Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 137

137 ನಾವು ಬಾಬಿಲೋನ್ ದೇಶದ ನದಿಗಳ ಬಳಿಯಲ್ಲಿ ಕುಳಿತುಕೊಂಡು
    ಚೀಯೋನನ್ನು ನೆನಸಿಕೊಳ್ಳುತ್ತಾ ಅತ್ತೆವು.
ಸಮೀಪದಲ್ಲಿದ್ದ ನೀರವಂಜಿ ಮರಗಳಿಗೆ ನಾವು ನಮ್ಮ ಹಾರ್ಪ್‌ವಾದ್ಯಗಳನ್ನು ತೂಗುಹಾಕಿದೆವು.
ನಮ್ಮನ್ನು ಸೆರೆಹಿಡಿದಿದ್ದ ಜನರು
    ಬಾಬಿಲೋನಿನಲ್ಲಿ ನಮಗೆ ಚೀಯೋನಿನ ಕುರಿತು ಹರ್ಷಗೀತೆಗಳನ್ನು ಹಾಡಲು ಹೇಳಿದರು.
ಆದರೆ ಪರದೇಶದಲ್ಲಿ
    ಯೆಹೋವನ ಹಾಡುಗಳನ್ನು ನಾವು ಹಾಡುವಂತಿಲ್ಲ!
ಜೆರುಸಲೇಮೇ, ನಿನ್ನನ್ನು ನಾನೆಂದಾದರೂ ಮರೆಯುವುದಾದರೆ,
    ನಾನು ಮತ್ತೆಂದಿಗೂ ಹಾಡನ್ನು ಹಾಡದಂತಾಗಲಿ.
ಜೆರುಸಲೇಮೇ, ನಿನ್ನನ್ನು ನಾನೆಂದಾದರೂ ಮರೆಯುವುದಾದರೆ,
    ನಾನು ಮತ್ತೆಂದಿಗೂ ಹಾಡಲು ಶಕ್ತನಾಗದಂತಾಗಲಿ.
ಜೆರುಸಲೇಮೇ, ನಿನ್ನ ವಿಷಯದಲ್ಲೇ
    ನಾನು ಅತ್ಯಾನಂದಪಡುವೆನೆಂದು ಪ್ರಮಾಣ ಮಾಡುವೆ.

ಯೆಹೋವನೇ ನಿಶ್ಚಯವಾಗಿ ಎದೋಮ್ಯರನ್ನು ದಂಡಿಸು.
    ಯಾಕೆಂದರೆ ಜೆರುಸಲೇಮ್ ಸೆರೆಹಿಡಿಯಲ್ಪಟ್ಟಾಗ
ಅವರು, “ಅದರ ಕಟ್ಟಡಗಳನ್ನು ಕೆಡವಿಹಾಕಿ.
    ಅವುಗಳನ್ನು ಅಸ್ತಿವಾರ ಸಹಿತ ಹಾಳುಮಾಡಿರಿ” ಎಂದು ಆರ್ಭಟಿಸಿದರು.
ಬಾಬಿಲೋನೇ, ನೀನು ನಾಶವಾಗುವೆ!
    ನಿನಗೆ ತಕ್ಕ ದಂಡನೆಯನ್ನು ಕೊಡುವವನು ಧನ್ಯನು.
    ನೀನು ನಮ್ಮನ್ನು ನೋಯಿಸಿದಂತೆ ನಿನ್ನನ್ನೂ ನೋಯಿಸುವವನು ಧನ್ಯನು.
    ನಿನ್ನ ಮಕ್ಕಳನ್ನು ಹಿಡಿದು ಬಂಡೆಗೆ ಅಪ್ಪಳಿಸುವವನು ಧನ್ಯನು.

