Beginning
ಜೆರುಸಲೇಮನ್ನು ಆಶೀರ್ವದಿಸುವೆನು ಎಂಬ ಯೆಹೋವನ ವಾಗ್ದಾನ
8 ಸರ್ವಶಕ್ತನಾದ ಯೆಹೋವನ ಸಂದೇಶ: 2 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಚೀಯೋನ್ ಪರ್ವತವನ್ನು ನಾನು ಸತ್ಯವಾಗಿಯೂ ಪ್ರೀತಿಸುತ್ತೇನೆ. ನನಗೆ ನಂಬಿಗಸ್ತಳಾಗದಿದ್ದಾಗ ನಾನು ಆಕೆಯ ಮೇಲೆ ಕೋಪಗೊಳ್ಳುವಷ್ಟರವರೆಗೆ ಪ್ರೀತಿಸುತ್ತೇನೆ.” 3 ಯೆಹೋವನು ಹೇಳುವುದೇನೆಂದರೆ, “ನಾನು ಚೀಯೋನಿಗೆ ಹಿಂದಿರುಗಿ ಬಂದಿದ್ದೇನೆ. ನಾನು ಜೆರುಸಲೇಮಿನಲ್ಲಿ ವಾಸಿಸುತ್ತೇನೆ. ಜೆರುಸಲೇಮ್ ನಂಬಿಗಸ್ತನಗರವೆಂದು ಕರೆಯಲ್ಪಡುವುದು. ಸರ್ವಶಕ್ತನ ಪರ್ವತವು ಪವಿತ್ರ ಪರ್ವತವೆಂದು ಕರೆಯಲ್ಪಡುವುದು.”
4 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ವೃದ್ಧವೃದ್ಧೆಯರು ಜೆರುಸಲೇಮಿನ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಿ ಕಾಣಸಿಗುವರು. ಅವರು ಬಹು ದೀರ್ಘ ಆಯುಷ್ಯವನ್ನು ಹೊಂದುವದರಿಂದ ಅವರಿಗೆ ಕೈಕೋಲು ಬೇಕಾಗುತ್ತದೆ. 5 ನಗರದ ತುಂಬಾ ಬಾಲಬಾಲೆಯರು ಆಡುವರು.” 6 ಅಳಿದುಳಿದುವರು “ಇದು ಆಶ್ಚರ್ಯಕರ” ಎಂದು ಹೇಳುವರು. ನಾನೂ ಇದು ಆಶ್ಚರ್ಯಕರವೆಂದು ತಿಳಿಯುತ್ತೇನೆ.
7 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಾನೂ ಪೂರ್ವ ಪಶ್ಚಿಮದಲ್ಲಿರುವ ದೇಶಗಳೊಳಗಿಂದ ನನ್ನ ಜನರನ್ನು ರಕ್ಷಿಸುವುದನ್ನು ನೋಡಿರಿ. 8 ನಾನು ಅವರನ್ನು ಇಲ್ಲಿಗೆ ಕರೆತರುವೆನು. ಅವರು ಜೆರುಸಲೇಮಿನಲ್ಲಿ ವಾಸಿಸುವರು. ಅವರು ನನ್ನ ಜನರಾಗಿರುವರು; ನಾನು ಅವರಿಗೆ ಒಳ್ಳೆಯವನಾದ ನಂಬಿಗಸ್ತನಾದ ದೇವರಾಗಿರುವೆನು.”
9 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಬಲಗೊಳ್ಳಿರಿ! ಸರ್ವಶಕ್ತನಾದ ಯೆಹೋವನು ತನ್ನ ಆಲಯವನ್ನು ತಿರುಗಿ ಕಟ್ಟಲು ಅಸ್ತಿವಾರವನ್ನು ಹಾಕುವಾಗ ಪ್ರವಾದಿಗಳು ಕೊಟ್ಟ ಸಂದೇಶವನ್ನೇ ನೀವು ತಿರುಗಿ ಕೇಳುತ್ತಿದ್ದೀರಿ! 10 ಇದಕ್ಕಿಂತ ಮುಂಚೆ ಜನರ ಕೈಯಲ್ಲಿ ಕೆಲಸಗಾರರಿಗೆ ಕೂಲಿ ಕೊಡುವದಕ್ಕಾಗಲಿ ಪ್ರಾಣಿಗಳ ಬಾಡಿಗೆ ಕೊಡುವದಕ್ಕಾಗಲಿ ಹಣವಿರಲಿಲ್ಲ. ಅದೇ ಸಮಯದಲ್ಲಿ ಜನರು ಹೋಗುತ್ತಾ ಬರುತ್ತಾ ಇರುವದಕ್ಕೆ ಸುರಕ್ಷತೆ ಇರಲಿಲ್ಲ. ಎಲ್ಲಾ ತೊಂದರೆಗಳು ತೊರೆಯಲ್ಪಡಲಿಲ್ಲ. ಪ್ರತಿ ಮನುಷ್ಯನು ತನ್ನ ನೆರೆಯವನ ಮೇಲೆ ಎದುರುಬೀಳುವಂತೆ ನಾನು ಮಾಡಿದ್ದೆನು. 11 ಆದರೆ ಈಗ ಹಾಗಿಲ್ಲ. ಅಳಿಯದೆ ಉಳಿದವರಿಗೆ ಹಾಗೆ ಆಗುವದಿಲ್ಲ. ಇದು ಸರ್ವಶಕ್ತನಾದ ಯೆಹೋವನ ನುಡಿ.
12 “ಈ ಜನರು ನೆಮ್ಮದಿಯಿಂದ ಭೂಮಿಯ ಮೇಲೆ ನಡೆಯುವರು. ಅವರ ದ್ರಾಕ್ಷಾಲತೆಗಳು ದ್ರಾಕ್ಷಿಹಣ್ಣನ್ನು ಕೊಡುವವು. ದೇಶವು ಸಮೃದ್ಧಿಯಾದ ಬೆಳೆಯನ್ನು ಕೊಡುವದು. ಆಕಾಶವು ಮಳೆಯನ್ನು ಸುರಿಸುವದು. ಇವೆಲ್ಲವನ್ನು ನಾನು ನನ್ನ ಜನರಿಗೆ ಕೊಡುವೆನು. 13 ಜನರು ಇಸ್ರೇಲ್ ಮತ್ತು ಯೆಹೂದದ ಹೆಸರುಗಳನ್ನು ಶಾಪ ಇಡುವದಕ್ಕಾಗಿ ಉಪಯೋಗಿಸುವರು. ಆದರೆ ನಾನು ಇಸ್ರೇಲ್ ಮತ್ತು ಯೆಹೂದವನ್ನು ಸಂರಕ್ಷಿಸುವೆನು. ಆ ಹೆಸರುಗಳು ಆಶೀರ್ವದಿಸುವದಕ್ಕಾಗಿ ಉಪಯೋಗಿಸಲ್ಪಡುವದು. ಆದ್ದರಿಂದ ಭಯಪಡಬೇಡಿ, ಬಲಶಾಲಿಗಳಾಗಿರಿ.”
14 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಿಮ್ಮ ಪೂರ್ವಿಕರು ನನ್ನನ್ನು ಕೋಪಗೊಳಿಸಿದರು. ಆದ್ದರಿಂದ ಅವರನ್ನು ನಾಶಮಾಡಲು ನಾನು ತೀರ್ಮಾನಿಸಿದೆನು. ಮತ್ತು ಈ ತೀರ್ಮಾನವನ್ನು ಬದಲಾಯಿಸುವದೇ ಇಲ್ಲವೆಂದು ನಿರ್ಧರಿಸಿದೆನು. 15 ಆದರೆ ಈಗ ನನ್ನ ನಿರ್ಧಾರವನ್ನು ಬದಲಾಯಿಸಿದ್ದೇನೆ. ಜೆರುಸಲೇಮಿಗೂ ಯೆಹೂದದ ಜನರಿಗೂ ಒಳ್ಳೆಯದನ್ನೇ ಮಾಡುವೆನು. ಆದ್ದರಿಂದ ಭಯಪಡಬೇಡಿ. 16 ಆದರೆ ನೀವು ಮಾಡಬೇಕಾದದ್ದೇನೆಂದರೆ, ನಿಮ್ಮ ನೆರೆಯವರ ಸಂಗಡ ಸತ್ಯವನ್ನೇ ಆಡಿರಿ. ನಿಮ್ಮ ನಗರಗಳಲ್ಲಿ ಯಾವುದೇ ತೀರ್ಮಾನಗಳನ್ನು ಮಾಡುವುದಾಗಿದ್ದರೂ ಅವು ನ್ಯಾಯವಾದವುಗಳಾಗಿಯೂ ಸತ್ಯವಾದವುಗಳಾಗಿಯೂ ಸಮಾಧಾನವನ್ನು ತರುವಂಥವುಗಳಾಗಿಯೂ ಇರಲಿ. 17 ನಿಮ್ಮ ನೆರೆಯವನಿಗೆ ಹಾನಿಮಾಡುವುದನ್ನು ಗುಟ್ಟಾಗಿ ಆಲೋಚಿಸಬೇಡಿರಿ. ಸುಳ್ಳು ವಾಗ್ದಾನ ಮಾಡಬೇಡಿರಿ. ಅವುಗಳನ್ನೆಲ್ಲಾ ಮಾಡುವದರಲ್ಲಿ ಆನಂದಿಸಬೇಡಿರಿ. ಯಾಕೆಂದರೆ ಅವುಗಳನ್ನು ನಾನು ದ್ವೇಷಿಸುತ್ತೇನೆ.” ಇದು ಯೆಹೋವನ ನುಡಿ.
