Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೆಹೆಜ್ಕೇಲ 43-45

ಯೆಹೋವನು ತನ್ನ ಜನರ ಮಧ್ಯದಲ್ಲಿ ವಾಸಿಸುವನು

43 ಆ ಮನುಷ್ಯನು ನನ್ನನ್ನು ಪೂರ್ವದ ದ್ವಾರಕ್ಕೆ ಕರೆದುಕೊಂಡು ಹೋದನು. ಅಲ್ಲಿ ಇಸ್ರೇಲ್ ದೇವರ ಮಹಿಮೆಯು ಪೂರ್ವದಿಂದ ಬಂದಿತು. ದೇವರ ಸ್ವರವು ಸಮುದ್ರದ ಶಬ್ದದಂತೆ ಗಟ್ಟಿಯಾಗಿತ್ತು. ದೇವರ ಮಹಿಮಾ ಪ್ರಕಾಶದಿಂದ ನೆಲವು ಬೆಳಕಿನಿಂದ ತುಂಬಿತ್ತು. ನಾನು ನೋಡಿದ ದರ್ಶನವು ಕೆಬಾರ್ ಕಾಲುವೆಯ ಬಳಿ ಕಂಡ ದರ್ಶನದಂತಿತ್ತು. ನಾನು ಸಾಷ್ಟಾಂಗವೆರಗಿದೆನು. ಯೆಹೋವನ ಮಹಿಮೆಯು ಪೂರ್ವದಿಕ್ಕಿನ ದ್ವಾರದ ಮೂಲಕ ಆಲಯದೊಳಗೆ ಬಂದಿತು.

ಆಗ ದೇವರಾತ್ಮವು ನನ್ನನ್ನು ಎತ್ತಿಕೊಂಡು ಒಳಗಿನ ಪ್ರಾಕಾರಕ್ಕೆ ತಂದಿತು. ಯೆಹೋವನ ಮಹಿಮೆಯು ಆಲಯವನ್ನು ತುಂಬಿತು. ಆಲಯದೊಳಗಿಂದ ಯಾರೋ ನನ್ನೊಡನೆ ಮಾತನಾಡಿದಂತೆ ಕೇಳಿಸಿತು. ಅವನು ನನ್ನ ಬಳಿಯಲ್ಲಿ ಇನ್ನೂ ನಿಂತುಕೊಂಡಿದ್ದನು. ಆಲಯದೊಳಗಿಂದ ಬಂದ ಸ್ವರವು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಇದು ನನ್ನ ಸಿಂಹಾಸನವೂ ಪಾದಪೀಠವೂ ಇರುವ ಸ್ಥಳ. ನಾನು ಇಲ್ಲಿ ನನ್ನ ಜನರಾದ ಇಸ್ರೇಲರ ಮಧ್ಯದಲ್ಲಿ ನಿರಂತರವೂ ವಾಸಿಸುವೆನು. ಇಸ್ರೇಲ್ ಜನಾಂಗವು ಇನ್ನು ಮುಂದೆ ನನ್ನ ಪವಿತ್ರವಾದ ಹೆಸರನ್ನು ಹಾಳುಮಾಡುವದಿಲ್ಲ. ರಾಜರೂ ಅವರ ಜನರೂ ಲೈಂಗಿಕ ಪಾಪಗಳನ್ನು ಮಾಡಿ ನನ್ನನ್ನು ಅವಮಾನಪಡಿಸರು. ಅವರ ರಾಜರುಗಳ ಮೃತಶರೀರವನ್ನು ಇಲ್ಲಿ ಸಮಾಧಿ ಮಾಡುವದಿಲ್ಲ. ಅವರ ಹೊಸ್ತಿಲನ್ನು ನನ್ನ ಹೊಸ್ತಿಲ ಬಳಿಯಲ್ಲಿ ಇಡುವದರಿಂದ ಅವರ ನಿಲುವುಗಳನ್ನು ನನ್ನ ನಿಲುವುಗಳ ಬಳಿಯಲ್ಲಿ ಇಡುವದರಿಂದ ಅವರು ನನ್ನ ಹೆಸರಿಗೆ ಅವಮಾನ ಮಾಡುವದಿಲ್ಲ. ಹಿಂದಿನ ಕಾಲದಲ್ಲಿ, ಕೇವಲ ಒಂದೇ ಗೋಡೆಯು ಅವರಿಂದ ನನ್ನನ್ನು ಪ್ರತ್ಯೇಕಿಸಿತ್ತು. ಆದ್ದರಿಂದ ಪ್ರತಿಯೊಂದು ಸಲ ಅವರು ಪಾಪ ಮಾಡಿದಾಗ ಮತ್ತು ಆ ಭಯಂಕರ ಕೃತ್ಯಗಳನ್ನು ಮಾಡಿದಾಗ ನನ್ನ ಹೆಸರಿಗೆ ಅವಮಾನವಾಯಿತು. ಆದ್ದರಿಂದ ನಾನು ಕೋಪಗೊಂಡು ಅವರನ್ನು ನಾಶಮಾಡಿದೆನು. ಈಗ ಅವರು ತಮ್ಮ ಲೈಂಗಿಕ ಪಾಪಗಳನ್ನು ತೆಗೆದುಬಿಡಲಿ ಮತ್ತು ತಮ್ಮ ರಾಜರ ಹೆಣಗಳನ್ನೂ ನನ್ನಿಂದ ದೂರಮಾಡಲಿ. ಆಗ ನಾನು ಅವರೊಂದಿಗೆ ನಿರಂತರವಾಗಿ ವಾಸಿಸುವೆನು.

10 “ಈಗ, ನರಪುತ್ರನೇ, ಇಸ್ರೇಲ್ ಜನಾಂಗದವರಿಗೆ ಆಲಯದ ವಿಚಾರವಾಗಿ ತಿಳಿಸು. ಆಲಯದ ವಿನ್ಯಾಸದ ಬಗ್ಗೆ ಅವರು ತಿಳಿದಾಗ ತಮ್ಮ ಪಾಪಗಳಿಗಾಗಿ ಅವರು ನಾಚಿಕೆಪಡುವರು. 11 ಅವರು ತಮ್ಮ ಎಲ್ಲಾ ಪಾಪಗಳ ನಿಮಿತ್ತ ನಾಚಿಕೆಪಡುವರು. ಆಲಯದ ವಿನ್ಯಾಸವನ್ನು ಅವರು ತಿಳಿದುಕೊಳ್ಳಲಿ. ಅದು ಹೇಗೆ ಕಟ್ಟಲ್ಪಡಬೇಕೆಂಬುದನ್ನು, ಪ್ರವೇಶ ದ್ವಾರಗಳು ಮತ್ತು ಹೊರಗೆ ಹೋಗುವ ಬಾಗಿಲುಗಳು ಎಲ್ಲಿರಬೇಕೆಂಬುದನ್ನು ಮತ್ತು ಅವುಗಳ ಮೇಲೆ ಇರಬೇಕಾದ ಎಲ್ಲಾ ಚಿತ್ರಗಳನ್ನು ಅವರು ತಿಳಿದುಕೊಳ್ಳಲಿ. ಅದರ ನಿಯಮಗಳನ್ನು, ಕಟ್ಟಳೆಗಳನ್ನು ಅವರಿಗೆ ಬೋಧಿಸಿರಿ. ಅವರು ಎಲ್ಲಾ ಧರ್ಮಬೋಧನೆಗಳನ್ನು ಅನುಸರಿಸುವಂತೆ ಎಲ್ಲಾ ಕಟ್ಟಳೆಗಳನ್ನು ಬರೆದಿಡಿರಿ. 12 ಇದು ಆಲಯದ ಕಟ್ಟಳೆ: ಪರ್ವತದ ಮೇಲಿನ ಎಲ್ಲಾ ಪ್ರಾಂತ್ಯದ ಮೇರೆಯೊಳಗಿರುವ ಸ್ಥಳವು ಅತಿ ಪರಿಶುದ್ಧವಾದದ್ದು. ಇದು ಆಲಯದ ಕಟ್ಟಳೆ.

