Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
1 ಸಮುವೇಲನು 9-12

ಸೌಲನು ತನ್ನ ತಂದೆಯ ಕತ್ತೆಗಳನ್ನು ಹುಡುಕುವನು

ಬೆನ್ಯಾಮೀನ್ ಕುಲದ ಕೀಷನು ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದನು. ಕೀಷನು ಅಬೀಯೇಲನ ಮಗ. ಅಬೀಯೇಲನು ಚೆರೋರನ ಮಗ. ಚೆರೋರನು ಬೆಕೋರತನ ಮಗ. ಬೆಕೋರತನು ಅಫೀಹನ ಮಗ. ಇವರೆಲ್ಲರು ಬೆನ್ಯಾಮೀನನ ಕುಲಕ್ಕೆ ಸೇರಿದವರು. ಕೀಷನಿಗೆ ಸೌಲನೆಂಬ ಹೆಸರುಳ್ಳ ಒಬ್ಬ ಮಗನಿದ್ದನು. ಸೌಲನು ಸುಂದರನಾದ ಯುವಕನಾಗಿದ್ದನು. ಸೌಲನಿಗಿಂತ ಸುಂದರರು ಅಲ್ಲಿರಲಿಲ್ಲ. ಸೌಲನು ಇತರ ಇಸ್ರೇಲ್ ಗಂಡಸರಿಗಿಂತ ಎತ್ತರವಾಗಿದ್ದನು.

ಒಂದು ದಿನ ಕೀಷನ ಕತ್ತೆಗಳು ಕಳೆದುಹೋದವು. ಆದ್ದರಿಂದ ಕೀಷನು ಸೌಲನಿಗೆ, “ಸೇವಕನೊಬ್ಬನನ್ನು ಕರೆದುಕೊಂಡು ಕತ್ತೆಗಳನ್ನು ಹುಡುಕಲು ಹೋಗು” ಎಂದು ಹೇಳಿದನು. ಸೌಲನು ಕತ್ತೆಗಳನ್ನು ಹುಡುಕಲು ಆರಂಭಿಸಿದನು. ಸೌಲನು ಮತ್ತು ಅವನ ಸೇವಕನು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿ ಹುಡುಕಿದರೂ ಅವರಿಗೆ ಕತ್ತೆಗಳು ಸಿಗಲಿಲ್ಲ. ಆದ್ದರಿಂದ ಅವರು ಶಾಲೀಮ್ ಪ್ರದೇಶದಲ್ಲೆಲ್ಲಾ ಹುಡುಕಿದರು; ಅಲ್ಲಿಯೂ ಅವರ ಕತ್ತೆಗಳು ಸಿಕ್ಕಲಿಲ್ಲ. ಆದ್ದರಿಂದ ಅವರು ಬೆನ್ಯಾಮೀನನ ಪ್ರದೇಶದಲ್ಲೆಲ್ಲಾ ಹುಡುಕಿದರು; ಅಲ್ಲಿಯೂ ಅವರ ಕತ್ತೆಗಳು ಸಿಗಲಿಲ್ಲ.

ಕೊನೆಗೆ, ಸೌಲನು ಮತ್ತು ಅವನ ಸೇವಕನು ಚೂಫ್ ಎಂಬ ಹೆಸರಿನ ಪಟ್ಟಣಕ್ಕೆ ಬಂದರು. ಸೌಲನು ಸೇವಕನಿಗೆ, “ನಾವು ಮರಳಿ ಹೋಗೋಣ. ನಮ್ಮ ತಂದೆಯು ಕತ್ತೆಗಳ ಬಗ್ಗೆ ಯೋಚಿಸುವುದನ್ನು ಬಿಟ್ಟು ನಮ್ಮ ಬಗ್ಗೆ ಚಿಂತಿಸಲಾರಂಭಿಸುತ್ತಾನೆ” ಎಂದು ಹೇಳಿದನು.

ಆದರೆ ಆ ಸೇವಕನು, “ಈ ಪಟ್ಟಣದಲ್ಲಿ ಒಬ್ಬ ದೇವರ ಮನುಷ್ಯನಿದ್ದಾನೆ. ಜನರು ಅವನನ್ನು ಗೌರವಿಸುತ್ತಾರೆ. ಅವನು ಹೇಳುವ ವಿಷಯಗಳೆಲ್ಲ ನಿಜವಾಗುತ್ತವೆ. ಆದ್ದರಿಂದ ಈ ಪಟ್ಟಣಕ್ಕೆ ಹೋಗೋಣ ಬಹುಶಃ ನಾವು ಮುಂದೆ ಎಲ್ಲಿಗೆ ಹೋಗಬೇಕೆಂಬುದನ್ನು ಈ ದೇವರ ಮನುಷ್ಯನು ತಿಳಿಸಬಹುದು” ಎಂದು ಉತ್ತರಿಸಿದನು.

ಸೌಲನು ತನ್ನ ಸೇವಕನಿಗೆ, “ನಾವು ಪಟ್ಟಣದೊಳಗೆ ಹೋಗೋಣ, ಆದರೆ ಆ ಮನುಷ್ಯನಿಗೆ ಕೊಡಲು ನಮ್ಮಲ್ಲಿ ಏನೂ ಇಲ್ಲ. ನಮ್ಮ ಚೀಲದಲ್ಲಿದ್ದ ಆಹಾರವೆಲ್ಲ ಮುಗಿದಿದೆ. ಆ ದೇವರ ಮನುಷ್ಯನಿಗೆ ನೀಡಲು ನಮ್ಮಲ್ಲಿ ಕಾಣಿಕೆಯೂ ಇಲ್ಲ. ಹೀಗಾಗಿ ನಾವು ಅವನಿಗೆ ಏನು ಕೊಡಬೇಕು?” ಎಂದು ಕೇಳಿದನು.

ಆ ಸೇವಕನು ಸೌಲನಿಗೆ, “ಇಲ್ಲಿ ನೋಡು, ನನ್ನ ಬಳಿ ಸ್ವಲ್ಪ ಹಣವಿದೆ. ಇದನ್ನು ಆ ದೇವರ ಮನುಷ್ಯನಿಗೆ ಕೊಡೋಣ. ನಾವು ಎಲ್ಲಿಗೆ ಹೋಗಬೇಕೆಂಬುದನ್ನು ಅವನು ತಿಳಿಸುತ್ತಾನೆ” ಎಂದು ಉತ್ತರಿಸಿದನು.

(ಹಿಂದಿನ ಕಾಲದಲ್ಲಿ ಇಸ್ರೇಲರು ಪ್ರವಾದಿಯನ್ನು “ದರ್ಶಿ” ಎಂದು ಕರೆಯುತ್ತಿದ್ದರು. ದೇವರಿಂದ ಏನಾದರೂ ಕೇಳಬೇಕಾಗಿದ್ದರೆ, “ದರ್ಶಿಯ ಬಳಿಗೆ ಹೋಗೋಣ” ಎನ್ನುತ್ತಿದ್ದರು.)

10 ಸೌಲನು ತನ್ನ ಸೇವಕನಿಗೆ, “ಒಳ್ಳೆಯ ಆಲೋಚನೆ; ನಡೆ ಹೋಗೋಣ” ಎಂದು ಹೇಳಿದನು. ಅವರು ಆ ಪಟ್ಟಣದಲ್ಲಿ ದೇವರ ಮನುಷ್ಯನಿದ್ದಲ್ಲಿಗೆ ಹೋದರು. 11 ಸೌಲನು ಮತ್ತು ಆ ಸೇವಕನು ಬೆಟ್ಟದ ಮೇಲೆ ನಡೆಯುತ್ತಾ ಆ ಪಟ್ಟಣಕ್ಕೆ ಹೋದರು. ಆ ದಾರಿಯಲ್ಲಿ ಅವರು ಕೆಲವು ಸ್ತ್ರೀಯರನ್ನು ಸಂಧಿಸಿದರು. ಆ ಸ್ತ್ರೀಯರು ನೀರನ್ನು ತರಲು ಹೋಗುತ್ತಿದ್ದರು. ಸೌಲನು ಮತ್ತು ಆ ಸೇವಕನು, “ದರ್ಶಿಯು ಇಲ್ಲಿರುವನೇ?” ಎಂದು ಆ ಯುವತಿಯರನ್ನು ಕೇಳಿದರು.

