Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 19-21

ಇಸ್ರೇಲರ ಜೊತೆ ದೇವರ ಒಡಂಬಡಿಕೆ

19 ಇಸ್ರೇಲರು ಈಜಿಪ್ಟಿನಿಂದ ಹೊರಟ ಮೂರನೆಯ ತಿಂಗಳಲ್ಲಿ ಸೀನಾಯ್ ಮರುಭೂಮಿಯನ್ನು ತಲುಪಿದರು. ಜನರು ರೆಫೀದೀಮನ್ನು ಬಿಟ್ಟು ಸೀನಾಯ್ ಮರುಭೂಮಿಗೆ ಬಂದಿದ್ದರು. ಅಲ್ಲಿ ಅವರು ಬೆಟ್ಟದ ಬಳಿ ತಂಗಿದರು. ಆಗ ಮೋಶೆ ಬೆಟ್ಟವನ್ನೇರಿ ಯೆಹೋವನ ಸನ್ನಿಧಿಗೆ ಹೋದನು. ಮೋಶೆಯು ಬೆಟ್ಟದ ಮೇಲೆ ಇದ್ದಾಗ ಯೆಹೋವನು ಅವನಿಗೆ, “ಯಾಕೋಬನ ಮಹಾ ಕುಟುಂಬವಾದ ಇಸ್ರೇಲರಿಗೆ ಈ ಸಂಗತಿಗಳನ್ನು ಹೇಳು: ‘ನಾನು ನನ್ನ ವೈರಿಗಳಿಗೆ ಮಾಡುವ ಸಂಗತಿಗಳನ್ನು ನೀವು ನೋಡಿದ್ದೀರಿ. ನಾನು ಈಜಿಪ್ಟಿನವರಿಗೆ ಏನು ಮಾಡಿದೆನೆಂದು ನೀವು ನೋಡಿದಿರಿ. ಹದ್ದು ತನ್ನ ಮರಿಗಳನ್ನು ಹೊತ್ತುಕೊಂಡು ಬರುವಂತೆ ನಾನು ನಿಮ್ಮನ್ನು ಈಜಿಪ್ಟಿನಿಂದ ಇಲ್ಲಿಗೆ ಕರೆದುಕೊಂಡು ಬಂದದ್ದನ್ನು ನೀವು ನೋಡಿದಿರಿ. ಆದ್ದರಿಂದ ನನ್ನ ಆಜ್ಞೆಗಳಿಗೆ ವಿಧೇಯರಾಗಬೇಕೆಂದು ನಾನು ನಿಮಗೆ ಹೇಳುತ್ತೇನೆ. ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಿರಿ. ಆಗ ನೀವು ನನಗೆ ವಿಶೇಷವಾದ ಜನರಾಗುವಿರಿ. ಈ ಲೋಕವೆಲ್ಲಾ ನನ್ನದೇ. ಆದರೆ ನಾನು ನಿಮ್ಮನ್ನು ನನ್ನ ಸ್ವಂತ ಜನಾಂಗವನ್ನಾಗಿ ಆರಿಸಿಕೊಳ್ಳುತ್ತಿದ್ದೇನೆ. ನೀವು ಯಾಜಕರ ರಾಜ್ಯ’ ಎಂಬ ವಿಶೇಷವಾದ ಜನಾಂಗವಾಗುವಿರಿ. ಮೋಶೆಯೇ, ನಾನು ನಿನಗೆ ಹೇಳಿದ ಸಂಗತಿಗಳನ್ನು ನೀನು ಇಸ್ರೇಲರಿಗೆ ಹೇಳಲೇಬೇಕು” ಎಂದನು.

ಆದ್ದರಿಂದ ಮೋಶೆ ಬೆಟ್ಟದಿಂದಿಳಿದು ಬಂದು ಜನರ ಹಿರಿಯರನ್ನು ಒಟ್ಟಾಗಿ ಕರೆಸಿದನು. ಯೆಹೋವನು ಹೇಳಬೇಕೆಂದು ಆಜ್ಞಾಪಿಸಿದ ಸಂಗತಿಗಳನ್ನೆಲ್ಲಾ ಮೋಶೆಯು ಹಿರಿಯರಿಗೆ ಹೇಳಿದನು. ಜನರೆಲ್ಲರೂ ಒಟ್ಟಾಗಿ ಮಾತಾಡಿದರು. “ಯೆಹೋವನು ಹೇಳುವ ಪ್ರತಿಯೊಂದಕ್ಕೂ ನಾವು ವಿಧೇಯರಾಗುವೆವು” ಎಂದು ಅವರು ಅರಿಕೆಮಾಡಿದರು.

ಬಳಿಕ ಮೋಶೆಯು ತಿರುಗಿ ಬೆಟ್ಟವನ್ನೇರಿ ಯೆಹೋವನ ಸನ್ನಿಧಿಗೆ ಹೋಗಿ ಜನರ ಪ್ರತಿಕ್ರಿಯೆಯನ್ನು ದೇವರಿಗೆ ತಿಳಿಸಿದನು. ಯೆಹೋವನು ಮೋಶೆಗೆ, “ನಾನು ಕಾರ್ಮುಗಿಲಲ್ಲಿ ನಿನ್ನ ಬಳಿಗೆ ಬಂದು ಜನರೆಲ್ಲರಿಗೂ ಕೇಳುವಂತೆ ನಿನ್ನೊಡನೆ ಮಾತಾಡುವೆನು. ನೀನು ಹೇಳುವುದನ್ನು ಜನರು ಯಾವಾಗಲೂ ನಂಬಲು ಇದು ಸಹಾಯಕವಾಗುವುದು” ಎಂದು ಹೇಳಿದನು.

ಆಗ ಮೋಶೆಯು ಜನರು ಹೇಳಿದ್ದನ್ನೆಲ್ಲಾ ದೇವರಿಗೆ ಅರಿಕೆಮಾಡಿದನು.

