Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ನೆಹೆಮೀಯ 4-6

ಸನ್ಬಲ್ಲಟ್ ಮತ್ತು ಟೋಬೀಯ

ನಾವು ಜೆರುಸಲೇಮಿನ ಗೋಡೆ ಕಟ್ಟುತ್ತಿದ್ದೇವೆ ಎಂಬುದನ್ನು ಕೇಳಿದ ಸನ್ಬಲ್ಲಟನು ಹೊಟ್ಟೆಕಿಚ್ಚಿನಿಂದ ಕೋಪಗೊಂಡನು. ಅವನು ಯೆಹೂದ್ಯರನ್ನು ಹಾಸ್ಯ ಮಾಡಿದನು. ಸಮಾರ್ಯದಲ್ಲಿರುವ ಅವನ ಸ್ನೇಹಿತರೊಡನೆ ಮತ್ತು ಸಮಾರ್ಯದ ಸೈನ್ಯದವರೊಡನೆ ಮಾತನಾಡಿ, “ಈ ಬಲಹೀನ ಯೆಹೂದ್ಯರು ಮಾಡುತ್ತಿರುವುದೇನು? ನಾವು ಇವರನ್ನು ಹೀಗೇಯೇ ಬಿಟ್ಟುಬಿಡುತ್ತೇವೆಂದು ತಿಳಿದುಕೊಂಡಿದ್ದಾರೆಯೇ? ತಾವು ಯಜ್ಞಗಳನ್ನು ಅರ್ಪಿಸುವುದಾಗಿ ತಿಳಿದುಕೊಂಡಿರುವರೇ? ಒಂದೇ ದಿನದಲ್ಲಿ ಕಟ್ಟಿಮುಗಿಸುವುದಾಗಿ ಅವರು ತಿಳಿದುಕೊಂಡಿರಬಹುದು. ಆ ತಿಪ್ಪೆಗುಂಡಿಯೊಳಗಿನ ಕಲ್ಲುಗಳ ರಾಶಿಗೆ ಜೀವಕೊಡಲು ಅವರಿಗೆ ಸಾಧ್ಯವಿಲ್ಲ. ಅವು ಕೇವಲ ಬೂದಿ ಮತ್ತು ಹೊಲಸುಗಳ ಗುಡ್ಡೆಗಳಾಗಿವೆ!” ಎಂದು ಹೇಳಿದನು.

ಅವನ ಜೊತೆಯಲ್ಲಿದ್ದ ಅಮ್ಮೋನಿಯನಾದ ಟೋಬೀಯನು, “ಈ ಯೆಹೂದ್ಯರು ಕಟ್ಟುತ್ತಿರುವುದೇನು? ಆ ಗೋಡೆಯ ಮೇಲೆ ಒಂದು ನರಿ ಹಾರಿದರೂ ಗೋಡೆಯು ಕುಸಿದುಬೀಳುವುದು” ಎಂದು ವ್ಯಂಗ್ಯವಾಗಿ ಹೇಳಿದನು.

ನೆಹೆಮೀಯನು ಯೆಹೋವನಿಗೆ ಪ್ರಾರ್ಥಿಸುತ್ತಾ, “ನಮ್ಮ ದೇವರೇ, ನಮ್ಮ ಪ್ರಾರ್ಥನೆಗೆ ಕಿವಿಗೊಡು. ಆ ಮನಷ್ಯರು ನಮ್ಮನ್ನು ದ್ವೇಷಿಸುತ್ತಾರೆ. ಸನ್ಬಲ್ಲಟನು ಮತ್ತು ಟೋಬೀಯನು ನಮ್ಮನ್ನು ಅವಮಾನ ಮಾಡುತ್ತಿದ್ದಾರೆ. ಆ ಕೇಡುಗಳು ಅವರಿಗೇ ಸಂಭವಿಸಲಿ. ಅವರು ನಾಚಿಕೆಯಿಂದ ತಲೆತಗ್ಗಿಸಲಿ; ಸೆರೆಹಿಡಿಯಲ್ಪಟ್ಟವರಂತೆ ಅವಮಾನ ಹೊಂದಲಿ. ಅವರು ನಿನ್ನ ದೃಷ್ಟಿಯಲ್ಲಿ ಮಾಡಿದ ಪಾಪಗಳನ್ನು ಮನ್ನಿಸಬೇಡ. ಅವರು ಗೋಡೆಯನ್ನು ಕಟ್ಟುವ ನಿನ್ನ ದಾಸರನ್ನು ನಿಂದಿಸಿ ಅವರನ್ನು ನಿರುತ್ಸಾಹಗೊಳಿಸಿದ್ದಾರೆ.”

ಜೆರುಸಲೇಮಿನ ಗೋಡೆಯನ್ನು ನಾವು ಕಟ್ಟಿ ಮುಗಿಸಿದೆವು. ಪಟ್ಟಣದ ಸುತ್ತಲೂ ಪೌಳಿಗೋಡೆಯನ್ನು ಕಟ್ಟಿದೆವು. ಆದರೆ ಅದರ ಎತ್ತರ ಇರಬೇಕಾದಷ್ಟು ಇರದೆ ಅರ್ಧದ ತನಕ ಇದ್ದವು. ನಮ್ಮ ಜನರು ತಮ್ಮ ಹೃದಯ ಪೂರ್ವಕವಾಗಿ ಕೆಲಸ ಮಾಡಿದ್ದುದರಿಂದ ನಮಗೆ ಅಷ್ಟಾದರೂ ಮಾಡುವುದಕ್ಕೆ ಆಯಿತು.

