Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೆರೆಮೀಯ 49-50

ಅಮ್ಮೋನಿನ ಬಗ್ಗೆ ಸಂದೇಶ

49 ಈ ಸಂದೇಶ ಅಮ್ಮೋನ್ಯರನ್ನು ಕುರಿತದ್ದು. ಯೆಹೋವನು ಹೀಗೆ ಹೇಳಿದನು:

“ಅಮ್ಮೋನ್ಯರೇ, ಇಸ್ರೇಲಿನ ಜನರಿಗೆ ಮಕ್ಕಳಿಲ್ಲವೆಂದು
    ನೀವು ತಿಳಿದುಕೊಂಡಿರುವಿರೇನು?
ತಂದೆತಾಯಿಗಳು ಸತ್ತಮೇಲೆ ಭೂಮಿಯನ್ನು ತೆಗೆದುಕೊಳ್ಳುವದಕ್ಕೆ
    ಅವರ ವಾರಸುದಾರರು ಇಲ್ಲವೆಂದು ನೀವು ತಿಳಿದುಕೊಂಡಿರುವಿರೇನು?
ಅದಕ್ಕಾಗಿಯೇ ಮಲ್ಕಾಮ್ ದೇವತೆಯು ಗಾದನ ಸೀಮೆಯನ್ನು ಸ್ವಾಧೀನ ಮಾಡಿಕೊಂಡಳೇ?”

ಯೆಹೋವನು ಹೀಗೆನ್ನುತ್ತಾನೆ: “ಅಮ್ಮೋನಿನ ರಬ್ಬಾ ನಿವಾಸಿಗಳು
    ಯುದ್ಧದ ಧ್ವನಿಗಳನ್ನು ಕೇಳುವ ಕಾಲ ಬರಲಿದೆ.
ಅಮ್ಮೋನಿನ ರಬ್ಬಾ ನಾಶವಾಗಿ ಹಾಳಾದ ಕಟ್ಟಡಗಳ ಗುಡ್ಡವಾಗುವುದು.
    ಅದರ ಸುತ್ತಮುತ್ತಲಿನ ಪಟ್ಟಣಗಳನ್ನು ಸುಟ್ಟುಹಾಕಲಾಗುವುದು.
ಆ ಜನರು ಇಸ್ರೇಲರಿಗೆ ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಒತ್ತಾಯಿಸಿದರು.
    ಆದರೆ ಇಸ್ರೇಲರು ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಅವರನ್ನು ಒತ್ತಾಯಿಸುವರು.”
ಯೆಹೋವನು ಹೀಗೆನ್ನುತ್ತಾನೆ:

“ಹೆಷ್ಬೋನಿನ ಜನರೇ, ಗೋಳಾಡಿರಿ;
    ಏಕೆಂದರೆ ಆಯಿ ಎಂಬ ಪಟ್ಟಣ ನಾಶವಾಯಿತು.
ರಬ್ಬಾದ ಸ್ತ್ರೀಯರೇ, ಅಮ್ಮೋನಿನ ಸ್ತ್ರೀಯರೇ, ಗೋಳಾಡಿರಿ.
    ದುಃಖಸೂಚಕ ವಸ್ತ್ರಗಳನ್ನು ಧರಿಸಿಕೊಂಡು ಗೋಳಾಡಿರಿ.
ರಕ್ಷಣೆಗಾಗಿ ನಗರಕ್ಕೆ ಓಡಿಹೋಗಿರಿ.
    ಏಕೆಂದರೆ ನಿಮ್ಮ ಶತ್ರುಗಳು ಬರುತ್ತಿದ್ದಾರೆ.
ಅವರು ಮಲ್ಕಾಮ್ ದೇವತೆಯನ್ನು ತೆಗೆದುಕೊಂಡು ಹೋಗುತ್ತಾರೆ.
    ಶತ್ರುಗಳು ಮಲ್ಕಾಮ್ ದೇವತೆಯ ಯಾಜಕರನ್ನೂ ಪ್ರಧಾನರನ್ನೂ ತೆಗೆದುಕೊಂಡು ಹೋಗುವರು.
ನೀನು ನಿನ್ನ ಬಲದ ಬಗ್ಗೆ ಜಂಬ ಕೊಚ್ಚಿಕೊಳ್ಳುತ್ತಿರುವೆ,
    ಆದರೆ ನೀನು ನಿನ್ನ ಬಲವನ್ನು ಕಳೆದುಕೊಳ್ಳುತ್ತಿರುವೆ.
ನಿನ್ನ ಹಣ ನಿನ್ನನ್ನು ರಕ್ಷಿಸುವದೆಂದು ನೀನು ನಂಬಿರುವೆ.
    ಯಾರೂ ನಿನ್ನ ಮೇಲೆ ಧಾಳಿಮಾಡುವ ವಿಚಾರ ಸಹ ಇಟ್ಟುಕೊಂಡಿಲ್ಲವೆಂದು ನೀನು ತಿಳಿದುಕೊಂಡಿರುವೆ.”
ಆದರೆ ಸರ್ವಶಕ್ತನಾದ ಯೆಹೋವನು ಹೀಗೆನ್ನುವನು,
“ನಾನು ಎಲ್ಲೆಡೆಗಳಿಂದಲೂ ನಿಮಗೆ ಆಪತ್ತುಗಳನ್ನು ತರುವೆನು.
ನೀವೆಲ್ಲರೂ ಭಯದಿಂದ ಓಡಿಹೋಗುವಿರಿ.
    ಯಾರೂ ನಿಮ್ಮನ್ನು ಪುನಃ ಒಂದಡೆ ಸೇರಿಸಲಾರರು.”

“ಅಮ್ಮೋನ್ಯರನ್ನು ಸೆರೆಯಾಳುಗಳನ್ನಾಗಿ ಕೊಂಡೊಯ್ಯಲಾಗುವುದು. ಆದರೆ ಅಮ್ಮೋನ್ಯರನ್ನು ನಾನು ಪುನಃ ಹಿಂದಕ್ಕೆ ಕರೆತರುವ ಕಾಲ ಬರುವದು.” ಇದು ಯೆಹೋವನ ನುಡಿ.

ಎದೋಮಿನ ಬಗ್ಗೆ ಸಂದೇಶ

ಈ ಸಂದೇಶ ಎದೋಮನ್ನು ಕುರಿತದ್ದು. ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:

“ತೇಮಾನ್ ಪಟ್ಟಣನಿವಾಸಿಗಳಲ್ಲಿ ಈಗ ಬುದ್ಧಿ ಉಳಿದಿಲ್ಲವೇ?
    ಎದೋಮಿನ ವಿವೇಕಿಗಳು ಒಳ್ಳೆಯ ಸಲಹೆಗಳನ್ನು ಕೊಡಲು ಸಮರ್ಥರಾಗಿಲ್ಲವೇ?
    ಅವರು ತಮ್ಮ ಜ್ಞಾನವನ್ನು ಕಳೆದುಕೊಂಡರೇ?
ದೆದಾನಿನ ನಿವಾಸಿಗಳೇ, ಓಡಿಹೋಗಿರಿ, ಅಡಗಿಕೊಳ್ಳಿರಿ;
    ಏಕೆಂದರೆ ಏಸಾವನು[a] ಮಾಡಿದ ತಪ್ಪಿಗಾಗಿ ನಾನು ಅವನನ್ನು ದಂಡಿಸುವೆನು.

“ಕೆಲಸಗಾರರು ನಿಮ್ಮ ದ್ರಾಕ್ಷಿತೋಟಕ್ಕೆ ಬಂದು ದ್ರಾಕ್ಷಿಯನ್ನು ಕೀಳುವರು;
    ಆದರೆ ಬಳ್ಳಿಯಲ್ಲಿ ಕೆಲವು ದ್ರಾಕ್ಷಿಗಳನ್ನು ಬಿಡುವರು;
ರಾತ್ರಿಯಲ್ಲಿ ಕಳ್ಳರು ಬಂದರೆ
    ಅವರು ತಮಗೆ ಬೇಕಾದಷ್ಟನ್ನು ಮಾತ್ರ ತೆಗೆದುಕೊಳ್ಳುತ್ತಾರೆ.
10 ಆದರೆ ಏಸಾವನಿಂದ ನಾನು ಎಲ್ಲವನ್ನು ಕಿತ್ತುಕೊಳ್ಳುವೆನು.
    ಅವನು ಅಡಗಿಕೊಳ್ಳುವ ಎಲ್ಲಾ ಸ್ಥಳಗಳನ್ನು ನಾನು ಪತ್ತೆ ಹಚ್ಚುವೆನು.
ಅವನು ನನ್ನ ಕಣ್ಣು ತಪ್ಪಿಸಲು ಸಾಧ್ಯವಿಲ್ಲ.
    ಅವನ ಮಕ್ಕಳು, ಬಂಧುಗಳು ಮತ್ತು ನೆರೆಹೊರೆಯವರು ಸತ್ತುಹೋಗುವರು.
11 ನಿನ್ನ ಅನಾಥಮಕ್ಕಳನ್ನು ನಾನು ಸಂರಕ್ಷಿಸುವೆನು.
    ನಿನ್ನ ವಿಧವೆಯರು ನನ್ನಲ್ಲಿ ಭರವಸೆ ಇಡಲಿ.”

