Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 31-32

ಇಸ್ರೇಲರು ಮಿದ್ಯಾನ್ಯರನ್ನು ಸಂಹರಿಸಿದ್ದು

31 ಯೆಹೋವನು ಮೋಶೆಯೊಡನೆ ಮಾತಾಡಿ ಹೀಗೆಂದನು: “ನೀನು ಇಸ್ರೇಲರಿಗೋಸ್ಕರ ಮಿದ್ಯಾನ್ಯರ ಮೇಲೆ ಆಕ್ರಮಣಮಾಡಿ ಸೇಡು ತೀರಿಸಿಕೊ. ಇದಾದ ನಂತರ ನೀನು ಸಾಯುವಿ.”[a]

ಆಗ ಮೋಶೆ ಇಸ್ರೇಲರಿಗೆ, “ಮಿದ್ಯಾನ್ಯರು ಯೆಹೋವನಿಗೆ ವಿರೋಧವಾಗಿ ಮಾಡಿದ ಕೃತ್ಯಗಳಿಗಾಗಿ ಅವರ ಮೇಲೆ ಆಕ್ರಮಣ ಮಾಡಿ ದಂಡಿಸಲು ನಿಮ್ಮಲ್ಲಿರುವ ಗಂಡಸರಲ್ಲಿ ಕೆಲವರನ್ನು ದಂಡೆಯಾತ್ರೆಗೆ ಆರಿಸಿಕೊಳ್ಳಬೇಕು. ಇಸ್ರೇಲಿನ ಕುಲಗಳವರಲ್ಲಿ ಪ್ರತಿಯೊಂದು ಕುಲದಿಂದ ಒಂದು ಸಾವಿರ ಗಂಡಸರನ್ನು ದಂಡೆಯಾತ್ರೆಗೆ ಕಳುಹಿಸಬೇಕು. ಆದ್ದರಿಂದ ಇಸ್ರೇಲರ ಕುಲಗಳಿಂದ ಪ್ರತಿಯೊಂದು ಕುಲಕ್ಕೆ ಒಂದು ಸಾವಿರ ಗಂಡಸರ ಪ್ರಕಾರ ಹನ್ನೆರಡು ಸಾವಿರ ಗಂಡಸರನ್ನು ಯುದ್ಧಕ್ಕೆ ಆರಿಸಿಕೊಳ್ಳಬೇಕು” ಅಂದನು.

ಮೋಶೆಯು ಅವರನ್ನು ಯುದ್ಧಕ್ಕೆ ಕಳುಹಿಸಿದನು. ಅವರ ಸಂಗಡ ಎಲ್ಲಾಜಾರನ ಮಗನಾದ ಫೀನೆಹಾಸನನ್ನೂ ಕಳುಹಿಸಿದನು. ಫೀನೆಹಾಸನು ಪವಿತ್ರವಸ್ತುಗಳನ್ನು ತೆಗೆದುಕೊಂಡನು ಮತ್ತು ಸೂಚನೆ ಕೊಡುವುದಕ್ಕಾಗಿ ತುತ್ತೂರಿಗಳನ್ನು ತೆಗೆದುಕೊಂಡನು. ಯೆಹೋವನು ಆಜ್ಞಾಪಿಸಿದಂತೆಯೇ ಇಸ್ರೇಲರು ಮಿದ್ಯಾನ್ಯರೊಡನೆ ಯುದ್ಧಮಾಡಿದರು. ಅವರು ಮಿದ್ಯಾನ್ಯರ ಗಂಡಸರೆಲ್ಲರನ್ನು ಕೊಂದರು. ಅವರು ಕೊಂದವರಲ್ಲಿ ಎವೀ, ರೆಕೆಮ್, ಜೂರ್, ಹೂರ್ ಮತ್ತು ರೆಬಾ ಎಂಬ ಮಿದ್ಯಾನ್ಯರ ಐದು ಮಂದಿ ರಾಜರು ಸೇರಿದ್ದರು. ಅವರು ಕತ್ತಿಯಿಂದ ಬೆಯೋರನ ಮಗನಾದ ಬಿಳಾಮನನ್ನೂ ಕೊಂದರು.

ಇಸ್ರೇಲರು ಮಿದ್ಯಾನ್ಯರ ಹೆಂಗಸರನ್ನು ಮತ್ತು ಮಕ್ಕಳನ್ನು ಸೆರೆಹಿಡಿದರು. ಅವರು ಮಿದ್ಯಾನ್ಯರ ಎಲ್ಲಾ ಪಶುಗಳನ್ನು ಮತ್ತು ಇತರ ಅಮೂಲ್ಯವಾದ ವಸ್ತುಗಳನ್ನು ತೆಗೆದುಕೊಂಡರು. 10 ಅವರು ನೆಲೆಸಿದ್ದ ಊರುಗಳನ್ನೂ ಪಾಳೆಯಗಳನ್ನೂ ಸುಟ್ಟುಹಾಕಿದರು. 11 ಎಲ್ಲಾ ಜನರನ್ನೂ ಪಶುಗಳನ್ನೂ ಹಿಡಿದು, 12 ತಾವು ಸೆರೆಹಿಡಿದವರನ್ನೂ ಪಶುಗಳನ್ನೂ ಆಸ್ತಿಯನ್ನೂ ತೆಗೆದುಕೊಂಡು ಜೆರಿಕೊ ಪಟ್ಟಣದ ಆಚೆ ಜೋರ್ಡನ್ ಹೊಳೆಯ ತೀರದಲ್ಲಿ ಮೋವಾಬ್ಯರ ಬಯಲಿನಲ್ಲಿದ್ದ ಪಾಳೆಯಕ್ಕೆ ಅಂದರೆ ಮೋಶೆ, ಯಾಜಕನಾದ ಎಲ್ಲಾಜಾರ್ ಮತ್ತು ಇಸ್ರೇಲರ ಸರ್ವಸಮೂಹದವರು ಇದ್ದಲ್ಲಿಗೆ ಬಂದರು. 13 ಮೋಶೆಯೂ ಯಾಜಕನಾದ ಎಲ್ಲಾಜಾರನೂ ಸಮೂಹದ ಪ್ರಧಾನರೂ ಪಾಳೆಯದ ಹೊರಗೆ ಬಂದು ಸೈನಿಕರನ್ನು ಎದುರುಗೊಂಡರು.

