Beginning
4 ಇದು ಯೆಹೋವನ ಸಂದೇಶ:
“ಇಸ್ರೇಲೇ, ನೀನು ಹಿಂತಿರುಗಿ ಬರಲು ಇಚ್ಛಿಸಿದರೆ
ನನ್ನಲ್ಲಿಗೆ ಹಿಂತಿರುಗಿ ಬಾ.
ನಿನ್ನ ವಿಗ್ರಹಗಳನ್ನು ಎಸೆದುಬಿಡು.
ನನ್ನಿಂದ ದೂರಸರಿದು ಅಲೆದಾಡಬೇಡ.
2 ನೀನು ಹೀಗೆ ಮಾಡಿದರೆ
ನನ್ನ ಹೆಸರಿನ ಮೇಲೆ ಪ್ರಮಾಣ ಮಾಡಲು ಶಕ್ತಳಾಗುವೆ.
‘ಹಾದು, ಯೆಹೋವನಾಣೆ’ ಎಂದು ಹೇಳಶಕ್ತಳಾಗುವೆ.
ನೀನು ಆ ಪದಗಳನ್ನು ಸತ್ಯವಾಗಿಯೂ ಪ್ರಾಮಾಣಿಕವಾಗಿಯೂ ಸರಿಯಾಗಿ ಉಪಯೋಗಿಸಲು ಸಾಧ್ಯವಾಗುತ್ತದೆ.
ನೀನು ಹೀಗೆ ಮಾಡಿದರೆ,
ಎಲ್ಲಾ ಜನಾಂಗಗಳು ಯೆಹೋವನ ಆಶೀರ್ವಾದವನ್ನು ಪಡೆಯುತ್ತವೆ.
ಆತನ ಕಾರ್ಯಗಳಿಗಾಗಿ
ಆತನಿಗೆ ಸ್ತೋತ್ರ ಮಾಡುತ್ತವೆ.”
3 ಯೆಹೂದ ಜನಾಂಗದ ಜನರಿಗೂ ಜೆರುಸಲೇಮ್ ನಗರದ ಜನರಿಗೂ ಯೆಹೋವನು ಹೀಗೆ ಹೇಳುತ್ತಾನೆ:
“ನಿಮ್ಮ ಹೊಲಗಳಲ್ಲಿ ನೇಗಿಲು ಹೊಡೆದಿಲ್ಲ,
ಆ ಹೊಲಗಳನ್ನು ನೇಗಿಲು ಹೊಡೆದು ಸ್ವಚ್ಛಮಾಡಿರಿ.
ಮುಳ್ಳುಗಳಲ್ಲಿ ಬೀಜಗಳನ್ನು ಬಿತ್ತಬೇಡಿರಿ.
4 ಯೆಹೋವನ ಮನುಷ್ಯರಾಗಿರಿ,
ನಿಮ್ಮ ಹೃದಯ ಪರಿವರ್ತನೆ[a] ಮಾಡಿಕೊಳ್ಳಿರಿ.
ಯೆಹೂದದ ಜನಗಳೇ, ಜೆರುಸಲೇಮಿನ ಜನರೇ, ನೀವು ಬದಲಾಗದಿದ್ದರೆ
ನನಗೆ ವಿಪರೀತ ಕೋಪ ಬರುವುದು.
ನನ್ನ ಕೋಪವು ಬೆಂಕಿಯ ಜ್ವಾಲೆಯಂತೆ ಭರದಿಂದ ಹಬ್ಬುವದು.
ನನ್ನ ಕೋಪವು ನಿಮ್ಮನ್ನು ಸುಟ್ಟು ಬೂದಿ ಮಾಡುವುದು.
ಯಾರಿಂದಲೂ ಆ ಬೆಕಿಯನ್ನು ಆರಿಸುವುದು ಸಾಧ್ಯವಾಗುವದಿಲ್ಲ.
ಇದೆಲ್ಲ ಏಕೆ ನಡೆಯುವುದು? ನೀವು ಮಾಡಿದ ದುಷ್ಕೃತ್ಯಗಳಿಂದಲೇ.”
ಉತ್ತರ ದಿಕ್ಕಿನಿಂದ ವಿಪತ್ತು
5 “ಈ ಸಂದೇಶವನ್ನು ಯೆಹೂದ ಜನರಲ್ಲಿ ಸಾರಿರಿ:
ಜೆರುಸಲೇಮ್ ನಗರದ ಪ್ರತಿಯೊಬ್ಬನಿಗೂ
ದೇಶದಲ್ಲೆಲ್ಲಾ ತುತ್ತೂರಿಗಳನ್ನು ಊದಿರಿ ಎಂದು ಹೇಳಿರಿ.
ದೊಡ್ಡ ಧ್ವನಿಯಲ್ಲಿ
‘ಒಂದು ಕಡೆ ಸೇರೋಣ ಬನ್ನಿ,
ರಕ್ಷಣೆಗಾಗಿ ಭದ್ರವಾದ ನಗರಗಳಿಗೆ ಓಡಿಹೋಗೋಣ ಬನ್ನಿ’ ಎಂದು ಕೂಗಿ ಹೇಳಿರಿ.
6 ಚೀಯೋನಿನ ಕಡೆಗೆ ಧ್ವಜವನ್ನು ಎತ್ತಿ ಸಂಕೇತ ಕೊಡಿ.
ನಿಲ್ಲಬೇಡಿ. ನಿಮ್ಮ ಜೀವ ರಕ್ಷಣೆಗಾಗಿ ಓಡಿರಿ.
ನಾನು ಉತ್ತರದಿಂದ ವಿಪತ್ತನ್ನು ತರುತ್ತಿರುವುದರಿಂದ ನೀವು ಹೀಗೆ ಮಾಡಬೇಕು.
ನಾನು ಭಯಂಕರವಾದ ವಿನಾಶವನ್ನು ಬರಮಾಡಲಿದ್ದೇನೆ.”
7 ತನ್ನ ಗುಹೆಯಿಂದ ಒಂದು “ಸಿಂಹವು” ಹೊರಬಂದಿದೆ.
ಜನಾಂಗಗಳ ವಿನಾಶಕವಾದ ಸಿಂಹವು ಹೆಜ್ಜೆ ಹಾಕುತ್ತಿದೆ.
ಅದು ನಿಮ್ಮ ಪ್ರದೇಶವನ್ನು ನಾಶಮಾಡಲು ತನ್ನ ಗುಹೆಯನ್ನು ಬಿಟ್ಟು ಹೊರಟಿದೆ.
ನಿಮ್ಮ ಪಟ್ಟಣಗಳೆಲ್ಲ ನಾಶಹೊಂದುವವು.
ಅಲ್ಲಿ ವಾಸಿಸಲು ಜನರೇ ಇಲ್ಲದಂತಾಗುವುದು.
8 ಆದ್ದರಿಂದ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ. ದೊಡ್ಡ ಧ್ವನಿಯಿಂದ ಗೋಳಾಡಿರಿ.
ಏಕೆಂದರೆ ಯೆಹೋವನು ನಮ್ಮ ಮೇಲೆ ತುಂಬ ಕೋಪಗೊಂಡಿದ್ದಾನೆ.
9 ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ
ರಾಜನು ಮತ್ತು ನಾಯಕರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವರು.
ಯಾಜಕರು ಭಯಪಡುವರು;
ಪ್ರವಾದಿಗಳು ಬೆರಗಾಗುವರು.”
10 ಆಗ ಯೆರೆಮೀಯನೆಂಬ ನಾನು, “ನನ್ನ ಒಡೆಯನಾದ ಯೆಹೋವನೇ, ನೀನು ಯೆಹೂದ ಮತ್ತು ಜೆರುಸಲೇಮಿನ ಜನರಿಗೆ ಮೋಸ ಮಾಡಿದೆ, ‘ನೀವು ಶಾಂತಿಯಿಂದ ಇರುವಿರಿ’ ಎಂದು ನೀನು ಅವರಿಗೆ ಹೇಳಿದೆ. ಆದರೆ ಈಗ ಅವರ ಕತ್ತಿನ ಮೇಲೆ ಖಡ್ಗ ಇದೆ” ಅಂದೆನು.
11 ಆ ಸಮಯದಲ್ಲಿ ಯೆಹೂದ ಮತ್ತು ಜೆರುಸಲೇಮಿನ ಜನರಿಗೆ
ಒಂದು ಸಂದೇಶವನ್ನು ಕೊಡಲಾಗುವುದು.
“ಬೋಳುಬೆಟ್ಟಗಳಿಂದ ಒಂದು ಬಿಸಿಗಾಳಿಯು ಬೀಸುವುದು.