ಪ್ರಲಾಪಗಳು 1:16-22

16 “ನಾನು ಈ ಎಲ್ಲ ವಿಪತ್ತುಗಳಿಗಾಗಿ ಅಳುತ್ತೇನೆ.
    ನನ್ನ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿದೆ.
ನನ್ನನ್ನು ಸಂತೈಸುವವರು ಯಾರೂ ಸಮೀಪದಲ್ಲಿ ಇಲ್ಲ;
    ನನ್ನನ್ನು ಪ್ರೋತ್ಸಾಹಿಸುವವರು ಯಾರೂ ಇಲ್ಲ.
ನನ್ನ ಮಕ್ಕಳು ಹಾಳುಬಿದ್ದ ಭೂಮಿಯಂತಿದ್ದಾರೆ.
    ಶತ್ರುವು ಜಯಶಾಲಿಯಾದ ಕಾರಣ ಅವರು ಹಾಗಾಗಿದ್ದಾರೆ.”

17 ಚೀಯೋನು ತನ್ನ ಕೈಗಳನ್ನು ಚಾಚಿದಳು.
    ಅವಳನ್ನು ಸಂತೈಸುವವರೇ ಇರಲಿಲ್ಲ.
ಯಾಕೋಬನಿಗೆ ವೈರಿಗಳಾಗಬೇಕೆಂದು
    ಅವನ ನೆರೆಹೊರೆಯವರಿಗೆ ಯೆಹೋವನು ಆಜ್ಞಾಪಿಸಿದ್ದನು.
ಜೆರುಸಲೇಮ್ ಒಂದು ಹೊಲಸು ವಸ್ತುವಾಗಿದ್ದಾಳೆ.
    ಆ ವೈರಿಗಳ ಮಧ್ಯದಲ್ಲಿ ಅವಳು ಒಂದು ಹೊಲಸು ವಸ್ತುವಾಗಿದ್ದಾಳೆ.

18 ಅವಳು ಹೇಳಿದಳು, “ಯೆಹೋವನು ಮಾಡಿದ್ದು ನ್ಯಾಯವಾಗಿಯೇ ಇದೆ.
    ಏಕೆಂದರೆ ನಾನು ಆತನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.
ಎಲ್ಲಾ ಜನಗಳೇ, ನನ್ನ ಮಾತುಗಳನ್ನು ಕೇಳಿರಿ.
    ನನ್ನ ವ್ಯಥೆಯನ್ನು ನೋಡಿರಿ.
ನನ್ನ ತರುಣತರುಣಿಯರು ಸೆರೆ ಒಯ್ಯಲ್ಪಟ್ಟಿದ್ದಾರೆ.
19 ನಾನು ನನ್ನ ಪ್ರಿಯತಮರನ್ನು ಕೂಗಿ ಕರೆದೆ.
    ಆದರೆ ಅವರು ನನಗೆ ಮೋಸ ಮಾಡಿದರು.
ನನ್ನ ಯಾಜಕರು ಮತ್ತು ಹಿರಿಯರು
    ನಗರದಲ್ಲಿ ಸತ್ತುಹೋದರು.
ಅವರು ತಮಗಾಗಿ ಆಹಾರವನ್ನು ಹುಡುಕುತ್ತಿದ್ದರು.
    ಅವರು ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳ ಬಯಸಿದರು.

20 “ಯೆಹೋವನೇ, ನನ್ನ ಕಡೆ ನೋಡು, ನಾನು ತೊಂದರೆಯಲ್ಲಿದ್ದೇನೆ.
    ನನ್ನ ಮನಸ್ಸು ಕ್ಷೋಭೆಗೊಂಡಿದೆ.
    ನನ್ನ ಮನಸ್ಸಿಗೆ ತಲೆ ಕೆಳಗಾದಂತೆ ಭಾಸವಾಗುತ್ತಿದೆ.
ನಾನು ದುರಹಂಕಾರಿಯಾಗಿದ್ದುದರಿಂದ
    ನನ್ನ ಮನಸ್ಸಿಗೆ ಹಾಗೆ ಭಾಸವಾಗುತ್ತಿದೆ.
ಕಾರಣವೇನೆಂದರೆ, ನಾನು ದಂಗೆಕೋರಳಾಗಿದ್ದೆ.
    ಬೀದಿಗಳಲ್ಲಿ ನನ್ನ ಮಕ್ಕಳು ಖಡ್ಗಕ್ಕೆ ಆಹುತಿಯಾದರು.
ಮನೆಯಲ್ಲಿಯೂ ಸಹ ಸಾವಿತ್ತು.

