Beginning
ಎಲೀಹುವಿನ ವಾದ
32 ಯೋಬನು ತಾನು ನಿರಪರಾಧಿಯೆಂದು ನಂಬಿದ್ದರಿಂದ ಅವನ ಮೂವರು ಗೆಳೆಯರು ಮತ್ತೆ ವಾದ ಮಾಡಲಿಲ್ಲ. 2 ಅಲ್ಲಿ ಯೌವನಸ್ಥನಾದ ಎಲೀಹು ಸಹ ಇದ್ದನು. ಎಲೀಹು ಬರಕೇಲನ ಮಗನು. ಬರಕೇಲನು ಬೂಜ್ ಕುಲದವನು. ಎಲೀಹು, ರಾಮ್ ಸಂತಾನಕ್ಕೆ ಸೇರಿದವನು. ಎಲೀಹುವಿಗೆ ಯೋಬನ ಮೇಲೆ ಬಹು ಕೋಪಬಂದಿತು. ಯಾಕೆಂದರೆ ಯೋಬನು ತಾನು ದೇವರಿಗಿಂತಲೂ ನೀತಿವಂತನೆಂದು ಪ್ರತಿಪಾದಿಸುತ್ತಿದ್ದನು. 3 ಎಲೀಹುವಿಗೆ ಯೋಬನ ಮೂವರ ಸ್ನೇಹಿತರ ಮೇಲೆಯೂ ಬಹು ಕೋಪಬಂದಿತು. ಯಾಕೆಂದರೆ ಯೋಬನ ಪ್ರಶ್ನೆಗಳಿಗೆ ಪರಿಣಾಮಕಾರಿಯಾದ ಉತ್ತರವನ್ನು ಕೊಟ್ಟು ಯೋಬನೇ ತಪ್ಪಿತಸ್ಥನೆಂದು ನಿರೂಪಿಸಲು ಯೋಬನ ಮೂವರು ಗೆಳೆಯರಿಗೆ ಗೊತ್ತಿರಲಿಲ್ಲ. ಆದಕಾರಣ, ದೇವರೇ ತಪ್ಪಿತಸ್ಥನೆಂದು ತೋರಿತು. 4 ಅಲ್ಲಿದ್ದವರೆಲ್ಲರಲ್ಲಿ ಎಲೀಹು ಚಿಕ್ಕವನಾಗಿದ್ದನು. ಆದ್ದರಿಂದ ಪ್ರತಿಯೊಬ್ಬರು ಮಾತಾಡಿ ಮುಗಿಸುವವರೆಗೆ ಅವನು ಕಾದುಕೊಂಡಿದ್ದನು. ಬಳಿಕ ಅವನಿಗೆ ತಾನೂ ಮಾತಾಡಬಹುದೆನಿಸಿತು. 5 ಯೋಬನ ಮೂವರು ಸ್ನೇಹಿತರ ಬಾಯಲ್ಲಿ ಉತ್ತರವಿಲ್ಲದಿರುವುದನ್ನು ಕಂಡು ಎಲೀಹು ಕೋಪಗೊಂಡನು. 6 ಆದ್ದರಿಂದ ಬೂಜ್ ಕುಲಕ್ಕೆ ಸೇರಿದ ಬರಕೇಲನ ಮಗನಾದ ಎಲೀಹು ಮಾತಾಡಲಾರಂಭಿಸಿ ಹೀಗೆಂದನು:
“ನಾನು ವಯಸ್ಸಿನಲ್ಲಿ ಚಿಕ್ಕವನು, ನೀವು ವೃದ್ಧರು.
ಆದಕಾರಣ, ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸಲು ಹಿಂಜರಿದೆನು ಮತ್ತು ಹೆದರಿಕೊಂಡಿದ್ದೆನು.
7 ‘ವೃದ್ಧರು ಮೊದಲು ಮಾತಾಡಬೇಕು.
ಅನೇಕ ವರ್ಷಗಳ ಕಾಲ ಬದುಕಿದ ಜನರು ತಮ್ಮ ಜ್ಞಾನವನ್ನು ಹಂಚಿಕೊಳ್ಳಬೇಕು’ ಎಂದು ನಾನು ನನ್ನೊಳಗೆ ಆಲೋಚಿಸಿಕೊಂಡೆನು.
8 ಆದರೆ ಮನುಷ್ಯರಲ್ಲಿರುವ ದೇವರಾತ್ಮನು
ಅಂದರೆ ಸರ್ವಶಕ್ತನಾದ ದೇವರ ‘ಉಸಿರು’ ಮನುಷ್ಯರಿಗೆ ಜ್ಞಾನವನ್ನು ಕೊಡುತ್ತದೆ.