18 ಸರ್ವಶಕ್ತನಾದ ಯೆಹೋವನಿಂದ ನಾನು ಈ ಸಂದೇಶವನ್ನು ಹೊಂದಿದೆನು. 19 ಆತನು ಹೇಳುವುದೇನೆಂದರೆ, “ನಾಲ್ಕನೇ, ಐದನೇ, ಏಳನೇ ಮತ್ತು ಹತ್ತನೇ ತಿಂಗಳಿನಲ್ಲಿ ನೀವು ದುಃಖದಿಂದ ಉಪವಾಸ ಮಾಡುವ ವಿಶೇಷ ದಿವಸಗಳಿವೆ. ಆ ದುಃಖದ ದಿವಸಗಳು ನಿಮ್ಮ ಸಂತಸದ ದಿವಸಗಳಾಗಿ ಪರಿಗಣಿಸಬೇಕು. ನೀವು ಸತ್ಯವನ್ನೂ ಸಮಾಧಾನವನ್ನೂ ಪ್ರೀತಿಸುವವರಾಗಬೇಕು.”
20 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ,
“ಮುಂದಿನ ದಿವಸಗಳಲ್ಲಿ ಬೇರೆಬೇರೆ ನಗರದ ಜನರು ಜೆರುಸಲೇಮಿಗೆ ಬರುವರು.
21 ಬೇರೆಬೇರೆ ನಗರದ ಜನರು ಪರಸ್ಪರ ವಂದಿಸುವರು.
ಅವರಲ್ಲಿ ಕೆಲವರು, ‘ನಾವು ಸರ್ವಶಕ್ತನಾದ ಯೆಹೋವನನ್ನು ಆರಾಧಿಸಲು ಹೋಗುತ್ತಿದ್ದೇವೆ’ ಅನ್ನುವರು.
ಅದಕ್ಕೆ ಇನ್ನೊಬ್ಬನು,
‘ನಾನು ನಿಮ್ಮೊಂದಿಗೆ ಬರುತ್ತೇನೆ’” ಅನ್ನುವನು.
22 ಎಷ್ಟೋ ಜನರು, ಎಷ್ಟೋ ಬಲಶಾಲಿ ಜನಾಂಗಗಳು ಜೆರುಸಲೇಮಿಗೆ ಸರ್ವಶಕ್ತನಾದ ಯೆಹೋವನನ್ನು ಕಂಡುಕೊಳ್ಳಲೂ ಆತನನ್ನು ಆರಾಧಿಸಲೂ ಬರುವರು. 23 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ಆ ಸಮಯದಲ್ಲಿ ಬೇರೆಬೇರೆ ಭಾಷೆಗಳನ್ನು ಮಾತಾಡುವ ಅನೇಕ ವಿದೇಶಿಯರು ಯೆಹೂದ್ಯನೊಬ್ಬನ ಬಳಿಗೆ ಬಂದು, ಅವನ ಬಟ್ಟೆಯ ಅಂಚನ್ನು ಹಿಡಿದು, ‘ದೇವರು ನಿಮ್ಮೊಂದಿಗಿದ್ದಾನೆಂದು ನಾವು ಕೇಳಿದ್ದೇವೆ. ನಿಮ್ಮೊಂದಿಗೆ ನಾವೂ ಬಂದು ಆತನನ್ನು ಆರಾಧಿಸಬಹುದೋ?’” ಎಂದು ಕೇಳುವರು.
ಇತರ ಜನಾಂಗಗಳ ಮೇಲೆ ನ್ಯಾಯತೀರ್ಪು
9 ಯೆಹೋವನಿಂದ ಬಂದ ಸಂದೇಶ: ಹದ್ರಾಕ್ ದೇಶದ ಮತ್ತು ಅದರ ರಾಜಧಾನಿಯಾದ ದಮಸ್ಕ ನಗರದ ವಿರುದ್ಧವಾಗಿ ಯೆಹೋವನ ಸಂದೇಶ: “ಇಸ್ರೇಲ್ ಕುಲದವರು ಮಾತ್ರವೇ ದೇವರನ್ನು ತಿಳಿದವರಲ್ಲ. ಪ್ರತಿಯೊಬ್ಬರೂ ಸಹಾಯಕ್ಕಾಗಿ ಆತನಿಗೆ ಮೊರೆಯಿಡುವರು. 2 ಈ ಸಂದೇಶವು ಹಮಾತನಿಗೆ ವಿರುದ್ಧವಾದದ್ದು. ಅವನ ಮೊರೆಯು ಹದ್ರಾಕ್ ದೇಶಕ್ಕೆ ತಾಗಿ ಇದೆ. ಈ ಸಂದೇಶವು ತೂರ್ ಚೀದೋನಿನ ಜನರ ವಿರುದ್ಧವಾಗಿಯೂ ಇದೆ. ಆ ಜನರು ಜ್ಞಾನಿಗಳೂ ಕುಶಲಕರ್ಮಿಗಳೂ ಆಗಿರಬಹುದು. 3 ತೂರ್ ಒಂದು ಕೋಟೆಯಂತೆ ಕಟ್ಟಲ್ಪಟ್ಟಿದೆ. ಅಲ್ಲಿರುವ ಜನರು ಬೆಳ್ಳಿಯನ್ನು ಧೂಳಿನಂತೆ ಸಂಗ್ರಹಿಸಿರುತ್ತಾರೆ. ಬಂಗಾರವಂತೂ ಮಣ್ಣಿನ ತರಹ ಸಾಮಾನ್ಯವಾಗಿರುತ್ತದೆ. 4 ಆದರೆ ನಮ್ಮ ಒಡೆಯನಾದ ಯೆಹೋವನು ಅದೆಲ್ಲವನ್ನು ತೆಗೆದುಕೊಳ್ಳುವನು. ಆಕೆಯ ನೌಕಾಬಲವನ್ನು ಮುರಿದುಬಿಡುವನು. ಮತ್ತು ಆ ನಗರವು ಬೆಂಕಿಯಿಂದ ನಾಶವಾಗುವದು.
5 “ಅಷ್ಕೆಲೋನಿನ ಜನರು ಇದನ್ನು ನೋಡಿ ಭಯಗ್ರಸ್ತರಾಗುವರು. ಗಾಜದ ಜನರು ಭಯದಿಂದ ನಡುಗುವರು. ಮತ್ತು ಎಕ್ರೋನಿನ ಜನರು ಇದನ್ನೆಲ್ಲಾ ನೋಡಿ ನಿರೀಕ್ಷೆ ಇಲ್ಲದವರಾಗಿರುವರು. ಗಾಜದಲ್ಲಿ ಯಾವ ಅರಸನೂ ಉಳಿಯನು. ಅಷ್ಕೆಲೋನಿನಲ್ಲಿ ಯಾರೂ ವಾಸಿಸರು. 6 ಅಷ್ಡೋದಿನ ಜನರಿಗೆ ತಮ್ಮ ತಂದೆ ಯಾರು ಎಂದು ತಿಳಿಯರು. ನಾನು ಅಹಂಕಾರದ ಪಿಲಿಷ್ಟಿಯ ಜನರನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. 7 ಅವರು ನಿಷಿದ್ಧ ಆಹಾರಪದಾರ್ಥವನ್ನಾಗಲಿ ರಕ್ತದಿಂದಿರುವ ಮಾಂಸವನ್ನಾಗಲಿ ಇನ್ನು ಮುಂದೆ ತಿನ್ನುವದಿಲ್ಲ. ಪಿಲಿಷ್ಟಿಯರಲ್ಲಿ ಯಾರಾದರೂ ಉಳಿದರೆ ಅವರು ನನ್ನ ಜನರೊಂದಿಗೆ ಒಂದಾಗುವರು. ಎಕ್ರೋನಿನ ಯೆಬೂಸಿಯರಂತೆ ಅವರು ಯೆಹೊದದ ಇನ್ನೊಂದು ಸಂತತಿಯವರಾಗುವರು. ನಾನು ನನ್ನ ದೇಶವನ್ನು ಸಂರಕ್ಷಿಸುವೆನು. 8 ಶತ್ರುಸೈನ್ಯವು ಅದರೊಳಗಿಂದ ದಾಟಿಹೋಗಲು ನಾನು ಬಿಡೆನು. ಇನ್ನು ಮುಂದೆ ನನ್ನ ಜನರಿಗೆ ಅವರು ಹಾನಿಮಾಡದಂತೆ ಮಾಡುವೆನು. ಕಳೆದುಹೋದ ಸಮಯಗಳಲ್ಲಿ ಅವರೆಷ್ಟು ಸಂಕಟ ಅನುಭವಿಸಿದರೆಂದು ನನ್ನ ಸ್ವಂತ ಕಣ್ಣುಗಳಿಂದ ನೋಡಿರುತ್ತೇನೆ.”
ಭವಿಷ್ಯತ್ತಿನ ಅರಸನು
9 ಚೀಯೋನ್ ನಗರಿಯೇ, ಹರ್ಷಿಸು!
