Beginning
ಸೌಲನ ಸೈನ್ಯಾಧಿಪತಿಗಳಾಗಿದ್ದ ಬಾಣ ಮತ್ತು ರೇಕಾಬ್
4 ಹೆಬ್ರೋನಿನಲ್ಲಿ ಅಬ್ನೇರನು ಸತ್ತನೆಂಬುದು ಸೌಲನ ಮಗನಾದ ಈಷ್ಬೋಶೆತನಿಗೆ ತಿಳಿಯಿತು. ಈಷ್ಬೋಶೆತನು ಮತ್ತು ಅವನ ಜನರು ಬಹಳ ಭಯಗೊಂಡರು. 2 ಬಾಣ ಮತ್ತು ರೇಕಾಬ್ ಎಂಬವರು ಸೌಲನ ಮಗನ ಸೈನ್ಯದಲ್ಲಿ, ಸೇನಾಧಿಪತಿಗಳಾಗಿದ್ದರು. ಅವರಿಬ್ಬರೂ ಬೇರೋತಿನವನಾದ ರಿಮ್ಮೋನನ ಮಕ್ಕಳು. ಅವರು ಬೆನ್ಯಾಮೀನ್ ಕುಲದವರಾಗಿದ್ದರು. ಬೇರೋತ್ ಪಟ್ಟಣವು ಬೆನ್ಯಾಮೀನ್ ಕುಲದವರಿಗೆ ಸೇರಿತ್ತು. 3 ಬೇರೋತಿನ ಜನರು ಗಿತ್ತಯಿಮಿಗೆ ಓಡಿಹೋದರು. ಅವರು ಇವತ್ತಿನವರೆಗೂ ಅಲ್ಲಿ ನೆಲೆಸಿದ್ದಾರೆ.
4 ಸೌಲನ ಮಗನಾದ ಯೋನಾತಾನನಿಗೆ ಮೆಫೀಬೋಶೆತನೆಂಬ ಒಬ್ಬ ಮಗನಿದ್ದನು. ಸೌಲನು ಮತ್ತು ಯೋನಾತಾನನು ಇಜ್ರೇಲಿನಲ್ಲಿ ಸತ್ತರೆಂಬ ವರ್ತಮಾನವು ಬಂದಾಗ ಯೋನಾತಾನನ ಮಗನಿಗೆ ಐದು ವರ್ಷವಾಗಿತ್ತು. ಅವನನ್ನು ಸಾಕುತ್ತಿದ್ದ ದಾದಿಯು ಭಯಪಟ್ಟು ಅವನನ್ನು ಎತ್ತಿಕೊಂಡು ಓಡತೊಡಗಿದಳು. ಆ ದಾದಿಯು ಅವಸರದಿಂದ ಓಡಿಹೋಗುತ್ತಿದ್ದಾಗ, ಯೋನಾತಾನನ ಮಗನು ಅವಳ ತೋಳುಗಳಿಂದ ಕೆಳಕ್ಕೆ ಬಿದ್ದನು. ಹೀಗೆ ಕೆಳಗೆ ಬಿದ್ದ ಯೋನಾತಾನನ ಮಗನ ಎರಡು ಕಾಲುಗಳು ಕುಂಟಾದವು. ಈ ಮಗನ ಹೆಸರೇ ಮೆಫೀಬೋಶೆತ್.
5 ಬೇರೋತಿನ ರಿಮ್ಮೋನನ ಮಕ್ಕಳಾದ ಬಾಣನು ಮತ್ತು ರೇಕಾಬನು ಈಷ್ಬೋಶೆತನ ಮನೆಗೆ ಮಧ್ಯಾಹ್ನದಲ್ಲಿ ಹೋದರು. ಈಷ್ಬೋಶೆತನು ಬಿಸಿಲಿನ ತಾಪದಿಂದ ವಿಶ್ರಾಂತಿ ಪಡೆಯುತ್ತಿದ್ದನು. 6-7 ಬಾಣನು ಮತ್ತು ರೇಕಾಬನು ಗೋಧಿಯನ್ನು ತೆಗೆದುಕೊಳ್ಳುವವರಂತೆ ಮನೆಯ ಮಧ್ಯಭಾಗಕ್ಕೆ ಬಂದರು. ಈಷ್ಬೋಶೆತನು ಮಲಗುವ ಕೋಣೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದನು. ರೇಕಾಬನು ಮತ್ತು ಬಾಣನು ಈಷ್ಬೋಶೆತನನ್ನು ಇರಿದು ಕೊಂದರು. ನಂತರ ಅವರು ಅವನ ತಲೆಯನ್ನು ಕತ್ತರಿಸಿ ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ಅವರು ಜೋರ್ಡನ್ ಕಣಿವೆಯಲ್ಲಿ ರಾತ್ರಿಯೆಲ್ಲಾ ಪ್ರಯಾಣಮಾಡಿ 8 ಹೆಬ್ರೋನಿಗೆ ಬಂದು ಈಷ್ಬೋಶೆತನ ತಲೆಯನ್ನು ದಾವೀದನಿಗೆ ಕೊಟ್ಟರು.
ರೇಕಾಬನು ಮತ್ತು ಬಾಣನು ರಾಜನಾದ ದಾವೀದನಿಗೆ, “ಸೌಲನ ಮಗನೂ ನಿನ್ನ ಶತ್ರುವೂ ಅದ ಈಷ್ಬೋಶೆತನ ತಲೆಯು ಇಲ್ಲಿದೆ. ಅವನು ನಿನ್ನನ್ನು ಕೊಲ್ಲಲು ಪ್ರಯತ್ನಿಸಿದನು. ನಿನಗಾಗಿ ಯೆಹೋವನು ಈ ದಿನ ಸೌಲನನ್ನೂ ಅವನ ಕುಲವನ್ನೂ ದಂಡಿಸಿದನು” ಎಂದು ಹೇಳಿದರು.
9 ದಾವೀದನು ರಿಮ್ಮೋನನ ಮಕ್ಕಳಾದ ರೇಕಾಬನಿಗೂ ಅವನ ಸೋದರನಾದ ಬಾಣನಿಗೂ, “ಯೆಹೋವನಾಣೆಯಾಗಿಯೂ ಆತನು ಎಲ್ಲಾ ಕೇಡುಗಳಿಂದ ನನ್ನನ್ನು ರಕ್ಷಿಸಿದನು. 10 ಆದರೆ ಒಮ್ಮೆ ಒಬ್ಬ ವ್ಯಕ್ತಿಯು ತಾನು ಶುಭ ಸುದ್ದಿಯನ್ನು ನನಗೆ ತರುತ್ತಿದ್ದೇನೆಂದು ಯೋಚಿಸಿದನು. ಅವನು, ‘ನೋಡು, ಸೌಲನು ಸತ್ತನು’ ಎಂದು ನನಗೆ ಹೇಳಿದನು. ಈ ಸುದ್ದಿಯನ್ನು ನನಗೆ ತಿಳಿಸಿದ್ದರಿಂದ ನಾನು ಅವನಿಗೆ ಕೊಡುಗೆಗಳನ್ನು ಕೊಡಬಹುದೆಂದು ಅವನು ಭಾವಿಸಿದನು. ಆದರೆ ನಾನು ಅವನನ್ನು ಚಿಕ್ಲಗಿನಲ್ಲಿ ಕೊಂದೆನು. 11 ದುಷ್ಟರಾದ ನೀವು ಇಂದು ಒಬ್ಬ ನೀತಿವಂತನನ್ನು ಅವನ ಸ್ವಂತ ಮನೆಯಲ್ಲಿ ಅವನ ಸ್ವಂತ ಹಾಸಿಗೆಯ ಮೇಲೆಯೇ ಕೊಂದಿರುವುದರಿಂದ ನಿಮ್ಮನ್ನೂ ನಾನು ಕೊಂದು ನಿರ್ಮೂಲ ಮಾಡಬೇಕು” ಎಂದನು.
