Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಹೋಶೇಯ 8-14

ವಿಗ್ರಹಾರಾಧನೆಯು ಇಸ್ರೇಲರ ನಾಶನಕ್ಕೆ ಕಾರಣ

“ಯೆಹೋವನಾಲಯದ ಕಾವಲುಗಾರನಂತೆ ತುತ್ತೂರಿಯನ್ನು ನಿನ್ನ ತುಟಿಗಳಲ್ಲಿಟ್ಟು ಊದು. ಇಸ್ರೇಲರು ನನ್ನ ಕಟ್ಟಳೆಗಳಿಗೆ ಅವಿಧೇಯರಾಗಿ ನನ್ನ ಒಡಂಬಡಿಕೆಯನ್ನು ಮುರಿದಿದ್ದಾರೆ. ‘ನಮ್ಮ ದೇವರೇ, ಇಸ್ರೇಲಿನಲ್ಲಿರುವ ನಾವು ನಿನ್ನನ್ನು ಅರಿತಿದ್ದೇವೆ’ ಎಂದು ಅವರು ಕಿರುಚುವರು. ಆದರೆ ಇಸ್ರೇಲ್ ಒಳ್ಳೇದನ್ನು ನಿರಾಕರಿಸಿತು. ಆದ್ದರಿಂದ ಶತ್ರುಗಳು ಅವರನ್ನು ಓಡಿಸಿದರು. ಇಸ್ರೇಲರು ತಮಗಾಗಿ ಅರಸನನ್ನು ಆರಿಸಿಕೊಂಡರು. ಆದರೆ ಸಲಹೆಗಳಿಗಾಗಿ ನನ್ನ ಬಳಿಗೆ ಬರಲಿಲ್ಲ. ಇಸ್ರೇಲರು ತಮ್ಮ ನಾಯಕರನ್ನು ಆರಿಸಿಕೊಂಡರು. ಆದರೆ ನಾನು ತಿಳಿದಿರುವ ನಾಯಕರನ್ನು ಆರಿಸಿಕೊಳ್ಳಲಿಲ್ಲ. ಇಸ್ರೇಲರು ತಮಗೆ ವಿಗ್ರಹಗಳನ್ನು ತಯಾರಿಸಲು ತಮ್ಮ ಬೆಳ್ಳಿಬಂಗಾರವನ್ನು ಉಪಯೋಗಿಸಿದರು. ಆದ್ದರಿಂದ ಅವರು ನಾಶವಾಗುವರು. 5-6 ಯೆಹೋವನು ನೀವು ಮಾಡಿಕೊಂಡ ಬಸವನನ್ನು ನಿರಾಕರಿಸಿದ್ದಾನೆ. ಸಮಾರ್ಯವೇ, ಯೆಹೋವನು ಹೇಳುವುದೇನೆಂದರೆ, ‘ನಾನು ಇಸ್ರೇಲರ ವಿರುದ್ಧವಾಗಿ ತುಂಬಾ ಕೋಪಗೊಂಡಿದ್ದೇನೆ.’ ಇಸ್ರೇಲಿನ ಜನರು ಅವರ ಪಾಪಗಳಿಗಾಗಿ ಶಿಕ್ಷಿಸಲ್ಪಡುವರು. ಶಿಲ್ಪಿಯು ಅವರ ವಿಗ್ರಹಗಳನ್ನು ಮಾಡಿದನು. ಅವು ದೇವರಲ್ಲ. ಸಮಾರ್ಯದ ಬಸವನ ವಿಗ್ರಹಗಳು ಚೂರುಚೂರಾಗಿ ಒಡೆಯಲ್ಪಡುವವು. ಇಸ್ರೇಲರು ಅಜ್ಞಾನದ ಕಾರ್ಯ ಮಾಡಿದರು. ಅವರು ಗಾಳಿಯನ್ನು ನೆಡಲು ಪ್ರಯತ್ನಿಸಿದರು. ಆದರೆ ಅವರಿಗೆ ತೊಂದರೆಗಳೇ ಪ್ರಾಪ್ತವಾಗುವದು. ಅವರು ಸುಂಟರಗಾಳಿಯನ್ನು ಕೊಯ್ಯುವರು. ಹೊಲದಲ್ಲಿ ಧಾನ್ಯವು ಬೆಳೆಯುವದು. ಆದರೆ ಅವು ಆಹಾರವನ್ನು ಕೊಡುವದಿಲ್ಲ. ಒಂದುವೇಳೆ ಅದು ಕೊಟ್ಟರೂ ಅಪರಿಚಿತರು ಅದನ್ನು ತಿನ್ನುವರು.

“ಇಸ್ರೇಲ್ ನಾಶವಾಯಿತು.
    ಅವರು ಯಾರಿಗೂ ಬೇಡವಾದ ಪಾತ್ರೆಯನ್ನು ಬಿಸಾಡಿದಂತೆ
    ಜನಾಂಗಗಳ ಮಧ್ಯದಲ್ಲಿ ಚದರಿಸಲ್ಪಟ್ಟರು.
ಎಫ್ರಾಯೀಮನು ತನ್ನ ಪ್ರೇಮಿಗಳ ಬಳಿಗೆ ಹೋದನು.
    ಕಾಡುಕತ್ತೆಯಂತೆ ಅಶ್ಶೂರ್ಯದ ಕಡೆಗೆ ಅಡ್ಡಾಡುತ್ತಾ ಹೋದನು.
10 ಜನಾಂಗಗಳ ಮಧ್ಯೆ ಇರುವ ತನ್ನ ಪ್ರಿಯತಮರ ಕಡೆಗೆ ಇಸ್ರೇಲು ಹೋದನು.
    ಆದರೆ ನಾನು ಇಸ್ರೇಲರನ್ನು ಒಟ್ಟುಸೇರಿಸುವೆನು.
ಆದರೆ ಅದರ ಮೊದಲು ಆ ಬಲಿಷ್ಠ ರಾಜನ ಕೈಯಿಂದ
    ಅವರ ಸಂಕಟ ಅನುಭವಿಸಬೇಕು.

ಇಸ್ರೇಲು ಯೆಹೋವನನ್ನು ಮರೆತು ವಿಗ್ರಹಗಳನ್ನು ಪೂಜಿಸಿದ್ದು

11 “ಎಫ್ರಾಯೀಮ್ ಹೆಚ್ಚೆಚ್ಚಾಗಿ ಯಜ್ಞವೇದಿಕೆಗಳನ್ನು ಕಟ್ಟಿಸಿದನು.
    ಅದು ಪಾಪವಾಗಿತ್ತು.
    ಆ ವೇದಿಕೆಗಳ ಮೇಲೆಯೇ ಅವರು ಪಾಪಮಾಡಿದರು.
12 ಎಫ್ರಾಯೀಮನಿಗೆ ನಾನು ಸಾವಿರಾರು ವಿಧಿನಿಯಮಗಳನ್ನು ಬರೆದರೂ
    ಅವನು ಅವುಗಳನ್ನು ಬೇರೆಯವರಿಗಾಗಿ ಬರೆದದೆ ಎಂದು ತಿಳಿದುಕೊಳ್ಳುವನು.
13 ಇಸ್ರೇಲರು ಯಜ್ಞವನ್ನು ಪ್ರೀತಿಸುತ್ತಾರೆ.
    ಅವರು ಮಾಂಸವನ್ನು ಯಜ್ಞಮಾಡಿ ತಿನ್ನುತ್ತಾರೆ.
ಯೆಹೋವನು ಅವರ ಯಜ್ಞವನ್ನು ಸ್ವೀಕರಿಸುವುದಿಲ್ಲ.
    ಅವರ ಪಾಪಗಳನ್ನು ತನ್ನ ನೆನಪಿಗೆ ತಂದು
ಅವರನ್ನು ಶಿಕ್ಷಿಸುವನು.
    ಅವರು ಈಜಿಪ್ಟಿಗೆ ಸೆರೆಯಾಳುಗಳಾಗಿ ಒಯ್ಯಲ್ಪಡುವರು.
14 ಇಸ್ರೇಲರು ರಾಜರ ಅರಮನೆಗಳನ್ನು ಕಟ್ಟಿದರು.
    ಆದರೆ ಅದರ ನಿರ್ಮಾಣಿಕನನ್ನು ಮರೆತರು.
ಯೆಹೂದವು ಕೋಟೆಗಳನ್ನು ಕಟ್ಟುತ್ತಾನೆ;
    ಆದರೆ ಯೆಹೂದದ ಪಟ್ಟಣಗಳ ಮೇಲೆ ನಾನು ಬೆಂಕಿಯನ್ನು ಕಳುಹಿಸುವೆನು.
    ಆ ಬೆಂಕಿಯು ಅರಮನೆಗಳನ್ನು ನಾಶಮಾಡುವದು.”