ಸನ್ಬಲ್ಲಟನು, ಟೋಬೀಯನು, ಅರಬಿಯರು, ಅಮ್ಮೋನಿಯರು ಮತ್ತು ಅಷ್ಡೋದಿನವರು ತುಂಬಾ ಕೋಪಗೊಂಡಿದ್ದರು. ಯಾಕೆಂದರೆ ಜೆರುಸಲೇಮಿನ ಗೋಡೆಯ ಕೆಲಸ ಮುಂದುವರಿಯುತ್ತಿದೆಯೆಂದೂ ಮತ್ತು ಗೋಡೆಗಳ ಕಿಂಡಿಗಳನ್ನು ರಿಪೇರಿ ಮಾಡಲಾಗುತ್ತಿದೆಯೆಂದೂ ಅವರು ಕೇಳಿದ್ದರು. ಅವರೆಲ್ಲಾ ಸೇರಿ ಜೆರುಸಲೇಮಿಗೆ ವಿರುದ್ಧವಾಗಿ ಗಲಭೆ ಎಬ್ಬಿಸುವ ಹಂಚಿಕೆಯನ್ನು ಹೂಡಿದರು; ಯುದ್ಧ ಮಾಡುವ ಯೋಚನೆ ಮಾಡಿದರು. ನಾವು ದೇವರಿಗೆ ಪ್ರಾರ್ಥಿಸಿದೆವು ಮತ್ತು ನಮ್ಮ ಮೇಲೆ ಬೀಳಲು ಬರುವ ಶತ್ರುಗಳಿಗೆ ನಾವು ತಯಾರಿರುವಂತೆ ಹಗಲು ರಾತ್ರಿ ಪಹರೆ ಮಾಡಲು ಗೋಡೆಯ ಮೇಲೆ ಕಾವಲುಗಾರರನ್ನು ನೇಮಿಸಿದೆವು.

10 ಆ ಸಮಯದಲ್ಲಿ ಯೆಹೂದದ ಜನರು, “ಕೆಲಸಗಾರರು ಆಯಾಸಗೊಳ್ಳುತ್ತಿದ್ದಾರೆ; ದಾರಿಯಲ್ಲೆಲ್ಲಾ ತುಂಬಾ ಧೂಳು ಮತ್ತು ಕಸ ಇರುವುದರಿಂದ ನಾವು ಗೋಡೆಕಟ್ಟಡ ಕೆಲಸವನ್ನು ಮುಂದುವರಿಸಲು ಸಾಧ್ಯವಿಲ್ಲ. 11 ಅಲ್ಲದೆ ನಮ್ಮ ವೈರಿಗಳು, ‘ನಾವು ಅವರ ಮೇಲೆ ಇದ್ದಕ್ಕಿದ್ದಂತೆ ಆಕ್ರಮಣ ಮಾಡುವುದರಿಂದ ನಾವು ಅವರ ಮಧ್ಯದಲ್ಲಿರುವ ತನಕ ಅವರಿಗೆ ಗೊತ್ತಾಗುವುದೂ ಇಲ್ಲ ಕಾಣುವುದೂ ಇಲ್ಲ. ನಾವು ಅವರನ್ನು ಕೊಂದಾಗ ಕೆಲಸ ತಾನಾಗಿಯೇ ನಿಂತುಹೋಗುವುದು’ ಎಂದು ಹೇಳುತ್ತಿದ್ದಾರೆ” ಎಂದರು.

12 ಅನ್ಯಜನರ ಮಧ್ಯೆ ವಾಸಿಸುವ ಯೆಹೂದ್ಯರು ನಮ್ಮ ಬಳಿಗೆ ಬಂದು ಹತ್ತು ಬಾರಿ ನಮಗೆ ತಿಳಿಸಿದರು. “ವೈರಿಗಳು ನಮ್ಮ ಸುತ್ತಮುತ್ತಲೂ ಇದ್ದಾರೆ. ನಾವು ಎತ್ತ ತಿರುಗಿದರೂ ಅಲ್ಲಿ ಅವರಿದ್ದಾರೆ” ಎಂದರು.

13 ಆದ್ದರಿಂದ ನಮ್ಮ ಜನರಲ್ಲಿ ಕೆಲವರನ್ನು ಕುಟಂಬ ಸಮೇತವಾಗಿ ಖಡ್ಗ, ಬರ್ಜಿ ಮತ್ತು ಬಿಲ್ಲುಗಳೊಡನೆ ಗೋಡೆಯ ಉದ್ದಕ್ಕೂ ಇದ್ದ ತಗ್ಗಾದ ಸ್ಥಳಗಳಲ್ಲಿಯೂ ಗೋಡೆಗಳಲ್ಲಿದ್ದ ಕಿಂಡಿಗಳ ಬಳಿಯಲ್ಲಿಯೂ ಇರಿಸಿದೆನು. 14 ನಮಗೆದುರಾಗಿ ಬಂದಿದ್ದ ಪರಿಸ್ಥಿತಿಯನ್ನು ನಾನು ಚೆನ್ನಾಗಿ ಅವಲೋಕಿಸಿ ನಮ್ಮ ಜನರೊಂದಿಗೆ ಕುಟುಂಬ ಕುಟುಂಬವಾಗಿ, ಅಧಿಕಾರಿಗಳಿಗೆ ಮತ್ತು ಉಳಿದ ಜನರಿಗೆ ಹೀಗೆ ಹೇಳಿದೆನು: “ನಮ್ಮ ವೈರಿಗಳ ಬಗ್ಗೆ ನೀವು ಏನೂ ಹೆದರಬೇಡಿರಿ. ನಮ್ಮ ದೇವರನ್ನು ನೆನಪುಮಾಡಿರಿ. ಯೆಹೋವನು ಬಲಶಾಲಿಯೂ ಸರ್ವಶಕ್ತನೂ ಆಗಿದ್ದಾನೆ. ನೀವು ನಿಮ್ಮ ಸಹೋದರರಿಗಾಗಿ, ನಿಮ್ಮ ಗಂಡುಹೆಣ್ಣು ಮಕ್ಕಳಿಗಾಗಿ ನಿಮ್ಮನಿಮ್ಮ ಹೆಂಡತಿಯರಿಗಾಗಿ ಮತ್ತು ಮನೆಗಳಿಗಾಗಿ ಹೋರಾಡಿರಿ.”