ಅದು ಮರಳುಗಾಡಿನಿಂದ ಬೀಸುವುದು.
ಇದು ರೈತನು ತೂರಿ ಹೊಟ್ಟಿನಿಂದ ಕಾಳನ್ನು ಬೇರ್ಪಡಿಸಲು
ಬೇಕಾಗುವ ಸೌಮ್ಯವಾದ ಗಾಳಿಯಂತಲ್ಲ.
12 ಇದು ಅದಕ್ಕಿಂತಲೂ ಬಹು ಬಿರುಸಾಗಿ ಬೀಸುತ್ತದೆ.
ಅದು ನನ್ನಿಂದ ಬರುತ್ತದೆ.
ಈಗ ಯೆಹೂದದ ಜನರಿಗೆ ನ್ಯಾಯವಾದ ದಂಡನೆಗಳನ್ನು ವಿಧಿಸುವೆನು.”
13 ಇಗೋ, ಆ ಶತ್ರುವು ಮೇಘಮಾಲೆಯಂತೆ ಬರುತ್ತಿದ್ದಾನೆ.
ಅವನ ರಥಗಳು ಬಿರುಗಾಳಿಯಂತೆ ಕಾಣುತ್ತಿವೆ.
ಅವನ ಕುದುರೆಗಳು ಹದ್ದುಗಳಿಗಿಂತ ವೇಗವಾಗಿ ಓಡುತ್ತಿವೆ.
ಇದು ನಮಗೆ ತುಂಬ ಅಪಾಯಕಾರಿಯಾಗಿದೆ;
ನಾವು ಹಾಳಾಗಿಹೋದೆವು.
14 ಜೆರುಸಲೇಮಿನ ಜನರೇ, ನಿಮ್ಮ ಹೃದಯದ ಕೆಟ್ಟತನವನ್ನು ತೊಳೆದುಕೊಳ್ಳಿರಿ.
ರಕ್ಷಣೆಹೊಂದಲು ನಿಮ್ಮ ಹೃದಯಗಳನ್ನು ಪವಿತ್ರಗೊಳಿಸಿರಿ.
ದುರಾಲೋಚನೆಗಳನ್ನು ಮುಂದುವರಿಸಬೇಡಿರಿ.
15 ಕೇಳಿರಿ, ದಾನ್ ಪ್ರದೇಶದಿಂದ
ದೂತನ ಸ್ವರವು ಕೇಳಿಬರುತ್ತಿದೆ.
ಎಫ್ರಾಯೀಮ್ ಬೆಟ್ಟಪ್ರದೇಶದಿಂದ
ಒಬ್ಬನು ಕೆಟ್ಟ ಸಮಾಚಾರವನ್ನು ತರುತ್ತಿದ್ದಾನೆ.
16 “ಇದನ್ನು ಈ ಜನಾಂಗಕ್ಕೆ ತಿಳಿಸಿರಿ.
ಜೆರುಸಲೇಮಿನ ಜನರಲ್ಲಿ ಈ ಸಮಾಚಾರವನ್ನು ಹರಡಿರಿ.
ಬಹುದೂರದೇಶದಿಂದ ಶತ್ರುಗಳು ಬರುತ್ತಿದ್ದಾರೆ.
ಆ ಶತ್ರುಗಳು ಯೆಹೂದದ ನಗರಗಳ ವಿರುದ್ಧ
ಯುದ್ಧದ ಘೋಷಣೆಗಳನ್ನು ಕೂಗುತ್ತಿದ್ದಾರೆ.
17 ಹೊಲವನ್ನು ಕಾಯುವ ಜನರಂತೆ
ವೈರಿಗಳು ಜೆರುಸಲೇಮನ್ನು ಮುತ್ತಿಕೊಂಡಿದ್ದಾರೆ.
ಯೆಹೂದವೇ, ನೀನು ನನಗೆ ತಿರುಗಿಬಿದ್ದೆ,
ಅದಕ್ಕಾಗಿ ನಿನ್ನ ಮೇಲೆ ಶತ್ರುಗಳು ಬೀಳುತ್ತಿದ್ದಾರೆ”
ಎಂದು ಯೆಹೋವನು ಹೇಳುವನು.
18 “ನಿನ್ನ ನಡತೆಯೂ ನಿನ್ನ ಕೃತ್ಯಗಳೂ
ನಿನಗೆ ಈ ಕಷ್ಟವನ್ನು ತಂದವು.
ನಿನ್ನ ದುಷ್ಟತನವೇ ನಿನ್ನ ಜೀವನವನ್ನು ಇಷ್ಟು ಕಷ್ಟಕರವನ್ನಾಗಿ ಮಾಡಿದೆ.
ನಿನ್ನ ದುಷ್ಟತನವೇ ನಿನ್ನ ಮನಸ್ಸಿಗೆ
ಆಳವಾದ ನೋವನ್ನು ಉಂಟುಮಾಡಿದೆ.”
ಯೆರೆಮೀಯನ ಗೋಳಾಟ
19 ಅಯ್ಯೋ, ನನ್ನ ದುಃಖ ಮತ್ತು ಚಿಂತೆ ನನ್ನ ಹೊಟ್ಟೆಯಲ್ಲಿ ಸಂಕಟವನ್ನು ಉಂಟುಮಾಡುತ್ತಿವೆ.
ನೋವಿನಿಂದ ನಾನು ಬಾಗಿಹೋಗಿದ್ದೇನೆ.
ನಾನು ತುಂಬ ಹೆದರಿಕೊಂಡಿದ್ದೇನೆ.
ನನ್ನ ಹೃದಯವು ಒಳಗೆ ತಳಮಳಗೊಳ್ಳುತ್ತಿದೆ.
ನಾನು ಬಾಯಿ ಮುಚ್ಚಿಕೊಂಡಿರಲಾರೆ.
ಏಕೆಂದರೆ, ನಾನು ತುತ್ತೂರಿಯ ಶಬ್ದವನ್ನು ಕೇಳಿದ್ದೇನೆ.
ಆ ತುತ್ತೂರಿಯು ಸೈನ್ಯವನ್ನು ಯುದ್ಧಕ್ಕೆ ಕರೆಯುತ್ತಿದೆ.
20 ವಿನಾಶನದ ಮೇಲೆ ವಿನಾಶವು ಬಂದು
ಇಡೀ ದೇಶವೇ ಹಾಳಾಗಿದೆ.
ಫಕ್ಕನೆ ನನ್ನ ಗುಡಾರಗಳು ಹಾಳಾದವು.
ನನ್ನ ಪರದೆಗಳು ಹರಿದುಹೋದವು.
21 ಯೆಹೋವನೇ, ಎಷ್ಟು ಹೊತ್ತಿನವರೆಗೆ ನಾನು ಯುದ್ಧ ಧ್ವಜಗಳನ್ನು ನೋಡಬೇಕು?
ಎಷ್ಟು ಹೊತ್ತಿನವರೆಗೆ ನಾನು ಯುದ್ಧದ ತುತ್ತೂರಿಗಳ ಶಬ್ಧವನ್ನು ಕೇಳಬೇಕು?
22 ದೇವರು, “ನನ್ನ ಜನರು ಮೂರ್ಖರಾಗಿದ್ದಾರೆ.
ಅವರು ನನ್ನನ್ನು ಅರಿಯದವರಾಗಿದ್ದಾರೆ.
ಅವರು ಮೂಢ ಮಕ್ಕಳಾಗಿದ್ದಾರೆ.
ಅವರು ಅವಿವೇಕಿಗಳಾಗಿದ್ದಾರೆ.
ಅವರು ದುಷ್ಕೃತ್ಯದಲ್ಲಿ ನಿಪುಣರಾಗಿದ್ದಾರೆ.
ಅವರು ಒಳ್ಳೆಯದನ್ನು ಮಾಡಲರಿಯದವರಾಗಿದ್ದಾರೆ” ಎಂದನು.
ವಿಪತ್ತಿನ ಆಗಮನ
23 ನಾನು ಭೂಮಿಯ ಕಡೆಗೆ ನೋಡಿದೆ,
ಭೂಮಿಯು ಬರಿದಾಗಿತ್ತು.
ಭೂಮಿಯ ಮೇಲೇನೂ ಇರಲಿಲ್ಲ.
ನಾನು ಆಕಾಶದ ಕಡೆಗೆ ನೋಡಿದೆ,
ಅದರ ಬೆಳಕು ಹೋಗಿಬಿಟ್ಟಿತ್ತು.
24 ನಾನು ಪರ್ವತಗಳ ಕಡೆಗೆ ನೋಡಿದೆ,
ಅವುಗಳು ನಡುಗುತ್ತಿದ್ದವು.