10 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ಈ ದಿನ ಮತ್ತು ನಾಳೆ ನೀನು ಜನರನ್ನು ಒಂದು ವಿಶೇಷ ಸಂದರ್ಶನಕ್ಕಾಗಿ ಸಿದ್ಧಪಡಿಸಬೇಕು. ಜನರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡು 11 ಮೂರನೆಯ ದಿನದಲ್ಲಿ ನನಗಾಗಿ ಸಿದ್ಧರಾಗಬೇಕು. ಮೂರನೆಯ ದಿನದಲ್ಲಿ ನಾನು ಸೀನಾಯ್ ಬೆಟ್ಟದ ಮೇಲೆ ಇಳಿದುಬರುವೆನು; ಜನರೆಲ್ಲರೂ ನನ್ನನ್ನು ನೋಡುವರು. 12-13 ಆದರೆ ಬೆಟ್ಟದಿಂದ ದೂರವಿರಬೇಕೆಂದು ನೀನು ಜನರಿಗೆ ಹೇಳಬೇಕು. ಒಂದು ಗೆರೆಯನ್ನು ಹಾಕಿ ಆ ಗೆರೆಯನ್ನು ದಾಟಬಾರದೆಂದು ಅವರಿಗೆ ತಿಳಿಸು. ಯಾವ ವ್ಯಕ್ತಿಯಾಗಲಿ ಬೆಟ್ಟವನ್ನು ಮುಟ್ಟಿದರೆ ಅವನನ್ನು ಕಲ್ಲುಗಳಿಂದಾಗಲಿ ಬಾಣಗಳಿಂದಾಗಲಿ ಕೊಲ್ಲಬೇಕು. ಯಾವ ಪ್ರಾಣಿಯಾದರೂ ಬೆಟ್ಟವನ್ನು ಮುಟ್ಟಿದರೆ ಅದನ್ನು ಕೊಲ್ಲಬೇಕು. ಯಾರೂ ಬೆಟ್ಟವನ್ನು ಮುಟ್ಟಕೂಡದು. ಕೊಂಬಿನ ತುತ್ತೂರಿ ಊದಿದಾಗ ಜನರು ಬೆಟ್ಟದ ಸಮೀಪಕ್ಕೆ ಬರಬೇಕು ಎಂದು ಹೇಳು” ಎಂದನು.

14 ಮೋಶೆ ಬೆಟ್ಟದಿಂದಿಳಿದು ಹೋದನು. ಅವನು ಜನರ ಬಳಿಗೆ ಹೋಗಿ ವಿಶೇಷ ಸಂದರ್ಶನಕ್ಕಾಗಿ ಅವರನ್ನು ಸಿದ್ಧ ಮಾಡಿದನು. ಜನರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡರು.

15 ಆಗ ಮೋಶೆ ಜನರಿಗೆ, “ಮೂರನೆಯ ದಿನದಲ್ಲಿ ಯೆಹೋವನೊಡನೆ ಒಂದು ವಿಶೇಷ ಸಂದರ್ಶನಕ್ಕಾಗಿ ಸಿದ್ಧರಾಗಿರಿ. ಅಲ್ಲಿಯವರೆಗೆ, ಪುರುಷರು ಸ್ತ್ರೀಯರ ಸಂಗ ಮಾಡಬಾರದು” ಎಂದು ಹೇಳಿದನು.

16 ಮೂರನೆಯ ದಿನದ ಮುಂಜಾನೆಯಲ್ಲಿ ಆ ಬೆಟ್ಟದ ಮೇಲೆ ಗುಡುಗು ಮಿಂಚುಗಳು ಉಂಟಾದವು. ಒಂದು ಕಾರ್ಮುಗಿಲು ಬೆಟ್ಟದ ಮೇಲೆ ಇಳಿದುಬಂತು; ತುತ್ತೂರಿಯ ಮಹಾ ಧ್ವನಿಯು ಕೇಳಿಸಿತು. ಪಾಳೆಯದಲ್ಲಿದ್ದ ಜನರೆಲ್ಲರೂ ಭಯಭೀತರಾದರು. 17 ಆಗ ಮೋಶೆ ದೇವರನ್ನು ಸಂಧಿಸುವುದಕ್ಕಾಗಿ ಜನರನ್ನು ಪಾಳೆಯದಿಂದ ಹೊರಗೆ ನಡಿಸಿ, ಬೆಟ್ಟದ ಬಳಿಗೆ ಕರೆದುಕೊಂಡು ಬಂದನು. 18 ಸೀನಾಯಿ ಬೆಟ್ಟವು ಹೊಗೆಯಿಂದ ಕವಿದುಕೊಂಡಿತು. ಕುಲುಮೆಯಿಂದ ಬರುವ ಹೊಗೆಯಂತೆ, ಬೆಟ್ಟದಿಂದ ಹೊಗೆಯು ಮೇಲಕ್ಕೇರಿತು. ಯೆಹೋವನು ಬೆಂಕಿಯಲ್ಲಿ ಬೆಟ್ಟದ ಮೇಲೆ ಇಳಿದು ಬಂದದ್ದರಿಂದ ಇದು ಸಂಭವಿಸಿತು. ಇಡೀ ಬೆಟ್ಟ ನಡುಗಲಾರಂಭಿಸಿತು. 19 ತುತ್ತೂರಿಯ ಧ್ವನಿ ಹೆಚ್ಚುಹೆಚ್ಚಾಯಿತು. ಮೋಶೆಯು ದೇವರೊಂದಿಗೆ ಮಾತಾಡಿದಾಗಲೆಲ್ಲಾ ದೇವರು ಗುಡುಗಿನಂತಿದ್ದ ಧ್ವನಿಯಲ್ಲಿ ಅವನಿಗೆ ಉತ್ತರಕೊಟ್ಟನು.

20 ಯೆಹೋವನು ಸೀನಾಯಿ ಬೆಟ್ಟಕ್ಕೆ ಇಳಿದುಬಂದನು. ಬಳಿಕ ಯೆಹೋವನು ಮೋಶೆಯನ್ನು ಕರೆದು ಬೆಟ್ಟದ ತುದಿಗೆ ಬರಲು ಹೇಳಿದನು. ಆದ್ದರಿಂದ ಮೋಶೆ ಮೇಲಕ್ಕೆ ಹೋದನು.

