Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಪ್ರಲಾಪಗಳು 3:19-26

19 ನನ್ನ ಸಂಕಟವನ್ನು ಮತ್ತು ಮನೆಯಿಲ್ಲದ ಸ್ಥಿತಿಯನ್ನು
    ನೆನಸಿಕೊಂಡರೆ ಅದು ಕಹಿ ವಿಷದಂತಿದೆ.
20 ನನ್ನ ಸಂಕಷ್ಟಗಳನ್ನೆಲ್ಲ ನಾನು ಚೆನ್ನಾಗಿ ಜ್ಞಾಪಿಸಿಕೊಳ್ಳುವೆನು,
    ಆದ್ದರಿಂದ ನಾನು ತುಂಬಾ ವ್ಯಸನಗೊಂಡಿದ್ದೇನೆ.
21 ಆದರೆ ನಾನು ಬೇರೊಂದನ್ನು ಯೋಚಿಸಿಕೊಂಡಾಗ ನಾನು ನಿರೀಕ್ಷೆಯುಳ್ಳವನಾಗುವೆನು.
    ನಾನು ಯೋಚಿಸಿಕೊಳ್ಳುವದೇನೆಂದರೆ:
22 ಯೆಹೋವನ ಪ್ರೀತಿಗೂ ಕರುಣೆಗೂ ಕೊನೆಯೇ ಇಲ್ಲ.
    ಆತನ ದಯೆಗೆ ಅಂತ್ಯವೇ ಇಲ್ಲ.
23 ಪ್ರತಿ ಮುಂಜಾನೆಯೂ ಆತನು ಅದನ್ನು ಹೊಸ ರೀತಿಗಳಲ್ಲಿ ತೋರಿಸುವನು.
    ಯೆಹೋವನೇ, ನೀನು ಎಷ್ಟೋ ಸತ್ಯವಂತನು ಮತ್ತು ನಂಬಿಗಸ್ತನು!
24 ನಾನು ನನ್ನೊಳಗೆ, “ಯೆಹೋವನೇ ನನ್ನ ಪಾಲು;
    ಆದ್ದರಿಂದ ನಾನು ಆತನಲ್ಲಿ ಭರವಸವಿಡುವೆನು” ಎಂದುಕೊಳ್ಳುವೆನು.

25 ಯೆಹೋವನು ತನಗಾಗಿ ಕಾಯುವ ಜನರಿಗೆ ಒಳ್ಳೆಯವನಾಗಿರುತ್ತಾನೆ.
    ಯೆಹೋವನು ತನ್ನನ್ನು ಎದುರುನೋಡುವ ಜನರಿಗೆ ಒಳ್ಳೆಯವನಾಗಿರುತ್ತಾನೆ.
26 ತನ್ನ ರಕ್ಷಣೆಗಾಗಿ ಯೆಹೋವನಿಗಾಗಿಯೇ
    ಮೌನದಿಂದ ಕಾಯುವುದು ಮನುಷ್ಯನಿಗೆ ಒಳ್ಳೆಯದು.