12 ಆ ಯುವತಿಯರು, “ಹೌದು ದರ್ಶಿಯು ಇಲ್ಲಿದ್ದಾನೆ. ಅವನು ದಾರಿಯಲ್ಲಿ ನಿಮಗಿಂತ ಸ್ವಲ್ಪ ಮುಂದೆ ಹೋಗುತ್ತಿದ್ದಾನೆ. ಈ ಹೊತ್ತು ನಮ್ಮ ಊರಿನವರು ಗುಡ್ಡದ ಮೇಲೆ ಯಜ್ಞವನ್ನು ಅರ್ಪಿಸುವುದರಿಂದ ಅವನು ಇಲ್ಲಿಗೆ ಬಂದಿದ್ದಾನೆ. 13 ನೀವು ಪಟ್ಟಣದೊಳಕ್ಕೆ ಹೋದರೆ ಅವನನ್ನು ಕಾಣಬಹುದು. ನೀವು ಬೇಗನೆ ನೋಡಬೇಕೆಂದಿದ್ದರೆ, ಅವನು ಊಟ ಮಾಡುವುದಕ್ಕಾಗಿ ಆರಾಧನೆಯ ಸ್ಥಳಕ್ಕೆ ಹೋಗುವುದಕ್ಕಿಂತ ಮೊದಲೇ ಅವನನ್ನು ಕಾಣಬೇಕು. ದರ್ಶಿಯು ಯಜ್ಞವನ್ನು ಆಶೀರ್ವದಿಸಬೇಕಾಗಿರುವುದರಿಂದ ಅವನು ಅಲ್ಲಿಗೆ ಹೋಗುವವರೆಗೆ ಜನರು ಊಟಮಾಡುವುದಿಲ್ಲ. ಆದ್ದರಿಂದ ನೀವು ಬೇಗನೆ ಹೋದರೆ ಅವನನ್ನು ಕಾಣಬಹುದು” ಎಂದು ಹೇಳಿದರು.

14 ಸೌಲನು ಮತ್ತು ಆ ಸೇವಕನು ಗುಡ್ಡವನ್ನು ಹತ್ತಿ ಪಟ್ಟಣದ ಕಡೆ ನಡೆದರು. ಅವರು ಪಟ್ಟಣವನ್ನು ಪ್ರವೇಶಿಸುತ್ತಿದ್ದಾಗ, ಸಮುವೇಲನು ಅವರ ಕಡೆ ಬರುತ್ತಿರುವುದನ್ನು ಕಂಡರು. ಸಮುವೇಲನು ಆಗ ತಾನೇ ಪಟ್ಟಣದಿಂದ ಹೊರಬಂದು, ಆರಾಧನೆಯ ಸ್ಥಳದ ಕಡೆ ಹೊರಟಿದ್ದನು.

15 ಹಿಂದಿನ ದಿನ, ಯೆಹೋವನು ಸಮುವೇಲನಿಗೆ, 16 “ನಾಳೆ ಇದೇ ಸಮಯಕ್ಕೆ ನಾನು ನಿನ್ನ ಬಳಿಗೆ ಒಬ್ಬ ಮನುಷ್ಯನನ್ನು ಕಳುಹಿಸುತ್ತೇನೆ. ಅವನು ಬೆನ್ಯಾಮೀನ್ ಕುಟುಂಬಕ್ಕೆ ಸೇರಿದವನು. ನೀನು ಅವನನ್ನು ಅಭಿಷೇಕಿಸು. ನನ್ನ ಜನರಾದ ಇಸ್ರೇಲರಿಗೆ ಅವನು ರಾಜನಾಗುತ್ತಾನೆ. ಈ ಮನುಷ್ಯನು ನನ್ನ ಜನರನ್ನು ಫಿಲಿಷ್ಟಿಯರಿಂದ ರಕ್ಷಿಸುತ್ತಾನೆ. ನನ್ನ ಜನರ ಸಂಕಟವನ್ನು ನಾನು ನೋಡಿದ್ದೇನೆ; ನನ್ನ ಜನರ ಗೋಳನ್ನು ನಾನು ಆಲಿಸಿದ್ದೇನೆ” ಎಂದು ತಿಳಿಸಿದ್ದನು.

17 ಸಮುವೇಲನು ಸೌಲನನ್ನು ಕಂಡಾಗ ಯೆಹೋವನು ಅವನಿಗೆ, “ನಾನು ನಿನಗೆ ಹೇಳಿದ ಮನುಷ್ಯ ಇವನೇ. ಇವನು ನನ್ನ ಜನರನ್ನು ಆಳುತ್ತಾನೆ” ಎಂದು ಹೇಳಿದನು.

18 ಸೌಲನು ಹೊರಬಾಗಿಲಿನ ಬಳಿಯಿಂದ ಸಮುವೇಲನ ಬಳಿಗೆ ಬಂದನು. ಸೌಲನು ಸಮುವೇಲನನ್ನು, “ದರ್ಶಿಯ ಮನೆ ಎಲ್ಲಿದೆ ಎಂಬುದನ್ನು ದಯವಿಟ್ಟು ನನಗೆ ಹೇಳಿ” ಎಂದು ಕೇಳಿದನು.

19 ಸಮುವೇಲನು, “ನಾನೇ ಆ ದರ್ಶಿ. ನನ್ನೊಡನೆ ಆರಾಧನೆಯ ಸ್ಥಳಕ್ಕೆ ಬಾ. ನೀನು ಮತ್ತು ನಿನ್ನ ಸೇವಕ ಈ ದಿನ ನನ್ನ ಜೊತೆಯಲ್ಲಿ ಊಟಮಾಡಬೇಕು. ನಾನು ನಿಮ್ಮನ್ನು ನಾಳೆ ಬೆಳಿಗ್ಗೆ ನಿಮ್ಮ ಮನೆಗೆ ಕಳುಹಿಸುತ್ತೇನೆ. ನಿಮ್ಮ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುತ್ತೇನೆ. 20 ಮೂರು ದಿನಗಳ ಹಿಂದೆ ಕಳೆದು ಹೋದ ನಿನ್ನ ಕತ್ತೆಗಳಿಗಾಗಿ ಚಿಂತಿಸಬೇಡ. ಅವುಗಳೆಲ್ಲ ಸಿಕ್ಕಿವೆ. ಈಗ ಇಸ್ರೇಲರಿಗೆಲ್ಲ ನೀನು ಬೇಕಾಗಿರುವೆ. ಅವರಿಗೆ ನೀನು ಮತ್ತು ನಿನ್ನ ತಂದೆಯ ಕುಟುಂಬದ ಜನರೆಲ್ಲ ಬೇಕಾಗಿದ್ದಾರೆ” ಎಂದು ಹೇಳಿದನು.

21 ಅದಕ್ಕೆ ಸೌಲನು, “ನಾನು ಬೆನ್ಯಾಮೀನ್ ಕುಲದವನು. ಅದು ಇಸ್ರೇಲರಲ್ಲಿ ಒಂದು ಚಿಕ್ಕ ಕುಲ. ನನ್ನ ಕುಟುಂಬವು ಬೆನ್ಯಾಮೀನ್ ಕುಲದಲ್ಲಿ ತೀರ ಕನಿಷ್ಠವಾದುದು. ಇಸ್ರೇಲರಿಗೆ ನಾನು ಬೇಕಾಗಿದ್ದೇನೆ ಎಂದು ಏಕೆ ಹೇಳುತ್ತಿರುವೆ?” ಎಂದು ಕೇಳಿದನು.

22 ಆಗ ಸಮುವೇಲನು ಸೌಲನನ್ನು ಮತ್ತು ಅವನ ಸೇವಕನನ್ನು ಊಟದ ಸ್ಥಳಕ್ಕೆ ಕರೆದುಕೊಂಡು ಹೋದನು. ಒಟ್ಟಿಗೆ ಊಟ ಮಾಡಲು ಮತ್ತು ಯಜ್ಞವಸ್ತುಗಳನ್ನು ಹಂಚಿಕೊಳ್ಳಲು ಸುಮಾರು ಮೂವತ್ತು ಜನರನ್ನು ಆಹ್ವಾನಿಸಲಾಗಿತ್ತು. ಸಮುವೇಲನು ಸೌಲನಿಗೆ ಮತ್ತು ಅವನ ಸೇವಕನಿಗೆ ಊಟದ ಮೇಜಿನಲ್ಲಿ ಅತೀ ಮುಖ್ಯವಾದ ಸ್ಥಳವನ್ನು ನೀಡಿದನು. 23 ಸಮುವೇಲನು ಅಡಿಗೆಯವನಿಗೆ, “ನಾನು ನಿನಗೆ ಕೊಟ್ಟಿದ್ದ ಮಾಂಸವನ್ನು ತೆಗೆದುಕೊಂಡು ಬಾ; ಪ್ರತ್ಯೇಕವಾಗಿಡಬೇಕೆಂದು ನಾನು ನಿನಗೆ ಹೇಳಿದ್ದ ಭಾಗವೇ ಅದು” ಎಂದು ಹೇಳಿದನು.

24 ಅಡಿಗೆಯವನು ತೊಡೆಯ ಮಾಂಸವನ್ನು ತೆಗೆದುಕೊಂಡು ಬಂದು ಸೌಲನ ಎದುರಿಗೆ ಮೇಜಿನ ಮೇಲಿಟ್ಟನು. ಸಮುವೇಲನು, “ನಾನು ನಿನಗಾಗಿ ಈ ಮಾಂಸವನ್ನು ಪ್ರತ್ಯೇಕವಾಗಿರಿಸಿದ್ದೇನೆ. ಇದನ್ನು ತಿನ್ನು, ಏಕೆಂದರೆ ಇದನ್ನು ಈ ವಿಶೇಷವಾದ ಸಂದರ್ಭದಲ್ಲಿ ನಿನಗೆ ಕೊಡುವುದಕ್ಕಾಗಿಯೇ ಪ್ರತ್ಯೇಕಿಸಲಾಗಿತ್ತು” ಎಂದು ಹೇಳಿದನು. ಆದ್ದರಿಂದ ಸೌಲನು ಸಮುವೇಲನ ಜೊತೆಯಲ್ಲಿ ಆ ದಿನ ಊಟಮಾಡಿದನು.