ಎಲ್ಲಾ ಬೆಟ್ಟಗಳು ಅದರುತ್ತಿದ್ದವು.
25 ನಾನು ನೋಡಿದರೂ ಅಲ್ಲಿ ಜನರಿರಲಿಲ್ಲ.
ಆಕಾಶದ ಎಲ್ಲಾ ಪಕ್ಷಿಗಳು ಹಾರಿಹೋಗಿದ್ದವು.
26 ನಾನು ನೋಡಿದಾಗ ಫಲವತ್ತಾದ ಭೂಮಿಯು ಮರಳುಗಾಡಾಗಿತ್ತು.
ಆ ಪ್ರದೇಶದ ಎಲ್ಲಾ ನಗರಗಳು ಹಾಳಾಗಿ ಹೋಗಿದ್ದವು.
ಯೆಹೋವನು ತನ್ನ ಭಯಂಕರವಾದ ಕೋಪದಿಂದ ಇದನ್ನು ಮಾಡಿದನು.
27 ಯೆಹೋವನು ಹೀಗೆ ಹೇಳುತ್ತಾನೆ:
“ಇಡೀ ದೇಶವು ಹಾಳಾಗುವುದು.
ಆದರೆ ನಾನು ಭೂಮಿಯನ್ನು ಸಂಪೂರ್ಣವಾಗಿ ನಾಶಮಾಡುವದಿಲ್ಲ.
28 ಈ ಪ್ರದೇಶದ ಜನರು ಸತ್ತವರಿಗಾಗಿ ಅಳುವರು.
ಆಕಾಶವು ಕಪ್ಪಾಗುವುದು.
ನಾನು ಹೇಳಿದ್ದೇನೆ, ಅದು ಬದಲಾಗುವುದಿಲ್ಲ.
ನಾನು ಒಂದು ನಿರ್ಣಯ ತೆಗೆದುಕೊಂಡಿದ್ದೇನೆ, ನಾನು ನನ್ನ ಮನಸ್ಸನ್ನು ಬದಲಾಯಿಸುವದಿಲ್ಲ.”
29 ಯೆಹೂದದ ಜನರು ಕುದುರೆಗಳ, ಸವಾರರ,
ಬಿಲ್ಲುಗಾರರ ಶಬ್ಧಗಳನ್ನು ಕೇಳಿ ಓಡಿಹೋಗುವರು.
ಕೆಲವು ಜನರು ಗುಹೆಯಲ್ಲಿ ಅಡಗಿಕೊಳ್ಳುವರು.
ಕೆಲವರು ಪೊದೆಗಳಲ್ಲಿ ಅವಿತುಕೊಳ್ಳುವರು.
ಕೆಲವರು ಬೆಟ್ಟಗಳನ್ನು ಹತ್ತಿಹೋಗುವರು.
ಯೆಹೂದದ ಎಲ್ಲಾ ನಗರಗಳು ಬರಿದಾಗುವವು.
ಅಲ್ಲಿ ಒಬ್ಬರೂ ಇರುವದಿಲ್ಲ.
30 ಹಾಳಾಗಿಹೋದ ಯೆಹೂದವೇ,
ನೀನು ಮಾಡುತ್ತಿರುವುದೇನು?
ಅತ್ಯುತ್ತಮವಾದ ಕೆಂಪುಬಣ್ಣದ ಪೋಷಾಕನ್ನು ನೀನು ಧರಿಸಿಕೊಳ್ಳುತ್ತಿರುವುದೇಕೆ?
ಸುವರ್ಣಾಭರಣಗಳಿಂದ ನಿನ್ನನ್ನು ಏಕೆ ಅಲಂಕರಿಸಿಕೊಳ್ಳುತ್ತಿರುವೆ?
ಕಣ್ಣಿಗೆ ಕಾಡಿಗೆಯನ್ನು ಏಕೆ ಹಚ್ಚುತ್ತಿರುವೆ?
ನೀನು ಅಲಂಕಾರ ಮಾಡಿಕೊಳ್ಳುವದೆಲ್ಲ ವ್ಯರ್ಥ.
ನಿನ್ನ ಪ್ರಿಯತಮರು ನಿನ್ನನ್ನು ತಿರಸ್ಕರಿಸುತ್ತಾರೆ.
ಅವರು ನಿನ್ನನ್ನು ಕೊಲೆಮಾಡುವ ಪ್ರಯತ್ನದಲ್ಲಿದ್ದಾರೆ.
31 ಮೊದಲನೆ ಹೆರಿಗೆಯ ಸಮಯದಲ್ಲಿ
ವೇದನೆಪಡುವ ಹೆಂಗಸಿನ ಸ್ವರದಂತಿರುವ ಒಂದು ಧ್ವನಿಯನ್ನು ನಾನು ಕೇಳಿದೆ,
ಇದು ಚೀಯೋನ್ ನಗರಿಯ ಮಗಳ ಕೂಗಾಟ.
ಅವಳು ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಪ್ರಾರ್ಥಿಸುತ್ತಾ,
“ಅಯ್ಯೋ, ನಾನು ಮೂರ್ಛೆ, ಹೋಗುವುದರಲ್ಲಿದ್ದೇನೆ,
ನನ್ನ ಸುತ್ತಲೆಲ್ಲ ಕೊಲೆಗಡುಕರಿದ್ದಾರೆ” ಎಂದು ಹೇಳುತ್ತಿದ್ದಾಳೆ.
ಯೆಹೂದಿಯರ ದುಷ್ಟತನ
5 ಯೆಹೋವನು ಹೀಗೆನ್ನುತ್ತಾನೆ: “ಜೆರುಸಲೇಮಿನ ಬೀದಿಗಳಲ್ಲಿ ಅತ್ತಿತ್ತ ತಿರುಗಾಡಿ ನೋಡಿರಿ; ಈ ವಿಷಯಗಳ ಬಗ್ಗೆ ವಿಚಾರ ಮಾಡಿರಿ. ನಗರದ ಸಾರ್ವಜನಿಕ ಸ್ಥಳಗಳಲ್ಲಿ ಹುಡುಕಿ ನೋಡಿರಿ. ಸತ್ಯಶೋಧಕನೂ ಪ್ರಾಮಾಣಿಕನೂ ಒಳ್ಳೆಯವನೂ ಆಗಿರುವ ಮನುಷ್ಯನು ಎಲ್ಲಿ ಸಿಕ್ಕುವನೋ ನೋಡಿ. ಕೇವಲ ಒಬ್ಬ ಒಳ್ಳೆಯವನಿದ್ದರೂ ನಾನು ಇಡೀ ಜೆರುಸಲೇಮನ್ನು ಕ್ಷಮಿಸುತ್ತೇನೆ. 2 ಜನರು ಆಣೆ ಮಾಡುವಾಗ ‘ಯೆಹೋವನಾಣೆ’ ಎಂದು ಹೇಳುವರು. ಆದರೆ ಅದು ಕೇವಲ ಬಾಯಿ ಮಾತಷ್ಟೇ ಹೊರತು ಯಥಾರ್ಥವಾದದ್ದಲ್ಲ.”
3 ಯೆಹೋವನೇ, ನೀನು ನಂಬಿಗಸ್ತರಾದ
ಜನರನ್ನು ಹುಡುಕುವೆ.
ನೀನು ಯೆಹೂದದ ಜನರಿಗೆ ಹೊಡೆದೆ,
ಆದರೆ ಅವರಿಗೆ ಅದರಿಂದ ನೋವಾಗಲಿಲ್ಲ.
ನೀನು ಅವರನ್ನು ಹಾಳುಮಾಡಿದೆ,
ಆದರೆ ಅದರಿಂದ ಅವರು ಪಾಠವನ್ನೂ ಕಲಿಯಲಿಲ್ಲ.
ಅವರು ತಮ್ಮ ದುಷ್ಕೃತ್ಯಗಳಿಗಾಗಿ ಪಶ್ಚಾತ್ತಾಪಪಡಲಿಲ್ಲ.
ಅವರು ಬಹಳ ಹಟಮಾರಿಗಳಾದರು.
4 ಆದರೆ ನಾನು ನನ್ನೊಳಗೆ,
“ಕೇವಲ ಸಾಮಾನ್ಯ ಜನರು ಇಷ್ಟು ಮೂರ್ಖರಾಗಿರಬಹುದು.
ಅವರು ಯೆಹೋವನ ಮಾರ್ಗವನ್ನು ತಿಳಿದುಕೊಂಡಿಲ್ಲ.