12 ದಾವೀದನು, ರೇಕಾಬನನ್ನು ಮತ್ತು ಬಾಣನನ್ನು ಕೊಲ್ಲಲು ಯುವಕರಿಗೆ ಆಜ್ಞಾಪಿಸಿದನು. ಆಗ ಆ ಯುವಕರು ರೇಕಾಬನ ಮತ್ತು ಬಾಣನ ಕೈಕಾಲುಗಳನ್ನು ಕತ್ತರಿಸಿಹಾಕಿ, ಹೆಬ್ರೋನಿನ ಕೊಳದ ಬಳಿಯಲ್ಲಿ ಅವರ ದೇಹಗಳನ್ನು ನೇತುಹಾಕಿದರು. ನಂತರ ಅವರು ಈಷ್ಬೋಶೆತನ ತಲೆಯನ್ನು ತೆಗೆದುಕೊಂಡು ಹೋಗಿ, ಹೆಬ್ರೋನಿನಲ್ಲಿ ಅಬ್ನೇರನನ್ನು ಸಮಾಧಿಮಾಡಿದ ಸ್ಥಳದಲ್ಲೇ ಸಮಾಧಿಮಾಡಿದರು.
ಇಸ್ರೇಲರು ದಾವೀದನನ್ನು ರಾಜನನ್ನಾಗಿ ಮಾಡುವರು
5 ಆಗ ಇಸ್ರೇಲಿನ ಕುಲಗಳವರೆಲ್ಲಾ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು, “ನಾವೆಲ್ಲಾ ಒಂದೇ ಕುಲದವರಾಗಿದ್ದೇವೆ. 2 ಹಿಂದಿನ ದಿನಗಳಲ್ಲಿ, ಸೌಲನು ರಾಜನಾಗಿದ್ದಾಗಲೂ ನಮ್ಮನ್ನು ಯುದ್ಧದಲ್ಲಿ ಮುನ್ನಡೆಸಿದವನು ನೀನೇ. ಯೆಹೋವನು ನಿನ್ನನ್ನು ಕುರಿತು, ‘ನೀನು ನನ್ನ ಜನರಾದ ಇಸ್ರೇಲರ ನಾಯಕನೂ ಪಾಲಕನೂ ಆಗಿರುವೆ’ ಎಂದು ಹೇಳಿದ್ದಾನೆ” ಎಂದರು.
3 ರಾಜನಾದ ದಾವೀದನಿದ್ದ ಹೆಬ್ರೋನಿಗೆ ಇಸ್ರೇಲಿನ ಎಲ್ಲಾ ನಾಯಕರೂ ಬಂದರು. ಹೆಬ್ರೋನಿನಲ್ಲಿ ರಾಜನಾದ ದಾವೀದನು ಯೆಹೋವನ ಸನ್ನಿಧಿಯಲ್ಲಿ ಈ ನಾಯಕರೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಆಗ ನಾಯಕರು ದಾವೀದನನ್ನು ಇಸ್ರೇಲಿನ ರಾಜನನ್ನಾಗಿ ಅಭಿಷೇಕಿಸಿದರು.
4 ದಾವೀದನು ಆಳುವುದಕ್ಕೆ ಪ್ರಾರಂಭಿಸಿದಾಗ ಅವನಿಗೆ ಮೂವತ್ತು ವರ್ಷ ವಯಸ್ಸಾಗಿತ್ತು. ಅವನು ನಲವತ್ತು ವರ್ಷಗಳ ಕಾಲ ಆಳಿದನು. 5 ಅವನು ಏಳು ವರ್ಷ ಆರು ತಿಂಗಳ ಕಾಲ ಹೆಬ್ರೋನಿನಲ್ಲಿದ್ದು ಯೆಹೂದ್ಯರನ್ನು ಆಳಿದನು. ಅವನು ಮೂವತ್ತಮೂರು ವರ್ಷ ಜೆರುಸಲೇಮಿನಲ್ಲಿದ್ದು ಸಮಸ್ತ ಇಸ್ರೇಲನ್ನು ಮತ್ತು ಯೆಹೂದವನ್ನು ಆಳಿದನು.
ದಾವೀದನು ಜೆರುಸಲೇಮ್ ಪಟ್ಟಣವನ್ನು ಗೆಲ್ಲುವನು
6 ದಾವೀದನು ಯೆಬೂಸಿಯರಿಗೆ ವಿರುದ್ಧವಾಗಿ ಜೆರುಸಲೇಮಿಗೆ ತನ್ನ ಜನರೊಂದಿಗೆ ಹೋದನು. (ಯೆಬೂಸಿಯರು ಆ ದೇಶದ ಮೂಲನಿವಾಸಿಗಳು.) ಯೆಬೂಸಿಯರು ದಾವೀದನಿಗೆ, “ನೀನು ನಮ್ಮ ನಗರದೊಳಕ್ಕೆ ಬರಲಾಗದು.[a] ಕುರುಡರು ಮತ್ತು ಕುಂಟರು ಸಹ ನಿನ್ನನ್ನು ತಡೆಯಬಲ್ಲರು” ಎಂದು ಹೇಳಿದರು. (ದಾವೀದನು ಅವರ ನಗರದೊಳಕ್ಕೆ ಪ್ರವೇಶಿಸಲು ಸಮರ್ಥನಲ್ಲವೆಂದು ಅವರು ಈ ರೀತಿ ಹೇಳಿದರು. 7 ಆದರೆ ದಾವೀದನು ಚೀಯೋನ್ ಕೋಟೆಯನ್ನು ವಶಪಡಿಸಿಕೊಂಡನು. ಈ ಕೋಟೆಗೆ ದಾವೀದ ನಗರವೆಂದು ಹೆಸರಾಯಿತು.)
8 ದಾವೀದನು ತನ್ನ ಜನರಿಗೆ ಅಂದು, “ನೀವು ಯೆಬೂಸಿಯರನ್ನು ಸೋಲಿಸಬೇಕೆಂದಿದ್ದರೆ ಜಲಮಾರ್ಗದ ಮೂಲಕ[b] ಹೋಗಿ ಶತ್ರುಗಳಾದ ಕುಂಟರು ಮತ್ತು ಕುರುಡರನ್ನು ಎದುರಿಸಿ” ಎಂದು ಹೇಳಿದನು. ಆದ್ದರಿಂದಲೇ “ಕುರುಡರು ಮತ್ತು ಕುಂಟರು ಮನೆಯೊಳಕ್ಕೆ[c] ಬರಲಾಗದು” ಎಂಬ ನಾಣ್ಣುಡಿ ಉಂಟಾಯಿತು.
