Beginning
ಗಿಬ್ಯೋನ್ಯರು ಯೆಹೋಶುವನಿಗೆ ಮಾಡಿದ ಮೋಸ
9 ಜೋರ್ಡನ್ ನದಿಯ ಪಶ್ಚಿಮದ ಎಲ್ಲ ಅರಸರು ಈ ವಿಷಯಗಳ ಬಗ್ಗೆ ಕೇಳಿದರು. ಇವರು ಹಿತ್ತಿಯರ, ಅಮೋರಿಯರ, ಕಾನಾನ್ಯರ, ಪೆರಿಜ್ಜೀಯರ, ಹಿವ್ವಿಯರ, ಯೆಬೂಸಿಯರ ರಾಜರಾಗಿದ್ದರು. ಅವರು ಬೆಟ್ಟಪ್ರದೇಶಗಳಲ್ಲಿ ಮತ್ತು ಸಮತಲ ಪ್ರದೇಶಗಳಲ್ಲಿ ವಾಸವಾಗಿದ್ದರು. ಅವರು ಭೂಮಧ್ಯಸಾಗರದ ತೀರ ಪ್ರದೇಶದಲ್ಲಿ, ಲೆಬನೋನಿನವರೆಗೆ ಸಹ ವಾಸವಾಗಿದ್ದರು. 2 ಈ ಎಲ್ಲ ಅರಸರು ಒಂದು ಕಡೆ ಸೇರಿದರು. ಅವರು ಯೆಹೋಶುವನ ಮತ್ತು ಇಸ್ರೇಲರ ವಿರುದ್ಧ ಯುದ್ಧ ಮಾಡುವ ಯೋಜನೆಗಳನ್ನು ಹಾಕಿಕೊಂಡರು.
3 ಯೆಹೋಶುವನು “ಜೆರಿಕೊ” ಮತ್ತು “ಆಯಿ” ನಗರಗಳನ್ನು ಸ್ವಾಧೀನಪಡಿಸಿಕೊಂಡ ಬಗೆಯನ್ನು ಗಿಬ್ಯೋನ್ ನಗರದ ಜನರು ಕೇಳಿದ್ದರು. 4 ಇಸ್ರೇಲರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಒಂದು ಉಪಾಯಮಾಡಿದರು. ಅವರು ಹರುಕು-ಮುರುಕಾದ ಹಳೆಯ ದ್ರಾಕ್ಷಾರಸದ ಬುದ್ದಲಿಗಳನ್ನು ತಮ್ಮ ಕತ್ತೆಗಳ ಬೆನ್ನ ಮೇಲೆ ಹೇರಿಸಿದರು; ತಾವು ಬಹುದೂರ ಪ್ರಯಾಣ ಮಾಡಿ ಬಂದಿರುವುದಾಗಿ ತೋರಿಸಲು ತಮ್ಮ ಕತ್ತೆಗಳ ಮೇಲೆ ಹಳೆಯ ಗೋಣಿಚೀಲಗಳನ್ನು ಹಾಕಿದರು. 5 ಅವರು ಹಳೆಯ ಪಾದರಕ್ಷೆಗಳನ್ನು ಮೆಟ್ಟಿಕೊಂಡರು; ಹಳೆಯ ಬಟ್ಟೆಗಳನ್ನು ಧರಿಸಿಕೊಂಡರು; ಒಣಗಿದ ಮತ್ತು ಕೆಟ್ಟುಹೋದ ರೊಟ್ಟಿಗಳನ್ನು ಕಟ್ಟಿಕೊಂಡರು. ಹೀಗೆ ಅವರು ಬಹುದೂರ ಪ್ರಯಾಣಮಾಡಿ ಬಂದವರಂತೆ ತೋರಿಸಿಕೊಂಡರು. 6 ಅವರು ಇಸ್ರೇಲರ ಪಾಳೆಯಕ್ಕೆ ಹೋದರು. ಈ ಪಾಳೆಯವು ಗಿಲ್ಗಾಲಿನ ಹತ್ತಿರ ಇತ್ತು.
ಅವರು ಯೆಹೋಶುವನ ಬಳಿಗೆ ಹೋಗಿ ಅವನಿಗೆ, “ನಾವು ಬಹುದೂರ ದೇಶದಿಂದ ಪ್ರಯಾಣ ಮಾಡಿ ಬಂದಿದ್ದೇವೆ. ನಾವು ನಿಮ್ಮ ಜೊತೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಇಚ್ಛಿಸುತ್ತೇವೆ” ಎಂದು ಹೇಳಿದರು.
7 ಹಿವ್ವಿಯರಾದ ಅವರಿಗೆ ಇಸ್ರೇಲಿನ ಜನರು, “ಒಂದುವೇಳೆ ನೀವು ನಮ್ಮನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿರಬಹುದು. ಒಂದುವೇಳೆ ನೀವು ನಮ್ಮ ಹತ್ತಿರದಲ್ಲಿಯೇ ವಾಸಮಾಡುತ್ತಿರಬಹುದು; ನೀವು ಎಲ್ಲಿಯವರು ಎಂಬುದು ನಮಗೆ ಗೊತ್ತಾಗುವವರೆಗೆ ನಾವು ನಿಮ್ಮ ಸಂಗಡ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಉತ್ತರಕೊಟ್ಟರು.
8 ಹಿವ್ವಿಯರು ಯೆಹೋಶುವನಿಗೆ, “ನಾವು ನಿಮ್ಮ ಸೇವಕರು” ಎಂದು ಹೇಳಿದರು.
ಆದರೆ ಯೆಹೋಶುವನು, “ನೀವು ಯಾರು? ಎಲ್ಲಿಂದ ಬಂದಿರುವಿರಿ?” ಎಂದು ಪ್ರಶ್ನಿಸಿದನು.
9 ಅದಕ್ಕೆ ಅವರು, “ನಿನ್ನ ಸೇವಕರಾದ ನಾವು ಬಹುದೂರ ದೇಶದಿಂದ ಬಂದಿದ್ದೇವೆ. ನಾವು ಬಂದದ್ದಕ್ಕೆ ಕಾರಣವೇನೆಂದರೆ ನಾವು ನಿಮ್ಮ ದೇವರಾದ ಯೆಹೋವನ ಅದ್ಭುತಶಕ್ತಿಯ ಬಗ್ಗೆ ಕೇಳಿದೆವು. ಆತನು ಮಾಡಿದ ಅದ್ಭುತಕಾರ್ಯಗಳ ಬಗ್ಗೆ ಕೇಳಿದೆವು. ಆತನು ಈಜಿಪ್ಟಿನಲ್ಲಿ ಮಾಡಿದ ಪ್ರತಿಯೊಂದು ಅದ್ಭುತದ ಬಗ್ಗೆ ಕೇಳಿದೆವು. 10 ಆತನು ಜೋರ್ಡನ್ ನದಿಯ ಪೂರ್ವದಲ್ಲಿರುವ ಅಮೋರಿಯರ ಇಬ್ಬರು ಅರಸರನ್ನು ಸೋಲಿಸಿದ್ದನ್ನು ನಾವು ಕೇಳಿದೆವು. ಹೆಷ್ಬೋನಿನ ಅರಸನಾದ ಸೀಹೋನ್ ಮತ್ತು ಅಷ್ಟರೋತಿನಲ್ಲಿ ವಾಸವಾಗಿದ್ದ ಬಾಷಾನಿನ ಅರಸನಾದ ಓಗ್ ಇವರೇ ಆ ಅರಸರು. 11 ಆದ್ದರಿಂದ ನಮ್ಮ ಹಿರಿಯರು ಮತ್ತು ನಮ್ಮ ಜನರು ನಮಗೆ, ‘ನಿಮ್ಮ ಪ್ರಯಾಣಕ್ಕೆ ಸಾಕಷ್ಟು ಆಹಾರವನ್ನು ತೆಗೆದುಕೊಂಡು ಹೋಗಿ ಇಸ್ರೇಲರನ್ನು ಭೇಟಿಮಾಡಿ, ನಾವು ನಿಮ್ಮ ಸೇವಕರು. ನಮ್ಮ ಜೊತೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಿರಿ ಎಂದು ಅವರಿಗೆ ತಿಳಿಸಿ’ ಎಂಬುದಾಗಿ ಹೇಳಿ ನಮ್ಮನ್ನು ಕಳುಹಿಸಿದ್ದಾರೆ.
