Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಹಬಕ್ಕೂಕ 1-3

ಯೆಹೋವನಿಗೆ ಹಬಕ್ಕೂಕನ ದೂರು

ಪ್ರವಾದಿಯಾದ ಹಬಕ್ಕೂಕನಿಗೆ ಕೊಡಲ್ಪಟ್ಟ ಸಂದೇಶ.

ಯೆಹೋವನೇ, ನಾನು ನಿನ್ನಿಂದ ಸಹಾಯವನ್ನು ಕೇಳುತ್ತಲೇ ಇದ್ದೇನೆ. ನನ್ನ ಮೊರೆಯನ್ನು ಯಾವಾಗ ಕೇಳುವೆ? ನಾನು ಹಿಂಸೆಯ ವಿಷಯವಾಗಿ ನಿನ್ನನ್ನು ಕೂಗಿದರೂ ನೀನು ಏನೂ ಮಾಡಲಿಲ್ಲ. ಜನರು ವಸ್ತುಗಳನ್ನು ಕದ್ದುಕೊಂಡು ಇತರರನ್ನು ಗಾಯಗೊಳಿಸುತ್ತಿದ್ದಾರೆ. ಜನರು ಜಗಳ ಮಾಡುತ್ತಾ ಕಾದಾಡುತ್ತಿದ್ದಾರೆ. ಇಂಥಾ ಭಯಂಕರ ಸಂಗತಿಗಳನ್ನು ನೋಡುವಂತೆ ಯಾಕೆ ಮಾಡುವೆ. ಕಾನೂನು ಬಲಹೀನವಾಗಿದೆ. ಅದು ಸರಿಯಾದ ನ್ಯಾಯಕೊಡುವದಿಲ್ಲ. ದುಷ್ಚರು ಶಿಷ್ಟರ ಮೇಲೆ ವ್ಯಾಜ್ಯವಾಡಿ ಗೆಲ್ಲುತ್ತಿದ್ದಾರೆ. ಆದ್ದರಿಂದ ಕಾನೂನು ನ್ಯಾಯವಾಗಿಯೇ ಇಲ್ಲ. ನ್ಯಾಯಕ್ಕೆ ಜಯವಿಲ್ಲ.

ಹಬಕ್ಕೂಕನಿಗೆ ದೇವರ ಉತ್ತರ

ಯೆಹೋವನು ಉತ್ತರಿಸುತ್ತಾ, “ಇತರ ದೇಶಗಳನ್ನು ನೋಡು, ಅವರನ್ನು ಗಮನಿಸು. ನೀನು ಆಶ್ಚರ್ಯಪಡುವೆ. ನೀನು ನಿನ್ನ ಜೀವಮಾನದಲ್ಲಿಯೇ ಅಚ್ಚರಿಪಡುವಂಥ ವಿಷಯವನ್ನು ನಾನು ನಡಿಸುತ್ತೇನೆ. ನೀನು ಅದನ್ನು ನೋಡಿ ನಂಬುವೆ. ನಿನಗೆ ಅದರ ವಿಷಯವಾಗಿ ತಿಳಿಸಲ್ಪಟ್ಟರೂ ನೀನು ನಂಬುವದಿಲ್ಲ. ನಾನು ಬಾಬಿಲೋನಿನವರನ್ನು ಬಲಾಢ್ಯ ಜನಾಂಗವಾಗಿ ಮಾಡುವೆನು. ಅವರು ಬಲಶಾಲಿಗಳೂ ನಿರ್ದಯಿಗಳೂ ಆಗಿದ್ದಾರೆ. ಅವರು ಲೋಕದಲ್ಲೆಲ್ಲಾ ಸಂಚರಿಸುವರು. ತಮ್ಮದಲ್ಲದ ಮನೆಗಳನ್ನು ಮತ್ತು ನಗರಗಳನ್ನು ತಮ್ಮ ವಶಮಾಡಿಕೊಳ್ಳುವರು. ಬಾಬಿಲೋನಿನ ಜನರು ಇತರರಲ್ಲಿ ಭಯ ಹುಟ್ಟಿಸುವರು. ಅವರು ತಮ್ಮ ಇಷ್ಟಬಂದ ಹಾಗೆ ಮಾಡುವರು; ಇಷ್ಟಬಂದ ಕಡೆಗೆ ಹೋಗುವರು. ಅವರ ಕುದುರೆಗಳು ಚಿರತೆಗಳಿಗಿಂತ ವೇಗವಾಗಿವೆ; ಸೂರ್ಯಸ್ತಮಾನ ಕಾಲದಲ್ಲಿ ತೋಳಗಳಿಗಿಂತ ಭಯಂಕರವಾಗಿವೆ. ಅವರ ರಾಹುತರು ಬಹುದೂರ ದೇಶದಿಂದ ಬಂದರು. ಹಸಿದ ಗಿಡುಗ ಹೇಗೆ ಆಕಾಶದಿಂದ ನೆಲದ ಮೇಲಿರುವ ಆಹಾರದ ಮೇಲೆ ಬೀಳುತ್ತದೋ ಅದೇ ರೀತಿಯಲ್ಲಿ ಅವರ ರಾಹುತರು ವೈರಿಗಳ ಮೇಲೆ ಬೀಳುವರು. ಅವರು ಬಯಸುವುದು ಯುದ್ಧವೊಂದನ್ನೇ. ಅವರ ಸೈನ್ಯವು ಮರುಭೂಮಿಯ ಮೇಲೆ ಬೀಸುವ ಗಾಳಿಯ ತರಹ ವೇಗವಾಗಿ ಸಂಚರಿಸುವದು. ಮತ್ತು ಬಾಬಿಲೋನಿನ ಸೈನಿಕರು ಮರಳಿನಷ್ಟು ಅಸಂಖ್ಯಾತ ಜನರನ್ನು ಸೆರೆಹಿಡಿಯುತ್ತಾರೆ.

10 “ಇತರ ಜನಾಂಗದ ಅರಸರನ್ನು ಬಾಬಿಲೋನಿನ ಸೈನಿಕರು ಗೇಲಿ ಮಾಡುತ್ತಾರೆ. ಪರದೇಶದ ಅರಸರು ಅವರಿಗೆ ಹಾಸ್ಯಾಸ್ಪದವಾಗಿರುತ್ತಾರೆ. ಕೋಟೆಕೊತ್ತಲುಗಳಿರುವ ನಗರವನ್ನು ನೋಡಿ ಅವರು ನಗಾಡುವರು. ಆ ಸೈನಿಕರು ಕೋಟೆಯ ಗೋಡೆಯ ತನಕ ಮಣ್ಣಿನದಿಬ್ಬವನ್ನೇರಿಸಿ, ಸುಲಭವಾಗಿ ಪಟ್ಟಣಗಳನ್ನು ವಶಮಾಡಿಕೊಳ್ಳುವರು. 11 ಆ ಬಳಿಕ ಅವರು ಗಾಳಿಯಂತೆ ಅಲ್ಲಿಂದ ಬೇರೆ ಸ್ಥಳಗಳ ಮೇಲೆ ದಾಳಿಮಾಡಲು ಹೊರಟುಹೋಗುವರು. ಬಾಬಿಲೋನಿನವರು ಆರಾಧಿಸುವ ಒಂದೇ ವಿಷಯ ಯಾವದೆಂದರೆ ಅವರ ಸ್ವಂತ ಶಕ್ತಿಯನ್ನೇ.”

ಹಬಕ್ಕೂಕನ ಎರಡನೇ ದೂರು

12 ಆಗ ಹಬಕ್ಕೂಕನು ಹೇಳಿದ್ದೇನೆಂದರೆ,
ಯೆಹೋವನೇ, ನೀನು ನಿತ್ಯಕಾಲಕ್ಕೂ ಜೀವಿಸುವ ದೇವರು.
    ನೀನು ಎಂದಿಗೂ ಸಾಯದ ನನ್ನ ಪರಿಶುದ್ಧ ದೇವರು.
ನೀನು ಯೋಚಿಸುವದನ್ನು ನೆರವೇರಿಸಲು ಬಾಬಿಲೋನಿನವರನ್ನು ಸೃಷ್ಟಿಸಿರುವೆ.
    ನಮ್ಮ ಬಂಡೆಯಾದ ನೀನು ಯೆಹೂದದ ಜನರನ್ನು ಶಿಕ್ಷಿಸುವುದಕ್ಕಾಗಿಯೇ ಅವರನ್ನು ಸೃಷ್ಟಿಸಿರುವೆ.
13 ಕೆಡುಕನ್ನು ದೃಷ್ಟಿಸಲಾರದಷ್ಟು ನಿನ್ನ ಕಣ್ಣುಗಳು ಶುದ್ಧವಾಗಿವೆ.
    ಜನರು ಮಾಡುವ ದುಷ್ಕೃತ್ಯಗಳನ್ನು ನೀನು ನೋಡಲಾರೆ.
ಹೀಗಿರಲು ಆ ಕೆಡುಕರು ಜಯಗಳಿಸುವದನ್ನು ನೀನು ಹೇಗೆ ವೀಕ್ಷಿಸಬಲ್ಲೆ?
    ದುಷ್ಟರು ಒಳ್ಳೆಯವರನ್ನು ಸೋಲಿಸಿದಾಗ ನೀನು ನಿನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಬಾರದೇಕೆ?
    ಒಳ್ಳೆಯ ಜನರನ್ನು ಕೆಟ್ಟ ಜನರು ಸೋಲಿಸುವುದನ್ನು ನೀನು ಹೇಗೆ ನೋಡುವೆ?

