Beginning
6 ಆಗ ಸೊಲೊಮೋನನು, “ಯೆಹೋವನೇ, ಕಾರ್ಗತ್ತಲಿನಲ್ಲಿ ವಾಸಿಸುತ್ತೇನೆ ಎಂದು ಹೇಳಿರುವೆಯಲ್ಲಾ! 2 ನಾನು ನಿನಗೋಸ್ಕರ ಆಲಯವನ್ನು ಕಟ್ಟಿಸಿದ್ದೇನೆ. ಅದು ನಿನಗೆ ಶಾಶ್ವತವಾದ ವಾಸಸ್ಥಳವಾಗಲಿ” ಎಂದು ಪ್ರಾರ್ಥಿಸಿದನು.
ಸೊಲೊಮೋನನ ಭಾಷಣ
3 ಸೊಲೊಮೋನನು ತನ್ನ ಮುಂದೆ ನೆರೆದಿದ್ದ ಎಲ್ಲಾ ಇಸ್ರೇಲ್ ಸಮೂಹದವರ ಕಡೆಗೆ ತಿರುಗಿ ಅವರನ್ನು ಆಶೀರ್ವದಿಸಿ,
4 “ಇಸ್ರೇಲಿನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ನನ್ನ ತಂದೆಯಾದ ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಿದ್ದಾನೆ. ಆತನು ದಾವೀದನಿಗೆ, 5 ‘ಈಜಿಪ್ಟಿನಿಂದ ನನ್ನ ಜನರನ್ನು ಬಿಡಿಸಿ ಹೊರ ತಂದಂದಿನಿಂದ ನನ್ನ ಆಲಯಕೋಸ್ಕರ ಇಸ್ರೇಲರ ಕುಲಗಳ ಯಾವ ಪಟ್ಟಣವನ್ನೂ ನಾನು ಆರಿಸಿಕೊಳ್ಳಲಿಲ್ಲ. ಇಸ್ರೇಲರನ್ನು ನಡಿಸುವುದಕ್ಕಾಗಿ ಒಬ್ಬ ನಾಯಕನನ್ನೂ ನಾನು ಆರಿಸಿಕೊಳ್ಳಲಿಲ್ಲ. 6 ಆದರೆ ಈಗ ನಾನು ನನ್ನ ಹೆಸರನ್ನು ಸ್ಥಾಪಿಸಲು ಜೆರುಸಲೇಮನ್ನು ಆರಿಸಿಕೊಂಡಿದ್ದೇನೆ; ದಾವೀದನನ್ನು ನನ್ನ ಜನರ ನಾಯಕನನ್ನಾಗಿ ಆರಿಸಿಕೊಂಡಿದ್ದೇನೆ’ ಎಂದು ಹೇಳಿದನು.
7 “ಇಸ್ರೇಲರ ದೇವರಾದ ಯೆಹೋವನಿಗೆ ಆಲಯವನ್ನು ಕಟ್ಟಲು ನನ್ನ ತಂದೆಯಾದ ದಾವೀದನಿಗೆ ಮನಸ್ಸಿತ್ತು. 8 ಆದರೆ ದೇವರು ನನ್ನ ತಂದೆಗೆ, ‘ದಾವೀದನೇ, ನೀನು ನನಗಾಗಿ ಒಂದು ಆಲಯವನ್ನು ಕಟ್ಟಲು ಮನಸ್ಸು ಮಾಡಿರುವದು ಒಳ್ಳೆಯದೇ ಸರಿ! 9 ಆದರೆ ನೀನು ಆಲಯವನ್ನು ಕಟ್ಟಬಾರದು. ನಿನ್ನ ಸ್ವಂತ ಮಗನು ನನ್ನ ಹೆಸರಿಗಾಗಿ ಆಲಯವನ್ನು ಕಟ್ಟುವನು’ ಎಂದು ಹೇಳಿದನು. 10 ಯೆಹೋವನು ತಾನು ಕೊಟ್ಟ ಮಾತನ್ನು ಈಗ ನೆರವೇರಿಸಿದನು. ನಾನು ನನ್ನ ತಂದೆಯ ಸ್ಥಾನದಲ್ಲಿ ಅರಸನಾಗಿದ್ದೇನೆ. ದಾವೀದನು ನನ್ನ ತಂದೆ. ಈಗ ನಾನು ಇಸ್ರೇಲರ ರಾಜನು. ಇದು ದೇವರ ವಾಗ್ದಾನಕ್ಕನುಸಾರವಾಗಿದೆ. ನಾನು ಇಸ್ರೇಲರ ದೇವರಾದ ಯೆಹೋವನ ನಾಮಕ್ಕಾಗಿ ದೇವಾಲಯವನ್ನು ಕಟ್ಟಿರುತ್ತೇನೆ. 11 ಇದಲ್ಲದೆ ನಿಬಂಧನ ಶಾಸನವಿರುವ ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ದೇವಾಲಯದೊಳಗೆ ಇಟ್ಟಿರುತ್ತೇನೆ” ಎಂದು ಹೇಳಿದನು.