ಸಾಮಾನ್ಯ ಜನರಿಗೆ ತಮ್ಮ ದೇವರ ಉಪದೇಶ ತಿಳಿದಿಲ್ಲ.
5 ನಾನು ಯೆಹೂದದ ಜನನಾಯಕರ ಹತ್ತಿರ ಹೋಗಿ
ಅವರೊಂದಿಗೆ ಮಾತನಾಡುವೆನು.
ಜನನಾಯಕರು ಯೆಹೋವನ ಮಾರ್ಗಗಳನ್ನು ನಿಶ್ಚಯವಾಗಿ ತಿಳಿದುಕೊಂಡಿರುವರು.
ಅವರು ತಮ್ಮ ಯೆಹೋವನ ನ್ಯಾಯವಿಧಿಗಳನ್ನು ಅರಿತುಕೊಂಡಿರುತ್ತಾರೆ” ಅಂದುಕೊಂಡೆನು.
ಆದರೆ ಈ ಜನನಾಯಕರುಗಳೆಲ್ಲಾ ದೇವರ ಸೇವೆಯನ್ನು ತೊರೆದುಬಿಟ್ಟಿದ್ದರು.
ಅವರು ದೇವರಿಗೆ ವಿರೋಧಿಗಳಾದರು.
6 ಆದ್ದರಿಂದ ಕಾಡಿನ ಸಿಂಹವು ಅವರ ಮೇಲೆರಗುವುದು,
ಮರಳುಗಾಡಿನ ತೋಳವು ಅವರನ್ನು ಕೊಂದು ಬಿಡುವದು.
ಅವರ ನಗರಗಳ ಹತ್ತಿರ ಚಿರತೆಯು ಅಡಗಿಕೊಂಡಿದೆ.
ನಗರದಿಂದ ಹೊರಗೆ ಬಂದವರನ್ನೆಲ್ಲ ಅದು ಚೂರುಚೂರು ಮಾಡುವುದು.
ಯೆಹೂದದ ಜನರು ಮತ್ತೆಮತ್ತೆ ಪಾಪಗಳನ್ನು ಮಾಡಿದ್ದರಿಂದ ಹೀಗಾಗುವದು.
ಅವರು ಅನೇಕಸಲ ಯೆಹೋವನಿಂದ ದೂರ ಹೋಗಿದ್ದಾರೆ.
7 “ಯೆಹೂದವೇ, ನಾನು ನಿನ್ನನ್ನು ಏಕೆ ಕ್ಷಮಿಸಬೇಕು? ಒಂದು ಕಾರಣವನ್ನಾದರೂ ಕೊಡು.
ನಿನ್ನ ಮಕ್ಕಳು ನನ್ನನ್ನು ತೊರೆದಿದ್ದಾರೆ.
ದೇವರುಗಳೇ ಅಲ್ಲದ ವಿಗ್ರಹಗಳಿಗೆ ಅವರು ಹರಕೆ ಹೊತ್ತಿದ್ದಾರೆ.
ನಾನು ನಿನ್ನ ಮಕ್ಕಳಿಗೆ ಬೇಕಾದದ್ದನ್ನು ಕೊಟ್ಟೆ.
ಆದರೂ ಅವರು ನನಗೆ ನಂಬಿಗಸ್ತರಾಗಿ ಉಳಿಯಲಿಲ್ಲ.
ಅವರು ತಮ್ಮ ಹೆಚ್ಚಿನ ಸಮಯವನ್ನು ವೇಶ್ಯೆಯರ ಮನೆಗಳಲ್ಲಿ ಕಳೆದರು.
8 ಅವರು ಮನದಣಿಯುವ ಹಾಗೆ ತಿಂದು ಕೊಬ್ಬಿ ಕಾಮವೇರಿದ ಕುದುರೆಗಳಂತಿದ್ದಾರೆ.
ಅವರು ನೆರೆಮನೆಯವನ ಹೆಂಡತಿಯನ್ನು ಕೆನೆತು ಕರೆಯುವ ಕುದುರೆಯಂತಿದ್ದಾರೆ.
9 ಹೀಗೆ ಮಾಡಿದ್ದಕ್ಕಾಗಿ ಯೆಹೂದದ ಜನರನ್ನು ನಾನು ಶಿಕ್ಷಿಸಬೇಕಲ್ಲವೇ?”
ಯೆಹೋವನು ಹೇಳುತ್ತಾನೆ.
“ಹೌದು, ನಾನು ಇಂಥಾ ಜನಾಂಗವನ್ನು ಶಿಕ್ಷಿಸಬೇಕು.
ಅವರಿಗೆ ತಕ್ಕ ಶಿಕ್ಷೆಯನ್ನು ನಾನು ಕೊಡಬೇಕು.
10 “ಯೆಹೂದದ ದ್ರಾಕ್ಷಿಯ ಸಾಲುಬಳ್ಳಿಗಳ ಬಳಿಗೆ ಹೋಗಿರಿ, ಆ ಬಳ್ಳಿಗಳನ್ನು ಕತ್ತರಿಸಿರಿ.
ಆದರೆ ಅವುಗಳನ್ನು ಸಂಪೂರ್ಣವಾಗಿ ನಾಶಮಾಡಬೇಡಿರಿ.
ಅವುಗಳ ಎಲ್ಲಾ ಕೊಂಬೆಗಳನ್ನು ಕತ್ತರಿಸಿಬಿಡಿ. ಏಕೆಂದರೆ, ಈ ಕೊಂಬೆಗಳು ಯೆಹೋವನಿಗೆ ಸಂಬಂಧಿಸಿಲ್ಲ.[b]
11 ಇಸ್ರೇಲ್ ಜನರೂ ಯೆಹೂದದ ಜನರೂ
ನನಗೆ ಎಲ್ಲಾ ವಿಧದಲ್ಲಿ ದ್ರೋಹವನ್ನು ಮಾಡಿರುವರು”
ಎಂದು ಯೆಹೋವನು ಹೇಳಿದನು.
12 “ಆ ಜನರು ಯೆಹೋವನ ಬಗ್ಗೆ ಸುಳ್ಳು ಹೇಳಿದ್ದಾರೆ. ‘ಯೆಹೋವನು ನಮಗೇನೂ ಮಾಡುವುದಿಲ್ಲ. ನಮಗೆ ಕೆಟ್ಟದ್ದೇನೂ ಆಗುವದಿಲ್ಲ. ಯಾವ ಸೈನ್ಯವೂ ನಮ್ಮ ಮೇಲೆ ಧಾಳಿ ಮಾಡುವುದಿಲ್ಲ; ನಾವೆಂದೂ ಉಪವಾಸಬೀಳುವದಿಲ್ಲ’ ಎಂದು ಅವರು ಹೇಳಿದ್ದಾರೆ.
13 ಆ ಸುಳ್ಳುಪ್ರವಾದಿಗಳು ಹೇಳಿದ್ದು ಕೇವಲ ಗಾಳಿಯ ಮಾತು.
ದೈವೋಕ್ತಿಯು ಅವರಲ್ಲಿಲ್ಲ, ಅವರಿಗೆ ಕೇಡಾಗುವದು.”
14 ಯೆಹೋವನೇ, ಸರ್ವಶಕ್ತನಾದ ದೇವರು. ಆತನು ಹೀಗೆನ್ನುತ್ತಾನೆ:
“ನಾನು ಶಿಕ್ಷಿಸುವದಿಲ್ಲವೆಂದು ಆ ಜನರು ಹೇಳಿದರು.
ಆದ್ದರಿಂದ ಯೆರೆಮೀಯನೇ, ನಾನು ನಿನಗೆ ಹೇಳುವ ಮಾತುಗಳು ಬೆಂಕಿಯಂತೆ ಇರುವವು.
ಅವರು ಸೌದೆಯಂತೆ ಆಗುವರು.
ಬೆಂಕಿಯು ಎಲ್ಲಾ ಸೌದೆಯನ್ನು ಸುಟ್ಟುಬಿಡುವದು.”
15 ಇದು ಯೆಹೋವನ ಮಾತು:
“ಇಸ್ರೇಲ್ ಮನೆತನವೇ, ನಿನ್ನ ಮೇಲೆ ಧಾಳಿ ಮಾಡುವುದಕ್ಕೆ ನಾನು ಬಹಳ ದೂರದಿಂದ ಒಂದು ಜನಾಂಗವನ್ನು ತರುತ್ತೇನೆ.
ಅದು ಒಂದು ಬಲಿಷ್ಠ ಜನಾಂಗ;
ಅದೊಂದು ಪುರಾತನ ಕಾಲದಿಂದ ಬಂದ ಜನಾಂಗ.
