Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 139:13-18

13 ನನ್ನ ಅಂತರೀಂದ್ರಿಯಗಳನ್ನು ಸೃಷ್ಟಿಮಾಡಿದವನೂ ನೀನೇ.
    ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನೇ.
14 ನಿನ್ನ ಎಲ್ಲಾ ಅದ್ಭುತಕಾರ್ಯಗಳಿಗಾಗಿ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.
    ನಿನ್ನ ಕಾರ್ಯಗಳು ಅದ್ಭುತಕರವಾಗಿವೆಯೆಂದು ನಾನು ಗ್ರಹಿಸಿಕೊಂಡಿರುವೆ.

15 ನನ್ನ ವಿಷಯವೆಲ್ಲಾ ನಿನಗೆ ಗೊತ್ತಿದೆ.
    ತಾಯಿಗರ್ಭದಲ್ಲಿ ನನ್ನ ದೇಹ ರೂಪಗೊಳ್ಳುತ್ತಿದ್ದಾಗ ನನ್ನ ಎಲುಬುಗಳು ಬೆಳೆಯುವುದನ್ನೂ ನೀನು ನೋಡಿದೆ.
16 ನನ್ನ ದೇಹದ ಅಂಗಾಂಗಗಳು ಬೆಳೆಯುವುದನ್ನೂ ನೀನು ಗಮನಿಸಿದೆ.
    ನನ್ನ ಆಯುಷ್ಕಾಲದ ಮೊದಲನೆ ದಿನ ಆರಂಭವಾಗುವುದಕ್ಕಿಂತ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.
17 ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಮುಖ್ಯವಾಗಿವೆ.
    ಅವು ಅಸಂಖ್ಯಾತವಾಗಿವೆ.
18 ಅವುಗಳನ್ನು ಎಣಿಸುವುದಾದರೆ, ಸಮುದ್ರದ ಮರಳಿಗಿಂತಲೂ ಹೆಚ್ಚಾಗಿವೆ.
    ನಾನು ಎಚ್ಚರಗೊಂಡಾಗ ಮುಂಚಿನಂತೆ ನಿನ್ನೊಂದಿಗೇ ಇರುವೆನು.

ಆದಿಕಾಂಡ 32:3-21

ಯಾಕೋಬನ ಅಣ್ಣನಾದ ಏಸಾವನು ಸೇಯೀರ್ ಎಂಬ ಸ್ಥಳದಲ್ಲಿ ವಾಸವಾಗಿದ್ದನು. ಈ ಸ್ಥಳವು ಎದೋಮಿನ ಗುಡ್ಡಗಾಡು ಪ್ರದೇಶವಾಗಿತ್ತು. ಯಾಕೋಬನು ತನ್ನ ಸಂದೇಶಕರ ಮೂಲಕ ಏಸಾವನಿಗೆ ಈ ಸಂಗತಿಗಳನ್ನು ತಿಳಿಸಿದನು: “ನಿನ್ನ ಸೇವಕನಾದ ಯಾಕೋಬನು ಹೇಳುವುದೇನೆಂದರೆ, ‘ನಾನು ಕಳೆದ ವರ್ಷಗಳೆಲ್ಲಾ ಲಾಬಾನನೊಡನೆ ಜೀವಿಸಿದೆನು. ನನಗೆ ಅನೇಕ ದನಗಳೂ, ಕತ್ತೆಗಳೂ, ಆಡುಕುರಿಗಳೂ ಮತ್ತು ಸೇವಕಸೇವಕಿಯರೂ ಇದ್ದಾರೆ. ಸ್ವಾಮೀ, ನೀವು ನಮ್ಮನ್ನು ಸ್ವೀಕರಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.’”

ಸಂದೇಶಕರು ಯಾಕೋಬನ ಬಳಿಗೆ ಹಿಂತಿರುಗಿ ಬಂದು, “ನಾವು ನಿನ್ನ ಅಣ್ಣನಾದ ಏಸಾವನ ಬಳಿಗೆ ಹೋದೆವು. ಅವನು ನಿನ್ನನ್ನು ಭೇಟಿಯಾಗಲು ಬರುತ್ತಿದ್ದಾನೆ. ಅವನೊಡನೆ ನಾನೂರು ಮಂದಿ ಗಂಡಸರಿದ್ದಾರೆ” ಎಂದು ಹೇಳಿದರು.