ಸೊಲೊಮೋನನ ಪ್ರಾರ್ಥನೆ
12 ಯಜ್ಞವೇದಿಕೆಯ ಮುಂದೆ ಸೊಲೊಮೋನನು ಇಸ್ರೇಲರ ಜನರೆದುರಿಗೆ ನಿಂತುಕೊಂಡು ತನ್ನ ಕೈಗಳನ್ನೆತ್ತಿಕೊಂಡು ನಿಂತನು. 13 ಸೊಲೊಮೋನನು ಒಂದು ತಾಮ್ರದ ಪೀಠವನ್ನು ತಯಾರಿಸಿದನು. ಅದರ ಉದ್ದ ಐದು ಮೊಳ; ಅಗಲ ಐದು ಮೊಳ; ಎತ್ತರ ಮೂರು ಮೊಳ; ಅದನ್ನು ಪ್ರಾಕಾರದ ಮಧ್ಯದಲ್ಲಿಟ್ಟು ಅದರ ಮೇಲೆ ಇಸ್ರೇಲಿನ ಸರ್ವಜನರ ಮುಂದೆ ಮೊಣಕಾಲೂರಿ ತನ್ನ ಕೈಗಳನ್ನು ಆಕಾಶದ ಕಡೆ ಎತ್ತಿ,
14 “ಇಸ್ರೇಲರ ದೇವರಾದ ಯೆಹೋವನೇ, ಭೂಪರಲೋಕಗಳಲ್ಲಿ ನಿನಗೆ ಸಮಾನರಾದ ಬೇರೆ ದೇವರುಗಳಿಲ್ಲ. ನೀನು ನಿನ್ನ ಪ್ರೀತಿ ಕರುಣೆಯಿಂದೊಡಗೂಡಿದ ವಾಗ್ದಾನಗಳನ್ನು ನೆರವೇರಿಸುವೆ. ನಿನ್ನ ಸೇವಕರು ಹೃದಯಪೂರ್ವಕವಾಗಿ ನಿನಗೆ ಯೋಗ್ಯರಾಗಿ ನಡೆದು, ನಿನ್ನ ಆಜ್ಞೆಗಳಿಗೆ ವಿಧೇಯರಾಗುವದಾದರೆ ಅವರ ವಿಷಯದಲ್ಲಿ ನಿನ್ನ ವಾಗ್ದಾನವನ್ನು ನೆರವೇರಿಸುವೆ. 15 ನಿನ್ನ ಸೇವಕನಾದ ದಾವೀದನಿಗೆ ನೀನು ಮಾಡಿದ ವಾಗ್ದಾನವನ್ನು ನೆರವೇರಿಸಿರುವೆ. ದಾವೀದನು ನನ್ನ ತಂದೆ. ಅವನಿಗೆ ನೀನು ವಾಗ್ದಾನವನ್ನು ಮಾಡಿರುವೆ. ಈ ದಿನ ನಿನ್ನ ವಾಗ್ದಾನವು ನಿನ್ನ ಹಸ್ತದ ಮೂಲಕ ನೆರವೇರಿತು. 16 ಇಸ್ರೇಲರ ದೇವರಾದ ಯೆಹೋವನೇ, ನೀನು ನನ್ನ ತಂದೆಯಾದ ದಾವೀದನಿಗೆ, ‘ನಿನ್ನ ಸಂತಾನದವರು ನಿನ್ನಂತೆ ನನ್ನ ಆಜ್ಞೆಗಳಿಗೆ ವಿಧೇಯರಾಗಿದ್ದರೆ, ನಿನ್ನ ಸಂತಾನದವರೇ ಇಸ್ರೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು.’ ಎಂದು ವಾಗ್ದಾನ ಮಾಡಿದೆಯಲ್ಲಾ? 17 ಇಸ್ರೇಲರ ದೇವರಾದ ಯೆಹೋವನೇ, ನೀನು ನಿನ್ನ ಸೇವಕನಾದ ದಾವೀದನಿಗೆ ಕೊಟ್ಟಿರುವ ನಿನ್ನ ವಾಗ್ದಾನವು ನೆರವೇರಲಿ.
18 “ದೇವರೇ, ನೀನು ಭೂಮಿಯ ಮೇಲೆ ಜನರೊಂದಿಗೆ ವಾಸಿಸುವವನಲ್ಲವೆಂದು ತಿಳಿದಿದ್ದೇವೆ. ಆಕಾಶಮಂಡಲವಾಗಲಿ ಅತ್ಯುನ್ನತವಾದ ಆಕಾಶವಾಗಲಿ ನಿನಗೆ ವಾಸಸ್ಥಾನವಾಗಲು ಸಾಧ್ಯವಿಲ್ಲ. ಈಗ ನಾನು ಕಟ್ಟಿರುವ ಈ ಆಲಯವು ಸಹ ನಿನ್ನ ವಾಸಕ್ಕೆ ಸಾಲದು. 19 ನನ್ನ ಪ್ರಾರ್ಥನೆಗೆ ಲಕ್ಷ್ಯಕೊಡು ಎಂದು ನಿನ್ನನ್ನು ಬೇಡುತ್ತೇನೆ. ದೇವರಾದ ಯೆಹೋವನೇ, ನನ್ನ ಬೇಡಿಕೆಗಳನ್ನು ಮತ್ತು ಸ್ತೋತ್ರಗಳನ್ನು ಲಾಲಿಸು. ನಾನು ನಿನ್ನ ಸೇವಕನಾಗಿದ್ದೇನೆ. 20 ನಿನ್ನ ಕಣ್ಣುಗಳು ಹಗಲಿರುಳು ಈ ಆಲಯವನ್ನು ದೃಷ್ಟಿಸುತ್ತಲೇ ಇರಲಿ. ನೀನು ನಿನ್ನ ನಾಮವನ್ನು ಇಲ್ಲಿ ಸ್ಥಾಪಿಸುತ್ತೇನೆ ಎಂದು ಹೇಳಿರುವೆ. ನಾನು ಈ ದೇವಾಲಯದ ಕಡೆಗೆ ತಿರುಗಿಕೊಂಡು ಪ್ರಾರ್ಥಿಸುವಾಗ ಆಲೈಸು. 21 ನಿನ್ನ ಜನರಾದ ಇಸ್ರೇಲರು ಮತ್ತು ನಾನು ಮಾಡುವ ಪ್ರಾರ್ಥನೆಯನ್ನು ಆಲೈಸು. ನಾವು ಈ ದೇವಾಲಯದ ಕಡೆಗೆ ತಿರುಗಿಕೊಂಡು ನಿನಗೆ ಪ್ರಾರ್ಥಿಸುವಾಗ ನಿನ್ನ ನಿವಾಸವಾದ ಪರಲೋಕದಿಂದ ನಮ್ಮ ಪ್ರಾರ್ಥನೆಯನ್ನು ಆಲೈಸು; ನಮ್ಮ ಪಾಪಗಳನ್ನು ಕ್ಷಮಿಸು.
22 “ಒಬ್ಬನು ಇನ್ನೊಬ್ಬನಿಗೆ ವಿರುದ್ಧವಾಗಿ ದುಷ್ಕೃತ್ಯ ನಡೆಸಿದ್ದರೂ ನಿನ್ನ ಯಜ್ಞವೇದಿಕೆಯ ಮುಂದೆ ಬಂದು ತಾನು ಮಾಡಿಲ್ಲವೆಂದು ನಿನ್ನ ಹೆಸರಿನಲ್ಲಿ ಪ್ರಮಾಣ ಮಾಡಿದರೆ 23 ಅದನ್ನು ನೀನು ಪರಲೋಕದಿಂದ ಆಲೈಸಿ ನಿನ್ನ ಸೇವಕರ ನ್ಯಾಯತೀರಿಸು. ಕೇಡುಮಾಡಿದವನನ್ನು ಶಿಕ್ಷಿಸು; ಅವನು ಇನ್ನೊಬ್ಬನಿಗೆ ಮಾಡಿದ ದುಷ್ಕೃತ್ಯವು ಅವನಿಗೇ ತಟ್ಟುವಂತೆ ಮಾಡು. ಯಾವನು ನಿರಪರಾಧಿಯೆಂಬುದನ್ನು ತೋರಿಸಿಕೊಟ್ಟು ಅವನ ನೀತಿಗೆ ತಕ್ಕಂತೆ ಪ್ರತಿಫಲ ಕೊಡು.