12 ಯೆಹೋವನು ಹೀಗೆನ್ನುತ್ತಾನೆ: “ಕೆಲವು ಜನರು ದಂಡನೆಗೆ ಅರ್ಹರಾಗಿರುವದಿಲ್ಲ. ಆದರೂ ಅವರು ಕಷ್ಟ ಅನುಭವಿಸುವರು. ಎದೋಮೇ, ನೀನು ದಂಡನೆಗೆ ಯೋಗ್ಯಳಾಗಿರುವೆ. ಆದ್ದರಿಂದ ನಿಜವಾಗಿಯೂ ನಿನ್ನನ್ನು ದಂಡಿಸಲಾಗುವುದು. ನಿನಗೆ ಸಿಗಬೇಕಾದ ದಂಡನೆಯಿಂದ ನೀನು ತಪ್ಪಿಸಿಕೊಳ್ಳಲಾರೆ. ನಿನ್ನನ್ನು ದಂಡಿಸಲಾಗುವುದು.” 13 ಯೆಹೋವನು ಹೀಗೆನ್ನುತ್ತಾನೆ, “ನನ್ನ ಸ್ವಸಾಮರ್ಥ್ಯದಿಂದ ನಾನು ಈ ಪ್ರಮಾಣ ಮಾಡುವೆನು. ನಾನು ಆಣೆಯಿಟ್ಟು ಹೇಳುವೆನು. ಬೊಚ್ರ ನಗರವನ್ನು ನಾಶಮಾಡಲಾಗುವುದು. ಆ ನಗರ ಒಂದು ಹಾಳು ದಿಬ್ಬವಾಗುವುದು. ಬೇರೆ ನಗರಗಳಿಗೆ ದುರ್ಗತಿ ಬರಲಿ ಎಂದು ಶಪಿಸುವಾಗ ಜನರು ‘ಬೊಚ್ರದಂತೆ ಹಾಳಾಗಲಿ’ ಎಂದು ಈ ನಗರದ ಉದಾಹರಣೆಯನ್ನು ಕೊಡುವರು. ಜನರು ಈ ನಗರವನ್ನು ಅವಮಾನ ಮಾಡುವರು. ಬೊಚ್ರ ನಗರದ ಸುತ್ತಮುತ್ತಲಿನ ಪಟ್ಟಣಗಳು ಶಾಶ್ವತವಾಗಿ ಹಾಳುಬೀಳುವವು.”

14 ಯೆಹೋವನ ಒಂದು ಸಂದೇಶವನ್ನು ಕೇಳಿದೆ.
    ಯೆಹೋವನು ಎಲ್ಲಾ ಜನಾಂಗಗಳಿಗೆ ಸಂದೇಶವಾಹಕರನ್ನು ಕಳುಹಿಸಿದ್ದನು.
ಆ ಸಂದೇಶ ಹೀಗಿದೆ:
“ನಿಮ್ಮ ಸೈನ್ಯಗಳನ್ನು ಒಂದಡೆ ಸೇರಿಸಿರಿ.
    ಯುದ್ಧಕ್ಕೆ ಸಿದ್ಧರಾಗಿರಿ.
    ಎದೋಮ್ ಜನಾಂಗದ ವಿರುದ್ಧ ದಂಡಯಾತ್ರೆ ಮಾಡಿರಿ.
15 ಎದೋಮೇ, ನಾನು ನಿನಗೆ ಪ್ರಮುಖನಾಗಲು ಬಿಡುವುದಿಲ್ಲ.
    ಪ್ರತಿಯೊಬ್ಬರು ನಿನ್ನನ್ನು ದ್ವೇಷಿಸುವರು.
16 ಎದೋಮೇ, ನೀನು ಬೇರೆ ಜನಾಂಗಗಳನ್ನು ಹೆದರಿಸಿದೆ.
    ಆದ್ದರಿಂದ ನೀನು ನಿನ್ನನ್ನೇ ಪ್ರಮುಖನೆಂದು ಭಾವಿಸಿಕೊಂಡೆ.
ಆದರೆ ಅದು ನಿನ್ನ ಮೂರ್ಖತನ.
    ನಿನ್ನ ಅಹಂಭಾವ ನಿನಗೆ ಮೋಸಮಾಡಿದೆ.
ಎದೋಮೇ, ನೀನು ಎತ್ತರದ ಬೆಟ್ಟಗಳಲ್ಲಿರುವೆ.
    ಬೆಟ್ಟಗುಡ್ಡಗಳಿಂದ ರಕ್ಷಿತವಾದ ಸ್ಥಳಗಳಲ್ಲಿ ನೀನು ವಾಸಿಸುವೆ.
ಆದರೆ ರಣಹದ್ದು ಗೂಡುಕಟ್ಟುವಷ್ಟು ಎತ್ತರದ ಸ್ಥಳದಲ್ಲಿ ನೀನು ಮನೆಕಟ್ಟಿದರೂ ನಾನು ನಿನ್ನನ್ನು ಹಿಡಿಯುತ್ತೇನೆ.
    ಅಲ್ಲಿಂದ ನಿನ್ನನ್ನು ಕೆಳಗೆ ತರುತ್ತೇನೆ.”
ಇದು ಯೆಹೋವನ ನುಡಿ.

17 “ಎದೋಮನ್ನು ನಾಶಮಾಡಲಾಗುವುದು.
    ಹಾಳಾದ ನಗರಗಳನ್ನು ಕಂಡು ಜನರು ಬೆರಗಾಗುವರು.
    ನಾಶವಾದ ನಗರಗಳನ್ನು ಕಂಡು ಜನರು ಆಶ್ಚರ್ಯಚಕಿತರಾಗಿ ಸಿಳ್ಳುಹಾಕುವರು.
18 ಸೊದೋಮ್ ಗೊಮೋರನಗರಗಳಂತೆಯೂ ಅವುಗಳ ಸುತ್ತಲಿನ ಪಟ್ಟಣಗಳಂತೆಯೂ ಎದೋಮ್ ನಾಶವಾಗುವುದು.
    ಅಲ್ಲಿ ಯಾರೂ ವಾಸಮಾಡಲಾರರು”
ಯೆಹೋವನು ಹೀಗೆನ್ನುತ್ತಾನೆ:

19 “ಜೋರ್ಡನ್ ನದಿಯ ಸಮೀಪದ ದಟ್ಟವಾದ ಕಾಡಿನಿಂದ ಫಕ್ಕನೆ ಒಂದು ಸಿಂಹ ಬರುವದು. ಅದು ಹೊಲಗಳಲ್ಲಿದ್ದ ಜನರ ದನಕುರಿಗಳ ಹಟ್ಟಿಗಳಿಗೆ ನುಗ್ಗುವುದು. ನಾನು ಆ ಸಿಂಹದಂತೆ ಇದ್ದೇನೆ. ನಾನು ಎದೋಮ್ ನಗರಕ್ಕೆ ಹೋಗಿ ಆ ಜನರನ್ನು ಹೆದರಿಸುವೆನು; ಅವರು ಓಡಿಹೋಗುವಂತೆ ಮಾಡುವೆನು. ಅವರ ತರುಣರಲ್ಲಿ ಯಾರೂ ನನ್ನನ್ನು ತಡೆಯಲಾರರು. ನನ್ನತೆ ಯಾರೂ ಇಲ್ಲ. ಯಾರೂ ನನ್ನನ್ನು ಪ್ರತಿಭಟಿಸುವದಿಲ್ಲ. ಅವರ ನಾಯಕರಲ್ಲಿ ಯಾರೂ ನನ್ನ ವಿರುದ್ಧ ನಿಲ್ಲುವದಿಲ್ಲ.”