9 ದಾವೀದನು ಕೋಟೆಯಲ್ಲಿ ನೆಲೆಸಿದ್ದನು. ಅವನು ಆ ಕೋಟೆಗೆ “ದಾವೀದನ ನಗರ”ವೆಂದು ಕರೆದನು. ದಾವೀದನು ಮಿಲ್ಲೋವನ್ನು ಕಟ್ಟಿಸಿದನು. ಅವನು ನಗರದಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿದನು. 10 ಸರ್ವಶಕ್ತನಾದ ಯೆಹೋವನು ದಾವೀದನೊಂದಿಗೆ ಇದ್ದುದರಿಂದ ಅವನು ಬಲಶಾಲಿಯಾಗುತ್ತಲೇ ಇದ್ದನು.
11 ತೂರಿನ ರಾಜನಾದ ಹೀರಾಮನು ದಾವೀದನ ಬಳಿಗೆ ಸಂದೇಶಕರನ್ನು ಕಳುಹಿಸಿದನು. ಹೀರಾಮನು ದೇವದಾರು ಮರಗಳನ್ನು, ಬಡಗಿಗಳನ್ನು ಮತ್ತು ಕಲ್ಲಿನಲ್ಲಿ ಕೆತ್ತನೆ ಮಾಡುವ ಶಿಲ್ಪಿಗಳನ್ನೂ ಸಹ ಕಳುಹಿಸಿದನು. ಅವರು ದಾವೀದನಿಗಾಗಿ ಒಂದು ಮನೆಯನ್ನು ಕಟ್ಟಿದರು. 12 ಯೆಹೋವನು ನಿಜವಾಗಿಯೂ ತನ್ನನ್ನು ಇಸ್ರೇಲಿನ ರಾಜನನ್ನಾಗಿ ಮಾಡಿದ್ದಾನೆಂಬುದನ್ನೂ ಆತನು ತನ್ನ ಜನರಾದ ಇಸ್ರೇಲರಿಗಾಗಿ ನನ್ನ ರಾಜ್ಯವನ್ನು ಸ್ಥಿರಪಡಿಸಿದ್ದಾನೆಂತಲೂ ದಾವೀದನು ಇದರ ಮೂಲಕ ತಿಳಿದುಕೊಂಡನು.
13 ದಾವೀದನು ಹೆಬ್ರೋನಿನಿಂದ ಜೆರುಸಲೇಮಿಗೆ ಹೋದನು. ದಾವೀದನಿಗೆ ಜೆರುಸಲೇಮಿನಲ್ಲಿ ಅನೇಕ ಪತ್ನಿಯರೂ ಉಪಪತ್ನಿಯರೂ ಇದ್ದರು. ಜೆರುಸಲೇಮಿನಲ್ಲಿ ದಾವೀದನಿಗೆ ಅನೇಕ ಮಕ್ಕಳು ಹುಟ್ಟಿದರು. 14 ಜೆರುಸಲೇಮಿನಲ್ಲಿ ದಾವೀದನಿಗೆ ಹುಟ್ಟಿದ ಗಂಡುಮಕ್ಕಳ ಹೆಸರುಗಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್, 15 ಇಬ್ಹಾರ್, ಎಲೀಷೂವ, ನೆಫೆಗ್, ಯಾಫೀಯ, 16 ಎಲೀಷಾಮ, ಎಲ್ಯಾದ, ಎಲೀಫೆಲೆಟ್.
ದಾವೀದನು ಫಿಲಿಷ್ಟಿಯರ ವಿರುದ್ಧ ಯುದ್ಧಕ್ಕೆ ಹೋಗುವನು
17 ಇಸ್ರೇಲರು ದಾವೀದನನ್ನು ತಮ್ಮ ರಾಜನನ್ನಾಗಿ ಅಭಿಷೇಕಿಸಿದ್ದಾರೆಂಬುದು ಫಿಲಿಷ್ಟಿಯರಿಗೆ ತಿಳಿದಾಗ, ಫಿಲಿಷ್ಟಿಯರೆಲ್ಲ ದಾವೀದನನ್ನು ಹಿಡಿಯಲು ಹಾಗೂ ಅವನನ್ನು ಕೊಲ್ಲಲು ಹೋದರು. ಆದರೆ ಈ ಸುದ್ದಿಯು ದಾವೀದನಿಗೆ ತಿಳಿಯಿತು. ಅವನು ಕೋಟೆಗೆ ಹೊರಟುಹೋದನು. 18 ಫಿಲಿಷ್ಟಿಯರು ಬಂದು ರೆಫಾಯೀಮ್ ಕಣಿವೆಯಲ್ಲಿ ಪಾಳೆಯವನ್ನು ಮಾಡಿದರು.
19 ದಾವೀದನು ಯೆಹೋವನಿಗೆ, “ಫಿಲಿಷ್ಟಿಯರ ವಿರುದ್ಧ ಹೋರಾಡಲು ನಾನು ಹೋಗಬಹುದೇ? ಫಿಲಿಷ್ಟಿಯರನ್ನು ಸೋಲಿಸಲು ನೀನು ಸಹಾಯ ಮಾಡುವೆಯಾ?” ಎಂದು ಕೇಳಿದನು.
ಯೆಹೋವನು ದಾವೀದನಿಗೆ, “ಹೋಗು, ಫಿಲಿಷ್ಟಿಯರನ್ನು ಸೋಲಿಸಲು ನಾನು ಖಂಡಿತವಾಗಿಯೂ ನಿನಗೆ ಸಹಾಯ ಮಾಡುತ್ತೇನೆ” ಎಂದು ಹೇಳಿದನು.
20 ಆಗ ದಾವೀದನು ಬಾಳ್ಪೆರಾಚೀಮ್ಗೆ ಬಂದನು. ಅಲ್ಲಿ ಅವನು ಫಿಲಿಷ್ಟಿಯರನ್ನು ಸೋಲಿಸಿದನು. ದಾವೀದನು, “ಕಟ್ಟೆಯೊಡೆದ ಪ್ರವಾಹವು ನುಗ್ಗಿ ನಾಶಮಾಡುವಂತೆ ಯೆಹೋವನು ನನ್ನ ಶತ್ರುಗಳನ್ನು ನನ್ನ ಎದುರಿನಲ್ಲೇ ನಾಶಪಡಿಸಿದನು” ಎಂದನು. ಆದ್ದರಿಂದ ಅವನು ಆ ಸ್ಥಳಕ್ಕೆ “ಬಾಳ್ಪೆರಾಚೀಮ್” ಎಂದು ಹೆಸರಿಟ್ಟನು. 21 ಫಿಲಿಷ್ಟಿಯರು ತಮ್ಮ ದೇವರ ವಿಗ್ರಹಗಳನ್ನು ಬಾಳ್ಪೆರಾಚೀಮ್ನಲ್ಲಿಯೇ ಬಿಟ್ಟುಹೋದರು. ದಾವೀದನು ಮತ್ತು ಅವನ ಜನರು ಈ ವಿಗ್ರಹಗಳನ್ನು ತೆಗೆದುಕೊಂಡು ಹೋದರು.