25 ಅವರು ಊಟಮಾಡಿದ ನಂತರ, ಆರಾಧನಾ ಸ್ಥಳದಿಂದ ಇಳಿದುಬಂದು, ಪಟ್ಟಣಕ್ಕೆ ಹಿಂದಿರುಗಿದರು. ಸಮುವೇಲನು ಮಲಗಲು ಸೌಲನಿಗಾಗಿ ಮಾಳಿಗೆಯ ಮೇಲೆ ಹಾಸಿಗೆಯನ್ನು ಸಿದ್ಧಪಡಿಸಿದನು. ಸೌಲನು ಅಲ್ಲಿ ಮಲಗಿಕೊಂಡನು.

26 ಮಾರನೆಯ ದಿನ ಬೆಳಗಿನ ಜಾವ, ಸಮುವೇಲನು ಮಾಳಿಗೆಯ ಮೇಲೆ ಮಲಗಿದ್ದ ಸೌಲನನ್ನು ಎಬ್ಬಿಸಿ, “ಎದ್ದೇಳು, ನಿನ್ನನ್ನು ಕಳುಹಿಸಿಕೊಡುತ್ತೇನೆ” ಎಂದು ಹೇಳಿದನು. ಸೌಲನು ಮೇಲೆದ್ದನು ಮತ್ತು ಸಮುವೇಲನೊಂದಿಗೆ ಮನೆಯಿಂದ ಹೊರಗೆ ಹೊರಟನು.

27 ಸೌಲನೂ ಅವನ ಸೇವಕನೂ ಸಮುವೇಲನೂ ಪಟ್ಟಣದ ಅಂಚಿನಲ್ಲಿ ಒಟ್ಟಾಗಿ ನಡೆಯುತ್ತಿದ್ದಾಗ, ಸಮುವೇಲನು ಸೌಲನಿಗೆ, “ನಿನ್ನ ಸೇವಕನಿಗೆ ನಮ್ಮಿಂದ ಮುಂದೆ ಹೋಗಲು ತಿಳಿಸು. ನಾನು ದೇವರ ಸಂದೇಶವನ್ನು ನಿನಗೆ ತಿಳಿಸಬೇಕಾಗಿದೆ” ಎಂದು ಹೇಳಿದನು. ಆದಕಾರಣ ಸೇವಕನು ಅವರಿಂದ ಮುಂದೆ ನಡೆದನು.

ಸಮುವೇಲನಿಂದ ಸೌಲನಿಗೆ ಅಭಿಷೇಕ

10 ಸಮುವೇಲನು ವಿಶೇಷವಾದ ಎಣ್ಣೆಯ ಕುಪ್ಪಿಯನ್ನು ತೆಗೆದುಕೊಂಡು ಸೌಲನ ತಲೆಯ ಮೇಲೆ ಆ ಎಣ್ಣೆಯನ್ನು ಸುರಿದನು. ಸಮುವೇಲನು ಸೌಲನಿಗೆ ಮುದ್ದಿಟ್ಟು, “ಯೆಹೋವನು ತನ್ನ ಜನರನ್ನು ಮುಂದೆ ನಡೆಸಲು ನಿನ್ನನ್ನು ಅವರಿಗೆ ನಾಯಕನನ್ನಾಗಿ ಅಭಿಷೇಕಿಸಿದ್ದಾನೆ. ನೀನು ಯೆಹೋವನ ಜನರನ್ನು ಆಳುವೆ; ಅವರನ್ನು ಸುತ್ತುವರೆದಿರುವ ಶತ್ರುಗಳಿಂದ ರಕ್ಷಿಸುವೆ. ಯೆಹೋವನು ತನ್ನ ಜನರನ್ನು ಆಳುವುದಕ್ಕಾಗಿ ನಿನ್ನನ್ನು ಅಭಿಷೇಕಿಸಿದ್ದಾನೆ. ಇದು ನಿಜವೆಂಬುದಕ್ಕೆ ಸಾಕ್ಷಿಯೇನೆಂದರೆ: ಈ ದಿನ ನನ್ನನ್ನು ಬಿಟ್ಟು ನೀನು ಮುಂದೆ ಸಾಗಿದಾಗ, ಬೆನ್ಯಾಮೀನನ ಮೇರೆಯಲ್ಲಿರುವ ಚೆಲ್ಚಹಿನಲ್ಲಿನ ರಾಹೇಲಳ ಸಮಾಧಿಯ ಬಳಿ ಇಬ್ಬರು ಮನುಷ್ಯರನ್ನು ಸಂಧಿಸುವೆ. ಅವರಿಬ್ಬರೂ ನಿನಗೆ, ‘ನೀನು ಹುಡುಕುತ್ತಿದ್ದ ಕತ್ತೆಗಳು ಒಬ್ಬನಿಗೆ ಸಿಕ್ಕಿವೆ. ನಿನ್ನ ತಂದೆಯು ಕತ್ತೆಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಿನ್ನ ಬಗ್ಗೆ ಚಿಂತಿಸುತ್ತಿದ್ದಾನೆ. ನನ್ನ ಮಗನು ಎಲ್ಲಿಗೆ ಹೋದನೋ ಎಂದು ಹಂಬಲಿಸುತ್ತಿದ್ದಾನೆ’ ಎಂದು ಹೇಳುವರು” ಎಂದನು.

ಸಮುವೇಲನು, “ನೀನು ಅಲ್ಲಿಂದ ಮುಂದೆ ಹೋಗುತ್ತಾ ತಾಬೋರಿನ ಹತ್ತಿರವಿರುವ ಒಂದು ದೊಡ್ಡ ಓಕ್ ವೃಕ್ಷದ ಬಳಿಗೆ ಬರುವೆ. ಅಲ್ಲಿ ನಿನ್ನನ್ನು ಮೂರು ಜನರು ಭೇಟಿಯಾಗುತ್ತಾರೆ. ಆ ಮೂರು ಜನರು ದೇವರ ಆರಾಧನೆಗಾಗಿ ಬೇತೇಲಿಗೆ ಹೋಗುತ್ತಿರುತ್ತಾರೆ. ಮೊದಲನೆಯವನು ಮೂರು ಮರಿ ಹೋತಗಳನ್ನೂ ಎರಡನೆಯವನು ಮೂರು ರೊಟ್ಟಿಗಳನ್ನೂ ಮೂರನೆಯವನು ಒಂದು ಸೀಸೆ ದ್ರಾಕ್ಷಾರಸವನ್ನೂ ತೆಗೆದುಕೊಂಡು ಹೋಗುತ್ತಿರುತ್ತಾರೆ. ಈ ಮೂವರೂ ನಿನ್ನ ಕ್ಷೇಮವನ್ನು ವಿಚಾರಿಸುತ್ತಾರೆ. ಅವರು ನಿನಗೆ ಎರಡು ರೊಟ್ಟಿಗಳನ್ನು ಕೊಡುತ್ತಾರೆ. ನೀನು ಆ ಎರಡು ರೊಟ್ಟಿಗಳನ್ನು ಅವರಿಂದ ತೆಗೆದುಕೊಳ್ಳುವೆ. ನಂತರ ನೀನು ಗಿಬಿಯತ್ ಎಲೋಹಿಮಿಗೆ ಹೋಗುವೆ. ಅಲ್ಲಿ ಒಂದು ಫಿಲಿಷ್ಟಿಯರ ಕೋಟೆಯಿದೆ. ನೀನು ಆ ಪಟ್ಟಣಕ್ಕೆ ಬಂದಾಗ, ಪ್ರವಾದಿಗಳ ಗುಂಪೊಂದು ಹೊರಬರುತ್ತದೆ. ಈ ಪ್ರವಾದಿಗಳು ಆರಾಧನಾ ಸ್ಥಳದಿಂದ ಇಳಿದು ಬರುತ್ತಾರೆ, ಅವರು ಪ್ರವಾದಿಸುತ್ತಿರುತ್ತಾರೆ. ಅವರು ಸ್ವರಮಂಡಲವನ್ನೂ ದಮ್ಮಡಿಯನ್ನೂ ಕೊಳಲನ್ನೂ ಕಿನ್ನರಿಯನ್ನೂ ನುಡಿಸುತ್ತಿರುತ್ತಾರೆ. ಆಗ ಯೆಹೋವನ ಆತ್ಮವು ಮಹಾಶಕ್ತಿಯೊಡನೆ ನಿನ್ನ ಮೈಮೇಲೆ ಬರುತ್ತದೆ. ನೀನು ಮಾರ್ಪಾಟಾಗಿ ಬೇರೊಬ್ಬ ಮನುಷ್ಯನಾಗುವೆ. ನೀನೂ ಆ ಪ್ರವಾದಿಗಳಂತೆ ಪ್ರವಾದಿಸಲು ಆರಂಭಿಸುವೆ. ಈ ಕಾರ್ಯಗಳು ಸಂಭವಿಸಿದ ಮೇಲೆ, ನೀನು ನಿನ್ನ ನಿರ್ಧಾರದಂತೆ ಮಾಡು. ಯಾಕೆಂದರೆ ದೇವರು ನಿನ್ನೊಂದಿಗಿರುತ್ತಾನೆ.