14 ಸಮುದ್ರದಲ್ಲಿರುವ ಮೀನುಗಳಂತೆ ನೀನು ಜನರನ್ನು ಸೃಷ್ಟಿಸಿರುವೆ.
    ಅವರು ಒಬ್ಬ ನಾಯಕನಿಂದ ಸಮುದ್ರಪ್ರಾಣಿಗಳಂತಿದ್ದಾರೆ,
15 ಅವೆಲ್ಲವನ್ನು ಗಾಳ, ಬಲೆಗಳಿಂದ ವೈರಿಯು ಹಿಡಿಯುತ್ತಾನೆ.
    ಬಲೆಯಲ್ಲಿ ಅವುಗಳನ್ನು ವೈರಿಯು ಹಿಡಿದು ಎಳೆಯುವನು.
    ತಾನು ಹಿಡಿದನೆಂದು ವೈರಿಯು ಹರ್ಷಿಸುವನು.
16 ಅವನ ಬಲೆಗಳು ಅವನು ಧನಿಕನಂತೆ ಜೀವಿಸಲು ಸಹಾಯ ಮಾಡುವವು.
    ಅವನು ಒಳ್ಳೆಯ ಆಹಾರವನ್ನು ಉಣ್ಣುವನು.
ಅದಕ್ಕೆ ವೈರಿಯು ತನ್ನ ಬಲೆಯನ್ನು ಆರಾಧಿಸುವನು.
    ಅವನು ಯಜ್ಞವನ್ನರ್ಪಿಸಿ ಧೂಪ ಹಾಕುವನು.
    ಬಲೆಯನ್ನು ಗೌರವಿಸುವನು.
17 ಅವನು ತನ್ನ ಬಲೆಯಿಂದ ಐಶ್ವರ್ಯವನ್ನು ಹೊಂದುತ್ತಾ ಮುಂದರಿಯುವನೋ?
    ನಿರ್ದಯೆಯಿಂದ ಜನರನ್ನು ನಾಶಮಾಡುತ್ತಲೇ ಇರುವನೋ?

“ನಾನು ಕಾವಲುಗಾರನಂತೆ ನಿಂತುಕೊಂಡು ಗಮನಿಸುವೆನು.
    ಯೆಹೋವನು ನನಗೆ ಏನನ್ನುವನೋ ಎಂದು ನಾನು ನಿರೀಕ್ಷಿಸುತ್ತಿರುವೆನು.
ಆತನು ನನ್ನ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವನೆಂಬುದನ್ನು ತಾಳ್ಮೆಯಿಂದ ಗಮನಿಸುವೆನು.”

ಹಬಕ್ಕೂಕನಿಗೆ ದೇವರ ಉತ್ತರ

ಯೆಹೋವನು ನನಗೆ ಹೇಳಿದ್ದು: “ನಾನು ನಿನಗೆ ತೋರಿಸುವದನ್ನು ಬರೆ. ಜನರು ಸುಲಭವಾಗಿ ಓದುವಂತೆ ಅದನ್ನು ದೊಡ್ಡ ಹಲಗೆಗಳ ಮೇಲೆ ಬರೆ. ಭವಿಷ್ಯದ ಒಂದು ವಿಶೇಷ ಸಮಯದ ಕುರಿತಾಗಿ ಈ ಸಂದೇಶ. ಈ ಸಂದೇಶವು ಅಂತ್ಯದ ವಿಷಯವಾಗಿ ಇದೆ. ಇದು ಖಂಡಿತವಾಗಿಯೂ ನೆರವೇರುತ್ತದೆ. ಆ ಸಮಯವು ಎಂದಿಗೂ ಬರುವುದಿಲ್ಲ ಎಂಬಂತೆ ಕಾಣಬಹುದು. ಆದರೆ ತಾಳ್ಮೆಯಿಂದಿರು; ಅದನ್ನು ನಿರೀಕ್ಷಿಸುತ್ತಾ ಇರು. ಆ ಸಮಯವು ಬರುವದು. ಅದು ತಡವಾಗುವುದಿಲ್ಲ. ಯಾವ ಜನರು ಅದರ ವಿಚಾರವಾಗಿ ಕೇಳಲು ನಿರಾಕರಿಸುವರೋ ಅವರಿಗಾಗಿ ಈ ಸಂದೇಶವಿರುವದಿಲ್ಲ. ಆದರೆ ಒಬ್ಬ ಸತ್ಪುರುಷನು ಈ ಸಂದೇಶವನ್ನು ನಂಬುವನು. ಆ ಸತ್ಪುರುಷನು ತಾನು ನಂಬಿದ ನಿಮಿತ್ತವಾಗಿ ಬದುಕುವನು.”

ಯೆಹೋವನು ಹೇಳಿದ್ದು: “ಒಬ್ಬನನ್ನು ದ್ರಾಕ್ಷಾರಸವು ಮೋಸಪಡಿಸಬಹುದು. ಅದೇ ರೀತಿಯಲ್ಲಿ ಬಲಿಷ್ಠನ ಗರ್ವವು ಅವನನ್ನು ಮೋಸಪಡಿಸಬಹುದು. ಆದರೆ ಅವನಿಗೆ ಸಮಾಧಾನ ಸಿಕ್ಕುವುದಿಲ್ಲ. ಅವನು ಮರಣದಂತಿರುವನು. ಅವನಿಗೆ ಯಾವಾಗಲೂ ಹೆಚ್ಚೆಚ್ಚು ಬೇಕು. ಮರಣದಂತೆ ಅವನಿಗೆ ತೃಪ್ತಿಯೇ ಇರದು. ಅವನು ಜನಾಂಗಗಳನ್ನು ಸೋಲಿಸುತ್ತಲೇ ಇರುವನು. ಆ ಜನರನ್ನು ತನ್ನ ಕೈದಿಗಳನ್ನಾಗಿ ಮಾಡುತ್ತಲೇ ಇರುವನು. ಆದರೆ ಬೇಗನೇ ಅವರೆಲ್ಲಾ ಇವನನ್ನು ನೋಡಿ ನಗಾಡುವರು. ಅವನ ಸೋಲುವಿಕೆಯ ಕಥೆಗಳನ್ನು ವರ್ಣಿಸುವರು; ನಗಾಡುತ್ತಾ, ‘ಎಂಥಾ ದುಃಖಕರ ಸಂಗತಿ, ಅಷ್ಟೆಲ್ಲಾ ಸಂಪಾದಿಸಿದವನು ಅದನ್ನು ಇಟ್ಟುಕೊಳ್ಳಲಾಗಲಿಲ್ಲವಲ್ಲ. ಅವನು ಸಾಲಗಳನ್ನು ವಸೂಲಿ ಮಾಡಿ ತನ್ನನ್ನು ಐಶ್ವರ್ಯವಂತನನ್ನಾಗಿ ಮಾಡಿಕೊಂಡನು.’

“ಬಲಶಾಲಿಯಾದ ಮನುಷ್ಯನೇ, ನೀನು ಜನರಿಂದ ಹಣವನ್ನು ಸುಲಿದುಕೊಂಡಿರುವೆ. ಒಂದು ದಿವಸ ಆ ಜನರು ಎಚ್ಚರವಾಗಿ ತಮಗೆ ಏನಾಯಿತೆಂದು ಅರಿತುಕೊಳ್ಳುವರು. ನಿನಗೆ ವಿರುದ್ಧವಾಗಿ ಏಳುವರು. ನಿನ್ನ ಕೈಯಿಂದ ಆ ವಸ್ತುಗಳನ್ನು ಕಿತ್ತುಕೊಳ್ಳುವರು. ಆಗ ನೀನು ಭಯಗ್ರಸ್ತನಾಗುವೆ. ಎಷ್ಟೋ ಜನಾಂಗಗಳಿಂದ ನೀನು ವಸ್ತುಗಳನ್ನು ಅಪಹರಿಸಿರುವೆ. ಅವರು ನಿನ್ನಿಂದ ಇನ್ನೂ ಹೆಚ್ಚಾಗಿ ಅಪಹರಿಸುವರು. ನೀನು ಎಷ್ಟೋ ಮಂದಿಯನ್ನು ಕೊಂದಿರುವೆ; ದೇಶಗಳನ್ನೂ ನಗರಗಳನ್ನೂ ನಾಶಮಾಡಿರುವೆ. ಅಲ್ಲಿಯ ಎಷ್ಟೋ ಜನರನ್ನು ಸಂಹರಿಸಿರುವೆ.

“ಹೌದು, ಕೆಟ್ಟದ್ದನ್ನು ಮಾಡಿ ಧನಿಕನಾದವನಿಗೆ ಬಹಳ ಕೇಡಾಗುವುದು. ಆ ಮನುಷ್ಯನು ಒಂದು ಸುರಕ್ಷಿತವಾದ ಸ್ಥಳದಲ್ಲಿ ವಾಸಿಸಲು ಇದನ್ನೆಲ್ಲಾ ಮಾಡುತ್ತಾನೆ. ಹಾಗೆ ಮಾಡುವದರಿಂದ ಬೇರೆ ಜನರು ಅವನಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲವೆಂದು ಅವನು ತಿಳಿಯುತ್ತಾನೆ. ಆದರೆ ಕೆಟ್ಟ ಸಂಗತಿಗಳು ಅವನಿಗೆ ಸಂಭವಿಸುವವು. 10 ಎಷ್ಟೋ ಜನರನ್ನು ನಾಶಮಾಡಲು ನೀನು ಯೋಜನೆ ಮಾಡಿರುವೆ. ಆದರೆ ಆ ಯೋಜನೆಗಳು ನಿನ್ನ ಮನೆಗೆ ನಾಚಿಕೆಯನ್ನು ತಂದೊಡ್ಡುವವು. ನೀನು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ನೀನು ನಿನ್ನ ಪ್ರಾಣವನ್ನು ಕಳೆದುಕೊಳ್ಳುವೆ. 11 ಗೋಡೆಯ ಕಲ್ಲುಗಳು ನಿನಗೆ ವಿರುದ್ಧವಾಗಿ ಕೂಗುವವು. ನಿನ್ನ ಮನೆಯ ಮರದ ಜಂತೆಗಳು ಸಹ ನೀನು ಅಪರಾಧಿಯೆಂದು ಸಾಕ್ಷಿ ಹೇಳುವವು.