9 ವೃದ್ದರು ಮಾತ್ರ ಜ್ಞಾನಿಗಳಲ್ಲ,
ಕೇವಲ ವಯಸ್ಸಾದವರು ಮಾತ್ರ ಯಾವುದು ಸರಿ ಎಂಬುದನ್ನು ಅರ್ಥಮಾಡಿಕೊಳ್ಳುವವರಲ್ಲ.
10 “ಆದಕಾರಣ ಎಲೀಹು ಎಂಬ ನಾನು ಹೇಳುವೆ, ನನಗೆ ಕಿವಿಗೊಡಿರಿ!
ನಾನು ಸಹ ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸುವೆನು.
11 ನೀವು ಮಾತಾಡುತ್ತಿದ್ದಾಗ ನಾನು ತಾಳ್ಮೆಯಿಂದ ಕಾದುಕೊಂಡಿದ್ದೆನು.
ನೀವು ಹೇಳಲು ಪದಗಳಿಗಾಗಿ ಆಲೋಚಿಸುತ್ತಿರುವಾಗ ನಾನು ನಿಮ್ಮ ವಾದಗಳನ್ನು ಆಲಿಸಿದೆನು.
12 ನಾನು ನಿಮ್ಮ ಮಾತುಗಳನ್ನು ಬಹಳ ಎಚ್ಚರಿಕೆಯಿಂದ ಗಮನವಿಟ್ಟು ಕೇಳಿದೆನು.
ಆದರೆ ಯೋಬನು ತಪ್ಪಿತಸ್ಥನೆಂಬುದನ್ನು ನೀವು ನಿರೂಪಿಸಲಿಲ್ಲ.
ನಿಮ್ಮಲ್ಲಿ ಒಬ್ಬರೂ ಯೋಬನ ವಾದಗಳಿಗೆ ಉತ್ತರಕೊಡಲಿಲ್ಲ.
13 ನೀವು ಮೂವರು, ‘ನಾವು ಜ್ಞಾನವನ್ನು ಕಂಡುಕೊಂಡಿದ್ದೇವೆ,
ಯೋಬನ ವಾದಗಳಿಗೆ ಉತ್ತರವನ್ನು ದೇವರು ಕೊಡಬೇಕೇ ಹೊರತು ಮನುಷ್ಯರಲ್ಲ’ ಎಂದು ಹೇಳಬೇಡಿ.
14 ಯೋಬನು ನನ್ನ ವಿರುದ್ಧವಾಗಿ ಹೇಳಿಕೆಗಳನ್ನು ಹೊರಡಿಸಲಿಲ್ಲ.
ಆದರೆ ನಾನು ಅವನಿಗೆ ನಿಮ್ಮ ವಾದಗಳಿಂದ ಉತ್ತರ ನೀಡುವುದಿಲ್ಲ.
15 “ಯೋಬನೇ, ನಿನ್ನ ಮೂವರು ಸ್ನೇಹಿತರು ವಾದ ಮಾಡಲು ವಿಫಲರಾಗಿದ್ದಾರೆ.
ಹೆಚ್ಚಿಗೆ ಹೇಳಲು ಅವರಲ್ಲಿ ಏನೂ ಉಳಿದಿಲ್ಲ.
ಅವರಲ್ಲಿ ಯಾವ ಉತ್ತರಗಳೂ ಇಲ್ಲ.
16 ಈ ಮೂವರು ಮೌನವಾಗಿ ಅಲ್ಲಿ ನಿಂತಿದ್ದಾರೆ;
ಅವರಲ್ಲಿ ಉತ್ತರವಿಲ್ಲ.
ಹೀಗಿರಲು ನಾನಿನ್ನೂ ಕಾಯುತ್ತಲೇ ಇರಬೇಕೇ?
17 ಇಲ್ಲ! ನಾನು ಸಹ ನನ್ನ ಉತ್ತರವನ್ನು ಕೊಡುವೆನು.
ನಾನು ಸಹ ನನ್ನ ಅಭಿಪ್ರಾಯವನ್ನು ನಿನಗೆ ತಿಳಿಸುವೆನು.
18 ಯಾಕೆಂದರೆ ನನ್ನಲ್ಲಿ ಹೇಳಲು ಬೇಕಾದಷ್ಟಿದೆ.
ನನ್ನ ಅಂತರಾತ್ಮವು ಮಾತಾಡಲು ನನ್ನನ್ನು ಒತ್ತಾಯಿಸುತ್ತಿದೆ.
19 ಆಹಾ, ದ್ರಾಕ್ಷಾರಸವನ್ನು ತುಂಬಿ ಬಾಯಿಕಟ್ಟಿದ ಹೊಸ ಬುದ್ದಲಿಯಂತೆ
ನನ್ನ ಹೊಟ್ಟೆಯು ಒಡೆದುಹೋಗುವ ಸ್ಥಿತಿಯಲ್ಲಿದೆ.