ಯಜ್ಞವೇದಿಕೆ

13 “ಯಜ್ಞವೇದಿಕೆ ಉದ್ದಮೊಳದ[a] ಅಳತೆಯ ಪ್ರಕಾರ ಇರಬೇಕು. ಯಜ್ಞವೇದಿಯ ಅಡಿಪಾಯದ ಸುತ್ತಲೂ ಕಾಲಿವೆ ತೋಡಲ್ಪಟ್ಟಿತ್ತು. ಅದರ ಆಳ ಒಂದು ಮೊಳ. ಪ್ರತಿಯೊಂದು ಕಡೆಯಲ್ಲಿ ಅದರ ಅಗಲ ಒಂದು ಮೊಳ. ಯಜ್ಞವೇದಿಯ ಸುತ್ತ ಒಂದು ಗೇಣುದ್ದದ ಚೌಕಟ್ಟಿತ್ತು. ಇದು ಎತ್ತರವಾದ ಯಜ್ಞವೇದಿಯ ವಿನ್ಯಾಸ. 14 ನೆಲದಿಂದ ಅಡಿಪಾಯದ ತಳದವರೆಗೆ ಅಡಿಪಾಯದ ಎತ್ತರ ಎರಡು ಮೊಳ, ಅದರ ಅಗಲ ಒಂದು ಮೊಳ, ಚಿಕ್ಕ ಸಜ್ಜದಿಂದ ದೊಡ್ಡ ಸಜ್ಜದವರೆಗೆ ನಾಲ್ಕು ಮೊಳ ಎತ್ತರ, ಎರಡು ಮೊಳ ಅಗಲ. 15 ಯಜ್ಞವೇದಿಯ ಮೇಲೆ ಬೆಂಕಿ ಹಾಕುವ ಸ್ಥಳದ ಎತ್ತರ ನಾಲ್ಕು ಮೊಳ. ಅದರ ನಾಲ್ಕು ಮೂಲೆಗಳು ಕೊಂಬಿನ ಆಕಾರದಂತಿದ್ದವು. 16 ಬೆಂಕಿಹಾಕುವ ಸ್ಥಳದ ಉದ್ದ ಹನ್ನೆರಡು ಮೊಳ; ಅಗಲ ಹನ್ನೆರಡು ಮೊಳ. ಅದು ಚೌಕವಾಗಿತ್ತು. 17 ಅದರ ಮೆಟ್ಟಲು ಹದಿನಾಲ್ಕು ಮೊಳ ಅಗಲ, ಹದಿನಾಲ್ಕು ಮೊಳ ಉದ್ದವಾಗಿದ್ದು ಚೌಕವಾಗಿತ್ತು. ಅದರ ಸುತ್ತಲೂ ಇದ್ದ ಅಂಚು ಅರ್ಧ ಮೊಳ ಅಗಲವಾಗಿತ್ತು. (ಅಡಿಪಾಯದ ಸುತ್ತಲೂ ಇದ್ದ ಕಾಲುವೆಯ ಅಗಲ ಎರಡು ಮೊಳ.) ಯಜ್ಞವೇದಿಯ ಮೇಲೆ ಹತ್ತುವ ಮೆಟ್ಟಲುಗಳು ಪೂರ್ವಭಾಗದಲ್ಲಿದ್ದವು.”

18 ಆಗ ಅವನು ನನಗೆ, “ನರಪುತ್ರನೇ, ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ‘ಯಜ್ಞವೇದಿಯ ಕ್ರಮಗಳು ಯಾವುದೆಂದರೆ, ಯಜ್ಞವೇದಿಯನ್ನು ಕಟ್ಟುವಾಗ ಸರ್ವಾಂಗಹೋಮ ಮತ್ತು ಅದರ ಮೇಲೆ ರಕ್ತ ಚಿಮುಕಿಸುವದಕ್ಕೆ ಈ ಕ್ರಮಗಳನ್ನು ಅನುಸರಿಸು. 19 ಚಾದೋಕನ ಸಂತತಿಯ ಯಾಜಕರ ಪಾಪಪರಿಹಾರಕ್ಕಾಗಿ ನೀನು ಒಂದು ಎಳೆ ಹೋರಿಯನ್ನು ಅರ್ಪಿಸು. ಇವರು ಲೇವಿಕುಲದ ಯಾಜಕರು. ಇವರು ನನಗೆ ಕಾಣಿಕೆಗಳನ್ನು ಅರ್ಪಿಸುವ ಸೇವೆ ಮಾಡುವವರಾಗಿರುತ್ತಾರೆ.’” ಇದು ನನ್ನ ಒಡೆಯನಾದ ಯೆಹೋವನ ನುಡಿ. 20 “ನೀನು ಹೋರಿಯ ರಕ್ತವನ್ನು ತೆಗೆದು ವೇದಿಯ ನಾಲ್ಕು ಕೊಂಬುಗಳಲ್ಲಿ ಪ್ರೋಕ್ಷಿಸಬೇಕು; ಮತ್ತು ಮೆಟ್ಟಿಲಿನ ನಾಲ್ಕು ಮೂಲೆಗಳಿಗೂ, ಅದರ ಸುತ್ತಲೂ ಇರುವ ದಿಂಡಿನ ಮೇಲೂ ರಕ್ತ ಪ್ರೋಕ್ಷಿಸಬೇಕು. ಹೀಗೆ ಮಾಡುವಾಗ ನೀನು ವೇದಿಯನ್ನು ಪವಿತ್ರಗೊಳಿಸುವೆ. 21 ಆಮೇಲೆ ಪಾಪಪರಿಹಾರದ ಹೋರಿಯನ್ನು ತೆಗೆದು ಆಲಯದ ಜಾಗದಲ್ಲಿ ಆಲಯದ ಹೊರಗಿರುವ ಸ್ಥಳದಲ್ಲಿ ಸುಡಬೇಕು.