14 ಮೋಶೆಯು ಯುದ್ಧದಿಂದ ಹಿಂತಿರುಗಿ ಬರುತ್ತಿದ್ದ ಸೈನ್ಯಾಧಿಕಾರಿಗಳ ಮೇಲೆ ಅಂದರೆ ಸಹಸ್ರಾಧಿಪತಿಗಳ ಮತ್ತು ಶತಾಧಿಪತಿಗಳ ಮೇಲೆ ಕೋಪಗೊಂಡನು. 15 ಅವನು ಅವರಿಗೆ, “ನೀವು ಎಲ್ಲಾ ಹೆಂಗಸರನ್ನು ಉಳಿಸಿದ್ದೇಕೆ? 16 ಬಿಳಾಮನ ಸಲಹೆಯನ್ನು ಅನುಸರಿಸಿ, ಯೆಹೋವನಿಗೆ ವಿರೋಧವಾಗಿ ಇಸ್ರೇಲರು ಪಾಪಮಾಡುವಂತೆ ಮಾಡಿ ಪೆಗೋರದ ಬಾಳನ ಸಂಗತಿಗೆ ಕಾರಣರಾದವರು ಇವರೇ ಅಲ್ಲವೇ? ಅದರ ಫಲವಾಗಿ ಭಯಂಕರವಾದ ಕಾಯಿಲೆಯು ಜನರಿಗೆ ಬಂದಿತು. 17 ಆದ್ದರಿಂದ ಈ ಗುಂಪಿನಲ್ಲಿರುವ ಎಲ್ಲಾ ಗಂಡುಮಕ್ಕಳನ್ನೂ ಪುರುಷಸಂಗಮ ಮಾಡಿದ ಎಲ್ಲಾ ಮಿದ್ಯಾನ್ ಹೆಂಗಸರನ್ನೂ ಕೊಲ್ಲಬೇಕು. 18 ಪುರುಷಸಂಗಮ ಮಾಡದಿರುವ ಕನ್ಯೆಯರನ್ನು ನಿಮಗಾಗಿ ಉಳಿಸಿರಿ. 19 ನೀವಾದರೋ ಏಳು ದಿನಗಳವರೆಗೂ ಪಾಳೆಯದ ಹೊರಗೆ ಇರಬೇಕು. ಮನುಷ್ಯರನ್ನು ಕೊಂದವರೂ ಶವಸೋಂಕಿದವರೂ ನಿಮ್ಮವರಾಗಿರಲಿ ಸೆರೆಯವರಾಗಿರಲಿ ಮೂರನೆಯ ಮತ್ತು ಏಳನೆಯ ದಿನದಲ್ಲಿ ನಿಮ್ಮನ್ನು ಶುದ್ಧೀಕರಿಸಿಕೊಳ್ಳಬೇಕು. 20 ಅದಲ್ಲದೆ ಎಲ್ಲಾ ಬಟ್ಟೆಗಳನ್ನೂ ತೊಗಲಿನ ಸಾಮಾನುಗಳನ್ನೂ ಮೇಕೆ ಕೂದಲಿನ ವಸ್ತುಗಳನ್ನೂ ಮರದ ಸಾಮಾನನ್ನೂ ಶುದ್ಧ ಮಾಡಬೇಕು.”

21 ಆಗ ಯಾಜಕನಾದ ಎಲ್ಲಾಜಾರನು ಸೈನಿಕರೊಡನೆ ಮಾತಾಡಿ ಇಂತೆಂದೆನು: “ಯೆಹೋವನು ಮೋಶೆಗೆ ಯುದ್ಧದಿಂದ ಮರಳಿಬರುವ ಸೈನಿಕರ ಬಗ್ಗೆ ಆ ನಿಯಮಗಳನ್ನು ಕೊಟ್ಟನು: 22-23 ಬೆಂಕಿಯನ್ನು ಸಹಿಸಬಲ್ಲ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ, ಸೀಸ ಮೊದಲಾದವುಗಳನ್ನು ಬೆಂಕಿಯಲ್ಲಿ ಹಾಯಿಸಿ ಶುದ್ಧಮಾಡಬೇಕು. ಬಳಿಕ ಶುದ್ಧೀಕರಣದ ನೀರಿನಿಂದ ಅವುಗಳನ್ನು ಶುದ್ಧೀಕರಿಸಬೇಕು. ಬೆಂಕಿಯನ್ನು ಸಹಿಸಲಾರದ ವಸ್ತುಗಳನ್ನು ನೀರಿನಿಂದ ಮಾತ್ರ ತೊಳೆಯಬೇಕು. 24 ಏಳನೆಯ ದಿನದಲ್ಲಿ ನಿಮ್ಮ ಬಟ್ಟೆಗಳನ್ನು ಒಗೆದುಕೊಂಡ ನಂತರ ನೀವು ಶುದ್ಧರಾಗುವಿರಿ. ಆಮೇಲೆ ನೀವು ಪಾಳೆಯದೊಳಗೆ ಬರಬಹುದು.”