20 ಆದ್ದರಿಂದ ನಾನು ಮಾತಾಡಲೇಬೇಕು; ಆಗ ನನಗೆ ಉಪಶಮನವಾಗುತ್ತದೆ.
ನನ್ನ ತುಟಿಗಳನ್ನು ತೆರೆದು ಯೋಬನ ದೂರುಗಳಿಗೆ ಉತ್ತರ ಕೊಡಲೇಬೇಕು.
21 ಈ ವಾದದಲ್ಲಿ ನಾನು ಮುಖದಾಕ್ಷಿಣ್ಯ ಮಾಡುವುದಿಲ್ಲ;
ಯಾರ ಮುಖಸ್ತುತಿಯನ್ನೂ ಮಾಡುವುದಿಲ್ಲ.
22 ಮುಖಸ್ತುತಿ ಮಾಡುವುದೇ ನನಗೆ ತಿಳಿದಿಲ್ಲ.
ಮುಖಸುತ್ತಿ ಮಾಡುವುದು ನನಗೆ ಗೊತ್ತಿದ್ದರೆ, ನನ್ನ ಸೃಷ್ಟಿಕರ್ತನು ನನ್ನನ್ನು ಬಹು ಬೇಗನೆ ಶಿಕ್ಷಿಸುವನು.
33 “ಈಗಲಾದರೋ ಯೋಬನೇ, ನನ್ನ ಸಂದೇಶಕ್ಕೆ ಕಿವಿಗೊಡು.
ನನ್ನ ಮಾತುಗಳಿಗೆ ಗಮನ ಕೊಡು.
2 ಈಗ ನಾನು ನನ್ನ ಬಾಯಿ ತೆರೆಯುವೆನು; ನಾನು ಮಾತಾಡಲು ಸಿದ್ಧನಾಗಿದ್ದೇನೆ.
3 ನನ್ನ ಹೃದಯವು ಯಥಾರ್ಥವಾಗಿದೆ; ಆದ್ದರಿಂದ ನಾನು ಯಥಾರ್ಥವಾದ ಮಾತುಗಳನ್ನು ಹೇಳುವೆನು,
ನನಗೆ ತಿಳಿದಿರುವ ಸಂಗತಿಗಳ ಬಗ್ಗೆ ಸತ್ಯವನ್ನು ಹೇಳುವೆನು.
4 ದೇವರಾತ್ಮನು ನನ್ನನ್ನು ನಿರ್ಮಿಸಿದನು.
ಸರ್ವಶಕ್ತನಾದ ದೇವರ ಉಸಿರು ನನಗೆ ಜೀವವನ್ನು ಕೊಟ್ಟಿತು.
5 ಯೋಬನೇ, ಕಿವಿಗೊಡು! ನಿನಗೆ ಸಾಧ್ಯವೆನಿಸಿದರೆ ನನಗೆ ಉತ್ತರಕೊಡು.
ನಿನ್ನ ವಾದವನ್ನು ಸಿದ್ಧಪಡಿಸಿಕೊ; ನನ್ನೆದುರಿನಲ್ಲಿ ನಿನ್ನ ಪರವಾಗಿ ಪ್ರತಿವಾದಿಸು!
6 ನೀನು ಮತ್ತು ನಾನು ದೇವರ ಎದುರಿನಲ್ಲಿ ಒಂದೇ ರೀತಿಯಲ್ಲಿದ್ದೇವೆ.
ದೇವರು ನಮ್ಮಿಬ್ಬರನ್ನು ಮಣ್ಣಿನಿಂದ ನಿರ್ಮಿಸಿದನು.
7 ಯೋಬನೇ, ನನಗೆ ಭಯಪಡಬೇಡ.
ನಾನು ನಿನ್ನನ್ನು ಸೋಲಿಸುವುದಿಲ್ಲ.
8 “ಆದರೆ ಯೋಬನೇ,
ನೀನು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
9 ‘ಯೋಬನಾದ ನಾನು ಪರಿಶುದ್ಧನು; ನಾನು ನಿರಪರಾಧಿ;
ನಾನು ಯಾವ ತಪ್ಪನ್ನೂ ಮಾಡಲಿಲ್ಲ; ನಾನು ದೋಷಿಯಲ್ಲ!
10 ನಾನು ತಪ್ಪು ಮಾಡಿಲ್ಲದಿದ್ದರೂ ದೇವರು ನನಗೆ ವಿರೋಧವಾಗಿದ್ದಾನೆ.