ಆ ಜನಾಂಗದವರು ಮಾತನಾಡುವ ಭಾಷೆ ನಿನಗೆ ತಿಳಿಯುವದಿಲ್ಲ.
ಅವರು ಹೇಳುವುದು ನಿನಗೆ ಅರ್ಥವಾಗುವದಿಲ್ಲ.
16 ಅವರ ಬತ್ತಳಿಕೆಗಳು ಬಾಯಿತೆರೆದ ಗೋರಿಗಳಂತಿವೆ.
ಅವರ ಜನರೆಲ್ಲ ಶೂರರಾದ ಸೈನಿಕರಾಗಿದ್ದಾರೆ.
17 ಆ ಸೈನಿಕರು ನೀವು ಬೆಳೆದ ಬೆಳೆಯನ್ನು ತಿಂದುಬಿಡುವರು.
ಅವರು ನಿಮ್ಮೆಲ್ಲ ಆಹಾರವನ್ನು ತಿಂದುಬಿಡುವರು.
ಅವರು ನಿಮ್ಮ ಗಂಡುಮಕ್ಕಳನ್ನೂ ಹೆಣ್ಣುಮಕ್ಕಳನ್ನೂ ತಿಂದುಬಿಡುವರು (ನಾಶಮಾಡುವರು).
ಅವರು ನಿಮ್ಮ ದನಕರುಗಳ ಹಿಂಡುಗಳನ್ನು, ಕುರಿಗಳ ಮಂದೆಗಳನ್ನು ತಿಂದುಬಿಡುವರು.
ಅವರು ನಿಮ್ಮ ದ್ರಾಕ್ಷಿಗಳನ್ನೂ ನಿಮ್ಮ ಅಂಜೂರಗಳನ್ನೂ ತಿಂದುಬಿಡುವರು.
ಅವರು ತಮ್ಮ ಖಡ್ಗಗಳಿಂದ ನಿಮ್ಮ ಭದ್ರವಾದ ನಗರಗಳನ್ನು ನಾಶಮಾಡುವರು.
ನೀವು ನಂಬಿಕೊಂಡಿದ್ದ ನಿಮ್ಮ ಭದ್ರವಾದ ನಗರಗಳನ್ನು ಅವರು ಹಾಳುಮಾಡುತ್ತಾರೆ.”
18 “ಯೆಹೂದವೇ, ಆ ಭಯಂಕರ ದಿನಗಳು ಬಂದಾಗ ನಾನು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುವದಿಲ್ಲ,
ಎಂದು ಯೆಹೋವನು ಹೇಳಿದನು.
19 ಯೆಹೂದದ ಜನರು ನಿನ್ನನ್ನು,
‘ಯೆರೆಮೀಯನೇ, ನಮ್ಮ ದೇವರಾದ ಯೆಹೋವನು ನಮಗೆ ಇಂಥಾ ಕೇಡನ್ನು ಏಕೆ ಮಾಡಿದನು’ ಎಂದು ಕೇಳಬಹುದು.
ಆಗ ಅವರಿಗೆ ಹೀಗೆ ಉತ್ತರಕೊಡು:
‘ಯೆಹೂದದ ಜನರಾದ ನೀವು ಯೆಹೋವನನ್ನು ತೊರೆದಿದ್ದೀರಿ,
ನಿಮ್ಮ ದೇಶದಲ್ಲಿ ನೀವು ಅನ್ಯರ ವಿಗ್ರಹಗಳ ಸೇವೆ ಮಾಡುತ್ತಿದ್ದೀರಿ.
ಆದ್ದರಿಂದಲೇ ನೀವು ಪರದೇಶದಲ್ಲಿ
ಪರದೇಶಿಯರ ಸೇವೆಯನ್ನು ಮಾಡುವಿರಿ.’”
20 ಯೆಹೋವನು ಹೀಗೆನ್ನುತ್ತಾನೆ: “ಈ ಸಂದೇಶವನ್ನು ಯಾಕೋಬನ ಜನಾಂಗದವರಿಗೆ ಸಾರಿರಿ.
ಈ ಸಂದೇಶವನ್ನು ಯೆಹೂದ ಜನಾಂಗಕ್ಕೆ ಹೇಳಿರಿ:
21 ಬುದ್ಧಿ ಇಲ್ಲದ ಮೂರ್ಖಜನರೇ,
ಈ ಸಂದೇಶವನ್ನು ಕೇಳಿರಿ.
ನಿಮಗೆ ಕಣ್ಣುಗಳಿವೆ ಆದರೆ ನೀವು ನೋಡುವದಿಲ್ಲ,
ನಿಮಗೆ ಕಿವಿಗಳಿವೆ ಆದರೆ ನೀವು ಕೇಳುವದಿಲ್ಲ.
22 ನೀವು ನನಗೆ ಅಂಜುವುದಿಲ್ಲವೇ?”
ಇದು ಯೆಹೋವನ ಸಂದೇಶ:
“ನೀವು ನನ್ನ ಎದುರಿಗೆ ಭಯದಿಂದ ನಡುಗುವುದಿಲ್ಲವೇ?
ಸಾಗರಗಳಿಗೆ ಗಡಿಯಂತೆ ದಡವನ್ನು ನಿರ್ಮಿಸಿದವನು ನಾನೇ.
ಸಮುದ್ರವು ನಿರಂತರವಾಗಿ ತನ್ನ ಸೀಮೆಯಲ್ಲಿಯೇ ಹರಿಯಬೇಕೆಂದು ಹಾಗೆ ಮಾಡಿದೆ.
ತೆರೆಗಳು ದಡವನ್ನು ಅಪ್ಪಳಿಸಬಹುದು ಆದರೆ ಅವುಗಳು ಅದನ್ನು ನಾಶಮಾಡಲಾರವು.
ತೆರೆಗಳು ಬರುವಾಗ ಭೋರ್ಗರೆಯಬಹುದು, ಆದರೆ ದಡವನ್ನು ದಾಟಿಹೋಗಲಾರವು.
23 ಯೆಹೂದದ ಜನರು ಹಟಮಾರಿಗಳಾಗಿದ್ದಾರೆ.
ಅವರು ನನ್ನ ವಿರುದ್ಧ ಹೋಗುವದಕ್ಕೆ ಮಾರ್ಗಗಳನ್ನು ಹುಡುಕುತ್ತಿದ್ದಾರೆ.
ಅವರು ನನ್ನಿಂದ ತಿರುಗಿ ಬಹಳ ದೂರ ಹೋಗಿಬಿಟ್ಟಿದ್ದಾರೆ.
24 ಯೆಹೂದದ ಜನರು,
‘ನಾವು ನಮ್ಮ ದೇವರಾದ ಯೆಹೋವನಿಗೆ ಭಯಭಕ್ತಿಯಿಂದಿರಬೇಕು.
ಆತನು ನಮಗೆ ಸರಿಸಮಯದಲ್ಲಿ ಮುಂಗಾರು ಮತ್ತು ಹಿಂಗಾರುಮಳೆ ಸುರಿಸುತ್ತಾನೆ.
ಸರಿಸಮಯಕ್ಕೆ ಫಸಲನ್ನು ಬರಮಾಡುತ್ತಾನೆ’ ಎಂದು ತಮ್ಮ ಹೃದಯದಲ್ಲಿ ಅಂದುಕೊಳ್ಳುವದಿಲ್ಲ.
25 ಯೆಹೂದದ ಜನರೇ, ನೀವು ತಪ್ಪುಗಳನ್ನು ಮಾಡಿರುವಿರಿ.
ಆದ್ದರಿಂದಲೇ ಮಳೆಬೆಳೆಗಳು ಆಗಿಲ್ಲ.
ನಿಮ್ಮ ಪಾಪಗಳಿಂದಾಗಿ ಯೆಹೋವನ ಆ ಉತ್ತಮ ಕಾಣಿಕೆಗಳನ್ನು ನೀವು ಸವಿಯಲಾಗಲಿಲ್ಲ.
26 ನಮ್ಮ ಜನರಲ್ಲಿ ದುಷ್ಟರಿದ್ದಾರೆ.
ಅವರು ಪಕ್ಷಿಗಳ ಬಲೆಯನ್ನು ಮಾಡುವ ಬಲೆಗಾರರಂತಿದ್ದಾರೆ.
ಅವರು ಬಲೆಗಳನ್ನು ಬೀಸುತ್ತಾರೆ.
ಆದರೆ ಅವರು ಹಿಡಿಯುವುದು ಪಕ್ಷಿಗಳನ್ನಲ್ಲ, ಮನುಷ್ಯರನ್ನೇ.
