Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 24-27

24 “ಒಬ್ಬಾಕೆಯನ್ನು ಒಬ್ಬನು ಮದುವೆಯಾದ ಬಳಿಕ, ಅವಳಲ್ಲಿ ನಾಚಿಕೆಕರವಾದದ್ದೇನಾದರೂ ಇದ್ದರೆ ಅವನು ವಿವಾಹವಿಚ್ಛೇದನಾ ಪತ್ರಗಳಿಗೆ ಸಹಿಹಾಕಿ ಅವಳ ಕೈಯಲ್ಲಿ ಕೊಡಬೇಕು. ಆಮೇಲೆ ಆಕೆಯನ್ನು ತನ್ನ ಮನೆಯಿಂದ ಹೊರಗೆ ಕಳುಹಿಸಬೇಕು. ಅವನ ಮನೆಯಿಂದ ಅವಳು ಹೊರಗೆ ಕಳುಹಿಸಲ್ಪಟ್ಟ ಮೇಲೆ ಆಕೆ ಬೇರೊಬ್ಬನನ್ನು ಮದುವೆಯಾಗಬಹುದು. 3-4 ಆಕೆಯ ಹೊಸ ಗಂಡನೂ ಆಕೆಯನ್ನು ಇಷ್ಟಪಡದೆ ಮನೆಯಿಂದ ಹೊರಗೆ ಕಳುಹಿಸಿದರೆ ಅಥವಾ ಎರಡನೆ ಗಂಡನು ಸತ್ತುಹೋದರೆ ಆಕೆಯ ಮೊದಲನೆಯ ಗಂಡನು ಆಕೆಯನ್ನು ಮತ್ತೆ ಮದುವೆಯಾಗಬಾರದು. ಅವನಿಗೆ ಆಕೆಯು ಅಶುದ್ಧಳಾದಳು. ಅವನು ಆಕೆಯನ್ನು ಮತ್ತೆ ಮದುವೆಯಾದಲ್ಲಿ ಅವನು ಯೆಹೋವನಿಗೆ ಅಸಹ್ಯವಾದದ್ದನ್ನು ಮಾಡುವವನಾಗಿದ್ದಾನೆ. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಇಂಥ ಪಾಪಗಳನ್ನು ಮಾಡಬಾರದು.

“ಒಬ್ಬನು ಹೊಸದಾಗಿ ಮದುವೆಯಾಗಿದ್ದಲ್ಲಿ ಅವನನ್ನು ಸೈನ್ಯಕ್ಕೆ ಕಳುಹಿಸಬಾರದು; ವಿಶೇಷವಾದ ಜವಾಬ್ದಾರಿಯನ್ನು ಅವನಿಗೆ ಕೊಡಬಾರದು. ಒಂದು ವರ್ಷ ಅವನು ಮನೆಯಲ್ಲಿದ್ದುಕೊಂಡು ತನ್ನ ಹೆಂಡತಿಯನ್ನು ಸಂತೋಷಪಡಿಸಬೇಕು.

“ಒಬ್ಬನು ನಿಮ್ಮಿಂದ ಏನಾದರೊಂದು ವಸ್ತುವನ್ನು ಎರವಲಾಗಿ ತೆಗೆದುಕೊಳ್ಳುವುದಾದರೆ ಅವನ ಬೀಸುವ ಕಲ್ಲಿನ ಒಂದು ಭಾಗವನ್ನು ಒತ್ತೆಯಾಗಿಟ್ಟುಕೊಳ್ಳಬಾರದು. ಇಲ್ಲವಾದರೆ ಅವನ ಆಹಾರವನ್ನೇ ಅವನಿಂದ ಕಿತ್ತುಕೊಂಡ ಹಾಗಾಯಿತು.

“ಒಬ್ಬನು ಇನ್ನೊಬ್ಬ ಇಸ್ರೇಲನನ್ನು ಕದ್ದುಕೊಂಡು ಹೋಗಿ ಅವನನ್ನು ಗುಲಾಮನನ್ನಾಗಿ ಮಾರಬಾರದು. ಹಾಗೆ ಮಾಡಿದವನನ್ನು ಸಾಯಿಸಬೇಕು. ನಿಮ್ಮ ಕುಲದಿಂದ ಅಂಥಾ ಪಾಪವನ್ನು ತೆಗೆದುಹಾಕಬೇಕು.

“ನಿಮ್ಮಲ್ಲಿ ಯಾರಿಗಾದರೂ ಚರ್ಮರೋಗವಿದ್ದಲ್ಲಿ ಯಾಜಕನು ಹೇಳುವ ರೀತಿಯನ್ನು ಅನುಸರಿಸಬೇಕು. ನಾನು ಯಾಜಕರಿಗೆ ತಿಳಿಸಿದ ಮೇರೆಗೆ ನೀವು ಮಾಡಬೇಕು. ಈಜಿಪ್ಟಿನಿಂದ ಹೊರಟುಬಂದಾಗ ದಾರಿಯಲ್ಲಿ ದೇವರಾದ ಯೆಹೋವನು ಮಿರ್ಯಾಮಳಿಗೆ ಏನು ಮಾಡಿದನೆಂದು ಸ್ಮರಿಸಿರಿ.