21 ಯೆಹೋವನು ಮೋಶೆಗೆ, “ಕೆಳಗಿಳಿದು ಹೋಗಿ, ಜನರು ನನ್ನನ್ನು ನೋಡಲು ನನ್ನ ಹತ್ತಿರ ಬರಬಾರದೆಂದು ಅವರನ್ನು ಎಚ್ಚರಿಸು. ಇಲ್ಲವಾದರೆ ಅವರಲ್ಲಿ ಅನೇಕರು ಸಾಯುವರು. 22 ಮಾತ್ರವಲ್ಲದೆ ನನ್ನ ಸಮೀಪಕ್ಕೆ ಬರುವ ಯಾಜಕರು ಈ ವಿಶೇಷ ಸಂದರ್ಶನಕ್ಕಾಗಿ ತಮ್ಮನ್ನು ಸಿದ್ಧಪಡಿಸಿಕೊಳ್ಳಬೇಕೆಂದು ಹೇಳು. ಇಲ್ಲವಾದರೆ ನಾನು ಅವರನ್ನೂ ಶಿಕ್ಷಿಸುವೆನು” ಅಂದನು.

23 ಮೋಶೆಯು ಯೆಹೋವನಿಗೆ, “ಜನರು ಬೆಟ್ಟವನ್ನೇರಿ ಬರಲಾರರು. ಬೆಟ್ಟದ ಸುತ್ತಲೂ ಮೇರೆಯನ್ನು ಹಾಕಿ ಅದನ್ನು ಪವಿತ್ರ ಸ್ಧಳವನ್ನಾಗಿ ಪ್ರತ್ಯೇಕಿಸಬೇಕೆಂದು ನೀನೇ ನಮಗೆ ಎಚ್ಚರಿಕೆ ನೀಡಿದೆಯಲ್ಲಾ!” ಎಂದು ಹೇಳಿದನು.

24 ಯೆಹೋವನು ಅವನಿಗೆ, “ಜನರ ಬಳಿಗೆ ಇಳಿದುಹೋಗಿ ಆರೋನನನ್ನು ಕರೆದುಕೊಂಡು ಬಾ. ಆದರೆ ಯಾಜಕರಾಗಲಿ ಜನರಾಗಲಿ ಬರಕೂಡದು. ಅವರು ನನ್ನ ಸಮೀಪಕ್ಕೆ ಬಂದರೆ, ನಾನು ಅವರನ್ನು ದಂಡಿಸುವೆನು” ಎಂದು ಹೇಳಿದನು.

25 ಆದ್ದರಿಂದ ಮೋಶೆ ಜನರ ಬಳಿಗೆ ಇಳಿದುಹೋಗಿ ಈ ಸಂಗತಿಗಳನ್ನು ಅವರಿಗೆ ತಿಳಿಸಿದನು.

ದಶಾಜ್ಞೆಗಳು

20 ಬಳಿಕ ಯೆಹೋವನು ಈ ದಶಾಜ್ಞೆಗಳನ್ನು ಅವರಿಗೆ ಕೊಟ್ಟನು:

“ಯೆಹೋವನೆಂಬ ನಾನೇ ನಿಮ್ಮ ದೇವರು. ಈಜಿಪ್ಟಿನಲ್ಲಿ ಗುಲಾಮರಾಗಿದ್ದ ನಿಮ್ಮನ್ನು ಆ ದೇಶದಿಂದ ಹೊರಗೆ ನಡಿಸಿದವನು ನಾನೇ.

“ನನ್ನನ್ನಲ್ಲದೆ ಬೇರೆ ಯಾವ ದೇವರುಗಳನ್ನೂ ನೀವು ಆರಾಧಿಸಬಾರದು.

“ನೀವು ಯಾವ ವಿಗ್ರಹಗಳನ್ನೂ ಮಾಡಬಾರದು. ಆಕಾಶದಲ್ಲಿಯಾಗಲಿ ಭೂಮಿಯ ಮೇಲಾಗಲಿ ನೀರಿನಲ್ಲಾಗಲಿ ಇರುವ ಯಾವುದೇ ವಸ್ತುವಿನ ರೂಪವನ್ನು ನೀವು ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜಿಸಲೂ ಬಾರದು. ನಿಮ್ಮ ದೇವರಾದ ಯೆಹೋವನೆಂಬ ನನಗೆ ಸಲ್ಲತಕ್ಕ ಗೌರವವನ್ನು ನೀವು ಬೇರೆಯವರಿಗೆ ಸಲ್ಲಿಸಿದರೆ ನಾನು ನಿಮ್ಮನ್ನು ದ್ವೇಷಿಸುತ್ತೇನೆ. ನನಗೆ ವಿರುದ್ಧವಾಗಿ ಪಾಪಮಾಡುವವರ ದೋಷಫಲವನ್ನು ಅವರ ಮೂರು ನಾಲ್ಕು ತಲೆಮಾರುಗಳವರೆಗೂ ಬರಮಾಡುವೆನು. ಆದರೆ ನನ್ನ ಆಜ್ಞೆಗಳಿಗೆ ವಿಧೇಯರಾಗಿರುವವರಿಗೆ ಅವರ ಸಾವಿರ ತಲೆಮಾರುಗಳವರೆಗೂ ದಯೆತೋರಿಸುವೆನು.

“ನಿಮ್ಮ ದೇವರಾದ ಯೆಹೋವನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಉಪಯೋಗಿಸಬಾರದು. ಯೆಹೋವನು ತನ್ನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಉಪಯೋಗಿಸುವವನನ್ನು ಶಿಕ್ಷಿಸದೆ ಬಿಡುವುದಿಲ್ಲ.