12 “ನಮ್ಮ ರೊಟ್ಟಿಯನ್ನು ನೋಡಿರಿ, ನಾವು ಮನೆಯನ್ನು ಬಿಟ್ಟಾಗ ಬಿಸಿಯಾಗಿತ್ತು ಮತ್ತು ಮೃದುವಾಗಿತ್ತು. ಆದರೆ ಈಗ ಅವುಗಳನ್ನು ನೋಡಿರಿ, ಒಣಗಿಹೋಗಿವೆ. 13 ನಮ್ಮ ದ್ರಾಕ್ಷಾರಸದ ಬುದ್ದಲಿಗಳನ್ನು ನೋಡಿರಿ, ನಾವು ಮನೆಯನ್ನು ಬಿಟ್ಟಾಗ ಅವು ಹೊಸದಾಗಿದ್ದವು ಮತ್ತು ದ್ರಾಕ್ಷಾರಸದಿಂದ ತುಂಬಿದ್ದವು. ಆದರೆ ಈಗ ಹಳೆಯದಾಗಿ ಹರಿದುಹೋಗಿವೆ. ನಮ್ಮ ಬಟ್ಟೆಗಳನ್ನು ಮತ್ತು ಪಾದರಕ್ಷೆಗಳನ್ನು ನೋಡಿರಿ, ಈಗ ಅವು ದೂರ ಪ್ರಯಾಣದಿಂದ ಹಾಳಾಗಿಹೋಗಿವೆ” ಎಂದು ಹೇಳಿದರು.
14 ಅವರು ಹೇಳುತ್ತಿರುವುದು ನಿಜವೇ ಎಂದು ತಿಳಿದುಕೊಳ್ಳಲು ಇಸ್ರೇಲರು ಅವರ ರೊಟ್ಟಿಯನ್ನು ತಿಂದು ನೋಡಿದರು; ಆದರೆ ತಾವು ಏನು ಮಾಡಬೇಕೆಂದು ಯೆಹೋವನನ್ನು ಕೇಳಲಿಲ್ಲ. 15 ಯೆಹೋಶುವನು ಅವರೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಒಪ್ಪಿಕೊಂಡನು. ಅವರು ಜೀವಸಹಿತ ಇರಲು ಅವಕಾಶ ಮಾಡಿಕೊಟ್ಟನು. ಯೆಹೋಶುವನ ಈ ಒಪ್ಪಂದಕ್ಕೆ ಇಸ್ರೇಲಿನ ಜನನಾಯಕರು ಒಪ್ಪಿಕೊಂಡರು.
16 ಮೂರು ದಿನಗಳ ತರುವಾಯ ಆ ಜನರು ತಮ್ಮ ಪಾಳೆಯದ ಸಮೀಪ ವಾಸಿಸುವವರು ಎಂಬುದು ಇಸ್ರೇಲರಿಗೆ ತಿಳಿದುಬಂತು. 17 ಆದ್ದರಿಂದ ಇಸ್ರೇಲರು ಅವರಿದ್ದ ಸ್ಥಳಕ್ಕೆ ಹೋದರು. ಮೂರನೆಯ ದಿನ ಇಸ್ರೇಲರು ಗಿಬ್ಯೋನ್, ಕೆಫೀರಾ, ಬೇರೋತ್ ಮತ್ತು ಕಿರ್ಯತ್ಯಾರೀಮ್ ಪಟ್ಟಣಗಳಿಗೆ ಬಂದರು. 18 ಆದರೆ ಇಸ್ರೇಲರ ಸೈನ್ಯವು ಆ ಪಟ್ಟಣದ ಜನರೊಂದಿಗೆ ಯುದ್ಧಮಾಡಲಿಲ್ಲ. ಅವರು ಆ ಜನರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದರು. ಅವರು ಇಸ್ರೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಿದ್ದರು.
ಒಪ್ಪಂದವನ್ನು ಮಾಡಿಕೊಂಡ ಜನನಾಯಕರ ಬಗ್ಗೆ ಜನರೆಲ್ಲರೂ ಅಸಮಾಧಾನ ವ್ಯಕ್ತಪಡಿಸಿದರು. 19 ಆದರೆ ಜನನಾಯಕರು, “ನಾವು ಮಾತುಕೊಟ್ಟಿದ್ದೇವೆ; ಇಸ್ರೇಲಿನ ದೇವರಾದ ಯೆಹೋವನ ಮುಂದೆ ಪ್ರಮಾಣ ಮಾಡಿದ್ದೇವೆ; ಈಗ ನಾವು ಅವರ ವಿರುದ್ಧ ಯುದ್ಧ ಮಾಡಲು ಸಾಧ್ಯವಿಲ್ಲ. 20 ನಾವು ಅವರನ್ನು ಜೀವಂತವಾಗಿ ಉಳಿಸಲೇಬೇಕು. ನಾವು ಅವರಿಗೆ ಕೊಟ್ಟ ಮಾತನ್ನು ಮೀರಿದರೆ ದೇವರ ಕೋಪಕ್ಕೆ ಗುರಿಯಾಗುತ್ತೇವೆ. 21 ಆದ್ದರಿಂದ ಅವರು ಜೀವಂತವಾಗಿ ಉಳಿಯಲಿ. ಆದರೆ ಅವರು ನಮ್ಮ ಸೇವಕರಾಗಲಿ. ಅವರು ನಮಗಾಗಿ ಸೌಧೆಯನ್ನು ಕಡಿಯಲಿ ಮತ್ತು ನಮ್ಮೆಲ್ಲರಿಗಾಗಿ ನೀರು ತಂದುಹಾಕಲಿ” ಎಂದು ಉತ್ತರಿಸಿದರು. ಹೀಗೆ ಜನನಾಯಕರು ಆ ಜನರೊಂದಿಗೆ ಮಾಡಿಕೊಂಡ ಶಾಂತಿ ಒಪ್ಪಂದವನ್ನು ಮುರಿಯಲಿಲ್ಲ.
22 ಯೆಹೋಶುವನು ಗಿಬ್ಯೋನಿನ ಜನರನ್ನು ಕರೆದು, “ನೀವು ನಮಗೆ ಸುಳ್ಳು ಹೇಳಿದ್ದೇಕೆ? ನಿಮ್ಮ ನಾಡು ನಮ್ಮ ಪಾಳೆಯದ ಹತ್ತಿರವೇ ಇತ್ತು. ಆದರೆ ನೀವು ನಿಮ್ಮನ್ನು ದೂರದೇಶದವರು ಎಂದು ಹೇಳಿಕೊಂಡಿರಿ. 23 ಈಗ ನೀವು ಶಾಪಕ್ಕೆ ಗುರಿಯಾಗಿದ್ದೀರಿ. ದೇವರ ಮಂದಿರಕ್ಕಾಗಿ ಸೌಧೆಯನ್ನು ಕಡಿಯುವುದೂ ನೀರನ್ನು ಹೊರುವುದೂ ನಿಮಗೆಂದಿಗೂ ತಪ್ಪಿದ್ದಿಲ್ಲ” ಎಂದು ಹೇಳಿದನು.
24 ಗಿಬ್ಯೋನ್ಯರು, “ನೀವು ನಮ್ಮನ್ನು ಕೊಲ್ಲಬಹುದೆಂಬ ಭಯದಿಂದ ನಾವು ನಿಮಗೆ ಸುಳ್ಳು ಹೇಳಿದೆವು; ದೇವರು ತನ್ನ ಸೇವಕನಾದ ಮೋಶೆಗೆ ಈ ಎಲ್ಲ ಭೂಪ್ರದೇಶವನ್ನು ನಿಮಗೆ ಕೊಡಬೇಕೆಂದು ಆಜ್ಞಾಪಿಸಿರುವುದನ್ನೂ ಈ ಪ್ರದೇಶದ ಎಲ್ಲ ಜನರನ್ನು ಕೊಂದುಬಿಡಬೇಕೆಂದು ನಿಮಗೆ ಹೇಳಿರುವನೆಂದೂ ನಾವು ಕೇಳಿದ್ದೆವು. ಆದ್ದರಿಂದ ನಾವು ನಿಮಗೆ ಸುಳ್ಳು ಹೇಳಿದೆವು. 25 ನಾವು ಈಗ ನಿಮ್ಮ ಸೇವಕರು. ನಿಮಗೆ ಸರಿ ಎನಿಸಿದ್ದನ್ನು ನೀವು ಮಾಡಬಹುದು” ಎಂದು ಉತ್ತರಿಸಿದರು.