ಜೆರುಸಲೇಮ್ ಜನರೇ, ಸಂತೋಷದಿಂದ ಆರ್ಭಟಿಸಿರಿ.
ನಿಮ್ಮ ಅರಸನು ನಿಮ್ಮ ಬಳಿಗೆ ಬರುತ್ತಿದ್ದಾನೆ!
ಆತನು ವಿಜಯಶಾಲಿಯಾದ ನೀತಿವಂತನಾಗಿದ್ದಾನೆ.
ಆದರೆ ದೀನನಂತೆ ಕತ್ತೆಯ ಮೇಲೆ,
ಹೌದು, ಕತ್ತೆಯ ಮರಿಯ ಮೇಲೆ ಸವಾರಿ ಮಾಡಿಕೊಂಡು ಬರುವನು.
10 ಅರಸನು ಹೀಗೆನ್ನುತ್ತಾನೆ: “ಎಫ್ರಾಯೀಮಿನಲ್ಲಿ ರಥಗಳನ್ನೂ ಜೆರುಸಲೇಮಿನಲ್ಲಿ ಅಶ್ವಾರೂಢರಾದ ಸೈನಿಕರನ್ನೂ ನಾಶಮಾಡಿದೆನು;
ಯುದ್ಧದ ಬಿಲ್ಲುಗಳನ್ನು ತುಂಡು ಮಾಡಿದೆನು.”
ಆ ಅರಸನು ಸಮಾಧಾನದ ವರ್ತಮಾನವನ್ನು ರಾಜ್ಯಗಳಿಗೆ ತರುವನು.
ಸಮುದ್ರದಿಂದ ಸಮುದ್ರದ ತನಕ ಯುಫ್ರೇಟೀಸ್ ನದಿಯಿಂದ
ಭೂಮಿಯ ಕಟ್ಟಕಡೆಯವರೆಗೆ ಆತನು ರಾಜ್ಯವನ್ನಾಳುವನು.
ಯೆಹೋವನು ತನ್ನ ಜನರನ್ನು ಕಾಪಾಡುವನು
11 ಜೆರುಸಲೇಮೇ, ನಾವು ನಿನ್ನ ಒಡಂಬಡಿಕೆಗೆ ಮುದ್ರೆ ಹಾಕಲು ರಕ್ತವನ್ನು ಉಪಯೋಗಿಸಿದೆವು.
ಆದ್ದರಿಂದ ನೆಲದ ಹೊಂಡದೊಳಗಿಂದ ಜನರನ್ನು ಬಿಡುಗಡೆ ಮಾಡಿದ್ದೇನೆ.
12 ಸೆರೆಹಿಡಿಯಲ್ಪಟ್ಟವರೇ, ಮನೆಗೆ ಹೋಗಿ.
ಈಗ ನಿಮಗೊಂದು ನಿರೀಕ್ಷೆಯಿದೆ.
ನಾನು ನಿಮಗೆ ಖಂಡಿತವಾಗಿ ಹೇಳುವುದೇನೆಂದರೆ,
ನಾನು ತಿರುಗಿ ಬರುತ್ತೇನೆ.
13 ಯೆಹೂದನೇ, ನಾನು ನಿನ್ನನ್ನು ಬಿಲ್ಲಿನಂತೆ ಉಪಯೋಗಿಸುವೆನು.
ಎಫ್ರಾಯೀಮನೇ, ನಾನು ನಿನ್ನನ್ನು ಬಾಣದಂತೆ ಉಪಯೋಗಿಸುವೆನು.
ಇಸ್ರೇಲೇ, ಗ್ರೀಸಿನ ಜನರೊಂದಿಗೆ ಯುದ್ಧಮಾಡಲು
ನಾನು ನಿನ್ನನ್ನು ಖಡ್ಗದಂತೆ ಉಪಯೋಗಿಸುವೆನು.
14 ಯೆಹೋವನು ಅವರಿಗೆ ಕಾಣಿಸಿಕೊಂಡು
ತನ್ನ ಬಾಣವನ್ನು ಮಿಂಚಿನ ವೇಗದಲ್ಲಿ ಹಾರಿಸುವನು.
ನನ್ನ ಒಡೆಯನಾದ ಯೆಹೋವನು ತುತ್ತೂರಿ ಊದಿದಾಗ
ಮರುಭೂಮಿಯ ಬಿರುಗಾಳಿಯಂತೆ ಸೈನ್ಯವು ಮುಂದಕ್ಕೆ ನುಗ್ಗುವುದು.
15 ಸರ್ವಶಕ್ತನಾದ ದೇವರು ಅವರನ್ನು ಕಾಪಾಡುವನು.
ಸೈನಿಕರು ಶತ್ರುವನ್ನು ಜಯಿಸಲು ಕವಣೆ ಮತ್ತು ಕಲ್ಲುಗಳನ್ನು ಉಪಯೋಗಿಸುವರು.
ಶತ್ರುಗಳ ರಕ್ತವನ್ನು ಚೆಲ್ಲುವರು.
ಅದು ದ್ರಾಕ್ಷಾರಸದಂತೆ ಹರಿಯುವದು.
ಅದು ಯಜ್ಞವೇದಿಕೆಯ ಮೂಲೆಗಳಲ್ಲಿ ರಕ್ತವನ್ನು ಹೊಯಿದಂತೆ ಕಾಣುವುದು.
16 ಆ ಸಮಯಗಳಲ್ಲಿ ದೇವರಾದ ಯೆಹೋವನು,
ಕುರುಬನು ತನ್ನ ಕುರಿಗಳನ್ನು ಸಂರಕ್ಷಿಸುವ ರೀತಿಯಲ್ಲಿ
ತನ್ನ ಜನರನ್ನು ರಕ್ಷಿಸುವನು.
ಅವರು ಆತನಿಗೆ ಅಮೂಲ್ಯರಾಗಿರುವರು.
ಆತನ ಕೈಯಲ್ಲಿ ಹೊಳೆಯುವ ಆಭರಣದಂತಿರುವರು.
17 ಆಗ ಪ್ರತಿಯೊಂದು ಸುಂದರವೂ ರಮಣೀಯವೂ ಆಗಿರುವುದು.
ಬೆಳೆಯು ಸುಭಿಕ್ಷವಾಗಿರುವುದು.
ಆಹಾರ ಮತ್ತು ದ್ರಾಕ್ಷಾರಸ ಮಾತ್ರವೇ ಅಲ್ಲ,
ಎಲ್ಲಾ ಯೌವನಸ್ಥರೂ ಯೌವನಸ್ಥೆಯರೂ ಹಾಗೆಯೇ ಇರುವರು.
ಯೆಹೋವನ ವಾಗ್ದಾನಗಳು
10 ವಸಂತ ಕಾಲದಲ್ಲಿ ಮಳೆಗಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ಯೆಹೋವನು ಮಿಂಚನ್ನು ಕಳುಹಿಸುವನು; ಆಗ ಮಳೆ ಸುರಿಯುವುದು ಮತ್ತು ದೇವರು ಎಲ್ಲರ ಹೊಲಗಳಲ್ಲಿ ಸಸಿಗಳು ಬೆಳೆಯುವಂತೆ ಮಾಡುವನು.
2 ಜನರು ಭವಿಷ್ಯವನ್ನು ತಿಳಿಯುವುದಕ್ಕೆ ತಮ್ಮ ಸಣ್ಣ ಬೊಂಬೆಗಳನ್ನೋ ಮಂತ್ರಜಾಲವನ್ನೋ ಉಪಯೋಗಿಸುವರು. ಆದರೆ ಅವೆಲ್ಲಾ ನಿಷ್ಪ್ರಯೋಜಕ. ಆ ಜನರು ದರ್ಶನವನ್ನು ನೋಡುವರು ಮತ್ತು ಕನಸುಗಳ ಬಗ್ಗೆ ಹೇಳುವರು. ಆದರೆ ಅವುಗಳೆಲ್ಲಾ ನಿಷ್ಪ್ರಯೋಜಕ ಸುಳ್ಳುಗಳಾಗಿವೆ. ಆದ್ದರಿಂದ ಜನರು ಸಹಾಯಕ್ಕಾಗಿ ಕೂಗುತ್ತಾ ಅತ್ತಿಂದಿತ್ತ ತಿರುಗಾಡುವ ಕುರಿಗಳಂತಿದ್ದಾರೆ. ಅವುಗಳನ್ನು ನಡಿಸಲು ಕುರುಬರೇ ಇಲ್ಲ.
3 ಯೆಹೋವನು ಹೇಳುವುದೇನೆಂದರೆ, “ನಾನು ಕುರುಬರ ಮೇಲೆ ಬಹಳವಾಗಿ ಕೋಪಿಸಿರುವೆನು. ಆ ನಾಯಕರನ್ನು ನಾನು ನನ್ನ ಜನರ ಮೇಲೆ ಜವಾಬ್ದಾರರನ್ನಾಗಿ ಮಾಡಿದ್ದೇನೆ.” ಯೆಹೂದದ ಜನರು ದೇವರ ಮಂದೆಯಾಗಿದ್ದಾರೆ. ಹೇಗೆ ಸಿಪಾಯಿಯು ತನ್ನ ಯುದ್ಧದ ಕುದುರೆಯನ್ನು ಪರಾಂಬರಿತ್ತಾನೋ ಹಾಗೆ ಸರ್ವಶಕ್ತನಾದ ಯೆಹೋವನು ತನ್ನ ಮಂದೆಯನ್ನು ನಿಜವಾಗಿಯೂ ಪರಾಂಬರಿಸುತ್ತಾನೆ.