20 ಎದೋಮ್ಯರಿಗೆ ಯೆಹೋವನು
    ಮಾಡಬೇಕೆಂದಿರುವುದನ್ನು ಕೇಳಿರಿ.
ತೇಮಾನ್ಯರ ಬಗ್ಗೆ ಯೆಹೋವನು
    ಏನು ನಿರ್ಧರಿಸಿದ್ದಾನೆಂಬುದನ್ನು ಕೇಳಿರಿ.
ಎದೋಮಿನ ಕುರಿಮರಿಗಳನ್ನು (ಜನರನ್ನು)
    ಶತ್ರು ಎಳೆದುಕೊಂಡು ಹೋಗುವನು.
ಸಂಭವಿಸಿದ ಸಂಗತಿಯನ್ನು ನೋಡಿ
    ಎದೋಮಿನ ಹುಲ್ಲುಗಾವಲುಗಳು ಬೆದರುವವು.
21 ಎದೋಮ್ಯರ ಪತನದ ಶಬ್ಧಕ್ಕೆ ಭೂಮಿಯು ನಡುಗುವುದು.
    ಅವರ ಗೋಳಾಟದ ಧ್ವನಿಯು ಕೆಂಪು ಸಮುದ್ರದವರೆಗೂ ಕೇಳಿಸುವುದು.

22 ಯೆಹೋವನು ತಾನು ಎರಗಬೇಕಾದ ಪ್ರಾಣಿಯ ಮೇಲೆ ಹಾರಾಡುವ ರಣಹದ್ದಿನಂತೆ ಇರುವನು.
    ಆತನು ಬೊಚ್ರ ನಗರದ ಮೇಲೆ ತನ್ನ ರೆಕ್ಕೆಗಳನ್ನು ಹರಡುವ ರಣಹದ್ದಿನಂತಿದ್ದಾನೆ.
ಆ ಸಮಯದಲ್ಲಿ ಎದೋಮಿನ ಸೈನಿಕರು ಭಯಪಡುವರು.
    ಪ್ರಸವವೇದನೆಪಡುವ ಹೆಂಗಸಿನಂತೆ ಅವರು ಭಯದಿಂದ ಗೋಳಾಡುವರು.

ದಮಸ್ಕದ ವಿಷಯವಾಗಿ ದೈವೋಕ್ತಿ

23 ಈ ಸಂದೇಶವು ದಮಸ್ಕ ನಗರದ ಕುರಿತಾಗಿದೆ:

“ಹಮಾತ್ ಮತ್ತು ಅರ್ಪಾದ್ ನಗರಗಳು ಹೆದರಿಕೊಂಡಿವೆ.
    ಅವು ಕೆಟ್ಟ ಸಮಾಚಾರವನ್ನು ಕೇಳಿದ್ದರಿಂದ ಹೆದರಿಕೊಂಡಿವೆ.
ಅವುಗಳು ನಿರಾಶೆಗೊಂಡಿವೆ.
    ಅವು ಆತಂಕಪಡುತ್ತಿವೆ ಮತ್ತು ಭಯಪಡುತ್ತಿವೆ.
24 ದಮಸ್ಕ ನಗರವು ನಿಬರ್ಲವಾಗಿದೆ.
    ಜನರು ಓಡಿಹೋಗಬಯಸುತ್ತಾರೆ,
    ಜನರು ಗಾಬರಿಗೊಂಡಿದ್ದಾರೆ.
ಪ್ರಸವವೇದನೆಪಡುವ ಸ್ತ್ರೀಯಂತೆ
    ಸಂಕಟಪಡುತ್ತಿದ್ದಾರೆ.

25 “ದಮಸ್ಕವು ಸಂತೋಷಭರಿತವಾದ ನಗರವಾಗಿದೆ.
    ಜನರು ಇನ್ನೂ ಆ ‘ಮೋಜಿನ ನಗರವನ್ನು’ ಬಿಟ್ಟಿಲ್ಲ.
26 ಆದ್ದರಿಂದ ತರುಣರು ನಗರದ ಚೌಕಗಳಲ್ಲಿ ಮರಣಹೊಂದುವರು.
    ಆ ಕಾಲದಲ್ಲಿ ದಮಸ್ಕದ ಎಲ್ಲಾ ಸೈನಿಕರು ಕೊಲ್ಲಲ್ಪಡುವರು.”
ಇದು ಸರ್ವಶಕ್ತನಾದ ಯೆಹೋವನ ನುಡಿ.
27 “ದಮಸ್ಕದ ಗೋಡೆಗಳಿಗೆ ನಾನು ಬೆಂಕಿ ಹಚ್ಚುವೆನು.
    ಆ ಬೆಂಕಿಯು ಬೆನ್‌ಹದದನ ಭದ್ರವಾದ ಕೋಟೆಯನ್ನು ಸುಟ್ಟುಹಾಕುವುದು.”

ಕೇದಾರ ಮತ್ತು ಹಾಚೋರಿನ ಬಗ್ಗೆ ಸಂದೇಶ

28 ಈ ಸಂದೇಶವು ಕೇದಾರ್ ಕುಲವನ್ನೂ ಹಾಚೋರಿನ ಅಧಿಪತಿಗಳನ್ನೂ ಕುರಿತದ್ದು. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಅವರನ್ನು ಸೋಲಿಸಿದನು. ಯೆಹೋವನು ಹೀಗೆನ್ನುತ್ತಾನೆ:

“ಹೋಗಿ ಕೇದಾರ ಕುಲದವರ ಮೇಲೆ ಧಾಳಿ ಮಾಡಿರಿ.
    ಪೂರ್ವದಿಕ್ಕಿನ ಜನರನ್ನು ನಾಶಮಾಡಿರಿ.
29 ಅವರ ಗುಡಾರಗಳನ್ನು ಮತ್ತು ಹಿಂಡುಗಳನ್ನು ತೆಗೆದುಕೊಂಡು ಹೋಗಲಾಗುವುದು.
    ಅವರ ಗುಡಾರಗಳನ್ನು, ಅವರ ಎಲ್ಲಾ ವಸ್ತುಗಳನ್ನು ಎತ್ತಿಕೊಂಡು ಹೋಗಲಾಗುವುದು.
    ಅವರ ಶತ್ರುಗಳು ಒಂಟೆಗಳನ್ನು ತೆಗೆದುಕೊಂಡು ಹೋಗುವರು.
‘ನಮ್ಮ ಸುತ್ತಲೂ ಭಯಂಕರ ಘಟನೆಗಳು ನಡೆಯುತ್ತಿವೆ’
    ಎಂದು ತಮ್ಮತಮ್ಮಲ್ಲಿಯೇ ಕೂಗಿಕೊಳ್ಳುವರು.
30 ಹಾಚೋರಿನ ನಿವಾಸಿಗಳೇ, ಬೇಗನೆ ಓಡಿಹೋಗಿರಿ,
    ಅಡಗಿಕೊಳ್ಳುವದಕ್ಕೆ ಒಂದು ಒಳ್ಳೆಯ ಸ್ಥಳವನ್ನು ಹುಡುಕಿಕೊಳ್ಳಿರಿ.”
ಇದು ಯೆಹೋವನ ಸಂದೇಶ.
“ನೆಬೂಕದ್ನೆಚ್ಚರನು ನಿಮ್ಮ ವಿರುದ್ಧ ಯೋಜನೆ ಮಾಡಿದ್ದಾನೆ.
    ನಿಮ್ಮನ್ನು ಸೋಲಿಸಲು ಒಳ್ಳೆಯ ಸಂಚನ್ನು ಮಾಡಿದ್ದಾನೆ.