ಯಾಕೋಬನಿಗೆ ಭಯವಾಯಿತು. ಅವನು ತನ್ನೊಡನೆ ಇದ್ದ ಜನರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿದನು. ಅವನು ಎಲ್ಲಾ ಆಡುಕುರಿಗಳನ್ನೂ ದನಕರುಗಳನ್ನೂ ಒಂಟೆಗಳನ್ನೂ ಎರಡು ಗುಂಪುಗಳನ್ನಾಗಿ ವಿಂಗಡಿಸಿದನು. “ಒಂದುವೇಳೆ ಏಸಾವನು ಬಂದು ಒಂದು ಗುಂಪನ್ನು ನಾಶಗೊಳಿಸಿದರೆ, ಮತ್ತೊಂದು ಗುಂಪು ಓಡಿಹೋಗಿ ತಪ್ಪಿಸಿಕೊಳ್ಳಬಹುದು” ಎಂಬುದು ಅವನ ಆಲೋಚನೆಯಾಗಿತ್ತು.

ಯಾಕೋಬನು, “ನನ್ನ ತಂದೆಯಾದ ಅಬ್ರಹಾಮನ ದೇವರೇ, ನನ್ನ ತಂದೆಯಾದ ಇಸಾಕನ ದೇವರಾಗಿರುವ ಯೆಹೋವನೇ, ನನ್ನ ದೇಶಕ್ಕೆ ಮತ್ತು ನನ್ನ ಕುಟುಂಬಕ್ಕೆ ಹಿಂತಿರುಗಿ ಬರುವಂತೆ ನೀನು ಹೇಳಿದೆ. ನೀನು ನನಗೆ ಒಳ್ಳೆಯದನ್ನು ಮಾಡುವುದಾಗಿ ಹೇಳಿದೆ. 10 ನೀನು ನನಗೆ ತುಂಬ ಕರುಣೆ ತೋರಿದೆ. ನೀನು ನನಗೆ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿದೆ. ಮೊದಲನೆ ಸಲ ನಾನು ಜೋರ್ಡನ್ ನದಿಯನ್ನು ದಾಟಿ ಪ್ರಯಾಣ ಮಾಡಿದಾಗ, ಕೇವಲ ನನ್ನ ಊರುಗೋಲೇ ಹೊರತು ಬೇರೇನೂ ನನಗಿರಲಿಲ್ಲ. ಆದರೆ ಈಗ ಎರಡು ಗುಂಪುಗಳಿಗೆ ಬೇಕಾದ ವಸ್ತುಗಳನ್ನು ನಾನು ಪಡೆದಿದ್ದೇನೆ. 11 ಇಂತಿರಲು, ದಯವಿಟ್ಟು ನನ್ನ ಅಣ್ಣನಿಂದ ನನ್ನನ್ನು ಕಾಪಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತಿರುವೆ. ಏಸಾವನಿಂದ ನನ್ನನ್ನು ಕಾಪಾಡು. ಅವನು ಬಂದು ನಮ್ಮೆಲ್ಲರನ್ನೂ ತಾಯಂದಿರನ್ನೂ ಮಕ್ಕಳನ್ನೂ ಕೊಲ್ಲುವನೆಂಬ ಭಯ ನನಗಿದೆ. 12 ‘ನಾನು ನಿನಗೆ ಒಳ್ಳೆಯದನ್ನು ಮಾಡುವೆ. ನಾನು ನಿನ್ನ ಕುಟುಂಬವನ್ನು ಹೆಚ್ಚಿಸಿ ನಿನ್ನ ಮಕ್ಕಳನ್ನು ಸಮುದ್ರದ ಮರಳಿನಷ್ಟು ವೃದ್ಧಿಗೊಳಿಸುವೆನು. ಅವರು ಲೆಕ್ಕಿಸಲಾಗದಷ್ಟು ಅಸಂಖ್ಯಾತವಾಗಿರುವರು’ ಎಂದು ನೀನು ನನಗೆ ವಾಗ್ದಾನ ಮಾಡಿದಿಯಲ್ಲವೇ” ಎಂದು ಪ್ರಾರ್ಥಿಸಿದನು.