24 “ನಿನ್ನ ಜನರಾದ ಇಸ್ರೇಲರು ನಿನಗೆ ವಿರುದ್ಧವಾಗಿ ಪಾಪಮಾಡಿದಾಗ ವೈರಿಗಳು ಬಂದು ಅವರನ್ನು ಯುದ್ಧದಲ್ಲಿ ಸೋಲಿಸಿದರೂ ನಿನ್ನ ಜನರು ನಿನ್ನ ಕಡೆಗೆ ತಿರುಗಿ ತಮ್ಮ ಪಾಪಗಳನ್ನು ಒಪ್ಪಿಕೊಂಡು ಈ ದೇವಾಲಯಕ್ಕೆ ಬಂದು ನಿನ್ನ ಹೆಸರನ್ನು ಹೇಳಿಕೊಂಡು ನಿನಗೆ ಪ್ರಾರ್ಥಿಸಿ ಬೇಡಿಕೊಂಡರೆ 25 ಆಗ ನೀನು ಪರಲೋಕದಿಂದ ಅವರ ಮೊರೆಯನ್ನು ಲಾಲಿಸಿ, ನಿನ್ನ ಜನರ ಪಾಪಗಳನ್ನು ಮನ್ನಿಸು. ಅವರ ಪೂರ್ವಿಕರಿಗೆ ನೀನು ಕೊಟ್ಟ ದೇಶಕ್ಕೆ ಅವರನ್ನು ಮತ್ತೆ ಬರಮಾಡು.
26 “ನಿನ್ನ ಜನರಾದ ಇಸ್ರೇಲರು ನಿನಗೆ ವಿರುದ್ಧವಾಗಿ ಪಾಪಮಾಡಿದಾಗ ನೀನು ಆಕಾಶದಿಂದ ಮಳೆ ಬೀಳದಂತೆ ತಡೆದಾಗ ನಿನ್ನ ಜನರು ಪಶ್ಚಾತ್ತಾಪಪಟ್ಟು ಈ ದೇವಾಲಯದ ಕಡೆಗೆ ತಿರುಗಿ ನಿನ್ನನ್ನು ಪ್ರಾರ್ಥಿಸಿ ತಮ್ಮ ಪಾಪಗಳನ್ನು ಬಿಟ್ಟುಬಿಟ್ಟರೆ 27 ನೀನು ಪರಲೋಕದಿಂದ ಅವರನ್ನು ಆಲೈಸು. ಇಸ್ರೇಲರು ನಿನ್ನ ಸೇವಕರೂ ಪ್ರಜೆಗಳೂ ಆಗಿದ್ದಾರೆ. ಅವರು ಬದುಕುವಂತೆ ಸರಿಯಾದ ಮಾರ್ಗವನ್ನು ಅವರಿಗೆ ತೋರ್ಪಡಿಸು. ಅವರ ದೇಶದ ಮೇಲೆ ಮಳೆಯನ್ನು ಸುರಿಸು. ನಿನ್ನ ಜನರಿಗೆ ನೀನು ಆ ದೇಶವನ್ನೇ ಸ್ವಾಸ್ತ್ಯವಾಗಿ ಕೊಟ್ಟಿರುವೆ.
28 “ಆ ದೇಶದಲ್ಲಿ ಬರಗಾಲ ಬಂದಾಗ ಅಥವಾ ಸೋಂಕುರೋಗ ತಗಲಿದಾಗ, ಅಥವಾ ಮಿಡತೆಗಳಿಂದ ಬಾಧಿಸಲ್ಪಟ್ಟಾಗ, ವೈರಿಗಳು ಬಂದು ನಿನ್ನ ಜನರ ಮೇಲೆ ಅವರ ನಗರಗಳಲ್ಲಿಯೇ ಯುದ್ಧಮಾಡಿದಾಗ, ಅಥವಾ ಭಯಂಕರವಾದ ಕಾಯಿಲೆಯು ದೇಶದ ಜನರನ್ನು ಕಾಡಿದಾಗ 29 ತಮ್ಮ ಸಂಕಟಗಳ ಕುರಿತು ಈ ಆಲಯದ ಕಡೆಗೆ ಕೈಯೆತ್ತಿ ನಿನಗೆ ಮೊರೆಯಿಡುವದಾದರೆ, 30 ನೀನು ಪರಲೋಕದಿಂದ ಅವರ ಮೊರೆಯನ್ನು ಆಲೈಸಿ ಅವರ ಪ್ರಾರ್ಥನೆಗೆ ಉತ್ತರವನ್ನು ದಯಪಾಲಿಸು; ಪ್ರತಿಯೊಬ್ಬನಿಗೂ ತಕ್ಕ ಪ್ರತಿಫಲವನ್ನು ಕೊಡು. ಯಾಕೆಂದರೆ ಪ್ರತಿಯೊಬ್ಬನ ಹೃದಯವನ್ನು ನೀನೊಬ್ಬನೇ ತಿಳಿದಿರುವೆ. 31 ಆಗ, ನಮ್ಮ ಪೂರ್ವಿಕರಿಗೆ ನೀನು ಅನುಗ್ರಹಿಸಿದ ದೇಶದಲ್ಲಿರುವ ನಿನ್ನ ಜನರು ನಿನಗೆ ಭಯಭಕ್ತಿಯಿಂದ ಸೇವೆ ಮಾಡುವರು.
32 “ಇಸ್ರೇಲಿನವನಲ್ಲದ ಪರದೇಶಿಯು ನಿನ್ನ ಪರಾಕ್ರಮವನ್ನೂ ನಿನ್ನ ಸಾಮರ್ಥ್ಯವನ್ನೂ ಕಂಡು ಕೇಳಿ ಇಲ್ಲಿಗೆ ಬಂದು ಈ ಆಲಯದ ಮುಂದೆ ನಿಂತುಕೊಂಡು ನಿನಗೆ ಪ್ರಾರ್ಥಿಸುವದಾದರೆ, 33 ಪರಲೋಕದಲ್ಲಿ ವಾಸಿಸುವ ನೀನು ಆ ಪರದೇಶಿಯ ಪ್ರಾರ್ಥನೆಯನ್ನು ಕೇಳಿ ಉತ್ತರಿಸು. ಆಗ ಇಸ್ರೇಲ್ ಜನರಂತೆ ಈ ಲೋಕದಲ್ಲಿರುವ ಜನರೆಲ್ಲಾ ನಿನ್ನ ವಿಷಯ ಕೇಳಿ ನಿನ್ನನ್ನು ಗೌರವಿಸುವರು. ನಾನು ಕಟ್ಟಿದ ಈ ದೇವಾಲಯವು ನಿನ್ನ ಹೆಸರಿನಿಂದ ಕರೆಯಲ್ಪಟ್ಟಿದೆ ಎಂಬದು ಆಗ ಅವರಿಗೆ ಗೊತ್ತಾಗುವುದು.