ಸೆರೆವಾಸದ ದುಃಖ

ಇಸ್ರೇಲೇ, ಇತರ ಜನಾಂಗಗಳವರಂತೆ ಹಬ್ಬವನ್ನು ಆಚರಿಸಬೇಡ, ಉಲ್ಲಾಸಗೊಳ್ಳಬೇಡ. ನೀನು ವೇಶ್ಯೆಯಂತೆ ವರ್ತಿಸಿ ನಿನ್ನ ದೇವರನ್ನು ತೊರೆದುಬಿಟ್ಟೆ. ಪ್ರತಿಯೊಂದು ಕಣದ ಮೇಲೆ ಲೈಂಗಿಕ ಪಾಪವನ್ನು ನಡೆಸಿದಿ. ಆದರೆ ಆ ಕಣದಲ್ಲಿ ತೂರಿದ ಧಾನ್ಯವು ಇಸ್ರೇಲಿಗೆ ಸಾಕಾಗುವಷ್ಟು ಆಹಾರವನ್ನು ಒದಗಿಸದು. ಇಸ್ರೇಲಿಗೆ ಬೇಕಾಗುವಷ್ಟು ದ್ರಾಕ್ಷಾರಸವಿರದು.

ಯೆಹೋವನ ದೇಶದಲ್ಲಿ ಇಸ್ರೇಲು ವಾಸಿಸದು. ಎಫ್ರಾಯೀಮ್ ಈಜಿಪ್ಟಿಗೆ ಹಿಂದಿರುಗುವದು. ಅಶ್ಶೂರ್ಯದಲ್ಲಿ ಅವರು ತಮಗೆ ನಿಷೇಧಿಸಲ್ಪಟ್ಟ ಆಹಾರವನ್ನು ತಿನ್ನುವರು. ಇಸ್ರೇಲರು ಯೆಹೋವನಿಗೆ ದ್ರಾಕ್ಷಾರಸದ ಸಮರ್ಪಣೆ ಮಾಡುವದಿಲ್ಲ. ಆತನಿಗೆ ಯಜ್ಞವನ್ನರ್ಪಿಸುವದಿಲ್ಲ. ಅವರ ಯಜ್ಞಗಳು ಸಮಾಧಿಗಳಲ್ಲಿ ಉಣ್ಣುವ ಆಹಾರದಂತಿರುವದು. ಅದನ್ನು ಯಾವನಾದರೂ ಉಂಡಲ್ಲಿ ಅವನು ಅಶುದ್ಧನಾಗುವನು. ಅವರ ರೊಟ್ಟಿಯು ದೇವರ ಆಲಯದೊಳಗೆ ಇಡಲ್ಪಡುವದಿಲ್ಲ. ಅವರೇ ಅದನ್ನು ತಿನ್ನಬೇಕು. ಯೆಹೋವನ ಹಬ್ಬಗಳನ್ನಾಗಲಿ ವಿಶ್ರಾಂತಿ ದಿನವನ್ನಾಗಲಿ ಅವರಿಗೆ ಆಚರಿಸಲಾಗದು.

ಶತ್ರುಗಳು ಇಸ್ರೇಲರಿಂದ ಎಲ್ಲವನ್ನು ದೋಚಿಕೊಂಡು ಹೋದುದರಿಂದ ಇಸ್ರೇಲರು ಬಿಟ್ಟು ಹೊರಟರು. ಈಜಿಪ್ಟ್ ಅವರನ್ನು ಒಟ್ಟಿಗೆ ಸೇರಿಸಿಕೊಳ್ಳುವುದು. ಮೆಂಫಿಸ್ ಪಟ್ಟಣವು ಅವರನ್ನು ಹೂಳಿಡುವದು. ಅವರ ಬೆಳ್ಳಿಯ ನಿಕ್ಷೇಪದ ಮೇಲೆ ಕಳೆ ಬೆಳೆಯುವದು. ಇಸ್ರೇಲರು ವಾಸಿಸಿದ್ದಲ್ಲಿ ಮುಳ್ಳಿನ ಗಿಡಗಳು ಬೆಳೆಯುವವು.

ನಿಜ ಪ್ರವಾದಿಗಳನ್ನು ಇಸ್ರೇಲ್ ನಿರಾಕರಿಸಿದರು

ಪ್ರವಾದಿಯು ಹೀಗೆ ಹೇಳುತ್ತಾನೆ, “ಇಸ್ರೇಲೇ, ಇದನ್ನು ಕಲಿತುಕೋ. ಶಿಕ್ಷೆಯ ಸಮಯವು ಬಂದದೆ. ನೀನು ಮಾಡಿದ ದುಷ್ಟತನಕ್ಕೆ ಪ್ರತಿಯಾಗಿ ದೊರಕಬೇಕಾದ ಸಂಬಳ (ಫಲ)ದ ಸಮಯವು ಬಂತು.” ಆದರೆ ಇಸ್ರೇಲ್ ಜನರು ಹೀಗೆ ಹೇಳುತ್ತಾರೆ: “ಪ್ರವಾದಿಯು ಮೂರ್ಖನಾಗಿದ್ದಾನೆ. ದೇವರಾತ್ಮನುಳ್ಳ ಈ ಮನುಷ್ಯನು ಹುಚ್ಚನಾಗಿದ್ದಾನೆ.” ಪ್ರವಾದಿಯು ಹೀಗೆ ಹೇಳಿದನು, “ನಿನ್ನ ಕೆಟ್ಟ ಪಾಪಗಳಿಗಾಗಿ ನೀನು ಶಿಕ್ಷಿಸಲ್ಪಡುವೆ. ನೀನು ಹಗೆ ಮಾಡಿದುದಕ್ಕೆ ನೀನು ಶಿಕ್ಷೆ ಅನುಭವಿಸುವೆ.” ದೇವರೂ ಪ್ರವಾದಿಯೂ ಕಾವಲುಗಾರರಂತೆ ಎಫ್ರಾಯೀಮನ್ನು ಕಾಪಾಡುತ್ತಿದ್ದಾರೆ. ಆದರೆ ದಾರಿಯಲ್ಲಿ ಅನೇಕ ಉರುಲುಗಳಿವೆ. ಜನರು ಪ್ರವಾದಿಯನ್ನು ಹಗೆ ಮಾಡುತ್ತಾರೆ. ದೇವರ ಆಲಯದಲ್ಲಿಯೂ ಅವನನ್ನು ಹಗೆ ಮಾಡುತ್ತಾರೆ.

ಗಿಬ್ಯದ ಕಾಲದಂತೆ ಇಸ್ರೇಲರು ನಾಶನದ ಕಡೆಗೆ ಆಳವಾಗಿ ಇಳಿದಿದ್ದಾರೆ. ಯೆಹೋವನು ಇಸ್ರೇಲರ ಪಾಪಗಳನ್ನು ತನ್ನ ನೆನಪಿಗೆ ತಂದುಕೊಂಡು ಅವರನ್ನು ಶಿಕ್ಷಿಸುವನು.