10 “ನೀವು ಯಾರಿಗಾದರೂ ಸಾಲಕೊಟ್ಟರೆ ಅದಕ್ಕೆ ಒತ್ತೆಯಾಗಿ ವಸ್ತುವನ್ನು ತೆಗೆದುಕೊಳ್ಳಲು ಅವನ ಮನೆಯೊಳಗೆ ಹೋಗಬೇಡಿ. 11 ನೀವು ಹೊರಗೆ ನಿಂತುಕೊಳ್ಳಬೇಕು. ಸಾಲ ತೆಗೆದುಕೊಂಡ ವ್ಯಕ್ತಿಯು ತನ್ನ ಮನೆಯೊಳಗಿಂದ ಏನಾದರೂ ವಸ್ತುವನ್ನು ಒತ್ತೆಯಾಗಿ ನಿಮಗೆ ತಂದುಕೊಡುವನು. 12 ಅವನು ಬಡವನಾದರೆ ಅವನು ತನ್ನ ಕಂಬಳಿಯನ್ನೇ ತಂದುಕೊಡಬಹುದು. ಅದನ್ನು ರಾತ್ರಿ ಇಟ್ಟುಕೊಳ್ಳಬಾರದು. 13 ಪ್ರತೀ ಸಾಯಂಕಾಲ ಆ ಕಂಬಳಿಯನ್ನು ಹಿಂದಕ್ಕೆ ಕೊಡಬೇಕು. ಆಗ ಅವನಿಗೆ ರಾತ್ರಿ ಹೊದ್ದುಕೊಳ್ಳಲು ಇರುವುದು. ಅವನು ನಿನ್ನನ್ನು ಆಶೀರ್ವದಿಸುವನು. ಅಲ್ಲದೆ ದೇವರಾದ ಯೆಹೋವನು ನಿಮ್ಮ ಆ ಒಳ್ಳೆಯ ಕಾರ್ಯವನ್ನು ಗಣನೆಗೆ ತರುವನು.

14 “ಬಡವನಾಗಿರುವ ದಿನಕೂಲಿಯವನಿಗೆ ಮೋಸ ಮಾಡಬಾರದು. ಅವನು ಇಸ್ರೇಲನಾಗಿರಬಹುದು ಅಥವಾ ಪರದೇಶಸ್ಥನಾಗಿರಬಹುದು. 15 ಸೂರ್ಯ ಮುಳುಗುವುದರೊಳಗೆ ಅವನಿಗೆ ಸಲ್ಲಬೇಕಾದ ಕೂಲಿಯನ್ನು ಕೊಟ್ಟುಬಿಡು, ಅವನು ಬಡವನಾಗಿದ್ದಾನೆ. ನೀನು ಕೊಡುವ ಕೂಲಿಯಿಂದಲೇ ಅವನು ತನ್ನ ಹಸಿವನ್ನು ನೀಗಿಸಿಕೊಳ್ಳಬೇಕು. ನೀನು ಅವನ ಕೂಲಿ ಕೊಡದಿದ್ದಲ್ಲಿ ಅವನು ದೇವರಾದ ಯೆಹೋವನಿಗೆ ದೂರು ಹೇಳುವನು. ಆಗ ನೀನು ಪಾಪಮಾಡುವವನಾಗಿರುವೆ.

16 “ಮಕ್ಕಳು ಮಾಡಿದ ಪಾಪಕ್ಕಾಗಿ ಅವರ ತಂದೆತಾಯಿಗಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು. ತಂದೆತಾಯಿಗಳು ಮಾಡಿದ ಪಾಪಕ್ಕಾಗಿ ಮಕ್ಕಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು. ಪಾಪ ಮಾಡಿದವರಿಗೇ ಮರಣ ಶಿಕ್ಷೆಯಾಗಬೇಕು.

17 “ಪರದೇಶಸ್ಥರನ್ನು ಮತ್ತು ಅನಾಥರನ್ನು ಯೋಗ್ಯವಾದ ರೀತಿಯಲ್ಲಿ ನೋಡಿಕೊಳ್ಳಬೇಕು. ವಿಧವೆಯರ ಬಟ್ಟೆಗಳನ್ನು ಒತ್ತೆಯಿಟ್ಟುಕೊಳ್ಳಕೂಡದು. 18 ನೀವು ಈಜಿಪ್ಟಿನಲ್ಲಿ ಬಡ ಗುಲಾಮರಾಗಿದ್ದುದನ್ನು ಸ್ಮರಿಸಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದ ನೀವು ಬಡವರಿಗೆ ದಯೆ ತೋರಿಸಬೇಕು.

19 “ನೀವು ಹೊಲದಲ್ಲಿ ಬೆಳೆದ ಬೆಳೆಯನ್ನು ಕೊಯ್ದು ಮನೆಗೆ ತರುವಾಗ ಕೆಲವು ಸಿವುಡುಗಳನ್ನು ನೀವು ಹೊಲದಲ್ಲಿಯೇ ಬಿಟ್ಟು ಬಂದಿದ್ದರೆ ಅದನ್ನು ತರಲು ಹಿಂದಕ್ಕೆ ಹೋಗಬೇಡಿ. ಅದನ್ನು ನಿಮ್ಮ ಊರಿನಲ್ಲಿರುವ ಅನಾಥರಿಗೂ ವಿಧವೆಯರಿಗೂ ಪರದೇಶಸ್ಥರಿಗೂ ಬಿಡಿರಿ. ನೀವು ಹಾಗೆ ಮಾಡಿದರೆ ದೇವರಾದ ಯೆಹೋವನು ನಿಮಗೆ ಶುಭವನ್ನು ಉಂಟುಮಾಡುವನು. 20 ನೀವು ನಿಮ್ಮ ಎಣ್ಣೆಮರಗಳ ಕಾಯಿಗಳನ್ನು ಉದುರಿಸುವಾಗ ಮತ್ತೆ ಹೋಗಿ ಕೊಂಬೆಗಳಲ್ಲಿ ಕಾಯಿ ಹುಡುಕಬಾರದು. ಬಿಟ್ಟ ಕಾಯಿಗಳು ಪರದೇಶಸ್ಥರಿಗೂ ಊರಿನ ಅನಾಥ ಮತ್ತು ವಿಧವೆಯವರಿಗೂ ಆಗುವುದು. 21 ನಿಮ್ಮ ತೋಟದಿಂದ ಹಣ್ಣುಗಳನ್ನು ಕೂಡಿಸುವಾಗ ಉಳಿದ ಹಣ್ಣುಗಳನ್ನು ಶೇಖರಿಸಲು ಹಿಂತಿರುಗಬೇಡಿ; ಆ ಉಳಿದ ದ್ರಾಕ್ಷಿಹಣ್ಣುಗಳು ಊರಲ್ಲಿರುವ ಅನಾಥರಿಗೂ ವಿಧವೆಯರಿಗೂ ಮತ್ತು ಪರದೇಶಸ್ಥರಿಗೂ ಬಿಡಿರಿ. 22 ನೀವು ಈಜಿಪ್ಟ್ ದೇಶದಲ್ಲಿ ಬಡ ಗುಲಾಮರಾಗಿದ್ದುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಆದ್ದರಿಂದಲೇ ಬಡವರಿಗೆ ನೀವು ಹೀಗೆ ಮಾಡಬೇಕೆಂದು ನಿಮಗೆ ತಿಳಿಸುತ್ತಿದ್ದೇನೆ.