21 “ನಾನು ನರಳಾಡುತ್ತಿದ್ದೇನೆ.
ಅದಕ್ಕಾಗಿ ನನ್ನ ಮಾತುಗಳಿಗೆ ಕಿವಿಗೊಡು;
    ನನ್ನನ್ನು ಸಂತೈಸುವವರು ಯಾರೂ ಇಲ್ಲ.
ನನ್ನ ಎಲ್ಲ ವೈರಿಗಳು ನನ್ನ ಕಷ್ಟಗಳ ಬಗ್ಗೆ ಕೇಳಿದ್ದಾರೆ.
    ಅವರು ಸಂತೋಷಪಡುತ್ತಿದ್ದಾರೆ.
ನೀನು ನನಗೆ ಈ ಸ್ಥಿತಿಯನ್ನು ತಂದದ್ದಕ್ಕಾಗಿ ಅವರು ಸಂತೋಷಪಡುತ್ತಲಿದ್ದಾರೆ.
    ನೀನು ಪ್ರಕಟಿಸಿದ ಆ ದಿನವನ್ನು ಬರಮಾಡು.
ಆ ದಿನ ನನ್ನ ಶತ್ರುಗಳ ಸ್ಥಿತಿ
    ನನ್ನ ಇಂದಿನ ಸ್ಥಿತಿಯಂತೆ ಆಗಲಿ.

22 “ನನ್ನ ಶತ್ರುಗಳು ಎಷ್ಟು ದುಷ್ಟರಾಗಿದ್ದಾರೆ ನೋಡು.
ನನ್ನ ಎಲ್ಲ ಪಾಪಗಳ ನಿಮಿತ್ತ ನೀನು ನನಗೆ ಮಾಡಿದಂತೆ
    ಅವರಿಗೂ ಮಾಡಲು ನಿನಗೆ ಸಾಧ್ಯವಾಗುವುದು.
ನಾನು ಪದೇಪದೇ ನರಳಾಡುತ್ತಿರುವುದರಿಂದ ನೀನು ಇದನ್ನು ಮಾಡಬೇಕು.
ನನ್ನ ಹೃದಯವು ಅಸ್ವಸ್ಥಗೊಂಡಿರುವುದರಿಂದ ನೀನು ಇದನ್ನು ಮಾಡಬೇಕು.”

ಯಾಕೋಬನು 1:2-11

ನಂಬಿಕೆ ಮತ್ತು ಜ್ಞಾನ

ನನ್ನ ಸಹೋದರ ಸಹೋದರಿಯರೇ, ನಿಮಗೆ ಅನೇಕ ತೊಂದರೆಗಳು ಬರುತ್ತವೆ. ಆದರೆ ಅವುಗಳು ಬಂದಾಗ ನೀವು ಬಹಳ ಸಂತೋಷಪಡಬೇಕು. ಏಕೆಂದರೆ ಅವುಗಳು ನಿಮ್ಮ ನಂಬಿಕೆಯನ್ನು ಪರಿಶೋಧಿಸಲು ಬಂದಿವೆ ಎಂಬುದು ನಿಮಗೆ ತಿಳಿದದೆ. ಅವು ನಿಮ್ಮಲ್ಲಿ ತಾಳ್ಮೆಯನ್ನು ಉಂಟುಮಾಡುತ್ತವೆ. ತಾಳ್ಮೆಯು ತನ್ನ ಕಾರ್ಯವನ್ನು ಪೂರೈಸಲಿ. ಆಗ ನೀವು ನಿಷ್ಕಳಂಕರೂ ಮತ್ತು ಪರಿಪೂರ್ಣರೂ ಆಗುವಿರಿ ಮತ್ತು ನಿಮಗೆ ಬೇಕಾದುದೆಲ್ಲವೂ ದೊರೆಯುವುದು.