12 “ಪಟ್ಟಣ ಕಟ್ಟುವುದಕ್ಕಾಗಿ ಜನರನ್ನು ಕೊಲ್ಲುವವನಿಗೂ ಪಟ್ಟಣದ ಕೋಟೆಗಳನ್ನು ಭದ್ರಪಡಿಸಲು ದುಷ್ಕೃತ್ಯಗಳನ್ನು ಮಾಡುವವನಿಗೂ ಕೇಡಾಗುವದು. 13 ಆ ಜನರು ಕಟ್ಟುವ ಪ್ರತಿಯೊಂದನ್ನೂ ಸರ್ವಶಕ್ತನಾದ ಯೆಹೋವನು ಬೆಂಕಿಯಿಂದ ನಾಶಮಾಡುವ ತೀರ್ಮಾನವನ್ನು ಮಾಡಿರುತ್ತಾನೆ. ಅವರು ಮಾಡಿದ ಕೆಲಸವೆಲ್ಲವೂ ವ್ಯರ್ಥವಾಗುವದು. 14 ಆಗ ಎಲ್ಲಾ ಕಡೆಗಳಲ್ಲಿರುವ ಜನರು ಯೆಹೋವನ ಮಹಿಮೆಯನ್ನು ತಿಳಿದುಕೊಳ್ಳುವರು. ಹೇಗೆ ನೀರು ಸಮುದ್ರಕ್ಕೆ ಹರಿಯುತ್ತದೋ ಹಾಗೆ ಈ ವರ್ತಮಾನವು ಎಲ್ಲಾ ಕಡೆಗೆ ಹಬ್ಬುವದು. 15 ತಾನು ಸಿಟ್ಟುಗೊಂಡು ಇತರರು ಸಂಕಟಪಡುವಂತೆ ಮಾಡುವವನಿಗೆ ಬಹಳ ಕೇಡು ಉಂಟಾಗುವದು. ಸಿಟ್ಟಿನ ಭರದಲ್ಲಿ ಆ ಮನುಷ್ಯನು ಇತರ ಜನರನ್ನು ನೆಲಕ್ಕೆ ಅಪ್ಪಳಿಸಿಬಿಡುವನು. ಅವನು ಅವರನ್ನು ಅಮಲೇರಿದವರಂತೆಯೂ ಬೆತ್ತಲೆಯಾಗಿರುವವರಂತೆಯೂ ಪರಿಗಣಿಸುತ್ತಾನೆ.

16 “ಆದರೆ ಅವನು ಯೆಹೋವನ ಕೋಪವನ್ನು ತಿಳಿದುಕೊಳ್ಳುವನು. ಆ ಕೋಪವು ಯೆಹೋವನ ಬಲಗೈಯಲ್ಲಿರುವ ವಿಷದ ಪಾತ್ರೆಯಂತಿರುವುದು. ಆ ವ್ಯಕ್ತಿಯು ಆ ಕೋಪವನ್ನು ರುಚಿನೋಡುವನು ಮತ್ತು ಅಮಲೇರಿದವನಂತೆ ನೆಲದ ಮೇಲೆ ಕುಸಿದುಬೀಳುವನು.

“ದುಷ್ಟ ಅಧಿಪತಿಯೇ, ನೀನು ಆ ಪಾತ್ರೆಯಿಂದ ಕುಡಿಯುವೆ. ನಿನಗೆ ಅವಮಾನವೇ ಹೊರತು, ಮಾನ ಸಿಗುವುದಿಲ್ಲ. 17 ಲೆಬನೋನಿನಲ್ಲಿ ಅನೇಕರನ್ನು ಗಾಯಗೊಳಿಸಿರುವೆ. ಅಲ್ಲಿ ಎಷ್ಟೋ ಪಶುಗಳನ್ನು ಅಪಹರಿಸಿರುವೆ. ಆ ದೇಶದಲ್ಲಿ ನೀನು ಮಾಡಿದ ದುಷ್ಕೃತ್ಯಗಳ ನಿಮಿತ್ತ, ಅದರಿಂದಾಗಿ ಅಲ್ಲಿ ಸತ್ತುಹೋದವರ ನಿಮಿತ್ತ ನೀನು ಭಯಗ್ರಸ್ತನಾಗಿರುವೆ. ಅಲ್ಲಿಯ ಪಟ್ಟಣಗಳಿಗೆ ನೀನು ಮಾಡಿದ ಹಾನಿ, ಜನರಿಗೆ ನೀನು ಕೊಟ್ಟ ಸಂಕಟದ ನಿಮಿತ್ತ ನಿನಗೆ ಹೆದರಿಕೆಯುಂಟಾಗಿದೆ.”

ವಿಗ್ರಹಗಳ ವಿಷಯವಾದ ಸಂದೇಶ

18 ಆ ಮನುಷ್ಯನ ಸುಳ್ಳು ದೇವರು ಅವನಿಗೆ ಸಹಾಯ ಮಾಡಲಾರದು. ಯಾಕೆಂದರೆ ಅದು ಒಬ್ಬನು ಲೋಹದಿಂದ ಮಾಡಿದ ಕೇವಲ ವಿಗ್ರಹವಷ್ಟೆ. ಅದು ಕೇವಲ ಜಡಮೂರ್ತಿ. ಅದನ್ನು ಮಾಡಿದವನು, ಅದು ಅವನಿಗೆ ಸಹಾಯ ಮಾಡುವದೆಂದು ಯೋಚಿಸುವದು ಶುದ್ಧ ಮೂರ್ಖತನ. ಆ ಮೂರ್ತಿಯು ಮಾತಾಡುವೂದೂ ಇಲ್ಲ. 19 ಆ ಮೂರ್ತಿಗೆ “ಎದ್ದೇಳು” ಎಂದು ಹೇಳುವವನಿಗೆ ಕೇಡಾಗುವುದು! ಮಾತಾಡಲಾಗದ ಒಂದು ಕಲ್ಲಿಗೆ “ಎಚ್ಚರವಾಗು” ಎಂದು ಹೇಳುವವನಿಗೆ ಕೇಡಾಗುವುದು! ಅವುಗಳು ಅವನಿಗೆ ಸಹಾಯ ಮಾಡುವದಿಲ್ಲ. ಮಾಡಲಿಕ್ಕಾಗುವದೂ ಇಲ್ಲ. ಆ ವಿಗ್ರಹಗಳನ್ನು ಬೆಳ್ಳಿಬಂಗಾರದಿಂದ ಹೊದಿಸಿದರೂ ಆ ವಿಗ್ರಹಗಳಲ್ಲಿ ಜೀವವಿಲ್ಲ.

20 ಆದರೆ ಯೆಹೋವನಾದರೋ ಹಾಗಲ್ಲ. ಆತನು ತನ್ನ ಪವಿತ್ರ ಆಲಯದಲ್ಲಿದ್ದಾನೆ. ಆದ್ದರಿಂದ ಎಲ್ಲಾ ಭೂನಿವಾಸಿಗಳು ಆತನ ಮುಂದೆ ಮೌನದಿಂದಿದ್ದು ಆತನನ್ನು ಗೌರವಿಸತಕ್ಕದ್ದು.

ಹಬಕ್ಕೂಕನ ಪ್ರಾರ್ಥನೆ

ಪ್ರವಾದಿಯಾದ ಹಬಕ್ಕೂಕನ ಪ್ರಾರ್ಥನೆ:

ಯೆಹೋವನೇ, ನಾನು ನಿನ್ನ ವಿಚಾರ ಕೇಳಿದೆನು.
    ಯೆಹೋವನೇ, ನೀನು ಹಿಂದಿನ ಕಾಲದಲ್ಲಿ ಮಾಡಿದ ಮಹತ್ಕಾರ್ಯಗಳು ನನ್ನನ್ನು ಚಕಿತಗೊಳಿಸಿವೆ.
ನಮ್ಮ ಕಾಲದಲ್ಲಿಯೂ ಮಹತ್ಕಾರ್ಯಗಳನ್ನು ಮಾಡಬೇಕೆಂದು ಪ್ರಾರ್ಥಿಸುತ್ತೇನೆ.
    ದಯಮಾಡಿ, ಆ ಘಟನೆಗಳು ನಮ್ಮ ದಿವಸಗಳಲ್ಲೂ ನೆರವೇರುವಂತೆ ಮಾಡು.
ಅದರ ಜೊತೆಯಲ್ಲಿ ನಮ್ಮ ಮೇಲೆ
    ಕರುಣೆ ತೋರಿಸಲು ಮರೆಯಬೇಡ.