ವಿಗ್ರಹಾರಾಧನೆಯಿಂದ ಇಸ್ರೇಲ್ ನಾಶವಾಗುತ್ತಿದೆ

10 “ನನಗೆ ಇಸ್ರೇಲ್ ಜನಾಂಗವು ಮರುಭೂಮಿಯಲ್ಲಿ ದೊರಕಿದ ದ್ರಾಕ್ಷಿಹಣ್ಣಿನಂತಿತ್ತು. ನಿನ್ನ ಪೂರ್ವಿಕರು ಫಲಕಾಲದ ಆರಂಭದಲ್ಲಿ ದೊರೆತ ಅಂಜೂರದ ಹಣ್ಣಿನಂತಿದ್ದರು. ಆದರೆ ಅವರು ಬಾಳ್‌ಪೆಗೋರಿಗೆ ಬಂದಾಗ ಅವರು ಬದಲಾದರು. ಅವರು ಕೊಳೆತುಹೋದ ವಸ್ತುವಿನಂತೆ ಆದರು. ಅವರು ಪ್ರೀತಿಸಿದ ಭಯಂಕರ ವಿಗ್ರಹಗಳಂತೆ ಆದರು.

ಇಸ್ರೇಲರಿಗೆ ಸಂತಾನವೃದ್ಧಿಯಾಗದು

11 “ಎಫ್ರಾಯೀಮ್ಯರ ಮಹಿಮೆಯು ಪಕ್ಷಿಯಂತೆ ಹಾರಿ ಹೋಗುವದು. ಅವರಲ್ಲಿ ಗರ್ಭಿಣಿಯರು ಇರುವದಿಲ್ಲ. ಹೆರುವದೂ ಇಲ್ಲ. ಶಿಶುಗಳೂ ಇರುವದಿಲ್ಲ. 12 ಒಂದುವೇಳೆ ಇಸ್ರೇಲರಿಗೆ ಮಕ್ಕಳು ಹುಟ್ಟಿದರೂ ಪ್ರಯೋಜನವಿಲ್ಲ. ಯಾಕೆಂದರೆ ಆ ಮಕ್ಕಳನ್ನು ಅವರಿಂದ ತೆಗೆದುಬಿಡುವೆನು. ನಾನು ಅವರನ್ನು ತೊರೆದುಬಿಡುವೆನು. ಆಗ ಅವರಿಗೆ ಸಂಕಟದ ಮೇಲೆ ಸಂಕಟವು ಪ್ರಾಪ್ತಿಯಾಗುವದು.”

13 ಎಫ್ರಾಯೀಮನು ತನ್ನ ಮಕ್ಕಳನ್ನು ಉರುಲಿನ ಕಡೆಗೆ ನಡೆಸುತ್ತಿರುವದನ್ನು ನಾನು ನೋಡುತ್ತಿದ್ದೇನೆ. ಕೊಲೆಗಡುಕನೆದುರು ಎಫ್ರಾಯೀಮನು ತನ್ನ ಮಕ್ಕಳನ್ನು ತರುತ್ತಿದ್ದಾನೆ. 14 ಯೆಹೋವನೇ, ನಿನ್ನ ಇಚ್ಛೆಯ ಪ್ರಕಾರ ಅವರಿಗೆ ಕೊಡು. ಮಗುವನ್ನು ಹೆರಲಾರದ ಗರ್ಭವನ್ನು ಅವರಿಗೆ ಕೊಡು. ಮೊಲೆಹಾಲು ಉಣಿಸಲಾರದ ಸ್ತನಗಳನ್ನು ಅವರಿಗೆ ಕೊಡು.

15 ಅವರ ದುಷ್ಟತನವೆಲ್ಲಾ ಗಿಲ್ಗಾಲಿನಲ್ಲಿದೆ.
    ಅಲ್ಲಿಯೇ ನಾನು ಅವರನ್ನು ದ್ವೇಷಿಸಲು ಪ್ರಾರಂಭಿಸಿದೆನು.
ಅವರು ಮಾಡುವ ದುಷ್ಕೃತ್ಯಗಳ ದೆಸೆಯಿಂದ
    ನಾನು ಅವರನ್ನು ನನ್ನ ಮನೆಯಿಂದ ಹೊರಡಿಸುವೆನು.
ಇನ್ನು ಮುಂದೆ ಅವರನ್ನು ನಾನು ಪ್ರೀತಿಸುವುದಿಲ್ಲ.
    ಅವರ ನಾಯಕರು ನನಗೆ ವಿರುದ್ಧವಾಗಿ ದಂಗೆ ಎದ್ದವರು; ನನ್ನ ವಿರುದ್ಧವಾಗಿ ತಿರುಗಿಬಿದ್ದರು.
16 ಎಫ್ರಾಯೀಮ್ ಶಿಕ್ಷಿಸಲ್ಪಡುವುದು.
    ಅದರ ಬೇರು ಒಣಗುತ್ತಲಿದೆ.
    ಇನ್ನು ಅವರಿಗೆ ಮಕ್ಕಳಾಗದು.
ಒಂದುವೇಳೆ ಮಕ್ಕಳಾದಲ್ಲಿ
    ಅವರ ದೇಹದಿಂದ ಬರುವ ಆ ಅಮೂಲ್ಯ ಶಿಶುವನ್ನು ನಾನು ಸಾಯಿಸುವೆನು.
17 ಆ ಜನರು ನನ್ನ ದೇವರ ಮಾತನ್ನು ಕೇಳಲೊಲ್ಲರು.
    ಆದ್ದರಿಂದ ಆತನು ಅವರಿಗೆ ಕಿವಿಗೊಡುವದಿಲ್ಲ;
ಅವರು ದೇಶದೇಶಗಳಲ್ಲಿ ವಾಸಸ್ಥಾನಗಳಿಲ್ಲದೆ ಅಲೆಯುವರು.

ಇಸ್ರೇಲರು ಧನಿಕರಾದುದರಿಂದ ವಿಗ್ರಹಾರಾಧನೆಗೆ ನಡಿಸಲ್ಪಟ್ಟರು

10 ಇಸ್ರೇಲ್ ಅಧಿಕ ಹಣ್ಣುಗಳನ್ನು
    ಕೊಡುವ ದ್ರಾಕ್ಷಿಬಳ್ಳಿಯಂತಿದೆ.
ಆದರೆ ಇಸ್ರೇಲ್ ಅಭಿವೃದ್ಧಿ ಹೊಂದಿದ ಹಾಗೆ
    ಅವರು ಸುಳ್ಳುದೇವರುಗಳನ್ನು ಪೂಜಿಸಲು ಹೆಚ್ಚುಹೆಚ್ಚು ವೇದಿಕೆಗಳನ್ನು ಕಟ್ಟಿದರು.
ಅವರ ದೇಶವು ಉತ್ತಮವಾಗುತ್ತಾ ಬರುತ್ತಿರುವಾಗ
    ಅವರು ತಮ್ಮ ಸುಳ್ಳುದೇವರುಗಳಿಗೆ ಉತ್ತಮ ಕಲ್ಲುಗಳಿಂದ ವೇದಿಕೆಗಳನ್ನು ಕಟ್ಟಲು ಪ್ರಾರಂಭಿಸಿದರು.
ಇಸ್ರೇಲ್ ಜನರು ದೇವರನ್ನು ಮೋಸಪಡಿಸಲು ನೋಡಿದರು.
    ಆದರೆ ಈಗ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಯೆಹೋವನು ಅವರು ಯಜ್ಞವೇದಿಕೆಗಳನ್ನು ನಾಶಮಾಡುವನು.
    ಅವರ ಸ್ಮಾರಕಕಲ್ಲುಗಳನ್ನು ಆತನು ಪುಡಿ ಮಾಡುವನು.

ಇಸ್ರೇಲರ ದುಷ್ಟ ಯೋಜನೆಗಳು

ಈಗ ಇಸ್ರೇಲರು ಹೇಳುವುದೇನೆಂದರೆ, “ನಮಗೆ ರಾಜನಿಲ್ಲ, ನಾವು ಯೆಹೋವನನ್ನು ಗೌರವಿಸುವದಿಲ್ಲ. ಆತನ ಅರಸನು ನಮಗೇನೂ ಮಾಡಲು ಸಾಧ್ಯವಿಲ್ಲ.”