26 ಹೀಗೆ ಗಿಬ್ಯೋನಿನ ಜನರು ಗುಲಾಮರಾದರು. ಆದರೆ ಯೆಹೋಶುವನು ಅವರನ್ನು ಜೀವಂತವಾಗಿ ಉಳಿಸಿದನು. ಇಸ್ರೇಲರು ಅವರನ್ನು ಕೊಲ್ಲದಂತೆ ನೋಡಿಕೊಂಡರು. 27 ಯೆಹೋಶುವನು ಗಿಬ್ಯೋನಿನ ಜನರನ್ನು ಇಸ್ರೇಲರ ಸೇವಕರನ್ನಾಗಿ ಮಾಡಿಕೊಂಡನು. ತನ್ನ ನಿವಾಸಕ್ಕಾಗಿ ಯೆಹೋವನು ಆರಿಸಿಕೊಳ್ಳುವ ಸ್ಥಳಗಳಲ್ಲಿ ಅವರು ಇಸ್ರೇಲರಿಗಾಗಿಯೂ ಯೆಹೋವನ ಯಜ್ಞವೇದಿಕೆಗಾಗಿಯೂ ಮರವನ್ನು ಕಡಿಯುತ್ತಿದ್ದರು ಮತ್ತು ನೀರನ್ನು ಹೊರುತ್ತಿದ್ದರು. ಆ ಜನರು ಇಂದಿಗೂ ಗುಲಾಮರಾಗಿಯೇ ಇದ್ದಾರೆ.
ಸೂರ್ಯನು ನಿಶ್ಚಲನಾಗಿ ನಿಂತ ದಿನ
10 ಈ ಸಮಯದಲ್ಲಿ ಅದೋನೀಚೆದೆಕನು ಜೆರುಸಲೇಮಿನ ಅರಸನಾಗಿದ್ದನು. ಯೆಹೋಶುವನು ಆಯಿ ಪಟ್ಟಣವನ್ನು ಸ್ವಾಧೀನಪಡಿಸಿಕೊಂಡ ಮತ್ತು ಅದನ್ನು ಸಂಪೂರ್ಣವಾಗಿ ನಾಶಮಾಡಿದ ಸಂಗತಿಯನ್ನು ಅವನು ಕೇಳಿದ್ದನು. ಜೆರಿಕೊ ಪಟ್ಟಣಕ್ಕೂ ಅದರ ರಾಜನಿಗೂ ಯೆಹೋಶುವನು ಹಾಗೆಯೇ ಮಾಡಿದ್ದನೆಂಬುದನ್ನೂ ಗಿಬ್ಯೋನಿನ ಜನರು ಇಸ್ರೇಲರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದಾರೆಂಬುದನ್ನೂ ಅವನು ಕೇಳಿದ್ದನು. ಅವರು ಜೆರುಸಲೇಮಿಗೆ ಅತೀಸಮೀಪದಲ್ಲಿ ವಾಸವಾಗಿದ್ದರು. 2 ಆದ್ದರಿಂದ ಅದೋನೀಚೆದೆಕನು ಮತ್ತು ಅವನ ಜನರು ಬಹಳ ಹೆದರಿಕೊಂಡರು. ಗಿಬ್ಯೋನ್ “ಆಯಿ”ಯಂತೆ ಸಣ್ಣ ಊರಾಗಿರಲಿಲ್ಲ. ಗಿಬ್ಯೋನ್ ಬಹಳ ದೊಡ್ಡ ನಗರವಾಗಿತ್ತು. ಅದು ರಾಜಧಾನಿಯಷ್ಟು ದೊಡ್ಡ ಪಟ್ಟಣವಾಗಿತ್ತು. ಆ ಪಟ್ಟಣದ ಜನರೆಲ್ಲರೂ ಒಳ್ಳೆಯ ಯೋಧರಾಗಿದ್ದರು. ಆದ್ದರಿಂದ ಆ ಅರಸನು ಭಯಗೊಂಡಿದ್ದನು. 3 ಜೆರುಸಲೇಮಿನ ಅರಸನಾದ ಅದೋನೀಚೆದೆಕನು ಹೆಬ್ರೋನಿನ ಅರಸನಾದ ಹೋಹಾಮನೊಂದಿಗೆ ಮಾತನಾಡಿದನು. ಅವನು ಯರ್ಮೂತಿನ ಅರಸನಾದ ಪಿರಾಮ್, ಲಾಕೀಷಿನ ಅರಸನಾದ ಯಾಫೀಯ ಮತ್ತು ಎಗ್ಲೋನಿನ ಅರಸನಾದ ದೆಬೀರ್ ಇವರೊಂದಿಗೂ ಮಾತನಾಡಿದನು. ಜೆರುಸಲೇಮಿನ ಅರಸನು ಅವರಿಗೆ, 4 “ನನ್ನೊಂದಿಗೆ ಬಂದು ಗಿಬ್ಯೋನಿನ ಮೇಲೆ ಧಾಳಿಮಾಡಲು ಸಹಾಯಮಾಡಿರಿ. ಗಿಬ್ಯೋನ್ ಯೆಹೋಶುವನೊಂದಿಗೂ ಇಸ್ರೇಲರೊಂದಿಗೂ ಶಾಂತಿಒಪ್ಪಂದ ಮಾಡಿಕೊಂಡಿದೆ” ಎಂದು ಬೇಡಿಕೊಂಡನು.
5 ಆಗ ಆ ಐದು ಮಂದಿ ಅಮೋರಿಯರ ಅರಸರು ಸೈನ್ಯವನ್ನು ಸೇರಿಸಿದರು. (ಜೆರುಸಲೇಮಿನ ಅರಸ, ಹೆಬ್ರೋನಿನ ಅರಸ, ಯರ್ಮೂತಿನ ಅರಸ, ಲಾಕೀಷಿನ ಅರಸ ಮತ್ತು ಎಗ್ಲೋನಿನ ಅರಸ; ಇವರೇ ಆ ಐದು ಮಂದಿ ಅರಸರು.) ಆ ಸೈನ್ಯಗಳು ಗಿಬ್ಯೋನಿಗೆ ಹೋಗಿ ಪಟ್ಟಣವನ್ನು ಸುತ್ತುವರಿದು ಅದರ ವಿರುದ್ಧ ಹೋರಾಟ ಪ್ರಾರಂಭಿಸಿದವು.
6 ಗಿಲ್ಗಾಲಿನ ಪಾಳೆಯದಲ್ಲಿದ್ದ ಯೆಹೋಶುವನಿಗೆ ಗಿಬ್ಯೋನ್ ನಗರದ ಜನರು ಒಂದು ಸಂದೇಶವನ್ನು ಕಳಿಸಿದರು. ಆ ಸಂದೇಶ ಹೀಗಿತ್ತು: “ನಾವು ನಿಮ್ಮ ಸೇವಕರಾಗಿದ್ದೇವೆ, ನಮ್ಮನ್ನು ನಿಸ್ಸಹಾಯಕರಾಗಿ ಬಿಡಬೇಡಿರಿ. ಬಂದು ನಮಗೆ ಸಹಾಯ ಮಾಡಿರಿ; ತ್ವರೆಮಾಡಿರಿ; ನಮ್ಮನ್ನು ಉಳಿಸಿರಿ. ಬೆಟ್ಟಪ್ರದೇಶದ ಅಮೋರಿಯರ ಅರಸರೆಲ್ಲಾ ತಮ್ಮ ಸೈನ್ಯವನ್ನು ಒಟ್ಟುಗೂಡಿಸಿ ನಮ್ಮ ವಿರುದ್ಧ ಯುದ್ಧಮಾಡುತ್ತಿದ್ದಾರೆ.”
7 ಆದ್ದರಿಂದ ಯೆಹೋಶುವನು ತನ್ನ ಎಲ್ಲ ಸೈನ್ಯದೊಂದಿಗೆ ಗಿಲ್ಗಾಲಿನಿಂದ ಹೊರಟನು. ಯೆಹೋಶುವನೊಂದಿಗೆ ಅತ್ಯುತ್ತಮವಾದ ಯೋಧರಿದ್ದರು. 8 ಯೆಹೋವನು ಯೆಹೋಶುವನಿಗೆ, “ಆ ಸೈನ್ಯಗಳಿಗೆ ಹೆದರಬೇಡ, ನೀನು ಅವರನ್ನು ಸೋಲಿಸುವಂತೆ ಮಾಡುತ್ತೇನೆ. ಆ ಸೈನ್ಯದ ಯಾರೊಬ್ಬರೂ ನಿನ್ನನ್ನು ಸೋಲಿಸಲು ಸಾಧ್ಯವಿಲ್ಲ” ಎಂದು ಹೇಳಿದನು.