“ನನಗಿಂತ ಮೊದಲು ನೀನು ಗಿಲ್ಗಾಲಿಗೆ ಹೋಗು. ನಾನು ನಿನ್ನನ್ನು ಅಲ್ಲಿ ಭೇಟಿಯಾಗುತ್ತೇನೆ. ನಾನು ಅಲ್ಲಿ ಸರ್ವಾಂಗಹೋಮಗಳನ್ನು ಮತ್ತು ಸಮಾಧಾನಯಜ್ಞಗಳನ್ನು ಅರ್ಪಿಸುತ್ತೇನೆ. ಆದರೆ ನೀನು ಏಳು ದಿನಗಳವರೆಗೆ ಕಾಯಲೇಬೇಕು. ಅನಂತರ ನಾನು ನಿನ್ನ ಬಳಿಗೆ ಬಂದು ನೀನು ಮಾಡಬೇಕಾದದ್ದನ್ನು ತಿಳಿಸುತ್ತೇನೆ” ಎಂದು ಹೇಳಿದನು.

ಸೌಲನು ಪ್ರವಾದಿಗಳಂತಾಗುವನು

ಸೌಲನು ಸಮುವೇಲನನ್ನು ಬಿಟ್ಟುಹೊರಡಲು ತಿರುಗಿದಂತೆಯೇ ದೇವರು ಸಹ ಸೌಲನ ಜೀವಿತವನ್ನು ಮಾರ್ಪಾಟು ಮಾಡಿದನು. ಅಂದು ಆ ಸಂಗತಿಗಳೆಲ್ಲಾ ಸಂಭವಿಸಿದವು. 10 ಸೌಲನು ಮತ್ತು ಅವನ ಸೇವಕನು ಗಿಬಿಯತ್ ಎಲೋಹಿಮಿಗೆ ಹೋದರು. ಸೌಲನು ಆ ಸ್ಥಳದಲ್ಲಿ ಪ್ರವಾದಿಗಳ ಸಮೂಹವನ್ನು ಸಂಧಿಸಿದನು. ದೇವರ ಆತ್ಮವು ಮಹಾಶಕ್ತಿಯೊಡನೆ ಸೌಲನ ಮೈಮೇಲೆ ಬಂದಿತು. ಆಗ ಸೌಲನು ಪ್ರವಾದಿಗಳ ಜೊತೆಯಲ್ಲಿ ಪ್ರವಾದಿಸಿದನು. 11 ಸೌಲನನ್ನು ಮೊದಲು ನೋಡಿದ್ದ ಜನರು, ಪ್ರವಾದಿಗಳ ಜೊತೆಯಲ್ಲಿ ಸೌಲನು ಪ್ರವಾದಿಸುತ್ತಿರುವುದನ್ನು ಕಂಡರು. ಈ ಜನರು, “ಕೀಷನ ಮಗನಿಗೆ ಏನಾಯಿತು? ಸೌಲನೂ ಪ್ರವಾದಿಗಳಲ್ಲಿ ಒಬ್ಬನಾದನೇ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

12 ಆಗ ಗಿಬಿಯತ್ ಎಲೋಹಿಮಿನಲ್ಲಿ ವಾಸಿಸುತ್ತಿದ್ದ ಮನುಷ್ಯನೊಬ್ಬನು, “ಹೌದು, ಅವನು ಅವರ ನಾಯಕನಂತೆ ಕಾಣುತ್ತಿದ್ದಾನೆ” ಎಂದು ಹೇಳಿದನು. ಆದ್ದರಿಂದಲೇ, “ಸೌಲನೂ ಪ್ರವಾದಿಗಳಲ್ಲಿ ಒಬ್ಬನಾದನು” ಎಂಬ ಗಾದೆಯು ಹುಟ್ಟಿಕೊಂಡಿತು.

ಮನೆಗೆ ಸೌಲನ ಆಗಮನ

13 ಸೌಲನು ಪ್ರವಾದಿಸಿದ ನಂತರ, ತನ್ನ ಮನೆಯ ಸಮೀಪದಲ್ಲಿದ್ದ ಸ್ಥಳಕ್ಕೆ ಆರಾಧನೆಗೋಸ್ಕರ ಹೋದನು.

14 ಸೌಲನ ಚಿಕ್ಕಪ್ಪನು ಸೌಲನನ್ನು ಮತ್ತು ಅವನ ಸೇವಕನನ್ನು, “ನೀವು ಎಲ್ಲಿಗೆ ಹೋಗಿದ್ದಿರಿ?” ಎಂದು ಕೇಳಿದನು.

ಸೌಲನು ಅವನಿಗೆ, “ನಾವು ಕತ್ತೆಗಳನ್ನು ಹುಡುಕುತ್ತಿದ್ದೆವು. ನಾವು ಅವುಗಳನ್ನು ಕಂಡುಕೊಳ್ಳಲಾರದೆ ಹೋದಾಗ ಸಮುವೇಲನನ್ನು ನೋಡಲು ಹೋದೆವು” ಎಂದು ಹೇಳಿದನು.

15 ಸೌಲನ ಚಿಕ್ಕಪ್ಪನು, “ಸಮುವೇಲನು ನಿನಗೆ ಹೇಳಿದ್ದನ್ನು ನನಗೆ ದಯವಿಟ್ಟು ತಿಳಿಸು” ಎಂದು ಹೇಳಿದನು.

16 ಸೌಲನು ಅವನಿಗೆ, “ಕತ್ತೆಗಳು ಈಗಾಗಲೇ ಸಿಕ್ಕಿವೆ ಎಂದು ಸಮುವೇಲನು ಹೇಳಿದನು” ಅಂದನು. ಸೌಲನು ತನ್ನ ಚಿಕ್ಕಪ್ಪನಿಗೆ ಎಲ್ಲವನ್ನೂ ತಿಳಿಸಲಿಲ್ಲ. ರಾಜ್ಯದ ಬಗ್ಗೆ ಸಮುವೇಲನು ಹೇಳಿದ ಮಾತುಗಳನ್ನು ಸೌಲನು ತನ್ನ ಚಿಕ್ಕಪ್ಪನಿಗೆ ತಿಳಿಸಲಿಲ್ಲ.

ಸೌಲನು ರಾಜನೆಂದು ಸಮುವೇಲನ ಪ್ರಕಟನೆ

17 ಸಮುವೇಲನು ಇಸ್ರೇಲರನ್ನು ಮಿಚ್ಪೆಗೆ ಕರೆಸಿ, ಯೆಹೋವನ ಸನ್ನಿಧಿಯಲ್ಲಿ ಸಭೆಸೇರಿಸಿದನು. 18 ಸಮುವೇಲನು ಅವರಿಗೆ, “ಇಸ್ರೇಲರ ದೇವರಾದ ಯೆಹೋವನು ಹೇಳುವುದೇನೆಂದರೆ, ‘ನಾನು ಇಸ್ರೇಲರನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದೆನು. ನಾನು ಈಜಿಪ್ಟಿನವರ ಆಳ್ವಿಕೆಯಿಂದ ಮತ್ತು ನಿಮಗೆ ಹಾನಿಮಾಡಲು ಪ್ರಯತ್ನಿಸಿದ ಇತರ ರಾಜ್ಯಗಳಿಂದ ರಕ್ಷಿಸಿದೆನು’ ಎನ್ನುತ್ತಾನೆ. 19 ಆದರೆ ಇಂದು ನೀವು ನಿಮ್ಮ ದೇವರನ್ನು ತಿರಸ್ಕರಿಸಿರುವಿರಿ. ನಿಮ್ಮ ದೇವರು ನಿಮ್ಮನ್ನು ಕಷ್ಟಗಳಿಂದ ಮತ್ತು ಸಮಸ್ಯೆಗಳಿಂದ ರಕ್ಷಿಸುತ್ತಾನೆ. ಆದರೆ ನೀವು, ‘ಇಲ್ಲ, ನಮ್ಮನ್ನಾಳಲು ನಮಗೊಬ್ಬ ರಾಜನು ಬೇಕು’ ಎಂದು ಕೇಳಿದಿರಿ. ಈಗ ಬನ್ನಿ, ನೀವು, ನಿಮ್ಮ ಕುಲಗಳ ಮತ್ತು ಗೋತ್ರಗಳ ಸಮೇತವಾಗಿ ಯೆಹೋವನ ಸಮ್ಮುಖದಲ್ಲಿ ನಿಲ್ಲಿರಿ” ಎಂದು ಹೇಳಿದನು.