ಪ್ರಲಾಪಗಳು 1:7-15

ಜೆರುಸಲೇಮ್ ಹಿಂದಿನ ದಿನಗಳ ಬಗ್ಗೆ ಯೋಚಿಸುತ್ತಾಳೆ;
ತಾನು ಮನೆಯನ್ನು ಕಳೆದುಕೊಂಡ
    ಮತ್ತು ಹಿಂಸೆಗೊಳಗಾದ ಕಾಲವನ್ನು ಜ್ಞಾಪಿಸಿಕೊಳ್ಳುತ್ತಾಳೆ.
ಹಿಂದೆ ಅವಳಿಗಿದ್ದ ಎಲ್ಲ ಭೋಗ್ಯ ವಸ್ತುಗಳನ್ನು
    ಅವಳು ಜ್ಞಾಪಿಸಿಕೊಳ್ಳುತ್ತಾಳೆ.
ಹಳೆಯ ಕಾಲದಲ್ಲಿ ಲಭ್ಯವಿದ್ದ
    ಎಲ್ಲ ಉತ್ತಮ ವಸ್ತುಗಳನ್ನು ಅವಳು ಸ್ಮರಿಸಿಕೊಳ್ಳುತ್ತಾಳೆ.
ತನ್ನ ಜನರನ್ನು ವೈರಿಗಳು
    ವಶಪಡಿಸಿಕೊಂಡ ಸಂಗತಿಯನ್ನು ಅವಳು ಸ್ಮರಿಸುತ್ತಾಳೆ.
ಆಗ ತನಗೆ ಸಹಾಯ ಮಾಡಲು
    ಯಾರೂ ಇರಲಿಲ್ಲವೆಂಬುದನ್ನು ಅವಳು ಜ್ಞಾಪಿಸಿಕೊಳ್ಳುತ್ತಾಳೆ.
ಅವಳ ಶತ್ರುಗಳು ಅವಳನ್ನು ನೋಡಿ ನಕ್ಕರು.
    ಅವಳು ಹಾಳಾದುದನ್ನು ನೋಡಿ ಅವರು ನಕ್ಕರು.
ಜೆರುಸಲೇಮ್ ಮಹಾಪಾಪ ಮಾಡಿತು.
ಜೆರುಸಲೇಮ್ ಭಯಂಕರ ಪಾಪ ಮಾಡಿದ್ದಕ್ಕಾಗಿ
    ಅವಳು ಹಾಳುಬಿದ್ದ ನಗರವಾದಳು. ಜನರು ಅವಳನ್ನು ಹೀನೈಸುವಂತಾಗಿದೆ.
ಮೊದಲು ಅವಳನ್ನು ಗೌರವಿಸುತ್ತಿದ್ದ ಎಲ್ಲ ಜನ ಈಗ ಅವಳನ್ನು ತಿರಸ್ಕರಿಸುತ್ತಾರೆ.
    ಏಕೆಂದರೆ ಅವರು ಅವಳ ಬೆತ್ತಲೆ ದೇಹವನ್ನು ನೋಡಿದರು.
ಜೆರುಸಲೇಮ್ ನರಳಾಡುತ್ತಿದ್ದಾಳೆ.
    ಅವಳು ನಾಚಿಕೆಯಿಂದ ತನ್ನ ಮುಖವನ್ನು ತಗ್ಗಿಸಿಕೊಂಡಿದ್ದಾಳೆ.
ಜೆರುಸಲೇಮಿನ ಲಂಗಗಳು ಮಲಿನವಾಗಿದ್ದವು.
    ಅವಳಿಗೆ ಮುಂದೆ ಏನಾಗುವದೆಂಬುದರ ಬಗ್ಗೆ ಅವಳು ಯೋಚಿಸಲಿಲ್ಲ.
ಅವಳ ಪತನ ವಿಸ್ಮಯಕಾರಿಯಾಗಿತ್ತು.
    ಅವಳನ್ನು ಸಂತೈಸಲು ಯಾರೂ ಇರಲಿಲ್ಲ.
“ಅಯ್ಯೋ, ಯೆಹೋವನೇ, ನನಗೆಷ್ಟು ನೋವಾಗಿದೆ. ನೋಡು!
    ನನ್ನ ಶತ್ರು ತನ್ನನ್ನು ಎಷ್ಟು ದೊಡ್ಡವನೆಂದು ಭಾವಿಸಿಕೊಂಡಿದ್ದಾನೆ.” ಎಂದು ಆಕೆ ಹೇಳುತ್ತಾಳೆ.