27 ಪಕ್ಷಿಗಳಿಂದ ತುಂಬಿರುವ ಪಂಜರದಂತೆ
ಈ ಕೇಡಿಗರ ಮನೆಗಳು ಸುಳ್ಳುಮೋಸಗಳಿಂದ ತುಂಬಿವೆ.
ಅವರ ಸುಳ್ಳುಮೋಸಗಳು ಅವರನ್ನು ಶ್ರೀಮಂತರನ್ನಾಗಿಯೂ ಶಕ್ತಿಶಾಲಿಗಳನ್ನಾಗಿಯೂ ಮಾಡಿವೆ.
28 ಅವರು ಮಾಡಿದ ದುಷ್ಕೃತ್ಯಗಳಿಂದ ಅವರು ಬೆಳೆದಿದ್ದಾರೆ, ಕೊಬ್ಬಿದ್ದಾರೆ.
ಅವರು ಮಾಡುವ ದುಷ್ಕೃತ್ಯಗಳಿಗೆ ಕೊನೆಯೇ ಇಲ್ಲ.
ಅವರು ಅನಾಥ ಮಕ್ಕಳ ಪಕ್ಷವಹಿಸಿ ಮಾತನಾಡುವದಿಲ್ಲ.
ಅವರು ಅನಾಥರಿಗೆ ಸಹಾಯ ಮಾಡುವದಿಲ್ಲ.
ಅವರು ದಿಕ್ಕಿಲ್ಲದವರಿಗೆ ನ್ಯಾಯ ದೊರೆಯದಂತೆ ಮಾಡುವರು.
29 ಇವುಗಳ ನಿಮಿತ್ತ ಯೆಹೂದದ ಜನರನ್ನು ನಾನು ಶಿಕ್ಷಿಸಬೇಕಲ್ಲವೆ?”
ಯೆಹೋವನು ಹೀಗೆನ್ನುತ್ತಾನೆ:
“ಇಂಥ ಜನಾಂಗವನ್ನು ನಾನು ದಂಡಿಸಬೇಕೆಂಬುದು ನಿಮಗೆ ಗೊತ್ತು.
ನಾನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡಬೇಕು.”
30 ಯೆಹೋವನು, “ಯೆಹೂದ ಪ್ರದೇಶದಲ್ಲಿ ಭಯಂಕರವಾದ
ಮತ್ತು ಅಸಹ್ಯವಾದ ಸಂಗತಿಗಳು ನಡೆದಿವೆ.
31 ಪ್ರವಾದಿಗಳು ಸುಳ್ಳು ಹೇಳುತ್ತಿದ್ದಾರೆ.
ಯಾಜಕರು ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿದ್ದಾರೆ.[c]
ನನ್ನ ಜನರು ಇದನ್ನೇ ಮೆಚ್ಚಿಕೊಳ್ಳುತ್ತಿದ್ದಾರೆ.
ಆದರೆ ದಂಡನೆಯ ಸಮಯ ಬಂದಾಗ
ನೀವು ಏನು ಮಾಡುವಿರಿ?” ಎಂದನು.
ಶತ್ರುಗಳು ಜೆರುಸಲೇಮ್ ನಗರವನ್ನು ಮುತ್ತಿದರು
6 ಬೆನ್ಯಾಮೀನನ ಕುಲದವರೇ, ನಿಮ್ಮ ಪ್ರಾಣ ರಕ್ಷಣೆಗಾಗಿ ಓಡಿಹೋಗಿರಿ;
ಜೆರುಸಲೇಮ್ ನಗರದಿಂದ ಓಡಿಹೋಗಿರಿ.
ತೆಕೋವ ನಗರದಲ್ಲಿ ಯುದ್ಧದ ತುತ್ತೂರಿಗಳನ್ನು ಊದಿರಿ;
ಬೇತ್ಹಕ್ಕೆರೆಮಿನಲ್ಲಿ ಎಚ್ಚರಿಕೆಯ ಧ್ವಜಗಳನ್ನು ಹಾರಿಸಿರಿ.
ಉತ್ತರದಿಕ್ಕಿನಿಂದ ವಿಪತ್ತು ಬರುತ್ತಿರುವುದರಿಂದ ಇವೆಲ್ಲವನ್ನು ಮಾಡಿರಿ.
ಭಯಂಕರವಾದ ವಿನಾಶವು ನಿಮಗೆ ಬರುತ್ತಿದೆ.
2 ಚೀಯೋನ್ ಕುಮಾರಿಯೇ,[d] ನೀನು ಬಹು ಸುಂದರವಾಗಿಯೂ ಮೃದುವಾಗಿಯೂ ಇರುವೆ.
3 ಕುರುಬರು ಜೆರುಸಲೇಮಿಗೆ ಬರುತ್ತಾರೆ.
ಮತ್ತು ಕುರಿಮಂದೆಗಳನ್ನು ತರುತ್ತಾರೆ.
ಅದರ ಸುತ್ತಲೂ ತಮ್ಮ ಗುಡಾರಗಳನ್ನು ಹಾಕಿಕೊಳ್ಳುತ್ತಾರೆ.
ಪ್ರತಿಯೊಬ್ಬ ಕುರುಬನು ತನ್ನ ಕುರಿಹಿಂಡನ್ನು ನೋಡಿಕೊಳ್ಳುತ್ತಾನೆ.
4 “ಜೆರುಸಲೇಮಿನ ಮೇಲೆ ಧಾಳಿ ಮಾಡುವದಕ್ಕೆ ಸಿದ್ಧರಾಗಿರಿ.
ಏಳಿರಿ, ನಾವು ನಗರವನ್ನು ಮಧ್ಯಾಹ್ನದಲ್ಲಿಯೇ ಮುತ್ತೋಣ.
ಆದರೆ ಈಗಾಗಲೇ ಹೊತ್ತಾಗಿದೆ.
ಸಾಯಂಕಾಲದ ನೆರಳುಗಳು ವಿಸ್ತಾರಗೊಳ್ಳುತ್ತಿವೆ.
5 ಏಳಿರಿ, ನಾವು ರಾತ್ರಿಯಲ್ಲಿ ನಗರದ ಮೇಲೆ ಧಾಳಿ ಮಾಡೋಣ.
ನಾವು ಜೆರುಸಲೇಮಿನ ಭದ್ರವಾದ ರಕ್ಷಣಾಸ್ಥಳಗಳನ್ನು ನಾಶಮಾಡೋಣ.”
6 ಸರ್ವಶಕ್ತನಾದ ಯೆಹೋವನು ಹೀಗೆ ಹೇಳಿದನು:
“ಜೆರುಸಲೇಮಿನ ಸುತ್ತಮುತ್ತಲಿನ ಮರಗಳನ್ನು ಕಡಿದುಹಾಕಿರಿ;
ಜೆರುಸಲೇಮಿನ ಎದುರಿಗೆ ಒಂದು ದಿಬ್ಬ ನಿರ್ಮಿಸಿರಿ.
ನಗರವನ್ನು ದಂಡಿಸಬೇಕು.
ನಗರದ ಒಳಗಡೆ ದಬ್ಬಾಳಿಕೆಯ ಹೊರತು ಮತ್ತೇನಿಲ್ಲ.
7 ಬಾವಿಯಲ್ಲಿ ಹೊಸ ನೀರು ಬರುವಂತೆ
ಜೆರುಸಲೇಮಿನಲ್ಲಿ ಹೊಸಹೊಸ ದುಷ್ಟತನ ಉಂಟಾಗುತ್ತದೆ.
ಈ ಪಟ್ಟಣದಲ್ಲಿ ಬಲಾತ್ಕಾರ ಮತ್ತು ವಿನಾಶಗಳೇ ಕೇಳಿಬರುತ್ತವೆ.
ನನಗೆ ಯಾವಾಗಲೂ ಜೆರುಸಲೇಮಿನ ರೋಗ ಮತ್ತು ಗಾಯಗಳು ಕಣ್ಣಿಗೆ ಬೀಳುತ್ತವೆ.
8 ಜೆರುಸಲೇಮ್ ನಗರವೇ, ಈ ಎಚ್ಚರಿಕೆಯ ನುಡಿಗಳನ್ನು ಕೇಳು.
ನೀನು ಕೇಳದಿದ್ದರೆ ನಾನು ನಿನಗೆ ವಿಮುಖನಾಗುವೆ.
ನಾನು ನಿನ್ನ ಪ್ರದೇಶವನ್ನು ಒಂದು ಮರಳುಗಾಡಾಗಿ ಮಾಡುತ್ತೇನೆ.
ಅಲ್ಲಿ ಯಾರೂ ವಾಸಮಾಡಲು ಸಾಧ್ಯವಾಗದು.”