13 ಯಾಕೋಬನು ಆ ರಾತ್ರಿ ಅಲ್ಲಿಯೇ ಉಳಿದುಕೊಂಡು ಏಸಾವನಿಗೆ ಉಡುಗೊರೆಯಾಗಿ ಕೊಡಲು ಕೆಲವು ವಸ್ತುಗಳನ್ನು ಸಿದ್ಧಗೊಳಿಸಿದನು. 14 ಯಾಕೋಬನು ಇನ್ನೂರು ಮೇಕೆಗಳನ್ನು, ಇಪ್ಪತ್ತು ಹೋತಗಳನ್ನು, ಇನ್ನೂರು ಕುರಿಗಳನ್ನು ಮತ್ತು ಇಪ್ಪತ್ತು ಟಗರುಗಳನ್ನು ತೆಗೆದುಕೊಂಡನು. 15 ಯಾಕೋಬನು ಮೂವತ್ತು ಒಂಟೆಗಳನ್ನು ಮತ್ತು ಅವುಗಳ ಮರಿಗಳನ್ನು ನಲವತ್ತು ಹಸುಗಳನ್ನು ಮತ್ತು ಹತ್ತು ಹೋರಿಗಳನ್ನು, ಇಪ್ಪತ್ತು ಹೆಣ್ಣು ಕತ್ತೆಗಳನ್ನು ಮತ್ತು ಹತ್ತು ಗಂಡು ಕತ್ತೆಗಳನ್ನು ತೆಗೆದುಕೊಂಡನು. 16 ಯಾಕೋಬನು ಪಶುಗಳ ಪ್ರತಿಯೊಂದು ಮಂದೆಯನ್ನೂ ತನ್ನ ಸೇವಕರ ವಶಕ್ಕೆ ಕೊಟ್ಟನು. ಆಮೇಲೆ ಯಾಕೋಬನು ಸೇವಕರಿಗೆ, “ಪಶುಗಳ ಪ್ರತಿಯೊಂದು ಗುಂಪನ್ನು ವಿಂಗಡಿಸಿ ನನ್ನ ಮುಂದೆ ಹೋಗಿರಿ; ಅಲ್ಲದೆ ಪ್ರತಿಯೊಂದು ಮಂದೆಯ ನಡುವೆಯೂ ಸ್ವಲ್ಪ ಅಂತರವಿರಲಿ” ಎಂದು ಹೇಳಿದನು. 17 ಯಾಕೋಬನು ಅವರಿಗೆ ಅವರವರ ಕರ್ತವ್ಯಗಳನ್ನು ತಿಳಿಸಿದನು. ಯಾಕೋಬನು ಪಶುಗಳ ಮೊದಲನೆ ಗುಂಪಿನ ಸೇವಕನಿಗೆ, “ನನ್ನ ಅಣ್ಣನಾದ ಏಸಾವನು ನಿನ್ನ ಬಳಿಗೆ ಬಂದು, ‘ಇವು ಯಾರ ಪಶುಗಳು? ನೀನು ಎಲ್ಲಿಗೆ ಹೋಗುತ್ತಿರುವೆ? ನೀನು ಯಾರ ಸೇವಕನು?’ ಎಂದು ಕೇಳುವನು. 18 ಆಗ ನೀನು, ‘ಪಶುಗಳು ನಿನ್ನ ಸೇವಕನಾದ ಯಾಕೋಬನವು. ನನ್ನ ಒಡೆಯನಾದ ಏಸಾವನೇ, ಯಾಕೋಬನು ಇವುಗಳನ್ನು ನಿನಗೆ ಉಡುಗೊರೆಯಾಗಿ ಕಳುಹಿಸಿದ್ದಾನೆ. ಅಲ್ಲದೆ ಅವನು ಸಹ ನಮ್ಮ ಹಿಂದೆ ಬರುತ್ತಿದ್ದಾನೆ’ ಎಂದು ತಿಳಿಸಬೇಕು” ಎಂದು ಹೇಳಿದನು.