25 ತರುವಾಯ ಯೆಹೋವನು ಮೋಶೆಗೆ, 26 “ನೀನೂ ಯಾಜಕನಾದ ಎಲ್ಲಾಜಾರನೂ ಸಮುದಾಯದ ಎಲ್ಲಾ ಕುಲಪ್ರಧಾನರೂ ಸೆರೆಸಿಕ್ಕಿದ ಮನುಷ್ಯರನ್ನು ಮತ್ತು ಪಶುಗಳನ್ನು ಲೆಕ್ಕಿಸಿ ಪಟ್ಟಿಮಾಡಬೇಕು. 27 ಅವುಗಳನ್ನು ಎರಡು ಭಾಗಮಾಡಿ ಯುದ್ಧಕ್ಕೆ ಹೋದ ಸೈನಿಕರಿಗೆ ಅರ್ಧವನ್ನು ಮಿಕ್ಕ ಸಮೂಹದವರಿಗೆ ಅರ್ಧವನ್ನು ಹಂಚಿಕೊಡಬೇಕು. 28 ಯುದ್ಧಕ್ಕೆ ಹೋದ ಸೈನಿಕರಿಗೆ ಬರುವ ಭಾಗದಿಂದ ಮನುಷ್ಯರನ್ನು, ದನಕರುಗಳನ್ನು, ಕತ್ತೆಗಳನ್ನು ಮತ್ತು ಕುರಿಗಳನ್ನು 29 ನೀನು ಐನೂರರಲ್ಲಿ ಒಂದರ ಮೇರೆಗೆ ಯೆಹೋವನಿಗೋಸ್ಕರ ಕಪ್ಪಕಾಣಿಕೆಯನ್ನು ತೆಗೆದುಕೊಂಡು, ಅದನ್ನು ಪ್ರತ್ಯೇಕಿಸಿ ಯಾಜಕನಾದ ಎಲ್ಲಾಜಾರನಿಗೆ ಒಪ್ಪಿಸಬೇಕು. 30 ಮಿಕ್ಕ ಇಸ್ರೇಲರಿಗೆ ಬರುವ ಭಾಗದಿಂದ ಮನುಷ್ಯರನ್ನು, ದನಕರುಗಳನ್ನು, ಕತ್ತೆಗಳನ್ನು, ಕುರಿಗಳನ್ನು ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಳ್ಳಬೇಕು. ಅದನ್ನು ಯೆಹೋವನ ಪವಿತ್ರ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಡಬೇಕು” ಎಂದು ಆಜ್ಞಾಪಿಸಿದನು.

31 ಯೆಹೋವನು ಆಜ್ಞಾಪಿಸಿದ್ದಂತೆಯೇ ಮೋಶೆ ಮತ್ತು ಎಲ್ಲಾಜಾರನು ಮಾಡಿದರು. 32 ಸೈನಿಕರು ಆರು ಲಕ್ಷದ ಎಪ್ಪತ್ತೈದು ಸಾವಿರ ಕುರಿಗಳನ್ನು, 33 ಎಪ್ಪತ್ತೆರಡು ಸಾವಿರ ದನಕರುಗಳನ್ನು, 34 ಅರವತ್ತೊಂದು ಸಾವಿರ ಕತ್ತೆಗಳನ್ನು, 35 ಮೂವತ್ತೆರಡು ಸಾವಿರ ಕನ್ನಿಕೆಯರನ್ನು ಪಡೆದುಕೊಂಡರು. 36 ಯುದ್ಧಕ್ಕೆ ಹೋದ ಸೈನಿಕರು ಅರ್ಧಭಾಗವನ್ನು ಅಂದರೆ ಮೂರು ಲಕ್ಷದ ಮೂವತ್ತೇಳು ಸಾವಿರದ ಐನೂರು ಕುರಿಗಳನ್ನು ಪಡೆದುಕೊಂಡರು. 37 ಅವರು ಆರುನೂರ ಐವತ್ತೇಳು ಕುರಿಗಳನ್ನು ಯೆಹೋವನಿಗೆ ಕೊಟ್ಟರು. 38 ಸೈನಿಕರು ಮೂವತ್ತಾರು ಸಾವಿರ ದನಕರುಗಳನ್ನು ಪಡೆದುಕೊಂಡರು. ಅವುಗಳಲ್ಲಿ ಎಪ್ಪತ್ತೆರಡು ದನಕರುಗಳನ್ನು ಯೆಹೋವನಿಗೆ ಕೊಟ್ಟರು. 39 ಸೈನಿಕರು ಮೂವತ್ತು ಸಾವಿರದ ಐನೂರು ಕತ್ತೆಗಳನ್ನು ಪಡೆದುಕೊಂಡರು. ಅವರು ಅರವತ್ತೊಂದು ಕತ್ತೆಗಳನ್ನು ಯೆಹೋವನಿಗೆ ಕೊಟ್ಟರು. 40 ಸೈನಿಕರು ಹದಿನಾರು ಸಾವಿರ ಮಂದಿ ಕನ್ನಿಕೆಯರನ್ನು ಪಡೆದುಕೊಂಡರು. ಅವರು ಮೂವತ್ತೆರಡು ಮಂದಿ ಕನ್ನಿಕೆಯರನ್ನು ಯೆಹೋವನಿಗೆ ಕೊಟ್ಟರು. 41 ಮೋಶೆಯು ಯೆಹೋವನ ಅಪ್ಪಣೆಯ ಮೇರೆಗೆ ಆ ಕಪ್ಪವನ್ನೆಲ್ಲ ಯೆಹೋವನಿಗೆ ಕೊಡುಗೆಯಾಗಿ ಯಾಜಕನಾದ ಎಲ್ಲಾಜಾರನಿಗೆ ಕೊಟ್ಟನು.