9 ಯೆಹೋಶುವನು ಮತ್ತು ಅವನ ಸೈನ್ಯದವರು ಇಡೀರಾತ್ರಿ ಗಿಬ್ಯೋನಿನ ಕಡೆಗೆ ಪ್ರಯಾಣ ಮಾಡಿದರು. ಯೆಹೋಶುವನು ಬರುತ್ತಿದ್ದಾನೆಂಬುದು ವೈರಿಗಳಿಗೆ ಗೊತ್ತಿರಲಿಲ್ಲ. ಯೆಹೋಶುವನು ಅವರ ಮೇಲೆ ಧಾಳಿ ಮಾಡಿದಾಗ ಅವರಿಗೆ ಅತ್ಯಾಶ್ಚರ್ಯವಾಯಿತು.
10 ಇಸ್ರೇಲರು ಧಾಳಿಮಾಡಿದಾಗ ಯೆಹೋವನು ಆ ಶತ್ರು ಸೈನ್ಯವನ್ನು ಗಾಬರಿಗೊಳಿಸಿದನು. ಆದ್ದರಿಂದ ಇಸ್ರೇಲಿನ ಸೈನಿಕರು ಅವರನ್ನು ಸೋಲಿಸಿ ಮಹಾವಿಜಯವನ್ನು ಸಾಧಿಸಿದರು. ಇಸ್ರೇಲರು ಶತ್ರುಗಳನ್ನು ಗಿಬ್ಯೋನಿನಿಂದ ಬೇತ್ಹೋರೋನಿಗೆ ಹೋಗುವ ದಾರಿಯವರೆಗೂ ಬೆನ್ನಟ್ಟಿದರು. ಇಸ್ರೇಲರು ಅಜೇಕ ಮತ್ತು ಮಕ್ಕೇದದವರೆಗೆ ಅವರನ್ನು ಕೊಂದರು. 11 ಬೇತ್ಹೋರೋನ್ ಇಳಿಜಾರಿನಿಂದ ಅಜೇಕದವರೆಗೆ ಅವರನ್ನು ಕೊಂದರು. ಅವರು ಶತ್ರುಗಳನ್ನು ಬೆನ್ನಟ್ಟುತ್ತಿದ್ದಾಗ ಯೆಹೋವನು ಆಕಾಶದಿಂದ ಆಲಿಕಲ್ಲು ಮಳೆ ಸುರಿಯುವಂತೆ ಮಾಡಿದನು. ಬಹಳಷ್ಟು ಮಂದಿ ಶತ್ರುಗಳು ಈ ದೊಡ್ಡ ಆಲಿಕಲ್ಲುಗಳಿಂದಲೇ ಮೃತಪಟ್ಟರು. ಇಸ್ರೇಲರು ತಮ್ಮ ಖಡ್ಗಗಳಿಂದ ಕೊಂದ ಜನರಿಗಿಂತ ಹೆಚ್ಚು ಜನರು ಈ ಆಲಿಕಲ್ಲಿನ ಮಳೆಯಿಂದ ಸತ್ತರು.
12 ಆ ದಿನ ಯೆಹೋವನ ಸಹಾಯದಿಂದ ಇಸ್ರೇಲರು ಅಮೋರಿಯರನ್ನು ಸೋಲಿಸಿದರು. ಅಂದು ಯೆಹೋಶುವನು ಎಲ್ಲ ಜನರ ಎದುರಿಗೆ ನಿಂತುಕೊಂಡು ಯೆಹೋವನಿಗೆ ಹೀಗೆ ಮೊರೆಯಿಟ್ಟನು:
“ಸೂರ್ಯನೇ, ಗಿಬ್ಯೋನಿನ ಆಕಾಶದಲ್ಲಿ ನಿಂತಿರು, ಚಲಿಸಬೇಡ.
ಚಂದ್ರನೇ, ಅಯ್ಯಾಲೋನ್ ಕಣಿವೆಯ ಆಕಾಶದಲ್ಲಿ ನಿಂತಿರು, ಚಲಿಸಬೇಡ.”
13 ಆದ್ದರಿಂದ ಅವರು ಶತ್ರುಗಳನ್ನು ಸೋಲಿಸುವವರೆಗೆ ಸೂರ್ಯನೂ ಚಲಿಸಲಿಲ್ಲ, ಚಂದ್ರನೂ ಚಲಿಸಲಿಲ್ಲ. ಈ ಕಥೆಯು ಯಾಷಾರ್ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. ಸೂರ್ಯನು ಆಕಾಶದ ಮಧ್ಯದಲ್ಲಿ ನಿಂತನು. ಅವನು ಇಡೀ ದಿನ ಚಲಿಸಲಿಲ್ಲ. 14 ಅದಕ್ಕಿಂತ ಮೊದಲೆಂದೂ ಹೀಗಾಗಿರಲಿಲ್ಲ; ಆಮೇಲೆಯೂ ಆಗಲಿಲ್ಲ. ಯೆಹೋವನು ಒಬ್ಬ ಮಾನವನ ಆಜ್ಞೆಯನ್ನು ಪಾಲಿಸಿದ ದಿನ ಅದಾಗಿತ್ತು. ಇಸ್ರೇಲರಿಗೋಸ್ಕರ ಯೆಹೋವನು ನಿಜವಾಗಿಯೂ ಯುದ್ಧಮಾಡುತ್ತಿದ್ದನು.
15 ಇದಾದ ಮೇಲೆ ಯೆಹೋಶುವನು ಮತ್ತು ಅವನ ಸೈನಿಕರು ಗಿಲ್ಗಾಲಿನ ತಮ್ಮ ಪಾಳೆಯಕ್ಕೆ ಹಿಂದಿರುಗಿ ಹೋದರು. 16 ಯುದ್ಧ ನಡೆದಾಗ ಆ ಐದು ಮಂದಿ ಅರಸರು ಓಡಿಹೋದರು. ಅವರು ಮಕ್ಕೇದದ ಸಮೀಪದಲ್ಲಿದ್ದ ಗುಹೆಯಲ್ಲಿ ಅಡಗಿಕೊಂಡರು. 17 ಆ ಐದುಮಂದಿ ಅರಸರು ಆ ಗುಹೆಯಲ್ಲಿ ಅಡಗಿಕೊಂಡಿದ್ದನ್ನು ಯಾರೋ ನೋಡಿ ಯೆಹೋಶುವನಿಗೆ ತಿಳಿಸಿದರು. 18 ಯೆಹೋಶುವನು ತನ್ನ ಜನರಿಗೆ, “ಗುಹೆಯ ದ್ವಾರವನ್ನು ದೊಡ್ಡ ಕಲ್ಲುಬಂಡೆಗಳಿಂದ ಮುಚ್ಚಿರಿ. ಗುಹೆಯನ್ನು ಕಾಯುವುದಕ್ಕೆ ಕೆಲವು ಜನರು ಇಲ್ಲಿರಲಿ. 19 ಆದರೆ ನೀವು ಅಲ್ಲಿ ನಿಂತುಕೊಳ್ಳಬೇಡಿರಿ; ಶತ್ರುಗಳನ್ನು ಬೆನ್ನಟ್ಟಿ ಅವರ ಮೇಲೆ ಧಾಳಿಮಾಡಿ. ತಮ್ಮ ಪಟ್ಟಣಕ್ಕೆ ಸುರಕ್ಷಿತವಾಗಿ ಸೇರಲು ಅವರಿಗೆ ಅವಕಾಶಕೊಡಬೇಡಿ. ನಿಮ್ಮ ದೇವರಾದ ಯೆಹೋವನು ನಿಮಗೆ ಅವರ ಮೇಲೆ ಜಯವನ್ನು ಅನುಗ್ರಹಿಸಿದ್ದಾನೆ” ಎಂದು ಆಜ್ಞಾಪಿಸಿದನು.
20 ಯೆಹೋಶುವನು ಮತ್ತು ಇಸ್ರೇಲಿನ ಜನರು ವೈರಿಗಳನ್ನು ಕೊಂದರು. ಆದರೆ ಕೆಲವು ಶತ್ರುಗಳು ಎತ್ತರವಾದ ಗೋಡೆಗಳುಳ್ಳ ತಮ್ಮ ಪಟ್ಟಣಗಳಿಗೆ ಹೋಗಿ ಅಡಗಿಕೊಳ್ಳಲು ಸಾಧ್ಯವಾಯಿತು. ಆ ಜನರು ಕೊಲ್ಲಲ್ಪಡಲಿಲ್ಲ. 21 ಯುದ್ಧದ ತರುವಾಯ ಯೆಹೋಶುವನ ಜನರು ಅವನ ಹತ್ತಿರ ಮಕ್ಕೇದಕ್ಕೆ ಬಂದರು. ಆ ದೇಶದಲ್ಲಿ ಇಸ್ರೇಲರ ವಿರುದ್ಧ ಮಾತಾಡಲು ಯಾರಿಗೂ ಧೈರ್ಯವಿರಲಿಲ್ಲ.