“ನೀವು ಸಬ್ಬತ್ ದಿನವನ್ನು ದೇವರ ದಿನವೆಂದು ಜ್ಞಾಪಕದಲ್ಲಿಟ್ಟುಕೊಂಡು ಅದನ್ನು ಆಚರಿಸಿರಿ. ವಾರದ ಆರು ದಿನಗಳಲ್ಲಿ ಕೆಲಸಮಾಡಿರಿ. 10 ಆದರೆ ಏಳನೆ ದಿನವು ನಿಮ್ಮ ದೇವರಾದ ಯೆಹೋವನನ್ನು ಸನ್ಮಾನಿಸಲು ಮೀಸಲಾಗಿರುವ ವಿಶ್ರಾಂತಿ ದಿನವಾಗಿದೆ. ಅಂದು ನೀವು ಯಾವ ಕೆಲಸವನ್ನೂ ಮಾಡಬಾರದು. ನೀವಾಗಲಿ ನಿಮ್ಮ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಸೇವಕರಾಗಲಿ ಸೇವಕಿಯರಾಗಲಿ ನಿಮ್ಮ ಪಶುಗಳಾಗಲಿ ನಿಮ್ಮಲ್ಲಿರುವ ವಿದೇಶಿಯರಾಗಲಿ ಕೆಲಸ ಮಾಡಬಾರದು. 11 ಯಾಕೆಂದರೆ ಯೆಹೋವನು ಆರು ದಿನಗಳಲ್ಲಿ ಕೆಲಸ ಮಾಡಿ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಿಸಿ ಏಳನೆಯ ದಿನದಲ್ಲಿ ವಿಶ್ರಮಿಸಿದನು. ಆದ್ದರಿಂದ ಯೆಹೋವನು ಸಬ್ಬತ್ ದಿನವನ್ನು ಆಶೀರ್ವದಿಸಿ ಅದನ್ನು ತನ್ನ ದಿನವನ್ನಾಗಿ ಮಾಡಿದನು.

12 “ನೀವು ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಬೇಕು; ನೀವು ಸನ್ಮಾನಿಸಿದರೆ, ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ಬಹುಕಾಲ ಬಾಳುವಿರಿ.

13 “ನೀವು ಯಾರನ್ನೂ ಕೊಲೆ ಮಾಡಬಾರದು.

14 “ನೀವು ವ್ಯಭಿಚಾರ ಮಾಡಬಾರದು.

15 “ನೀವು ಕದಿಯಬಾರದು.

16 “ನೀವು ಬೇರೆಯವರ ಮೇಲೆ ಸುಳ್ಳುಸಾಕ್ಷಿ ಹೇಳಬಾರದು.[a]

17 “ನೀವು ನೆರೆಯವನ ಮನೆಯನ್ನು ಆಶಿಸಬಾರದು. ನೀವು ಮತ್ತೊಬ್ಬನ ಹೆಂಡತಿಯನ್ನಾಗಲಿ ಸೇವಕರನ್ನಾಗಲಿ ದಾಸಿಯರನ್ನಾಗಲಿ ಪಶುಗಳನ್ನಾಗಲಿ ಆಶಿಸಬಾರದು.”

ಜನರು ದೇವರಿಗೆ ಭಯಪಟ್ಟಿದು

18 ಆಗ ಅಲ್ಲಿದ್ದ ಜನರು ಗುಡುಗಿನ ಧ್ವನಿಯನ್ನು ಕೇಳಿದರು; ಬೆಟ್ಟದ ಮೇಲೆ ಮಿಂಚುಗಳನ್ನು ನೋಡಿದರು; ಹೊಗೆಯು ಬೆಟ್ಟದಿಂದ ಏರುವುದನ್ನು ಕಂಡರು. ಅವರೆಲ್ಲರೂ ಭಯದಿಂದ ನಡುಗಿದರು; ಬೆಟ್ಟದಿಂದ ದೂರದಲ್ಲಿದ್ದುಕೊಂಡು ಅವುಗಳನ್ನೆಲ್ಲಾ ಗಮನಿಸಿದರು. 19 ಆಗ ಜನರು ಮೋಶೆಗೆ, “ನೀನು ನಮ್ಮೊಡನೆ ಮಾತಾಡು; ನಾವು ನಿನಗೆ ಕಿವಿಗೊಡುವೆವು. ಆದರೆ ಯೆಹೋವನು ನಮ್ಮೊಡನೆ ಮಾತಾಡದಿರಲಿ. ಇಲ್ಲವಾದರೆ ನಾವು ಸಾಯುವೆವು” ಅಂದರು.

20 ಆಗ ಮೋಶೆಯು ಜನರಿಗೆ, “ಭಯಪಡಬೇಡಿರಿ, ಯೆಹೋವನು ನಿಮ್ಮನ್ನು ಪರೀಕ್ಷಿಸಲು ಬಂದಿದ್ದಾನೆ. ನೀವು ಆತನಲ್ಲಿ ಭಕ್ತಿಯುಳ್ಳವರಾಗಿರಬೇಕೆಂದು ಆತನು ಬಯಸುತ್ತಾನೆ. ಆಗ ನೀವು ಪಾಪ ಮಾಡುವುದಿಲ್ಲ” ಎಂದು ಹೇಳಿದನು.

21 ದೇವರ ಸನ್ನಿಧಾನಕ್ಕೆ ಹೋಗಲು ಮೋಶೆಯು ಕಾರ್ಮುಗಿಲಿನೊಳಗೆ ಹೋದಾಗ, ಜನರು ಬೆಟ್ಟದಿಂದ ದೂರ ನಿಂತುಕೊಂಡರು. 22 ಆಗ ಯೆಹೋವನು ಈ ಸಂಗತಿಗಳನ್ನು ಇಸ್ರೇಲರಿಗೆ ತಿಳಿಸಲು ಮೋಶೆಗೆ ಆಜ್ಞಾಪಿಸಿದನು: “ನಾನು ಪರಲೋಕದಿಂದ ನಿಮ್ಮ ಸಂಗಡ ಮಾತಾಡಿದ್ದನ್ನು ನೀವು ನೋಡಿದ್ದೀರಿ. 23 ಆದ್ದರಿಂದ ನನ್ನೊಡನೆ ಸ್ಪರ್ಧಿಸಲು, ನೀವು ಬೆಳ್ಳಿಬಂಗಾರಗಳಿಂದ ಮೂರ್ತಿಗಳನ್ನು ಮಾಡಿಕೊಳ್ಳಬಾರದು. ಈ ಸುಳ್ಳು ದೇವರುಗಳನ್ನು ನೀವು ಮಾಡಿಕೊಳ್ಳಲೇಬಾರದು.”