42-43 ಮೋಶೆಯು ಜನರಿಗೆ ಸೇರಿದ ಅರ್ಧಭಾಗವನ್ನು ಎಣಿಸಿದನು. ಯುದ್ಧಕ್ಕೆ ಹೋಗಿದ್ದ ಸೈನಿಕರಿಂದ ಮೋಶೆಯು ತೆಗೆದುಕೊಂಡ ಅರ್ಧಭಾಗ: ಮೂರು ಲಕ್ಷದ ಮೂವತ್ತೇಳು ಸಾವಿರದ ಐನೂರು ಕುರಿಗಳು, 44 ಮೂವತ್ತಾರು ಸಾವಿರ ದನಕರುಗಳು, 45 ಮೂವತ್ತು ಸಾವಿರದ ಐನೂರು ಕತ್ತೆಗಳು 46 ಮತ್ತು ಹದಿನಾರು ಸಾವಿರ ಕನ್ನಿಕೆಯರು. 47 ಇಸ್ರೇಲ್ ಜನರಿಗೆ ದೊರಕಿದ ಅರ್ಧ ಭಾಗದಿಂದ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಮೋಶೆ ಐವತ್ತನೆ ಒಂದು ಭಾಗವನ್ನು ತೆಗೆದುಕೊಂಡು ಯೆಹೋವನ ಪವಿತ್ರಗುಡಾರವನ್ನು ನೋಡಿಕೊಳ್ಳುತ್ತಿದ್ದ ಲೇವಿಯರಿಗೆ ಕೊಟ್ಟನು.

48 ಆಗ ದಂಡಿನ ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಮೋಶೆಯ ಬಳಿಗೆ ಬಂದು, 49 “ನಿನ್ನ ದಾಸರಾದ ನಾವು ನಮ್ಮ ಅಧಿಕಾರದೊಳಗೆ ಇದ್ದ ಸೈನಿಕರನ್ನು ಲೆಕ್ಕಿಸಲಾಗಿ ಒಬ್ಬನಾದರೂ ಕಡಿಮೆಯಾಗಿಲ್ಲವೆಂದು ತಿಳಿಯಿತು. 50 ಆದಕಾರಣ ಯೆಹೋವನು ಕಾಪಾಡಿದ ನಮ್ಮ ಪ್ರಾಣಗಳಿಗೆ ಈಡಾಗಿ ಆತನಿಗೋಸ್ಕರ ಕಾಣಿಕೆಯಾಗಿ ನಮ್ಮಲ್ಲಿ ಒಬ್ಬೊಬ್ಬನು ತನಗೆ ಸಿಕ್ಕಿದ ಚಿನ್ನದ ಒಡವೆಗಳನ್ನು ಅಂದರೆ ತೋಳ್ಬಳೆ, ಕಡಗ, ಮುದ್ರೆಯುಂಗುರ, ಮುರುವು, ಕಂಠಮಾಲೆ ಮುಂತಾದವುಗಳನ್ನು ನಮ್ಮ ಶುದ್ಧೀಕರಣಕ್ಕಾಗಿ ಯೆಹೋವನಿಗೆ ತಂದಿದ್ದೇವೆ” ಅಂದರು.

51 ಅವರು ಕೊಟ್ಟ ಎಲ್ಲಾ ಚಿನ್ನದ ಒಡವೆಗಳನ್ನು ಮೋಶೆಯು ಮತ್ತು ಯಾಜಕನಾದ ಎಲ್ಲಾಜಾರನು ತೆಗೆದುಕೊಂಡರು. ಅವುಗಳನ್ನು ಕುಶಲತೆಯಿಂದ ತಯಾರಿಸಿದ ಒಡವೆಗಳಾಗಿದ್ದವು. 52 ಸಹಸ್ರಾಧಿಪತಿಗಳು ಮತ್ತು ಶತಾಧಿಪತಿಗಳು ಯೆಹೋವನಿಗೆ ಕೊಟ್ಟ ಚಿನ್ನವು ನಾನೂರಿಪ್ಪತ್ತು ಪೌಂಡು ತೂಕವಿತ್ತು. 53 ಉಳಿದದ್ದನ್ನು ಸೈನಿಕರು ತಮಗಾಗಿ ಇಟ್ಟುಕೊಂಡರು. 54 ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಕೊಟ್ಟ ಚಿನ್ನವನ್ನು ಮೋಶೆಯೂ ಯಾಜಕನಾದ ಎಲ್ಲಾಜಾರನೂ ತೆಗೆದುಕೊಂಡು ದೇವದರ್ಶನಗುಡಾರದಲ್ಲಿ ಇಟ್ಟರು. ಇಸ್ರೇಲರ ವಿಷಯದಲ್ಲಿ ಜ್ಞಾಪಕಾರ್ಥವಾಗಿ ಇದು ಯೆಹೋವನ ಸನ್ನಿಧಿಯಲ್ಲಿ ಇಡಲ್ಪಟ್ಟಿತು.