ದೇವರು ನನ್ನನ್ನು ತನ್ನ ವೈರಿಯೆಂದು ಪರಿಗಣಿಸಿದ್ದಾನೆ;
11 ದೇವರು ನನ್ನ ಕಾಲುಗಳನ್ನು ಸರಪಣಿಯಿಂದ ಕಟ್ಟಿದ್ದಾನೆ;
ನಾನು ಮಾಡುವ ಪ್ರತಿಯೊಂದನ್ನೂ ದೇವರು ಗಮನಿಸುತ್ತಿದ್ದಾನೆ.’
12 “ಆದರೆ ಯೋಬನೇ, ಈ ವಿಷಯದಲ್ಲಿ ನೀನು ತಪ್ಪಿತಸ್ಥನಾಗಿರುವೆ. ನಾನು ಅದನ್ನು ನಿರೂಪಿಸುವೆ.
ದೇವರು ಮನುಷ್ಯನಿಗಿಂತ ದೊಡ್ಡವನು.
13 ಯೋಬನೇ, ನೀನು ದೇವರೊಂದಿಗೆ ವಾದಿಸುವುದೇಕೆ?
ದೇವರು ನಿನಗೆ ಪ್ರತಿಯೊಂದನ್ನೂ ವಿವರಿಸಬೇಕೆಂದು ಭಾವಿಸಿಕೊಂಡಿರುವೆಯೋ?
14 ಒಂದುವೇಳೆ ದೇವರು ತನ್ನ ಕಾರ್ಯದ ಕುರಿತಾಗಿ ವಿವರಿಸಬಹುದು.
ಒಂದುವೇಳೆ ನಮಗೆ ಅರ್ಥವಾಗದ ರೀತಿಯಲ್ಲಿ ಆತನು ಮಾತಾಡಬಹುದು.
15 ಜನರು ಗಾಢನಿದ್ರೆಯಲ್ಲಿರುವಾಗ
ದೇವರು ಕನಸಿನ ಮೂಲಕವಾಗಲಿ ದರ್ಶನದ ಮೂಲಕವಾಗಲಿ ಮಾತಾಡಬಹುದು.
16 ಆತನು ಅವರ ಕಿವಿಗಳಲ್ಲಿ ಮಾತಾಡಬಹುದು.
ಆಗ ಅವರು ದೇವರ ಎಚ್ಚರಿಕೆಗಳಿಂದ ಬಹು ಭಯಗೊಳ್ಳುವರು.
17 ಜನರು ತಪ್ಪು ಮಾಡಬಾರದೆಂದೂ ಅಹಂಕಾರಿಗಳಾಗಿರಬಾರದೆಂದೂ
ದೇವರು ಅವರಿಗೆ ಎಚ್ಚರಿಕೆ ಕೊಡುತ್ತಾನೆ.
18 ಮರಣದ ಸ್ಥಳಕ್ಕೆ ಹೋಗುತ್ತಿರುವ ಜನರನ್ನು ರಕ್ಷಿಸುವುದಕ್ಕಾಗಿ ದೇವರು ಎಚ್ಚರಿಕೆ ಕೊಡುತ್ತಾನೆ.
ನಾಶವಾಗುತ್ತಿರುವವನನ್ನು ರಕ್ಷಿಸುವುದಕ್ಕಾಗಿ ದೇವರು ಎಚ್ಚರಿಸುತ್ತಾನೆ.
19 “ಇದಲ್ಲದೆ ಒಬ್ಬನು ದೇವರ ಶಿಕ್ಷೆಯಿಂದ ಹಾಸಿಗೆಹಿಡಿದು ಸಂಕಟಪಡುತ್ತಿರುವಾಗ ದೇವರ ಸ್ವರಕ್ಕೆ ಕಿವಿಗೊಟ್ಟರೂ ಕೊಡಬಹುದು.
ದೇವರು ಅವನನ್ನು ಎಲುಬುಗಳೆಲ್ಲಾ ಬಾಧಿಸುವಂಥ ನೋವಿನಿಂದ ಎಚ್ಚರಿಸುತ್ತಾನೆ.
20 ಅವನಿಗೆ ಊಟಮಾಡಲೂ ಸಾಧ್ಯವಿಲ್ಲ.
ಅವನು ಅತ್ಯಧಿಕವಾದ ನೋವಿನಿಂದ ಬಳಲುತ್ತಿರುವುದರಿಂದ ಮೃಷ್ಠಾನ್ನಕ್ಕೂ ಅಸಹ್ಯಪಡುವನು.
21 ಅವನು ಆಸ್ತಿಪಂಜರದಂತೆ ಕ್ಷೀಣವಾಗುವನು.
ಕಾಣದಿದ್ದ ಅವನ ಎಲುಬುಗಳು ಚರ್ಮಕ್ಕೆ ಅಂಟಿಕೊಂಡು ಅವು ಹೊರತೋರುತ್ತವೆ.