24 “ಒಂದು ವಿಶೇಷ ಯಜ್ಞವೇದಿಕೆಯನ್ನು ನನಗೋಸ್ಕರ ಮಣ್ಣಿನಿಂದ ಕಟ್ಟಿರಿ. ಈ ಯಜ್ಞವೇದಿಕೆಯ ಮೇಲೆ ಕುರಿದನಗಳನ್ನು ನನಗೆ ಸರ್ವಾಂಗಹೋಮಗಳನ್ನಾಗಿಯೂ ಸಮಾಧಾನಯಜ್ಞಗಳನ್ನಾಗಿಯೂ ಸಮರ್ಪಿಸಿರಿ. ನಾನು ನಿಮಗೆ ಹೇಳುವ ಪ್ರತಿಯೊಂದು ಸ್ಥಳದಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಳ್ಳಲು ಹೀಗೆಯೇ ಮಾಡಿರಿ. ಆಗ ನಾನು ಬಂದು ನಿಮ್ಮನ್ನು ಆಶೀರ್ವದಿಸುವೆನು. 25 ನೀವು ಯಜ್ಞವೇದಿಕೆಯನ್ನು ಕಲ್ಲುಗಳಿಂದ ಕಟ್ಟಬೇಕೆಂದಿದ್ದರೆ, ಉಳಿಯಿಂದ[b] ಕೆತ್ತಿದ ಕಲ್ಲುಗಳನ್ನು ಉಪಯೋಗಿಸಬೇಡಿರಿ. ಅಂಥ ಕಲ್ಲುಗಳನ್ನು ಉಪಯೋಗಿಸಿದರೆ, ಯಜ್ಞವೇದಿಕೆಯು ಅಪವಿತ್ರವಾಗುವುದು. 26 ಅಲ್ಲದೆ ಯಜ್ಞವೇದಿಕೆಯನ್ನು ಹತ್ತುವುದಕ್ಕೆ ಮೆಟ್ಟಲುಗಳನ್ನು ಮಾಡಬಾರದು. ಮೆಟ್ಟಲುಗಳಿದ್ದರೆ ಜನರು ತಲೆ ಎತ್ತಿ ಯಜ್ಞವೇದಿಕೆಯನ್ನು ನೋಡುವಾಗ ನಿಮ್ಮ ರಹಸ್ಯಾಂಗವು ಕಾಣಿಸೀತು.”

ಇತರ ಕಟ್ಟಳೆಗಳು ಮತ್ತು ಆಜ್ಞೆಗಳು

21 ಬಳಿಕ ದೇವರು ಮೋಶೆಗೆ ಹೇಳಿದ್ದೇನೆಂದರೆ, “ನೀನು ಜನರಿಗೆ ನೇಮಿಸಬೇಕಾದ ಇತರ ಕಟ್ಟಳೆಗಳು ಯಾವುವೆಂದರೆ:

“ನೀವು ಇಬ್ರಿಯ ಗುಲಾಮನನ್ನು ಕೊಂಡುಕೊಂಡರೆ, ಆ ಗುಲಾಮನು ಆರು ವರ್ಷಗಳವರೆಗೆ ಮಾತ್ರ ನಿಮ್ಮ ಸೇವೆಮಾಡುವನು. ಆರು ವರ್ಷಗಳ ನಂತರ, ಅವನು ಬಿಡುಗಡೆಯಾಗುವನು, ಅವನು ಏನೂ ಕೊಡಬೇಕಾಗಿರುವುದಿಲ್ಲ. ಅವನು ನಿಮ್ಮ ಗುಲಾಮನಾಗುವಾಗ ಮದುವೆಯಾಗಿಲ್ಲದಿದ್ದರೆ, ಅವನು ಬಿಡುಗಡೆ ಹೊಂದುವಾಗಲೂ ಹೆಂಡತಿಯಿಲ್ಲದವನಾಗಿ ಹೋಗುವನು. ಆದರೆ ಅವನು ನಿಮ್ಮ ಗುಲಾಮನಾಗುವಾಗ ಮದುವೆಯಾಗಿದ್ದರೆ ಅವನು ಬಿಡುಗಡೆ ಹೊಂದುವಾಗ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗುವನು. ಗುಲಾಮನು ಮದುವೆಯಾಗಿಲ್ಲದಿದ್ದರೆ, ಅವನ ಯಜಮಾನನು ಅವನಿಗೆ ಮದುವೆ ಮಾಡಿಸಬಹುದು. ಆ ಸ್ತ್ರೀಯು ಮಕ್ಕಳನ್ನು ಹೆತ್ತರೆ, ಆಕೆಯೂ ಆಕೆಯ ಮಕ್ಕಳೂ ಯಜಮಾನನ ಸ್ವತ್ತಾಗುವರು. ಗುಲಾಮನು ತನ್ನ ಸೇವಾ ವರ್ಷಗಳನ್ನು ಮುಗಿಸಿದ ತರುವಾಯ ಬಿಡುಗಡೆ ಹೊಂದುವನು.

“ಆದರೆ ಒಂದುವೇಳೆ ಆ ಗುಲಾಮನು ತನ್ನ ಯಜಮಾನನ ಸಂಗಡವಿರಲು ದೃಢವಾಗಿ ಬಯಸಿದರೆ ಅವನು, ‘ನಾನು ನನ್ನ ಯಜಮಾನನನ್ನು ಪ್ರೀತಿಸುತ್ತೇನೆ. ನಾನು ನನ್ನ ಹೆಂಡತಿಯನ್ನೂ ಮಕ್ಕಳನ್ನೂ ಪ್ರೀತಿಸುತ್ತೇನೆ. ನಾನು ಬಿಡುಗಡೆ ಹೊಂದದೆ ಇಲ್ಲೇ ಇರುವೆನು’ ಎಂದು ಹೇಳಬೇಕು. ಹೀಗಾದರೆ ಯಜಮಾನನು ಆ ಗುಲಾಮನನ್ನು ದೇವರ ಸನ್ನಿಧಿಗೆ[c] ಕರೆದುಕೊಂಡು ಬರುವನು. ಯಜಮಾನನು ಗುಲಾಮನನ್ನು ಬಾಗಿಲ ಬಳಿಗೆ ಅಥವಾ ಬಾಗಿಲಿನ ಮರದ ನಿಲುವುಪಟ್ಟಿಗಳ ಬಳಿಗೆ ಕರೆದುಕೊಂಡು ಬರುವನು. ಯಜಮಾನನು ಗುಲಾಮನ ಕಿವಿಗೆ ಚೂಪಾದ ಸಲಾಕೆಯಿಂದ ರಂಧ್ರ ಮಾಡುವನು. ಆಗ ಗುಲಾಮನು ತನ್ನ ಜೀವಮಾನಪರ್ಯಂತ ಆ ಯಜಮಾನನಿಗೆ ಸೇವೆ ಮಾಡುವನು.