4 “ಮೂಲೇ ಕಲ್ಲು, ಗುಡಾರದ ಗೂಟ, ಯುದ್ಧದ ಬಿಲ್ಲು ಮತ್ತು ಮುನ್ನುಗ್ಗುವ ಸೈನ್ಯ, ಇವೆಲ್ಲವು ಒಟ್ಟಾಗಿ ಯೆಹೂದಿಂದ ಬರುವದು. 5 ಇವರು ಶತ್ರುಗಳನ್ನು ಜಯಿಸುವರು. ಸೈನಿಕರು ರಸ್ತೆಯ ಧೂಳಿನ ಮೇಲೆ ಮುನ್ನಡೆದು ಯೆಹೋವನು ಅವರೊಂದಿಗಿರುವದರಿಂದ ಅವರು ಅಶ್ವಾರೂಢನಾಗಿರುವ ಶತ್ರುಸೈನ್ಯವನ್ನು ಸದೆಬಡಿಯುವರು. 6 ಯೆಹೂದ ವಂಶವನ್ನು ನಾನು ಬಲಗೊಳಿಸುವೆನು. ಯೋಸೇಫನ ವಂಶದವರಿಗೆ ಜಯವಾಗುವಂತೆ ಮಾಡುವೆನು. ನಾನು ಅವರನ್ನು ಹಿಂದಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಬರುವೆನು. ಅವರನ್ನು ಸಂತೈಸುವೆನು. ನಾನು ಎಂದಿಗೂ ಅವರನ್ನು ತೊರೆಯಲಿಲ್ಲವೆಂಬಂತೆ ಇರುವುದು. ನಾನು ಅವರ ದೇವರಾದ ಯೆಹೋವನು. ನಾನೇ ಅವರಿಗೆ ಸಹಾಯ ಮಾಡುವೆನು. 7 ಕುಡಿದು ಮತ್ತರಾದ ಸೈನಿಕರು ಸಂತೋಷಪಡುವಂತೆ ಎಫ್ರಾಯೀಮ್ಯರು ಸಂತಸದಿಂದಿರುವರು. ಮಕ್ಕಳೂ ಆನಂದದಿಂದ ನಲಿದಾಡುವರು. ಅವರೆಲ್ಲರೂ ಯೆಹೋವನ ಜೊತೆಯಲ್ಲಿ ಸಂತೋಷದಿಂದಿರುವರು.
8 “ನಾನು ಸಿಳ್ಳು ಹೊಡೆದು ಎಲ್ಲರನ್ನು ಒಟ್ಟುಗೂಡಿಸುವೆನು. ನಾನು ನಿಜವಾಗಿಯೂ ಅವರನ್ನು ರಕ್ಷಿಸುವೆನು. ಜನರು ಕಿಕ್ಕಿರಿದು ತುಂಬಿಹೋಗುವರು. 9 ಹೌದು, ನಾನು ನನ್ನ ಜನರನ್ನು ಎಲ್ಲಾ ರಾಜ್ಯಗಳಿಗೆ ಚದರಿಸಿಬಿಟ್ಟಿರುತ್ತೇನೆ. ಆದರೆ ಆ ಬಹುದೂರದ ರಾಜ್ಯಗಳಲ್ಲಿ ಅವರು ನನ್ನನ್ನು ನೆನಪು ಮಾಡುವರು. ಅವರೂ ಅವರ ಮಕ್ಕಳೂ ಉಳಿಯುವರು ಮತ್ತು ಅವರು ಹಿಂತಿರುಗಿ ಬರುವರು. 10 ನಾನು ಅವರನ್ನು ಈಜಿಪ್ಟ್ನಿಂದ ಮತ್ತು ಅಶ್ಯೂರದಿಂದ ಹಿಂದಕ್ಕೆ ತರುವೆನು. ಅವರನ್ನು ಗಿಲ್ಯಾದಿಗೆ ಕರೆದುಕೊಂಡು ಬರುವೆನು. ಅಲ್ಲಿ ಅವರಿಗೆ ಸ್ಥಳ ಸಾಲದು. ಆದ್ದರಿಂದ ಅವರು ಪಕ್ಕದ ಲೆಬನೋನ್ ಪ್ರಾಂತ್ಯದಲ್ಲಿ ವಾಸಿಸುವಂತೆ ಮಾಡುವೆನು.” 11 ಇದು ಹಿಂದಿನ ಕಾಲದಲ್ಲಿ ದೇವರು ಅವರನ್ನು ಈಜಿಪ್ಟಿನಿಂದ ಬಿಡಿಸಿ ತಂದಂತೆ ಇರುವದು. ಆತನು ಸಮುದ್ರದ ತೆರೆಗಳನ್ನು ಬಡಿದು ಅದು ಇಬ್ಭಾಗವಾಗುವಂತೆ ಮಾಡಿದನು. ಜನರು ಸಂಕಟದ ಸಮುದ್ರದ ಮಧ್ಯದಲ್ಲಿ ದಾಟಿಹೋದರು. ಯೆಹೋವನು ಹೊಳೆಗಳನ್ನು ಬತ್ತಿಸಿಬಿಡುವನು. ಆತನು ಅಶ್ಯೂರ್ಯದ ಜಂಬವನ್ನೂ ಈಜಿಪ್ಟಿನ ಬಲವನ್ನೂ ಮುರಿಯುವನು. 12 ಯೆಹೋವನು ತನ್ನ ಜನರನ್ನು ಶಕ್ತಿಶಾಲಿಗಳನ್ನಾಗಿ ಮಾಡುವನು. ಅವರು ಆತನ ನಾಮದ ಘನತೆಗೋಸ್ಕರ ಜೀವಿಸುವರು. ಇದು ಯೆಹೋವನ ನುಡಿ.
ದೇವರು ಅನ್ಯ ದೇಶಗಳವರನ್ನು ಶಿಕ್ಷಿಸುವನು
11 ಲೆಬನೋನೇ, ನೀನು ನಿನ್ನ ದ್ವಾರಗಳನ್ನು ತೆರೆ.
ಆಗ ಬೆಂಕಿಯು ಒಳಬಂದು ನಿನ್ನ ದೇವದಾರು ಮರಗಳನ್ನೆಲ್ಲಾ ಸುಟ್ಟು ಹಾಕುವದು.
2 ದೇವದಾರು ಮರಗಳು ಬೀಳುವಾಗ ಓಕ್ ಮರಗಳು ರೋದಿಸುವವು.
ಆ ಬಲವಾದ ಮರಗಳನ್ನು ತೆಗೆದುಕೊಂಡು ಹೋಗಲಾಗುವುದು.
ಅಡವಿಯು ಕಡಿದುಹಾಕಲ್ಪಟ್ಟಿದ್ದಕ್ಕಾಗಿ
ಬಾಷಾನಿನ ಶ್ರೇಷ್ಠ ವೃಕ್ಷಗಳು ದುಃಖಿಸುವವು.
3 ರೋದಿಸುವ ಕುರುಬರ ಕಡೆಗೆ ಕಿವಿಗೊಡಿರಿ.
ಅವರ ನಾಯಕರುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ.
ಪ್ರಾಯದ ಸಿಂಹಗಳ ಗರ್ಜನೆಗೆ ಕಿವಿಗೊಡಿರಿ.
ಯೋರ್ದನ್ ಹೊಳೆಯ ಬದಿಯಲ್ಲಿದ್ದ ದಟ್ಟವಾದ ಪೊದರುಗಳೆಲ್ಲಾ ತೆಗೆದುಕೊಂಡು ಹೋಗಲಾಗಿದೆ.
4 ನನ್ನ ದೇವರಾದ ಯೆಹೋವನು ಹೇಳುವುದೇನೆಂದರೆ, “ಕೊಲ್ಲುವದಕ್ಕೋಸ್ಕರವಾಗಿ ಬೆಳೆಸಿದ ಕುರಿಗಳನ್ನು ಪರಾಮರಿಸು. 5 ಅವರ ನಾಯಕರುಗಳು ವರ್ತಕರಂತೆಯೂ ಧಣಿಗಳಂತೆಯೂ ಇರುವರು. ಧಣಿಗಳು ಕುರಿಗಳನ್ನು ಕೊಂದರೂ ಶಿಕ್ಷಿಸಲ್ಪಡುವುದಿಲ್ಲ. ವರ್ತಕರು ಕುರಿಗಳನ್ನು ಮಾರಿ, ‘ನಾನೀಗ ಧನಿಕನಾಗಿದ್ದೇನೆ. ಯೆಹೋವನಿಗೆ ಸ್ತೋತ್ರವಾಗಲಿ’ ಎಂದು ಅನ್ನುವರು. ಕುರುಬರು ತಮ್ಮ ಕುರಿಗಳಿಗಾಗಿ ಚಿಂತಿಸುವುದಿಲ್ಲ. 6 ಈ ದೇಶದಲ್ಲಿ ವಾಸಿಸುವ ಜನರ ಬಗ್ಗೆ ನಾನು ದುಃಖಿಸುವುದಿಲ್ಲ.” ಇದು ಯೆಹೋವನ ನುಡಿ. “ನೋಡಿರಿ, ಪ್ರತಿಯೊಬ್ಬನೂ ತನ್ನ ಅರಸನಿಂದಲೂ ನೆರೆಯವರಿಂದಲೂ ಹಾಳುಮಾಡಲ್ಪಡುವಂತೆ ನಾನು ಮಾಡುವೆನು. ಅವರ ದೇಶವನ್ನು ಹಾಳುಮಾಡುವಂತೆ ಅವರನ್ನು ಬಿಡುವೆನು. ಅವರನ್ನು ನಿಲ್ಲಿಸುವುದಿಲ್ಲ.”