ತೇಮಾನಿನಿಂದ ಯೆಹೋವನು ಬರುತ್ತಿದ್ದಾನೆ.
    ಪರಿಶುದ್ಧನಾದವನು ಪಾರಾನ್ ಪರ್ವತದಿಂದ ಬರುತ್ತಿದ್ದಾನೆ.
ಯೆಹೋವನ ಮಹಿಮೆಯು ಆಕಾಶಮಂಡಲವನ್ನು ಮುಚ್ಚುತ್ತದೆ.
    ಅವನ ಸ್ತೋತ್ರವು ಭೂಲೋಕವನ್ನು ತುಂಬುತ್ತದೆ.
ಬೆಳಕಿನ ಕಿರಣಗಳು ಆತನ ಕೈಯಿಂದ ಹೊಳೆಯುತ್ತವೆ.
ಅದು ಹೊಳೆಯುವಂಥ ಪ್ರಕಾಶಮಾನವಾದ ಹೊಳಪು.
    ಆ ಕೈಗಳಲ್ಲಿ ಅಂಥಾ ಶಕ್ತಿಯು ಅಡಕವಾಗಿದೆ.
ರೋಗವು ಆತನ ಮುಂದೆ ಹೊರಟಿತು.
    ನಾಶಕನು ಆತನನ್ನು ಹಿಂಬಾಲಿಸಿದನು.
ಯೆಹೋವನು ನಿಂತು ಪ್ರಪಂಚದ ನ್ಯಾಯತೀರಿಸಿದನು.
    ಎಲ್ಲಾ ಜನಾಂಗಗಳ ಜನರ ಕಡೆಗೆ ನೋಡಿದನು.
    ಅವರು ಭಯದಿಂದ ನಡುಗಿದರು.
ತಲಾಂತರಗಳಿಂದ ಪರ್ವತಗಳು ಸ್ಥಿರವಾಗಿ ನಿಂತಿದ್ದವು.
    ಆದರೆ ಅದೇ ಪರ್ವತಗಳು ತುಂಡುತುಂಡಾಗಿ ಬಿದ್ದವು.
ಪುರಾತನ ಕಾಲದ ಬೆಟ್ಟಗಳು ಬಿದ್ದುಹೋದವು.
    ಹಾಗೆ ಮಾಡಲು ದೇವರು ಯಾವಾಗಲೂ ಶಕ್ತನಾಗಿದ್ದಾನೆ.
ಕೂಷಾನಿನ ನಗರಗಳು ಸಂಕಟದಲ್ಲಿರುವುದನ್ನು ಕಂಡೆನು.
    ಮಿದ್ಯಾನಿನ ಮನೆಗಳು ಹೆದರಿ ನಡುಗುತ್ತಿದ್ದವು.
ಯೆಹೋವನೇ, ನೀನು ನದಿಗಳ ಮೇಲೆ ಕೋಪಗೊಂಡಿದ್ದೀಯೋ?
    ತೊರೆಗಳ ಮೇಲೆ ನೀನು ಕೋಪಗೊಂಡಿದ್ದೀಯೋ?
ಸಮುದ್ರದ ಮೇಲೆ ನೀನು ಕೋಪಗೊಂಡಿದ್ದೀಯೋ?
    ನೀನು ನಿನ್ನ ಕುದುರೆಗಳ ಮೇಲೆ ಮತ್ತು ರಥಗಳ ಮೇಲೆ ಸವಾರಿ ಮಾಡಿದಾಗ ಕೋಪಗೊಂಡಿದ್ದೀಯೋ?

ಆದಾಗ್ಯೂ ನೀನು ನಿನ್ನ ಮೇಘದ ಬಿಲ್ಲನ್ನು ತೋರಿಸಿದೆ.
    ಈ ಲೋಕದ ಮನುಷ್ಯರೊಂದಿಗೆ ಅದು ನಿನ್ನ ಒಡಂಬಡಿಕೆಯ ಸಾಕ್ಷಿ.

ಭೂಮಿಯು ನದಿಯನ್ನು ಇಬ್ಭಾಗವಾಗಿ ಮಾಡಿತು.
10     ಪರ್ವತಗಳು ನಿನ್ನನ್ನು ನೋಡಿ ನಡುಗಿದವು.
ನೆಲದ ಮೇಲಿಂದ ನೀರು ಹರಿದುಹೋಯಿತು.
    ಭೂಮಿಯ ಮೇಲೆ ತನಗಿದ್ದ ಶಕ್ತಿ ಹೋದದ್ದನ್ನು ನೋಡಿ
    ಸಮುದ್ರವು ಗಟ್ಟಿಯಾಗಿ ಶಬ್ದ ಮಾಡಿತು.
11 ಸೂರ್ಯಚಂದ್ರರು ತಮ್ಮ ಪ್ರಕಾಶವನ್ನು ಕಳಕೊಂಡವು.
    ಹೊಳೆಯುವ ನಿನ್ನ ಮಿಂಚುಗಳನ್ನು ನೋಡಿ ಅವು ಪ್ರಕಾಶಿಸುವದನ್ನು ನಿಲ್ಲಿಸಿದವು.
    ಆ ಮಿಂಚುಗಳು ಗಾಳಿಯಲ್ಲಿ ತೂರಿಬರುವ ಭರ್ಜಿ, ಬಾಣಗಳಂತಿದ್ದವು.
12 ಸಿಟ್ಟಿನಿಂದ ನೀನು ಭೂಮಿಯ ಮೇಲೆ ನಡೆದೆ.
    ಮತ್ತು ಜನಾಂಗಗಳನ್ನು ಶಿಕ್ಷಿಸಿದೆ.
13 ನಿನ್ನ ಜನರನ್ನು ರಕ್ಷಿಸಲು ನೀನು ಬಂದೆ.
    ನೀನು ಆರಿಸಿದ್ದ ರಾಜನನ್ನು ಜಯದ ಕಡೆಗೆ ನಡಿಸುವುದಕ್ಕಾಗಿ ಬಂದೆ.
ಪ್ರತೀ ದುಷ್ಟ ಕುಟುಂಬದ ನಾಯಕನನ್ನು ನೀನು ಸಂಹರಿಸಿದೆ.
    ಭೂಲೋಕದಲ್ಲಿದ್ದ ಪ್ರಮುಖನಿಂದಿಡಿದು
    ಪ್ರಮುಖನಲ್ಲದವನವರೆಗೂ ನೀನು ಹತಿಸಿದೆ.

14 ವೈರಿಗಳ ಸೈನ್ಯವನ್ನು ಮೋಶೆಯ
    ಕೋಲಿನಿಂದ ನಿಲ್ಲಿಸಿದೆ.
ಆ ಸೈನಿಕರು ಬಿರುಗಾಳಿಯಂತೆ ನಮ್ಮೊಂದಿಗೆ
    ಯುದ್ಧ ಮಾಡಲು ಬಂದರು.
ರಸ್ತೆಯ ಮೇಲೆ ಇದ್ದ ಒಬ್ಬ ಬಡ ಮನುಷ್ಯನನ್ನು ದೋಚಿದ ಪ್ರಕಾರ
    ನಮ್ಮನ್ನೂ ಸುಲಭವಾಗಿ ಗೆಲ್ಲುವೆವೆಂದು ಅವರು ನೆನೆಸಿದ್ದರು.
15 ಆದರೆ ನೀನು ನಿನ್ನ ಕುದುರೆಗಳನ್ನು ಸಮುದ್ರದೊಳಗಿಂದ ನಡೆಸಿದೆ.
    ಅವುಗಳು ಆ ಮಹಾ ಸಮುದ್ರವನ್ನು ಕದಡಿಬಿಟ್ಟವು.
16 ಆ ವಿಷಯವನ್ನು ಕೇಳಿದಾಗ ನನ್ನ ಶರೀರವೆಲ್ಲಾ ನಡುಗಿತು.
    ಆಶ್ಟರ್ಯದಿಂದ ನಾನು ಸಿಳ್ಳುಹಾಕಿದೆ.
ನನ್ನ ಎಲುಬುಗಳ ಬಲಹೀನತೆಯಿಂದ
    ನಾನು ನಡುಗುವವನಾಗಿ ನಿಂತೆನು.
ಅವರು ಜನರ ಮೇಲೆ ಬೀಳಲು ಬರುವಾಗ
    ನಾನು ಅವರ ನಾಶನದ ದಿವಸವನ್ನು ಎದುರುನೋಡುತ್ತಿದ್ದೇನೆ.

ಯಾವಾಗಲೂ ಯೆಹೋವನಲ್ಲಿ ಸಂತೋಷಿಸು

17 ಅಂಜೂರದ ಮರಗಳಲ್ಲಿ ಅಂಜೂರದ ಹಣ್ಣು ಬೆಳೆಯದಿದ್ದರೂ
    ದ್ರಾಕ್ಷಿಬಳ್ಳಿಗಳಲ್ಲಿ ದ್ರಾಕ್ಷಿಹಣ್ಣುಗಳು ಬೆಳೆಯದಿದ್ದರೂ
ಎಣ್ಣೆಮರಗಳಲ್ಲಿ ಆಲೀವ್ ಕಾಯಿಗಳು ಬೆಳೆಯದಿದ್ದರೂ
    ಹೊಲದಲ್ಲಿ ಪೈರು ಬೆಳೆಯದಿದ್ದರೂ
ಹಟ್ಟಿಯಲ್ಲಿ ಯಾವ ಕುರಿಗಳು ಇಲ್ಲದಿದ್ದರೂ
    ಕೊಟ್ಟಿಗೆಯೊಳಗೆ ಯಾವ ಪಶುಗಳು ಇಲ್ಲದಿದ್ದರೂ
18 ನಾನು ಯೆಹೋವನಲ್ಲಿ ಸಂತೋಷಿಸುವೆನು.
    ನನ್ನ ರಕ್ಷಕನಾದ ದೇವರಲ್ಲಿ ಸಂತೋಷಪಡುವೆನು.

19 ನನ್ನ ಒಡೆಯನಾದ ಯೆಹೋವನು ನನಗೆ ಬಲವನ್ನು ಕೊಡುವನು.
    ಜಿಂಕೆಯಂತೆ ವೇಗವಾಗಿ ಓಡಲು ನನಗೆ ಸಹಾಯ ಮಾಡುವನು.
    ಪರ್ವತಗಳಲ್ಲಿ ನನ್ನನ್ನು ಸುರಕ್ಷಿತವಾಗಿ ನಡೆಸುವನು.

ಸಂಗೀತ ನಿರ್ದೇಶಕನಿಗೆ. ತಂತಿವಾದ್ಯಗಳಿಂದ ಹಾಡತಕ್ಕದ್ದು.