19 ಇದೇ ರೀತಿ ಮಾಡುವಂತೆ ಯಾಕೋಬನು ಎರಡನೆಯ ಸೇವಕನಿಗೆ, ಮೂರನೆಯ ಸೇವಕನಿಗೆ ಮತ್ತು ಉಳಿದೆಲ್ಲಾ ಸೇವಕರಿಗೆ ಆಜ್ಞಾಪಿಸಿದನು. ಅವನು ಅವರಿಗೆ, “ನೀವು ಏಸಾವನನ್ನು ಭೇಟಿಯಾದಾಗ ಇದೇ ರೀತಿ ಮಾಡಬೇಕು. 20 ನೀವು ಅವನಿಗೆ, ‘ಇದು ನಿನಗೆ ಕಳುಹಿಸಿರುವ ಉಡುಗೊರೆ. ಅಲ್ಲದೆ ನಿನ್ನ ಸೇವಕನಾದ ಯಾಕೋಬನು ನಮ್ಮ ಹಿಂದೆ ಬರುತ್ತಿದ್ದಾನೆ’ ಎಂದು ಹೇಳಬೇಕು” ಎಂದು ತಿಳಿಸಿದನು.

“ನಾನು ಈ ಜನರನ್ನು ಉಡುಗೊರೆಗಳೊಡನೆ ಮುಂದೆ ಕಳುಹಿಸಿದರೆ, ಒಂದುವೇಳೆ ಏಸಾವನು ನನ್ನನ್ನು ಕ್ಷಮಿಸಿ ನನ್ನನ್ನು ಸ್ವೀಕರಿಸಿಕೊಳ್ಳಬಹುದು” ಎಂಬುದು ಯಾಕೋಬನ ಆಲೋಚನೆಯಾಗಿತ್ತು. 21 ಯಾಕೋಬನು ಏಸಾವನಿಗೆ ಉಡುಗೊರೆಗಳನ್ನು ಕಳುಹಿಸಿ ಆ ರಾತ್ರಿ ಪಾಳೆಯದಲ್ಲಿ ಉಳಿದುಕೊಂಡನು.

ಪ್ರಕಟನೆ 14:12-20

12 ಈ ಪರಿಸ್ಥಿತಿಯಲ್ಲಿ, ದೇವರ ಪರಿಶುದ್ಧ ಜನರು ತಾಳ್ಮೆಯಿಂದಿರಬೇಕು. ಅವರು ದೇವರ ಆಜ್ಞೆಗಳಿಗೆ ವಿಧೇಯರಾಗಿರಬೇಕು ಮತ್ತು ಯೇಸುವಿನಲ್ಲಿ ನಂಬಿಕೆಯನ್ನಿಟ್ಟಿರಬೇಕು.

13 ನಂತರ ನಾನು ಪರಲೋಕದಿಂದ ಒಂದು ಧ್ವನಿಯನ್ನು ಕೇಳಿದೆನು. ಆ ಧ್ವನಿಯು ಹೀಗೆ ಹೇಳಿತು: “ಇದನ್ನು ಬರೆ: ಇಂದಿನಿಂದ ಪ್ರಭುವಿನ ಭಕ್ತರಾಗಿದ್ದು ಸಾಯುವಂತಹ ಜನರು ಧನ್ಯರು.”

“ಹೌದು, ಇದು ನಿಜ. ಆ ಜನರು ತಮ್ಮ ಪ್ರಯಾಸದ ಕೆಲಸವನ್ನು ಮುಗಿಸಿದವರಾಗಿ ವಿಶ್ರಾಂತಿ ಪಡೆಯುತ್ತಾರೆ. ಅವರು ಮಾಡಿದುದೆಲ್ಲವೂ ಅವರೊಂದಿಗೇ ಇರುತ್ತದೆ” ಎಂದು ಪವಿತ್ರಾತ್ಮನು ಹೇಳುತ್ತಾನೆ.