34 “ನೀನು ನಿನ್ನ ಜನರನ್ನು ಅವರ ವೈರಿಗಳ ವಿರುದ್ಧವಾಗಿ ಯುದ್ಧಮಾಡಲು ಒಂದು ಸ್ಥಳಕ್ಕೆ ಕಳುಹಿಸುವಾಗ ನೀನು ಆರಿಸಿಕೊಂಡ ಈ ಪಟ್ಟಣದ ಕಡೆಗೂ ನಿನ್ನ ಹೆಸರಿಗಾಗಿ ನಾನು ಕಟ್ಟಿದ ಈ ದೇವಾಲಯದ ಕಡೆಗೂ ಅವರು ತಿರುಗಿಕೊಂಡು ನಿನಗೆ ಪ್ರಾರ್ಥಿಸಿದರೆ 35 ಪರಲೋಕದಿಂದ ನೀನು ಅವರ ಪ್ರಾರ್ಥನೆಯನ್ನು ಕೇಳಿ ಅವರಿಗೆ ಸಹಾಯ ಮಾಡು.
36 “ಜನರು ನಿನಗೆ ವಿರುದ್ಧವಾಗಿ ಪಾಪಮಾಡಬಹುದು; ಪಾಪಮಾಡದೆ ಇರುವವನು ಯಾವನೂ ಇಲ್ಲ. ಆಗ ನೀನು ಅವರ ಮೇಲೆ ಉರಿಗೊಂಡು ಅವರನ್ನು ಶಿಕ್ಷಿಸಲು ನೀನು ವೈರಿಗಳನ್ನು ಅವರ ಮೇಲೆ ಕಳುಹಿಸಿ ಅವರನ್ನು ಸೆರೆಹಿಡಿದು ದೂರದೇಶಕ್ಕೆ ಒಯ್ಯಲ್ಪಡುವಂತೆ ಮಾಡಿದಾಗ 37 ಒಂದುವೇಳೆ ಅವರು ಪಶ್ಚಾತ್ತಾಪಪಟ್ಟು ನಿನ್ನ ಕಡೆಗೆ ತಿರುಗಿಕೊಂಡು ತಾವು ಸೆರೆಯಲ್ಲಿರುವ ದೇಶದಿಂದ ನಿನಗೆ ಮೊರೆಯಿಟ್ಟು, ‘ನಿನಗೆ ವಿರುದ್ಧವಾಗಿ ನಾವು ಪಾಪಮಾಡಿದ್ದೇವೆ. ನಾವು ದುಷ್ಟತ್ವದಲ್ಲಿ ಜೀವಿಸಿದ್ದೇವೆ’ ಎಂದು ಅರಿಕೆಮಾಡಿ 38 ತಮ್ಮ ಹೃದಯಪೂರ್ವಕವಾಗಿ ತಮ್ಮ ದೇಶದ ಕಡೆಗೆ, ಅಂದರೆ ನೀನು ಅವರ ಪೂರ್ವಿಕರಿಗೆ ಕೊಟ್ಟ ಈ ದೇಶದ ಕಡೆಗೂ ನೀನು ಆರಿಸಿಕೊಂಡ ಪಟ್ಟಣದ ಕಡೆಗೂ ನಿನ್ನ ಹೆಸರಿಗಾಗಿ ನಾನು ಕಟ್ಟಿಸಿದ ಈ ದೇವಾಲಯದ ಕಡೆಗೂ ಮುಖಮಾಡಿಕೊಂಡು ಪ್ರಾರ್ಥಿಸುವಾಗ, 39 ನಿನ್ನ ವಾಸಸ್ಥಾನವಾಗಿರುವ ಪರಲೋಕದಿಂದ ನೀನು ಅವರ ಪ್ರಾರ್ಥನೆಯನ್ನು ಕೇಳಿ ಅವರಿಗೆ ಸಹಾಯಮಾಡು. ನಿನಗೆ ವಿರುದ್ಧವಾಗಿ ಪಾಪಮಾಡಿದವರನ್ನು ಕ್ಷಮಿಸು. 40 ನನ್ನ ದೇವರೇ, ಈ ಸ್ಥಳದಲ್ಲಿ ಪ್ರಾರ್ಥಿಸುವ ನಮ್ಮನ್ನು ವೀಕ್ಷಿಸಿ ನಮ್ಮ ಪ್ರಾರ್ಥನೆಗೆ ಕಿವಿಗೊಡು.
41 “ದೇವರಾದ ಯೆಹೋವನೇ, ಎದ್ದು ನಿನ್ನ ಸಾಮರ್ಥ್ಯವನ್ನು
ತೋರಿಸುವ ಒಡಂಬಡಿಕೆಯ ಪೆಟ್ಟಿಗೆಯೊಡನೆ ನಿನ್ನ ವಾಸಸ್ಥಳಕ್ಕೆ ಬಾ.
ನಿನ್ನ ಯಾಜಕರು ರಕ್ಷಣಾವಸ್ತ್ರವನ್ನು ಧರಿಸಿಕೊಂಡಿರಲಿ;
ನಿನ್ನನ್ನು ಪ್ರೀತಿಸುವವರು ನಿನ್ನ ಒಳ್ಳೆಯತನದಲ್ಲಿ ಸಂತೋಷಪಡಲಿ.
42 ದೇವರಾದ ಯೆಹೋವನೇ, ನಿನ್ನಿಂದ ಅಭಿಷೇಕಿಸಲ್ಪಟ್ಟಿರುವ ಅರಸನನ್ನು ತಳ್ಳಿಬಿಡಬೇಡ.
ನಿನಗೆ ನಂಬಿಗಸ್ತನಾದ ಸೇವಕನಾಗಿದ್ದ ದಾವೀದನನ್ನು ನೆನಪುಮಾಡಿಕೊ”
ಎಂದು ಪ್ರಾರ್ಥಿಸಿದನು.