25 “ನಿಮ್ಮಲ್ಲಿ ಯಾರಿಗಾದರೂ ಇಬ್ಬರಿಗೆ ವಾಗ್ವಾದವಿದ್ದಲ್ಲಿ ಅವರು ಅದನ್ನು ನ್ಯಾಯಸ್ಥಾನಕ್ಕೆ ತೆಗೆದುಕೊಂಡು ಹೋಗಲಿ. ಅಲ್ಲಿ ನ್ಯಾಯಾಧೀಶರು ಯಾರು ಸರಿ ಯಾರು ತಪ್ಪು ಎಂದು ತೀರ್ಮಾನಿಸುವರು. ನ್ಯಾಯಾಧೀಶರು ಒಬ್ಬನಿಗೆ ಕೊರಡೆ ಏಟು ಕೊಡಬೇಕೆಂದು ತೀರ್ಮಾನಿಸಿದರೆ ಅವನು ಆ ಶಿಕ್ಷೆ ಹೊಂದುವವನನ್ನು ಬೋರಲು ಮಲಗಿಸಿ ನ್ಯಾಯಾಧೀಶನ ಕಣ್ಣು ಮುಂದೆ ಅವನಿಗೆ ಕೊರಡೆ ಏಟು ಹೊಡಿಸಬೇಕು. ಅವನ ಅಪರಾಧಕ್ಕನುಸಾರವಾಗಿ ಕೊರಡೆ ಏಟುಗಳ ಸಂಖ್ಯೆಯು ಏರುವದು. ಒಬ್ಬನಿಗೆ ನಲವತ್ತು ಕೊರಡೆ ಏಟುಗಳಿಗಿಂತ ಹೆಚ್ಚಾಗಿ ಹೊಡೆಯಬಾರದು. ಅದಕ್ಕಿಂತ ಹೆಚ್ಚು ಹೊಡೆದರೆ ಅವನ ಪ್ರಾಣವು ನಿಮ್ಮ ದೃಷ್ಟಿಗೆ ಅಮೂಲ್ಯವಾಗಿಲ್ಲವೆಂದು ತಿಳಿದುಬರುತ್ತದೆ.

“ಕಣವನ್ನು ತುಳಿಯಲು ಎತ್ತುಗಳನ್ನು ಉಪಯೋಗಿಸುವಾಗ ಅವುಗಳು ಧಾನ್ಯ ತಿನ್ನುತ್ತವೆ ಎಂದು ಅವುಗಳ ಬಾಯಿಗಳನ್ನು ಕಟ್ಟಬಾರದು.

“ಇಬ್ಬರು ಅಣ್ಣತಮ್ಮಂದಿರು ಜೀವಿಸುತ್ತಿರುವಾಗ ಒಬ್ಬನು ಮಕ್ಕಳಿಲ್ಲದೆ ಸತ್ತುಹೋದರೆ ಅವನ ಹೆಂಡತಿಯು ಕುಟುಂಬದಿಂದ ಹೊರಗೆ ಮದುವೆಯಾಗಬಾರದು. ಅವಳ ಮೈದುನ ಆಕೆಯನ್ನು ಮದುವೆಯಾಗಿ, ತನ್ನ ಮೈದುನ ಧರ್ಮವನ್ನು ನೆರವೇರಿಸಬೇಕು. ಅವಳಿಗೆ ಅವನಿಂದ ಹುಟ್ಟುವ ಮೊದಲನೆಯ ಮಗು ಅವಳ ಮೊದಲನೆಯ ಗಂಡನಿಗೆ ಸೇರಿದ್ದೆಂದು ಪರಿಗಣಿಸಲ್ಪಡಬೇಕು. ಹೀಗೆ ಸತ್ತುಹೋದ ಅಣ್ಣನ ವಂಶವು ಮುಂದುವರಿಯುವುದು. ಆದರೆ ಮೈದುನನು, ಸತ್ತುಹೋದ ತನ್ನ ಅಣ್ಣನ ಸ್ಥಾನವನ್ನು ತೆಗೆದುಕೊಳ್ಳಲು ಇಷ್ಟಪಡದೆಹೋದಲ್ಲಿ, ಆಕೆಯು ಊರಿನ ಹಿರಿಯರ ಬಳಿಗೆ ಹೋಗಿ ಹಿರಿಯರಿಗೆ ಹೀಗೆ ಹೇಳಬೇಕು: ‘ನನ್ನ ಮೈದುನನು ತನ್ನ ಅಣ್ಣನ ಹೆಸರನ್ನು ಇಸ್ರೇಲಿನಲ್ಲಿ ಉಳಿಸಲು ಇಷ್ಟಪಡುವುದಿಲ್ಲ.’ ಆಗ ಊರಿನ ಹಿರಿಯರು ಆ ಮೈದುನನನ್ನು ಕರಿಸಿ ಅವನೊಂದಿಗೆ ಮಾತನಾಡಬೇಕು. ಅವನು ತನ್ನ ನಿರ್ಧಾರವನ್ನು ಬದಲಾಯಿಸದೆ, ‘ನನಗೆ ಅವಳನ್ನು ಹೆಂಡತಿಯಾಗಿ ತೆಗೆದುಕೊಳ್ಳಲು ಇಷ್ಟವಿಲ್ಲ’ ಎಂದು ಹೇಳಿದರೆ, ಅವನ ಅಣ್ಣನ ಹೆಂಡತಿಯು ಮುಂದೆ ಬಂದು ಹಿರಿಯರ ಸಮ್ಮುಖದಲ್ಲಿ ಅವನ ಕಾಲಿನಿಂದ ಚಪ್ಪಲಿಗಳನ್ನು ತೆಗೆದು ಅವನ ಮುಖಕ್ಕೆ ಉಗಿಯಬೇಕು. ‘ತನ್ನ ಮೈದುನ ಧರ್ಮವನ್ನು ನೆರವೇರಿಸದೆ ತನ್ನ ಅಣ್ಣನಿಗೆ ವಂಶವನ್ನು ಕೊಡದವನಿಗೆ ಇದೇ ಗತಿ’ ಎಂದು ಹೇಳಬೇಕು. 10 ಆಗ ಅವನ ಸಂತಾನವು, ‘ಚಪ್ಪಲಿ ತೆಗೆಯಲ್ಪಟ್ಟ ಸಂತಾನ’ ಎಂದು ಕರೆಯಲ್ಪಡುವುದು.