20 ಸಮುವೇಲನು ಇಸ್ರೇಲಿನ ಎಲ್ಲಾ ಕುಲದವರನ್ನು ಹತ್ತಿರಕ್ಕೆ ಕರೆದನು. ನಂತರ ಸಮುವೇಲನು ಹೊಸ ರಾಜನನ್ನು ಆರಿಸಲು ಚೀಟು ಹಾಕತೊಡಗಿದನು. ಮೊದಲನೆಯದಾಗಿ, ಬೆನ್ಯಾಮೀನ್ ಕುಲವು ಆರಿಸಲ್ಪಟ್ಟಿತು. 21 ಬೆನ್ಯಾಮೀನ್ ಕುಲದಲ್ಲಿ ಒಂದು ಕುಟುಂಬವನ್ನು ಆರಿಸಿಕೊಳ್ಳುವುದಕ್ಕಾಗಿ ಮತ್ತೆ ಚೀಟು ಹಾಕಲಾಯಿತು. ಅದರಲ್ಲಿ ಮಟ್ರಿಯ ಕುಟುಂಬವು ಆರಿಸಲ್ಪಟ್ಟಿತು. ನಂತರ ಸಮುವೇಲನು ಮಟ್ರಿಯ ಕುಟುಂಬದ ಪ್ರತಿಯೊಬ್ಬನನ್ನು ಸಮೀಪಕ್ಕೆ ಕರೆದು ಅವರಲ್ಲಿ ಒಬ್ಬನನ್ನು ಆರಿಸಿಕೊಳ್ಳುವುದಕ್ಕಾಗಿ ಚೀಟು ಹಾಕಿದನು. ಅದರಲ್ಲಿ ಕೀಷನ ಮಗನಾದ ಸೌಲನು ಆರಿಸಲ್ಪಟ್ಟನು.

ಆದರೆ ಜನರು ಸೌಲನನ್ನು ಹುಡುಕಿದಾಗ ಅವರಿಗೆ ಅವನು ಸಿಕ್ಕಲಿಲ್ಲ. 22 ಆಗ ಅವರು ಯೆಹೋವನನ್ನು, “ಸೌಲನು ಇಲ್ಲಿಗೆ ಬರುವನೋ?” ಎಂದು ಕೇಳಿದರು.

ಯೆಹೋವನು, “ಸೌಲನು ಸರಕುಗಳ ಹಿಂದೆ ಅಡಗಿಕೊಂಡಿದ್ದಾನೆ” ಎಂದು ಹೇಳಿದನು.

23 ಜನರು ಓಡಿಹೋಗಿ, ಸರಕುಗಳ ಹಿಂದೆ ಅಡಗಿಕೊಂಡಿದ್ದ ಸೌಲನನ್ನು ಹಿಡಿದುಕೊಂಡು ಬಂದರು. ಸೌಲನು ಜನರ ಮಧ್ಯದಲ್ಲಿ ನಿಂತುಕೊಂಡನು. ಸೌಲನು ಇತರ ಜನರಿಗಿಂತ ಎತ್ತರವಾಗಿದ್ದನು.

24 ಸಮುವೇಲನು ಜನರೆಲ್ಲರಿಗೆ, “ಯೆಹೋವನು ಆರಿಸಿಕೊಂಡಿರುವ ಮನುಷ್ಯನನ್ನು ನೋಡಿದಿರಾ! ಸರ್ವಜನರಲ್ಲಿಯೂ ಸೌಲನಂತಹ ಮನುಷ್ಯನು ಇನ್ನೊಬ್ಬನಿಲ್ಲ!” ಎಂದು ಹೇಳಿದನು.

ಆಗ ಜನರೆಲ್ಲ, “ರಾಜನು ಚಿರಂಜೀವಿಯಾಗಿರಲಿ” ಎಂದು ಆರ್ಭಟಿಸಿದರು.

25 ಸಮುವೇಲನು ಜನರಿಗೆ ರಾಜನೀತಿಯ ನಿಯಮಗಳನ್ನು ವಿವರಿಸಿದನು. ಅವನು ಒಂದು ಪುಸ್ತಕದಲ್ಲಿ ಆ ನಿಯಮಗಳನ್ನು ಬರೆದನು. ಅವನು ಯೆಹೋವನ ಸನ್ನಿಧಿಯಲ್ಲಿ ಆ ಪುಸ್ತಕವನ್ನಿಟ್ಟನು. ಬಳಿಕ ಸಮುವೇಲನು ಜನರನ್ನು ಮನೆಗಳಿಗೆ ಹಿಂದಿರುಗಲು ಹೇಳಿದನು.

26 ಸೌಲನು ಸಹ ಗಿಬೆಯದ ತನ್ನ ಮನೆಗೆ ಹೋದನು. ಕೆಲವು ಶೂರರು ದೈವಪ್ರೇರಣೆಯಿಂದ ಸೌಲನನ್ನು ಹಿಂಬಾಲಿಸಿದರು. 27 ಆದರೆ ಕೆಲವು ಕಿರುಕುಳಕಾರರು, “ಈ ಮನುಷ್ಯನು ಹೇಗೆ ತಾನೆ ನಮ್ಮನ್ನು ರಕ್ಷಿಸುವನು?” ಎಂದು ಹೇಳಿದರು. ಅವರು ಸೌಲನ ಬಗ್ಗೆ ಕೆಟ್ಟಮಾತುಗಳನ್ನು ಆಡಿದರು; ಅವನನ್ನು ತಿರಸ್ಕರಿಸಿ, ಕಾಣಿಕೆಗಳನ್ನು ತಂದುಕೊಡಲಿಲ್ಲ. ಆದರೆ ಸೌಲನು ಏನೂ ಮಾತನಾಡಲಿಲ್ಲ.

ಅಮ್ಮೋನಿಯರ ರಾಜನಾದ ನಾಹಾಷ

ಅಮ್ಮೋನಿಯರ ರಾಜನಾದ ನಾಹಾಷನು, ಗಾದ್ ಮತ್ತು ರೂಬೆನ್ ಕುಲದವರಿಗೆ ಕಿರುಕುಳಕೊಡುತ್ತಿದ್ದನು. ನಾಹಾಷನು ಪ್ರತಿ ಮನುಷ್ಯನ ಬಲಗಣ್ಣನ್ನು ಕಿತ್ತುಹಾಕುತ್ತಿದ್ದನು. ನಾಹಾಷನು ಅವರಿಗೆ ಸಹಾಯಮಾಡಲು ಯಾರಿಗೂ ಅವಕಾಶಕೊಡುತ್ತಿರಲಿಲ್ಲ. ಅಮ್ಮೋನಿಯರ ರಾಜನಾದ ನಾಹಾಷನು ಜೋರ್ಡನ್ ನದಿಯ ಪೂರ್ವ ಪ್ರದೇಶದಲ್ಲಿ ವಾಸವಾಗಿದ್ದ ಎಲ್ಲ ಇಸ್ರೇಲರ ಬಲಗಣ್ಣನ್ನು ಕಿತ್ತುಹಾಕುತ್ತಿದ್ದನು. ಆದ್ದರಿಂದ ಅಮ್ಮೋನಿಯರಿಂದ ಏಳು ಸಾವಿರ ಮಂದಿ ಇಸ್ರೇಲರು ಯಾಬೇಷ್ ಗಿಲ್ಯಾದಿಗೆ ಓಡಿಹೋದರು.

11 ಅಮ್ಮೋನಿಯನಾದ ನಾಹಾಷನು ಒಂದು ತಿಂಗಳ ನಂತರ, ತನ್ನ ಸೈನ್ಯದೊಂದಿಗೆ ಯಾಬೇಷ್‌ಗಿಲ್ಯಾದಿಗೆ ಮುತ್ತಿಗೆ ಹಾಕಿದನು. ಯಾಬೇಷಿನ ಜನರೆಲ್ಲ ನಾಹಾಷನಿಗೆ, “ನೀನು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳುವುದಾದರೆ, ನಾವು ನಿನ್ನ ಸೇವೆಮಾಡುತ್ತೇವೆ” ಎಂದು ಹೇಳಿದರು.

ಆದರೆ ಅಮ್ಮೋನಿಯನಾದ ನಾಹಾಷನು, “ನಾನು ನಿಮ್ಮಲ್ಲಿ ಪ್ರತಿಯೊಬ್ಬರ ಬಲಗಣ್ಣನ್ನು ಕಿತ್ತುಹಾಕಿದಾಗ ಮಾತ್ರ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇನೆ. ಆಗ ಇಸ್ರೇಲರಿಗೆಲ್ಲಾ ಅವಮಾನವಾಗುವುದು” ಎಂದು ಉತ್ತರಿಸಿದನು.

ಯಾಬೇಷಿನ ಹಿರಿಯರು ನಾಹಾಷನಿಗೆ, “ನಮಗೆ ಏಳು ದಿನಗಳವರೆಗೆ ಸಮಯ ಕೊಡು. ನಾವು ಇಸ್ರೇಲಿನ ಎಲ್ಲಾ ಕಡೆಗೆ ದೂತರನ್ನು ಕಳುಹಿಸುತ್ತೇವೆ. ನಮ್ಮನ್ನು ರಕ್ಷಿಸಲು ಯಾರೂ ಬರದಿದ್ದರೆ ನಾವೆಲ್ಲ ನಿನ್ನ ಬಳಿಗೆ ಬರುತ್ತೇವೆ ಹಾಗೂ ನಿನಗೆ ಅಧೀನರಾಗುತ್ತೇವೆ” ಎಂದು ಹೇಳಿದರು.