7 ಕೊಲ್ಲುವದಕ್ಕಾಗಿ ಬೆಳೆಸುವ ಕುರಿಗಳನ್ನು ನಾನು ಪರಾಮರಿಸಿದೆನು. ನನಗೆ ಎರಡು ಕೋಲುಗಳು ದೊರೆತವು. ಒಂದು ಕೋಲನ್ನು ದಯೆ ಎಂದೂ ಇನ್ನೊಂದನ್ನು ಒಗ್ಗಟ್ಟು ಎಂಬ ಹೆಸರಿನಿಂದಲೂ ಕರೆದೆನು. ಆ ಬಳಿಕ ಕುರಿಗಳನ್ನು ಪರಾಮರಿಸ ತೊಡಗಿದೆನು. 8 ಒಂದೇ ತಿಂಗಳೊಳಗೆ ಮೂರು ಮಂದಿ ಕುರುಬರನ್ನು ನಾನು ಕೆಲಸದಿಂದ ಬಿಡಿಸಿದೆನು. ನಾನು ಕುರಿಗಳ ಮೇಲೆ ಸಿಟ್ಟುಗೊಳ್ಳಲಾರಂಭಿಸಿದೆನು. ಅವು ನನ್ನನ್ನು ಹಗೆ ಮಾಡಲಾರಂಭಿಸಿದವು. 9 ಆಗ ನಾನು, “ಸರಿ, ನಾನು ನಿಮ್ಮನ್ನು ಇನ್ನು ನೋಡಿಕೊಳ್ಳುವದಿಲ್ಲ. ಹೋಗಿಬಿಡುತ್ತೇನೆ” ಅಂದೆನು. ಸಾಯಲು ಮನಸ್ಸುಳ್ಳವುಗಳನ್ನು ಸಾಯಲುಬಿಟ್ಟೆನು. ನಾಶವಾಗಲು ಮನಸ್ಸುಳ್ಳವುಗಳನ್ನು ನಾಶವಾಗಲು ಬಿಟ್ಟೆನು. ಅಳಿಯದೆ ಉಳಿದವುಗಳು ಪರಸ್ಪರ ನಾಶಮಾಡಿಕೊಳ್ಳುವವು. 10 ಆಗ ನಾನು ದಯೆ ಹೆಸರಿನ ಕೋಲನ್ನು ತೆಗೆದುಕೊಂಡು ತುಂಡುಮಾಡಿದೆನು. ಯೆಹೋವನು ಎಲ್ಲಾ ಜನರೊಂದಿಗೆ ಮಾಡಿದ ಒಡಂಬಡಿಕೆಯು ಮುರಿಯಿತು ಎಂಬುದಾಗಿ ಅವರಿಗೆ ತೋರಿಸಿದೆನು. 11 ಹೀಗೆ ಆ ದಿವಸ ಒಡಂಬಡಿಕೆಗೆ ಅಂತ್ಯವಾಯಿತು. ನನ್ನನ್ನೇ ನೋಡುತ್ತಿದ್ದ ಆ ಬಡ ಕುರಿಗಳಿಗೆ ಈ ಸಂದೇಶವು ಯೆಹೋವನಿಂದಲೇ ನನಗೆ ಬಂದಿದೆ ಎಂಬುದು ತಿಳಿದಿತ್ತು.
12 ಆಗ ನಾನು ಹೀಗೆಂದೆನು, “ನನಗೆ ಸಂಬಳ ಕೊಡಲು ನಿಮಗೆ ಇಷ್ಟವಿದ್ದರೆ ಕೊಡಿರಿ, ಇಷ್ಟವಿಲ್ಲದಿದ್ದರೆ ಬೇಡ.” ಆಗ ಅವರು ನನಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟರು. 13 ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ, “ನನ್ನ ಬೆಲೆ ಅಷ್ಟೇ ಎಂದು ಅವರು ನೆನಸುತ್ತಾರೆ. ಆ ಹಣವನ್ನು ತೆಗೆದು ಆಲಯದ ಖಜಾನೆಗೆ ಸುರಿ.” ನಾನು ಆ ಮೂವತ್ತು ಬೆಳ್ಳಿ ನಾಣ್ಯವನ್ನು ತೆಗೆದುಕೊಂಡು ಆಲಯದ ಖಜಾನೆಗೆ ಸುರಿದೆನು. 14 ಆಮೇಲೆ ನಾನು “ಒಗ್ಗಟ್ಟು” ಎಂಬ ಹೆಸರಿನ ಕೋಲನ್ನು ಎರಡು ತುಂಡಾಗಿ ಮುರಿದೆನು. ಇಸ್ರೇಲ್ ಮತ್ತು ಯೆಹೂದ ರಾಜ್ಯಗಳ ಒಗ್ಗಟ್ಟು ಮುರಿಯಿತು ಎಂದು ತೋರಿಸುವದಕ್ಕಾಗಿ ನಾನು ಹಾಗೆ ಮಾಡಿದೆನು.
15 ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ, “ಒಬ್ಬ ಮೂರ್ಖ ಕುರುಬನು ಉಪಯೋಗಿಸುವ ವಸ್ತುಗಳನ್ನು ತೆಗೆದುಕೊಂಡು ಬಾ. 16 ನಾನು ಈ ದೇಶಕ್ಕೆ ಒಬ್ಬ ಹೊಸ ಕುರುಬನನ್ನು ನೇಮಕ ಮಾಡುವೆನೆಂದು ಆ ರೀತಿಯಾಗಿ ತೋರಿಸುವೆನು. ಆದರೆ ಈ ಮನುಷ್ಯನಿಗೆ ನಾಶಮಾಗುತ್ತಿರುವ ಕುರಿಗಳನ್ನು ಪರಾಮರಿಸಲು ಸಾಧ್ಯವಾಗುವುದಿಲ್ಲ. ಗಾಯಗೊಂಡ ಕುರಿಗಳನ್ನು ಗುಣಮಾಡಲು ಅವನಿಂದ ಸಾಧ್ಯವಾಗುವುದಿಲ್ಲ. ಸಾಯದೆ ಉಳಿದ ಕುರಿಗಳಿಗೆ ಆಹಾರ ಕೊಡಲು ಅವನಿಂದ ಸಾಧ್ಯವಾಗುವುದಿಲ್ಲ. ಪುಷ್ಟಿಕರವಾದ ಕುರಿಗಳನ್ನು ಪೂರ್ತಿಯಾಗಿ ತಿಂದುಹಾಕಲಾಗುವದು. ಅದರ ಗೊರಸುಗಳು ಮಾತ್ರವೇ ಉಳಿಯುವದು.”
17 ಕೆಲಸಕ್ಕೆ ಬಾರದ ಕುರುಬನೇ,
ನೀನು ನನ್ನ ಕುರಿಗಳನ್ನು ತೊರೆದುಬಿಟ್ಟೆ.
ಅವನನ್ನು ಶಿಕ್ಷಿಸಿರಿ!
ಖಡ್ಗದಿಂದ ಅವನ ಬಲಗೈಯನ್ನು ಕತ್ತರಿಸಿಹಾಕಿರಿ, ಮತ್ತು ಬಲಗಣ್ಣನ್ನು ಕಿತ್ತುಹಾಕಿರಿ.
ಆಗ ಅವನ ಬಲಗೈ ಅಪ್ರಯೋಜಕವಾಗುವದು,
ಬಲಗಣ್ಣು ದೃಷ್ಟಿಹೀನವಾಗುವದು.