22 ಅವನಿಗೆ ಸಾವು ಸಮೀಪವಾಗಿದೆ;
ಅವನ ಜೀವವು ಪಾತಾಳಕ್ಕೆ ಹತ್ತಿರವಾಗಿದೆ.
23 ಒಂದುವೇಳೆ ದೇವರ ದೂತರಲ್ಲೊಬ್ಬನು ಮಧ್ಯಸ್ಥಗಾರನಾಗಿ ಬಂದು
ಅವನ ನೀತಿಕಾರ್ಯಗಳನ್ನು ದೃಢಪಡಿಸಿ ಅವನ ಮೇಲೆ ಪ್ರೀತಿಯುಳ್ಳವನಾಗಿ,
24 ‘ಇವನನ್ನು ಪಾತಾಳದಿಂದ ರಕ್ಷಿಸು!
ಇವನಿಗೋಸ್ಕರ ಪ್ರಾಯಶ್ಚಿತ್ತದ ಮಾರ್ಗವೊಂದನ್ನು ಕಂಡುಕೊಂಡಿದ್ದೇನೆ’ ಎಂದು ಹೇಳಿದರೆ
25 ಅವನ ದೇಹವು ಬಾಲ್ಯದಂತೆ ಕೋಮಲವಾಗುವುದು;
ಯೌವನಪ್ರಾಯದಂತೆ ದೃಢಕಾಯವಾಗುವುದು.
26 ಆಗ ಅವನು ದೇವರಿಗೆ ಪ್ರಾರ್ಥಿಸಲು ಆತನು ಅವನ ಪ್ರಾರ್ಥನೆಗೆ ಉತ್ತರಕೊಡುವನು.
ಅವನು ಆನಂದ ಧ್ವನಿಗೈದು ದೇವರನ್ನು ಆರಾಧಿಸುವನು;
ಆತನ ಮುಂದೆ ನೀತಿವಂತನಾಗಿ ಜೀವಿಸುವನು.
27 ಬಳಿಕ ಅವನು ಜನರ ಮುಂದೆ ನಿಂತುಕೊಂಡು, ‘ನಾನು ಪಾಪಮಾಡಿದೆನು;
ಒಳ್ಳೆಯದನ್ನು ಕೆಟ್ಟದ್ದನ್ನಾಗಿ ಮಾಡಿದೆನು.
ಆದರೆ ದೇವರು ಅದಕ್ಕೆ ತಕ್ಕಂತೆ ನನ್ನನ್ನು ದಂಡಿಸಲಿಲ್ಲ!
28 ದೇವರು ನನ್ನ ಆತ್ಮವನ್ನು ಪಾತಾಳಕ್ಕೆ ಹೋಗದಂತೆ ರಕ್ಷಿಸಿದನು.
ಆದ್ದರಿಂದ ನಾನು ಜೀವನದಲ್ಲಿ ಮತ್ತೆ ಸುಖಪಡುವಂತಾಯಿತು’ ಎಂದು ಅರಿಕೆಮಾಡಿಕೊಳ್ಳುವನು.
29-30 “ಅವನನ್ನು ಎಚ್ಚರಿಸಿ ಅವನ ಆತ್ಮವನ್ನು ಪಾತಾಳದಿಂದ ರಕ್ಷಿಸಬೇಕೆಂದೂ ಜೀವನದ ಸುಖವನ್ನು ಅವನು ಮತ್ತೆ ಅನುಭವಿಸಲೆಂದೂ
ದೇವರು ಈ ಕಾರ್ಯಗಳನ್ನು ಪದೇಪದೇ ಮಾಡುವನು.
31 “ಯೋಬನೇ, ನನ್ನ ಮಾತುಗಳಿಗೆ ಗಮನಕೊಟ್ಟು ಕೇಳು, ಮೌನವಾಗಿರು.
ನಾನು ಮಾತಾಡುವೆನು.
32 ಯೋಬನೇ, ನೀನು ಏನಾದರೂ ಹೇಳಬೇಕೆಂದಿದ್ದರೆ, ಅದನ್ನು ನಾನು ಕೇಳುವಂತಾಗಲಿ.
ಮುನ್ನಡೆದು ಮಾತಾಡು,
ಯಾಕೆಂದರೆ ನಿನ್ನನ್ನು ನೀತಿವಂತನೆಂದು ಸ್ಥಾಪಿಸಲು ನನಗೆ ಸಂತೋಷ.
33 ಯೋಬನೇ, ಹೇಳುವುದಕ್ಕೆ ನಿನ್ನಲ್ಲಿ ಏನೂ ಇಲ್ಲದಿದ್ದರೆ ನನಗೆ ಕಿವಿಗೊಟ್ಟು ಮೌನವಾಗಿರು.