ಸೌಲನು ಯಾಬೇಷ್ ಗಿಲ್ಯಾದನ್ನು ರಕ್ಷಿಸುವನು

ಸೌಲನು ವಾಸವಾಗಿದ್ದ ಗಿಬೆಯಕ್ಕೆ ಸಂದೇಶಕರು ಬಂದು ಜನರಿಗೆ ಸುದ್ದಿಯನ್ನು ತಿಳಿಸಿದರು. ಜನರು ಗಟ್ಟಿಯಾಗಿ ಅತ್ತರು. ಸೌಲನು ಹಸುಗಳನ್ನು ಹೊಡೆದುಕೊಂಡು ಹೊಲಕ್ಕೆ ಹೋಗಿದ್ದನು. ಸೌಲನು ಹೊಲದಿಂದ ಬಂದಾಗ ಜನರೆಲ್ಲ ಅಳುವುದು ಕೇಳಿಸಿತು. ಸೌಲನು, “ಏನಾಯಿತು? ಜನರು ಅಳುತ್ತಿರುವುದೇಕೆ?” ಎಂದು ಕೇಳಿದನು.

ಆಗ ಜನರೆಲ್ಲ ಯಾಬೇಷಿನ ಸಂದೇಶಕರು ಹೇಳಿದ್ದನ್ನೆಲ್ಲ ಸೌಲನಿಗೆ ತಿಳಿಸಿದರು. ಅವರು ಹೇಳಿದ್ದನ್ನು ಕೇಳಿದಾಗ ದೇವರಾತ್ಮನು ಸೌಲನ ಮೈಮೇಲೆ ಮಹಾಶಕ್ತಿಯೊಡನೆ ಬಂದಿತು. ಸೌಲನು ಬಹುಕೋಪಗೊಂಡನು. ಸೌಲನು ಒಂದು ಜೊತೆ ಹಸುಗಳನ್ನು ತೆಗೆದುಕೊಂಡು ಅವುಗಳನ್ನು ತುಂಡುತುಂಡಾಗಿ ಕತ್ತರಿಸಿ ಆ ತುಂಡುಗಳನ್ನು ಸಂದೇಶಕರಿಗೆ ಕೊಟ್ಟನು. “ಇಸ್ರೇಲಿನ ನಾಡಿನಲ್ಲೆಲ್ಲಾ ಈ ತುಂಡುಗಳನ್ನು ತೆಗೆದುಕೊಂಡು ಹೋಗಿ ಅವರಿಗೆ, ‘ಸೌಲನನ್ನೂ ಮತ್ತು ಸಮುವೇಲನನ್ನೂ ಹಿಂಬಾಲಿಸಿರಿ, ಸೌಲನನ್ನು ಮತ್ತು ಸಮುವೇಲನನ್ನು ಯಾರು ಹಿಂಬಾಲಿಸುವುದಿಲ್ಲವೋ, ಯಾರು ಅವರಿಗೆ ಸಹಾಯ ಮಾಡುವುದಿಲ್ಲವೋ ಅಂತಹವರ ಹಸುಗಳಿಗೂ ಇದೇ ಗತಿಯಾಗುತ್ತದೆ’ ಎಂದು ತಿಳಿಸಿರಿ” ಎಂದನು.

ಯೆಹೋವನ ಮೇಲೆ ಜನರಲ್ಲಿ ಹೆಚ್ಚು ಭಯವುಂಟಾಯಿತು. ಅವರೆಲ್ಲಾ ಒಂದೇ ಮನಸ್ಸಿನಿಂದ ಒಟ್ಟಾಗಿ ಸೇರಿ ಬಂದರು. ಸೌಲನು ಬೆಜೆಕಿನಲ್ಲಿ ಅವರೆಲ್ಲರನ್ನೂ ಒಟ್ಟುಗೂಡಿಸಿದನು. ಅಲ್ಲಿ ಮೂರು ಲಕ್ಷ ಇಸ್ರೇಲರೂ ಮೂವತ್ತು ಸಾವಿರ ಯೆಹೂದ್ಯರೂ ಇದ್ದರು.

ಸೌಲನು ಮತ್ತು ಅವನ ಸೈನಿಕರು ಯಾಬೇಷಿನ ಸಂದೇಶಕರಿಗೆ, “ಗಿಲ್ಯಾದಿನ ಯಾಬೇಷ್ ಜನರಿಗೆ ನಾಳೆ ನಡುಮಧ್ಯಾಹ್ನದೊಳಗೆ ನಿಮ್ಮನ್ನು ರಕ್ಷಿಸುತ್ತೇವೆಂದು ತಿಳಿಸಿ” ಎಂಬುದಾಗಿ ಹೇಳಿದರು.

ಯಾಬೇಷಿನ ಜನರಿಗೆ ಸೌಲನ ಸಂದೇಶವನ್ನು ಸಂದೇಶಕರು ತಿಳಿಸಿದರು. ಯಾಬೇಷಿನ ಜನರು ಹರ್ಷಿತರಾದರು. 10 ನಂತರ ಯಾಬೇಷಿನ ಜನರು ಅಮ್ಮೋನಿಯದ ನಾಹಾಷನಿಗೆ, “ನಾವು ನಾಳೆ ನಿನ್ನ ಬಳಿಗೆ ಬರುತ್ತೇವೆ. ಆಗ ನಿನಗೆ ತೋಚಿದ್ದನ್ನು ನಮಗೆ ಮಾಡು” ಎಂದು ಹೇಳಿದರು.

11 ಮಾರನೆಯ ದಿನ ಬೆಳಿಗ್ಗೆ ಸೌಲನು ತನ್ನ ಸೈನ್ಯವನ್ನು ಮೂರು ಗುಂಪುಗಳಾಗಿ ವಿಂಗಡಿಸಿದನು. ಸೌಲನು ಮತ್ತು ಅವನ ಸೈನಿಕರು ಬೆಳಗಿನ ಜಾವದಲ್ಲೇ ಅಮ್ಮೋನಿಯರ ಶಿಬಿರದೊಳಕ್ಕೆ ನುಗ್ಗಿದರು. ಅವರು ಆ ದಿನ ಬೆಳಗಿನ ಜಾವ ಶಿಬಿರ ರಕ್ಷಕರನ್ನು ಬದಲಾಯಿಸುತ್ತಿದ್ದಂತೆಯೇ ಸೌಲನು ಆಕ್ರಮಣ ಮಾಡಿದನು. ಸೌಲನು ಮತ್ತು ಅವನ ಸೈನಿಕರು ನಡುಮಧ್ಯಾಹ್ನದೊಳಗೆ ಅಮ್ಮೋನಿಯರನ್ನು ಸೋಲಿಸಿದರು. ಅಮ್ಮೋನಿಯ ಸೈನಿಕರೆಲ್ಲರೂ ದಿಕ್ಕುಪಾಲಾಗಿ ಓಡಿಹೋದರು; ಅವರು ಒಟ್ಟಾಗಿ ಸೇರಿಬರಲು ಸಾಧ್ಯವಾಗಲಿಲ್ಲ.

12 ತರುವಾಯ ಜನರೆಲ್ಲರು ಸಮುವೇಲನಿಗೆ, “ಸೌಲನು ರಾಜನಾಗಿ ಆಳುವುದು ಬೇಕಿಲ್ಲ ಎಂದು ಹೇಳಿದ್ದ ಜನರೆಲ್ಲ ಎಲ್ಲಿ ಹೋದರು? ಅವರನ್ನು ನಮಗೆ ಒಪ್ಪಿಸಿ, ನಾವು ಅವರನ್ನು ಕೊಂದುಹಾಕುತ್ತೇವೆ” ಎಂದು ಹೇಳಿದರು.

13 ಆದರೆ ಸೌಲನು, “ಯೆಹೋವನು ಇಸ್ರೇಲನ್ನು ರಕ್ಷಿಸಿದ್ದಾನೆ. ಈ ದಿನ ಯಾರನ್ನೂ ಕೊಲ್ಲುವುದು ಬೇಡ” ಎಂದು ಹೇಳಿದನು.

14 ಬಳಿಕ ಸಮುವೇಲನು, “ನಾವೆಲ್ಲ ಗಿಲ್ಗಾಲಿಗೆ ಹೋಗಿ ಸೌಲನನ್ನು ಮತ್ತೆ ರಾಜನನ್ನಾಗಿ ಮಾಡೋಣ” ಎಂದು ಜನರಿಗೆ ಹೇಳಿದನು.

15 ಜನರೆಲ್ಲ ಗಿಲ್ಗಾಲಿಗೆ ಹೋದರು. ಅಲ್ಲಿ ಯೆಹೋವನ ಸಮ್ಮುಖದಲ್ಲಿ ಜನರೆಲ್ಲ ಸೌಲನನ್ನು ರಾಜನನ್ನಾಗಿ ಮಾಡಿದರು. ಅವರೆಲ್ಲರು ಯೆಹೋವನಿಗೆ ಸಮಾಧಾನಯಜ್ಞಗಳನ್ನು ಅರ್ಪಿಸಿದರು. ಸೌಲನು ಮತ್ತು ಇಸ್ರೇಲರೆಲ್ಲಾ ಒಂದು ದೊಡ್ಡ ಉತ್ಸವವನ್ನೇ ಮಾಡಿದರು.