ಜೋರ್ಡನ್ ಹೊಳೆಯ ಪೂರ್ವದಲ್ಲಿ ಇಸ್ರೇಲರ ಕುಟುಂಬಗಳು

32 ರೂಬೇನ್ ಕುಲದವರಿಗೂ ಗಾದ್ ಕುಲದವರಿಗೂ ಬಹಳ ದನಕುರಿಗಳಿದ್ದವು. ಅವರು ಯಗ್ಜೇರ್ ಮತ್ತು ಗಿಲ್ಯಾದ್ ಪ್ರದೇಶಗಳನ್ನು ನೋಡಿದಾಗ ಅವು ಅವರ ಪಶುಗಳ ಮೇವಿಗೆ ಒಳ್ಳೆಯ ಸ್ಥಳವೆಂದು ತಿಳಿದುಕೊಂಡರು. ಆದ್ದರಿಂದ ರೂಬೇನ್ ಮತ್ತು ಗಾದ್ ಕುಲದವರು ಮೋಶೆಯ ಬಳಿಗೆ ಬಂದರು. ಅವರು ಮೋಶೆಯ ಸಂಗಡದಲ್ಲೂ ಯಾಜಕನಾದ ಎಲ್ಲಾಜಾರನ ಸಂಗಡದಲ್ಲೂ ಜನರ ನಾಯಕರ ಸಂಗಡದಲ್ಲೂ ಮಾತಾಡಿ ಹೀಗೆ ಹೇಳಿದರು: 3-4 “ಯೆಹೋವನು ಇಸ್ರೇಲರಿಗೆ ಅಧೀನಪಡಿಸಿದ ಈ ಪ್ರದೇಶವು ಅಂದರೆ, ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬ ಪಟ್ಟಣಗಳ ಪ್ರದೇಶವು ಪಶುಗಳ ಮೇವಿಗೆ ಒಳ್ಳೆಯ ಸ್ಥಳವಾಗಿದೆ. ನಿಮ್ಮ ದಾಸರಾದ ನಮಗೆ ಬಹಳ ಪಶುಗಳು ಇವೆ. ಆದ್ದರಿಂದ ಈ ಪ್ರದೇಶವನ್ನೇ ನಮಗೆ ಸ್ವಾಸ್ತ್ಯವನ್ನಾಗಿ ಕೊಟ್ಟರೆ ನಮಗೆ ಉಪಕಾರ ಮಾಡಿದಂತಾಗುವುದು. ನಾವು ಜೋರ್ಡನ್ ನದಿಯನ್ನು ದಾಟಿ ಹೋಗುವಂತೆ ಮಾಡಬೇಡ.”

ಮೋಶೆಯು ರೂಬೇನ್ ಮತ್ತು ಗಾದ್ ಕುಲಗಳವರಿಗೆ, “ನಿಮ್ಮ ಸಹೋದರರು ಯುದ್ಧಕ್ಕೆ ಹೋಗುವಾಗ ನೀವು ಇಲ್ಲೇ ಕುಳಿತಿರಬೇಕೇ? ಯೆಹೋವನು ಇಸ್ರೇಲರಿಗೆ ಕೊಟ್ಟ ದೇಶಕ್ಕೆ ಅವರು ಹೋಗದಂತೆ ನೀವು ಯಾಕೆ ಅವರಿಗೆ ಅಧೈರ್ಯವನ್ನು ಹುಟ್ಟಿಸುತ್ತೀರಿ? ಆ ದೇಶವನ್ನು ನೋಡಿಕೊಂಡು ಬರುವುದಕ್ಕೆ ನಾನು ಕಾದೇಶ್ ಬರ್ನೇಯದಿಂದ ನಿಮ್ಮ ಪೂರ್ವಿಕರನ್ನು ಗೂಢಚಾರರನ್ನಾಗಿ ಕಳುಹಿಸಿದಾಗ ಅವರೂ ಹಾಗೆಯೇ ಮಾಡಿದರಲ್ಲಾ. ಅವರು ಎಷ್ಕೋಲ್ ತಗ್ಗಿಗೆ ಬಂದು ಆ ದೇಶವನ್ನು ನೋಡಿ ಇಸ್ರೇಲರಿಗೆ ಅಧೈರ್ಯವನ್ನು ಹುಟ್ಟಿಸಿದ್ದರಿಂದ ಇಸ್ರೇಲರು ತಮಗೆ ಯೆಹೋವನು ವಾಗ್ದಾನ ಮಾಡಿದ್ದ ದೇಶಕ್ಕೆ ಹೋಗಲೇ ಇಲ್ಲ. 10 ಆಗ ಯೆಹೋವನು ಕೋಪಗೊಂಡು, 11-12 ‘ಈಜಿಪ್ಟಿನಿಂದ ಬಂದ ಈ ಜನರಲ್ಲಿ ಮತ್ತು ಇಪ್ಪತ್ತು ವರ್ಷ ಮೊದಲುಗೊಂಡು ಅದಕ್ಕಿಂತ ಹೆಚ್ಚು ವಯಸ್ಸಾದ ನಿಮ್ಮವರೆಲ್ಲಾ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನ ಮತ್ತು ನೂನನ ಮಗನಾದ ಯೆಹೋಶುವನ ಹೊರತು ಯಾರೂ ನನ್ನನ್ನು ನಿಜವಾಗಿಯೂ ಅನುಸರಿಸದೆ ಹೋದದ್ದರಿಂದ, ನಾನು ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣಪೂರ್ವಕವಾಗಿ ಕೊಟ್ಟ ದೇಶವನ್ನು ಅವರಿಬ್ಬರೇ ಹೊರತು ಬೇರೆ ಯಾರೂ ನೋಡುವುದೇ ಇಲ್ಲ’ ಎಂದು ಖಂಡಿತವಾಗಿ ಹೇಳಿದನು.