22 “ಎರಡನೇ ದಿವಸದಲ್ಲಿ ಪೂರ್ಣಾಂಗವಾದ ಹೋತವನ್ನು ನೀನು ಅರ್ಪಿಸಬೇಕು. ಪಾಪಪರಿಹಾರಕಯಜ್ಞಕ್ಕಾಗಿ ಯಾಜಕರು ಹೇಗೆ ಯಜ್ಞವೇದಿಯನ್ನು ಪವಿತ್ರ ಮಾಡಿದರೋ ಅದೇ ರೀತಿಯಲ್ಲಿ ತಿರುಗಿ ಮಾಡಬೇಕು. 23 ಯಜ್ಞವೇದಿಯನ್ನು ಶುದ್ಧೀಕರಿಸಿದ ನಂತರ ನಿಷ್ಕಳಂಕವಾದ ಒಂದು ಹೋರಿ ಮತ್ತು ಹಿಂಡಿನಿಂದ ಒಂದು ಟಗರನ್ನು ಸಮರ್ಪಿಸಬೇಕು. 24 ಯೆಹೋವನ ಸನ್ನಿಧಾನದಲ್ಲಿ ಅವುಗಳನ್ನು ವಧಿಸಬೇಕು. ಆಮೇಲೆ ಯಾಜಕರು ಅದರ ಮೇಲೆ ಉಪ್ಪು ಚಿಮುಕಿಸಿ ಹೋರಿ ಮತ್ತು ಟಗರನ್ನು ಸರ್ವಾಂಗಹೋಮವಾಗಿ ಸಮರ್ಪಿಸಬೇಕು. 25 ದೋಷಪರಿಹಾರಕಯಜ್ಞಕ್ಕಾಗಿ ಪ್ರತಿದಿವಸ ಏಳು ದಿವಸಗಳ ತನಕ ಒಂದೊಂದು ಆಡನ್ನು ಸಮರ್ಪಿಸಬೇಕು. ಅದೇ ಸಮಯದಲ್ಲಿ ನಿಷ್ಕಳಂಕವಾದ ಒಂದು ಎಳೇ ಹೋರಿ ಮತ್ತು ಟಗರುಗಳನ್ನು ದೋಷಪರಿಹಾರಕಯಜ್ಞಕ್ಕಾಗಿ ಸಮರ್ಪಿಸಬೇಕು. 26 ಏಳು ದಿವಸಗಳ ತನಕ ಯಾಜಕರು ವೇದಿಯನ್ನು ಪವಿತ್ರ ಮಾಡಬೇಕು ಮತ್ತು ದೇವರನ್ನು ಆರಾಧಿಸುವದಕ್ಕೆ ಸಿದ್ಧಪಡಿಸಬೇಕು. 27 ಏಳು ದಿವಸಗಳ ತರುವಾಯ, ಎಂಟನೇ ದಿನದಲ್ಲಿ ಯಾಜಕರು ನಿಮ್ಮ ಪರವಾಗಿ ಸರ್ವಾಂಗಹೋಮವನ್ನೂ ಸಮಾಧಾನಯಜ್ಞವನ್ನೂ ಅರ್ಪಿಸಬೇಕು. ಆಗ ನಾನು ನಿಮಗೆ ಪ್ರಸನ್ನನಾಗುವೆನು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.

ಹೊರಗಿನ ದ್ವಾರ

44 ಆ ಬಳಿಕ ನನ್ನನ್ನು ಆ ಮನುಷ್ಯನು ಆಲಯದ ಪೂರ್ವದ್ವಾರಕ್ಕೆ ತಂದನು. ನಾವು ದ್ವಾರದ ಹೊರಗಿದ್ದೆವು. ದ್ವಾರವು ಮುಚ್ಚಿತ್ತು. ಆಗ ಯೆಹೋವನು ನನಗೆ ಹೀಗೆಂದನು, “ಈ ದ್ವಾರವು ಮುಚ್ಚಿಯೇ ಇರಬೇಕು. ಇದು ತೆರೆಯಲ್ಪಡುವದಿಲ್ಲ. ಇದರ ಮೂಲಕ ಯಾರೂ ಪ್ರವೇಶ ಮಾಡುವದಿಲ್ಲ. ಯಾಕೆಂದರೆ ಇಸ್ರೇಲಿನ ದೇವರಾದ ಯೆಹೋವನು ಈ ದ್ವಾರದ ಮೂಲಕ ಪ್ರವೇಶಿಸಿದ್ದನು. ಆದ್ದರಿಂದ ಇದು ಮುಚ್ಚಿಯೇ ಇರಬೇಕು. ಜನರ ಅಧಿಪತಿಯು ಯೆಹೋವನ ಸನ್ನಿಧಿಯಲ್ಲಿ ಊಟಮಾಡಲು ಬರುವಾಗ ಅವನು ಮಾತ್ರ ಈ ದ್ವಾರದ ಬಳಿ ಕುಳಿತುಕೊಳ್ಳಬಹುದು. ಅಧಿಪತಿಯು ದ್ವಾರದ ಮಂಟಪದ ಮೂಲಕ ಪ್ರವೇಶಿಸಬೇಕು ಮತ್ತು ಅದೇ ಮಾರ್ಗದಲ್ಲಿ ಹೊರ ಬರಬೇಕು.”

ಆಲಯದ ಪವಿತ್ರತೆ

ಆ ಬಳಿಕ ನನ್ನನ್ನು ಉತ್ತರದ ದ್ವಾರದ ಮೂಲಕ ಆಲಯದ ಮುಂಭಾಗಕ್ಕೆ ಅವನು ಕರೆದುಕೊಂಡು ಹೋದನು. ನಾನು ನೋಡಿದಾಗ ಯೆಹೋವನ ತೇಜಸ್ಸು ಆತನ ಆಲಯವನ್ನು ತುಂಬುತ್ತಿತ್ತು. ನಾನು ಸಾಷ್ಟಾಂಗವೆರಗಿದೆನು. ಆಗ ಯೆಹೋವನು ಹೇಳಿದ್ದೇನೆಂದರೆ, “ನರಪುತ್ರನೇ, ಕಿವಿಯಾರೆ ಕೇಳು, ಕಣ್ಣಾರೆ ನೋಡಿ ಅರ್ಥಮಾಡಿಕೊ. ಪವಿತ್ರಾಲಯದ ಎಲ್ಲಾ ವಿಧಿನಿಯಮಗಳನ್ನು ಗಮನವಿಟ್ಟು ಕೇಳು. ಆಲಯದೊಳಕ್ಕೆ ಬರುವ ಪ್ರವೇಶ ದ್ವಾರಗಳನ್ನೂ ಪವಿತ್ರಸ್ಥಳದಿಂದ ಹೊರ ಹೋಗುವ ಪ್ರವೇಶ ದ್ವಾರಗಳನ್ನೂ ಗಮನವಿಟ್ಟು ನೋಡು. ಅನಂತರ ನನ್ನ ಮಾತಿಗೆ ವಿಧೇಯರಾಗಲು ನಿರಾಕರಿಸುವ ಎಲ್ಲಾ ಇಸ್ರೇಲರಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ಇಸ್ರೇಲ್ ಜನಾಂಗವೇ, ನೀವು ಮಾಡಿರುವ ಭಯಂಕರ ಕೃತ್ಯಗಳು ನನಗೆ ಸಾಕಾಗಿವೆ. ನೀವು ನನ್ನ ಆಲಯದೊಳಗೆ ಅನ್ಯರನ್ನು ತಂದಿರುತ್ತೀರಿ. ಅವರು ಸುನ್ನತಿಯಾದವರಾಗಿರಲಿಲ್ಲ. ಅವರು ಸಂಪೂರ್ಣವಾಗಿ ನನ್ನನ್ನು ನಂಬಿರಲಿಲ್ಲ. ಈ ರೀತಿಯಾಗಿ ನೀವು ನನ್ನ ಆಲಯವನ್ನು ಹೊಲೆ ಮಾಡಿರುತ್ತೀರಿ. ನೀವು ನಾವು ಮಾಡಿಕೊಂಡ ಒಡಂಬಡಿಕೆಯನ್ನು ಮುರಿದುಬಿಟ್ಟಿರಿ. ಭಯಂಕರ ಕೃತ್ಯಗಳನ್ನು ಮಾಡಿ ಆಮೇಲೆ ನನಗೆ ರೊಟ್ಟಿ, ಕೊಬ್ಬು, ರಕ್ತಗಳ ಕಾಣಿಕೆ ಅರ್ಪಿಸುತ್ತೀರಿ. ಆದರೆ ಇವೆಲ್ಲಾ ನನ್ನ ಆಲಯವನ್ನು ಅಶುದ್ಧಗೊಳಿಸುತ್ತಿವೆ. ನೀವು ನನ್ನ ಪವಿತ್ರ ವಸ್ತುಗಳನ್ನು ಅಲಕ್ಷ್ಯಮಾಡಿದಿರಿ. ನನ್ನ ಪವಿತ್ರಸ್ಥಳದ ಜವಾಬ್ದಾರಿಕೆಯನ್ನು ನೀವು ಅನ್ಯರ ವಶಮಾಡಿದ್ದೀರಿ.’”

ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲರೊಂದಿಗೆ ವಾಸವಾಗಿರುವ ಅನ್ಯಜನರೊಳಗೆ ತನುಮನಗಳಲ್ಲಿ ಸುನ್ನತಿಯಾಗಿಲ್ಲದವನು ನನ್ನ ಪವಿತ್ರಾಲಯವನ್ನು ಪ್ರವೇಶಿಸಕೂಡದು. 10 ಗತಕಾಲದಲ್ಲಿ ಇಸ್ರೇಲರು ನನ್ನನ್ನು ತ್ಯಜಿಸಿದಾಗ ಲೇವಿಯರು ನನ್ನನ್ನು ಬಿಟ್ಟುಹೋದರು. ಇಸ್ರೇಲರು ನನ್ನನ್ನು ಬಿಟ್ಟು ವಿಗ್ರಹಗಳನ್ನು ಪೂಜಿಸಿದರು. ಲೇವಿಯರು ಮಾಡಿದ ಪಾಪಕ್ಕಾಗಿ ಶಿಕ್ಷಿಸಲ್ಪಡುವರು. 11 ನನ್ನ ಪವಿತ್ರಸ್ಥಳದಲ್ಲಿ ಸೇವೆಮಾಡಲು ಲೇವಿಯರು ಆರಿಸಲ್ಪಟ್ಟಿರುತ್ತಾರೆ. ಅವರು ಆಲಯದ ಪ್ರವೇಶ ದ್ವಾರವನ್ನು ಕಾವಲು ಕಾಯ್ದರು. ಆಲಯದೊಳಗೆ ಸೇವೆಮಾಡಿದರು. ಜನರು ಅರ್ಪಿಸುವ ಪ್ರಾಣಿಗಳನ್ನು ವಧಿಸಿ ಯಜ್ಞಕ್ಕಾಗಿ ಅವುಗಳನ್ನು ತಯಾರುಮಾಡಿ ಸರ್ವಾಂಗಹೋಮ ಯಜ್ಞಗಳನ್ನು ಸಮರ್ಪಿಸಿದರು. ಜನರಿಗೆ ಸಹಾಯ ಮಾಡಿ, ಅವರ ಸೇವೆಮಾಡಲು ಅವರು ಆರಿಸಲ್ಪಟ್ಟಿದ್ದಾರೆ. 12 ಆದರೆ ಆ ಲೇವಿಯರು, ಜನರು ನನಗೆ ವಿರುದ್ಧವಾಗಿ ಪಾಪ ಮಾಡುವಂತೆ ಸಹಾಯಮಾಡಿದರು. ಜನರು ತಮ್ಮ ವಿಗ್ರಹಗಳನ್ನು ಪೂಜಿಸುವಂತೆ ಅವರಿಗೆ ಸಹಾಯ ಮಾಡಿದರು. ಆದ್ದರಿಂದ ನಾನು ವಾಗ್ದಾನ ಮಾಡುವದೇನೆಂದರೆ, ‘ಅವರು ಮಾಡಿದ ಪಾಪಗಳಿಗಾಗಿ ಅವರು ಶಿಕ್ಷಿಸಲ್ಪಡುವರು.’” ಇದು ನನ್ನ ಒಡೆಯನಾದ ಯೆಹೋವನ ನುಡಿ.

13 “ಆದ್ದರಿಂದ ಯಾಜಕರಂತೆ ಲೇವಿಯರು ನನಗೆ ಕಾಣಿಕೆಗಳನ್ನು ತರಕೂಡದು. ಅವರು ನನ್ನ ಪವಿತ್ರ ವಸ್ತುಗಳ ಬಳಿಗೂ, ಅತೀ ಪವಿತ್ರ ವಸ್ತುಗಳ ಬಳಿಗೂ ಬರಬಾರದು. ಅವರು ಮಾಡಿದ ಭಯಂಕರ ಕೃತ್ಯಗಳಿಗಾಗಿ ಅವರು ಅವಮಾನಿತರಾಗಬೇಕು. 14 ಆದರೆ ನಾನು ನನ್ನ ಆಲಯದಲ್ಲಿ ಸೇವೆಮಾಡಲು ಅವರಿಗೆ ಬಿಡುವೆನು. ಅವರು ಅದರೊಳಗೆ ಮಾಡಬೇಕಾದ ಸೇವೆಯನ್ನು ಮಾಡುವರು.