ಸಮುವೇಲನು ಇಸ್ರೇಲರಿಗೆ ರಾಜನ ಕುರಿತು ಹೇಳಿದ ಮಾತುಗಳು

12 ಸಮುವೇಲನು ಇಸ್ರೇಲರೆಲ್ಲರಿಗೆ, “ನೀವು ನನ್ನಿಂದ ಅಪೇಕ್ಷಿಸಿದ ಎಲ್ಲವನ್ನೂ ನಾನು ಮಾಡಿರುತ್ತೇನೆ. ನಾನು ನಿಮಗಾಗಿ ಒಬ್ಬ ರಾಜನನ್ನು ನೇಮಿಸಿದ್ದೇನೆ. ಈಗ ನಿಮ್ಮನ್ನು ಮುನ್ನಡೆಸಲು ಒಬ್ಬ ರಾಜನಿದ್ದಾನೆ. ನಾನು ಮುದುಕನಾಗಿರುವೆ ಮತ್ತು ನನ್ನ ತಲೆ ನರೆತುಹೋಗಿದೆ. ನನ್ನ ಗಂಡುಮಕ್ಕಳು ನಿಮ್ಮೊಂದಿಗಿದ್ದಾರೆ. ನಾನು ಚಿಕ್ಕಂದಿನಿಂದಲೇ ನಿಮ್ಮ ನಾಯಕನಾಗಿದ್ದೆ. ನಾನು ಇಲ್ಲಿದ್ದೇನೆ. ನಾನು ಯಾವ ತಪ್ಪುಗಳನ್ನಾದರೂ ಮಾಡಿದ್ದರೆ, ನೀವು ಯೆಹೋವನಿಗೆ ಮತ್ತು ಆತನು ಆರಿಸಿರುವ ರಾಜನಿಗೆ ಅವುಗಳನ್ನು ಹೇಳಲೇಬೇಕು. ನಾನು ಬೇರೊಬ್ಬರ ಹಸುವನ್ನಾಗಲಿ ಕತ್ತೆಯನ್ನಾಗಲಿ ಕದ್ದಿರುವೆನೇ? ನಾನು ಯಾರನ್ನಾದರೂ ನೋಯಿಸಿರುವೆನೇ? ವಂಚಿಸಿರುವೆನೇ? ನಾನು ತಪ್ಪುಮಾಡಲು ಯಾರಿಂದಲಾದರೂ ಹಣವನ್ನಾಗಲೀ ಪಾದರಕ್ಷೆಗಳನ್ನಾಗಲೀ ತೆಗೆದುಕೊಂಡಿರುವೆನೇ? ನಾನು ಈ ಕಾರ್ಯಗಳನ್ನು ಮಾಡಿರುವುದಾದರೆ ತಿಳಿಸಿ, ಅವುಗಳನ್ನು ಸರಿಪಡಿಸುತ್ತೇನೆ” ಎಂದು ಹೇಳಿದನು.

ಇಸ್ರೇಲರು, “ಇಲ್ಲ, ನೀನು ನಮಗೆ ಕೆಟ್ಟದ್ದೇನನ್ನೂ ಮಾಡಿಲ್ಲ. ನೀನು ನಮ್ಮನ್ನು ಎಂದೂ ವಂಚಿಸಿಲ್ಲ; ನಮ್ಮಿಂದ ಏನನ್ನೂ ತೆಗೆದುಕೊಂಡಿಲ್ಲ” ಎಂದು ಉತ್ತರಿಸಿದರು.

ಸಮುವೇಲನು ಇಸ್ರೇಲರಿಗೆ, “ನಿಮ್ಮ ಮಾತುಗಳಿಗೆಲ್ಲ ಯೆಹೋವನೇ ಸಾಕ್ಷಿ. ಯೆಹೋವನಿಂದ ಆಯ್ಕೆಯಾದ ರಾಜನೂ ಈ ದಿನ ಸಾಕ್ಷಿಯಾಗಿದ್ದಾನೆ. ನೀವು ನನ್ನಲ್ಲಿ ಯಾವ ತಪ್ಪನ್ನೂ ಗುರುತಿಸಿಲ್ಲವೆನ್ನುವುದಕ್ಕೆ ಈ ಇಬ್ಬರು ಸಾಕ್ಷಿಗಳಾಗಿದ್ದಾರೆ” ಎಂದು ಹೇಳಿದನು. ಜನರು, “ಹೌದು, ಯೆಹೋವನೇ ಸಾಕ್ಷಿ” ಎಂದು ಉತ್ತರಿಸಿದರು.

ಆಗ ಸಮುವೇಲನು ಜನರಿಗೆ, “ಯೆಹೋವನೇ ಸಾಕ್ಷಿ. ಯೆಹೋವನು, ಮೋಶೆ ಆರೋನರನ್ನು ಆರಿಸಿಕೊಂಡನು. ಆತನು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ಇಲ್ಲಿ ನಿಂತುಕೊಂಡು ಕೇಳಿರಿ. ಯೆಹೋವನು ನಿಮಗೆ ಮತ್ತು ನಿಮ್ಮ ಪೂರ್ವಿಕರಿಗೆ ಮಾಡಿದ ಒಳ್ಳೆಯ ಕಾರ್ಯಗಳನ್ನು ನಾನು ನಿಮಗೆ ತಿಳಿಸುತ್ತೇನೆ.

“ಯಾಕೋಬನು ಈಜಿಪ್ಟಿಗೆ ಹೋದನು. ತರುವಾಯ, ಈಜಿಪ್ಟಿನವರು ಅವನ ವಂಶದವರಿಗೆ ಜೀವನವನ್ನು ಕಠಿಣಗೊಳಿಸಿದರು. ಆದ್ದರಿಂದ ಅವರು ಯೆಹೋವನಲ್ಲಿ ಸಹಾಯಕ್ಕಾಗಿ ಮೊರೆಯಿಟ್ಟರು. ಯೆಹೋವನು ಮೋಶೆ ಆರೋನರನ್ನು ಕಳುಹಿಸಿದನು. ಮೋಶೆ ಆರೋನರು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಹೊರತಂದು ಇಲ್ಲಿ ನೆಲೆಗೊಳಿಸಿದರು.

“ಆದರೆ ನಿಮ್ಮ ಪೂರ್ವಿಕರು ತಮ್ಮ ದೇವರಾದ ಯೆಹೋವನನ್ನು ಮರೆತುಬಿಟ್ಟದ್ದರಿಂದ ಆತನು ಅವರನ್ನು ಸೀಸೆರನ ಗುಲಾಮರಾಗಲು ಬಿಟ್ಟುಬಿಟ್ಟನು. ಸೀಸೆರನು ಹಾಚೋರಿನ ಸೈನ್ಯಾಧಿಪತಿ. ನಂತರ ಯೆಹೋವನು ಅವರನ್ನು ಫಿಲಿಷ್ಟಿಯರ ಮತ್ತು ಮೋವಾಬ್ ರಾಜನ ಗುಲಾಮರಾಗುವಂತೆ ಬಿಟ್ಟುಬಿಟ್ಟನು. ಅವರೆಲ್ಲರು ನಿಮ್ಮ ವಂಶದವರ ವಿರುದ್ಧ ಹೋರಾಡಿದರು. 10 ಆದರೆ ನಿಮ್ಮ ಪೂರ್ವಿಕರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟು, ‘ನಾವು ಯೆಹೋವನಾದ ನಿನ್ನನ್ನು ಬಿಟ್ಟು ಸುಳ್ಳುದೇವರಾದ ಬಾಳನ ಮತ್ತು ಸುಳ್ಳುದೇವತೆಯಾದ ಅಷ್ಟೋರೆತಳ ಸೇವೆ ಮಾಡಿ ಪಾಪಮಾಡಿದ್ದೇವೆ. ಆದರೆ ಈಗ ನಮ್ಮನ್ನು ಶತ್ರುಗಳಿಂದ ರಕ್ಷಿಸು; ಆಗ ನಾವು ನಿನ್ನ ಸೇವೆಮಾಡುತ್ತೇವೆ’ ಎಂದು ಹೇಳಿದರು.