22 ಫಿಲಿಷ್ಟಿಯರು ಮತ್ತೆ ರೆಫಾಯೀಮ್ ಕಣಿವೆಗೆ ಬಂದು ಪಾಳೆಯವನ್ನು ಮಾಡಿದರು.
23 ದಾವೀದನು ಯೆಹೋವನಿಗೆ ಪ್ರಾರ್ಥಿಸಿದನು. ಈ ಸಮಯದಲ್ಲಿ ಯೆಹೋವನು ದಾವೀದನಿಗೆ, “ಅಲ್ಲಿಗೆ ಹೋಗಬೇಡ. ಅವರ ಸೈನ್ಯವನ್ನು ಸುತ್ತಿಕೊಂಡು ಹಿಂದಿನಿಂದ ಅವರನ್ನು ಸಮೀಪಿಸು. ಬಾಲ್ಯಾಮ್ ಮರಗಳಿರುವ ಮತ್ತೊಂದು ಕಡೆಯಿಂದ ಅವರ ಮೇಲೆ ಆಕ್ರಮಣ ಮಾಡು. 24 ಮರಗಳ ತುದಿಯಲ್ಲಿರುವ ನಿಮಗೆ ಫಿಲಿಷ್ಟಿಯರು ಯುದ್ಧಕ್ಕೆ ಹೊರಡುವುದು ಕೇಳಿಸುತ್ತದೆ. ಆಗ ನೀನು ತ್ವರಿತಗತಿಯಿಂದ ಕಾರ್ಯನಿರತನಾಗು. ಆಗ ಯೆಹೋವನಾದ ನಾನು ನಿನಗಾಗಿ ಅದೇ ಸಮಯದಲ್ಲಿ ಫಿಲಿಷ್ಟಿಯರನ್ನು ಸೋಲಿಸಲು ನಿಮ್ಮ ಮುಂದೆ ನಾನು ಹೋಗುತ್ತೇನೆ” ಎಂದು ಹೇಳಿದನು.
25 ಯೆಹೋವನು ಆಜ್ಞಾಪಿಸಿದಂತೆಯೇ ದಾವೀದನು ಮಾಡಿದನು. ಅವನು ಫಿಲಿಷ್ಟಿಯರನ್ನು ಸೋಲಿಸಿ ಗೆಬದಿಂದ ಗೆಜೆರಿನವರೆಗೆ ಅವರನ್ನು ಅಟ್ಟಿಸಿಕೊಂಡು ಹೋಗಿ ದಾರಿಯುದ್ದಕ್ಕೂ ಅವರನ್ನು ಕೊಂದನು.
ದೇವರ ಪವಿತ್ರ ಪೆಟ್ಟಿಗೆಯನ್ನು ಜೆರುಸಲೇಮಿಗೆ ತಂದರು
6 ಇಸ್ರೇಲಿನಲ್ಲಿ ಆರಿಸಲ್ಪಟ್ಟ ಮೂವತ್ತು ಸಾವಿರ ಮಂದಿಯನ್ನು ದಾವೀದನು ಮತ್ತೆ ಒಟ್ಟುಗೂಡಿಸಿದನು. 2 ಆಗ ದಾವೀದನು ತನ್ನ ಜನರೊಂದಿಗೆ ಯೆಹೂದದ ಬಾಳಾ ಎಂಬಲ್ಲಿಗೆ ಹೋದನು. ಯೆಹೂದದ ಬಾಳಾ ಎಂಬ ಸ್ಥಳದಲ್ಲಿದ್ದ ಪವಿತ್ರ ಪೆಟ್ಟಿಗೆಯನ್ನು ಜೆರುಸಲೇಮಿಗೆ ತೆಗೆದುಕೊಂಡು ಬಂದನು. ಯೆಹೋವನನ್ನು ಆರಾಧಿಸುವುದಕ್ಕಾಗಿ ಜನರು ಪವಿತ್ರ ಪೆಟ್ಟಿಗೆಯ ಬಳಿ ಹೋಗುತ್ತಿದ್ದರು. ಪವಿತ್ರ ಪೆಟ್ಟಿಗೆಯು ಯೆಹೋವನ ಪೀಠದಂತಿತ್ತು. ಪವಿತ್ರ ಪೆಟ್ಟಿಗೆಯ ಮೇಲ್ಭಾಗದಲ್ಲಿ ಕೆರೂಬಿಗಳಿದ್ದವು. ಯೆಹೋವನು ರಾಜನಂತೆ ದೂತರ ಮೇಲೆ ಆಸೀನನಾಗಿದ್ದನು. 3 ದಾವೀದನ ಜನರು ಪವಿತ್ರ ಪೆಟ್ಟಿಗೆಯನ್ನು ಹೊಸಬಂಡಿಯ ಮೇಲಿಟ್ಟರು. ಅವರು ಬೆಟ್ಟದ ಮೇಲಿರುವ ಅಬೀನಾದಾಬನ ಮನೆಯಿಂದ ದೇವರ ಪವಿತ್ರ ಪೆಟ್ಟಿಗೆಯನ್ನು ತಂದರು. ಅಬೀನಾದಾಬನ ಮಕ್ಕಳಾದ ಉಜ್ಜನೂ ಅಹಿಯೋವನೂ ಆ ಬಂಡಿಯನ್ನು ಹೊಡೆದರು.
4 ಬೆಟ್ಟದ ಮೇಲಿನ ಅಬೀನಾದಾಬನ ಮನೆಯಿಂದ ಹೊಸ ಬಂಡಿಯನ್ನು ತರುವಾಗ ಉಜ್ಜನೂ ಅಹಿಯೋವನೂ ಮುನ್ನಡೆಸಿದರು. ಈ ಬಂಡಿಯ ಮೇಲೆ ದೇವರ ಪವಿತ್ರ ಪೆಟ್ಟಿಗೆಯಿತ್ತು. ಉಜ್ಜನೂ ಬಂಡಿಯ ಮೇಲಿದ್ದನು. ಪವಿತ್ರ ಪೆಟ್ಟಿಗೆಯ ಮುಂದೆ ಅಹಿಯೋವನು ನಡೆಯುತ್ತಿದ್ದನು. 5 ದಾವೀದನು ಮತ್ತು ಇಸ್ರೇಲರೆಲ್ಲರು ಕಿನ್ನರಿ, ದಮ್ಮಡಿ, ಝಲ್ಲರಿ, ತಾಳಗಳನ್ನು ಬಾರಿಸುತ್ತಾ ಸನ್ನಿಧಿಯಲ್ಲಿ ನೃತ್ಯಮಾಡುತ್ತಿದ್ದರು. 6 ದಾವೀದನ ಜನರು ನಾಕೋನನ ಕಣಕ್ಕೆ ಬಂದಾಗ ಹಸುಗಳು ಮುಗ್ಗರಿಸಿದವು ಹಾಗೂ ದೇವರ ಪವಿತ್ರ ಪೆಟ್ಟಿಗೆಯು ಬಂಡಿಯಿಂದ ಕೆಳಗೆ ಬೀಳುವುದರಲ್ಲಿತ್ತು. ಪವಿತ್ರ ಪೆಟ್ಟಿಗೆಯು ಬೀಳದಂತೆ ಉಜ್ಜನು ಹಿಡಿದನು. 7 ಯೆಹೋವನು ಉಜ್ಜನ ಮೇಲೆ ಕೋಪಗೊಂಡು ಅವನನ್ನು ಕೊಂದನು.[d] ಉಜ್ಜನು ದೇವರಿಗೆ ಗೌರವವನ್ನು ತೋರಿಸದೆ ಪವಿತ್ರ ಪೆಟ್ಟಿಗೆಯನ್ನು ಸ್ಪರ್ಶಿಸಿದನು. ದೇವರ ಪವಿತ್ರ ಪಟ್ಟಿಗೆಯ ಹತ್ತಿರದಲ್ಲೇ ಉಜ್ಜನು ಸತ್ತನು. 8 ಯೆಹೋವನು ಉಜ್ಜನನ್ನು ಕೊಂದದ್ದರಿಂದ ದಾವೀದನು ತಳಮಳಗೊಂಡನು. ದಾವೀದನು ಆ ಸ್ಥಳವನ್ನು “ಪೆರೆಚುಜ್ಜಾ” ಎಂದು ಕರೆದನು. ಆ ಸ್ಥಳವನ್ನು ಇಂದಿಗೂ “ಪೆರೆಚುಜ್ಜಾ” ಎಂದೇ ಕರೆಯುತ್ತಾರೆ.