22 ಅನಂತರ ಯೆಹೋಶುವನು ಜನರಿಗೆ, “ಗುಹೆಯ ದ್ವಾರಕ್ಕೆ ಅಡ್ಡಲಾಗಿಟ್ಟ ಕಲ್ಲುಬಂಡೆಗಳನ್ನು ಸರಿಸಿ ಆ ಐದು ಮಂದಿ ಅರಸರನ್ನು ನನ್ನ ಹತ್ತಿರ ತನ್ನಿರಿ” ಎಂದು ಆಜ್ಞಾಪಿಸಿದನು. 23 ಯೆಹೋಶುವನ ಜನರು ಆ ಐದು ಮಂದಿ ಅರಸರನ್ನು ಗುಹೆಯ ಹೊರಗಡೆ ತಂದರು. ಜೆರುಸಲೇಮಿನ ಅರಸ, ಹೆಬ್ರೋನಿನ ಅರಸ, ಯರ್ಮೂತಿನ ಅರಸ, ಲಾಕೀಷಿನ ಅರಸ, ಎಗ್ಲೋನಿನ ಅರಸ ಇವರೇ ಆ ಐದು ಮಂದಿ. 24 ಅವರು ಆ ಐದು ಮಂದಿ ಅರಸರನ್ನು ಯೆಹೋಶುವನಲ್ಲಿಗೆ ತಂದರು. ಯೆಹೋಶುವನು ಇಸ್ರೇಲರನ್ನೆಲ್ಲ ಆ ಸ್ಥಳಕ್ಕೆ ಕರೆಸಿ ತನ್ನ ಸೈನ್ಯದ ಅಧಿಕಾರಿಗಳಿಗೆ “ಇಲ್ಲಿಗೆ ಬನ್ನಿ, ನಿಮ್ಮ ಪಾದಗಳನ್ನು ಈ ಅರಸರ ಕುತ್ತಿಗೆಗಳ ಮೇಲೆ ಇಡಿ” ಎಂದು ಹೇಳಿದನು. ಯೆಹೋಶುವನ ಸೈನ್ಯಾಧಿಕಾರಿಗಳು ಹತ್ತಿರಕ್ಕೆ ಬಂದು ತಮ್ಮ ಪಾದಗಳನ್ನು ಆ ಅರಸರ ಕುತ್ತಿಗೆಗಳ ಮೇಲೆ ಇಟ್ಟರು.
25 ಆಗ ಯೆಹೋಶುವನು ತನ್ನ ಜನರಿಗೆ, “ಸ್ಥಿರಚಿತ್ತರಾಗಿರಿ, ಧೈರ್ಯದಿಂದಿರಿ, ಅಂಜಬೇಡಿರಿ, ಇನ್ನು ಮುಂದೆ ನಮ್ಮ ಜೊತೆ ಹೋರಾಡುವ ಎಲ್ಲ ಶತ್ರುಗಳಿಗೆ ಯೆಹೋವನು ಏನು ಮಾಡುತ್ತಾನೆಂಬುದನ್ನು ನಿಮಗೆ ತೋರಿಸುತ್ತೇನೆ” ಎಂದು ಹೇಳಿದನು.
26 ಆಮೇಲೆ ಯೆಹೋಶುವನು ಆ ಐದು ಮಂದಿ ಅರಸರನ್ನು ಕೊಂದುಹಾಕಿದನು. ಅವರ ದೇಹಗಳನ್ನು ಐದು ಮರಗಳಿಗೆ ಸಾಯಂಕಾಲದವರೆಗೂ ನೇತುಹಾಕಿದನು. 27 ಸೂರ್ಯಾಸ್ತಮಾನದ ಹೊತ್ತಿಗೆ ಯೆಹೋಶುವನು ಆ ದೇಹಗಳನ್ನು ಮರದಿಂದ ಕೆಳಗಿಳಿಸಲು ಹೇಳಿದನು. ಆಮೇಲೆ ಅವರು ಎಲ್ಲಿ ಅಡಗಿಕೊಂಡಿದ್ದರೋ ಅದೇ ಗುಹೆಯಲ್ಲಿ ಆ ಶವಗಳನ್ನು ಬಿಸಾಡಿದರು. ಆ ಗುಹೆಯ ದ್ವಾರವನ್ನು ದೊಡ್ಡ ಕಲ್ಲುಬಂಡೆಗಳಿಂದ ಮುಚ್ಚಿದರು. ಆ ದೇಹಗಳು ಇಂದಿಗೂ ಆ ಗುಹೆಯಲ್ಲಿವೆ.
28 ಆ ದಿನ ಯೆಹೋಶುವನು ಮಕ್ಕೇದವನ್ನು ಸ್ವಾಧೀನಪಡಿಸಿಕೊಂಡು ಆ ಪಟ್ಟಣದ ಅರಸನನ್ನು ಮತ್ತು ಜನರನ್ನು ಸಂಹರಿಸಿದನು. ಒಬ್ಬರೂ ಜೀವಂತವಾಗಿ ಉಳಿಯಲಿಲ್ಲ. ಯೆಹೋಶುವನು ಜೆರಿಕೊವಿನ ಅರಸನಿಗೆ ಮಾಡಿದಂತೆಯೇ ಮಕ್ಕೇದದ ಅರಸನಿಗೂ ಮಾಡಿದನು.
ದಕ್ಷಿಣದ ಪಟ್ಟಣಗಳನ್ನು ಸ್ವಾಧೀನಪಡಿಸಿಕೊಂಡದ್ದು
29 ಆಗ ಯೆಹೋಶುವನು ಮತ್ತು ಇಸ್ರೇಲರೆಲ್ಲರು ಮಕ್ಕೇದದಿಂದ ಪ್ರಯಾಣ ಮಾಡಿ ಲಿಬ್ನಕ್ಕೆ ಹೋಗಿ ಆ ಪಟ್ಟಣದ ಮೇಲೆ ಧಾಳಿಮಾಡಿದರು. 30 ಇಸ್ರೇಲರು ಆ ಪಟ್ಟಣವನ್ನು ಮತ್ತು ಅದರ ಅರಸನನ್ನು ಸ್ವಾಧೀನಪಡಿಸಿಕೊಳ್ಳುವಂತೆ ಯೆಹೋವನು ಮಾಡಿದನು. ಆ ಪಟ್ಟಣದ ಪ್ರತಿಯೊಬ್ಬ ವ್ಯಕ್ತಿಯನ್ನು ಇಸ್ರೇಲರು ಕೊಂದುಹಾಕಿದರು. ಒಬ್ಬರನ್ನೂ ಜೀವಸಹಿತ ಬಿಡಲಿಲ್ಲ. ಅವರು ಜೆರಿಕೊ ನಗರದ ಅರಸನಿಗೆ ಮಾಡಿದಂತೆಯೇ ಆ ಅರಸನಿಗೂ ಮಾಡಿದರು.
31 ಆಮೇಲೆ ಯೆಹೋಶುವನು ಮತ್ತು ಇಸ್ರೇಲರೆಲ್ಲರು ಲಿಬ್ನವನ್ನು ಬಿಟ್ಟು ಲಾಕೀಷಿಗೆ ಹೋದರು. ಯೆಹೋಶುವನು ಮತ್ತು ಅವನ ಜನರು ಲಾಕೀಷಿಗೆ ಮುತ್ತಿಗೆಹಾಕಿ ಅದರ ಮೇಲೆ ಧಾಳಿಮಾಡಿದರು. 32 ಇಸ್ರೇಲರ ಜನರು ಲಾಕೀಷ್ ಪಟ್ಟಣವನ್ನು ವಶಪಡಿಸಿಕೊಳ್ಳುವಂತೆ ಯೆಹೋವನು ಮಾಡಿದನು. ಅವರು ಎರಡನೆಯ ದಿನ ಪಟ್ಟಣವನ್ನು ಸ್ವಾಧೀನಪಡಿಸಿಕೊಂಡರು. ಇಸ್ರೇಲರು ಆ ಪಟ್ಟಣದಲ್ಲಿದ್ದವರನ್ನೆಲ್ಲಾ ಕೊಂದುಹಾಕಿದರು. ಅವರು ಲಿಬ್ನ ಪಟ್ಟಣಕ್ಕೆ ಮಾಡಿದಂತೆ ಇದಕ್ಕೂ ಮಾಡಿದರು. 33 ಇದೇ ಸಮಯದಲ್ಲಿ ಗೆಜೆರಿನ ಅರಸನಾದ ಹೋರಾಮನು ಲಾಕೀಷಿನವರ ಸಹಾಯಕ್ಕೆ ಬಂದನು. ಯೆಹೋಶುವನು ಅವನನ್ನು ಮತ್ತು ಅವನ ಸೈನ್ಯವನ್ನು ಸೋಲಿಸಿದನು. ಅಲ್ಲಿ ಯಾರನ್ನೂ ಜೀವಸಹಿತ ಬಿಡಲಿಲ್ಲ.