31 “ಒಂದು ಜನಾಂಗವು ಯಾರೂ ತಮ್ಮನ್ನು ಸೋಲಿಸಲಾರರು ಎಂದು ನೆಮ್ಮದಿಯಿಂದಲೂ ಸಮಾಧಾನದಿಂದಲೂ ಇದೆ.
    ಅದು ತನ್ನ ರಕ್ಷಣೆಗಾಗಿ ಒಂದು ಕೋಟೆಯನ್ನಾಗಲಿ ಒಂದು ಬಾಗಿಲನ್ನಾಗಲಿ ಹೊಂದಿಲ್ಲ.
ಆ ಜನರು ಪ್ರತ್ಯೇಕವಾಗಿ ವಾಸವಾಗಿದ್ದಾರೆ.
    ಆ ಜನಾಂಗದ ಮೇಲೆ ಧಾಳಿ ಮಾಡಿರಿ.” ಎಂದು ಯೆಹೋವನು ಹೇಳಿದನು.
32 “ವೈರಿಯು ಅವರ ಒಂಟೆಗಳನ್ನು ಮತ್ತು
    ಅವರ ದನಗಳ ಮಂದೆಗಳನ್ನು ಅಪಹರಿಸುವನು.
    ವೈರಿಯು ಅವರ ದೊಡ್ಡದೊಡ್ಡ ಮಂದೆಗಳನ್ನು ಅಪಹರಿಸುವನು.
ತಮ್ಮ ಗಡ್ಡದ ಕೂದಲಿನ ಮೂಲೆಗಳನ್ನು[b] ಕತ್ತರಿಸಿಕೊಂಡ ಜನರನ್ನು ನಾನು ಭೂಮಂಡಲದ ಎಲ್ಲೆಡೆಗಳಲ್ಲಿ ಚದರಿಸುವೆನು.
    ಎಲ್ಲಾ ಕಡೆಯಿಂದಲೂ ಅವರ ಮೇಲೆ ವಿಪತ್ತುಗಳನ್ನು ಬರಮಾಡುವೆನು.”
ಇದು ಯೆಹೋವನ ನುಡಿ.
33 “ಹಾಚೋರ್ ಪ್ರದೇಶವು ಕಾಡುನಾಯಿಗಳ ನಿವಾಸಸ್ಥಾನವಾಗುವುದು.
    ಅದು ಶಾಶ್ವತವಾಗಿ ಒಂದು ಬರಿದಾದ ಮರುಭೂಮಿಯಾಗುವುದು.
ಅಲ್ಲಿ ಯಾರೂ ವಾಸಮಾಡಲಾರರು.
    ಆ ಸ್ಥಳದಲ್ಲಿ ಯಾವ ಮನುಷ್ಯನೂ ವಾಸಮಾಡುವದಿಲ್ಲ.”

ಏಲಾಮಿನ ಬಗ್ಗೆ ದೈವೋಕ್ತಿ

34 ಚಿದ್ಕೀಯನು ಯೆಹೂದದ ರಾಜನಾದ ಹೊಸದರಲ್ಲಿಯೇ ಪ್ರವಾದಿಯಾದ ಯೆರೆಮೀಯನು ಯೆಹೋವನಿಂದ ಒಂದು ಸಂದೇಶವನ್ನು ಪಡೆದನು. ಈ ಸಂದೇಶವು ಏಲಾಮ್ ಜನಾಂಗವನ್ನು ಕುರಿತದ್ದು.

35 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:
“ನಾನು ಅತಿ ಶೀಘ್ರದಲ್ಲಿ ಏಲಾಮಿನ ಬಿಲ್ಲನ್ನು ಮುರಿದುಹಾಕುವೆನು.
    ಏಲಾಮಿಗೆ ಬಿಲ್ಲು ಬಹು ಮುಖ್ಯವಾದ ಆಯುಧವಾಗಿದೆ.
36 ನಾನು ಏಲಾಮಿನ ಮೇಲೆ ನಾಲ್ಕು ಗಾಳಿಗಳನ್ನು
    ಆಕಾಶದ ನಾಲ್ಕು ಮೂಲೆಗಳಿಂದ ಬರಮಾಡುವೆನು.
ಆ ನಾಲ್ಕು ಗಾಳಿಗಳು ಬೀಸುವ ಎಲ್ಲಾ ಕಡೆಗಳಲ್ಲಿಯೂ
    ಏಲಾಮ್ಯರನ್ನು ಚದುರಿಸುವೆನು.
ಏಲಾಮಿನ ಸೆರೆಯಾಳುಗಳು ಪ್ರತಿಯೊಂದು ರಾಷ್ಟ್ರಗಳಲ್ಲಿಯೂ ಸಿಕ್ಕುವರು.
37 ಅವರ ಶತ್ರುಗಳ ಕಣ್ಣೆದುರಿನಲ್ಲಿಯೇ
    ನಾನು ಏಲಾಮನ್ನು ಚೂರುಚೂರು ಮಾಡುವೆನು.
ಏಲಾಮ್ಯರನ್ನು ಕೊಲ್ಲಬೇಕೆಂದಿರುವ ಜನರೆದುರಿಗೆ
    ನಾನು ಎಲಾಮ್ಯರನ್ನು ಮುರಿದುಬಿಡುವೆನು.
ನಾನು ಅವರ ಮೇಲೆ ಭಯಂಕರವಾದ ವಿಪತ್ತುಗಳನ್ನು ತರುವೆನು.
    ನನಗೆ ಎಷ್ಟು ಕೋಪ ಬಂದಿದೆ ಎಂಬುದನ್ನು ನಾನು ಅವರಿಗೆ ತೋರಿಸುವೆನು.”
ಇದು ಯೆಹೋವನ ನುಡಿ.
“ಏಲಾಮನ್ನು ಬೆನ್ನಟ್ಟಲು ನಾನೊಂದು ಖಡ್ಗವನ್ನು ಕಳುಹಿಸುವೆನು.
    ನಾನು ಏಲಾಮ್ಯರನ್ನೆಲ್ಲ ಕೊಂದುಹಾಕುವವರೆಗೆ ಆ ಖಡ್ಗವು ಅವರನ್ನು ಬೆನ್ನಟ್ಟುವುದು.
38 ಏಲಾಮಿನ ಅಧಿಪತ್ಯ ನನಗೆ ಸೇರಿದ್ದು ಎಂಬುದನ್ನು ನಾನು ಏಲಾಮ್ಯರಿಗೆ ತೋರಿಸಿಕೊಡುವೆನು.
    ನಾನು ಅಲ್ಲಿಯ ರಾಜನನ್ನು ಮತ್ತು ರಾಜನ ಅಧಿಕಾರಿಗಳನ್ನು ನಾಶಮಾಡುವೆನು.”
ಇದು ಯೆಹೋವನ ನುಡಿ.
39 “ಆದರೆ ಭವಿಷ್ಯದಲ್ಲಿ ನಾನು ಏಲಾಮಿಗೆ ಒಳ್ಳೆಯದನ್ನು ಮಾಡುವೆನು.”
ಇದು ಯೆಹೋವನ ನುಡಿ.

ಬಾಬಿಲೋನಿನ ಬಗ್ಗೆ ದೈವೋಕ್ತಿ

50 ಬಾಬಿಲೋನ್ ಮತ್ತು ಬಾಬಿಲೋನಿನ ಜನರ ಬಗ್ಗೆ ಯೆಹೋವನ ಸಂದೇಶವಿದು. ಈ ಸಂದೇಶವನ್ನು ಯೆಹೋವನು ಯೆರೆಮೀಯನ ಮುಖಾಂತರ ಕೊಟ್ಟನು.

“ಎಲ್ಲಾ ಜನಾಂಗಗಳಲ್ಲಿ ಪ್ರಚಾರಪಡಿಸಿರಿ,
    ಒಂದು ಧ್ವಜವನ್ನು ಹಾರಿಸಿ ಈ ಸಂದೇಶವನ್ನೆಲ್ಲಾ ಸಾರಿರಿ.
‘ಬಾಬಿಲೋನ್ ಜನಾಂಗವನ್ನು ವಶಪಡಿಸಿಕೊಳ್ಳಲಾಗುವುದು.
    ಬೇಲ್ ದೇವತೆ ನಾಚಿಕೆಪಡುವುದು.
    ಮೆರೋದಾಕ್ ದೇವತೆಯು ಭಯಪಡುವುದು.
ಬಾಬಿಲೋನಿನ ವಿಗ್ರಹಗಳು ನಾಚಿಕೆಪಡುವವು.
    ಅಲ್ಲಿಯ ದೇವತೆಗಳು ಹೆದರಿಕೊಳ್ಳುವವು.’
ಉತ್ತರದ ಒಂದು ಜನಾಂಗವು ಬಾಬಿಲೋನಿನ ಮೇಲೆ ಧಾಳಿ ಮಾಡುವುದು.
    ಆ ಜನಾಂಗವು ಬಾಬಿಲೋನನ್ನು ಒಂದು ಬರಿದಾದ ಮರುಭೂಮಿಯನ್ನಾಗಿ ಮಾಡುವದು.
ಅಲ್ಲಿ ಯಾರೂ ವಾಸಮಾಡಲಾರರು.
    ಪ್ರಾಣಿಗಳು ಮತ್ತು ಮನುಷ್ಯರು ಅಲ್ಲಿಂದ ಪಲಾಯನ ಮಾಡುವರು.”
ಯೆಹೋವನು ಹೀಗೆನ್ನುತ್ತಾನೆ: “ಆ ಸಮಯದಲ್ಲಿ
    ಇಸ್ರೇಲಿನ ಮತ್ತು ಯೆಹೂದದ ಜನರು ಒಟ್ಟಿಗೆ ಸೇರುವರು.
ಅವರು ಒಟ್ಟುಗೂಡಿ ಬಹಳವಾಗಿ ಗೋಳಾಡುವರು;
    ತಮ್ಮ ದೇವರಾದ ಯೆಹೋವನನ್ನು ಹುಡುಕಲು ಹೋಗುವರು.
ಅವರು ಚೀಯೋನಿಗೆ ಹೋಗುವ ಮಾರ್ಗವನ್ನು ವಿಚಾರಿಸುವರು.
    ಆ ದಿಕ್ಕಿನಲ್ಲಿ ಹೋಗಲು ಪ್ರಾರಂಭಿಸುವರು.
‘ಬನ್ನಿ, ನಾವೆಲ್ಲರೂ ಯೆಹೋವನ ಆಶ್ರಯಪಡೆಯೋಣ.
    ಆತನೊಂದಿಗೆ ಶಾಶ್ವತವಾದ ಮತ್ತು ನಾವೆಂದೂ ಮರೆಯಲಾಗದ
    ಒಡಂಬಡಿಕೆಯನ್ನು ಮಾಡಿಕೊಳ್ಳೋಣ’ ಎಂದು ಅವರು ಹೇಳುವರು.