15 “ಯಾಜಕರೆಲ್ಲರೂ ಲೇವಿ ಕುಲಕ್ಕೆ ಸಂಬಂಧಪಟ್ಟವರು. ಆದರೆ ಲೇವಿಯರು ನನ್ನನ್ನು ಬಿಟ್ಟು ತೊಲಗಿದಾಗ ಚಾದೋಕನ ಸಂತತಿಯವರಾದ ಯಾಜಕರು ನನ್ನ ಪವಿತ್ರ ಸ್ಥಳವನ್ನು ಪರಾಂಬರಿಸಿದರು. ಆದ್ದರಿಂದ ಚಾದೋಕನ ಸಂತತಿಯವರು ಮಾತ್ರ ನನಗೆ ಕಾಣಿಕೆಗಳನ್ನು ಸಮರ್ಪಿಸುವರು. ಅವರು ನನ್ನ ಸನ್ನಿಧಿಯಲ್ಲಿ ನಿಂತು ಯಜ್ಞಮಾಡಲ್ಪಡುವ ಪ್ರಾಣಿಗಳ ಕೊಬ್ಬು ಮತ್ತು ರಕ್ತವನ್ನು ನನಗೆ ಸಮರ್ಪಿಸುವರು.” ಇದು ನನ್ನ ಒಡೆಯನಾದ ಯೆಹೋವನ ನುಡಿ. 16 “ಅವರು ನನ್ನ ಪವಿತ್ರಸ್ಥಳವನ್ನು ಪ್ರವೇಶಿಸುವರು. ನನ್ನ ಮೇಜಿನ ಬಳಿಗೆ ನನಗೆ ಸೇವೆಮಾಡಲು ಬರುವರು. ನಾನು ಅವರಿಗೆ ವಹಿಸಿರುವ ವಸ್ತುಗಳನ್ನು ಪರಾಂಬರಿಸುವರು. 17 ಒಳಗಿನ ಪ್ರಾಕಾರದ ಪ್ರವೇಶ ದ್ವಾರವನ್ನು ಹೊಕ್ಕುವಾಗ ಅವರು ನಾರುಮಡಿ ಬಟ್ಟೆಯನ್ನು ಧರಿಸುವರು. ಅವರು ಒಳಗಿನ ಪ್ರಾಕಾರದ ಪ್ರವೇಶ ದ್ವಾರದಲ್ಲಾಗಲಿ ಆಲಯದೊಳಗಾಗಲಿ ಸೇವೆಮಾಡುವಾಗ ಉಣ್ಣೆಯಿಂದ ಮಾಡಿದ ಬಟ್ಟೆಯನ್ನು ಧರಿಸಿಕೊಳ್ಳುವದಿಲ್ಲ. 18 ಅವರು ನಾರುಮಡಿಯ ಮುಂಡಾಸನ್ನು ಧರಿಸಿಕೊಳ್ಳುವರು. ಅದೇ ಬಟ್ಟೆಯ ಚಡ್ಡಿಯನ್ನೂ ಧರಿಸುವರು. ಅವರಿಗೆ ಬೆವರು ಬರಿಸುವ ಯಾವ ಬಟ್ಟೆಯಾಗಲಿ ಅವರು ಧರಿಸುವದಿಲ್ಲ. 19 ಹೊರಗಿನ ಪ್ರಾಕಾರದಲ್ಲಿರುವ ಜನರ ಬಳಿಗೆ ಅವರು ಹೋಗುವಾಗ, ನನ್ನ ಸೇವೆಮಾಡಲು ಅವರು ಧರಿಸಿಕೊಂಡಿದ್ದ ವಸ್ತ್ರಗಳನ್ನು ತೆಗೆದಿಡುವರು. ಒಳಗಿನ ಪ್ರಾಕಾರದಲ್ಲಿರುವ ವಿಶೇಷವಾದ ಉಗ್ರಾಣ ಕೋಣೆಯಲ್ಲಿ ಅವರು ಆ ವಸ್ತ್ರಗಳನ್ನು ಇಡುವರು ಮತ್ತು ಹೊರಗಿನ ಪ್ರಾಕಾರದಲ್ಲಿರುವ ಜನರ ಬಳಿಗೆ ಹೋಗುವಾಗ ಬೇರೆ ಬಟ್ಟೆಗಳನ್ನು ಧರಿಸಿಕೊಳ್ಳುವರು. ಹೀಗೆ ಅವರು ಮಾಡುವದರಿಂದ ಸಾಮಾನ್ಯ ಜನರು ಆ ವಿಶೇಷವಾದ ಬಟ್ಟೆಗಳನ್ನು ಮುಟ್ಟಿದಂತಾಗುವುದು.

20 “ಆ ಯಾಜಕರು ತಮ್ಮ ತಲೆಯನ್ನು ಬೋಳಿಸುವದೂ ಇಲ್ಲ ಮತ್ತು ತಲೆಕೂದಲನ್ನು ಉದ್ದವಾಗಿ ಬೆಳೆಸುವದೂ ಇಲ್ಲ. ಇದು ಅವರಲ್ಲಿರುವ ಶೋಕವನ್ನು ಸೂಚಿಸುತ್ತದೆ. ಯಾಜಕರು ಯೆಹೋವನ ಸೇವೆಮಾಡುವಾಗ ಸಂತೋಷದಿಂದಿರಬೇಕು. ಅವರು ತಮ್ಮ ತಲೆಕೂದಲನ್ನು ಸಣ್ಣದಾಗಿರಿಸುವದಕ್ಕೆ ಕತ್ತರಿಸಬಹುದು. 21 ಯಾಜಕರು ಒಳಗಿನ ಪ್ರಾಕಾರವನ್ನು ಪ್ರವೇಶಿಸುವಾಗ ದ್ರಾಕ್ಷಾರಸವನ್ನು ಕುಡಿದಿರಬಾರದು. 22 ಯಾಜಕರು ವಿಧವೆಯರನ್ನಾಗಲಿ ವಿವಾಹವಿಚ್ಛೇದನಗೊಂಡ ಸ್ತ್ರೀಯರನ್ನಾಗಲಿ ಮದುವೆಯಾಗಕೂಡದು. ಇಸ್ರೇಲ್ ಸಂತತಿಯವಳೇ ಆಗಿರುವ ಕನ್ನಿಕೆಯನ್ನಾಗಲಿ ಅಥವಾ ಯಾಜಕನಾಗಿದ್ದ ತನ್ನ ಗಂಡನನ್ನು ಕಳೆದುಕೊಂಡ ವಿಧವೆಯನ್ನಾಗಲಿ ಮದುವೆಯಾಗಬೇಕು.

23 “ಯಾಜಕರು ಜನರಿಗೆ ಪವಿತ್ರ ವಸ್ತುಗಳ ಮತ್ತು ಪವಿತ್ರವಲ್ಲದ ವಸ್ತುಗಳ ಬಗ್ಗೆ ಉಪದೇಶಿಸಬೇಕು. ಒಬ್ಬನನ್ನು ಅಶುದ್ಧನನ್ನಾಗಿ ಮಾಡುವಂಥವುಗಳ ಬಗ್ಗೆ ಇರುವ ನಿಯಮಗಳನ್ನು ಅವರು ಜನರಿಗೆ ಉಪದೇಶಿಸಬೇಕು. 24 ವ್ಯಾಜ್ಯಗಳಿಗೆ ತೀರ್ಪು ನೀಡುವ ನ್ಯಾಯಾಧಿಶರಾಗಿ ಯಾಜಕರು ಸೇವೆಮಾಡಬೇಕು ಮತ್ತು ನನ್ನ ಆಡಳಿತವನ್ನು ಆಧರಿಸಿ ಅವರು ತೀರ್ಪು ನೀಡಬೇಕು. ಅವರು ವಿಶೇಷವಾದ ಕೂಟಗಳನ್ನು ಏರ್ಪಡಿಸುವಾಗ ನನ್ನ ವಿಧಿನಿಯಮಗಳನ್ನು ಅನುಸರಿಸುವರು ಮತ್ತು ವಿಶೇಷವಾದ ಎಲ್ಲಾ ರಜಾದಿನಗಳನ್ನು ಮತ್ತು ಸಬ್ಬತ್ ದಿನಗಳನ್ನು ಅವರು ಗೌರವಿಸುವರು. 25 ಸತ್ತ ಹೆಣದ ಬಳಿಗೆ ಹೋಗಿ ಅವರು ತಮ್ಮನ್ನು ಅಪವಿತ್ರ ಮಾಡಿಕೊಳ್ಳಬಾರದು. ಆದರೆ ಸತ್ತವರು ತಮ್ಮ ಹೆತ್ತವರಾಗಲಿ ಮಕ್ಕಳಾಗಲಿ ಅಥವಾ ಮದುವೆಯಾಗದಿದ್ದ ಸಹೋದರ ಸಹೋದರಿಯರಾಗಲಿ ಆಗಿದ್ದಲ್ಲಿ ಅವರು ತಮ್ಮನ್ನು ಅಪವಿತ್ರ ಮಾಡಿಕೊಳ್ಳಬೇಕಾಗುತ್ತದೆ. 26 ಆ ಯಾಜಕನು ತನ್ನನ್ನು ಶುದ್ಧ ಮಾಡಿಕೊಂಡ ತರುವಾಯ ತಾನು ಏಳು ದಿವಸ ಕಾಯಬೇಕು. 27 ಅನಂತರ ಅವನು ಪವಿತ್ರಸ್ಥಳಕ್ಕೆ ತಿರುಗಿ ಹೋಗಬಹುದು. ಆದರೆ ಒಳಗಿನ ಪ್ರಾಕಾರದೊಳಗೆ ಹೋಗುವ ದಿನದಂದು ಯಾಜಕನು ಮೊದಲು ತನಗಾಗಿ ಪಾಪಪರಿಹಾರಕಯಜ್ಞವನ್ನು ಸಮರ್ಪಿಸಿಕೊಳ್ಳಬೇಕು.” ಇದು ನನ್ನ ಒಡೆಯನಾದ ಯೆಹೋವನ ನುಡಿ.