ನಾನು ನಿನಗೆ ಜ್ಞಾನವನ್ನು ಬೋಧಿಸುವೆನು.”
34 ಎಲೀಹು ತನ್ನ ಮಾತನ್ನು ಮುಂದುವರಿಸಿದನು:
2 “ಜ್ಞಾನಿಗಳೇ, ನನ್ನ ಮಾತುಗಳನ್ನು ಕೇಳಿರಿ.
ಜಾಣರೇ, ನನಗೆ ಗಮನಕೊಡಿರಿ.
3 ಕಿವಿಯು ಮಾತುಗಳನ್ನು ವಿವೇಚಿಸುತ್ತದೆ;
ನಾಲಿಗೆಯು ಆಹಾರವನ್ನು ರುಚಿನೋಡುತ್ತದೆ.
4 ಅಂತೆಯೇ ನಾವು ಈ ವಾದಗಳನ್ನು ಪರೀಕ್ಷಿಸಿ
ನ್ಯಾಯವಾದದ್ದನ್ನೇ ಆರಿಸಿಕೊಳ್ಳೋಣ.
5 ಯೋಬನು ಹೇಳುವುದೇನೆಂದರೆ, ‘ನಾನು ನಿರಪರಾಧಿ.
ದೇವರು ನನಗೆ ನ್ಯಾಯದೊರಕಿಸುತ್ತಿಲ್ಲ.
6 ನಾನು ನೀತಿವಂತನಾಗಿದ್ದರೂ ಅಪರಾಧಿಯೆನಿಸಿಕೊಂಡಿದ್ದೇನೆ.
ನಾನು ನಿರ್ದೋಷಿಯಾಗಿದ್ದರೂ ಆತನ ಬಾಣದ ಪೆಟ್ಟು ವಿಪರೀತವಾಗಿದೆ.’
7 “ಯೋಬನಿಗೆ ಸಮಾನನು ಯಾರು?
ಅವನು ನೀರು ಕುಡಿದಂತೆ ದೇವರನ್ನು ದೂಷಿಸುತ್ತಾನೆ.
8 ಯೋಬನು ದುಷ್ಟರೊಂದಿಗೆ ಸ್ನೇಹದಿಂದಿರುವನು;
ಕೆಟ್ಟವರ ಸಂಗಡ ನಡೆದಾಡುವನು.
9 ಯಾಕೆಂದರೆ, ‘ದೇವರಿಗೆ ವಿಧೇಯನಾಗಿರುವವನಿಗೆ
ಅದರಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಅವನೇ ಹೇಳಿದ್ದಾನೆ.
10 “ಆದ್ದರಿಂದ ಬುದ್ಧಿವಂತರೇ, ನನ್ನ ಮಾತುಗಳಿಗೆ ಕಿವಿಗೊಡಿ.
ದೇವರು ಕೆಟ್ಟದ್ದನ್ನು ಎಂದಿಗೂ ಮಾಡುವುದಿಲ್ಲ.
ಸರ್ವಶಕ್ತನಾದ ದೇವರು ಎಂದಿಗೂ ತಪ್ಪು ಮಾಡುವುದಿಲ್ಲ.
11 ಆತನು ಮನುಷ್ಯನಿಗೆ ಅವನ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲ ಕೊಡುವನು.
ಪ್ರತಿಯೊಬ್ಬನು ತನ್ನ ನಡತೆಗೆ ತಕ್ಕಂತೆ ದೇವರಿಂದ ಹೊಂದಿಕೊಳ್ಳುವನು.
12 ಹೌದು, ನಿಜ, ದೇವರು ಕೆಟ್ಟದ್ದನ್ನು ಮಾಡುವುದಿಲ್ಲ;
ಸರ್ವಶಕ್ತನಾದ ದೇವರು ನೀತಿಯನ್ನು ಡೊಂಕು ಮಾಡುವುದಿಲ್ಲ.
13 ಭೂಲೋಕಕ್ಕೆ ದೇವರನ್ನು ಅಧಿಪತಿಯನ್ನಾಗಿ ಯಾರು ಆರಿಸಿಕೊಂಡರು?
ಇಡೀ ಪ್ರಪಂಚದ ಮೇಲಿನ ಜವಾಬ್ದಾರಿಯನ್ನು ದೇವರಿಗೆ ಯಾರು ಕೊಟ್ಟರು?
