ದೇವರು ಅನುಗ್ರಹಿಸಿದವುಗಳಲ್ಲಿ ಸಂತೋಷಪಡದವನಿಗಿಂತ ಆ ಮಗುವೇ ಹೆಚ್ಚು ವಿಶ್ರಾಂತಿಯನ್ನು ಪಡೆದುಕೊಳ್ಳುವುದು. ಅವನು ಎರಡು ಸಾವಿರ ವರ್ಷಗಳ ಕಾಲ ಬದುಕಿಯೂ ಜೀವನದಲ್ಲಿ ಸಂತೋಷಪಡದಿದ್ದರೆ ಏನು ಪ್ರಯೋಜನ? ಆ ಮಗುವೂ ಅವನೂ ಕತ್ತಲೆ ಗುಂಡಿಗೇ ಹೋಗುವರು.

ಮನುಷ್ಯನು ದುಡಿಯುವುದೆಲ್ಲಾ ಊಟಕ್ಕಾಗಿಯೇ. ಆದರೂ ಅವನಿಗೆ ತೃಪ್ತಿಯೇ ಇಲ್ಲ. ಆದ್ದರಿಂದ ಜ್ಞಾನಿಯು ಮೂಢನಿಗಿಂತ ಉತ್ತಮನಲ್ಲ. ಬಡವರಾಗಿದ್ದರೂ ಜೀವನವನ್ನು ಅರ್ಥಮಾಡಿಕೊಂಡು ಜೀವಿಸುವುದೇ ಮೇಲು, ದುರಾಶೆಪಡುವುದಕ್ಕಿಂತ ಇರುವುದರಲ್ಲಿ ಸಂತೋಷಪಡುವುದೇ ಉತ್ತಮ. ದುರಾಶೆಯಿಂದ ಪ್ರಯೋಜನವಿಲ್ಲ. ಅದು ಸಹ ಗಾಳಿಯನ್ನು ಹಿಂದಟ್ಟಿದಂತಿದೆ.

10-11 ಮನುಷ್ಯನು ಕೇವಲ ಮನುಷ್ಯನಾಗಿ ಸೃಷ್ಟಿಸಲ್ಪಟ್ಟಿದ್ದಾನೆ. ಅದರ ಬಗ್ಗೆ ವಾದಮಾಡುವುದರಿಂದ ಉಪಯೋಗವಿಲ್ಲ. ಅಲ್ಲದೆ ಮನುಷ್ಯನು ದೇವರೊಂದಿಗೆ ವಾದಮಾಡಲಾರನು. ಯಾಕೆಂದರೆ ದೇವರು ಮನುಷ್ಯನಿಗಿಂತಲೂ ಬಲಿಷ್ಠನಾಗಿದ್ದಾನೆ. ಆದ್ದರಿಂದ ವಾದವು ಕೇವಲ ನಿರರ್ಥಕವಾಗಿದೆ.

12 ಮನುಷ್ಯನ ಅಲ್ಪಕಾಲದ ಜೀವನದಲ್ಲಿ ಅವನಿಗೆ ಯಾವುದು ಉತ್ತಮವೆಂದು ಯಾರಿಗೆ ಗೊತ್ತು? ಅವನ ಜೀವನವು ನೆರಳಿನಂತೆ ಕಳೆದುಹೋಗುವುದು. ಮುಂದೆ ಏನಾಗುವುದೆಂದು ಯಾರೂ ಅವನಿಗೆ ಹೇಳಲಾರರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International