28 “ಲೇವಿಯರ ಆಸ್ತಿಯು ನಾನೇ, ಇಸ್ರೇಲರೊಳಗೆ ಅವರಿಗೆ ಯಾವ ಆಸ್ತಿಯೂ ಇರುವದಿಲ್ಲ. ನಾನೇ ಅವರ ಸ್ವಾಸ್ತ್ಯ. 29 ಜನರು ಧಾನ್ಯಸಮರ್ಪಣೆ, ಪಾಪಪರಿಹಾರಕಯಜ್ಞ, ದೋಷಪರಿಹಾರಕಯಜ್ಞಕ್ಕೆ ತಂದ ಕಾಣಿಕೆಯೇ ಅವರ ಆಹಾರವಾಗಿರುವದು. 30 ಎಲ್ಲಾ ಪ್ರಥಮಫಲವು ಯಾಜಕರಿಗೆ ಸಲ್ಲತಕ್ಕದ್ದು. ಅಲ್ಲದೆ ನೀವು ನಾದುವ ಮೊದಲನೆ ರೊಟ್ಟಿಯ ಹಿಟ್ಟು ಯಾಜಕರಿಗೆ ಕೊಡಬೇಕು. ಹೀಗೆ ಮಾಡಿದ್ದಲ್ಲಿ ನೀವು ಆಶೀರ್ವದಿಸಲ್ಪಡುತ್ತೀರಿ. 31 ಯಾಜಕರು ಸ್ವಾಭಾವಿಕವಾಗಿ ಸತ್ತು ಅಥವಾ ವನ್ಯಜಂತುಗಳು ಕೊಂದಿರುವ ಯಾವ ಪ್ರಾಣಿಯಾಗಲಿ ಪಕ್ಷಿಯಾಗಲಿ ಅದರ ಮಾಂಸವನ್ನು ತಿನ್ನಬಾರದು.

ಪವಿತ್ರ ಕಾರ್ಯಕ್ಕಾಗಿ ದೇಶದ ವಿಭಜನೆ

45 “ನೀನು ಚೀಟುಹಾಕಿ ಇಸ್ರೇಲರ ಕುಲಗಳಿಗನುಸಾರವಾಗಿ ದೇಶವನ್ನು ವಿಂಗಡಿಸಬೇಕು. ಆ ಸಮಯದಲ್ಲಿ ಒಂದು ಭಾಗವನ್ನು ಪ್ರತ್ಯೇಕಿಸಿಡಬೇಕು. ಅದು ಯೆಹೋವನಿಗೋಸ್ಕರ ಮೀಸಲಾಗಿಡಲ್ಪಟ್ಟದ್ದು. ಆ ಪ್ರದೇಶವು ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಹತ್ತು ಸಾವಿರ ಮೊಳ ಅಗಲವಿರುವದು.[b] ಈ ಎಲ್ಲಾ ಜಾಗವು ಪರಿಶುದ್ಧವಾದದ್ದು. ಆ ಪ್ರದೇಶದ ಮಧ್ಯ ಭಾಗದಲ್ಲಿ ಐನೂರು ಮೊಳ ಚೌಕದ ಸ್ಥಳ ದೇವಾಲಯಕ್ಕೆ ಮೀಸಲಾಗಿದೆ. ಈ ಭಾಗದ ಪರಿಧಿಯ ಉದ್ದಕ್ಕೂ ಐವತ್ತು ಮೊಳ ಅಗಲದ ಜಾಗವಿರುವದು. 3-4 ಪವಿತ್ರವಾದ ಪ್ರದೇಶದಲ್ಲಿ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಹತ್ತು ಸಾವಿರ ಮೊಳ ಅಗಲದ ಸ್ಥಳವು ಯಾಜಕರಿಗೆ ಸೇರಬೇಕು. ಅವರು ಯೆಹೋವನ ಸನ್ನಿಧಿಗೆ ಹೋಗಿ ಆತನ ಪವಿತ್ರಾಲಯದಲ್ಲಿ ಆತನ ಸೇವೆ ಮಾಡುವುದರಿಂದ ಪವಿತ್ರ ಪ್ರದೇಶದ ಈ ಭಾಗವು ಅವರಿಗೋಸ್ಕರವಾಗಿಯೂ ಅವರ ಮನೆಗಳಿಗೋಸ್ಕರವಾಗಿಯೂ ಇರಬೇಕು. ಆಲಯಕ್ಕಾಗಿ ಮೀಸಲಾದ ಐನೂರು ಮೊಳ ಚೌಕವಾದ ಜಾಗವು ಈ ಪವಿತ್ರ ಪ್ರದೇಶದೊಳಗಿರಬೇಕು. ಆ ಸ್ಥಳವು ಮಹಾ ಪವಿತ್ರವಾದ ಸ್ಥಳ. ಯಾಕೆಂದರೆ ಅತ್ಯಂತ ಪವಿತ್ರವಾದ ಆಲಯವು ಅಲ್ಲಿರುತ್ತದೆ. ಪವಿತ್ರ ಪ್ರದೇಶದ ಉಳಿದರ್ಧ ಭಾಗವು ಅಂದರೆ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಹತ್ತು ಸಾವಿರ ಮೊಳ ಅಗಲದ ಜಾಗವು ಲೇವಿಯರಿಗೆ ಮೀಸಲಾಗಿದೆ. ಅವರು ವಾಸಿಸುವ ಪಟ್ಟಣವು ಈ ಪ್ರದೇಶದಲ್ಲಿರುತ್ತದೆ.[c]