“ಒಬ್ಬನು ತನ್ನ ಮಗಳನ್ನು ಗುಲಾಮಳನ್ನಾಗಿ ಮಾರಲು ತೀರ್ಮಾನಿಸಿದರೆ, ಆಕೆಯನ್ನು ಬಿಡುಗಡೆಗೊಳಿಸುವ ನಿಯಮಗಳು ಗುಲಾಮರಾದ ಪುರುಷರನ್ನು ಬಿಡುಗಡೆಗೊಳಿಸುವ ನಿಯಮಗಳ ಪ್ರಕಾರ ಇರುವುದಿಲ್ಲ. ಯಜಮಾನನು ತನಗಾಗಿ ಆರಿಸಿಕೊಂಡ ಗುಲಾಮಳನ್ನು ಇಷ್ಟಪಡದಿದ್ದರೆ, ಅವಳನ್ನು ಬಿಡುಗಡೆ ಮಾಡಬಹುದು. (ಅವಳ ತಂದೆಗೆ ಅವಳನ್ನು ಮಾರಬಹುದು.) ಅವಳನ್ನು ವಿದೇಶಿಯರಿಗೆ ಮಾರುವ ಹಕ್ಕನ್ನು ಯಜಮಾನನು ಕಳೆದುಕೊಳ್ಳುತ್ತಾನೆ; ಯಾಕೆಂದರೆ ಆಕೆಯಲ್ಲಿ ಅವನಿಗಿದ್ದ ನಂಬಿಕೆಯು ಮುರಿದುಹೋಯಿತು. ಯಜಮಾನನು ಗುಲಾಮಳನ್ನು ತನ್ನ ಸ್ವಂತ ಮಗನಿಗೆ ಮದುವೆ ಮಾಡಿಸುವುದಾಗಿ ವಾಗ್ದಾನ ಮಾಡಿದರೆ, ಅವಳನ್ನು ಗುಲಾಮಳನ್ನಾಗಿ ನೋಡಿಕೊಳ್ಳದೆ ಸೊಸೆಯಾಗಿ ನೋಡಿಕೊಳ್ಳಬೇಕು.

10 “ಯಜಮಾನನು ಇನ್ನೊಬ್ಬ ಸ್ತ್ರೀಯನ್ನು ಮದುವೆಯಾದರೆ, ಅವನು ತನ್ನ ಮೊದಲನೆಯ ಹೆಂಡತಿಗೆ ಅವನು ಕೊಡುವ ಆಹಾರ ಅಥವಾ ಬಟ್ಟೆಬರೆಗಳಲ್ಲಿ ಏನೂ ಕಡಿಮೆ ಮಾಡಬಾರದು; ಮದುವೆಯ ಮೂಲಕ ಆಕೆಯು ಯಾವ್ಯಾವ ವಸ್ತುಗಳನ್ನು ಹೊಂದಲು ಹಕ್ಕು ಪಡೆದಿರುತ್ತಾಳೊ ಅವೆಲ್ಲವನ್ನು ಅವನು ಆಕೆಗೆ ಕೊಡಬೇಕು. 11 ಅವನು ಆಕೆಗಾಗಿ ಈ ಮೂರು ಸಂಗತಿಗಳನ್ನು ಮಾಡಬೇಕು. ಇಲ್ಲವಾದರೆ ಅವಳು ಬಿಡುಗಡೆಯಾಗಿದ್ದಾಳೆ. ಅವಳು ಅವನಿಗೆ ಯಾವ ಸಾಲವನ್ನೂ ತೀರಿಸಬೇಕಾಗಿಲ್ಲ.

12 “ಒಬ್ಬನು ಮತ್ತೊಬ್ಬನನ್ನು ಹೊಡೆದು ಕೊಂದರೆ, ಅವನೂ ಕೊಲ್ಲಲ್ಪಡಬೇಕು. 13 ಆದರೆ ಕೊಲ್ಲಬೇಕೆಂಬ ಉದ್ದೇಶವಿಲ್ಲದೆ ಹೊಡೆದಾಗ ಸತ್ತುಹೋದರೆ ಅದು ದೇವರ ಸಂಕಲ್ಪವೆಂದು ಪರಿಗಣಿಸಬೇಕು. ನಾನು ನೇಮಿಸಲಿರುವ ಆಶ್ರಯಸ್ಥಳಗಳಿಗೆ ಹೊಡೆದವನು ಓಡಿಹೋಗಿ ಸುರಕ್ಷಿತವಾಗಿ ಬದುಕಲಿ. 14 ಆದರೆ ಒಬ್ಬನು ಕೋಪದಿಂದಾಗಲಿ ದ್ವೇಷದಿಂದಾಗಲಿ ಇನ್ನೊಬ್ಬನನ್ನು ಕೊಂದರೆ, ಆ ಕೊಲೆಗಾರನಿಗೆ ದಂಡನೆಯಾಗಬೇಕು. ನನ್ನ ಯಜ್ಞವೇದಿಕೆಯಿಂದ ಅವನನ್ನು ದೂರಕ್ಕೆ ತೆಗೆದುಕೊಂಡು ಹೋಗಿ ಕೊಲ್ಲಬೇಕು.

15 “ತಂದೆಯನ್ನಾಗಲಿ ತಾಯಿಯನ್ನಾಗಲಿ ಹೊಡೆಯುವವನನ್ನು ಕೊಲ್ಲಬೇಕು.

16 “ಯಾವನಾದರೂ ಮತ್ತೊಬ್ಬನನ್ನು ಕದ್ದು ಗುಲಾಮನನ್ನಾಗಿ ಮಾರಿದರೆ ಅಥವಾ ತನ್ನ ಗುಲಾಮನನ್ನಾಗಿ ಮಾಡಿಕೊಂಡರೆ ಅವನಿಗೆ ಮರಣಶಿಕ್ಷೆಯಾಗಬೇಕು.

17 “ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವವನನ್ನೂ ಕೊಲ್ಲಬೇಕು.