ಅವರು ವಾಗ್ದಾನ ಮಾಡುತ್ತಾರೆ. ಆದರೆ ಅದು ಕೇವಲ ಸುಳ್ಳು, ಅವರು ಕೊಟ್ಟ ಮಾತನ್ನು ನಡಿಸುವದಿಲ್ಲ. ಬೇರೆ ದೇಶಗಳವರೊಂದಿಗೆ ಅವರು ಒಪ್ಪಂದ ಮಾಡುತ್ತಾರೆ. ದೇವರು ಆ ಒಪ್ಪಂದವನ್ನು ಒಪ್ಪುವುದಿಲ್ಲ. ಅವರ ನ್ಯಾಯಾಧೀಶರು ಉತ್ತ ಹೊಲದಲ್ಲಿ ಬೆಳೆಯುವ ವಿಷದ ಹಣಜಿಯಂತಿದ್ದಾರೆ.

ಸಮಾರ್ಯದ ಜನರು ಬೇತಾವೆನಿನಲ್ಲಿ ಬಸವನನ್ನು ಆರಾಧಿಸುತ್ತಾರೆ. ಆ ಜನರು ನಿಜವಾಗಿಯೂ ಅಳುವರು. ಅವರ ಪೂಜಾರಿಗಳೂ ಅಳುವರು, ಯಾಕೆಂದರೆ ಅವರ ಸುಂದರವಾದ ವಿಗ್ರಹವು ಇಲ್ಲವಾಗುವದು. ಅದು ಒಯ್ಯಲ್ಪಡುವುದು. ಅಶ್ಶೂರದ ಅರಸನಿಗೆ ಬಹುಮಾನವಾಗಿ ಅದು ಒಯ್ಯಲ್ಪಡುವುದು; ಅವನು ಇಸ್ರೇಲರ ನಾಚಿಕೆಗೆಟ್ಟ ವಿಗ್ರಹವನ್ನು ಇಟ್ಟುಕೊಳ್ಳುವನು. ಇಸ್ರೇಲ್ ತನ್ನ ವಿಗ್ರಹಕ್ಕಾಗಿ ನಾಚಿಕೆಪಡುವದು. ಸಮಾರ್ಯದ ಸುಳ್ಳುದೇವರು ನಾಶಮಾಡಲ್ಪಡುವದು. ಅದು ಮರದ ಹಲಗೆಯ ತುಂಡೊಂದು ನೀರಿನ ಮೇಲೆ ತೇಲುವಂತಿರುವದು.

ಇಸ್ರೇಲ್ ಪಾಪ ಮಾಡುತ್ತಾ ಇನ್ನೂ ಹೆಚ್ಚಾಗಿ ಎತ್ತರವಾದ ಸ್ಥಳಗಳನ್ನು ಕಟ್ಟಿತು. ಆವೆನ್‌ನಲ್ಲಿರುವ ಎತ್ತರವಾದ ಸ್ಥಳ ನಾಶಮಾಡಲ್ಪಡುವದು. ಅದರ ಮೇಲೆ ಮುಳ್ಳುಗಿಡಗಳೂ ಹಣಜಿಗಳೂ ಬೆಳೆಯುವವು. ಆಗ ಅವರು ಪರ್ವತಗಳಿಗೆ, “ನಮ್ಮನ್ನು ಮುಚ್ಚಿರಿ” ಎಂದೂ ಬೆಟ್ಟಗಳಿಗೆ, “ನಮ್ಮ ಮೇಲೆ ಬೀಳಿರಿ” ಎಂದೂ ಹೇಳುವರು.

ಇಸ್ರೇಲ್ ತನ್ನ ಪಾಪದ ಪ್ರತಿಫಲವನ್ನು ಅನುಭವಿಸುವದು

“ಇಸ್ರೇಲೇ, ನೀನು ಗಿಬ್ಯದವರ ಕಾಲದಿಂದಲೂ ಪಾಪ ಮಾಡುತ್ತಲೇ ಬಂದಿರುವೆ. (ಆ ಜನರು ಅಲ್ಲಿ ಪಾಪವನ್ನು ಮಾಡುತ್ತಲೇ ಇದ್ದಾರೆ.) ಗಿಬ್ಯದ ಆ ದುಷ್ಟ ಜನರನ್ನು ಯುದ್ಧವು ಹಿಡಿದುಕೊಳ್ಳುವುದು. 10 ಅವರನ್ನು ಶಿಕ್ಷಿಸಲು ನಾನು ಬರುವೆನು. ಸೈನ್ಯಗಳು ಒಟ್ಟಾಗಿ ಅವರಿಗೆ ವಿರುದ್ಧವಾಗಿ ಬರುವವು. ಅವರು ಬಂದು ಇಸ್ರೇಲರನ್ನು ಅವರಿಬ್ಬರ ಪಾಪಗಳಿಗಾಗಿ ಶಿಕ್ಷಿಸುವರು.

11 “ಎಫ್ರಾಯೀಮ್ ಹತೋಟಿಗೆ ಬಂದು ಕಣ ತುಳಿಯಲು ಇಷ್ಟಪಡುವ ಪ್ರಾಯದ ಹಸುವಿನಂತಿದೆ. ಆಕೆಯ ಕುತ್ತಿಗೆಗೆ ನಾನು ಒಂದು ಒಳ್ಳೆಯ ನೊಗವನ್ನಿಡುವೆನು. ಎಫ್ರಾಯೀಮನಿಗೆ ನಾನು ಹಗ್ಗದಿಂದ ಬಂಧಿಸುವೆನು. ಆಗ ಯೆಹೂದವು ಭೂಮಿಯನ್ನು ಉಳುವದು. ಯಾಕೋಬನು ಮಣ್ಣಿನ ಗೆಡ್ಡೆಗಳನ್ನು ಒಡೆದು ಪುಡಿಮಾಡುವನು.”

12 ನೀನು ಒಳ್ಳೆಯತನವನ್ನು ಬಿತ್ತಿದರೆ ಪ್ರೀತಿಯೆಂಬ ಬೆಳೆಯನ್ನು ಕೊಯ್ಯುವೆ. ನಿನ್ನ ನೆಲವನ್ನು ಉಳುಮೆ ಮಾಡು. ಆಗ ನೀನು ಯೆಹೋವನೊಂದಿಗೆ ಬೆಳೆಯನ್ನು ಕೊಯ್ಯುವೆ. ಆತನು ಬರುವನು. ಮತ್ತು ಆತನ ಒಳ್ಳೆಯತನವು ನಿನ್ನ ಮೇಲೆ ಮಳೆಯಂತೆ ಸುರಿಯುವದು.

13 ಆದರೆ ನೀನು ದುಷ್ಟತನವನ್ನು ಬಿತ್ತಿ ಸಂಕಟವೆಂಬ ಬೆಳೆಯನ್ನು ಕೊಯ್ದಿರುವೆ. ನಿನ್ನ ಸುಳ್ಳಿನ ಪ್ರತಿಫಲವನ್ನು ತಿಂದಿರುವೆ. ಯಾಕೆಂದರೆ ನೀನು ನಿನ್ನ ಸಾಮರ್ಥ್ಯ ಮತ್ತು ನಿನ್ನ ಸೈನ್ಯದ ಮೇಲೆ ಭರವಸವಿಟ್ಟಿರುವೆ. 14 ನಿನ್ನ ಸೈನ್ಯಕ್ಕೆ ರಣರಂಗದ ಸ್ವರವು ಕೇಳಿಸುವದು. ನಿನ್ನ ಕೋಟೆಗಳೆಲ್ಲವೂ ಕೆಡವಲ್ಪಡುವದು. ಬೇತ್‌ಅರ್ಬೇಲನ್ನು ಶಲ್ಮಾನನು ಕೆಡವಿದಂತೆ ಆಗುವದು. ಆ ಯುದ್ಧದ ಸಮಯದಲ್ಲಿ ತಾಯಿಯು ತನ್ನ ಮಕ್ಕಳೊಂದಿಗೆ ಕೊಲ್ಲಲ್ಪಡುವಳು. 15 ಆ ದಿನದಲ್ಲಿ ಬೇತೇಲು ನಿನಗೆ ಆ ದುರ್ಗತಿಯನ್ನು ತರುವದು. ಯಾಕೆಂದರೆ ನೀನು ಅನೇಕ ಕೆಟ್ಟಕಾರ್ಯಗಳನ್ನು ಮಾಡಿರುವೆ. ಅದು ಪ್ರಾರಂಭವಾದಾಗ ಇಸ್ರೇಲಿನ ಅರಸನು ಸಂಪೂರ್ಣವಾಗಿ ನಾಶವಾಗುವನು.