ಯೆಹೂದದ ಸುತ್ತಲಿರುವ ದೇಶಗಳ ಬಗ್ಗೆ ದರ್ಶನ
12 ಇಸ್ರೇಲಿನ ಬಗ್ಗೆ ಯೆಹೋವನ ದುಃಖದ ಸಂದೇಶ. ಯೆಹೋವನು ಆಕಾಶವನ್ನೂ ಭೂಮಿಯನ್ನೂ ನಿರ್ಮಿಸಿರುತ್ತಾನೆ. ಮಾನವನಲ್ಲಿ ತನ್ನ ಆತ್ಮವನ್ನಿಟ್ಟನು. ಆ ಬಳಿಕ ಆತನು ಹೇಳಿದ್ದೇನೆಂದರೆ, 2 “ನಾನು ಜೆರುಸಲೇಮಿನ ಸುತ್ತಮುತ್ತಲಿರುವ ರಾಷ್ಟ್ರಗಳಿಗೆ ಆಕೆಯನ್ನು ಒಂದು ವಿಷದ ಲೋಟವನ್ನಾಗಿ ಮಾಡುತ್ತೇನೆ. ಆ ರಾಜ್ಯಗಳು ಆ ಪಟ್ಟಣದ ಮೇಲೆ ಬೀಳುವವು. ಆಗ ಇಡೀ ಯೆಹೂದವು ಉರುಲಿನೊಳಗೆ ಬೀಳುವದು. 3 ಆದರೆ ನಾನು ಜೆರುಸಲೇಮನ್ನು ಒಂದು ಭಾರವಾದ ಬಂಡೆ ಕಲ್ಲಿನಂತೆ ಮಾಡುವೆನು. ಅದನ್ನು ತೆಗೆಯಲು ಯತ್ನಿಸುವವನು ಗಾಯಗೊಳ್ಳುವನು. ಆದರೂ ಲೋಕದ ಎಲ್ಲಾ ದೇಶಗಳವರು ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಕ್ಕೆ ಬರುವರು. 4 ಆದರೆ ಆ ಸಮಯದಲ್ಲಿ ನಾನು ಅವರ ಕುದುರೆಗಳನ್ನು ಬೆಚ್ಚಿಬೀಳುವಂತೆ ಮಾಡುವೆನು. ಅದರ ಸವಾರನು ಭಯಗೊಳ್ಳುವನು. ಶತ್ರುವಿನ ಎಲ್ಲಾ ಕುದುರೆಗಳನ್ನು ನಾನು ಕುರುಡು ಮಾಡುವೆನು. ಆದರೆ ನಾನು ಕಣ್ಣು ತೆರೆದು ಯೆಹೂದ ವಂಶವನ್ನು ಸಂರಕ್ಷಿಸುವೆನು. 5 ಯೆಹೂದದ ಪ್ರಧಾನರು ತಮ್ಮ ಜನರನ್ನು ಹುರಿದುಂಬಿಸುವರು. ‘ಸೇವಾಧೀಶ್ವರನಾದ ಯೆಹೋವನು ನಿಮ್ಮ ದೇವರು. ಆತನೇ ನಮಗೆ ಬಲವನ್ನು ಕೊಡುವಾತನು’ ಎಂದು ಹೇಳುವರು. 6 ಆ ಸಮಯದಲ್ಲಿ ಯೆಹೂದದ ಕುಲ ಪ್ರಧಾನರನ್ನು ನಾನು ಕಾಡಿನಲ್ಲಿ ಉರಿಯುವ ಬೆಂಕಿಯಂತೆ ಮಾಡುವೆನು. ಅವರು ಹುಲ್ಲು ಸುಡುವ ಬೆಂಕಿಯೋಪಾದಿಯಲ್ಲಿ ತಮ್ಮ ವೈರಿಗಳನ್ನು ನಾಶಮಾಡುವರು. ತಮ್ಮ ಸುತ್ತಮುತ್ತಲಿರುವ ವೈರಿಗಳನ್ನು ನಾಶಮಾಡುವರು. ಜೆರುಸಲೇಮಿನ ಜನರು ಮತ್ತೆ ನೆಮ್ಮದಿಯಿಂದ ವಾಸಿಸುವರು.”
7 ಯೆಹೋವನು ಯೆಹೂದದ ಜನರನ್ನು ಮೊದಲು ರಕ್ಷಿಸುವನು. ಆಗ ಜೆರುಸಲೇಮಿನ ನಿವಾಸಿಗಳು ತಮ್ಮನ್ನು ಹೆಚ್ಚಿಸಿಕೊಳ್ಳುವದಿಲ್ಲ. ಜೆರುಸಲೇಮಿನಲ್ಲಿ ವಾಸಿಸುವ ದಾವೀದನ ಸಂತತಿಯವರೂ ಇತರರೂ ತಾವು ಯೆಹೂದ ಪ್ರಾಂತ್ಯದಲ್ಲಿ ವಾಸಿಸುವ ಜನರಿಗಿಂತ ಉತ್ತಮರು ಎಂದು ಹೆಚ್ಚಳಪಡುವದಿಲ್ಲ. 8 ಜೆರುಸಲೇಮಿನಲ್ಲಿ ವಾಸಿಸುವ ಜನರನ್ನು ಯೆಹೋವನು ಕಾಪಾಡುತ್ತಾನೆ. ಬಲಹೀನ ಮನುಷ್ಯನೂ ದಾವೀದನಂತೆ ಶೂರನಾಗುವನು. ದಾವೀದನ ಸಂತತಿಯ ಜನರು ದೇವರುಗಳಂತಿದ್ದು ದೇವರ ಸ್ವಂತ ದೂತರಂತೆ ತಮ್ಮ ಜನರನ್ನು ನಡಿಸುವರು.
9 ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಕ್ಕೆ ಬರುವ ಜನಾಂಗಗಳನ್ನು ನಾನು ನಾಶಮಾಡುವೆನು. 10 ನಾನು ದಾವೀದನ ಸಂತತಿಯವರನ್ನೂ ಜೆರುಸಲೇಮಿನಲ್ಲಿ ವಾಸಿಸುವವರನ್ನೂ ದಯೆಕರುಣೆಗಳ ಆತ್ಮದಿಂದ ತುಂಬಿಸುವೆನು. ಅವರು ತಾವು ಈಟಿಯಿಂದ ತಿವಿದ ನನ್ನನ್ನು ದೃಷ್ಟಿಸಿ ನೋಡುವರು; ತುಂಬಾ ದುಃಖಿಸುವರು. ತಮಗಿದ್ದ ಒಬ್ಬನೇ ಮಗನನ್ನು ಕಳಕೊಂಡವರಂತೆ ರೋಧಿಸುವರು. 11 ಜೆರುಸಲೇಮಿನಲ್ಲಿ ಅತೀವ ಗೋಳಾಟದ ಮತ್ತು ದುಃಖದ ಕಾಲ ಬರುವದು. ಅದು ಮೆಗಿದ್ದೋ ತಗ್ಗಿನಲ್ಲಿ ಹದದ್ ರಿಮ್ಮೋನನು ಸತ್ತಾಗ ಜನರು ಗೋಳಾಡಿದ ಸಮಯದಂತೆ ಇರುವದು. 12 ಪ್ರತಿಯೊಂದು ಕುಟುಂಬವೂ ರೋಧಿಸುವದು. ದಾವೀದನ ಕುಲದವರೂ ಗೋಳಾಡುವರು. ಅವರ ಹೆಂಡತಿಯರೂ ಗೋಳಾಡುವರು. ನಾತಾನಿನ ಕುಟುಂಬದವರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು. 13 ಲೇವಿಯ ಸಂತಾನದ ಜನರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು. ಶಿಮ್ಮಿಯ ಸಂತಾನದವರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು. 14 ಅದೇ ರೀತಿಯಲ್ಲಿ ಇತರ ಎಲ್ಲಾ ಕುಲದವರೂ ದುಃಖಿಸುವರು. ಗಂಡಸರೂ ಹೆಂಗಸರೂ ಗೋಳಾಡುವರು.”
13 ಆದರೆ ಆ ಸಮಯದಲ್ಲಿ ಜೆರುಸಲೇಮಿನಲ್ಲಿ ವಾಸಿಸುವ ಜನರಿಗೂ ದಾವೀದನ ಕುಟುಂಬದವರಿಗೂ ಒಂದು ಹೊಸ ಬುಗ್ಗೆಯ ನೀರು ಚಿಮ್ಮುವದು. ಆ ಬುಗ್ಗೆಯು ಜನರ ಪಾಪಗಳನ್ನು ತೊಳೆದು ಶುದ್ಧಮಾಡುವದಕ್ಕಾಗಿ ಇರುವದು.
ಇನ್ನು ಮುಂದೆ ಸುಳ್ಳು ಪ್ರವಾದಿಗಳಿರುವದಿಲ್ಲ
2 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ ಈ ಪ್ರಪಂಚದಲ್ಲಿರುವ ವಿಗ್ರಹಗಳನ್ನೆಲ್ಲಾ ನಾನು ತೆಗೆದುಬಿಡುವೆನು. ಜನರು ಅವುಗಳ ಹೆಸರನ್ನು ತಮ್ಮ ನೆನಪಿಗೆ ತಾರರು. ಸುಳ್ಳು ಪ್ರವಾದಿಗಳನ್ನೂ ಅಶುದ್ಧ ಆತ್ಮಗಳನ್ನೂ ನಾನು ಭೂಮಿಯ ಮೇಲಿಂದ ತೆಗೆದುಬಿಡುವೆನು. 3 ಯಾವನಾದರೂ ಪ್ರವಾದಿಸುವದನ್ನು ಮಂದುವರಿಸಿದರೆ ಅವನು ಶಿಕ್ಷೆಗೆ ಗುರಿಯಾಗುವನು. ‘ನೀನು ಯೆಹೋವನ ಹೆಸರಿನಲ್ಲಿ ಸುಳ್ಳನ್ನು ಹೇಳಿರುವೆ. ಆದ್ದರಿಂದ ನೀನು ಸಾಯಲೇಬೇಕು’ ಎಂದು ಅವನ ಸ್ವಂತ ತಂದೆತಾಯಿಗಳು ಅವನಿಗೆ ಹೇಳುವರು. ಅವನ ಸ್ವಂತ ತಂದೆ ತಾಯಿಗಳು ಅವನು ಸುಳ್ಳು ಪ್ರವಾದನೆ ಹೇಳಿದ್ದಕ್ಕೆ ಅವನನ್ನು ಖಡ್ಗದಿಂದ ಕೊಲ್ಲಿಸುವರು. 4 ಆ ಸಮಯದಲ್ಲಿ ಪ್ರವಾದಿಗಳು ತಮ್ಮ ದರ್ಶನ, ಪ್ರವಾದನೆಗಳಿಗಾಗಿ ನಾಚಿಕೊಳ್ಳುವರು. ತಾವು ಪ್ರವಾದಿಗಳೆಂದು ತೋರಿಸಿಕೊಳ್ಳಲು ಧರಿಸುವ ಗಡುಸಾದ ಬಟ್ಟೆಗಳನ್ನು ಧರಿಸಿಕೊಳ್ಳುವದಿಲ್ಲ. ಅವರು ಪ್ರವಾದನೆಗಳೆಂದು ಹೇಳುವ ತಮ್ಮ ಸುಳ್ಳುಗಳಿಂದ ಜನರನ್ನು ಮೋಸಪಡಿಸುವದಿಲ್ಲ. 5 ಅವನು, ‘ನಾನು ಪ್ರವಾದಿಯಲ್ಲ, ನಾನೊಬ್ಬ ರೈತ. ನಾನು ಬಾಲ್ಯಪ್ರಾಯದಿಂದಲೇ ರೈತನಾಗಿದ್ದೇನೆ’ ಎಂದು ಹೇಳುವನು. 6 ಆದರೆ ಬೇರೆ ಜನರು, ‘ಹಾಗಾದರೆ ನಿನ್ನ ಕೈಯಲ್ಲಿ ಗಾಯಗಳೇನು?’ ಎಂದು ಕೇಳಿದಾಗ ಅವನು, ‘ನನ್ನ ಸ್ನೇಹಿತರ ಮನೆಯಲ್ಲಿ ನನಗೆ ಏಟು ಬಿತ್ತು’ ಎಂದು ಅನ್ನುವನು.”