ಭೂಲೋಕದ ಸುಗ್ಗೀಕಾಲ

14 ನಾನು ನೋಡಿದಾಗ ನನ್ನ ಎದುರಿನಲ್ಲಿ ಮನುಷ್ಯಕುಮಾರನಂತೆ[a] ಕಾಣುತ್ತಿದ್ದವನು ಆ ಬಿಳಿಯ ಮೋಡದ ಮೇಲೆ ಕುಳಿತಿದ್ದನು. ಆತನ ತಲೆಯ ಮೇಲೆ ಚಿನ್ನದ ಕಿರೀಟವಿತ್ತು ಮತ್ತು ಆತನ ಕೈಯಲ್ಲಿ ಹರಿತವಾದ ಕುಡುಗೋಲಿತ್ತು. 15 ಆಗ ಮತ್ತೊಬ್ಬ ದೇವದೂತನು ಆಲಯದಿಂದ ಹೊರಗೆ ಬಂದನು. ಈ ದೇವದೂತನು ಮೋಡದ ಮೇಲೆ ಕುಳಿತಿರುವಾತನಿಗೆ, “ನಿನ್ನ ಕುಡುಗೋಲನ್ನು ತೆಗೆದುಕೊಂಡು ಭೂಮಿಯ ಫಸಲನ್ನು ಒಟ್ಟುಗೂಡಿಸು. ಯಾಕೆಂದರೆ ಸುಗ್ಗಿಕಾಲವು ಬಂದಿದೆ. ಭೂಮಿಯ ಫಸಲು ಮಾಗಿದೆ” ಎಂದು ಹೇಳಿದನು. 16 ಆದ್ದರಿಂದ ಮೋಡದ ಮೇಲೆ ಕುಳಿತಿದ್ದಾತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿದನು. ಆಗ ಭೂಮಿಯ ಪೈರು ಕೊಯ್ಯಲ್ಪಟ್ಟಿತು.

17 ನಂತರ ಮತ್ತೊಬ್ಬ ದೇವದೂತನು ಪರಲೋಕದ ಆಲಯದಿಂದ ಹೊರಗೆ ಬಂದನು. ಆ ದೇವದೂತನಲ್ಲಿಯೂ ಹರಿತವಾದ ಒಂದು ಕುಡುಗೋಲಿತ್ತು. 18 ನಂತರ ಮತ್ತೊಬ್ಬ ದೇವದೂತನು ಯಜ್ಞವೇದಿಕೆಯಿಂದ ಬಂದನು. ಅವನಿಗೆ ಬೆಂಕಿಯ ಮೇಲೆ ಅಧಿಕಾರವಿತ್ತು. ಅವನು ಹರಿತವಾದ ಕುಡುಗೋಲಿದ್ದ ದೇವದೂತನನ್ನು ಕರೆದು, “ನಿನ್ನ ಹರಿತವಾದ ಕುಡುಗೋಲನ್ನು ತೆಗೆದುಕೊಂಡು, ಭೂಮಿಯ ದ್ರಾಕ್ಷಿತೋಟದಿಂದ ದ್ರಾಕ್ಷಿಗೊಂಚಲುಗಳನ್ನು ಒಟ್ಟುಗೂಡಿಸು. ಭೂಮಿಯ ದ್ರಾಕ್ಷಿಯೆಲ್ಲಾ ಮಾಗಿವೆ” ಎಂದು ಹೇಳಿದನು. 19 ಆ ದೇವದೂತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿ, ದ್ರಾಕ್ಷಿಯನ್ನೆಲ್ಲಾ ಒಟ್ಟುಗೂಡಿಸಿ, ದೇವರ ಕೋಪವೆಂಬ ದ್ರಾಕ್ಷಿಯ ಆಲೆಗೆ ಎಸೆದನು. 20 ಆ ದ್ರಾಕ್ಷಿಯನ್ನು ನಗರದ ಹೊರಭಾಗದಲ್ಲಿದ್ದ ದ್ರಾಕ್ಷಿಯ ಆಲೆಯಲ್ಲಿ ಕಿವುಚಿ ಹಾಕಿದರು. ಆ ದ್ರಾಕ್ಷಿಯ ಆಲೆಯಿಂದ ರಕ್ತವು ಹೊರಕ್ಕೆ ಬಂದಿತು. ಅದು ಕುದುರೆಗಳ ತಲೆಗಳಷ್ಟು ಎತ್ತರಕ್ಕೆ ಏರಿ ಇನ್ನೂರು ಮೈಲಿಗಳಷ್ಟು ದೂರ ಹರಿಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International