15 ಅವರ ಕುತಂತ್ರವು ನಮಗೆ ಗೊತ್ತಾಯಿತೆಂದು ವೈರಿಗಳಿಗೆ ತಿಳಿದಾಗ ದೇವರೇ ಅವರ ಯೋಜನೆಯನ್ನು ನಿಷ್ಫಲಮಾಡಿದನೆಂದು ಅವರು ತಿಳಿದರು. ಮತ್ತೆ ನಾವೆಲ್ಲಾ ಕಟ್ಟುವ ಕೆಲಸಕ್ಕೆ ಕೈಹಾಕಿದೆವು. ಅವರವರ ಭಾಗಕ್ಕೆ ಜನರು ತೆರಳಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು. 16 ಆ ದಿವಸದಿಂದ ನನ್ನ ಜನರು ಅರ್ಧಭಾಗ ಗೋಡೆಯ ಕೆಲಸದಲ್ಲಿ ನಿರತರಾದರು; ಉಳಿದ ಅರ್ಧ ಜನರು ಭರ್ಜಿಗಳನ್ನೂ ಗುರಾಣಿಗಳನ್ನೂ ಬಿಲ್ಲುಗಳನ್ನೂ ಮತ್ತು ಆಯುಧಗಳನ್ನೂ ಹಿಡಿದುಕೊಂಡು ಕಾವಲಾಗಿದ್ದರು; ಗೋಡೆಯನ್ನು ಕಟ್ಟುತ್ತಿದ್ದ ಯೆಹೂದದ ಜನರ ಹಿಂಭಾಗದಲ್ಲಿ ಸೈನ್ಯಾಧಿಕಾರಿಗಳು ನಿಂತುಕೊಂಡಿದ್ದರು. 17 ಗೋಡೆ ಕಟ್ಟುವವರೂ ಅವರ ಸಹಾಯಕರೂ ಒಂದು ಕೈಯಲ್ಲಿ ಆಯುಧ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಕೆಲಸ ಮಾಡುತ್ತಿದ್ದರು. 18 ಕೆಲಸಗಾರರು ತಮ್ಮ ಖಡ್ಗಗಳನ್ನು ಸೊಂಟಕ್ಕೆ ಬಿಗಿದುಕೊಂಡೇ ಕೆಲಸ ಮಾಡಿದರು. ಜನರನ್ನು ಎಚ್ಚರಗೊಳಿಸಲು ತುತ್ತೂರಿ ಊದುವವನು ನನ್ನ ಬಳಿಯಲ್ಲಿಯೇ ನಿಂತಿರುತ್ತಿದ್ದನು. 19 ಆಗ ನಾನು ಪ್ರಮುಖ ಕುಟುಂಬಗಳವರನ್ನೂ ಅಧಿಕಾರಿಗಳನ್ನೂ ಮತ್ತು ಉಳಿದ ಜನರನ್ನೂ ಕರೆದು, “ನಾವು ಮಾಡುತ್ತಿರುವುದು ಬಹು ದೊಡ್ಡ ಕಾರ್ಯ; ಗೋಡೆಯ ಉದ್ದಕ್ಕೂ ಚದರಿ ಒಬ್ಬರಿಗೊಬ್ಬರು ತುಂಬಾ ದೂರದಲ್ಲಿದ್ದೇವೆ. 20 ತುತ್ತೂರಿಯ ಶಬ್ದ ಕೇಳಿದ ಕೂಡಲೇ ನೀವು ಅಲ್ಲಿಗೆ ಹೋಗಬೇಕು. ನಾವೆಲ್ಲಾ ಆ ಸ್ಥಳದಲ್ಲಿ ಒಟ್ಟಾಗಿ ಸೇರಬೇಕು. ನಮ್ಮ ದೇವರು ನಮಗಾಗಿ ಯುದ್ಧ ಮಾಡುವನು” ಎಂದೆನು.

21 ಹೀಗೆ ನಾವು ಗೋಡೆ ಕಟ್ಟುವ ಕಾರ್ಯವನ್ನು ಮುಂದುವರಿಸಿದೆವು. ಅರ್ಧ ಜನರು ಭರ್ಜಿಗಳನ್ನು ಹಿಡಿದುಕೊಂಡರು. ಮುಂಜಾನೆಯ ಸೂರ್ಯನ ಕಿರಣ ಬೀಳುವ ಹೊತ್ತಿನಿಂದ ಹಿಡಿದು ರಾತ್ರಿ ನಕ್ಷತ್ರಗಳು ಕಾಣುವ ತನಕ ನಾವು ಕೆಲಸದಲ್ಲಿ ನಿರತರಾಗಿರುತ್ತಿದ್ದೆವು.

22 “ಪ್ರತಿಯೊಬ್ಬ ಕೆಲಸಗಾರನೂ ಅವನ ಸಹಾಯಕನೂ ಜೆರುಸಲೇಮಿನೊಳಗೇ ರಾತ್ರಿಯನ್ನು ಕಳೆಯಬೇಕು. ರಾತ್ರಿ ಕಾಲದಲ್ಲಿ ಅವರು ಪಹರೆಯವರಾಗಿಯೂ ಹಗಲಲ್ಲಿ ಗೋಡೆ ಕಟ್ಟುವವರಾಗಿಯೂ ಇರಬೇಕು” ಎಂದು ನಾನು ಜನರಿಗೆ ಹೇಳಿದೆನು. 23 ಇದರಿಂದಾಗಿ ಯಾರೂ ತಮ್ಮ ವಸ್ತ್ರಗಳನ್ನು ಬದಲಾಯಿಸಲಿಲ್ಲ. ನಾನಾಗಲಿ ನನ್ನ ಬಂಧುಗಳಾಗಲಿ ನನ್ನ ಜನರಾಗಲಿ ಪಹರೆಯವರಾಗಲಿ ವಸ್ತ್ರಗಳನ್ನು ಬದಲಾಯಿಸದೆ ಆಯುಧಗಳನ್ನು ಧರಿಸಿಕೊಂಡೇ ಇದ್ದೆವು. ನೀರು ಕುಡಿಯುವಾಗಲೂ ಆಯುಧ ಸನ್ನದ್ಧರಾಗಿರುತ್ತಿದ್ದೆವು.