“ನನ್ನ ಜನರು ತಪ್ಪಿಸಿಕೊಂಡ ಕುರಿಗಳಂತಿದ್ದಾರೆ.
    ಅವರ ಕುರುಬರು ಅವರನ್ನು ತಪ್ಪು ದಾರಿಗೆ ಎಳೆದಿದ್ದಾರೆ.
ಅವರ ನಾಯಕರುಗಳು ಅವರನ್ನು ಬೆಟ್ಟಗಳಲ್ಲಿ ಅಲೆಯುವಂತೆ ಮಾಡಿದ್ದಾರೆ.
    ಅವರ ವಿಶ್ರಾಂತಿಸ್ಥಾನವನ್ನು ಅವರು ಮರೆತುಬಿಟ್ಟಿದ್ದಾರೆ.
ನನ್ನ ಜನರನ್ನು ಕಂಡವರೆಲ್ಲ ಅವರನ್ನು ನೋಯಿಸಿದ್ದಾರೆ.
    ಆ ಶತ್ರುಗಳು,
‘ನಾವು ಮಾಡಿದ್ದು ತಪ್ಪಲ್ಲ.
    ಅವರು ಯೆಹೋವನ ವಿರುದ್ಧ ಪಾಪ ಮಾಡಿದ್ದಾರೆ.
ಯೆಹೋವನು ಅವರ ನಿಜವಾದ ನಿವಾಸವಾಗಿದ್ದನು.
    ಯೆಹೋವನು ಅವರ ಪೂರ್ವಿಕರು ನಂಬಿದ್ದ ದೇವರಾಗಿದ್ದನು’ ಎಂದರು.

“ಬಾಬಿಲೋನಿನಿಂದ ಓಡಿಹೋಗಿರಿ.
    ಬಾಬಿಲೋನಿನ ಪ್ರದೇಶವನ್ನು ಬಿಟ್ಟುಬಿಡಿ.
    ಕುರಿಮಂದೆಯ ಮುಂದೆ ಹೋಗುವ ಹೋತದಂತೆ ಹೋಗಿರಿ.
ಉತ್ತರ ದಿಕ್ಕಿನ ಹಲವು ಜನಾಂಗಗಳನ್ನು ನಾನು ಒಟ್ಟುಗೂಡಿಸಿ ತರುವೆನು.
ಆ ಜನಾಂಗಗಳ ಸಮುದಾಯವು ಬಾಬಿಲೋನಿನ ವಿರುದ್ಧ ಯುದ್ಧಕ್ಕೆ ಸಿದ್ಧವಾಗುತ್ತದೆ.
ಬಾಬಿಲೋನ್ ಅವರಿಗೆ ವಶವಾಗುವುದು.
ಆ ಜನಾಂಗಗಳ ಜನರು ಬಾಬಿಲೋನಿನ ಮೇಲೆ ಹಲವು ಬಾಣಗಳನ್ನು ಪ್ರಯೋಗ ಮಾಡುವರು.
    ಆ ಬಾಣಗಳೆಲ್ಲ ಬರಿಗೈಯಲ್ಲಿ ಯುದ್ಧದಿಂದ ಹಿಂದಿರುಗದ ಶೂರ ಸೈನಿಕರಂತಿರುವವು.
10 ಕಸ್ದೀಯ ಸಂಪತ್ತನ್ನೆಲ್ಲ ಶತ್ರು ಕೊಳ್ಳೆಹೊಡೆಯುವನು.
    ಶತ್ರು ಸೈನಿಕರು ತಮಗೆ ಬೇಕಾದದ್ದೆಲ್ಲವನ್ನು ತೆಗೆದುಕೊಳ್ಳುವರು”
ಇದು ಯೆಹೋವನ ನುಡಿ.

11 “ಬಾಬಿಲೋನೇ, ನೀನು ಉಲ್ಲಾಸದಲ್ಲಿರುವೆ ಮತ್ತು ಸಂತೋಷದಲ್ಲಿರುವೆ.
    ನೀನು ನನ್ನ ಪ್ರದೇಶವನ್ನು ತೆಗೆದುಕೊಂಡೆ.
ನೀನು ಕಣತುಳಿಯುವ ಕಡಸಿನ ಹಾಗೆ ಕುಣಿದಾಡುತ್ತಿರುವೆ.
    ನಿನ್ನ ನಗು ಕುದುರೆಗಳ ಸಂತೋಷಭರಿತ ಕೆನೆತದಂತೆ ಇದೆ.
12 ಈಗ ನಿನ್ನ ತಾಯಿಯು ಬಹಳ ನಾಚಿಕೆಪಡುವಳು.
    ನಿನಗೆ ಜನ್ಮಕೊಟ್ಟ ಆ ಸ್ತ್ರೀಯು ಅಪಮಾನ ಹೊಂದುವಳು.
ಎಲ್ಲಾ ಜನಾಂಗಗಳಲ್ಲಿ ಬಾಬಿಲೋನ್ ಕನಿಷ್ಟವೆನಿಸುವುದು.
    ಅದು ಬರಿದಾದ ಮರುಭೂಮಿಯಂತಾಗುವುದು.
13 ದೇವರು ಅವಳ ಮೇಲೆ ತನ್ನ ಕೋಪವನ್ನು ಪ್ರಕಟಿಸುವನು
    ಆದ್ದರಿಂದ ಅಲ್ಲಿ ಯಾರೂ ವಾಸಮಾಡಲಾರರು.
    ಬಾಬಿಲೋನ್ ನಗರವು ಸಂಪೂರ್ಣವಾಗಿ ನಿರ್ಜನವಾಗುವುದು.
ಬಾಬಿಲೋನಿನಿಂದ ಹಾದುಹೋಗುವವರೆಲ್ಲ ಭಯಪಡುವರು.
    ಅದಕ್ಕೆ ಉಂಟಾದ ದುರ್ಗತಿಯನ್ನು ನೋಡಿ ಅವರು ತಮ್ಮ ತಲೆಯಾಡಿಸುವರು.