10 ಶತ್ರು ತನ್ನ ಕೈಗಳನ್ನು ಚಾಚಿದನು.
    ಅವಳ ಎಲ್ಲ ಅಮೂಲ್ಯ ವಸ್ತುಗಳನ್ನು ತೆಗೆದುಕೊಂಡನು.
ಯೆಹೋವನೇ, ಆ ಜನರು ನಿನ್ನ ಸಭೆಯನ್ನು ಪ್ರವೇಶಿಸಬಾರದೆಂದು
    ನೀನು ಆಜ್ಞಾಪಿಸಿದ್ದರೂ ಪರಕೀಯರು ತನ್ನ ಪವಿತ್ರಾಲಯವನ್ನು ಪ್ರವೇಶಿಸುವದನ್ನು ಅವಳು ನೋಡಬೇಕಾಯಿತು.
11 ಜೆರುಸಲೇಮಿನ ಎಲ್ಲ ಜನರು ನರಳಾಡುತ್ತಿದ್ದಾರೆ.
    ಅವಳ ಎಲ್ಲ ಜನರು ಆಹಾರಕ್ಕಾಗಿ ಹುಡುಕುತ್ತಿದ್ದಾರೆ.
    ಅವರು ತಮ್ಮ ಎಲ್ಲ ಒಳ್ಳೆಯ ವಸ್ತುಗಳನ್ನು ಆಹಾರಕ್ಕಾಗಿ ಕೊಟ್ಟುಬಿಡುತ್ತಿದ್ದಾರೆ.
ಬದುಕಿರುವ ಸಲುವಾಗಿ ಅವರು ಹೀಗೆ ಮಾಡುತ್ತಿದ್ದಾರೆ. “ಯೆಹೋವನೇ, ನನ್ನ ಕಡೆಗೆ ನೋಡು!
    ಜನರು ನನ್ನನ್ನು ಹೇಗೆ ದ್ವೇಷಿಸುತ್ತಾರೆ ನೋಡು” ಎಂದು ಜೆರುಸಲೇಮ್ ಬೇಡಿಕೊಂಡಳು.
12 ರಸ್ತೆಯಲ್ಲಿ ಹಾದುಹೋಗುವ ಜನರೇ,
    ನೀವು ನನ್ನ ಬಗ್ಗೆ ಯೋಚಿಸುವುದಿಲ್ಲವೆಂದು ತೋರುತ್ತದೆ.
ನನ್ನ ಕಡೆಗೆ ಗಮನ ಕೊಡಿ.
    ನನ್ನ ನೋವಿನಂಥ ನೋವು ಮತ್ತೊಂದು ಇದೆಯೇ?
    ನನಗೆ ಬಂದಂಥ ನೋವು ಇನ್ನಾವುದಾದರೂ ಇದೆಯೇ?
    ದಂಡನೆಯಾಗಿ ಯೆಹೋವನು ನನಗೆ ಕೊಟ್ಟ ನೋವಿನಂಥ ನೋವು ಮತ್ತೊಂದು ಇದೆಯೇ?
ಆತನು ತನ್ನ ಮಹಾಕೋಪದ ದಿನದಂದು
    ನನ್ನನ್ನು ದಂಡಿಸಿರುವನು.
13 ಯೆಹೋವನು ಮೇಲಿನಿಂದ ಬೆಂಕಿಯನ್ನು ಕಳಿಸಿದ್ದಾನೆ.
    ಆ ಬೆಂಕಿ ನನ್ನ ಎಲುಬುಗಳ ಆಳಕ್ಕೆ ಇಳಿದುಹೋಗಿದೆ.
ಆತನು ನನ್ನ ಪಾದಗಳಿಗೆ ಬಲೆಯನ್ನು ಒಡ್ಡಿದ್ದಾನೆ.
    ಆತನು ನನ್ನನ್ನು ಸುತ್ತಲು ತಿರುಗಿಸಿದ್ದಾನೆ.
ಆತನು ನನ್ನನ್ನು ಹಾಳುಭೂಮಿಯನ್ನಾಗಿ ಮಾಡಿದ್ದಾನೆ.
    ನಾನು ಸದಾ ಬಳಲುತ್ತಿದ್ದೇನೆ.