11 “ಇಬ್ಬರು ಗಂಡಸರು ಜಗಳವಾಡುತ್ತಿರುವಾಗ ಒಬ್ಬನ ಹೆಂಡತಿಯು ಗಂಡನಿಗೆ ಸಹಾಯಮಾಡಲಿಕ್ಕೆ ಬಂದು ಜಗಳವಾಡುವ ಇನ್ನೊಬ್ಬ ಗಂಡಸಿನ ಗುಪ್ತಾಂಗವನ್ನು ಹಿಡಿಯಬಾರದು. 12 ಅಂಥವಳ ಕೈಯನ್ನು ಕಡಿದುಹಾಕಿರಿ; ದಯೆ ತೋರಿಸಬೇಡಿ.

13 “ಮೋಸದ ತೂಕದ ಕಲ್ಲುಗಳನ್ನು ಉಪಯೋಗಿಸಬೇಡಿ. 14 ನಿಮ್ಮ ಮನೆಯೊಳಗೆ ಮೋಸದ ತೂಕದ ಕಲ್ಲುಗಳನ್ನಿಡಬೇಡಿ. 15 ನೀವು ಸರಿಯಾದ ತೂಕದ ಕಲ್ಲುಗಳನ್ನು ಉಪಯೋಗಿಸಬೇಕು. ಆಗ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡಲಿರುವ ದೇಶದಲ್ಲಿ ಬಹುಕಾಲ ಬಾಳುವಿರಿ. 16 ಮೋಸವುಳ್ಳ ತೂಕದ ಕಲ್ಲುಗಳನ್ನು ಉಪಯೋಗಿಸುವವರನ್ನು ದೇವರಾದ ಯೆಹೋವನು ದ್ವೇಷಿಸುತ್ತಾನೆ. ಹೌದು, ಆತನು ಮೋಸ ಮಾಡುವವರನ್ನು ದ್ವೇಷಿಸುತ್ತಾನೆ.

ಅಮಾಲೇಕ್ಯರನ್ನು ನಾಶಮಾಡಬೇಕು

17 “ನೀವು ಈಜಿಪ್ಟಿನಿಂದ ಹೊರಬರುವಾಗ ಅಮಾಲೇಕ್ಯರು ನಿಮಗೆ ಏನು ಮಾಡಿದರೆಂಬುದನ್ನು ನೆನಪಿನಲ್ಲಿಡಿರಿ. 18 ಅಮಾಲೇಕ್ಯರು ದೇವರನ್ನು ಗೌರವಿಸಲಿಲ್ಲ. ನೀವು ಆಯಾಸಗೊಂಡು ಬಲಹೀನರಾಗಿದ್ದಾಗ ಅವರು ನಿಮ್ಮ ಮೇಲೆ ಬಿದ್ದರು. ನಿಮ್ಮ ಗುಂಪಿನಲ್ಲಿ ಹಿಂದೆ ಉಳಿದವರನ್ನೆಲ್ಲಾ ಕೊಂದರು. 19 ಆದ್ದರಿಂದಲೇ ಅಮಾಲೇಕ್ಯರನ್ನು ಈ ಭೂಮುಖದಲ್ಲಿರದಂತೆ ಮಾಡಬೇಕು. ನೀವು ನಿಮ್ಮ ದೇಶವನ್ನು ಪ್ರವೇಶಿಸುವಾಗ ನೀವು ಹಾಗೆ ಮಾಡಬೇಕು. ನಿಮ್ಮ ಸುತ್ತಮುತ್ತಲಿರುವ ವೈರಿಗಳಿಂದ ದೇವರು ನಿಮಗೆ ಶಾಂತಿಯನ್ನು ಅನುಗ್ರಹಿಸುವನು. ಆದರೆ ಅಮಾಲೇಕ್ಯರನ್ನು ನಾಶಮಾಡುವ ಕಾರ್ಯವನ್ನು ಮರೆಯಬೇಡಿರಿ.