“ಪವಿತ್ರ ಪ್ರದೇಶ ಭಾಗದ ಪಕ್ಕದಲ್ಲಿ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಐದು ಸಾವಿರ ಮೊಳ ಅಗಲದ ಪ್ರದೇಶ ಭಾಗವು ಸಹ ಇರುತ್ತದೆ. ಇಸ್ರೇಲಿನ ಉಳಿದೆಲ್ಲ ಜನರಿಗೂ ಈ ಪ್ರದೇಶ ಭಾಗವು ಪಟ್ಟಣವಾಗಿರುತ್ತದೆ. ಅಧಿಪತಿಗೆ ಪವಿತ್ರ ಪ್ರದೇಶ ಭಾಗದ ಎರಡು ಕಡೆಗಳಲ್ಲೂ ಭೂಭಾಗಗಳಿರುವುದು. ಅಂದರೆ ಪವಿತ್ರ ಪ್ರದೇಶಕ್ಕೆ ಪಶ್ಚಿಮದಲ್ಲಿರುವ ಪಶ್ಚಿಮ ಭಾಗ ಮತ್ತು ಇಸ್ರೇಲರ ಪಟ್ಟಣದ ಪೂರ್ವ ಭೂಭಾಗ. ಇದು ಪವಿತ್ರ ಪ್ರದೇಶದ ಪೂರ್ವಭಾಗದಲ್ಲಿದೆ. ಅಧಿಪತಿಯ ಪಶ್ಚಿಮ ಭಾಗವು ಪವಿತ್ರ ಪ್ರದೇಶ ಭಾಗದ ಪಶ್ಚಿಮದ ಅಂಚಿನಿಂದ ಮೆಡಿಟರೇನಿಯನ್ ಸಮುದ್ರದವರೆಗೂ ವಿಸ್ತರಿಸಿದೆ. ಅಧಿಪತಿಯ ಪೂರ್ವ ಪ್ರದೇಶ ಭಾಗವು ಪೂರ್ವದಿಕ್ಕಿನ ಪಟ್ಟಣದ ಅಂಚಿನಿಂದ ಪೂರ್ವದ ಗಡಿಯವರೆಗೂ ವಿಸ್ತರಿಸಿದೆ. ಭೂಪ್ರದೇಶದ ಈ ಭಾಗವು ಅಧಿಪತಿಗೆ ಸೇರಿದೆ. ಹೀಗೆ, ಹಿಂದಿನ ಕಾಲದ ಅಧಿಪತಿಗಳು ಮಾಡಿದಂತೆ ಈ ಅಧಿಪತಿಯು ಜನರನ್ನು ಹಿಂಸಿಸಿ ಅವರ ಭೂಮಿಯನ್ನು ಕಸಿದುಕೊಳ್ಳುವುದಿಲ್ಲ. ಉಳಿದ ಭೂಭಾಗವು ಇಸ್ರೇಲಿನ ಇತರ ಕುಲಗಳವರಿಗೆ ಯಾವಾಗಲೂ ಸೇರಿರುತ್ತದೆ.”

ಇದು ನನ್ನ ಒಡೆಯನಾದ ಯೆಹೋವನ ನುಡಿಗಳು: “ಇಸ್ರೇಲ್ ಜನರನ್ನು ಆಳುವವರೇ, ಅವರನ್ನು ಕಠಿಣವಾಗಿ ಆಳುವದನ್ನು ನಿಲ್ಲಿಸಿರಿ. ಅವರನ್ನು ಸುಲುಕೊಳ್ಳುವದನ್ನು ನಿಲ್ಲಿಸಿರಿ. ನ್ಯಾಯದಿಂದಿದ್ದು ಒಳ್ಳೆಯದನ್ನೆ ಮಾಡಿರಿ. ಅವರನ್ನು ಅವರ ಮನೆಗಳಿಂದ ಹೊರಡಿಸುವದನ್ನು ನಿಲ್ಲಿಸಿರಿ.” ಇದು ನನ್ನ ಒಡೆಯನಾದ ಯೆಹೋವನ ನುಡಿ.

10 “ಜನರನ್ನು ಮೋಸಪಡಿಸುವದನ್ನು ನಿಲ್ಲಿಸಿರಿ. ನ್ಯಾಯವಾದ ಅಳತೆಗಳನ್ನೂ ತ್ರಾಸುಗಳನ್ನೂ ಉಪಯೋಗಿಸಿರಿ. 11 ಏಫಾ ಮತ್ತು ಬತ್ ಇವೆರಡು ಒಂದೇ ಅಳತೆಯುಳ್ಳವುಗಳಾಗಿರಬೇಕು. ಬತ್ ಮತ್ತು ಏಫಾ ಇವೆರಡೂ ಹೋಮೆರಿನ ಹತ್ತನೇ ಒಂದು ಪಾಲು. ಆ ಅಳತೆಗಳು ಹೋಮೆರಿಗೆ ಹೊಂದಿಕೊಂಡಿರಬೇಕು. 12 ಒಂದು ಶೆಕೆಲ್ ಇಪ್ಪತ್ತು ಗೆರಾ ಇರಬೇಕು. ಒಂದು ಮಿನವು ಅರವತ್ತು ಶೆಕೆಲ್‌ನಷ್ಟು ಇರಬೇಕು. ಅದು ಇಪ್ಪತ್ತು ಶೆಕೆಲ್ ಮತ್ತು ಇಪ್ಪತ್ತೈದು ಶೆಕೆಲ್ ಮತ್ತು ಹದಿನೈದು ಶೆಕೆಲ್‌ಗಳಿಗೆ ಸಮಾನವಾಗಿರಬೇಕು.

13 “ನೀವು ಸಮರ್ಪಿಸಬೇಕಾದ ವಿಶೇಷ ಕಾಣಿಕೆಯಿದು:

ಒಂದು ಹೋಮೆರ್ ಗೋಧಿಗೆ 1/6 ಏಫಾ ಗೋಧಿ ಕೊಡಬೇಕು.

ಒಂದು ಹೋಮರ್ ಬಾರ್ಲಿಗೆ 1/6 ಏಫಾ ಬಾರ್ಲಿ ಕೊಡಬೇಕು;

14 ಒಂದು ಕೋರ್ ಆಲೀವ್ ಎಣ್ಣೆಗೆ 1/10 ಬತ್ ಆಲಿವ್ ಎಣ್ಣೆಯನ್ನು ಕೊಡಬೇಕು;

ಹತ್ತು ಬತ್ ಅಂದರೆ ಒಂದು ಹೋಮೆರ್, ಹತ್ತು ಬತ್ ಅಂದರೆ ಒಂದು ಕೋರ್ ಎಂಬುದನ್ನು ಜ್ಞಾಪಕದಲ್ಲಿಡಿರಿ.

15 ಇಸ್ರೇಲಿನ ನೀರಾವರಿಯ ಹುಲ್ಲುಗಾವಲಿನ ಇನ್ನೂರು ಕುರಿಗಳಲ್ಲಿ

ಒಂದು ಕುರಿಯನ್ನು ಕೊಡಬೇಕು.

“ಧಾನ್ಯನೈವೇದ್ಯಗಳಿಗೂ, ಸರ್ವಾಂಗಹೋಮಗಳಿಗೂ ಸಮಾಧಾನಯಜ್ಞಗಳಿಗೂ ಈ ಕಾಣಿಕೆಗಳನ್ನು ಕೊಡಬೇಕು. ಈ ಕಾಣಿಕೆಗಳು ಜನರನ್ನು ಶುದ್ಧಮಾಡುವವು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.