9 ಸರ್ವಶಕ್ತನಾದ ಯೆಹೋವನು ಹೀಗೆ ಹೇಳುತ್ತಾನೆ:
“ದೇಶದಲ್ಲಿ ಅಳಿದುಳಿದ ಇಸ್ರೇಲಿಯರನ್ನು
ಒಟ್ಟಾಗಿ ಸೇರಿಸಿರಿ.
ದ್ರಾಕ್ಷಿತೋಟದಲ್ಲಿ ಕೊನೆಯ ದ್ರಾಕ್ಷಿಯನ್ನು ಕೀಳುವಂತೆ
ಅವರನ್ನು ಒಟ್ಟಾಗಿ ಸೇರಿಸಿ.
ಕೊಯ್ಲುಗಾರನು ಪ್ರತಿಯೊಂದು ಬಳ್ಳಿಯನ್ನು ನೋಡಿ ದ್ರಾಕ್ಷಿಕೀಳುವಂತೆ
ನೀವು ಸೂಕ್ಷ್ಮವಾಗಿ ಗಮನಿಸಿ ಅವರನ್ನು ಒಟ್ಟಾಗಿ ಸೇರಿಸಿರಿ.”
10 ನಾನು ಯಾರೊಂದಿಗೆ ಮಾತನಾಡಲಿ?
ನಾನು ಯಾರಿಗೆ ಎಚ್ಚರಿಕೆಯ ನುಡಿಗಳನ್ನು ಹೇಳಲಿ?
ನನ್ನ ಮಾತನ್ನು ಯಾರು ಕೇಳುತ್ತಾರೆ?
ಇಸ್ರೇಲಿನ ಜನರು ತಮ್ಮ ಕಿವಿಗಳನ್ನು ಮುಚ್ಚಿಕೊಂಡಿದ್ದಾರೆ.
ಅವರು ನನ್ನ ಎಚ್ಚರಿಕೆಯ ನುಡಿಗಳನ್ನು ಕೇಳಲಾರರು.
ಜನರಿಗೆ ಯೆಹೋವನ ಉಪದೇಶ ರುಚಿಸುವದಿಲ್ಲ.
ಅವರು ಯೆಹೋವನ ನುಡಿಗಳನ್ನು ಕೇಳಬಯಸುವದಿಲ್ಲ.
11 ಯೆಹೋವನ ರೋಷವು ನನ್ನಲ್ಲಿ ತುಂಬಿತುಳುಕುತ್ತಿದೆ,
ತಡೆದುತಡೆದು ನನಗೆ ಸಾಕಾಗಿದೆ.
“ಬೀದಿಯಲ್ಲಾಡುವ ಮಕ್ಕಳ ಮೇಲೆ ಅದನ್ನು ಹೊಯ್ದುಬಿಡಬೇಕು.
ಒಂದೆಡೆ ಸೇರುವ ತರುಣರ ಮೇಲೆ ಅದನ್ನು ಹೊಯ್ದುಬಿಡಬೇಕು.
ಗಂಡಹೆಂಡತಿಯರಿಬ್ಬರನ್ನು ಅಪಹರಿಸಲಾಗುವುದು.
ಮುದುಕರನ್ನೂ ಮುಪ್ಪಿನ ಮುದುಕರನ್ನೂ ಅಪಹರಿಸಲಾಗುವುದು.
12 ಅವರ ಮನೆಗಳನ್ನು ಬೇರೆಯವರಿಗೆ ಕೊಡಲಾಗುವುದು.
ಅವರ ಹೊಲಗಳನ್ನೂ ಅವರ ಹೆಂಡಂದಿರನ್ನೂ ಬೇರೆಯವರಿಗೆ ಕೊಡಲಾಗುವುದು.
ನಾನು ನನ್ನ ಕೈ ಎತ್ತಿ ಯೆಹೂದದ ಜನರನ್ನು ದಂಡಿಸುವೆನು.”
ಇದು ಯೆಹೋವನ ಸಂದೇಶ.
13 “ಇಸ್ರೇಲಿನ ಎಲ್ಲಾ ಜನರಿಗೆ ಹೆಚ್ಚಾಗಿ ಹಣಬೇಕು.
ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಲಾಭಕ್ಕಾಗಿ ಆಸೆಪಡುತ್ತಾರೆ.
ಪ್ರವಾದಿಗಳು ಮತ್ತು ಯಾಜಕರು ಸಹ ಮೋಸಗಾರರಾಗಿದ್ದಾರೆ.
14 ಪ್ರವಾದಿಗಳು ಮತ್ತು ಯಾಜಕರು
ನನ್ನ ಜನರಿಗಾದ ದೊಡ್ಡ ಗಾಯಗಳಿಗೆ ಚಿಕ್ಕಗಾಯಗಳಿಗೋ ಎಂಬಂತೆ ಚಿಕಿತ್ಸೆ ಮಾಡುತ್ತಾರೆ.
ವಾಸಿಯಾಗಿಲ್ಲದಿದ್ದರೂ ‘ವಾಸಿಯಾಗಿದೆ’ ಎನ್ನುತ್ತಾರೆ.
15 ಪ್ರವಾದಿಗಳು ಮತ್ತು ಯಾಜಕರು ತಾವು ಮಾಡುವ ದುಷ್ಕೃತ್ಯಗಳಿಗಾಗಿ ನಾಚಿಕೆಪಡಬೇಕು.
ಆದರೆ ಅವರು ನಾಚಿಕೆಪಡುವದೇ ಇಲ್ಲ.
ತಮ್ಮ ಪಾಪಕಾರ್ಯಗಳಿಗಾಗಿ ಸಂಕೋಚಪಡುವುದು ಸಹ ಅವರಿಗೆ ಗೊತ್ತಿಲ್ಲ.
ಆದ್ದರಿಂದ ಬೇರೆಯವರಂತೆ ಅವರನ್ನೂ ಶಿಕ್ಷಿಸಲಾಗುವುದು.
ನಾನು ಅವರನ್ನು ಶಿಕ್ಷಿಸಿದಾಗ ಅವರನ್ನು ನೆಲಕ್ಕೆ ಎಸೆಯಲಾಗುವದು”
ಎಂದು ಯೆಹೋವನು ಅನ್ನುತ್ತಾನೆ.
16 ಯೆಹೋವನು ಹೀಗೆ ಹೇಳುತ್ತಾನೆ:
“ಎರಡು ರಸ್ತೆಗಳು ಕೂಡುವಲ್ಲಿ ನಿಂತು ನೋಡಿರಿ.
‘ಒಳ್ಳೆಯ ರಸ್ತೆ ಎಲ್ಲಿದೆ?’ ಎಂದು ಕೇಳಿರಿ.
ಆ ರಸ್ತೆಯನ್ನು ಹಿಡಿದು ನಡೆಯಿರಿ.
ಹಾಗೆ ಮಾಡಿದರೆ ನಿಮಗೆ ವಿಶ್ರಾಂತಿ ಸಿಕ್ಕುವದು.
ಆದರೆ ‘ನಾವು ಒಳ್ಳೆಯ ಹಾದಿಯ ಮೇಲೆ ನಡೆಯುವುದಿಲ್ಲ’ ಎಂದು ನೀವು ಹೇಳಿದ್ದೀರಿ.
17 ನಾನು ನಿಮ್ಮನ್ನು ನೋಡಿಕೊಳ್ಳುವುದಕ್ಕೆ ಕಾವಲುಗಾರರನ್ನು ನೇಮಿಸಿದೆ.
ನಾನು ಅವರಿಗೆ ‘ಯುದ್ಧದ ತುತ್ತೂರಿಯ ನಾದವನ್ನು ಕೇಳಿರಿ’ ಎಂದು ಹೇಳಿದೆ.
ಆದರೆ ಅವರು ‘ನಾವು ಕೇಳುವುದಿಲ್ಲ’ ಅಂದರು.
18 ಆದಕಾರಣ ಸರ್ವಜನಾಂಗಗಳೇ ಕೇಳಿರಿ,
ಜನಸಮೂಹಗಳೇ ಗಮನಿಸಿರಿ.
ಯೆಹೂದದ ಜನರಿಗೆ ನಾನು ಮಾಡುವುದನ್ನು ಕೇಳಿರಿ.
19 ಭೂಲೋಕದ ಜನರೇ, ಕೇಳಿರಿ,
ಆ ಜನರು ಮಾಡಿದ ಎಲ್ಲಾ ಕುಯುಕ್ತಿಗಳಿಗಾಗಿ ನಾನು ಯೆಹೂದ ಜನರಿಗೆ ವಿನಾಶವನ್ನು ತರುವೆನು.