34 ಆಮೇಲೆ ಯೆಹೋಶುವನು ಮತ್ತು ಎಲ್ಲ ಇಸ್ರೇಲರು ಲಾಕೀಷಿನಿಂದ ಎಗ್ಲೋನಿಗೆ ಪ್ರಯಾಣ ಮಾಡಿದರು. ಅವರು ಎಗ್ಲೋನ್ ಪಟ್ಟಣಕ್ಕೆ ಮುತ್ತಿಗೆ ಹಾಕಿ ಅದರ ಮೇಲೆ ಧಾಳಿಮಾಡಿದರು. 35 ಆ ದಿವಸ ಅವರು ಆ ನಗರವನ್ನು ಸ್ವಾಧೀನಪಡಿಸಿಕೊಂಡು ಅಲ್ಲಿದ್ದ ಎಲ್ಲ ಜನರನ್ನು ಕೊಂದುಹಾಕಿದರು. ಅವರು ಲಾಕೀಷಿನಲ್ಲಿ ಮಾಡಿದಂತೆ ಇಲ್ಲಿಯೂ ಮಾಡಿದರು.
36 ಆಮೇಲೆ ಯೆಹೋಶುವನು ಮತ್ತು ಎಲ್ಲ ಇಸ್ರೇಲರು ಎಗ್ಲೋನಿನಿಂದ ಹೆಬ್ರೋನಿಗೆ ಪ್ರಯಾಣ ಮಾಡಿ ಹೆಬ್ರೋನಿನ ಮೇಲೆ ಧಾಳಿಮಾಡಿದರು. 37 ಅವರು ಹೆಬ್ರೋನ್ ಪಟ್ಟಣವನ್ನೂ ಅದರ ರಾಜನನ್ನೂ ಮತ್ತು ಅದರ ಸಮೀಪದಲ್ಲಿದ್ದ ಎಲ್ಲ ಸಣ್ಣಪುಟ್ಟ ಊರುಗಳನ್ನೂ ಸ್ವಾಧೀನಪಡಿಸಿಕೊಂಡರು. ಇಸ್ರೇಲರು ಆ ಪಟ್ಟಣದಲ್ಲಿದ್ದ ಎಲ್ಲರನ್ನೂ ಕೊಂದರು. ಅಲ್ಲಿ ಯಾರೊಬ್ಬರೂ ಜೀವಂತವಾಗಿ ಉಳಿಯಲಿಲ್ಲ. ಅವರು ಎಗ್ಲೋನಿನಲ್ಲಿ ಮಾಡಿದಂತೆಯೇ ಇಲ್ಲಿಯೂ ಮಾಡಿದರು. ಅವರು ಪಟ್ಟಣವನ್ನು ನಾಶಮಾಡಿದರು ಮತ್ತು ಅಲ್ಲಿದ್ದ ಎಲ್ಲ ಜನರನ್ನು ಕೊಂದರು.
38 ಆಮೇಲೆ ಯೆಹೋಶುವನು ಮತ್ತು ಎಲ್ಲ ಇಸ್ರೇಲರು ದೆಬೀರಿಗೆ ಹೋಗಿ ಆ ಪಟ್ಟಣದ ಮೇಲೆ ಧಾಳಿಮಾಡಿದರು. 39 ಅವರು ಆ ಪಟ್ಟಣವನ್ನೂ ಅದರ ಅರಸನನ್ನೂ ದೆಬೀರಿನ ಸಮೀಪದ ಎಲ್ಲ ಸಣ್ಣಪುಟ್ಟ ಊರುಗಳನ್ನೂ ಸ್ವಾಧೀನಪಡಿಸಿಕೊಂಡರು. ಅವರು ಆ ಪಟ್ಟಣದಲ್ಲಿದ್ದ ಎಲ್ಲರನ್ನು ಕೊಂದರು. ಅಲ್ಲಿ ಯಾರೊಬ್ಬರೂ ಸಜೀವವಾಗಿ ಉಳಿಯಲಿಲ್ಲ. ಇಸ್ರೇಲರು ಹೆಬ್ರೋನ್ ಮತ್ತು ಅದರ ಅರಸನಿಗೆ ಮಾಡಿದಂತೆಯೇ ದೆಬೀರ್ ಮತ್ತು ಅದರ ಅರಸನಿಗೆ ಮಾಡಿದರು. ಲಿಬ್ನ ಮತ್ತು ಅದರ ಅರಸನಿಗೂ ಹೀಗೆಯೇ ಮಾಡಲಾಗಿತ್ತು.
40 ಹೀಗೆ ಯೆಹೋಶುವನು ಬೆಟ್ಟದ ಮೇಲಿನ ಪ್ರದೇಶ, ನೆಗೆವ್ ಪ್ರದೇಶ, ಪಶ್ಚಿಮದ ಇಳಕಲಿನ ಪ್ರದೇಶ, ಪೂರ್ವದ ಇಳಕಲಿನ ಪ್ರದೇಶ, ಈ ಎಲ್ಲ ಪ್ರದೇಶಗಳ ಅರಸರನ್ನು ಸೋಲಿಸಿದನು. ಇಸ್ರೇಲಿನ ದೇವರಾದ ಯೆಹೋವನು ಎಲ್ಲಾ ಜನರನ್ನು ಕೊಲ್ಲು ಎಂದು ಯೆಹೋಶುವನಿಗೆ ಹೇಳಿದ್ದನು. ಅದಕ್ಕಾಗಿ ಯೆಹೋಶುವನು ಆ ಸ್ಥಳಗಳಲ್ಲಿ ಯಾರೊಬ್ಬರನ್ನೂ ಸಜೀವವಾಗಿ ಉಳಿಸಲಿಲ್ಲ.
41 ಯೆಹೋಶುವನು ಕಾದೇಶ್ಬರ್ನೇಯದಿಂದ ಗಾಜಾದವರೆಗಿನ ಎಲ್ಲ ಪಟ್ಟಣಗಳನ್ನು ಗೆದ್ದುಕೊಂಡನು. ಅವನು ಈಜಿಪ್ಟಿನ ಗೋಷೆನ್ ಪ್ರಾಂತದಿಂದ ಗಿಬ್ಯೋನಿನವರೆಗೆ ಇದ್ದ ಎಲ್ಲ ಪಟ್ಟಣಗಳನ್ನು ಸ್ವಾಧೀನಪಡಿಸಿಕೊಂಡನು. 42 ಯೆಹೋಶುವನು ಆ ಎಲ್ಲ ಪಟ್ಟಣಗಳನ್ನು ಮತ್ತು ಅವುಗಳ ಅರಸರನ್ನು ಒಂದೇ ದಂಡೆಯಾತ್ರೆಯಲ್ಲಿ ಸ್ವಾಧೀನಪಡಿಸಿಕೊಂಡನು. ಇಸ್ರೇಲಿನ ದೇವರಾದ ಯೆಹೋವನು ಇಸ್ರೇಲಿನವರಿಗಾಗಿ ಯುದ್ಧ ಮಾಡುತ್ತಿದ್ದುದರಿಂದ ಯೆಹೋಶುವನಿಗೆ ಇದು ಸಾಧ್ಯವಾಯಿತು. 43 ಆಮೇಲೆ ಯೆಹೋಶುವನು ಮತ್ತು ಇಸ್ರೇಲಿನ ಜನರೆಲ್ಲರು ಗಿಲ್ಗಾಲಿನಲ್ಲಿದ್ದ ತಮ್ಮ ಪಾಳೆಯಕ್ಕೆ ಹಿಂತಿರುಗಿದರು.