ಬಡಜನರಿಗೆ ನೆಹೆಮೀಯನ ಸಹಾಯ

ಯೆಹೂದ್ಯರಲ್ಲಿ ಎಷ್ಟೋ ಬಡಜನರು ತಮ್ಮ ಬಂಧುಗಳ ವಿಷಯದಲ್ಲಿ ದೂರು ಹೇಳಲಾರಂಭಿಸಿದರು. ಕೆಲವರು ಹೀಗಂದರು: “ನಮ್ಮ ಮನೆಯಲ್ಲಿ ಬಹಳ ಮಕ್ಕಳಿದ್ದಾರೆ. ನಮಗೆ ಊಟಮಾಡಲು ಸಾಕಷ್ಟು ದವಸಧಾನ್ಯವಿಲ್ಲ; ಹೀಗಿರಲು ನಾವು ಜೀವಂತವಾಗಿ ಉಳಿಯುವ ಸಾಧ್ಯತೆಯಿಲ್ಲ.”

ಇನ್ನು ಕೆಲವರು, “ನಮಗೀಗ ಬರಗಾಲ ಪ್ರಾಪ್ತಿಯಾಗಿದೆ. ನಮಗೆ ದವಸಧಾನ್ಯ ಕೊಂಡುಕೊಳ್ಳಲು ನಮ್ಮ ಹೊಲಗದ್ದೆಗಳನ್ನು ಮಾರಬೇಕಾಗುತ್ತದೆ” ಅಂದರು.

ಇನ್ನೂ ಕೆಲವರು, “ನಮ್ಮ ಹೊಲಗದ್ದೆಗಳ ಮೇಲೆ ಅರಸನಿಗೆ ತೆರಿಗೆ ಕೊಡಬೇಕಾಗಿದೆ. ಆದರೆ ಕೊಡಲು ನಮ್ಮಲ್ಲಿ ಏನೂ ಇಲ್ಲ. ಬೇರೆಯವರಿಂದ ಎರವಲು ಪಡೆದುಕೊಂಡು ಕೊಡಬೇಕಾಗಿದೆ” ಅಂದರು. “ಆ ಧನಿಕರನ್ನು ನೋಡಿರಿ. ನಾವೂ ಅವರಂತೆಯೇ ಇದ್ದೇವೆ. ನಮ್ಮ ಮಕ್ಕಳು ಅವರ ಮಕ್ಕಳಂತೆಯೇ ಇದ್ದಾರೆ. ಆದರೆ ನಾವು ಮಾತ್ರ ನಮ್ಮ ಗಂಡುಹೆಣ್ಣು ಮಕ್ಕಳನ್ನು ಗುಲಾಮರಾಗಿ ಮಾರುವ ಸ್ಥಿತಿಯಲ್ಲಿದ್ದೇವೆ. ನಮ್ಮಲ್ಲಿ ಕೆಲವರು ಆಗಲೇ ತಮ್ಮ ಹೆಣ್ಣುಮಕ್ಕಳನ್ನು ಗುಲಾಮರನ್ನಾಗಿ ಮಾರಿದ್ದಾರೆ. ನಮಗೆ ಬೇರೆ ಮಾರ್ಗವೇ ಇಲ್ಲ. ನಮ್ಮ ಹೊಲಗದ್ದೆಗಳನ್ನು ಯಾವಾಗಲೋ ಕಳೆದುಕೊಂಡಿದ್ದೇವೆ.”

ನಾನು ಅವರ ದೂರುಗಳನ್ನು ಕೇಳಿಸಿಕೊಂಡಾಗ ಬಹಳವಾಗಿ ಸಿಟ್ಟುಗೊಂಡೆನು. ನನ್ನ ಕೋಪವು ಶಾಂತವಾದ ಬಳಿಕ ಧನಿಕರ ಮತ್ತು ಅಧಿಕಾರಿಗಳ ಬಳಿಗೆ ಹೋಗಿ, “ನೀವು ನಿಮ್ಮ ಸ್ವಂತ ಜನರಿಗೆ ಕೊಟ್ಟಿರುವ ಸಾಲಕ್ಕೆ ಬಡ್ಡಿಯನ್ನು ಕೊಡಲು ಬಲವಂತ ಮಾಡುತ್ತಿದ್ದೀರಿ. ನೀವು ಕೂಡಲೇ ಅದನ್ನು ನಿಲ್ಲಿಸಬೇಕು” ಎಂದೆನು. ಅನಂತರ ನಾನು ಎಲ್ಲಾ ಜನರನ್ನು ಒಟ್ಟುಗೂಡಿಸಿ, “ನಮ್ಮ ಯೆಹೂದಿ ಜನರನ್ನು ಪರದೇಶಗಳಲ್ಲಿ ಗುಲಾಮರನ್ನಾಗಿ ಮಾರಿದ್ದರು. ಅಂಥವರನ್ನು ನಾವು ಕ್ರಯಕೊಟ್ಟು ಕೊಂಡುಕೊಂಡು ಅವರನ್ನು ಗುಲಾಮತನದಿಂದ ಬಿಡುಗಡೆ ಮಾಡಿಸಿದೆವು. ಆದರೆ ನೀವು ಈಗ ಮತ್ತೆ ಗುಲಾಮರನ್ನಾಗಿ ಮಾಡುತ್ತಿದ್ದೀರಿ” ಎಂದೆನು.