16 “ಇಸ್ರೇಲಿನಲ್ಲಿರುವ ಪ್ರತಿಯೊಬ್ಬನು ಈ ಕಾಣಿಕೆಯನ್ನು ಇಸ್ರೇಲಿನ ಅಧಿಪತಿಗೆ ಕೊಡಬೇಕು. 17 ಆದರೆ ವಿಶೇಷವಾದ ಹಬ್ಬದ ಆಚರಣೆಗಳಿಗಾಗಿ ಅಧಿಪತಿಯು ಕಾಣಿಕೆಗಳನ್ನು ಕೊಡಲೇಬೇಕು. ಅಧಿಪತಿಯು ಪಾಪಪರಿಹಾರಕಯಜ್ಞಗಳನ್ನೂ ಧಾನ್ಯಾರ್ಪಣೆಗಳನ್ನೂ ಪಾನದ್ರವ್ಯಾರ್ಪಣೆಗಳನ್ನೂ ಕೊಡಬೇಕು. ಈ ಕಾಣಿಕೆಗಳನ್ನು ಪ್ರತಿಯೊಂದು ಹಬ್ಬದ ದಿನದಲ್ಲಿಯೂ ಅಮಾವಾಸ್ಯೆಯಲ್ಲಿಯೂ ಸಬ್ಬತ್ ದಿನದಲ್ಲಿಯೂ ಇಸ್ರೇಲ್ ಜನಾಂಗದ ಎಲ್ಲಾ ವಿಶೇಷ ಹಬ್ಬಗಳಲ್ಲಿಯೂ ಅರ್ಪಿಸಬೇಕು. ಇಸ್ರೇಲ್ ಸಂತತಿಯ ಜನರನ್ನು ಶುದ್ಧೀಕರಿಸುವುದಕ್ಕಾಗಿ ಅಧಿಪತಿಯು ಈ ಕಾಣಿಕೆಗಳನ್ನು ಕೊಡಬೇಕು.”

18 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ: “ಮೊದಲನೇ ತಿಂಗಳಿನ ಮೊದಲನೇ ದಿವಸದಲ್ಲಿ ಪೂರ್ಣಾಂಗವಾದ ಒಂದು ಎಳೇ ಹೋರಿಯನ್ನು ತೆಗೆದುಕೊಂಡು ಅದನ್ನು ಆಲಯದ ಶುದ್ಧೀಕರಣಕ್ಕಾಗಿ ಉಪಯೋಗಿಸಬೇಕು. 19 ಪಾಪಪರಿಹಾರಕಯಜ್ಞಕ್ಕೆ ಬಲಿಯರ್ಪಿಸಿದ್ದ ಪ್ರಾಣಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಅದನ್ನು ಆಲಯದ ಬಾಗಿಲಿನ ನಿಲುವು ಕಂಬಗಳಿಗೂ, ಯಜ್ಞವೇದಿಕೆಯ ಸಜ್ಜದ ನಾಲ್ಕು ಮೂಲೆಗಳಿಗೂ ಮತ್ತು ಒಳಗಿನ ಪ್ರಾಕಾರದ ಪ್ರವೇಶ ದ್ವಾರದ ಎರಡು ನಿಲುವು ಕಂಬಗಳಿಗೂ ಹಚ್ಚಬೇಕು. 20 ಯಾರಾದರೂ ಆಕಸ್ಮಿಕವಾಗಿ ಅಥವಾ ತಿಳಿಯದೆ ಪಾಪಮಾಡಿದ್ದಲ್ಲಿ, ಹೀಗೆಯೇ ತಿಂಗಳಿನ ಏಳನೇ ದಿವಸದಲ್ಲಿಯೂ ಮಾಡಬೇಕು. ಈ ರೀತಿಯಾಗಿ ಆಲಯವನ್ನು ಶುದ್ಧೀಕರಿಸುವಿರಿ.

ಪಸ್ಕಹಬ್ಬದ ಸಮಯದಲ್ಲಿ ಕಾಣಿಕೆ ಸಮರ್ಪಣೆ

21 “ಮೊದಲನೇ ತಿಂಗಳಿನ ಹದಿನಾಲ್ಕನೇ ದಿವಸದಲ್ಲಿ ನೀವು ಪಸ್ಕಹಬ್ಬ ಆಚರಿಸಬೇಕು. ಹುಳಿ ಇಲ್ಲದ ರೊಟ್ಟಿಯ ಹಬ್ಬವು ಈ ಸಮಯದಲ್ಲಿ ಪ್ರಾರಂಭವಾಗುವದು. ಆ ಹಬ್ಬವು ಏಳು ದಿವಸಗಳ ತನಕ ನಡೆಯುವದು. 22 ಆ ಸಮಯದಲ್ಲಿ ಪ್ರಜೆಯನ್ನಾಳುವ ರಾಜನು ತನಗೋಸ್ಕರವಾಗಿಯೂ ಇಸ್ರೇಲಿನ ಎಲ್ಲಾ ಜನರಿಗೋಸ್ಕರವಾಗಿಯೂ ಒಂದು ಹೋರಿಯನ್ನು ಬಲಿಯರ್ಪಿಸಬೇಕು. ಅದು ಪಾಪಪರಿಹಾರಕಯಜ್ಞಕ್ಕಾಗಿ ಸಮರ್ಪಿಸಲ್ಪಡುವದು. 23 ಹಬ್ಬದ ಏಳು ದಿವಸಗಳಲ್ಲಿಯೂ ರಾಜನು ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಪಾಪಪರಿಹಾರಕಯಜ್ಞಕ್ಕಾಗಿ ಸಮರ್ಪಿಸಬೇಕು. 24 ರಾಜನು ಧಾನ್ಯಸಮರ್ಪಣೆಗಾಗಿ ಒಂದು ಏಫಾ ಜವೆಗೋಧಿಯನ್ನು ಹೋರಿಯೊಂದಿಗೂ ಒಂದು ಏಫಾ ಜವೆಗೋಧಿಯನ್ನು ಟಗರಿನೊಂದಿಗೂ ಕೊಡಬೇಕು. ಅದರೊಂದಿಗೆ ರಾಜನು ಪ್ರತೀ ಒಂದು ಏಫಾ ಜವೆಗೋಧಿಯೊಂದಿಗೆ ಒಂದು ಹಿನ್ ಎಣ್ಣೆಯನ್ನೂ ಕೊಡಬೇಕು. 25 ಪರ್ಣಶಾಲೆಗಳ ಹಬ್ಬದ ಏಳು ದಿವಸಗಳಲ್ಲೂ ರಾಜನು ಹಾಗೆಯೇ ಮಾಡಬೇಕು. ಈ ಹಬ್ಬವು ಏಳನೇ ತಿಂಗಳಿನ ಹದಿನೈದನೇ ದಿವಸದಲ್ಲಿ ಪ್ರಾರಂಭವಾಗುವದು. ಈ ಕಾಣಿಕೆಯು ಸರ್ವಾಂಗಹೋಮ, ಪಾಪಪರಿಹಾರಕಯಜ್ಞ, ಧಾನ್ಯಸಮರ್ಪಣೆ ಮತ್ತು ಎಣ್ಣೆಯ ಸಮರ್ಪಣೆಗಳಿಗಾಗಿ ಅವೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International