ಉತ್ತರದ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡದ್ದು
11 ಹಾಚೋರಿನ ಅರಸನಾದ ಯಾಬೀನನು ನಡೆದ ಎಲ್ಲ ಸಂಗತಿಗಳ ಬಗ್ಗೆ ಕೇಳಿದನು. ಅದಕ್ಕಾಗಿ ಅವನು ಅನೇಕ ಅರಸರ ಸೈನ್ಯಗಳನ್ನು ಒಟ್ಟಿಗೆ ಸೇರಿಸುವ ನಿರ್ಧಾರವನ್ನು ಮಾಡಿದನು. ಮಾದೋನಿನ ಅರಸನಾದ ಯೋಬಾಬನಿಗೆ, ಶಿಮ್ರೋನಿನ ಅರಸನಿಗೆ, ಅಕ್ಷಾಫಿನ ಅರಸನಿಗೆ ಯಾಬೀನನು ಸಂದೇಶವನ್ನು ಕಳುಹಿಸಿದನು. 2 ಉತ್ತರದಿಕ್ಕಿನ ಪರ್ವತ ಪ್ರದೇಶಗಳಲ್ಲಿನ ಮತ್ತು ಅರಣ್ಯದಲ್ಲಿನ ಅರಸರಿಗೂ ಕಿನ್ನೆರೋತ್, ನೆಗೆವ್ ಮತ್ತು ಪಶ್ಚಿಮದ ಇಳಿಜಾರಿನ ಪ್ರದೇಶದ ಅರಸರಿಗೂ ಪಶ್ಚಿಮದಿಕ್ಕಿನ ನೆಫತ್ದೋರ್ ರಾಜನಿಗೂ ಯಾಬೀನನು ಸಂದೇಶವನ್ನು ಕಳುಹಿಸಿದನು. 3 ಯಾಬೀನನು ಪೂರ್ವ ಮತ್ತು ಪಶ್ಚಿಮದಲ್ಲಿದ್ದ ಕಾನಾನಿನ ಅರಸರಿಗೂ ಅಮೋರಿಯರಿಗೂ ಹಿತ್ತಿಯರಿಗೂ ಪೆರಿಜ್ಜೀಯರಿಗೂ ಬೆಟ್ಟಪ್ರದೇಶದ ಯೆಬೂಸಿಯರಿಗೂ ಹೆರ್ಮೋನ್ ಪರ್ವತದ ಬುಡದಲ್ಲಿ ಮಿಚ್ಛಾದ ಹತ್ತಿರ ವಾಸವಾಗಿದ್ದ ಹಿವ್ವಿಯರಿಗೂ ಸಂದೇಶವನ್ನು ಕಳುಹಿಸಿದನು. 4 ಹೀಗಾಗಿ ಈ ಎಲ್ಲ ಅರಸರ ಸೈನ್ಯಗಳು ಒಟ್ಟುಗೂಡಿದವು. ಈ ಮಹಾಸೈನ್ಯದಲ್ಲಿ ಅಸಂಖ್ಯಾತ ಯೋಧರಿದ್ದರು, ಕುದುರೆಗಳಿದ್ದವು ಮತ್ತು ರಥಗಳಿದ್ದವು. ಸಮುದ್ರತೀರದ ಮರಳು ಕಣಗಳಷ್ಟೇ ಅಸಂಖ್ಯಾತ ಯೋಧರು ಆ ಸೈನ್ಯದಲ್ಲಿರುವಂತೆ ಕಾಣುತ್ತಿತ್ತು.
5 ಈ ಎಲ್ಲ ಅರಸರು ಮೇರೋಮ್ ಸಣ್ಣ ನದಿಯ ಹತ್ತಿರ ಒಟ್ಟುಗೂಡಿ ತಮ್ಮ ಸೈನ್ಯಗಳನ್ನು ಒಂದೇ ಪಾಳೆಯದಲ್ಲಿ ಸೇರಿಸಿದರು. ಅವರು ಇಸ್ರೇಲಿನ ವಿರುದ್ಧ ಯುದ್ಧ ಮಾಡಲು ಯೋಜನೆಗಳನ್ನು ಮಾಡಿದರು.
6 ಆಗ ಯೆಹೋವನು ಯೆಹೋಶುವನಿಗೆ, “ಆ ಸೈನ್ಯಕ್ಕೆ ನೀನು ಹೆದರಬೇಡ; ನೀವು ಅವರನ್ನು ಸೋಲಿಸುವಂತೆ ನಾನು ಮಾಡುತ್ತೇನೆ. ನಾಳೆ ಇಷ್ಟು ಹೊತ್ತಿಗೆ ನೀವು ಅವರೆಲ್ಲರನ್ನು ಕೊಂದುಬಿಡುವಿರಿ. ನೀವು ಅವರ ಕುದುರೆಗಳ ಕಾಲುಗಳನ್ನು ಕತ್ತರಿಸುವಿರಿ; ಅವರ ರಥಗಳನ್ನು ಸುಟ್ಟುಹಾಕುವಿರಿ” ಎಂದನು.
7 ಯೆಹೋಶುವನು ಮತ್ತು ಅವನ ಎಲ್ಲ ಸೈನಿಕರು ಶತ್ರುಗಳನ್ನು ಬೆರಗುಗೊಳಿಸಿದರು. ಮೇರೋಮ್ ನದಿಯ ಬಳಿಯಲ್ಲಿ ಅವರು ಶತ್ರುಗಳ ಮೇಲೆ ಧಾಳಿಮಾಡಿದರು. 8 ಇಸ್ರೇಲರು ಶತ್ರುಗಳನ್ನು ಸೋಲಿಸುವಂತೆ ಯೆಹೋವನು ಮಾಡಿದನು. ಇಸ್ರೇಲರ ಸೈನ್ಯವು ಶತ್ರುಗಳನ್ನು ಸೋಲಿಸಿ ಅವರನ್ನು ದೊಡ್ಡ ಚೀದೋನ್ ಮತ್ತು ಮಿಸ್ರೆಪೋತ್ಮಯಿಮ್ವರೆಗೂ ಪೂರ್ವದಿಕ್ಕಿನಲ್ಲಿ ಮಿಚ್ಛೆಯ ಕಣಿವೆಯವರೆಗೂ ಬೆನ್ನಟ್ಟಿತು. ಶತ್ರುಗಳಲ್ಲಿ ಯಾರೂ ಉಳಿದುಕೊಳ್ಳದಂತೆ ಇಸ್ರೇಲರು ಯುದ್ಧಮಾಡಿದರು. 9 ಯೆಹೋವನು ಹೇಳಿದಂತೆಯೇ ಯೆಹೋಶುವನು ಮಾಡಿದನು. ಯೆಹೋಶುವನು ಅವರ ಕುದುರೆಯ ಕಾಲುಗಳನ್ನು ಕತ್ತರಿಸಿದನು; ಅವರ ರಥಗಳನ್ನು ಸುಟ್ಟುಹಾಕಿದನು.
10 ಯೆಹೋಶುವನು ಹಿಂದಿರುಗಿ ಹೋಗಿ ಹಾಚೋರನ್ನು ಸ್ವಾಧೀನಪಡಿಸಿಕೊಂಡನು. ಯೆಹೋಶುವನು ಹಾಚೋರಿನ ಅರಸನನ್ನು ಕೊಂದನು. (ಹಾಚೋರ್ ಇಸ್ರೇಲಿನ ವಿರುದ್ಧ ಹೋರಾಡಿದ ಎಲ್ಲ ರಾಜ್ಯಗಳಿಗೆ ಮುಂದಾಳಾಗಿತ್ತು.) 11 ಇಸ್ರೇಲಿನ ಸೈನಿಕರು ಆ ಪಟ್ಟಣದಲ್ಲಿದ್ದವರನ್ನೆಲ್ಲಾ ಕೊಂದುಬಿಟ್ಟರು; ಒಬ್ಬರನ್ನೂ ಜೀವಂತವಾಗಿ ಅಲ್ಲಿ ಉಳಿಸಲಿಲ್ಲ. ಆಮೇಲೆ ಅವರು ಆ ಪಟ್ಟಣವನ್ನು ಸುಟ್ಟುಬಿಟ್ಟರು.