14 “ಬಾಬಿಲೋನಿನ ವಿರುದ್ಧ ಯುದ್ಧಕ್ಕೆ ಸಿದ್ಧತೆಗಳನ್ನು ಮಾಡಿರಿ.
    ಬಿಲ್ಲುಗಾರರೇ, ಬಾಬಿಲೋನಿನ ಮೇಲೆ ಬಾಣ ಪ್ರಯೋಗ ಮಾಡಿರಿ.
    ನಿಮ್ಮ ಬಾಣಗಳಲ್ಲಿ ಒಂದನ್ನೂ ಉಳಿಸಿಕೊಳ್ಳಬೇಡಿರಿ.
ಅದು ಯೆಹೋವನ ವಿರುದ್ಧವಾಗಿ ಪಾಪ ಮಾಡಿದೆ.
15 ಬಾಬಿಲೋನಿನ ಸುತ್ತಲೂ ಇರುವ ಸೈನಿಕರೇ,
    ಜಯಘೋಷಮಾಡಿರಿ.
ಈಗ ಬಾಬಿಲೋನ್ ಶರಣಾಗತವಾಗಿದೆ.
    ಅದರ ಪೌಳಿಗೋಡೆಗಳನ್ನು ಮತ್ತು ಕೊತ್ತಲಗಳನ್ನು ಬೀಳಿಸಲಾಗಿದೆ.
ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಿದ್ದಾನೆ.
    ಎಲ್ಲಾ ಜನಾಂಗಗಳವರು ಬಾಬಿಲೋನಿಗೆ ತಕ್ಕ ಶಿಕ್ಷೆಯನ್ನು ಕೊಡಬೇಕು.
16 ಬಾಬಿಲೋನಿನ ಜನರಿಗೆ ಬೀಜಗಳನ್ನು ಬಿತ್ತಲು ಬಿಡಬೇಡಿ.
    ಸುಗ್ಗಿ ಮಾಡಲು ಅವರಿಗೆ ಬಿಡಬೇಡಿ.
ಬಾಬಿಲೋನಿನ ಸೈನಿಕರು ಹಲವಾರು ಸೆರೆಯಾಳುಗಳನ್ನು ಹಿಡಿದುತಂದಿದ್ದಾರೆ.
ಈಗ ಶತ್ರು ಸೈನಿಕರು ಬಂದುದರಿಂದ
    ಆ ಸೆರೆಯಾಳುಗಳು ತಮ್ಮ ಪ್ರದೇಶಗಳಿಗೆ ಹಿಂತಿರುಗುತ್ತಿದ್ದಾರೆ,
ಆ ಸೆರೆಯಾಳುಗಳು ತಮ್ಮ ದೇಶಗಳಿಗೆ ಓಡುತ್ತಿದ್ದಾರೆ.

17 “ಇಸ್ರೇಲು ದೇಶಗಳಲ್ಲೆಲ್ಲಾ
    ಚದರಿಹೋದ ಕುರಿಹಿಂಡಿನಂತಾಗಿದೆ.
ಸಿಂಹಗಳಿಗೆ ಹೆದರಿ ಓಡಿಹೋದ
    ಕುರಿಗಳಂತಾಗಿದೆ ಇಸ್ರೇಲು.
ಅದನ್ನು ತಿಂದು ಮುಗಿಸಿದ ಮೊದಲನೆ ಸಿಂಹವೆಂದರೆ
    ಅಶ್ಶೂರದ ರಾಜನು.
ಅದರ ಎಲುಬುಗಳನ್ನು ಜಗಿದ ಕೊನೆಯ ಸಿಂಹವೆಂದರೆ
    ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು.
18 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆಂದನು:
‘ನಾನು ಬಾಬಿಲೋನಿನ ರಾಜನನ್ನು ಮತ್ತು ಅವನ ದೇಶವನ್ನು ಬಹುಬೇಗ ದಂಡಿಸುವೆನು.
    ಅಶ್ಶೂರದ ರಾಜನನ್ನು ದಂಡಿಸಿದಂತೆ ನಾನು ಅವನನ್ನು ದಂಡಿಸುವೆನು.

19 “‘ಆದರೆ ಇಸ್ರೇಲನ್ನು ಪುನಃ ಅದರ ಹುಲ್ಲುಗಾವಲಿಗೆ ತರುವೆನು.
    ಅದು ಕರ್ಮೆಲ್ ಬೆಟ್ಟದ ಮೇಲೆ ಮತ್ತು ಬಾಷಾನಿನ ಪ್ರದೇಶದಲ್ಲಿ ಮೇಯುವದು.
    ಅದು ತಿಂದು ತೇಗುವದು.
    ಅದು ಎಫ್ರಾಯೀಮಿನ ಮತ್ತು ಗಿಲ್ಯಾದಿನ ಬೆಟ್ಟಗಳಲ್ಲಿ ತಿಂದು ತೃಪ್ತಿಪಡುವದು.’”
20 ಇದು ಯೆಹೋವನ ನುಡಿ. “ಆ ಸಮಯದಲ್ಲಿ ಜನರು ಇಸ್ರೇಲಿನ ದೋಷವನ್ನು ಕಂಡುಹಿಡಿಯಲು ಪ್ರಯತ್ನಿಸುವರು.
    ಆದರೆ ಯಾವ ದೋಷಗಳೂ ಇರುವದಿಲ್ಲ.
ಜನರು ಯೆಹೂದದ ಪಾಪಗಳನ್ನು ಹುಡುಕುವ ಪ್ರಯತ್ನ ಮಾಡುವರು.
    ಆದರೆ ಯಾವ ಪಾಪಗಳೂ ಸಿಕ್ಕುವದಿಲ್ಲ.
ಏಕೆಂದರೆ ಇಸ್ರೇಲಿನ ಮತ್ತು ಯೆಹೂದದ ಜನರಲ್ಲಿ ಅಳಿದುಳಿದ ಕೆಲವು ಜನರನ್ನು ನಾನು ರಕ್ಷಿಸುತ್ತೇನೆ.
ಅವರ ಪಾಪಗಳನ್ನೆಲ್ಲ ಕ್ಷಮಿಸಿದ್ದೇನೆ.”

21 ಯೆಹೋವನು ಹೀಗೆನ್ನುತ್ತಾನೆ: “ಮೆರಾಥಯಿಮ್ ದೇಶದ ಮೇಲೆ ಧಾಳಿ ಮಾಡಿರಿ.
    ಪೆಕೋದ ಪ್ರದೇಶದಲ್ಲಿ ವಾಸಮಾಡುವ ಜನಗಳ ಮೇಲೆ ಧಾಳಿ ಮಾಡಿರಿ.
    ಅವರ ಮೇಲೆ ಧಾಳಿ ಮಾಡಿ ಅವರನ್ನು ಕೊಂದು ಸಂಪೂರ್ಣವಾಗಿ ನಾಶಮಾಡಿರಿ.
    ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡಿರಿ.

22 “ಯುದ್ಧದ ಆರ್ಭಟವು ದೇಶದಲ್ಲೆಲ್ಲ ಕೇಳಿಬರುತ್ತಿದೆ.
    ಅದು ಮಹಾವಿನಾಶದ ಧ್ವನಿಯಾಗಿದೆ.
23 ಬಾಬಿಲೋನು ಇಡೀ ಭೂಮಂಡಲಕ್ಕೆ
    ‘ಸುತ್ತಿಗೆ’ಯಂತಿದೆ.
ಆದರೆ ಈಗ ಆ ‘ಸುತ್ತಿಗೆ’ಯು ಮುರಿದು ಚೂರುಚೂರಾಗಿದೆ.
    ಬಾಬಿಲೋನ್ ನಿಜವಾಗಿಯೂ ಎಲ್ಲಕ್ಕಿಂತಲೂ ಹೆಚ್ಚು ಹಾಳಾದ ಜನಾಂಗವಾಗಿದೆ.
24 ಬಾಬಿಲೋನೇ, ನಾನು ನಿನಗಾಗಿ ಒಂದು ಬಲೆಯನ್ನು ಒಡ್ಡಿದೆ.
    ನೀನು ತಿಳಿಯದೆ ಸಿಕ್ಕಿಹಾಕಿಕೊಂಡೆ.
ನೀನು ಯೆಹೋವನ ವಿರುದ್ಧ ಹೋರಾಡಿದೆ.
    ಆದ್ದರಿಂದ ನಿನ್ನನ್ನು ಹುಡುಕಿ ವಶಪಡಿಸಿಕೊಳ್ಳಲಾಯಿತು.
25 ಯೆಹೋವನು ತನ್ನ ಆಯುಧಶಾಲೆಯನ್ನು ತೆರೆದಿದ್ದಾನೆ.
    ಆತನು ತನ್ನ ಆಯುಧಶಾಲೆಯಿಂದ ತನ್ನ ರೋಷದ ಶಸ್ತ್ರಾಸ್ತ್ರಗಳನ್ನು ಹೊರತೆಗೆದಿದ್ದಾನೆ.
ತಾನು ಮಾಡಬೇಕಾದ ಕಾರ್ಯಕ್ಕಾಗಿ ಸರ್ವಶಕ್ತನಾದ ಆತನು ಆ ಶಸ್ತ್ರಾಸ್ತ್ರಗಳನ್ನು ಹೊರಗೆ ತೆಗೆದಿದ್ದಾನೆ.
    ಕಸ್ದೀಯರ ದೇಶದಲ್ಲಿ ಆತನು ಮಾಡಬೇಕಾದ ಕಾರ್ಯವೊಂದಿದೆ.