ಸೇರಿಬಂದಿದ್ದ ಶ್ರೀಮಂತರೂ ಅಧಿಕಾರಿಗಳೂ ಸುಮ್ಮನೆ ಬಾಯಿ ಮುಚ್ಚಿಕೊಂಡರು. ಅವರಿಗೆ ಏನೂ ಹೇಳಲಿಕ್ಕೂ ಆಗಲಿಲ್ಲ. ನಾನು ಹೇಳುವುದನ್ನು ಮುಂದುವರಿಸುತ್ತಾ, “ನೀವು ತಪ್ಪು ಕೆಲಸ ಮಾಡುತ್ತಿದ್ದೀರಿ. ದೇವರಿಗೆ ಭಯಪಟ್ಟು ಆತನನ್ನು ಗೌರವಿಸಬೇಕೆಂದು ನಿಮಗೆ ಗೊತ್ತಿದೆ. ಇತರ ಜನರು ಮಾಡುವ ನಾಚಿಕೆಕರವಾದ ಕೆಲಸವನ್ನು ನೀವು ಮಾಡಬಾರದು. 10 ನನ್ನ ಜನರು, ನನ್ನ ಬಂಧುಗಳು ಮತ್ತು ನಾನು ಹಣವನ್ನು ದವಸಧಾನ್ಯಗಳನ್ನು ಎರವಲಾಗಿ ಕೊಡುತ್ತೇವೆ. ಆದರೆ ಅವರಿಂದ ಬಡ್ಡಿಯನ್ನು ವಸೂಲು ಮಾಡುವುದಿಲ್ಲ. ಸಾಲ ಪಡೆದುಕೊಂಡವರಿಂದ ಬಡ್ಡಿಯನ್ನು ಬಲವಂತದಿಂದ ವಸೂಲು ಮಾಡುವುದನ್ನು ನಾವು ನಿಲ್ಲಿಸಬೇಕು. 11 ಅವರಿಂದ ಕಿತ್ತುಕೊಂಡ ಹೊಲಗದ್ದೆಗಳನ್ನು, ದ್ರಾಕ್ಷಾತೋಟ, ಎಣ್ಣೆಮರಗಳ ತೋಟ ಮತ್ತು ಅವರ ಮನೆಗಳನ್ನು ಅವರಿಗೆ ಈಗಲೇ ಹಿಂದಕ್ಕೆ ಕೊಡಿರಿ. ಅವರಿಂದ ವಸೂಲಿ ಮಾಡಿದ ಬಡ್ಡಿಯನ್ನು ಹಿಂದಕ್ಕೆ ಕೊಡಿರಿ. ನೀವು ಯಾವ ಯಾವದಕ್ಕೆ ಬಡ್ಡಿ ವಸೂಲಿ ಮಾಡಿರುವಿರೋ ಎಲ್ಲವನ್ನು ಹಿಂದಕ್ಕೆ ಕೊಡಿರಿ” ಎಂದು ಹೇಳಿದೆನು.

12 ಆಗ ಶ್ರೀಮಂತರೂ ಅಧಿಕಾರಿಗಳೂ, “ನಾವು ಹಿಂದಕ್ಕೆ ಕೊಡುತ್ತೇವೆ. ಅವರಿಂದ ನಾವು ಹೆಚ್ಚೇನೂ ಕೇಳುವುದಿಲ್ಲ. ನೆಹೆಮೀಯನೇ, ನೀನು ಹೇಳಿದಂತೆಯೇ ನಾವು ಮಾಡುತ್ತೇವೆ” ಎಂದರು.

ಆಗ ನಾನು ದೇವರ ಮುಂದೆ ಅವರಿಂದ ಪ್ರತಿಜ್ಞೆ ಮಾಡಿಸಲು ಯಾಜಕರನ್ನು ಕರೆದೆನು. 13 ನಂತರ ನಾನು ನನ್ನ ಉಡುಪಿನ ನೆರಿಗೆಯನ್ನು ಝಾಡಿಸಿ, “ತಾನು ಮಾಡಿದ ಪ್ರತಿಜ್ಞೆಯಂತೆ ನಡೆಯದವನನ್ನು ದೇವರು ಅವನ ಮನೆಯಿಂದ ಝಾಡಿಸಿಬಿಡಲಿ; ಅವನು ತಾನು ಗಳಿಸಿದ್ದೆಲ್ಲವನ್ನು ಕಳೆದುಕೊಳ್ಳಲಿ” ಎಂದು ಹೇಳಿದಾಗ ಜನರೆಲ್ಲರೂ “ಆಮೆನ್” ಅಂದರು; ಯೆಹೋವನನ್ನು ಸ್ತುತಿಸಿದರು. ತಾವು ಮಾಡಿದ ಪ್ರತಿಜ್ಞೆಯಂತೆ ನಡೆದುಕೊಂಡರು.

14 ಯೆಹೂದ ಪ್ರಾಂತ್ಯಕ್ಕೆ ನನ್ನನ್ನು ರಾಜ್ಯಪಾಲನಾಗಿ ನೇಮಿಸಿದಂದಿನಿಂದ, ನಾನಾಗಲಿ ನನ್ನ ಸಹೋದರರಾಗಲಿ ರಾಜ್ಯಪಾಲರಿಗಾಗಿ ಪ್ರತ್ಯೇಕಿಸಿದ ಆಹಾರವನ್ನು ತಿನ್ನಲಿಲ್ಲ; ನನಗಾಗಿ ಆಹಾರವನ್ನು ಕೊಂಡುಕೊಳ್ಳಲು ಜನರಿಂದ ತೆರಿಗೆ ವಸೂಲಿಮಾಡಲಿಲ್ಲ. ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷದಿಂದ ಮೂವತ್ತೆರಡನೆ ವರ್ಷದ ತನಕ ನಾನು ರಾಜ್ಯಪಾಲನಾಗಿದ್ದೆನು. ಹೀಗೆ ಹನ್ನೆರಡು ವರ್ಷ ಯೆಹೂದದ ರಾಜ್ಯಪಾಲನಾಗಿದ್ದೆನು. 15 ನನಗಿಂತ ಮೊದಲು ರಾಜ್ಯಪಾಲರಾಗಿದ್ದವರು ಜನರನ್ನು ತುಂಬಾ ಕಷ್ಟಕ್ಕೆ ಒಳಪಡಿಸಿದ್ದರು. ಪ್ರತಿಯೊಬ್ಬರು ಒಂದು ಪೌಂಡ್ ಬೆಳ್ಳಿಯನ್ನೂ ಆಹಾರವನ್ನೂ ದ್ರಾಕ್ಷಾರಸವನ್ನೂ ಕೊಡಬೇಕಿತ್ತು. ಆ ರಾಜ್ಯಪಾಲರ ಅಧಿಕಾರಿಗಳು ಸಹ ಜನರ ಮೇಲೆ ದೊರೆತನ ನಡೆಸಿ ಅವರ ಜೀವನವನ್ನು ಮತ್ತಷ್ಟು ಕಠಿಣಗೊಳಿಸಿದರು. ಆದರೆ ದೇವರಲ್ಲಿ ಭಯಭಕ್ತಿ ಇದ್ದುದರಿಂದ ನಾನು ಆ ರೀತಿ ಮಾಡಲಿಲ್ಲ. 16 ಜೆರುಸಲೇಮಿನ ಗೋಡೆ ಕಟ್ಟುವ ಕೆಲಸದಲ್ಲಿ ನಾನು ತುಂಬಾ ಪ್ರಯಾಸಪಟ್ಟೆನು. ಗೋಡೆಯ ನಿರ್ಮಾಣ ಕೆಲಸಕ್ಕಾಗಿ ನನ್ನ ಜನರೆಲ್ಲರೂ ಒಟ್ಟಾಗಿ ಸೇರಿದರು. ನಾವು ಯಾರಿಂದಲೂ ಭೂಮಿಯನ್ನು ಕಿತ್ತುಕೊಳ್ಳಲಿಲ್ಲ.