7 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ: “ಖಡ್ಗವೇ, ಕುರುಬನನ್ನು ಹೊಡೆ. ನನ್ನ ಸ್ನೇಹಿತನಿಗೆ ಹೊಡೆ. ಕುರುಬನನ್ನು ಹೊಡೆ. ಆಗ ಕುರಿಗಳು ಚದರಿಹೋಗುವವು. ಮತ್ತು ನಾನು ಆ ಚಿಕ್ಕವುಗಳನ್ನು ಶಿಕ್ಷಿಸುವೆನು. 8 ದೇಶದ ಮೂರನೇ ಎರಡು ಪಾಲಷ್ಟು ಜನರು ಗಾಯಗೊಂಡು ಸಾಯುವರು. ಒಂದು ಪಾಲಷ್ಟು ಜನರು ಬದುಕಿ ಉಳಿಯುವರು. 9 ಆ ಬಳಿಕ ನಾನು ಉಳಿದವರನ್ನು ಪರೀಕ್ಷಿಸುವೆನು. ಅವರಿಗೆ ಅನೇಕ ಸಂಕಟ ಬರಮಾಡುವೆನು. ಅದು ಬೆಳ್ಳಿಯನ್ನು ಬೆಂಕಿಯಲ್ಲಿ ಪರೀಕ್ಷಿಸಿದಂತಿರುವುದು. ಒಬ್ಬನು ಬಂಗಾರವನ್ನು ಪರೀಕ್ಷಿಸುವಂತೆ ನಾನು ಅವರನ್ನು ಪರೀಕ್ಷಿಸುವೆನು. ಆಗ ಅವರು ಸಹಾಯ ಮಾಡುವಂತೆ ನನಗೆ ಮೊರೆಯಿಡುವರು ಮತ್ತು ನಾನು ಅವರಿಗೆ ಉತ್ತರಕೊಡುವೆನು. ಆಗ ನಾನು, ‘ನೀವು ನನ್ನ ಜನರು’ ಎಂದು ಹೇಳುವೆನು. ಅದಕ್ಕವರು, ‘ಯೆಹೋವನು ನಮ್ಮ ದೇವರು’ ಎಂದು ಹೇಳುವರು.”
ನ್ಯಾಯತೀರ್ಪಿನ ದಿನ
14 ಯೆಹೋವನ ನ್ಯಾಯತೀರಿಸುವ ದಿನ ಬಂದಿದೆ. ನೀವು ಸುಲಿದುಕೊಂಡ ಐಶ್ವರ್ಯವು ನಿಮ್ಮ ಪಟ್ಟಣದಲ್ಲಿ ಪಾಲು ಮಾಡಲಾಗುವದು. 2 ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಮಾಡಲು ನಾನು ಎಲ್ಲಾ ಜನಾಂಗಗಳನ್ನು ಒಟ್ಟಿಗೆ ಸೇರಿಸುವೆನು. ಅವರು ಪಟ್ಟಣವನ್ನು ವಶಪಡಿಸಿಕೊಂಡು ಕಟ್ಟಡಗಳನ್ನೆಲ್ಲಾ ಧ್ವಂಸಮಾಡುವರು. ಹೆಂಗಸರನ್ನು ಬಲಾತ್ಕಾರದಿಂದ ಸಂಭೋಗಿಸುವರು. ಜನಸಂಖ್ಯೆಯ ಅರ್ಧದಷ್ಟು ಜನರು ಸೆರೆಹಿಡಿಯಲ್ಪಡುವರು. ಉಳಿದವರನ್ನು ಪಟ್ಟಣದಿಂದ ಕೊಂಡೊಯ್ಯುವುದಿಲ್ಲ. 3 ಆಗ ಯೆಹೋವನು ಆ ಜನಾಂಗಗಳ ವಿರುದ್ಧವಾಗಿ ಯುದ್ಧ ಮಾಡುವನು. ಅದು ಭಯಂಕರವಾದ ಕಾದಾಟವಾಗಿರುವದು. 4 ಅದೇ ಸಮಯದಲ್ಲಿ ಜೆರುಸಲೇಮಿಗೆ ಪೂರ್ವದಲ್ಲಿರುವ ಆಲೀವ್ ಮರಗಳ ಬೆಟ್ಟದ ಮೇಲೆ ನಿಂತುಕೊಳ್ಳುವನು. ಆ ಬೆಟ್ಟವು ಇಬ್ಭಾಗವಾಗುವದು. ಅದರ ಒಂದು ಭಾಗವು ಉತ್ತರಕ್ಕೆ ಹೋಗುವದು, ಇನ್ನೊಂದು ಭಾಗವು ದಕ್ಷಿಣದ ಕಡೆಗೆ ಹೋಗುವದು. 5 ಆ ಬೆಟ್ಟವು ನಿನ್ನ ಹತ್ತಿರಕ್ಕೆ ಬರುತ್ತಿರುವಾಗ ನೀನು ಓಡಿಹೋಗಲು ಪ್ರಯತ್ನಿಸುವೆ. ಯೆಹೂದದ ಅರಸನಾದ ಉಜ್ಜೀಯನ ಕಾಲದಲ್ಲಿ ಆದ ಭೂಕಂಪದ ಸಮಯದಲ್ಲಿ ನೀನು ಹೇಗೆ ಪಲಾಯನ ಮಾಡಿದ್ದಿಯೋ ಅದೇ ರೀತಿಯಲ್ಲಿ ನೀನು ಓಡುವೆ. ಆಗ ನನ್ನ ದೇವರಾದ ಯೆಹೋವನು ತನ್ನ ಎಲ್ಲಾ ಪರಿಶುದ್ಧ ಜನರೊಂದಿಗೆ ಬರುವನು.
6-7 ಅದು ಒಂದು ಮಹಾ ವಿಶೇಷ ದಿವಸವಾಗಿರುವದು. ಆ ದಿವಸದಲ್ಲಿ ಬೆಳಕಾಗಲಿ ಚಳಿಯಾಗಲಿ ಹಿಮವಾಗಲಿ ಇರುವದಿಲ್ಲ. ಇದು ಹೇಗೆ ಎಂದು ಯೆಹೋವನಿಗೆ ಮಾತ್ರ ಗೊತ್ತು. ರಾತ್ರಿ ಬರಬೇಕಾದ ವೇಳೆಯಲ್ಲಿ ಹಗಲು ಇನ್ನೂ ಇರುವದು. 8 ಆ ಸಮಯದಲ್ಲಿ ಜೆರುಸಲೇಮಿನಿಂದ ನೀರು ಹರಿಯುತ್ತಲೇ ಇರುವದು. ಆ ನದಿಯು ಇಬ್ಭಾಗವಾಗಿ ಒಂದು ಭಾಗ ಪೂರ್ವಕ್ಕೆ ಹರಿಯುವದು. ಇನ್ನೊಂದು ಭಾಗ ಪಶ್ಚಿಮಕ್ಕೆ ಹರಿದು ಮೆಡಿಟರೇನಿಯನ್ ಸಮುದ್ರವನ್ನು ಸೇರುವದು. ಈ ನದಿಯು ಎಲ್ಲಾ ಕಾಲದಲ್ಲಿಯೂ ಬೇಸಿಗೆ, ಹಿಮಕಾಲವೆನ್ನದೆ ಹರಿಯುತ್ತಲೇ ಇರುವದು. 9 ಆ ಸಮಯದಲ್ಲಿ ಯೆಹೋವನು ಇಡೀ ಭೂಲೋಕದ ಅರಸನಾಗುವನು. ಆತನು ಒಬ್ಬನೇ. ಆತನ ಹೆಸರು ಒಂದೇ. 10 ಆ ಸಮಯದಲ್ಲಿ ಜೆರುಸಲೇಮಿನ ಸುತ್ತಮುತ್ತ ಇರುವ ಜಾಗವು ನಿರ್ಜನವಾಗಿದ್ದು ಅರಾಬಾ ಮರುಭೂಮಿಯಂತಿರುವದು. ದೇಶವು ಗೆಬದಿಂದ ಹಿಡಿದು ನೆಗೆವ್ನಲ್ಲಿರುವ ರಿಮ್ಮೋನ್ ತನಕ ಮರುಭೂಮಿಯಂತಿರುವದು. ಆದರೆ ಜೆರುಸಲೇಮ್ ನಗರವು ತಿರುಗಿ ಕಟ್ಟಲ್ಪಡುವದು. ಬೆನ್ಯಾಮೀನ್ ದ್ವಾರದಿಂದ ಮೂಲೇ ದ್ವಾರ ಅಥವಾ ಮೊದಲನೇ ದ್ವಾರದ ತನಕ ಮತ್ತು ಹನನೇಲ್ ಬುರುಜಿನಿಂದ ಹಿಡಿದು ಅರಸನ ದ್ರಾಕ್ಷಿತೊಟ್ಟಿಯ ತನಕ ಹೊಸದಾಗಿ ಕಟ್ಟಲ್ಪಡುವದು. 11 ಜನರು ಅಲ್ಲಿಗೆ ವಾಸಿಸಲು ಹೋಗುವರು. ಇನ್ನು ಮುಂದೆ ಯಾವ ಶತ್ರುವೂ ಅವರನ್ನು ನಾಶಮಾಡಲು ಬರುವುದಿಲ್ಲ. ಜೆರುಸಲೇಮ್ ಸುರಕ್ಷಿತವಾಗಿರುವದು.