11 “ಆದ್ದರಿಂದ ಯೆಹೋವನು ಯೆರುಬ್ಬಾಳ್, ಬಾರಾಕ್, ಯೆಫ್ತಾಹ ಮತ್ತು ಸಮುವೇಲ ಎಂಬವರನ್ನು ಕಳುಹಿಸಿದನು. ನಿಮ್ಮನ್ನು ಸುತ್ತುವರಿದಿದ್ದ ಶತ್ರುಗಳಿಂದ ಯೆಹೋವನು ರಕ್ಷಿಸಿದನು. ನೀವು ಸುರಕ್ಷಿತವಾಗಿ ವಾಸಿಸಿದಿರಿ. 12 ಆದರೆ ಅಮ್ಮೋನಿಯರ ರಾಜನಾದ ನಾಹಾಷನು ನಿಮ್ಮ ವಿರುದ್ಧ ಹೋರಾಡಲು ಬರುತ್ತಿರುವುದನ್ನು ಕಂಡು ನೀವು, ‘ನಮ್ಮನ್ನಾಳಲು ನಮಗೆ ಒಬ್ಬ ರಾಜ ಬೇಕು’ ಎಂದು ಕೇಳಿದಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮ ರಾಜನಾಗಿದ್ದರೂ ನೀವು ಹೀಗೆ ಕೇಳಿದಿರಿ. 13 ಇಗೋ, ನೀವು ಆಸೆಪಟ್ಟು ಆರಿಸಿದ ರಾಜನು ಇಲ್ಲಿರುವನು. ಯೆಹೋವನು ಈ ರಾಜನನ್ನು ನಿಮಗೆ ನೇಮಿಸಿದ್ದಾನೆ. 14 ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ನಿರಂತರವಾಗಿ ರಕ್ಷಿಸುತ್ತಾನೆ. ಆದರೆ ನೀವು ಈ ಕಾರ್ಯಗಳನ್ನು ಮಾಡಿದರೆ ಮಾತ್ರ ದೇವರು ನಿಮ್ಮನ್ನು ರಕ್ಷಿಸುತ್ತಾನೆ: ನೀವು ಯೆಹೋವನನ್ನು ಗೌರವಿಸಬೇಕು ಮತ್ತು ಆತನ ಸೇವೆ ಮಾಡಬೇಕು. ನೀವು ಆತನ ಆಜ್ಞೆಗಳನ್ನು ವಿರೋಧಿಸಬಾರದು. ನಿಮ್ಮ ದೇವರಾದ ಯೆಹೋವನ ಮಾರ್ಗವನ್ನು ನೀವು ಮತ್ತು ನಿಮ್ಮನ್ನು ಆಳುವ ರಾಜನು ಅನುಸರಿಸಬೇಕು. ನೀವು ಈ ಕಾರ್ಯಗಳನ್ನು ಮಾಡಿದಾಗ ದೇವರು ನಿಮ್ಮನ್ನು ರಕ್ಷಿಸುತ್ತಾನೆ. 15 ಆದರೆ ನೀವು ಯೆಹೋವನಿಗೆ ವಿಧೇಯರಾಗಿ ನಡೆಯದಿದ್ದರೆ ಮತ್ತು ಆತನ ಆಜ್ಞೆಗಳನ್ನು ವಿರೋಧಿಸಿದರೆ, ಆತನು ನಿಮ್ಮ ಪೂರ್ವಿಕರಿಗೆ ವಿರೋಧವಾಗಿದ್ದಂತೆ ನಿಮಗೂ ವಿರೋಧವಾಗಿಯೇ ಇರುವನು.

16 “ಈಗ ಯೆಹೋವನು ನಿಮ್ಮ ಕಣ್ಣುಗಳ ಮುಂದೆ ಮಾಡುವ ಮಹತ್ಕಾರ್ಯಗಳನ್ನು ನೋಡುವುದಕ್ಕಾಗಿ ಅಲುಗಾಡದೆ ನಿಂತುಕೊಳ್ಳಿ. 17 ಈಗ ಗೋಧಿಯ ಸುಗ್ಗಿಕಾಲ. ನಾನು ಯೆಹೋವನಲ್ಲಿ ಪ್ರಾರ್ಥಿಸುತ್ತೇನೆ. ಆತನು ಗುಡುಗನ್ನು ಮತ್ತು ಮಳೆಯನ್ನು ಕಳುಹಿಸಲೆಂದು ನಾನು ಪ್ರಾರ್ಥಿಸುತ್ತೇನೆ. ರಾಜನು ಬೇಕೆಂದು ನೀವು ಕೇಳಿದ್ದು ಯೆಹೋವನಿಗೆ ವಿರುದ್ಧವಾಗಿ ನೀವು ಮಾಡಿದ ಎಂತಹ ಕೆಟ್ಟಕಾರ್ಯವಾಗಿದೆ ಎಂಬದನ್ನು ನಿಮಗೇ ತಿಳಿಯುತ್ತದೆ” ಎಂದು ಹೇಳಿದನು.

18 ಸಮುವೇಲನು ಯೆಹೋವನಲ್ಲಿ ಪ್ರಾರ್ಥಿಸಿದನು. ಅದೇ ದಿನ ಯೆಹೋವನು ಗುಡುಗು ಮತ್ತು ಮಳೆಗಳನ್ನು ಕಳುಹಿಸಿದನು. ಜನರು ಯೆಹೋವನ ಬಗ್ಗೆ ಮತ್ತು ಸಮುವೇಲನ ಬಗ್ಗೆ ಬಹಳ ಭಯಗೊಂಡರು. 19 ಜನರೆಲ್ಲಾ ಸಮುವೇಲನಿಗೆ, “ನಿನ್ನ ಸೇವಕರಾದ ನಮಗಾಗಿ, ನಿನ್ನ ದೇವರಾದ ಯೆಹೋವನಲ್ಲಿ ಪ್ರಾರ್ಥಿಸು. ನಮ್ಮನ್ನು ಸಾಯಲು ಬಿಡಬೇಡ. ನಾವು ಅನೇಕ ಸಲ ಪಾಪಗಳನ್ನು ಮಾಡಿದ್ದೇವೆ. ಈಗ ನಾವು ರಾಜನನ್ನು ಕೇಳಿಕೊಂಡಿದ್ದು ನಮ್ಮ ಪಾಪಗಳೊಂದಿಗೆ ಮತ್ತೊಂದು ಪಾಪವನ್ನು ಮಾಡಿದಂತಾಯಿತು” ಎಂದು ಹೇಳಿದರು.

20 ಸಮುವೇಲನು, “ಭಯಪಡಬೇಡಿ. ಅದೇನೋ ನಿಜ. ನೀವು ಆ ಕೆಟ್ಟಕಾರ್ಯಗಳನ್ನೆಲ್ಲಾ ಮಾಡಿದಿರಿ. ಆದರೆ ಯೆಹೋವನ ಮಾರ್ಗದಲ್ಲಿ ನಡೆಯುವುದನ್ನು ನಿಲ್ಲಿಸದಿರಿ. ಯೆಹೋವನ ಸೇವೆಯನ್ನು ಪೂರ್ಣಹೃದಯದಿಂದ ಮಾಡಿರಿ. 21 ವಿಗ್ರಹಗಳು ಕೇವಲ ಪ್ರತಿಮೆಗಳಷ್ಟೇ. ಅವು ನಿಮಗೆ ಸಹಾಯ ಮಾಡಲಾರವು. ಆದ್ದರಿಂದ ಅವುಗಳನ್ನು ಪೂಜಿಸಬೇಡಿ. ವಿಗ್ರಹಗಳು ನಿಮಗೆ ಸಹಾಯ ಮಾಡಲಾರವು ಮತ್ತು ರಕ್ಷಿಸಲಾರವು. ಅವುಗಳಿಂದ ಪ್ರಯೋಜನವೇನೂ ಇಲ್ಲ.

22 “ಆದರೆ ಯೆಹೋವನು ತನ್ನ ಜನರನ್ನು ಕೈಬಿಡುವುದಿಲ್ಲ. ಯೆಹೋವನು ನಿಮ್ಮನ್ನು ತನ್ನ ಸ್ವಂತ ಜನರನ್ನಾಗಿ ಮಾಡಿಕೊಳ್ಳಲು ಇಷ್ಟಪಟ್ಟನು. ಆದ್ದರಿಂದ ಆತನು ತನ್ನ ಮಹಾ ಹೆಸರಿನ ನಿಮಿತ್ತವಾಗಿ ನಿಮ್ಮನ್ನು ತ್ಯಜಿಸುವುದಿಲ್ಲ. 23 ನಾನು ನಿಮಗಾಗಿ ಪ್ರಾರ್ಥಿಸದಿದ್ದರೆ ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದವನಾಗುತ್ತೇನೆ. ನಾನು ನಿಮಗೆ ಒಳ್ಳೆಯದೂ ಯೋಗ್ಯವೂ ಆಗಿರುವ ಮಾರ್ಗವನ್ನು ಉಪದೇಶಿಸುತ್ತೇನೆ. 24 ಆದರೆ ನೀವು ಯೆಹೋವನನ್ನು ಗೌರವಿಸಬೇಕು. ನೀವು ನಿಮ್ಮ ಪೂರ್ಣಹೃದಯದಿಂದ ಯೆಹೋವನ ಸೇವೆಯನ್ನು ನಿಜವಾಗಿಯೂ ಮಾಡಬೇಕು. ಆತನು ನಿಮಗಾಗಿ ಮಾಡಿದ ಮಹತ್ಕಾರ್ಯಗಳನ್ನು ನೆನಸಿಕೊಳ್ಳಿರಿ. 25 ಆದರೆ ನೀವು ಮೊಂಡರಾಗಿ ಕೆಟ್ಟಕಾರ್ಯಗಳನ್ನು ಮಾಡಿದ್ದಾದರೆ ಯೆಹೋವನು ನಿಮ್ಮನ್ನು ಮತ್ತು ನಿಮ್ಮ ರಾಜನನ್ನು ನಾಶಪಡಿಸುತ್ತಾನೆ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International