9 ಅಂದು ದಾವೀದನು ಯೆಹೋವನಿಗೆ ಭಯಪಟ್ಟು, “ದೇವರ ಪವಿತ್ರ ಪೆಟ್ಟಿಗೆಯನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವುದು ಹೇಗೆ?” ಎಂದು ಯೋಚಿಸಿಕೊಂಡು 10 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ದಾವೀದ ನಗರದೊಳಕ್ಕೆ ತರಲಿಲ್ಲ. ದಾವೀದನು ಪವಿತ್ರ ಪೆಟ್ಟಿಗೆಯನ್ನು ಗತ್ನ ಓಬೇದೆದೋಮನ ಮನೆಯಲ್ಲಿಟ್ಟನು. 11 ಓಬೇದೆದೋಮನ ಮನೆಯಲ್ಲಿ ಪವಿತ್ರ ಪೆಟ್ಟಿಗೆಯು ಮೂರು ತಿಂಗಳ ಕಾಲ ಇತ್ತು. ಓಬೇದೆದೋಮನನ್ನೂ ಅವನ ಕುಟುಂಬವನ್ನೂ ಯೆಹೋವನು ಆಶೀರ್ವದಿಸಿದನು.
12 ತರುವಾಯ ಜನರು ದಾವೀದನಿಗೆ, “ದೇವರ ಪವಿತ್ರ ಪೆಟ್ಟಿಗೆಯು ಓಬೇದೆದೋಮನ ಮನೆಯಲ್ಲಿರುವುದರಿಂದ ಯೆಹೋವನು ಅವನ ಕುಟುಂಬವನ್ನೂ ಅವನ ಸಮಸ್ತವನ್ನೂ ಆಶೀರ್ವದಿಸಿದನು.” ಎಂದು ಹೇಳಿದರು. ಆದ್ದರಿಂದ ದಾವೀದನು ಹೋಗಿ ಓಬೇದೆದೋಮನ ಮನೆಯಿಂದ ಪವಿತ್ರ ಪೆಟ್ಟಿಗೆಯನ್ನು ಸಂತೋಷದಿಂದ ತಂದನು. 13 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತವರು ಆರು ಹೆಜ್ಜೆಗಳನ್ನು ನಡೆದು ನಿಂತಾಗ ದಾವೀದನು ಒಂದು ಹೋರಿಯನ್ನು ಮತ್ತು ಕೊಬ್ಬಿದ ಕರುವನ್ನು ಯಜ್ಞವಾಗಿ ಅರ್ಪಿಸಿದನು. 14 ಆಗ ದಾವೀದನು ಯೆಹೋವನ ಸನ್ನಿಧಿಯಲ್ಲಿ ತನ್ನ ಶಕ್ತಿಮೀರಿ ನರ್ತಿಸಿದನು. ಅವನು ಏಫೋದನ್ನು ಧರಿಸಿದ್ದನು.
15 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ನಗರಕ್ಕೆ ತರುವಾಗ ದಾವೀದನು ಮತ್ತು ಇಸ್ರೇಲರೆಲ್ಲರು ಸಂತೋಷದಿಂದ ಆರ್ಭಟಿಸಿದರು; ತುತ್ತೂರಿಯನ್ನು ಊದಿದರು. 16 ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಹೊರಗೆ ನೋಡುತ್ತಿದ್ದಳು. ಅದೇ ಸಮಯದಲ್ಲಿ ಯೆಹೋವನ ಪವಿತ್ರ ಪೆಟ್ಟಿಗೆಯು ನಗರಕ್ಕೆ ಬಂದಿತು. ದಾವೀದನು ಯೆಹೋವನ ಸನ್ನಿಧಿಯಲ್ಲಿ ಜಿಗಿಯುತ್ತಾ ಕುಣಿದಾಡುತ್ತಿದ್ದನು. ಮೀಕಲಳು ಇದನ್ನು ಕಂಡು ದಾವೀದನನ್ನು ತನ್ನ ಹೃದಯದಲ್ಲಿ ತಿರಸ್ಕರಿಸಿದಳು; ಅವನು ತನ್ನನ್ನು ತಾನೇ ಮೂರ್ಖನನ್ನಾಗಿ ಮಾಡಿಕೊಳ್ಳುತ್ತಿದ್ದಾನೆ ಎಂದು ಆಲೋಚಿಸಿಕೊಂಡಳು.
17 ದಾವೀದನು ಪವಿತ್ರ ಪೆಟ್ಟಿಗೆಗಾಗಿ ಒಂದು ಗುಡಾರವನ್ನು ನಿರ್ಮಿಸಿದನು. ಇಸ್ರೇಲರು, ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಗುಡಾರದಲ್ಲಿ ಪ್ರತ್ಯೇಕವಾದ ಸ್ಥಳದಲ್ಲಿ ಇಟ್ಟರು. ಆಗ ದಾವೀದನು ಯೆಹೋವನ ಸನ್ನಿಧಿಯಲ್ಲಿ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದನು.
18 ಬಳಿಕ, ದಾವೀದನು ಸರ್ವಶಕ್ತನಾದ ಯೆಹೋವನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿದನು. 19 ದಾವೀದನು ಇಸ್ರೇಲಿನ ಜನರಲ್ಲಿ ಪ್ರತಿಯೊಬ್ಬ ಗಂಡಸಿಗೂ ಹೆಂಗಸಿಗೂ ಒಂದು ತುಂಡು ರೊಟ್ಟಿಯನ್ನೂ ಒಣಗಿದ ದ್ರಾಕ್ಷೆಹಣ್ಣಿನ ಉಂಡೆಯನ್ನೂ ಒಂದು ತುಂಡು ಮಾಂಸವನ್ನೂ ಕೊಟ್ಟನು. ಆಗ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.