ಪ್ರಥಮ ಫಲ

26 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ನೀವು ಬೇಗನೆ ಪ್ರವೇಶಿಸಲಿದ್ದೀರಿ. ಆ ದೇಶವನ್ನು ಸ್ವಾಧೀನಮಾಡಿಕೊಂಡು ಅಲ್ಲಿ ನೆಲೆಸುವಿರಿ. ಯೆಹೋವನು ಕೊಡುವ ಆ ದೇಶದಲ್ಲಿ ನೀವು ಪ್ರಥಮ ಬೆಳೆಯನ್ನು ಕೂಡಿಸುವಿರಿ. ಪುಟ್ಟಿಗಳಲ್ಲಿ ಧಾನ್ಯವನ್ನು ಕೂಡಿಸುವಾಗ ಪ್ರಥಮ ಭಾಗವನ್ನು ಪ್ರತ್ಯೇಕವಾಗಿಟ್ಟು ದೇವರಾದ ಯೆಹೋವನು ತನ್ನ ಆಲಯಕ್ಕಾಗಿ ಆರಿಸುವ ಸ್ಥಳಕ್ಕೆ ಅದನ್ನು ತೆಗೆದುಕೊಂಡು ಹೋಗಿ. ಅಲ್ಲಿ ಸೇವೆ ಮಾಡುತ್ತಿರುವ ಯಾಜಕನಿಗೆ, ‘ಯೆಹೋವನು ನನ್ನ ಪೂರ್ವಿಕರಿಗೆ ಒಂದು ದೇಶವನ್ನು ಕೊಡುವುದಾಗಿ ವಾಗ್ದಾನ ಮಾಡಿದನು. ನಾನು ಆ ದೇಶಕ್ಕೆ ಬಂದಿರುತ್ತೇನೆ’ ಎಂದು ಹೇಳಬೇಕು.

“ಯಾಜಕನು ನಿಮ್ಮ ಕೈಯಲ್ಲಿರುವ ಪುಟ್ಟಿಯನ್ನು ತೆಗೆದುಕೊಂಡು ಯೆಹೋವನ ಯಜ್ಞವೇದಿಕೆಯ ಎದುರು ಇಡುವನು. ಆಗ ನಿಮ್ಮ ದೇವರಾದ ಯೆಹೋವನ ಸನ್ನಿಧಾನದಲ್ಲಿ ನೀವು ಹೀಗೆ ಅರಿಕೆ ಮಾಡಬೇಕು: ‘ನಮ್ಮ ಪೂರ್ವಿಕರು ಊರೂರು ತಿರುಗುತ್ತಿದ್ದ ಅರಾಮ್ಯರಾಗಿದ್ದರು. ಅವರು ಈಜಿಪ್ಟನ್ನು ಸೇರಿ ಅಲ್ಲಿಯೇ ನೆಲೆಸಿದರು. ಅಲ್ಲಿಗೆ ಅವರು ಹೋದಾಗ ಅವರು ಕೆಲವರೇ ಆಗಿದ್ದರು. ಆದರೆ ಕಾಲಕ್ರಮೇಣ ಅವರು ದೊಡ್ಡ ಜನಾಂಗವಾಗಿ ಅಭಿವೃದ್ಧಿ ಹೊಂದಿದರು. ಈಜಿಪ್ಟಿನವರು ನಮ್ಮನ್ನು ಕಠಿಣವಾಗಿ ನೋಡಿಕೊಳ್ಳುತ್ತಿದ್ದರು. ನಮ್ಮನ್ನು ಗುಲಾಮರಾಗಿ ಉಪಯೋಗಿಸಿದರು. ನಮ್ಮನ್ನು ಹಿಂಸಿಸಿ, ಕಷ್ಟಕರವಾದ ಕೆಲಸವನ್ನು ಕೊಟ್ಟರು. ಆಗ ನಾವು ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಮೊರೆಯಿಟ್ಟೆವು. ಆತನು ನಮ್ಮ ಕೂಗನ್ನು ಆಲಿಸಿದನು; ನಮ್ಮ ಸಂಕಟ, ವೇದನೆಗಳನ್ನು ನೋಡಿದನು. ಆಮೇಲೆ ಯೆಹೋವನು ತನ್ನ ಭುಜಪರಾಕ್ರಮದಿಂದ ನಮ್ಮನ್ನು ಈಜಿಪ್ಟಿನಿಂದ ಹೊರತಂದನು. ಆತನು ಅದ್ಭುತಕಾರ್ಯಗಳನ್ನು, ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿದನು. ಅಲ್ಲಿಂದ ನಮ್ಮನ್ನು ಕರೆದುತಂದು ನಮಗೆ ಈ ಒಳ್ಳೆಯ ದೇಶವನ್ನು ಕೊಟ್ಟನು. 10 ಈಗ, ಯೆಹೋವನೇ, ನೀನು ಕೊಟ್ಟ ದೇಶದಲ್ಲಿ ಬೆಳೆದ ಬೆಳೆಯಲ್ಲಿ ಪ್ರಥಮ ಫಲಗಳನ್ನು ತಂದಿದ್ದೇನೆ.’

“ಆ ಪ್ರಥಮ ಬೆಳೆಯನ್ನು ನಿಮ್ಮ ದೇವರಾದ ಯೆಹೋವನ ಮುಂದೆ ಇಟ್ಟು ಆತನನ್ನು ಆರಾಧಿಸಬೇಕು. 11 ನೀವೂ ನಿಮ್ಮ ಹೆಂಡತಿ ಮಕ್ಕಳೂ ಸೇರಿ ಅಲ್ಲಿ ಊಟಮಾಡಿ ಸಂತೋಷಿಸಬೇಕು. ನಿಮ್ಮ ಊರಿನಲ್ಲಿರುವ ಲೇವಿಯರೊಂದಿಗೆ ಮತ್ತು ಪರದೇಶಸ್ಥರೊಂದಿಗೆ ನಿಮ್ಮ ಪ್ರಥಮ ಫಲಗಳನ್ನು ಹಂಚಿಕೊಳ್ಳಿರಿ.