13 “ಆದ್ದರಿಂದ ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡು, ತನ್ನನ್ನು ಬೇಸರಗೊಳಿಸಿದ್ದ ಇಡೀ ತಲೆಮಾರು ಸಾಯುವತನಕ ಇಸ್ರೇಲರನ್ನು ಮರುಭೂಮಿಯಲ್ಲಿ ನಲವತ್ತು ವರ್ಷಗಳ ಕಾಲ ಅಲೆದಾಡಿಸಿದನು. 14 ದುಷ್ಟ ಸಂತತಿಯವರೇ, ಈಗ ನೀವು ಯೆಹೋವನ ಭಯಂಕರವಾದ ಕೋಪವನ್ನು ಇನ್ನೂ ಹೆಚ್ಚಾಗಿ ಮಾಡಲು ನಿಮ್ಮ ಪೂರ್ವಿಕರ ಸ್ಥಾನವನ್ನು ತೆಗೆದುಕೊಂಡಿದ್ದೀರಿ. 15 ನೀವು ಆತನನ್ನು ಹಿಂಬಾಲಿಸದೆ ಹೋದರೆ, ಆತನು ಇಸ್ರೇಲರನ್ನು ಮರುಭೂಮಿಯಲ್ಲಿ ಇನ್ನೂ ಹೆಚ್ಚು ಕಾಲ ಬಿಟ್ಟುಬಿಡುವನು. ಈ ಜನರೆಲ್ಲರ ನಾಶನಕ್ಕೆ ನೀವೇ ಕಾರಣರಾಗುವಿರಿ” ಎಂದು ಹೇಳಿದನು.

16 ಆಗ ಅವರು ಮೋಶೆಯ ಬಳಿಗೆ ಬಂದು, “ನಮ್ಮ ಪಶುಗಳಿಗಾಗಿ ನಾವು ಬೇಲಿಯನ್ನು ಹಾಕೋಣ ಮತ್ತು ಸ್ತ್ರೀಯರಿಗಾಗಿ ಮತ್ತು ಮಕ್ಕಳಿಗಾಗಿ ಊರುಗಳನ್ನು ಕಟ್ಟುವೆವು. 17 ಬಳಿಕ ಇಸ್ರೇಲರನ್ನು ಅವರವರ ಸ್ಥಳಗಳಿಗೆ ಸೇರಿಸುವವರೆಗೆ ನಾವು ಅವರ ಮುಂದೆ ಹೋಗುವ ಸೈನಿಕರಾಗಿ ಹೊರಡುವೆವು ಅಲ್ಲದೆ ನಮ್ಮ ಸ್ತ್ರೀಯರು ಮತ್ತು ಮಕ್ಕಳು ಈ ದೇಶದ ಇತರ ನಿವಾಸಿಗಳಿಂದ ತೊಂದರೆಗೊಳಗಾಗದೆ ಕೋಟೆಗಳುಳ್ಳ ಊರುಗಳಲ್ಲಿ ಸುರಕ್ಷಿತವಾಗಿರುವರು. 18 ಪ್ರತಿಯೊಬ್ಬ ಇಸ್ರೇಲನು ದೇಶದಲ್ಲಿ ತನಗೆ ಬರಬೇಕಾದ ಸ್ವಾಸ್ತ್ಯವನ್ನು ತೆಗೆದುಕೊಳ್ಳುವ ತನಕ ನಾವು ನಮ್ಮ ಮನೆಗಳಿಗೆ ಹೋಗುವುದಿಲ್ಲ. 19 ನಮಗೆ ಜೋರ್ಡನ್ ಹೊಳೆಯ ಈಚೆ ಪೂರ್ವದಿಕ್ಕಿನಲ್ಲಿ ಸ್ವಾಸ್ತ್ಯವು ದೊರಕಿದ್ದರಿಂದ ನಾವು ಹೊಳೆಯ ಆಚೆ ಎಲ್ಲಿಯೂ ಅವರೊಂದಿಗೆ ಸ್ವಾಸ್ತ್ಯವನ್ನು ಅಪೇಕ್ಷಿಸುವುದಿಲ್ಲ” ಅಂದರು.