ಆದರೆ ನಿಮ್ಮಲ್ಲಿ ಯಾರಿಗಾದರೂ ಜ್ಞಾನವು ಬೇಕಾಗಿದ್ದರೆ ಅಂಥವರು ದೇವರಲ್ಲಿ ಕೇಳಿಕೊಳ್ಳಲಿ. ದೇವರು ಉದಾರಿಯಾಗಿರುವುದರಿಂದ ಮತ್ತು ಎಲ್ಲಾ ಜನರಿಗೆ ಸಂತೋಷದಿಂದ ಕೊಡುವುದರಿಂದ ನಿಮಗೆ ಜ್ಞಾನವನ್ನು ದಯಪಾಲಿಸುತ್ತಾನೆ. ಆದರೆ ನೀವು ದೇವರನ್ನು ಕೇಳಿಕೊಳ್ಳುವಾಗ ಆತನಲ್ಲಿ ನಿಮಗೆ ನಂಬಿಕೆಯಿರಬೇಕು. ದೇವರ ಬಗ್ಗೆ ಸಂದೇಹಪಡದಿರಿ. ಸಂದೇಹಪಡುವವನು ಸಾಗರದಲ್ಲಿನ ಅಲೆಯಂತಿದ್ದಾನೆ. ಗಾಳಿಯು ಬೀಸಿದಾಗ ಅಲೆಯು ಮೇಲೆದ್ದು ಬೀಳುತ್ತದೆ. ಸಂದೇಹಪಡುವವನು ಆ ಅಲೆಯಂತಿರುವನು. 7-8 ಅವನು ಒಂದೇ ಕಾಲದಲ್ಲಿ ಎರಡು ರೀತಿಯ ಸಂಗತಿಗಳನ್ನು ಯೋಚಿಸುತ್ತಾನೆ. ಅವನು ತಾನು ಮಾಡುವ ಯಾವುದೇ ಕಾರ್ಯದಲ್ಲಾಗಲಿ ಒಂದು ತೀರ್ಮಾನಕ್ಕೆ ಬರಲಾರನು. ಅಂಥವನು ತನಗೆ ಪ್ರಭುವಿನಿಂದ ಏನಾದರೂ ದೊರೆಯುತ್ತದೆ ಎಂದು ಯೋಚಿಸದಿರಲಿ.

ನಿಜ ಶ್ರೀಮಂತಿಕೆ

ಬಡವನಾಗಿರುವ ವಿಶ್ವಾಸಿಯು ಹೆಮ್ಮೆಪಡಲಿ, ಏಕೆಂದರೆ ದೇವರು ಅವನನ್ನು ಆತ್ಮಿಕ ವಿಷಯದಲ್ಲಿ ಐಶ್ವರ್ಯವಂತನನ್ನಾಗಿ ಮಾಡಿದ್ದಾನೆ. 10 ಐಶ್ವರ್ಯವಂತನಾಗಿರುವ ವಿಶ್ವಾಸಿಯೂ ಹೆಮ್ಮೆಪಡಬೇಕು. ಏಕೆಂದರೆ ಆತ್ಮಿಕ ವಿಷಯದಲ್ಲಿ ಅವನಿಗಿರುವ ಬಡತನವನ್ನು ದೇವರು ಅವನಿಗೆ ತೋರಿಸಿಕೊಟ್ಟಿದ್ದಾನೆ. ಐಶ್ವರ್ಯವಂತನು ಹುಲ್ಲಿನ ಹೂವಿನಂತೆ ಗತಿಸುವನು. 11 ಸೂರ್ಯನು ಮೇಲೇರಿದಂತೆ ಬಿಸಿಲು ಹೆಚ್ಚಾಗುವುದು. ಸೂರ್ಯನ ತಾಪದಿಂದ ಗಿಡಗಳು ಒಣಗಿಹೋಗುವವು; ಹೂವುಗಳು ಉದುರಿ ಹೋಗುವವು. ಹೂವು ಸುಂದರವಾಗಿತ್ತು, ಆದರೆ ಈಗ ಅದು ಒಣಗಿಹೋಯಿತು. ಐಶ್ವರ್ಯವಂತನಿಗೂ ಇದೇ ರೀತಿಯಾಗುವುದು. ಅವನು ತನ್ನ ವ್ಯಾಪಾರದ ಬಗ್ಗೆ ಯೋಜನೆಗಳನ್ನು ಮಾಡುತ್ತಿರುವಾಗಲೇ ಸತ್ತುಹೋಗುವನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International