18 “ಇಬ್ಬರು ಜಗಳವಾಡುತ್ತಿರುವಾಗ ಒಬ್ಬನನ್ನು ಕಲ್ಲಿನಿಂದಾಗಲಿ ಮುಷ್ಟಿಯಿಂದಾಗಲಿ ಹೊಡೆದಾಗ, ಪೆಟ್ಟಾದ ಮನುಷ್ಯನು ಸಾಯದಿದ್ದರೆ, ಹೊಡೆದವನನ್ನು ಕೊಲ್ಲಬಾರದು. 19 ಗಾಯಗೊಂಡವನು ಕೆಲವು ಕಾಲದವರೆಗೆ ಹಾಸಿಗೆಯಲ್ಲಿರಬೇಕಾದರೆ, ಬಳಿಕ ಅವನು ಎದ್ದು ಊರುಗೋಲಿನ ಸಹಾಯದಿಂದ ನಡೆಯಬಲ್ಲವನಾದರೆ, ಹೊಡೆದವನು ಅವನನ್ನು ಆರೈಕೆ ಮಾಡಬೇಕು. ಗಾಯಗೊಂಡವನು ಕೆಲಸಮಾಡಲಾರದೆ ಹೋದ ಸಮಯಕ್ಕೆ ಹೊಡೆದವನು ಹಣ ಕೊಡಬೇಕು; ಅವನು ಸಂಪೂರ್ಣ ವಾಸಿಯಾಗುವವರೆಗೆ ಆರೈಕೆ ಮಾಡಬೇಕು.

20 “ಕೆಲವು ಸಲ ಯಜಮಾನರು ಗುಲಾಮನನ್ನಾಗಲಿ ಗುಲಾಮಳನ್ನಾಗಲಿ ಹೊಡೆಯುತ್ತಾರೆ. ಹೊಡೆದಾಗ ಆ ವ್ಯಕ್ತಿಯು ಸತ್ತರೆ, ಯಜಮಾನನಿಗೆ ಶಿಕ್ಷೆಯಾಗಬೇಕು. 21 ಆದರೆ ಆ ವ್ಯಕ್ತಿಯು ಸಾಯದೆ ಕೆಲವು ದಿನಗಳ ನಂತರ ಗುಣವಾದರೆ ಯಜಮಾನನಿಗೆ ಶಿಕ್ಷೆಯಾಗಬಾರದು. ಯಾಕೆಂದರೆ ಯಜಮಾನನು ಹಣವನ್ನು ಕೊಟ್ಟು ಆ ವ್ಯಕ್ತಿಯನ್ನು ಕೊಂಡುಕೊಂಡಿದ್ದಾನೆ ಮತ್ತು ಆ ವ್ಯಕ್ತಿಯು ಅವನ ಸ್ವತ್ತಾಗಿದ್ದಾನೆ.

22 “ಇಬ್ಬರು ಜಗಳವಾಡುವಾಗ ಗರ್ಭಿಣೆ ಸ್ತ್ರೀಗೆ ಪೆಟ್ಟಾಗಿ ಗರ್ಭಸ್ರಾವವಾದರೆ ಅದಕ್ಕೆ ಕಾರಣನಾದ ವ್ಯಕ್ತಿಯು ಅವಳಿಗೆ ದಂಡ ಕೊಡಬೇಕು. ಅವನು ಎಷ್ಟು ದಂಡ ಕೊಡಬೇಕೆಂಬುದನ್ನು ಅವಳ ಗಂಡನು ನ್ಯಾಯಾಧಿಪತಿಗಳ ಸಹಾಯದಿಂದ ತೀರ್ಮಾನಿಸುವನು. 23 ಆದರೆ ಆ ಸ್ತ್ರೀಯು ತೀರಿಕೊಂಡರೆ ಅದಕ್ಕೆ ಕಾರಣನಾದವನಿಗೆ ಮರಣದಂಡನೆಯಾಗಬೇಕು. ನೀವು ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕೊಡಿಸಬೇಕು. 24 ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಪ್ರತಿಯಾಗಿ ಹಲ್ಲು, ಕೈಗೆ ಪ್ರತಿಯಾಗಿ ಕೈ, ಕಾಲಿಗೆ ಪ್ರತಿಯಾಗಿ ಕಾಲು, 25 ಬರೆಗೆ ಪ್ರತಿಯಾಗಿ ಬರೆ, ಗಾಯಕ್ಕೆ ಪ್ರತಿಯಾಗಿ ಗಾಯ, ಏಟಿಗೆ ಪ್ರತಿಯಾಗಿ ಏಟು, ಈ ಮೇರೆಗೆ ಪ್ರತಿದಂಡನೆಯಾಗಬೇಕು.

26 “ಯಜಮಾನನು ಗುಲಾಮನಿಗೆ ಹೊಡೆದಾಗ ಗುಲಾಮನು ಕುರುಡನಾದರೆ, ಆ ಗುಲಾಮನು ಬಿಡುಗಡೆ ಹೊಂದಿದ್ದಾನೆ. ಅವನು ತನ್ನ ಬಿಡುಗಡೆಗೆ ತನ್ನ ಕಣ್ಣನ್ನೇ ಪ್ರತಿಯಾಗಿ ಕೊಟ್ಟಿದ್ದಾನೆ. ಗುಲಾಮನ ಅಥವಾ ಗುಲಾಮಳ ವಿಷಯದಲ್ಲಿಯೂ ಇದೇ ನಿಯಮ ಅನ್ವಯಿಸುತ್ತದೆ. 27 ಯಜಮಾನನು ಗುಲಾಮನ ಬಾಯಿಗೆ ಹೊಡೆದದ್ದರಿಂದ, ಗುಲಾಮನು ತನ್ನ ಹಲ್ಲನ್ನು ಕಳೆದುಕೊಂಡರೆ, ಆ ಗುಲಾಮನ ಹಲ್ಲು ಅವನ ಬಿಡುಗಡೆಗೆ ಕೊಟ್ಟ ಹಣವಾಗಿದೆ. ಗುಲಾಮನ ಅಥವಾ ಗುಲಾಮಳ ವಿಷಯದಲ್ಲಿ ಇದೇ ನಿಯಮವು ಅನ್ವಯಿಸುತ್ತದೆ.