ಅವರು ನನ್ನ ಸಂದೇಶಗಳಿಗೆ ಗಮನ ಕೊಡದೆ ಇದ್ದುದರಿಂದ,
ಅವರು ನನ್ನ ಧರ್ಮಶಾಸ್ತ್ರವನ್ನು ಅಸಡ್ಡೆ ಮಾಡಿದ್ದರಿಂದ ಇದೆಲ್ಲ ನಡೆಯುವುದು.”
20 ಯೆಹೋವನು ಹೇಳುವುದೇನೆಂದರೆ, “ನೀವು ನನ್ನ ಸಲುವಾಗಿ ಶೆಬ ದೇಶದಿಂದ ಧೂಪವನ್ನು ಏಕೆ ತರುವಿರಿ?
ನೀವು ದೂರದೇಶದ ಒಳ್ಳೆಯ ಬಜೆಯನ್ನು ನನಗೆ ಅರ್ಪಿಸುವದರಿಂದ ಪ್ರಯೋಜನವೇನು?
ನಿಮ್ಮ ಹೋಮಗಳಿಂದ ನನಗೆ ಸಂತೋಷವಾಗುವದಿಲ್ಲ.
ನಿಮ್ಮ ಯಜ್ಞಗಳು ನನಗೆ ಇಷ್ಟವಿಲ್ಲ.”
21 “ನಾನು ಯೆಹೂದದ ಜನರೆದುರಿಗೆ ಸಮಸ್ಯೆಗಳನ್ನು ಒಡ್ಡುವೆನು.
ಅವುಗಳು ಜನರು ಎಡವಿಬೀಳುವ ಕಲ್ಲುಗಳಂತಾಗುವವು.
ತಂದೆಗಳೂ ಮಕ್ಕಳೂ ಅವುಗಳಿಂದ ಎಡವಿಬೀಳುವರು.
ಸ್ನೇಹಿತರು ಮತ್ತು ನೆರೆಹೊರೆಯವರು ಅವುಗಳಿಂದ ನಾಶವಾಗುವರು” ಅಂದನು.
22 ಯೆಹೋವನು ಹೇಳುವುದೇನೆಂದರೆ:
“ಉತ್ತರ ದಿಕ್ಕಿನಿಂದ ಒಂದು ಸೈನ್ಯವು ಬರಲಿದೆ.
ಭೂಮಿಯ ಬಹುದೂರದ ಸ್ಥಳಗಳಿಂದ ಒಂದು ಮಹಾಜನಾಂಗವು ಬರಲಿದೆ.
23 ಆ ಸೈನಿಕರು ಬಿಲ್ಲುಗಳನ್ನು ಮತ್ತು ಈಟಿಗಳನ್ನು ಹಿಡಿದುಕೊಂಡಿದ್ದಾರೆ.
ಅವರು ಕ್ರೂರಿಗಳಾಗಿದ್ದಾರೆ. ಅವರು ನಿಷ್ಕರುಣಿಗಳಾಗಿದ್ದಾರೆ.
ಅವರು ಬಲಶಾಲಿಗಳಾಗಿದ್ದಾರೆ.
ಅವರು ತಮ್ಮ ಕುದುರೆ ಹತ್ತಿ ಬರುವಾಗ ಸಮುದ್ರದ ಗರ್ಜನೆಯಂತೆ ಶಬ್ದ ಕೇಳಿಬರುತ್ತದೆ.
ಚೀಯೋನ್ ಕುಮಾರಿಯೇ, ಆ ಸೈನ್ಯವು ಯುದ್ಧಕ್ಕಾಗಿ ಬರುತ್ತಿದೆ.
ಆ ಸೈನ್ಯವು ನಿನ್ನ ಮೇಲೆ ಧಾಳಿಮಾಡಲು ಬರುತ್ತಿದೆ.”
24 ಆ ಸೈನ್ಯದ ಬಗ್ಗೆ ಸಮಾಚಾರವನ್ನು ನಾವು ಕೇಳಿದ್ದೇವೆ.
ಭಯದಿಂದ ನಾವು ಅಸಹಾಯಕರಾಗಿದ್ದೇವೆ.
ಕಷ್ಟಗಳಲ್ಲಿ ನಾವು ಸಿಕ್ಕಿಹಾಕಿಕೊಂಡಿದ್ದೇವೆ.
ಸ್ತ್ರೀಯರ ಪ್ರಸವವೇದನೆಯಂತಿರುವ ಯಾತನೆಯಿಂದ ನಾವು ಬಳಲುತ್ತಿದ್ದೇವೆ.
25 ಊರ ಹೊರಗೆ ಹೋಗಬೇಡಿರಿ.
ರಸ್ತೆಗಳ ಮೇಲೆ ಹೋಗಬೇಡಿರಿ.
ಏಕೆಂದರೆ ಶತ್ರುವಿನ ಕೈಯಲ್ಲಿ ಖಡ್ಗವಿದೆ.
ಎಲ್ಲಾ ಕಡೆಗೂ ಅಪಾಯವಿದೆ.
26 ಅಯ್ಯೋ ನನ್ನ ಜನರೇ,
ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಹೊರಳಾಡಿರಿ.
ಸತ್ತವರಿಗಾಗಿ ದೊಡ್ಡ ಧ್ವನಿಯಲ್ಲಿ ರೋದಿಸಿರಿ.
ಇದ್ದೊಬ್ಬ ಮಗನನ್ನು ಕಳೆದುಕೊಂಡಂತೆ ಬೋರ ಪ್ರಲಾಪ ಮಾಡಿರಿ.
ವಿನಾಶಕನು ತಕ್ಷಣ ನಮ್ಮ ಮೇಲೆರಗುವನು.
27 “ಯೆರೆಮೀಯನೇ, ನಾನು ನಿನ್ನನ್ನು
ಒಬ್ಬ ಲೋಹ ಪರೀಕ್ಷಕನನ್ನಾಗಿ ನೇಮಿಸಿದ್ದೇನೆ.
ನೀನು ನನ್ನ ಜನರನ್ನು ಪರೀಕ್ಷಿಸು.
ಅವರ ವ್ಯವಹಾರವನ್ನು ಅವಲೋಕಿಸು.
28 ಅವರೆಲ್ಲರು ನನಗೆ ವಿರುದ್ಧವಾಗಿ ದಂಗೆ ಎದ್ದಿದ್ದಾರೆ;
ಅವರು ಬಹಳ ಹಟಮಾರಿಗಳಾಗಿದ್ದಾರೆ.
ಅವರು ಜನರ ಬಗ್ಗೆ ಅಪಪ್ರಚಾರ ಮಾಡುತ್ತಾ ತಿರುಗಾಡುತ್ತಾರೆ.
ಅವರು ಬಣ್ಣಗುಂದಿದ, ತುಕ್ಕುಹಿಡಿದ ಕಂಚಿನಂತೆಯೂ ಕಬ್ಬಿಣದಂತೆಯೂ ಇದ್ದಾರೆ.
29 ಅವರನ್ನು ತಿದ್ದುವದು ಬೆಳ್ಳಿಯನ್ನು ಪವಿತ್ರಗೊಳಿಸಲು ಪ್ರಯತ್ನ ಮಾಡಿದ ಅಕ್ಕಸಾಲಿಗನಂತಾಗುವುದು. ತಿದಿಗಳು[e] ಭರದಿಂದ ಬೀಸಲು ಬೆಂಕಿಯು ಧಗಧಗಿಸಿತು.
ಆದರೆ ಆ ಬೆಂಕಿಯಿಂದ ಕೇವಲ ಸೀಸವು ಹೊರಬಂದಿತು.
ಬೆಳ್ಳಿಯನ್ನು ಶುದ್ಧೀಕರಿಸಲು ಮಾಡಿದ ಪ್ರಯತ್ನ ಕೇವಲ ವ್ಯರ್ಥವಾಯಿತು.
ಅದರಂತೆಯೇ ನನ್ನ ಜನರಿಂದ ದುಷ್ಟತನವನ್ನು ತೆಗೆಯಲಾಗಲಿಲ್ಲ.
30 ನನ್ನ ಜನರನ್ನು ‘ತಿರಸ್ಕರಿಸಲಾದ ಬೆಳ್ಳಿ’
ಎಂದು ಕರೆಯಲಾಗುವದು.
ಏಕೆಂದರೆ ಯೆಹೋವನು ಅವರನ್ನು ಸ್ವಿಕರಿಸಲಿಲ್ಲ.”
Kannada Holy Bible: Easy-to-Read Version. All rights reserved. © 1997 Bible League International