ದೇವಾಲಯದ ಪ್ರತಿಷ್ಠೆ
7 ಸೊಲೊಮೋನನು ಪ್ರಾರ್ಥಿಸುವದನ್ನು ನಿಲ್ಲಿಸಿದ ಕೂಡಲೇ ಆಕಾಶದಿಂದ ಬೆಂಕಿಯು ಬಂದು ಯಜ್ಞವೇದಿಕೆಯ ಮೇಲಿದ್ದ ಸರ್ವಾಂಗಹೋಮಗಳನ್ನೂ ಯಜ್ಞಮಾಂಸವನ್ನೂ ದಹಿಸಿಬಿಟ್ಟಿತು. ಯೆಹೋವನ ಮಹಿಮೆಯು ದೇವಾಲಯದಲ್ಲಿ ತುಂಬಿತು. 2 ದೇವಾಲಯದಲ್ಲಿ ತುಂಬಲ್ಪಟ್ಟ ಮಹಿಮೆಯಿಂದಾಗಿ ಯಾಜಕರಿಗೆ ದೇವಾಲಯದೊಳಗೆ ಪ್ರವೇಶಿಸಲು ಆಗದೆ ಹೋಯಿತು. 3 ಸೇರಿಬಂದ ಇಸ್ರೇಲ್ ಜನರೆಲ್ಲಾ ಆಕಾಶದಿಂದ ಬೆಂಕಿ ಬೀಳುವದನ್ನೂ ದೇವಾಲಯದಲ್ಲಿ ಯೆಹೋವನ ಮಹಿಮೆ ತುಂಬಿದ್ದನ್ನೂ ನೋಡಿ ನೆಲದ ಮೇಲೆ ಬೋರಲಬಿದ್ದು
“ಯೆಹೋವನು ಒಳ್ಳೆಯವನು,
ಅವನ ಕರುಣೆಯು ನಿರಂತರಕ್ಕೂ ಇರುವಂಥದ್ದು”
ಎಂದು ಹೇಳುತ್ತಾ ದೇವರನ್ನು ಸುತ್ತಿಸಿ ಕೊಂಡಾಡಿದರು.
4 ಅನಂತರ ಅರಸನಾದ ಸೊಲೊಮೋನನೂ ಇಸ್ರೇಲಿನ ಎಲ್ಲಾ ಜನರೂ ಯೆಹೋವನ ಮುಂದೆ ಯಜ್ಞವನ್ನು ಸಮರ್ಪಿಸಿದರು. 5 ಸೊಲೊಮೋನ ಅರಸನು ಇಪ್ಪತ್ತೆರಡು ಸಾವಿರ ಹೋರಿಗಳನ್ನೂ ಒಂದು ಲಕ್ಷ ಇಪ್ಪತ್ತು ಸಾವಿರ ಕುರಿಗಳನ್ನೂ ಯಜ್ಞವಾಗಿ ಸಮರ್ಪಿಸಿದನು. ಅರಸನೂ ಎಲ್ಲಾ ಜನರೂ ದೇವಾಲಯವನ್ನು ಆರಾಧನೆಗಾಗಿ ಪ್ರತಿಷ್ಠಿಸಿದರು. 6 ಯಾಜಕರು ತಮ್ಮ ಕೆಲಸಗಳನ್ನು ಮಾಡಲು ತಮ್ಮ ತಮ್ಮ ಸ್ಥಳಗಳಲ್ಲಿ ತಯಾರಾಗಿ ನಿಂತಿದ್ದರು. ಲೇವಿಕುಲದ ಗಾಯಕರು ತಮ್ಮ ವಾದ್ಯಗಳೊಂದಿಗೆ ದೇವರನ್ನು ಸ್ತುತಿಸಲು ನಿಂತಿದ್ದರು. ಆ ವಾದ್ಯಗಳನ್ನು ಅರಸನಾದ ದಾವೀದನು ದೇವರನ್ನು ಸ್ತುತಿಸುವದಕ್ಕೋಸ್ಕರ ತಯಾರಿಸಿದ್ದನು. ಯಾಜಕರೂ ಲೇವಿಯರೂ, “ದೇವರಾದ ಯೆಹೋವನ ಕೃಪೆಯು ನಿರಂತರವಾದದ್ದು” ಎಂದು ಹೇಳುತ್ತಿದ್ದರು. ಯಾಜಕರು ಲೇವಿಯರಿಗೆ ಎದುರಾಗಿ ನಿಂತುಕೊಂಡು ತುತ್ತೂರಿಯನ್ನು ಊದಿದರು. ಇಸ್ರೇಲರೆಲ್ಲರೂ ನಿಂತುಕೊಂಡರು.
7 ಆಲಯದ ಮುಂದೆ ಇದ್ದ ಅಂಗಳವನ್ನು ಸೊಲೊಮೋನನು ಶುದ್ಧೀಕರಿಸಿದನು. ಆ ಸ್ಥಳದಲ್ಲಿ ಸೊಲೊಮೋನನು ಸರ್ವಾಂಗಹೋಮಗಳನ್ನೂ ಧಾನ್ಯನೈವೇದ್ಯಗಳನ್ನೂ ಸಮಾಧಾನಯಜ್ಞದ ಕೊಬ್ಬನ್ನೂ ಸಮರ್ಪಿಸಿದ್ದನು. ಯಾಕೆಂದರೆ ಸೊಲೊಮೋನನು ಮಾಡಿಸಿದ ತಾಮ್ರದ ಯಜ್ಞವೇದಿಕೆಯ ಮೇಲೆ ಇಷ್ಟೆಲ್ಲಾ ಸರ್ವಾಂಗಹೋಮಗಳನ್ನೂ ಧಾನ್ಯನೈವೇದ್ಯಗಳನ್ನೂ ಸಮಾಧಾನಯಜ್ಞದ ಕೊಬ್ಬನ್ನೂ ಸಮರ್ಪಿಸಲು ಆಗದೆಹೋಯಿತು.
8 ಸೊಲೊಮೋನನೂ ಎಲ್ಲಾ ಇಸ್ರೇಲರೂ ಏಳು ದಿನಗಳ ತನಕ ಪರ್ಣಶಾಲೆಗಳ ಹಬ್ಬವನ್ನು ಆಚರಿಸಿದರು. ಸೊಲೊಮೋನನೊಂದಿಗೆ ಬಹುದೊಡ್ಡ ಇಸ್ರೇಲರ ಸಮೂಹವು ನೆರೆದು ಬಂದಿತ್ತು. ಹಮಾತಿನಿಂದ ಹಿಡಿದು ಈಜಿಪ್ಟಿನ ನದಿಯ ತನಕ ವಾಸಿಸುವವರೆಲ್ಲರೂ ಜೆರುಸಲೇಮಿಗೆ ಬಂದಿದ್ದರು. 9 ಏಳು ದಿನ ಹಬ್ಬದ ಆಚರಣೆಯ ಬಳಿಕ ಎಂಟನೆಯ ದಿನವನ್ನು ಪವಿತ್ರ ದಿನವನ್ನಾಗಿ ಆಚರಿಸಿದರು. ಅವರು ಯಜ್ಞವೇದಿಕೆಯನ್ನು ಯೆಹೋವನ ಆರಾಧನೆಗೋಸ್ಕರ ಪ್ರತಿಷ್ಠಿಸಿದರು. ಹಬ್ಬವನ್ನು ಏಳು ದಿನಗಳ ತನಕ ಆಚರಿಸಿದರು. 10 ಏಳನೆಯ ತಿಂಗಳಿನ ಇಪ್ಪತ್ತಮೂರನೆಯ ದಿನದಂದು ಸೊಲೊಮೋನನು ನೆರೆದು ಬಂದಿದ್ದ ಜನರನ್ನು ಅವರ ಮನೆಗಳಿಗೆ ಕಳುಹಿಸಿದನು. ದೇವರಾದ ಯೆಹೋವನು ದಾವೀದನಿಗೂ ಅವನ ಮಗನಾದ ಸೊಲೊಮೋನನಿಗೂ ಮತ್ತು ಎಲ್ಲಾ ಇಸ್ರೇಲರಿಗೂ ಕರುಣೆಯನ್ನು ತೋರಿಸಿದ್ದಕ್ಕಾಗಿ ಜನರೆಲ್ಲರೂ ಹರ್ಷಿಸುತ್ತಾ ತಮ್ಮತಮ್ಮ ಮನೆಗಳಿಗೆ ಹಿಂತಿರುಗಿದರು.