ಇಸ್ರೇಲು ಯೆಹೋವನನ್ನು ಮರೆತುಬಿಟ್ಟಿದೆ

11 “ಯೆಹೋವನಾದ ನಾನು ಇಸ್ರೇಲನ್ನು ಸಣ್ಣ ಮಗುವಾಗಿದ್ದಾಗಲೇ ಪ್ರೀತಿಸಿದೆನು.
    ನನ್ನ ಮಗನನ್ನು ಈಜಿಪ್ಟಿನಿಂದ ಹೊರಕರೆದೆನು.
ಎಷ್ಟು ಹೆಚ್ಚಾಗಿ ನಾನು ಇಸ್ರೇಲರನ್ನು ಕರೆದೆನೋ
    ಅಷ್ಟೇ ಹೆಚ್ಚಾಗಿ ಅವರು ನನ್ನನ್ನು ತೊರೆದರು.
ಇಸ್ರೇಲರು ಬಾಳನ ವಿಗ್ರಹಗಳಿಗೆ ಯಜ್ಞವನ್ನರ್ಪಿಸಿದರು.
    ವಿಗ್ರಹಗಳಿಗೆ ಧೂಪ ಹಾಕಿದರು.

“ಆದರೆ ಎಫ್ರಾಯೀಮನಿಗೆ ನಡೆಯಲು ಕಲಿಸಿದ್ದು ನಾನು.
    ಇಸ್ರೇಲರನ್ನು ನಾನು ನನ್ನ ತೋಳುಗಳಲ್ಲಿ ಎತ್ತಿಕೊಂಡೆನು.
ನಾನು ಅವರನ್ನು ಗುಣಪಡಿಸಿದೆನು.
    ಆದರೆ ಅವರಿಗೆ ಅದು ಗೊತ್ತಿಲ್ಲ.
ನಾನು ಅವರನ್ನು ಪ್ರೀತಿ ಎಂಬ ಹಗ್ಗಗಳಿಂದ
    ಹತ್ತಿರಕ್ಕೆ ಎಳೆದುಕೊಂಡೆನು.
ಅವರಿಗೆ ಸ್ವತಂತ್ರವನ್ನು ಕೊಟ್ಟೆನು.
    ನಾನು ಬಾಗಿ ಅವರಿಗೆ ಉಣಿಸಿದೆನು.

“ದೇವರ ಕಡೆಗೆ ಹಿಂದಿರುಗಲು ಇಸ್ರೇಲರಿಗೆ ಮನಸ್ಸಿಲ್ಲ. ಆದ್ದರಿಂದ ಅವರು ಈಜಿಪ್ಟಿಗೆ ಹೋಗುವರು. ಅಶ್ಶೂರದ ಅರಸನು ಅವರಿಗೆ ಅರಸನಾಗುವನು. ಅವರ ನಗರದ ಮೇಲೆ ಖಡ್ಗವು ಬೀಸಲ್ಪಟ್ಟು ಅವರ ಬಲಿಷ್ಠರನ್ನು ಸಾಯಿಸುವದು; ಅವರ ನಾಯಕರನ್ನು ನಾಶಮಾಡುವದು.

“ನಾನು ಹಿಂದಿರುಗುವೆನೆಂದು ನನ್ನ ಜನರು ಎದುರು ನೋಡುತ್ತಿದ್ದಾರೆ. ಅವರು ಉನ್ನತದಲ್ಲಿರುವ ದೇವರಿಗೆ ಮೊರೆಯಿಡುತ್ತಿದ್ದಾರೆ. ಆದರೆ ದೇವರು ಅವರಿಗೆ ಸಹಾಯ ಮಾಡುವದಿಲ್ಲ.”

ಇಸ್ರೇಲನ್ನು ನಾಶಮಾಡಲು ಯೆಹೋವನು ಇಷ್ಟಪಡುವದಿಲ್ಲ

“ಎಫ್ರಾಯೀಮೇ, ನಿನ್ನನ್ನು ಬಿಟ್ಟುಬಿಡಲು ನನಗೆ ಇಷ್ಟವಿಲ್ಲ.
    ಇಸ್ರೇಲೇ, ನಿನ್ನನ್ನು ಸಂರಕ್ಷಿಸಲು ನನಗೆ ಇಷ್ಟ.
ನಿನ್ನನ್ನು ಅದ್ಮದಂತೆ ಮಾಡಲು ನನಗೆ ಮನಸ್ಸಿಲ್ಲ.
    ನಿನ್ನನ್ನು ಜೆಬೊಯೀಮಿನಂತೆ ಮಾಡಲು ನನಗೆ ಮನಸ್ಸಿಲ್ಲ.
ನಾನು ನನ್ನ ನಿರ್ಧಾರವನ್ನು ಬದಲಾಯಿಸುತ್ತಿದ್ದೇನೆ.
    ನಿನ್ನ ಮೇಲಿರುವ ನನ್ನ ಪ್ರೀತಿಯು ಆಳವಾಗಿದೆ.
ನನ್ನ ಭಯಂಕರವಾದ ಕೋಪವು ಮೇಲುಗೈ ಸಾಧಿಸುವದಿಲ್ಲ.
    ಎಫ್ರಾಯೀಮನನ್ನು ನಾನು ತಿರುಗಿ ನಾಶಮಾಡುವದಿಲ್ಲ.
ನಾನು ದೇವರು, ನರಮನುಷ್ಯನಲ್ಲ.
    ನಾನು ಪವಿತ್ರನು,
ನಿನ್ನೊಂದಿಗಿರುವೆನು.
    ನನ್ನ ಕೋಪವನ್ನು ಪ್ರದರ್ಶಿಸೆನು.
10 ನಾನು ಸಿಂಹದಂತೆ ಗರ್ಜಿಸುವೆನು.
    ನಾನು ಗರ್ಜಿಸುವಾಗ ನನ್ನ ಮಕ್ಕಳು ಬರುವರು ಮತ್ತು ನನ್ನನ್ನು ಹಿಂಬಾಲಿಸುವರು.
ಪಶ್ಚಿಮದಿಂದ ನನ್ನ ಮಕ್ಕಳು
    ಹೆದರಿ ನಡುಗುತ್ತಾ ಬರುವರು.
11 ಈಜಿಪ್ಟಿನಿಂದ ಅವರು ಪಕ್ಷಿಗಳಂತೆ
    ನಡುಗುತ್ತಾ ಬರುವರು.
ಅಶ್ಶೂರದಿಂದ ನಡುಗುವ ಪಾರಿವಾಳಗಳ ರೀತಿಯಲ್ಲಿ ಬರುವರು.
    ಆಗ ನಾನು ಅವರನ್ನು ಮನೆಗೆ ಕರೆದುಕೊಂಡು ಹೋಗುವೆನು.
    ಇದು ಯೆಹೋವನ ನುಡಿ.

12 “ಎಫ್ರಾಯೀಮನು ಸುಳ್ಳುದೇವರುಗಳಿಂದ ನನ್ನನ್ನು ಸುತ್ತುವರಿದನು.
    ಇಸ್ರೇಲಿನ ಜನರು ನನಗೆ ವಿರುದ್ಧವಾಗಿ ಎದ್ದರು. ಆದರೆ ಅವರು ನಾಶವಾದರು.
ಯೆಹೂದನು ಈಗಲೂ ದೇವರ ಜೊತೆಯಲ್ಲಿ ನಡೆಯುತ್ತಿದ್ದಾನೆ.
    ಯೆಹೂದನು ಪರಿಶುದ್ಧರಿಗೆ ನಿಷ್ಠೆಯಿಂದಿದ್ದಾನೆ.”