ಮೀಕಲಳು ದಾವೀದನನ್ನು ತಿರಸ್ಕರಿಸಿದಳು
20 ದಾವೀದನು ತನ್ನ ಕುಟುಂಬದವರನ್ನು ಆಶೀರ್ವದಿಸಲು ಹೋದನು. ಆದರೆ ಸೌಲನ ಮಗಳಾದ ಮೀಕಲಳು ಅವನನ್ನು ಭೇಟಿಮಾಡಲು ಹೊರಗೆ ಬಂದು, “ಇಸ್ರೇಲರ ರಾಜನು ಈ ದಿನ ತನ್ನ ಗೌರವವನ್ನು ಕಾಪಾಡಿಕೊಳ್ಳಲಿಲ್ಲ! ನಾಚಿಕೆಯಿಲ್ಲದೆ ತನ್ನೆಲ್ಲ ಬಟ್ಟೆಗಳನ್ನೂ ತೆಗೆದುಹಾಕುವ ಮೂರ್ಖನಂತೆ, ನೀನು ನಿನ್ನ ಸೇವಕರ ಮತ್ತು ದಾಸಿಯರ ಮುಂದೆ ನಿನ್ನ ಬಟ್ಟೆಗಳನ್ನೆಲ್ಲ ತೆಗೆದು ಹಾಕಿದೆಯಲ್ಲ”[e] ಎಂದಳು.
21 ಆಗ ದಾವೀದನು ಮೀಕಲಳಿಗೆ, “ಯೆಹೋವನು ನಿನ್ನ ತಂದೆಯನ್ನಾಗಲಿ ಅವರ ಕುಟುಂಬದ ಇತರ ಯಾರನ್ನೇ ಆಗಲಿ ಆರಿಸಿಕೊಳ್ಳದೆ ನನ್ನನ್ನೇ ಇಸ್ರೇಲರ ನಾಯಕನನ್ನಾಗಿ ಆರಿಸಿಕೊಂಡಿದ್ದಾನೆ. ಆದ್ದರಿಂದಲೇ ನಾನು ಯೆಹೋವನ ಸನ್ನಿಧಿಯಲ್ಲಿ ಕುಣಿದಾಡಿದೆನು. 22 ಆತನ ಮುಂದೆ ಇನ್ನೂ ಹೀನವಾಗಿ ಕಾಣಿಸಿಕೊಳ್ಳುವುದಕ್ಕೂ ನನ್ನನ್ನು ನಾನು ಕಡೆಗಣಿಸಿಕೊಳ್ಳುವುದಕ್ಕೂ ಸಿದ್ಧನಿದ್ದೇನೆ. ಬಹುಶಃ ನೀನು ನನ್ನನ್ನು ಗೌರವಿಸದಿರಬಹುದು, ಆದರೆ ನೀನು ಯಾವ ದಾಸಿಯರ ಬಗ್ಗೆ ಮಾತನಾಡಿದೆಯೋ ಅವರು ನನ್ನನ್ನು ಗೌರವಿಸುತ್ತಾರೆ” ಎಂದು ಹೇಳಿದನು.
23 ಸೌಲನ ಮಗಳಾದ ಮೀಕಲಳು ಬಂಜೆಯಾಗಿ ಉಳಿದಳು. ಅವಳು ಮಕ್ಕಳೇ ಇಲ್ಲದೆ ಸತ್ತುಹೋದಳು.
ದೇವಾಲಯ ಕಟ್ಟಲು ದಾವೀದನ ಅಪೇಕ್ಷೆ
7 ದಾವೀದನು ತನ್ನ ಅರಮನೆಯಲ್ಲಿ ಸುಖವಾಗಿ ವಾಸಿಸುವಂತೆಯೂ ಅವನ ಸುತ್ತಲಿನ ಶತ್ರುಗಳಿಂದ ಭಯವಿಲ್ಲದಂತೆಯೂ ಯೆಹೋವನು ಮಾಡಿದನು. 2 ಆಗ ರಾಜನಾದ ದಾವೀದನು ಪ್ರವಾದಿಯಾದ ನಾತಾನನಿಗೆ, “ನೋಡು, ನಾನು ದೇವದಾರು ಮರದಿಂದ ನಿರ್ಮಿಸಿದ ವೈಭವದ ಮನೆಯಲ್ಲಿ ವಾಸವಾಗಿದ್ದೇನೆ; ಆದರೆ ದೇವರ ಪವಿತ್ರ ಪೆಟ್ಟಿಗೆಯನ್ನು ಇನ್ನೂ ಗುಡಾರದಲ್ಲಿಯೇ ಇಟ್ಟಿದ್ದೇನೆ. ಅದಕ್ಕಾಗಿ ಒಂದು ಆಲಯವನ್ನು ಕಟ್ಟಬೇಕು” ಎಂದು ಹೇಳಿದನು.
3 ನಾತಾನನು ರಾಜನಾದ ದಾವೀದನಿಗೆ, “ನೀನು ನಿಜವಾಗಿಯೂ ಏನನ್ನು ಮಾಡಬೇಕೆಂದಿರುವೆಯೋ ಅದನ್ನು ಮಾಡು; ಯೆಹೋವನು ನಿನ್ನೊಂದಿಗಿದ್ದಾನೆ” ಎಂದು ಹೇಳಿದನು.
4 ಆದರೆ ಅಂದು ರಾತ್ರಿ ನಾತಾನನಿಗೆ ಯೆಹೋವನು ಹೀಗೆ ಹೇಳಿದನು:
5 “ನೀನು ನನ್ನ ಸೇವಕನಾದ ದಾವೀದನ ಬಳಿಗೆ ಹೋಗಿ ಈ ಸಂದೇಶವನ್ನು ತಿಳಿಸು: ‘ನನ್ನ ವಾಸಕ್ಕಾಗಿ ಆಲಯವನ್ನು ಕಟ್ಟುವ ವ್ಯಕ್ತಿಯು ನೀನಲ್ಲ. 6 ಈಜಿಪ್ಟಿನಿಂದ ಇಸ್ರೇಲರನ್ನು ಹೊರತಂದ ಸಮಯದಲ್ಲಿ ನಾನು ಆಲಯದಲ್ಲಿ ವಾಸಮಾಡಲಿಲ್ಲ. ನಾನು ಗುಡಾರದಲ್ಲಿ ವಾಸಮಾಡುತ್ತಾ ಸಂಚರಿಸಿದೆನು. ಗುಡಾರವೇ ನನ್ನ ಆಲಯವಾಗಿತ್ತು. 7 ನನಗಾಗಿ ದೇವದಾರು ಮರದಿಂದ ಆಲಯ ಕಟ್ಟುವಂತೆ ಇಸ್ರೇಲರ ಯಾವ ಕುಲದವರನ್ನಾಗಲಿ ನಾನು ಕೇಳಿಕೊಳ್ಳಲಿಲ್ಲ ಎಂಬುದಾಗಿ ಯೆಹೋವನು ತಿಳಿಸುತ್ತಾನೆ’ ಎಂದು ಹೇಳು.