14 “ನನ್ನ ಪಾಪಗಳನ್ನೆಲ್ಲ ಒಟ್ಟುಗೂಡಿಸಿ ನೊಗದಂತೆ ಕಟ್ಟಲಾಗಿದೆ.[a]
    ಯೆಹೋವನು ತನ್ನ ಕೈಗಳಿಂದ ನನ್ನ ಪಾಪಗಳನ್ನು ಒಟ್ಟಿಗೆ ಕಟ್ಟಿದ್ದಾನೆ.
ಯೆಹೋವನ ಆ ನೊಗವು ನನ್ನ ಕತ್ತಿನ ಮೇಲೆ ಇದೆ.
    ಯೆಹೋವನು ನನ್ನನ್ನು ದುರ್ಬಲಗೊಳಿಸಿದ್ದಾನೆ.
ನಾನು ಎದುರಿಸಲಾಗದ ಜನರ ಕೈಗೆ
    ಯೆಹೋವನು ನನ್ನನ್ನು ಒಪ್ಪಿಸಿಕೊಟ್ಟಿದ್ದಾನೆ.
15 ನನ್ನ ಶೂರ ಸೈನಿಕರನ್ನೆಲ್ಲಾ ಯೆಹೋವನು ತಿರಸ್ಕರಿಸಿದ್ದಾನೆ.
    ಆ ಸೈನಿಕರು ನಗರದ ಒಳಭಾಗದಲ್ಲಿದ್ದರು.
ಆಗ ಯೆಹೋವನು ನನ್ನ ವಿರುದ್ಧ ಒಂದು ಜನರ ಗುಂಪನ್ನು ತಂದನು.
    ಆತನು ನನ್ನ ತರುಣ ಸೈನಿಕರನ್ನು ಕೊಲ್ಲುವ ಸಲುವಾಗಿ ಆ ಜನರನ್ನು ತಂದನು.
ಯೆಹೋವನು ದ್ರಾಕ್ಷಿಯನ್ನು ಆಲೆಯಲ್ಲಿ ತುಳಿದಿದ್ದಾನೆ.
    ಆ ದ್ರಾಕ್ಷಿಆಲೆಯು ಜೆರುಸಲೇಮ್ ಕನ್ನಿಕೆಗೆ ಸೇರಿದ್ದು.

ಮತ್ತಾಯ 20:29-34

ಇಬ್ಬರು ಕುರುಡರಿಗೆ ಯೇಸುವಿನಿಂದ ಸ್ವಸ್ಥತೆ

(ಮಾರ್ಕ 10:46-52; ಲೂಕ 18:35-43)

29 ಯೇಸು ಮತ್ತು ಆತನ ಶಿಷ್ಯರು ಜೆರಿಕೋವಿನಿಂದ ಹೊರಟುಹೋಗುತ್ತಿರುವಾಗ ಬಹಳ ಜನರು ಯೇಸುವನ್ನು ಹಿಂಬಾಲಿಸಿದರು. 30 ದಾರಿಯ ಪಕ್ಕದಲ್ಲಿ ಇಬ್ಬರು ಕುರುಡರು ಕುಳಿತಿದ್ದರು. ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂಬುದನ್ನು ಅವರು ಕೇಳಿದಾಗ, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಕೂಗಿಕೊಂಡರು.

31 ಜನರೆಲ್ಲರೂ ಕುರುಡರನ್ನು ಗದರಿಸಿ, ಸುಮ್ಮನಿರಬೇಕೆಂದು ಹೇಳಿದರು. ಆದರೆ ಆ ಕುರುಡರು, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಹೆಚ್ಚುಹೆಚ್ಚು ಕೂಗಿಕೊಂಡರು.

32 ಯೇಸು ನಿಂತು, ಆ ಕುರುಡರಿಗೆ “ನಾನು ನಿಮಗೆ ಏನು ಮಾಡಬೇಕೆಂದು ಆಶಿಸುತ್ತೀರಿ?” ಎಂದನು.

33 ಆಗ ಕುರುಡರು, “ಪ್ರಭುವೇ, ನಮಗೆ ಕಣ್ಣು ಕಾಣಿಸುವಂತೆ ಮಾಡು!” ಅಂದರು.

34 ಯೇಸು ಅವರಿಗಾಗಿ ದುಃಖಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೇ ಅವರಿಗೆ ದೃಷ್ಟಿ ಬಂದಿತು. ಬಳಿಕ ಅವರು ಯೇಸುವನ್ನು ಹಿಂಬಾಲಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International