14 ಆತನು ಸ್ವಾರ್ಥದಲ್ಲಿ ಮನಸ್ಸಿಟ್ಟು,
ತನ್ನ ಆತ್ಮವನ್ನೂ ಜೀವದ ಉಸಿರನ್ನೂ ಜನರಿಂದ ತೆಗೆದುಕೊಳ್ಳುವುದಾದರೆ,
15 ಆಗ ಭೂಮಿಯ ಮೇಲಿರುವ ಎಲ್ಲಾ ಜನರು
ಸತ್ತುಹೋಗಿ ಧೂಳಾಗುವರು.
16 “ನೀನು ವಿವೇಕಿಯಾಗಿದ್ದರೆ,
ನನ್ನ ಮಾತುಗಳಿಗೆ ಕಿವಿಗೊಡು.
17 ನ್ಯಾಯವನ್ನು ದ್ವೇಷಿಸುವವನು ಅಧಿಪತಿಯಾಗುವನೇ?
ಯೋಬನೇ, ಬಲಿಷ್ಠನೂ ಒಳ್ಳೆಯವನೂ ಆಗಿರುವ ದೇವರನ್ನು
ದೋಷಿಯೆಂಬುದಾಗಿ ತೀರ್ಪುನೀಡಲು ನಿನಗೆ ಸಾಧ್ಯವೇ?
18 ‘ನೀವು ಅಯೋಗ್ಯರು!’ ಎಂದು ರಾಜರುಗಳಿಗೆ ಹೇಳುವವನು ದೇವರೊಬ್ಬನೇ.
‘ನೀವು ಕೆಡುಕರು!’ ಎಂದು ನಾಯಕರುಗಳಿಗೆ ಹೇಳುವವನು ದೇವರೇ.
19 ದೇವರಲ್ಲಿ ಸಾಮಾನ್ಯರು ಮತ್ತು ಪ್ರಮುಖರು ಎಂದಾಗಲಿ
ಬಡವರು ಮತ್ತು ಶ್ರೀಮಂತರು ಎಂದಾಗಲಿ ಭೇದಭಾವವಿಲ್ಲ.
ಯಾಕೆಂದರೆ ಎಲ್ಲರನ್ನೂ ಸೃಷ್ಟಿಮಾಡಿದವನು ದೇವರೇ.
20 ಒಬ್ಬನು ಕ್ಷಣಮಾತ್ರದೊಳಗೆ ಮಧ್ಯರಾತ್ರಿಯಲ್ಲಿ ಸಾಯಬಹುದು.
ಜನರು ಕಾಯಿಲೆಯಿಂದ ಸಾಯಬಹುದು.
ದುಷ್ಟರು ಸಹ ಯಾವುದೇ ಕಾರಣವಿಲ್ಲದೆ ಸಾಯಬಹುದು.
21 “ಮನುಷ್ಯರ ಕಾರ್ಯಗಳನ್ನು ದೇವರು ಗಮನಿಸುತ್ತಾನೆ.
ಅವನ ಪ್ರತಿಯೊಂದು ಹೆಜ್ಜೆ ಆತನಿಗೆ ಗೊತ್ತಿದೆ.
22 ದುಷ್ಟನನ್ನು ದೇವರಿಂದ ಮರೆಮಾಡಬಲ್ಲ ಕತ್ತಲೆಯ ಸ್ಥಳವಾಗಲಿ
ಕಾರ್ಗತ್ತಲೆಯ ಸ್ಥಳವಾಗಲಿ ಇಲ್ಲವೇ ಇಲ್ಲ.
23 ದೇವರು ಮನುಷ್ಯರನ್ನು ಪರೀಕ್ಷಿಸಲು ಸಮಯವನ್ನು ಗೊತ್ತು ಪಡಿಸಬೇಕಿಲ್ಲ;
ನ್ಯಾಯತೀರ್ಪು ನೀಡಲು ಅವರನ್ನು ತನ್ನ ಮುಂದೆ ಕರೆಸಬೇಕಿಲ್ಲ.
24 ಬಲಿಷ್ಠರು ತಪ್ಪು ಮಾಡಿದಾಗ
ದೇವರು ಅವರನ್ನು ವಿಚಾರಿಸದೆ ನಾಶಮಾಡಿ
ಅವರ ಸ್ಥಳದಲ್ಲಿ ಬೇರೆಯವರನ್ನು ನೆಲೆಗೊಳಿಸುವನು.
25 ಹೀಗೆ ಆತನು ಅವರ ಕಾರ್ಯಗಳನ್ನು ಲಕ್ಷಿಸಿ,
ರಾತ್ರಿಯಲ್ಲಿ ಅವರನ್ನು ಸೋಲಿಸಿ ನಾಶಮಾಡುವನು.
26 ದೇವರು ದುಷ್ಟರನ್ನು
ಅವರ ದುಷ್ಕೃತ್ಯಗಳ ನಿಮಿತ್ತ ಬಹಿರಂಗವಾಗಿ ದಂಡಿಸುವನು.