17 ಇಷ್ಟೇ ಅಲ್ಲದೆ ಯಾವಾಗಲೂ ನೂರೈವತ್ತು ಮಂದಿ ಯೆಹೂದ್ಯರಿಗೆ ನನ್ನ ಮೇಜಿನ ಮೇಲೆ ಊಟಕ್ಕೆ ಬಡಿಸುತ್ತಿದ್ದೆನು. ನಮ್ಮ ಸುತ್ತಲಿನ ಪ್ರಾಂತ್ಯಗಳಿಂದ ಬಂದ ಜನರೂ ನಮ್ಮೊಂದಿಗೆ ಊಟಮಾಡುತ್ತಿದ್ದರು. 18 ಪ್ರತಿದಿನ ನಮ್ಮ ಊಟಕ್ಕಾಗಿ ಒಂದು ಹೋರಿಯನ್ನು, ಆರು ಕೊಬ್ಬಿದ ಕುರಿಗಳನ್ನು ಮತ್ತು ಅನೇಕ ಕೋಳಿಗಳನ್ನು ಕೊಯ್ಯಲಾಗುತ್ತಿತ್ತು; ಹತ್ತುದಿನಕ್ಕೊಮ್ಮೆ ವಿವಿಧ ರೀತಿಯ ದ್ರಾಕ್ಷಾರಸವನ್ನು ಒದಗಿಸಿಕೊಡುತ್ತಿದ್ದೆನು. ಆದರೂ ರಾಜ್ಯಪಾಲನಿಗೆ ಸಲ್ಲಬೇಕಾಗಿದ್ದ ಆಹಾರಪದಾರ್ಥಗಳನ್ನು ನಾನೆಂದೂ ಕೇಳಲಿಲ್ಲ; ಅದಕ್ಕಾಗಿ ಜನರಿಂದ ತೆರಿಗೆ ತೆಗೆದುಕೊಳ್ಳಲಿಲ್ಲ. ಯಾಕೆಂದರೆ ನನ್ನ ಜನರು ಮಾಡುವ ಕೆಲಸವು ತುಂಬಾ ಪ್ರಯಾಸಕರವಾದದ್ದೆಂದು ನನಗೆ ಗೊತ್ತಿತ್ತು. 19 ದೇವರೇ, ನಾನು ಈ ಜನರಿಗಾಗಿ ಮಾಡಿರುವ ಒಳ್ಳೆಯದನ್ನೆಲ್ಲಾ ಜ್ಞಾಪಿಸಿಕೊ.

ವಿರೋಧಿಗಳ ಕುಯುಕ್ತಿ

ಸನ್ಬಲ್ಲಟನಿಗೆ, ಟೋಬೀಯನಿಗೆ, ಅರಬಿಯವನಾದ ಗೆಷೆಮನಿಗೆ ಮತ್ತು ಇನ್ನಿತರ ವೈರಿಗಳಿಗೆ ನಾವು ಗೋಡೆಯನ್ನು ಕಟ್ಟಿ ಮುಗಿಸಿದ್ದು ಗೊತ್ತಾಯಿತು. ಗೋಡೆಯಲ್ಲಿದ್ದ ಎಲ್ಲಾ ಕಿಂಡಿಗಳನ್ನು ನಾವು ಮುಚ್ಚಿದೆವು. ಆದರೆ ಗೋಡೆಯಲ್ಲಿನ ದ್ವಾರಗಳಿಗೆ ಇನ್ನೂ ಬಾಗಿಲುಗಳನ್ನು ಇಟ್ಟಿರಲಿಲ್ಲ. ಸನ್ಬಲ್ಲಟನು ಮತ್ತು ಗೆಷೆಮನು ನನಗೆ ಒಂದು ಸಂದೇಶವನ್ನು ಕಳುಹಿಸಿ, “ನೆಹಮೀಯನೇ, ನಾವು ಓನೋ ಬಯಲಿನಲ್ಲಿರುವ ಹಕ್ಕೆಫಿರೀಮ್ ಎಂಬ ಪಟ್ಟಣದಲ್ಲಿ ಭೇಟಿಯಾಗೋಣ” ಎಂದು ಬರೆದಿದ್ದರು. ಓನೋ ಬಯಲಿನಲ್ಲಿ ನನಗೆ ಅವರು ಕೇಡು ಮಾಡಬೇಕೆಂದಿದ್ದರು.

ನಾನು ಅವರಿಗೆ ಸೇವಕರ ಮುಖಾಂತರ ಈ ಉತ್ತರವನ್ನು ಕಳುಹಿಸಿದೆನು: “ನಾನು ಬಹಳ ವಿಶೇಷವಾದ ಕೆಲಸ ಮಾಡಿಸುತ್ತಿದ್ದೇನೆ. ಆದ್ದರಿಂದ ನನಗೆ ಬರಲು ಸಾಧ್ಯವಿಲ್ಲ. ನನ್ನ ಬರುವಿಕೆಯಿಂದಾಗಿ ಈ ಕೆಲಸವು ನಿಂತು ಹೋಗಬಾರದು.”