ಸೊಲೊಮೋನನಿಗೆ ದೇವರು ಪ್ರತ್ಯಕ್ಷನಾದದ್ದು
11 ಸೊಲೊಮೋನನು ತಾನು ಯೋಜಿಸಿದ ರೀತಿಯಲ್ಲಿ ದೇವಾಲಯವನ್ನೂ ಅರಮನೆಯನ್ನೂ ಕಟ್ಟಿ ಮುಗಿಸಿದನು. 12 ಆ ಬಳಿಕ ಯೆಹೋವನು ರಾತ್ರಿಯಲ್ಲಿ ಸೊಲೊಮೋನನಿಗೆ ಕಾಣಿಸಿಕೊಂಡು,
“ಸೊಲೊಮೋನನೇ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ. ನಾನು ಈ ಆಲಯವನ್ನು ಯಜ್ಞಾಲಯಕ್ಕಾಗಿ ಆರಿಸಿಕೊಂಡಿರುತ್ತೇನೆ. 13 ನಾನು ಮಳೆ ಬಾರದಂತೆ ಆಕಾಶವನ್ನು ಮುಚ್ಚಿದರೆ, ಅಥವಾ ಮಿಡತೆಗಳಿಗೆ ದೇಶವನ್ನು ಹಾಳುಮಾಡಲು ಅಪ್ಪಣೆಕೊಟ್ಟರೆ ಅಥವಾ ಜನರಿಗೆ ರೋಗವನ್ನು ಬರಮಾಡಿದರೆ 14 ನನ್ನ ಹೆಸರಿನಿಂದ ಕರೆಯಲ್ಪಡುವ ನನ್ನ ಜನರು ದೀನತೆಯಿಂದ ಪ್ರಾರ್ಥಿಸಿ, ತಮ್ಮ ಪಾಪಗಳನ್ನು ಬಿಟ್ಟು ನನ್ನ ಕಡೆಗೆ ತಿರುಗಿದರೆ ನಾನು ಪರಲೋಕದಿಂದ ಅವರನ್ನು ಆಲೈಸಿ, ಅವರ ಪಾಪಗಳನ್ನು ಮನ್ನಿಸಿ ಅವರ ದೇಶವನ್ನು ಗುಣಪಡಿಸುವೆನು. 15 ನಿಮ್ಮನ್ನು ದೃಷ್ಟಿಸಿ ನಿಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುವೆನು. 16 ನನ್ನ ನಾಮದ ಮಹತ್ವ ಶಾಶ್ವತವಾಗಿರಬೇಕೆಂದು ನಾನು ಈ ಆಲಯವನ್ನು ಆರಿಸಿಕೊಂಡು ಶುದ್ಧೀಕರಿಸಿದ್ದೇನೆ. ಹೌದು, ನನ್ನ ದೃಷ್ಟಿಯೂ ನನ್ನ ಹೃದಯವೂ ಸದಾಕಾಲ ಈ ಆಲಯದ ಮೇಲೆ ನೆಲೆಸಿರುತ್ತದೆ. 17 ಸೊಲೊಮೋನನೇ, ನಿನ್ನ ತಂದೆಯಾದ ದಾವೀದನು ಹೇಗೆ ಜೀವಿಸಿದನೋ ಅದೇ ಪ್ರಕಾರ ನೀನು ನನ್ನೆದುರಿನಲ್ಲಿ ಜೀವಿಸಿ, ನನ್ನ ಅಪ್ಪಣೆಗಳನ್ನು ಕೈಕೊಂಡು, ನನ್ನ ವಿಧಿನಿಯಮಗಳಿಗೆ ವಿಧೇಯನಾಗುವದಾದರೆ, 18 ನಾನು ನಿನ್ನನ್ನು ಬಲಿಷ್ಠನಾದ ಅರಸನನ್ನಾಗಿ ಮಾಡುವೆನು. ನಿನ್ನ ರಾಜ್ಯವು ಮಹಾರಾಜ್ಯವಾಗುವದು. ನಿನ್ನ ತಂದೆಯಾದ ದಾವೀದನಿಗೆ, ‘ದಾವೀದನೇ, ನಿನ್ನ ಕುಟುಂಬದವರಲ್ಲಿ ಒಬ್ಬನು ಯಾವಾಗಲೂ ಇಸ್ರೇಲಿನ ರಾಜನಾಗಿರುವನು’ ಎಂದು ನಾನು ವಾಗ್ದಾನ ಮಾಡಿದ್ದೇನೆ.