12 “ಪ್ರತೀ ಮೂರನೆಯ ವರ್ಷವು ದಶಮಾಂಶದ ವರ್ಷವಾಗಿರುವುದು. ಆಗ ನಿಮ್ಮ ಬೆಳೆಯ ಹತ್ತನೆಯ ಒಂದು ಅಂಶವನ್ನು ಲೇವಿಯರಿಗೂ ಪರದೇಶಸ್ಥರಿಗೂ ಅನಾಥರಿಗೂ ವಿಧವೆಯರಿಗೂ ಕೊಡಬೇಕು. ಆಗ ಅವರಿಗೆ ಊಟಮಾಡಲು ಸಾಕಷ್ಟು ಇರುವುದು. 13 ನಿನ್ನ ದೇವರಾದ ಯೆಹೋವನಿಗೆ ನೀನು ಹೀಗೆ ಹೇಳಬೇಕು: ‘ನನ್ನ ಮನೆಯೊಳಗಿಂದ ನನ್ನ ಬೆಳೆಯ ಪರಿಶುದ್ಧ ಭಾಗವನ್ನು ತೆಗೆದು ಲೇವಿಯರಿಗೆ, ಪರದೇಶಸ್ಥರಿಗೆ, ಅನಾಥರಿಗೆ, ವಿಧವೆಯರಿಗೆ ಕೊಟ್ಟಿರುತ್ತೇನೆ. ನಿನ್ನ ಕಟ್ಟಳೆಗಳನ್ನೆಲ್ಲಾ ಅನುಸರಿಸಿದ್ದೇನೆ. ನಿನ್ನ ಆಜ್ಞೆಗಳಿಗೆ ವಿಧೇಯನಾಗಲು ನಿರಾಕರಿಸಲಿಲ್ಲ, ನಾನು ಅವುಗಳನ್ನು ಮರೆಯಲಿಲ್ಲ. 14 ನಾನು ದುಃಖದಲ್ಲಿರುವಾಗ ಆ ಆಹಾರವನ್ನು ಊಟಮಾಡಲಿಲ್ಲ. ಈ ಬೆಳೆಯನ್ನು ಶೇಖರಿಸುವಾಗ ನಾನು ಅಶುದ್ಧನಾಗಿರಲಿಲ್ಲ. ಸತ್ತವರಿಗಾಗಿ ಈ ಆಹಾರವನ್ನು ಅರ್ಪಿಸಲಿಲ್ಲ. ನನ್ನ ದೇವರಾದ ಯೆಹೋವನೇ, ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗಿದ್ದೇನೆ. ನೀನು ಆಜ್ಞಾಪಿಸಿದ ಎಲ್ಲಾ ಕಾರ್ಯಗಳನ್ನು ನಾನು ಮಾಡಿದ್ದೇನೆ. 15 ನಿನ್ನ ಪರಿಶುದ್ಧ ನಿವಾಸದಿಂದ ನನ್ನನ್ನು ನೋಡು. ನಿನ್ನ ಜನಾಂಗವಾದ ಇಸ್ರೇಲನ್ನು ಆಶೀರ್ವದಿಸು. ನೀನು ನಮಗೆ ಕೊಟ್ಟಿರುವ ದೇಶವನ್ನು ಆಶೀರ್ವದಿಸು. ಸಮೃದ್ಧಿಯಿಂದ ಕೂಡಿದ ಈ ದೇಶವನ್ನು ನಮಗೆ ಕೊಡುವೆ ಎಂದು ನಮ್ಮ ಪೂರ್ವಿಕರಿಗೆ ನೀನು ವಾಗ್ದಾನ ಮಾಡಿರುವೆ.’

ಯೆಹೋವನ ಆಜ್ಞೆಗಳಿಗೆ ವಿಧೇಯರಾಗಿರಿ

16 “ಈ ಎಲ್ಲಾ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಅನುಸರಿಸಲು ನಿಮ್ಮ ದೇವರಾದ ಯೆಹೋವನು ಇಂದು ನಿಮಗೆ ಆಜ್ಞಾಪಿಸುತ್ತಾನೆ. ನಿಮ್ಮ ಪೂರ್ಣಹೃದಯದಿಂದಲೂ ಆತ್ಮದಿಂದಲೂ ಅವುಗಳನ್ನು ಎಚ್ಚರಿಕೆಯಿಂದ ಅನುಸರಿಸಿರಿ. 17 ಯೆಹೋವನು ನಿಮ್ಮ ದೇವರೆಂದು ನೀವು ಈ ದಿನ ಪ್ರತಿಜ್ಞೆ ಮಾಡಿದ್ದೀರಿ. ಆತನು ಹೇಳಿದ ಎಲ್ಲಾ ಕಟ್ಟಳೆ, ವಿಧಿ, ನಿಯಮಗಳನ್ನು ಅನುಸರಿಸುವಿರೆಂದು ಪ್ರತಿಜ್ಞೆ ಮಾಡಿರುತ್ತೀರಿ. ಆತನು ಹೇಳಿದ್ದನ್ನೆಲ್ಲಾ ಮಾಡುವುದಾಗಿ ಹೇಳಿರುವಿರಿ. 18 ಈ ಹೊತ್ತು ಯೆಹೋವನು ನಿಮ್ಮನ್ನು ತನ್ನ ಸ್ವಂತ ಜನಾಂಗವೆಂದು ಸ್ವೀಕರಿಸಿದ್ದಾನೆ ಎಂದು ವಾಗ್ದಾನ ಮಾಡುತ್ತಾನೆ. ನೀವು ಆತನ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗಬೇಕು. 19 ಎಲ್ಲಾ ಜನಾಂಗಗಳಿಗಿಂತ ನಿಮ್ಮನ್ನು ಬಲಿಷ್ಠರಾದ ಜನಾಂಗವನ್ನಾಗಿ ಮಾಡುವನು. ದೇವರು ನಿಮಗೆ ಜನರಿಂದ ಹೊಗಳಿಕೆಯನ್ನು, ಪ್ರಖ್ಯಾತಿಯನ್ನು ಮತ್ತು ಗೌರವವನ್ನು ಬರಮಾಡುವನು; ಆತನು ವಾಗ್ದಾನ ಮಾಡಿದಂತೆಯೇ ನೀವು ಪವಿತ್ರ ಜನರಾಗುವಿರಿ.”