ಸನ್ಬಲ್ಲಟನೂ ಗೆಷೆಮನೂ ಅದೇ ಸಂದೇಶವನ್ನು ನಾಲ್ಕು ಸಲ ಕಳುಹಿಸಿದರು. ಪ್ರತಿ ಸಾರಿಯೂ ಅದೇ ಉತ್ತರವನ್ನು ನಾನು ಅವರಿಗೆ ಕಳುಹಿಸಿದೆನು. ಐದನೆಯ ಸಾರಿ ಸನ್ಬಲ್ಲಟನು ತನ್ನ ಸೇವಕನೊಂದಿಗೆ ಮುದ್ರೆಯಿಂದ ಮುಚ್ಚಲ್ಪಡದ ಪತ್ರವನ್ನು ಕಳುಹಿಸಿಕೊಟ್ಟನು. ಅದರಲ್ಲಿ,

“ಒಂದು ಸುದ್ದಿಯು ಹರಡುತ್ತಲಿದೆ. ಎಲ್ಲಾ ಕಡೆಗಳಲ್ಲಿ ಜನರು ಅದರ ವಿಷಯವಾಗಿ ಮಾತಾಡುತ್ತಿದ್ದಾರೆ. ಆ ಸುದ್ದಿಯು ಸತ್ಯವೆಂದು ಗೆಷೆಮನು ನನಗೆ ಹೇಳಿದನು. ನೀನು ಮತ್ತು ಯೆಹೂದ್ಯರು ಅರಸನಿಗೆ ವಿರುದ್ಧವಾಗಿ ದಂಗೆ ಏಳಲು ಯೋಚಿಸುತ್ತಿದ್ದೀರೆಂಬ ವದಂತಿ ಇದೆ. ಅದಕ್ಕೋಸ್ಕರವಾಗಿಯೇ ನೀವು ಕೋಟೆಗೋಡೆಯನ್ನು ಕಟ್ಟುತ್ತಿದ್ದೀರಿ. ನೀನು ಯೆಹೂದ್ಯರ ಅರಸನಾಗುವೆ ಎಂದೂ ಜನರಲ್ಲಿ ಸುದ್ದಿ ಹಬ್ಬಿದೆ. ಮಾತ್ರವಲ್ಲದೆ ನಿನ್ನನ್ನು ಯೆಹೂದ ಪ್ರಾಂತ್ಯದ ಅರಸನೆಂದು ಪ್ರಕಟಿಸಲಿಕ್ಕೆ ಪ್ರವಾದಿಗಳನ್ನು ಆರಿಸಿಕೊಂಡಿರುವೆ ಎಂಬ ಸುದ್ದಿಯೂ ಇದೆ. ರಾಜನಾದ ಅರ್ತಷಸ್ತನು ಇದರ ಬಗ್ಗೆ ಕೇಳುವುದಕ್ಕಿಂತ ಮೊದಲೇ ನಾವು ಕುಳಿತುಕೊಂಡು ಮಾತನಾಡೋಣ” ಎಂದು ಬರೆಯಲಾಗಿತ್ತು.

ನಾನು ಆ ಕಾಗದವನ್ನು ಹಾಗೆಯೇ ಹಿಂದಕ್ಕೆ ಕಳುಹಿಸಿದೆನು. ಅಲ್ಲದೆ, “ನೀನು ಹೇಳುವಂಥದ್ದೇನೂ ಆಗಲಿಲ್ಲ. ಇದು ಕೇವಲ ನಿನ್ನ ಊಹೆಯಷ್ಟೇ!” ಎಂದು ಹೇಳಿ ಕಳುಹಿಸಿದೆನು.

ನಾವು ಹೆದರಿಹೋಗಬೇಕೆಂದು ನಮ್ಮ ವೈರಿಗಳ ಕುತಂತ್ರವಿದೆ. “ಯೆಹೂದ್ಯರು ಭಯಗೊಂಡು ಬಲಹೀನರಾಗುವುದರಿಂದ ಅವರ ಕೆಲಸವನ್ನು ಮುಂದುವರಿಸಲು ಆಗುವುದಿಲ್ಲ, ಗೋಡೆಯೂ ಪೂರ್ಣಗೊಳ್ಳುವುದಿಲ್ಲ” ಎಂದು ಅವರು ಯೋಚಿಸಿಕೊಂಡಿದ್ದಾರೆ.

ಆದರೆ ನಾನು, “ದೇವರೇ, ನನ್ನನ್ನು ಬಲಗೊಳಿಸು” ಎಂದು ಪ್ರಾರ್ಥಿಸಿದೆನು.

10 ಒಂದು ದಿನ ನಾನು ದೆಲಾಯನ ಮಗನಾದ ಶೆಮಾಯನ ಮನೆಗೆ ಹೋದೆನು. ದೆಲಾಯನು ಮೆಹೇಟಬೇಲನ ಮಗ. ಆಗ ಶೆಮಾಯನು ಮನೆಯಲ್ಲಿದ್ದನು. ಅವನು, “ನೆಹೆಮೀಯನೇ, ನಾವು ದೇವಾಲಯದಲ್ಲಿ ಭೇಟಿಯಾಗೋಣ. ನಾವು ಅದರ ಒಳಗೆ ಹೋಗಿ ಕದಗಳನ್ನು ಮುಚ್ಚಿಕೊಳ್ಳೋಣ. ಯಾಕೆಂದರೆ ನಿನ್ನನ್ನು ಕೊಲ್ಲಲು ಈ ರಾತ್ರಿ ಜನರು ಬರುತ್ತಾರೆ” ಎಂದು ಹೇಳಿದನು.

11 ಆದರೆ ನಾನು ಶೆಮಾಯನಿಗೆ, “ನನ್ನಂಥ ಪುರುಷನು ಓಡಿಹೋಗಬೇಕೆ? ನನ್ನಂಥ ಸಾಮಾನ್ಯ ವ್ಯಕ್ತಿ ದೇವಾಲಯಕ್ಕೆ ಹೋಗಿ ಅವಿತುಕೊಳ್ಳಬಾರದು. ನಾನು ಬರುವುದಿಲ್ಲ” ಎಂದು ಹೇಳಿದೆನು.