ಚೆಫನ್ಯ 1-3

ಚೆಫನ್ಯನಿಗೆ ಯೆಹೋವನು ಕೊಟ್ಟ ಸಂದೇಶ. ಆಮೋನನ ಮಗನಾದ ಯೋಷೀಯನು ಯೆಹೂದ ಪ್ರಾಂತ್ಯದ ಅರಸನಾಗಿದ್ದಾಗ ಈ ಸಂದೇಶವು ಅವನಿಗೆ ದೊರಕಿತು. ಚೆಫನ್ಯನು ಕೂಷನ ಮಗನು; ಕೂಷನು ಗೆದಲ್ಯನ ಮಗನು; ಗೆದಲ್ಯನು ಅಮರ್ಯನ ಮಗನು; ಅಮರ್ಯನು ಹಿಜ್ಕೀಯನ ಮಗನು.

ಜನರಿಗೆ ನ್ಯಾಯತೀರಿಸುವ ಯೆಹೋವನ ದಿನ

ಯೆಹೋವನು ಹೇಳುವುದೇನೆಂದರೆ, “ಭೂಲೋಕದಲ್ಲಿರುವದೆಲ್ಲವನ್ನು ನಾನು ನಾಶಮಾಡುತ್ತೇನೆ. ಲೋಕದೊಳಗಿರುವ ಎಲ್ಲಾ ಮನುಷ್ಯರನ್ನೂ ಪ್ರಾಣಿಗಳನ್ನೂ ಆಕಾಶದಲ್ಲಿರುವ ಎಲ್ಲಾ ಪಕ್ಷಿಗಳನ್ನೂ ನೀರಿನಲ್ಲಿರುವ ಎಲ್ಲಾ ಮೀನುಗಳನ್ನೂ ನಾನು ನಾಶಮಾಡುವೆನು. ಎಲ್ಲಾ ದುಷ್ಟ ಜನರನ್ನೂ ಮತ್ತು ಅವರನ್ನು ಪಾಪಕ್ಕೆ ನಡಿಸುವ ಎಲ್ಲಾ ವಸ್ತುಗಳನ್ನೂ[a] ನಾನು ನಾಶಮಾಡುವೆನು. ಭೂಮಿಯ ಮೇಲಿರುವ ಎಲ್ಲಾ ಜನರನ್ನು ನಿರ್ಮೂಲ ಮಾಡುವೆನು.” ಈ ವಿಷಯಗಳನ್ನು ಯೆಹೋವನು ತಿಳಿಸಿದನು.

ಯೆಹೋವನು ಹೀಗೆ ನುಡಿದನು: “ನಾನು ಯೆಹೂದವನ್ನೂ ಜೆರುಸಲೇಮಿನಲ್ಲಿ ವಾಸಿಸುವ ಜನರನ್ನೂ ದಂಡಿಸುವೆನು. ಬಾಳನ ಪೂಜೆಯ ಪ್ರತಿಯೊಂದು ಚಿಹ್ನೆಯನ್ನೂ ಅದನ್ನು ಪೂಜಿಸುವ ಪುರೋಹಿತರನ್ನೂ ಮತ್ತು ಯಾವ ಜನರು ತಮ್ಮ ಮಾಳಿಗೆಯ ಮೇಲೆ ಹತ್ತಿ ನಕ್ಷತ್ರಗಳನ್ನು ಆರಾಧಿಸುತ್ತಾರೋ ನಾನು ಅವರನ್ನು ನಿರ್ಮೂಲ ಮಾಡುತ್ತೇನೆ. ಜನರು ತಮ್ಮ ಸುಳ್ಳು ಪುರೋಹಿತರನ್ನು ಮರೆತುಬಿಡುವರು. ಕೆಲವರು ತಮ್ಮನ್ನು ನನ್ನ ಆರಾಧಕರೆಂದು ಹೇಳಿಕೊಳ್ಳುವರು. ಆದರೆ ಈಗ ಅವರು ಸುಳ್ಳು ದೇವರಾದ ಮಲ್ಕಾಮನನ್ನು ಆರಾಧಿಸುತ್ತಾರೆ. ಅಂಥವರನ್ನು ಅವರ ಸ್ಥಳಗಳಿಂದ ತೆಗೆದುಹಾಕುವೆನು. ಕೆಲವರು ಯೆಹೋವನಾದ ನನ್ನಿಂದ ತೊಲಗಿಹೋದರು. ನನ್ನನ್ನು ಹಿಂಬಾಲಿಸುವುದನ್ನು ನಿಲ್ಲಿಸಿಬಿಟ್ಟರು. ಅವರು ಯೆಹೋವನನ್ನು ಸಹಾಯಕ್ಕಾಗಿ ಬೇಡುವಂತದ್ದನ್ನು ನಿಲ್ಲಿಸಿದರು. ಅವರನ್ನು ನಾನು ಅವರ ಸ್ಥಳಗಳಿಂದ ತೆಗೆದುಹಾಕುವೆನು.”

ದೇವರಾದ ಯೆಹೋವನ ಸನ್ನಿಧಿಯಲ್ಲಿ ಮೌನವಾಗಿರಿ. ಯಾಕೆಂದರೆ ಯೆಹೋವನು ಜನರಿಗೆ ನ್ಯಾಯತೀರಿಸುವ ದಿನವು ಹತ್ತಿರವಾಯಿತು. ಯೆಹೋವನು ತನ್ನ ಯಜ್ಞವನ್ನು ತಯಾರು ಮಾಡಿ ತನ್ನ ಆಮಂತ್ರಿತರನ್ನು ಸಿದ್ಧವಾಗಿರಲು ಹೇಳಿದ್ದಾನೆ.

“ಯೆಹೋವನ ಯಜ್ಞದ ದಿನದಲ್ಲಿ ನಾನು ರಾಜಕುಮಾರರನ್ನೂ ಇತರ ನಾಯಕರುಗಳನ್ನೂ ಶಿಕ್ಷಿಸುವೆನು. ಪರದೇಶದ ಬಟ್ಟೆಯನ್ನು ತೊಟ್ಟುಕೊಳ್ಳುವ ಪ್ರತಿಯೊಬ್ಬರನ್ನೂ ನಾನು ಶಿಕ್ಷಿಸುವೆನು. ಆ ಸಮಯದಲ್ಲಿ ಹೊಸ್ತಿಲನ್ನು ಹಾರಿ ತಮ್ಮ ಒಡೆಯರ ಮನೆಯನ್ನು ತಮ್ಮ ಸುಳ್ಳು, ಮೋಸ, ಹಿಂಸೆಗಳಿಂದ ತುಂಬಿರುವವರನ್ನು ಶಿಕ್ಷಿಸುತ್ತೇನೆ” ಎಂದು ಯೆಹೋವನು ನುಡಿಯುತ್ತಾನೆ.

10 ಯೆಹೋವನು ಇನ್ನೂ ಹೇಳುವುದೇನೆಂದರೆ, “ಆ ಸಮಯದಲ್ಲಿ ಜೆರುಸಲೇಮಿನ ಮೀನು ಬಾಗಿಲಲ್ಲಿ ಜನರು ಸಹಾಯಕ್ಕಾಗಿ ಮೊರೆಯಿಡುವರು. ನಗರದ ಇತರ ಕಡೆಗಳಿಂದ ಜನರು ರೋಧಿಸುವರು. ನಗರದ ಸುತ್ತಲಿರುವ ಬೆಟ್ಟಗಳಲ್ಲಿ ನಾಶವಾಗುವ ಶಬ್ದವನ್ನು ಜನರು ಕೇಳುವರು. 11 ನಗರದ ಕೆಳಗಿನ ಭಾಗದಲ್ಲಿರುವವರೇ, ನೀವು ಅಳುವಿರಿ. ಯಾಕೆಂದರೆ ನಿಮ್ಮಲ್ಲಿರುವ ಧನಿಕರೂ ವ್ಯಾಪಾರಸ್ತರೂ ನಾಶವಾಗುವರು.

12 “ಆ ಸಮಯಗಳಲ್ಲಿ ನಾನು ದೀಪವನ್ನು ಹಚ್ಚಿ ಜೆರುಸಲೇಮಿನಲ್ಲಿ ಹುಡುಕಾಡುವೆನು. ತಮ್ಮ ಸ್ವಂತ ರೀತಿಯಲ್ಲಿ ನಡೆದು ತೃಪ್ತಿಯಾಗಿರುವ ಜನರನ್ನು ಕಂಡುಕೊಳ್ಳುವೆನು. ಅವರು ಹೇಳುವುದೇನೆಂದರೆ, ‘ಯೆಹೋವನು ಏನೂ ಮಾಡುವುದಿಲ್ಲ. ಅವನು ಸಹಾಯವನ್ನೂ ಮಾಡುವುದಿಲ್ಲ. ಜನರಿಗೆ ಕೆಡುಕನ್ನೂ ಮಾಡುವುದಿಲ್ಲ.’ ಅಂಥವರನ್ನು ನಾನು ಹಿಡಿದು ಶಿಕ್ಷಿಸುವೆನು. 13 ಆಗ ಇತರ ಜನರು ಬಂದು ಅವರ ಐಶ್ವರ್ಯವನ್ನು ಸುಲುಕೊಂಡು ಅವರ ಮನೆಯನ್ನು ನಾಶಮಾಡುವರು. ಆ ಸಮಯಗಳಲ್ಲಿ ಮನೆಕಟ್ಟಿದ ಜನರು ಅದರಲ್ಲಿ ವಾಸಮಾಡುವುದಿಲ್ಲ. ದ್ರಾಕ್ಷಿತೋಟವನ್ನು ನೆಟ್ಟವರು, ಅದರ ಹಣ್ಣಿನ ರಸವನ್ನು ಕುಡಿಯುವುದಿಲ್ಲ. ಬೇರೆಯವರು ಅದನ್ನು ಪಡೆದುಕೊಳ್ಳುವರು.”