8 “ನೀನು ಇದನ್ನು ನನ್ನ ಸೇವಕನಾದ ದಾವೀದನಿಗೆ ಹೇಳಲೇಬೇಕು: ‘ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, ಹುಲ್ಲುಗಾವಲಿನಲ್ಲಿ ಕುರಿಕಾಯುತ್ತಿದ್ದ ನಿನ್ನನ್ನು ನಾನು ನನ್ನ ಜನರಾದ ಇಸ್ರೇಲರಿಗೆ ನಾಯಕನಾಗಿ ಮಾಡಲು ಕರೆತಂದೆನು. 9 ನೀನು ಹೋದ ಸ್ಥಳಗಳಲ್ಲೆಲ್ಲಾ ನಿನ್ನೊಂದಿಗಿದ್ದೆನು. ನಿನ್ನ ಶತ್ರುಗಳನ್ನು ಸೋಲಿಸಿದೆನು. ನಾನು ನಿನ್ನನ್ನು ಲೋಕದ ಇತರ ಮಹಾಪುರುಷರಂತೆಯೇ ಪ್ರಸಿದ್ಧಿಗೊಳಿಸುವೆನು. 10-11 ನಾನು ನನ್ನ ಜನರಾದ ಇಸ್ರೇಲರಿಗೆ ಒಂದು ಸ್ಥಳವನ್ನು ಆರಿಸಿಕೊಂಡು ಅವರನ್ನು ನೆಲೆಗೊಳಿಸಿದ್ದೇನೆ. ವಾಸಿಸುವುದಕ್ಕಾಗಿ ಅವರ ಸ್ವಂತ ಸ್ಥಳವನ್ನು ಅವರಿಗೆ ಕೊಟ್ಟಿದ್ದೇನೆ. ಆದ್ದರಿಂದ ಈಗ ಅವರು ಅಲೆದಾಡುವ ಅಗತ್ಯವೇ ಇಲ್ಲ. ಮೊದಲು ನನ್ನ ಜನರಾದ ಇಸ್ರೇಲರನ್ನು ಮುನ್ನಡೆಸಲು ನ್ಯಾಯಾಧಿಪತಿಗಳನ್ನು ಕಳುಹಿಸಿದೆನು. ದುಷ್ಟಜನರು ಅವರಿಗೆ ತೊಂದರೆ ಕೊಟ್ಟರು. ಆದರೆ ಅದು ಈಗ ಸಂಭವಿಸುವುದಿಲ್ಲ. ನಿನಗೆ ಶತ್ರು ಭಯವಿಲ್ಲದಂತೆ ಮಾಡುತ್ತೇನೆ; ನಿನ್ನ ಕುಟುಂಬದಿಂದಲೇ ರಾಜರುಗಳನ್ನು ಬರಮಾಡುತ್ತೇನೆ.
12 “‘ನಿನ್ನ ದಿನಗಳು ಮುಗಿದುಹೋಗುತ್ತವೆ; ನೀನು ನಿನ್ನ ಪೂರ್ವಿಕರ ಜೊತೆಯಲ್ಲಿ ಸೇರುತ್ತಿ. ಆ ಸಮಯದಲ್ಲಿ, ನಿನ್ನ ಮಕ್ಕಳಲ್ಲಿ ಒಬ್ಬನನ್ನು ರಾಜನನ್ನಾಗಿ ಮಾಡಿ ಅವನ ರಾಜ್ಯವನ್ನು ಭದ್ರಗೊಳಿಸುತ್ತೇನೆ. 13 ಅವನು ನನ್ನ ಹೆಸರಿಗಾಗಿ ಒಂದು ಆಲಯವನ್ನು ನಿರ್ಮಿಸುತ್ತಾನೆ. ಅವನ ರಾಜ್ಯವು ಸದಾಕಾಲಕ್ಕೂ ಇರುವಂತೆ ನಾನು ಮಾಡುತ್ತೇನೆ. 14 ನಾನು ಅವನಿಗೆ ತಂದೆಯಾಗಿರುವೆನು; ಅವನು ನನಗೆ ಮಗನಾಗಿರುವನು. ಅವನು ಪಾಪಗಳನ್ನು ಮಾಡಿದರೆ ಇತರ ಜನರ ಮೂಲಕ ನಾನು ಅವನನ್ನು ದಂಡಿಸುವೆನು. ಅವರೇ ನನ್ನ ಚಾವಟಿಗಳಾಗಿರುತ್ತಾರೆ. 15 ಆದರೆ ನಾನು ಅವನನ್ನು ಪ್ರೀತಿಸುವುದನ್ನು ನಿಲ್ಲಿಸುವುದಿಲ್ಲ. ಅವನು ಯಾವಾಗಲೂ ನನ್ನ ಕರುಣಾಶ್ರಯದಲ್ಲಿರುವನು. ಸೌಲನ ಮೇಲಿಟ್ಟಿದ್ದ ಪ್ರೀತಿಯನ್ನು ಮತ್ತು ದಯೆಯನ್ನು ಹಿಂತೆಗೆದುಕೊಂಡೆನು. ಸೌಲನನ್ನು ನಿನ್ನ ಎದುರಿನಿಂದ ನಾನು ದೂರ ತಳ್ಳಿದೆನು. ನಾನು ನಿನ್ನ ಕುಟುಂಬಕ್ಕೆ ಹಾಗೆ ಮಾಡುವುದಿಲ್ಲ. 16 ನಿನ್ನ ಕುಟುಂಬ ಮತ್ತು ರಾಜ್ಯ ಎಂದೆಂದಿಗೂ ಸ್ಥಿರವಾಗಿರುವುದು. ನಿನ್ನ ಸಿಂಹಾಸನವು ಶಾಶ್ವತವಾಗಿರುವುದು.’”
17 ಆ ದರ್ಶನದಲ್ಲಿ ದೇವರು ತನಗೆ ಹೇಳಿದ ಪ್ರತಿಯೊಂದನ್ನು ನಾತಾನನು ದಾವೀದನಿಗೆ ತಿಳಿಸಿದನು.