ಯೆಹೋವನು ಇಸ್ರೇಲಿಗೆ ವಿರುದ್ಧವಾಗಿದ್ದಾನೆ

12 ಎಫ್ರಾಯೀಮ್ ಸಮಯವನ್ನು ಹಾಳು ಮಾಡುತ್ತಿದ್ದಾನೆ. ಇಸ್ರೇಲು ದಿನವಿಡೀ ಗಾಳಿಯನ್ನು ಹಿಮ್ಮೆಟ್ಟುತ್ತಿದ್ದಾನೆ. ಜನರು ಹೆಚ್ಚೆಚ್ಚಾಗಿ ಸುಳ್ಳು ಹೇಳುತ್ತಿದ್ದಾರೆ; ಹೆಚ್ಚೆಚ್ಚಾಗಿ ಕದಿಯುತ್ತಾರೆ. ಅಶ್ಶೂರ್ಯದವರೊಂದಿಗೆ ಒಪ್ಪಂದ ಮಾಡಿರುತ್ತಾರೆ. ತಮ್ಮ ಆಲೀವ್ ಎಣ್ಣೆಯನ್ನು ಈಜಿಪ್ಟಿಗೆ ಕೊಂಡೊಯ್ಯುತ್ತಿದ್ದಾರೆ.

ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿಗೆ ವಿರುದ್ಧವಾಗಿ ನಾನು ವಾದ ಮಾಡುತ್ತೇನೆ. ತಾನು ಮಾಡಿದ ಸಂಗತಿಗಳಿಗಾಗಿ ಯಾಕೋಬನು ಶಿಕ್ಷೆ ಅನುಭವಿಸಬೇಕು. ತನ್ನ ತಾಯಿಯ ಗರ್ಭದಲ್ಲಿರುವಾಗಲೇ ಯಾಕೋಬನು ತನ್ನ ಅಣ್ಣನಿಗೆ ಮೋಸ ಮಾಡಲು ಪ್ರಾರಂಭಮಾಡಿದ್ದನು. ಯಾಕೋಬನು ಬಲಶಾಲಿಯಾದ ಯೌವನಸ್ಥನು. ಆಗ ಅವನು ದೇವರೊಂದಿಗೆ ಹೋರಾಡಿದನು. ಯಾಕೋಬನು ದೇವದೂತನೊಡನೆ ಹೋರಾಡಿ ಗೆದ್ದನು. ಅವನು ಕನಿಕರಕ್ಕಾಗಿ ಮೊರೆಯಿಟ್ಟನು. ಇದು ಬೇತೇಲ್ ಎಂಬಲ್ಲಿ ನಡೆಯಿತು. ಆ ಸ್ಥಳದಲ್ಲಿ ಆತನು ನಮ್ಮೊಂದಿಗೆ ಮಾತನಾಡಿದನು. ಹೌದು ಯೆಹೋವನು ಸೈನ್ಯಗಳ ದೇವರಾಗಿದ್ದಾನೆ. ಆತನ ಹೆಸರು ಯೆಹೋವನು. ಆದ್ದರಿಂದ ನಿನ್ನ ಯೆಹೋವನ ಬಳಿಗೆ ಹಿಂದಿರುಗಿ ಬಾ. ಆತನಿಗೆ ವಿಧೇಯನಾಗಿರು. ಸರಿಯಾಗಿರುವದನ್ನೇ ಮಾಡು. ಯಾವಾಗಲೂ ನಿನ್ನ ದೇವರ ಮೇಲೆ ಭರವಸವಿಡು.

“ಯಾಕೋಬನು ಒಬ್ಬ ವ್ಯಾಪಾರಿ.[a] ಅವನು ತನ್ನ ಸ್ನೇಹಿತನಿಗೇ ಮೋಸಮಾಡುತ್ತಾನೆ. ಅವನ ತ್ರಾಸು ಮೋಸದ್ದು, ಎಫ್ರಾಯೀಮು, ‘ನಾನು ಐಶ್ವರ್ಯವಂತನು. ನನ್ನಲ್ಲಿ ನಿಜವಾದ ಐಶ್ವರ್ಯವಿದೆ. ನನ್ನ ಅಪರಾಧಗಳನ್ನು ಯಾರೂ ಕಂಡುಹಿಡಿಯಲಾರರು. ನನ್ನ ದುಷ್ಟತ್ವದ ಬಗ್ಗೆ ಯಾರಿಗೂ ತಿಳಿಯದು’ ಎಂದು ಅನ್ನುತ್ತಾನೆ.

“ಆದರೆ ನೀನು ಈಜಿಪ್ಟ್ ದೇಶದಲ್ಲಿರುವಾಗಲೇ ನಾನು ನಿನ್ನ ದೇವರಾಗಿದ್ದೇನೆ. ನೀನು ಗುಡಾರಗಳಲ್ಲಿ ವಾಸಿಸುವಂತೆ ಮಾಡುವೆನು. 10 ನಾನು ಪ್ರವಾದಿಗಳೊಂದಿಗೆ ಮಾತನಾಡಿದೆನು. ಅವರಿಗೆ ಅನೇಕ ದರ್ಶನಗಳನ್ನು ಕೊಟ್ಟೆನು. ನನ್ನ ಪಾಠಗಳನ್ನು ನಿಮಗೆ ಕಲಿಸುವಂತೆ ಅನೇಕ ಮಾರ್ಗಗಳನ್ನು ಪ್ರವಾದಿಗಳಿಗೆ ತೋರಿಸಿಕೊಟ್ಟೆನು. 11 ಆದರೆ ಗಿಲ್ಯಾದಿನ ಜನರು ಪಾಪ ಮಾಡಿದ್ದಾರೆ. ಅವರ ಬಳಿಯಲ್ಲಿ ಅನೇಕ ಭಯಂಕರವಾದ ವಿಗ್ರಹಗಳಿವೆ. ಗಿಲ್ಗಾಲಿನಲ್ಲಿ ಬಸವನ ವಿಗ್ರಹಗಳಿಗೆ ಜನರು ಯಜ್ಞವನ್ನರ್ಪಿಸುತ್ತಾರೆ. ಅವರಲ್ಲಿ ಅನೇಕ ಯಜ್ಞವೇದಿಕೆಗಳಿವೆ. ಹೇಗೆ ಉಳಿಮೆ ಮಾಡಿದ ಹೊಲದಲ್ಲಿ ಮಣ್ಣಿನ ಸಾಲುಗಳಿರುತ್ತದೋ ಅದೇ ರೀತಿಯಲ್ಲಿ ಅವರ ಬಳಿಯಲ್ಲಿ ವಿಗ್ರಹಗಳ ಸಾಲಿದೆ.

12 “ಯಾಕೋಬನು ಅರಾಮ್ ದೇಶಕ್ಕೆ ಓಡಿಹೋದನು. ಅಲ್ಲಿ ಇಸ್ರೇಲನು ಒಬ್ಬ ಹೆಂಡತಿಗಾಗಿ ಸೇವೆ ಮಾಡಿದನು. ಇನ್ನೊಂದು ಹೆಂಡತಿಯನ್ನು ಮಾಡಿಕೊಳ್ಳಲಿಕ್ಕೆ ಕುರಿಗಳನ್ನು ಕಾಯ್ದನು. 13 ಆದರೆ ದೇವರು ಇಸ್ರೇಲರನ್ನು ಈಜಿಪ್ಟಿನಿಂದ ಹೊರತರುವದಕ್ಕಾಗಿ ಒಬ್ಬ ಪ್ರವಾದಿಯನ್ನು ಉಪಯೋಗಿಸಿದನು. ಇಸ್ರೇಲರನ್ನು ಪ್ರವಾದಿಯ ಮೂಲಕ ಬಿಡಿಸಿದನು. 14 ಆದರೆ ಎಫ್ರಾಯೀಮನು ಯೆಹೋವನನ್ನು ಅತಿಯಾಗಿ ಕೋಪಿಸಿಕೊಳ್ಳುವಂತೆ ಮಾಡಿದನು. ಎಫ್ರಾಯೀಮನು ಅನೇಕ ಮಂದಿಯನ್ನು ಕೊಲೆ ಮಾಡಿದನು. ಅವನ ಅಪರಾಧಗಳಿಗಾಗಿ ಅವನು ಶಿಕ್ಷಿಸಲ್ಪಡುವನು. ಅವನ ದೇವರಾದ ಯೆಹೋವನು ಅವನು ಮಾಡಿದ ಅಪರಾಧಕ್ಕೆ ತಕ್ಕ ದಂಡನೆಯನ್ನು ವಿಧಿಸಿ ಅವಮಾನ ಹೊರುವಂತೆ ಮಾಡುವನು.”