19 “ಆದರೆ ನಾನು ಕೊಟ್ಟ ಕಟ್ಟಳೆಗಳನ್ನು ಮತ್ತು ಆಜ್ಞೆಗಳನ್ನು ನೀನು ಮೀರಿ ಇತರ ದೇವರುಗಳನ್ನು ಪೂಜಿಸಿದರೆ, 20 ನಾನು ಇಸ್ರೇಲರನ್ನು ಅವರಿಗೆ ಕೊಟ್ಟಿರುವ ದೇಶದಿಂದ ತೆಗೆದುಹಾಕುವೆನು; ನನ್ನ ಹೆಸರಿಗೋಸ್ಕರ ಪವಿತ್ರ ಮಾಡಿದ ಈ ದೇವಾಲಯವನ್ನು ತೊರೆದುಬಿಡುವೆನು. ಈ ದೇವಾಲಯದ ಬಗ್ಗೆ ಲೋಕದ ಜನರು ಗೇಲಿಮಾಡುವಂತೆ ಮಾಡುವೆನು. 21 ಅತ್ಯಂತ ಪ್ರಸಿದ್ಧಿಹೊಂದಿದ ಈ ದೇವಾಲಯವನ್ನು ನೋಡುವ ಪ್ರತಿಯೊಬ್ಬನು, ‘ದೇವರು ಈ ದೇಶಕ್ಕೆ ಮತ್ತು ಈ ಆಲಯಕ್ಕೆ ಹೀಗೇಕೆ ಮಾಡಿದನು?’ ಎಂದು ಅಚ್ಚರಿಪಡುವಂತೆ ಮಾಡುವೆನು. 22 ಆಗ ಜನರು, ‘ಯಾಕೆಂದರೆ ಇಸ್ರೇಲರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ಆತನು ಅವರನ್ನು ಈಜಿಪ್ಟಿನಿಂದ ಬಿಡಿಸಿ ಹೊರತಂದನು. ಆದರೆ ಅವರು ಬೇರೆ ದೇವರುಗಳನ್ನು ಪೂಜಿಸಿ ಅವುಗಳ ಸೇವೆಮಾಡಿದರು. ಆದ್ದರಿಂದಲೇ ಭಯಂಕರವಾದ ಈ ಸಂಕಟಗಳನ್ನೆಲ್ಲ ದೇವರು ಇಸ್ರೇಲರಿಗೆ ಬರಮಾಡಿದನು’ ಎಂದು ಹೇಳುವರು” ಅಂದನು.
ಸೊಲೊಮೋನನು ಕಟ್ಟಿದ ಪಟ್ಟಣಗಳು
8 ದೇವಾಲಯವನ್ನೂ ತನ್ನ ಅರಮನೆಯನ್ನೂ ಕಟ್ಟಲು ಸೊಲೊಮೋನನಿಗೆ ಇಪ್ಪತ್ತು ವರ್ಷಗಳು ಬೇಕಾದವು. 2 ಅನಂತರ ಹೂರಾಮನು ಕೊಟ್ಟ ಪಟ್ಟಣಗಳನ್ನು ಭದ್ರಪಡಿಸಿ ಕೆಲವು ಇಸ್ರೇಲರು ಅಲ್ಲಿ ವಾಸಿಸುವಂತೆ ಮಾಡಿದನು. 3 ಇದಾದ ಬಳಿಕ ಸೊಲೊಮೋನನು ಚೋಬದ ಹಮಾತ್ ಎಂಬಲ್ಲಿಗೆ ಹೋಗಿ ಅದನ್ನು ವಶಪಡಿಸಿಕೊಂಡನು. 4 ಅರಣ್ಯದಲ್ಲಿದ್ದ ತದ್ಮೋರ್ ಎಂಬ ಪಟ್ಟಣವನ್ನು ಸೊಲೊಮೋನನು ಕಟ್ಟಿದನು. ಆಮೇಲೆ ಹಮಾತಿನ ಎಲ್ಲಾ ಪಟ್ಟಣಗಳನ್ನು ಉಗ್ರಾಣ ಪಟ್ಟಣಗಳನ್ನಾಗಿ ಮಾಡಿದನು. 5 ಮೇಲಿನ ಬೇತ್ಹೋರೋನ್ ಮತ್ತು ಕೆಳಗಿನ ಬೇತ್ಹೋರೋನ್ ಎಂಬ ನಗರಗಳನ್ನು ಸೊಲೊಮೋನನು ಬಲವಾದ ಕೋಟೆಯ ನಗರಗಳನ್ನಾಗಿ ಮತ್ತೆ ಕಟ್ಟಿದನು. ಆ ನಗರಗಳನ್ನು ಕೋಟೆ, ಕದ ಮತ್ತು ಹೆಬ್ಬಾಗಿಲುಗಳಿಂದ ಬಲಗೊಳಿಸಿದನು. 6 ಅಲ್ಲದೆ, ಬಾಲಾತ್ ಪಟ್ಟಣ ಮತ್ತು ಇನ್ನಿತರ ಪಟ್ಟಣಗಳನ್ನು ಉಗ್ರಾಣ ನಗರಗಳನ್ನಾಗಿ ಮಾಡಿದನು. ಅವನು ರಥಗಳನ್ನು ಇಡುವದಕ್ಕಾಗಿಯೂ ಮತ್ತು ರಾಹುತರ ವಾಸಕ್ಕಾಗಿಯೂ ಪಟ್ಟಣಗಳನ್ನು ಕಟ್ಟಿಸಿದನು. ಜೆರುಸಲೇಮಿನಲ್ಲಿಯೂ ಲೆಬನೋನಿನಲ್ಲಿಯೂ ಮತ್ತು ತನ್ನ ಆಡಳಿತದಲ್ಲಿದ್ದ ದೇಶಗಳಲ್ಲಿಯೂ ಸೊಲೊಮೋನನು ತನ್ನ ಇಷ್ಟದ ಪ್ರಕಾರ ಕಟ್ಟಿಸಿದನು.
7-8 ಇಸ್ರೇಲರು ಇದ್ದ ದೇಶದಲ್ಲಿ ಅನ್ಯ ಜನರಾದ ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ವಾಸಿಸುತ್ತಿದ್ದರು. ಇವರನ್ನೆಲ್ಲಾ ಸೊಲೊಮೋನನು ಗುಲಾಮರನ್ನಾಗಿ ಉಪಯೋಗಿಸಿದನು. ಈ ಜನರು ಇಸ್ರೇಲರಾಗಿರಲಿಲ್ಲ. ಇಸ್ರೇಲರು ದೇಶವನ್ನು ವಶಪಡಿಸಿಕೊಂಡಾಗ ಅಲ್ಲಿದ್ದ ನಿವಾಸಿಗಳನ್ನು ಓಡಿಸದೆ ಬಿಟ್ಟವರ ಸಂತತಿಯವರಾಗಿದ್ದರು. ಅವರು ಈಗಲೂ ಅಲ್ಲಿಯೇ ಇದ್ದಾರೆ. 9 ಸೊಲೊಮೋನನು ಇಸ್ರೇಲರಲ್ಲಿ ಯಾರನ್ನೂ ಗುಲಾಮರನ್ನಾಗಿ ಮಾಡಲಿಲ್ಲ. ಇಸ್ರೇಲರು ಸೊಲೊಮೋನನ ಯುದ್ಧವೀರರಾಗಿದ್ದರು. ಅವರು ಸೊಲೊಮೋನನ ಸೈನಕ್ಕೂ ರಥಾಶ್ವಗಳಿಗೂ ಸಾರಧಿಗಳಿಗೂ ಮಹಾದಂಡನಾಯಕರಾಗಿದ್ದರು. 10 ಇನ್ನು ಕೆಲವರು ಮುಖ್ಯಾಧಿಕಾರಿಗಳಿಗೆ ಅಧಿಪತಿಗಳಾಗಿದ್ದರು. ಜನಸೇವೆಗಾಗಿ ಈ ರೀತಿಯ 250 ಅಧಿಪತಿಗಳಿದ್ದರು.