ಜನರಿಗಾಗಿ ಕಲ್ಲಿನಿಂದ ಮಾಡಿದ ಸ್ಮಾರಕ ಕಲ್ಲುಗಳು

27 ಮೋಶೆ ಮತ್ತು ಸಮೂಹದ ಹಿರಿಯರು ಜನರೊಂದಿಗೆ ಮಾತನಾಡಿದರು. ಮೋಶೆಯು ಹೇಳಿದ್ದೇನೆಂದರೆ: “ನಾನು ಆಜ್ಞಾಪಿಸಿದ ಎಲ್ಲಾ ವಿಧಿಗಳನ್ನು ಅನುಸರಿಸಿರಿ. ನೀವು ಬೇಗನೆ ಜೋರ್ಡನ್ ನದಿಯನ್ನು ದಾಟಿ ನಿಮ್ಮ ದೇವರಾದ ಯೆಹೋವನು ಕೊಡುವ ದೇಶವನ್ನು ಪ್ರವೇಶಿಸುವಿರಿ. ಆ ದಿವಸ ದೊಡ್ಡ ದೊಡ್ಡ ಕಲ್ಲುಗಳನ್ನು ರಾಶಿ ಹಾಕಿ ಅದನ್ನು ಗಾರೆ ಮಾಡಿರಿ. ಅದರ ಮೇಲೆ ನಾನು ಆಜ್ಞಾಪಿಸಿದ್ದನ್ನೆಲ್ಲಾ ಬರೆಯಿರಿ. ನೀವು ನದಿಯನ್ನು ದಾಟಿದಾಗ ಈ ಕಾರ್ಯವನ್ನು ಮಾಡಬೇಕು. ಅನಂತರ, ಆತನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಸಮೃದ್ಧಿಯಾದ ದೇಶದೊಳಕ್ಕೆ ಹೋಗಿರಿ.

“ನೀವು ಆ ದೇಶದೊಳಗೆ ಪ್ರವೇಶ ಮಾಡಿದ ನಂತರ ನಾನು ಹೇಳಿದ್ದೆಲ್ಲವನ್ನು ನೀವು ಪರಿಪಾಲಿಸಬೇಕು. ಏಬಾಲ್ ಬೆಟ್ಟದ ಮೇಲೆ ಸ್ಮಾರಕ ಸ್ತಂಭವನ್ನು ನಿಲ್ಲಿಸಬೇಕು. ಅದಕ್ಕೆ ಗಾರೆ ಮಾಡಿ. ಮೇಲೆ ಅಲ್ಲಿಯೇ ಕಲ್ಲಿನಿಂದ ಒಂದು ಯಜ್ಞವೇದಿಕೆಯನ್ನು ಕಟ್ಟಿರಿ. ಆ ಕಲ್ಲುಗಳನ್ನು ಕೆತ್ತಲು ಕಬ್ಬಿಣದ ಸಾಧನಗಳನ್ನು ಉಪಯೋಗಿಸಬಾರದು. ಕಡಿದ ಕಲ್ಲುಗಳಿಂದ ಯಜ್ಞವೇದಿಕೆಯನ್ನು ಕಟ್ಟಬಾರದು. ಆ ಯಜ್ಞವೇದಿಕೆಯ ಮೇಲೆ ನಿಮ್ಮ ದೇವರಾದ ಯೆಹೋವನಿಗೆ ಸರ್ವಾಂಗಹೋಮವನ್ನು ಅರ್ಪಿಸಿರಿ. ನೀವು ಅಲ್ಲಿ ಯಜ್ಞವನ್ನರ್ಪಿಸಿ ಸಮಾಧಾನಯಜ್ಞದ ಭೋಜನವನ್ನು ಮಾಡಬೇಕು. ಅಲ್ಲಿ ದೇವರ ಸನ್ನಿಧಾನದಲ್ಲಿ ಊಟ ಮಾಡಿ ಸಂತೋಷಪಡಿರಿ. ನೀವು ಆ ಕಲ್ಲುಗಳ ಮೇಲೆ ಈ ಉಪದೇಶಗಳನ್ನೆಲ್ಲ ಸ್ಪಷ್ಟವಾಗಿ ಓದಲು ಸುಲಭವಾದ ರೀತಿಯಲ್ಲಿ ಬರೆಯಬೇಕು.”