ದಾವೀದನು ದೇವರಲ್ಲಿ ಪ್ರಾರ್ಥಿಸುವನು
18 ಆಗ ರಾಜನಾದ ದಾವೀದನು ಹೋಗಿ ಯೆಹೋವನ ಸನ್ನಿಧಿಯಲ್ಲಿ ಕುಳಿತು,
“ನನ್ನ ಒಡೆಯನಾದ ಯೆಹೋವನೇ, ನಾನೆಷ್ಟರವನು? ನನ್ನ ಕುಲ ಎಷ್ಟರದು? ನೀನು ನನ್ನನ್ನೇಕೆ ಇಷ್ಟು ಉದ್ಧರಿಸಿದೆ? 19 ನಾನು ಕೇವಲ ನಿನ್ನ ಸೇವಕನು. ನೀನು ನನ್ನ ಮೇಲೆ ಬಹಳ ದಯೆ ತೋರಿಸಿರುವೆ. ನನಗೆ ಮಾತ್ರವಲ್ಲದೆ ನೀನು ನನ್ನ ಮುಂದಿನ ಸಂತಾನದ ಬಗ್ಗೆಯೂ ಇದೇ ರೀತಿಯ ದಯಾಪರವಾದ ಮಾತುಗಳನ್ನು ಆಡಿರುವೆ. ನನ್ನ ಒಡೆಯನಾದ ಯೆಹೋವನೇ, ನರಪ್ರಾಣಿಯಾದ ನನ್ನೊಂದಿಗೆ ಇಂಥ ಮಹತ್ತಾದ ಕಾರ್ಯ ಮಾಡಬಹುದೇ? 20 ನಾನು ನಿನಗೆ ಇನ್ನೇನು ಹೇಳಲಿ? ನಿನ್ನ ಜೊತೆ ಹೇಗೆ ಮಾತನಾಡುತ್ತಲೇ ಇರಲಿ? ನನ್ನ ಒಡೆಯನಾದ ಯೆಹೋವನೇ, ನಾನು ನಿನ್ನ ಸೇವಕನೆಂಬುದು ನಿನಗೆ ತಿಳಿದಿದೆ. 21 ನೀನು ಈ ಕಾರ್ಯವನ್ನು ನಿನ್ನ ವಾಗ್ದಾನದ ಪ್ರಕಾರವಾಗಿಯೂ ನಿನ್ನ ಚಿತ್ತದ ಪ್ರಕಾರವಾಗಿಯೂ ಮಾಡಿರುವೆ ಮತ್ತು ನಿನ್ನ ಸೇವಕನಿಗೆ ಅದನ್ನು ತಿಳಿಸಿರುವೆ. 22 ದೇವರಾದ ಯೆಹೋವನೇ, ನಾನು ಕೇಳಿದ ಪ್ರಕಾರ ನೀನೇ ದೊಡ್ಡವನು; ನಿನ್ನ ಸಮಾನರು ಬೇರೆ ಯಾರೂ ಇಲ್ಲ; ನಿನ್ನ ಹೊರತು ಬೇರೆ ದೇವರಿಲ್ಲ.
23 “ನಿನ್ನ ಜನರಾದ ಇಸ್ರೇಲರಂಥವರು ಈ ಲೋಕದಲ್ಲಿ ಬೇರೆ ಯಾರೂ ಇಲ್ಲ, ಅವರು ವಿಶೇಷವಾದ ಜನರು. ಅವರು ಗುಲಾಮರಾಗಿದ್ದರು, ಆದರೆ ಅವರನ್ನು ಈಜಿಪ್ಟಿನಿಂದ ನೀನು ಹೊರತಂದು ಸ್ವತಂತ್ರರನ್ನಾಗಿ ಮಾಡಿರುವೆ. ನೀನು ಅವರನ್ನು ನಿನ್ನ ಜನರನ್ನಾಗಿ ಮಾಡಿಕೊಂಡೆ. ಇಸ್ರೇಲರಿಗಾಗಿ ನೀನು ಉತ್ತಮವಾದ ಮತ್ತು ಮಹತ್ತಾದ ಕಾರ್ಯಗಳನ್ನು ಮಾಡಿದೆ. ನಿನ್ನ ದೇಶಕ್ಕಾಗಿ ನೀನು ಮಹತ್ಕಾರ್ಯಗಳನ್ನು ಮಾಡಿದೆ. 24 ಇಸ್ರೇಲಿನ ಜನರನ್ನು ಎಂದೆಂದಿಗೂ ನಿನ್ನ ಸ್ವಂತ ಜನರನ್ನಾಗಿ ಮಾಡಿಕೊಂಡೆ. ಯೆಹೋವನೇ, ನೀನು ಅವರಿಗಾಗಿ ದೇವರಾದೆ.
25 “ದೇವರಾದ ಯೆಹೋವನೇ, ಈಗ ನೀನು ನನ್ನ ಬಗ್ಗೆ ಮಾತನಾಡಿರುವೆ. ನಾನು ನಿನ್ನ ಸೇವಕ. ನೀನು ನನ್ನ ಕುಲದ ಬಗ್ಗೆಯೂ ವಾಗ್ದಾನ ಮಾಡಿರುವೆ. ನಿನ್ನ ವಾಗ್ದಾನಗಳನ್ನು ನೆರವೇರಿಸು. ನೀನು ವಾಗ್ದಾನ ಮಾಡಿದ ಕಾರ್ಯಗಳನ್ನು ಮಾಡು. 26 ಆಗ ನಿನ್ನ ಹೆಸರು ಎಂದೆಂದೂ ಗೌರವಿಸಲ್ಪಡುತ್ತದೆ. ಜನರೆಲ್ಲರೂ ‘ಸರ್ವಶಕ್ತನಾದ ಯೆಹೋವನೇ ಇಸ್ರೇಲರ ದೇವರು!’ ಎಂದು ಹೇಳುವರು. ಅಲ್ಲದೆ ‘ನಿನ್ನ ಸೇವಕನಾದ ದಾವೀದನ ಕುಟುಂಬವು ನಿನ್ನ ಸನಿಧಿಯಲ್ಲಿ ಸ್ಥಿರವಾಗುವುದು’ ಎಂದು ಹೇಳುವರು.
27 “ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನೇ, ನೀನು ನನಗೆ ಮುಂದಿನ ಸಂಗತಿಗಳನ್ನು ತೋರಿಸಿರುವೆ. ‘ನಾನು ನಿನ್ನ ಕುಟುಂಬವನ್ನು ಸ್ಥಿರಪಡಿಸುವೆನು’ ಎಂದು ಹೇಳಿರುವೆ. ಆ ಕಾರಣದಿಂದಲೇ ನಿನ್ನ ಸೇವಕನಾದ ನಾನು ನಿನ್ನಲ್ಲಿ ಈ ಪ್ರಾರ್ಥನೆಯನ್ನು ಸಲ್ಲಿಸಲು ತೀರ್ಮಾನಿಸಿದ್ದೇನೆ. 28 ನನ್ನ ಒಡೆಯನಾದ ಯೆಹೋವನೇ, ನೀನೇ ದೇವರು. ನಿನ್ನ ಮಾತುಗಳು ಸತ್ಯವಾದವು. ನಿನ್ನ ಸೇವಕನಾದ ನನಗೆ ಅತೀ ಉತ್ತಮವಾದ ವಾಗ್ದಾನಗಳನ್ನು ಮಾಡಿರುವೆ. 29 ದಯವಿಟ್ಟು ನನ್ನ ಕುಟುಂಬವನ್ನು ಆಶೀರ್ವದಿಸು. ಅದು ನಿನ್ನ ಸನ್ನಿಧಿಯಲ್ಲಿ ಎಂದೆಂದಿಗೂ ಮುಂದುವರಿಯಲಿ. ದೇವರಾದ ಯೆಹೋವನೇ, ಆಶ್ಚರ್ಯಕರವಾದ ವಾಗ್ದಾನಗಳನ್ನು ನೀನು ನನಗೆ ಮಾಡಿರುವೆ. ನಿನ್ನ ಆಶೀರ್ವಾದದಿಂದ ನನ್ನ ಕುಟುಂಬವು ಎಂದೆಂದಿಗೂ ಆಶೀರ್ವಾದವನ್ನು ಹೊಂದಲಿ” ಎಂದು ಪ್ರಾರ್ಥಿಸಿದನು.
Kannada Holy Bible: Easy-to-Read Version. All rights reserved. © 1997 Bible League International