27 ಯಾಕೆಂದರೆ ದುಷ್ಟರು ದೇವರಿಗೆ ವಿಧೇಯರಾಗಲಿಲ್ಲ;
ಆತನ ಮಾರ್ಗಗಳನ್ನು ಲಕ್ಷಿಸಲಿಲ್ಲ.
28 ಹೀಗೆ ಬಡವರ ಗೋಳಾಟವು ದೇವರಿಗೆ ಮುಟ್ಟುವಂತೆ ದುಷ್ಟರು ಮಾಡಿದರು.
ಆತನು ದಿಕ್ಕಿಲ್ಲದವರ ಕೂಗನ್ನು ಕೇಳಿದನು.
29 ಆದರೆ ದೇವರು ಬಡಜನರಿಗೆ ಸಹಾಯಮಾಡದಿರಲು ನಿರ್ಧರಿಸಿದರೆ,
ಆತನನ್ನು ದೋಷಿಯೆಂದು ತೀರ್ಪುಮಾಡುವವನು ಯಾರು?
ದೇವರು ತನ್ನ ಮುಖವನ್ನು ಅವರಿಗೆ ಮರೆಮಾಡಿಕೊಂಡರೆ ಆತನನ್ನು ನೋಡಬಲ್ಲವರು ಯಾರು?
ಮನುಷ್ಯರನ್ನೂ ಜನಾಂಗಗಳನ್ನೂ ಆಳುವವನು ದೇವರೇ.
30 ದೈವಹೀನನಾದ ರಾಜನು ಜನರನ್ನು ನಾಶನಕ್ಕೆ ನಡೆಸುವುದಾದರೆ
ದೇವರು ಅವನನ್ನು ಪದಚ್ಯುತಿಗೊಳಿಸುವನು.
31 “ಮನುಷ್ಯನು ದೇವರಿಗೆ, ‘ನಾನು ದೋಷಿ,
ನಾನು ಇನ್ನೆಂದಿಗೂ ಪಾಪ ಮಾಡುವುದಿಲ್ಲ.
32 ದೇವರೇ, ನೀನು ನನಗೆ ಅಗೋಚರವಾಗಿದ್ದರೂ ನೀತಿಮಾರ್ಗವನ್ನು ಬೋಧಿಸು,
ನಾನು ತಪ್ಪು ಮಾಡಿದ್ದರೆ ಅದನ್ನು ಮತ್ತೆ ಮಾಡುವುದಿಲ್ಲ’ ಎಂದು ಹೇಳಬಹುದು.
33 ಯೋಬನೇ, ನೀನು ಮಾರ್ಪಾಟಾಗದೆ
ದೇವರಿಂದ ಪ್ರತಿಫಲವನ್ನು ಅಪೇಕ್ಷಿಸುವುದೇಕೆ?
ಯೋಬನೇ, ಇದು ನಿನ್ನ ನಿರ್ಧಾರ, ನನ್ನದಲ್ಲ.
ನಿನ್ನ ಆಲೋಚನೆಯನ್ನು ನನಗೆ ತಿಳಿಸು.
34 ಜ್ಞಾನಿಗಳೂ ಬುದ್ಧಿವಂತರೂ
ನನ್ನ ಮಾತುಗಳಿಗೆ ಕಿವಿಗೊಟ್ಟು,
35 ‘ಯೋಬನು ತಿಳುವಳಿಕೆಯಿಲ್ಲದೆ ಮಾತಾಡುತ್ತಾನೆ.
ಅವನ ಮಾತುಗಳಿಗೆ ಅರ್ಥವೇ ಇಲ್ಲ!’
36 ಯೋಬನಿಗೆ ಪರಿಶೋಧನೆ ನಿರಂತರವಾಗಿದ್ದರೆ ಒಳ್ಳೆಯದು.
ಯಾಕೆಂದರೆ ಅವನು ದುಷ್ಟನಂತೆ ಉತ್ತರಿಸುತ್ತಿದ್ದಾನೆ.
37 ಅವನು ತನ್ನ ಪಾಪಕ್ಕೆ ಇನ್ನೂ ಕೂಡಿಸಿಕೊಳ್ಳುತ್ತಿದ್ದಾನೆ;
ನಮ್ಮ ಮಧ್ಯದಲ್ಲಿ ತನ್ನ ದುಷ್ಟತನವನ್ನು ಅಧಿಕಮಾಡಿಕೊಳ್ಳುತ್ತಿದ್ದಾನೆ; ದೇವದ್ರೋಹವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ” ಎಂದು ನನಗೆ ಹೇಳುವರು.
Kannada Holy Bible: Easy-to-Read Version. All rights reserved. © 1997 Bible League International