14 ಯೆಹೋವನ ನ್ಯಾಯತೀರ್ಪಿನ ದಿನವು ಬೇಗನೇ ಬರುತ್ತದೆ; ಅತ್ಯಂತ ವೇಗವಾಗಿ ಬರುತ್ತಿದೆ. ಆ ದಿನದಂದು ಜನರು ಬಹಳವಾಗಿ ದುಃಖಿಸುವರು. ಧೈರ್ಯಶಾಲಿಗಳಾದ ಸೈನಿಕರೂ ಅಳುವರು. 15 ಯೆಹೋವನು ತನ್ನ ಕೋಪವನ್ನು ಆ ದಿವಸದಲ್ಲಿ ತೋರಿಸುವನು. ಆ ದಿವಸಗಳಲ್ಲಿ ಮಹಾ ಸಂಕಟಗಳಿರುವವು. ಅವು ನಾಶನದ ದಿವಸಗಳಾಗಿರುವವು. ಆ ದಿವಸವು ಕತ್ತಲು, ಕಾರ್ಮುಗಿಲು ಕವಿದ ಬಿರುಗಾಳಿಯ ದಿವಸವಾಗಿರುವುದು. 16 ಅದು ಒಂದು ಯುದ್ಧದ ದಿವಸದಂತಿರುವುದು; ಎಲ್ಲೆಲ್ಲೂ ಕೊಂಬು, ತುತ್ತೂರಿಗಳ ಧ್ವನಿಗಳನ್ನು ಜನರು ಬುರುಜು, ಕೊತ್ತಲಗಳಿಂದ ಕೇಳಿಸಿಕೊಳ್ಳುವರು.

17 ಯೆಹೋವನು ಹೇಳುವುದೇನೆಂದರೆ, “ಜನರ ಜೀವನವನ್ನು ನಾನು ಬಹು ಕಷ್ಟಕರವಾಗಿ ಮಾಡುವೆನು. ಅವರು ಕುರುಡರಂತೆ ಅತ್ತಿತ್ತ ತೊಳಲಾಡುವರು. ತಾವು ಎಲ್ಲಿಗೆ ಹೋಗುತ್ತಿದ್ದಾರೆಂದು ಅವರಿಗೆ ತಿಳಿಯದು. ಯಾಕೆಂದರೆ ಯೆಹೋವನಿಗೆ ವಿರುದ್ಧವಾಗಿ ಪಾಪ ಮಾಡಿದ್ದಾರೆ. ಅನೇಕ ಮಂದಿ ಕೊಲ್ಲಲ್ಪಡುವರು. ಅವರ ರಕ್ತವು ಭೂಮಿಗೆ ಸುರಿಯಲ್ಪಡುವುದು. ಅವರ ಹೆಣಗಳು ಮಲದ ಹಾಗೆ ನೆಲದಲ್ಲಿ ಬೀಳುವವು. 18 ಅವರ ಬೆಳ್ಳಿಬಂಗಾರಗಳು ಅವರ ಸಹಾಯಕ್ಕೆ ಬಾರವು. ಆ ಸಮಯದಲ್ಲಿ ಯೆಹೋವನು ಕೋಪಾಗ್ನಿಯಿಂದ ತುಂಬಿದವನಾಗುವನು. ಯೆಹೋವನು ಇಡೀ ಪ್ರಪಂಚವನ್ನೇ ನಾಶಮಾಡುವನು. ಭೂಮಿಯ ಮೇಲಿರುವ ಪ್ರತಿಯೊಬ್ಬನನ್ನು ಯೆಹೋವನು ಸಂಪೂರ್ಣವಾಗಿ ನಾಶಮಾಡುವನು.”

ಜನರ ಜೀವಿತವನ್ನು ಮಾರ್ಪಡಿಸಲು ದೇವರ ಕರೆ

ನಾಚಿಕೆಗೆಟ್ಟವರೇ, ನಿಮ್ಮ ಜೀವಿತವನ್ನು ಬದಲಾಯಿಸಿರಿ. ನೀವು ಒಣಗಿ, ಸತ್ತ ಹೂವಿನೋಪಾದಿಯಾಗುವ ಮೊದಲೇ ನಿಮ್ಮ ಜೀವಿತವನ್ನು ಮಾರ್ಪಡಿಸಿರಿ. ಬಿಸಿಲೇರಿದಾಗ ಹೂವು ಬಾಡಿಹೋಗಿ ಒಣಗುತ್ತದೆ. ಅದೇ ಪ್ರಕಾರ ಯೆಹೋವನು ತನ್ನ ಕೋಪವನ್ನು ಪ್ರದರ್ಶಿಸುವಾಗ ನೀವು ಹಾಗೆ ಆಗುವಿರಿ. ಆದ್ದರಿಂದ ಯೆಹೋವನ ಕೋಪದ ದಿನವು ನಿಮ್ಮ ಮೇಲೆ ಬರುವುದಕ್ಕಿಂತ ಮೊದಲೇ ನಿಮ್ಮ ಜೀವಿತವನ್ನು ಬದಲಾಯಿಸಿರಿ. ದೀನರೇ, ಯೆಹೋವನ ಬಳಿಗೆ ಬನ್ನಿರಿ. ಆತನ ನಿಯಮಗಳಿಗೆ ಒಳಗಾಗಿರಿ, ಒಳ್ಳೇದನ್ನು ಮಾಡಿರಿ, ದೀನರಾಗಿರಿ. ಯೆಹೋವನು ತನ್ನ ಕೋಪಾಗ್ನಿಯನ್ನು ಪ್ರದರ್ಶಿಸುವ ದಿವಸದಲ್ಲಿ ನೀವು ರಕ್ಷಿಸಲ್ಪಡಬಹುದು.

ಇಸ್ರೇಲರ ನೆರೆಯವರನ್ನು ಯೆಹೋವನು ಶಿಕ್ಷಿಸುವನು

ಗಾಜದಲ್ಲಿ ಯಾರೂ ಉಳಿಯರು. ಅಷ್ಕೆಲೋನ್ ನಾಶವಾಗುವದು. ಮಧ್ಯಾಹ್ನದೊಳಗಾಗಿ ಅಷ್ಡೋದನ್ನು ಬಿಟ್ಟು ಹೋಗುವಂತೆ ಬಲವಂತ ಮಾಡಲಾಗುವುದು. ಎಕ್ರೋನ್ ನಿರ್ಜನವಾಗುವುದು. ಫಿಲಿಷ್ಟಿಯ ಜನರೇ, ಕರಾವಳಿ ಪ್ರದೇಶದಲ್ಲಿ ವಾಸಿಸುವ ಜನರೇ, ಯೆಹೋವನಿಂದ ಬಂದ ಸಂದೇಶ ನಿಮಗಾಗಿಯೇ. ಕಾನಾನ್ ದೇಶವೇ, ಪಾಲೆಸ್ತೀನ್ ದೇಶವೇ, ನೀವು ನಾಶಗೊಳ್ಳುವಿರಿ. ನಿಮ್ಮಲ್ಲಿ ಯಾರೂ ವಾಸಿಸರು. ಕರಾವಳಿಯಲ್ಲಿರುವ ನಿಮ್ಮ ಪ್ರಾಂತ್ಯವು ಕುರುಬರಿಗೆ ತಮ್ಮ ಕುರಿಗಳನ್ನು ಮೇಯಿಸುವ ಬಯಲಾಗುವದು. ಆ ದೇಶವು ಯೆಹೂದದಲ್ಲಿ ಅಳಿದುಳಿದವರಿಗೆ ಆಗುವದು. ಯೆಹೂದದಲ್ಲಿರುವ ಜನರನ್ನು ಯೆಹೋವನು ನೆನಪುಮಾಡುವನು. ಅವರು ಸೆರೆಯಾಳುಗಳಾಗಿ ಅನ್ಯದೇಶದಲ್ಲಿರುವರು. ಆದರೆ ಯೆಹೋವನು ಅವರನ್ನು ಹಿಂದಕ್ಕೆ ತರುವನು. ಆಗ ಯೆಹೂದದ ಜನರು ಆ ಬಯಲಿನಲ್ಲಿ ತಮ್ಮ ಕುರಿಮಂದೆಗಳನ್ನು ಮೇಯಿಸುವರು. ಸಾಯಂಕಾಲ ಬರಿದಾದ ಅಷ್ಕೆಲೋನಿನ ಮನೆಗಳಲ್ಲಿ ತಂಗುವರು.

ಯೆಹೋವನು ಹೀಗೆನ್ನುತ್ತಾನೆ, “ಮೋವಾಬ್ಯರೂ ಅಮ್ಮೋನ್ಯರೂ ಏನು ಮಾಡಿದ್ದಾರೆಂದು ನನಗೆ ಗೊತ್ತಿದೆ. ಅವರು ನನ್ನ ಜನರನ್ನೂ ಕೆಣಕಿದರು. ಅವರ ಪ್ರದೇಶಗಳನ್ನು ಎಳೆದುಕೊಂಡು ತಮ್ಮ ರಾಜ್ಯಗಳನ್ನು ವಿಸ್ತರಿಸಿದರು. ನನ್ನ ಜೀವದಾಣೆ, ಮೋವಾಬ್ಯರೂ ಅಮ್ಮೋನ್ಯರೂ ಸೊದೋಮ್ ಗೊಮೋರದವರಂತೆ ನಾಶವಾಗುವರು. ನಾನು ಸರ್ವಶಕ್ತನಾದ ಇಸ್ರೇಲರ ದೇವರಾಗಿರುವೆನು. ನಾನು ವಾಗ್ದಾನ ಮಾಡುವದೇನೆಂದರೆ, ಆ ರಾಜ್ಯಗಳು ಸಂಪೂರ್ಣವಾಗಿ ನಾಶವಾಗುವವು. ಅವರ ಭೂಮಿಯು ಕಳೆಗಳಿಂದ ತುಂಬಿಹೋಗುವದು. ಅದು ಮೃತ್ಯುಸಮುದ್ರದ ಉಪ್ಪಿನಿಂದ ತುಂಬಿಹೋದಂತಿರುವದು. ನನ್ನ ಜನರಲ್ಲಿ ಉಳಿದವರು ಅವರ ದೇಶವನ್ನೂ ಅಲ್ಲಿ ಉಳಿದಿರುವ ವಸ್ತುಗಳನ್ನೂ ತಮ್ಮ ವಶಮಾಡಿಕೊಳ್ಳುವರು.”