11 ಸೊಲೊಮೋನನು ದಾವೀದ ನಗರದಲ್ಲಿದ್ದ ಫರೋಹನ ಕುಮಾರ್ತೆಯನ್ನು ಆಕೆಗಾಗಿ ಕಟ್ಟಿದ ಅರಮನೆಗೆ ಕರೆಸಿದನು. “ನನ್ನ ಹೆಂಡತಿಯು ದಾವೀದನ ಮನೆಯಲ್ಲಿ ವಾಸಿಸಬಾರದು. ಯಾಕೆಂದರೆ ದೇವರ ಒಡಂಬಡಿಕೆಯ ಪೆಟ್ಟಿಗೆ ಇರುವ ಸ್ಥಳಗಳು ಪರಿಶುದ್ಧವಾಗಿವೆ” ಎಂದು ಸೊಲೊಮೋನನು ಅಂದುಕೊಂಡನು.
12 ಅನಂತರ ಸೊಲೊಮೋನನು ದೇವಾಲಯದ ಮಂಟಪದ ಮುಂದೆ ತಾನು ಕಟ್ಟಿಸಿದ ಯಜ್ಞವೇದಿಕೆಯ ಮೇಲೆ ಯೆಹೋವನಿಗೆ ಸರ್ವಾಂಗಹೋಮಗಳನ್ನು ಅರ್ಪಿಸಿದನು. 13 ಮೋಶೆಯ ಅಪ್ಪಣೆಯ ಪ್ರಕಾರ ಪ್ರತಿನಿತ್ಯವೂ ಸಬ್ಬತ್ದಿನಗಳಲ್ಲಿಯೂ ಅಮಾವಾಸ್ಯೆಯ ದಿನಗಳಲ್ಲಿಯೂ ವರ್ಷದ ಮೂರು ಹಬ್ಬದ ದಿನಗಳಲ್ಲಿಯೂ (ಹುಳಿಯಿಲ್ಲದ ರೊಟ್ಟಿಯ ಹಬ್ಬ, ವಾರಗಳ ಹಬ್ಬ ಮತ್ತು ಪರ್ಣಶಾಲೆಗಳ ಹಬ್ಬ) ಆಯಾ ದಿನಗಳಲ್ಲಿ ಯಜ್ಞಗಳನ್ನು ಸಮರ್ಪಿಸುತ್ತಿದ್ದನು. 14 ದಾವೀದನು ಹೇಳಿದ ಪ್ರಕಾರ ಸೊಲೊಮೋನನು ಯಾಜಕರನ್ನು ಸರದಿಯ ಪ್ರಕಾರ ಸೇವೆಗೆ ನೇಮಿಸಿದನು. ಲೇವಿಯರನ್ನು ಆಯಾಕೆಲಸಕ್ಕೆ ನೇಮಿಸಿದನು. ಅವರು ಗಾಯನದಲ್ಲಿಯೂ ಯಾಜಕರ ಕೆಲಸಗಳಲ್ಲಿ ಸಹಾಯಕರಾಗಿಯೂ ದೇವಾಲಯದ ಕೆಲಸದಲ್ಲಿ ಪಾಲುತೆಗೆದುಕೊಂಡರು. ದ್ವಾರಪಾಲಕರ ಕೆಲಸಕ್ಕೆ ಸೊಲೊಮೋನನು ಜನರನ್ನು ಆರಿಸಿ ದ್ವಾರಗಳನ್ನು ಕಾಯುವುದಕ್ಕೆ ಅವರನ್ನು ನೇಮಿಸಿದನು. ದೇವಮನುಷ್ಯನಾದ ದಾವೀದನು ಹೀಗೆಯೇ ಮಾಡಬೇಕೆಂದು ತಿಳಿಸಿದ್ದನು. 15 ಸೊಲೊಮೋನನು ಯಾಜಕರಿಗಾಗಲಿ ಲೇವಿಯರಿಗಾಗಲಿ ಕೊಟ್ಟ ಆಜ್ಞೆಗಳನ್ನು ಯಾರೂ ಬದಲಿಸಲಿಲ್ಲ; ಅವುಗಳಿಗೆ ಯಾರೂ ಅವಿಧೇಯರಾಗಲಿಲ್ಲ; ಬೆಲೆಬಾಳುವ ವಸ್ತುಗಳ ಸಂಗ್ರಹಣ ಕಾರ್ಯದಲ್ಲೂ ಅವರು ಜಾಗರೂಕರಾಗಿದ್ದರು.
16 ದೇವಾಲಯವನ್ನು ಕಟ್ಟುವ ಕಾರ್ಯವು ಪ್ರಾರಂಭದಿಂದ ಹಿಡಿದು ಕೊನೆಯತನಕ ಎಲ್ಲವೂ ಯೋಜನೆಗನುಸಾರವಾಗಿ ನಡೆಯಿತು. ಹೀಗೆ ದೇವಾಲಯದ ಕಾರ್ಯವೆಲ್ಲಾ ಮುಕ್ತಾಯವಾಯಿತು.
17 ಆ ಬಳಿಕ ಸೊಲೊಮೋನನು ಎದೋಮ್ ದೇಶದ ಕೆಂಪುಸಮುದ್ರದ ತೀರದಲ್ಲಿದ್ದ ಎಚ್ಯೋನ್ಗೆಬೆರ್ ಮತ್ತು ಏಲೋತ್ ಎಂಬ ಪಟ್ಟಣಗಳಿಗೆ ಹೋದನು. 18 ಹೂರಾಮನು ಸೊಲೊಮೋನನಿಗೋಸ್ಕರ ಹಡಗುಗಳನ್ನು ಕಳುಹಿಸಿದನು. ಅವನ ಜನರೇ ಅದನ್ನು ನಡೆಸಿದರು. ಅವರು ಒಳ್ಳೆಯ ನುರಿತ ನಾವಿಕರಾಗಿದ್ದರು. ಹೂರಾಮನ ನಾವಿಕರು ಸೊಲೊಮೋನನ ಸೇವಕರೊಂದಿಗೆ ಓಫೀರ್ ದೇಶಕ್ಕೆ ಹೋಗಿ ಅಲ್ಲಿಂದ ಹದಿನೇಳು ಟನ್ ಬಂಗಾರವನ್ನು ಸೊಲೊಮೋನನಿಗೆ ತಂದುಕೊಟ್ಟರು.
Kannada Holy Bible: Easy-to-Read Version. All rights reserved. © 1997 Bible League International