12 ಯೆಹೋಶುವನು ಈ ಎಲ್ಲ ಪಟ್ಟಣಗಳನ್ನು ವಶಪಡಿಸಿಕೊಂಡನು; ಅವುಗಳ ಎಲ್ಲ ಅರಸರನ್ನು ಕೊಂದುಹಾಕಿದನು; ಈ ಪಟ್ಟಣಗಳಲ್ಲಿದ್ದ ಎಲ್ಲವನ್ನು ನಾಶಮಾಡಿದನು. ಯೆಹೋವನ ಸೇವಕನಾದ ಮೋಶೆಯು ಆಜ್ಞಾಪಿಸಿದಂತೆಯೇ ಅವನು ಮಾಡಿದನು. 13 ಆದರೆ ಇಸ್ರೇಲಿನ ಸೈನಿಕರು ಬೆಟ್ಟಗಳ ಮೇಲೆ ಕಟ್ಟಲಾದ ಯಾವ ಪಟ್ಟಣವನ್ನೂ ಸುಡಲಿಲ್ಲ. ಬೆಟ್ಟಗಳ ಮೇಲೆ ಕಟ್ಟಿದ ಪಟ್ಟಣಗಳಲ್ಲಿ ಅವರು ಸುಟ್ಟ ಒಂದೇ ಒಂದು ಪಟ್ಟಣವೆಂದರೆ ಹಾಚೋರ್. ಈ ಪಟ್ಟಣವನ್ನು ಯೆಹೋಶುವನು ಸುಟ್ಟನು. 14 ಆ ಪಟ್ಟಣಗಳಲ್ಲಿ ಸಿಕ್ಕಿದ ಎಲ್ಲ ಪದಾರ್ಥಗಳನ್ನು ಮತ್ತು ಎಲ್ಲ ಪಶುಗಳನ್ನು ಇಸ್ರೇಲರು ತಮಗಾಗಿ ಇಟ್ಟುಕೊಂಡರು. ಆದರೆ ಅಲ್ಲಿದ್ದ ಜನರನ್ನೆಲ್ಲ ಕೊಂದರು. ಅವರಲ್ಲಿ ಯಾರನ್ನೂ ಸಜೀವವಾಗಿ ಉಳಿಸಲಿಲ್ಲ. 15 ಹೀಗೆ ಮಾಡಬೇಕೆಂದು ಯೆಹೋವನು ತನ್ನ ಸೇವಕನಾದ ಮೋಶೆಗೆ ಬಹುಕಾಲದ ಹಿಂದೆಯೇ ಹೇಳಿದ್ದನು. ಮೋಶೆಯು ಈ ಕಾರ್ಯವನ್ನು ಮಾಡಲು ಯೆಹೋಶುವನಿಗೆ ಆಜ್ಞಾಪಿಸಿದ್ದನು. ಹೀಗೆ ಯೆಹೋಶುವನು ದೇವರ ಆಜ್ಞೆಯನ್ನು ಪಾಲಿಸಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೆಲ್ಲವನ್ನು ಯೆಹೋಶುವನು ಮಾಡಿದನು.
16 ಹೀಗೆ ಯೆಹೋಶುವನು ಆ ದೇಶದ ಎಲ್ಲರನ್ನು ಸೋಲಿಸಿದನು. ಬೆಟ್ಟದ ಮೇಲಿನ ಪ್ರದೇಶ, ನೆಗೆವ್ ಪ್ರದೇಶ, ಗೋಷೆನಿನ ಎಲ್ಲ ಪ್ರದೇಶ, ಪಶ್ಚಿಮದ ಇಳಕಲಿನ ಪ್ರದೇಶ, ಜೋರ್ಡನಿನ ಕಣಿವೆ, ಇಸ್ರೇಲಿನ ಪರ್ವತ ಪ್ರದೇಶ ಮತ್ತು ಅವುಗಳ ಹತ್ತಿರದ ಎಲ್ಲ ಬೆಟ್ಟಗಳ ಪ್ರದೇಶ ಅವನ ಸ್ವಾಧೀನಕ್ಕೆ ಬಂದವು. 17 ಸೇಯೀರಿನ ಹತ್ತಿರವಿರುವ ಹಾಲಾಕ್ ಬೆಟ್ಟದಿಂದ ಹೆರ್ಮೋನ್ ಬೆಟ್ಟದ ಬುಡದಲ್ಲಿ ಲೆಬನೋನ್ ಕಣಿವೆಯಲ್ಲಿರುವ ಬಾಲ್ಗಾದ್ ಪಟ್ಟಣದವರೆಗೂ ಇರುವ ಭೂಮಿಯು ಅವನ ಸ್ವಾಧೀನವಾಯಿತು. ಯೆಹೋಶುವನು ಆ ಪ್ರದೇಶದ ಎಲ್ಲ ಅರಸರನ್ನು ಸೆರೆಹಿಡಿದು ಕೊಂದುಹಾಕಿದನು. 18 ಯೆಹೋಶುವನು ಆ ಅರಸರ ವಿರುದ್ಧ ಬಹುಕಾಲದವರೆಗೆ ಹೋರಾಡಿದನು. 19 ಆ ಪ್ರದೇಶದಲ್ಲಿ ಕೇವಲ ಒಂದು ಪಟ್ಟಣ ಮಾತ್ರ ಇಸ್ರೇಲರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ಅದೇ ಹಿವ್ವಿಯರ ಗಿಬ್ಯೋನ್ ಪಟ್ಟಣ. ಉಳಿದೆಲ್ಲ ಪಟ್ಟಣಗಳು ಯುದ್ಧದಲ್ಲಿ ಸೋತುಹೋಗಿದ್ದವು. 20 ತಾವು ಶಕ್ತಿಶಾಲಿಗಳೆಂಬ ಭಾವನೆಯನ್ನು ಯೆಹೋವನು ಆ ಜನರಲ್ಲಿ ಹುಟ್ಟಿಸಿ ಅವರನ್ನು ಇಸ್ರೇಲರ ಮೇಲೆ ಯುದ್ಧಕ್ಕೆ ಬರಮಾಡಿದನು. ಯುದ್ಧದಲ್ಲಿ ಕರುಣೆಯಿಲ್ಲದೆ ಅವರನ್ನು ಸಂಹರಿಸಬೇಕೆಂಬುದು ಯೆಹೋವನ ಯೋಜನೆಯಾಗಿತ್ತು. ಯೆಹೋವನು ಮೋಶೆಗೆ ಹೇಳಿದ ರೀತಿಯಲ್ಲಿ ಯೆಹೋಶುವನು ಆ ಪಟ್ಟಣಗಳನ್ನು ನಾಶಮಾಡಲು ಇದರಿಂದ ಸಾಧ್ಯವಾಯಿತು.
21 ಆಗ ಅನಾಕ ವಂಶಸ್ಥರು ಹೆಬ್ರೋನ್, ದೆಬೀರ್, ಅನಾಬ್ ಮತ್ತು ಯೆಹೂದ ಬೆಟ್ಟಪ್ರದೇಶಗಳಲ್ಲಿ ವಾಸವಾಗಿದ್ದರು. ಯೆಹೋಶುವನು ಈ ಅನಾಕ ವಂಶಸ್ಥರೊಂದಿಗೆ ಯುದ್ಧ ಮಾಡಿದನು. ಯೆಹೋಶುವನು ಆ ಎಲ್ಲ ಜನರನ್ನು ಮತ್ತು ಊರುಗಳನ್ನು ನಾಶಪಡಿಸಿದನು. 22 ಇಸ್ರೇಲಿನ ಪ್ರದೇಶದಲ್ಲಿ ಅನಾಕ ವಂಶಸ್ಥರಲ್ಲಿ ಯಾರೂ ಉಳಿಯಲಿಲ್ಲ. ಜೀವಸಹಿತ ಉಳಿದ ಅನಾಕ ವಂಶಸ್ಥರು ಕೇವಲ ಗಾಜಾ, ಗತೂರು, ಅಷ್ಡೋದ್ ಎಂಬಲ್ಲಿ ಮಾತ್ರ ಇದ್ದರು. 23 ಬಹಳ ಹಿಂದೆಯೇ ಯೆಹೋವನು ಮೋಶೆಗೆ ಹೇಳಿದ ಪ್ರಕಾರ ಯೆಹೋಶುವನು ಇಸ್ರೇಲಿನ ಪ್ರದೇಶವನ್ನೆಲ್ಲ ಸ್ವಾಧೀನಪಡಿಸಿಕೊಂಡನು. ಯೆಹೋವನು ತಾನು ವಾಗ್ದಾನ ಮಾಡಿದಂತೆ ಆ ಪ್ರದೇಶವನ್ನು ಇಸ್ರೇಲರಿಗೆ ಕೊಟ್ಟುಬಿಟ್ಟನು. ಆಗ ಯೆಹೋಶುವನು ಆ ಪ್ರದೇಶವನ್ನು ಕುಲಗಳ ಪ್ರಕಾರ ಹಂಚಿಕೊಟ್ಟನು. ಆಗ ಯುದ್ಧವು ಮುಗಿಯಿತು, ಕೊನೆಗೆ ಆ ಪ್ರದೇಶದಲ್ಲಿ ಶಾಂತಿ ನೆಲೆಸಿತು.
Kannada Holy Bible: Easy-to-Read Version. All rights reserved. © 1997 Bible League International