28 “ಒಬ್ಬನ ಎತ್ತು ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ಕೊಂದರೆ, ಆಗ ನೀವು ಕಲ್ಲುಗಳಿಂದ ಆ ಎತ್ತನ್ನು ಕೊಲ್ಲಬೇಕು. ನೀವು ಅದರ ಮಾಂಸವನ್ನು ತಿನ್ನಬಾರದು. ಆದರೆ ಎತ್ತಿನ ಮಾಲೀಕನು ತಪ್ಪಿತಸ್ಥನಲ್ಲ. 29 ಆದರೆ ಹಿಂದೊಮ್ಮೆ ಆ ಎತ್ತು ಜನರಿಗೆ ತಿವಿದಿದ್ದು, ಅದರ ಮಾಲೀಕನಿಗೆ ಇದರ ವಿಷಯದಲ್ಲಿ ಎಚ್ಚರಿಕೆ ನೀಡಿದ್ದರೆ ಆಗ ಆ ಮಾಲೀಕನು ತಪ್ಪಿತಸ್ಥನಾಗಿದ್ದಾನೆ. ಯಾಕೆಂದರೆ ಅವನು ಆ ಎತ್ತನ್ನು ಕಟ್ಟಿಹಾಕಲಿಲ್ಲ ಅಥವಾ ಅದರ ಸ್ಥಳದಲ್ಲಿ ಬಂಧಿಸಿರಲಿಲ್ಲ. ಆದ್ದರಿಂದ ಎತ್ತನ್ನು ಕಟ್ಟಿಹಾಕದೆ ಇದ್ದುದರಿಂದ, ಅದು ಯಾರನ್ನಾದರೂ ಕೊಂದರೆ, ಆಗ ಆ ಮಾಲೀಕನು ತಪ್ಪಿತಸ್ಥನಾಗಿದ್ದಾನೆ. ನೀವು ಎತ್ತನ್ನು ಕಲ್ಲೆಸೆದು ಕೊಲ್ಲಬೇಕಲ್ಲದೆ ಅದರ ಮಾಲೀಕನನ್ನೂ ಕೊಲ್ಲಬೇಕು. 30 ಆದರೆ ಸತ್ತವನ ಕುಟುಂಬದವರು ಅವನಿಂದ ಹಣವನ್ನು ಕೇಳಿದರೆ ಮತ್ತು ಅವನು ಹಣವನ್ನು ಕೊಟ್ಟರೆ, ಅವನು ತನ್ನ ಜೀವವನ್ನು ಬಿಡಿಸಿಕೊಂಡಂತಾಗುವುದು. ಆಗ ಆ ಎತ್ತಿನ ಮಾಲೀಕನನ್ನು ಕೊಲ್ಲಬಾರದು. ಆದರೆ ನ್ಯಾಯಾಧಿಪತಿಗಳು ತೀರ್ಮಾನಿಸುವಷ್ಟು ಹಣವನ್ನು ಅವನು ಕೊಡಬೇಕು.

31 “ಎತ್ತು ಒಬ್ಬನ ಮಗನನ್ನಾಗಲಿ ಅಥಲಾ ಮಗಳನ್ನಾಗಲಿ ಕೊಂದರೆ ಇದೇ ನಿಯಮವನ್ನು ಪಾಲಿಸಬೇಕು. 32 ಆದರೆ ಎತ್ತು ಗುಲಾಮನನ್ನು ಕೊಂದರೆ, ಆಗ ಆ ಪಶುವಿನ ಮಾಲೀಕನು ಗುಲಾಮನ ಯಜಮಾನನಿಗೆ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಕೊಡಬೇಕು ಮತ್ತು ಎತ್ತನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕು. ಗುಲಾಮನ ಅಥವಾ ಗುಲಾಮಳ ವಿಷಯದಲ್ಲಿ ಇದೇ ನಿಯಮವನ್ನು ಪಾಲಿಸಬೇಕು.

33 “ಒಬ್ಬ ಮನುಷ್ಯನು ಕುಣಿಯೊಂದನ್ನು ತೋಡಿ ಅದನ್ನು ಮುಚ್ಚಿಲ್ಲದಿದ್ದರೆ ಮತ್ತು ಆ ಕುಣಿಯಲ್ಲಿ ಬೇರೊಬ್ಬನ ಪಶುವು ಬಿದ್ದು ಸತ್ತುಹೋದರೆ, 34 ಕುಣಿಯನ್ನು ತೋಡಿದವನು ಆ ಪಶುವಿಗೆ ಪ್ರತಿಯಾಗಿ ಈಡುಕೊಡಬೇಕು. ಅವನು ಈಡುಕೊಟ್ಟ ನಂತರ ಆ ಸತ್ತ ಪಶುವು ಅವನದಾಗುತ್ತದೆ.

35 “ಒಬ್ಬನ ಎತ್ತು ಇನ್ನೊಬ್ಬನ ಎತ್ತನ್ನು ಹಾದು ಕೊಂದರೆ ಆಗ ಜೀವಂತವಾಗಿರುವ ಎತ್ತನ್ನು ಮಾರಬೇಕು. ಆ ಎತ್ತನ್ನು ಮಾರಿದ್ದರಿಂದ ಬಂದ ಹಣವನ್ನು ಸಮವಾಗಿ ಹಂಚಿಕೊಳ್ಳಬೇಕು. ಕೊಲ್ಲಲ್ಪಟ್ಟ ಎತ್ತನ್ನು ಸಮವಾಗಿ ಹಂಚಿಕೊಳ್ಳಬೇಕು. 36 ಆದರೆ ಒಬ್ಬನ ಎತ್ತು ಮೊದಲೊಮ್ಮೆ ಇತರ ಪಶುಗಳಿಗೆ ಗಾಯಮಾಡಿದ್ದರೆ, ಅದರ ಮಾಲೀಕನು ಅದನ್ನು ಕಟ್ಟಿಹಾಕದಿದ್ದರಿಂದ ತಪ್ಪಿತಸ್ಥನಾಗಿದ್ದಾನೆ. ಅವನು ಸತ್ತ ಎತ್ತಿಗೆ ಪ್ರತಿಯಾಗಿ ಸ್ವಂತ ಎತ್ತನ್ನು ಕೊಡಬೇಕು. ಸತ್ತ ಎತ್ತನ್ನು ತಾನೇ ತೆಗೆದುಕೊಳ್ಳಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International