20-22 ಅದಕ್ಕೆ ಮೋಶೆ, “ನೀವು ನಿಮ್ಮ ಮಾತಿನಂತೆ ಯೆಹೋವನ ಮುಂದೆ ಸನ್ನದ್ಧರಾದ ಸೈನಿಕರಾಗಿ ಯುದ್ಧಕ್ಕೆ ಹೋಗುವುದಾದರೆ, ಯೆಹೋವನು ತನ್ನ ವೈರಿಗಳನ್ನು ಓಡಿಸುವ ತನಕ ಮತ್ತು ಆ ದೇಶವನ್ನು ಗೆದ್ದುಕೊಳ್ಳುವ ತನಕ ಪ್ರತಿಯೊಬ್ಬ ಪ್ರವೀಣ ಸೈನಿಕನು ಯೆಹೋವನ ಮುಂದೆ ಜೋರ್ಡನ್ ನದಿಯನ್ನು ದಾಟುವುದಾದರೆ, ಆ ಬಳಿಕ ನೀವು ನಿಮ್ಮ ಮನೆಗಳಿಗೆ ಹಿಂತಿರುಗಬಹುದು ಮತ್ತು ನೀವು ಯೆಹೋವನ ದೃಷ್ಟಿಯಲ್ಲಿಯೂ ಇಸ್ರೇಲರ ದೃಷ್ಟಿಯಲ್ಲಿಯೂ ನಿಮ್ಮ ಕರ್ತವ್ಯವನ್ನು ಮಾಡಿದವರಾಗಿರುವಿರಿ. 23 ಆದರೆ ನೀವು ಈ ಸಂಗತಿಗಳನ್ನು ಮಾಡದಿದ್ದರೆ, ಯೆಹೋವನಿಗೆ ವಿರೋಧವಾಗಿ ಪಾಪ ಮಾಡಿದವರಾಗಿರುವಿರಿ. ಮತ್ತು ನಿಮ್ಮ ಪಾಪವು ನಿಮ್ಮನ್ನು ಹಿಡಿಯುವ ತನಕ ಹುಡುಕಿಕೊಂಡೇ ಬರುವುದು ಎಂದು ಖಚಿತವಾಗಿ ತಿಳಿದುಕೊಳ್ಳಿರಿ. 24 ನಿಮ್ಮ ಸ್ತ್ರೀಯರಿಗಾಗಿಯೂ ಮಕ್ಕಳಿಗಾಗಿಯೂ ಊರುಗಳನ್ನು ಕಟ್ಟಿರಿ ಮತ್ತು ಪಶುಗಳಿಗಾಗಿ ದೊಡ್ಡಿಯನ್ನು ಕಟ್ಟಿರಿ. ಬಳಿಕ ನೀವು ವಾಗ್ದಾನ ಮಾಡಿದಂತೆಯೇ ಮಾಡಿರಿ” ಎಂದನು.

25 ಆಗ ಗಾದ್ಯರು ಮತ್ತು ರೂಬೇನ್ಯರು ಮೋಶೆಗೆ, “ಸ್ವಾಮೀ, ನಾವು ನಿನ್ನ ಸೇವಕರಾಗಿದ್ದೇವೆ. ಆದ್ದರಿಂದ ನೀನು ಆಜ್ಞಾಪಿಸಿದಂತೆಯೇ ನಾವು ಮಾಡುತ್ತೇವೆ. 26 ನಮ್ಮ ಹೆಂಡತಿಯರು, ಮಕ್ಕಳು, ಪಶುಗಳು ಮತ್ತು ಇತರ ಪ್ರಾಣಿಗಳು ಗಿಲ್ಯಾದಿನ ಊರುಗಳಲ್ಲಿ ವಾಸಿಸುವರು. 27 ಆದರೆ ನಿನ್ನ ಸೇವಕರಾದ ನಾವು ಮತ್ತು ದಂಡೆಯಾತ್ರೆಗಾಗಿ ಆರಿಸಲ್ಪಟ್ಟವರು ನಿನ್ನ ಆಜ್ಞೆಯ ಪ್ರಕಾರ ಜೋರ್ಡನ್ ನದಿಯನ್ನು ಯೆಹೋವನ ಮುಂದೆ ದಾಟಿಹೋಗಿ ಹೋರಾಡುತ್ತೇವೆ” ಎಂದರು.

28 ಆದ್ದರಿಂದ ಮೋಶೆಯು, ಅವರ ಬಗ್ಗೆ ಯಾಜಕ ಎಲ್ಲಾಜಾರನಿಗೂ ನೂನನ ಮಗನಾದ ಯೆಹೋಶುವನಿಗೂ ಇಸ್ರೇಲ್ ಕುಲಗಳ ಗೋತ್ರಪ್ರಧಾನರಿಗೂ ಆದೇಶಗಳನ್ನು ಕೊಟ್ಟನು. 29 ಮೋಶೆ ಅವರಿಗೆ, “ಗಾದ್ ಮತ್ತು ರೂಬೇನ್ ಕುಲಗಳಿಂದ ಯುದ್ಧಕ್ಕಾಗಿ ಆರಿಸಲ್ಪಟ್ಟವರು ಜೋರ್ಡನ್ ನದಿಯನ್ನು ಯೆಹೋವನ ಮುಂದೆ ದಾಟಿ ಆ ದೇಶವನ್ನು ಗೆದ್ದುಕೊಂಡರೆ, ನೀವು ಅವರಿಗೆ ಗಿಲ್ಯಾದ್ ಪ್ರಾಂತ್ಯವನ್ನು ಸ್ವಾಸ್ತ್ಯವಾಗಿ ಕೊಡಬೇಕು. 30 ಆದರೆ ಆರಿಸಲ್ಪಟ್ಟವರು ನಿಮ್ಮೊಂದಿಗೆ ನದಿಯನ್ನು ದಾಟದಿದ್ದರೆ, ಅವರು ನಿಮ್ಮೊಂದಿಗೆ ಕಾನಾನ್ ದೇಶದಲ್ಲಿ ಭೂಮಿಯನ್ನು ಪಡೆದುಕೊಳ್ಳಬೇಕು” ಎಂದು ಹೇಳಿದನು.