12 ಆದರೆ ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧ ಮಾಡಿದ ಜನಾಂಗಗಳನ್ನೆಲ್ಲಾ ಯೆಹೋವನು ಶಿಕ್ಷಿಸುವನು. ಅವರಿಗೆ ಭಯಂಕರ ರೋಗವನ್ನು ಬರಮಾಡುವನು. ಅವರು ಜೀವಂತರಾಗಿರುವಾಗಲೇ ಅವರ ಚರ್ಮವು ಕೊಳೆತುಹೋಗುವದು. ಅವರ ಕಣ್ಣುಗಳು ಅವು ಇರುವಲ್ಲಿಯೇ ಕೊಳೆತುಹೋಗುವವು. ಅವರ ಬಾಯೊಳಗೆ ಅವರ ನಾಲಿಗೆಗಳು ಕೊಳೆತುಹೋಗುವವು. 13-15 ಆ ಭಯಂಕರವಾದ ವ್ಯಾಧಿಯು ಶತ್ರುಗಳ ಶಿಬಿರದಲ್ಲಿರುವದು. ಅವರ ಬಳಿಯಲ್ಲಿರುವ ಕುದುರೆ, ಹೇಸರಕತ್ತೆ, ಒಂಟೆ ಮತ್ತು ಕತ್ತೆಗಳೆಲ್ಲಾ ಈ ವ್ಯಾಧಿಯಿಂದ ಸಂಕಟಪಡುವವು.
ಆ ಸಮಯದಲ್ಲಿ ಆ ಜನರು ನಿಜವಾಗಿಯೂ ಯೆಹೋವನಿಗೆ ಭಯಪಡುವರು. ಪ್ರತಿಯೊಬ್ಬನೂ ತನ್ನ ನೆರೆಯವನ ಕೈಗಳನ್ನು ಹಿಡಿದುಕೊಳ್ಳುವನು ಮತ್ತು ಆ ನೆರೆಯವರು ಪರಸ್ಪರ ಹೊಡೆದಾಡಿಕೊಳ್ಳುವರು. ಯೆಹೂದವೂ ಜೆರುಸಲೇಮಿನೊಂದಿಗೆ ಕಾದಾಡುವದು. ಎಲ್ಲಾ ಜನಾಂಗಗಳ ಐಶ್ವರ್ಯವನ್ನು ಪಟ್ಟಣದ ಸುತ್ತಲೂ ಶೇಖರಿಸಿಟ್ಟಿರುವಾಗಲೂ ಇದು ಸಂಭವಿಸುವುದು. ಆಗ ಅಲ್ಲಿ ಬಹು ಸಂಖ್ಯೆಯಲ್ಲಿ ಬೆಳ್ಳಿಬಂಗಾರ ಮತ್ತು ಬಟ್ಟೆಗಳ ರಾಶಿ ಇರುವದು. 16 ಜೆರುಸಲೇಮಿನೊಂದಿಗೆ ಯುದ್ಧಮಾಡಲು ಬಂದವರಲ್ಲಿ ಕೆಲವರು ಸಾಯದೆ ಉಳಿಯುವರು. ಅವರೆಲ್ಲರು ಪ್ರತಿವರ್ಷ ಅರಸನೂ ಸರ್ವಶಕ್ತನೂ ಆಗಿರುವ ಯೆಹೋವನನ್ನು ಆರಾಧಿಸಲು ಜೆರುಸಲೇಮಿಗೆ ಬರುವರು. ಪರ್ಣಶಾಲೆಗಳ ಹಬ್ಬವನ್ನು ಆಚರಿಸಲು ಬರುವರು. 17 ರಾಜನೂ ಸರ್ವಶಕ್ತನೂ ಆಗಿರುವ ಯೆಹೋವನನ್ನು ಆರಾಧಿಸಲು ಭೂಲೋಕದ ಕುಟುಂಬಗಳ ಯಾವ ಜನರಾದರೂ ಜೆರುಸಲೇಮಿಗೆ ಹೋಗದಿದ್ದಲ್ಲಿ ಅವರ ರಾಜ್ಯಗಳಲ್ಲಿ ಮಳೆಗೆರೆಯುವದು ನಿಂತುಹೋಗುವದು. 18 ಈಜಿಪ್ಟಿನಲ್ಲಿರುವ ಯಾವ ಕುಟುಂಬವಾಗಲಿ ಪರ್ಣಶಾಲೆಗಳ ಹಬ್ಬವನ್ನು ಆಚರಿಸಲು ಬಾರದೆ ಹೋದಲ್ಲಿ ಯೆಹೋವನು ಶತ್ರುಗಳಿಗೆ ತಂದ ವ್ಯಾಧಿಯನ್ನು ಅವರಿಗೂ ಬರಮಾಡುವನು. 19 ಇದು ಕೇವಲ ಈಜಿಪ್ಟಿನ ಜನರಿಗೆ ಮಾತ್ರವೇ ಆಗಿರದೆ ಯಾವ ದೇಶವು ಪರ್ಣಶಾಲೆಗಳ ಹಬ್ಬವನ್ನು ಆಚರಿಸಲು ಬರುವುದಿಲ್ಲವೋ ಆ ದೇಶದ ಜನರೂ ಅದೇ ರೋಗಕ್ಕೆ ತುತ್ತಾಗುವರು.
20 ಆ ಸಮಯದಲ್ಲಿ ಸಮಸ್ತವೂ ಯೆಹೋವನಿಗೆ ಸೇರಿದ್ದಾಗಿರುವದು. ಕುದುರೆಗಳ ಮೇಲಿರುವ ಜೀನಿನ ಮೇಲೂ ಸರ್ವಶಕ್ತನಾದ “ಯೆಹೋವನಿಗೆ ಇದು ಮೀಸಲಾಗಿರುವದು” ಎಂದು ಬರೆಯಲ್ಪಡುವದು. ಯೆಹೋವನ ಆಲಯದಲ್ಲಿ ಉಪಯೋಗಿಸುವ ಎಲ್ಲಾ ಮಡಕೆಗಳು ಯಜ್ಞವೇದಿಕೆಯ ಮೇಲೆ ಉಪಯೋಗಿಸುವ ಬೋಗುಣಿಗಳಷ್ಟೇ ಮುಖ್ಯವಾಗಿವೆ. 21 ವಾಸ್ತವವಾಗಿ ಜೆರುಸಲೇಮಿನ ಮತ್ತು ಯೆಹೊದದ ಪ್ರತಿಯೊಂದು ಪಾತ್ರೆಯ ಮೇಲೆ, “ಸರ್ವಶಕ್ತನಾದ ಯೆಹೋವನಿಗೆ ಮೀಸಲಾಗಿದೆ” ಎಂದು ಬರೆದಿರುತ್ತದೆ. ಯಜ್ಞಗಳನ್ನರ್ಪಿಸಲು ಬರುವ ಜನರೆಲ್ಲರೂ ಆ ಪಾತ್ರೆಗಳನ್ನು ತೆಗೆದುಕೊಂಡು ಅವುಗಳಲ್ಲಿ ವಿಶೇಷ ಅಡಿಗೆಯನ್ನು ಮಾಡುವರು.
ಆ ಸಮಯದಲ್ಲಿ ಸರ್ವಶಕ್ತನಾದ ಯೆಹೋವನ ಆಲಯದೊಳಗೆ ಯಾವ ವರ್ತಕನೂ ವ್ಯಾಪಾರ ನಡೆಸುವದಿಲ್ಲ.
Kannada Holy Bible: Easy-to-Read Version. All rights reserved. © 1997 Bible League International