26 “ಅತಿ ದೂರದಿಂದ ಬಾಬಿಲೋನಿನ ಮೇಲೆ ಬೀಳಲು ಬನ್ನಿ.
    ಅದರ ಧಾನ್ಯದ ಕಣಜಗಳನ್ನು ತೆರೆಯಿರಿ.
ಬಾಬಿಲೋನನ್ನು ಸಂಪೂರ್ಣವಾಗಿ ನಾಶಮಾಡಿರಿ;
    ಯಾರನ್ನೂ ಜೀವಂತ ಉಳಿಸಬೇಡಿ.
ಧಾನ್ಯಗಳ ಗುಡ್ಡೆಗಳ ಹಾಗೆ ಶವಗಳ ದೊಡ್ಡದೊಡ್ಡ ಗುಡ್ಡೆಗಳನ್ನು ಹಾಕಿರಿ.
27 ಬಾಬಿಲೋನಿನ ಎಲ್ಲಾ ತರುಣರನ್ನು ಕೊಂದುಹಾಕಿರಿ.
    ಅವರನ್ನು ಕತ್ತರಿಸಿಬಿಡಿ.
ಅವರನ್ನು ಸೋಲಿಸುವ ಸಮಯ ಬಂದಿದೆ. ಇದು ಅವರಿಗೆ ಕೇಡಿನ ಕಾಲ.
    ಇದು ಅವರನ್ನು ದಂಡಿಸುವ ಸಮಯ.
28 ಬಾಬಿಲೋನಿನ ಜನರು ಓಡಿಹೋಗುತ್ತಿದ್ದಾರೆ.
    ಅವರು ಆ ದೇಶದಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಾರೆ.
ಆ ಜನರು ಚೀಯೋನಿಗೆ ಬಂದು ಬಾಬಿಲೋನಿನಲ್ಲಿ ಯೆಹೋವನು ಮಾಡುತ್ತಿದ್ದ ವಿನಾಶದ ಬಗ್ಗೆ ಎಲ್ಲರಿಗೂ ಹೇಳುತ್ತಿದ್ದಾರೆ.
    ಯೆಹೋವನು ಬಾಬಿಲೋನಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಿರುವದರ ಬಗ್ಗೆ ಹೇಳುತ್ತಿದ್ದಾರೆ.
ಬಾಬಿಲೋನ್ ಯೆಹೋವನ ಆಲಯವನ್ನು ನಾಶಮಾಡಿತು.
    ಆದ್ದರಿಂದ ಈಗ ಯೆಹೋವನು ಬಾಬಿಲೋನನ್ನು ನಾಶಮಾಡುತ್ತಿದ್ದಾನೆ ಎಂದು ಹೇಳುತ್ತಿದ್ದಾರೆ.

29 “ಬಾಬಿಲೋನಿನ ಮೇಲೆ ಬಾಣ ಪ್ರಯೋಗ ಮಾಡಲು
    ಬಿಲ್ಲುಗಾರರಿಗೆ ಹೇಳಿರಿ.
ಆ ಜನರಿಗೆ ನಗರವನ್ನು ಮುತ್ತಲು ಹೇಳಿರಿ.
    ಯಾರೂ ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಿ.
ಅದು ಮಾಡಿದ ದುಷ್ಕೃತ್ಯಗಳಿಗಾಗಿ ಮುಯ್ಯಿತೀರಿಸಿರಿ.
    ಬೇರೆ ಜನಾಂಗಗಳಿಗೆ ಅದು ಮಾಡಿದಂತೆ ಅದಕ್ಕೆ ಮಾಡಿರಿ.
ಬಾಬಿಲೋನ್ ಯೆಹೋವನನ್ನು ಗೌರವಿಸಲಿಲ್ಲ.
    ಪರಿಶುದ್ಧನಿಗೆ ಅವಮಾನ ಮಾಡಿದೆ.
    ಆದ್ದರಿಂದ ಬಾಬಿಲೋನನ್ನು ಶಿಕ್ಷಿಸಬೇಕು.
30 ಬಾಬಿಲೋನಿನ ತರುಣರನ್ನು ಬೀದಿಗಳಲ್ಲಿ ಕೊಲ್ಲಲಾಗುವುದು.
    ಅದರ ಎಲ್ಲಾ ಸೈನಿಕರು ಅಂದು ಸಾಯುವರು.”
ಯೆಹೋವನು ಹೀಗೆನ್ನುತ್ತಾನೆ:

31 “ಬಾಬಿಲೋನೇ, ನೀನು ತುಂಬಾ ದುರಹಂಕಾರಿ.
    ನಾನು ನಿನಗೆ ವಿರುದ್ಧವಾಗಿದ್ದೇನೆ.”
    ನಮ್ಮ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆನ್ನುತ್ತಾನೆ.
“ನಾನು ನಿನಗೆ ವಿರುದ್ಧವಾಗಿದ್ದೇನೆ.
    ನಿನ್ನನ್ನು ದಂಡಿಸುವ ಸಮಯ ಬಂದಿದೆ.
32 ದುರಹಂಕಾರಿಯಾದ ಬಾಬಿಲೋನ್ ಎಡವಿಬೀಳುವುದು.
    ಅದನ್ನು ಎಬ್ಬಿಸಲು ಯಾರೂ ಸಹಾಯ ಮಾಡುವದಿಲ್ಲ.
ಅದರ ಪಟ್ಟಣಗಳಲ್ಲಿ ಬೆಂಕಿಯನ್ನು ಹೊತ್ತಿಸುವೆನು.
    ಆ ಬೆಂಕಿಯು ಅದರ ಸುತ್ತಮುತ್ತಲಿನ ಎಲ್ಲರನ್ನೂ ಸುಟ್ಟುಬಿಡುವದು.”

33 ಸರ್ವಶಕ್ತನಾದ ಯೆಹೋವನು ಹೀಗೆನ್ನುವನು:
    “ಇಸ್ರೇಲಿನ ಮತ್ತು ಯೆಹೂದದ ಜನರು ಗುಲಾಮರಾಗಿದ್ದಾರೆ.
ವೈರಿಯು ಅವರನ್ನು ಹಿಡಿದುಕೊಂಡಿದ್ದಾನೆ.
    ಆ ವೈರಿಯು ಇಸ್ರೇಲರನ್ನು ಹೋಗಬಿಡುವದಿಲ್ಲ.
34 ಆದರೆ ದೇವರು ಅವರನ್ನು ಹಿಂದಕ್ಕೆ ಕರೆತರುವನು.
    ಆತನ ಹೆಸರು ಸರ್ವಶಕ್ತನಾದ ಯೆಹೋವನು.
ಆತನು ಆ ಜನರನ್ನು ನಿಶ್ಚಯವಾಗಿ ಕಾಪಾಡುವನು.
    ಭೂಮಿಗೆ ವಿಶ್ರಾಂತಿಯನ್ನು ಕೊಡುವ ಉದ್ದೇಶದಿಂದ ಆತನು ಅವರನ್ನು ಕಾಪಾಡುವನು.
    ಆದರೆ ಬಾಬಿಲೋನಿನಲ್ಲಿ ವಾಸಿಸುವ ಜನರಿಗೆ ಆತನು ವಿಶ್ರಾಂತಿಯನ್ನು ಕೊಡುವದಿಲ್ಲ.”