31 ಅದಕ್ಕೆ ಗಾದ್ ಮತ್ತು ರೂಬೇನ್ ಕುಲಗಳವರು ಒಪ್ಪಿ, “ನಿನ್ನ ಸೇವಕರಾದ ನಾವು ಯೆಹೋವನ ಆಜ್ಞೆಯಂತೆಯೇ ಮಾಡುವೆವು. 32 ನಾವೇ ಯುದ್ಧ ಮಾಡುವ ಸೈನಿಕರಾಗಿ ನದಿಯನ್ನು ದಾಟಿ ಯೆಹೋವನ ಮುಂದೆ ಕಾನಾನ್ ದೇಶದೊಳಗೆ ಹೋಗುವೆವು. ಆದರೆ ನಮ್ಮ ಸ್ವಾಸ್ತ್ಯವಾದ ಭೂಮಿಯು ಜೋರ್ಡನ್ ನದಿಯ ಈಚೆಕಡೆಯಲ್ಲಿರುವುದು” ಎಂದರು.

33 ಆಗ ಮೋಶೆಯು ಗಾದ್ ಮತ್ತು ರೂಬೇನ್ ಕುಲಗಳವರಿಗೆ ಮತ್ತು ಯೋಸೇಫನ ಮಗನಾದ ಮನಸ್ಸೆಯ ಅರ್ಧಕುಲದವರಿಗೆ ಅಮೋರಿಯರ ರಾಜನಾದ ಸೀಹೋನನ ರಾಜ್ಯವನ್ನೂ ಬಾಷಾನಿನ ರಾಜನಾದ ಓಗನ ರಾಜ್ಯವನ್ನೂ ಅವುಗಳ ಎಲ್ಲಾ ಊರುಗಳನ್ನೂ ಆ ಊರುಗಳಿಗೆ ಸೇರಿದ ಭೂಮಿಗಳನ್ನೂ ಕೊಟ್ಟನು.

34 ಗಾದ್ ಕುಲದವರು ದೀಬೋನ್, ಅಟಾರೋತ್, ಅರೋಯೇರ್, 35 ಅಟ್ರೋತ್ಷೋಫಾನ್, ಯಗ್ಜೇರ್, ಯೊಗ್ಬೆಹಾ, ಬೇತ್ನಿಮ್ರಾ, 36 ಬೇತ್‌ಹಾರಾನ್ ಎಂಬ ಕೋಟೆಗಳುಳ್ಳ ಊರುಗಳನ್ನು ಹೊಸದಾಗಿ ಕಟ್ಟಿಕೊಂಡರು ಮತ್ತು ತಮ್ಮ ಪಶುಗಳಿಗಾಗಿ ದೊಡ್ಡಿಗಳನ್ನು ಕಟ್ಟಿಕೊಂಡರು.

37-38 ರೂಬೇನ್ ಕುಲದವರು ಹೆಷ್ಬೋನ್, ಎಲೆಯಾಲೆ, ಕಿರ್ಯಾತಯಿಮ್, ನೆಬೋ, ಬಾಳ್ಮೆಯೋನ್ ಮತ್ತು ಸಿಬ್ಮಾ ಎಂಬ ಊರುಗಳನ್ನು ಕೋಟೆ ಸಮೇತವಾಗಿ ಕಟ್ಟಿದರು; ಅಲ್ಲದೆ ತಮ್ಮ ಪಶುಗಳಿಗಾಗಿ ದೊಡ್ಡಿಯನ್ನು ಕಟ್ಟಿದರು. ಅವರು ತಾವು ಮತ್ತೆ ಕಟ್ಟಿದ ಊರುಗಳಿಗೆ ಅವುಗಳ ಮೊದಲಿನ ಹೆಸರುಗಳನ್ನು ಕೊಟ್ಟರು; ಆದರೆ ನೆಬೋ ಮತ್ತು ಬಾಳ್ಮೆಯೋನ್‌ಗಳ ಹೆಸರುಗಳನ್ನು ಬದಲಾಯಿಸಿದರು.

39 ಮಾಕೀರನ ವಂಶದವರು ಗಿಲ್ಯಾದಿಗೆ ಹೋದರು. (ಮಾಕೀರನು ಮನಸ್ಸೆಯ ಮಗ.) ಅವರು ಆ ಪಟ್ಟಣದಲ್ಲಿ ವಾಸಿಸುತ್ತಿದ್ದ ಅಮೋರಿಯರನ್ನು ಓಡಿಸಿ ಅದನ್ನು ವಶಪಡಿಸಿಕೊಂಡರು. 40 ಆದ್ದರಿಂದ ಮೋಶೆಯು ಗಿಲ್ಯಾದನ್ನು ಮನಸ್ಸೆಯ ಮಗನಾದ ಮಾಕೀರನ ವಂಶದವರಿಗೆ ಕೊಟ್ಟನು. ಮಾಕೀರನ ವಂಶದವರು ಅಲ್ಲಿ ನೆಲೆಸಿದರು. 41 ಮನಸ್ಸೆಯ ಕುಲದವನಾದ ಯಾಯೀರನು ಅಮೋರಿಯರ ಕೋಟೆಗಳುಳ್ಳ ಹಳ್ಳಿಗಳನ್ನು ವಶಪಡಿಸಿಕೊಂಡು ಅವುಗಳಿಗೆ, “ಯಾಯೀರನ ಹಳ್ಳಿಗಳು” ಎಂದು ಹೆಸರಿಟ್ಟನು. 42 ನೋಬಹ ಎಂಬವನು ಕೆನಾತ್ ಮತ್ತು ಅದರ ಹತ್ತಿರವಿದ್ದ ಚಿಕ್ಕ ಊರುಗಳನ್ನು ವಶಪಡಿಸಿಕೊಂಡು ಅವುಗಳಿಗೆ “ನೋಬಹ” ಎಂಬ ತನ್ನ ಹೆಸರನ್ನೇ ಕೊಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International