10 ಸರ್ವಶಕ್ತನಾದ ಯೆಹೋವನ ಜನರನ್ನು ಮೋವಾಬ್ಯರು ಮತ್ತು ಅಮ್ಮೋನ್ಯರು ಕ್ರೂರವಾಗಿ ಕಂಡು ಅವರನ್ನು ಪರಿಹಾಸ್ಯಮಾಡಿದ್ದರಿಂದಲೂ ಈ ಸಂಗತಿಗಳು ಅವರಲ್ಲಿ ನೆರವೇರುವವು. 11 ಅವರು ಯೆಹೋವನಿಗೆ ಭಯಪಡುವರು. ಯಾಕೆಂದರೆ ಆತನು ಅವರ ದೇವರುಗಳನ್ನು ನಾಶಮಾಡಿದ್ದಾನೆ. ಆಗ ದೂರದಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸುವರು. 12 ಇಥಿಯೋಪ್ಯದ ಜನರೇ, ಇದರಲ್ಲಿ ನೀವೂ ಸೇರಿರುವಿರಿ. ಯೆಹೋವನ ಕತ್ತಿಯು ನಿಮ್ಮ ಜನರೆಲ್ಲರನ್ನು ಕೊಲ್ಲುವದು. 13 ದೇವರು ಆಮೇಲೆ ಉತ್ತರಕ್ಕೆ ಮುಖಮಾಡಿ ಅಶ್ಶೂರವನ್ನು ಶಿಕ್ಷಿಸುವನು. ಆತನು ನಿನೆವೆ ಪಟ್ಟಣವನ್ನು ಶಿಕ್ಷಿಸಿದಾಗ ಅದು ನಿರ್ಜನವಾದ ಮರುಭೂಮಿಯಾಗುವದು. 14 ಆಮೇಲೆ ಆ ಹಾಳುಬಿದ್ದ ನಗರದಲ್ಲಿ ಕಾಡುಪ್ರಾಣಿಗಳೂ ಕುರಿಗಳೂ ವಾಸಮಾಡುವವು. ಕಾಗೆಗಳೂ ಗೂಬೆಗಳೂ ಪಟ್ಟಣದ ಸ್ತಂಭಗಳ ಮೇಲೆ ಕುಳಿತುಕೊಂಡು ಒಂದನ್ನೊಂದು ಕರೆಯುವವು. ಬಾಗಿಲ ಹೊಸ್ತಿಲಲ್ಲಿ ಕಾಗೆಗಳು ಕುಳಿತುಕೊಳ್ಳುವವು. ಕಪ್ಪುಪಕ್ಷಿಗಳು ನಿರ್ಜನವಾದ ಮನೆಗಳ ಮೇಲೆ ಕುಳಿತುಕೊಳ್ಳುವವು. 15 ಈ ನಿನೆವೆಯು ಸಂತೋಷಭರಿತ ನಗರಿಯಾಗಿದೆ. ಅದರ ನಿವಾಸಿಗಳು ತಾವು ಸುರಕ್ಷಿತರಾಗಿದ್ದೇವೆಂದು ತಿಳಿದಿದ್ದಾರೆ. ನಿನೆವೆಯು ಲೋಕದಲ್ಲಿ ಅತ್ಯಂತ ಮಹತ್ವಪೂರ್ಣ ಸ್ಥಳವೆಂದು ತಿಳಿದಿದ್ದಾರೆ. ಅವರು ಬಹಳ ಗರ್ವಪಡುತ್ತಾರೆ. ಆದರೆ ಆ ನಗರವು ನಾಶವಾಗುವದು. ಕಾಡುಮೃಗಗಳ ಹಕ್ಕೆಯಾಗುವದು. ದಾಟಿಹೋಗುವ ಜನರು, ತಮ್ಮ ಆಶ್ಚರ್ಯವನ್ನು ಸಿಳ್ಳುಹಾಕಿ ತಲೆಯಾಡಿಸಿ “ಎಂಥಾ ದುರ್ಗತಿ” ಎಂದು ಉದ್ಗರಿಸುವರು.

ಜೆರುಸಲೇಮಿನ ಭವಿಷ್ಯ

ಜೆರುಸಲೇಮೇ, ನಿನ್ನ ಜನರು ದೇವರಿಗೆ ವಿರುದ್ಧವಾಗಿ ನಡೆದರು. ಇತರರನ್ನು ಹಿಂಸಿಸಿದರು ಮತ್ತು ಪಾಪದಿಂದ ಮಲಿನರಾದರು. ನಿನ್ನ ಜನರು ನನ್ನ ಮಾತುಗಳನ್ನು ಕೇಳಲಿಲ್ಲ. ನನ್ನ ಬೋಧನೆಯನ್ನು ಸ್ವೀಕರಿಸಲಿಲ್ಲ. ಜೆರುಸಲೇಮ್ ದೇವರ ಮೇಲೆ ಭರವಸವಿಡಲಿಲ್ಲ. ಆತನ ಬಳಿಗೆ ಹೋಗಲಿಲ್ಲ. ಜೆರುಸಲೇಮಿನ ನಾಯಕರು ಗರ್ಜಿಸುವ ಸಿಂಹದಂತೆ ಇದ್ದಾರೆ, ಅವರ ನ್ಯಾಯಾಧಿಪತಿಗಳು ರಾತ್ರಿ ಕಾಲದಲ್ಲಿ ಕುರಿಗಳ ಮೇಲೆ ಬೀಳುವ ಹಸಿದ ತೋಳಗಳಂತಿದ್ದಾರೆ. ಬೆಳಗಾಗಲು, ಏನೂ ಉಳಿಯುವುದಿಲ್ಲ. ಅವರ ಪ್ರವಾದಿಗಳು ಬಡಾಯಿಗಾರರೂ ದ್ರೋಹಿಗಳೂ ಆಗಿದ್ದಾರೆ. ಅವರು ಯಾವಾಗಲೂ ಇನ್ನೂಇನ್ನೂ ಹೆಚ್ಚಾಗಿ ದೊರಕುವಂತೆ ಪ್ರಯತ್ನಿಸಿರುತ್ತಾರೆ. ಅವರ ಯಾಜಕರು ಪವಿತ್ರ ವಸ್ತುಗಳನ್ನು ಸಾಧಾರಣ ವಸ್ತುಗಳನ್ನಾಗಿ ಉಪಯೋಗಿಸಿದ್ದಾರೆ. ದೇವರ ನಿಯಮಗಳನ್ನು ನಿರ್ಲಕ್ಷಿಸಿದ್ದಾರೆ. ಆದರೆ ದೇವರು ಇನ್ನೂ ಆ ನಗರದಲ್ಲಿದ್ದಾನೆ. ಅವರಿಗೆ ಇನ್ನೂ ಒಳ್ಳೆಯದನ್ನೇ ಮಾಡುತ್ತಿದ್ದಾನೆ. ಆತನು ತಪ್ಪು ಕಾರ್ಯಗಳನ್ನು ಮಾಡುವವನಲ್ಲ. ತನ್ನ ಜನರಿಗೆ ಸಹಾಯ ಮಾಡುತ್ತಿರುತ್ತಾನೆ. ಪ್ರತಿ ದಿನವೂ ಸರಿಯಾದ ತೀರ್ಮಾನ ಮಾಡಲು ತನ್ನ ಜನರಿಗೆ ಸಹಾಯ ಮಾಡುತ್ತಾನೆ. ಆದರೆ ಆ ದುಷ್ಟಜನರು ತಮ್ಮ ದುಷ್ಟತನಕ್ಕಾಗಿ ನಾಚಿಕೆಪಡುತ್ತಿಲ್ಲ.

ದೇವರು ಹೀಗೆನ್ನುತ್ತಾನೆ, “ನಾನು ಇಡೀ ಜನಾಂಗಗಳನ್ನು ನಾಶಮಾಡಿದ್ದೇನೆ. ಅವರ ಬುರುಜುಗಳನ್ನು ನಾಶಮಾಡಿ, ಅವರ ರಸ್ತೆಗಳಲ್ಲಿ ಯಾರೂ ನಡೆಯದ ಹಾಗೆ ಮಾಡಿರುತ್ತೇನೆ. ಅವರ ನಗರಗಳು ನಿರ್ಜನವಾಗಿವೆ. ಯಾರೂ ಅಲ್ಲಿ ವಾಸಮಾಡುವದಿಲ್ಲ. ನೀವು ಇದರಿಂದ ಪಾಠ ಕಲಿಯಬೇಕೆಂದು ಇದನ್ನೆಲ್ಲಾ ಹೇಳುತ್ತಿದ್ದೇನೆ. ನೀವು ನನ್ನನ್ನು ಗೌರವಿಸಿ ನನಗೆ ಭಯಪಡಬೇಕೆಂದು ನಾನು ಈ ವಿಷಯಗಳನ್ನು ತಿಳಿಸುತ್ತಿದ್ದೇನೆ. ನೀವು ಹೀಗೆ ಮಾಡುವುದಾದರೆ ನಿನ್ನ ಮನೆಯು ನಾಶವಾಗದು. ನೀವು ನನ್ನ ನಿಯಮಗಳನ್ನು ಅನುಸರಿಸುವದಾದರೆ ನಾನು ಆಲೋಚಿಸಿರುವ ಪ್ರಕಾರ ನಿಮ್ಮನ್ನು ಶಿಕ್ಷಿಸುವದಿಲ್ಲ.” ಆದರೆ ಆ ದುಷ್ಟ ಜನರು ತಮ್ಮ ಮಾರ್ಗವನ್ನು ಬಿಡದೆ ದುಷ್ಟತನದಲ್ಲಿಯೇ ಮುಂದುವರಿಯುತ್ತಿದ್ದಾರೆ.