ಮೋಶೆಯೂ ಯಾಜಕರೂ ಇಸ್ರೇಲ್ ಸಮೂಹದವರೊಂದಿಗೆ ಮಾತನಾಡಿದರು. ಆಗ ಮೋಶೆಯು, “ಇಸ್ರೇಲರೇ, ಮೌನವಾಗಿ ನನ್ನ ಮಾತುಗಳನ್ನು ಕೇಳಿರಿ. ಈ ದಿನ ನೀವು ದೇವರಾದ ಯೆಹೋವನ ಸ್ವಕೀಯ ಪ್ರಜೆಯಾಗಿರುತ್ತೀರಿ. 10 ಆದ್ದರಿಂದ ಆತನು ಹೇಳಿದ್ದೆಲ್ಲವನ್ನೂ ಮಾಡಿರಿ. ನಾನು ಈ ಹೊತ್ತು ನಿಮಗೆ ಹೇಳುವಂಥ ಆತನ ಅಪ್ಪಣೆಗಳಿಗೂ ವಿಧಿನಿಯಮಗಳಿಗೂ ವಿಧೇಯರಾಗಿರಿ” ಎಂದು ಹೇಳಿದನು.

ನೀತಿ ಕ್ರಮಗಳಲ್ಲಿರುವ ಶಾಪಕ್ಕೆ ಜನರ ಸಮ್ಮತ

11 ಅದೇ ದಿವಸ ಮೋಶೆಯು ಜನರಿಗೆ ಹೇಳಿದ್ದೇನೆಂದರೆ: 12 “ಜೋರ್ಡನ್ ನದಿ ದಾಟಿದ ನಂತರ, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ್ ಮತ್ತು ಬೆನ್ಯಾಮೀನನ ಕುಲದವರು ಗೆರಿಜ್ಜೀಮ್ ಬೆಟ್ಟದ ಮೇಲೆ ನಿಂತು ದೇವರ ಆಶೀರ್ವಾದವನ್ನು ಓದಬೇಕು. 13 ಅದೇ ಪ್ರಕಾರ ರೂಬೇನ್, ಗಾದ್, ಆಶೇರ್, ಜೆಬುಲೂನ್, ದಾನ್ ಮತ್ತು ನಫ್ತಾಲಿ ಕುಲದವರು ಏಬಾಲ್ ಬೆಟ್ಟದ ಮೇಲೆ ನಿಂತು ದೇವರ ಶಾಪವಚನವನ್ನು ಓದಬೇಕು.

14 “ಲೇವಿಯರು ಗಟ್ಟಿಯಾದ ಸ್ವರದಲ್ಲಿ ಇಸ್ರೇಲರೆಲ್ಲರಿಗೆ ಹೀಗೆ ಹೇಳಬೇಕು:

15 “‘ಸುಳ್ಳುದೇವರನ್ನು ಮಾಡಿ ಗುಪ್ತ ಸ್ಥಳದಲ್ಲಿಡುವವನು ಶಾಪಗ್ರಸ್ತನಾಗಲಿ; ಆ ದೇವರುಗಳು ಮನುಷ್ಯನ ಕೈಕೆಲಸವೇ; ಕಲ್ಲು, ಮರ, ಹಿತ್ತಾಳೆಗಳಿಂದ ಮಾಡಿದವುಗಳೇ. ಯೆಹೋವನು ಅವುಗಳನ್ನು ದ್ವೇಷಿಸುತ್ತಾನೆ.’

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

16 “ಲೇವಿಯರು, ‘ತಂದೆತಾಯಿಗಳನ್ನು ಸನ್ಮಾನಿಸದವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

17 “ಲೇವಿಯರು, ‘ನೆರೆಯವನ ಗಡಿಕಲ್ಲಿನ ಸ್ಥಳ ಬದಲಾಯಿಸುವವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು ‘ಆಮೆನ್’ ಎಂದು ಹೇಳಬೇಕು.

18 “ಲೇವಿಯರು, ‘ಕುರುಡರಿಗೆ ತಪ್ಪುದಾರಿ ತೋರಿಸುವವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು. “ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

19 “ಲೇವಿಯರು, ‘ಪರದೇಶಸ್ಥರಿಗೆ, ಅನಾಥರಿಗೆ ಮತ್ತು ವಿಧವೆಯರಿಗೆ ನ್ಯಾಯವಾದ ತೀರ್ಪನ್ನು ಕೊಡದವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

20 “ಲೇವಿಯರು, ‘ತಂದೆಯ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಂಡವನು ಶಾಪಗ್ರಸ್ತನಾಗಲಿ. ಅವನು ತನ್ನ ತಂದೆಗೆ ಅವಮಾನ ಮಾಡಿದನು’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

21 “ಲೇವಿಯರು, ‘ಯಾವನಾದರೂ ಪ್ರಾಣಿಯೊಂದಿಗೆ ಸಂಭೋಗಿಸಿದರೆ ಅವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

22 “ಲೇವಿಯರು, ‘ತನ್ನ ತಂಗಿಯನ್ನಾಗಲಿ ಅಥವಾ ಮಲತಾಯಿಯನ್ನಾಗಲಿ ಕೂಡುವವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

23 “ಲೇವಿಯರು, ‘ತನ್ನ ಅತ್ತೆಯೊಡನೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

24 “ಲೇವಿಯರು, ‘ಇನ್ನೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿದವನು ಹಿಡಿಯಲ್ಪಡದಿದ್ದರೂ ಸಹ ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

25 “ಲೇವಿಯರು, ‘ನಿರಪರಾಧಿಯನ್ನು ಕೊಲ್ಲಲು ಹಣ ತೆಗೆದುಕೊಳ್ಳುವವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.

26 “ಲೇವಿಯರು, ‘ಧರ್ಮಶಾಸ್ತ್ರವನ್ನು ಪ್ರೋತ್ಸಾಹಿಸುವದಕ್ಕೂ ಅವುಗಳನ್ನು ಅನುಸರಿಸುವದಕ್ಕೂ ನಿರಾಕರಿಸುವವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.

“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International