ಇಸ್ರೇಲ್ ತನ್ನನ್ನು ತಾನೇ ನಾಶಮಾಡಿಕೊಂಡಿತು

13 “ಎಫ್ರಾಯೀಮ್ ಇಸ್ರೇಲರೊಳಗೆ ತನ್ನನ್ನು ತಾನೇ ಮುಖ್ಯಸ್ಥನನ್ನಾಗಿ ಮಾಡಿಕೊಂಡನು. ಎಫ್ರಾಯೀಮನು ಮಾತನಾಡಿದಾಗ ಜನರು ಹೆದರಿ ನಡುಗಿದರು. ಆದರೆ ಅವನು ಪಾಪದಲ್ಲಿ ಬಿದ್ದನು. ಬಾಳನನ್ನು ಪೂಜಿಸಲು ಪ್ರಾರಂಭಿಸಿದನು. ಈಗ ಇಸ್ರೇಲರು ಹೆಚ್ಚೆಚ್ಚಾಗಿ ಪಾಪ ಮಾಡುತ್ತಿರುತ್ತಾರೆ. ತಮಗಾಗಿ ವಿಗ್ರಹಗಳನ್ನು ಮಾಡಿಕೊಳ್ಳುತ್ತಾರೆ. ಅಕ್ಕಸಾಲಿಗರು ಬೆಳ್ಳಿಯಿಂದ ವಿಗ್ರಹಗಳನ್ನು ಮಾಡುವರು. ತಾವು ಮಾಡಿದ ಮೂರ್ತಿಗಳೊಂದಿಗೆ ಮಾತನಾಡುವರು. ಆ ವಿಗ್ರಹಗಳಿಗೆ ಯಜ್ಞವನ್ನರ್ಪಿಸುವರು. ಬಂಗಾರದ ಬಸವನ ವಿಗ್ರಹಕ್ಕೆ ಮುದ್ದು ಕೊಡುವರು. ಆದ್ದರಿಂದ ಆ ಜನರು ಬೇಗನೇ ಕಣ್ಮರೆಯಾಗುವರು. ಅವರು ಬೆಳಗಿನ ಜಾವದ ಇಬ್ಬನಿಯಂತೆ ಬೇಗನೇ ಮಾಯವಾಗುವರು. ಇಸ್ರೇಲರು ಕಣದಲ್ಲಿರುವ ಹೊಟ್ಟಿನಂತೆ ಗಾಳಿಯಲ್ಲಿ ಹೊಡೆದುಕೊಂಡು ಹೋಗುವರು. ಇಸ್ರೇಲರು ಮನೆಯೊಳಗಿಂದ ಮೇಲಕ್ಕೆ ಹೊರಟು ಆಮೇಲೆ ಕಾಣದೆಹೋಗುವ ಹೊಗೆಯಂತಿದ್ದಾರೆ.

“ನೀವು ಈಜಿಪ್ಟಿನಲ್ಲಿದ್ದ ದಿವಸಗಳಿಂದ ನಾನೇ ನಿಮ್ಮ ಯೆಹೋವನಾಗಿದ್ದೇನೆ. ನನ್ನ ಹೊರತು ಬೇರೆ ಯಾವ ದೇವರನ್ನೂ ನೀವು ತಿಳಿದಿರಲಿಲ್ಲ. ನನ್ನ ಹೊರತು ಬೇರೆ ಯಾವ ರಕ್ಷಕನೂ ಇಲ್ಲ. ಮರುಭೂಮಿಯಲ್ಲಿ ನಿಮ್ಮನ್ನು ತಿಳಿದುಕೊಂಡಿದ್ದೆನು. ಆ ಒಣಭೂಮಿಯಲ್ಲಿ ನಾನು ನಿಮ್ಮನ್ನು ಬಲ್ಲೆನು. ನಾನು ಇಸ್ರೇಲರಿಗೆ ಆಹಾರ ಒದಗಿಸಿದೆನು. ಅವರು ಆ ಆಹಾರವನ್ನು ಉಂಡು ತಿಂದು ತೃಪ್ತರಾಗಿ ಕೊಬ್ಬೇರಿದ್ದರಿಂದ ನನ್ನನ್ನು ಮರೆತರು.

“ಆದ್ದರಿಂದಲೇ ನಾನು ಅವರಿಗೆ ಸಿಂಹದಂತಿರುವೆನು. ದಾರಿ ಬದಿಯಲ್ಲಿ ಹೊಂಚುಹಾಕುವ ಚಿರತೆಯಂತಿರುವೆನು. ತನ್ನ ಮರಿಗಳನ್ನು ಕಳೆದುಕೊಂಡ ಕರಡಿಯಂತೆ ಅವರ ಮೇಲರಗಿ ಅವರನ್ನು ಗಾಯಗೊಳಿಸಿ ಅವರ ಎದೆಯನ್ನು ಸೀಳಿ ಬಿಡುವೆನು. ನಾನು ಸಿಂಹದಂತೆಯೂ ಕ್ರೂರ ಮೃಗದಂತೆಯೂ ಅವರನ್ನು ಸೀಳಿ ತಿಂದುಬಿಡುವೆನು.”

ದೈವಕೋಪದಿಂದ ಯಾರೂ ಇಸ್ರೇಲರನ್ನು ರಕ್ಷಿಸಲಾರರು

“ಇಸ್ರೇಲೇ, ನಾನು ನಿನಗೆ ಸಹಾಯ ಮಾಡಿದರೂ ನೀನು ನನಗೆ ವಿರೋಧವಾಗಿ ಎದ್ದಿರುವೆ. ಆದ್ದರಿಂದ ನಾನು ನಿನ್ನನ್ನು ನಾಶಮಾಡುವೆನು. 10 ನಿನ್ನ ಅರಸನೆಲ್ಲಿ? ನಿನ್ನ ಯಾವ ಪಟ್ಟಣದಲ್ಲಿಯಾಗಲಿ ಅವನು ನಿನ್ನನ್ನು ರಕ್ಷಿಸಲಾರ. ನಿನ್ನ ನ್ಯಾಯಾಧೀಶರುಗಳೆಲ್ಲಿ? ನೀನು, ‘ನಮಗೆ ರಾಜನನ್ನೂ ನಾಯಕರನ್ನೂ ಕೊಡು’ ಎಂದು ಕೇಳಿಕೊಂಡೆ. 11 ನಾನು ಕೋಪಗೊಂಡೆನು ಮತ್ತು ಒಬ್ಬ ಅರಸನನ್ನು ಕೊಟ್ಟೆನು. ನಾನು ಹೆಚ್ಚಾಗಿ ಕೋಪಗೊಂಡಾಗ ಅವನನ್ನು ತೆಗೆದುಬಿಟ್ಟೆನು.

12 “ಎಫ್ರಾಯೀಮ್ ತನ್ನ ಅಪರಾಧವನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದನು.
    ತಾನು ಮಾಡಿದ ಪಾಪಗಳು ಯಾರಿಗೂ ತಿಳಿದಿಲ್ಲವೆಂದು ಅವನು ಭಾವಿಸಿದನು;
    ಆದರೆ ಅವನು ಶಿಕ್ಷಿಸಲ್ಪಡುವನು;
13 ಅವನಿಗಾಗುವ ಶಿಕ್ಷೆಯು ಒಬ್ಬ ಸ್ತ್ರೀಯ ಪ್ರಸವವೇದನೆಯಂತಿರುವದು.
    ಅವನು ಜಾಣನಾದ ಮಗನಾಗಿರುವದಿಲ್ಲ;
ಹುಟ್ಟುವ ಸಮಯ ಬಂದರೂ
    ಅವನು ಜೀವಿಸುವದಿಲ್ಲ.