ಯೆಹೋವನು ಹೀಗೆ ಹೇಳುತ್ತಾನೆ: “ನನ್ನನ್ನು ಕಾದುಕೊಂಡಿರಿ. ನೀವು ನನ್ನ ನ್ಯಾಯತೀರ್ಪಿನ ತನಕ ಕಾದುಕೊಂಡಿರಿ. ನಾನು ಬೇರೆ ಜನಾಂಗಗಳನ್ನು ಇಲ್ಲಿಗೆ ಕರೆದು ನಿಮ್ಮನ್ನು ಶಿಕ್ಷಿಸುವಂತೆ ಮಾಡುವ ಹಕ್ಕು ನನಗಿದೆ. ನಿಮ್ಮ ಮೇಲೆ ನನಗಿರುವ ಸಿಟ್ಟು ತೋರಿಸಲು ನಾನು ಆ ಜನಾಂಗಗಳನ್ನು ಉಪಯೋಗಿಸುವೆನು. ನಿಮ್ಮ ಮೇಲೆ ನಾನು ಎಷ್ಟರಮಟ್ಟಿಗೆ ಕೋಪಗೊಂಡಿದ್ದೇನೆ ಎಂದು ಅವರ ಮೂಲಕ ನಿಮಗೆ ತಿಳಿದುಬರುವುದು. ಆಗ ಇಡೀ ದೇಶವೇ ನಾಶವಾಗುವುದು. ಆಗ ನಾನು ಇತರ ಜನಾಂಗಗಳವರ ಭಾಷೆಯನ್ನು ಬದಲಾಯಿಸಿ ದೇವರಾದ ಯೆಹೋವನ ನಾಮವನ್ನು ಉಚ್ಚರಿಸುವಂತೆ ಮಾಡುವೆನು. ಅವರೆಲ್ಲರೂ ನನ್ನನ್ನು ಆರಾಧಿಸುವರು. ಒಟ್ಟಾಗಿ ಸೇರಿ ಒಂದೇ ಜನಾಂಗವಾಗಿ ನನ್ನನ್ನು ಆರಾಧಿಸುವರು. 10 ಇಥಿಯೋಪ್ಯದಲ್ಲಿ ನದಿಯ ಆಚೆ ದಡದವರೆಗೂ ಜನರು ಬರುವರು. ನನ್ನಿಂದ ಚದರಿಹೋಗಿದ್ದ ಜನರು ನನ್ನ ಬಳಿಗೆ ಬರುವರು. ನನ್ನನ್ನು ಆರಾಧಿಸಲು ಬರುವವರು ನನಗೆ ಕಾಣಿಕೆಗಳನ್ನು ತರುವರು.

11 “ಆಗ ಜೆರುಸಲೇಮೇ, ನಿನ್ನ ಜನರು ನನಗೆ ವಿರುದ್ಧವಾಗಿ ಮಾಡಿದ ದುಷ್ಕೃತ್ಯಗಳಿಗಾಗಿ ನೀನು ನಾಚಿಕೆಪಡುವುದಿಲ್ಲ. ಯಾಕೆಂದರೆ ನಾನು ಆ ದುಷ್ಟ ಜನರನ್ನೆಲ್ಲಾ ನಿರ್ಮೂಲ ಮಾಡುವೆನು. ಅಹಂಕಾರ ತುಂಬಿದ ಜನರನ್ನು ನಾನು ತೆಗೆದುಬಿಡುವೆನು. ನನ್ನ ಪವಿತ್ರ ಪರ್ವತದಲ್ಲಿ ಗರ್ವವುಳ್ಳವರು ಯಾರೂ ಇರುವದಿಲ್ಲ. 12 ನನ್ನ ಪಟ್ಟಣದೊಳಗೆ ಬರೇ ದೀನದರಿದ್ರರೇ ವಾಸಮಾಡುವರು. ಅವರು ಯೆಹೋವನ ಹೆಸರಿನಲ್ಲಿ ಭರವಸೆ ಇಡುವವರಾಗಿರುವರು. 13 ಇಸ್ರೇಲಿನಲ್ಲಿ ಉಳಿದವರು ದುಷ್ಕೃತ್ಯಗಳನ್ನು ಮಾಡುವುದಿಲ್ಲ. ಸುಳ್ಳು ಹೇಳುವದಿಲ್ಲ. ಜನರನ್ನು ಮೋಸಗೊಳಿಸುವದಿಲ್ಲ. ಅವರು ಕುರಿಗಳಂತೆ ಮೇದು ವಿಶ್ರಾಂತಿ ತೆಗೆದುಕೊಳ್ಳುವರು. ಯಾರೂ ಅವರ ಗೊಡವೆಗೆ ಹೋಗುವುದಿಲ್ಲ.”

ಸಂತಸದ ಹಾಡು

14 ಜೆರುಸಲೇಮೇ, ಹಾಡುತ್ತಾ ಸಂತೋಷಿಸುತ್ತಿರು.
    ಇಸ್ರೇಲೇ, ಸಂತೋಷದಿಂದ ಆರ್ಭಟಿಸು.
    ಜೆರುಸಲೇಮೇ, ಸಂತೋಷದಿಂದಿದ್ದು ಉಲ್ಲಾಸಿಸು.
15 ಯಾಕೆಂದರೆ ನಿನ್ನ ಯೆಹೋವನು ನಿನ್ನ ಶಿಕ್ಷೆಯನ್ನು ನಿಲ್ಲಿಸಿದ್ದಾನೆ.
    ನಿನ್ನ ವೈರಿಗಳ ಬಲವಾದ ಬುರುಜುಗಳನ್ನು ನಾಶಮಾಡಿದ್ದಾನೆ.
ಇಸ್ರೇಲಿನ ರಾಜನೇ, ನಿನ್ನ ದೇವರು ನಿನ್ನೊಂದಿಗಿದ್ದಾನೆ.
    ನಿನಗೆ ಕೆಟ್ಟದ್ದು ಸಂಭವಿಸುತ್ತದೆಂದು ನೀನು ಚಿಂತಿಸದಿರು.
16 ಆ ಸಮಯದಲ್ಲಿ ಜೆರುಸಲೇಮಿಗೆ ಹೀಗೆ ಹೇಳಲಾಗುವುದು:
    “ಬಲವಾಗಿರು! ಭಯಪಡದಿರು!
17 ನಿನ್ನ ದೇವರಾದ ಯೆಹೋವನು ನಿನ್ನೊಂದಿಗಿದ್ದಾನೆ.
    ಆತನು ರಣಶೂರನು.
ನಿನ್ನನ್ನು ರಕ್ಷಿಸಿ ನಿನ್ನ ಮೇಲಿನ ತನ್ನ ಪ್ರೀತಿಯನ್ನು ತೋರ್ಪಡಿಸುವನು.
    ನಿನ್ನೊಂದಿಗೆ ಎಷ್ಟು ಸಂತೋಷದಲ್ಲಿರುವನೆಂದು ತೋರಿಸುವನು.
ನಿನ್ನೊಂದಿಗೆ ನಗಾಡುತ್ತಾ ಹರ್ಷಿಸುವನು.
18     ನಿನ್ನ ನಾಚಿಕೆಯನ್ನು ತೆಗೆದುಬಿಡುವನು.
ನಿನ್ನನ್ನು ಹಿಂಸಿಸುವ ಜನರನ್ನು ನಿಲ್ಲಿಸುವನು.
19 ಆ ಸಮಯದಲ್ಲಿ, ನಿನಗೆ ಕೇಡುಮಾಡುವವರನ್ನು ಶಿಕ್ಷಿಸುವೆನು.
    ಗಾಯಗೊಂಡಿರುವ ನಿನ್ನ ಜನರನ್ನು ರಕ್ಷಿಸುವೆನು.
ತಮ್ಮ ದೇಶದಿಂದ ದೂರಕ್ಕೆ ಚದರಿಸಲ್ಪಟ್ಟ ಜನರನ್ನು ನಾನು ಹಿಂದಕ್ಕೆ ಕರೆದುಕೊಂಡು ಬರುವೆನು.
    ನಾನು ಅವರನ್ನು ಪ್ರಸಿದ್ಧಿಪಡಿಸುವೆನು.
    ಎಲ್ಲಾ ಜನರು ಅವರನ್ನು ಹೊಗಳುವರು.
20 ಆಗ ನಿಮ್ಮೆಲ್ಲರನ್ನು ನಾನು ಹಿಂದಕ್ಕೆ ಕರೆತರುವೆನು.
    ನಿನ್ನನ್ನು ಪ್ರಸಿದ್ಧಿಪಡಿಸುವೆನು.
ಎಲ್ಲಾ ಜನರು ನಿನ್ನನ್ನು ಹೊಗಳುವರು.
    ನಿನ್ನ ಕಣ್ಣೆದುರಿಗೆ ಸೆರೆಹಿಡಿದವರನ್ನು ಕರೆತರುವಾಗ ಹಾಗೆ ಆಗುವದು”
ಇದು ಯೆಹೋವನ ನುಡಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International