12 ಶೆಮಾಯನನ್ನು ದೇವರು ಕಳುಹಿಸಿಲ್ಲವೆಂದು ನನಗೆ ಚೆನ್ನಾಗಿ ಗೊತ್ತಿತ್ತು. ಟೋಬೀಯ ಮತ್ತು ಸನ್ಬಲ್ಲಟ್ ಅವನಿಗೆ ಲಂಚಕೊಟ್ಟು ಹಾಗೆ ಹೇಳಿಸಿದ್ದರು. 13 ನಾನು ಭಯಗೊಂಡು ದೇವಾಲಯದೊಳಗೆ ಓಡಿಹೋಗಿ ದೋಷಿಯಾಗುವಂತೆಯೂ ನನ್ನ ಮೇಲೆ ಹಾಗೆ ಅಪರಾಧ ಹೊರಿಸಲು ತಮಗೆ ಕಾರಣ ದೊರೆಯುವಂತೆಯೂ ಅವರು ಶೆಮಾಯನನ್ನು ಉಪಯೋಗಿಸಿಕೊಂಡರು.

14 ದೇವರೇ, ಟೋಬೀಯ ಮತ್ತ ಸನ್ಬಲ್ಲಟನ ವಿಚಾರವಾಗಿ ನಿನ್ನ ಜ್ಞಾಪಕದಲ್ಲಿರಿಸು. ಅವರು ಮಾಡಿದ ಕೆಟ್ಟಕಾರ್ಯಗಳನ್ನು ನೆನಪಿನಲ್ಲಿಡು. ಅದೇ ಸಮಯದಲ್ಲಿ ಪ್ರವಾದಿನಿಯಾದ ನೋವದ್ಯಳನ್ನು, ಇತರ ಪ್ರವಾದಿಗಳನ್ನು, ನನ್ನನ್ನು ಹೆದರಿಸುವವರನ್ನು ನೆನಪು ಮಾಡಿಕೊ.

ಗೋಡೆಯ ಕೆಲಸ ಮುಕ್ತಾಯವಾಯಿತು

15 ಏಲೂಲ್ ತಿಂಗಳ ಇಪ್ಪತ್ತೈದನೆಯ ದಿನದಲ್ಲಿ ಜೆರುಸಲೇಮಿನ ಪೌಳಿಗೋಡೆಗಳ ಕೆಲಸ ಮುಕ್ತಾಯವಾಯಿತು. ಅದಕ್ಕೆ ಒಟ್ಟು ಐವತ್ತೆರಡು ದಿನಗಳು ಬೇಕಾದವು. 16 ನಮ್ಮ ವೈರಿಗಳೆಲ್ಲಾ ಕೆಲಸ ಸಂಪೂರ್ಣವಾದದ್ದನ್ನು ಕೇಳಿದರು. ನಮ್ಮ ಸುತ್ತಮುತ್ತಲಿನ ಪ್ರಾಂತ್ಯಗಳವರಿಗೂ ದೇಶಗಳವರಿಗೂ ಈ ಸುದ್ದಿಮುಟ್ಟಿತು. ಆಗ ಅವರ ಧೈರ್ಯವು ಕುಗ್ಗಿತು. ಯಾಕೆಂದರೆ ಈ ಮಹಾಕಾರ್ಯವನ್ನು ನಮ್ಮ ದೇವರ ಸಹಾಯದಿಂದಲೇ ನಾವು ಮಾಡಿದ್ದೇವೆಂದು ಅವರಿಗೆ ಅರ್ಥವಾಯಿತು.

17 ಅದೇ ಸಮಯದಲ್ಲಿ ಗೋಡೆಯ ಕೆಲಸ ಮುಗಿದ ಬಳಿಕ ಯೆಹೂದ ಪ್ರಾಂತ್ಯದ ಧನಿಕರು ಟೋಬೀಯನಿಗೆ ಆಗಾಗ್ಗೆ ಅನೇಕ ಪತ್ರ ಬರೆಯುತ್ತಿದ್ದರು. 18 ಟೋಬೀಯನೂ ಅವರಿಗೆ ಉತ್ತರಿಸುತ್ತಿದ್ದನು. ಅವರು ಆ ಪತ್ರಗಳನ್ನು ಕಳುಹಿಸಲು ಕಾರಣವೇನೆಂದರೆ ಯೆಹೂದ್ಯರಲ್ಲಿ ಅನೇಕ ಜನರು ಅವನಿಗೆ ನಂಬಿಗಸ್ತರಾಗಿರುವುದಾಗಿ ವಾಗ್ದಾನ ಮಾಡಿದ್ದರು. ಟೋಬೀಯನು ಆರಹನ ಮಗನಾದ ಶೆಕನ್ಯನ ಅಳಿಯನಾಗಿದ್ದುದೇ ಇದಕ್ಕೆ ಕಾರಣ. ಟೋಬೀಯನ ಮಗನಾದ ಯೆಹೋಹಾನಾನನು ಬೆರೆಕ್ಯನ ಮಗನಾದ ಮೆಷುಲ್ಲಾಮನ ಮಗಳೊಂದಿಗೆ ಲಗ್ನವಾಗಿದ್ದನು. 19 ಹಿಂದಿನ ಕಾಲದಲ್ಲಿ ಆ ಜನರು ಟೋಬೀಯನಿಗೆ ಒಂದು ವಿಶೇಷ ವಾಗ್ದಾನ ಮಾಡಿದ್ದರು. ಆದ್ದರಿಂದ ಟೋಬೀಯನು ಎಷ್ಟು ಒಳ್ಳೆಯವನೆಂದು ನನ್ನೊಂದಿಗೆ ಹೇಳುತ್ತಿದ್ದರು; ನಾನು ಮಾಡುತ್ತಿರುವ ಕಾರ್ಯಗಳ ಬಗ್ಗೆಯೂ ಅವರು ಟೋಬೀಯನಿಗೆ ವರದಿ ಮಾಡುತ್ತಿದ್ದರು. ಟೋಬೀಯನು ನನ್ನನ್ನು ಬೆದರಿಸುವುದಕ್ಕೋಸ್ಕರ ನನಗೆ ಪದೇಪದೇ ಪತ್ರ ಬರೆಯುತ್ತಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International