14 “ಸಮಾಧಿಯಿಂದ ಅವರನ್ನು ರಕ್ಷಿಸುವೆನು;
    ಮರಣದಿಂದ ಅವರನ್ನು ಪಾರುಮಾಡುವೆನು.
ಮರಣವೇ, ನಿನ್ನ ವ್ಯಾಧಿಗಳೆಲ್ಲಿ?
    ಸಮಾಧಿಯೇ, ನಿನ್ನ ಶಕ್ತಿ ಎಲ್ಲಿ?
    ನಾನು ಪ್ರತಿಕಾರ ಸಲ್ಲಿಸುವದಿಲ್ಲ.
15 ಇಸ್ರೇಲ್ ತನ್ನ ಸಹೋದರರ ಮಧ್ಯದಲ್ಲಿ ಬೆಳೆಯುವನು.
    ಒಂದು ಬಲವಾದ ಪೂರ್ವದಿಕ್ಕಿನ ಗಾಳಿಯು ಬರುವದು.
    ಯೆಹೋವನ ಗಾಳಿಯು ಮರುಭೂಮಿಯಿಂದ ಬೀಸುವದು.
ಅವನ ನೀರಿನ ಒರತೆಯು ಒಣಗಿಹೋಗುವದು,
    ಆ ಗಾಳಿಯು ಇಸ್ರೇಲರ ಐಶ್ವರ್ಯವನ್ನೆಲ್ಲಾ ಎತ್ತಿಕೊಂಡು ಹೋಗಿಬಿಡುವದು.
16 ಸಮಾರ್ಯವು ಶಿಕ್ಷಿಸಲ್ಪಡಬೇಕು.
    ಯಾಕೆಂದರೆ ಆಕೆಯು ತನ್ನ ದೇವರಿಗೆ ವಿರುದ್ಧವಾಗಿ ನಡೆದಳು.
ಇಸ್ರೇಲರು ಖಡ್ಗದಿಂದ ಸಾಯುವರು.
    ಅವರ ಮಕ್ಕಳು ಹರಿಯಲ್ಪಟ್ಟು ಚೂರುಚೂರಾಗುವರು.
    ಅವರ ಗರ್ಭಿಣಿ ಸ್ತ್ರೀಯರನ್ನು ಸೀಳಿಬಿಡುವರು.”

ಯೆಹೋವನ ಬಳಿಗೆ ಹಿಂದಿರುಗಿರಿ

14 ಇಸ್ರೇಲೇ, ನೀನು ಜಾರಿಬಿದ್ದು ದೇವರಿಗೆ ವಿರುದ್ಧವಾಗಿ ಪಾಪಮಾಡಿದಿ. ನಿನ್ನ ದೇವರಾದ ಯೆಹೋವನ ಬಳಿಗೆ ಹಿಂದಿರುಗಿ ಬಾ. ನೀನು ಹೇಳಬೇಕಾದ ವಿಷಯಗಳ ಕುರಿತು ನೀನು ಆಲೋಚಿಸು ಮತ್ತು ಯೆಹೋವನ ಬಳಿಗೆ ಹಿಂದಿರುಗಿ ಬಾ ಮತ್ತು ಆತನಿಗೆ ಹೀಗೆ ಹೇಳು:

“ನಮ್ಮ ಪಾಪಗಳನ್ನು ನಮ್ಮಿಂದ ತೆಗೆ.
    ನಾವು ಮಾಡುವ ಒಳ್ಳೆಯ ಕಾರ್ಯಗಳನ್ನು ಸ್ವೀಕರಿಸು.
    ಆಗ ನಮ್ಮ ತುಟಿಗಳಿಂದ ನಿನಗೆ ಸ್ತೋತ್ರವೆಂಬ ಕಾಣಿಕೆಯನ್ನು ಸಮರ್ಪಿಸುವೆವು.
ಅಶ್ಶೂರವು ನಮ್ಮನ್ನು ರಕ್ಷಿಸಲಾರದು.
    ನಾವು ಕುದುರೆ ಮೇಲೆ ಸವಾರಿ ಮಾಡುವದಿಲ್ಲ.
ನಮ್ಮ ಕೈಗಳು ತಯಾರಿಸಿದ ಬೊಂಬೆಗಳಿಗೆ ನಾವು ಇನ್ನು
    ‘ನಮ್ಮ ದೇವರು’ ಎಂದು ಹೇಳುವದಿಲ್ಲ.
ಯಾಕೆಂದರೆ ಅನಾಥರಿಗೆ
    ಕರುಣೆಯನ್ನು ತೋರಿಸುವವನು ನೀನೇ.”

ಯೆಹೋವನು ಇಸ್ರೇಲನ್ನು ಕ್ಷಮಿಸುವನು

ಯೆಹೋವನು ಹೇಳುವುದೇನೆಂದರೆ,
“ಅವರು ನನ್ನನ್ನು ತೊರೆದುಬಿಟ್ಟಿದ್ದನ್ನು ನಾನು ಕ್ಷಮಿಸುವೆನು.
    ಅವರನ್ನು ಅಧಿಕವಾಗಿಯೂ ಸ್ವಇಚ್ಛೆಯಿಂದಲೂ ಪ್ರೀತಿಸುವೆನು.
    ಈಗ ಅವರ ಮೇಲೆ ನಾನು ಕೋಪಿಸುವದಿಲ್ಲ.
ಇಸ್ರೇಲಿಗೆ ನಾನು ಇಬ್ಬನಿಯಂತಿರುವೆನು.
    ನೆಲದಾವರೆಯಂತೆ ಇಸ್ರೇಲ್ ಅರಳುವನು.
    ಲೆಬನೋನಿನ ದೇವದಾರು ವೃಕ್ಷಗಳಂತೆ ಸೊಂಪಾಗಿ ಬೆಳೆಯುವನು.
ಅವನ ಕೊಂಬೆಗಳು ಬೆಳೆದು ಹರಡಿಕೊಳ್ಳುತ್ತವೆ;
    ಅವನು ಅಂದವಾದ ಆಲೀವ್ ಮರದಂತಿರುವನು.
ಲೆಬನೋನಿನ ದೇವದಾರು ಮರಗಳ ಸುವಾಸನೆಯಂತೆ
    ಅವನು ಗಮಗಮಿಸುವನು.
ಇಸ್ರೇಲಿನ ಜನರು ಮತ್ತೆ ನನ್ನ ಆಶ್ರಯದಲ್ಲಿ ವಾಸಿಸುವರು.
    ಧಾನ್ಯದ ಸಸಿಗಳಂತೆ ಬೆಳೆಯುವರು,
ದ್ರಾಕ್ಷಾಲತೆಯಿಂದ ಚಿಗುರುವರು.
    ಲೆಬನೋನಿನ ದ್ರಾಕ್ಷಿಬಳ್ಳಿಯಂತೆ ಅವರು ಇರುವರು.”

ವಿಗ್ರಹಗಳ ಬಗ್ಗೆ ಯೆಹೋವನ ಎಚ್ಚರಿಕೆ

“ಎಫ್ರಾಯೀಮೇ, ಇನ್ನುಮುಂದೆ ವಿಗ್ರಹವು ನಿನ್ನಲ್ಲಿರಬಾರದು.
    ನಿನ್ನ ಪ್ರಾರ್ಥನೆಗೆ ಉತ್ತರಿಸುವವನು ನಾನೇ.
    ನಿನ್ನನ್ನು ಕಾಯುವವನು ನಾನೇ.
ನಾನು ತುರಾಯಿ ಮರದಂತೆ ಸದಾ ಹಸಿರಾಗಿರುವೆನು.
    ನಿನ್ನ ಫಲಗಳು ನನ್ನಿಂದ ಬರುವದು.”

ಅಂತಿಮ ಸಲಹೆ

ಬುದ್ಧಿವಂತ ಮನುಷ್ಯನು ಇವುಗಳನ್ನು ಅರ್ಥಮಾಡಿಕೊಳ್ಳುತ್ತಾನೆ.
    ಜಾಣನು ಇದನ್ನು ಕಲಿತುಕೊಳ್ಳುತ್ತಾನೆ.
ಯೆಹೋವನ ಮಾರ್ಗವು ಸರಿಯಾದದ್ದು.
    ಒಳ್ಳೆಯ ಜನರು ಅವರೊಂದಿಗೆ ಜೀವಿಸುವರು.
    ಪಾಪಿಗಳು ಅವುಗಳಿಂದ ಸಾಯುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International