35 ಯೆಹೋವನು ಹೀಗೆನ್ನುತ್ತಾನೆ:
“ಖಡ್ಗವೇ, ಬಾಬಿಲೋನಿನಲ್ಲಿ ವಾಸಮಾಡುತ್ತಿರುವ ಜನರನ್ನು ನಾಶಮಾಡು!
    ಖಡ್ಗವೇ, ಬಾಬಿಲೋನಿನ ಸಾಮಾನ್ಯ ಜನರನ್ನು,
    ಅಧಿಕಾರಿಗಳನ್ನು ಮತ್ತು ಪಂಡಿತರನ್ನು ಕೊಂದುಹಾಕು!
36 ಖಡ್ಗವೇ, ಬಾಬಿಲೋನಿನ ಯಾಜಕರನ್ನೂ ಸುಳ್ಳುಪ್ರವಾದಿಗಳನ್ನೂ ಕೊಲ್ಲು!
    ಅವರು ಮೂರ್ಖರಂತಾಗುವರು.
ಖಡ್ಗವೇ, ಬಾಬಿಲೋನಿನ ಸೈನಿಕರನ್ನು ಕೊಲ್ಲು,
    ಆ ಸೈನಿಕರು ಭಯಭೀತರಾಗಿರುವರು.
37 ಖಡ್ಗವೇ, ಬಾಬಿಲೋನಿನ ಕುದುರೆಗಳನ್ನು ಮತ್ತು ರಥಗಳನ್ನು ಧ್ವಂಸಮಾಡು!
    ಖಡ್ಗವೇ, ಪರದೇಶಗಳಿಂದ ಕರೆಸಿದ ಸೈನಿಕರನ್ನು ಕೊಂದುಹಾಕು!
    ಆ ಸೈನಿಕರು ಹೆದರಿದ ಹೆಂಗಸರಂತಾಗಿರುವರು.
ಖಡ್ಗವೇ, ಬಾಬಿಲೋನಿನ ಭಂಡಾರಗಳನ್ನು ನಾಶಮಾಡು!
    ಆ ಐಶ್ವರ್ಯವು ಸೂರೆಗೊಳ್ಳುವುದು.
38 ಬಾಬಿಲೋನಿನ ನೀರಿನ ಮೇಲೆ ಒಂದು ಖಡ್ಗ ಬೀಳಲಿ.
    ಆ ನೀರು ಬತ್ತಿಹೋಗುವದು.
ಬಾಬಿಲೋನ್ ದೇಶದಲ್ಲಿ ಅನೇಕಾನೇಕ ವಿಗ್ರಹಗಳಿವೆ.
    ಬಾಬಿಲೋನಿನ ಜನರು ಮೂರ್ಖರೆಂಬುದನ್ನು ಆ ವಿಗ್ರಹಗಳು ತೋರಿಸುತ್ತವೆ.
    ಆ ಜನರಿಗೆ ದುರ್ಗತಿ ಬರುತ್ತದೆ.
39 ಬಾಬಿಲೋನಿನಲ್ಲಿ ಪುನಃ ಜನರು ವಾಸಿಸುವದಿಲ್ಲ.
    ಕಾಡುನಾಯಿ, ಉಷ್ಟ್ರಪಕ್ಷಿ ಮತ್ತು ಇನ್ನುಳಿದ ಮರುಭೂಮಿಯ ಪ್ರಾಣಿಗಳು ಅಲ್ಲಿ ವಾಸಿಸುವವು.
    ಆದರೆ ಎಂದೆಂದಿಗೂ ಅಲ್ಲಿ ಮಾನವರು ವಾಸಿಸುವದಿಲ್ಲ.
40 ದೇವರು ಸೊದೋಮ್ ಗೊಮೋರ ನಗರಗಳನ್ನೂ
    ಅವುಗಳ ಸುತ್ತಮುತ್ತಲಿನ ಪಟ್ಟಣಗಳನ್ನೂ ಸಂಪೂರ್ಣವಾಗಿ ನಾಶಮಾಡಿದನು.
    ಈಗ ಅಲ್ಲಿ ಯಾರೂ ವಾಸಿಸುವದಿಲ್ಲ.
ಅದೇ ರೀತಿ ಬಾಬಿಲೋನಿನಲ್ಲಿ ಯಾರೂ ವಾಸಮಾಡುವದಿಲ್ಲ.
    ವಾಸಮಾಡಲು ಅಲ್ಲಿಗೆ ಯಾರೂ ಹೋಗುವದಿಲ್ಲ.”

41 “ಇಗೋ, ಉತ್ತರದಿಂದ ಜನರು ಬರುತ್ತಿದ್ದಾರೆ.
    ಅವರು ಒಂದು ಪ್ರಬಲ ರಾಷ್ಟ್ರದಿಂದ ಬರುತ್ತಿದ್ದಾರೆ.
    ಇಡೀ ಜಗತ್ತಿನ ಹಲವಾರು ರಾಜರುಗಳು ಒಟ್ಟುಗೂಡಿ ಬರುತ್ತಿದ್ದಾರೆ.
42 ಅವರ ಸೈನಿಕರ ಹತ್ತಿರ ಬಿಲ್ಲುಗಳು ಮತ್ತು ಭರ್ಜಿಗಳು ಇವೆ.
    ಆ ಸೈನಿಕರು ಕ್ರೂರಿಗಳಾಗಿದ್ದಾರೆ. ಅವರಿಗೆ ದಯೆದಾಕ್ಷಿಣ್ಯ ಇಲ್ಲ.
ಆ ಸೈನಿಕರು ತಮ್ಮ ಕುದುರೆಗಳ ಮೇಲೆ ಬರುತ್ತಿದ್ದಾರೆ.
    ಅವರ ಧ್ವನಿ ಆರ್ಭಟಿಸುವ ಸಮುದ್ರದಂತಿದೆ.
ಅವರು ಯುದ್ಧಕ್ಕೆ ಸಿದ್ಧರಾಗಿ ತಮ್ಮತಮ್ಮ ಸ್ಥಳಗಳಲ್ಲಿ ನಿಂತುಕೊಂಡಿದ್ದಾರೆ.
    ಬಾಬಿಲೋನ್ ನಗರವೇ, ಅವರು ನಿನ್ನ ಮೇಲೆ ಧಾಳಿಮಾಡಲು ಸಿದ್ಧರಾಗಿದ್ದಾರೆ.
43 ಬಾಬಿಲೋನಿನ ರಾಜನು ಆ ಸೈನ್ಯಗಳ ಬಗ್ಗೆ
    ಕೇಳಿ ಬಹಳ ಗಾಬರಿಗೊಂಡನು;
ಹೆದರಿಕೆಯಿಂದ ಅವನ ಕೈಗಳು ಚಲಿಸದಂತಾಗಿವೆ.
    ಪ್ರಸವವೇದನೆಯಂತೆ ಅವನಿಗೆ ವೇದನೆಯಾಗಿದೆ.”

44 ಯೆಹೋವನು ಹೀಗೆನ್ನುತ್ತಾನೆ:
“ಜೋರ್ಡನ್ ನದಿಯ ಸಮೀಪದ ದಟ್ಟವಾದ ಅರಣ್ಯದಿಂದ
    ಒಮ್ಮೆ ಒಂದು ಸಿಂಹವು ಬರುವುದು.
ಆ ಸಿಂಹವು ಜನರ ಸಾಕುಪ್ರಾಣಿಗಳಿದ್ದ ಹೊಲಗಳಿಗೆ ನುಗ್ಗುವುದು.
    ಆ ಪ್ರಾಣಿಗಳೆಲ್ಲ ಓಡಿಹೋಗುವವು.
ನಾನು ಆ ಸಿಂಹದಂತಾಗುವೆನು.
    ನಾನು ಬಾಬಿಲೋನನ್ನು ಅದರ ಪ್ರದೇಶದಿಂದ ಓಡಿಸಿಬಿಡುವೆನು.
ಈ ಕಾರ್ಯ ಮಾಡಲು ನಾನು ಯಾರನ್ನು ಆರಿಸಲಿ?
    ನನ್ನತೆ ಯಾರೂ ಇಲ್ಲ. ನನ್ನನ್ನು ಪ್ರತಿಭಟಿಸುವವರು ಯಾರೂ ಇಲ್ಲ.
    ಆದ್ದರಿಂದ ನಾನೇ ಅದನ್ನು ಮಾಡುತ್ತೇನೆ.
ನನ್ನನ್ನು ಓಡಿಸಲು ಯಾವ ಕುರುಬನೂ ಬರಲಾರನು.
    ನಾನು ಬಾಬಿಲೋನಿನ ಜನರನ್ನು ಓಡಿಸಿಬಿಡುವೆನು.”

45 ಯೆಹೋವನು ಬಾಬಿಲೋನಿನ ವಿರುದ್ಧ
    ಮಾಡಬೇಕೆಂದಿರುವುದನ್ನು ಕೇಳಿರಿ.
“ಬಾಬಿಲೋನಿನ ಜನರ ವಿರುದ್ಧ
    ಯೆಹೋವನು ನಿಶ್ಚಯಿಸಿರುವುದನ್ನು ಕೇಳಿರಿ.
ಶತ್ರುವು ಬಾಬಿಲೋನಿನ ಕುರಿಮರಿಗಳನ್ನು (ಜನರನ್ನು) ಕೊಂಡೊಯ್ಯುವನು.
    ಬಾಬಿಲೋನಿನ ಹುಲ್ಲುಗಾವಲುಗಳು ಸಂಭವಿಸಿದ ನಾಶನಕ್ಕೆ ಬೆದರುವವು.
46 ಬಾಬಿಲೋನ್ ಪತನವಾಗುವುದು.
    ಆ ಪತನವು ಭೂಮಂಡಲವನ್ನು ಅಲುಗಾಡಿಸುವುದು.
ಎಲ್ಲಾ ಜನಾಂಗಗಳ ಜನರು
    ಬಾಬಿಲೋನಿನ ವಿನಾಶದ ವಿಷಯವನ್ನು ಕೇಳುವರು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International